ಸೋಮವಾರ, ಜನವರಿ 7, 2013

ಅರವನ್ ತಲೆಗಳು ಮತ್ತು ಸವದತ್ತಿಯ ಉಭಯಲಿಂಗಿಗಳು

ಅರವನ್ ತಲೆಗಳು ಮತ್ತು ಸವದತ್ತಿಯ ಉಭಯಲಿಂಗಿಗಳು

-ಡಾ.ಪುರುಷೋತ್ತಮ ಬಿಳಿಮಲೆ.

ಕೃಪೆ: ವಿಜಯ ಕರ್ನಾಟಕ

    ನಾನು ನೋಡಿದ ನೂರಾರು ಜಾತ್ರೆಗಳಲ್ಲಿ ನನ್ನ ಮನಸಿಲ್ಲಿ ಗಟ್ಟಿಯಾಗಿ ನೆಲೆನಿಂತ ಕೆಲವುಗಳೆಂದರೆ, ಹಡಗಲಿಯ ಮೈಲಾರನ ಕಾರಣಿಕ ಜಾತ್ರೆ, ಹುಲಿಗಿಯ ಹುಲಿಗೆಮ್ಮನ ಜಾತ್ರೆ, ಸವದತ್ತಿಯ ಎಲ್ಲಮ್ಮನ ಜಾತ್ರೆ,  ಫಂಡರಾಪುರದ ವಿಠಲನ ಜಾತ್ರೆ ಮತ್ತು ತಮಿಳುನಾಡಿನ ಕೊಯಂಬತ್ತೂರು ಸಮೀಪ ನಡೆಯುವ ಅರವನ್ ಜಾತ್ರೆ. ಇಲ್ಲಿ ಲಕ್ಷಾಂತರ ಜನ ಸೇರುವುದು ಒಂದು ವಿಶೇಷವಾದರೆ, ಇತಿಹಾಸ, ಪುರಾಣ, ಐತಿಹ್ಯ, ಕತೆ, ಹಾಡು, ಸಂಗೀತ, ನಂಬಿಕೆಗಳು, ಸಾಮಾಜಿಕ ನ್ಯಾಯ, ಮತ್ತಿತರ ಅನೇಕ ಸಂಗತಿಗಳು ಸಮ್ಮಿಳಿತಗೊಳ್ಳುವುದು ಇನ್ನೊಂದು ವಿಶೇಷ. ಈ ಜಾತ್ರೆಗಳು ನಮ್ಮ ಸಂಶೋಧನಾ ವಿಧಾನಗಳಿಗೆ ಮತ್ತು ತಿಳುವಳಿಕೆಗಳಿಗೆ ಯಾವಾಗಲೂ ಒಂದು ಸವಾಲು.
 
    ದೆಹಲಿಯ ಪತ್ರಕರ್ತ ಸಂಶೋಧಕ ಶ್ರೀ ಪನ್ನೀರ್ ಸೆಲ್ವಂ ಅವರು ಆಗಾಗ ತಮಿಳುನಾಡಿನ ಜನಪದ ರಂಗಭೂಮಿ ಮತ್ತು ಆಚರಣೆಗಳ ಕುರಿತಾಗಿ ಮಾಹಿತಿ ನೀಡುವುದರ ಜೊತೆಗೆ ನನ್ನನ್ನು ಬೆಚ್ಚಿಬೀಳಿಸುವ ಕೆಲವು ಸಾಕ್ಷ್ಯ ಚಿತ್ರಗಳನ್ನೂ ಆಗಾಗ ತೋರಿಸುತ್ತಾರೆ. ಪನ್ನೀರ್ ಜೊತೆಗೆ ೨೦೧೦ ರ ಎಪ್ರಿಲ್ ತಿಂಗಳಲ್ಲಿ ಕೊಯಮತ್ತೂರು ಸಮೀಪದ ಹಳ್ಳಿಯೊಂದರಲ್ಲಿ ನಡೆಯುವ ಅರವನ್ ಜಾತ್ರಗೆ ಹೋಗಿದ್ದೆ. ಮಧುರೆಯಲ್ಲಿ ತಮಿಳು ಪ್ರಾಧ್ಯಾಪಿಕೆಯಾಗಿರುವ ಡಾ. ಭಾರತಿ ಅವರೂ ಅಲ್ಲಿ ನಮ್ಮನ್ನು ಸೇರಿಕೊಂಡರು. ಹುಣ್ಣಿಮೆಯ ಹಿಂದು ಮುಂದಿನ ದಿವಸಗಳಲ್ಲಿ ನಡೆವ ಅರವನ್ ಜಾತ್ರೆ ನಮ್ಮ ಕಾಲದಲ್ಲಿ ನಡೆಯುತ್ತಿರುವ ವಿಸ್ಮಯಗಳಲ್ಲಿ ಒಂದು. ಕಾವ್ಯ, ಸಾಹಿತ್ಯ ಮತ್ತು ಜಾನಪದಗಳ ನಡುವಣ ಗಡಿರೇಖೆಗಳು ಅಳಿದು, ಹೊಸದು ಹುಟ್ಟುವ  ಲೋಕವದು.

    ಅರವನ್ ಜಾತ್ರೆ ಒಟ್ಟಿಗೆ ೧೮ ದಿವಸ ನಡೆಯುತ್ತದೆ. ಹದಿನಾರನೇ ದಿವಸ ಅಲ್ಲಿನ ಪುಟ್ಟ ದ್ರೌಪದಿ ಗುಡಿಯಲ್ಲಿ ಇರಿಸಲಾದ ಮರದ ತಲೆಯ ಮೇಲೆ ಅರವನ್ ಆವಾಹನೆಗೊಳ್ಳುತ್ತಾನೆ. ಮರದಿಂದ ಮಾಡಲಾದ ಸುಮಾರು ೧೩ ಅಡಿ ಎತ್ತರದ ಅರವನ್ ತಲೆಯ ಮೇಲ್ಭಾಗದಲ್ಲಿ ಹಾವಿನ ಚಿತ್ರವೊಂದಿದ್ದು, ಅದು ಅರವನ್ ದೈವದ ಪ್ರತೀಕವಂತೆ. ಅರಾವನ್ ಆಹ್ವಾನಗೊಳ್ಳುತ್ತಲೇ ದೈವದ ಆಶೀರ್ವಾದ ಪಡೆಯಲು ಮತ್ತು ಪ್ರಸಾದ ಸ್ವೀಕರಿಸಲು ಸಾವಿರಾರು ಜನ ಆಗಮಿಸುತ್ತಾರೆ.  ಮರುದಿನ ಅಂದರೆ, ೧೭ನೇ ದಿನ ಆತನ ಮದುವೆ. ಶ್ರೀ ಕೃಷ್ಣನು ಮೋಹಿನಿಯ ರೂಪದಲ್ಲಿ ಬಂದು ಅರವನ್‌ನನ್ನು ಮದುವೆಯಾಗುತ್ತಾನೆ. ಇದರ ಜೊತೆಗೆ ಸಾವಿರಾರು ಜನರು ( ಮುಖ್ಯವಾಗಿ ಉಭಯಲಿಂಗಿಗಳು ಅಥವಾ ನಿರ್ಲಿಂಗಿಗಳು?)  ತಾವು ಅರವನ್ ದೈವವನ್ನು ಮದುವೆಯಾದೆವು ಎಂದು ಸಂಭ್ರಮಿಸುತ್ತಾರೆ. ೧೮ನೇ ದಿವಸ ಅರವನ್‌ನನ್ನು ಕಾಳಿಗೆ ಬಲಿಕೊಡುವ ಕೆಲಸ ನಡೆಯುತ್ತದೆ. ಹಿಂದಿನ ದಿನ ಅರವನ್‌ನನ್ನು ಮದುವೆಯಾದವರೆಲ್ಲ ಈ ದಿವಸ ವಿಧವೆಯರಾಗುತ್ತಾರೆ. ಸಾಯಂಕಾಲದ ಹೊತ್ತಿಗೆ ಊರು ತುಂಬಾ ಮೆರವಣಿಗೆ ಸಾಗುವ ಅರವನ್ ತಲೆಯನ್ನು ಒಂದು ಕಂಭದ ತುದಿಗೆ ಕಟ್ಟಿ, ದ್ರೌಪದಿ ಗುಡಿಗೆ ಮತ್ತೆ ಸೇರಿಸುವಲ್ಲಿಗೆ ಜಾತ್ರೆ ಮುಗಿಯುತ್ತದೆ. 

      ದ್ರೌಪದಿ ಗುಡಿಯಲ್ಲಿ ಸ್ಥಾನ ಪಡೆದಿರುವ ಅರವನ್ ಮೂಲತಹ ವ್ಯಾಸ ಭಾರತದಲ್ಲಿ  ಕಾಣಿಸಿಕೊಳ್ಳುವ ಒಂದು ಪುಟ್ಟ ಪಾತ್ರ. ಅರ್ಜುನನು ಸನ್ಯಾಸಿಯಾಗಿ ದೇಶ ಸುತ್ತುತ್ತಿದ್ದಾಗ ಪರಿಚಯವಾದ ನಾಗಕನ್ಯೆ ಉಲೂಪಿಯಲ್ಲಿ ಜನಿಸಿದ ಇರಾವಂತನೇ ಈ ಅರವನ್ ಎಂದು ವಿದ್ವಾಂಸರು ತರ್ಕಿಸಿದ್ದಾರೆ. ಅರವನ್ ವಿಗ್ರಹಗಳಲ್ಲಿ ಕಾಣಿಸಿಕೊಳ್ಳುವ ಹಾವಿನ ಚಿತ್ರ ( ತೆರುಕೂತ್ತುವಿನಲ್ಲ ಅದು ಭುಜದಲ್ಲಿ ಕಾಣಿಸಿಕೊಳ್ಳುತ್ತದೆ, ಚಿತ್ರ ನೋಡಿ) ಆತನು ನಾಗ ಕುಲದವನು ಎಂಬುದನ್ನು ಸ್ಥಾಪಿಸುತ್ತದೆ.  ಕರ್ನಾಟಕದ ಸವದತ್ತಿ ಎಲ್ಲಮ್ಮನ ಜಾತ್ರೆಯಲ್ಲಿರುವಂತೆ ಉಭಯ ಲಿಂಗಿಗಳೇ ಅರವನ್ ಜಾತ್ರೆಯಲ್ಲಿಯೂ ಪ್ರಧಾನ ಪಾತ್ರ ವಹಿಸುತ್ತಾರೆ. ಇವರನ್ನು ಅರವನಿಗಳೆಂದೂ ಅಲಿಗಳೆಂದೂ ತಮಿಳಿನಾಡಿನಾದ್ಯಂತ ಕರೆಯುತ್ತಾರೆ.  ಅರ್ಜುನ, ಉಲೂಪಿ, ಅರವನ್, ದ್ರೌಪದಿ, ಉಭಯಲಿಂಗಿಗಳು, ೧೮ ದಿನಗಳ ಆಚರಣೆ ಎಂದೆಲ್ಲಾ ಯೋಚಿಸುವಾಗ  ನಮ್ಮ ಸಮಾಜ ಸಾಧಿಸಿಕೊಂಡು ಬಂದಿರುವ  ಸಂಕೀರ್ಣತೆಯ ಬಗೆಗೆ ಇನ್ನಷ್ಟು ಕುತೂಹಲ ಹುಟ್ಟುತ್ತದೆ ಮಾತ್ರವಲ್ಲ ಜನಪದ-ಶಿಷ್ಟಗಳ ಸಂಬಂಧದ ಕುರಿತು ಇನ್ನಷ್ಟು ಯೋಚಿಸುವಂತೆ ಅವು ಒತ್ತಾಯಿಸುತ್ತವೆ.

    ಮಹಾಭಾರತದಲ್ಲಿನ ಉಲ್ಲೇಖದ ಪ್ರಕಾರ ಅರ್ಜುನ ಉಲೂಪಿಯರ ಮಗನಾದ ಇರಾವಂತನು ಕುರುಕ್ಷೇತ್ರ ಯುದ್ಧದ ೧೮ ನೇ ದಿನ ಆರ್ಶ್ಯಶೃಂಗಿ ಎಂಬ ರಾಕ್ಷಸನಿಂದ ಹತನಾಗುತ್ತಾನೆ. ಆದರೆ ಅರವನ್ ಜಾತ್ರೆಯಲ್ಲಿ ಕೇಳಿ ಬರುವ ನಿರೂಪಣೆಗಳ ಪ್ರಕಾರ ಕುರುಕ್ಷೇತ್ರ ಯುದ್ಧದಲ್ಲಿ  ಪಾಂಡವರ ಯಶಸ್ಸಿಗಾಗಿ ಹಾರೈಸಿ ಅರವನ್ ತಾನೇ ಕಾಳಿಗೆ ಬಲಿಯಾಗಲು ನಿಶ್ಚಯಿಸುತ್ತಾನೆ.  ಕೂತ್ತಾಂಡವರ್ ಆಚರಣೆಗಳ ಪ್ರಕಾರ ಅರವನ್‌ನ ಈ ತ್ಯಾಗಕ್ಕೆ ಮೆಚ್ಚಿದ ಕೃಷ್ಣನು ಆತನಿಗೆ ಮೂರು ವರಗಳನ್ನು ಕೊಡುತ್ತಾನೆ. ಅದರಲ್ಲಿ ಒಂದನ್ನು ಆಯ್ದುಕೊಂಡ ಅರವನ್ನನು ತಾನು ಸಾಯುವ ಮೊದಲು ಮದುವೆಯಾಗಬೇಕೆಂದು ಬಯಸುತ್ತಾನೆ. ಆದರೆ ಸಾಯಲಿರುವ ಆತನನ್ನು ಯಾರೂ ಮದುವೆಯಾಗಲು ಒಪ್ಪದಿದ್ದಾಗ ಕೃಷ್ಣನೇ ಮೋಹಿನಿಯಾಗಿ ಬಂದು ಮದುವೆಯಾಗುತ್ತಾನೆ. ಕೂವಗಂನ್ನಲ್ಲಿ ನಡೆಯುವ ಅರವನ್  ಜಾತ್ರೆಯಲ್ಲಿ ಅರವನ್ ಮದುವೆಯಾಗುವ ಬಗೆಯನ್ನು ಅದ್ಭುತವಾಗಿ ಪುರಭಿನಯಿಸಲಾಗುತ್ತದೆ ಹಾಗೂ ಅರವನ್ ಸತ್ತಾಗ ಆತನನ್ನು ಮದುವೆಯಾದವರೆಲ್ಲ ಕುಂಕುಮ ಅಳಿಸಿ, ಬಳೆ ಒಡೆದುಕೊಂಡು,  ವಿಧವೆಯರಾಗುವ ಪ್ರಸಂಗವನ್ನು ಆಚರಿಸಲಾಗುತ್ತದೆ. ಈ ಪ್ರಕ್ರಿಯೆಯು ಸವದತ್ತಿ ಎಲ್ಲಮ್ಮನ ಜಾತ್ರೆಗಿಂತ ಬೇರೆಯಲ್ಲ. ಎರಡೂ ಕಡೆ ಉಭಯಲಿಂಗಿಗಳದೇ ನಿರ್ಣಾಯಕ ಪಾತ್ರ.
ಆದರೆ ದ್ರೌಪದಿಗೆ ಸಂಬಂಧಿಸಿದ ಆಚರಣೆಗಳಲ್ಲಿ ಅರವನ್ ಕಾಣಿಸುವ ರೀತಿಯೇ ಬೇರೆ. ಇಲ್ಲಿ ಅರವನ್ ಕೃಷ್ಣ ಕೊಟ್ಟ ವರಗಳಲ್ಲಿ ಮತ್ತೊಂದನ್ನು ಆರಿಸಿಕೊಂಡು, ತಾನು ಸತ್ತರೂ ತನ್ನ ತಲೆ ಇಡೀ ಕುರುಕ್ಷೇತ್ರ ಯುದ್ಧವನ್ನು ನೋಡುವಂತಾಗಬೇಕು ಎಂದು ಅಪೇಕ್ಷಿಸುತ್ತಾನೆ. ಆಚರಣೆಗಳಲ್ಲಿ ಅರವನ್ ತಲೆಯನ್ನು ಕಂಭವೊಂದಕ್ಕೆ ಕಟ್ಟುವುದೇ ಈ ಕಾರಣಕ್ಕೆ. ಕುತೂಹಲವೆಂದರೆ, ತುಂಡಾದ ತಲೆಯೊಂದು ೧೮ ದಿನಗಳ ಘನಘೋರ ಯುದ್ಧಕ್ಕೆ ಸಾಕ್ಷಿಯಾಗುವ ವಿವರ ಮಹಾಭಾರತದಲ್ಲೂ ಇದೆ, ಆದರೆ ಅದು ಅರವನ್‌ಗೆ ಸಂಬಂಧಿಸದೆ, ಭೀಮನ ಮೊಮ್ಮಗನಾದ (ಘಟೋತ್ಕಜ ಮತ್ತು ಕಾಮಕಟಂಕಟೆಯರ ಮಗ). ಬರ್ಬರೀಕನಿಗೆ ಸಂಬಂಧಿಸಿದೆ.

     ಹೀಗೆ ನೋಡಿದಾಗ ಮಹಾಭಾರತದ ಇರಾವಂತ ಮತ್ತು ಬರ್ಬರೀಕನ ಕತೆಯು ಅರವನ್ ಜಾತ್ರೆಯಲ್ಲಿ ಒಟ್ಟಾದಂತೆ ಕಾಣಿಸುತ್ತದೆ. ಇರಾವನ್ ಎಂಬ ಪದಕ್ಕೆ   ಎಡೆ ಅಥವಾ ಮೀಸಲಿಟ್ಟ ಆಹಾರ ಎಂಬ ಅರ್ಥವಿದೆ ಎಂದು ವಾದಿಸುವ ಆಲ್ಫ್ ಹಿಲ್ಟ್ ಬೀಟಲ್, ಮೆಡಿಲೈನ್ ಮೊದಲಾದವರು ಇರಾವಂತ ಎಂದರೆ  ’ಸಾವಿಗಾಗಿ ಮೀಸಲಿಟ್ಟ ವ್ಯಕ್ತಿ’ ಎಂಬ ಹೇಳಿದ್ದಾರೆ.
ಅರವನ್ ತಲೆಯಲ್ಲಿ ಎದ್ದು ಕಾಣುವ ಅಂಶವೆಂದರೆ ಆತನ ತೆರೆದ ಎರಡು ದೊಡ್ಡ ಕಣ್ಣುಗಳು ಮತ್ತು ಉಗ್ರವಾದ ಮುಖ. ಈ ತಲೆಯನ್ನು ಜಾತ್ರೆಯ ಕೊನೆಯ ದಿವಸ ಊರು ತುಂಬಾ ಮೆರವಣಿಗೆ ಮಾಡುತ್ತಾರೆ ಈ ಮೆರವಣಿಗೆಯು ಕೊಪ್ಪಳದ ಸಮೀಪದ ಕುಮ್ಮಟ ಬೆಟ್ಟದಲ್ಲಿ ಪ್ರತಿವರ್ಷ ನಡೆಯುವ ಕುಮಾರರಾಮನ ಜಾತ್ರೆಯನ್ನು ನೆನಪಿಸುತ್ತದೆ. ಎರಡೂ ಕಡೆಗಳಲ್ಲಿಯೂ ತಲೆಗಳಿಗೆ ಕೋಳಿ- ಕುರಿ ಬಲಿ ನೀಡಿ, ರಕ್ತವನ್ನು ಜೋಳದ ನುಚ್ಚಿನಲ್ಲಿ ಬೆರೆಸಿ, ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚುತ್ತಾರೆ. ಕುಮಾರರಾಮ-ಅರವನ್ ಇಬ್ಬರೂ ಫಲವಂತಿಕೆ ಯ ದೈವಗಳು.

    ಹೀಗೆ ಇದೊಂದು ದೊಡ್ಡ ಲೋಕ. ಮಹಾಭಾರತದ ಎರಡು ಪಾತ್ರಗಳು ಒಂದಾಗಿ ತಮಿಳುನಾಡಿನ ಜನಪ್ರಿಯ ಜಾತ್ರೆಯಾಯಿತೋ? ಅಥವಾ ತಮಿಳು ನಾಡಿನ ಜಾತ್ರೆಯನ್ನು ನೋಡಿದ ವ್ಯಾಸರು ಅರವನ್ ಪಾತ್ರವನ್ನು ಇರಾವಂತ ಮತ್ತು ಬರ್ಬರೀಕರಾಗಿ ಒಡೆದರೋ ಹೇಳುವುದು ಹೇಗೆ? ಸವದತ್ತಿ ಎಲ್ಲಮ್ಮ, ಕುಮ್ಮಟದ ಕುಮಾರ ರಾಮ ಜಾತ್ರೆಗಳು ಅರವನ್ ಜಾತ್ರೆಗಳೊಂದಿಗೆ ಹೊಂದಿರುವ ಸಮಾನ ಮತ್ತು ಭಿನ್ನ ಅಂಶಗಳನ್ನು ವಿವರಿಸಿಕೊಳ್ಳುವುದು ಹೇಗೆ?
ಹೊಸತಲೆಮಾರಿನ ಜನಪದ ವಿದ್ವಾಂಸರು ಈ ಕುರಿತಾದ ತೌಲನಿಕ ಅಧ್ಯಯನಗಳತ್ತ ಗಮನಹರಿಸಬೇಕಾದ್ದು ಇಂದಿನ ಅಗತ್ಯಗಳಲ್ಲಿ ಒಂದು. 

ಕಾಮೆಂಟ್‌ಗಳಿಲ್ಲ: