ಸೋಮವಾರ, ಜೂನ್ 13, 2016

ರೆಡ್ ಲೈಟ್ ಏರಿಯಾದಿಂದ `ಫರಾ' ಹೊರಬರಲಿ

ರುಕಿಯ್ಯಾ .ಎ. ರಝಾಕ್


ಅವಳೊಬ್ಬಳು ಲೈಂಗಿಕ ಕಾರ್ಯಕರ್ತೆ. ಹೆಸರು ‘ಫರಾ..’  ಬಾಳ ಸಂಗಾತಿಯ ಅಕಾಲ ಮರಣದಿಂದ ಕಂಗೆಟ್ಟ ಸಂದರ್ಭದಲ್ಲಿ ಜೀವನ ಸಾಗಿಸುವ ಯಾವ ಹಾದಿಯೂ ಕಾಣದಾದಾಗ ಗೆಳತಿ ತಿಳಿಸಿದ ಉದ್ಯೋಗವನ್ನರಸುತ್ತಾ ತನ್ನ ಮಗುವಿನೊಂದಿಗೆ ಮುಂಬೈಗೆ ಕಾಲಿರಿಸಿದ್ದಳು. ಅಲ್ಲಿಯವರೆಗೂ ಆ ಗೆಳತಿ ಅವಳನ್ನು ‘ಧಂದೆ’ಗೆ ಕುಳ್ಳಿರಿಸುವ ಎಳ್ಳಷ್ಟೂ ಸಂದೇಹವೂ ಉಂಟಾಗಿರಲಿಲ್ಲ ಫರಾಗೆ. ಆದರೆ ಅದು ಆಗಿ ಹೋಗಿತ್ತು. ಗೆಳತಿ ಅವಳ ಧಂದೆಯ ಕಮಿಷನ್ ಕೊಂಡು ಫರಾಳನ್ನು ಒಬ್ಬಂಟಿಯಾಗಿಸಿ ಹೋಗಿಯಾಗಿತ್ತು. ಅಷ್ಟು ಮಾತ್ರವಲ್ಲ, ಫರಾಳ ಮಗುವನ್ನು ಇನ್ನೊಬ್ಬ ಲೈಂಗಿಕ ಕಾರ್ಯಕರ್ತೆಗೆ ಮಾರಾಟ ಮಾಡಿಯೂ ಆಗಿತ್ತು. ಅದರ ಬಳಿಕ ಅದೆಷ್ಟೋ ಗ್ರಾಹಕರ ತೆವಲಿಗೆ ಫರಾ ಬಲಿಯಾಗಿ ಆಗಿದೆ. ತನ್ನತನವನ್ನು ಕಳೆದುಕೊಂಡು, ಮಗುವನ್ನೂ ಕಳೆದುಕೊಂಡು ಸಾಕಷ್ಟು ಮಾನಸಿಕ, ದೈಹಿಕ ಯಾತನೆ ಅನುಭವಿಸಿಯಾಗಿದೆ.  ಇದೀಗ ತನ್ನ ಮಗುವಿನ ಬಾಳಾದರೂ ಹಸನಾಗಲಿ ಎಂಬ ಆಸೆ ಫರಾಳಿಗೆ. ಅದಕ್ಕಾಗಿ ಕಾನೂನು ಸಮರವನ್ನೂ ಸಾರಿದ್ದಾಳೆ.. ಸಾಮಾಜಿಕ ಕಾರ್ಯಕರ್ತೆಯೊಬ್ಬಳ ಸಹಕಾರದಿಂದ ಗೆಳತಿಯ ವಿರುದ್ಧ ಕೇಸ್ ರಿಜಿಸ್ಟರ್ ಆಯಿತು. ಆಂಧ್ರದ ಯಾವುದೋ ಹಳ್ಳಿಯಲ್ಲಿ ಮಗು ಮತ್ತು ದತ್ತು ಪಡೆದ ಮಹಿಳೆಯನ್ನು ಪತ್ತೆಹಚ್ಚಲಾಯಿತು.

ಆದರೆ, ಬರೋಬ್ಬರಿ 7 ವರ್ಷಗಳ ಬಳಿಕ ಮಗು ತಾಯಿಯನ್ನು ಗುರುತಿಸಲೇ ಇಲ್ಲ.. ಫರಾ ಅಸಹನೀಯ ನೋವುಂಡದ್ದು ಇಲ್ಲಿ. ಯಾರಿಗಾಗಿ ತನ್ನದೆಲ್ಲನ್ನೂ ಕಳಕೊಂಡಳೋ ಅವಳೇ ಇಂದು ಅನಾಥಳಾಗಿ ಹೋದಳು. ಇದು ಕೆಂಪು ದ್ವೀಪ “ಫರಾ” ಎಂದು ನಾಮಕರಣ ಮಾಡಿದ ಒಬ್ಬ ಹೆಣ್ಣಿನ ಕಥೆ.. ಈ ಹೆಸರು ಅವಳ ಜಾತಿ ಪಂಗಡದಿಂದಾಗಿ ಬಂದದ್ದಲ್ಲ. ರೆಡ್ ಲೈಟ್ ಏರಿಯಾ ಅವಳಿಗೆ ಅವಳ ದೇಹಕ್ಕೆ ನೀಡಿದ ಹೆಸರು.. ಇಂದಿಗೂ ಮಬ್ಬು ಬೆಳಕಿನಲ್ಲಿ ಮುಸ್ಸಂಜೆಯ ಹೊತ್ತಾಗುವಾಗ  ತನಗಿಂತಲೂ ಕಿರಿ ವಯಸ್ಸಿನ ಕಾರ್ಯಕರ್ತೆಯರನ್ನೂ ಮೀರಿಸುವಂತೆ ಚೆನ್ನಾಗಿ ಅಲಂಕರಿಸಿ ತನ್ನ ಕೋಠಿಯ ಹೊರಗೆ ಗ್ರಾಹಕರಿಗಾಗಿ ಕಾಯುತ್ತಾಳೆ ಫರಾ.



ಫರಾಳ ವ್ಯಥೆಯ ಈ ಕಥೆ  ಅತಿಯಾಗಿ ನೋಯಿಸಿತು. ಆತ್ಮವನ್ನೇ ಕಾಡಿಸಿಬಿಟ್ಟಿತು. ಗಂಡನನ್ನು ಕಳಕೊಂಡವಳನ್ನು ತಿವಿಯುವ ದೃಷ್ಟಿಯಿಂದ ನೋಡುವ, ಸಮಾಜದಲ್ಲಿ ಅವಳು ಮರ್ಯಾದಸ್ಥಳಾಗಿ ಬಾಳಲು ಅಸಾಧ್ಯವೆನಿಸುವ ಭಾವನೆ ರೇಜಿಗೆ ಹುಟ್ಟಿಸಿಬಿಟ್ಟಿತು.

ಇಂತಹಾ ಅದೆಷ್ಟೋ ಫರಾ, ನಂದಿನಿ, ಚಮೇಲಿ ಯರು ಕಷ್ಟಗಳಿಂದ ತಪ್ಪಿಸಿಕೊಳ್ಳಲು ಉದ್ಯೋಗದ ಆಸೆಯಿಂದ ಮನೆ ಬಿಟ್ಟು ದೂರ ಹೋಗಿ ಆ ಬಳಿಕ ಪಿಂಪ್ ಗಳ ಕೈಯ್ಯಲ್ಲೋ, ಅಥವಾ ಕರಾಳ ಮುಖವರಿಯದ ತಮ್ಮ ಆಪ್ತರಿಂದಲೇ ಕೆಂಪು ದ್ವೀಪಗಳಿಗೆ ಮಾರಲ್ಪಟ್ಟು ನರಕಯಾತನೆ ಅನುಭವಿಸಿದ್ದಾರೆ.  ಧಂದೆಗೆ ಮೈಯೊಡ್ಡಿ ಎಲ್ಲವನ್ನೂ ಕಳಕೊಂಡು ಆ ಬಳಿಕ ಅದಕ್ಕೇ ಹೊಂದಿಕೊಂಡು ಹೋಗಿರುವ ಅದೆಷ್ಟೋ ಕಥೆಗಳು ಇನ್ನೂ ಜೀವಂತವಾಗಿವೆ. ಆದರೆ ಯಾವ ಹೆಣ್ಣೂ ಕೂಡ ತನ್ನ ಮಗು ತಾನು ನರಳಿದ ಅದೇ ಕೂಪದಲ್ಲಿ ಮತ್ತೆ ತನ್ನ ಮಗು ಬೀಳುವುದನ್ನು ನರಳುವುದನ್ನು ಸಹಿಸಲಾರಳು.

ಭಾರತದಲ್ಲಿ ಅಗಣಿತ ಕೆಂಪು ದ್ವೀಪಗಳಿವೆ. ಕೊಲ್ಕೊತ್ತಾದ ಸೊನಗಾಚಿ ಭಾರತದ ಅತ್ಯಂತ ದೊಡ್ಡ ವೇಶ್ಯಾವಾಟಿಕೆಯ ಕೇಂದ್ರವಾಗಿದೆ. ಅದರ ಬಳಿಕ ಮುಂಬೈ ಕಾಮಾಟಿ ಪುರಂ, ಇತ್ವಾರಿ, ತಿಲಾವಲಾ, ಬುಧವಾರ್ ಪೇಠ್, ದೆಹಲಿಯ ಜಿ.ಬಿ.ರೋಡ್ ಗಳು ಪ್ರಮುಖವಾದವುಗಳು.  ಕಾಲೇಜು ತರುಣಿಯರನ್ನು ಬೆಳ್ಳಿತೆರೆಯಲ್ಲಿ ನಟಿಯಾಗಿಸುವ ಆಮಿಷ ತೋರಿಸಿ, ಸಿರಿವಂತರ ಹಂಸತೂಲಿಕದ ಬಲಿಯಾಗಿಸಲಾಗುತ್ತದೆ. ‘ಮರ್ಯಾದಸ್ಥ ಗ್ರಾಹಕರ’ ಮರ್ಯಾದೆ ರಹಿತ ಕಾರ್ಯಗಳಿಗೆ ಈ ಕಾರ್ಯಕರ್ತೆಯರು ತಮ್ಮ ಇಡೀ ಜೀವಿತವನ್ನೇ ಬಲಿಕೊಡಬೇಕಾಗಿ ಬರುತ್ತದೆ. ಇಲ್ಲಿಗೇ ನಿಲ್ಲುವುದಿಲ್ಲ ಈ ನರಕಯಾತನೆ. ಇದು ನಿತ್ಯ ನಿರಂತರ…
 

ಅಷ್ಟಲ್ಲದೇ ಹೆಸರಿಲ್ಲದ ತಂದೆಯರಿಗೆ ಮಕ್ಕಳು ಹುಟ್ಟಿಕೊಂಡರಂತೂ ಅವರ ಅವಸ್ಥೆ ಅಸಹನೀಯವೆನಿಸಿಬಿಡುತ್ತದೆ. ಕಾಮಾಟಿಪುರದ ಮಹಿಳೆಯರು ಸಾಮಾನ್ಯ ಸ್ತ್ರೀಯರಲ್ಲವಷ್ಟೇ? ಅವರಿಗೆ ಸಾಮಾನ್ಯ ಗರ್ಭಿಣಿ ಸ್ತ್ರೀಯರಿಗೆ ದೊರೆಯುವ ಆದರ, ಕಳಕಳಿ ಆರೈಕೆಯೇನೂ ದೊರೆಯುವುದಿಲ್ಲ. ಇದ್ದ ಚಿಕ್ಕ ಖೋಲಿಯಲ್ಲಿಯೇ ಮುದುಡಿ ಮಲಗಬೇಕು. ಚಿಕಿತ್ಸೆಯ ವೆಚ್ಚವನ್ನೂ ದೇಹ ಮಾರಿಯೇ ಭರಿಸಬೇಕು. ಪೌಷ್ಠಿಕಾಂಶ ಆಹಾರ ಸೇವನೆಯೇನೆಂದರೇ ಇವರಿಗೆ ಅರಿಯದು. ಏಕೆಂದರೆ ತನ್ನದೇ ದೇಹ ಮಾರಿದ ದುಡ್ಡಿನಲ್ಲಿ ಅವಳು ಮುಕ್ಕಾಲು ಪಾಲಿನಷ್ಟು ದಲ್ಲಾಳಿಗೂ, ತನ್ನ ರಖ್ವಾಲಿಗೂ ಕೊಡಬೇಕು. ಇಲ್ಲವಾದಲ್ಲಿ ಅವಳ ಸೂರು ಕಸಿದುಹೋಗುವ ಭಯವಿದೆ ಅಥವಾ ತನ್ನ ಗ್ರಾಹಕರಿಲ್ಲದೇ ದುಡಿಮೆಗೆ ಸಂಚಕಾರ ಬರುವ ಭಯವಿದೆ.
ಒಮ್ಮೆ ಕೋಠಿಗೆ  ದಾಖಲಾದ ನಂತರ ಹೊರಬರುವ ಪ್ರಶ್ನೆಯೇ ಅಲ್ಲಿ ಉದ್ಭವಿಸುವುದಿಲ್ಲ. ತೆವಲು ತೀರಿಸಿಕೊಂಡ ಗ್ರಾಹಕ ತಾನು ಮರುದಿನ ಸುಭಗನಂತೆಯೇ ಲೋಕ ಸುತ್ತಿಯಾನು. ಮರ್ಯಾದಸ್ಥನ ಪೋಸು ಕೊಟ್ಟಾನು. ಆದರೆ ಬಲಿಯಾದವಳು ಮಾತ್ರ ಕೋಟಿ ಪುಣ್ಯಕ್ಷೇತ್ರಗಳ ಯಾತ್ರೆ ಮಾಡಿದರೂ ಅವಳು ‘ಸೂ…’ ಆಗಿಯೇ ಗುರುತಿಸಲ್ಪಡುತ್ತಾಳೆ. ಹಾಗಾಗಿ ಈ ಸ್ತ್ರೀಯರು ಅಲ್ಲಿಂದ ಹೊರಬರಲೂ ಹೇಸುತ್ತಾರೆ. ಹೊರ ಹೋಗಿ ಅವಲಕ್ಷಣ ಅನ್ನಿಸಿಕೊಳ್ಳುವುದಕ್ಕಿಂತಲೂ ಒಳಗಿದ್ದು ಹೇಗಾದರೂ ಎರಡು ತುತ್ತು ತಿನ್ನುವುದು ಲೇಸೆನಿಸುತ್ತದೆ ಅವರಿಗೆ.
 

 “ವೇಶ್ಯಾವಾಟಿಕೆಯನ್ನು ನಿಲ್ಲಿಸಬೇಕು, ಅದು ಸಮಾಜಕ್ಕೆ ಕಳಂಕ” ಎಂದು ಹೇಳುವವರ ಮಾತುಗಳು ಮೊದಲು ಚುಚ್ಚುವುದು ಈ ಸ್ತ್ರೀಯರಿಗೇ. ಏಕೆಂದರೆ ಪುನರ್ವಸತಿ ಎನ್ನುವುದು ಈ ಮಹಿಳೆಯರಿಗೆ ತೀರಾ ಅಸಾಧ್ಯ, ಅಸಂಬದ್ಧ ಎಂಬಂತಹ ಭಾವನೆ ಬೆಳೆಸಿಬಿಟ್ಟಿರುತ್ತದೆ.  ಮಾಸಿಕ ಸ್ರಾವಗಳು, ಆರೋಗ್ಯ ಸಮಸ್ಯೆಗಳು, ಅಪೌಷ್ಠಿಕತೆ, ಒಂದರ ನಂತರ ಮತ್ತೊಂದು ಗ್ರಾಹಕರ ಚಿಂತೆ, ಏರುತ್ತಿರುವ ವಯಸ್ಸು,  ಮಬ್ಬುಗತ್ತಲ ಕೋಣೆಗಳು, ಮೆಟ್ಟಿಲಲ್ಲಿ ಎಡವದೇ ನಡೆಯವ ಪರಿಣಿತ ಗ್ರಾಹಕರು, ಅವರು ಕೊಡುವ ಜುಜುಬಿ ಮೊತ್ತಗಳು, ದುಡ್ಡುಕೊಡದೇ ಬಿಟ್ಟಿ ಮನರಂಜನೆ ಪಡೆಯುವ ಪೊಲೀಸರು ಮತ್ತು ಕತ್ತಲ ಬದುಕು, ಕತ್ತಲ ಭವಿಷ್ಯ. ಸಾಮಾನ್ಯ ಸ್ತ್ರೀಯರಂತೆ ಬದುಕುವ ಹಕ್ಕು ಈ ಹೆಣ್ಣುಗಳಿಗೆ ಖಂಡಿತಾ ಇದೆ. ಅದನ್ನು ಕಸಿಯಲು ಯಾರಿಗೂ ಹಕ್ಕಿಲ್ಲ. ಆದರೆ ಅವರನ್ನು ಅವರಿರುವಂತೆಯೇ ಸ್ವೀಕರಿಸುವ  ಗಟ್ಟಿಗುಂಡಿಗೆಯವರಿದ್ದಾರೆಯೇ? ವೇಶ್ಯಾವಾಟಿಕೆಯನ್ನು ವಿರೋಧಿಸುವ ಜನರೇ ನಾಳೆ ಖೋಲಿಯಿಂದ ಹೊರಬಂದ ಸ್ತ್ರೀಗೆ ಸಾಮಾನ್ಯ ಸ್ತ್ರೀ ಗೆ ನೀಡುವ  ಮರ್ಯಾದೆಗಳನ್ನು ಕೊಡಬಲ್ಲರೇ? ಅವರನ್ನು ಅವರ ಭೂತಗಳನ್ನು ನೆನಪಿಸದೇ, ವರ್ತಮಾನದಲ್ಲಿ ಬದುಕಿಸಿ ಭವಿಷ್ಯ ಕಟ್ಟಿಕೊಡುವ ಎದೆಗಾರರಿದ್ದಾರೆಯೇ? ಒಮ್ಮೆ  ನಮ್ಮದೇ ಎದೆ ತಡವಿದರೆ ನಿಜ ಉತ್ತರ ಖಂಡಿತಾ ದೊರೆಯುತ್ತದೆ.

ಮೇಲೆ ತಿಳಿಸಿದ ಫರಾ ಗೆ ಒಬ್ಬ ಸಂಗಾತಿ ದೊರೆತಿದ್ದಾನೆ. ಬಿಹಾರದ ನಿವಾಸಿ ಫರಾ ವೇಶ್ಯೆ ಮತ್ತು ಈ ಮೊದಲು ಎರಡು ಮಕ್ಕಳ ತಾಯಿಯಾಗಿದ್ದಾಳೆಂಬ ಅರಿವಿದ್ದೂ ಆಕೆಯನ್ನು ಹಾರ್ದಿಕವಾಗಿ ಸ್ವೀಕರಿಸಿದ್ದಾನೆ. ಮಗುವನ್ನು ಪಡೆಯಲಿಕ್ಕಾಗಿ ಆಕೆಗೆ ಕೊನೆಕ್ಷಣದವರೆಗೂ ಬೆಂಬಲ ನೀಡಿದ್ದಾನೆ.  ಜಿ.ಬಿ. ರೋಡಿನಿಂದ ಅವಳನ್ನು ಖೋಲಿಯ ಮಾಲಕಳ ಕಪಿಮುಷ್ಠಿಯಿಂದ, ಮತ್ತು ಮಬ್ಬುಗತ್ತಲ ಕೋಣೆಯಿಂದ ಹೊರಗೆಳೆಯಲು ಒಂದು ಲಕ್ಷದಷ್ಟು ಕಟ್ಟಿರುವ ಈ ಬಿಹಾರಿ ಯುವಕ ನಿಜ ಜೀವನದ ಹೀರೋ ಆಗಿದ್ದಾನೆ. ಇದೀಗ ಫರಾ ಮಗುವನ್ನು ಕಳಕೊಂಡಾಗಿದೆ. ಇನ್ನು ಮುಂದಕ್ಕೆ ಜಿ.ಬಿ ರಸ್ತೆಯಿಂದ ಹೊರಹೋಗುವ ದಿನಕ್ಕಾಗಿ ಎದುರು ನೋಡುತ್ತಿದ್ದಾಳೆ ಫರಾ. ಹೋಗುವಾಗ ತನ್ನ ಹೆಸರಿನೊಂದಿಗೇ ಎಲ್ಲಾ ಕೆಟ್ಟ, ಕಹಿ, ಹಳಸಿದ ನೆನಪುಗಳನ್ನು ತೊರೆದು ಹೋಗಬೇಕೆನ್ನುತ್ತಾಳೆ. ಎಲ್ಲಿಗೆ ಹೋಗುತ್ತೀಯಾ ಎಂದರೆ ಪ್ರಪಂಚ ವಿಶಾಲವಾಗಿದೆ ಎಂದು ಶೂನ್ಯದತ್ತ ದಿಟ್ಟಿಸುತ್ತಾಳೆ.

“ಫರಾ..” ಕತ್ತಲ ಜೀವನದಿಂದ ಹೊರಬಂದಾಗ ಬಣ್ಣಬಣ್ಣದ ಹೊಸ ಲೋಕವೊಂದು ಹಾರ್ದಿಕವಾಗಿ ಸ್ವಾಗತಿಸಲಿ. ಇನ್ನೆಂದೂ ರೆಡ್ ಲೈಟ್ ಏರಿಯಾದಲ್ಲಿ ನವನಾಮಕರಣವಾಗದಿರಲಿ ಎಂಬ ಹಾರೈಕೆಯೊಂದಿಗೆ.

ಕಾಮೆಂಟ್‌ಗಳಿಲ್ಲ: