ಶನಿವಾರ, ಜುಲೈ 20, 2013

ಆಂಜನೇಯನ ಬಾಲದಂತೆ ಆತನ ಕತೆಗೂ ಕೊನೆ ಇಲ್ಲ


 ಸೌಜನ್ಯ:ವಿಜಯ ಕರ್ನಾಟಕ
 
ಬಹುರೂಪ: ಆಂಜನೇಯನ ಬಾಲದಂತೆ ಆತನ ಕತೆಗೂ ಕೊನೆ ಇಲ್ಲ












ಏಷ್ಯಾದ ಜನಪ್ರಿಯ ದೈವಗಳಲ್ಲಿ ಹನುಮಂತನೂ ಒಬ್ಬ. ರಾಮಾಯಣದ ಕಿಷ್ಕಿಂದಾಖಾಂಡದಲ್ಲಿ ಮೊದಲು ಕಾಣಸಿಗುವ ಆತ, ಮುಂದೆ ರಾಮನ ಬಂಟನಾಗಿ ಉದ್ದಕ್ಕೂ ಕಾಣಿಸಿಕೊಳ್ಳುತ್ತಾನೆ. ಸೀತೆಯ ಪ್ರೀತಿಗೆ ಪಾತ್ರನಾದ ಆತ, ಆಕೆಗೆ ಮೊದಲು ಕಾಣಸಿಕ್ಕಿದ್ದು ಅಶೋಕವನದಲ್ಲಿ. ಮಹಾಭಾರತ, ಹಲವು ಪುರಾಣಗಳು ಮಾತ್ರವಲ್ಲ ಕೆಲವು ಜೈನ ಪಠ್ಯಗಳ ಪ್ರಕಾರ ಹನುಮಂತನ ತಂದೆ ವಾಯು. ಮಹಾಭಾಗವತ ಪುರಾಣ ಮತ್ತು ಸ್ಕಂದ ಪುರಾಣಗಳ ಪ್ರಕಾರ ಆತ ಶಿವಪುತ್ರ. 

 16ನೇ ಶತಮಾನದಲ್ಲಿದ್ದ ಮರಾಠಿ ಬರಹಗಾರ ಏಕನಾಥನ ಪ್ರಕಾರ, ದಶರಥ ಮಾಡಿದ ಪುತ್ರಕಾಮೇಷ್ಠಿ ಯಜ್ಞದಲ್ಲಿ ದೊರಕಿದ ಪಾಯಸದ ಪರಿಮಳವು ಶಿವನ ಪೂಜೆ ಮಾಡುತ್ತಿದ್ದ ಅಂಜನಾದೇವಿಯ ಕೈ ತಲುಪಿ ಅದರಿಂದ ಹನುಮಂತ ಜನಿಸಿದ. 17ನೇ ಶತಮಾನದ ಒರಿಯಾ ಕವಿ ದಿವಾಕಷ್ಣ ದಾಸನ ಪ್ರಕಾರ, ತ್ರಿಮೂರ್ತಿಗಳು ಒಟ್ಟು ಸೇರಿ ಹನುಮಂತನಾಗಿ ಜನಿಸಿದರು. ಕರ್ನಾಟಕದ ಹಂಪಿಯಲ್ಲಿರುವ ಅಂಜನಾದ್ರಿ ಪರ್ವತದಲ್ಲಿ, ಹರಿಯಾಣದ ಕೈತಾಲ ಎಂಬಲ್ಲಿ, ಹಾಗೆಯೇ ಅಂಜಾನ್, ಅಂಜನೇರಿ, ಲಕ್ಷ್ಕಾ, ಗೋಕರ್ಣ ಮೊದಲಾದೆಡೆಗಳಲ್ಲಿ ಆತ ಜನಿಸಿದನೆಂದು ಆಯಾ ಭಾಗದ ಜನರು ನಂಬಿದ್ದಾರೆ.

ಹನುಮಂತನಿಗೆ ಆ ಹೆಸರು ಹೇಗೆ ಬಂತೆಂಬುದರ ಬಗೆಗೆ ಬಹಳ ಚರ್ಚೆಗಳು ನಡೆದಿವೆ. ಜನಪ್ರಿಯವಾದ ನಂಬಿಕೆಯ ಪ್ರಕಾರ, ಬಾಲಕ ಆಂಜನೇಯನು ಎಳೆಯ ಸೂರ್ಯನನ್ನು ಹಣ್ಣೆಂದು ಗ್ರಹಿಸಿ ತಿನ್ನಲು ಹೋದಾಗ ಇಂದ್ರನು ಆತನ ದವಡೆಗೆ ವಜ್ರಾಯುಧದಿಂದ ಹೊಡೆಯುತ್ತಾನೆ. ಆಗ ಆತನ ದವಡೆ ವಿರೂಪಗೊಳ್ಳುತ್ತದೆ, ಕಾರಣ ಆತ ಹನುಮಂತ. ಇದೇ ರೀತಿ ಅಂಜನಾದೇವಿಯ ಮಗನಾದ್ದರಿಂದ ಆಂಜನೇಯ, ಮರುತನ ಮಗನಾದ್ದ ರಿಂದ ಮಾರುತಿ ಇತ್ಯಾದಿ. 


ಆತನಿಗೆ ಇರುವ ಮಂಗನ ಮುಖ ಪ್ರಸಿದ್ಧವೇ ಆದರೂ, ಪಂಚಮುಖಿ ಆಂಜನೇಯನ ಪರಿಕಲ್ಪನೆಯಲ್ಲಿ ಅವನಿಗೆ ವರಾಹ (ಉತ್ತರಮುಖಿ,) ಗರುಡ(ಪಶ್ಚಿಮಮುಖಿ, ) ನರಸಿಂಹ(ದಕ್ಷಿಣ ಮುಖಿ) ಮತ್ತು ಹಯಗ್ರೀವ(ಆಕಾಶಮುಖಿ) ಎಂಬ ಐದು ಮುಖಗಳನ್ನು ಪರಿಕಲ್ಪಿಸಲಾಗಿದೆ. ಜನಪ್ರಿಯವಾದ ಒಂದು ವಾದದ ಪ್ರಕಾರ, ಪ್ರಾಗ್ದ್ರಾವಿಡ ಪದ 'ಆಣ್'(ಇಂದಿಗೂ ತುಳುವಿನಲ್ಲಿ 'ಆಣ್' ಎಂದರೆ ಗಂಡು ಎಂದರ್ಥ) ಮತ್ತು 'ಮಂದಿ'(ಮಂಗ) ಸೇರಿ 'ಆಣ್ಮಂದಿ'ಯಾಗಿ, ಮುಂದೆ ಅದುವೇ ಸಂಸ್ಕೃತೀಕರಣ ಗೊಂಡು ಹನುಮಂತನಾಯಿತು. ಈ ವಾದಕ್ಕೆ ಪೂರಕವಾಗಿ ವಿದ್ವಾಂಸರು, ಪ್ರಾಕತದಲ್ಲಿ ಇಂದಿಗೂ 'ಅನುಮಂತ', ತಮಿಳಿನಲ್ಲಿ 'ಆಣ್ಮಂತ' ಮೊದಲಾದ ಪ್ರಯೋಗಗಳಿರುವುದನ್ನು ಉಲ್ಲೇಖಿಸುತ್ತಾರೆ.ಆದರೆ, ತಮಿಳಿನ ಸಂಗಂ ಸಾಹಿತ್ಯದಲ್ಲಿ ಕಾಣಸಿಗುವ 'ಮಂದಿ' ಪದವು ಹೆಣ್ಣು ಮಂಗವನ್ನು ಸಂಕೇತಿಸುವುದರಿಂದ, ಈ ವಾದವನ್ನು ಒಪ್ಪಲಾಗದು ಎನ್ನುತ್ತಾರೆ ಮತ್ತೆ ಕೆಲವು ವಿದ್ವಾಂಸರು.

ಆರ‌್ಯರಿಗೆ ದ್ರಾವಿಡರು ಅಡಿಯಾಳಾದುದನ್ನು ರಾಮನಿಗೆ ಹನುಮಂತ ಸೇವಕನಾದ ಘಟನೆ ಸಂಕೇತಿಸುತ್ತದೆ ಎಂದು ವಾದಿಸುವ ದ್ರಾವಿಡವಾದಿಗಳೂ ನಮ್ಮ ನಡುವೆ ಇದ್ದಾರೆ. ಏನೇ ಇರಲಿ, ನಮಗೀಗ ತಿಳಿದಿರುವ ಹನುಮಂತನ ಕಲ್ಪನೆ ಬಹುತೇಕವಾಗಿ ವಾಲ್ಮೀಕಿ ರಾಮಾಯಣದಿಂದಲೇ ನಿಷ್ಪನ್ನಗೊಂಡಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾದರೆ, ಹನುಮಂತನ ಪಾತ್ರಕಲ್ಪನೆ ಪೂರ್ತಿಯಾಗಿ ವಾಲ್ಮೀಕಿಯದೇ ಎಂದು ಕೇಳಿದರೆ ಉತ್ತರಿಸುವುದು ಸುಲಭವಲ್ಲ. ಕೆಲವರ ಪ್ರಕಾರ, ವಾಲ್ಮೀಕಿ ಪೂರ್ವದಲ್ಲಿ ಮಂಗನನ್ನು ಕುಲಲಾಂಛನವನ್ನಾಗಿಸಿಕೊಂಡ ಬುಡಕಟ್ಟೊಂದರಲ್ಲಿ ಜನಪ್ರಿಯವಾಗಿದ್ದ ಕಥನಕಾವ್ಯದಿಂದ ಪ್ರೇರಣೆ ಪಡೆದ. ಋಗ್ವೇದಲ್ಲಿ ಉಲ್ಲೇಖಿತವಾಗಿರುವ ವಷಕಪಿಗೂ ಹನುಮಂತನಿಗೂ ಯಾವುದೇ ಸಂಬಂಧ ಇಲ್ಲವೆಂಬುದು ಹೆಚ್ಚಿನ ವಿದ್ವಾಂಸರ ವಾದ. ಅಲ್ಲಿ ಕಾಣಸಿಗುವ ಕಾಮೋತ್ತೇಜಕ ವಷಕಪಿಯು ಇಂದ್ರನಿಗೆ ಸಲ್ಲತಕ್ಕ ಹವಿಸ್ಸಿಗೆ ಅಡ್ಡಿಯುಂಟು ಮಾಡುತ್ತದೆ. ಮುಂದೆ ಇಂದ್ರನು ಹನುಮಂತನ

ಮುಸುಡಿಗೆ ಹೊಡೆಯುವುದನ್ನು ಕಂಡಾಗ, ಆರಂಭಿಕ ಹಂತದಲ್ಲಿದ್ದ ಈ ವೈದಿಕ ವಿರೋಧಿ ಕಪಿಯ ಪರಿಕಲ್ಪನೆಗೂ, ಮುಂದೆ ರಾಮನ ಬಂಟನಾಗಿ ಕೆಲಸ ಮಾಡಿದ ಕಪಿಗೂ ಅಜಗಜಾಂತರ ವ್ಯತ್ಯಾಸವಿರುವುದು ಸ್ಪಷ್ಟ ವಾಗು ತ್ತದೆ. ಪರ್ಗಿಟರ್ ಎಂಬ ವಿದ್ವಾಂಸನು ಈ ವ್ಯತ್ಯಾಸ ವನ್ನು ಆರ್ಯ-ದ್ರಾವಿಡ ಸಂಘರ್ಷದಲ್ಲಿ ಗುರುತಿಸುತ್ತಾನೆ. ಮಧ್ಯ ಕಾಲೀನ ಭಾರತದ ಭಕ್ತಿಪಂಥದ ಮಧ್ವಾ ಚಾರ್ಯ, ತುಲಸಿದಾಸ, ಸಮರ್ಥರಾಮ ದಾಸ, ರಾಘವೇಂದ್ರ ಸ್ವಾಮಿ ಮತ್ತಿತರರು ಹನುಂತನೊಡನೆ ಗಾಢ ಸಂಬಂಧ ಹೊಂದಿದ್ದಾರೆ. ಯಕ್ಷಗಾನ ಪ್ರಸಂಗ ಮಕರಧ್ವಜ ಕಾಳಗದ ಪ್ರಕಾರ, ಆತ ಹನುಮಂತನ ಮಗ. ಈ ಜನಪ್ರಿಯ ಪರಂಪರೆಯ ಪ್ರಕಾರ ಹನುಮಂತ ಬ್ರಹ್ಮಚಾರಿಯಲ್ಲ. 


ಥಾಯ್ ರಾಮಾಯಣದಲ್ಲಿ ಆತ ಸುವನ್ನಮಚ್ಚ ಎಂಬ ಸುಂದರಿಯನ್ನು ಪ್ರೇಮಿಸುತ್ತಾನೆ. ಸ್ವಯಂಪ್ರಭೆ ಮತ್ತು ವಿಭೀಷಣನ ಮಗಳಾದ ಬೆಂಜಕಾಯ ಕೂಡ ಆತನ ಹೆಂಡತಿ. ರಾವಣನ ಹೆಂಡತಿ ಎಂದು ನಾವು ನಂಬಿರುವ ಮಂಡೋದರಿಯು ಹನುಮಂತನ ಹೆಂಡತಿ ಎಂದು ಪೂರ್ವ ಏಷ್ಯಾದ ಕೆಲವು ನಿರೂಪಣೆಗಳು ಹೇಳುತ್ತವೆ. ಜೈನ ರಾಮಾಯಣಗಳ ಪ್ರಕಾರ, ಹನುಮಂತನು ರಾವಣನ ತಂಗಿ ಶೂರ್ಪನಖಿಯ ಮಗಳಾದ ಅನಂಗಕುಸುಮಳನ್ನು ಮದುವೆಯಾಗಿದ್ದಾನೆ ಮತ್ತು ರಾಮನು ಕಿಷ್ಕಿಂದೆ ತಲುಪಿದಾಗ ಹನುಮಂತನಿಗೆ ಅಲ್ಲಿ ನೂರಾರು ಹೆಂಡತಿಯರಿದ್ದರು.

ಗಂಗಾ-ಯಮುನಾ ಬಯಲು ಪ್ರದೇಶದಲ್ಲಿ ಹನುಮಂತನ ಬಗೆಗೆ ಅನೇಕ ಬಗೆಯ ರೋಚಕ ಕತೆಗಳು ಜನಪ್ರಿಯವಾಗಿದ್ದು, ಅವುಗಳಲ್ಲಿ 40 ಕತೆಗಳನ್ನು ಆಯ್ದು ಅಯೋವಾ ವಿಶ್ವವಿದ್ಯಾಲಯದಲ್ಲಿ ಹಿಂದಿ ಪ್ರಾಧ್ಯಾಪಕರಾಗಿರುವ ಡಾ.ಫಿಲಿಪ್ ಲಟ್ಗೆಂಡಾರ್ಫ್ ಅವರು ಪ್ರಕಟಿಸಿದ್ದಾರೆ(ಆಕ್ಸ್‌ಫರ್ಡ್ 2007). ಅವುಗಳಲ್ಲಿ ಒಂದು ಕತೆ ಇಂತಿದೆ: ಹನುಮಂತನ ತಾಯಿ ಅಂಜನಾದೇವಿಯು ಹನುಮಂತನಿಗೆ ರಾತ್ರಿ ನಿದ್ದೆ ಮಾಡುವ ಹೊತ್ತು ದೇವಾನುದೇವತೆಗಳ ಕತೆಗಳನ್ನು ನಿರೂಪಿಸುತ್ತಿದ್ದಳು. 


ಒಂದು ದಿನ ಆಕೆ ರಾಮನ ಕತೆಯನ್ನೂ ಹೇಳಿದಳು. ಮಂತ್ರಮುಗ್ಧನಾಗಿ ಕತೆ ಕೇಳುತ್ತಿದ್ದ ಹನುಮಂತನು, ರಾಮ ಹನುಮಂತನ್ನು ಭೇಟಿಯಾದ ಪ್ರಸಂಗ ವಿವರಿಸುತ್ತಿದ್ದಾಗ, ಅಚ್ಚರಿಗೊಂಡು ಆ ಹನುಮಂತ ಯಾರೆಂದು ಕೇಳುತ್ತಾನೆ. ಆಗ ಅಂಜನಾದೇವಿಯು, 'ಇದು ತ್ರೇತಾಯುಗದಲ್ಲಿ ನಡೆದ ಕತೆ' ಎಂದು ಮುಂದಕ್ಕೆ ಸಾಗುತ್ತಾಳೆ. ಹನುಮಂತ ಕತೆಯಲ್ಲಿ ಇನ್ನಷ್ಟು ತಲ್ಲೀನನಾಗುತ್ತಾನೆ. ರಾವಣನು ಸೀತೆಯನ್ನು ಅಪಹರಿಸುವಾಗ ಆತ ಕಣ್ಣೀರಿಡುತ್ತಾನೆ. ಹನುಮಂತನು ರಾವಣನನ್ನು ಲಂಕೆಯಲ್ಲಿ ಭೇಟಿಯಾಗುವ ಪ್ರಸಂಗ ಬಂದಾಗ, 'ಆ ಹನುಮಂತನು ರಾವಣನನ್ನು ಯಾಕೆ ಕೊಲ್ಲಲಿಲ್ಲ?' ಎಂದು ಆಕ್ರೋಶ ಪ್ರಕಟಿಸುತ್ತಾನೆ. ಹನುಮಂತನು ರಾಮನನ್ನು ಭೇಟಿಯಾಗಿ, ಸೀತೆಯನ್ನು ಅಶೋಕವನದಲ್ಲಿ ಕಂಡ ಸುದ್ದಿ ಹೇಳಿದಾಗ ರಾಮನು ಹನುಮಂತನ್ನು ಆಲಂಗಿಸಿಕೊಳ್ಳುತ್ತಾನೆ. ಆಗ 'ಆ ಹನುಮಂತ ನಾನೇ ಆಗಿರಬಾರದಿತ್ತೇ' ಎಂದು ಈತ ಪರಿತಪಿಸುತ್ತಾನೆ. 

ರಾಮಾಯಣ ಕೇಳಿದ ಮರುದಿನ ಹನುಮಂತನು ರಾಮನ ಧ್ಯಾನದಲ್ಲಿಯೇ ಇದ್ದು ಊಟ
ತಿಂಡಿ ಮರೆತುಬಿಟ್ಟು , 'ರಾಮನನ್ನು ತೋರಿಸು' ಎಂದು ಹಠ ಮಾಡುತ್ತಾನೆ. ಆಗ ಅಂಜನಾದೇವಿಯು 'ರಾಮನು ಈಗಷ್ಟೇ ಅಯೋಧ್ಯೆಯಲ್ಲಿ ಹುಟ್ಟಿದ್ದಾನೆ, ಈ ರಾಮನದ್ದು ಇನ್ನೊಂದೇ ರಾಮಾಯಣ' ಎಂದಾಗ ಹನುಮಂತನು ಅಯೋಧ್ಯೆಗೆ ಹೋಗಬಯಸುತ್ತಾನೆ. ಆಗ ಆತನನ್ನು ತಡೆದ ಅಂಜನಾದೇವಿಯು, ''ಅಯೋಧ್ಯೆಯಲ್ಲಿ ಮನುಷ್ಯರು ವಾಸಿಸುತ್ತಾರೆ, ಅಲ್ಲಿ ಕಪಿಗಳಿಗೆ ಜಾಗ ಎಲ್ಲಿ? ಕಾಲ ಕೂಡಿ ಬಂದಾಗ ರಾಮನನ್ನು ಭೇಟಿಯಾಗುವಿಯಂತೆ' ಎಂದು ಸಮಾಧಾನ ಮಾಡುತ್ತಾಳೆ.

ಈ ಕತೆಯನ್ನು ನಿರೂಪಿಸಿದವರು, ಅಂಜನಾದೇವಿ ಹೇಳಿದ ಕತೆಯೆಂದು ಇನ್ನೊಬ್ಬ ನಿರೂಪಕಿಯನ್ನು ಸಷ್ಟಿಸಿದ್ದಾರೆ. ಈ ಎರಡನೆಯ ನಿರೂಪಕಿಯ ಮಗ ಪ್ರೇಕ್ಷಕನಾಗುತ್ತಲೇ ನಿರೂಪಿತ ಕತೆಯ ಪಾತ್ರವೊಂದಕ್ಕೆ ಮುಖಾಮುಖಿಯಾಗಿ ಆಗಾಗ ಕತೆಯ ಪಾತ್ರವಾಗುತ್ತಾನೆ. ಭಾರತೀಯ ಕಥನ ಸಾಹಿತ್ಯದಲ್ಲಿನ ಈ ಬಗೆಯ ತಂತ್ರಗಾರಿಕೆಯು ಕುತೂಹಲಕರವಾಗಿದ್ದು ಗಂಭೀರ ಅಧ್ಯಯನಕ್ಕೆ ಅರ್ಹವಾಗಿದೆ. ಹನುಮಂತನ ಬಾಲದ ಹಾಗೆ ಅವನ ಕತೆಗೂ ಕೊನೆಯಿಲ್ಲ.

1 ಕಾಮೆಂಟ್‌:

Laxmi prasad ಹೇಳಿದರು...

ಹನುಮಂತನನ್ನು ತುಳುವರು ಭೂತದ ನೆಲೆಯಲ್ಲಿ ಪರಿಕಲ್ಪಿಸಿ ಕಕೋಲ ನೀಡಿ ಆರಾಧಿಸುತ್ತಾರೆ ಹೆಚ್ಚಿನ ಮಾಹಿತಿಗೆ ನನ್ನ ಬ್ಲಾಗ್ ಲೇಖನ ಅಪರೂಪದ ಹನುಮಂತನ ಕೋಲ ನೋಡಬಹುದು http//laxmipras.blogspot.com