ಭಾನುವಾರ, ಜುಲೈ 21, 2013

ಮೌಢ್ಯದ ಬಿತ್ತನೆ ನಿಲ್ಲಲಿ

   
 ವಿಜಯ ಕರ್ನಾಟಕ ಸಂಪಾದಕೀಯ: 
 ಸೌಜನ್ಯ: ವಿಜಯ ಕರ್ನಾಟಕ
ಸಂಪಾದಕೀಯ: ಮೌಢ್ಯದ ಬಿತ್ತನೆ ನಿಲ್ಲಲಿ


 
  









  ಕಾಗೆ ತಲೆಗೆ ಸ್ಪರ್ಶಿಸಿತು ಎಂಬ ಕ್ಲುಲ್ಲಕ ಕಾರಣದಿಂದ ಎಂಜಿನಿಯರ್ ಪದವೀಧರರೊಬ್ಬರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ, ಮೌಢ್ಯದ ಪರಮಾವಧಿಯನ್ನು ಎತ್ತಿ ತೋರಿಸುತ್ತದೆ. ದೇಶದ ಮಾಹಿತಿ ತಂತ್ರಜ್ಞಾನದ ರಾಜಧಾನಿ ಎಂಬ ಹೆಗ್ಗಳಿಕೆಯ ಬೆಂಗಳೂರಿನಲ್ಲೇ ಈ ಘಟನೆ ನಡೆದಿರುವುದು ವಿಪರ್ಯಾಸದ ಸಂಗತಿ. ವೈಫೈ, ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ನ್ಯಾನೊ ತಂತ್ರಜ್ಞಾನಗಳು ಜನಸಾಮಾನ್ಯರ ಅವಿಭಾಜ್ಯ ಅಂಗವಾಗುತ್ತಿರುವ ಈ ದಿನಮಾನದಲ್ಲೂ ಮೂಢನಂಬಿಕೆಗಳ ಪೊರೆ ಕಳಚದಿರುವುದು ಆತಂಕಕಾರಿ ವಿದ್ಯಮಾನ. ಈ ಘಟನೆಯ ಹಿನ್ನೆಲೆಯಲ್ಲಿ, ಕಾಗೆ ಸ್ಪರ್ಶಿಸಿದರೆ ಮುಂದೆ ಜೀವನದಲ್ಲಿ ಕೆಡುಕಾಗಲಿದೆ ಎಂದು ಹೆದರಿ ಆತ್ಮಹತ್ಯೆಗೆ ಶರಣಾದ ಅಮಾಯಕ ಎಂಜಿನಿಯರ್ ಕುಟುಂಬಕ್ಕೆ ಸಹಾನುಭೂತಿ ವ್ಯಕ್ತಪಡಿಸುವುದರ ಜತೆಗೆ, ಇಂದಿನ ಸಾಮಾಜಿಕ ಸ್ಥಿತಿಗತಿ ಮತ್ತು ಉದ್ಯೋಗ ಕೇಂದ್ರೀತ ಶಿಕ್ಷಣ ವ್ಯವಸ್ಥೆಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವಂತಾಗಿದೆ.

   ಮೂಢನಂಬಿಕೆಯ ಅವಾಂತರಗಳು, ದುರಂತಗಳು ಆಗಾಗ ನಮ್ಮ ನಡುವೆ ನಡೆಯುತ್ತಲೇ ಇರುತ್ತವೆ. ನಿಧಿಯ ಆಸೆಗಾಗಿ ಕರುಳ ಕುಡಿಯ ರುಂಡವನ್ನೇ ಚೆಂಡಾಡುವ ಪೋಷಕರೂ ಇದ್ದಾರೆ. ತಮ್ಮ ಎಲ್ಲ ಸಮಸ್ಯೆಗಳಿಗೆ ಇದೊಂದೇ ಪರಿಹಾರ ಎಂಬ ಭ್ರಮೆಯಲ್ಲಿ, ಮುಗ್ಧ ಮಕ್ಕಳನ್ನು ಅಪಹರಿಸಿ ಬಲಿ ಕೊಡುವ ಕ್ರೌರ್ಯವೂ ನಡೆಯುತ್ತಿದೆ. ಇದಕ್ಕೆಲ್ಲ ಮೂಲ ಕಾರಣ ಮೌಢ್ಯದ ಪೋಷಣೆ. ಇದರ ದುಷ್ಪರಿಣಾಮ ಏನೆಂದರೆ ಅಮಾಯಕರ ಶೋಷಣೆ. ಟಿ.ವಿ ಮಾಧ್ಯಮಗಳು ಟಿಆರ್‌ಪಿ ಏರಿಸಿಕೊಳ್ಳುವ ಧಾವಂತದಲ್ಲಿ ಮೂಢನಂಬಿಕೆಗಳನ್ನು ಬಿತ್ತುತ್ತಿವೆ ಎಂಬ ಆರೋಪ ಹೊಸತೇನಲ್ಲ. ಸಾವಿರಾರು ವರ್ಷಗಳ ಇತಿಹಾಸದ ಜ್ಯೋತಿಷ್ಯಶಾಸ್ತ್ರಕ್ಕೆ ವೈಜ್ಞಾನಿಕ ತಳಹದಿ ಇದೆ ಎಂದು ಕೆಲವರು ಪ್ರಬಲವಾಗಿ ವಾದಿಸುತ್ತಾರಾದರೂ, ಅಪ್ರಬುದ್ಧ ಮತ್ತು ಸ್ವಯಂಘೋಷಿತ ಜ್ಯೋತಿಷಿಗಳು ಮುಗ್ಧ ನಾಗರಿಕರ ದಾರಿ ತಪ್ಪಿಸುತ್ತಿರುವುದು ಸ್ಪಷ್ಟ.
 

   ಅತ್ತೆಯನ್ನು ಉಪವಾಸ ಕೆಡವಿ ಮೆತ್ತಗಾಗಿಸಿ, ಮಾವನ ಗ್ರಹಗತಿ ಕೆಟ್ಟಿರುವುದರಿಂದ ಗಂಡನ ಮನವೊಲಿಸಿ ಬೇರೆ ಮನೆ ಮಾಡಿಸಿ, ಶೌಚಾಲಯದ ಜಾಗದಲ್ಲಿ ದೇವರ ಕೋಣೆ ಇರಲಿ; ಪೂಜಾ ಕೋಣೆ ಒಡೆದು ಹಾಕಿ ಅಲ್ಲಿ ಶೌಚಾಲಯ ನಿರ್ಮಿಸಿ, ಆನೆಯ ಲದ್ದಿ ತಂದು ಚಟ್ನಿಯಲ್ಲಿ ಬೆರೆಸಿ ಗಂಡನಿಗೆ ತಿನ್ನಿಸಿದರೆ ಶುಭವಾಗುತ್ತದೆ ಎಂಬಿತ್ಯಾದಿ ತರ್ಕ ರಹಿತ ಬಿಟ್ಟಿ ಸಲಹೆ ಕೊಡುವ ಸ್ಟುಡಿಯೊ ಜ್ಯೋತಿಷಿಗಳಿಗೇನೂ ಕೊರತೆ ಇಲ್ಲ. ಮಂತ್ರದಿಂದ ಮೆಟ್ರೊ ರೈಲು ಓಡಿಸಲು ಸಾಧ್ಯ ಎಂಬ ಧಾಟಿಯ ಇವರ ಮಾತಿನ ಮೋಡಿಗೆ ಒಳಗಾಗಿ ಜನ ಮೌಢ್ಯದ ದಾಸರಾಗುತ್ತಿದ್ದಾರೆ ಎಂಬ ಕಳವಳವನ್ನು ಈ ಆತ್ಮಹತ್ಯೆ ಘಟನೆ ಮತ್ತೊಮ್ಮೆ ಪುಷ್ಟೀಕರಿಸಿದೆ.

   ಪ್ರಾಥಮಿಕ ಶಿಕ್ಷಣ ಹಂತದಲ್ಲೇ ಮಕ್ಕಳಲ್ಲಿ ಮೂಢನಂಬಿಕೆಗಳ ಬಗ್ಗೆ ಜಾಗತಿ ಮೂಡಿಸಬೇಕು. ಪಠ್ಯಕ್ರಮದಲ್ಲೂ ಈ ಕುರಿತ ಪರಿಣಾಮಕಾರಿ ಪಾಠ ಇರಬೇಕು. ಪೋಷಕರು ತಾವು ಮೌಢ್ಯದ ಪರಿಧಿಯಿಂದ ಹೊರಬರುವುದರ ಜತೆಗೆ, ಮಕ್ಕಳಿಗೂ ಈ ಬಗ್ಗೆ ಸೂಕ್ತ ತಿಳಿವಳಿಕೆ ನೀಡುವಂತಾಗಬೇಕು. ಸಮಾಜವನ್ನು ಮತ್ತು ಜನಸಾಮಾನ್ಯರ ಮನಸ್ಸನ್ನು ಕಲುತಗೊಳಿಸುವ ಢೋಂಗಿ ಜ್ಯೋತಿಷಿಗಳ ಮೇಲೆ ಮತ್ತು ಮಾಟ-ಮಂತ್ರದ ಹೆಸರಿನಲ್ಲಿ ಅಮಾನುಷ ದೌರ್ಜನ್ಯ ನಡೆಸುವವರ ಮೇಲೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಮಾಧ್ಯಮಗಳೂ ಈ ನಿಟ್ಟಿನಲ್ಲಿ ಸಾಮಾಜಿಕ ಹೊಣೆಗಾರಿಕೆ ಪ್ರದರ್ಶಿಸಬೇಕು. ನಮ್ಮ ಸಮಾಜದಲ್ಲಿ ಮೌಢ್ಯದ ಬಿತ್ತನೆ ನಿಲ್ಲಲಿ. ಪ್ರಜ್ಞಾವಂತಿಕೆಯ ಬೆಳೆ ಎಲ್ಲೆಡೆ ವ್ಯಾಪಿಸಲಿ.

1 ಕಾಮೆಂಟ್‌:

makara ಹೇಳಿದರು...

ಒಬ್ಬ ಮಾಹಿತ ತಂತ್ರಜ್ಞಾನ ಕೇವಲ ಕಾಗೆ ಕೂಟವನ್ನು ನೋಡಿದಾಕ್ಷಣ ತನಗೇನೋ ಜರಗುತ್ತೆಂದು ಭಾವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆಂದರೆ ಅದಕ್ಕಿಂತ ದೊಡ್ಡ ಮೌಢ್ಯ ಮತ್ತೊಂದಿಲ್ಲ. ಅಂತಹ ಮಟ್ಟಕ್ಕೆ ಹೋದ ನಂತರವೂ ಅವನ ಚಿಂತನೆಗಳಲ್ಲಿ ಸುಧಾರಣೆಯಿಲ್ಲವೆಂದರೆ ನಂಬಿಕೆಗಳನ್ನು ಬದಿಗಿರಿಸಿ; ನಮ್ಮ ವಿದ್ಯಾಭ್ಯಾಸ ಪದ್ಧತಿಯನ್ನೂ ಸಹ ಮರು ಅವಲೋಕಿಸುವಂತೆ ಮಾಡುತ್ತಿದೆ! ಏಕೆಂದರೆ ನಮ್ಮ ಈ ಆಧುನಿಕ ಶಿಕ್ಷಣವೂ ಸಹ ವೈಜ್ಞಾನಿಕವಾಗಿ ವಿಚಾರಗಳನ್ನು ವಿಶ್ಲೇಷಿಸುವುದನ್ನು ನಮಗೆ ಕಲಿಸಿಕೊಡುತ್ತಿಲ್ಲವೆಂದೇ ಹೇಳಬೇಕು; ಆದ್ದರಿಂದ ಯಾರೋ ಹೇಳಿದರೆಂದು ಒಂದು ವಿಷಯವನ್ನು ವೈಜ್ಞಾನಿಕವಾಗಿ ಒರೆಗೆ ಹಚ್ಚದೆ ಅದನ್ನು ಕುರುಡಾಗಿ ಮೂಡ ನಂಬಿಕೆ ಎನ್ನುವ ಪರಿಪಾಠವನ್ನು ಬೆಳೆಸಿಕೊಂಡಿರುವುದು ಅಷ್ಟೇ ಹಾಸ್ಯಾಸ್ಪದ ವಿಚಾರವಾಗಿದೆ. ಮೊದಲು ನಮ್ಮ ಹಿರಿಯರ ನಂಬಿಕೆಗಳ ಹಿನ್ನಲೆಗಳನ್ನು ವೈಜ್ಞಾನಿಕವಾಗಿ ಅಭ್ಯಸಿಸಿ ಅವುಗಳನ್ನು ಸರಿಯಾಗಿ ವಿಶ್ಲೇಷಿಸುವುದನ್ನು ಕಲಿತುಕೊಳ್ಳಬೇಕು. ಆಮೇಲೆ ಅದನ್ನು ಜನರಿಗೆ ಮನದಟ್ಟು ಮಾಡಬೇಕು; ಸುಮ್ಮನೆ ಹಿಂದಿನ ತಲೆಮಾರಿನವರು ಹೇಳಿದ್ದೆಲ್ಲಾ ಮೂಡನಂಬಿಕೆ ಎಂದು ಹೇಳಿಬಿಟ್ಟರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಇಲ್ಲಿನ ಕಾಗೆಗಳ ಕೂಟವನ್ನೇ ತೆಗೆದುಕೊಳ್ಳಿ, ಹಿಂದೆ ಯಾರಾದರೂ ಅದನ್ನು ನೋಡಿದ್ದಾರೆಂದರೆ ಅವರು ಸತ್ತರೆಂದು ಊರಲ್ಲಿ ಸುದ್ದಿ ಹಬ್ಬಿಸುತ್ತಿದ್ದರು. ಇದು ಮಾನ್ಯ ಲೋಕನಾಯಕ ಜಯಪ್ರಕಾಶಕರ ವಿಷಯದಲ್ಲಿಯೂ ೧೯೮೦ರ ಸುಮಾರಿಗೆ ನಡೆಯಿತು. ಕಾಗೆಗಳು ಒಂದು ಗೂಡುವುದನ್ನು ಅಥವಾ ಸರ್ಪಗಳು ಒಂದುಗೂಡುವುದನ್ನು ನೋಡಿ ಅವುಗಳ ಸಂತಾನ ಪ್ರಕ್ರಿಯೆಗೆ ಭಂಗ ತರಬಾರದೆನ್ನುವ ಉದ್ದೇಶದಿಂದ ಅಲ್ಪ ತಿಳುವಳಿಕೆಯುಳ್ಳ ಜನರಿದ್ದ ಅ ಕಾಲದಲ್ಲಿ ಹಾಗೆ ಕೆಲವೊಂದು ಕಟ್ಟಳೆಗಳನ್ನು ಮಾಡಿದ್ದಾರೆ. ಇಂತಹ ವಿಚಾರಗಳನ್ನು ಸರಿಯಾಗಿ ವಿಶ್ಲೇಷಿಸಿ ಜನರಲ್ಲಿ ಅರಿವು ಮೂಡಿಸಬೇಕೇ ಹೊರತು ಸುಮ್ಮನೇ ಮೂಢ ನಂಬಿಕೆ ಎಂದಾಕ್ಷಣ ಸಮಸ್ಯೆ ಪರಿಹಾರವಾಗದು. ಹಿಂದಿನ ವಿಚಾರಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸದೆ ಸುಮ್ಮನೇ ಮೂಢ ನಂಬಿಕೆ ಎನ್ನುವುದೂ ಸಹ ಬಹುದೊಡ್ಡ ಮೂಢ ನಂಬಿಕೆ ಎನ್ನುವುದನ್ನು ಮರೆಯಬೇಡಿ. ನಿಮ್ಮ ಕಳಕಳಿ ನನಗೆ ಅರ್ಥವಾಗುತ್ತದೆ ಆದರೆ ಜನರು ಈ ದಿಶೆಯಲ್ಲಿಯೂ ಕಾರ್ಯಪ್ರವೃತ್ತರಾಗುವಂತೆ ಮಾಡಿದರೆ ಆಗ ಜನ ತಮ್ಮಷ್ಟಕ್ಕೆ ತಾವೇ ಯಾವುದು ಒಳಿತು ಯಾವುದು ಕೆಡುಕು ಎನ್ನುವುದನ್ನು ನಿರ್ಧರಿಸಿಕೊಳ್ಳಲು ಸಹಾಯಕವಾಗುತ್ತದೆ.