ಬುಧವಾರ, ಜನವರಿ 15, 2014

ಪದವಿ ಕಾಲೇಜುಗಳಿಗೆ ಸಲ್ಲದ ಜಾನಪದ ಕನ್ನಡವಲ್ಲವೆ?



-ಡಾ.ಅರುಣ್ ಜೋಳದಕೂಡ್ಲಿಗಿ

(ಈ ಬರಹ 16.1.2014 ರ ಪ್ರಜಾವಾಣಿ ಸಂಗತ ಕಾಲಂ ನಲ್ಲಿ ಪ್ರಕಟವಾಗಿದೆ. ಅದಕ್ಕಾಗಿ ಪ್ರಜಾವಾಣಿಗೆ ಕೃತಜ್ಞತೆಗಳು)

  ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ/ಕಿಯರ ಹುದ್ದೆಗಳನ್ನು ನೇರ ನೇಮಕಾತಿಗಳ ಮೂಲಕ ತುಂಬಲು ಉದ್ದೇಶಿಸಲಾಗಿದೆ. ಈ ನೇಮಕಾತಿಗಾಗಿ ಸಿಇಟಿ ಪಠ್ಯಕ್ರಮ ರೂಪಿಸುವ ಸಮಿತಿಯ ಪಟ್ಟಿಯಲ್ಲಿ ಆಯಾ ವಿಷಯಗಳನ್ನು ಕೊಡಲಾಗಿದೆ. ಇದರಲ್ಲಿ ಜಾನಪದ ಮತ್ತು ಜಾನಪದ ಸಾಹಿತ್ಯ ಎಂ.ಎಯನ್ನು ಯಾವ ಹುದ್ದೆಗೂ ಪರಿಗಣಿಸಲಾಗಿಲ್ಲ. ಕರ್ನಾಟಕದಲ್ಲಿ ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ವಿಶ್ವವಿದ್ಯಾನಿಲಯ, ಕನ್ನಡ ವಿಶ್ವವಿದ್ಯಾಲಯ, ಗುಲ್ಬರ್ಗಾ ವಿಶ್ವವಿದ್ಯಾನಿಲಯ, ಜಾನಪದ ವಿಶ್ವವಿದ್ಯಾನಿಲಯಗಳಲ್ಲಿ ಜಾನಪದ ಎಂ.ಎ ಕಲಿತ ಮತ್ತು ಕಲಿಯುತ್ತಿರುವ ವಿದ್ಯಾರ್ಥಿಗಳಿದ್ದಾರೆ. ಸರಿಸುಮಾರು ಮೂರು ಸಾವಿರದಷ್ಟು ಜಾನಪದ ಎಂ.ಎ ಸ್ನಾತಕೋತ್ತರ ಪದವಿ ಮತ್ತು ಸಂಶೋಧನೆ ಮಾಡಿದ ಪದವೀಧರರಿದ್ದಾರೆ. 

  ಇವರುಗಳೆಲ್ಲಾ ಪದವಿ ಕಾಲೇಜುಗಳಿಗೆ ಸಲ್ಲದಿದ್ದರೆ ಬೇರೆ ದಾರಿ ಯಾವುದು? ಹೀಗೆ ಅವಕಾಶ ರಹಿತ ಸ್ನಾತಕೋತ್ತರ ಪದವಿಯನ್ನು ನೀಡುವ ಉದ್ದೇಶವಾದರೂ ಏನು? ಜಾನಪದವನ್ನು ಕಲಿಸುತ್ತಿರುವ ವಿವಿಗಳು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಇಂತಹ ವಿಶ್ವವಿದ್ಯಾಲಯಗಳ ಮುಂದಿರುವುದು ಎರಡೇ ಆಯ್ಕೆ. ಪದವಿ ಕಾಲೇಜುಗಳಲ್ಲಿ ಜಾನಪದವನ್ನು ಕಲಿಕೆಯ ವಿಷಯವನ್ನಾಗಿ ಸೇರ್ಪಡೆ ಮಾಡುವುದು ಅಥವಾ ಕನ್ನಡಕ್ಕೆ ಜಾನಪದವನ್ನು ಸಮನಾಂತರಗೊಳಿಸುವುದು. ಇಲ್ಲವೆ ಜಾನಪದ ಸ್ನಾತಕೋತ್ತರ ಪದವಿ ಮತ್ತು ಸಂಶೋಧನೆಗಳನ್ನು ಸ್ಥಗಿತಗೊಳಿಸುವುದು. ಹೀಗಾದಾಗಲೂ ಪ್ರಸ್ತುತ ಜಾನಪದ ಸ್ನಾತಕೋತ್ತರ ಪದವೀಧರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕದ ಕಾಲೇಜು ಶಿಕ್ಷಣ ಇಲಾಖೆ ಮತ್ತು ಉನ್ನತ ಶಿಕ್ಷಣ ಸಚಿವಾಲಯ ಯೋಚಿಸಬೇಕಿದೆ. ಇದರ ಭಾಗವಾಗಿಯೇ ಕನ್ನಡ ಪದವಿ ಪ್ರಾದ್ಯಾಪಕರ ಹುದ್ದೆಗೆ ಜಾನಪದವನ್ನು ಪೂರಕ ಅಥವಾ ಸಮಾನಾಂತರ ವಿಷಯವನ್ನಾಗಿ ಪರಿಗಣಿಸಿ ಸಿ.ಇ.ಟಿ ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕಿದೆ.

ಪದವಿ ತರಗತಿಗಳಲ್ಲಿ ಜಾನಪದ ಎಂಬ ಪ್ರತ್ಯೇಕ ವಿಷಯವಿರುವುದಿಲ್ಲ. ಕನ್ನಡ ವಿಷಯದಲ್ಲಿಯೇ ಜಾನಪದ ವಿಷಯವನ್ನು ಒಂದು ಐಚ್ಚಿಕ ಪತ್ರಿಕೆಯಾಗಿ ಓದುತ್ತಿದ್ದಾರೆ. ಹೈಸ್ಕೂಲಿನಿಂದ ಕಾಲೇಜಿನವರೆಗೂ ಕನ್ನಡ ಭಾಷಾ ಪಠ್ಯಗಳಲ್ಲಿ ಜಾನಪದ ಪಠ್ಯಗಳನ್ನು ಸೇರಿಸಿಕೊಂಡು ಬರಲಾಗಿದೆ. ಅಕಾಡೆಮಿಕ್ ವಲಯದಲ್ಲಿಯೂ ಕನ್ನಡ ಭಾಷೆ ಸಾಹಿತ್ಯದ ಭಾಗವಾಗಿಯೇ ಜಾನಪದ ಮತ್ತು ಜಾನಪದ ಸಾಹಿತ್ಯವನ್ನು ಒಂದಾಗಿಯೇ ನೋಡಲಾಗಿದೆ. ಕನ್ನಡ ಸಾಹಿತ್ಯವೆಂದು ನಾವು ಪಂಪನಿಂದ ಇಂದಿನ ತನಕ ಓದಿಕೊಂಡು ಬಂದಿರುವ ಪಠ್ಯಗಳಲ್ಲಿ ಜಾನಪದ ಮತ್ತು ದೇಸಿ ಪ್ರೇರಣೆಗಳನ್ನು ಹೊರತೆಗೆದರೆ ಉಳಿಯುವ ಕನ್ನಡ ಪಠ್ಯವಾದರೂ ಯಾವುದು? ಕನ್ನಡ ಎಂ.ಎ ಮಾಡಿದ ಶೇಕಡ ೭೦ ರಷ್ಟು ಸಂಶೋಧನ ವಿದ್ಯಾರ್ಥಿಗಳು ಜಾನಪದ ವಿಷಯವನ್ನು ಆಯ್ದುಕೊಂಡು ಪಿಹೆಚ್.ಡಿ ಪಡೆದಿದ್ದಾರೆ. ಇಂತಹ ಸಂಶೋಧನೆಗಳು ಕನ್ನಡವೆಂದೇ ಪರಿಗಣನೆಯಾಗಿ ಪದವಿ ಕನ್ನಡ ಪ್ರಾದ್ಯಾಪಕರ ಹುದ್ದೆಗಳಿಗೆ ಅರ್ಹತೆ ಪಡೆದುಕೊಂಡಿವೆ. 

 ಜಾನಪದ ಪಠ್ಯಗಳು ಕನ್ನಡದ ಚಿಂತನೆಯನ್ನು ಅಗಾಧವಾಗಿ ವಿಸ್ತರಿಸಿವೆ. ವಿದ್ವತ್ ವಲಯ ಕೂಡ ಕನ್ನಡ ಮತ್ತು ಜಾನಪದವನ್ನು ಪರಸ್ಪರ ಪೂರಕ ವಿಷಯಗಳನ್ನಾಗಿಯೇ ಚಿಂತನೆ ಮಾಡಿದೆ. ಕರ್ನಾಟಕದ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳೇ ಜಾನಪದ ಕುರಿತಾದ ಸಂಶೋಧನೆ ಅಧ್ಯಯನಗಳನ್ನು ಮಾಡುತ್ತಾ ಬರಲಾಗಿದೆ. ಅಂತೆಯೇ ಜಾನಪದ ಎಂ.ಎ ಪದವಿಯಲ್ಲಿಯೂ ಶೇಕಡ ೫೦ ರಷ್ಟು ಕನ್ನಡಕ್ಕೆ ಪೂರಕವಾದ ಪಠ್ಯಕ್ರಮವಿದೆ. 

 ಹೀಗಿರುವಾಗ ಕರ್ನಾಟಕದ ಸಂದರ್ಭದಲ್ಲಿ ಜಾನಪದ ಮತ್ತು ಕನ್ನಡವನ್ನು ಒಂದಾಗಿಯೇ ಗ್ರಹಿಸಲಾಗಿದೆ. ಹೀಗಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯು ಪಿ.ಯು ಕಾಲೇಜುಗಳ ಕನ್ನಡ ಉಪನ್ಯಾಸಕರ ಹುದ್ದೆಗೆ ಕನ್ನಡ ವಿಷಯಕ್ಕೆ ಜಾನಪದ ಮತ್ತು ಜಾನಪದ ಸಾಹಿತ್ಯ ಎಂ.ಎ ಪದವೀಧರರನ್ನೂ ಅರ್ಹರನ್ನಾಗಿಸಿದೆ. ಈ ಸಂಗತಿಗಳನ್ನು ಅವಲೋಕಿಸಿದರೆ, ಪದವಿ ಕಾಲೇಜುಗಳ ಕನ್ನಡ ವಿಷಯಕ್ಕೆ ಕೇವಲ ಕನ್ನಡ ಎಂ.ಎ ಪದವೀಧರರನ್ನು ಮಾತ್ರ ಪರಿಗಣಿಸಿ, ಜಾನಪದ ಎಂ.ಎ ಪದವೀಧರರನ್ನು ಕಡೆಗಣಿಸಿರುವುದು ಅವೈಜ್ಞಾನಿಕವಾಗಿದೆ.

 ಕಾಲೇಜು ಶಿಕ್ಷಣ ಇಲಾಖೆಯು ಈ ಬಾರಿಯ ಆಯ್ಕೆ ಪ್ರಕ್ರಿಯೆಯಲ್ಲಿ ಪರಸ್ಪರ ಪೂರಕ ಮತ್ತು ಸಮಾನಾಂತರ ವಿಷಯಗಳನ್ನು ಒಂದೇ ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಹ ವಿಷಯಗಳನ್ನಾಗಿ ಸೇರಿಸಲಾಗಿದೆ. ಸಮಾಜಶಾಸ್ತ್ರ ಉಪನ್ಯಾಸಕರ ಹುದ್ದೆಗೆ, ಸಮಾಜ ಕಾರ್ಯ/ಎಂ.ಎಸ್.ಡಬ್ಲು/ಮಹಿಳಾ ಅಧ್ಯಯನವನ್ನೂ, ಗಣಿತಶಾಸ್ತ್ರ ಹುದ್ದೆಗೆ ಸಂಖ್ಯಾಶಾಸ್ತ್ರವನ್ನೂ, ರಾಜ್ಯಶಾಸ್ತ್ರಕ್ಕೆ ಸಾರ್ವಜನಿಕ ಆಡಳಿತವನ್ನೂ, ವಾಣಿಜ್ಯಶಾಸ್ತ್ರಕ್ಕೆ ಎಂ.ಬಿ.ಎ/ಬಿ.ಬಿ.ಎಮ್/ ಎಮ್.ಎಫ್.ಎ/ ಎಂ.ಟಿ.ಎ ಪದವಿಗಳನ್ನೂ ಸಮಾನಾಂತರ ವಿಷಯಗಳನ್ನಾಗಿ ಪರಿಗಣಿಸಲಾಗಿದೆ. ಹೀಗೆ ಪರಿಗಣಿಸಿರುವುದು ವೈಜ್ಞಾನಿಕವಾಗಿಯೂ, ಸಾಮಾಜಿಕ ನ್ಯಾಯದ ನೆಲೆಯಲ್ಲಿಯೂ ಸರಿಯಾದುದು ಎಂತಾದರೆ, ಕನ್ನಡ ವಿಷಯಕ್ಕೆ ಜಾನಪದ ಎಂ.ಎ ಸಮಾನಂತರ ವಿಷಯವನ್ನಾಗಿ ಪರಿಗಣಿಸುವುದರಲ್ಲಿರುವ ತೊಡಕಾದರೂ ಯಾವುದು?

ಸಿ.ಇ.ಟಿ ಮುಖೇನ ಆಯ್ಕೆ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಜಾನಪದ ಎಂ.ಎ ಮಾಡಿದವರೂ ಕೂಡ ಕನ್ನಡ ವಿಷಯ ಪಠ್ಯದ ಪರೀಕ್ಷೆಯನ್ನೆ ಪಾಸು ಮಾಡಬೇಕಿದೆ. ಹಾಗಾಗಿ ಕನ್ನಡದ ಬಗೆಗಿನ ತಿಳುವಳಿಕೆಯ ಪರೀಕ್ಷೆಯ ನಂತರವೇ ಅವರು ಕನ್ನಡ ವಿಷಯಕ್ಕೆ ಪಾಠ ಮಾಡಲು ಅರ್ಹರಾಗುತ್ತಾರೆ. ಈ ಕಾರಣಗಳಿಂದಾಗಿ ಜಾನಪದ ಮತ್ತು ಜಾನಪದ ಸಾಹಿತ್ಯ ಎಂ.ಎ ಪದವೀಧರರನ್ನು ಕನ್ನಡ ವಿಷಯಕ್ಕೆ ಪೂರಕ/ ಅಥವಾ ಸಮಾನಂತರ ವಿಷಯವನ್ನಾಗಿ ಪರಿಗಣಿಸುವುದು ವೈಜ್ಞಾನಿಕವಾಗಿಯೂ ಸರಿಯಾಗಿದೆ. 

ಕರ್ನಾಟಕದಲ್ಲಿ ಸಮಾಜ ಶಾಸ್ತ್ರ ಮತ್ತು ರಾಜ್ಯಶಾಸ್ತ್ರ ಪದವಿ ಕಾಲೇಜುಗಳ ಕಲಿಕೆಯ ವಿಷಯಗಳಾಗಿವೆ. ಇವುಗಳಿಗೆ ವಿದೇಶಿ ಸಿದ್ಧಾಂತ ಮತ್ತು ಜಾಗತಿಕ ಮತ್ತು ಭಾರತೀಯ ನೆಲೆಯ ಅನುವಾದಿತ ಪಠ್ಯಗಳಿವೆ. ಕರ್ನಾಟಕದ ಸಮಾಜಶಾಸ್ತ್ರ, ಕರ್ನಾಟಕದ ರಾಜ್ಯಶಾಸ್ತ್ರ ಎಂದು ಹೇಳಲು ಅಧಿಕೃತ ಕನ್ನಡ ಪರಿಸರದ ಪಠ್ಯಗಳೇ ರೂಪುಗೊಂಡಿಲ್ಲ. ಇಂತಹ ಪಠ್ಯಗಳಿಂದ ಕರ್ನಾಟಕದ ಸಮಾಜವನ್ನು ರಾಜಕೀಯವನ್ನು ಅರ್ಥಮಾಡಿಕೊಳ್ಳುವುದಾದರೂ ಹೇಗೆ? ತಮ್ಮ ತಮ್ಮ ಕುಟುಂಬಗಳಿಂದ ಕಾಲೇಜಿಗೆ ಹೋದ ಸಮಾಜಶಾಸ್ತ್ರದ ವಿದ್ಯಾರ್ಥಿನಿಯೊಬ್ಬಳು ಕುಟುಂಬ ಎಂದರೇನು ಎನ್ನುವ ಕ್ರೋಬರ್, ಪೇಜರ್ ತರಹದ ವಿದ್ವಾಂಸರ ವ್ಯಾಖ್ಯಾನಗಳನ್ನು ಉರುಹೊಡೆವ ದುರಂತವನ್ನು ಈ ಶಾಸ್ತ್ರಗಳು ಎದುರಿಸುತ್ತಿವೆ.  ಹಾಗೆ ನೋಡಿದರೆ ಈತನಕ ಸುಮಾರು ಮೂರು ಸಾವಿರ ಕೃತಿಗಳು ಜಾನಪದ ಶಿಸ್ತಿಗೆ ಸಂಬಂಧಪಟ್ಟಂತೆ ಪ್ರಕಟವಾಗಿವೆ. ಜಾನಪದ ಅಧ್ಯಯನಕ್ಕೆಂದೇ ಪ್ರತ್ಯೇಕ ವಿಶ್ವವಿದ್ಯಾನಿಲಯವಿದೆ. ಪ್ರತಿ ಜಿಲ್ಲೆ ತಾಲೂಕು ಕೇಂದ್ರಿತ ಜಾನಪದ ಅಧ್ಯಯನಗಳು ನಮಗೆ ಲಭ್ಯವಿವೆ. 

 ಇದನ್ನು ನೋಡಿದರೆ ಪದವಿಗೆ ಸಮಾಜ ಶಾಸ್ತ್ರ, ರಾಜ್ಯಶಾಸ್ತ್ರಕ್ಕಿಂತ ಜಾನಪದವನ್ನು ಒಂದು ವಿಷಯವನ್ನಾಗಿ ಸೇರಿಸುವುದು ಹೆಚ್ಚು ಪ್ರಸ್ತುತವಾಗಿದೆ. ಹೀಗೆ ಪ್ರತ್ಯೇಕ ಜಾನಪದ ವಿಷಯ ಪದವಿಗೆ ಸೇರಿಸಿದಲ್ಲಿ ಕನ್ನಡದಲ್ಲಿ ಪಾಲು ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಚಿವಾಲಯ ಪದವಿಗೆ ಜಾನಪದವನ್ನು ಒಂದು ವಿಷಯವನ್ನಾಗಿ ಸೇರಿಸುವ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಭಾರತದಲ್ಲಿಯೇ ಮೊಟ್ಟಮೊದಲ ಜಾನಪದ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ ಸರಕಾರಕ್ಕೆ ಪದವಿ ತರಗತಿಗಳಲ್ಲಿ  ಜಾನಪದವನ್ನು ಒಂದು ಕಲಿಕೆಯ ವಿಷಯವನ್ನಾಗಿ ಸೇರಿಸುವುದು ಅಸಾಧ್ಯವಾದುದೇನಲ್ಲ. ಅಂತೆಯೇ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯವು ಈ ವಿಷಯವನ್ನು ತನ್ನ ಪ್ರಥಮ ಆಧ್ಯತೆಯ ಹಕ್ಕೊತ್ತಾಯವನ್ನಾಗಿ ಪರಿಗಣಿಸಬೇಕಿದೆ. ಹೀಗೆ ಪದವಿಗೆ ಜಾನಪದವನ್ನು ಒಂದು ವಿಷಯವನ್ನಾಗಿ ಪರಿಗಣಿಸಿದಲ್ಲಿ ಭಾಷಣದ ಆಕರ್ಷಕ ವಿಷಯವಾದ ದೇಸಿಯತೆಗೊಂದು ಪ್ರಾಯೋಗಿಕ ನೆಲೆ ಒದಗಿದಂತಾಗುತ್ತದೆ. ಅಂತೆಯೇ ಗಾಂಧಿ ಕನಸಿನ ಗುಡಿಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗಿ ದೇಸಿ ಕಸಬುಗಳ ಪುನರುಜ್ಜೀವನಗೊಳಿಸುವಂತೆ ಆನ್ವಯಿಕ ಜಾನಪದ ಪಠ್ಯಗಳನ್ನು ರೂಪಿಸುವ ಸಾಧ್ಯತೆಗಳೂ ಇವೆ. 

  ರಾಷ್ಟ್ರೀಯ ಮಾನವ ಸಂಪನ್ಮೂಲ ಇಲಾಖೆಯು ಸಮುದಾಯ ಕಾಲೇಜುಗಳನ್ನು ಸ್ಥಾಪಿಸುವ ಯೋಜನೆ ಹಮ್ಮಿಕೊಂಡಿದೆ. ಭಾರತದಾದ್ಯಾಂತ ಇಂತಹ ಕಾಲೇಜುಗಳನ್ನು ತೆರೆಯುತ್ತಲೂ ಇದೆ. ಆರಂಭಿಕವಾಗಿ ಬೆಂಗಳೂರಿನ ಕೆಲವು ಕಾಲೇಜುಗಳಲ್ಲಿ ಹೇರ್ ಕಟಿಂಗ್ ಕೋರ್ಸನ್ನು ಸೇರ್ಪಡೆ ಮಾಡಿದೆ. ಹೀಗೆ ದೇಸಿ ಕಸಬುಗಳನ್ನು ಆಧರಿಸಿದ ಸಮುದಾಯ ಕಾಲೇಜುಗಳಲ್ಲಿ ಬೋಧಿಸಲು ಶೇಕಡ ೫೦ ರಷ್ಟು ಆಯಾ ದೇಸಿ ಕಸಬಿನ ಪರಿಣಿತ ಹಿರಿಯರು ಮತ್ತು ಶೇಕಡ ೫೦ ರಷ್ಟು ಜಾನಪದ ಸ್ನಾತಕೋತ್ತರ ಪದವೀಧರರು ಮಾತ್ರ ಅರ್ಹರಾಗಿದ್ದಾರೆ. ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆಯು ಎಮ್.ಹೆಚ್.ಆರ್.ಡಿಯ ಕಮ್ಯುನಿಟಿ ಕಾಲೇಜುಗಳನ್ನು ಆರಂಬಿಸುವ ಮುನ್ನ ಇದರ ಭಾಗವಾಗಿಯೇ ಪದವಿ ಕಾಲೇಜುಗಳಲ್ಲಿ ದೇಸಿಕಸಬುಗಳ ಕೋರ್ಸುಗಳನ್ನು ತೆರೆಯಬಹುದಾಗಿದೆ.  ಅಥವಾ ಪ್ರತ್ಯೇಕ ಕಮ್ಯುನಿಟಿ ಕಾಲೇಜುಗಳನ್ನು ಆರಂಭಿಸಿದಲ್ಲಿ ಜಾನಪದ ಕಲಿತವರಿಗೆ ಪ್ರಥಮ ಆಧ್ಯತೆಯನ್ನು ಕೊಡಬೇಕಾಗಿದೆ. ಇಂತಹ ಪ್ರಕ್ರಿಯೆಗಳ ಆರಂಭಿಕ ಭಾಗವಾಗಿ ಪ್ರಸ್ತುತ ಪದವಿ ಕನ್ನಡ ಅಧ್ಯಾಪಕರ ಹುದ್ದೆಗಳಿಗೆ ಜಾನಪದವನ್ನು ಸಮನಾಂತರ ವಿಷಯವನ್ನಾಗಿ ಪರಿಗಣಿಸಿ ಸಿಇಟಿ ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕಾಗಿದೆ.



ಕಾಮೆಂಟ್‌ಗಳಿಲ್ಲ: