ಮಂಗಳವಾರ, ಡಿಸೆಂಬರ್ 1, 2015

ಅಪ್ಪನ ಕಾಯುವ ಪುಟ್ಟ ಮಗಳು




-ಡಾ. ಅನಸೂಯ ಕಾಂಬಳೆ


               { “ಲಾಟೀನ ಬೆಳಕುಆತ್ಮಕಥೆಯ ಆಯ್ದ ಭಾಗ}
               ಸೌಜನ್ಯ: http://aniketana.org

 
  ನನ್ನ ತಂದೆ ಪರಮಾನಂದ ವಾಡಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ನಾನೂ ಅವರ ಶಾಲೆಯಲ್ಲಿಯೇ ಓದುತ್ತಿದ್ದೆ. ನಾನು ಪ್ರತಿದಿನ ತಂದೆಯೊಡನೆಯೇ ಶಾಲೆಗೆ ಹೋಗಿ ಸಂಜೆ ಅವರೊಂದಿಗೆ ಮನೆಗೆ ಮರಳಿ ಬರುತ್ತಿದ್ದೆ. ನನ್ನ ತಮ್ಮ ಹುಟ್ಟಿದ ಮೇಲೆ ನಮ್ಮ ದೊಡ್ಡಪ್ಪ ಅಂದರೆ ನನ್ನ ತಂದೆಯ ದೊಡ್ಡಪ್ಪನ ಮಗ ಹೊಲದಲ್ಲಿ ಪಾಲು ನೀಡುವ ಬಗ್ಗೆ ತಕರಾರು ತೆಗೆದಿದ್ದರಿಂದ ಕೋರ್ಟಿನಲ್ಲಿ ಕೇಸು ನಡೆದಿತ್ತು. ನಮ್ಮ ಹೊಲಗೇರಿಯ ಎಲ್ಲ ಜಗಳಗಳು ನಮ್ಮೂರ ಗೌಡರ ಮನೆಯಲ್ಲೇ ಬಗೆಹರಿಯುತ್ತಿದ್ದವು. ತುಂಬಾ ಸ್ವಾಭಿಮಾನಿಯಾದ ನನ್ನಪ್ಪ ಗೌಡರ ಬಳಿ ಹೋಗದ್ದರಿಂದ ಸಹಜವಾಗಿ ಅವರ ವೈರ ಕಟ್ಟಿಕೊಂಡಿದ್ದ.
ಹೀಗಾಗಿ ನಮ್ಮ ತೋಟದಲ್ಲಿದ್ದ ಅರ್ಧದಷ್ಟು ಜನ ಅಪ್ಪನ ಜೊತೆಗಿದ್ದರು. ಅಲ್ಲದೆ ಗೌಡರ ವಿರೋಧಿಸುವ ಪಾಲಬಾವಿ ಸಾಹುಕಾರರು ಅಪ್ಪನ ಸ್ನೇಹಿತರಾಗಿದ್ದರು. ಪಾಲಬಾವಿ ಸಾಹುಕಾರ ಇಂಚಗೇರಿ ಸಂಪ್ರದಾಯವನ್ನು ಅನುಸರಿಸುತ್ತಾ ಜಾತ್ಯಾತೀತ ಮನೋಭಾವ ಹೊಂದಿದ್ದು ಹಾಗೇ ನಡೆದುಕೊಳ್ಳುತ್ತಿದ್ದರಿಂದ ಅಪ್ಪ ಅವರನ್ನು ಬಲವಾಗಿ ನಂಬಿದ್ದ. ಇದರಿಂದಾಗಿ ಗೌಡರ ಸಿಟ್ಟು ಇಮ್ಮಡಿಯಾಗಿತ್ತು. ಅಪ್ಪನನ್ನು ಮಣಿಸಲು ದೊಡ್ಡಪ್ಪನನ್ನೇ ಬಳಸಿಕೊಳ್ಳುತ್ತಿದ್ದರು.
ನಮ್ಮ ತೋಟದಲ್ಲಿ ನಮ್ಮ ಜನರ ಸುಮಾರು ಇಪ್ಪತ್ತೈದು ಮನೆಗಳಿದ್ದವು. ಅವುಗಳಲ್ಲಿ ಮೂರು ಮಂಗಳೂರು ಹಂಚಿನ ಮನೆಗಳಿದ್ದರೆ ಉಳಿದವು ಚಿಕ್ಕಪುಟ್ಟ ಹರಕು ಗುಡಿಸಲುಗಳೇ ಆಗಿದ್ದವು. ನಮ್ಮದು ಕೂಡ ಒಂದು ಗುಡಿಸಲೇ ಆಗಿತ್ತು. ನನ್ನ ತಂದೆ ಐದನೆಯತ್ತಾ ಓದುತ್ತಿರುವ ನಮ್ಮ ದೊಡ್ಡಪ್ಪ ತನ್ನ ಸ್ವಂತ ಅಕ್ಕನನ್ನೇ ಆಸ್ತಿಗೋಸ್ಕರ ಕೊಲೆ ಮಾಡಿದ್ದರಂತೆ. ಮುಂದೆ ಅವರನ್ನು ಜೈಲಿನಿಂದ ಬಿಡಿಸಲು ವಕೀಲರ ಫೀ ಕಟ್ಟಲು ಹಣಬೇಕೆಂದು ಹೇಳಿದ್ದರಿಂದ ಎಂಟು ಎಕರೆ ಜಮೀನನ್ನು ಮಾರಿದ್ದರು. ತೋಟದಲ್ಲಿರುವ ಎರಡು ಹೊಲಗಳಲ್ಲಿ ಒಂದು ಕಡೆ ನೀನು. ಇನ್ನೊಂದು ಕಡೆ ನಾನು ಎಂದು ಅಪ್ಪ ಮತ್ತು ದೊಡ್ಡಪ್ಪ ಆಗ ಉಳಿದ ಜಮೀನನ್ನು ಹಂಚಿಕೊಂಡಿದ್ದರು. ನಮ್ಮ ಮತ್ತು ದೊಡ್ಡಪ್ಪನ ಹೊಲದ ನಡುವೆ ನಾಲ್ಕೈದು ಜನರ ಹೊಲಗಳಿದ್ದವು. ಅಪ್ಪ ಎಂಟು ಎಕರೆ ಜಮೀನು ಮಾರಲು ಒಪ್ಪಿ ಸಹಿ ಹಾಕಿದ್ದರಿಂದ ಒಂದು ಎಕರೆ ಜಮೀನನ್ನು ತನಗಿಟ್ಟುಕೊಂಡು ಒಂದು ಎಕರೆ ಮೂವತ್ತು ಗುಂಟೆ ಜಮೀನನ್ನು ಅಪ್ಪನಿಗೆ ಕೊಟ್ಟಿದ್ದ. ಮುಂದೆ ಅಪ್ಪ ನೌಕರಿ ದೊರೆತ ಮೇಲೆ ಕುಟುಂಬ ಸ್ವಲ್ಪ ಸುಧಾರಿಸಿದ ಮೇಲೆ ಬುಲ್ಡೋಜರ್ ನಿಂದ ಲೇವಲಿಂಗ ಮಾಡಿಸಿದ್ದರಿಂದ ಹೊಲದಲ್ಲಿ ಚೆನ್ನಾಗಿ ಬೆಳೆ ಬರತೊಡಗಿತು.
ನಾವು ನಾಲ್ಕು ಜನ ಹೆಣ್ಣು ಮಕ್ಕಳು ಹುಟ್ಟಿದ ಮೇಲೆ ನಮಗೊಬ್ಬ ತಮ್ಮ ಹುಟ್ಟಿದ. ನಾವು ಹೆಣ್ಣು ಮಕ್ಕಳು ಹುಟ್ಟಿದಾಗ ತನಗೇ ಹೊಲ ದಕ್ಕುತ್ತದೆಂದು ಅವಣಿಸಿದ್ದ ದೊಡ್ಡಪ್ಪ, ತಮ್ಮ ಹುಟ್ಟಿದ ಮೇಲೆ ಹೊಲ ತನಗೇ ಸೇರಬೇಕೆಂದು ತಕರಾರು ತೆಗೆದ. ನೀನು ಉಡುಕಿ ಮದುವೆ ಮಾಡಿದವಳಿಗೆ ಹುಟ್ಟಿದ್ದರಿಂದ ನಿನಗೆ ಹೊಲದಲ್ಲಿ ಪಾಲು ಕೊಡಲು ಬರುವುದಿಲ್ಲ ಎಂದು ವಾದಿಸತೊಡಗಿದ. ನಮ್ಮ ಆಯಿ( ತಂದೆಯ ತಾಯಿ) ನನ್ನ ತಂದೆಯ ತಂದೆಗೆ ಎರಡನೆಯ ಹೆಂಡತಿಯಾಗಿದ್ದಳು. ಅವರ ಮೊದಲ ಹೆಂಡತಿ ನಮ್ಮ ಅಜ್ಜನನ್ನು ಏಕೆ ಬಿಟ್ಟು ಹೋಗಿದ್ದಳೆಂದು, ಉಡುಕಿ ಮದುವೆ ಎಂದರೆ ಏನು ಎಂಬುದು ಚಿಕ್ಕವಳಾದ ನನಗೆ ಆಗ ಗೊತ್ತಿರಲಿಲ್ಲ.
ನಮ್ಮ ತೋಟದ ನಮ್ಮ ಓಣಿಯ ಎಲ್ಲ ಹಿರಿಯರು ಸೇರಿ ಉಡುಕಿ ಆದವರ ಮಗನಿಗೆ ಪಾಲಿಲ್ಲ ಅನ್ನುವುದು ತಪ್ಪು, ಹಾಗೆನ್ನಲು ಬರುವುದಿಲ್ಲ ಅಂತ ದೊಡ್ಡಪ್ಪನಿಗೆ ಛೀಮಾರಿ ಹಾಕಿದ್ದರಿಂದ ತನ್ನ ರಾಗವನ್ನು ಬದಲಿಸಿದ. ಹೊಲದಲ್ಲಿ ಅವನ ಹೆಸರಿಲ್ಲ, ಮಗ್ಗುಲಲ್ಲಿರುವ ಅಣ್ತಮ್ಮರ ಹೊಲದಲ್ಲಿ ಅಕ್ಕನ ಹೆಸರಿದೆ. ಅಲ್ಲೇ ಹೋಗಿ ತಗೋ ಎಂದು ತಕರಾರು ತೆಗೆದು ಮತ್ತೆ ಜಗಳವನ್ನು ಮುಂದುವರಿಸಿದ. ಆಗ ಅಪ್ಪ ಅನಿರ್ವಾಯವಾಗಿ ಹೊಲದ ಹಕ್ಕುಪತ್ರಗಳಲ್ಲಿ ಹೆಸರುಗಳು ಅದಲು ಬದಲಾಗಿ ತಪ್ಪಾಗಿದೆ ಎಂದು ವಾದಿಸಿ ಕೋರ್ಟಿಗೆ ಹೋಗಿ ಕೇಸು ದಾಖಲಿಸಿದರು. ದೊಡ್ಡಪ್ಪ ಜಗಳ ಮುಂದುವರಿಸಿದಾಗ ಪೋಲೀಸು ಕಂಪ್ಲೇಟು ಕೊಟ್ಟಿದ್ದರು. ಆಗ ದೊಡ್ಡಪ್ಪ ಗೌಡರ ಆಶ್ರಯ ಪಡೆದ. ಅಪ್ಪ ಗೌಡರ ಬಳಿ ಹೋಗದೆ ಕೋರ್ಟು ಕಛೇರಿ ಅಂತ ಹೋಗಿದ್ದರಿಂದ ಗೌಡರು ಅಪ್ಪನ ಮೇಲೆ ಹಲ್ಲು ಕಡಿದರು.
ನಮ್ಮ ಹೊಲದಲ್ಲಿ ನಮ್ಮದೊಂದು ಚಿಕ್ಕ ಗುಡಿಸಲಿತ್ತು ನಾವು ಅದರಲ್ಲೇ ವಾಸಿಸುತ್ತಿದ್ದೆವು. ಗುಡಿಸಲೊಳಗೆ ಅವ್ವ ಕಲ್ಲು, ಇಟ್ಟಂಗಿ ಜೋಡಿಸಿ ಮಧ್ಯ ಗೋಡೆಯಂತೆ ಅರ್ಧ ಕಟ್ಟಿದ್ದರಿಂದ ಒಂದು ಅಡಿಗೆ ಕೋಣೆ ಮತ್ತು ಒಂದು ಹೊರ ಕೋಣೆಯಂತೆ ಕಾಣುತ್ತಿತ್ತು. ಆಗ ಶಾಲೆಯಲ್ಲಿ ಉಪ್ಪಿಟ್ಟು ಕೊಡುತ್ತಿದ್ದರಿಂದ ನಮ್ಮ ಮನೆಯಲ್ಲಿ ಖಾಲಿ ಎಣ್ಣಿ ಡಬ್ಬಗಳಿದ್ದವು. ಮಕ್ಕಳು ದೊಡ್ಡವರಾಗುತ್ತಿದ್ದಾರೆಂದು ಮಳೆ ನೀರು ಒಳಗೆ ಬರಬಾರದೆಮದು ಎಣ್ಣಿ ಡಬ್ಬಿಗಳನ್ನು ಕತ್ತರಿಸಿ ಅವ್ವ ಬಾಗಿಲು ಮಾಡಿಸಿದ್ದಳು. ಮಳೆಗಾಲ ಬಂತೆಂದರೆ ಗುಡಿಸಲು ಸೋರಬಾರದೆಂದು ಪ್ರತಿ ವರ್ಷ ಕಬ್ಬಿನ ರವುದಿ ಹೊದಿಸಿ ಬೆಚ್ಚಗೆ ಸೋರದಂತೆ ಮಾಡುತ್ತಿದ್ದಳು.
ಮುಂದೆ ಹೊಲದ ಕೇಸು ಕೋರ್ಟಿನಲ್ಲಿ ಇದ್ದುದರಿಂದ ನಾವು ಬಹಳ ವರ್ಷದಿಂದ ಅಲ್ಲೇ ವಾಸವಾಗಿದ್ದು, ಹೊಲದ ಬೇಸಾಯ ನಾವೇ ಮಾಡುತ್ತಿದ್ದೆವೆಂದು. ಕಬ್ಜಾದಲ್ಲಿ ಹೆಸರು ತಪ್ಪಾಗಿದೆಯೆಂದು ಕೋರ್ಟಿನಲ್ಲಿ ಸಾಬೀತು ಮಾಡಲು ಅಪ್ಪ ಸಾಕ್ಷಿಯಾಗಿ ಇರಲಿ ಎಂದು ಗುಡಿಸಲನ್ನು ರಿಪೇರಿ ಮಾಡಿಸದೆ ಹಾಗೇ ಬಿಟ್ಟ. ಹೀಗಾಗಿ ಗುಡಿಸಲು ಶಿಥಿಲಾವಸ್ಥೆ ತಲುಪಿತ್ತು. ಮಳೆ ಬಂದರೆ ಸೋರುತ್ತಿತ್ತು. ಸೋರುವ ಜಾಗದಲ್ಲೆಲ್ಲ ಪಾತ್ರೆಗಳನ್ನಿಟ್ಟು ಸೋರದ ಕಡೆ ನಮ್ಮನ್ನೆಲ್ಲ ಮಲಗಿಸುತ್ತಿದ್ದರು. ಬಾಗಿಲ ಹತ್ತಿರ ತಗ್ಗು ಮಾಡಿ ನೀರು ಮನೆಯೊಳಗೆ ನುಗ್ಗದಂತೆ ಅವ್ವ ನೋಡಿಕೊಳ್ಳುತ್ತಿದ್ದಳು. ಸೋರುವ ಕಡೆಗಳಲೆಲ್ಲಾ ಪಾತ್ರೆಗಳಲ್ಲಿ ನೀರು ತುಂಬಿದ್ದರೆ ಅವನ್ನು ಬಾಗಿಲು ತೆಗೆದು ಹೊರಗೆ ಸುರುವುತ್ತಿದ್ದಳು. ಒಳ ನುಗ್ಗುವ ನೀರನ್ನು ಬಳಿದು ಹೊರ ಚೆಲ್ಲುತ್ತಿದ್ದಳು.
ಹೀಗಾಗಿ ಮಳೆಗಾಲವು ನಮಗೆ ಭಯಂಕರವಾಗಿರುತ್ತಿತ್ತು. ಇದು ನಮ್ಮ ಪರಿಸ್ಥಿತಿ ಮಾತ್ರವಾಗಿರದೆ ನಮ್ಮ ಜನರ ಗುಡಿಸಲುಗಳ ಪರಿಸ್ಥಿತಿ ಇನ್ನೂ ಶೋಚನೀಯವಾಗಿತ್ತು . ಮತ್ತೆ ಮುಂದಿನ ವರ್ಷದ ಮಳೆಗಾಲಕ್ಕೆ ನಮ್ಮ ಗುಡಿಸಲು ಕುಸಿಯತೊಡಗಿತು. ಜೋಳದ ದಂಟಿನಿಂದ ಕಟ್ಟಿ ಹಾಳು ಮಣ್ಣಿನಿಂದ ಬಳಿದ ಗೋಡೆಗಳು ಹೊರಳಿ ಕಳಚಿಕೊಂಡು ಬೀಳುವಂತಾದಾಗ ಅವು ಬೀಳದಂತೆ-ಆಧಾರಕ್ಕಾಗಿ 

ಕಟಕಿ ಹಚ್ಚಿ ಆಧಾರ ಕೊಟ್ಟು ನಿಲ್ಲಿಸಿದ್ದರಿಂದ ನಾವು ಎಡವಿ ಬೀಳದಂತೆ ಮನೆಯಲ್ಲಿ ಎಚ್ಚರಿಕೆಯಿಂದ ಓಡಾಡಬೇಕಿತ್ತು. ಮೇಲೆ ರವುದಿ ಕೊಳೆತದ್ದರಿಂದ ಮತ್ತೆ ರವುದಿ ಹೊದಿಸಿ ಅಪ್ಪ ಗುಡಿಸಲನ್ನು ಹಾಗೇ ಉಳಿಸಿದ.
ಬರಬರುತ್ತ ದೊಡ್ಡಪ್ಪನ ಕಾಟ ಮತ್ತೂ ಹೆಚ್ಚತೊಡಗಿತು. ಬೆಳೆ ಬೆಳೆಯುವ ಸಂಬಂಧ ಹೊಲಕ್ಕೆ ಗಳೆ ಹೊಡೆಯುವಾಗ ಬಂದು ತಡೆದ. ಗೌಡರ ಮನೆಗೆ ಹೋಗಿ ಹೇಳಿದ. ಇದರಿಂದ ಗೌಡರು ಕೆರಳಿದರು. ನಮ್ಮ ಊರಲ್ಲಾಗಲೀ ತೋಟದಲ್ಲಾಗಲಿ ನಮ್ಮ ಕೇರಿಯ ಹೆಣ್ಣು ಮಕ್ಕಳಾರೂ ಶಾಲೆಗೆ ಹೋಗುತ್ತಿರಲಿಲ್ಲವಾದ್ದರಿಂದ ನಾನು ಅಪ್ಪನ ಜೊತೆಗೇ ಶಾಲೆಗೆ ಹೋಗುತ್ತಿದ್ದೆ. ಶಾಲೆ ಬಿಟ್ಟ ಮೇಲೆ ಅಪ್ಪ ಪಾಲಬಾವಿ ಅವರ ಕಿರಾಣಿ ಅಂಗಡಿಗೆ ಹೋಗಿ ಪೇಪರು ತಗೊಂಡು ಓದುತ್ತಿದ್ದರು. ದಿನದ ಸುದ್ದಿಗಳನ್ನು ಸ್ನೇಹಿತರ ಜೊತೆಗೆ ಚರ್ಚಿಸುತ್ತಿದ್ದರು. ನಾನು ಅವರೊಂದಿಗೆ ಸುಮ್ಮನೆ ಕುಳಿತು ಕೇಳಿಸಿಕೊಳ್ಳುತ್ತಿದ್ದೆ. ಅಪ್ಪನಿಗೆ ತುಂಬಾ ಜನ ಸ್ನೇಹಿತರಿದ್ದರು. ಅವರಿಗೆ ಅಪಾರವಾದ ವಿದ್ಯಾರ್ಥಿ ಬಳಗವೂ ಇತ್ತು. ಇದರಿಂದಾಗಿ ಅಪ್ಪನಿಗೆ ವಿಶೇಷ ಗೌರವ ಸಿಗುತ್ತಿತ್ತು.
ಇದರಿಂದಾಗಿ ಅಪ್ಪನ ಒಡನಾಟದಲ್ಲಿ ನಾನು ಬೆಳೆಯುತ್ತಿದ್ದರಿಂದ ನನಗೆ ಅನೇಕ ವಿಷಯಗಳು, ಸಂಗತಿಗಳು ತಿಳಿಯುತ್ತಿದ್ದವು. ಪೇಪರ್ ಹೆಡ್ ಲೈನ್ಗಳು ಆಕರ್ಷಿಸುತ್ತಿದ್ದವು. ರೇಡಿಯೋದಲ್ಲಿ ವಾರ್ತೆ, ಪ್ರದೇಶ ಸಮಾಚಾರ ಕೇಳುವ ರೂಢಿಯಾಯಿತು.
ನಮ್ಮ ತೋಟದಿಂದ ಅಪ್ಪ ನೌಕರಿ ಮಾಡುತ್ತಿದ್ದ ಊರು ಪರಮಾನಂದವಾಡಿ ಸುಮಾರು ಎರಡ್ಮೂರು ಕಿಲೋ ಮೀಟರ್ ದೂರವಿತ್ತು. ನಾನು ಅಪ್ಪನ ಜೊತೆ ನಡದೇ ಹೋಗುತ್ತಿದ್ದೆ ಅಪ್ಪ ಬಹಳ ಅವಸರವಸರವಾಗಿ ನಡೆಯುತ್ತಿದ್ದರಿಂದ ಒಮ್ಮೊಮ್ಮೆ ಹಿಂದೆ ಬೀಳುತ್ತಿದ್ದ ನಾನು ಓಡಬೇಕಾಗಿತ್ತು. ಒಂದು ದಿನ ಹೀಗೆ ಶಾಲೆಗೆ ಹೋಗುತ್ತಿದ್ದಾಗ ನಮ್ಮೂರ ಗೌಡರ ಕಾರು ನಮ್ಮ ಬಳಿ ಬಂದು ನಿಂತಿತು. ಅದರಿಂದ ಮಿರಮಿರ ಮಿರುಗುವ ಬಿಳಿ ಬಟ್ಟೆ ಹಾಕಿದ್ದ ಗೌಡರು ಇಳಿದು ಬಂದು ಅಪ್ಪನ ಮುಂದೆ ನಿಂತರು. ನಮ್ಮ ಮನೆಗೆ ಯಾಕ ಬರೋದಿಲ್ಲೊ ಮಾಸ್ತರ?… ನಾಲ್ಕ ಅಕ್ಷರ ಕಲ್ತ ನೌಕರಿ ಹಿಡದೈದಿ ಅಂತ ಎಷ್ಟ ಸೊಕ್ಕೆ ಬಂದೈತಿ….. ಸಾವ್ಕಾರನ ಮನಿಗಿ ಹೋಗ್ತಿ. ನಿನ್ನ ಗುಂಡ ಹಾಕಿ ಕೊಂದ ಬಿಡ್ತೀನಿ…. ಅಂತ ಪಿಸ್ತೂಲನ್ನ ಎದೆಗೆ ಹಿಡಿದರುಕೊಂದ ಬಿಡ್ರಿ ಗೌಡ್ರ….. ನಾ ನಿಮ್ಮ ಮನಿಗೆ ಯಾಕ ಬರಬೇಕು …. ನಿಮ್ಮಲ್ಲಿ ನ್ಯಾಯ ಸಿಗ್ತತೇನುಎಂದು ಅಪ್ಪ ಅಂಜದೆ ಗರ್ಜಿಸಿದರು. “ ಇವತ್ತು ನಿನ್ನು ಸುಮ್ನಬಿಡ್ತುನು …. ಮುಂದೆ ನೋಡ್ತೇನುಅಂತ ಸಿಟ್ಟಿನಿಂದ ಬುಸುಗುಟ್ಟುತ್ತಾ ಕಾರು ಹತ್ತಿ ಹೋದರು.
ನನಗೆ ಏನಾಗುತ್ತಿದೆ ಎಂದು ತಿಳಿಯದ ಪಕ್ಕದಲ್ಲೇ ನಿಂತು ಮಿಕಿಮಿಕಿ ನೋಡುತ್ತಿದ್ದೆ. ಆಗ ನನಗೆ ಸಿನೇಮಾ ಬಗ್ಗೆ ಗೊತ್ತಿರಲಿಲ್ಲ. ಸಿನೇಮಾ ನೋಡಿರಲೂ ಇಲ್ಲ. ಹೀಗಾಗಿ ಪಿಸ್ತೂಲು ಹೇಗಿರುತ್ತದೆಂದು ಗೊತ್ತಿರಲಿಲ್ಲ. ಸಂಜೆ ತಿರುಗಿ ಮನೆಗೆ ಬಂದಾಗ ಅಪ್ಪ ನಮ್ಮ ಕಡೆಗಿದ್ದ ಅಣ್ತಮ್ಮರಿಗೆಲ್ಲ ಸುದ್ದಿ ಹೇಳಿದಾಗ ಅದು ಪಿಸ್ತೂಲೆಂದು. ಅದರಲ್ಲಿ ಗುಂಡುಗಳಿದ್ದು ಜೀವ ತೆಗೆದು ಕೊಲ್ಲುತ್ತದೆಂದು ತಿಳಿದು ಭಯವಾಯಿತು. ಸುದ್ದಿ ಊರ ತುಂಬ ಹರಿದಾಡಿತು
ಆಗ ಅವ್ವ ನನ್ನ ಕರೆದು ರಾತ್ರಿ ಹತ್ತಿರ ಕೂಡಿಸಿಕೊಂಡು ಊಟ ಮಾಡಿಸಿ. ನಿ ಅವನ ಜೋಡಿ ಹೋಗಾಗ ಹಿಂತ-ಮುಂದ ನೋಡಕೋತ ಹೋಗು…. ಅವ ಮುಂದ ಮಾರಿ ಮಾಡಿ ಹಂಗ ದಗಾದಗಾ ಹೋಗ್ತಿರ್ತಾನುಕಂಟ್ಯಾಗ- ಗಿಂಟ್ಯಾಗ ಯಾರರೇ ಕುಂತಿರ್ತಾರು.. ಯಾರರೆ ಅವನ ಕೊಲ್ಲಾಕ ಬಂದ್ರ ನೀ ಜೋರಾಗಿ ಚೀರಿ ಮಂದಿನ ಕರಿ…… ಮಂದಿ ಕೂಡಿದರ ಅವರು ಅಂಜಿ ಓಡಿ ಹೋಗ್ತಾರು….. ಅಂತ ನನ್ನ ಮ್ಯಾಗ ಅಪ್ಪನ ಕಾಯೋ ಭಾರ ಹಾಕಿದಳು.. ಅವ್ವ ಹೇಳಿದಂಗಾ ಮಾಡಕೋತ ನಾ ನಡಿತ್ತದ್ದೆ. ಹಿಂಗಾಗಿ ಬಾಳ ಹಿಂದೆ ಉಳಿತ್ತಿದ್ದೆ. ಮತ್ತ ಮುಂದ ಹೋಗೋ ಅಪ್ಪನ ನೋಡಿ ಹಿಂದ ಹಿಂದ ಓಡುತ್ತಿದ್ದೆಅಪ್ಪನ ಮುಟ್ಟುವ ಧಾವಂತಕ್ಕೆ ಎದ್ದು ಬಿದ್ದು ಓಡುವಾಗ ಕಚ್ಚಾ ರಸ್ತೆಯಲ್ಲಿ ನನ್ನ ಬರಿಗಾಲಿಗೆ ಮುಳ್ಳುಗಳು ಚುಚ್ಚಿ ಕಾಲು ನೋವಾಗುತ್ತಿತ್ತು.
ರಾತ್ರಿ ಚಿಮಣಿ ಬೆಳಕಲ್ಲಿ ಸೂಜಿಯಿಂದ ಹಡ್ಡಿ ಮುಳ್ಳು ತೆಗೆದುಕೊಳ್ಳುವಾಗ ಬಗ್ಗಿದ್ದರಿಂದ ತುಂಬಾ ದಟ್ಟವಾದ ಕಪ್ಪನೆಯ, ಉದ್ದನೆಯ ನನ್ನ ಸುಂದರವಾದ ತಲೆಗೂದಲು( ನೆತ್ತಿಯಲ್ಲಿ ಮೇಲೆ ಎದ್ದ ಕೂದಲುಗಳು) ಚಿಮಣಿ ದೀಪಕ್ಕೆ ಹತ್ತಿ ಪುರುಪುರು ಸುಡುತ್ತಿದ್ದವು. ಮೂಗಿಗೆ ಸುಡುವ ವಾಸನೆ ಬಂದ ಕೂಡಲೆ ಅವ್ವನಿಗೆ ಗೊತ್ತಾಗದಿರಲಿ ಎಂದು ಮುಳ್ಳು ತೆಗೆಯುವುದನ್ನು ಬಿಟ್ಟು ಬಿಡುತ್ತಿದ್ದೆ. ಮರುದಿನ ನಡೆಯಲು ತ್ರಾಸ ಆಗುತ್ತಿತ್ತು. ನಾನು ಇನ್ನೂ ಹೆಗಲ ಮೇಲೆ ಕೂಡ್ರಿಸಿಕೊಂಡು ದವಾಖಾನೆಗೆ ಕರೆದೊಯ್ದದ್ದು ನೆನಪಾಗಿ ಅಳು ಉಕ್ಕಿ ಬರುತ್ತಿದ್ದು. ಆದರೆ ಈಗ ಅಪ್ಪನಿಗೆ ನೋವಾಗುತ್ತದೆಂದು ಹೇಳುತ್ತಿರಲಿಲ್ಲ. ಅಂದು ಹೋದ ಗೌಡರ ಕಾರು ಮುಂದೆ ಎಂದೂ ಪಿಸ್ತೂಲು ಹಿಡಿದು ಬೆದರಿಸಲು ಬರಲಿಲ್ಲ. ಇನ್ನೂ ದಾರಿಯೊಳ ಹೊಂಟರೆ ಹೊನೆವಾಡೆರ ತ್ವಾಟದ ಮನಿ ಬಂದ್ರ ದೃಶ್ಯ ನೆನಪಾಗಿ ಅಪ್ಪ ನಂಗ ಧೈರ್ಯಾ ಇರಬೇಕು ಅಂತ ಅನಸ್ತೈತಿ ಮತ್ತು ಅಪ್ಪನ ಬಗ್ಗೆ ಬಾಳ ಹೆಮ್ಮೆ ಉಕ್ಕಿ ಬರತೈತಿ.

ಕಾಮೆಂಟ್‌ಗಳಿಲ್ಲ: