ಮಂಗಳವಾರ, ಜನವರಿ 10, 2017

ಭುಜಂಗಯ್ಯನ ದಶಾವತಾರಗಳು: ತುಡಿವ ಮನ ಕುಪಿತ ಜನ


ಪ್ರೊ.ಕಿಕ್ಕೇರಿ ನಾರಾಯಣ
profile

ಸೌಜನ್ಯ: http://kikkerinarayana.in/


ಪುಸ್ತಕ: ಪುಸ್ತಕ ಪ್ರಪಂಚ

ಪೀಠಿಕೆ:

ಶ್ರೀಕೃಷ್ಣ ಆಲನಹಳ್ಳಿಯ ಮೊದಲ ಕಾದಂಬರಿ ‘ಕಾಡು’ ಈಗಾಗಲೇ ಕನ್ನಡ ಕಾದಂಬರಿ ಸಂಸ್ಕೃತಿಯ ಪ್ರಜ್ಞಾತಲವನ್ನು ಮುಟ್ಟಿರುವ ಕೃತಿ. ಈ ಕೃತಿಯ ಪ್ರಮುಖ ಪಾತ್ರವಾದ ಪುಟ್ಟ ಬಾಲಕ ಕಿಟ್ಟಿಯ ಮುಗ್ದ ಮನಃಪಟಲದ ಮೇಲೆ ಬೆಳೆದವರ ಲೋಕ ಮೂಡಿಸುವ ಕ್ರೌರ್ಯದ ಬರೆಗಳು ಮಾಸುವುದೇ ಇಲ್ಲ. ಈ ಕಾದಂಬರಿಯಲ್ಲಿ ವಿವರಗಳೆಲ್ಲವೂ ಭೌತಿಕ(physical details) ವಲಯಕ್ಕೆ ಸೇರಿದ್ದು ಅವು ಓದುಗನ ಬೌದ್ದಿಕ(intellectual) ವಲಯಕ್ಕೆ ದಾಟುತ್ತಾ ಅರ್ಥವೈಶಾಲ್ಯತೆಯನ್ನು ಪಡೆದುಕೊಳ್ಳುತ್ತ್ತಾ ಹೋಗುತ್ತವೆ. ಈ ಕಾದಂಬರಿ ‘ನವ್ಯ’ದಿಂದ ಪಡೆದುಕೊಂಡದ್ದನ್ನು ದಕ್ಕಿಸಿಕೊಂಡಿದೆ.

ನಂತರ ಬರೆದ ‘ಪರಸಂಗದ ಗೆಂಡೆತಿಮ್ಮ’,’ಕಾಡು’ವೀಣೆ ಕಿಟ್ಟಿಯ ಮುಗ್ಧತೆಯ ಮುಂದುವರೆದ ರೂಪ. ‘ಗೆಂಡೆತಿಮ್ಮ’ನ ಮುಗ್ದತೆಯನ್ನು ಮರಂಕಿಯ ‘ನಾಗರೀಕ’ ಪ್ರಪಂಚ ಮತ್ತು ಅವನೇ ತನಗರಿವಿಲ್ಲದಂತೆ ಹರಡಿದ ನಾಗರೀಕತೆಯಿಂದ ಗೌವ್ವಳ್ಳಿಯ ಜನ ಅವನ ಮುಗ್ದತೆಯನ್ನು ಚೂರುಚೂರುಮ್ ಆದಿ ಹಾಕುತ್ತಾರೆ. ಈ ಕಾದಂಬರಿಯಲ್ಲಿ ನಿರೂಪಣೆ ವಿವರಗಳು ‘ಕಾಡು’ವೀಣೆ ಸಾಂಕೇತಿಕ ವಿವರಗಳಾಗದೆ ನೇರವಾಗಿ ಕಥೆಯನ್ನು ಹೇಳುವಂಥದ್ದು. ಇಲ್ಲಿ ಪ್ರಸಂಗ ಹೇಳುವವನದೇ ಒಂದು ‘ಪರಸಂಗ’ವಾಗಿ ಬಿಡುತ್ತದೆ. ಈ ದೃಷ್ಟಿಯಿಂದ ‘ಪರಸಂಗದ ಗೆಂಡೆತಿಮ್ಮ’,’ಕಾಡು’ವಿಗೆ ಅಭಿಮುಖವಾದ ಬರವಣಿಗೆ. ‘ಪರಸಂಗ ಹೇಳುವ’ ಧಾಟಿಗೆ(oral contradiction) ಹತ್ತಿರವಾಗಿದೆ.

‘ಪರಸಂಗ’ದ ನಾಗರೀಕ ಪ್ರಪಂಚ ಹಳ್ಳಿಯನ್ನು ಹಾಡು ಹೋಗುವ ವಸ್ತುವಾದರೆ ‘ಭುಜಂಗಯ್ಯನ ದಶಾವತಾರ’ದಲ್ಲಿ ಭುಜಂಗಯ್ಯ ಕೃಷಿ ಸಂಸ್ಕೃತಿಯಿಂದ ‘ವ್ಯಾಪಾರ – ಸಂಸ್ಕೃತಿ’ಗೆ ಪ್ರವೇಶ ಪಡೆಯುವುದರಿಂದ ಆತ ಆತನ ಊರು ಅನುಭವಿಸುವ ಅನುಭವ ಚಿತ್ರಿತವಾಗಿದೆ. ‘ಭುಜಂಗಯ್ಯ’ ಕಾದಂಬರಿ ರಚನೆಯಲ್ಲಿ ಮೌಖಿಕ ಸಂಪ್ರದಾಯದ ಅದರಲ್ಲೂ ‘ಹರಟೆ’ಯ ಪ್ರಭೇಧ ಎದ್ದು ಕಾಣುತ್ತದೆ.

ಭಾಗ ೧

ಮೌಖಿಕ ಸಂಪ್ರದಾಯವೂ ‘ಭುಜಂಗಯ್ಯ…..’ನೂ:

ಭಾಷೆಯ ಬಳಕೆಯಲ್ಲಿ ಬಿಗುವು, ಬಂಧುವೂ, ಸಾಂಕೇತಿಕತೆಯೂ ಶಿಲ್ಪವೂ ಇರುವುದು ನವ್ಯ ಕಾದಂಬರಿಯ ಪ್ರಮುಖ ಗುಣಗಳು. ಇವುಗಳನ್ನುಗಮನದಲ್ಲಿಟ್ಟುಕೊಂಡು ಓದಿದರೆ ‘ಭುಜಂಗಯ್ಯ…..” ವಿರುದ್ಧ ದಿಕ್ಕಿನಲ್ಲಿರುವುದು ಕಂಡುಬರುತ್ತದೆ. ಇದಕ್ಕೆ ಬದಲಾಗಿ ಮೌಖಿಕ ಸಂಪ್ರದಾಯದ ಕೆಲವು ಮುಖ್ಯಲಕ್ಷಣಗಳು ಕಂಡುಬರುತ್ತವೆ. ಈ ಗುಣಲಕ್ಷಣಗಳನ್ನುಕಾದಂಬರಿಯಲ್ಲಿ ಹೀಗೆ ಗುರುತಿಸಬಹುದು.

೧.ಈ ಕಾದಂಬರಿಯ ಪ್ರಮುಖ ಪಾತ್ರ ಊರಿನ ಉಸಾಬರಿಯನ್ನೆಲ್ಲಾ ಭೂಮಿಯನ್ನು ಹೊತ್ತುಕೊಂಡ ಆದಿಶೇಷಶನಂತೆ ತನ್ನಮೇಲೆ ಹೊತ್ತುಕೊಳ್ಳುವ ಯಾವಾಗಲೂ ಕ್ರಿಯಾತ್ಮಕವಾಗೆ ಇರುವ, ಅದಕ್ಕಾಗಿ ಅನೇಕ ರೀತಿಯ ‘ಕಾಯಕ’ಗಳನ್ನೂ ಕೈಗೊಳ್ಳುವ ಭುಜಂಗಯ್ಯ ಕಾದಂಬರಿಯಲ್ಲಿ ಚಿತ್ರಿತವಾಗಿರುವುದು ಕೇವಲ ಭುಜಂಗಯ್ಯನ ಕ್ರಿಯೆಗಳೇ ಅಲ್ಲ. ಅದಕ್ಕೆ ಅವನು ತೋರಿಸುವ ಪ್ರತಿಕ್ರಿಯೆ ಮಾತ್ರವಲ್ಲ ಅವನ ಸುತ್ತ ಅವನು ತೊಡಗಿಸಿಕೊಂಡಿರುವ ಪಾತ್ರಗಳು ಅವನ ಬಗ್ಗೆ, ಅವನ ಕ್ರಿಯೆಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತದೆ. ಆದ್ದರಿಂದ ಕೇಂದ್ರ ಪಾತ್ರದ ಕ್ರಿಯೆಯಲ್ಲಿ ಸುತ್ತಲಿನ ಪಾತ್ರದ ಕ್ರಿಯೆಗಳೂ, ಅನಿಸ್ಕೆಗಲೂ ಕಾದಂಬರಿಯ ಕೇಂದ್ರ ಪ್ರಜ್ಞಾಬಿನ್ದುವಿಗೆ ಸುತ್ತಲಿನ್ದಲೂ ಅಪ್ಪಳಿಸುತ್ತಿರುತ್ತವೆ. ಒಂದೇ ವಿಷಯಕ್ಕೆ ಸಂಬಂಧಪಟ್ಟಂಥಹ ಅನೇಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತದೆ. ಆದ್ದರಿಂದ ಘಟನೆಗಳ ಪುನರಾವರ್ತನೆ, ಅವುಗಳ ಬಗೆಗಿನ ಪ್ರತಿಕ್ರಿಯೆ ಬರುವುದರಿಂದ ಹೇಳಿದ್ದನ್ನೇ ಮತ್ತೆ ಹೇಳುತ್ತಿರುವಂತೆ ಭಾಸವಾಗುತ್ತದೆ. ಇದು ಮೌಖಿಕ ಸಂಪ್ರದಾಯದ ಹರಟೆಯ ವಿಧಾನವೂ ಹೌದ. ‘ಹರಟೆ’ಯಲ್ಲೂ ಒಂದು ಘಟನೆಯನ್ನು ನಾಕಾರು ಜನ ತಮ್ಮ ಅನಿಸಿಕೆಯ ಹಿಂದೆ ಅವುಗಳಿಗೆ ಅರ್ಥವನ್ನು ಕಟ್ಟುತ್ತಾ ಹೋಗುತ್ತಾರೆ ಎಂಬುದನ್ನು ಗಮನಿಸಬಹುದು. ಭುಜಂಗಯ್ಯ ಹೋಟಲಿಟ್ಟಿದ್ದಕ್ಕೆ ನಾನ ಜನ ನಾನಾ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸುವುದನ್ನು ಉದಾಹರಣಗೆ ನೋಡಬಹುದು. ಅಂತೆಯೇ ಮೊದಲ ಎರಡು ಅಧ್ಯಯನಗಳಲ್ಲಿ ಭುಜಂಗಯ್ಯ ಯಾವತ್ತೂ ಭೂಮಿಯ ಬಗ್ಗೆ ನಿಷ್ಠೆ ಕಳೆದುಕೊಳ್ಳದವನು, ಆಡಿನ ನಿಷ್ಠೆ ಪರಿಶ್ರಮವಾಗಿರುವುದನ್ನು ವಿವರಿಸುವಲ್ಲಿ, ಅದರಿಂದ ಅವನ ಮನಸ್ಸಿನಲ್ಲಿ ಉಂಟಾಗುವ ಮಾನಸಿಕ ತುಮುಲ, ಅದನ್ನು ಹೆಂಡತಿ ಗಮನಿಸುವ ರೀತಿ, ಅಕ್ಕಪಕ್ಕದ ಹೊಲದವರು ಗಮನಿಸುವ ಪ್ರತಿಕ್ರಿಯಿಸುವ ರೀತಿ ಮತ್ತು ಅದೇ ವಿಷಯವನ್ನು ಸಂಗ್ರಹಿಸಿ ಎರಡನೇ ಅಧ್ಯಾಯನದಲ್ಲಿ ಓದುಗರಿಗೆ ಮತ್ತೆ ಜ್ಞಾಪಿಸುವ ರೀತಿಯನ್ನು ಗಮನಿಸಬಹುದು. ಇದೂ ಮೌಖಿಕ ಸಂಪ್ರದಾಯದ ಒಂದು ಗುಣ. ಆದ್ದರಿಂದ ಕಾದಂಬರಿಯಲ್ಲಿ ಬಿಗುವನ್ನು ಕಾನುವವರಿಗೆ ಪುನರಾವರ್ತನೆ ಮತ್ತು ಅತಿಶಯಗುಣ(redundancy) ಕಾಣುತ್ತದೆ.

೨.ಯಾವುದಾದರೂ ಒಂದು ವಿಷಯವನ್ನು ಸ್ವಲ್ಪ ಹೇಳಿ ಅದರಿಂದ ವಿಮುಖವಾಗಿ ಮತ್ತೆ ಎಲ್ಲೂ ಆ ವಿಷಯಕ್ಕೆ ಬರುವುದನ್ನು ಕಾಣಬಹುದು. ಇದನ್ನು ಕಾದಂಬರಿಯಲ್ಲಿ ಅಲ್ಲಲ್ಲೇ ಗಮನಿಸಬಹುದು. ಉದಾಹರಣಗೆ, ಮೂರನೇ ಅಧ್ಯಾಯದ ಎರಡನೇ ಪ್ಯಾರಾದಲ್ಲಿ ಮೈಸೂರಿನ ಸಾಮಾನುಗಳನ್ನು ತರುವ ವಿಷಯ ಪ್ರಾರಂಭವಾದರೆ, ಅದು ಅಲ್ಲಿ ನಿಂತು, ಮತ್ತೆ ಹೋಟೆಲ್ ಕಟ್ಟಡದ ಕಡೆಗೆ ತಿರುಗಿ, ಪೀಪದ ನೀರನ್ನು ತುಂಬಿ ತರಲು ಮನೆಗೆ ಹೋಗಿ ಅಲ್ಲಿ ಅವನ ಹೆಂಡತಿ-ಮಾವನ ಪ್ರತಿಕ್ರಿಯೆಗಳಿಗೆ ತಲೆಕೊಟ್ಟು-ಭುಜಂಗಯ್ಯ ಬಾಲ್ಯದಲ್ಲಿ ಊರು ಬಿಟ್ಟು ಹೋಗಿ ಅನುಭವಿಸಿದ್ದನು ಹೇಳಿ, ಹೋಟಲಿಗೆ ವಾಪಸ್ಸು ಬರುವುದನ್ನು ಹೇಳಿ, ನಂತರ ಭುಜಂಗಯ್ಯನೂ ಕೋಡಂಗಿ ಅಜ್ಜಪ್ಪನೂ ಮೈಸೂರಿಗೆ ಹೋಗುತ್ತಾರೆ, ನಂತರ ನಾಲ್ಕನೇ ಅಧ್ಯಾಯದ ಮೂರನೇ ಪ್ಯಾರದಲ್ಲಿ ‘ಒಂದು ವಾರಕ್ಕೆ ಬೇಕಾದ ಸಾಮಾನುಗಳನ್ನು ಮೈಸೂರಿನಿಂದ ತಂದಿದ್ದು ಸಣ್ಣ ಪುಟ್ಟ ಸಾಮಾನುಗಳನ್ನು ಕ್ಯಾತನಹಳ್ಳಿಯ ಕಾಕನ ಅಂಗಡಿಯಿಂದ ತರಿಸಿಕೊಂಡರಾಯಿತೆಂದು ಕಾರ್ಯೋನ್ಮುಖನಾದ ‘ ಎಂದು ಹೇಳುವುದು., ಈ ರೀತಿಯ ವಿವರಗಳನ್ನು ಹೆಚ್ಚಾಗಿ ಮಾತನಾಡುವ ಸಂಪ್ರದಾಯದಲ್ಲಿ ಕಾಣಬಹುದು.

೩.ಒಂದು ಕ್ರಿಯೆ ಮಾಡಲು ಹೊಳೆದಿದ್ದು ನನ್ತ ಅದಕ್ಕೆ ಬೇಕಾದ ವಿವರಣೆಗಳನ್ನು ಜೋಡಿಸುವುದನ್ನೂಆ ಹೇಳಿಕೆಗೆ ಸಂಜಾಯಿಸಿದಂತೆ ಬರುವದನ್ನೂ ಈ ಕಾದಂಬರಿಯಲ್ಲಿ ಅಲ್ಲಲ್ಲಿ ಕಾಣಬಹುದು. “ಸುಶೀಲಳು ಭುಜಂಗಯ್ಯನಿಗೆ ಕಾಗದ ಬರೆದು ಡ್ರೈವರ್ ವಿಕ್ಟರ್ ನ ಹತ್ತಿರ ಕೊಟ್ಟು ಕಳುಹಿದಳು “ ಎಂದು ಹೇಳಿ ನಂತರ ‘ಅವಳಿಗೆ ಓದಲು ಬರೆಯಲು ಬರುತ್ತಿತ್ತು” ಎಂದು, ಆದರೆ ಅವಳು ಇನ್ನೊಬ್ಬರಿಗೆ ಬರೆದ ಮೊದಲ ಪತ್ರವೆಂದೂ ಹೇಳುವುದು(ಪುಟ ೨೪೬)

ಭುಜಂಗಯ್ಯನಿಗೆ ‘ಬರೇ ಗೆಜ್ಜಲು ಭೂಮಿ ಇತ್ತು’ ಎಂದು ಹೇಳಿ (ಪುಟ ೫) ನಂತರ ಮತ್ತೆ ಜ್ಞಾಪಿಸಿಕೊಂಡಂತೆ ಅವನಿಗೆ ‘ಊರ ಕೆರೆ ಬಯಲಲ್ಲಿ ಅರ್ಧ ಎಕರೆ ಗದ್ದೆ ಇದೆ’(ಪುಟ ೭) ಎಂದು ಹೇಳುವುದು , ಇತ್ಯಾದಿ ‘after thought’ಗಳನ್ನು ಸೇರಿಸಿಕೊಳ್ಳುವುದನ್ನು ಕಾದಂಬರಿಯಲ್ಲಿ ಕಾಣಬಹುದು.

೪.ಅನೌಪಚಾರಿಕತೆ ಮೌಖಿಕ ಸಂಪ್ರದಾಯದ ಮತ್ತೊಂದು ಗುಣ. ಅದರಲ್ಲೂ ಹರಟೆಯಲ್ಲಿ ಇದು ಎದ್ದು ಕಾಣುವಂಥದ್ದು. ಭುಜಂಗಯ್ಯನ ಸ್ಥಾನಮಾನಗಳನ್ನು ಹೆಚ್ಚಿಸುವ, ಊರವರ ಕಣ್ಣಲ್ಲಿ ಗಣ್ಯನಾಗುವ ಸಂದರ್ಭವನ್ನು ಸೃಷ್ಟಿಸಿಕೊಳ್ಳುವಲ್ಲಿ ದೇವನೂರಿನ ಜಗದ್ಗುರುಗಳು ಅವನ ಮನೆಗೆ ಬಂದು ನಡೆಸುವ ಧಾರ್ಮಿಕ ಕ್ರಿಯೆಯ ವಿವರಣೆಗಿಂತಲೂ, ಗೌರವ, ಶ್ರದ್ದೆ ತೋರಿಸುವಂತಹ ಸಂದರ್ಭದಲ್ಲೂ ಅದಕ್ಕೆ ಹೆಚ್ಚು ಒಟ್ಟು ಕೊಡದೆ, ಅದಾದ ನಂತರ ಪುನ್ದ್ರಿ ಅದರ ಬಗ್ಗೆ ಹರಟುವುದನ್ನು ವಿವರವಾಗಿ ವರ್ಣಿಸಿರುವುದು. ಗುರುಗಳು ಅಮೇಧ್ಯ ತುಳಿದಿದ್ದು, ಅಂತೆಯೇ ಊರಿನ ‘ಬಸವಿ’ ಗುರುಗಳಿಗೆ ನಮಸ್ಕಾರ ಮಾಡುವಾಗ ಕಂಡ ದಪ್ಪ ಮೊಲೆಗಳ ವರ್ಣನೆ ಇತ್ಯಾದಿ ವಿವರಿಸಿ ಅನೌಪಚಾರಿಕ ಮಾತುಗಳಿಗೆ, ಹಗುರವಾದ ವಿಚಾರಕ್ಕೆ ಒತ್ತುಕೊಟ್ಟಿರುವುದು. ಕಾದಂಬರಿಯಲ್ಲಿ ಬಳಸುವ ಭಾಷೆಯಲ್ಲೂ ಈ ಗುಣಗಳನ್ನು ಕಾಣಬಹುದು.

೫.ಉಪಕಥೆಗಳನ್ನು ಸೇರಿಸುವುದು: ಭುಜಂಗಯ್ಯ ಮೊದಲ ಬಾರಿಗೆ ಗಣ್ಯರೊಡನೆ ಸೇರಿ ನ್ಯಾಯ ಹೇಳಿ ಸಾಯಿ ಅನ್ನಿಸಿಕೊಂಡ ಸಂದರ್ಭದಲ್ಲಿ(ಅಧ್ಯಾಯ ೧೩) ಬರುವ ಚಾಮನಾಯಕನ ಹೆಂದರಿ ಕರಿಸಿದ್ದಿ ಮೈದುನನ್ನು ಮಡಗಿಕೊಂಡಿರುವುದರ ಬಗ್ಗೆ ಚರ್ಚೆ ನಡೆಯುತ್ತದೆ. ಆಗ ಅದಕ್ಕೆ ಉಪಕಥೆ ಎಂಬಂತೆ ಪುನ್ದ್ರಿ ತನ್ನ ಗೆಳೆಯ ದೊಡ್ದತಮ್ಮನ ಜೊತೆ ಎತ್ತುಗಳ ಚಾಟಿವ್ಯಾಪಾರಕ್ಕೆ ಹೋಗಿದ್ದಾಗ ಅವನು ಒಂದು ಹೆಣ್ಣಿನ ಜೊತೆ ಸಿಕ್ಕಿಬಿದ್ದು ಪಟ್ಟ ಪಾಡಿನ ಕಥೆಯನ್ನು ಅದಕ್ಕೆ ಉಪಕಥೆಯಾಗಿ ಹೇಳುತ್ತಾನೆ.

೬.ಸಾಂಕೇತಿಕತೆ:ಸಾಂಕೇತಿಕತೆ ಸಾಮಾನ್ಯವಾಗಿ ಶಿಷ್ಟ ಸಾಹಿತ್ಯದಲ್ಲಿ ಉರುವುಅ ಒಂದು ಪ್ರಮುಖ ಗುಣ. ಶಿಷ್ಟ ಸಾಹಿತ್ಯದಲ್ಲಿ ಅದು ಕಥೆ ಹೇಳುವ ತಂತ್ರವಾಗಿ ಬರುತ್ತದೆ. ಮೌಖಿಕ ಸಂಪ್ರದಾಯದಲ್ಲಿ ಒಂದು ಕಥಾನಕ(discourse) ಮುಗಿದ ಮೇಲೆ ಅದು ಇನ್ನೊಂದಕ್ಕೆ ಸಂಕೇತವಾಗಿ ನಿಲ್ಲಬಹುದು. ಆದರೆ ಮೌಖಿಕ ಸಂಪ್ರದಾಯದಲ್ಲಿ ಸಾಂಕೇತಿಕತೆ ಕಡಿಮೆ.

“ಭುಜಂಗಯ್ಯ…..” ಕಾದಂಬರಿಯಲ್ಲಿಯೂ ಸಾಂಕೇತಿಕತೆ ಬರುವುದು ಬಹಳ ಕಡಿಮೆ. ಭುಜಂಗಯ್ಯ ತನ್ನ ಹೋಟೆಲಿನ ಪಕ್ಕದಲ್ಲಿ ಬಂದಿದ್ದ ಹಾವಿನ ವಿವರ ಮತ್ತು ಅಲ್ಲಿಗೆ ಮೊದಲ ಬಾರಿಗೆ ಸುಶೀಲ ಬರುವುದು, ಸಾಂಕೇತಿಕವಾಗುತ್ತದೇನೋ ಎಂಬಷ್ಟು ಹತ್ತಿರ ಬರುತ್ತದೆ. ಮುಂದೆ ಭುಜಂಗಯ್ಯನಿಗೂ ಸುಶೀಲಳಿಗೂ ಲೈಂಗಿಕ ಸಂಬಂಧ ಬೆಳೆಯುತ್ತದಾದರೂ, ಹಾವು ಅಲ್ಲಿ ಸಾಂಕೆತಿಕವಾಗದೆ, ಭುಜನ್ಗಯ್ಯನು ಹಾವಿನ ಜೊತೆ ಸರಸವಾಡುವ, ಹಾವು ಕಚ್ಚಿದರೆ ಔಷದ ಕೊಡುವವನು ಎಂಬುದರ ಕಡೆಗೂ ಒಟ್ಟು ಬೀಳುತ್ತದೆ. ಆ ವಿವರ ಇಲ್ಲದೆಯೂ ಅವನು ಸುಶೀಲಳನ್ನು ಪ್ರೀತಿಸಬಹುದಿತ್ತು ಎಂಬುದು ಮುಂದಿನ ಕಾದಂಬರಿಯ ವಿವರಣೆಯಲ್ಲಿ ದೊರೆಯುತ್ತದೆ.

೭.ಮೌಖಿಕ ಸಂಪ್ರದಾಯದ ಭಾಷೆಯಲ್ಲಿ ವಾಕ್ಯರಚನೆ ಶಿಷ್ಟದಲ್ಲಿನಂತೆ ಉದ್ದವೂ ಸಂಕೀರ್ಣವೂ ಆಗಿರುವುದಿಲ್ಲ. ನೇರವೂ ಸರಳವೂ ಆದ ವಾಕ್ಯಗಳು ಇರುವಂತೆ ‘ಭುಜಂಗಯ್ಯ…’ ಕಾದಂಬರಿಯಲ್ಲೂ ಇವೆ.

ಇಲ್ಲಿ ಹೇಳಿದ ಈ ಗುಣಗಳಲ್ಲಿ ಒಂದನ್ನೊಂದನ್ನು ಶಿಷ್ಟ ಸಂಪ್ರದಾಯದ ಬರಹಗಳಲ್ಲಿ ಕಂಡರೂ ಅವುಗಳು ಒಂದು ಕೃತಿಯಲ್ಲಿ ಗಮನಿಸಿದಾಗ ಮುಖ್ಯ ಭಾಗಗಳಾಗಿ ಎದ್ದು ಕಾಣುವಂತೆ ಬಂದಿರುವುದಿಲ್ಲ. ಈ ಗುಣಗಳು ‘ಭುಜಂಗಯ್ಯ……’ ಕಾದಂಬರಿಯಲ್ಲಿ ಕಣ್ಣಿಗೆ ಢಾಳಾಗಿ ಗೋಚರಿಸುತ್ತವೆ ಎಂಬುದನ್ನು ಗಮನಿಸಬಹುದು.

ಭಾಗ ೨

‘ಭುಜಂಗಯ್ಯ…..’ ಕಾದಂಬರಿಯ ಮುಖ್ಯ ಪರಿಕಲ್ಪನೆ:

ಈ ಕಾದಂಬರಿಯ ಉದ್ದಕ್ಕೂ ಹಾಸುಹೊಕ್ಕಾಗಿ ಹರಡಿಕೊಂಡಿರುವ ಪರಿಕಲ್ಪನೆ ‘ಒಳಗು-ಹೊರಗು’ ಎಂಬುದು. ಈ ಪರಿಕಲ್ಪನೆ ಕಾದಂಬರಿಯಲ್ಲಿ ನಾನಾ ಸ್ತರಗಳಲ್ಲಿ ಕೆಲಸಮಾಡುತ್ತದೆ.

೧.ಕುಗ್ರಾಮವಾದ ಮಾದಲ್ಲಿಯ ಎಲ್ಲಾ ಜಾತಿಯ ಜನರೂ ಕೃಷಿ ಸಂಪ್ರದಾಯಕ್ಕೆ ಸೇರಿದ್ದವರು. ಅದು ಅವರಿಗೆ ತಲೆತಲಾಂತರದಿಂದ ಬಂದದ್ದು. ಅದರಿಂದ ಅವರು ಹೊರಬರುವ ಸಾಧ್ಯತೆಗಳೇ ಇಲ್ಲ. ಸಂಪ್ರದಾಯಬದ್ಧವಾದ ಬೇಸಾಯವನ್ನೇ ಅವಲಂಬಿಸುತ್ತಿರುವ ಜನ. ಅದು ಅವರ ನರನಾಡಿಯಾನ್ನು ಮನಸ್ಸನ್ನೂ ಹೊಕ್ಕಿರುವಂಥದ್ದು. ಭುಜಂಗಯ್ಯನೂ ಇಂತದೆ ಸಂಪ್ರದಾಯಕ್ಕೆ ಬದ್ದನಾದವನು. ಆದರೆ ಊರಿನವರನ್ನೆಲ್ಲಾ ಸೇರಿಸಿಕೊಂಡು ಮೋರಿ ಬಾರಿ ಅವನು ಓಡಾಡಿ ಮಾಡಿದ ‘ಪರ’ಕ್ಕೂ ಮಳೆರಾಯ ಒಗೊಟ್ಟಿರದಿದ್ದರಿಂದಮೊದಲ ಬಾರಿಗೆ ಅವನ ಮನಸ್ಸಿನಲ್ಲಿ ಜಮೀನಿನ ಜೊತೆಗೆ ಇನ್ನೇನಾದರೂ ವೃತ್ತಿಯನ್ನು ಅವಲಂಬಿಸಬೇಕೆಂಬುದು ಹೊಕ್ಕು, ಗುಂಗಿಹುಳದಂತೆ ಕೊರೆಯುತ್ತಿರುತ್ತದೆ. ಅದು ಆಕಾರ ತಳೆದದ್ದು ಯಾರೂ ಪ್ರಯಾಣಿಕನೊಬ್ಬ “ಈ ಊರಿನಲ್ಲಿ ಕುಡಿಯುವ ನೀರಿಗೂ ಬರ. ಒಂದು ಹೋಟೆಲಾದರು ಇದ್ದಿದ್ದರೆ” ಎಂದು ಹೇಳಿದ ಗಳಿಗೆಯಿಂದ.,

ತನ್ನೊಳಗೆ ಬಂದು ಕುಳಿತುಕೊಂಡ ಈ ವಿಚಾರವನ್ನು ಮೊದಲು ತನ್ನ ಗೆಳೆಯರೊಡನೆ ಹೊರಹಾಕಿದ ತಕ್ಷಣ ಬಂದ ಪ್ರತಿಕ್ರಿಯೆ ‘ಎಂಜಲು ಲೋಟ ತೊಳೆಯುವುದು ಶಿವಾಚಾರರರಾದ ನಮಗೆ ಅಲ್ಲ’ ಈ ಹೊಸ ಕಾಯಕ ಬೇಡ, ಅದೂ ಸ್ವಲ್ಪ ಆಸ್ತಿವಂತನೇ ಆಗಿರುವ ಭುಜಂಗಯ್ಯನ ಬಾಯಲ್ಲಿ ಈ ಮಾತು ಬಂದಿರುವುದು ಸರಿಯಲ್ಲ ‘ಉದ ನಾವು ಮಾಡುವ ಕೆಲಸವಲ್ಲ’ ಎಂಬ ಪ್ರತಿಕ್ರಿಯೆ.

ಆದರೂ ಇದನ್ನು ಮಾಡಿಯೇ ತೀರುತ್ತೇನೆಂದು ಪಟ್ಟುಹಿಡಿದು ಕೂತಾಗ ಭುಜಂಗಯ್ಯನ ಹೆಂಡತಿ, ತಾಯಿಯರೂ ಅದನ್ನು ವಿರೋಧಿಸುತ್ತಾರೆ. ಅವನ ಹೆಂಡತಿ ಪಾರ್ವತಿಯಂತೂ ತನ್ನ ತೌರಿನಿಂದ ತಂದೆಯನ್ನು ಕರೆಸಿ ಭುಜಂಗಯ್ಯನಿಗೆ ಬುದ್ದಿವಾದ ಹೇಳಿಸುತ್ತಾಳೆ. ಆತ ಪಾಪ-ಪುಣ್ಯ ಬೆರೆಸಿ ಎಚ್ಚರಿಕೆಯ ಉಪದೇಶಾಮೃತವನ್ನೇ ಬಿಗಿಯುತ್ತಾನೆ. ಭುಜಂಗಯ್ಯ ಚಿಕ್ಕವರಾಗಿದ್ದಾಗ ಊರುಬಿಟ್ಟು ‘ಪತ್ರಾವಳಿ’ ಎತ್ತುವ ಕೆಲಸಕ್ಕೆ ಬಿದ್ದಿದ್ದನ್ನು ಜ್ಞಾಪಿಸಿ ಹಂಗಿಸುತ್ತಾನೆ. ಇದರ ಪರಿಣಾಮವಾಗಿ ಭುಜಂಗಯ್ಯನಿಗೆ ಸೇರಿದ ಕುಟುಂಬದ ವ್ಯಕ್ತಿಗಳಿಗೇ ಹೊರಗಿನವನಾಗುತ್ತಾನೆ. ಮನೆಯಲ್ಲಿ ಮೌನಯುದ್ಧವೇ ಪ್ರಾರಂಭವಾಗುತ್ತದೆ. ಅದಕ್ಕೆ ಮುಖ್ಯ ಕಾರಣ ಭುಜಂಗಯ್ಯನು ಹೋಟೆಲ್ಲಿನ ಕಡೆಗೆ ಹೆಚ್ಚು ಗಮನ ನೀಡಿ ಬೇಸಾಯವನ್ನು ಮರೆತೇಬಿಡುತ್ತಾನೆ ಎಂಬುದು.

ಊರಿನ ಕೆಲ ಜನರಾದರೂ ಭುಜಂಗಯ್ಯನ ಅಭ್ಯುದಯವನ್ನು ಕಂಡು ಮಾತನಾಡಿದರೂ ಹೋಟೆಲ್ಲಿಗೂ ತನಗೂ ಏನೂ ಸಂಬಂಧವೇ ಇಲ್ಲ ಎನ್ನುವಂತೆ ಇದ್ದುಬಿಡುತ್ತಾರೆ. ಭುಜಂಗಯ್ಯ ಹೋಟೆಲ್ಲಿನಿಂದ ತಂದ ತಿಂಡಿಯನ್ನು ಮಕ್ಕಳಿಗೆ ಕೊಡಲು ಬಿಡುವುದಿಲ್ಲ.

ಭುಜಂಗಯ್ಯ ಮತ್ತು ಹೆಂಡತಿ ಪಾರ್ವತಿ ಒಂದಾಗುವುದು ಮತ್ತೆ ಮಳೆ ಬಂದು ಭುಜಂಗಯ್ಯ ಸ್ವಲ್ಪ ದಿನ ಬೇಸಾಯಕ್ಕೆ ಗಮನಕೊಟ್ಟಾಗಲೇ ಮತ್ತು ಆಟ ಹೋಟೆಲ್ ಆದಾಯವನ್ನು ಅವಳ ಕೈಲಿ ಇಟ್ಟಾಗ.

ಭುಜಂಗಯ್ಯ ಹೋಟೆಲ್ ಇತ್ತ ಕ್ಷಣದಿಂದ ತನ್ನ ಮಾತಿನ ಶಾಲಿಯನ್ನೇ ಬದಲಾಯಿಸಿಕೊಳ್ಳುತ್ತಾನೆ. ಹೊಸ ನುಡಿಗಟ್ಟುಗಳು ವ್ಯಾಪಾರಕ್ಕಾಗಿ ಬೇಕಾಗುವ ಭಾಷೆಯನ್ನೂ ರೂಢಿಸಿಕೊಳ್ಳುತ್ತಾನೆ. ವೇಷಭೂಷಣಗಳಲ್ಲಿ ಬದಲಾಗುತ್ತಾನೆ. ತನ್ನ ಜಾತಿಯ ಜನರಿಗೆ ಹತ್ತಿರವಾಗದಿದ್ದರೂ ಕೆಲವರಿಗಂತೂ ಬಹಳ ಹತ್ತಿರದವನಾಗುತ್ತಾನೆ. ಆದರೆ ಭೂಮಿಯಿಂದ ಹಂತ ಹಂತವಾಗಿ ಹೊರಗಿನವನಾಗುತ್ತಾನೆ. ಅವನಿಗೆ ಸ್ವಲ್ಪ ಆದಾಯ ಬರತೊಡಗಿದಾಗ ಹೊಸ ಹೊಸ ಆಕಾಂಕ್ಷೆಗಳು ತೆರೆದುಕೊಳ್ಳುವ, ತುಂಬಿಕೊಳ್ಳುವ ಮಧುರವಾದ ದಿನಗಳಾಗತೊಡಗುತ್ತವೆ. ಕಂಡದ್ದೆಲ್ಲ ಸುಂದರವಾಗತೊದಗುತ್ತದೆ. ಶ್ರಮವಿಲ್ಲದ ಬದುಕು ಸರಳವಾಗುತ್ತದೆ. ವ್ಯಾಪಾರದ ನೆರಳಿನಲ್ಲಿ ಕೂತು ಮಾಡಿದರೂ ಅದೂ ಕಡಿಮೆಯೇ ತಾನೇ ಎಂದು ಸಮಾಧಾನಪಟ್ಟುಕೊಳ್ಳುತ್ತಾನೆ. ಆದರೆ ಆಟ ಕೃಷಿ ಮಾಡಲಿ ನೇರವಾಗಿ ತಾನು ಹೊಲಗದ್ದೆಗಳಿಗೆ ಹೋಗುವುದಿಲ್ಲ. ತನ್ನ ತಾಯಿಯ ಮೇಲುಸ್ತುವಾರಿಯಲ್ಲೇ ನಡೆಯುತ್ತದೆ. ತಿಂಗಳಾದರೂ ಮುಖ ಕ್ಷೌರ ಮಾಡಿಸಿಕೊಳ್ಳದವನು ವಾರಕ್ಕೆ ಮೂರು ಬಾರಿ ಮಾಡಿಸಿಕೊಳ್ಳುತ್ತಾನೆ. ಹೀಗೆ ಬೇಸಾಯ ಸಂಸ್ಕೃತಿಯಿಂದ ಹಂತ ಹಂತವಾಗಿ ದೂರವಾಗುತ್ತಾನೆ. ಹುಂಡಿಯ ಮುದ್ದೆಗೌಡರ ಸಹಾಯದಿಂದ ಹೊಸ ಜಮೀನನ್ನು ಕೊಂಡರೂ ಆಟ ನೇರವಾಗಿ ಬೇಸಾಯಕ್ಕೆ ತೊಡಗುವುದಿಲ್ಲ. ಜೀತದಾಳುಗಳನ್ನು ಇಟ್ಟುಕೊಂಡು ಉಸ್ತುವಾರಿ ರೈತನಾಗುತ್ತಾನೆ. ಹೀಗೆ ಕ್ರಮೇಣ ಬೇಸಾಯದಿಂದ ಪರಕೀಯನಾಗತೊಡಗುತ್ತಾನೆ.

ಇಷ್ಟು ಹೊತ್ತಿಗಾಗಲೇ ತನ್ನ ಜಾತಿಯ ಆಗದವರ ಕಣ್ಣು ಭುಜಂಗಯ್ಯನ ಅಭ್ಯುದಯಕ್ಕೆ ಕೆಂಪಾಗುತ್ತದೆ. ತನ್ನನ್ನು ಹೊರಹಾಕಿದ ಜನರ ಜೊತೆ ಪ್ರತಿಷ್ಠೆಯನ್ನು ಸಂಪಾದಿಸಲು ಭುಜಂಗಯ್ಯ ದೊಡ್ಡಮಠದ ಸ್ವಾಮಿಗಳನ್ನು ತನ್ನ ಕುಗ್ರಾಮಕ್ಕೆ ಕರೆಸಿ ಅವರ ಪಾದಧೂಳಿನಿಂದ ಊರನ್ನು ಪವಿತ್ರಗೊಳಿಸುವ ಕೆಲಸ ಮಾಡುತ್ತಾನೆ. ಇದರಿಂದ ತನ್ನ ಹೊಸ ಕಾಯಕಕ್ಕೆ ಸ್ವಾಮಿಗಳ ‘ಅಸ್ತು’ವಿನ ಮುದ್ರೆ ಒತ್ತಿಸಿ ಅವನನ್ನು ಆಡಿಕೊಳ್ಳುವ ಜನರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಾನೆ.

ಇದರ ಪರಿಣಾಮವಾಗಿ ಅವನಿಗೆ ಹೊರಗಿನವರೇ ಆಗಿ ಬಿಟ್ಟಿದ್ದ ಜನವೂ ಅವನನ್ನು ಒಳಗಿನವನಾಗಿ ಒಪ್ಪಿಕೊಳ್ಳಲು ತಯಾರಾಗುತ್ತಾರೆ. ಮಾವ ಪರ್ವತಪ್ಪನೂ ಇದಕ್ಕೆ ಹೊರತಲ್ಲ.

ಭುಜಂಗಯ್ಯ ದೊಡ್ಡಕುಳವಾಗುತ್ತಿದ್ದಂತೆ ಅವನನ್ನು ಪರಕೀಯನಾದವನಂತೆ ಜನ ನೋಡುತ್ತಾರೆ. ಅದನ್ನು ತಪ್ಪಿಸಿಕೊಳ್ಳಲು ನಾಟಕ ಮಾಡಿಸಿ ಜನರು ತನ್ನವನೆಂದು ತಿಳಿದುಕೊಳ್ಳುವಂತೆ ಮಾಡುತ್ತಾನೆ. ಆದರೆ ಭೂಮಿಯ ಬಗ್ಗೆ ಮಾತ್ರ ದೂರ ದೂರದವನಾಗುತ್ತಾ ಹೋಗುತ್ತಾನೆ.

ಸುಶೀಲನ ಪ್ರೇಮ ‘ಮದುವೆ’ಯಲ್ಲಿ ಪರ್ಯಾವಸಾನವಾದಾಗ ಮತ್ತೆ ಊರಿನವರು ದೂರವಾದಂತೆ, ಹೆಂಡತಿಯೂ ಮನೆ ಬಿಟ್ಟು ಹೋಗುತ್ತಾಳೆ. ಪುನಃ ಅವಳು ಆ ಊರಿಗೆ ಬಂದರೂ ಕ್ರಮೇಣ ಭುಜಂಗಯ್ಯನ ಪಿತ್ರಾರ್ಜಿತ ಭೂಮಿ ಪಾರ್ವತಿಯ ಹೆಸರಿಗೆ ಹೋಗುತ್ತದೆ. ಈಗಂತೂ ಅವನು ಕೃಷಿಯಿಂದ ಹೊರಗಿನವನಾಗಿಯೇ ಉಳಿದು ಬಿಡುತ್ತಾನೆ. ಸ್ವಯಾರ್ಜಿತ ಜಮೀನು ಮಾತ್ರ ಅವನದಾಗಿರುತ್ತದೆ.

ಹೋಟೆಲ್ಲಿಗೆ ಬೆಂಕಿಬಿದ್ದು ನಷ್ಟವಾದಾಗಲೂ ಅವನು ಭೂಮಿಯನ್ನು ಉಳಲು ವಾಪಸ್ಸಾಗುವುದಿಲ್ಲ, ಅಂಗಡಿ ಇಡುತ್ತಾನೆ. ನಷ್ಟವಾದ ಮೇಲೆ ಕಂತ್ರಾಟುದಾರನಾಗುತ್ತಾನೆ. ಬಾವಿ ತೆಗೆಸುವ ವೃತ್ತಿಯನ್ನು ಅವಲಂಬಿಸುತ್ತಾನೆ. ಆದರೆ ಜಮೀನು ಉಳಲು ಹೋಗುವುದಿಲ್ಲ. ಯಾರೋ ಬೇರೆ ಊರಿನವನನ್ನು ಕರೆಸಿ ಜಮೀನು ಮಾಡಿಸುತ್ತಾನೆ.

ಕೊನೆಗೆ ಕಣ್ಣು ಕಳೆದುಕೊಂಡ ಮೇಲಂತೂ ಕಂತ್ರಾಟಿನಲ್ಲಿ ಆದ ನಷ್ಟ ತುಂಬಿಕೊಳ್ಳಲು ತನ್ನ ಜಮೀನನ್ನೇ ಮಾರಿಬಿದುತ್ತಾನೆ. ಒಂದು ಅಂಗೈ ಅಗಲದ ಭೂಮಿಯೂ ಇಲ್ಲದವನಾಗಿ ಕೃಷಿ ಸಂಸ್ಕೃತಿಯಿಂದಲೇ ಹೊರಗಿನವನಾಗಿ ಉಳಿದು ಬಿಡುತ್ತಾನೆ.

ಇದರ ಜೊತೆಗೆ ತನ್ನ ಕೈ ಹಿಡಿದ ಹೆಂಡತಿ ಇವನು ಕಣ್ಣು ಕಳೆದುಕೊಂಡಾಗಲೂ ಬದ್ನು ನೋಡದೆ ಹೊರಗಿನವಳಾಗಿಯೇ ಉಳಿದುಕೊಂಡು ಬಿಡುತ್ತಾಳೆ. ಮಕ್ಕಳನ್ನೂ ಗಂಡನಿಂದ ದೂರಮಾಡಿಬಿಡುತ್ತಾಳೆ. ಹೀಗೆ ಭುಜಂಗಯ್ಯ ಕೃಷಿಯಿಂದ ಹೊರಗಾಗಿ, ಹೆಂಡತಿ ಮಕ್ಕಳಿಂದಲೂ ಹೊರಗಿನವನಾಗಿಯೇ ಉಳಿದು ಬಿಡುತ್ತಾನೆ.

೨.ಭುಜಂಗಯ್ಯನಿಗೆ ಹೋಟಲ್ಲು ಇಡುವ ಮನಸ್ಸು ಯಾರೋ ಹೊರಗಿನರಿಂದಾಗಿ ಬಂದಂತೆ ಅವನು ಹೊಟಲ್ಲು ಇಡಲು ಮನಸ್ಸು ಮಾಡಿದಾಗ ಸಲಹೆಗಾಗಿ ಅರಸಿ ಹೋಗುವುದು ಶಿವಾಚಾರದ ಕುಲದವನಾದರೂ, ಆ ಕುಲದ ದೃಷ್ಟಿಯಿಂದ ಅತ್ಯಂತ ಹೀನವಾದ ಹೆಂಡಮಾರುವ ವೃತ್ತಿಯನ್ನು ಹಿಡಿದಿರುವ ಕೋಡಂಗಿ ಅಜ್ಜಪ್ಪನ ಹತ್ತಿರ. ಅವನು ಭುಜಂಗಯ್ಯನ ಅಭಿಲಾಷೆಗೆ ಒತ್ತುಕೊಟ್ಟಿದ್ದೂ ಅಲ್ಲದೆ ಹಣದ ಒತ್ತಾಸೆಯನ್ನು ನೀಡಿ ಊರಹೊರಗೆ, ಕೂಡುರಸ್ತೆಯಲ್ಲಿರುವ ಜಮೀನಿನ ‘ದೆವ್ವದ ಹುಣಸೇಮರ’ದ ಕೆಳಗೆ ಹೊಟಲ್ಲಿಡುವ  ಜಾಗವನ್ನು ಕೊಡುತ್ತಾನೆ. ಕೊನೆಗೆ ಅವನೇ ಭುಜಂಗಯ್ಯನಿಗೆ ಸಲಹೆಗಾರನೂ ಆಗಿ ಭುಜಂಗಯ್ಯನಿಗೆ ಅಂತರಂಗದ ವ್ಯಕ್ತಿಯಾಗಿಬಿಡುತ್ತಾನೆ.

೩.ಊರಿನ ಹರಗಿದ್ದ ಹೋಟೆಲ್ಲಿಗೆ ಮೊದಮೊದಲು ಬರಲು ಹಿಂದೇಟು ಹಾಕುತ್ತಿದ್ದ ಜನ ಕ್ರಮೇಣವಾಗಿ ಯಾರ ಹೆದರಿಕೆ ಭಯವೂ ಇಲ್ಲದೆ ಬಂದು ಟೀ ಕುಡಿಯತೊಡಗಿದರು. ಕೊನೆಗೆ ಭುಜಂಗಯ್ಯನ ತಿಂಡಿಯ ರುಚಿಗೆಬಿದ್ದವರು ಅದು ಇಲ್ಲದೆಯೇ ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಬಂದುಬಿಟ್ಟಿದ್ದರು.

ಭುಜಂಗಯ್ಯನಿಗೆ ಯಾವಾಗಲೂ ಒತ್ತಾಸೆಯಾಗಿ ಹಿತೈಷಿಯಾಗಿ ನಿಂತಿದ್ದವರೆಂದರೆ ಕರೀಗೌದರು ಮತ್ತು ಅವರ ತಮ್ಮ ಮುದ್ದೆಗೌಡರು. ಮಾದಳ್ಳಿಯ ಕರೀಗೌಡರ ಮನೆ ದಾನ ಧರ್ಮಕ್ಕೆ ಹೆಸರಾಗಿದ್ದಾರೆ ಹುಂಡಿಯಲ್ಲಿ ಮುದ್ದೇಗೌಡರ ಮನೆ, ಮುದ್ದೇಗೌಡರ ಹೆಂಡತಿ ಪುಟ್ಟವ್ವ.’ ಭುಜಂಗಯ್ಯ ತನಗೆ ಏನೇ ಕಷ್ಟಬಂದರೂ ತನ್ನ ಜಾತಿಯವರ ಹತ್ತಿರ ಹೋಗುತ್ತಿರಲಿಲ್ಲ. ನೇರವಾಗಿ ಹುಂಡಿಗೆ ಹೋಗಿ ಗೌಡರು ಇರಲಿ ಇಲ್ಲದಿರಲಿ ತನಗೆ ಬೇಕಾದದ್ದನ್ನು ಕೇಳಿ ಪಡೆಯುತ್ತಿದ್ದ. ಕರೀಗೌದರು ಸ್ವಾಮಿಗಳನ್ನು ಕರೆಸಿದ್ದಾಗ ದವಸ ಧಾನ್ಯಗಳನ್ನು ಅವರಿಗೆ ಕೊಟ್ಟಿದ್ದರು. ಭುಜಂಗಯ್ಯ ಜಮೀನು ಖರೀದಿಸುವಂತೆ ಸಲಹೆಮಾಡಿದಾಗ ಅದನ್ನು ಕೊಳ್ಳಲು ಕೈಗಡವಾಗಿ ಹಣ ಕೊಟ್ಟವರು ಮುದ್ದೇಗೌಡರು. ‘ಅವತ್ತಿನಿಂದ ಭುಜಂಗಯ್ಯನಿಗೆ ತನ್ನ ಕಷ್ಟ ಸುಖಕ್ಕೆ ನಿಜವಾಗಲೂ ಆಗುವ ಪುಣ್ಯಾತ್ಮರು ತನ್ನ ಜಾತಿಯವರಲ್ಲ, ಗೌಡರ ಮನೆಯವರು ಅನ್ನುವುದು ಖಚಿತವಾಗಿಬಿಟ್ಟಿತು”.(ಪುಟ೧೨೨) ಭುಜಂಗಯ್ಯ – ಸುಶೀಲರ ಸಂಬಂಧದಲ್ಲಿ ಭುಜಂಗಯ್ಯನನ್ನು ಕುಲದಿಂದ ಹೊರಹಾಕಲು ಮಾಡಿದ ನ್ಯಾಯದಲ್ಲಿ ಸಹಾಯ ಮಾಡಿದವರು ಕರೀಗೌಡರು.

ಒಮ್ಮೆ ಕರೀಗೌಡರಿಗೆ ಹಾವು ಕಚ್ಚಿದಾಗ ಊರಲ್ಲಿ ಯಾವತ್ತು ಹಾವು  ಅವನು ತಮ್ಮ ಜಾತಿಯವನನ್ನು ಬಿಟ್ಟು ಹೇಗೆ ಬಾಯಿ ಹಚ್ಚಿ ವಿಷ ತೆಗೆದಿರಲಿಲ್ಲ. ಈಗ ಮಾತ್ರ ಹಿಂದೂ ಮುಂದೂ ನೋಡದೆ ಬೇರೆ ದಾರಿಯೇ ಕಾಣದೆ ಬಾಯಿಹಚ್ಚಿ ವಿಷ ತೆಗೆಯುತ್ತಾನೆ. ಗೌಡರನ್ನು ಬದುಕಿಸುತ್ತಾನೆ. ಹೋಟೆಲ್ಲು ಸುಟ್ಟುಭಸ್ಮವಾದ ಮೇಲೆ ಭುಜಂಗಯ್ಯನಿಗೆ ಆಸರೆಯಾದವರು ಕರೀಗೌಡರು.

ಹೀಗೆ ಜಾತಿಯ ಹೊರಗಿನವರು ಭುಜಂಗಯ್ಯನಿಗೆ ಒಳಗಿನವರಾಗುತ್ತಾರೆ.

೫. ಭುಜಂಗಯ್ಯನಿಗೆ ಹೊರಗೆ ನಡೆಯುವ ವಿದ್ಯಮಾನವನ್ನೆಲ್ಲಾ ತಿಳಿಯುವಂತೆ ಮಾಡುವವರು, ಹೋಟೆಲ್ ಪ್ರಯಾಣಿಕರನ್ನು ಕರೆತರುವವರು ಲಿಂಗಾಂಬ ಬಸ್ಸಿನ ಡ್ರೈವರ್ ವಿಕ್ಟರಣ್ಣ. ಅವನಿಗೆ ಸುಶೀಲಳ ಜೊತೆ ‘ಮದುವೆ’ ಮಾಡಿಸಲೂ ಅವರು ಸಹಾಯ ಮಾಡುತ್ತಾರೆ.

೬. ಭುಜಂಗಯ್ಯನಲ್ಲಿ ರಾಷ್ಟ್ರೀಯ ಭಾವನೆಯನ್ನು ಮೂಡಿಸುವ ಇನ್ನೊಬ್ಬ ವ್ಯಕ್ತಿ ಬ್ರಾಹ್ಮಣರಾದ ಗೋವಿಂದರಾಜು ಮಾಸ್ತರರು. ವೀರಶೈವ ಧರ್ಮದ ದೇವರುಗಳಿಗಿಂತ ಭಿನ್ನವಾದ ಭವಿಯಾಗಿಯೂ ದೈವತ್ವವನ್ನು ಪಡೆದುಕೊಂಡ ವ್ಯಕ್ತಿ ಗಾಂಧಿಯನ್ನು ಅವನಿಗೆ ಪರಿಚಯ ಮಾಡಿಸಿ, ಹರಿಜನೋದ್ದಾರದ ಬಗ್ಗೆ ಭುಜಂಗಯ್ಯನಲ್ಲಿ ಹೊಸ ರೀತಿಯ ಪರಿಕಲ್ಪನೆಯನ್ನು ಮೂಡಿಸುತ್ತಾರೆ. ಇದರಿಂದ ಭುಜಂಗಯ್ಯ ತನ್ನ ವೀರಶೈವಧರ್ಮ ಎಷ್ಟು ದೊಡ್ಡದು, ಆದರೂ ಇದನ್ನು ಆಚರಿಸುವ ಜನರು ಎಷ್ಟು ಸಣ್ಣ ಮನಸ್ಸಿನವರು ಎಂದು ಅರಿತುಕೊಳ್ಳುತ್ತಾನೆ. ಹಿಂದೆ ಯಾವ ಜಾತಿಯವರಾದರೂ ತಮ್ಮ ಧರ್ಮವನ್ನು ಅಪ್ಪಿಕೊಳ್ಳುವಂತಿತ್ತು. ಆದರೆ ಈಗ? ಗೋವಿಂದರಾಜುವಿನ ಗಾಂಧೀ ತತ್ವ ಭುಜಂಗಯ್ಯನ ಮೇಲೆ ಅಪಾರ ಪ್ರಭಾವ ಬೀರುತ್ತದೆ. ವೀರಶೈವ ಧರ್ಮ ಜಾತಿಗೆ ಸೇರದ ಗಾಂಧಿಯ ಫೋಟೋ ಅವನ ಧರ್ಮದ ದೇವರುಗಳ ಜೊತೆ ನಗುನಗುತ್ತಾ ಸೇರಿ ಬಿಡುತ್ತದೆ. ಇದು ತಂಬೂರಿ ಅಯ್ಯನವರಿಗೂ ನುಂಗಲಾಗದ ತುತ್ತಾಗುತ್ತದೆ.

ನಂತರ ಹರಿಜನರ ಜಾತಿಗೆ ಸೇರಿದ ಕ್ಯಾತನಹಳ್ಳಿಯ ಹೊಸ ಮಾಸ್ತರು ಹೋಟೆಲ್ ಒಳಗೆ ಕುಳಿತು ಕಾಫಿ ಕುಡಿದದ್ದು, ಅದನ್ನು ಭುಜಂಗಯ್ಯ ವಹಿಸಿಕೊಂಡದ್ದು ತನ್ನ ವೀರಶೈವ ಜನಾಂಗ ಸಹಿಸದೆ ಭುಜಂಗಯ್ಯನ ಅಭ್ಯುದಯದ ಹೋಟೆಲ್ಲನ್ನು ಸುಟ್ಟು ಅವನ ಅಭ್ಯುದಯವನ್ನೇ, ಕಾಯಕವನ್ನೇ ಅಳಿಸಿ ಹಾಕಿಬಿಡುತ್ತಾರೆ. ಬೇರೆ ದೇವರುಗಳ ಪಟವನ್ನು ಬಿಟ್ಟು ಗಾಂಧೀಪಟವನ್ನು ಒಡೆದು ಹಾಕಿ ಬಿಡುತ್ತಾರೆ.

೭. ಭುಜಂಗಯ್ಯನ ಮನೆ ಮುಂದೆ ಬರಲಿ, ಅವನು ಮತ್ತಷ್ಟು ಭಾಗ್ಯಶಾಲಿಯಾಗಲಿ ಎಂದು ಹರಸುತ್ತಿದ್ದ ಜೀವ ಹಂಪಾಪುರದ ತಂಬೂರಿ ಅಯ್ನೋರದ್ದು. ಇವರು ಹೇಳುತ್ತಿದ್ದ ಪದಗಳು ಭುಜಂಗಯ್ಯನ ಮೇಲೆ ಪರಿಣಾಮ ಬೀರುತ್ತಿರುತ್ತವೆ. ಕುರುಡುತನದ ದೊಡ್ಡ ಭಾರವನ್ನು ಹೊತ್ತು ಮಾದಳ್ಳಿಗೆ ಬಂದ ಮೇಲಂತೂ ಅಯ್ನೋರು ಹಾಡಿದ ಪದಗಳೂ, ಭುಜಂಗಯ್ಯನ ಅಂತರಾಳಕ್ಕೆ ಅನುಭವಗಳಾಗಿ ಇಲಿಯ ತೊಡಗುತ್ತವೆ. ‘ಈ ಲೋಕದ ಬದುಕಿಗೆ ಅಂಟಿಕೊಂಡರೆ ತಾನೂ ಭಾವಿಯಾಗಿ ಕೊಳೆತು ನಾರಿಹೊಗುತ್ತದೆ. ತಾನೂ ಒಬ್ಬ ಶರಣನಾಗಬೇಕು. ಈ ದೇಹಕ್ಕೆ ತನ್ನದು, ತಾನು ಅನ್ನುವ ಮಾಯೆ ಹೋಗಬೇಕು. ಮಾಯೆಯನ್ನು ಗೆಲ್ಲಬೇಕು ಎಂಬ ವೇದಾಂತದ ದರ್ಶನ ಮಾಡಿಸುತ್ತಾರೆ. ಅಧ್ಯಾತ್ಮದ ಗುರುವಾಗಿ ಬಿಡುತ್ತಾರೆ. ಕೊನೆಗೆ ತಮ್ಮ ತಂಬೂರಿಯನ್ನೇ ಅವನಿಗೆ ಕೊಟ್ಟು ತಮ್ಮ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವಂತೆ ಮಾಡುತ್ತಾರೆ. ತಂಬೂರಿಯನ್ನು ಕೊಟ್ಟು ತಿರುಗಿನೋಡದೆ ಹೊರಟ ಅಯ್ನೋರು ಶಿವನ ಪಾದವನ್ನು ಸೇರಿಬಿಡುತ್ತಾರೆ. ಭುಜಂಗಯ್ಯನ ಮನದ ಒಳಗನ್ನೂ ಸೇರಿಬಿಡುತ್ತಾರೆ.

೮.’ಒಳಗು-ಹೊರಗು’ ಒಂದಾಗುವುದು

(ಅ) ಭುಜಂಗಯ್ಯನಿಗೆ ಎಲ್ಲಾ ರೀತಿಯಲ್ಲೂ ಹೊರಗಿನವಳಾಗಿಯೇ ಉಳಿಯುತ್ತಾಳೆ ಕಟ್ಟಿಕೊಂಡ ಹೆಂಡತಿ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಹೊರಗಿನಿಂದ ಬಂದ ಹೊರ ಜಾತಿಯವಳಾದ ಸುಶೀಲ ಮಾತ್ರ ಭುಜಂಗಯ್ಯನಿಗೆ ಒಪ್ಪಿಸಿಕೊಂಡು ಬಿಡುತ್ತಾಳೆ. ಸ್ವತಃ ಭುಜಂಗಯ್ಯನಿಗೇ ‘ಇಟ್ಟುಕೊಂಡವಳಾಗಿ’ ಮೊದಮೊದಲು ಕಂಡ ಸುಶೀಲ ಅವಳ ಆಸೆ ಅವನದೂ, ಅವನ ಆಸೆ ಅವಳದೂ ಆಗಿಬಿಡುತ್ತದೆ. ಯಾವ ಹಿಂದೂ ಸ್ತ್ರೀ ಸಂಹಿತೆಯನ್ನು ಓದದಿದ್ದರೂ ಅವಳು ಅದನ್ನು ಪಾಲಿಸಿಕೊಂಡು ನಡೆಯುತ್ತಾಳೆ. ಊರಹೊರಗೆ ತನ್ನ ಸಂಸಾರವನ್ನು ಪ್ರಾರಂಭಿಸುತ್ತಾಳೆ. ತಂದೆ ಬಳೆಶೆಟ್ಟರು ‘ದದ್ದಾದ ವಡ್ಕೆ’ ಅದು ಎಂದು ಅವಳನ್ನು ಹೊರಹಾಕಿಬಿಡುತ್ತಾರೆ. ಇದರಿಂದಾಗಿ ವೀರಶೈವ ಜನಾಂಗವೇ ಭುಜಂಗಯ್ಯನನ್ನು ಕುಲದಿಂದಲೇ ಹೊರಹಾಕಲು ನ್ಯಾಯ ಸೇರುತ್ತಾರೆ. ಆದರೆ ಅದು ಗೊಂದಲದಿಂದ ಮುಕ್ತಾಯವಾಗುತ್ತದೆ.

ಭುಜಂಗಯ್ಯ ಸುಶೀಲಳನ್ನು ವಿದ್ಯುಕ್ತವಾಗಿ ಲಿಂಗಧಾರಣೆ ಮಾಡಿಸಿ ಜಾತಿಯ ಒಳಕ್ಕೆ ಸೇರಿಸಿಕೊಳ್ಳುವಂತೆ ಮಾಡುತ್ತಾನೆ. ಆದರೆ ಈ ಕದನದಿಂದ ಕೋಟೆಯ ಪೋಲಿಸಿನವರು ಮಾದಳ್ಳಿಗೆ ಹತ್ತಿರದವರಾಗುತ್ತಾರೆ.

ಕರೀಗೌಡರಿಗೆ ಹಾವು ಕಚ್ಚಿದಾಗ ಸುಶೀಲ ಅವರ ಮನೆಗೆ ಬಂದದ್ದು ಭುಜಂಗಯ್ಯನಿಗೇ ಆಶ್ಚರ್ಯವಾದ ಸಂಗತಿ ಆದರೆ ಅವಳನ್ನು ಅಕ್ಕರೆಯಿಂದ ಕರೆದು ಕೂರಿಸಿಕೊಳ್ಳುತ್ತಾರೆ ಗೌಡರ ಹೆಂಡತಿ.

‘ಶರಣನಿಗೆ ಕುಲವಿಲ್ಲ’ ಎಂದು ಅಯ್ನೋರು ಸುಶೀಲೆಯನ್ನು ಲಿಂಗಧಾರಣೆಯಾದರೂ ಒಪ್ಪಿಕೊಂಡಿರಲಿಲ್ಲ. ಅವಳ ಕೈಯಿಂದ ನೀರೂ ಕುಡಿಯುತ್ತಿರಲಿಲ್ಲ. ಅವಳು ಆಗಲೇ ಯಾವ ಶರನರಿಗೂ ಕಡಿಮೆ ಇಲ್ಲದೆ ಶಿವಪೂಜೆ ಮಾಡಲು ಕಲಿತುಕೊಂಡು ಬಿಟ್ಟಿದ್ದಾಳೆ. ಆದರೂ ಅಯ್ನೋರು ಇವಳನ್ನು ತಮ್ಮ ಧರ್ಮದವಳನ್ನಾಗಿ ಒಪ್ಪಿಕೊಳ್ಳಲಿಲ್ಲವೆಂದು ಆಲೋಚಿಸುತ್ತಾನೆ. ಇದರ ವಿಷಯವಾಗಿ ಅವರನ್ನು ಒಮ್ಮೆ ಕೇಳಿಯೂ ಬಿಡುತ್ತಾನೆ. ಆದರೂ ಅವರ ಮನಸ್ಸಿನಲ್ಲಿ ಅವಳು ಲಿಂಗಧಾರಣೆ ಮಾಡಿಸಿಕೊಂದರೂ ಸೆಟ್ಟರವಳೇ. ಈ ಮಹಾತ್ಮಗಾಂಧಿಯನ್ನು ಭುಜಂಗಯ್ಯ ಪೂಜೆ ಮಾಡುವುದನ್ನು ನೋಡಿದರೆ ಹೊಲೆಯರು ಲಿಂಗ ಕಟ್ಟಿಸಿಕೊಂಡು ಬಂದರು ನಮ್ಮವರೆಂದು ಒಪ್ಪಿಕೊಳ್ಳಿ ಎಂದು ಭುಜಂಗಯ್ಯ ಹೇಳಲಾರನೇ ಎಂಬುದರಿಂದ ಅವರು ಒಪ್ಪಿಕೊಳ್ಳುವುದಿಲ್ಲ.

ಭುಜಂಗಯ್ಯನ ಹೊಟಲ್ಲು ಸುಟ್ಟಾಗಲು ಕೈಯಲ್ಲಿ ಹಣವಿಲ್ಲದ್ದಾದರೂ ಸುಶೀಲ ಅವನನ್ನು ಅನುಸರಿಸಿಕೊಂಡಿರುತ್ತಾಳೆ. ಅವರಿಗೆ ಇರಲು ಜಾಗ ಕೊಟ್ಟವರು ವೀರಶೈವರ ಕೇರಿಯವರಲ್ಲ, ಆದರೆ ಕರೀಗೌಡರು. ಮುಂದೆ ಭುಜಂಗಯ್ಯ ಮನೆ ಕಟ್ಟಿಸಿದಾಗ ಅಯ್ನೋರು ಸುಶೀಲಳನ್ನು ತಮ್ಮ ಜಾತಿಯವಳೆಂದು ಸ್ವೀಕರಿಸುತ್ತಾರೆ. “ಊರಲ್ಲಿ ತಮ್ಮ ಜಾತಿಯ ಜನ ಏನೇ ಅಂದರೂ ಅಯ್ನೋರು ಮಾತ್ರ ಭುಜಂಗಯ್ಯನ ಮನೆ ಬಿಡುವುದಿಲ್ಲ(ಪುಟ ೩೮೩)

ಆದರೆ ಒಮ್ಮೆಮ್ಮೆ ಭುಜಂಗಯ್ಯನೆ ಯಾವುದೋ ಜಾತಿಯ ಹೆಣ್ಣನ್ನು ಇತ್ತುಕೊಂಡಿದ್ದೇನಲ್ಲ. ತಾನು ಇಟ್ಟ ಹೆಜ್ಜೆ ತಪ್ಪಲ್ಲವೇ ಅಂದುಕೊಂಡದ್ದೂ ಉಂಟು(ಪುಟ ೩೮೩) . ತಮ್ಮ ಜಾತಿಯವರಿ ಮೂರು ನಾಲ್ಕು ಮದುವೆಯಾದರೆ ಅವರ ಪ್ರತಿಷ್ಠೆ ಹೆಚ್ಚುತ್ತಿತ್ತು. ಆದರೆ ನಾನು? ಎಂಬ ಯೋಚನೆಗೆ ಒಳಗಾಗುತ್ತಾನೆ. ಆದರೆ ಸುಶೀಲ ತಾನು ಮಾಡುತ್ತಿರುವ ತ್ಯಾಗದಿಂದ ಅವನ ಮನಸ್ಸಿನ ಒಳಗೂ ಇಳಿಯುತ್ತಿರುತ್ತಾಳೆ.

ಭುಜಂಗಯ್ಯ ಸಿಡಿಮದ್ದಿನ ಅಪಘಾತಕ್ಕೆ ಒಳಗಾಗಿ ಕಣ್ಣು ಕಳೆದುಕೊಂಡಾಗ ಅವಳು ಧೃತಿಗೆಡದೆ ಅವನ ಸೇವೆ ಮಾಡುತ್ತಾಳೆ. ಅವನನ್ನು ಮಗುವೇನೋ ಎಂಬ ರೀತಿಯಲ್ಲಿ ಕಾಣುತ್ತಾಳೆ. ಅವಳ ಕಣ್ಣುಗಳು ಅವಳದಷ್ಟೇ ಅಲ್ಲ ತನ್ನ ಗಂಡನವೂ ಆಗಿವೆ ಅಂದುಕೊಳ್ಳುತ್ತಾಳೆ. “ನಾನಿರುವತನಕ  ನಿಮಗೇನೂ ಆಗದ ಹಾಗೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ಇಡುತ್ತಾಳೆ. ಆಗ ಅವನಿಗೆ “ತಾನೆಂದೂ ಒಣಗಿ ಹೋಗದಂತೆ , ತನ್ನೊಳಗಿನದೇನೂ ಬತ್ತಿ ಹೋಗದಂತೆ ಅವಳು ಸದಾ ಆಸರೆಯಾಗುತ್ತಾಳೆ” ಎಂಬ ಭರವಸೆ ಮೂಡುತ್ತದೆ. ಬೆಳಕಾಡದ ಕಣ್ಣುಗಳಲ್ಲಿ ಬೆಳಕು ಕಾಣಲು ಯತ್ನಿಸುತ್ತಾಳೆ. ಇಬ್ಬರಿಗೂ ಬದುಕಿನಲ್ಲಿ ಏನೂ ಕೊರತೆ ಇಲ್ಲ. ಕಳೆದು ಹೋದದ್ದನ್ನೆಲ್ಲಾ ಮತ್ತೆ ಪಡೆದುಕೊಂಡಂತೆ ಎಲ್ಲಾ ತುಂಬಿ ಬಂದಂತೆ ಇಬ್ಬರಿಗೂ ಭಾಸವಾಗುವಂತೆ ಸುಶೀಲ ನಡೆದುಕೊಳ್ಳುತ್ತಾಳೆ. ಅಯ್ನೋರು ತಂದುಕೊಟ್ಟ ನಿಜಗುಣ ಶಿವಯೋಗಿಗಳ ವಚನವನ್ನು ಓದಿ ಹೇಳುತ್ತಾಳೆ. “ದೇವ್ರು ನನ್ನ ಕಣ್ಣು ಕಿತ್ತುಕೊಂಡಿದ್ದರೂ ನಂಗೆ ಬ್ಯಾರೆ ಇನ್ನೆರಡು ಕಣ್ಣು ಕೊಟ್ಟವ್ನೆ” ಅನ್ನಿಸುವಂತಾಗುತ್ತಾಳೆ.

ಜೀವನೋಪಾಯಕ್ಕಾಗಿ ಈಗ ಸುಶೀಲ ತನ್ನ ಹಳೇಕಾರ್ಯಕ್ಕೆ ಹಿಂದಿರುಗುತ್ತಾಳೆ. ಹಳ್ಳಿ ಹಳ್ಳಿಯ ಮೇಲೆ ಹೋಗಿ ಬಳೆ ಮಾರಿ ಬರುತ್ತಾಳೆ. “ಈಗ ಇಡೀ ಊರೇ ತನ್ನನ್ನು ಒಪ್ಪಿಕೊಂಡಿದೆ. ತಾನು ಮಾಡಿದ್ದ ತಪ್ಪನ್ನು ಮರೆತೇಬಿಟ್ಟಿದೆ. ಊರಲ್ಲಿ ಮೊದಲಿಗೆ ಬೇಕೆಂದೇ ನೋವಾಗಲೆಂದೇ ‘ಭುಜಂಗಯ್ಯನ ಇಟ್ಟುಕೊಂಡವಳು’ ಎಂದು ಹಗುರವಾಗಿ ಮಾತನಾಡುತ್ತಿದ್ದವರೂ ಈಗ ತಾವು ಆಡಿಕೊಂಡಿದ್ದಕ್ಕೆ ನಾಚಿಕೆಪಡುವಂತೆ ನಡೆದುಕೊಂಡಿದ್ದಾಳೆ (ಪುಟ ೪೮೨).  ಹೀಗೆ ಸುಶೀಲ ತನ್ನ ಜಾತಿ ಕುಲದವರಿಗೇ ಅಲ್ಲ, ಊರಿನವರಿಗೇ ಒಳಗಿನವಳಾಗಿಬಿಟ್ಟಿದ್ದಾಳೆ.

ಈಗ ಭುಜಂಗಯ್ಯನ ಬದುಕಿಗೆ ಈ ಋತುಮಾನಗಳ ಹಂಗಿಲ್ಲ. ಕತ್ತಲಲ್ಲಿ ದೀಪ ಆರದಂತೆ ಸೆರಗಿನಿಂದ ಮರೆಮಾಡಿಕೊಂಡು ಎಚ್ಚರಿಕೆಯಿಂದ ಕಾಪಾಡಿಕೊಂಡಿದ್ದಾಳೆ ಸುಶೀಲ.

ನಾರಾಯಣನ ಒಳಗಿದ್ದ ಕಾಮದ ಮೃಗ ಹೊರಬಂದು ಸುಶೀಳನನ್ನು ಕೆಡೆಸಿದಾಗಲೂ, ಸುಶೀಲ ಈ ಹೊಲಸು ಶರೀರವನ್ನು ಮುಟ್ಟಬೇಡಿ ಎಂದು ಹೇಳಿದರೂ ಭುಜಂಗಯ್ಯ ಅವಳನ್ನು ಎಳೆಯ ಮಗುವೋ ಎಂಬಂತೆ ಎದೆಗೊತ್ತಿಕೊಂಡು ಮೃದುವಾಗಿ ಮೈದಡವಿ ಸಂತೈಸುತ್ತಾನೆ. ಬೆಳಕು ಇಂಗಿದ ಕಣ್ಣುಗಳಿಗೆ ಒಂದೊಂದೇ ದೃಶ್ಯ ಕಟ್ಟಿಕೊಂಡರೂ ಅಪ್ಪಿದ ಕೈಗಳು ಇನ್ನೂ ಬಿಗಿಯಾಗುತ್ತವೆ. ಹೀಗೆ ಸುಶೀಲ ಭುಜಂಗಯ್ಯನ ಮನಸ್ಸಿನ ಒಳಗೆ ಇಳಿದು ಬಿಡುತ್ತಾಳೆ. ‘ಒಳಗು – ಹೊರಗು’ಗಳ ಪರಿಕಲ್ಪನೆಯನ್ನು ಇಲ್ಲವಾಗಿಸಿ ಒಂದಾಗಿ ಬಿಡುತ್ತಾಳೆ.

(ಆ)ಸುಶೀಲಳ ಮೇಲೆ ವಿಷಕಾರುತ್ತಿದ್ದ ನಾರಾಯಣ ಅವಳನ್ನು ಕೆಡಸಿದ. ಆದರೆ ಭುಜಂಗಯ್ಯನ ಹೊರಕಣ್ಣು ಹೋಗಿದ್ದರು ವೇದಾಂತದ ಒಳಗಣ್ಣು ತೆರೆದುಗೊಂಡಿತ್ತು. ನಾರಾಯಣ ಹಾವುಕಚ್ಚಿ ವಿಷವೇರಿ ಬಿದ್ದಿದ್ದಾಗ ನಿಜವಾಗಿ ಹಾವಿನ ವಿಷವನ್ನು ಹೊರತೆಗೆಯುವ ಶಕ್ತಿಯಿದ್ದ ಹಸಿರು ಔಷಧಿ ಅವನ ಹತ್ತಿರ ಮುಗಿದುಹೊಗಿದ್ದರೂ ತನ್ನ ಮನೆ ಬಾಗಿಲಿಗೇ ಬಂದಿರುವ ಜೀವವನ್ನು ಉಳಿಸಲೇಬೇಕೆಂಬ ಶಂಕರ ಕೊರೆದಿದ್ದ ಕಾಲಿನ ಗಾಯಕ್ಕೆ ಬಾಯಿಹಚ್ಚಿ ವಿಷವನ್ನು ಹೀರಿ ಹೀರಿ ತಂಬಾಳೆಗೆ ಉಗುಳುತ್ತಾನೆ. ಸುಸ್ತಾದರೂ ಅವನಲ್ಲಿದ್ದ ‘ವಿಷ’ವನ್ನು ಹೊರಹಾಕುತ್ತಾನೆ. ಆದರೆ ಗಂಡಾಂತರದಿಂದ ಪಾರಾದ ನಾರಾಯಣ ಕಣ್ಣು ಬಿಡುತ್ತಿದ್ದಂತೆ ಭುಜಂಗಯ್ಯನ ಹೊಟ್ಟೆಯಲ್ಲಿ ಉರಿ ಸಂಕಟ ಪ್ರಾರಂಭವಾಗುತ್ತದೆ. ರೆಕ್ಕೆ ಮುರಿದುಬಿದ್ದ ಹಕ್ಕಿಯಂತೆ ಭುಜಂಗಯ್ಯನು ಚೀರುತ್ತಾ ಸುಶೀಲಳನ್ನು ಬರಸೆಳೆದುಕೊಂಡು ಪ್ರಾಣಬಿಡುತ್ತಾನೆ.

ಹೀಗೆ ನಾರಾಯಣ ಒಳಗೆ ತುಂಬಿದ್ದ ‘ನಿಷಯ’ದ ವಿಷವನ್ನು ತಾನು ನೀಲಕಂಠನಂತೆ ಹೀರಿ ತನ್ನ ಪ್ರಾಣವನ್ನು ಅರ್ಪಿಸಿಬಿಡುತ್ತಾನೆ. ಆಗ ಮಾತ್ರ ಒಳಗು-ಹೊರಗಿನ ಪ್ರಶ್ನೆ ಏಳದೆ ಭೇದ-ಭಾವ ಕರಗಿಹೋಗುತ್ತದೆ.

ಭಾಗ-೩

‘ಭುಜಂಗಯ್ಯ…’,’ಪರಸಂಗ…’ದಂತೆಜನಪ್ರಿಯ ಕಾದಂಬರಿ, ಅದರಲ್ಲೂ ಮಲಯಾಳಂ ಭಾಷೆ ಭಾಷಾಂತರಗೊಂಡ ಈ ಕಾದಂಬರಿ ಕೇರಳದ ಜನತೆಯೊಡನೆ ಅತ್ಯಂತ ಹೆಚ್ಚಿನ ಜನಪ್ರೀಯತೆಯನ್ನು ಗಳಿಸಿತು. ಅದಕ್ಕೆ ಸಾಕ್ಷಿಯಾಗಿ ಮಲಯಾಳಂ ಭಾಷೆಯಲ್ಲಿ ಇಂಗ್ಲಿಶ್ ಭಾಷೆಯಲ್ಲಿ ಕೃಷ್ಣನಿಗೆ ಬರುತ್ತಿದ್ದ ಪತ್ರಗಳೇ ಸಾಕ್ಷಿ. ನಮ್ಮಲ್ಲಿ ಜನಪ್ರಿಯ ಕಾದಂಬರಿಗಳಿಗೆ ಬರವಿಲ್ಲ. ಅವುಗಳನ್ನು ಓದಲು ತೆರೆಯುತ್ತಿದ್ದಂತೆಯೇ ಆ ಕಾದಂಬರಿ ಯಾವ ರೀತಿ ಕೊನೆಗೊಳ್ಳಬಹುದು ಎಂಬುದನ್ನು ಯಾವ ಯಾವ ಪಾತ್ರಗಳು ಯಾವ ಯಾವ ರೀತಿ ಪಡೆದುಕೊಳ್ಳುತ್ತವೆ ಎಂದು ಹೆಚ್ಚು ಕಡಿಮೆ ಹೇಳಿಬಿಡಬಹುದು. ಇವುಗಳು ಫಾರ್ಮುಲಾ ಕಾದಂಬರಿಗಳೆಂದೇ ವಿಮರ್ಶಾವಲಯದಲ್ಲಿ ಗುರುತಿಸಲ್ಪಟ್ಟಿವೆ.

ಆದರೆ ‘ಭುಜಂಗಯ್ಯ….’ ಕಾದಂಬರಿ ಈ ರೀತಿಯ ಯಾವುದೇ ‘ಟೈಪ್’ ಆದ ಕಾದಂಬರಿಯಲ್ಲ. ಅದರಲ್ಲೂ ಹಳ್ಳಿಯ ಬದುಕಿನ ‘ಅಥೆಂಟಿಕ್’ ಪ್ರಪಂಚವನ್ನು ಪರಿಚಯಿಸಿಕೊಡುತ್ತದೆ. ಕಾದಂಬರಿಕಾರ ತನಗೆ ಗೊತ್ತಿರುವುದನ್ನು ಓದುಗನಿಗೆ ತಿಳಿಸಿಕೊಡುವ ಉತ್ಸಾಹ, ತವಕಗಳು ಇವೆ. ಆದ್ದರಿಂದ ಅದು ‘ಟೈಪ್ಡ’ ಜನಪ್ರಿಯ ಕಾದಂಬರಿಗಳಿಗಿಂತ ಭಿನ್ನವಾದ ಕಥೆ(story)ಯಾಗಿದೆ. ಆದರೂ ಆ ಅನುಭವವನ್ನು ನಿರೂಪಿಸುವ ಪ್ರಕ್ರಿಯೆಯಲ್ಲಿ ‘ಆಹಾ!’ ಎನ್ನುವ ತನ್ಮಯತೆಯಿಂದ ಕಾದಂಬರಿಕಾರ ತೊಡಗಿಕೊಂಡಿದ್ದಾನೆಯೋ ಅನ್ನಿಸದೆ ಇರದು. ಈ ಕಾದಂಬರಿಯಲ್ಲಿ ಮೌಖಿಕ ಸಂಪ್ರದಾಯ ನವ್ಯದ ಬುದ್ಧಿಗೋಚರ(intellectual) ಪ್ರಪಂಚಕ್ಕೆ ‘ವಿರುದ್ದ’ವಾಗಿ ಬಂದಿದೆ ಎಂದು ಗೊತ್ತಾಗುತ್ತದೆ. ಭಾಗ ೨ ವಿಶ್ಲೇಷಣೆ ಅದನ್ನು ತೋರಿಸಿಕೊಟ್ಟಿದೆ. ಆದರೆ ಈ ‘elements’ ಕೇವಲ ಅಲಂಕಾರಿಕವಾಗಿ ಸುಮ್ಮನೆ ಬಂದಿದೆಯೇ ಎಂಬ ಪ್ರಶ್ನೆ ಏಳುತ್ತದೆ. ಏಕೆಂದರೆ ಮೌಖಿಕ ಸಂಪ್ರದಾಯದ ಭಾಷೆಯ ನಾದ, ಲಯ , ಸಂಗೀತ, ಭಾಷಾತನ್ಮಯತೆ ಕಥಾನಕಕ್ಕೆ(narration) ಬೇರೆಯ ತಿರುವನ್ನು ಕೊಡುವ ಸಾಧ್ಯತೆ ಏಕೆ ಬರಲಿಲ್ಲ. ಕೇವಲ ‘ಕಚ್ಚಾ’ ಆಗಿಯೇ ಉಳಿದುಬಿಡುತ್ತದೆ ಎನಿಸುತ್ತದೆ. ಮೌಖಿಕ ಸಂಪ್ರದಾಯದ ವಿವಧ ಆಯಾಮಗಳನ್ನು ತುಂಬಿಕೊಂಡು ಸ್ತರ ಸಾಧ್ಯತೆಗಳನ್ನು ಗಾಢವಾಗಿ ಕಲಕುವ ಮನಸ್ಸನ್ನು ಕೊಡಲು ಸಾಧ್ಯವಾಗಿಲ್ಲವೇಕೆ? ಕೇವಲ ಸರಳರೇಖಾತ್ಮಕವಾಗಿ ಕಥಾನಕ ಜರುಗುವುದಿಲ್ಲ ಅನ್ನಿಸುತ್ತದೆ. ಏಕೆಂದರೆ ಮೌಖಿಕ ಸಂಪ್ರದಾಯದ ಮನಸ್ಸನ್ನು ಕೇವಲ ಒಂದು ಗೆರೆಯ ತಿರುವಿನಲ್ಲಿ ಸಮರ್ಥವಾಗಿ ಹಿಡಿಯುವ ದೇವನೂರರ ‘ಕುಸುಮಬಾಲೆ’ ನಮ್ಮ ಕಣ್ಣಮುಂದಿದೆ. ಸ್ವಲ್ಪದ್ದರಲ್ಲಿ ಅಗಾಧವಾದದ್ದನ್ನು ತೋರಿಸುತ್ತದೆ. ಆದರೆ’ ಭುಜಂಗಯ್ಯ….’ ಓದುವ ತನಕ ಜೊತೆಯಲ್ಲಿದ್ದು ಆಮೇಲೆ ಓದುಗನ ಕೈಬಿಡುವುದಿಲ್ಲ ಅನ್ನಿಸುತ್ತದೆ. ಭುಜಂಗಯ್ಯ ಕಾದಂಬರಿ ಅಷ್ಟು ಗಾತ್ರವಾಗಿ ಬೆಳೆಯುವುದಕ್ಕೂ ಇವೇ ಕಾರಣಗಳಾಗಬಹುದು.

ಇದೇ ರೀತಿ ತೇಜಸ್ವಿಯವರ ಕರ್ವಾಲೋ ಅರ್ಧಕ್ಕಿಂತ ಹೆಚ್ಚು ಹರಟೆಯೇ ಆಗಿ ಬೆಳೆದಿದೆ. ಆರರ ಮುಂದೆ ಒಂಭತ್ತು ಸೊನ್ನೆ ಹಾಕಿದಷ್ಟು ವರ್ಷಗಳ ಹಿಂದಿನ ಜೀವಿಯನ್ನು ಅಲ್ಲಿಂದ ಆದ ಜೀವವಿಕಾಸವನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ತೊಡಗಿದಾಗ ಆ ಕಾದಂಬರಿ ಪಡೆದುಕೊಳ್ಳುವ ಆಯಾಮ, ಹಚ್ಚುವ ಚಿಂತನೆ, ನಿಗೂಢತೆ, ಆಶ್ಚರ್ಯ, ಹರಟೆಗೂ ಬೇರೆ ಬೇರೆ ಆಯಾಮ ಒದಗಿಸಿವೆ. ಇವೆಲ್ಲವೂ ‘ಭುಜಂಗಯ್ಯ’ನಲ್ಲಿ ಏಕಿಲ್ಲ ಎನ್ನಿಸುತ್ತದೆ. ಆದರೆ ಶ್ರೀಕೃಷ್ಣ ಅವರು ಬರೆದ ‘ಸುಟ್ಟತಿಕದ ದೇವರು’ ನೀಳ್ಗತೆಯಲ್ಲಿ ಇದೇ ‘ಮೌಖಿಕ ಸಂಪ್ರದಾಯವೂ’ ಪಡೆದುಕೊಳ್ಳುವ ಗಟ್ಟಿತನದ ಸುಳಿವು ಕಾಣುತ್ತದೆ. ಈ ದೃಷ್ಟಿಯಲ್ಲಿ ‘ಭುಜಂಗಯ್ಯ….’ ಮುಂದೆ ಶ್ರೀಕೃಷ್ಣ ಬರೆಯಬಹುದಾಗ ಕಥೆ ಅಥವಾ ಕಾದಂಬರಿಗೆ ನಡೆಸಿದ ‘workshop’ ಎಂದೆನ್ನಿಸುತ್ತದೆ.

ಕಾದಂಬರಿಯ ಮುಖ್ಯ ಪರಿಕಲ್ಪನೆ. ‘ಒಳಗು-ಹೊರಗು’ ಇದೂ ಕನ್ನಡ ಕಾದಂಬರಿಗಳಲ್ಲಿ ಅನೇಕ ಬಾರಿ ಬರುವ ಕಲ್ಪನೆ. ಇದು ‘ಭುಜಂಗಯ್ಯ’ದಲ್ಲಿ ಉದ್ದಕ್ಕೂ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಸರಾಗವಾಗಿ ಹಿಡಿದಿಡಬಹುದಾಗಿದೆ. ಇದೆ ರೀತಿಯ ವಸ್ತುವನ್ನು ಕುವೆಂಪು ಅವರ ‘ಮಲೆಗಳಲ್ಲಿ ಮಧುಮಗಳು’ ಕೆಲವು ಭಾಗಗಳಲ್ಲಿ ಎಷ್ಟು ಸಂಕೀರ್ಣವಾಗಿ ಹಿಡಿದಿಟ್ಟಿದೆ ಅನ್ನಿಸುತ್ತದೆ(ಬೀಸೋಕಲ್ ನಾಗರೀಕತೆ, ಕ್ರಿಶ್ಚಿಯನ್ ಧರ್ಮ ಇತ್ಯಾದಿ, ಒಳಗೇ ಇರುವ ಹಿಂದೂಧರ್ಮ ಅದನ್ನು ಬದಲಾಯಿಸಿಕೊಳ್ಳಲು ಅದರೊಳಗಿಂದಲೇ ಸೋಸಿ ತೆಗೆಯುವ ವಿಧಾನ ಇತ್ಯಾದಿ). ಈ ರೀತಿ ನೋಡಿದಾಗ ‘ಭುಜಂಗಯ್ಯ….’ ಟೈಪ್ಡ ಆದ ಜನಪ್ರಿಯ ಕಾದಂಬರಿಗಿಂತ ಉತ್ತಮವಾಗಿ ಆದರೆ ಮೌಖಿಕ ಸಂಪ್ರದಾಯದ ಸಾಧ್ಯತೆಗಳನ್ನು ಬಳಸಿಕೊಂಡಿರುವ ಕುಸುಮಬಾಲೆ, ಕರ್ವಾಲೋಗಳ ಮಟ್ಟಕ್ಕೆ ಏರದ ಕಾದಂಬರಿಯಾಗಿ ಉಳಿದುಕೊಳ್ಳುತ್ತದೆ.

ಕುವೆಂಪು ಅವರ ಕಾದಂಬರಿಗಳಲ್ಲಿನ ಜೀವನ ಸಂವೃದ್ಧಿ ಭುಜಂಗಯ್ಯನಲ್ಲಿ ಕಾಣಬಹುದು. ಈ ಸಂವೃದ್ದ ಜೀವನಾನುಭವಕ್ಕೆ ಬೇರೊಂದು ಬೌದ್ಹಿಕ ಆಯಾಮದ ಬೆಸುಗೆ ‘ಭುಜಂಗಯ್ಯ…….’ನಲ್ಲಿ ಸಾಧ್ಯವಾಗುವುದಿಲ್ಲವೇನೋ ಅನ್ನಿಸುತ್ತದೆ. ಈ ಅನುಭವಗಳಿಗೆ ಅನುರಣನ ಶಕ್ತಿ(vibratory power) ಇಲ್ಲವಾಗುತ್ತದೆ. ‘ಕುಸುಮ ಬಾಲೆ’ಯಲ್ಲಿ ಬರುವ ಮಂಚದ ಉಪಕಥೆ ಕೇವಲ ಮಂಚದ ಉಪಕಥೆಯಾಗುವುದಿಲ್ಲ. ಬೇರೆ ಬೇರೆ ಹಂತದಲ್ಲಿ ಓದುಗರನ್ನು ಕಾಡಿಸುತ್ತದೆ.

ಕ್ರಿಶನ್ ಭಾವನೆಯ ಹಂತದಲ್ಲಿ ಓದುಗನನ್ನು ಕಾದಿಸುವಂತೆ ಚಿಂತನೆಯ ಮಟ್ಟದಲ್ಲಿ ಕಾಡಿಸುವುದಿಲ್ಲ. ಆದರೆ ಚಿಂತನೆಯ ಮಟ್ಟದಲ್ಲೇ ಬೆಳೆಯುವ ಕಾದಂಬರಿಗಳಿಗಿಂತ ಅನೇಕ ವೇಳೆ ಕೃಷ್ಣ ಬರವಣಿಗೆ ಮೇಲು ಸ್ಥರದ್ದಾಗಿರುತ್ತದೆ. ಏಕೆಂದರೆ ಚಿಂತನಾ ಪ್ರಧಾನ ನವ್ಯ ಕಾದಂಬರಿಯಲ್ಲಿ ‘ಚಿಂತನ’ವನ್ನು ಬಿಟ್ಟ ಅನುಭವವನ್ನು ನೋಡಿದರೆ ಏನೇನೂ ಇಲ್ಲ ಅನ್ನುವಂತಾಗಿಬಿಡಬಹುದು.

ಕೃಷ್ಣನ ಕಾದಂಬರಿಯನ್ನು ಓದಿ ಮುಗಿಸಿದ ನಂತರ ನಿಬ್ಬೆರಗಾಗುವ ಅನುಭವದ ದ್ರವ್ಯ ಓದುಗರಲ್ಲಿ ಉಂಟಾಗುತ್ತದೆ. ಕಾದಂಬರಿಯನ್ನು ಪೋಷಕಭಾವ(patronizing tone)ನಲ್ಲಿ ನೋಡಬೇಕಾಗುತ್ತದೆ. ಆದರೆ ತೇಜಸ್ವಿ – ಮಹಾದೇವರ ಕೃತಿಗಳನ್ನು ಪೋಷಕ ಭಾವದಿಂದ ನೋಡಲಾಗುವುದಿಲ್ಲ. ಅವು “ನನ್ನನ್ನು ಎಷ್ಟರಮಟ್ಟಿಗೆ ಅರ್ಥ ಮಾಡಿಕೊಂಡೆ” ಎಂದು ಪ್ರಶ್ನೆ ಹಾಕುತ್ತಲೇ ಇರುತ್ತವೆ.

ಈ ಎಲ್ಲಾ ಸಾಧ್ಯತೆಗಳ ತಿರುವುಗಳನ್ನು ತನ್ನದಾಗಿಸಿಕೊಳ್ಳುವ ಲಕ್ಷಣಗಳು ಶ್ರೀಕೃಷ್ಣರ ‘ಸುಟ್ಟತಿಕದ ದೇವರು’ ನೀಳ್ಗತೆಯಲ್ಲಿ ಸ್ವಲ್ಪ ಸ್ವಲ್ಪ ಬೆಳೆದುಬಂದಿದೆ. ಭಾವ-ಬುದ್ದಿಗಳ ಸಂಗಮ ಕಾಡುತ್ತದೆ. ಬೇರೆ ಸ್ತರಕ್ಕೆ ನೆಗೆಯುತ್ತಿರುವ ಅನುಭವ ಓದುಗರಿಗಾಗುತ್ತದೆ. ಈ ಒಂದು ಆಯಾಮ ಪಡೆದುಕೊಳ್ಳುವ ಹೊತ್ತಿನಲ್ಲೇ ಕೃಷ್ಣನ ಬರವಣಿಗೆ ನಿಂತೇ ಹೋಯಿತಲ್ಲ ಎನ್ನಿಸುತ್ತದೆ.

ಕಾಮೆಂಟ್‌ಗಳಿಲ್ಲ: