ಬುಧವಾರ, ಡಿಸೆಂಬರ್ 22, 2010

ರಹಮತ್ ತರೀಕೆರೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂಸ್ಕೃತಿ ಚಿಂತನೆಗೆ ಸಂದ ಗೌರವ

ರಹಮತ್ ತರೀಕೆರೆ ಅವರು ಕನ್ನಡದ ಆಲೋಚನ ಕ್ರಮವನ್ನು ಭಿನ್ನವಾಗಿ ಕಟ್ಟುತ್ತಿರುವವರಲ್ಲಿ ಪ್ರಮುಖರು. ಅವರ ಒಟ್ಟೂ ಆಲೋಚನೆಯೊಳಗೆ ಪ್ರತಿಸಂಸ್ಕೃತಿಯ ಹುಡುಕಾಟದ ಎಳೆ ತುಂಬಾ ಸೂಕ್ಷ್ಮವಾಗಿ ಬೆರೆತಿದೆ. ಹಾಗೆಯೇ ಸಂಸ್ಕೃತಿಯ ಸಂಕರಶೀಲತೆಯನ್ನು ತುಂಬಾ ಆಸ್ಥೆಯಿಂದ ಸೂಕ್ಷ್ಮವಾಗಿ ಗಮನಿಸಿ, ಅದರೆಲ್ಲಾ ಆಯಾಮಗಳ ಮೂಲಕ ಸಾಂಸ್ಕೃತಿಕ ಅಧ್ಯಯನವನ್ನು ರೂಪಿಸುತ್ತಿರುವವರು. ಕರ್ನಾಟಕದಲ್ಲಿ ಸಮಾಜ ವಿಜ್ಞಾನದ ಹಲವು ಜ್ಞಾನಶಾಖೆಗಳು ಬೇರೆ ಬೇರೆ ಕವಲುಗಳಲ್ಲಿ ನಡೆಯುತ್ತಿರುವಾಗ, ಈ ಎಲ್ಲವುಗಳ ಕೊಡು ಕೊಳ್ಳುವಿಕೆಯ ಎಳೆಗಳನ್ನು ಹಿಡಿದು, ಅವುಗಳ ನಡುವೆ ಸಂಬಂಧವನ್ನು ಬೆಸೆದು ಬಹುಶಿಸ್ತೀಯ ಅಧ್ಯಯನದ ತಾತ್ವಿಕತೆಯನ್ನು ತುಂಬಾ ಜತನದಿಂದ ರೂಪಿಸುತ್ತಿರುವ ಕನ್ನಡದ ಮಹತ್ವದ ಲೇಖಕರು. ಕನ್ನಡದ್ದೇ ಆದ ಚಿಂತನಾ ಮಾದರಿಯನ್ನು ವರ್ತಮಾನದ ಎಚ್ಚರದ ಮೂಲಕ ಕಟ್ಟುತ್ತಿರುವ ಕಾರಣಕ್ಕೆ ತರಿಕೆರೆ ಅವರು ನಮ್ಮ ಕಾಲದಲ್ಲಿ ಮುಖ್ಯರಾಗುತ್ತಾರೆ. ಇವರ ಈ ಆಲೋಚನ ವಿನ್ಯಾಸ ದೇಸಿ ಚಿಂತನೆಗೆ ಹೊಸ ಹೊಳಹುಗಳನ್ನು ನೀಡುತ್ತಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಈ ನಾಡಿನ ತಳಸಮುದಾಯಗಳ, ನೊಂದವರ, ಅಶಕ್ತರ ದ್ವನಿ ಅವರ ಬರಹ ಮತ್ತು ಬದುಕಿನ ಕ್ರಮದಲ್ಲಿ ಬೆರೆತಿದೆ. ಹಾಗಾಗಿ ಈ ಕಾಲದಲ್ಲಿ ತಮ್ಮ ಬರಹದೊಳಗೆ ನಿರಂತರವಾಗಿ ಚಳುವಳಿಯ ತಾತ್ವಿಕತೆಯ ಬೀಜಗಳನ್ನು ಬಿತ್ತುತ್ತಿದ್ದಾರೆ. ಕರ್ನಾಟಕದಾದ್ಯಾಂತ ತಿರುಗಾಡಿ, ಜನಬದುಕಿನ ತಳಮಳಗಳನ್ನೂ, ಚೈತನ್ಯವನ್ನೂ ಗುರುತಿಸುತ್ತಾ ಬರಹ ಮಾಡುತ್ತಿರುವವರಲ್ಲಿ ಇವರು ಪ್ರಮುಖರು. ತರಿಕೆರೆ ಅವರು ಶಂಬಾ ನಂತರದ ಸಾಂಸ್ಕೃತಿಕ ಅಧ್ಯಯನದ ಮಾದರಿಯನ್ನು ತುಂಬಾ ಅರ್ಥಪೂರ್ಣವಾಗಿ ಮುಂದುವರೆಸುತ್ತಿದ್ದಾರೆ ಮತ್ತು ಹೊಸ ಅರ್ಥಗಳನ್ನು ಹುಟ್ಟಿಸುತ್ತಿದ್ದಾರೆ. ಅಂತೆಯೇ ಕರ್ನಾಟಕದ ತುಂಬಾ ಅಪಾರ ಶಿಷ್ಯಬಳಗವನ್ನು ಹೊಂದಿದ ಇವರು, ಅವರೆಲ್ಲರೊಳಗೂ ಆರೋಗ್ಯಕರ ಓದುಗ, ಲೇಖಕ, ಚಿಂತಕರ ಹೊಸ ತಲೆಮಾರು ಹುಟ್ಟಲು ತುಂಬಾ ಪ್ರೇರಕ ಶಕ್ತಿಯಾಗಿದ್ದಾರೆ. ತರಿಕೆರೆ ಅವರ ಸಂಸ್ಕೃತಿ ಚಿಂತನೆಯ ದೊಡ್ಡ ಶಕ್ತಿ ಎಂದರೆ, ಜನಸಾಮಾನ್ಯರ ಜ್ಞಾನಲೋಕವನ್ನು ತಮ್ಮ ಆಲೋಚನೆಯಲ್ಲಿ ಒಳಗು ಮಾಡಿಕೊಂಡು ಆ ಮೂಲಕ ಸಂಸ್ಕೃತಿಯನ್ನು ವಿಶ್ಲೇಷಣೆಗೆ ಒಡ್ಡುತ್ತಿರುವುದು. ಕುವೆಂಪು ಅವರ ‘ಇಲ್ಲಿ ಯಾರೂ ಮುಖ್ಯರಲ್ಲ’ ಎನ್ನುವ ತಾತ್ವಿಕತೆ ತರೀಕೆರೆ ಅವರ ಚಿಂತನೆಯ ಆಳದ ಭಿತ್ತಿಯಾಗಿರುವುದು ಮುಖ್ಯವಾಗಿದೆ. ಅಂತೆಯೇ ಒಟ್ಟು ಆಲೋಚನೆಯಲ್ಲಿ ಅಧಿಕಾರದ ಬೇರೆ ಬೇರೆ ಬಗೆಯ ಚಲನೆಗಳನ್ನು ಗುರುತಿಸಿ ಅವುಗಳ ಅಪಾಯಗಳನ್ನು, ಮತ್ತು ಅವುಗಳನ್ನು ಮೀರಲು ಸಾದ್ಯವಾಗುವ ಪರ್ಯಾಯ ಆಲೋಚನೆಗಳನ್ನು ಮಂಡಿಸುತ್ತಿದ್ದಾರೆ. ಹಾಗಾಗಿ ಅವರ ಚಿಂತನೆಗಳಲ್ಲಿ ಸಾಂಸ್ಕೃತಿಕ ಪಲ್ಲಟಗಳ ಸೂಕ್ಷ್ಮಗಳನ್ನು ಹಿಡಿದಿಡಲು ಸಾದ್ಯವಾಗಿದೆ. ತರೀಕೆರೆ ಅವರ ‘ಕರ್ನಾಟಕದ ಸೂಫಿಗಳು’ ಮತ್ತು ‘ಕರ್ನಾಟಕದ ನಾಥಪಂಥ’ ದಂತಹ ಕೃತಿಗಳು ಕರ್ನಾಟಕವನ್ನು ಬೇರೆ ಬೇರೆ ದಿಕ್ಕಿನಿಂದ ನೋಡಲು ಒತ್ತಾಯಿಸುವಂತಹ ತುಂಬಾ ಸೂಕ್ಷ್ಮ ಅಧ್ಯಯನಗಳು. ಈಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನವಾಗಿರುವ ‘ಕತ್ತಿಯಂಚಿನ ದಾರಿ’ ಕನ್ನಡದ ವಿಮರ್ಶೆ ಮತ್ತು ಕನ್ನಡ ಪ್ರಜ್ಞೆಯು ಮೈಪಡೆದ ಹಲವು ದಾರಿಗಳನ್ನು ಅದರೆಲ್ಲಾ ಸೂಕ್ಷ್ಮಗಳೊಂದಿಗೆ ವಿಶ್ಲೇಷಣೆಗೆ ಒಡ್ಡುತ್ತದೆ. ಇಲ್ಲಿ ಸಾಂಸ್ಕೃತಿಕ ವಿಮರ್ಶೆಯೊಂದು ರೂಪುಗೊಳ್ಳುತ್ತಿರುವ ಗಟ್ಟಿ ನೆಲೆಗಳು ಗೋಚರಿಸುತ್ತಿವೆ. ಅದು ಅವರ ‘ಧರ್ಮ ಪರೀಕ್ಷೆ’ ಮತ್ತು ಇತ್ತೀಚಿನ ಅವರ ಕೃತಿ ‘ಚಿಂತನೆಯ ಪಾಡು’ ಗಳಲ್ಲಿ ಇನ್ನಷ್ಟು ಸ್ಪಷ್ಟತೆಯನ್ನು ಮತ್ತು ಪಕ್ವತೆಯನ್ನೂ ಕಂಡಿದೆ. ಈ ಪ್ರಶಸ್ತಿಯನ್ನು ಸಂಸ್ಕೃತಿ ಚಿಂತನೆ ಸಂದ ಗೌರವ ಎಂದು ಭಾವಿಸಬಹುದು. ಹಾಗೆಯೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಗೌರವ ಹೆಚ್ಚಿದಂತಾಗಿದೆ. ಈ ಹೊತ್ತಲ್ಲಿ ಕನ್ನಡದ ಮನಸ್ಸುಗಳು ತರೀಕೆರೆ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸೋಣ.

6 ಕಾಮೆಂಟ್‌ಗಳು:

Sathish G T ಹೇಳಿದರು...

Arun, a good article describing the talent of rahmat tarikere sir. many a times i and nisar felt that rahmat tarikere's works deserve attention across the globe. someone should attempt to translate his works into english.
satish

Editor ಹೇಳಿದರು...

ಡಾ.ರಹಮತ್ ತರೀಕೆರೆಯವರಿಗೆ ಕೊಪ್ಪಳದ ಕವಿಸಮೂಹ ಮತ್ತು ಕನ್ನಡನೆಟ್.ಕಾಂ ಬಳಗದಿಂದ ಹಾರ್ದಿಕ ಶುಭಾಷಯಗಳು
- ಸಿರಾಜ್ ಬಿಸರಳ್ಳಿ
ಕೊಪ್ಪಳ

ಅನಾಮಧೇಯ ಹೇಳಿದರು...

arun tarikere mestra bagge tumbha gambheeravagi bareddeeri. avara barahada ella ayaamagaLannu suksmavagi hidididdeeri. tarikereyavarige abhinandanegalu.
-sudhakar

Unknown ಹೇಳಿದರು...

arun bahla chennagi moodi bandide lekhana trn

Unknown ಹೇಳಿದರು...

naadina samskrutiya bagge tarikere avara avirata kaayakake sannda prashasti idu

Ravindra Batageri ಹೇಳಿದರು...

aruNaravave tarikeriyavaranna parichayisida pariyu, nanage tarikeriyavar kaaLajipurvaka lekhana odadanteye anubhavaniditu,nanage rahamat sri tumba mukhya agodu avara kaLajipurvak baravaNigeyindalene.nanu avara yaavude lekhana odidagalu nanage "hejjegurutu" kavanadalina kaLajiye nenapaagutte. saddya kannadada chintakarlli rahamat sir munchuNiyallidare. avara prati samshoodhana barahagaLu kannadadalli ondu hosaa vicharagaLanu huttihaakuva takata hondive.mattu avara prati hosaa samshoodhana madarigaLu ondu hosaatirskruta sangatigalnna mukhyaavaahinige taruttave (mukhyaavaahini yennuvadee illa ennuvadu bere maatu. bahutekaru ideyendu nambutiruvadarinda naanu baLaside aste). kannadada inthaha kriyaashila vyakige kendra saahityaa akademi prashasti sikkiruvuda aa prasatige sikka moullya. rahamata siabagge baradiddakke danyavaadagaLu.