ಮಂಗಳವಾರ, ಡಿಸೆಂಬರ್ 7, 2010

ಹಗಲು ವೇಷಗಾರರು: ಕಲೆ, ಬದುಕು ಮತ್ತು ವಾಸ್ತವ

ಕುತೂಹಲಕ್ಕೆ ಹಗಲುವೇಷಗಾರರು ಎನ್ನುವ ಪದವನ್ನು ಕೊಟ್ಟು ಗೂಗಲ್‌ನಲ್ಲಿ ಹುಡುಕಲು ಹೇಳಿದೆ. ಅಲ್ಲಿ ಬಂದ ನಾಲ್ಕೈದು ಪುಟಗಳ ಬಹುಪಾಲು ದಾಖಲುಗಳಲ್ಲಿ ರಾಜಕಾರಣಿಗಳನ್ನು ಹಗಲುವೇಷಗಾರರು ಎಂದು ಟೀಕಿಸಿದ ಉಲ್ಲೇಖಗಳೇ ಹೆಚ್ಚಾಗಿದ್ದವು. ಉಳಿದಂತೆ ಒಂದೆರಡು ಉಲ್ಲೇಖಗಳು ವೃತ್ತಿ ಕಲಾವಿದರಾದ ಹಗಲುವೇಷಗಾರರ ಬಗ್ಗೆ ಇದ್ದವು. ಇದು ಬಹುಶಃ ಹಗಲುವೇಷಗಾರರ ಸದ್ಯದ ಸ್ಥಿತಿಯನ್ನು ವಿವರಿಸಲು ಒಳ್ಳೆಯ ರೂಪಕ ಎಂದು ಭಾವಿಸುವೆ. ಕಾರಣ ಇಂದು ಜನಪದ ಕಲಾವಿದರಾದ ಹಗಲುವೇಷಗಾರರನ್ನು ಮೀರಿಸುವಂತಹ ಹಗಲುವೇಷಗಳ ಮುಖವಾಡಗಳನ್ನು ರಾಜಕಾರಣಿಗಳು, ಅಧಿಕಾರಿಗಳು ಹಾಕಿ ಸಾಮಾನ್ಯ ಜನರನ್ನು ಮರುಳುಗೊಳಿಸುತ್ತಿದ್ದಾರೆ, ಹಗಲು ದರೋಡೆ ಮಾಡುತ್ತಿದ್ದಾರೆ. ಹಾಗಾಗಿ ಹಗಲುವೇಷ ಎನ್ನುವ ಪದವೇ ನಕಾರಾತ್ಮಕ ಅರ್ಥವನ್ನು ಪಡೆದುಕೊಂಡುಬಿಟ್ಟಿದೆ. ಆದರೆ ನಿಜಕ್ಕೂ ಹಗಲುವೇಷವನ್ನು ವೃತ್ತಿಯನ್ನಾಗಿಸಿಕೊಂಡ ಒಂದು ಜನಸಮುದಾಯದ ಗುಂಪೇ ಕರ್ನಾಟಕದಲ್ಲಿದೆ. ಆದರೆ ಇವರ ವೇಷ ಮೋಸಗೊಳಿಸಲಿಕ್ಕಲ್ಲ, ಬದಲಾಗಿ ಜನರನ್ನು ರಂಜಿಸಿಲು ಮತ್ತು ಸಾಂಸ್ಕೃತಿಕ ಪರಂಪರೆಯ ಕುರುಹುಗಳನ್ನು ಕಾಪಾಡಲು. ಹಾಗಾಗಿ ನಾಟಕ ಕಲೆಯನ್ನು ಮನೆ ಮುಂದೆ ಕೊಂಡೊಯ್ದಿರುವುದು ಈ ಅಲೆಮಾರಿ ಸಮುದಾಯದ ಹೆಗ್ಗಳಿಕೆ. ಈ ಸಮುದಾಯ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ನಾಣ್ಯಾಪುರ, ಹೊಸಪೇಟೆ ತಾಲೂಕಿನ ರಾಮಸಾಗರ, ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕುದರಮೋತಿ, ವಟಪರವಿ ಮುಂತಾದ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ಮೂಲತಃ ಅಲೆಮಾರಿ ಸಮುದಾಯ. ಇವರ ಒಂದೊಂದು ಕುಟುಂಬಗಳು ಇಂತಿಷ್ಟು ಹಳ್ಳಿಗಳನ್ನು ಹಂಚಿಕೊಂಡಿರುತ್ತಾರೆ. ಆ ಹಳ್ಳಿಗಳಲ್ಲಿ ಏಳು ದಿನಗಳ ಕಾಲ ಬೇರೆ ಬೇರೆ ವೇಷ ಧರಿಸಿ, ಕೊನೆಯ ದಿನ ಇಂತಿಷ್ಟು ಎಂದು ವಂತಿಗೆಯನ್ನು ಧಾನ್ಯ, ಹಣ, ಬಟ್ಟೆ, ಜಾನುವಾರುಗಳ ರೂಪದಲ್ಲಿ ಪಡೆಯುತ್ತಾರೆ. ಇವರ ವೇಷಗಾರಿಕೆ ಮುಖ್ಯವಾಗಿ ರಾಮಾಯಣ, ಮಹಾಭಾರತದ ಉಪಕಥೆಗಳನ್ನು ಆಧರಿಸಿರುತ್ತವೆ. ಈ ಕಥನದ ನಿರೂಪಣೆಗಳಲ್ಲಿ ಇವರದೇ ಆದ ಸ್ಥಳೀಯ ಪಠ್ಯಗಳು ಸೇರಿರುತ್ತವೆ. ಇದು ರಾಮಾಯಣ, ಮಹಾಭಾರತದ ಅಧ್ಯಯನಕಾರರಿಗೆ ಒಂದು ಹೂಸ ಆಯಾಮವನ್ನು ಒದಗಿಸಬಲ್ಲದು. ಆಧುನಿಕ ಸಿನಿಮಾದ ಹಾಡುಗಳನ್ನು ಅವರದೇ ದಾಟಿಯಲ್ಲಿ ಹಾಡುತ್ತಾ ಈ ಕಾಲದವರೂ ಆಗುತ್ತಾರೆ. ಇವರು ವಾರದ ಕೊನೆಯ ದಿನ ವಂತಿಗೆಯನ್ನು ಎತ್ತುವಾಗ ಇಡೀ ಊರಿನ ಪ್ರತಿ ಮನೆಯವರಿಗೂ ‘ಗೌಡ್ರೆ ನಿಮ್ಮಾವ ನಾಲ್ಕು ಮನೆ ಕೈ ಎತ್ತಿ ಕೋಡೋ ಮನೆತನಗಳು..ನೀವಾ ಇಂಗಂದ್ರ ಹ್ಯಾಂಗ..’ಎನ್ನುತ್ತಿದ್ದರು. ಇದು ಊರಲ್ಲಿ ಗೌಡರ ಮನೆತನಕ್ಕೆ ಮಾತ್ರ ಸಲ್ಲುವ ಗೌರವ ನಮಗೂ ಸಲ್ಲಿತೆಂದು ಹಲವರು ತಮ್ಮ ತಮ್ಮ ಕೀಳಿರಿಮೆಯನ್ನು ಬಿಟ್ಟು ಬದುಕಿಗೆ ಹೊಸ ಉತ್ಸಾಹವನ್ನು ಪಡೆಯುತ್ತಿದ್ದರು. ಹೀಗೆ ಹಗಲುವೇಷಗಾರರ ಬದುಕು ಮತ್ತು ಕಲೆ ಈಗಲೂ ಚೂರೂ ಬದಲಾವಣೆ ಇಲ್ಲದೆ ಮುಂದುವರಿಯುತ್ತಿದೆ. ಇವರು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕುದರಮೋತಿ ಎನ್ನುವ ಗ್ರಾಮದಲ್ಲಿ ಎರಡು ವರ್ಷಕ್ಕೊಮ್ಮೆ ಮೊಹರಂ ಹಬ್ಬಕ್ಕೆ ಇಡೀ ಕರ್ನಾಟಕದ ಹಗಲುವೇಷಗಾರರು ಒಂದೆಡೆ ಸೇರುತ್ತಾರೆ. ಇಲ್ಲಿಯೇ ಅವರ ನ್ಯಾಯಪಂಚಾಯ್ತಿ, ವಧು ವರರ ಅನ್ವೇಷಣೆ, ಮದುವೆ, ಮುಂತಾದ ಆಚರಣೆಗಳು ನಡೆಯುತ್ತವೆ. ಅವರ ವೇಷಗಾರಿಕೆಗೆ ಬೇಕಾಗುವ ಬಣ್ಣ, ಸಂಗೀತದ ಪರಿಕರಗಳನ್ನೂ ಕೊಳ್ಳಲಾಗುತ್ತದೆ. ಈ ವರ್ಷ ಅಂದರೆ ಇದೇ ತಿಂಗಳ ಮೊಹರಂ ಕಡೇ ದಿನ ಡಿಸೆಂಬರ್ ೧೭ ರಂದು ಕುದರಮೋತಿಗೆ ಬೇಟಿ ನೀಡಿದರೆ ಇಡೀ ಕರ್ನಾಟಕದ ಹಗಲುವೇಷಗಾರರನ್ನು ಒಂದೆಡೆ ನೋಡಬಹುದಾಗಿದೆ. ಹಗಲುವೇಷಗಾರರು ಮೂಲತಃ ಅಲೆಮಾರಿ ಸಮುದಾಯ. ಇವರು ಒಂದೆಡೆ ನೆಲೆನಿಲ್ಲುವುದಿಲ್ಲ. ಈ ಕಾರಣವೇ ಬಹುತೇಕ ಹಗಲುವೇಷಗಾರರ ಹೊಸ ತಲೆಮಾರು ಶಿಕ್ಷಣಕ್ಕೆ ತೆರೆದುಕೊಳ್ಳುವುದಕ್ಕೆ ಕಡಿವಾಣ ಹಾಕಿದೆ. ಕರ್ನಾಟಕದಲ್ಲಿ ವೃತ್ತಿಕಲೆಯನ್ನು ಉಳಿಸಿಕೊಂಡು ಬರುತ್ತಿರುವವರಲ್ಲಿ ಇವರು ಪ್ರಮುಖರು. ಜನಪದ ಕಲೆಗಳು ನಶಿಸುತ್ತಿವೆ ಎಂದು ಹಲಬುವ ಜನಪದ ವಿದ್ವಾಂಸರಿಗೆ ಈ ಸಮುದಾಯ ಹೆಚ್ಚು ಸಂತೋಷವನ್ನು ಕೊಡಬಲ್ಲದು. ಆದರೆ ಈ ಸಮುದಾಯ ಶಿಕ್ಷಣಕ್ಕೆ ತೆರೆದುಕೊಂಡು ಆಧುನಿಕವಾಗಬೇಕೆಂಬ ಅಭಿವೃದ್ಧಿಪರ ಆಲೋಚನೆ ಮಾಡಿದಾಗ ಇದರ ಹಿಂದುಳಿಯುವಿಕೆಯ ಬಗ್ಗೆ ಆತಂಕವಾಗುತ್ತದೆ. ಯಾಕೆ ಹೀಗಾಗುತ್ತಿದೆ. ಇದು ಕೇವಲ ಹಗಲುವೇಷಗಾರರ ಸಮಸ್ಯೆಯಲ್ಲ, ಬಹುಪಾಲು ಅಲೆಮಾರಿ ಸಮುದಾಯಗಳ ಸಮಸ್ಯೆಯಾಗಿದೆ. ಈ ಎಲ್ಲಾ ಅಲೆಮಾರಿ ಸಮುದಾಯಗಳಿಗೆ ಅವರದೇ ನೆಲೆಯಲ್ಲಿ ಜಾಗ್ರತಗೊಳಿಸುವ ಅಗತ್ಯವಿದೆ. ಅವರ ಮಕ್ಕಳಾದರೂ ಶಿಕ್ಷಣಕ್ಕೆ ತೆರೆದುಕೊಳ್ಳುವಂತಹ ವಾತಾವರಣವನ್ನು ಸೃಷ್ಠಿಸಬೇಕಿದೆ. ಅಲೆಮಾರಿ ಸಮುದಾಯಗಳ ಅಭಿವೃದ್ಧಿಯ ಹೆಸರಲ್ಲಿ ಸರಕಾರದ ಹಣ ಅವ್ಯಯವಾಗುವುದೇನೂ ತಪ್ಪಿಲ್ಲ, ಆದರೆ ಅದು ಎಲ್ಲಿ ವ್ಯಯವಾಗುತ್ತಿದೆ? ಅದರ ಲಾಭಗಳನ್ನು ಪಡೆದುಕೊಂಡವರಾರು? ಇಂತಹ ಪ್ರಶ್ನೆಗಳನ್ನು ಕೇಳಿಕೊಂಡರೆ ಸಿಗುವ ಉತ್ತರ ಬ್ರಷ್ಟ ಸರಕಾರದತ್ತ ಕೈತೋರಿಸುತ್ತದೆ. ಇಂತಹ ಯೋಜನೆಗಳ ಹಣವನ್ನು ನಿಜವಾಗಿ ತಲುಪಬೇಕಾದವರಿಗೆ ತಲುಪಿಸುವಂತಹ ಕರ್ತವ್ಯ ಕೂಡ ಜಾನಪದ ವಿದ್ವಾಂಸರ ಜವಾಬ್ದಾರಿ ಎಂದು ಅರಿಯಬೇಕಿದೆ. ಈ ಹೊತ್ತು ಜನಪದ ಅಧ್ಯಯನಕಾರರು ಕೇವಲ ಜನಪದ ಕಲೆಯನ್ನು ಕಲೆ ಎನ್ನುವ ಚೌಕಟ್ಟಿನಲ್ಲಿ ಅಭ್ಯಸಿಸಬೇಕಿಲ್ಲ. ಬದಲಾಗಿ ಜನಪದ ಕಲಾವಿದರ ಬದುಕಿನ ನೆಲೆಯಲ್ಲಿ, ಮತ್ತವರು ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡು ಬದಲಾಗಬೇಕಾದ ಆಶಯಗಳಲ್ಲಿ ಅಧ್ಯನಗಳ ತಾತ್ವಿಕತೆಯನ್ನು ಬದಲಾಯಿಸಿಕೊಳ್ಳಬೇಕಿದೆ. -ಡಾ. ಅರುಣ್ ಜೋಳದಕೂಡ್ಲಿಗಿ

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ತುಂಭಾ ಚೆನ್ನಾಗಿ ಇದೆ

Unknown ಹೇಳಿದರು...

sudugadi siddara bagge yenadaru mahiti ideya?