ಬುಧವಾರ, ನವೆಂಬರ್ 28, 2012

ವೀರಗಾಸೆ ವೀರರು

ಸುದೇಶ ದೊಡ್ಡಪಾಳ್ಯ   

-ಚಿತ್ರಗಳು-ಪವನ್ ಪಿ.ಶ್ರೀನಿವಾಸ್

ಕೃಪೆ: ಪ್ರಜಾವಾಣಿ,ಕಾಮನಬಿಲ್ಲು ಪುರವಣಿ, 29.11.2012
 


`ನಾವು ಕಲಾವಿದರು, ಆದರೂ ನಮ್ಮನ್ನು ಕೂಲಿ ಕಾರ್ಮಿಕರಂತೆ ನಡೆಸಿಕೊಳ್ಳಲಾಗುತ್ತದೆ. ನಾವು ಹಣಕ್ಕಾಗಿ ಕಲೆಯನ್ನು ಆರಿಸಿಕೊಂಡಿಲ್ಲ. ಕಲೆಗಾಗಿ, ಅದರ ಸೆಳೆತಕ್ಕಾಗಿ, ಸಂಪ್ರದಾಯವನ್ನು ಉಳಿಸುವ ಸಲುವಾಗಿ ಆಸೆಪಟ್ಟು ಆಯ್ಕೆ ಮಾಡಿಕೊಂಡಿದ್ದೇವೆ`- ಮೈಸೂರಿನ ಹೆಸರಾಂತ ವೀರಗಾಸೆ ಕಲಾವಿದ ಕಿರಾಳು ಮಹೇಶ್ ಬೇಸರದಿಂದಲೇ ಇಷ್ಟು ಹೇಳಿ ಸುಮ್ಮನಾದರು.

ಆದರೆ ಅವರ ಪಕ್ಕದಲ್ಲಿ ಕುಳಿತಿದ್ದ ಯುವ ಕಲಾವಿದ ರಮೇಶ್ ಸುಮ್ಮನೆ ಕುಳಿತುಕೊಳ್ಳಲಿಲ್ಲ. ತಮ್ಮ ಗುರುಗಳಾದ ಮಹೇಶ್ ಹೇಳದೇ ಉಳಿಸಿದ್ದ ಮಾತುಗಳನ್ನು ಹೇಳಿಬಿಡುವ ಧಾವಂತದಲ್ಲಿದ್ದರು. `ನಾವು ವೀರಗಾಸೆಯಿಂದ ನಾಲ್ಕು ಕಾಸು ಸಂಪಾದಿಸಿ, ಊರಲ್ಲಿ ಮನೆ, ಮೈಸೂರಲ್ಲಿ ಸೈಟು ತೆಗೆದುಕೊಳ್ಳಬೇಕು ಎನ್ನುವ ಆಸೆ ಇಲ್ಲ. ಇಂಥ ಆಸೆಯನ್ನು ನಮ್ಮಂಥ ಕಲಾವಿದರು ಇಟ್ಟುಕೊಳ್ಳುವುದು ಹಗಲುಗನಸಾಗುತ್ತದೆ.

ಎಷ್ಟೇ ನೋವುಗಳಿದ್ದರೂ ಅವುಗಳನ್ನು ನುಂಗಿಕೊಂಡು ವೀರಗಾಸೆ ಸಂಪ್ರದಾಯವನ್ನು ಉಳಿಸಿಕೊಂಡು ಬರುತ್ತಿದ್ದೇವೆ` ಎಂದು ಅಭಿಮಾನಪಟ್ಟರು.

ಕಿರಾಳು ಮಹೇಶ್ ಬೇಸರಕ್ಕೂ, ರಮೇಶ್ ಅವರ ವೀರಾವೇಷದ ಅಭಿಮಾನದ ನುಡಿಗೂ ಸಂಬಂಧವಿದೆ. ಜಾನಪದದಲ್ಲಿ ಗಂಡು ಕಲೆ ಎಂದು ಕರೆಸಿಕೊಳ್ಳುವ `ವೀರಗಾಸೆ` ನೃತ್ಯ ಪ್ರಕಾರವನ್ನು ಇವರೆಲ್ಲರೂ ಉಸಿರಾಗಿಸಿಕೊಂಡಿದ್ದಾರೆ.

ವೀರಗಾಸೆ ಸಂಪ್ರದಾಯವನ್ನು ತಲೆಯಿಂದ ತಲೆಗೆ ಜೋಪಾನವಾಗಿ ಕಾಪಾಡಿಕೊಂಡು ಬರುತ್ತಿದ್ದಾರೆ. ಒಂದು ವೇಳೆ ಮುತ್ತಾತ, ತಾತ, ತಂದೆಯವರಂತೆ ವೀರಗಾಸೆಗಾಗಿ ಇವರ ಮನಸ್ಸು ತುಡಿಯದೇ ಹೋಗಿದ್ದರೆ ವೀರಗಾಸೆ ಸಂಪ್ರದಾಯದ ಕಥೆ ಏನಾಗಬೇಕು? ವೀರಗಾಸೆ ಸೆಳೆತವೇ ಅಂಥದ್ದು, ಕರಡಿ ವಾದ್ಯದ ಸದ್ದು ಕಿವಿ ಮೇಲೆ ಬಿದ್ದರೆ ಸಾಕು, ಎ.ಆರ್.ರೆಹಮಾನ್ ಸಂಗೀತಕ್ಕೆ ಹೆಜ್ಜೆಹಾಕಲು ಹಿಂದೆ ಮುಂದೆ ನೋಡುವ ಮಂದಿಯೂ ನಿಂತಲ್ಲೇ ಹೆಜ್ಜೆ ಬದಲಿಸುವುದು ಗ್ಯಾರಂಟಿ.


ಅಂದಮೇಲೆ ನಿತ್ಯವೂ ಊರ ಗುಡಿಯ ಮುಂದೆ ಕರಡಿ ವಾದ್ಯದ ನಿನಾದ ಹೊಮ್ಮಿದರೆ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರೂ ನಾಲ್ಕು ಹೆಜ್ಜೆ ಹಾಕಿಯೇ ತೀರಬೇಕು. ಇಂತಹ ಒಳ ಸೆಳೆತವೇ ನೂರಾರು ಮಂದಿ ವೀರಗಾಸೆ ಕಲಾವಿದರನ್ನು ರೂಪಿಸಿದೆ.
ಕಿರಾಳು ಮಹೇಶ್ ವೀರಗಾಸೆ ನೃತ್ಯದಲ್ಲಿ ಅನುಭವಿ.

ಇವರು ಹೆಜ್ಜೆ ಹಾಕುವುದು, ವೀರಾವೇಷದಿಂದ ಕಣ್ಣುಗಳನ್ನು ಅರಳಿಸಿ ಗೋಲಿಯಂತೆ ಹೊರಳಿಸುವುದನ್ನು ನೋಡುವಾಗ ಭಯವಾಗುತ್ತದೆ. ಒಡಪುಗಳನ್ನು ಹೇಳುವುದನ್ನು ಕೇಳಬೇಕು ಎನಿಸುತ್ತದೆ. ಇಂತಹ ಮಹೇಶ್ `ಅಭಿನವಶ್ರೀ ವೀರಭದ್ರ ನೃತ್ಯ ತಂಡ` ಕಟ್ಟಿದ್ದಾರೆ. ಇವರ ತಂಡದಲ್ಲಿ 50ಕ್ಕೂ ಹೆಚ್ಚು ಯುವ ಕಲಾವಿದರು ಇದ್ದಾರೆ.

ರಮೇಶ್, ಬಿ.ಎಸ್.ಮಂಜುನಾಥ್, ಕೆ.ಎಂ.ಸೋಮಶೇಖರ್, ನಟರಾಜ, ರಾಜೇಶ್, ಮಹೇಶ್, ಕೆ.ಎಂ.ಭಾಸ್ಕರ್, ಎಂ.ಪ್ರಕಾಶ್, ಪ್ರಭು ಸೇರಿದಂತೆ ವೀರಗಾಸೆ ತಂಡದಲ್ಲಿರುವ ಎಲ್ಲ ಕಲಾವಿದರದೂ ಒಂದೇ ಕಥೆ. ಆದರೆ ಊರು, ಹೆಸರು, ವಯಸ್ಸು, ವಿದ್ಯಾಭ್ಯಾಸ ಮಾತ್ರ ಬೇರೆ ಬೇರೆ!

ರಮೇಶ್ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಮೂಡಹಳ್ಳಿಯವರು. ಓದಿದ್ದು 9ನೇ ತರಗತಿ. ಮುಂದೆ ಕೈ ಬೀಸಿ ಕರೆದಿದ್ದು ವೀರಗಾಸೆ. ಹದಿನೈದನೇ ವಯಸ್ಸಿಗೆ ವೀರಗಾಸೆಗಾಗಿ ಮುಖಕ್ಕೆ ಬಣ್ಣ ಬಳಿದುಕೊಂಡು, ತಲೆ ಮೇಲೆ ಕಿರೀಟ ಇಟ್ಟುಕೊಂಡು ಕೈಯಲ್ಲಿ ಕತ್ತಿ ಹಿಡಿದು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕರಡಿ ವಾದ್ಯದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ವೀರಾವೇಷದಿಂದ ಕುಣಿಯತೊಡಗಿದರು. ಬಳಿಕ ಏನೇ ಮಾಡಿದರೂ ವೀರಗಾಸೆ ಇವರನ್ನು ಬಿಟ್ಟುಕೊಡಲಿಲ್ಲ. ತಲೆಯೊಳಗೆ ವೀರಗಾಸೆ ಕಲೆ ತುಂಬಿಕೊಂಡ ಮೇಲೆ ವಿದ್ಯೆಗೆ ಜಾಗ ಇಲ್ಲದಂತಾಯಿತು. ಹೀಗಾಗಿ ಹೆಚ್ಚು ಮಂದಿ ವೀರಗಾಸೆ ಕಲಾವಿದರು ಕಾಲೇಜು ಮುಖವನ್ನೇ ನೋಡಿಲ್ಲ.

ಇದು ಎಲ್ಲರ ಕಥೆಯೂ ಹೌದುರಮೇಶ್‌ಗೆ ಏಳೆಂಟು ವರ್ಷಗಳಿರಬೇಕು. ಹೊಲದಲ್ಲಿ ದನಕರುಗಳನ್ನು ಮೇಯಿಸಲು ಹೋಗುತ್ತಿದ್ದರು. ಅಲ್ಲಿ ಗೆಳೆಯರೊಂದಿಗೆ ಸೇರಿ ವೀರಗಾಸೆ ಆಟವಾಡುತ್ತಿದ್ದರು. ಹೆಗಲ ಮೇಲಿದ್ದ ಟವೆಲನ್ನು ಸೊಂಟಕ್ಕೆ ಸುತ್ತಿಕೊಂಡು, ದನ ಕಾಯುವ ಕೋಲನ್ನು ಕತ್ತಿಯಂತೆ ಹಿಡಿದು, ಧೂಳನ್ನೇ ವಿಭೂತಿಯಂತೆ ಹಣೆಗೆ ಹಚ್ಚಿಕೊಳ್ಳುತ್ತಿದ್ದರು.

ಕೆಲವರು ಪ್ಲಾಸ್ಟಿಕ್ ಬಿಂದಿಗೆಯನ್ನೇ ಕರಡಿ ವಾದ್ಯವನ್ನಾಗಿ ಮಾಡಿಕೊಂಡು ನುಡಿಸುತ್ತಿದ್ದರು. ಗದ್ದೆ ಬಯಲಿನಲ್ಲಿ ಸಿಗುವ ತರಗಲೆಯನ್ನು ಗುಡ್ಡೆ ಮಾಡಿ ಅದಕ್ಕೆ ಬೆಂಕಿ ಹಾಕುತ್ತಿದ್ದರು. ಆಗ ರಮೇಶ್ ವೀರಾವೇಷದಿಂದ ಹೆಜ್ಜೆ ಹಾಕುತ್ತಾ ಮೈಮರೆತು ಕುಣಿಯುತ್ತಿದ್ದರು. ಇಂಥ ಸಮಯದಲ್ಲಿ ಬೆಂಕಿಯನ್ನು ಕೊಂಡವೆಂದು ಭಾವಿಸಿ ಹಾಯುತ್ತಿದ್ದರು.

ಚಾಮರಾಜನಗರ ಜಿಲ್ಲೆಯ ಬಿಸಲವಾಡಿಯ ಬಿ.ಎಸ್.ಮಂಜುನಾಥ್ ತನ್ನ ಗೆಳೆಯ ರಮೇಶ್ ಅವರ ಕಥೆಯನ್ನು ಮುಂದುವರಿಸಿದಂತೆ ಹೇಳುತ್ತಿದ್ದರು. ಶಾಲೆ ಬಿಟ್ಟ ಕೂಡಲೇ ಮಂಜುನಾಥ್ ಮತ್ತು ಗೆಳೆಯರು ಊರ ಗುಡಿ ಹತ್ತಿರಕ್ಕೆ ಓಡುತ್ತಿದ್ದರು. ಅಲ್ಲಿ ಎಲ್ಲರೂ ಒಟ್ಟಿಗೆ ಸೇರುತ್ತಿದ್ದರು. ರಟ್ಟಿನ ಬಾಕ್ಸ್‌ಗೆ ದಾರ ಕಟ್ಟಿ ಕುತ್ತಿಗೆಗೆ ನೇತು ಹಾಕುತ್ತಿದ್ದರು. ಅವರು ಅದನ್ನೆ ಕರಡಿ ವಾದ್ಯದಂತೆ ಬಾರಿಸುತ್ತಿದ್ದರು.

ಉಳಿದವರು ವೀರಗಾಸೆ ವೇಷ ಹಾಕುತ್ತಿದ್ದರು. ಮದುವೆ ಸಂದರ್ಭದಲ್ಲಿ ಗಂಗೆ ತರುವ ಪದ್ಧತಿ ಇದೆ. ಕೊಡದಲ್ಲಿ ನೀರು ತುಂಬಿಸಿಕೊಂಡು ಮಹಿಳೆಯರು ಅವುಗಳನ್ನು ಹೊತ್ತುಕೊಂಡು ಬರುವಾಗ ಮಡಿ ಬಟ್ಟೆ ಹಾಸಲಾಗುತ್ತದೆ. ಆಮೇಲೆ ತೆಂಗಿನಕಾಯಿ ಒಡೆದ ನಂತರ ಮನೆಯೊಳಕ್ಕೆ ಓಡಿ ಹೋಗುವುದು ಸಂಪ್ರದಾಯ. ಗಂಗೆ ತರುವುದನ್ನು ಮಂಜುನಾಥ್ ಮತ್ತು ತಂಡ `ಅನುಕರಣೆ` ಮಾಡುತ್ತಿತ್ತು.

ಬಾಲ್ಯದಲ್ಲೇ ವೀರಗಾಸೆ ಮನಸ್ಸು ಹೊಕ್ಕ ಮೇಲೆ ಹೊರಕ್ಕೆ ಹಾಕುವುದಾದರೂ ಹೇಗೆ? ನೀನು ಒಲಿದಂತೆ ಹಾಡುವೆ ಎನ್ನುತ್ತಾ ವೀರಗಾಸೆಯೊಂದಿಗೇ ಮಿಳಿತಗೊಂಡಿದ್ದಾರೆ. ಮಂಜುನಾಥ್ ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ಆಗಮ ಕಲಿತು ಅರ್ಚಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಹೆಚ್ಚಿನ ಕಲಾವಿದರು ಕೃಷಿಯನ್ನೇ ನಂಬಿದ್ದಾರೆ. ಊರಿನಲ್ಲಿರುವ ಹೊಲ, ಗದ್ದೆಗಳಲ್ಲಿ ಫಸಲು ತೆಗೆಯುತ್ತಾರೆ. ವೀರಗಾಸೆ ಸಂಪ್ರದಾಯ ಮತ್ತು ಕಲೆಗೆ ಒಲಿದಿರುವುದರಿಂದ ಕೃಷಿಯ ನಡುವೆಯೇ ವೀರಗಾಸೆ ವ್ಯವಸಾಯವನ್ನೂ ಮಾಡುತ್ತಿದ್ದಾರೆ. ವೀರಗಾಸೆಯನ್ನು ನಂಬಿ ಬದುಕುವುದು ಉಂಟೆ? ಏಕೆಂದರೆ ವರ್ಷಕ್ಕೆ ತುಂಬಾ ಬ್ಯುಸಿ ಕಲಾವಿದ ಎನಿಸಿಕೊಂಡವರೂ 50 ರಿಂದ 60 ಸಾವಿರ ಸಂಪಾದಿಸುವಲ್ಲಿ ಸುಸ್ತಾಗುತ್ತಾರೆ. ಅಂದರೆ ತಿಂಗಳಿಗೆ 5 ರಿಂದ 6 ಸಾವಿರ ಆದಾಯ! ಇದಕ್ಕಾಗಿ ಊರು, ರಾಜ್ಯದ ಮೂಲೆ ಮೂಲೆಗಳನ್ನು ಹಗಲು ರಾತ್ರಿ ಎನ್ನದೆ ಸುತ್ತಬೇಕು.

ಉತ್ಸವಗಳಲ್ಲಿ ಮುಂದೆವೀರಗಾಸೆ ನೃತ್ಯ ಮದುವೆ, ಗೃಹ ಪ್ರವೇಶಗಳಂತಹ ಶುಭ ಸಂದರ್ಭಗಳಲ್ಲಿ ಹೆಚ್ಚಾಗಿ ಪ್ರದರ್ಶನಗೊಳ್ಳುತ್ತಿತ್ತು. ವೀರಗಾಸೆಯವರು ಹೊಸ ಮನೆಗೆ ನುಗ್ಗಿದರೆ ಅಲ್ಲಿರುವ ದುಷ್ಟಶಕ್ತಿಗಳು ಓಡಿ ಹೋಗುತ್ತವೆ ಎನ್ನುವ ನಂಬಿಕೆ ಇದೆ. ಇಂಥ ನಂಬಿಕೆಯೇ ವೀರಗಾಸೆ ನೃತ್ಯ ಪ್ರಕಾರವನ್ನು ಇನ್ನೂ ಉಳಿಸಿಕೊಂಡು ಬರುತ್ತಿದೆ!

ಕೆಲವು ವರ್ಷಗಳಿಂದ ವೀರಗಾಸೆ ಹೆಚ್ಚಾಗಿ ಸಾರ್ವಜನಿಕವಾಗಿ ಪ್ರದರ್ಶನಗೊಳ್ಳುತ್ತಿದೆ. ಮೆರವಣಿಗೆ, ರಾಜ್ಯೋತ್ಸವ ಮತ್ತು ಧಾರ್ಮಿಕ ಸಮಾರಂಭಗಳೇ ಇರಲಿ, ಅಲ್ಲಿ ವೀರಗಾಸೆ ನೃತ್ಯ ಕಡ್ಡಾಯ ಎನ್ನುವಂತಾಗಿದೆ. ಹೀಗಾಗಿ ವೀರಗಾಸೆ ಕಲಾವಿದರು ನಾಲ್ಕು ಕಾಸಿನ ಮುಖ ನೋಡುವಂತಾಗಿದೆ. ಇಲ್ಲದೇ ಹೋದರೆ ಇವರು ಮದುವೆ, ಗೃಹ ಪ್ರವೇಶ ಮಾಡುವವರ ಕರೆಗಾಗಿ ಕಾಯುತ್ತಾ ಕೂರಬೇಕು.

ಗೌರವ, ಮನ್ನಣೆ ನೀಡಿಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾವಿದರನ್ನು ಸರಿಯಾಗಿ ನಡೆಸಿ ಕೊಳ್ಳುವುದಿಲ್ಲ ಎನ್ನುವವರ ಪಟ್ಟಿಗೆ ವೀರಗಾಸೆ ಕಲಾವಿದರೂ ಸೇರುತ್ತಾರೆ. ಇನ್ನು ಸಂಘ, ಸಂಸ್ಥೆಗಳು ಹಬ್ಬ, ಜಾತ್ರೆ, ಉತ್ಸವ, ಸಮಾರಂಭಗಳ ಸಮಯದಲ್ಲಿ ಕರೆಸುತ್ತಾರೆ. ಕೆಲವರು ಪ್ರೀತಿಯಿಂದಲೇ ನಡೆಸಿಕೊಂಡರೆ, ಹಲವರು ದುಡ್ಡು ಕೊಟ್ಟಿಲ್ಲ ಎನ್ನುತ್ತಾರೆ. ಆದರೆ ನಮ್ಮ ಸ್ಥಿತಿಯನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಕಲಾವಿದರು ಬೇಸರದಿಂದಲೇ ಹೇಳುತ್ತಾರೆ.

ಈ ತಂಡದಲ್ಲಿರುವ ಎಲ್ಲ ಕಲಾವಿದರೂ ಮೈಸೂರು ದಸರಾ ಉತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಆರಂಭದಲ್ಲಿ ಜಂಬೂ ಸವಾರಿ ಮೆರವಣಿಗೆಯಲ್ಲಿ ವೀರಾವೇಷದಿಂದ ಹೆಜ್ಜೆಹಾಕಿ ಜನರಿಂದ `ಸೈ` ಎನಿಸಿಕೊಳ್ಳಲು ತುದಿಗಾಲ ಮೇಲೆ ನಿಲ್ಲುತ್ತಿದ್ದ ಕಲಾವಿದರು ಐದಾರು ದಸರಾ ಉತ್ಸವದಲ್ಲಿ ಪಾಲ್ಗೊಂಡ ಮೇಲೆ ಉತ್ಸಾಹವನ್ನೇ ಕಳೆದುಕೊಂಡುಬಿಟ್ಟಿದ್ದಾರೆ. ಇದಕ್ಕೆ ಕಾರಣ, ಸರ್ಕಾರ ಜಾನಪದ ಕಲಾವಿದರನ್ನು ನಿಕೃಷ್ಟವಾಗಿ ಕಾಣುವುದು.

`ಇಪ್ಪತೈದು ಕೆ.ಜಿ ತೂಕದ ವೇಷಭೂಷಣವನ್ನು ಹಾಕಿಕೊಂಡು ಬಿಸಿಲು, ಮಳೆಯನ್ನು ಲೆಕ್ಕಿಸದೆ ಆರೇಳು ಕಿಲೋಮೀಟರ್ ಪ್ರದರ್ಶನ ನೀಡುತ್ತೇವೆ. ಆದರೆ ಸವಲತ್ತು ಮತ್ತು ಸಂಭಾವನೆ ವಿಚಾರದಲ್ಲಿ ನಮ್ಮದು ಕೊನೆಯ ಸ್ಥಾನ` ಎಂದು ಕಿರಾಳು ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಕಷ್ಟ, ಸುಖ, ನೋವು, ನಲಿವು, ಅವಮಾನ, ಸನ್ಮಾನ ಯಾವ ಕ್ಷೇತ್ರವನ್ನು ಬಿಟ್ಟಿದೆ ಹೇಳಿ? ಅದೇ ರೀತಿ ವೀರಗಾಸೆಯನ್ನೂ ಬಿಟ್ಟಿಲ್ಲ. ಆದರೂ ಹಳ್ಳಿಗಾಡಿನ ಯುವ ಮನಸ್ಸುಗಳು ಮತ್ತೆ ಮತ್ತೆ ವೀರಗಾಸೆಯ ವೇಷವನ್ನು ತೊಟ್ಟು ವಚನಗಳನ್ನು ಹೇಳುತ್ತಾ, ವೀರಾವೇಷದಿಂದ ಕುಣಿದು, ಜನರಿಂದ ಸೈ ಎನಿಸಿಕೊಳ್ಳುವುದನ್ನು ಬಯಸುತ್ತಲೇ ಇವೆ. ಆದರೆ ಸಮಾಜ, ಸರ್ಕಾರ ಮಾತ್ರ ಜಾನಪದ ಕಲಾ ಪ್ರಕಾರ ಮತ್ತು ಕಲಾವಿದರನ್ನು `ಬಡವರು` `ಹಳ್ಳಿಗರ ಕಲೆ` ಎನ್ನುವಂತೆ ನೋಡುತ್ತಿವೆ.

ಪಂಡಿತರು, ವಿದ್ವಾಂಸರಿಗೆ ಲಕ್ಷ ಲಕ್ಷ ರೂಪಾಯಿ ಸಂಭಾವನೆ ಕೊಟ್ಟು ಐಷಾರಾಮಿ ಹೋಟೆಲ್‌ಗಳಲ್ಲಿ ಇಳಿಸಿ, ಹವಾನಿಯಂತ್ರಿತ ಕಾರುಗಳಲ್ಲಿ ಅವರನ್ನು ವೇದಿಕೆ ಬಳಿಗೆ ಕರೆ ತರುತ್ತಾರೆ. ಆದರೆ ಈ ನೆಲದ ಜನಪದರ ಬದುಕಿನಿಂದ ಹುಟ್ಟಿ ಬಂದಿರುವ ಜಾನಪದ ಕಲೆಯನ್ನು ಬದುಕಾಗಿಸಿಕೊಂಡಿರುವವರನ್ನು ನೋಡುವ ಮನೋಭಾವ ಬದಲಾಗಬೇಕು.

ಆಕರ್ಷಕ ವೇಷಭೂಷಣವೀರಗಾಸೆಗೆ ವೀರಭದ್ರ ಕುಣಿತ ಎನ್ನುವ ಹೆಸರೂ ಇದೆ. ಹೆಚ್ಚಾಗಿ ಶಿವಾರ್ಚಕರು ಈ ಕಲೆಯನ್ನು ವಂಶಪಾರಂಪರ್ಯವಾಗಿ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪುರವಂತರು ಹೆಸರಿನಿಂದ ಕರೆಯಲಾಗುತ್ತದೆ.

ಮೈಸೂರು ಭಾಗದ ವೀರಗಾಸೆ ಕಲಾವಿದರು ಆಕರ್ಷಕ ವೇಷಭೂಷಣದೊಂದಿಗೆ ಪ್ರದರ್ಶನ ನೀಡುವುದರಿಂದ ಜನಮನವನ್ನು ಗೆಲ್ಲುತ್ತಿದ್ದಾರೆ. ಮುಖಕ್ಕೆ ಬಣ್ಣ ಹಚ್ಚಿಕೊಳ್ಳುತ್ತಾರೆ.

ತಲೆ ಮೇಲೆ ಕಿರೀಟ, ಕೊರಳಿಗೆ ರುದ್ರಾಕ್ಷಿ ಮಾಲೆ, ಎದೆಗೆ ವೀರಭದ್ರನ ಕವಚ, ರುಂಡ ಮಾಲೆ, ತೋಳಲ್ಲಿ ನಾಗಸರ್ಪ, ತಲೆಯ ಚಂಡಮೃಗದ ಬಾಲ, ಕೀರ್ತಮುಖಗಳು, ಹಣೆಗೆ ವಿಭೂತಿ, ಕಿವಿಗೆ ನಾಗಕೊಂಡಲಿ, ಮುಂಗೈಯಲ್ಲಿ ಅರಿದಾಳು ಕೀರ್ತಮುಖ, ಕೈಯಲ್ಲಿ ಕತ್ತಿ, ಬಾಕು, ಗುರಾಣಿ ಹಿಡಿದು ವೀರಭದ್ರನ ಒಡಪುಗಳನ್ನು ಹೇಳುತ್ತಾ, ದಕ್ಷಬ್ರಹ್ಮ, ರೇವಣ್ಣ ಸಿದ್ದೇಶ್ವರ, ಮಾರುತಿ ಲಿಂಗಧಾರಣೆ, ಮಲೈ ಮಹದೇಶ್ವರ, ಶರಬವತಾರದ ಕಥೆಗಳನ್ನು ಹೇಳುತ್ತಾರೆ.


ವೀರಗಾಸೆ ಹುಟ್ಟುದಕ್ಷಬ್ರಹ್ಮನ ಮಗಳು ದಾಕ್ಷಾಯಿಣಿ ಈಶ್ವರನ ಹೆಂಡತಿ. ಈಕೆ ತಂದೆಯ ಇಷ್ಟಕ್ಕೆ ವಿರುದ್ಧವಾಗಿ ಈಶ್ವರನನ್ನು ಮದುವೆಯಾಗಿರುತ್ತಾಳೆ. ಹೀಗಾಗಿ ದಕ್ಷಬ್ರಹ್ಮ ತಾನು ಮಾಡುವ ಯಜ್ಞಕ್ಕೆ ಮಗಳನ್ನು ಆಹ್ವಾನಿಸುವುದಿಲ್ಲ. ವಿಷಯ ತಿಳಿದ ದಾಕ್ಷಾಯಿಣಿ ತಂದೆ ನಡೆಸುತ್ತಿರುವ ಯಜ್ಞದಲ್ಲಿ ಪಾಲ್ಗೊಳ್ಳಲು ತೆರಳುತ್ತಾಳೆ.

ಅಲ್ಲಿ ದಕ್ಷಬ್ರಹ್ಮ ಮಗಳು ದಾಕ್ಷಾಯಿಣಿ ಮತ್ತು ಅಳಿಯ ಈಶ್ವರನನ್ನು ನಿಂದಿಸುತ್ತಾನೆ. ಪತಿ ನಿಂದನೆಗೆ ನೊಂದ ದಾಕ್ಷಾಯಿಣಿ ಯಜ್ಞಕುಂಡಕ್ಕೆ ಹಾರಿ ಪ್ರಾಣ ಕಳೆದುಕೊಳ್ಳುತ್ತಾಳೆ. ಈ ವಿಷಯ ತಿಳಿದ ಈಶ್ವರ ರುದ್ರಾವತಾರ ತಾಳುತ್ತಾನೆ. ತನ್ನ ಹಣೆಯಲ್ಲಿ ಮೂಡುವ ಬೆವರನ್ನು ತೆಗೆದು ಒಗೆಯುತ್ತಾನೆ. ಆ ಬೆವರಿನಲ್ಲಿ ಹುಟ್ಟುವವನೇ ವೀರಭದ್ರ. ಈತ ವೀರಾವೇಷದಿಂದ ಗಣಗಳ ಜೊತೆ ನುಗ್ಗಿ ಯಜ್ಞವನ್ನು ಹಾಳು ಮಾಡಿ ದಕ್ಷಬ್ರಹ್ಮನ ತಲೆಯನ್ನು ಕತ್ತರಿಸಿ ಯಜ್ಞ ಕುಂಡಕ್ಕೆ ಹಾಕುತ್ತಾನೆ. ಹೀಗೆ ವೀರಗಾಸೆ ನೃತ್ಯ ಹುಟ್ಟಿಕೊಂಡಿತು.

ಗುರು ಕಿರಾಳು ಮಹೇಶ್ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ವೀರಗಾಸೆ ಕಲಾವಿದರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಿರಾಳು ಮಹೇಶ್ ಕಾರಣ. ಇವರು ಬಿಡುವಿನ ವೇಳೆಯಲ್ಲಿ ಆಸಕ್ತ ಮತ್ತು ಉತ್ಸಾಹಿ ತರುಣರಿಗೆ ವೀರಗಾಸೆ ನೃತ್ಯವನ್ನು ಕಲಿಸುತ್ತಿದ್ದಾರೆ. ಸ್ವತಃ ತಂಡವನ್ನು ಕಟ್ಟಿಕೊಂಡು ಊರು-ಕೇರಿ, ರಾಜ್ಯ, ಹೊರ ರಾಜ್ಯಗಳಲ್ಲಿ ಪ್ರದರ್ಶನ ನೀಡುತ್ತಿದ್ದಾರೆ.

ಇವರು ಹಲವು ಬೇಸಿಗೆ ಶಿಬಿರಗಳಲ್ಲಿ ಎಳೆಯರಿಗೆ ವೀರಗಾಸೆ ನೃತ್ಯವನ್ನು ಹೇಳಿಕೊಡುತ್ತಿದ್ದಾರೆ. ಕಿರಾಳು ಮಹೇಶ್ ಅವರ ಪುತ್ರ ಕೆ.ಎಂ.ಭಾಸ್ಕರ್ ಜೆಎಸ್‌ಎಸ್ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ. ಅಭ್ಯಾಸ ಮಾಡುತ್ತಿದ್ದಾರೆ. ಇವರೂ ಸಹ ವೀರಗಾಸೆ ನೃತ್ಯವನ್ನು ಕಲಿತಿದ್ದಾರೆ. ಮಹೇಶ್ ಗರಡಿಯಲ್ಲಿ 150 ಕ್ಕೂ ಹೆಚ್ಚು ಮಂದಿ ಪಳಗಿದ್ದಾರೆ.

ಕಾಮೆಂಟ್‌ಗಳಿಲ್ಲ: