ಮಂಗಳವಾರ, ಜುಲೈ 14, 2015

ಅನ್ನದ ಋಣ ಅಭಿಯಾನ

ರೈತರ ಆತ್ಮಹತ್ಯೆ ನಿಲ್ಲಬೇಕು, ಕೃಷಿ ಬಿಕ್ಕಟ್ಟಿನಿಂದ ಈ ದೇಶ ಪಾರಾಗಬೇಕು ಎಂದು ನೀವು ಬಯಸುತ್ತೀರಾ? ಅದಕ್ಕಾಗಿ ನೀವೇನಾದರೂ ಮಾಡಲು ಸಿದ್ಧರಿದ್ದೀರಾ? ಮುಂದಿನ ಒಂದು ತಿಂಗಳಲ್ಲಿ ಕನಿಷ್ಠ ಕೆಲವು ಗಂಟೆಗಳು ಅದಕ್ಕೆ ನೀಡಲು ಸಿದ್ಧರಿದ್ದೀರಾ? ಹಾಗಾದರೆ, 

ಅನ್ನದ ಋಣ ಅಭಿಯಾನ ಸೇರಲು ಸಂಪರ್ಕಿಸಿ. 
ರವಿಕುಮಾರ್ - 7353770205
ಚೈತ್ರ - 8884512891


ಕೃಷಿ ಬಿಕ್ಕಟ್ಟಿಗೆ ಅಸಲೀ ಕಾರಣ ಗುರುತಿಸಿ, ಅಸಲೀ ಪರಿಹಾರ ಕೇಳಬೇಕಿದೆ
ಆತ್ಮಹತ್ಯೆಗಳನ್ನು 'ತುರ್ತುಸ್ಥಿತಿ' ಎಂಬಂತೆ ಪರಿಗಣಿಸಿ ತೀವ್ರ ರೂಪದ ಕ್ರಮಗಳನ್ನು ಕೈಗೊಳ್ಳಲು ಆಗ್ರಹಿಸಿ
    
ಜುಲೈ 21ರಿಂದ ಮಂಡ್ಯ ಜಿಲ್ಲೆಯ 750 ಹಳ್ಳಿಗಳಲ್ಲಿ 'ರೈತ ಸಂಘರ್ಷ ಜಾಥಾ': 150 ಕಾರ್ಯಕರ್ತರು ಭಾಗಿ


ಆಂದೋಲನದ ಜೊತೆ ಕೈ ಜೋಡಿಸಲು ಕೋರಿ 'ಅನ್ನದ ಋಣ' ಅಭಿಯಾನ

ನಾಡಿನ ಸಾಹಿತಿ - ಕಲಾವಿದರು, ಜನಪರ ಸಂಘಟನೆಗಳ ಪ್ರತಿನಿಧಿಗಳು, 

ವಿವಿಧ ವೃತ್ತಿನಿರತರು ಭಾಗವಹಿಸಲು ಮನವಿ

ಆಗಸ್ಟ್ 3ರಂದು ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ದಿಗ್ಬಂಧನ


ರಾಜ್ಯದಲ್ಲಿ ಪ್ರತಿನಿತ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಾಗಿದೆ. ಈ ವರ್ಷ ಇದು ಕಬ್ಬು ಬೆಳೆಗಾರರನ್ನು ಬಾಧಿಸುತ್ತಿದೆ. ಸರ್ಕಾರಗಳು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ನೋಡಿದರೆ, ಇದೂ ಮತ್ತೊಂದು ಸರಣಿ ಆತ್ಯಹತ್ಯೆ ಎಂಬಂತೆ ಭಾವಿಸಿದಂತಿದೆ. ರಾಜ್ಯ ಸರ್ಕಾರದ ಕೆಲವು ಮಂತ್ರಿಗಳು ಬೇಜವಾಬ್ದಾರಿತನದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೇಂದ್ರ ಸರ್ಕಾರ ತನಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ತೆಪ್ಪಗಿದೆ. ಈ ಸರ್ಕಾರಗಳ ನೀತಿಗಳೇ ಸದ್ಯದ ಬಿಕ್ಕಟ್ಟಿಗೆ ಕಾರಣ ಎಂಬುದನ್ನು ಮರೆಮಾಚಿ, ಈ ವರ್ಷದ 'ಅತೀ ಕಬ್ಬು ಉತ್ಪಾದನೆ'ಯೇ ಕಾರಣ ಎಂಬಂತೆ ಬಿಂಬಿಸಲಾಗುತ್ತಿದೆ. 1995ರಲ್ಲಿ ಡಬ್ಲ್ಯುಟಿಓ ಒಪ್ಪಂದಕ್ಕೆ ಸಹಿ ಹಾಕಿದ ನಂತರವೇ 'ಸಾಮೂಹಿಕ ಆತ್ಯಹತ್ಯೆ' ಎಂಬ ವಿದ್ಯಮಾನ ಆರಂಭವಾಯಿತು ಎಂಬುದನ್ನು ಯಾರೂ ಮಾತಾಡುತ್ತಿಲ್ಲ.

ಅದೇನೇ ಇರಲಿ, ಈ ಸದ್ಯ 'ನೈಸರ್ಗಿಕ ವಿಕೋಪ' ಬಂದಾಗ ಯಾವ ರೀತಿ ಪ್ರತಿಕ್ರಿಯಿಸಬೇಕೋ ಆ ರೀತಿಯಲ್ಲಿ ಕಾರ್ಯಪ್ರವೃತ್ತರಾಗುವ ಅಗತ್ಯವಿತ್ತು. ಅದನ್ನೂ ಮಾಡುತ್ತಿಲ್ಲ. ಕಾಟಾಚಾರದ ಮಾತುಗಳು ಮತ್ತು ಕಾಟಾಚಾರದ ಕ್ರಮಗಳು ಮಾತ್ರ ನಡೆಯುತ್ತಿವೆ. ಈ ಪ್ರಮಾಣದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಲಜ್ಜೆಗೆಟ್ಟ ನಡವಳಿಕೆ ತೋರುತ್ತಿದ್ದರೆ, ವಿರೋಧ ಪಕ್ಷಗಳು ಬೆಂದ ಮನೆಯಲ್ಲಿ ಗಳ ಹಿರಿಯುವುದನ್ನು ಬಿಟ್ಟು ಪರಿಣಾಮಕಾರಿ ಕ್ರಮಗಳಿಗೇನೂ ಆಗ್ರಹಿಸುತ್ತಿಲ್ಲ. ಏಕೆಂದರೆ, ಅವರುಗಳು ಅಧಿಕಾರದಲ್ಲಿದ್ದಾಗಲೂ ಮಾಡಿದ್ದು ಅದೇ ಆಗಿದೆ.
ಹಾಗಾದರೆ ಸಮಾಜದ ಇನ್ನಿತರ ವಿಭಾಗಗಳಿಗೆ ಇದರಲ್ಲಿ ಯಾವ ಜವಾಬ್ದಾರಿಯೂ ಇಲ್ಲವೇ? ಅನ್ನದ ಋಣ ಇದ್ದೇ ಇದೆ. ಕೃಷಿ ಬಿಕ್ಕಟ್ಟಿನ ಹೊರೆಯನ್ನು ಸಂಪೂರ್ಣ ಹೊತ್ತುಕೊಂಡಿರುವ ರೈತರ ಆರ್ಥಿಕ ಸಂಕಷ್ಟಗಳನ್ನು ಬಗೆಹರಿಸಲು ಸಾಧ್ಯವಿರದಿದ್ದರೂ, ಅಸಲೀ ಕಾರಣಗಳನ್ನು ಪತ್ತೆ ಹಚ್ಚಲು ಜೊತೆಯಾಗಬೇಕಿದೆ; ಅದಕ್ಕೆ ಪರಿಹಾರ ಹುಡುಕಲು ಕೈ ಜೋಡಿಸಬೇಕಿದೆ; ಪರಿಹಾರವನ್ನು ಆಗ್ರಹಿಸಲು ಹೆಗಲಿಗೆ ಹೆಗಲು ಕೊಟ್ಟು ಹೋರಾಟಕ್ಕೆ ನಿಲ್ಲಬೇಕಿದೆ.

ಅದಕ್ಕಾಗಿ ಕರ್ನಾಟಕ ಜನಶಕ್ತಿಯು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಮಂಡ್ಯ ಜಿಲ್ಲೆಯ 750 ಹಳ್ಳಿಗಳಲ್ಲಿ 'ರೈತ ಸಂಘರ್ಷ ಜಾಥಾ'ವನ್ನು ಹಮ್ಮಿಕೊಳ್ಳಲಿದ್ದೇವೆ. 150 ಜನ ಕಾರ್ಯಕರ್ತರು 15 ತಂಡಗಳಲ್ಲಿ ಎಲ್ಲಾ ತಾಲ್ಲೂಕುಗಳಲ್ಲೂ ಆಗಸ್ಟ್ 2ರವರೆಗೆ ಜಾಥಾ ನಡೆಸಿ, ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ. ಜುಲೈ 21ರ ರೈತ ಹುತಾತ್ಮ ದಿನದಂದು ಈ ಜಾಥಾ ಆರಂಭವಾಗಲಿದೆ. 'ಕೃಷಿ ಬಿಕ್ಕಟ್ಟಿಗೆ ರೈತರು ಕಾರಣರಲ್ಲ: ಸಕರ್ಾರಗಳು ಕಾರಣ. ಆತ್ಯಹತ್ಯೆಯಲ್ಲ ಆತ್ಮಸ್ಥೈರ್ಯದ ಹೋರಾಟ ನಮ್ಮ ಹಾದಿ, ಬನ್ನಿ ಜೊತೆಗೂಡಿ' ಎಂಬ ಘೋಷಣೆಯೊಂದಿಗೆ ಈ ಹಳ್ಳಿಗಳನ್ನು ಕಾರ್ಯಕರ್ತರು ತಲುಪಲಿದ್ದಾರೆ.

ನಾಡಿನ ಎಲ್ಲಾ ಪ್ರಜ್ಞಾವಂತರು, ಸಾಹಿತಿ-ಕಲಾವಿದರು, ಸಂಘಟನೆಗಳ ಪ್ರತಿನಿಧಿಗಳು, ವೈದ್ಯರು, ವಕೀಲರು, ಶಿಕ್ಷಕರು ಹಾಗೂ ಇನ್ನಿತರ ವೃತ್ತಿನಿರತರು ಈ ಜಾಥಾದಲ್ಲಿ ಪಾಲ್ಗೊಳ್ಳಲು ನಾವು ಮನವಿ ಮಾಡುತ್ತೇವೆ. ಅಂತಿಮವಾಗಿ ಆಗಸ್ಟ್ 3ರಂದು ಜಿಲ್ಲಾಧಿಕಾರಿ ಕಚೇರಿ ದಿಗ್ಬಂಧನ ಕಾರ್ಯಕ್ರಮ ಇರುತ್ತದೆ.

ಇದು ಒಂದು ಸಂಘಟನೆಯ ಕಾರ್ಯಕ್ರಮವಲ್ಲ. ಯಾವುದೇ ರಾಜಕೀಯ ಪಕ್ಷದ, ನಿರ್ದಿಷ್ಟ ಜಾತಿಗೆ ಸೀಮಿತವಾದ ಚಳವಳಿಯಲ್ಲ. ಮಾಧ್ಯಮದವರೂ ಸೇರಿದಂತೆ ನಾಡಿನ ಎಲ್ಲಾ ಮಾನವೀಯ ಜನರು ಜೊತೆಗೂಡಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ.

ಕಾಮೆಂಟ್‌ಗಳಿಲ್ಲ: