ಭಾನುವಾರ, ಮಾರ್ಚ್ 4, 2012

ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಧಾನ ೨೦೧೧


ಚಿತ್ರದುರ್ಗದ ತರಾಸು ರಂಗಮಂದಿರ ಮಾರ್ಚ ೩ರಂದು ಅಕ್ಷರಶಃ ಜಾನಪದ ಕಲಾವಿದರಿಂದ ಗಿಜುಗುಡುತ್ತಿತ್ತು. ರಂಗಮಂದಿರದ ಹೊರ ಆವರಣದಲ್ಲಿ ಮಹಿಳಾ ಡೊಳ್ಳು ಕಲಾವಿದರು ಪ್ರದರ್ಶನ ನೀಡಲು ತಯಾರಿ ಮಾಡಿಕೊಳ್ಳುತ್ತಿದ್ದರು. ಇನ್ನು ಹಲಗೆ ಮೇಳದ ಮಹಿಳೆಯರು ಹಲಗೆ ಬಾರಿಸಲು ಉತ್ಸುಕರಾಗಿದ್ದರು. ಈ ಬಗೆಯ ಮಹಿಳಾ ತಂಡಗಳು, ಮಹಿಳಾ ದಿನದ ತಿಂಗಳಿಗೆ ರೂಪಕದಂತೆ ಇದ್ದವು. ಬೆಳಗ್ಗೆ ಹನ್ನೊಂದರಿಂದ ಜಾನಪದ ಅಕಾಡೆಮಿ ಪುಸ್ತಕ ಬಹುಮಾನ ಪಡೆದ ಮೀರಸಾಬಿಹಳ್ಳಿ ಶಿವಣ್ಣ, ಮತ್ತು ಪ್ರೊ.ಸೂಗಯ್ಯ ಹಿರೇಮಠ ಅವರ ಪುಸ್ತಕಗಳ ಕುರಿತ ವಿಚಾರ ಸಂಕಿರಣವಿತ್ತು. ನಂತರ ಅಕಾಡೆಮಿ ರೂಪಿಸಿದ ಜನಪದ ಕಲಾವಿದರ, ಜಾನಪದ ತಜ್ಞರ ಸಾಕ್ಷ್ಯಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಇದು ಜಾನಪದ ಅಕಾಡೆಮಿಯ ಒಂದು ಒಳ್ಳೆಯ ಕೆಲಸ.
ನಂತರ ಸಂಜೆ ಐದು ಗಂಟೆಗೆ ಸರಿಯಾಗಿ ಜಾನಪದ ಕಲಾವಿದರ ಪ್ರಶಸ್ತಿ ಪ್ರಾಧಾನ ಶುರುವಾಯಿತು. ಮೊದಲಿಗೆ ಪ್ರಶಸ್ತಿ ಪಡೆದ ಆದರೆ ಸ್ವೀಕರಿಸುವ ಮುಂಚೆಯೇ ನಮ್ಮನ್ನಗಲಿದ ಹಗಲು ವೇಷದ ಕೆ. ವೀರಣ್ಣ ಅವರಿಗಾಗಿ ಮೌನಾಚರಣೆ ಮಾಡಲಾಯಿತು. ನಂತರ ನಾಡಿದ ೩೦ ಜಾನಪದ ಕಲಾವಿದರು ಪ್ರಶಸ್ತಿಯನ್ನು ಸ್ವೀಕರಿಸಿದರು.

ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಜನಪದ ತಜ್ಞರಿಗೆ ಮತ್ತು ಕಲಾವಿದರಿಗೆ ನೀಡುವ ಪ್ರಶಸ್ತಿ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಎಂ. ಕಾರಜೋಳ ಭರವಸೆ ನೀಡಿದರು.ಜಾನಪದ ತಜ್ಞರಿಗೆ ನೀಡುವ ಪ್ರಶಸ್ತಿ ಮೊತ್ತವನ್ನು ರೂ.10ರಿಂದ 20 ಸಾವಿರಕ್ಕೆ ಹೆಚ್ಚಿಸಲಾಗುವುದು. ಅದೇ ರೀತಿಯಲ್ಲಿ ಕಲಾವಿದರಿಗೆ ಪ್ರಸ್ತುತ ನೀಡುತ್ತಿರುವ ರೂ. 5 ಸಾವಿರ ಮೊತ್ತವನ್ನು 10 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.


ಅಕಾಡೆಮಿ ಅಧ್ಯಕ್ಷರಿಗೆ ಪ್ರವಾಸ ಭತ್ಯೆಯನ್ನು 10 ಸಾವಿರ ರೂಪಾಯಿ ನೀಡಲಾಗುವುದು. ಜತೆಗೆ, ಇನ್ನೂ 2,500 ಕಲಾವಿದರಿಗೆ ಮಾಸಾಶನ ನೀಡಲಾಗುವುದು. ಕಲಾವಿದರಿಗಾಗಿ ರೂಪಿಸಿರುವ ಕ್ಷೇಮನಿಧಿಗೆ ಸರ್ಕಾರ ರೂ 25 ಲಕ್ಷ ನೀಡಲಿದೆ. ಜತೆಗೆ, ಅಕಾಡೆಮಿಗೆ 1 ಕೋಟಿ ನೀಡಲು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಮಾತನಾಡಿದರು.ಸಂಸದ ಜನಾರ್ದನಸ್ವಾಮಿ, ಶಾಸಕ ಎಸ್.ಕೆ. ಬಸವರಾಜನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಿ. ಬಸವರಾಜು ಮತ್ತಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ: