ಮಂಗಳವಾರ, ಮೇ 13, 2014

ದಲಿತರ ಕೀಳು ವೃತ್ತಿಗಳ ಕುರಿತು...

-ರಘೋತ್ತಮ ಹೊ.ಬ


ಸಾರ್ವಜನಿಕ ಶೌಚಾಲಯಗಳ ಉಸ್ತುವಾರಿ ನೋಡಿಕೊಳ್ಳುವುದು, ಹಳೆ ಚಪ್ಪಲಿ ಹೊಲಿಯುವುದು, ಕಕ್ಕಸು ಗುಂಡಿಗಳ ಶುಚಿಗೊಳಿಸುವುದು ಇಂತಹ ಹೊಲಸು ಕೆಲಸಗಳ ಬಹುತೇಕ ಜವಾಬ್ದಾರಿ ದಲಿತರದ್ದು ಎಂದರೆ ಯಾರೂ ನಿರಾಕರಿಸಲಿಕ್ಕಿಲ್ಲ. ಇವಿಷ್ಟೆ ಅಲ್ಲ ಊರಲ್ಲಿ ಯಾವುದಾದರೂ ದನ, ಎಮ್ಮೆ, ಕರು, ಕುರಿ, ನಾಯಿ ಸತ್ತರೆ ಅದನ್ನು ತೆಗೆಯುವವರು ಕೂಡ ದಲಿತರೆ. ಕೆಲವೊಮ್ಮೆ ದಲಿತರು ಅಂತಹ ಸತ್ತ ಪ್ರಾಣಿಗಳ ಚರ್ಮಕ್ಕಾಗಿ, ಮಾಂಸಕ್ಕಾಗಿ ಹಾಗೆ ‘ಶವ’ ಹೊರತೆಗೆದರೆ, ಇನ್ನು ಕೆಲ ಸಂದರ್ಭಗಳಲ್ಲಿ ಅಂತಹ ‘ಶ್ರೇಷ್ಠ’ ಕೆಲಸಗಳಿಗಾಗಿ ದೊರೆಯುವ ಹಣಕ್ಕಾಗಿ ಅಂತಹ ಕೆಲಸ ಮಾಡುತ್ತಾರೆ. ಫ್ರಶ್ನೆ ಏನೆಂದರೆ ಇದರ ಅಗತ್ಯವಿದೆಯಾ? ದಲಿತರು ಈಗಲೂ ಇಂತಹ ‘ಹೊಲಸು’ ಕೆಲಸಗಳನ್ನು ಮಾಡುವ ಅಗತ್ಯವಿದೆಯಾ? ಎಂಬುದು. ಪಟ್ಟಿಮಾಡುತ್ತಾ ಹೋದರೆ ದಲಿತರು ಮಾಡುವ ಅಥವಾ ಅವರ ಕೈಯಲ್ಲಿ ಮಾಡಿಸಲ್ಪಡುವ ಇಂಥ ನೂರು ‘ಕೀಳು ವೃತ್ತಿ’ಗಳನ್ನು ಉಲ್ಲೇಖಿಸಬಹುದು. ಉದಾಹರಣೆಗೆ ಊರಲ್ಲಿ ಯಾರಾದರೂ ಸತ್ತರೆ ತಮಟೆ ಬಡಿದು ಸಾರುವುದು, ನ್ಯಾಯ ಪಂಚಾಯ್ತಿ ಇದೆ ಎಂದು ಕೂಗಿ ಹೇಳುವ ‘ಕುಳವಾಡಿಕೆ’ ಕೆಲಸ, ಹಾಗೆಯೇ ಜೀತ ಇತ್ಯಾದಿ, ಇತ್ಯಾದಿ. ಪ್ರಶ್ನೆ ಏನೆಂದರೆ ಜಾಗತೀಕರಣದ ಈ ಯುಗದಲ್ಲಿ ಇಂತಹ ‘ಹೊಲಸು’ ಕೆಲಸಗಳನ್ನು ದಲಿತರು ಈಗಲೂ ಮಾಡುವುದು ಎಷ್ಟು ಸರಿ? ಎಂಬುದು.

ಅಂದಹಾಗೆ ದಲಿತರ ಇಂತಹ ಕೀಳು ವೃತ್ತಿಗಳ ಬಗ್ಗೆ ಅಂಬೇಡ್ಕರರು ಏನು ಹೇಳುತ್ತಾರೆ? ಅಥವಾ ಅವರು ಇಂತಹದ್ದನ್ನು ಬಯಸಿದ್ದರೆ? ಎಂದು ಹುಡುಕ ಹೊರಟರೆ ಉತ್ತರ ಕಣ್ಣಿಗೆ ರಾಚುತ್ತದೆ. 1956 ಅಕ್ಟೋಬರ್ 15 ರಂದು ವಿಶ್ವದ ಅತಿ ದೊಡ್ಡ ಮತಾಂತರ ಸಮಾರಂಭದ ನಂತರ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿರುವ ಅವರು ಆ ಸಂದರ್ಭದಲ್ಲಿ ದಲಿತರ ಇಂತಹ ಕೀಳು ವೃತ್ತಿಯ ಬಗ್ಗೆ ಪ್ರಸ್ತಾಪಿಸುತ್ತಾರೆ(Babasaheb Ambedkar writings and speeches. vol,17. Part III. P,534,535. ಅಂಬೇಡ್ಕರರ ಮಾತುಗಳಲ್ಲೇ ಹೇಳುವುದಾದರೆ “ಕೆಲ ದಿನಗಳ ಹಿಂದೆ ‘ನಾವು ಮಾಂಸಾಹಾರ ತಿನ್ನುವುದು ಬೇಡ’ ಎಂದು ಚಳುವಳಿ ನಡೆಸಿದ್ದೆವು ಮತ್ತು ನಮ್ಮ ಈ ಚಳುವಳಿಯ ಸುದ್ದಿ ಕೇಳಿ ಸ್ಪøಶ್ಯರಿಗೆ ಬರಸಿಡಿಲು ಬಡಿದಂತಾಗಿತ್ತು. ವಿಚಿತ್ರ ಅಭ್ಯಾಸವೆಂದರೆ ಜೀವಂತ ಎಮ್ಮೆಯ ಹಾಲನ್ನು ಅವರು(ಸ್ಪøಶ್ಯರು) ಕುಡಿಯಬೇಕಂತೆ. ಆದರೆ ನಾವು ಅದರ ಸತ್ತ ಶವವನ್ನು ಹೆಗಲ ಮೇಲೆ ಹೊರಬೇಕಂತೆ! ನಾವು ಕೇಳುವುದೇನೆಂದರೆ ಅವರೇಕೆ ತಮ್ಮ ಸತ್ತ ತಾಯಿಯ ಶವವನ್ನೂ ಹೊರಲು ನಮಗೆ ಅವಕಾಶ ಕೊಡಬಾರದು? ಎಂಬುದು. ಹೇಗೆ ಅವರು ನಮಗೆ ಅವರ ಸತ್ತ ಎಮ್ಮೆ ಹೊರುವ ಅವಕಾಶ ಕೊಡುತ್ತಾರೋ ಹಾಗೇ ತಮ್ಮ ಸತ್ತ ತಾಯಿಯ ಶವ ಹೊರುವ ಅವಕಾಶವನ್ನೂ ಕೊಡಲಿ”.

“ಕೆಲದಿನಗಳ ಹಿಂದೆ ‘ಕೇಸರಿ’ಪತ್ರಿಕೆಗೆ (ಬಾಲಗಂಗಾಧರ ತಿಲಕ್ ಸಂಪಾದಕತ್ವದ) ಓದುಗರ ವಿಭಾಗಕ್ಕೆ ಓರ್ವ ಒಂದು ಪತ್ರ ಬರೆದ. ಏನು ಬರೆದಿದ್ದನೆಂದರೆ ‘ಒಂದು ಊರಿನಲ್ಲಿ ವರ್ಷಕ್ಕೆ 50 ದನಗಳು ಸಾಯುತ್ತವಂತೆ. ಸತ್ತ ದನಗಳ ಆ ಮಾಂಸದ ಹೊರತಾಗಿ ಆ 50 ದನಗಳ ಚರ್ಮ, ಕೊಂಬು, ಗೊರಸು, ಮೂಳೆ, ಬಾಲ ಇತ್ಯಾದಿಗಳಿಂದ ದಲಿತ ಕುಟುಂಬವೊಂದು ವರ್ಷಕ್ಕೆ ಏನಿಲ್ಲವೆಂದರೂ 500ರೂ ಸಂಪಾದಿಸುತ್ತದಂತೆ. ಹೀಗಿರುವಾಗ ದಲಿತರಿಗೆ ಸತ್ತ ದನಗಳನ್ನು ತೆಗೆಯಬೇಡಿ ಎಂದರೆ ಅಷ್ಟು ಆದಾಯದಿಂದ ಅವರನ್ನು ವಂಚಿಸಿದ ಹಾಗಲ್ಲವೆ?’ ಎಂಬುದು ‘ಕೇಸರಿ’ ಪತ್ರಿಕೆಯ ಆ ಪತ್ರದ ನಿಲುವಾಗಿತ್ತು. ಸತ್ಯ ಹೇಳಬೇಕೆಂದರೆ ಅಂತಹ ‘ನಿಲುವು’ಗಳಿಗೆ ಉತ್ತರಿಸುವ ಅಗತ್ಯವಾದರೂ ಏನಿದೆ ಎಂದು ನಾನು ಸುಮ್ಮನಾಗಿದ್ದೆ. ಆದರೆ ನನ್ನ ಜನ ನಮ್ಮ ಸಾಹೇಬರು(ಅಂಬೇಡ್ಕರ್) ಏನು ಮಾಡುತ್ತಿದ್ದಾರೆ? ಯಾಕೆ ಅವರು ‘ಕೇಸರಿ’ ಪತ್ರಿಕೆಯ ಇಂತಹ ನಿಲುವಿಗೆ ಏನನ್ನೂ ಉತ್ತರಿಸುತ್ತಿಲ್ಲ ಎನ್ನತೊಡಗಿದರು.”

“ಕೆಲ ದಿನಗಳ ನಂತರ ನಾನು ಸಂಗಮ್ನೇರ್‍ಗೆ ಸಮ್ಮೇಳನವೊಂದಕ್ಕೆ ಹೋಗಿದ್ದೆ. ಸಮ್ಮೇಳನದ ನಂತರ ಅಲ್ಲಿ ಊಟಕ್ಕೆ ವ್ಯವಸ್ಥೆ ಮಾಡಲಾಗುತ್ತಿತ್ತು. ಅದೇ ಸಮಯಕ್ಕೆ ‘ಕೇಸರಿ’ ಪತ್ರಿಕೆಯ ಓರ್ವ ವರದಿಗಾರ ನನಗೆ ಚೀಟಿಯೊಂದನ್ನು ಕಳುಹಿಸಿ ‘ನೀವು ನಿಮ್ಮ ಜನರಿಗೆ ಸತ್ತ ದನವನ್ನು ತೆಗೆಯ ಬೇಡಿ ಎಂದು ಹೇಳುತ್ತಿದ್ದೀರಿ. ಅವರೆಷ್ಟು ಬಡವರು! ಅವರ ಬಳಿ ತಿನ್ನಲು ಅನ್ನವಿಲ್ಲ, ಉಳಲು ಹೊಲವಿಲ್ಲ. ಅವರ ಹೆಂಗಸರಿಗೆ ಉಡಲು ಸೀರೆ, ರವಿಕೆ ಇವ್ಯಾವುವೂ ಇಲ್ಲ. ಪರಿಸ್ಥಿತಿ ಇಷ್ಟೊಂದು ಚಿಂತಾಜನಕವಾಗಿರಬೇಕಾದರೆ ನೀವು ಅವರಿಗೆ ಸತ್ತ ದನಗಳ ಚರ್ಮ, ಕೊಂಬು, ಮಾಂಸ ಇತ್ಯಾದಿಗಳಿಂದ ಬರುವ 500 ರೂಪಾಯಿ ಆದಾಯವನ್ನು ಬಿಟ್ಟು ಬಿಡಿ ಎಂದು ಹೇಳುತ್ತಿರುವಿರಿ. ಇದು ನಿಮ್ಮ ಜನರಿಗಾಗುವ ನಷ್ಟವಲ್ಲವೆ?’ ಎಂದು ಕೇಳಿದ. ನಾನು ಕೇಳಿದೆ ‘ಇದಕ್ಕೆ ನಾನು ನಿನಗೆ ಉತ್ತರ ಎಲ್ಲಿ ಕೊಡಲಿ? ಇಲ್ಲೇ ಕಾರಿಡಾರ್‍ನಲ್ಲಿ ಕೊಡಲೇ ಅಥವಾ ಸಭೆಯಲ್ಲಿ ಕೊಡಲೆ? ಜನರ ಎದುರು ಉತ್ತರ ಕೊಡುವುದೇ ಉತ್ತಮ. ಇದೆಷ್ಟೆಯಾ? ಅಥವಾ ಇನ್ನು ಏನಾದರೂ ಇದೆಯಾ?’ ಎಂದೆ. ಆದಕ್ಕೆ ಆತ ‘ಇದಿಷ್ಟೆ. ಅದಷ್ಟಕ್ಕೆ ಮಾತ್ರ ಉತ್ತರ ಕೊಡಿ ಸಾಕು’ ಎಂದ. ಮುಂದುವರಿದು ನಾನು ಆ ವ್ಯಕ್ತಿಯನ್ನು ‘ನಿನಗೆ ಮಕ್ಕಳೆಷ್ಟು ಮತ್ತು ನಿಮ್ಮ ಮನೆಯಲ್ಲಿ ಎಷ್ಟು ಜನರಿದ್ದೀರಿ?’ ಎಂದೆ. ಅದಕ್ಕೆ ಆತ ‘ನನಗೆ ಐವರು ಮಕ್ಕಳು. ಹಾಗೆಯೇ ನನ್ನ ಅಣ್ಣನಿಗೆ 7ಜನ ಮಕ್ಕಳು’ ಎಂದ. ಅದಕ್ಕೆ ನಾನು ಹೇಳಿದೆ ‘ಅಂದರೆ ನಿಮ್ಮ ಕುಟುಂಬ ತುಂಬಾ ದೊಡ್ಡದು. ಹಾಗಿದ್ದರೆ ಒಂದು ಕೆಲಸ ಮಾಡು. ನೀನು ಮತ್ತು ನಿನ್ನ ಸಂಬಂಧಿಕರು ಎಲ್ಲರೂ ಹಳ್ಳ್ಳಿಯ ಎಲ್ಲಾ ಸತ್ತ ದನಗಳನ್ನು ಸಾಗಿಸಿ ಮತ್ತು ಅದರಿಂದ ಬರುವ 500 ರೂಪಾಯಿಯನ್ನು ನೀವೆ ಸಂಪಾದಿಸಿ. ನನ್ನ ಪ್ರಕಾರ ಅಂಥ ಅನುಕೂಲವನ್ನು ನೀನು(ಹೇಗಿದ್ದರೂ ದೊಡ್ಡ ಕುಟುಂಬ) ಒಪ್ಪಿಕೊಳ್ಳಲೇ ಬೇಕು. ಹ್ಞಾಂ, ಇದಿಷ್ಟೆ ಅಲ್ಲ! ಬೇಕಾದರೆ ಇದರ ಜೊತೆಗೆ ವರ್ಷಕ್ಕೆ ನಿನಗೆ ನಾನು ನನ್ನ ಕೈಯಾರೆ extra 500 ರೂಪಾಯಿ ಸಿಗುವ ವ್ಯವಸ್ಥೆ ಕೂಡ ಮಾಡ್ತೀನಿ. ನನ್ನ ಜನರಿಗೆ ಅನ್ನ, ಬಟ್ಟೆ ಸಿಗದಿದ್ದರೇನಂತೆ? ಅದರ ಬಗ್ಗೆ ನಾನು ನೋಡ್ಕೊತೀನಿ. ಮತ್ತೆ ನೀನೇಕೆ ಇಂಥ ಅನುಕೂಲ ಬಿಟ್ಟುಕೊಡ್ತೀಯಾ? ನಾನು ಹೇಳಿದ್ದೇನಲ್ಲ, ಅವನ್ನೆಲ್ಲ(ಸತ್ತದನಗಳನ್ನು ತೆಗೆಯುವುದು) ನೀನೆ ಯಾಕೆ ಮಾಡಬಾರದು? (ಸರಿ ಬಿಡು,) ನನ್ನ ಜನಗಳು ಮಾಡಿದರೆ ಅದು ಅವರಿಗೆ ಅನುಕೂಲ! ಅದೇ ನೀನೆ ಮಾಡಿದ್ರೆ? ಅದು ನಿನಗೂ ಅನುಕೂಲ ತಾನೆ? ಹೋಗು ಸತ್ತ ದನಗಳ ಹೊರು”.

ಅಂಬೇಡ್ಕರರ ಈ ಮಾತಿಗೆ ಆತ ಮಾತಾಡಿದ್ದರೆ ಕೇಳಿ. ಹಾಗೆಯೇ ಆತನಾದರೂ ಏನು ಮಾಡಿರುತ್ತಾನೆ? ಸುಮ್ಮನೆ ಹೋಗಿರುತ್ತಾನಷ್ಟೆ. ಅಲ್ಲದೆ ಇನ್ನೆಂದಿಗೂ ಆತ ಇನ್ಯಾರನ್ನು ಹಾಗೇ ಕೇಳಿರಲಿಕ್ಕೆ ಖಂಡಿತ ಸಾಧ್ಯವಿಲ್ಲ. ಅಂದಹಾಗೆ ಅಂಬೇಡ್ಕರರು ಆತನಿಗೆ ನೀಡಿರುವ ಈ ವ್ಯಂಗ್ಯ ಭರಿತ ಉತ್ತರ ಸೂಚಿಸುವುದೇನನ್ನು? ದಲಿತರು ಇನ್ನೆಂದು ಇಂತಹ ಕೀಳು ವೃತ್ತಿಗಳಲ್ಲಿ ತೊಡಗಬಾರದು ಎಂದು ತಾನೆ?

ಖಂಡಿತ, ಕಕ್ಕಸ್ಸು ತೊಳೆಯುವುದರಿಂದ, ಕಿತ್ತುಹೋದ ಚಪ್ಪಲಿ ಹೊಲಿಯುವುದರಿಂದ, ಸಾರ್ವಜನಿಕ ಶೌಚಾಲಯ ತೊಳೆಯುವುದರಿಂದ ನಾಲ್ಕು ಕಾಸು ಬರಬಹುದು. ಆದರೆ ಅವು ಕೊಡುವ ಅನಾರೋಗ್ಯ? ತೆಗೆಯುವ ಮರ್ಯಾದೆ? ಯಾರಿಗೆ ಬೇಕು ಅದು? ಅಕಸ್ಮಾತ್ ಅದರಿಂದ ಲಾಭ ಬರುತ್ತದೆ ಎನ್ನುವುದಾದರೆ ಅಂಬೇಡ್ಕರರು ಹೇಳುವ ಹಾಗೆ ಸಮಾಜದ ಎಲ್ಲಾ ಜನರೂ ಅದನ್ನು ಮಾಡಲಿ ಬಿಡಿ. ಹಾಗೆಯೇ ಅಂತಹ ‘ಲಾಭ’ ಪಡೆಯಲಿ ಬಿಡಿ. ಅದು ಬಿಟ್ಟು ದಲಿತರೇ ಯಾಕೆ ಅದಕ್ಕೆ ಜೋತು ಬೀಳಬೇಕು? 

ಹಾಗೆಯೇ’ದಲಿತ’ರಾಗಿಯೇ(ತುಳಿತಕ್ಕೊಳಗಾದವರಾಗಿಯೇ) ಯಾಕೆ ಉಳಿಯಬೇಕು? ಬಲಿತರಾಗುವುದು ಬೇಡವೆ? ಅವಮಾನ ಸಂಕಷ್ಟಗಳಿಂದ ಹೊರಬರುವುದು ಬೇಡವೆ? ಸ್ವಾಭಿಮಾನದಿಂದ ತಲೆ ಎತ್ತಿ ಇತರರ ಹಾಗೆ ಬದುಕುವುದು ಬೇಡವೆ? ಈ ನಿಟ್ಟಿನಲಿ ದಲಿತರು ತಮ್ಮ ಕೀಳು ವೃತ್ತಿಗಳಿಂದ ಹೊರಬರಲಿ. ಸಮಾಜದಲ್ಲಿ ಗೌರವ ಸಂಪಾದಿಸಲಿ.

2 ಕಾಮೆಂಟ್‌ಗಳು:

KS Naveen ಹೇಳಿದರು...

ಕಣ್ಣುತೆರುಸುವಂತಹದ್ದು, ಮಿತ್ರರೆ, ಇಂತಹವನ್ನು ಹಾಕುತ್ತಾ ಹೋಗಿ. ಎಲ್ಲರ ಕಣ್ಣು ತೆರೆಸಿ. ನಾನು ತೆಗೆದುಕೊಳ್ಳುವ ತರಗತಿಗಳಲ್ಲಿ ಸಂಬಂಧವಿಲ್ಲದಿದ್ದರೂ ಅಂಬೇಡ್ಕರ್, ಕುವೆಂಪು ಅವರ ಪ್ರಸ್ತಾಪಮಾಡಿ. ಮುಂದಿನ ಐದು ವರ್ಷಗಳಲ್ಲಿ ಅವರ ಎಲ್ಲ ಬರೆಹಗಳನ್ನು ಓದುವ ಪ್ರತಿಜ್ಞೆ ಮಾಡಿ. ಆ ಐದು ವರ್ಷಗಳ ನಂತರ ನೀವು ಬೇರೆಯೇ ವ್ಯಕ್ತಿಯಾಗಿರುತ್ತೀರಿ ಎಂದು ಹೇಳುತ್ತಿರುತ್ತೇನೆ. ಅಂಬೇಡ್ಕರ್ ಅವರ ಕೃತಿಗಳನ್ನು ಸರ್ಕಾರ ಸುಲಭ ಬೆಲೆಗೆ ಕೊಡುತ್ತಿದೆ. ಅದನ್ನು ಎಲ್ಲರೂ ಕೊಂಡು ಓದಬೇಕು, ಪ್ರಚಾರ ಮಾಡಬೇಕು. ಮಾನವೀಯತೆ ಬೆಳೆಯಬೇಕು. ತಮಗೆ ಧನ್ಯವಾದಗಳು.
- ಕೆ ಎಸ್ ನವೀನ್

ಅರವಿಂದ ಹೇಳಿದರು...

ಆತ್ಮೀಯ ಅರುಣ್,

ಉತ್ತಮ ಬರಹವನ್ನು ಪೋಸ್ಟ್ ಮಾಡಿದ್ದೀರಿ. ಲೇಖಕರಿಗೆ ನನ್ನ ವಂದನೆಗಳು. ಸ್ವಾತಂತ್ರ್ಯ ಹಾಗು ಆತ್ಮಗೌರವಗಳ ಬಗ್ಗೆ ಅಂಬೇಡ್ಕರ್ ಬಹಳ ಚಿಂತಿಸಿದ್ದರು. ಇಂದು ನಮ್ಮೆಲ್ಲರಿಗೆ ಅತಿ ಅವಶ್ಯವಾಗಿ ಅಂಬೇಡ್ಕರರ ವಿಚಾರಗಳ ಅವಶ್ಯವಿದೆ. ವಸ್ತುನಿಷ್ಟವಾಗಿ ಅಂಬೇಡ್ಕರವರ ವಿಚಾರಗಳನ್ನು ಅಧ್ಯಯನ ಮಾಡುವುದರಿಂದ ನಮ್ಮ ದೃಷ್ಟಿಕೋನ ವಿಶಾಲವಾಗುವುದರಲ್ಲಿ ಅನುಮಾನವೆ ಇಲ್ಲ. ಇಂದಿನ ಕಾಲಮಾನದಲ್ಲಿ, ಇಂದಿನ ಸಮಸ್ಯೆಗಳಿಗೆ ಅಂಬೇಡ್ಕರರ ವಿಚಾರಗಳಲ್ಲಿ ಹಲವು ಹೊಳವುಗಳು ಸಾದ್ಯವಿದೆ. ಹೀಗಾಗಿ ಇಂದು ನಮಗೆ ಅಂಬೇಡ್ಕರರ ವಿಚಾರಗಳು ಅತ್ಯಂತ ಅವಶ್ಯವಾಗಿದೆ. ಈ ಬ್ಲಾಗ್, ಆ ವಿಚಾರಗಳ ಚರ್ಚೆಗೆ ವೇದಿಕೆಯಾಗಲೆಂದು ಆಶಿಸುತ್ತೇನೆ.

ಅಂಬೇಡ್ಕರರ ವಿಚಾರಗಳಿಗೆ ಸಂಬಂಧಪಟ್ಟಂತೆ ಯಾವುದಾದರೂ ಬ್ಲಾಗಿದೆಯ (ಕನ್ನಡದಲ್ಲಿ)...?

ಇಂತಿ
ಅರವಿಂದ