ಶುಕ್ರವಾರ, ಡಿಸೆಂಬರ್ 25, 2015

ಮನುಸ್ಮೃತಿ ಸುಟ್ಟದಿನ ಮತ್ತು ನಮ್ಮ ದಿಕ್ಕಾರ


-ವಿಕಾಸ ಆರ್ ಮೌರ್ಯ
ಇಂದು 25/12/2015. ಬಾಬಾಸಾಹೇಬ್ ಅಂಬೇಡ್ಕರರ ನೇತೃತ್ವದಲ್ಲಿ 1927 ರ ಇದೇ ದಿನ ಸಾರ್ವಜನಿಕವಾಗಿ ಮನುಸ್ಮೃತಿಯನ್ನು ಸುಡಲಾಗಿತ್ತು. ಮನುಸ್ಮೃತಿ ಈ ದೇಶದ ಶೂದ್ರರಿಗೆ, ಮಹಿಳೆಯರಿಗೆ ಮತ್ತು ದಲಿತರಿಗೆ ಮಾಡಿರುವ ಮಹಾಮೋಸವನ್ನು ಬಯಲಿಗೆಳೆದು ಸುಡಲಾಗಿತ್ತು. ಇಂತಹ ಮನುಸ್ಮೃತಿ ಇಂದಿಗೂ ಮನುವಾದಿಗಳಿಗೆ ಪೂಜ್ಯನೀಯವಾಗಿದೆ. ಗೋ ಹತ್ಯೆ ನಿಷೇಧವನ್ನು ಸಮರ್ಥಿಸಲು ಅವರು ಮನುಸ್ಮೃತಿಯ ಶ್ಲೋಕ ಉದಾಹರಣೆ ಹೇಳುತ್ತಾರೆ. ಹೈ ಕೋರ್ಟ್ ಮುಂದೆ ಮನುವಿನ ಪ್ರತಿಮೆ ಪ್ರತಿಷ್ಟಾಪನೆ ಮಾಡುತ್ತಾರೆ. ಇಂತಹ ಮನುವಾದಿಗಳು ನಂಬಿರುವ ಸಿದ್ದಾಂತ ತಿಳಿಯದೆ ಅಮಾಯಕ ಶೂದ್ರ, ದಲಿತ,, ಮಹಿಳೆಯರು ಅವರ ಬಲೆಗೆ ಬಿದ್ದಿದ್ದಾರೆ. ಅದನ್ನು ತಪ್ಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. 
ಮನುಸ್ಮೃತಿ ಈ ನೆಲದ ಶೂದ್ರರಿಗೆ, ಮಹಿಳೆಯರಿಗೆ, ದಲಿತರಿಗೆ ಮಾಡಿರುವ ಮಹಾಮೋಸದ ಸ್ಯಾಂಪಲ್ ಈ ಕೆಳಗಿನಂತಿದೆ. ಸಹನೆಯಿಂದ ಓದಿ ಇತರರಿಗೂ ತಿಳಿಸಿ.

ಅಧ್ಯಾಯ 1

ಕಲಿಸುವುದು, ಕಲಿಯುವುದು, ಯಜ್ಞ ಮಾಡುವುದು, ದಾನ ನೀಡುವುದು, ದಾನ ಸ್ವೀಕರಿಸುವುದು ಇವು ಆರು ಬ್ರಾಹ್ಮಣನ ಕರ್ಮಗಳು (ಶ್ಲೋಕ 88)
ಮಾಹಾಪ್ರಭುವಾದ ಬ್ರಹ್ಮನು, ಪ್ರಸ್ತುತ ಮೂರು ವರ್ಣಗಳ ಜನರ (ಬ್ರಾಹ್ಮಣ ಕ್ಷತ್ರಿಯ ವೈಶ್ಯ) ನಿಸ್ವಾರ್ಥ ಸೇವೆ ಮಾಡುವುದೇ ಶೂದ್ರನ ಕರ್ತವ್ಯವೆಂದು ಆದೇಶಿಸಿದ್ದಾನೆ. (91)
ಹುಟ್ಟುವಾಗಲೇ ಬ್ರಾಹ್ಮಣನು ಭೂಮಿಯನ್ನು ಆಳುವ ಅಧಿಕಾರ ಪಡೆದುಕೊಂಡಿರುತ್ತಾನೆ. ಮತ್ತು ಧರ್ಮ, ಸಂಪತ್ತಿನ ರಕ್ಷಣೆಗಾಗಿ ಅವನು ಸಕಲ.ಜೀವಿಗಳ ಒಡೆಯನಾಗುತ್ತಾನೆ (೯೯)
ಈ ಭೂಮಿಯಲ್ಲಿ ಇರುವುದೆಲ್ಲವೂ ಬ್ರಾಹ್ಮಣನಿಗೆ ಸೇರಿದ್ದಾಗಿದೆ. ಬ್ರಾಹ್ಮಣನು.ಶ್ರೇಷ್ಟವಾದ ಜನ್ಮವನ್ನು ಪಡೆದಿದ್ದರಿಂದ ಇವೆಲ್ಲವನ್ನು ಹೊಂದಲು ಅವನೇ ಅರ್ಹನಾಗುತ್ತಾನೆ (೧೦೦)

ಅಧ್ಯಾಯ ೨
ಬ್ರಾಹ್ಮಣನಿಗೆ ಶುಭ ಸೂಚಕವಾದ, ಕ್ಷತ್ರಿಯನಿಗೆ ಶಕ್ತಿ ಸೂಚಕವಾದ, ವೈಶ್ಯನಿಗೆ ಧನ ಸೂಚಕವಾದ ಹಾಗು ಶೂದ್ರನಿಗೆ ಅಸಹ್ಯ ಸೂಚಕವಾದ ಹೆಸರುಗಳನ್ನು ಇಡಬೇಕು. (೩೧)

ಅಧ್ಯಾಯ ೩
ಎಂತಹ ಅನಿವಾರ್ಯ ಸಂದರ್ಭದಲ್ಲೂ ಬ್ರಾಹ್ಮಣ ಹಾಗೂ ಕ್ಷತ್ರಿಯ ಗಂಡುಗಳು ಶೂದ್ರ ಜಾತಿಯ ಸ್ತ್ರೀಯನ್ನು ಪ್ರಥಮ ಹೆಂಡತಿ ಎಂದು ಪರಿಗಣಿಸಬಾರದು (೧೪)
ಬ್ರಾಹ್ಮಣರು ಶ್ರಾದ್ಧ ಭೋಜನ ಮಾಡುತ್ತಿರುವಾಗ ಅವರನ್ನು ಚಾಂಡಾಲ, ಹಂದಿ, ಕೋಳಿ, ನಾಯಿ ಮತ್ತು ಮುಟ್ಟಾದವಳು ಹಾಗೂ ನಪುಂಸಕರು ನೋಡಬಾರದು (೨೩೯)
ಹಂದಿಯು ಮೂಸುವುದರಿಂದ, ಕೋಳಿಯ ರೆಕ್ಕೆಗಳ ಗಾಳಿ ತಟ್ಟುವುದರಿಂದ, ನಾಯಿಯು ನೋಡುವುದರಿಂದ ಹಾಗೂ ಶೂದ್ರನ ಸ್ಪರ್ಶದಿಂದ ಬ್ರಾಹ್ಮಣ ಭೋಜನವು ನಾಶವಾಗಿ ಹೋಗುತ್ತದೆ (೨೪೧)

ಅಧ್ಯಾಯ ೪
ಶೂದ್ರರಾಜನ ರಾಜ್ಯದಲ್ಲಿ, ಅಧರ್ಮಿಗಳಿರುವ ಪ್ರದೇಶದಲ್ಲಿ, ವೇದ ವಿರೋಧಿಗಳಾದ ಪಾಷಂಡಿಗಳ ಪ್ರಾಂತದಲ್ಲಿ, ಅಂತ್ಯಜರ ಸನಿಹದಲ್ಲಿ ಬ್ರಾಹ್ಮಣರು ವಾಸ ಮಾಡಬಾರದು (೬೧)
ಶೂದ್ರನಿಗೆ ಬುದ್ಧಿ ಹೇಳಬಾರದು, ಯಜ್ಞದ ಹವಿಸ್ಸಿನ ಶೇಷವನ್ನು ಹಾಗೂ ಎಂಜಲನ್ನು ಕೊಡಬಾರದು. ಧರ್ಮೋಪದೇಶ ಮಾಡಬಾರದು. ವ್ರತಾಚರಣೆಯನ್ನು ಹೇಳಿ ಕೊಡಬಾರದು (೮೦)
ಶೂದ್ರನಿಗೆ ಧರ್ಮೋಪದೇಶ ಮಾಡುವವನು, ವ್ರತಾಚರಣೆಗಳನ್ನು ಹೇಳಿಕೊಡುವವನು, ಆ ಶೂದ್ರನ ಜೊತೆಗೆ ತಾನು ಕೂಡ ಅಸಂವೃತವೆಂಬ ನರಕಕ್ಕೆ ಹೋಗುವನು (೮೧)
ಊರಲ್ಲಿ ಶವ ಇರುವಾಗ, ಶೂದ್ರನು ಹತ್ತಿರದಲ್ಲಿರುವಾಗ, ಆಕ್ರಂದನದ ಧ್ವನಿ ಕೇಳುತ್ತಿರುವಾಗ ಮತ್ತು ಜನರ ಗುಂಪು ನೆರೆದಿರುವಾಗ ವೇದವನ್ನೋದಬಾರದು (೧೦೮)
ಬೇಕು ಬೇಕೆಂದೇ ಯಾರಾದರೂ ಕೋಪಗೊಂಡು ಒಬ್ಬ ಬ್ರಾಹ್ಮಣನಿಗೆ ಹೊಡೆದರು ಸಾಕು, ಅವರು ಇಪ್ಪತ್ತೊಂದು ಜಂಗಮಗಳು ಕಳೆಯುವ ತನಕ ಹೀನಯೋನಿಗಳಲ್ಲಿ ಹುಟ್ಟುತ್ತಾನೆ (೧೬೬)
ಕಮ್ಮಾರ, ಬೇಡ, ರಂಗವೇಧಿಕೆಯನ್ನು ಅಳಂಕರಿಸುವವನು, ಬಂಗಾರದ ಕೆಲಸ ಮಾಡುವ ಪತ್ತಾರ್, ಬಿದಿರಿನ ಕೆಲಸ ಮಾಡುವವನು, ಶಸ್ತ್ರಾಸ್ತ್ರ ಮಾರುವವನು ಈ ಎಲ್ಲರ ಮನೆಯ ಅನ್ನವನ್ನು ಬ್ರಾಹ್ಮಣನು ಉಣ್ಣಬಾರದು (೨೧೫)
ರಾಜಾನ್ನವು ತೇಜಸ್ಸನ್ನು, ಶೂದ್ರಾನ್ನವು ಬ್ರಹ್ಮವರ್ಚಸ್ಸನ್ನು, ಸ್ವರ್ಣಕಾರನ ಅನ್ನವು ಆಯಸ್ಸನ್ನು ಹಾಗೂ ಚರ್ಮಕಾರನ ಅನ್ನವು ಕೀರ್ತಿಯನ್ನು ನಾಶ ಮಾಡುತ್ತದೆ (೨೧೮)

ಅಧ್ಯಾಯ ೫
ಪತಿಯ ನಡತೆಯು ಚೆನ್ನಾಗಿಲ್ಲದಿದ್ದರೂ, ಅವನು ಕಾಮಾತುರನಾಗಿ ಅನ್ಯಹೆಂಗಸರಲ್ಲಿ ಮನಸ್ಸಿಟ್ಟರೂ, ದುರ್ಗುಣಿಯಾಗಿದ್ದರೂ ಸಾಧ್ವಿಯಾದ ಹೆಂಡತಿಯು ಆ ತನ್ನ ಪತಿಯನ್ನು ದೇವರೆಂದು ಭಾವಿಸಿ ಅವನ ಸೇವೆ ಮಾಡಬೇಕು (೧೫೪)

ಅಧ್ಯಾಯ ೭
ತನಗೆ ಸಾಯುವಂತಹ ಆಪತ್ತು ಬಂದರೂ ರಾಜನು ವೇದವಿದ್ವಾಂಸನಾದ ಬ್ರಾಹ್ಮಣನಿಂದ ತೆರಿಗೆಯನ್ನು ಪಡೆಯಬಾರದು. ಶ್ರೋತ್ರಿಯನಾದ ಬ್ರಾಹ್ಮಣನು ಎಂದಿಗೂ ಈ ಅರಸನಾಳುವ ರಾಜ್ಯದಲ್ಲಿ ಹಸಿವಿನಿಂದ ಬಳಲಬಾರದು (೧೩೩)
ಯಾವ ಅರಸನ ರಾಜ್ಯದಲ್ಲಿ ಬ್ರಾಹ್ಮಣನು ಹಸಿವಿನಿಂದ ಬಳಲುತ್ತಾನೋ ಆ ರಾಜ್ಯವು ಕೂಡ ಬರಗಾಲದಿಂದ ಪೀಡಿತವಾಗಿ ಹಸಿವಿನಿಂದ ಹೇಳುತ್ತದೆ. ನಾಶವಾಗುತ್ತದೆ (೧೩೪)

ಅಧ್ಯಾಯ ೮
ಯಾವ ರಾಷ್ಟ್ರವು ಹೆಚ್ಚಾಗಿ ಶೂದ್ರರಿಂದಲೇ ತುಂಬಿರುತ್ತದೋ,ನಾಸ್ತಿಕರಿಂದ ಆಕ್ರಮಿಸಲ್ಪಡುತ್ತದೋ, ಬ್ರಾಹ್ಮಣ ರಹಿತವಾಗಿರುತ್ತದೋ, ಆ ರಾಜ್ಯವು ದುರ್ಭಿಕ್ಷ ರೋಗಗಳಿಂದ ಜರ್ಜರಿತವಾಗಿ ಬೇಗನೆ ನಾಶವಾಗಿ ಬಿಡುತ್ತದೆ (೨೨)
ಬ್ರಾಹ್ಮಣನನ್ನು ಬೈದರೆ ಕ್ಣತ್ರಿಯನಿಗೆ ನೂರು ಒಣಗಲು ದಂಡವನ್ನು ಬೋಧಿಸಬೇಕು. ವೈಶ್ಯನಿಗೆ ನೂರೈವತ್ತು ಅಥವಾ ಇನ್ನೂರು ಒಣಗಲು ದಂಡ ವಿಧಿಸಬೇಕು. ಹಾಗೂ ಬ್ರಾಹ್ಮಣನನ್ನು ಬೈದ ಶೂದ್ರನಿಗೆ ವಧೆ ಶಿಕ್ಷೆ ಬೋಧಿಸಬೇಕು (೨೬೭)
ಬ್ರಾಹ್ಮಣ,ಕ್ಷತ್ರಿಯ, ವೈಶ್ಯ ಇವರ ಜಾತಿಯ ಹೆಸರುಗಳನ್ನೆತ್ತಿ ಹೀನಾಮಾನವಾಗಿ ಬೈದಂಥ ಆ ಶೂದ್ರನ ಬಾಯಲ್ಲಿ ಕಾದ ಕಬ್ಬಿಣದ ಹತ್ತಂಗುಲ ಉದ್ದದ ಸರಳನ್ನಿಡಬೇಕು (೨೭೧)

ಅಧ್ಯಾಯ ೯
ಶಯ್ಯೆ, ಆಸನ, ಅಲಂಕಾರ ಇವುಗಳ ಮೋಹ, ಕಾಮ, ಕ್ರಿಶ, ಅಪ್ರಾಮಾಣಿಕತೆ, ಪತಿ ದ್ರೋಹ ಮತ್ತು ದುರ್ನಡತೆ ಇವೆಲ್ಲಾ ಸಾಮಾನ್ಯವಾಗಿ ಸ್ತ್ರೀಯರಲ್ಲಿರುವ ಸ್ವಾಭಾವಿಕ ಗುಣಗಳು (೧೭)
ಮೃತ ಬ್ರಾಹ್ಮಣನ.ಆಸ್ತಿಯನ್ನು ರಾಜನು ವಶಪಡಿಸಬಾರದು. ಆದರೆ ಇತರ ವರ್ಣದವರು ಮೃತಪಟ್ಟರೆ ರಾಜನು ಅವರ ಆಸ್ತಿಯನ್ನು ಹೊಂದಲು ಅರ್ಹನಾಗುತ್ತಾನೆ (೧೮೯)
ಬಂಧುಗಳೇ ಇದಕ್ಕಿಂತ ಹೀನಾಯವಾದ ಕಾನೂನುಗಳನ್ನು ಮನುಶಾಸ್ತ್ರ ವಿಧಿಸುತ್ತದೆ. ಅದನ್ನು ತಿಳಿಯಲು ಒಮ್ಮೆ ಮನುಸ್ಮೃತಿ ಓದಿ. ಬ್ರಾಹ್ಮಣರನ್ನು ತಲೆಯ ಮೇಲೆ ಕುಳ್ಳಿರಿಸಿಕೊಳ್ಳುವ ಮನುಶಾಸ್ತ್ರ ಶೂದ್ರರನ್ನು ಒದೆಯುತ್ತದೆ. ಆ ಕಾರಣಕ್ಕಾಗಿಯೇ ಅಂಬೇಡ್ಕರರು ಈ ದಿನ.ಮನುಸ್ಮೃತಿಯನ್ನು ದಹಿಸಿ ಪ್ರತಿಭಟಿಸಿದರು. ಆದರೆ ಈ ನೆಲದ ಕೆಲವು ಶೂದ್ರರು, ದಲಿತರು, ಸ್ತ್ರೀಯರು ಮನುವಾದಿಗಳ ಜೊತೆ ಸೇರಿ ಗುಲಾಮರಾಗಿದ್ದಾರೆ. ಅವರಂತೆ ಮಿಕ್ಕವರಾಗುವುದು ಬೇಡ. ಮನುಸ್ಮೃತಿಯನ್ನು ಧಿಕ್ಕರಿಸೋಣ, ಮನುವಾದವನ್ನು ಧಿಕ್ಕರಿಸೋಣ. ಮನುವಾದಿಗಳನ್ನು ಧಿಕ್ಕರಿಸೋಣ.

ಕಾಮೆಂಟ್‌ಗಳಿಲ್ಲ: