ಗುರುವಾರ, ಆಗಸ್ಟ್ 20, 2015

ಕನಕ ಸಾಹಿತ್ಯದಲ್ಲಿ ಮಹಿಳಾ ವ್ಯಕ್ತಿತ್ವದ ಪ್ರತಿಪಾದನೆ


-ಡಾ. ಎಚ್. ಎಸ್. ಅನುಪಮಾ

The second volume will contain 191 articles on the four masterpieces of poet and social reformer Kanakadasa.— File Photo

ನಮ್ಮೆದುರು ಕನಕರು ಎರಡು ನೆಲೆಗಳಲ್ಲಿ, ರೂಪಗಳಲ್ಲಿ ಹರಡಿಕೊಂಡಿದ್ದಾರೆ. ಒಂದು ಭಕ್ತ, ದಾಸ ಕನಕ; ಇನ್ನೊಂದು ಕವಿ ಕನಕ. ಅವರ ವ್ಯಕ್ತಿತ್ವದ ಈ ಎರಡು ವಿಭಿನ್ನ ನೆಲೆಗಳಿಂದ ಮಹಿಳಾ ವ್ಯಕ್ತಿತ್ವ ಪ್ರತಿಪಾದನೆಯನ್ನು ಹೇಗೆ ಮಾಡಿದ್ದಾರೆ ಎಂದು ನೋಡುವುದು ಸೂಕ್ತವೆನಿಸುತ್ತದೆ.

೧೬ನೇ ಶತಮಾನದಲ್ಲಿ ಬದುಕಿದ ಕನಕರು ೨೧ನೇ ಶತಮಾನದ ಸ್ತ್ರೀವಾದಿ ಧೋರಣೆಗಳನ್ನು ಹೊಂದಿರಬೇಕೆಂದು ಬಯಸುವುದು ಸರಿಯಲ್ಲ. ಅಥವಾ ಇವತ್ತಿನ ಸ್ತ್ರೀಕೇಂದ್ರಿತ ದೃಷ್ಟಿಕೋನದಿಂದ ಅವರನ್ನು, ಅವರ ಸಾಹಿತ್ಯವನ್ನು ಅಳೆಯುವುದೂ ಸರಿಯಲ್ಲ. 

ಆದರೆ ೨೧ನೇ ಶತಮಾನದ ಪ್ರಜೆಗಳಾಗಿರುವ, ಲಿಂಗಸೂಕ್ಷ್ಮ ವಿಚಾರ ಹೊಂದಿ ಹೆಜ್ಜೆಹೆಜ್ಜೆಗೂ ಲಿಂಗತಾರತಮ್ಯ ಗುರುತಿಸುವ, ಅದರ ಮೂಲ ಎಲ್ಲಿದಯದೆಂದು ಶೋಧಿಸುತ್ತಿರುವ ನಾವು ಕನಕರನ್ನು ಪುರಾತನರೆಂಬ ಭಕ್ತಿಭಾವವೊಂದನ್ನಿಟ್ಟುಕೊಂಡು ನೋಡಲು ಸಾಧ್ಯವಿಲ್ಲ. ಹಾಗಾಗಿಯೇ ಅಂದಿಗೆ ಕುಲಕುಲಕುಲವೆಂದು ಹೊಡೆದಾಡದಿರಿ ಎಂದು ಅಪರೂಪದ ತತ್ವ ಹೇಳಿದ ಕನಕರು ಹೆಣ್ಣನ್ನು ಹೇಗೆ ಪರಿಭಾವಿಸಿದ್ದಾರೆ ಎಂದು ಶೋಧಿಸಲೇಬೇಕಾಗುತ್ತದೆ. 

ಇವತ್ತು ನಮ್ಮ ಪುರಾತನರೆಲ್ಲರೂ, ಕಲೆ-ಸಾಹಿತ್ಯ-ತತ್ವಗಳೆಲ್ಲವೂ ಎರಡು ಅಗ್ನಿಪರೀಕ್ಷೆ ಹಾದು ಬರಬೇಕಾಗುತ್ತದೆ: 

ಅವರು/ಅವರ ಸಂವೇದನೆಗಳು ಶೋಷಿತಪರ, ಅಧಿಕಾರಹೀನರ ಪರ, ಮಾನವಪರವಾಗಿದೆಯೇ? 
ಅವು ಲಿಂಗ ಅಸಮಾನತೆ, ಅನ್ಯಾಯ ಗುರುತಿಸುವ ಲಿಂಗಸೂಕ್ಷ್ಮತೆಯನ್ನು ಹೊಂದಿವೆಯೇ? 

ಕನಕರು ಕವಿಯಾಗಿ ಹಾಗೂ ಭಕ್ತ ಕನಕರಾಗಿ ನ್ಯಾಯಸೂಕ್ಷ್ಮದ, ಸಾಮಾಜಿಕ ನ್ಯಾಯದ ಪ್ರಶ್ನೆಗಳನೆತ್ತುವ ಮೂಲಕ ಮೊದಲ ಅಗ್ನಿಪರೀಕ್ಷೆ ಹಾದು ಪುಟವಿಕ್ಕಿದ ಬಂಗಾರದಂತೆ ಥಳಥಳಿಸುತ್ತಿದ್ದಾರೆ. ಜಾತಿ ಅಸಮಾನತೆ ವಿರುದ್ಧ ಸ್ವತಃ ಅವಮಾನ ಅನುಭವಿಸಿದವರಾಗಿ ಅದನ್ನು ಭಿನ್ನವಾಗಿ, ಸ್ಫುಟವಾಗಿ ದನಿಯೆತ್ತಿ ಆಡಿದ್ದು ಸಹಜವೇ ಆಗಿದೆ. ಆದರೆ ಜಾತಿಪ್ರಜ್ಞೆ ಕಳಕೊಂಡವರು, ಜಾತಿ ತಾರತಮ್ಯ ವಿರೋಧಿಸಿದವರು ಲಿಂಗತಾರತಮ್ಯ ವಿಷಯಕ್ಕೆ ಬಂದರೆ ಅದರ ವಿರುದ್ಧ ದನಿಯೆತ್ತುವುದಿರಲಿ, ಅದನ್ನು ಗ್ರಹಿಕೆಗೆ ತಂದುಕೊಂಡವರೂ ಬಹಳ ಕಡಿಮೆ. ಪುರುಷಾಧಿಕಾರವನ್ನೆಲ್ಲ ಅನುಭವಿಸುವ ಗಂಡಿಗೆ ಲಿಂಗತಾರತಮ್ಯ ಅನುಭವಕ್ಕೆ ಬರುವುದು ಸುಲಭವಲ್ಲ. ಅದು ಅನುಭವಕ್ಕೆ ದಕ್ಕಬೇಕಾದರೆ ಧರ್ಮದಲ್ಲಿಯೇ ಹಾಸುಹೊಕ್ಕಾಗಿರುವ ಲಿಂಗ ಅಸಮಾನತೆ, ಮದುವೆ ಎಂಬ ಸಂಸ್ಥೆ, ತಾಯ್ತನ-ವೈಧವ್ಯದ ಸಂಕಟಗಳು, ಹೆಚ್ಚುವರಿ ಜವಾಬ್ದಾರಿಯಲಿ ನಲುಗುವ ಜೀವಗಳ ಒಳಸಂಕಟ ಇವೆಲ್ಲವನ್ನು ಸೂಕ್ಷ್ಮವಾಗಿ ಗ್ರಹಿಸಬೇಕಾಗುತ್ತದೆ. ಆ ದೃಷ್ಟಿಯಿಂದ ಬಸವಣ್ಣ ಮತ್ತು ಜ್ಯೋತಿಬಾ ಫುಲೆ ಎಲ್ಲರಿಗಿಂತ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ. ನಂತರ ಬುದ್ಧ, ಅಲ್ಲಮ, ರಾಮಕೃಷ್ಣ ಪರಮಹಂಸ ಇನ್ನಿತರರಿದ್ದಾರೆ. ಇವರ ನಡುವೆ ಕನಕರು ಎಲ್ಲಿದ್ದಾರೆ ಎಂದು ಶೋಧಿಸುವುದು ಈ ಬರಹದ ಉದ್ದೇಶ.

ಮೊದಲೇ ಸ್ಪಷ್ಟಪಡಿಸಬೇಕು, ಇದನ್ನು ಸ್ತ್ರೀವಾದಿ ದೃಷ್ಟಿಕೋನ ಎಂದು ಕರೆಯಬಯಸುವುದಿಲ್ಲ. ಇದು ಹೆಣ್ತನದ ದೃಷ್ಟಿಕೋನ, ಮಾನವಪರ ದೃಷ್ಟಿಕೋನ. ಹೆಣ್ತನ ಎನ್ನುವುದು ಜೈವಿಕ ಸತ್ಯವಷ್ಟೇ ಅಲ್ಲ, ತಿಳಿವಿನ ಸತ್ಯವೂ ಹೌದು. ಹೆಣ್ತನ ಎಂದರೆ ಪುರುಷ ದ್ವೇಷವಲ್ಲ. ಪುರುಷ ಪರಮಾಧಿಕಾರದ ಬದಲು ಮಹಿಳಾ ಪರಮಾಧಿಕಾರ ಸ್ಥಾಪಿಸಬಯಸುವುದೂ ಅಲ್ಲ. ಹೆಣ್ತನವು ಗಂಡನ್ನು ಸದಾ ಬಯಸುತ್ತದೆ: ಗಂಡು ಇರುತ್ತಾನೆ, ಇರಬೇಕು ಸದಾ - ಸಖನಾಗಿ, ಮಗನಾಗಿ, ತಂದೆಯಾಗಿ, ಸಮನಾಗಿ; ಯಜಮಾನನಾಗಿ ಅಲ್ಲ. ಅಲ್ಲಿ ಗಂಡೆನ್ನುವುದು ಹೆಮ್ಮೆಯ ವಿಷಯವಲ್ಲ. ಹೆಣ್ಣೆನ್ನುವುದು ಅವಮಾನದ ವಿಷಯವಲ್ಲ. 

ಈ ದೃಷ್ಟಿಕೋನವು ಹುಟ್ಟಿಸುವ ಸಾಂಗತ್ಯದ ನೆಲೆಯೇ ಬೇರೆ. ಅದು ದೈಹಿಕ ಮತ್ತು ಬೌದ್ಧಿಕ ಸಾಂಗತ್ಯವಾಗಿ ಮಾನವ ಸಂಬಂಧಗಳನ್ನು ಹೊಸ ಸ್ತರಕ್ಕೆ ಕೊಂಡೊಯ್ಯುತ್ತದೆ. ಹೆಣ್ತನದ ದೃಷ್ಟಿಕೋನದಲ್ಲಿ ಕನಕರನ್ನು ನೋಡುವುದು ಸೂಕ್ತ ಎನಿಸುತ್ತದೆ.

ಭಕ್ತ ಕನಕ ಮಹಿಳೆಯ ವ್ಯಕ್ತಿತ್ವವನ್ನು ಗ್ರಹಿಸಿದ ಪರಿ ಹೇಗಿದೆ?

ಭಕ್ತ ಕನಕರದು ಸಾಂಪ್ರದಾಯಿಕ ಸನಾತನ ಮಹಿಳಾ ಮಾದರಿ. ಅವರ ರಚನೆಗಳಲ್ಲಿ ಪದೇಪದೇ ಪರಪುರುಷನಲ್ಲಿ ಅನುರಕ್ತಳಾದ ನಾರಿ, ಅಂಥವಳ ನಿಂದಿಸುವ ಮಾತು ಬರುತ್ತದೆ. ಇದು ವಚನಗಳಲ್ಲೂ, ಬುದ್ಧನ ಬೋಧನೆಗಳಲ್ಲೂ ಕಂಡುಬರುವುದು ನೋಡಿದರೆ ಎಷ್ಟೆಲ್ಲ ಸಾಮಾಜಿಕ ನಿರ್ಬಂಧಗಳ ನಡುವೆಯೂ, ಮದುವೆಯೆಂಬ ಸಂಸ್ಥೆ ಹೆಣ್ಣಿಗೆ ಹೊರಿಸಿರುವ ಜವಾಬ್ದಾರಿ ಕಟ್ಟುಪಾಡುಗಳ ನಡುವೆಯೂ ಬಹುಶಃ ‘ಪರಪುರುಷ’ನೊಡನೆ ಸತಿ ಕೂಡುವುದು ಸರ್ವೇಸಾಮಾನ್ಯವಾಗಿದ್ದಿರಬೇಕು ಎನಿಸುತ್ತದೆ. ಅದರಲ್ಲೂ ಪರಸತಿ, ಪರಸ್ತ್ರೀಯರ ಕುರಿತೇ ಕಾಳಜಿ. ‘ಪರ’ನದಲ್ಲದ ಸ್ತ್ರೀ ಭೋಗದ ವಸ್ತು. ಗಂಡಿನ ಲೈಂಗಿಕ ಸ್ವೇಚ್ಛೆ ಅದರಿಂದ ಹೆಣ್ಣು ಅನುಭವಿಸುವ ನೋವು ‘ವಿಧಿ’. ಅದೇ ಹೆಣ್ಣು ಅಂಥವಳಾದರೆ ಅದು ‘ಮಾಯೆ.’

ತಮ್ಮ ಕೀರ್ತನೆ, ಮುಂಡಿಗೆಗಳಲ್ಲಿ ಕನಕರು ಹೀಗೆ ಹೇಳುತ್ತಾರೆ.

ಸೋತು ಹೆಣ್ಣಿಗೆ ಹೆದರಿ ನಾಚುವ ಪುರುಷನ್ಯಾತಕೆ
ಸನ್ನೆಯನರಿತು ನಡೆಯದಿರುವ ಸತಿಯು ಯಾತಕೆ

ಹೇವವಿಲ್ಲದ ಹೆಣ್ಣು ಗಜುಗ ಬೆಳೆದಾ ಕಣ್ಣು
ಗಂಡಗಂಜದ ನಾರಿ ಅವಳೇ ಹೆಮ್ಮಾರಿ

ಪತಿವ್ರತೆಯರೆಂಬುವರು ಶತ ಸಹಸ್ರಕೊಬ್ಬರು/ಮಿತಿಮೀರಿ ಇಹರಯ್ಯ ಇತರ ಜನರು/
ಮತಿಗೆಟ್ಟು ಮನಸೋತು ಅನ್ಯ ಪುರುಷರ ಕೂಡಿ/ಗತಿಗೆಟ್ಟು ಹೋಗುವರು ಮೂರು ತೊರೆದು’

ಶರೀರ ಸೌಖ್ಯ ಶಮನಕ್ಕಾಗದ ಹೆಣ್ಣು
ಊರಲಿದ್ದರೇನು ತೌರೂರಲಿದ್ದರೇನು?

ಮಾನಿನಿಯ ಮನಸು ನಿಧಾನವಿರದಿರೆ/ಮಾನಾಭಿಮಾನಗಳುಳಿದಿತೇ?

ಮಡದಿ ನುಡಿಯ ಕೇಳಿ ಜಗಳಕೊಬ್ಬರ ಕೂಡೆ ಹೋಗಬಾರದು

ಕಂಡರೆ ಸೇರದ ನಾರಿ ಕೆಂಡವನುಗುಳುವ ಮಾರಿ
ಉಂಡರೆ ಸೇರದ ತಾಯಿ ಉರಗನ ಮೆಕ್ಕೆ ಕಾಯಿ

ಪತಿ ಸೇವೆಗಿಂತಧಿಕ ಸೇವೆಯುಂಟೆ?

ಕಾಯವನು ನಂಬದಿರು, ಮಾಯಕೆ ಮರುಳಾಗದಿರು
ಸ್ತ್ರೀಯರನು ಕಂಡು ನೀನು ಬಯಸದಿರು ಮರುಳು ಮನವೆ

ಇಲ್ಲೆಲ್ಲ ಸಾಂಪ್ರದಾಯಿಕ ಯೋಚನಾಕ್ರಮಕ್ಕಿಂತ ಕನಕರು ಭಿನ್ನವಾಗಿ ಗ್ರಹಿಸಿದಂತೆ ಕಾಣಬರುವುದಿಲ್ಲ. ಭಕ್ತಿ ನೆಲೆಯಲ್ಲೂ ಅವರಿಗೆ ಸ್ತ್ರೀ ಪುರುಷ ಸಮಾನತೆಯ ಪ್ರಶ್ನೆ ಏಳುವುದಿಲ್ಲ. ಅವರ ಕರ್ಮಭೂಮಿ ಅವರಿಗಿಂತ ಮುಂಚೆ ಮೂರ್ನಾಲ್ಕು ನೂರು ವರುಷ ಮೊದಲು, ಜನಪದರ ನಡುವೆ ತಿರುಗಿ, ತತ್ವ ಹೇಳಿ ಬಾಳಿದ ಶಿವಶರಣ-ಶಿವಶರಣೆಯರ ನೆಲವೇ ಆಗಿದ್ದರೂ ಶಿವಶರಣರ ಚಿಂತನೆಯ ಪ್ರಭಾವ ಅವರ ಮೇಲೆ ಆದಂತಿಲ್ಲ. ವಚನ ಚಳುವಳಿಯಲ್ಲಿ ಮೇಲುಕೀಳೆನ್ನದೆ ಸಮಾಜ ತೊಡಗಿಸಿಕೊಂಡದ್ದು, ವಿಶೇಷವಾಗಿ ತಳಸಮುದಾಯಗಳು ತೊಡಗಿಕೊಂಡದ್ದಿರುವಾಗಲೂ ಶೈವ-ವೈಷ್ಣವ ತಿಕ್ಕಾಟ ಅವರನ್ನು ಆ ಚಿಂತನೆಗಳಿಂದ ದೂರವಿರಿಸಿತೇ? ವಚನ ಚಳುವಳಿಯ ಶರಣೆಯರ, ಅಕ್ಕನ ವಚನಗಳ ಪರಿಚಯವಿದ್ದಿದ್ದಲ್ಲಿ ಜಾತಿ ಮತ್ತು ಲಿಂಗ ತಾರತಮ್ಯವಿಲ್ಲದೆ ಭಕ್ತನಾಗಿ ದೇವರಲ್ಲಿ ತೊಡಗಿಸಿಕೊಳ್ಳುವಿಕೆ ಕನಕರ ಮೇಲೆ ಪ್ರಭಾವ ಬೀರಿರುತ್ತಿತ್ತು. ಅವರ ಮೋಹನ ತರಂಗಿಣಿಯಲ್ಲಿ ತ್ರೇತಾಯುಗದ ದ್ವಾರಕಾಪುರಿಯ ವರ್ಣನೆಯಲ್ಲಿ ೧೧ನೇ ಶತಮಾನದ ರಾಮಾನುಜರು ಬರುತ್ತಾರೆ, ಆದರೆ ಶಿವಭಕ್ತ ಬಾಣಾಸುರನ ನಗರಿಯಲ್ಲಿ ಶರಣರ ಸುಳಿವಿಲ್ಲ. ಭಕ್ತಿಯಲ್ಲಾಗಲೀ, ಭವದಲ್ಲಾಗಲೀ ಶಿವಶರಣೆಯರು ಎತ್ತಿದ ಎಷ್ಟೊಂದು ವಿಷಯಗಳು ಕನಕರನ್ನು ಪ್ರಭಾವಿಸಿದಂತಿಲ್ಲ. ಶೈವ ವೈಷ್ಣವ ತಾಕಲಾಟ ಅವರನ್ನು ತಡೆಯಿತೇ? ಅಥವಾ ಲಿಂಗಸಂಬಂಧಿ ಅಂಶಗಳೇ ತಡೆದವೇ?

ಹಾಗೆ ನೋಡಿದರೆ ಭಕ್ತಿಗೆ ನಿರ್ಲಿಂಗೀ ಸಂವೇದನೆಯಿರಬೇಕು. ಈ ಸಂವೇದನೆಯನ್ನು ಬಹಳ ಕಡಿಮೆ ಜನ ಅನುಭವಿಸಿದ್ದಾರೆ. ಅಂಥವರಲ್ಲಿ ಅಲ್ಲಮ ಪ್ರಭು ಹಾಗೂ ಅಕ್ಕ (ಸ್ವಲ್ಪ ಮಟ್ಟಿಗೆ) ಇದ್ದಾರೆ. ಆದರೆ ಭಕ್ತಿಯನ್ನು ಸ್ತ್ರೀ ಸಂವೇದನೆ ಎಂದು ಗುರುತಿಸಿರುವುದೇ ಹೆಚ್ಚು. ಶರಣ ಸತಿ, ಲಿಂಗಪತಿ ಎಂದು ಕನಕನಿಗಿಂದ ಮೊದಲು ವಚನಕಾರರು ಹೇಳಿದರು. ನಮ್ಮ ದೇಶವಷ್ಟೆ ಅಲ್ಲ, ಬೇರೆಡೆಯೂ ಹಾಫಿಜ್ ಇರಲಿ, ರೂಮಿಯಿರಲಿ ತಮ್ಮನ್ನು ಹೆಣ್ಣೆಂದು ದೇವರನ್ನು ಪುರುಷನೆಂದು ಭಾವಿಸಿದರು. ಹೆಣ್ಣೇ ಆಗಿಬಿಡುವುದು ಭಕ್ತಿ ಮಾರ್ಗದ ಮಾದರಿ. ಆದರೆ ಅದರಲ್ಲೂ ಸಮಸ್ಯೆಗಳಿವೆ. ಏಕೆಂದರೆ ಭಕ್ತಿ ಎಂಬ ನೆಲೆಯೇ ಸಮರ್ಪಣಾಭಾವ, ಶರಣಾಗತಿ, ಅನುಯಾಯಿತ್ವವನ್ನು ಅಪೇಕ್ಷಿಸುವಂಥದು. ಭಕ್ತಿಯ ನೆಲೆ ಉದ್ದೀಪಿಸುವ ಶರಣಾಗತಿಗೆ ಅದನ್ನು ಸ್ತ್ರೀತ್ವದೊಡನೆ ಸಮೀಕರಿಸಿ ನೋಡುವುದು ಲಿಂಗರಾಜಕಾರಣದ ಇನ್ನೊಂದು ಮುಖ. ಅದು ಇರಲಿ. ಕನಕರ ಎಷ್ಟೋ ಕೀರ್ತನೆಗಳಲ್ಲಿ ತನ್ನನ್ನು ಹೆಣ್ಣೆಂದುಕೊಂಡು ಕಾಮಾತುರ, ವಿರಹದುರಿಯಲ್ಲಿ ಆದಿಕೇಶವನ ನೋಡಲು, ಮಾತನಾಡಲು, ಕೂಡಲು ವಿರಹಿಯಾಗಿ ತಪಿಸುತ್ತಿರುವ ಹೆಣ್ಣಾಗಿ ಚಿತ್ರಿಸಿದ ರಚನೆಗಳಿವೆ. ಆದರೆ ತಾನೇ ‘ಅರಿವಿನ ಹೆಣ್ತನ’ ಅನುಭವಿಸಿದ ಕನಕ ಜೈವಿಕ ಹೆಣ್ತನದ ಸಂಕಟಗಳ ಕಡೆ ಗಮನ ಹರಿಸಲು ವಿಫಲರಾಗಿದ್ದಾರೆ. ಒಟ್ಟಾರೆ ಭಕ್ತ ಕನಕನನ್ನು ಲಿಂಗ ಅಸಮಾನತೆ/ಲಿಂಗ ಪ್ರಶ್ನೆ ಕಾಡಿಲ್ಲ. ಆದರೂ
ಸಂಸಾರ ಸಾಗರಮನುತ್ತರಿಸುವಡೆ/ಕಂಸಾರಿ ನಾಮವೊಂದೇ ಸಾಕು/ತನುವ ದಂಡಿಸಿ ತುದಿಯ ಕೋಡುಗಲ್ಲಿನ ಮೇಲೆ/ವನಿತೆಯನು ಬಿಟ್ಟು ತಪವಿರಲು ಬೇಡ ಎನ್ನುತ್ತಾರೆ.
ಆದದ್ದೆಲ್ಲ ಒಳಿತೇ ಆಯಿತು ಎಂಬ ಕೀರ್ತನೆಯಲ್ಲಿ ದಂಡಿಗೆ ಬೆತ್ತವ ಹಿಡಿದು ಆದಿಕೇಶವನ ದಾಸನಾಗಿಬಿಡು ಎಂದು ಹೇಳಿದ ಹೆಂಡತಿ ಕುರಿತು ಗೋಪಾಲ ಬುಟ್ಟಿ ಹಿಡಿವುದಕೆ/ಭೂಪಾಲನೆಂದು ಗರ್ವಿಸುತಿದ್ದೆ/ಆ ಪತ್ನೀ ಕುಲ ಸಾಸಿರವಾಗಲಿ/ಗೋಪಾಲ ಬುಟ್ಟಿ ಹಿಡಿಸಿದಳಯ್ಯಾ ಎಂದು ಹಾರೈಸುತ್ತಾರೆ.
ಮಗನಿಂದೆ ಗತಿಯುಂಟೆ ಜಗದೊಳು ಎಂಬ ಕೀರ್ತನೆಯಲ್ಲಿ ಪುತ್ರನಿಲ್ಲದೆ ಗತಿಯಿಲ್ಲ ಎಂಬ ಸಾಂಪ್ರದಾಯಿಕ ನಂಬಿಕೆಯನ್ನು ಪ್ರಶ್ನಿಸಿ ಅದರಲ್ಲಿ ಹುರುಳಿಲ್ಲವೆಂದು ಪ್ರತಿಪಾದಿಸುತ್ತಾರೆ. 

ಅಷ್ಟಕ್ಕಾಗಿಯಾದರೂ ಭಕ್ತ ಕನಕ ಆದರ್ಶ ಪುರಾತನರಲ್ಲದಿದ್ದರೂ ಸ್ಮರಣೀಯರೆನ್ನಬಹುದು. 

ಇನ್ನು ಕವಿ ಕನಕನ ಕಡೆ ಗಮನ ಹರಿಸಿದರೆ:

ಹೆಣ್ಣಿನ ಕುರಿತು ಗಂಡಿಗಿರಬಹುದಾದ ಸಾಂಪ್ರದಾಯಿಕ ಕಾಮಾಸಕ್ತಿ, ಭೋಗಾಸಕ್ತಿಯ ನಿಲುವೇ ಕನಕರದು. ಅವರು ರಸಿಕ ಮತ್ತು ಸೌಂದರ್ಯಗ್ರಾಹಿ ಕವಿ. ಹೆಣ್ಣನ್ನು ಅವಳ ಅಂಗಗಳಿಂದಲೇ - ಮಿಕ್ಕೆಲ್ಲದಕ್ಕಿಂತ ಮೊಲೆಯ ಗಾತ್ರ, ಸ್ವರೂಪಗಳಿಂದಲೇ ಅಳೆಯುತ್ತಾರೆ. ಒಂದು ಕೀರ್ತನೆಯಲ್ಲಿ ‘ಪೋಗದೋ ಚಳಿ ಪೋಗದೋ/ನಳಿನಾಕ್ಷಿಯ ತನ್ನ ತೊಡೆ ಮೇಗಡೆ ಇಟ್ಟು/ಕಳಸಕುಚದ ಮೇಲೆ ಕೈಯಿಕ್ಕಿದಲ್ಲದೆ’ ಎನ್ನುತ್ತಾರೆ. ಉಬ್ಬಿದ ಕುಚದ್ವಯದಲ್ಲಿ ತಾನು ಮೂಡಿಸಿದ ನಖಚಂದ್ರನ ಲಾಂಛನವನ್ನು ಅವರ ಗಂಡುಗಳು ಹೆಮ್ಮೆಯಿಂದ ನೋಡುತ್ತಾರೆ. ವ್ಯರ್ಥವಾಗಿ ಬ್ರಹ್ಮನ ಒಂದು ಕೋಟಿ ವರುಷ ಬದುಕಿ ಸತ್ತರೇನು? ಈ ಸುರುಳಿಗೂದಲ ಚೆಲುವೆಯ ತೋಳತೆಕ್ಕೆಯಲ್ಲಿ ಒಂದು ಗಳಿಗೆ ಬಾಳಿದರೆ ಸಾಕು, ಮುಕ್ತಿ ದೊರೆಯುವುದು ಎನ್ನುತ್ತಾ ಉಷೆಯ ಸಂಗದಲ್ಲಿರುವ ಅನಿರುದ್ಧ ಯುದ್ಧಭಯಮುಕ್ತನಾಗಿ ಸುಮ್ಮನುಳಿಯುತ್ತಾನೆ. 

ಅದರಲ್ಲೂ ಅವರ ಮೋಹನ ತರಂಗಿಣಿ ಒಂದು ಶೃಂಗಾರ ಕಾವ್ಯ. ಅದನ್ನು ಬರೆದಾಗ ಅವರಿನ್ನೂ ದಾಸರಾಗಿರಲಿಲ್ಲ. ‘ಹೆಣ್ಣು ಮಾಯೆ’ಯೆನಿಸಿರಲಿಲ್ಲ. ಅಲ್ಲಿ ಹೆಣ್ಣು ಎಂದರೆ ಸೌಂದರ್ಯಾತಿಶಯ ಮತ್ತು ಗುಣಾತಿಶಯಗಳ ಮೊತ್ತ. ಅವರ ಪುರವರ್ಣನೆ ಪುರದ ಅಂಗನೆಯರ, ವಾರಾಂಗನೆಯರ ವರ್ಣನೆ. ಸ್ತನದ್ವಯಗಳ ವಿವರಿಸಲಂತೂ ಎಷ್ಟೆಷ್ಟು ಉಪಮೆ, ಅಲಂಕಾರ, ಪದ, ನೆಪ ಹುಡುಕಿ ತಂದಿದ್ದಾರೋ?! ಕೊಡಮೊಲೆ, ಗಡಿಗೆ ಮೊಲೆ, ನುಣ್ಮೊಲೆ, ಬಿಳ್ಮೊಲೆ, ಹೊನ್ನಮೊಲೆ, ದುಂಡುಮೊಲೆ, ಬಟ್ಟ ಬಲ್ಮೊಲೆ, ತೋರಮೊಲೆ, ಹೊಂದಾವರೆ ಮೊಗ್ಗು ಮೊಲೆ.. ಹೀಗೇ. 

ಮೊಲೆಯ ರೂಪ ಗಾತ್ರ ಎಷ್ಟು ಮುಖ್ಯವೆಂದರೆ ರುಕ್ಮಿಣಿ ಕೃಷ್ಣನ ಬಳಿ, ‘ಪುತ್ರನಿಲ್ಲದೆ ಸದ್ಗತಿಯಿಲ್ಲ, ನನಗೊಬ್ಬ ಪುತ್ರನ ಕೊಡು’ ಎಂದು ಕೇಳಿದಾಗ ಆ ಮಹರಾಯ, ‘ಮಗುವಾದರೆ ಬಿರುಮೊಲೆ ಜರಿದು ಜೋಲು ಬೀಳುತ್ತಾವೆ’ ಎಂದು ನಿರಾಕರಿಸುತ್ತಾನೆ! ಅದಕ್ಕವಳು ಮಗು ಹಾಲು ಕುಡಿಯತೊಡಗಿದಾಗ ಸೊರ ಬಿಟ್ಟು ಮೊಲೆ ಇನ್ನೂ ಬಿಗಿಗೊಂಡು ದುಂಡಗೆ ಆಕರ್ಷಿಸುವುದು ಎಂದು ಅವನ ಒಪ್ಪಿಸಿ ಮಗುವನ್ನು ಪಡೆಯುತ್ತಾಳೆ! 

ಸೌರಾಷ್ಟ್ರ ವರ್ಣನೆ, ದ್ವಾರಕಾಪುರದ ವರ್ಣನೆಯಲ್ಲಿ ಬಹುಪಾಲು ಹಸ್ತಿನಿ ಚಿತ್ತಿನಿ ಶಂಖಿನಿ ಪದ್ಮಿನಿ ಜಾತಿಯ ಸ್ತ್ರೀಯರ ವರ್ಣನೆಯೇ ತುಂಬಿದೆ. ಅದು ಹೇಗಿದೆ? ಅಲ್ಲಿ ಏನೇನಿವೆ?
ಸಡಿಲಿದ ಮುಡಿ, ಬೆವರ್ಮನಿ ತುಂಬಿ ತೊಟ್ಟಿಕ್ಕುವ ಮುಖ, ಅಲುಗಾಡುವ ಮೊಲೆಗಳ ಗಂಧ ತೇಯುವ ಹೆಣ್ಣುಗಳಿರುವ ಅಂಗಡಿ..
ರಾಗರಸದೊಳನವರತ ಕಾದಲರು ಸಂಭೋಗಕ್ಕೆ ಸಮವಾಗಲೆನುತ ಇರುವ ಪೋಡಿಯಡಕೆ ಅಂಗಡಿಗಳು
ಕಾಂತಿಯುಕ್ತ ಕನ್ನೆಯರ ಚಿಗುರು ಮೊಲೆ ನೋಡಿ ನಗುನಗುತ್ತ ಎಳೆವೆರಳ ಚಿಟುಕೊತ್ತಿ ಬಳೆ ತೊಡಿಸುವ ಬಳೆಗಾರರು
ಕೊಂಕು ಕಾಣಬೇಕಾದರೆ ಕೂದಲಿನಲ್ಲಿ, ತೊಂಡೆ ಹಣ್ತುಟಿಯಲ್ಲಿ, ಕುಟಿಲ ಕಾಂತೆಯರ ಗಡಿಗೆ ಮೊಲೆಗಳಲ್ಲಿ ಕಾಣಬಹುದೇ ವಿನಾ ಬೇರೆಡೆ ಕಂಡುಬರುವುದಿಲ್ಲ
ವೇಶ್ಯೆಯರ ಬಲ್ಮೊಲೆ ಹಿಡಿವರು, ಚೆಂದುಟಿಗಳ ಕಡಿವರು, ಚಿಗುರು ತುಟಿಯವರ ನಿರಿಗೆ ಸುಲಿವರೇ ವಿನಹ ಗರತಿಯರ ಮುಟ್ಟುವುದಿಲ್ಲ
ಕಳಶಮೊಲೆ, ಬಾಹುಮೂಲದ ಕಂಕುಳು ಕಾಣುವಂತೆ ತೋಳೆತ್ತಿ ನೀರೆರೆವಾಗ ದಾಹ ಅಡಗಿದ್ದರೂ ಇನ್ನೂ ಕುಡಿವ ನೆಪದಲ್ಲಿ ಹೆಂಗಳ ಮುದ್ದುಮುಖ ನೋಡುವರು
ಕಂಕುಳು ಒಡೆಯುವಂತಿರುವ ಭಾರಿ ಮೊಲೆಗಳ ಹೆಣ್ಣಾಳುಗಳ ರುಕ್ಮಿಣಿ ಸತ್ಯಭಾಮೆಯರು ತಮಗೆ ತಕ್ಕವರೆನಿಸಿದವರನ್ನು ತಂತಮ್ಮ ಪಕ್ಷಕ್ಕೆ ಹಂಚಿಕೊಂಡರು.
ಉಟ್ಟಬಟ್ಟೆ ತೊಯ್ದು ಬೊಗಸೆಗಣ್ಣ ಅಬಲೆಯರು ಶೈತ್ಯದಿಂದ ಗಡಗಡ ನಡುಗಿದರು ಮೊಲೆಗಳು ನರ್ತಿಸುವಂತೆ
ಪ್ರಿಯಕರನ ಎದೆಯ ಧೈರ್ಯವನ್ನು ಮೊಲೆಗೊಡದಿಂದ ಮೊಗೆಯುವಂತೆ ಮೇಲಕ್ಕೆ ಹತ್ತಿ ಬಂದರು ಅಬಲೆಯರು
ದುಂಬಿಗುರುಳ ಮೂರು ಸೀಳಾಗಿಸಿ ಗೋಪಾಂಗನೆಯರು ಜಡೆ ಹೆಣೆಯೆ ಅವು ಕೊಡಮೊಲೆಯ ಕೊಪ್ಪರಿಗೆಯ ನಿಧಿ ಕಾಯುವ ಸರ್ಪಗಳಂತೆ ಬೆನ್ನೇರಿದವು.

ಆಯಿತು, ಪುರದ ಕನ್ಯೆಯರು, ಅರಮನೆಯ ನಾರಿಯರು ಹೀಗೆ. ಕನ್ನೈದಿಲೆಯ ಕರಿ ಬಣ್ಣದಬಲೆಯರು, ವನದ ಚಿಂಚಿತಿಯರು ಹೇಗೆ? 

ಮದನ ಮಂದಿರದ (ಯೋನಿಯ) ಬಾಗಿಲಿಗೆ ತೋರಣ ಕಟ್ಟಿದಂತೆ ತಳಿರ ಉಡುಗೆ ಕಂಗೊಳಿಸಲು ಹೃದಯ ಗೋಪುರದ ಜೋಡಿ ಕಳಶಗಳಂತೆ ಜೋಡಿ ಮೊಲೆಗಳಿದ್ದವು.
ಕಲ್ಲರೆಗಳ ಮೇಲೆ ಧುಮ್ಮಿಕ್ಕಿ ನೃತ್ಯವಾಡುವ ಬಿದಿರಕ್ಕಿ ಕುಟ್ಟುವ ಹೆಣ್ಣುಗಳ/ ತೋರ ನುಣ್ಮೊಲೆಯೆದೆ ದಿಗಿಲಾಂತು ಕಂಪಿಸಿತು
ಹಾಡುವರು ಅಕ್ಕಿ ಮಾಡುವರು ಬೇಟೆ ನೋಡುವರು ಬಿಲ್ಲುಬಾಣ ಹಿಡಿದು ನಿಂತರು. ಹೀಗೆ ಬಗೆಬಗೆಯ ಭಂಗಿಗಳಲಿ ನಿಂದ ಚಂದದ ಹೆಣ್ಣುಗಳು ಅನಿರುದ್ಧನ ಕಂಡದ್ದೇ ಅವರಿಗೆ ತಂತಮ್ಮ ಗಂಡಂದಿರ ಮೇಲಿನ ಪ್ರೀತಿ ಮುರಿದು ಮೂರು ತುಂಡಾಯಿತು.
ತುರುಬು ಹಾಗೂ ತೋರಮೊಲೆಯ ಭಾರದಿಂದ ಸಸಿಮಡಿ ಕಾವ ಬೇಡತಿಯರ ಹಿಡಿಯಲ್ಲಿ ಹಿಡಿಯಬಹುದಾದ ನಡು ಬಳುಕುತಿಹುದು

ಪುರವೋ, ವನವೋ, ಎಲ್ಲೂ ಹತ್ತುಹೆತ್ತು ಹೈರಾಣಾದ ಹೆಣ್ಣುಗಳು; ಅಂಗವಿಕಲ, ಸುಂದರಿಯರಲ್ಲದ, ವೃದ್ಧ ಹೆಣ್ಣುಗಳು ಕಾಣುವುದೇ ಇಲ್ಲ. ಮೊಲೆ ಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ? ಎಂದು ಹೆಣ್ಣನ್ನು ಹಳಿಯಲು, ನಿರಾಕರಿಸಲು ಅವಳ ಮೊಲೆಗಳೇ ಕಾರಣ. ತಮ್ಮ ಸಖಿಯರನಾಯ್ದುಕೊಳುವ ರಾಣಿಯರೂ ಗಮನ ಕೊಡುವುದು ತನ್ನಿನಿಯನನ್ನು ಸಖಿಯರ ಕೊಡಮೊಲೆಗಳು ಸೆಳೆಯುವಂತಿವೆಯೇ ಇಲ್ಲವೇ ಎಂಬ ಬಗ್ಗೆ. ವಾರಾಂಗನೆಯರ ಹಾಗೂ ವೇಶ್ಯೆಯರ ನಡೆನುಡಿ ದೇಹಸಿರಿಯ ಬಗೆಗೆ ವರ್ಣನೆ ನೋಡಿದರೆ ದೇವದಾಸಿಯರ ಬಗೆಗಾಗಲೀ, ಆ ಪದ್ಧತಿ ಕುರಿತಾಗಲೀ ಕವಿಗೆ ಯಾವ ತಕರಾರೂ ಇರುವಂತಿಲ್ಲ. ಯುದ್ಧ ಕುರಿತು, ವೀರ ರಸ, ಶೌರ್ಯದ ಕುರಿತು ವರ್ಣನೆಗಳಿವೆ, ಸತಿ ಹೋಗುವವರ ಕುರಿತು ಅವರ ಗಮನವಿತ್ತೊ ಇಲ್ಲವೊ ತಿಳಿಯುವುದಿಲ್ಲ. ಒಟ್ಟಾರೆ ಗಂಡಿಗೆ ಎಣೆಯಿಲ್ಲದಷ್ಟು ಕಾಮಲೀಲೆಯ ಅವಕಾಶ, ಅವಶ್ಯಕತೆ ಎರಡೂ ಇದೆ ಎಂದೇ ಕವಿಯ ಕಲ್ಪನೆ.

ಒಂದು ಸಂಭೋಗದ ಭಂಗಿಯನ್ನು ಸೂಚ್ಯವಾಗಿ ವಿವರಿಸುವ ಪದ್ಯವಿದೆ. ಅದೂ ಕದಿರೆ ರೆಮ್ಮವ್ವೆಯಂತೆ ನನ್ನ ಗಂಡ ಕೆಳಗೆ ನಾನು ಮೇಲೆ ಎಂದು ನೇರಾನೇರ ಹೇಳುವುದಿಲ್ಲ. ಬಹುಸೂಚ್ಯವಾಗಿ ಒಂದು ಭಂಗಿಯನ್ನು ವರ್ಣಿಸುತ್ತದೆ. 

ದೇಹಮೀಮಾಂಸೆ ಈ ತೆರನದಾಯಿತು. ಇನ್ನು ಸೃಷ್ಟಿಯಾದ ಮಹಿಳಾ ಪಾತ್ರಗಳ ಕಡೆಗೊಮ್ಮೆ ಕಣ್ಣು ಹಾಯಿಸುತ್ತ ನಳ ಚರಿತ್ರೆಯ ದಮಯಂತಿ ಹಾಗೂ ಮೋಹನ ತರಂಗಿಣಿಯ ಚಿತ್ರಲೇಖೆ ಪಾತ್ರಗಳನ್ನು ನೋಡಬಹುದು. 

ಚರಿತ್ರೆ ದಮಯಂತಿಯದೇ ಆಗಿದ್ದರೂ ಅದಕ್ಕೆ ನಳ ಚರಿತ್ರೆ ಎಂದು ಹೆಸರಿಡುವುದೇ ಪುರುಷ ಪರಮಾಧಿಕಾರ. ಏಕೆಂದರೆ ನಳ ಒಬ್ಬ ದುರ್ಬಲ ರಾಜ, ದುರ್ಬಲ ಗಂಡ. ಆತ ಅಶ್ವ ಹೃದಯ ಬಲ್ಲವನು. ಆದರೆ ಹೆಂಡತಿಯ ಹೃದಯ ಬಲ್ಲವನಲ್ಲ. ಅವ ಅಡಿಗೆಯ ಸೂಕ್ಷ್ಮಾತಿಸೂಕ್ಷ್ಮ ರಹಸ್ಯ ಅರಿತವನು. ಆದರೆ ಅಡಿಗೆ ಮಾಡುವ ಹೆಂಗಸರ ಒಳತೋಟಿ, ಒಳಸುಳಿಗಳ ಅರಿತವನಲ್ಲ. ನಮ್ಮ ಸಂಸ್ಕೃತಿಯಲ್ಲಿ ನಡುರಾತ್ರಿಯಲ್ಲಿ ಹೆಂಡತಿ ಬಿಟ್ಟೆದ್ದು ಹೋದವರು, ಜೂಜಾಡಿ ತನ್ನದೆಲ್ಲವನ್ನು ಕಳೆದುಕೊಂಡು ಸತಿಸುತರ ಬಿಟ್ಟು ನಡೆದವರು ಮಹಾಪುರುಷರಾಗಿದ್ದಾರೆ. ಅಂಥವವರಲ್ಲಿ ನಡುರಾತ್ರಿಯಲ್ಲಿ ಹೆಂಡತಿಯನ್ನು ಕಾಡೆನ್ನದೆ, ಗುಡ್ಡಗವಿಯೆನ್ನದೆ ಬಿಟ್ಟು ನಡೆದ ಬೇಜವಾಬ್ದಾರಿಯ ನಳನೂ ಸೇರುತ್ತಾನೆ. 

ದ್ಯೂತದಲ್ಲಿ ಸೋತು ಎಲ್ಲವನ್ನು ಕಳಕೊಂಡು ಮಕ್ಕಳ ಅಜ್ಜನ ಮನೆಯಲ್ಲಿ ಬಿಟ್ಟು ಹೆಂಡತಿಯೊಡನೆ ಕಾಡಿಗೆ ಬಂದ ನಳ ಹಕ್ಕಿ ಹಿಡಿಯಲು ಉಟ್ಟ ದಟ್ಟಿ ಬಳಸಿ ಅವು ಹಾರಿಸಿಕೊಂಡು ಹೋಗಿ ನಗ್ನನಾಗುತ್ತಾನೆ. ನಂತರ ದಮಯಂತಿಯ ಸೀರೆ ಹರಿದು ಅರ್ಧ ತಾನುಟ್ಟು ನಡುರಾತ್ರಿ ಅವಳನಲ್ಲೇ ಬಿಟ್ಟು ನಡೆಯುತ್ತಾನೆ. ಸರ್ಪದ ಬಳಿ ಕಚ್ಚಿಸಿಕೊಂಡು, ವಿಕೃತ ರೂಪದ ಬಾಹುಕನಾಗಿ ಹೆಂಡತಿ ಮಕ್ಕಳ ಚಿಂತೆಯಿಲ್ಲದೆ, ಅವಳೇನಾದಳೋ, ಮಕ್ಕಳೇನಾದರೋ ಎಂಬ ಜವಾಬ್ದಾರಿಯಿಲ್ಲದೆ ನಳ ಋತುಪರ್ಣ ರಾಜನ ಆಸ್ಥಾನದಲ್ಲಿದ್ದರೆ; ದಮಯಂತಿ ಅವನಿಗಾಗಿ ಹುಡುಹುಡುಕಿ ಬಳಲುತ್ತಾಳೆ. ಇನ್ನೇನು ಸರ್ಪದ ಬಾಯಿ ಹೊಗುವವಳನ್ನು ಬೇಡನೊಬ್ಬ ರಕ್ಷಿಸಿ ಕಾಮೋನ್ಮತ್ತನಾಗುತ್ತಾನೆ. ಆಗ ಕನಕರ ದಮಯಂತಿ ಪುರಾಣದ ದಮಯಂತಿಯಂತೆ ತನ್ನ ಪಾತಿವ್ರತ್ಯ ಶಕ್ತಿಯಿಂದ ಬೇಡನನ್ನು ಸುಟ್ಟು ಹಾಕುವುದಿಲ್ಲ. ಬದಲಾಗಿ, ‘ಪ್ರಾಣ ರಕ್ಷಿಸಿದ ನೀನು ನನ್ನ ತಂದೆಗೆ ಸಮಾನ’ ಎಂದು ಬೇಡನ ಬಳಿ ವಾದಿಸಿ ಕೊನೆಗೆ ಕೋಪ ಬಂದರೆ ಶಪಿಸುವುದಾಗಿ ಧಮಕಿ ಹಾಕಿ ಪಾರಾಗುತ್ತಾಳೆ! 

ಇಂಥ ಗಟ್ಟಿಗಿತ್ತಿ ಗಂಡಸಿನ ಮೈಮರೆವಿನಿಂದ, ಬೇಜವಾಬ್ದಾರಿತನದಿಂದ ಬರುವ ದುಸ್ಥಿತಿಯ ಲೋಪವನ್ನು ಮರೆಮಾಚಲು ವಿಧಿಯೆಂಬ ಅನೂಹ್ಯ ಶಕ್ತಿಯನ್ನು ನಂಬುತ್ತಾಳೆ. ಮತ್ತೆ ಅವನನ್ನೇ ಸೇರಲು ಹಂಬಲಿಸುತ್ತಾಳೆ. ಕರುಣಾಳು ನಳನ ತಪ್ಪಿಲ್ಲ, ಎಲ್ಲ ವಿಧಿಯಾಟ ಎಂದು ಬಗೆಯುತ್ತಾಳೆ. ಅಂತೂ ಅವನನ್ನು ಪಡೆಯಲು, ಪರೀಕ್ಷಿಸಲು ಮತ್ತೆ ತನ್ನ ಸ್ವಯಂವರ ಏರ್ಪಡಿಸಿಕೊಳ್ಳುತ್ತಾಳೆ. ಅಷ್ಟು ಕಡಿಮೆ ಕಾಲದಲ್ಲಿ ಅಶ್ವಹೃದಯ ಬಲ್ಲ ನಳ ಮಾತ್ರ ತನ್ನೊಡೆಯನನ್ನು ಸ್ವಯಂವರಕ್ಕೆ ಕರೆತರಬಲ್ಲ ಎನ್ನುವುದು ಅವಳ ಯೋಚನೆ. ನಳನಿಗೆ ದಮಯಂತಿ ಗುರುತು ಹತ್ತುತ್ತದೆ. ತನ್ನ ಮಕ್ಕಳ ಗುರುತು ಹತ್ತುತ್ತದೆ. ಆದರೆ ಮತ್ತೆ ಸ್ವಯಂವರ ಏರ್ಪಡಿಸಿಕೊಂಡಿರುವಳಲ್ಲ ಎಂಬ ಅನುಮಾನ. ಕೊನೆಗೆ ಆಕಾಶದಲ್ಲಿ ವಾಯು, ‘ದಮಯಂತಿ ಲೋಕಪಾವನೆಯಿದಕೆ ಸಂಶಯವೇಕೆ? ಪಾಲಿಸು ಸತಿಯ’ ಎಂದು ಸಾಕ್ಷಿ ಹೇಳಿದ ಮೇಲೆ ಅವಳನ್ನು ಸ್ವೀಕರಿಸುತ್ತಾನೆ. 

ಒಮ್ಮೆ ಮಾತನಾಡುವಾಗ ಬಾಹುಕ, ‘ಪತಿಯ ತಪ್ಪೆಣಿಸುವ ಸತಿ ಪತಿವ್ರತೆಯೆ?’ ಎನ್ನುತ್ತಾನೆ. ನಮ್ಮ ಸತಿ ದಮಯಂತಿಯಾದರೋ, ಪತಿಯ ತಪ್ಪೆಣಿಸುವುದಿರಲಿ, ಉಳಿದ ಪಂಚಮಹಾಪತಿವ್ರತೆಯರು ಕಷ್ಟನಷ್ಟದಲಿ ಬೆಂದು ಒಂದಲ್ಲ ಒಮ್ಮೆ ತಂತಮ್ಮ ಪತಿಗೆ ಬಿರುನುಡಿಯನಾಡಿದ್ದರೂ ತಾನೆಂದೂ ಒಂದೇ ಒಂದು ಅಂತಹ ಮಾತು ಆಡುವುದಿಲ್ಲ. 

ನಳ ಚರಿತ್ರೆ ಯಲ್ಲಿ ಹೀಗಾದರೆ ಮೋಹನ ತರಂಗಿಣಿ ಯಲ್ಲಿ ಅನಿರುದ್ಧನ ಮೋಹಿಸಿದ ಕಥಾನಾಯಕಿ ಉಷೆಯ ಸಖಿ ಚಿತ್ರಲೇಖೆ ಎಂಬ ಒಂದು ಪಾತ್ರವಿದೆ. ಬಾಣನ ಮಂತ್ರಿಯ ಮಗಳಾದ ಚಿತ್ರಲೇಖೆ ಯುವರಾಣಿಯ ದಾಸಿಯಲ್ಲ, ಸಖಿ. ಆಪ್ತೆ. ತನ್ನ ಒಡತಿ, ಸಖಿ ಕನಸಲ್ಲಿ ಯಾವುದೋ ಪುರುಷನೊಡನೆ ಕೂಡಿ ಅವನ ಬಯಸುತ್ತಿರುವಳೆಂದು ತಿಳಿದದ್ದೇ‘ಕನಸಿನ ಭತ್ತಕ್ಕೆ ಗೋಣಿಯನಾಂತರೆಂದೆನಿಸಿದೆ ನೀ ಮರುಳುವೆಣ್ಣೆ’ ಎಂದು ಬುದ್ಧಿ ಹೇಳುತ್ತಾಳೆ. ಕೊನೆಗೆ ತನ್ನ ಒಡತಿ ಅವ ಬೇಕೇಬೇಕೆಂದು ಪಟ್ಟು ಹಿಡಿದಾಗ ಹಿಂದು ಮುಂದು ಯೋಚಿಸದೆ ಅವನ ಹುಡುಕಿ ತರುವೆನೆಂದು ಮಾತು ಕೊಡುತ್ತಾಳೆ. ಮಾಯೆಯಿಂದ ಮೂಲೋಕ ಸಂಚರಿಸಿ ಎಲ್ಲ ರಾಜಕುವರರ ಶಯನಗೃಹಕ್ಕೆ ಹೋಗಿ ಅವರ ಚಿತ್ರ ಬರೆದು ತಂದು ಇವರಲ್ಲಿ ನಿನ್ನಿನಿಯನಾರೆಂದು ಉಷೆಗೆ ಕೇಳುತ್ತಾಳೆ. ಅನಿರುದ್ಧನ ಚಿತ್ರಪಟ ನೋಡಿ ಇವನೇ ಅವ ಎಂದು ಉಷೆ ಹೇಳಿದಾಗ ಅವನ ಬಳಿ ತೆರಳಿ, ವಿಷಯ ತಿಳಿಸಿ, ಒಪ್ಪಿಸಿ ಅವನ ಹೆಗಲ ಮೇಲೆ ಹೊತ್ತು ಕರೆತರುತ್ತಾಳೆ. ತಾನೇ ಪುರೋಹಿತಳಂತೆ ನಿಂತು ಅವರ ಗಾಂಧರ್ವ ವಿವಾಹ ಮಾಡಿಸಿ ಕೋಣೆಯಲ್ಲಿ ಬಿಡುತ್ತಾಳೆ. ಅವರಿಬ್ಬರ ದೈಹಿಕ ಸಮಾಗಮಕ್ಕೆ ವ್ಯವಸ್ಥೆ ಮಾಡಿ, ಹೊರಗೆ ಕಾವಲಿಗೆ ದೈತ್ಯರನಿಡುತ್ತಾಳೆ. ಅವರಿಬ್ಬರನ್ನು ಕನಕನೂ, ಚಿತ್ರಲೇಖೆಯೂ ‘ದಂಪತಿಗಳು, ಗಂಡಹೆಂಡಿರು’ ಎಂದೇ ಸಂಬೋಧಿಸುತ್ತಾರೆ. ಅದಾದ ಮೇಲೆ ವಿಷಯ ನಾರದನಿಂದ ಬಾಣ, ಕೃಷ್ಣ, ಅನಿರುದ್ಧ, ಶಿವ ಹೀಗೆ ಹಲವು ಯುದ್ಧಗಳು ನಡೆದರು ಕೊನೆಯವರೆಗೆ ಚಿತ್ರಲೇಖೆ ಅನಿರುದ್ಧ ಉಷೆಯರ ಪರ ನಿಲ್ಲುತ್ತಾಳೆ. ಅವಳಿಗೇ ಅನಿರುದ್ಧನ ಮೇಲೆ ಮೋಹವುಂಟಾದರೂ ಮೊದಲು ತಾಯಿ ಬೆನ್ನ ಮೇಲೆ ಮಗು ಹೊತ್ತು ತರುವಂತೆ ತಂದು ಗೆಳತಿಗೊಪ್ಪಿಸುತ್ತಾಳೆ. 

ವಿವಾಹದ ಚೌಕಟ್ಟನ್ನು ಉಲ್ಲಂಘಿಸಿ ಪ್ರೇಮಿಗಳನ್ನು ಒಂದುಮಾಡಿದ ಚಿತ್ರಲೇಖೆ ಸತ್ವಶೀಲ ವ್ಯಕ್ತಿತ್ವವುಳ್ಳ ಪಾತ್ರವಾಗಿ ಮಾತಿನಲ್ಲೂ ಕೃತಿಯಲ್ಲೂ ಚಿತ್ರಿಸಲ್ಪಟ್ಟಿದ್ದಾಳೆ. ಕೊಂಡಾಡಿದಡೆ ಹಿರ್ರನೆ ಹಿಗ್ಗುವರು ಭೂ/ಮಂಡಲದಧಮವೆಣ್ಣುಗಳು ಎಂಬ ವಿವೇಕ ಹೊಂದಿದ್ದಾಳೆ. ಆದರೆ ಇವಳ ಅಸ್ತಿತ್ವವೂ ಉಷೆಯ ಸಖಿಯ ಹೊರತಾಗಿ ಆಚೆ ಏನೂ ಇಲ್ಲ. 

ಸತಿಪತಿ-ಹೆಣ್ಣುಗಂಡು ಸಮಾನರೆಂದು ಕನಕ ಚಿತ್ರಿಸುವ ಸಾಧ್ಯತೆ ಇಲ್ಲ. ಆದರೆ ಹೆಣ್ಣಿಗೆ ಒಂದು ಗಂಡಿನ ಹೊರತಾದ, ಸಫಲ ಬದುಕು ಕಲ್ಪಿಸಿಕೊಳ್ಳಲು ಕನಕರಿಗೆ ಆಗಿಲ್ಲ. 

ಇಲ್ಲಿ ಹೆಣ್ಣನ್ನು, ಹೆಣ್ಣು ವ್ಯಕ್ತಿತ್ವವನ್ನು ಗ್ರಹಿಸುವ ಎರಡು ಮುಖ್ಯ ಮಾದರಿ ಕುರಿತು ಹೇಳಿ ಮುನ್ನಡೆಯಬಹುದು. ಜನಪದ ಸಂವೇದನೆಯಿರಲಿ,  ವೇದಕಾಲದ ಮಾದರಿಯಿರಲಿ, ಇವತ್ತಿನ ಮಾನವ ಹಕ್ಕುಗಳ ಕಾಲದ ಸಮಾಜವಿರಲಿ - ಹೆಣ್ಣನ್ನು ಎರಡು ಮುಖ್ಯ ಮಾದರಿಗಳಲ್ಲಿ ಗ್ರಹಿಸುತ್ತವೆ. 

ಮೊದಲನೆಯದು ಗೃಹದೇವತೆಯ ಮಾದರಿ. ಗರತಿಯ ಮಾದರಿ. ಅಥವಾ ಫೀಲ್‌ಗುಡ್ ಹೌಸ್‌ವೈಫ್ ಮಾದರಿ. ಈ ತೆರನ ಹೆಣ್ಣು ತನಗೆ ದತ್ತವಾಗಿರುವ ಪಾತ್ರವನ್ನು ಸಂಪೂರ್ಣ ಒಪ್ಪಿ ನಡೆಯುತ್ತಾಳೆ. ತನ್ನ ಪಾತ್ರವನ್ನು ತನ್ಮಯಳಾಗಿ ಒಪ್ಪಿ ನಿಭಾಯಿಸುತ್ತಾಳೆ. ಮಗಳು, ತಂಗಿ, ಅಮ್ಮ, ಸತಿ, ಸಖಿ, ಯಜಮಾನಿ ಇತ್ಯಾದಿ ಯಾವ ಪಾತ್ರವೇ ದೊರೆಯಲಿ, ಎಲ್ಲ ಕಡೆಯೂ ಪಕ್ಕಾ ಹೆಣ್ಣಿನ ಚಹರೆಗಳನ್ನು ಪ್ರದರ್ಶಿಸಿ, ಪ್ರತಿಪಾದಿಸಿ ಹಾಗೇ ಬದುಕುತ್ತಾಳೆ. 

ಇದೇ ರೀತಿ ಇನ್ನೊಂದು ತೆರನ ಸ್ತ್ರೀಯನ್ನು ಗುರುತಿಸಲಾಗುತ್ತದೆ. ಅದು ವೇದ ಕಾಲದ ಗಾರ್ಗಿ ಮಾದರಿ, ಜನಪದರ ಗಯ್ಯಾಳಿ ಮಾದರಿ, ಇವತ್ತಿನ ಸ್ತ್ರೀವಾದಿ ಮಾದರಿ. ಅದು ಪ್ರಖರ ವೈಚಾರಿಕ ಮಾದರಿ. ಅವಮಾನಗೊಳಿಸುವ ಎಲ್ಲವನ್ನು ಅದು ಉಗ್ರವಾಗಿ ಪ್ರತಿಭಟಿಸುತ್ತದೆ. ಛೀಮಾರಿ ಹಾಕುತ್ತದೆ, ವಿಷಾದಗೊಳ್ಳುತ್ತದೆ. ಅಷ್ಟೇ ಅಲ್ಲ, ತನ್ನಂತಹ ಇತರರ ಬಗೆಗೆ ಯೋಚಿಸುತ್ತದೆ. ಅದಕ್ಕೆ ತನ್ನ ಬುದ್ಧಿವಂತಿಕೆ ಬಗೆಗೆ ಅಪಾರ ಹೆಮ್ಮೆ. ತಾನು ಪ್ರಜ್ಞಾವಂತೆ ಎಂಬ ಹೆಗ್ಗಳಿಕೆ. ಅಧಿಕಾರವು ಯಾವುದನ್ನು, ಯಾವ ಗುಣ ಸ್ವಭಾವಗಳನ್ನು ಹೆಣ್ಣಿಗೆ ಶೋಭೆಯಲ್ಲ ಎಂದು ನೇತ್ಯಾತ್ಮಕವಾಗಿ ವಿವರಿಸುವುದೋ ಅದನ್ನು ಒಂದು ಅತಿಗೆ ಒಯ್ಯುವುದು ಈ ಮಾದರಿಯ ಸ್ವಭಾವ. ‘ಹೆಣ್ಣು ಚಂಚಲೆ, ಚಪಲೆ, ಅವರ ಬುದ್ಧಿ ಮೊಣಕಾಲ ಕೆಳಗೆ, ನೈತಿಕವಾಗಿರುವುದಿಲ್ಲ’ ಮುಂತಾದ ವಿವರಗಳನ್ನು ಅಲ್ಲಗಳೆದು ಅಥವಾ ಅತಿಗೊಯ್ದು ಅದನ್ನೇ ಸರಿಯೆಂದು ಸಾಧಿಸಿತೋರುವ ಮಾದರಿ ಇದು.

ಈ ಎರಡು ತೆರನ ಪಾತ್ರಗಳಲ್ಲಿ ಗಾರ್ಗಿ-ಗಯ್ಯಾಳಿಯರ ಒಂದು ಉದಾಹರಣೆಯೂ ಕನಕರ ಸಾಹಿತ್ಯದಲ್ಲಿ ಕಂಡುಬರುವುದಿಲ್ಲ. ಕನಕರು ಸೃಷ್ಟಿಸಿದ್ದೆಲ್ಲ ಗೃಹವಾದಿನಿಯರನ್ನೇ ಅಥವಾ ಗರತಿಯರನ್ನೇ. ಅದರಲ್ಲೂ ಹಿಂದುಮುಂದು ಮಾಂಸ ತುಂಬಿಕೊಂಡ ಮಾನಿನಿಯರನೇ. ಅವರು ಹೆಣ್ಣನ್ನು ಸಾಂಪ್ರದಾಯಿಕ ದೃಷ್ಟಿಕೋನದಿಂದಲೇ ಗೃಹದೇವತೆಯರನ್ನಾಗೇ ನೋಡಿದ್ದಾರೆ. 

ಆದರೆ ಈ ಪಾತ್ರಗಳಲ್ಲೂ ಪ್ರತಿರೋಧದ ಅಂಶವಿರುತ್ತದೆ. ಗೃಹವಾದಿನಿ ಯಾವುದನ್ನೂ ಒಂದು ಮಿತಿಯಾಚೆ ಹೋಗಲು ಬಿಡುವುದಿಲ್ಲ. ಪುರುಷಾಧಿಕಾರವನ್ನೂ ಸಹಾ. ಅಕಸ್ಮಾತ್ ಅವಳ ತ್ಯಾಗ ವ್ಯರ್ಥವೆನಿಸಿದರೆ; ಅದಕ್ಕೆ ಆಹುತಿಗೊಳ್ಳುತ್ತಿರುವ ಭಾವ ಹುಟ್ಟಿದರೆ ಮುಗಿಯಿತು, ಅವಳು ತನ್ನನ್ನೂ ಆಹುತಿ ಮಾಡಿಕೊಂಡು ತನ್ನ ಜೊತೆಗೆ ತನ್ನೊಡನಿರುವ ವ್ಯವಸ್ಥೆಯನ್ನೂ ಆಹುತಿಯಾಗಿಸುತ್ತಾಳೆ. ಇವಳು ಮದುವೆ ಎಂಬ ಸಂಸ್ಥೆಯನ್ನು ಆಳವಾಗಿ ನೆಚ್ಚಿದ್ದಾಳೆ. ಆದರೆ ತಾನು ನಾಶವಾಗುವ ಸ್ಥಿತಿ ಬಂದರೆ ಅದನ್ನೂ ತನ್ನ ಜೊತೆಗೇ ಒಯ್ದು ನಾಶಗೊಳಿಸುತ್ತಾಳೆ. ಜನಪ್ರಿಯ ಪಾತ್ರ, ಸಾಹಿತ್ಯ, ಸಿನಿಮಾ, ಕೃತಿಗಳಲ್ಲೂ ವಿದ್ರೋಹಿತನ ಕಂಡುಬರಬಹುದು. 

ಮಹಿಳೆಯ ಅಥವಾ ಯಾವುದೇ ಶೋಷಿತ ವರ್ಗದ ಶಕ್ತಿ ಎಂದರೆ ಪ್ರತಿಷ್ಠಿತ, ಸ್ಥಾಪಿತ ಪುರುಷ ಯಾಜಮಾನ್ಯದ ವಿರುದ್ಧ ಪ್ರತಿರೋಧವೇ ಆಗಬೇಕೆಂದಿಲ್ಲ. ಪ್ರತಿರೋಧಕ್ಕಿರುವಷ್ಟೇ ಶಕ್ತಿ ಸ್ವಾಯತ್ತತೆಯ ಬದುಕಿನಲ್ಲೂ ಇದೆ. ರೂಢಿ ವಿರೋಧಿ ಜೀವನ ಕ್ರಮ ಮತ್ತು ಉಲ್ಲಂಘನೆ - ಇವೂ ಪ್ರತಿರೋಧಗಳೇ. ಪುರುಷ ಯಾಜಮಾನ್ಯವೆಂಬ ಅಯಸ್ಕಾಂತ ಕ್ಷೇತ್ರದ ಹೊರಗೂ ಒಂದು ಶಕ್ತಿ ವಲಯ ಇದೆ. ದಲಿತ ಮತ್ತು ಸ್ತ್ರೀವಾದಿ ಚಿಂತನೆಗಳು ಈ ಪ್ರಭಾವ ವಲಯದಿಂದಾಚೆ ಇರುವ ವಲಯವನ್ನು ಗಮನಿಸುತ್ತವೆ, ಶೋಧಿಸುತ್ತವೆ. ಹಾಗೆ ರಾಮಾಯಣದ ಸೀತೆ ಒಂದು ಸ್ವಾಯತ್ತ ಬದುಕನ್ನು ಸಾಧ್ಯವಾಗಿಸಿಕೊಂಡು ರಾಮನಿಲ್ಲದೆ ಬದುಕಿದಳು. ಶೂರ್ಪನಖಿ ಮೊಲೆಮೂಗುಗಳ ಕಳಕೊಂಡರೂ ವನಪಾಲಕಿಯಾಗಿ ಸುಂದರ ಉದ್ಯಾನವನ ನಿರ್ಮಿಸಿ ಅದರಲ್ಲಿ ಸ್ವಾಯತ್ತವಾಗಿ ತಾನು ಬದುಕಿದಳು. ಆದರೆ ಕನಕರ ದಮಯಂತಿಗೆ ಅಂತಹ ಸ್ವಾಯತ್ತ ಬದುಕಿನ ಯಾವ ಯೋಚನೆಯೂ ಬರುವುದಿಲ್ಲ.

ಈ ನೆಲೆಯಿಂದ ಕನಕರ ಹೆಣ್ಣು ಪಾತ್ರಗಳನ್ನು ನೋಡಿದರೆ ಅಲ್ಲಿ ಪಾರಂಪರಿಕ ಮೌಲ್ಯಗಳನ್ನು ಗಟ್ಟಿಗೊಳಿಸುವುದರ ಆಚೆಗಿನ ಪ್ರಯತ್ನಗಳು ಕಾಣುವುದಿಲ್ಲ. ಹಾಗೆ ನೋಡಿದರೆ ಭಾರತೀಯ ಸಮಾಜದಲ್ಲಿ ತಳಸಮುದಾಯದ ಹೆಣ್ಣುಗಳು ಹೆಚ್ಚು ಸ್ವಾಯತ್ತ ಬದುಕು ಸಾಗಿಸಿದ್ದಾರೆ, ಅದನ್ನು ಸಾಧ್ಯಮಾಡಿಕೊಂಡಿದ್ದಾರೆ. ಕೊನೆಪಕ್ಷ ತಮ್ಮ ರಾಮಧಾನ್ಯ ಚರಿತೆಯಲ್ಲಿ ಧಾನ್ಯಗಳನ್ನು ಪುರುಷರಂತೆ ಬದಲಾಗಿ ಸ್ತ್ರೀಯರಂತೆ ಸೃಷ್ಟಿಸಿದ್ದರೆ; ಬಿಳ್ಮೊಲೆಯ ವರ್ಸಸ್ ಕನ್ನೈದಿಲೆಯಂಥ ಕರಿಮೊಲೆಯ ಅಬಲೆಯರನ್ನು ಭತ್ತ-ರಾಗಿಗಳಂತೆ ಚಿತ್ರಿಸಿದ್ದರೆ ಕಾವ್ಯ ಬೇರೆ ನೆಲೆಗೆ ಒಯ್ಯಬಹುದಿತ್ತೇನೋ?! ಆದರೆ ತಳಸಮುದಾಯದ ಕವಿ ಕನಕ ಜಾತಿಪ್ರಶ್ನೆಯೊಂದನ್ನು ಹೊರತುಪಡಿಸಿ ಮಿಕ್ಕಂತೆ ವೈದಿಕ ಮತ್ತು ಸನಾತನ ಮೌಲ್ಯಗಳಿಗೇ ಕಟ್ಟುಬಿದ್ದಿರುವುದು ಕಂಡುಬರುತ್ತದೆ. 

ಕನಕರು ಸಖಿಗೀತ ಬರೆದಿದ್ದಾರೆ, ಸಖಿಯ ಪರವಾಗಿ ಅವರು ಆಡಿದ್ದಾರೆ. ಆದರೆ ಸಖಿ ಒಳಮನಸು ತೆರೆಯದೆ ಮೊಲೆಜಘನಗಳ ತೋರಿಸುತ್ತ ಸುಮ್ಮನಿದ್ದಾಳೆ.

***

ಅಂತರಂಗ-ಬಹಿರಂಗವೆನ್ನದೆ ಮನುಷ್ಯ ಜೀವಿಯನ್ನು ಬಾಧೆಗೊಳಪಡಿಸುವ ಸಕಲ ವಿಷಯಗಳ ಕುರಿತೂ ಬಹುಸೂಕ್ಷ್ಮವಾಗಿ ಕನಕರು ವಿಮರ್ಶಿಸಿದರು. ವ್ಯವಸ್ಥೆಯ ತಾರತಮ್ಯ, ಜಾತಿವ್ಯವಸ್ಥೆಯ ಸಿಂಧುತ್ವವನ್ನು ನೇರವಾಗಿ, ಪರೋಕ್ಷವಾಗಿ ಇಷ್ಟದೈವದೆದುರು ದೂರಿದರು. ೧೧-೧೨ನೇ ಶತಮಾನದ ವಚನಕಾರರು ತಮ್ಮ ವಚನಗಳಲ್ಲಿ ತಾರತಮ್ಯವನ್ನು ನೇರವಾಗಿ ಹೇಳಿದ್ದರೆ; ಮೂರು ಶತಮಾನ ನಂತರ ಬಂದ ಕನಕರು ಹೇಳಲೇಬೇಕಾದ ಸತ್ಯಗಳನ್ನು ಔಚಿತ್ಯಪೂರ್ಣವಾಗಿ ಆಧ್ಯಾತ್ಮಿಕ ಪರಿಭಾಷೆಯಲ್ಲೇ ಕೀರ್ತನೆಗಳಾಗಿ ಹಾಡಿದರು.

ಉಡುಪಿಯ ಕೃಷ್ಣನ ಮೂರ್ತಿಯನ್ನೇ ತಿರುಗಿಸಿದ ಭಕ್ತಿ ಮಹಿಮೆಯ ಜನಜನಿತ ಕತೆಯನ್ನು ಇಂದು ಹೊಸ ಬೆಳಕಿನಲ್ಲಿ ನೋಡಬೇಕಾದ ರಾಜಕೀಯ ಅನಿವಾರ್ಯತೆಯಿರುವ ಹೊತ್ತಿನಲ್ಲಿ ಅವರ ಕಾಲ-ಆ ಕಾಲದ ಸಾಮಾಜಿಕ ವಾತಾವರಣ-ಜೀವನಚರಿತ್ರೆ-ಕೃತಿಗಳನ್ನೆಲ್ಲ ಮತ್ತೆ ಅವಲೋಕಿಸಿ ಪುನರ್‌ರೂಪಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಈ ಹಿನ್ನೆಲೆಯಿಂದ ಪುರಾಣ-ಕಾವ್ಯಗಳ ಮಹಿಳಾ ಪಾತ್ರಗಳನ್ನೂ ವಿಶ್ಲೇಷಿಸಿಕೊಳ್ಳಬೇಕಿದೆ.



ಕಾಮೆಂಟ್‌ಗಳಿಲ್ಲ: