ಗುರುವಾರ, ಮಾರ್ಚ್ 22, 2012

ಜಾನಪದ ವಿಶ್ವವಿದ್ಯಾಲಯದ ಉತ್ಸಾಹ ಹೆಚ್ಚಿಸಿದ ಬಜೆಟ್

-ಅರುಣ್ ಜೋಳದಕೂಡ್ಲಿಗಿ


ಹಲವು ಆಂತರಿಕ ಬಿಕ್ಕಟ್ಟುಗಳ ಮಧ್ಯೆಯೇ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಕೆಲವು ಮಿತಿಗಳ ನಡುವೆಯೂ ಜನಪ್ರಿಯ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ವಿಶೇಷವಾಗಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ೭.೫ ಕೋಟಿಯನ್ನು ಮೀಸಲಿಟ್ಟದ್ದು ವರದಿಯಾಗಿದೆ. ಜಾನಪದ ವಿವಿ ಈಗಷ್ಟೆ ಉದ್ಘಾಟನೆಯಾಗಬೇಕಿದೆ. ಆರಂಭಿಕ ಕೆಲಸಗಳಿಗೆ ಚಾಲನೆ ನೀಡಬೇಕಿದೆ. ಹಾಗಾಗಿ ಜಾನಪದ ವಿವಿಗೆ ಅಧಿಕ ಹಣದ ಅಗತ್ಯವಿತ್ತು. ಈಗ ತೋರಿದ ಬಜೆಟ್ ಒಲವು, ಜಾನಪದ ವಿವಿಯ ಆರಂಬಿಕ ಕೆಲಸಗಳಿಗೆ ಉತ್ಸಾಹವನ್ನು ಹೆಚ್ಚಿಸಿದೆ.


ಕನ್ನಡ ಜಾನಪದ ಬ್ಲಾಗ್ ಜಾನಪದ ವಿವಿಯ ಕುಲಪತಿಗಳಾದ ಪ್ರೊ. ಅಂಬಳಿಕೆ ಹಿರಿಯಣ್ಣ ಅವರನ್ನು ಮಾತನಾಡಿಸಿದಾಗ, ಬಜೆಟ್‌ನ ಬಗ್ಗೆ ಮತ್ತು ವಿಶ್ವವಿದ್ಯಾಲಯದ ಕೆಲಸಗಳ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ:

‘ಅತ್ಯವಾದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು, ಶಿಲಾನ್ಯಾಸ ನೆರವೇರಿಸಿ ಕೆಲಸ ಕಾರ್ಯವನ್ನು ಆರಂಭಿಸಲು ಸರಕಾರದ ಅನುದಾನದ ಅಗತ್ಯವಿತ್ತು. ಗೊಟಗೋಡಿಯಲ್ಲಿ ಈಗಿರುವ ಕಟ್ಟಡ ಬಾಡಿಗೆ ಪಡೆದದ್ದು. ನಾವದನ್ನು ಬಿಟ್ಟುಕೊಡಬೇಕಾಗುತ್ತೆ. ಯುಜಿಸಿ ಮನ್ನಣೆ ಪಡೆಯಲು ವಿಶ್ವವಿದ್ಯಾಲಯದ್ದೇ ಆದ ಜಾಗ, ಸ್ವಂತ ಕಟ್ಟಡ, ಅಧ್ಯಾಪಕ ವರ್ಗ, ಸಿಬ್ಬಂದಿ, ಯೋಜನೆಗಳು, ಸುಸಜ್ಜಿತ ಗ್ರಂಥಾಲಯ ಇರಲೇಬೇಕು. ಇವೆಲ್ಲವನ್ನು ಒದಗಿಸಿಕೊಳ್ಳಲು ನಮಗೆ ಹಣಕಾಸಿನ ನೆರವು ಬೇಕೇ ಬೇಕು. ಈಗ ಕೊಟ್ಟಿರುವ ಹಣದಲ್ಲಿ ಆರಂಭಿಕ ಕೆಲಸಗಳನ್ನು ಕೈಗೊಳ್ಳಲು ಸಹಕಾರಿಯಾಗಿದೆ. ಬಹುಶಃ ಕಟ್ಟಡಗಳಿಗೆ ಶಿಲಾನ್ಯಾಸ ನೆರವೇರಿಸಬಹುದು. ಇದಕ್ಕೆ ಪೂರಕವಾದ ಯೋಜನೆಯನ್ನು ರೂಪಿಸಿದಿವಿ. ಭೂಮಿ ನಮ್ಮ ಹೆಸರಿಗೆ ಬಂದ ಮೇಲೆ ಸ್ವಂತ ಕಟ್ಟಡದ ಕೆಲಸಗಳು ಆರಂಭವಾಗ್ತವೆ. ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕ ಮೇಲೆ ಭೂಮಿ ವಿವಿಯ ಸ್ವಂತಕ್ಕೆ ವರ್ಗವಾಗುತ್ತದೆ. ಈ ಪ್ರಕ್ರಿಯೆ ಕೊನೆ ಹಂತದಲ್ಲಿದೆ.

ನಾವು ವಿಶ್ವವಿದ್ಯಾಲಯದಿಂದ ಮೊದಲ ಕೆಲಸಗಳಿಗಾಗಿ ನಲವತ್ತು ಕೋಟಿಗೆ ಪ್ರಸ್ತಾವ ಸಲ್ಲಿಸಿದ್ದೆವು. ಈಗ ಏಳುವರಿ ಕೋಟಿ ಕೊಟ್ಟಿದಾರೆ, ಹಂತ ಹಂತವಾಗಿ ನಮ್ಮ ಯೋಜನೆಗಳ ಕೆಲಸಗಳನ್ನು ಮಾಡಬೇಕಾಗುತ್ತದೆ. ಸರಕಾರದ ಸಹಕಾರ ತುಂಬಾ ಚೆನ್ನಾಗಿದೆ. ಮುಂದಿನ ಯೋಜನೆಗಳಿಗೂ ಹಣ ಕೊಡುತ್ತಾರೆ, ಆದರೆ ಅದಕ್ಕೆ ನಾವು ಅಪ್ರೋಚ್ ಮಾಡಬೇಕು ಅಷ್ಟೆ. ಈಗ ಕೊಟ್ಟಿರುವ ಹಣ ಯೋಜನೆಯ ಭಾಬ್ತೋ, ಯೋಜನೇತರ ಬಾಬ್ತೋ ಇನ್ನು ಸರಿಯಾದ ಮಾಹಿತಿ ಸಿಕ್ಕಿಲ್ಲ. ಬಜೆಟ್‌ನಲ್ಲಿ ಹಣ ನೀಡಿದ ಕಾರಣ ಜಾನಪದ ವಿಶ್ವವಿದ್ಯಾಲಯ ಸರಕಾರವನ್ನು ಅಭಿನಂದಿಸುತ್ತದೆ" ಎನ್ನುತ್ತಾರೆ.


ಈ ವಿಷಯ ಕುರಿತಂತೆ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊ.ರು. ಚನ್ನಬಸಪ್ಪ ಅವರು ಪ್ರತಿಕ್ರಿಯಿಸುತ್ತಾ
" ಈಗ ಬಜೆಟ್‌ನಲ್ಲಿ ನೀಡಿದ ಹಣ ಜಾನಪದ ವಿವಿಯ ಆರಂಭಿಕ ಕೆಲಸಕ್ಕೆ ಒಳ್ಳೆಯದೇ ಆಗಿದೆ. ಇದು ಸರಕಾರದ ಆಶಾದಾಯಕ ಪ್ರತಿಕ್ರಿಯೆ. ಈ ಅನುದಾನದಲ್ಲಿ ಆಧ್ಯತೆಯ ಮೇರೆಗೆ ಕೆಲಸ ಮಾಡುತ್ತಾ ಹೋಗಬೇಕು. ಬೇರೆ ಬೇರೆ ಅಕಾಡೆಮಿಗಳ ಜತೆಯೂ ಸಹಕಾರ ಪಡೆದೂ ಕೆಲಸ ಮಾಡಬಹುದಾಗಿದೆ. ಮುಂದೆ ಪ್ರಾಜೆಕ್ಟ್‌ಗಳ ಪ್ರಸ್ತಾವ ಸಲ್ಲಿಸಿ ಹಣ ಪಡೆಯೋದಕ್ಕೂ ಅವಕಾಶವಿದೆ. ಯುವಕರ ಕುರಿತು ಏನಾದರೂ ಮಾಡುವುದಿದ್ದರೆ, ಯುವಜನಸೇವಾ ಇವರಿಂದ ಹಣ ಪಡೀಬಹುದು.

ಈಗ ಜಾನಪದ ವಿವಿ ಕೆಲಸ ಚೆನ್ನಾಗಿ ನಡೀತಿದೆ, ಕೋರ್ಸ ಆರಂಭಿಸೋಕೆ ಸಿಲಬಸ್ ಮಾಡ್ತಿದಾರೆ, ಮೊನ್ನೆ ನಲವತ್ತು ಜನ ಜಾನಪದ ವಿದ್ವಾಂಸರು ಬಂದು ಈ ಕುರಿತು ಚರ್ಚೆಯನ್ನು ಮಾಡಿದ್ರು. ಈಗ ಸೆನೆಟ್ಟೂ, ಸಿಂಡಿಕೇಟು, ಇಂಥವೆಲ್ಲಾ ಆಗಿಬಿಟ್ರೆ, ಡಿಪಾರ್ಟಮೆಂಟು ಆರಂಭಿಸೋದು, ಮುಂತಾದ ಕೆಲಸಗಳು ಬೇಗ ಆಗ್ತಾವೆ. ಅಧಿಕೃತವಾಗಿ ಒಂದು ಉದ್ಘಾಟನೆ ಅಂತ ಆದ್ರೆ, ಚಟುವಟಿಕೆಗಳು ಇನ್ನಷ್ಟು ಚುರುಕಾಗ್ತಾವೆ. ಗವರ್ನರ್ ಡೇಟು ಸಿಕ್ರೆ ಆದಷ್ಟು ಬೇಗ ಉದ್ಘಾಟನೆ ಆಗುತ್ತೆ ಅಂತ ಕುಲಪತಿಗಳು ಮಾತಾಡಿದ್ರು, ಇದು ಹೊಸ ಯುನಿವರ್ಸಿಟಿ ಆಗಿರೋದ್ರಿಂದ, ತೀವ್ರಗತಿಯಲ್ಲಿ ಕೆಲಸಗಳು ನಡೀಬೇಕಾದ್ರಿಂದ ಸರಕಾರ ಇನ್ನು ಹೆಚ್ಚಿನ ಅನುದಾನವನ್ನು ನೆರವನ್ನು ಕೊಡಬೇಕಾಗುತ್ತೆ" ಎಂದು ಹೇಳಿದರು.

ಬಜೆಟ್‌ನಿಂದ ಜಾನಪದ ವಿಶ್ವವಿದ್ಯಾಲಯಕ್ಕೆ ಆರಂಭಿಕ ಕೆಲಸಕ್ಕೆ ಪ್ರೋತ್ಸಾಹ ಸಿಕ್ಕಂತಾಗಿದೆ. ಈ ನೆಲೆಯಲ್ಲಿ ವಿವಿ ತನ್ನ ಕೆಲಸ ಕಾರ್ಯಗಳನ್ನು ಚುರುಕಿನಿಂದ ಆರಂಭಿಸುವ ಅಗತ್ಯವೂ ಇದೆ. ಜಾನಪದ ವಿವಿಯ ಕೆಲಸಗಳ ಬಗ್ಗೆ ನಾಡಿನ ನಾಡಿನಾಚೆಯ ಜನರ ಅತೀವ ಕತೂಹಲವಂತೂ ಇದ್ದೇ ಇದೆ. ಇದು ಕರ್ನಾಟಕದ ಎಲ್ಲಾ ವಿವಿಗಳಿಗಿಂತಲೂ ಭಿನ್ನವಾಗಿದ್ದರಿಂದ ಇಂತಹ ಕುತೂಹಲ ಸಹಜವೂ ಆಗಿದೆ. ಕನ್ನಡ ಜಾನಪದ ಬ್ಲಾಗ್ ಕೂಡ ಅಂತಹ ವಿಭಿನ್ನ ಕೆಲಸಗಳನ್ನು ಎದುರು ನೋಡುತ್ತದೆ. ಹಾಗೆಯೇ ಜಾನಪದ ವಿವಿಯ ಎಲ್ಲಾ ಒಳ್ಳೆಯ ಕೆಲಸಗಳನ್ನು ಅಂತರ್ಜಾಲದಲ್ಲಿ ವಿವರವಾಗಿ ಪ್ರಕಟಿಸಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಂಗಾತಿಯೂ ಆಗುತ್ತದೆ. ಇದು ಹೊಸ ವಿವಿಯಾಗಿದ್ದರಿಂದ ಸರಕಾರವು ಇದಕ್ಕೆ ಇನ್ನಷ್ಟು ಹೆಚ್ಚಿನ ನೆರವು ಪ್ರೋತ್ಸಾಹ ನೀಡಬೇಕಾಗಿದೆ.

ಕಾಮೆಂಟ್‌ಗಳಿಲ್ಲ: