ಶುಕ್ರವಾರ, ಜುಲೈ 14, 2017

ಒತ್ತಡಗಳಿಗೆ ಮಣಿಯುವ ರಾಷ್ಟ್ರಪತಿಗಳೇ?

  ಅನುಶಿವಸುಂದರ್
president of india ಗೆ ಚಿತ್ರದ ಫಲಿತಾಂಶ

ರಾಷ್ಟ್ರಪತಿ ಭವನದಲ್ಲಿ ರಾಮ್ ನಾಥ ಕೋವಿಂದರ ಅವಧಿಯು ಕೇಂದ್ರೀಕರಣದ ಧೋರಣೆಗಳನ್ನು ಇನ್ನಷ್ಟು ಗಟ್ಟಿಪಡಿಸಬಹುದು.


ಭಾರತೀಯ ಜನತಾ ಪಕ್ಷದ (ಬಿಜೆಪಿ) ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಿಯನ್ಸ್ (ಎನ್ಡಿಎ-ರಾಷ್ಟ್ರೀಯ ಪ್ರಜಾತಾಂತ್ರಿಕ ಒಕ್ಕೂಟ)ವು ರಾಷ್ಟ್ರಪತಿ ಪದವಿಗೆ ರಾಮ ನಾಥ ಕೋವಿಂದರನ್ನು ಅಭ್ಯರ್ಥಿಯಾಗಿ ಘೋಷಿಸಿರುವುದರಿಂz ಬಿಜೆಪಿಗೆ ಎರಡು ಲಾಭಗಳಿವೆಒಂದೆಡೆ ಅದು ದಲಿತ ಹಿತಾಸಕ್ತಿಗಳ ಬಗೆಗೆ ಬಾಯುಪಚಾರದ ಮಾತುಗಳನ್ನಾಡುತ್ತಲೇ ಮತ್ತೊಂದೆಡೆ ಹೆಚ್ಚೆಚ್ಚು ಅಧಿಕಾರವನ್ನು ಕೇಂದ್ರೀಕರಿಸಿಕೊಳ್ಳುವ ಅವಕಾಶವನ್ನು ದಕ್ಕಿಸಿಕೊಂಡಿದೆ. ಜುಲೈ ೧೭ರಂದು ನಡೆಯುವ ರಾಷ್ಟ್ರಪತಿ ಚುನಾವಣೆಯ ಫಲಿತಾಂಶವೇನಾಗಬಹುದೆಂಬುದು ಹೆಚ್ಚೂ ಕಡಿಮೆ ಸ್ಪಷ್ಟವಾಗಿಬಿಟ್ಟಿದೆ. ಬಿಜು ಜನತಾ ದಳ್, ಜನತಾ ದಳ್ (ಯುನೈಟೆಡ್), ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್)ನಂಥ ಪಕ್ಷಗಳನ್ನೂ ಒಳಗೊಂಡಂತೆ  ಎನ್ಡಿಎ ಗೆ ಸೇರಿಲ್ಲದ ಇತರ ಹಲವಾರು ಪಕ್ಷಗಳು ಈಗಾಗಲೇ ರಾಮ ನಾಥ್ ಕೋವಿಂದ್ ಅವರಿಗೆ ತಮ್ಮ ಬೆಂಬಲವನ್ನೂ ಘೋಷಿಸಿವೆ. ಹೀಗಾಗಿ ರಾಷ್ಟ್ರಪತಿಯನ್ನು ಚುನಾಯಿಸುವ ಮತಕ್ಷೇತ್ರದ ಶೇ.೫೫ರಷ್ಟು ಮತಗಳನ್ನೂ ಕೋವಿಂದ್ ಅವರು ಪಡೆದುಕೊಳ್ಳುವ ನಿರೀಕ್ಷೆ ಇದೆ. ಆದ್ದರಿಂದ ಅವರೇ ಪ್ರಣಬ್ ಮುಖರ್ಜಿ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ರಾಮ ನಾಥ ಕೋವಿಂದರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸುವ ಸಂದರ್ಭದಲ್ಲಿ ಎನ್ಡಿಎ ಮತ್ತು ಬಿಜೆಪಿಯ ಅಧ್ಯಕ್ಷರಾಗಿರುವ ಅಮಿತ್ ಶಾ ರವರು ಕೋವಿಂದರ ಹಿನ್ನೆಲೆಗೆ ಒತ್ತು ಕೊಡುತ್ತಾ ಬಡ ದಲಿತ ಕುಟುಂಬದಲ್ಲಿ ಹುಟ್ಟಿ ಕಷ್ಟಪಟ್ಟು ಮೇಲೆ ಬಂದವರೆಂದು ಬಣ್ಣಿಸಿದರು. ನಿರೀಕ್ಷೆಯಂತೆ ಕೋವಿಂದರ ದಲಿತ ಹಿನ್ನೆಲೆಯು ಸಾಕಷ್ಟು ಆಕರ್ಷಣೆ ಮತ್ತು ಚರ್ಚೆಯನ್ನು ಹುಟ್ಟುಹಾಕಿತು. ಆವರೆಗೆ ಗೋಪಾಲ ಕೃಷ್ಣ ಗಾಂಧಿಯವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿಸಲು ಒಪ್ಪಿಸುವ ಕುರಿತು ಅಳೆದು ಸುರಿದೂ ಲೆಕ್ಕ ಹಾಕುತ್ತಿದ್ದ ಬಹುಪಾಲು ಪ್ರತಿಪಕ್ಷಗಳು ಲೋಕಸಭೆಯ ಮಾಜಿ ಸಭಾಪತಿ ಮೀರಾ ಕುಮಾರ್ ಅವರನ್ನು ತಮ್ಮ ಅಭ್ಯರ್ಥಿಯನ್ನಾಗಿ ಘೋಷಿಸಿವೆ. ಮೂಲಕ ದೇಶದ ಸೇನಾಪಡೆಗಳ ಮತ್ತು ಪ್ರಭುತ್ವದ ಮುಖ್ಯಸ್ಥರ ಹುದ್ದೆಗೆ ಒಬ್ಬ ದಲಿತ ಪುರುಷ ಮತ್ತು ಒಬ್ಬ ದಲಿತ ಮಹಿಳೆಯ ನಡುವೆ ಸ್ಪರ್ಧೆ ನಡೆಯಲು ಕಾಂಗ್ರೆಸ್ ದಾರಿ ಮಾಡಿಕೊಟ್ಟಿದೆ.


ಬೆಳವಣಿಗೆಯಲ್ಲ್ಲಿ ಹಲವಾರು ಅಂಶಗಳು ಪಾತ್ರ ವಹಿಸಿವೆ. ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾ ಅವರ ಅಸಹಜ ಸಾವು, ಗುಜರಾತಿನ ಊನಾದಲ್ಲಿ ನಾಲ್ವರು ದಲಿತರ ಮೇಲೆ ಗೋ-ರಕ್ಷಕರು ನಡೆಸಿದ ಹಲ್ಲೆ, ಉತ್ತರ ಪ್ರದೇಶದ ಸಹರಾನ್ಪುರ್ನಲ್ಲಿ ದಲಿತರ ಮೇಲೆ ನಡೆದ ಸರಣಿ ಹಲ್ಲೆಗಳನ್ನೂ ಒಳಗೊಂಡಂತೆ ಇತ್ತೀಚಿನ ದಿನಗಳಲ್ಲಿ ದಲಿತರ ಮೇಲೆ ನಡೆಯುತ್ತಿರುವ ದಾಳಿಗಳನ್ನು ನಿಲ್ಲಿಸಲು ಬಗ್ಗೆ ಯಾವುದೇ ಪರಿಣಾಮಕಾರಿ ತೆಗೆದುಕೊಳ್ಳದಿರುವುದರಿಂದ ನರೇಂದ್ರ ಮೋದಿ ಸರ್ಕಾರವು ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು. ಕೋವಿಂದ್ ಅವರನ್ನು ರಾಷ್ಟ್ರಾಧ್ಯಕ್ಷ ಪದವಿಯ ಉಮೇದುವಾರರನ್ನಾಗಿ ಮಾಡಿರುವುದು ಮೇಲಿನ ಎಲ್ಲಾ ಘಟನೆಗಳಲ್ಲಿ ಬಿಜೆಪಿ ನಡೆದುಕೊಂಡ ರೀತಿಯನ್ನು ಮುಚ್ಚಿಹಾಕುವ ಒಂದು ಸಿನಿಕ ಪ್ರಯತ್ನವಾಗಿದೆ. ಕೋವಿಂದರ ಉಮೇದುವಾರಿಕೆಯು ಬಿಜೆಪಿ ಮತ್ತು ಸಂಘಪರಿವಾರದ ಇನ್ನೂ ಹಲವಾರು ದೂರಗಾಮಿ ಯೋಜನೆಗಳನ್ನು ಜಾರಿಗೆ ತರಲು ಪೂರಕವಾಗಿದೆ. ಅವುಗಳಲ್ಲಿ ಪ್ರಮುಖವಾದದ್ದು ದಲಿತರ ಎಚ್ಚೆತ್ತ ರಾಜಕೀಯ ಪ್ರಜ್ನೆಯನ್ನು ಭ್ರಷ್ಟಗೊಳಿಸುವುದು ಮತ್ತು ಅಂತರಾಳದಲ್ಲಿ ಬ್ರಾಹ್ಮಣವಾದವನ್ನು ಮತ್ತು ಜಾತಿ ವ್ಯವಸ್ಥೆಯನ್ನು  ಎತ್ತಿಹಿಡಿಯುವ ಹಾಗೂ ಅಲ್ಪಸಂಖ್ಯಾತರ ಅತ್ಯಂತ ಕಡು ದ್ವೇಷಿಯಾದ ಸಂಘಪರಿವಾರ ಪ್ರಣೀತ ಏಕರೂಪಿ ಹಿಂದೂವಾದದೊಳಗೆ ದಲಿತರನ್ನು ಒಳಗೊಳ್ಳುವುದು; ಅಂಬೇಡ್ಕರ್ ಅವರ ಪರಂಪರೆಯನ್ನು ವಶಪಡಿಸಿಕೊಳ್ಳುವುದು;ಉತ್ತರ ಭಾರತದಲ್ಲಿ ದಲಿತರನ್ನು ಮತ್ತು ಇತರ ಹಿಂದುಳಿದ ವರ್ಗಗಳಲ್ಲಿ ವಿಭಜನೆ ತಂದು ಅವರನ್ನು ಇತರ ಪಕ್ಷಗಳ ಹಿಡಿತದಿಂದ ತಮ್ಮ ತೆಕ್ಕೆಗೆ ತಂದುಕೊಳ್ಳುವುದು. ಕೋವಿಂದರ ಉಮೇದುವಾರಿಕೆಯು ವಿರೋಧ ಪಕ್ಷಗಳಲ್ಲಿರುವ ಒಡಕನ್ನೂ ಮತ್ತು ಅವರ ಪರಿಣಾಮಶೂನ್ಯ ರಾಜಕೀಯ ತಂತ್ರಗಾರಿಕೆಯ ನಿರರ್ಥಕತೆಯನೂ ಎತ್ತಿತೋರಿಸಿದೆ. ರಾಮ ನಾಥ ಕೋವಿಂದರ ಉಮೇದುವಾರಿಕೆಯ ಹಿಂದಿನ ಅಸ್ಮಿತೆಯ ರಾಜಕೀಯದ ಬಗ್ಗೆ ಮತ್ತು ಬಿಜೆಪಿಯ ಕುತಂತ್ರೀ ರಾಜಕಾರಣದ ಬಗ್ಗೆ ಸಾಕಷ್ಟು ವಿಶ್ಲೇಷಣೆ ಮಾಡಲಾಗಿದ್ದರೂ, ಕೋವಿಂದರ ನಿರೀಕ್ಷಿತ ವಿಜಯದ ದೂರಗಾಮಿ ಪರಿಣಾಮಗಳ ಬಗ್ಗೆಯೂ ಸರಿಯಾದ ಅಂದಾಜು ಹೊಂದಿರಬೇಕಾದದ್ದು ಸಹ ಅಷ್ಟೇ ಮುಖ್ಯವಾಗಿದೆ.

೧೯೭೭ರಲ್ಲಿ ಜನತಾ ಪಕ್ಷವು ಚುನಾವಣೆಯಲ್ಲಿ ಗೆದ್ದ ನಂತರ ಪ್ರಧಾನಿಯಾದ ಮೊರಾರ್ಜಿ ದೇಸಾಯಿ ಅವರಿಗೆ ಕೋವಿಂದ್ ಅವರು ಆಪ್ತ ಕಾರ್ಯದರ್ಶಿಯಾಗಿದ್ದರು. ೧೯೮೦ರ ಚುನಾವಣೆಯಲ್ಲಿ ಇಂದಿರಾಗಾಂಧಿಯವರು ಗೆದ್ದು ಮತ್ತೆ ಅಧಿಕಾರಕ್ಕೆ ಮರಳಿದಾಗಲೂ ಕೋವಿಂದ್ ಅವರನ್ನು ಸುಪ್ರೀಂ ಕೋರ್ಟಿನಲ್ಲ್ಲಿ ಕೇಂದ್ರದ ವಕೀಲರನ್ನಾಗಿ ಉಳಿಸಿಕೊಳ್ಳಲಾಗಿತ್ತು. ಬಿಜೆಪಿಯ ಮೊದಮೊದಲ ದಲಿತ ಸದಸ್ಯರಲ್ಲಿ ಒಬ್ಬರಾಗಿದ್ದ ಕೋವಿಂದ್ ಅವರು (ಅವರು ಬಿಜೆಪಿಯನ್ನು ಸೇರಿಕೊಂಡಿದ್ದು ೧೯೯೧ರಲ್ಲಿ) ಪಕ್ಷದ ಹಲವಾರು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ-ಉತ್ತರ ಪ್ರದೇಶ ಘಟಕದ ಜಂಟಿ ಕಾರ್ಯದರ್ಶಿ, ಅದರ ಪರಿಶಿಷ್ಟ ಜಾತಿ ಮೋರ್ಚಾದ ಅಧ್ಯಕ್ಷ, ಮತ್ತು ಪಕ್ಷದ ರಾಷ್ಟ್ರೀಯ ವಕ್ತಾರ..ಇತ್ಯಾದಿ. ೧೯೯೧ರಲ್ಲಿ ಅವರು ಉತ್ತರಪ್ರದೇಶದಿಂದ ಲೋಕಸಭಗೆ ಸ್ಪರ್ಧಿಸಿ ಸೋತಿದ್ದರು. ಉತ್ತರ ಪ್ರದೇಶದ  ಠಾಕೂರ್ ಲಾಬಿಯೊಂದಿಗೆ ಅವರಿಗೆ ಅಂಥಾ ಸಸ್ನೇಹ ಸಂಬಂಧವೇನೂ ಇರಲಿಲ್ಲವೆಂದೂ ಹೇಳಲಾಗುತ್ತದೆ. ೧೯೯೪ ಮತ್ತು ೨೦೦೬ರ ನಡುವೆ ಬಿಜೆಪಿಯು ಅವರನ್ನು ಎರಡು ಬಾರಿ ರಾಜ್ಯಸಭೆಗೆ ಆಯ್ಕೆ ಮಾಡಿ ಕಳಿಸಿತ್ತು. ಅವಧಿಯಲ್ಲಿ ಅವರು ಹಲವಾರು ಸಂಸದೀಯ ಸಮಿತಿಗಳ ಸದಸ್ಯರಾಗಿಯೂ ಕೆಲಸ ನಿರ್ವಹಿಸಿದ್ದರು. ಅಟಲ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಅವರು ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ೨೦೧೫ರಲ್ಲಿ ಅವರನ್ನು ಬಿಹಾರದ ರಾಜ್ಯಪಾಲರನ್ನಾಗಿ ನೇಮಿಸಲಾಯಿತು.

ಭಾರತವು ಹಲವು ಬಗೆಯ ರಾಷ್ಟ್ರಪತಿಗಳನ್ನು ಕಂಡಿದೆ. ಫಕ್ರುದ್ದೀನ್ ಆಲಿ ಅಹಮದ್ ಅವರು ಇಂದಿರಾ ಗಾಂಧಿಯವರ ತೀರ್ಮಾನಕ್ಕೆ ಮಣಿದು ದೇಶದ ಮೇಲೆ ತುರ್ತುಸ್ಥಿತಿಯನ್ನು ಹೇರಿ ಸಂವಿಧಾನವನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಟ್ಟ ಕುಖ್ಯಾತಿಯನ್ನು ಪಡೆದಿದ್ದರು. ಪ್ರಾರಂಭದಲ್ಲಿ ಒತ್ತಡಕ್ಕೆ ಮಣಿಯುವ ರಾಷ್ಟ್ರಪತಿ ಎಂದೇ ಪರಿಗಣಿಸಲಾಗಿದ್ದ ಗ್ಯಾನಿ ಜೇಲ್ಸಿಂಗ್ ಅವರು ಹಲವಾರು ಸಂದರ್ಭಗಳಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ನಿರ್ಣಯಗಳಿಗೆ ವಿರೋಧ ಒಡ್ಡಿದ್ದರು. ಅಷ್ಟು ಮಾತ್ರವಲ್ಲರಾಷ್ಟ್ರಪತಿ ಕಚೇರಿಯ ಮೇಲೆ ಸರ್ಕಾರವು ಗೂಢಚರ್ಯೆ ನಡೆಸುತ್ತಿದೆ ಎಂಬ ವಿವಾದವು ಹತ್ತಿಕೊಂಡ ಸಂದರ್ಭದಲ್ಲಿ ರಾಜೀವು ಗಾಂಧಿಯವರನ್ನು ಹುದ್ದೆಯಿಂದ ವಜಾಮಾಡುವ ಬೆದರಿಕೆಯನ್ನೂ ಹಾಕುವಂಥ ನಾಟಕೀಯ ಬೆಳವಣಿಗೆಗಳು ನಡೆದಿದ್ದವು. ತೀರಾ ಇತ್ತೀಚೆಗೆ ಕೆ.ಆರ್. ನಾರಾಯಣನ್ ಅವರು ಸ್ವತಂತ್ರ ಭಾರತದ ವೈಫಲ್ಯದ ಬಗ್ಗೆ ವಿಶ್ಲೇಷಣೆ ನಡೆಸಿ ಭಾರತದ ಸಂವಿಧಾನಕ್ಕೆ ಅಂಬೇಡ್ಕರ್ ಕೊಡುಗೆಯ ಮಹತ್ವವನ್ನು ಎತ್ತಿ ಹಿಡಿದ ಪ್ರಖ್ಯಾತಿಯನ್ನು ಪಡೆದಿದ್ದರು. ಇದು ಅಂದಿನ ವಾಜಪೇಯಿ ಸರ್ಕಾರವು ಹೊಂದಿದ್ದ ಹಲವಾರು ನಿಲುವುಗಳಿಗೆ ವ್ಯತಿರಿಕ್ತವಾಗಿತ್ತು. ಇತ್ತೀಚಿನ ಇಬ್ಬರು ರಾಷ್ಟ್ರಪತಿಗಳಾದ ಪ್ರತಿಭಾ ದೇವಿಸಿಂಗ್ ಪಾಟೀಲ್ ಮತ್ತು ಪ್ರಣಬ್ ಮುಖರ್ಜಿಯವರುಗಳ ಹಿನ್ನೆಲೆ, ಹುದ್ದೆಯನ್ನು ನಿರ್ವಹಿಸುವ ಶೈಲಿಗಳು ಭಿನ್ನಭಿನ್ನವಾಗಿದ್ದರೂ ಅವರಿಬ್ಬರು ಎಂದಿಗೂ ಆಳುವ ಸರ್ಕಾರಗಳನ್ನು ಎದಿರುಹಾಕಿಕೊಳ್ಳಲೇ ಇಲ್ಲ; ಮುಖರ್ಜಿಯವರು ಧರ್ಮ ನಿರಪೇಕ್ಷತೆ ಮತ್ತು ಸ್ವಾತಂತ್ರ್ಯಗಳ ಬಗ್ಗೆ ಆಗಾಗ ಟಿಪ್ಪಣಿಗಳನ್ನು ಮಾಡುತ್ತಿದ್ದರೂ, ಸರ್ಕಾರದ ಎಲ್ಲಾ ತೀರ್ಮಾನಗಳಿಗೂ ಸಮ್ಮತಿಯನ್ನು ನೀಡುತ್ತಿದ್ದರು. ಮಾತ್ರವಲ್ಲಭೂ ಸ್ವಾಧೀನ ಕಾಯಿದೆಯಂಥ ಸರ್ಕಾರದ ಹಲವಾರು ವಿವಾದಾಸ್ಪದ  ಸುಗ್ರೀವಾಜ್ನೆಗಳಿಗೂ ಸರ್ಕಾರಿ ಆದೇಶಗಳಿಗೂ ಒಪ್ಪಿಗೆ ನೀಡಿದ್ದರು.

ಕೋವಿಂದ್ ಅವರು ಆಳುವ ಸರ್ಕಾರಗಳ ಆಸಕ್ತಿಗಳನ್ನು ಯಾವುದೇ ಪರಿಶೀಲನೆಗೆ ಒಳಪಡಿಸದೆ ಕುರುಡಾಗಿ ಒಪ್ಪಿಕೊಳ್ಳುವಷ್ಟು ಮಣಿಯುತ್ತಾರೆಯೇ? ಪ್ರಶ್ನೆಗೆ ಕಾಲವೇ ಉತ್ತರ ಕೊಡಬೇಕೆನ್ನುವುದು ನಿಜವಾದರೂ ಅವರ ರಾಜಕೀಯವು ಆಳುವ ಸರ್ಕಾರದ ರಾಜಕೀಯಕ್ಕಿಂತ ಭಿನ್ನವಾಗಿರುತ್ತದೆಂದು ನಂಬಲು ಯಾವುದೇ ಕಾರಣಗಳಿಲ್ಲ. ೩೨೦ ಎಕರೆ ವಿಸ್ತೀರ್ಣದಲ್ಲಿ ೩೪೦ ಕೊಠಡಿಗಳನ್ನು ಹೊಂದಿದ್ದು, ವಿಶ್ವದ ಅತಿ ದೊಡ್ಡ ನಿವಾಸವೆಂದು ಕರೆಸಿಕೊಳ್ಳುವ ರಾಷ್ಟ್ರಪತಿ ಭವನದಲ್ಲಿ ವಾಸಿಸಲಿರುವ ಕೋವಿಂದರ ಅವಧಿಯನ್ನು ಹಿನ್ನೆಲೆಯಲ್ಲೇ ವಿಶ್ಲೇಷಿಸಬೇಕು. ಈವರೆಗೆ ಅವರೊಬ್ಬ ಆಕ್ರಮಣಶೀಲ ಹೋರಾಟಗಾರರೆಂದೇನೂ ಗುರುತಿಸಿಕೊಂಡಿಲ್ಲ. ಮೋದಿ ಸರ್ಕಾರಕ್ಕೆ ಪ್ರಜಾತಂತ್ರದ ಸಂಸ್ಥೆಗಳ ಬಗ್ಗೆ ಅಂಥಾ ಕಕ್ಕುಲಾತಿಯೇನೂ ಇಲ್ಲ. ಹೀಗಾಗಿ ನಿಷ್ಟೆ ಮತ್ತು ಅಧೀನತೆ ಇರುವವರನ್ನೇ ಮೋದಿಯವರು ಆಯ್ಕೆ ಮಾಡಿರುವುದೂ ಯಾರಿಗೂ ಆಶ್ಚರ್ಯ ತರಬೇಕಿಲ್ಲ. ಇತ್ತೀಚೆಗೆ ಸರ್ಕಾರವು ಮಾಡಿರುವ ಹಲವು ನೇಮಕಾತಿಗಳು ಇದನ್ನು ಸ್ಪಷ್ಟವಾಗಿ ಸಾಬೀತುಪಡಿಸುತ್ತವೆ.

ಕೋವಿಂದ್ ಅವರು ಎಂಥಾ ರಾಷ್ಟ್ರಪತಿಗಳಾಗಬಹುದು? ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅವರು ಮಾಡಿರುವ ಕೆಲವು ಹೇಳಿಕೆಗಳು ಸಂವಿಧಾನದ ಬಗ್ಗೆ ಅವರ ನಿಲುವೇನೆಂದು ತಿಳಿಸುತ್ತದೆಒಬ್ಬ ರಾಷ್ಟ್ರಪತಿಗೆ ಸಂವಿಧಾನವೇ ಪರಮೋಚ್ಚವಾದದ್ದು. ಅದೇ ಅವರಿಗೆ ಗೀತೆ, ರಾಮಾಯಣ, ಬೈಬಲ್ ಮತ್ತು ಕುರಾನ್ ಎಂದು ಅವರು ಹೇಳಿದ್ದಾರೆಂದು ವರದಿಯಾಗಿದೆ. ತಮ್ಮ ಪ್ರತಿಪಾದನೆಗೆ ಧರ್ಮಗ್ರಂಥಗಳನ್ನು ಉಲ್ಲೇಖಿಸಿರುವುದು ಕಳವಳ ಹುಟ್ಟಿಸುವ ಸಂಗತಿಯಾಗಿದೆ. ಸಂವಿಧಾನವು ದೈವದತ್ತವಾದುದಲ್ಲ. ಅದು ನೈತಿಕತೆ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಮಾನವಹಕ್ಕುಗಳ ತತ್ವದ ನೆಲೆಯಲ್ಲಿ ರೂಪುಗೊಂಡಿರುವ ಒಂದು ಜೀವಂತ ದಸ್ತಾವೇಜಾಗಿದೆ. ಒಂದು ಗಣತಂತ್ರಾತ್ಮಕ ಪ್ರಜಾಸತ್ತೆಯಲ್ಲಿ ಎಲ್ಲಾ ಮೌಲ್ಯಗಳು ನಿರಂತರ ಅನುಸಂಧಾನ ನಡೆಸುತ್ತಾ ಪ್ರತಿಪಾದನೆಗೊಳ್ಳುತ್ತಿರುತ್ತವೆ. ಒಂದು ಪ್ರಜಾತಂತ್ರದಲ್ಲಿ ಸಂವಿಧಾನದ ಪಾತ್ರದ ಬಗ್ಗೆ ಕೋವಿಂದ್ ಅವರ ನಿಲುವುಗಳು ಬಹುಸಂಖ್ಯಾತರ ಮೇಲಾಳ್ವಿಕೆಯನ್ನು ಅನುವು ಮಾಡಿಕೊಡುವಂಥ ರಾಷ್ಟ್ರಪ್ರಭುತ್ವಕ್ಕೆ ಸಮರ್ಥನೆ ಒದಗಿಸುತ್ತದೆಯೇ? ಕೋವಿಂದ್ ಅವರ ಇತಿಹಾವು ಅವರಿಗೆ ದೇಶದ ರಾಜಕೀಯದಲ್ಲಿ ಹೆಚ್ಚುತ್ತಿರುವ ಕೇಂದ್ರೀಕರಣದ ಮತ್ತು ಪ್ರಜಾಪ್ರಭುತ್ವ ವಿರೋಧಿ ಧೋರಣೆಗಳನ್ನು ಪ್ರತಿರೋಧಿಸುವ ಉದ್ದೇಶವಾಗಲೀ, ಸಾಮರ್ಥ್ಯವಾಗಲೀ ಇದೆಯೆಂದು ಭಾವಿಸುವ ಯಾವ ಪುರಾವೆಯನ್ನೂ ಒದಗಿಸುವುದಿಲ್ಲ.

    ಕೃಪೆEconomic and Political Weekly
     July 8, 2017. Vol. 52. No. 27

                                                                                                             


ಕಾಮೆಂಟ್‌ಗಳಿಲ್ಲ: