ಮಂಗಳವಾರ, ನವೆಂಬರ್ 29, 2011

ಹಲಗೆ ವಾದ್ಯಕ್ಕೆ ಗತ್ತು ನೀಡುವ ತಳವಾರ ಹನುಮಂತಪ್ಪ




-ಸಿದ್ಧರಾಮ ಹಿರೇಮಠ.


ಕುಣಿಯುವ ಹುಮ್ಮಸ್ಸು ನೀಡು ಸಾಂಪ್ರದಾಯಿಕ ವಾದ್ಯಗಳಲ್ಲಿ ಹಲಗೆ ವಾದ್ಯವೂ ಒಂದು. ಚರ್ಮದಿಂದ ಸಿದ್ಧಪಡಿಸಿ, ಎರಡು ತೆಳು ಬಿದಿರಿನೊಂದಿಗೆ ಹಲಗೆಯನ್ನು ಬಾರಿಸತೊಡಗಿದರೆ ಎಂತಹವರಿಗೂ ಕುಣಿಯುವ ಹುಮ್ಮಸ್ಸು ಮೂಡಿಬಿಡುತ್ತದೆ. ಅದನ್ನೇ ತಂಡ ಕಟ್ಟಿಕೊಂಡು, ಅದಕ್ಕೊಂದು ಗತ್ತು ಮೂಡಿಸುತ್ತಿರುವವರಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯಲ್ಲಿರುವ ಹನುಮಂತಪ್ಪ ಒಬ್ಬರಾಗಿದ್ದಾರೆ. ಇವರಿಗೆ ಪ್ರೋತ್ಸಾಹ ನೀಡಿ ಮಾರ್ಗದರ್ಶನ ನೀಡುತ್ತಿರುವವರು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬ್ಯಾಳಿ ವಿಜಯಕುಮಾರಗೌಡ.


ವಂಶಪಾರಂಪರ್ಯವಾಗಿ ಹಲಗೆ ವಾದ್ಯವನ್ನು ನುಡಿಸುತ್ತಿರುವ ತಳವಾರ ಹನುಮಂತಪ್ಪನವರಿಗೆ ಗುರುಗಳೆಂದರೆ ಸಾರೆಪ್ಪರ ತಿಂದಪ್ಪ, ದುರುಗಪ್ಪ, ಸಾಲುಮನಿ ಮೂಗಪ್ಪ, ಬಿ.ಮರಿಯಪ್ಪ, ಉಚ್ಚಂಗಪ್ಪನವರಂತಹ ಹಿರಿಯರು ಹಲಗೆ ವಾದ್ಯವನ್ನು ನುಡಿಸುವುದನ್ನು ಕಲಿಸಿದರು. ದೇಸಿ ವಾದ್ಯವಾಗಿರುವ ಹಲಗೆ ಎಲ್ಲ ಕಾಲಕ್ಕೂ ಸೈ ಎನಿಸಿಕೊಂಡಿರುವಂತಹದು. ಮೊಹರಂ ಕುಣಿತದಿಂದ ಹೋಳಿ ಹುಣ್ಣಿಮೆಯ ಮೆರವಣಿಗೆಯವರೆಗೂ ಪಡ್ಡೆಗಳಿಗೆ ಥಟ್ಟನೆ ನೆನಪಾಗುವುದೇ ಹಲಗೆ ವಾದ್ಯ. ಹಲಗೆ ಒಂದೇ ಇರಲಿ, ಹತ್ತೇ ಇರಲಿ ಕುಣಿತ ಆರಂಭಗೊಂಡುಬಿಡುತ್ತದೆ.

ಇಂತಹ ವಾದ್ಯಕ್ಕೆ ಜಾನಪದ ಕಲೆಯ ರೀತಿಯಲ್ಲಿಯೇ ಅದಕ್ಕೊಂದು ಸ್ಥಾನ ದೊರಕಿಸಿಕೊಡಬೇಕೆಂದು ಹನುಮಂತಪ್ಪ ೨೦ ವರ್ಷಗಳ ಹಿಂದೆಯೇ ತನ್ನಂತಯೇ ಇತರ ೮ ಜನರ ತಂಡವನ್ನು ಕಟ್ಟಿದರು. ಹೀಗೆ ಕಟ್ಟಿದ ತಂಡಕ್ಕೆ ಶ್ರೀ ಮದಗಾಂಬಿಕಾ ಜಾನಪದ ಹಲಗೆ ವಾದ್ಯ ತಂಡವೆಂಬ ಹೆಸರು ಕೊಟ್ಟು, ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ೨೦೦೬ರಲ್ಲಿ ಬಳ್ಳಾರಿಯಲ್ಲಿ ಏರ್ಪಡಿಸಲಾಗಿದ್ದ ಕನ್ನಡ ಸುವರ್ಣ ಸಾಂಸ್ಕೃತಿಕ ದಿಬ್ಬಣ, ಕನಕ ಜಯಂತಿ, ಹೊಸಪೇಟೆ, ಗಡಿಭಾಗವಾದ ಡಿ.ಹಿರೇಹಾಳ, ಚಿತ್ರದುರ್ಗದ ಶರಣರ ಮೇಳ, ಉಜ್ಜಯಿನಿ ರಥೋತ್ಸವ, ಕೊಟ್ಟೂರಿನ ರಥೋತ್ಸವ ಹೀಗೆ ಹಲವಾರು ರಥೋತ್ಸವ, ಕಾರ್ಯಕ್ರಮಗಳಲ್ಲಿ ತಮ್ಮ ತಂಡದ ಮೂಲಕ ಕೌಶಲ್ಯ ಮೆರೆದಿದ್ದಾರೆ. ಜಾನಪದ ಗಾಯಕ ಬಾನಂದೂರು ಕೆಂಪಯ್ಯನವರಿಂದಲೂ ಸೈ ಎನಿಸಿಕೊಂಡ ತಂಡ ಇವರದು.

೨೦೦೫ರಲ್ಲಿ ಹೊಸಪೇಟೆ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಗುರುವಂದನಾ ಮಹೋತ್ಸವದಲ್ಲಿ ಸೇವಾ ಪ್ರಶಸ್ತಿಯನ್ನು ತಂಡ ಪಡೆದುಕೊಂಡಿದೆ. ವಿವಿಧ ಸಂದರ್ಭಗಳಲ್ಲಿ ಪ್ರಶಂಸಾ ಪತ್ರಗಳನ್ನೂ ತಂಡ ಪಡೆದಿದೆ. ಹನುಮಂತಪ್ಪನವರ ತಂಡದಲ್ಲಿ ಪೂಜಾರ ಗಂಗಪ್ಪ, ಹನುಮಂತಪ್ಪ, ದುರುಗಪ್ಪ, ಮದರಾಸ ಬಸಪ್ಪ, ಮೈಲಪ್ಪರ ದುರುಗಪ್ಪ, ಜೆ.ಹುಚ್ಚಂಗಪ್ಪ, ದಂಡೆಪ್ಪರ ಅಂಜಿನಪ್ಪ, ಬೇವಿನಮರದ ಬಸಪ್ಪ ಇದ್ದಾರೆ. ಈ ತಂಡದಲ್ಲಿ ತರುಣರೂ ಇದ್ದಾರೆ.

ತಂಡದ ನಾಯಕತ್ವವನ್ನು ವಹಿಸಿರುವ ಹನುಮಂತಪ್ಪನವರಿಗೆ ಇದೀಗ ೬೫ರ ಹರೆಯ. ಏಕೆಂದರೆ ಯಾವುದೇ ಯುವಕನಿಗೂ ಕಡಿಮೆ ಇಲ್ಲದಂತೆ ಹನುಮಂತಪ್ಪ ಬಿಡುವಿಲ್ಲದಂತೆ ಹಲಗೆಯನ್ನು ನುಡಿಸುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಈ ತಂಡಕ್ಕೆ ಮಾನ್ಯತೆ ನೀಡಿ ಕಾರ್ಯಕ್ರಮಗಳಿಗೆ ಅವಕಾಶ ನೀಡಿದೆ. ಈ ತಂಡಕ್ಕೆ ವಸ್ತ್ರಭೂಷಣ, ವಾದ್ಯ ಪರಿಕರಗಳ ಅವಶ್ಯಕತೆಯಿದೆ. ಅವೆಲ್ಲವೂ ದೊರೆತಲ್ಲಿ ತಂಡ ಮತ್ತಷ್ಟು ಉತ್ಸಾಹದಿಂದ ಕಾರ್ಯಕ್ರಮಗಳನ್ನು ಒದಗಿಸುತ್ತದೆ. ಹನುಮಂತಪ್ಪನವರ ಹಲಗೆ ವಾದ್ಯ ತಂಡವನ್ನು ಸಂಪರ್ಕಿಸಲು ಬ್ಯಾಳಿ ವಿಜಯಕುಮಾರಗೌಡರ ಮೊಬೈಲ್ ಸಂ.೯೪೪೯೬೨೨೭೦೭ಗೆ ಸಂಪರ್ಕಿಸಬಹುದಾಗಿದೆ.

1 ಕಾಮೆಂಟ್‌:

siddaraju ಹೇಳಿದರು...

halage vAdyavannu mysooru Baagadalli tamate endoo kareyuttaare. ee tamate kaleyalli 64 vidhagaLive. 1996ralli karnataka rajya Adijambava Sangadhindha ondhu samaveshavannu nadesiddevu. innu bahalashtu janarige ee kaleyannu kalisi ivaru olleya kalavidarendhu sarkaaradinda manyathe kodisabekagide.

c.siddaraju, adyaksharu
karnaataka raajya aadijambava sangha, 26, 13-E- cross, agrahara daasarahalli, bengalooru-560 079. ph:9448568838