ಶುಕ್ರವಾರ, ಜನವರಿ 31, 2014

ಕಲ್ಪಿತ ಅನನ್ಯತೆಯೆಂಬ ಮೂಢನಂಬಿಕೆ


-ಅರುಣ್ ಜೋಳದಕೂಡ್ಲಿಗಿ
   ಅನನ್ಯತೆ ಎನ್ನುವ ಅಕಾಡೆಮಿಕ್ ಪರಿಭಾಷೆಯ ಬಗ್ಗೆ ಸ್ಪಷ್ಟಗೊಳಿಸಿದರೆ, ಅಥವಾ ಸರಳಗೊಳಿಸಿದರೆ ಮುಂದಿನ ಚರ್ಚೆ ಸಲೀಸಾಗಿ ಅರ್ಥವಾಗಬಹುದು ಅನ್ನಿಸುತ್ತದೆ. ಅನನ್ಯತೆಯನ್ನು ಗುರುತು, ಚಹರೆ, ತನ್ನದೇ ತಮ್ಮದೇ ಆದ ವಿಶಿಷ್ಟತೆ, ಬೇರೆಯವರು ಸುಲಭವಾಗಿ ಗುರುತಿಸುವಿಕೆಯ ಒಂದು ವಿಶಿಷ್ಟ ಅಂಶ ಎಂದು ಕರೆಯುತ್ತೇವೆ. ಉದಾಹರಣೆಗೆ ಕನ್ನಡ ಕಥನ ಸಾಹಿತ್ಯದಲ್ಲಿ ಕೆಲವು ಅನನ್ಯವಾದ ಲಕ್ಷಣಗಳಿವೆ. ತೇಜಸ್ವಿಯವರ ಬರಹದ ಮಾದರಿ ಮತ್ತಾರ ಬರಹದಲ್ಲೂ ಕಾಣುವುದಿಲ್ಲ. ಕುಂ.ವಿ ಅವರ ಕಥನ ಶೈಲಿ ಅವರಿಗೆ ಮಾತ್ರ ವಿಶಿಷ್ಟವಾದುದು ಇದು ಬೇರೆಯ ಲೇಖಕರಲ್ಲಿ ಕಾಣಸಿಗುವುದಿಲ್ಲ. ಹೀಗೆ ಸಂಸ್ಕೃತಿಯಲ್ಲೂ ಸಮುದಾಯಗಳಲ್ಲೂ ಕೆಲವು ವಿಶಿಷ್ಟ ಅಂಶಗಳಿರುತ್ತವೆ.
ಉದಾ: ಲಂಬಾಣಿ ಸಮುದಾಯದ ಮಹಿಳೆಯರು ಹಾಕುವ ಉಡುಪು ಅವರಿಗೇ ವಿಶಿಷ್ಟವಾದದ್ದು. ಒಬ್ಬ ಲಂಬಾಣಿ ಮಹಿಳೆ ಎಲ್ಲಿಯೇ ಇದ್ದರು ಉಡುಪಿನ ಆಧಾರದ ಮೇಲೆಯೆ ಲಂಬಾಣಿ ಸಮುದಾಯದ ಮಹಿಳೆ ಎಂದು ಗುರುತು ಹಚ್ಚಬಹುದು. ಅದೇ ಲಂಬಾಣಿ ಸಮುದಾಯದ ಮಹಿಳೆ ಸಾಮಾನ್ಯವಾಗಿ ಎಲ್ಲಾ ಮಹಿಳೆಯರು ಹಾಕುವ ಚೂಡಿದಾರವನ್ನಾಗಲಿ ಸೀರೆಯನ್ನಾಗಲಿ ಹಾಕಿದರೆ ಈ ಮಹಿಳೆ ಲಂಬಾಣಿ ಸಮುದಾಯಕ್ಕೆ ಸೇರಿದವಳು ಎಂದು ಗುರುತಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗೆ ಗುರುತು ಕಳೆದುಕೊಳ್ಳುವುದು ಕೂಡ ಜಾನಪದ ಅಧ್ಯಯನಕಾರರ ದೊಡ್ಡ ಆತಂಕಕಗಳಲ್ಲಿ ಒಂದಾಗಿದೆ.
ಹೀಗೆ ಆಯಾ ಸಮುದಾಯಗಳ ಗುರುತುಗಳು ಯಾವುವು ಎಂದು ಪತ್ಯೆಹಚ್ಚುವುದು, ಆ ಗುರುತುಗಳು ಈಗ ಇವೆಯೇ ಇಲ್ಲವೇ ಎಂದು ಹುಡುಕುವುದು. ಇಲ್ಲದೆ ಇದ್ದರೆ ಹೀಗಿತ್ತು ಎಂದು ಅದನ್ನು ಸಂಗ್ರಹಿಸಿ ಮ್ಯೂಜಿಯಂನಲ್ಲಿಡುವುದು. ಅಯ್ಯೋ ಆ ಸಮುದಾಯ ತನ್ನ ಗುರುತನ್ನು ಕಳೆದುಕೊಂಡಿತಲ್ಲಾ ಎಂದು ಬಹುಪಾಲು ಜಾನಪದ ಅಧ್ಯಯನಕಾರರು ದುಃಖ ವ್ಯಕ್ತಪಡಿಸುವುದು ಕಾಣುತ್ತದೆ.
ಇಂತಹ ಗುರುತುಗಳೆ ಕೆಲವು ಸಮುದಾಯಗಳಿಗೆ ಶಾಪ ಮತ್ತು ಅವಮಾನವಾಗಿದೆ. ಅಂತೆಯೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿವೆ. ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಎಂಜಲೆಲೆ ಮೇಲೆ ಉರುಳಾಡುವುದು ಅಲ್ಲಿನ ಬುಡಕಟ್ಟು ಸಮುದಾಯಗಳ ಅನನ್ಯತೆ ಎಂದು ಹೇಳುವುದು, ಕೊರಗ ಸಮುದಾಯವು ಅಜಲು (ಮೇಲು ಜಾತಿಗಳ ಕೂದಲು ಉಗುರನ್ನು ಕೊರಗರು ಅವರ ಊಟದ ಎಂಜಲಲ್ಲಿ ಬೆರೆಸಿ ತಿಂದರೆ ಮೇಲು ಜಾತಿಗಳ ರೋಗ ಗುಣವಾಗುತ್ತದೆ ಎಂಬ ನಂಬಿಕೆ) ಪದ್ದತಿ ಅವರ ಗುರುತು ಅದನ್ನವರು ಉಳಿಸಿಕೊಳ್ಳಬೇಕು ಎಂಬಂತಹ ಜಾನಪದ ಅಧ್ಯಯನ ಅಮಾನವೀಯ ಅಧ್ಯಯನವೇ ಸರಿ.
ಹೀಗೆ ಒಂದು ಸಮುದಾಯವನ್ನು ಹಿಡಿತದಲ್ಲಿಟ್ಟುಕೊಳ್ಳಲು, ಅಂಧಕಾರದಲ್ಲಿರಲು, ಅಜ್ಞಾನದ ಕೂಪದಲ್ಲಿರಿಸಲು ಮೇಲು ಜಾತಿಗಳು ಕೆಳ ಸಮುದಾಯಗಳಿಗೆ ಇಂತಹ ಎಷ್ಟೋ ಗುರುತುಗಳನ್ನು ಆರೋಪಿಸಿವೆ. ಇಂತಹ ಗುರುತುಗಳೇ ನಮ್ಮ ಸಮುದಾಯದ ಅನನ್ಯತೆ ಎಂದು ನಂಬಿ ಎಷ್ಟೋ ಸಮುದಾಯಗಳು ಅವುಗಳನ್ನು ಈಗಲೂ ಆರಾಧಿಸುತ್ತಿವೆ. ಇಂತಹ ಆರಾಧನೆಯನ್ನೆ ಜಾನಪದ ಸಂಸ್ಕೃತಿ ಎಂದು ಅಧ್ಯಯನ ಮಾಡಿದ್ದೂ ಆಗಿದೆ. ಆದರೆ ನಿಜವಾದ ಜಾನಪದ ಅಧ್ಯಯನಕಾರರು ಮಾಡಬೇಕಾದುದು ಒಂದು ಸಮುದಾಯದ ಗುರುತು ಸ್ವತಃ ಆಯಾ ಸಮುದಾಯ ಕಟ್ಟಿಕೊಂಡದ್ದೇ? ಅಥವಾ ಆ ಗುರುತನ್ನು ಯಾರು ಯಾಕಾಗಿ ಹೇರಿದರು? ಇಂತಹ ಗುರುತಿನ ಆಚರಣೆಯಿಂದ ಆ ಸಮುದಾಯದ ಹೊಸ ತಲೆಮಾರಿನ ಮೇಲೆ ಆಗುತ್ತಿರುವ ಪರಿಣಾಮವಾದರೂ ಏನು? ಇದು ನಿಮ್ಮ ಗುರುತಲ್ಲ ಬೇರೆಯವರು ಕಟ್ಟಿದ್ದು ಇದನ್ನು ಬಿಟ್ಟುಬಿಡಿ ಎಂದು ಸಮುದಾಯವನ್ನು ಜಾಗ್ರತೆಗೊಳಿಸುವ ವಿಧಾನ ಯಾವುದು ಎನ್ನುವುದನ್ನು ಇಂದು ಅಧ್ಯಯನಕಾರರು ಕಂಡುಕೊಳ್ಳುವ ಅಗತ್ಯವಿದೆ.
ಇಂದು ಮೂಢನಂಬಿಕೆ ವಿಧೇಯಕದ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಹೊತ್ತಿನಲ್ಲಿ ಸಮುದಾಯಗಳ ಅನನ್ಯತೆಯನ್ನು ಹುಟ್ಟುಹಾಕಿದವರು ಈ ವಿಧೇಯಕ ಬರದಂತೆ ತಡೆಯುವ ಹುನ್ನಾರಗಳನ್ನು ಮಾಡುತ್ತಿದ್ದಾರೆ. ಇದು ಕೂಡ ಅನನ್ಯತೆ ಮತ್ತು ಕಲ್ಪಿತ ಅನನ್ಯತೆಯ ಚರ್ಚೆಯೇ ಆಗಿದೆ. ಕೆಲವು ಮೂಢ ನಂಬಿಕೆಗಳನ್ನು ಜಾನಪದ ಅಧ್ಯಯನಕಾರರು ಅಸೂಕ್ಷ್ಮವಾಗಿ ಜನಪದ ಸಂಸ್ಕೃತಿ ಎಂದು ಅಧ್ಯಯನ ಮಾಡಿದ್ದಾರೆ. ಈ ಅಧ್ಯಯನಗಳು ಮೂಢನಂಬಿಕೆ ವಿಧೇಯಕವನ್ನು ವಿರೋಧಿಸುವವರಿಗೆ ಬೆಂಬಲವಾಗಿ ನಿಲ್ಲುವ ಸಾಧ್ಯತೆಗಳಿವೆ. ಇಂದು ಯಾವುವು ಸಮುದಾಯಗಳ ವಿಶಿಷ್ಟತೆಗಳೆಂದು ಗುರುತಿಸುತ್ತೇವೆಯೋ ಆ ವಿಶಿಷ್ಟತೆಗಳು ಸಮುದಾಯದ ಮೇಲ್ಚಲನೆಗೆ ಪ್ರೇರಕವಾಗಿದ್ದರೆ, ಸಮುದಾಯದ ಅಂತಸತ್ವವನ್ನು, ಚೈತನ್ಯವನ್ನು ಹೆಚ್ಚಿಸುವಂತಿದ್ದರೆ ಅವುಗಳನ್ನು ಉಳಿಸಿಕೊಳ್ಳಬೇಕಿದೆ.
ಇಂತಹ ಅನನ್ಯತೆಗಳು ಬಹುಪಾಲು ಹೊಸಕಾಲದ ಸಂದರ್ಭದಲ್ಲಿ ಸಮುದಾಯಗಳೆ ಕಟ್ಟಿಕೊಂಡಿರುವಂತವು. ಉದಾ: ಕೊರಗ ಸಮುದಾಯವು ಪ್ರತಿ ವರ್ಷ ಆಗಷ್ಟ್ ೧೮ ನೇ ತಾರೀಕಿನ ದಿನ ‘ಭೂಮಿಹಬ್ಬ ಎಂಬ ಹೊಸ ಆಚರಣೆಯೊಂದನ್ನು ಮಾಡುತ್ತಿದೆ. ಈ ಆಚರಣೆ ಕನಿಷ್ಟ ಏಳೆಂಟು ವರ್ಷದಿಂದಲೂ ನಡೆಯುತ್ತಿದೆ. ಈ ಹಬ್ಬ ಹುಟ್ಟಿಕೊಂಡದ್ದು ಕೊರಗರು ಭೂಮಿಗಾಗಿ ಹೋರಾಟ ಮಾಡಿ, ಆಗಷ್ಟ್ ೧೮ರ ದಿನ ಸರಕಾರದಿಂದ ಭೂಮಿಯ ಹಕ್ಕು ಪತ್ರಗಳನ್ನು ಪಡೆದಿದ್ದಾರೆ. ಅಂದರೆ ತಮ್ಮ ಹಕ್ಕಿಗಾಗಿ ಹೋರಾಟ ಮಾಡಿ ಗೆದ್ದ ದಿನವನ್ನು ಭೂಮಿಹಬ್ಬ ಎಂದು ಆಚರಿಸುತ್ತಾರೆ. ಈ ಹಬ್ಬದ ಆಚರಣೆ ಈ ಸಮುದಾಯದಲ್ಲಿ ಒಂದು ಬಗೆಯ ಹೋರಾಟದ ನೆನಪನ್ನು ಮತ್ತೆ ಮತ್ತೆ ಪುನರಾವರ್ತಿಸುತ್ತಿದೆ. ಅಂತೆಯೇ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಾದ ಪ್ರಜ್ಞೆಯನ್ನು ಸದಾ ಕಾಪಿಡುತ್ತದೆ. ಇಂದು ದಲಿತ ಸಮುದಾಯಗಳಲ್ಲಿರುವ ಅಂಬೇಡ್ಕರ್ ಪ್ರಜ್ಞೆಯಾಗಲಿ, ಬುದ್ಧ ಪ್ರಜ್ಞೆಯಾಗಲಿ ಇರುವುದು ದಲಿತ ಸಮುದಾಯ ಕಟ್ಟಿಕೊಂಡ ಎಚ್ಚರದ ಸಂಖೇತದ ಹೊಸ ಅನನ್ಯತೆಯೇ ಆಗಿದೆ. ಈ ನೆಲೆಯಲ್ಲಿ ನಾವಿಂದು ಕುರುಡು ಅನನ್ಯತೆಗಳ ಮೂಢ ನಂಬಿಕೆಗಳನ್ನು ಗುರುತಿಸಬೇಕಿದೆ, ಅಂತೆಯೇ ಸಮುದಾಯಗಳು ಕಟ್ಟಿಕೊಂಡ ಹೊಸ ಅನನ್ಯತೆಗಳನ್ನು ಶೋಧಿಸಬೇಕಿದೆ.
ಕನ್ನಡದಲ್ಲಿ ಕಲ್ಪಿತ ಅನನ್ಯತೆಯ ಕುರಿತು ಅಲ್ಲಲ್ಲಿ ಸಂಶಯಗಳು ವ್ಯಕ್ತವಾಗಿವೆ, ಆದರೆ ಅದುವೇ ಅನನ್ಯತೆಯನ್ನು ಗುರುತಿಸುವ ಆಲೋಚನೆಯನ್ನು ಪ್ರಭಾವಿಸಲು ಸಾಧ್ಯವಾಗಿಲ್ಲ. ಮೊಗಳ್ಳಿ ಗಣೇಶ್ ಅವರು ಈ ಬಗೆಯ ಕಲ್ಪಿತ ಅನನ್ಯತೆ ಕುರಿತು ಗಂಬಿsರವಾಗಿ ಪ್ರತಿಕ್ರಿಯಿಸುತ್ತಾರೆ: ಸಾಂಸ್ಕೃತಿಕ ಅನನ್ಯತೆ ಬಗ್ಗೆ ಅನೇಕರು ಸಾಂಪ್ರದಾಯಿಕವಾಗಿ ಧಾರ್ಮಿಕ ಪರಿಭಾಷೆಯಲ್ಲಿ ಚರ್ಚಿಸುತ್ತಿರುತ್ತಾರೆ. ಸಾಂಸ್ಕೃತಿಕ ಚಹರೆಯಿಂದ ಅನನ್ಯತೆಯಿಂದ ಆಯಾ ಸಮುದಾಯಗಳ ವಿಶಿಷ್ಟತೆಯನ್ನು ಗುರುತಿಸುವುದನ್ನು ಪ್ರeವಂತರೂ ಕೂಡ ಮಾಡುತ್ತಿರುತ್ತಾರೆ. ಸಾಂಸ್ಕೃತಿಕ ಅನನ್ಯತೆಯಿಂದಲೇ ಅವರವರ ಪರಂಪರೆ ಕವಲೊಡೆಯುತ್ತದೆ ಎಂತಲೂ ವಾದಿಸುತ್ತಿರುತ್ತಾರೆ. ಇಂತಹ ವಾದಗಳೆಲ್ಲ ಕನಿಷ್ಠ ಸಾಮಾನ್ಯ ತಿಳುವಳಿಕೆ ಇದ್ದರೆ ಸಾಕು ಬಹಳ ಅಪದ್ಧ ಎಂದು ತಿಳಿಯುತ್ತದೆ. ಸಾಂಸ್ಕೃತಿಕ ಅನನ್ಯತೆಯನ್ನು ಇಪ್ಪತ್ತನೆಯ ಶತಮಾನವು ಗಾಢವಾಗಿ ಬದಲಿಸಿದೆ. ಪರಂಪರೆಗಳನ್ನು ಆಧುನೀಕರಣಕ್ಕೆ ಅಳವಡಿಸಿದೆ. ಒಂದೊಂದು ಜಾತಿಗೂ ಒಂದೊಂದು ಅನನ್ಯತೆ ಜಾತಿಪ್ರಣೀತ ಸಮಾಜದಲ್ಲಿದೆ ಎಂಬುದು ಮೇಲುನೋಟಕ್ಕೆ ತಿಳಿಯುತ್ತದೆ.
ಇಲ್ಲಿ ಸಾಂಸ್ಕೃತಿಕ ಚಹರೆ, ಗುರುತು, ವಿಶಿಷ್ಟತೆ ಅನನ್ಯತೆ ಎಂಬ ಪದ ಪ್ರಯೋಗಗಳ ಹಿಂದಿನ ಮನೋಧರ್ಮವನ್ನು ಇರುವ ಅರ್ಥಗಳನ್ನು ಪ್ರಶ್ನಿಸಬೇಕಾಗುತ್ತದೆ. ವೈದಿಕ ಸಮುದಾಯಗಳಿಗೆ ಅನ್ವಯಿಸಿ ಈ ಚಹರೆ, ಗುರುತು, ಅನನ್ಯತೆ, ವಿಶಿಷ್ಟತೆಗಳನ್ನು ಬಹಳ ಸಂತೋಷದಿಂದ ಹೇಳಬಹುದಾದರೂ ಅದೇ ಶಬ್ದಗಳನ್ನು ಅವುಗಳ ಅರ್ಥ ವಿಸ್ತಾರಗಳನ್ನು ಕೆಳಜಾತಿಗಳಿಗೆ ಹೇಳಲು ಮುಜುಗರವೂ, ಬೇಸರವೂ ಎದುರಾಗುತ್ತದೆ ಎಂಬುದನ್ನು ಅನೇಕರು eಪಿಸಿಕೊಳ್ಳಬೇಕು. ೨೦ನೇ ಶತಮಾನದ ಸಾಂಸ್ಕೃತಿಕ ಚಹರೆಯೇ ದಲಿತ ಸಮುದಾಯಗಳಿಗೆ ಬೇರೆಯಾಗಿರುತ್ತದೆ. ಮೆಟ್ಟು ಹೊಲೆಯುವುದು ಅಜಲು ಜೀತಪದ್ಧತಿಗೆ ಒಳಗಾಗುವುದು, ದೇವದಾಸಿಯಾಗು ವುದು, ಮುಂತಾದ ವಿಶಿಷ್ಟ ಅನನ್ಯ ಪದ್ಧತಿಗಳನ್ನು ಆ ಸಮುದಾಯದ ಚಹರೆ ಎಂದು ಹೇಳಿದರೆ ಅದು ಯಾವ ನ್ಯಾಯವಾಗುತ್ತದೆ? ವೈದಿಕ ಪರಂಪರೆ ಹೇರಿದ ಅನಿಷ್ಟ ಪದ್ಧತಿಗಳನ್ನು ಇವತ್ತು ಎಷ್ಟು ಮುಗ್ಧ ದಲಿತ ಸಮುದಾಯಗಳು ಒಪ್ಪಿಕೊಂಡಿವೆ. ಇಂತಹ ಸಂದರ್ಭದಲ್ಲಿ ಸಾಂಸ್ಕೃತಿಕ ಅನನ್ಯತೆ, ಚಹರೆ, ಎಂಬ ಪರಿಕಲ್ಪನೆಗಳೇ ಬಲಪಂಥೀಯ ಧೋರಣೆಗೆ ಪೂರಕವಾಗಿವೆ. ಪ್ರತಿಷ್ಠಿತ ಪ್ರಭುತ್ವ ವ್ಯವಸ್ಥೆಯನ್ನು, ಧಾರ್ಮಿಕ ಅಂಧತ್ವವನ್ನು, ನಾಗರಿಕ ವಿಕೃತಿಯನ್ನು, ಮೂಲಭೂತ ವಾಗಿ ಬದಲಾಯಿಸುವ ಆಶಯದಲ್ಲಿ ತೊಡಗುವ ವೈಚಾರಿಕ ಆದರ್ಶವೇ ಇವತ್ತಿನ ಅನೇಕ ಕೆಳಜಾತಿಗಳ ಸಾಂಸ್ಕೃತಿಕ ಅನನ್ಯತೆಯಾಗಿದೆ. (ಮೊಗಳ್ಳಿ ಗಣೇಶ್, ಮೌಖಿಕ ಕಥನ,ಪುಟ:೪೫) ಈ ನೆಲೆಯಲ್ಲಿ ಈ ಹೊತ್ತು ಅನನ್ಯತೆ ಕುರಿತು ಚಿಂತಿಸುವವರು ಸಮುದಾಯಗಳ ಚಹರೆಯನ್ನು ಪುನರ್ ವ್ಯಾಖ್ಯಾನಕ್ಕೆ ಒಳಗು ಮಾಡಬೇಕಾಗಿದೆ. ಸಮುದಾಯಗಳು ಕಟ್ಟಿಕೊಳ್ಳಬೇಕಾದ ಹೊಸ ಅನನ್ಯತೆಗಳ ಪರ್ಯಾಯವನ್ನು ಸೂಚಿಸಬೇಕಾಗಿದೆ.
ಹೊಸ ಬಗೆಯ ವೈಚಾರಿಕ ಎಚ್ಚರಗಳು ಇಂದು ಸಮುದಾಯಗಳು ಕಟ್ಟಿಕೊಳ್ಳ ಬಹುದಾದ ನವ ಅನನ್ಯತೆಯಾಗಿದೆ ಎನ್ನುವುದು ಸಹ ಜನರ ಪ್ರeಯ ಭಾಗವಾಗುವಂತೆ ಇಂದು ಜಾನಪದ ಅಧ್ಯಯನಗಳು ರೂಪುಗೊಳ್ಳಬೇಕಿದೆ. ಇನ್ನು ಸಮುದಾಯಗಳೇ ತಾವಾಗಿ ಕಟ್ಟಿಕೊಳ್ಳುತ್ತಿರುವ ಹೊಸ ಬಗೆಯ ಅನನ್ಯತೆಯನ್ನು ಗುರುತಿಸುವಿಕೆಯೂ ಸಹ ಈ ಹೊತ್ತಿನ ಎಚ್ಚರದ ಭಾಗವಾಗಬೇಕು. ಹೀಗೆ ಕಲ್ಪಿತ ಅನನ್ಯತೆಯನ್ನು ಕುರಿತು ಬಿsನ್ನವಾಗಿ ಚರ್ಚಿಸಲು ಸಾಧ್ಯವಿದೆ. ಅಂತೆಯೇ ಕನ್ನಡದ ಬಹುಪಾಲು ಜಾನಪದ ಅಧ್ಯಯನಗಳಲ್ಲಿ ಈ ಬಗೆಯ ಕಲ್ಪಿತ ಅನನ್ಯತೆಗಳನ್ನೇ ನಿಜದ ಅನನ್ಯತೆ, ಅದು ಉಳಿಯಬೇಕು ಎನ್ನುವ ನಿರ್ವಚನಗಳಿವೆ. ಅಂತಹ ಅಪಾಯಕಾರಿ ವಿಶ್ಲೇಷಣೆಗಳನ್ನು ಗುರುತಿಸಲು ಇಂದು ಸಾಧ್ಯವಾಗಬೇಕು. ಇಂತಹ ಕೆಲವು ಸೂಕ್ಷ್ಮ ಚರ್ಚೆಗಳನ್ನು ಹೆಚ್ಚು ಬೆಳೆಸಬೇಕಾಗಿದೆ.
ಕೆಲವೊಮ್ಮೆ ಕಲ್ಪಿತ ಅನನ್ಯತೆಗಳ ಹಿಂದೆಯೂ ಭಾವನಾತ್ಮಕವಾಗಿ ಒಂದಾಗುವುದಕ್ಕಿಂತ ರಾಜಕೀಯ ಅಧಿಕಾರದ ಪ್ರಶ್ನೆಯೂ ಇರುತ್ತದೆ. ರಾಜಕೀಯ ಅಧಿಕಾರ, ಸಾಮಾಜಿಕ ನ್ಯಾಯದ ಹಕ್ಕಿನ ಪ್ರತಿಪಾದನೆಯಾಗಿಯೂ ಸಾಂಸ್ಕೃತಿಕ ಅನನ್ಯತೆಯ ಅಧ್ಯಯನಗಳು ಇಂದು ಹೆಚ್ಚಾಗಿ ನಡೆಯುತ್ತಿರುವುದಕ್ಕೆ ಕಾರಣವಿರಬೇಕು. ದಮನಿತ ಸಮುದಾಯಗಳ ಸಾಂಸ್ಕೃತಿಕ ವಿಶಿಷ್ಟತೆಯ ಅಧ್ಯಯನಗಳಿಗೆ ಯಾವಾಗಲೂ ಸಾಮಾಜಿಕ ರಾಜಕೀಯ ಹಕ್ಕುಸಾಧನೆಯ ಆಯಾಮವಿರುತ್ತದೆ. ಅವಕ್ಕೆ ಅಲ್ಪಸಂಖ್ಯಾತರಾಗಿರುವ ಕಾರಣಕ್ಕೆ ಹುಟ್ಟುವ ಅಭದ್ರತೆಯ ಭಯಕ್ಕಿಂತ, ಸವರ್ಣೀಯ ಸಮಾಜದಲ್ಲಿ ಆತ್ಮಾಭಿಮಾನ ಕಳೆದುಹೋಗದಂತೆ ಉಳಿಸಿಕೊಳ್ಳುವ ಒತ್ತಡವಿರುತ್ತದೆ (ರಹಮತ್ ತರೀಕೆರೆ:ಪ್ರತಿಸಂಸ್ಕೃತಿ:ಪುಟ:೨೦೯) ಎಂದು ತರೀಕೆರೆ ಅವರು ವಿಶ್ಲೇಷಿಸುತ್ತಾರೆ.
ಸಾಂಸ್ಕೃತಿಕ ಅನನ್ಯತೆಯ ಪ್ರಶ್ನೆಯನ್ನು ತಾತ್ವಿಕವಾಗಿ ನಿರಾಕರಿಸುವ ಒಂದು ಶಾಖೆಯಿದೆ. ಅದು ಚರಿತ್ರೆ, ಸಮಾಜಶಾಸ್ತ್ರ, ಕಲೆಗಳ ಅಧ್ಯಯನ ಕುರಿತದ್ದು. ಅದನ್ನು ಸಾಂಸ್ಕೃತಿಕ ಸಂಕರವಾದಿ ಎಂದು ಕರೆಯಬಹುದು. ಈ ಶಾಖೆಯ ಪ್ರಕಾರ, ಭಾರತದ ಚಾರಿತ್ರಿಕ ಬೆಳವಣಿಗೆಗಳಲ್ಲಿ ಜನಾಂಗ ವಲಸೆಗಳು ಹೊರಗಿನಿಂದ ರಾಜ್ಯ ವಿಸ್ತರಣೆಗೆ ಬಂದ ವಿದೇಶಿ ಆಳು ವರ್ಗದವರು(ಹೂಣರು, ಶಕರು, ಮಂಗೋಲರು, ಗ್ರೀಕರು, ತುರ್ಕರು, ಬ್ರಿಟಿಷರು) ಬಂದು ನೆಲೆಸಿದರು. ಆ ಹೊತ್ತಲ್ಲಿ ಭಾರತದಲ್ಲಿಯೇ ಇರುವ ವಿವಿಧ ಜಾತಿ, ಧರ್ಮಗಳು ತಮ್ಮ ಬದುಕಿನಲ್ಲಿ ಅನೇಕ ಬದಲಾವಣೆ ತಂದುಕೊಂಡವು. ಧರ್ಮ ಬದಲಾಯಿಸಿದವು. ಹೊಸ ದೈವಗಳನ್ನು ಪಡೆದವು. ಈ ಕಾರಣಗಳಿಂದ ನಮ್ಮಲ್ಲಿ ಸಮುದಾಯಗಳಿಗೂ ಧರ್ಮಗಳಿಗೂ ಸಮಾಜಗಳಿಗೂ ಅವುಗಳದ್ದೇ ಆದ ಸಾಂಸ್ಕೃತಿಕ ವಿಶಿಷ್ಟತೆ ಇದೆ. ಆದರೆ ಅದು ಯಾರಿಂದಲೂ ಪ್ರಭಾವಗೊಳ್ಳದ ಮೂಲರೂಪದ ಅನನ್ಯತೆ ಅಲ್ಲ. ಅಂತಹದು ಇರಲು ಸಾಧ್ಯವೂ ಇಲ್ಲ ಎಂದು ಈ ಚಿಂತನೆ ಭಾವಿಸುತ್ತದೆ.
ಈ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡುವವರಲ್ಲಿ ಡಿ.ಡಿ.ಕೊಸಾಂಬಿ, ದೇವಿ ಪ್ರಸಾದ್ ಚಟ್ಟೋಪಾಧ್ಯಾಯ, ರೋಮಿಲಾ ಥಾಪರ್ ಮುಖ್ಯರು, ಕನ್ನಡದಲ್ಲಿ ಶಿವರಾಮ ಕಾರಂತರ ಸಂಸ್ಕೃತಿ ಚಿಂತನೆಗಳಲ್ಲಿ ಈ ಪ್ರತಿಪಾದನೆ ಮತ್ತೆ ಮತ್ತೆ ಬರುತ್ತದೆ. ಶಂಬಾ ಜೋಶಿಯವರ ಪ್ರಮುಖ ಸಾಂಸ್ಕೃತಿಕ ಅಧ್ಯಯನಗಳೂ ಈ ಹುಡುಕಾಟ ಮಾಡುತ್ತವೆ. ಡಿ.ಆರ್.ನಾಗರಾಜ ಅವರ ಅಧ್ಯಯನಗಳಲ್ಲಿ ಮುಖ್ಯ ಹುಡುಕಾಟವು ಭಾರತದ ಶಿಷ್ಟ, ಪರಿಶಿಷ್ಟ, ದ್ರಾವಿಡ-ಆರ್ಯ, ನಗರ-ಗ್ರಾಮೀಣ, ಜನಪದ-ನಾಗರಿಕ, ಹಿಂದೂ-ಮುಸ್ಲಿಂ, ದಲಿತ-ಬ್ರಾಹ್ಮಣ ಮುಂತಾದ ದ್ವಂದ್ವಾತ್ಮಕ ಲೋಕಗಳ ಆಚೆ ನಡೆದಿರುವ ಸಾಂಸ್ಕೃತಿಕ ಕೊಡುಕೊಳೆಗಳನ್ನು ಕುರಿತುದಾಗಿತ್ತು. ಅಲ್ಲಮ ಪ್ರಭು ಮತ್ತು ಶೈವಪ್ರತಿಭೆ ಇದಕ್ಕೆ ನಿದರ್ಶನ. ರಹಮತ್ ತರೀಕೆರೆ ಅವರ ಪ್ರತಿಸಂಸ್ಕೃತಿಯ ಚಿಂತನೆಯಲ್ಲಿಯೂ ಈ ಬಗೆಯ ಹುಡುಕಾಟವಿದೆ. ಇಲ್ಲಿ ಸಾಂಸ್ಕೃತಿಕ ಅನನ್ಯತೆಯನ್ನು ಕಲ್ಪಿತವೆಂದು ನಿರಾಕರಿಸಿದ ಧೋರಣೆಯ ಜತೆ ಅನುಮಾನಿಸಿ ನೋಡುವ ಸೂಕ್ಷ್ಮತೆಯೂ ಇದೆ. ಹೀಗೆ ಅನನ್ಯತೆಯನ್ನು ಕಲ್ಪಿತವೆಂದು ನಿರಾಕರಿಸುವ ಅಥವಾ ಅನನ್ಯತೆಯನ್ನೇ ಭಿನ್ನವಾಗಿ ಅರ್ಥೈಸುವ ಆಲೋಚನೆಗಳು ಕನ್ನಡ ಸಂದರ್ಭದಲ್ಲಿ ಜಾನಪದ ಅಧ್ಯಯನಗಳಿಗಿಂತ, ಸಾಹಿತ್ಯ ವಿಮರ್ಶೆ ಮತ್ತು ಸಾಂಸ್ಕೃತಿಕ ಅಧ್ಯಯನಗಳಲ್ಲಿ ಹೆಚ್ಚಾಗಿದೆ.
ಅನನ್ಯತೆ ಎನ್ನುವುದು ಸಮುದಾಯಗಳಿಗೆ ಸ್ವಾಭಿಮಾನವನ್ನೂ, ತನ್ನದೇ ಆದ ವಿಶಿಷ್ಟತೆಯ ಕಾರಣಕ್ಕೆ ಒಂದು ಬಗೆಯ ಶಕ್ತಿಯನ್ನು ಕೊಡುವಂತಿದ್ದರೂ, ಅದೇ ಅನನ್ಯತೆ ಆಯಾ ಸಮುದಾಯಗಳಿಗೆ ಬಂಧನವಾಗುವ ಅಪಾಯವೂ ಇಲ್ಲದಿಲ್ಲ. ಬದಲಾದ ಸಮಾಜದಲ್ಲಿ ಬದುಕು ಕಟ್ಟಿಕೊಳ್ಳಲು ಸಮುದಾಯಗಳು ತಮ್ಮ ಅನನ್ಯತೆಗಳನ್ನು ಕಿತ್ತೊಗೆದು ಹೊಸ ಅನನ್ಯತೆಯನ್ನು ಕಟ್ಟಿಕೊಳ್ಳುವಿಕೆ ನಿರಂತರವಾಗಿ ನಡೆದೇ ಇದೆ. ಹಾಗಾಗಿಯೇ ಸಮುದಾಯಗಳು ತಮ್ಮ ಮೂಲ ವೃತ್ತಿ ಕಸುಬುಗಳನ್ನು ಬಿಟ್ಟು ಬೇರೆ ಬೇರೆ ವೃತ್ತಿಕಸಬುಗಳಿಗೆ ಪಲ್ಲಟವಾಗಿರುವುದನ್ನು ನಾವು ನೋಡುತ್ತಿದ್ದೇವೆ. ಈ ನೆಲೆಯಲ್ಲಿ ದಲಿತರ ಕೆಳಜಾತಿಗಳ ದೊಡ್ಡ ಚಲನೆಯನ್ನು ನಾವು ಗಮನಿಸಬಹುದು.
ದಲಿತರು ಬದುಕುವ ರೀತಿಯೇ ಒಂದು ಅನನ್ಯತೆ. ಅದನ್ನವರು ಮುಂದುವರಿಸಿಕೊಂಡು ಹೋಗಬೇಕು ಎಂಬ ಮೂಡನಂಬಿಕೆಗೆ ಅಂಬೇಡ್ಕರ್ ಬಲಿಯಾಗಿದ್ದರೆ ಇಂದು ದಲಿತ ಕೆಳಜಾತಿಗಳ ಸ್ಥಿತಿ ಹೇಗಿರುತ್ತಿತ್ತು ಎಂದು ನೆನಪಿಸಿಕೊಂಡರೂ ಮೈ ನಡುಗುತ್ತದೆ. ಹಾಗಾಗಿಯೇ ಅಂಬೇಡ್ಕರ್ ಅವರು ದಲಿತ ಕೆಳಜಾತಿಗಳಿಗೆ ಶಿಕ್ಷಣ ಸಂಘಟನೆ ಹೋರಾಟದಂತಹ ಹೊಸ ಅನನ್ಯತೆಗಳನ್ನು ತೋರಿದರು. ಹೀಗೆ ಪರಂಪರೆಯಿಂದ ಬಂದ ಅನನ್ಯತೆಗಳನ್ನು ಸಾದಾ ಎಚ್ಚರದಿಂದ ನೋಡಬೇಕಾಗಿದೆ. ಇವುಗಳು ಯಾರೋ ಕಲ್ಪಿಸಿದ ಅನನ್ಯತೆಯ ಕವಚಗಳಾಗಿಯೂ ನಮ್ಮನ್ನು ನಿಯಂತ್ರಿಸುತ್ತಿರುತ್ತವೆ. ಸಾಂಪ್ರದಾಯಿಕ ಅನನ್ಯತೆಗಳಿಗಿಂತ, ಸಮುದಾಯಗಳನ್ನು ಒಗ್ಗೂಡಿಸುವ ಹೊಸ ಅನನ್ಯತೆಗಳ ಹುಡುಕಾಟವನ್ನೂ ನಾವಿಂದು ಮಾಡಬೇಕಿದೆ. ಅಂಬೇಡ್ಕರ್ ಅವರ ಒಂದು ಚಿತ್ರ, ಒಂದು ಪ್ರತಿಮೆ, ಒಂದು ಮಾತು ಇಡೀ ದಲಿತ ಕೆಳ ಸಮುದಾಯಗಳನ್ನು ಒಂದುಗೂಡಿಸುವ ಚುಂಬಕ ಶಕ್ತಿಯಾಗಿರುವುದನ್ನು ನೋಡಿದರೆ ಸ್ವತಃ ಅಂಬೇಡ್ಕರ್ ದಲಿತ ಕೆಳಜಾತಿಗಳಿಗೆ ಹೊಸ ಅನನ್ಯತೆಯ ಸಂಕೇತವಾಗಿರುವುದನ್ನು ನೋಡಬಹುದಾಗಿದೆ. ಹೀಗೆ ಕಲ್ಪಿತ ಅನನ್ಯತೆಗಳನ್ನು ಒಡೆಯುತ್ತಾ ಹೊಸ ವೈಚಾರಿಕ ಅನನ್ಯತೆಗಳನ್ನು ಹುಡುಗುವ ಅಧ್ಯಯನಗಳು ಇಂದು ಹೆಚ್ಚಾಗಿ ನಡೆಯಬೇಕಿದೆ.

ಕಾಮೆಂಟ್‌ಗಳಿಲ್ಲ: