ಭಾನುವಾರ, ಜನವರಿ 19, 2014

ಗೃಹಾಲಂಕಾರಕ್ಕೆ ದೇಸೀ ಸೊಗಡು

 
krupe:prajavani
 
ಭಾರತೀಯ ಸಂಸ್ಕೃತಿಯಲ್ಲಿ ಗೃಹಾಲಂಕಾರಕ್ಕೆ ಹೆಚ್ಚು ಮಹತ್ವ. ಮನೆ ದೊಡ್ಡದಿರಲಿ, ಚಿಕ್ಕದೇ ಇರಲಿ... ಪ್ರತಿ ಕೋಣೆಯ ನೆಲ, ಬಾಗಿಲು, ಗೋಡೆ, ಕಿಟಕಿ, ಮಹಡಿಯ ಸೌಂದರ್ಯ ಸೃಜನಶೀಲತೆ ಹೆಸರಿನಲ್ಲಿ ವಿವಿಧ ಕರಕುಶಲ ಕಲೆಯಿಂದ ಸಿಂಗಾರಗೊಂಡಾಗ ಇಡೀ ಮನೆ ವಿಶಿಷ್ಟ ರೀತಿಯಲ್ಲಿ ಜೀವ ತುಂಬಿಕೊಳ್ಳುತ್ತದೆ, ನೋಡುಗರ ಗಮನ ಸೆಳೆಯುತ್ತದೆ.
ಇಂದಿನ ಆಧುನಿಕತೆಯ ಭರಾಟೆಯಲ್ಲಿ ನಶಿಸಿ ಹೋಗುತ್ತಿರುವ ಗ್ರಾಮೀಣ ದೇಸೀ ಕರಕುಶಲ ಕಲೆಗಳು, ಸಾಂಪ್ರದಾಯಕ ಹಸೆ ಚಿತ್ತಾರಗಳನ್ನು ಗೃಹಾಲಂಕಾರಕ್ಕೆ ಅಳವಡಿಸಿಕೊಂಡು ಕಲಾ ಪರಂಪರೆಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ. 
ಮಲೆನಾಡಿನ ಕೃಷಿಕರ ಮನೆಗಳ ಗೋಡೆಗಳಲ್ಲಿ ದೇವರ ಪಟಗಳೊಂದಿಗೆ ಹಸೆ ಚಿತ್ತಾರಕ್ಕೂ ವಿಶೇಷ ಸ್ಥಾನವಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಿರಿವಂತೆಯ ಚಂದ್ರಶೇಖರ ಇಂಥ ದೇಸೀ ಕರಕುಶಲ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮನೆಯ ಗೋಡೆ, ಹಾಳೆ, ಬಿದಿರಿನ ತಡಿಕೆ, ಮರದ ತುಂಡು, ಮಣ್ಣಿನ ಹೂಜಿ, ಬಟ್ಟೆಗಳ ಮೇಲೆ ನೈಸರ್ಗಿಕ ಬಣ್ಣ ಮತ್ತು ರಾಸಾಯನಿಕ ಬಣ್ಣ ಉಪಯೋಗಿಸಿ, ಬಿಳಿ, ಹಳದಿ, ಕೆಂಪು, ಕಪ್ಪು ಬಣ್ಣಗಳ ಸಂಯೋಜನೆಯೊಂದಿಗೆ `ಫ್ರೀ ಹ್ಯಾಂಡ್ ಡಿಸೈನ್ ವರ್ಕ್~ನಿಂದ  12-13 ರೀತಿಯ ಆಕರ್ಷಕ ವಿನ್ಯಾಸಗಳ ಹಸೆ ಚಿತ್ತಾರ ಬರೆದಿದ್ದಾರೆ.
ಅವುಗಳಲ್ಲಿ ನಾಲ್ಕು ವಿಧದ ಮದುವೆ ಹಸೆ, ಹದಿನಾರು ಮೂಲೆ ಆರತಿ, ತೇರಿನ ಚಿತ್ತಾರ, ಮೆತ್ತಿನ (ಮಹಡಿ) ಚಿತ್ತಾರ, ಒಂದು ಗೋಪುರದ ಚಿತ್ತಾರ, ಮೂರು ಗೋಪುರದ ಚಿತ್ತಾರ, ಭೂಮಿ ಹುಣ್ಣಿಮೆ ಬುಟ್ಟಿ, ಹಚ್ಚಂಬಲಿ ಬುಟ್ಟಿಗಳ ಮೇಲೆ ಕೆಂಪು- ಬಿಳಿ ಗೆರೆಯ ಬಳ್ಳಿಗಳು, ದೀಪಾವಳಿ ಬಲೀಂದ್ರ ಪೂಜೆ ಚಿತ್ತಾರ, ಚಕ್ಕಲ್ ಬಕ್ಕಲ್ ಚಿನ್ನಾಣಿ... ಹೀಗೆ ಹಲವು ಚಿತ್ತಾರಗಳು ನಯನ ಮನೋಹರವಾಗಿವೆ. ಚಿತ್ತಾರಗಳ ಸಿರಿಯೇ ಇವರ ಮನೆಯಲ್ಲಿ ತುಂಬಿರುವಂತೆ ಕಾಣುವ ಇವರ ಮನೆಯ ಹೆಸರೂ `ಚಿತ್ರಸಿರಿ~!
ಹಸೆ ಚಿತ್ತಾರದ ರಚನೆ ಜತೆಗೆ ಚಂದ್ರಶೇಖರ ಅವರು ಭತ್ತದ ತೆನೆಗಳಿಂದ ಮನೆ ಬಾಗಿಲಿಗೆ ತೋರಣ ನಿರ್ಮಿಸಿದ್ದಾರೆ. ಒಣಗಿದ ಭತ್ತದ ತೆನೆಗಳನ್ನು ಸಂಗ್ರಹಿಸಿ ಅವನ್ನು ಕಲಾತ್ಮಕವಾಗಿ ಹೆಣೆದು, ಪ್ರಭಾವಳಿ, ಕುಂಚ, ಹಕ್ಕಿ, ಪಂಜರಗಳಂತಹ ಆಕೃತಿಗಳನ್ನು ತಯಾರಿಸಿ ನೋಡುಗರ ಗಮನ ಸೆಳೆದಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರು 250 ಅಡಿ ಉದ್ದದ ಭತ್ತದ ತೋರಣ ಪ್ರದರ್ಶಿಸಿದ್ದಲ್ಲದೆ, 1111ಅಡಿ ಉದ್ದದ (ನಾಲ್ಕೂವರೆ ಕ್ವಿಂಟಲ್) ತೋರಣವನ್ನೂ ನಿರ್ಮಿಸಿ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.
ಇವರ ಪತ್ನಿ ಗೌರಿ ಅವರೂ ಹಸೆ ಚಿತ್ತಾರ, ಬತ್ತದ ತೆನೆ ತೋರಣ ಹೆಣೆಯುವುದರಲ್ಲಿ ಪ್ರವೀಣರು. ಒಳಮನೆಯ ಗೋಡೆಯಲ್ಲಿ ಇವರು ಬರೆದಿರುವ `ಮದುವೆಯ ಹಸೆ~ ಮೆಚ್ಚುಗೆ ಗಳಿಸಿದೆ.
ಸಾಂಪ್ರದಾಯಕ ಕಲೆಯನ್ನು ಜನರಿಗೆ ಪರಿಚಯಿಸಲು ಚಂದ್ರಶೇಖರ್ ಜಪಾನ್, ದುಬೈ, ಕೋಲ್ಕತ್ತ, ಮಧುರೈ, ಬೆಂಗಳೂರು, ಮೈಸೂರು, ಧರ್ಮಸ್ಥಳ, ಸಿರಸಿ, ಬನವಾಸಿ, ಸಾಗರ, ಶಿವಮೊಗ್ಗ ಸುತ್ತಾಡಿದ್ದಾರೆ. 60 ವಿದ್ಯಾರ್ಥಿಗಳು ಇವರ ಮನೆಗೇ ಬಂದು ಈ ಹಸೆ ಚಿತ್ತಾರ ಮತ್ತು ಬತ್ತದ ತೋರಣ ರಚನೆ ಕಲಿತಿದ್ದಾರೆ. 
ಒಂದು ಕಾಲದಲ್ಲಿ ದೀವರ ಜನಾಂಗದ ಕಲೆ ಎಂದೇ ಕರೆಸಿಕೊಂಡ ಹಸೆ ಚಿತ್ತಾರ ರಾಜ್ಯದಲ್ಲಿಯೂ ಮನೆ ಮನೆಯ ಗೋಡೆ ಅಲಂಕರಿಸಿದರೆ ಸಂಸ್ಕೃತಿಯ ಜತೆಗೆ ಕ್ಷೀಣಿಸುತ್ತಿರುವ ಕಲೆಯನ್ನೂ ಪೋಷಿಸಿದಂತಾಗುತ್ತದೆ ಅಲ್ಲವೇ? ಚಂದ್ರಶೇಖರ ಅವರ ಸಂಪರ್ಕಕ್ಕೆ ಮೊ: 94496 98979. 
 

ಕಾಮೆಂಟ್‌ಗಳಿಲ್ಲ: