ಸೋಮವಾರ, ಏಪ್ರಿಲ್ 29, 2013

ಮತ ಬಹಿಷ್ಕಾರವೆಂಬ ಚುನಾವಣೆ ಪ್ರಾಥಮಿಕ ಪಾಠ.

-ಅರುಣ್ ಜೋಳದಕೂಡ್ಲಿಗಿ

30.04.2013 ಪ್ರಜಾವಾಣಿ `ಸಂಗತ’ ಕಾಲಂ

ಯಾವುದೇ ಚುನಾವಣೆ ಮುನ್ನ ಮತ ಬಹಿಷ್ಕಾರದ ಘಟನೆಗಳು ನಡೆಯುತ್ತಿರುತ್ತವೆ. ಅವು ಆಡಳಿತದ ವಿರುದ್ಧ ಜನರೊಳಗಿದ್ದ ಸಿಟ್ಟು ಸೆಡವುಗಳನ್ನು, ಪ್ರತಿರೋಧದ ರೂಪದಲ್ಲಿ ಹೊರ ಹಾಕುತ್ತವೆ. ಇಂತಹ ಬಹಿಷ್ಕಾರವು ಮೂಲಭೂತ ಸೌಲಭ್ಯಗಳಿಲ್ಲದ್ದನ್ನು ಒಕ್ಕೊರಲಿನಿಂದ ಹೇಳುವ ಪ್ರಯತ್ನಗಳಂತೆ ಕಾಣುತ್ತದೆ. ಮುಖ್ಯವಾಗಿ ಈ ಹಿಂದಿನ ಜನಪ್ರತಿನಿಧಿಯ ಆಡಳಿತ ವೈಖರಿಯ ಪ್ರತಿಬಿಂಬವೂ ಆಗಿರುತ್ತದೆ. ಈ ಬಾರಿಯೂ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಿದ ಹಲವು ಘಟನೆಗಳು ವರದಿಯಾಗಿವೆ.

ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿಯ ಜನರು ಮತದಾನವನ್ನು ಬಹಿಷ್ಕರಿಸಿದ್ದಾರೆ. ಪೊಲೀಸರ ದೌರ್ಜನ್ಯ, ಕಾನೂನು ಉಲ್ಲಂಘನೆ, ಮೂಲ ಸೌಕರ್ಯ ಕೊರತೆ ಎಂಬ ಕಾರಣ ಹೇಳಿದ್ದರೂ, ಬಹಿಷ್ಕಾರಕ್ಕೆ ಮೂಲ ಕಾರಣ ಕುದಾಪುರ, ವರವು ಕಾವಲು ಹಾಗೂ ಉಳ್ಳಾರ್ತಿ ಅಮೃತ ಮಹಲ್ ತಳಿಗಳ ಸಂಶೋಧನ ಕೇಂದ್ರವಿರುವ ಭೂಮಿಯನ್ನು ಡಿಆರ್‌ಡಿಒ, ಇಸ್ರೋ, ಐಐಎಸ್ಸಿ, ಬಾಬಾ ಅಣು ಸಂಶೋಧನ ಸಂಸ್ಥೆ ಮುಂತಾದವುಗಳಿಗೆ ಕಾನೂನು ಬಾಹಿರವಾಗಿ ನೀಡಲಾಗಿದೆ. ಇದನ್ನು ವಿರೋಧಿಸಿ ಭೂಮಿಯನ್ನು ಉಳಿಸಿಕೊಳ್ಳುವ ಯತ್ನ ಇವರದ್ದು. ಈ ಮತ ಬಹಿಷ್ಕಾರವನ್ನು ಚಳ್ಳಕೆರೆ ತಾಲೂಕಿನ 80 ಗ್ರಾಮದವರು ಬೆಂಬಲಿಸಿದ್ದಾರೆ.

ಸಿದ್ದಾಪುರ ಭಾಗದ ವಿರಾಜಪೇಟೆ ತಾಲೂಕಿನಲ್ಲಿ ಬಹುತೇಕ ಗಿರಿಜನರೇ ಹೆಚ್ಚಾಗಿದ್ದು, ಸರ್ಕಾರ ತಮಗೆ ಯಾವುದೇ ಮೂಲ ಸೌಕರ್ಯ ಒದಗಿಸದ ಹಿನ್ನೆಲೆಯಲ್ಲಿ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ. `ಕುಡಿಯುವ ನೀರು, ಮನೆ, ವಿದ್ಯುತ್, ರಸ್ತೆ ವ್ಯವಸ್ಥೆ ಇಲ್ಲದೆ ವಂಚಿತರಾಗಿದ್ದೇವೆ. ಈಗಲೂ ನಮ್ಮದು ಕತ್ತಲ ಬದುಕು, ಸೂಕ್ತ ಮನೆಗಳ ವ್ಯವಸ್ಥೆ ಇಲ್ಲದೆ ಗುಡಿಸಿಲಿನಲ್ಲಿ ಮಳೆ, ಗಾಳಿ, ಬಿಸಿಲನ್ನು ಲೆಕ್ಕಿಸದೆ ಸಂಕಷ್ಟಕ್ಕೆ ಒಳಗಾಗಿದ್ದೇವೆ.

ತೋಡು ನೀರನ್ನೇ ಕುಡಿಯಲು ಅವಲಂಬಿಸಿದ್ದೇವೆ' ಎಂದು ಗಿರಿಜನ ಮುಖಂಡರಾದ ಮುತ್ತಮ್ಮ ಹಾಗೂ ಅಪ್ಪಾಜಿ ಆರೋಪಿಸಿದ್ದಾರೆ. ಉಳಿದಂತೆ ಸಿದ್ದಾಪುರ ಸಮೀಪದ ಚೆನ್ನಯ್ಯನಕೋಟೆ ಗ್ರಾ.ಪಂ ವ್ಯಾಪ್ತಿಗೊಳಪಡುವ ತಟ್ಟಳ್ಳಿ, ದಿಡ್ಡಳ್ಳಿ, ಚೆಟ್ಟಿಪಾರೆ, ಬಸವನಹಳ್ಳಿ ಮುಂತಾದ 250ಕ್ಕೂ ಹೆಚ್ಚು ಗಿರಿಜನ ಕುಟುಂಬಗಳು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಯ 15 ಮನೆಗಳಿರುವ ಗ್ರಾಮ ಪಾಲಹಳ್ಳಿ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. `ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಸುಮಾರು 65 ವರ್ಷಗಳಾದರೂ ನಮ್ಮ ಗ್ರಾಮಕ್ಕೆ ವಿದ್ಯುತ್ ಸೌಲಭ್ಯ ದೊರಕಿಲ್ಲ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ವೈವಾಹಿಕ ಸಂಬಂಧಗಳಿಗೂ ಕಡಿವಾಣ ಬಿದ್ದಿದೆ. ಆನೆಗಳ ಕಾಟ ಹೆಚ್ಚಿರುವುದರಿಂದ ಮುಗ್ಧ ಜನರ ಜೀವಕ್ಕೆ ಬೆಲೆ ಇಲ್ಲ' ಎಂದು ಇಲ್ಲಿಯ ಜನ ಅಲವತ್ತುಕೊಂಡಿದ್ದಾರೆ.

ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಕಲ್ಲೆಂಚಿಪಾದೆಯ ಪರಿಶಿಷ್ಟ ಜಾತಿಯ ನಿವಾಸಿಗಳು ಕಾಲೋನಿಗೆ ಮೂಲ ಸೌಕರ್ಯ ಒದಗಿಸುವಂತೆ ಬೇಡಿಕೆ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಕಲ್ಲೆಂಚಿಪಾದೆ ಶ್ರೀದೇವಿ ಭಜನಾ ಮಂಡಳಿ ಮುಂಭಾಗದಲ್ಲಿ ಬ್ಯಾನರ್ ಹಾಕಿದ್ದಾರೆ.


ಕಲ್ಲೆಂಚಿಪಾದೆಯ ಪರಿಶಿಷ್ಟ ಜಾತಿಯ ಸುಮಾರು 12 ಕುಟುಂಬಗಳು ಮೂಲ ಸೌಕರ್ಯ ಒದಗಿಸುವಂತೆ ನಿವೇದಿಸಿಕೊಂಡರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಸ್ಪಂದಿಸಿಲ್ಲ. ಬೇಸಿಗೆ ಸಮಯದಲ್ಲಿ ಸುಮಾರು ಮೂರು ಫರ್ಲಾಂಗು ದೂರದಿಂದ ನೀರು ತರಬೇಕಾಗಿದೆ. 20 ವರ್ಷಗಳಿಂದಲೂ ಈ ಎಲ್ಲ ಸಮಸ್ಯೆಗಳು ಪರಿಹಾರ ಕಂಡಿಲ್ಲ ಎಂದು ಅಲ್ಲಿನ ಪ್ರಮುಖರು ತಿಳಿಸಿದ್ದಾರೆ

ಮೂಲ ಸೌಲಭ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಸೋಮವಾರಪೇಟೆ ತಾಲೂಕಿನ ಅತ್ತೂರು ನಲ್ಲೂರು ಗ್ರಾಪಂ ವ್ಯಾಪ್ತಿಯ ಕುಟ್ಟಿಕೇರಿ ಪೈಸಾರಿ ನಿವಾಸಿಗಳು ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಕಾರ್ಕಳ ತಾಲೂಕಿನಲ್ಲಿ ಮೊದಲ ಬಾರಿಗೆ ಸಾಣೂರು ಗ್ರಾ.ಪಂ. ವ್ಯಾಪ್ತಿಯ ಜನತೆ ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಅಸಹಕಾರ ಹಾಗೂ ಅಭಿವೃದ್ಧಿಪರ ಚಿಂತನೆಯನ್ನು ಹೊಂದದ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಸಿಟ್ಟಿಗೆದ್ದಿದ್ದಾರೆ. ಹಲವು ಬಾರಿ ಸ್ಥಳೀಯರು ಹಾಗೂ ರಿಕ್ಷಾ ಚಾಲಕರು ರಿಪೇರಿಯಾಗದ ರಸ್ತೆಯಲ್ಲಿ ಶ್ರಮದಾನದ ಮೂಲಕ ಹೊಂಡಗಳನ್ನು ಮುಚ್ಚುವ ಪ್ರಯತ್ನ ಮಾಡಿದ್ದರು. ಇಷ್ಟೆಲ್ಲ ಆದರೂ ಜನಪ್ರತಿನಿಧಿಗಳ ಬೇಜವಾಬ್ದಾರಿ ವಿರುದ್ಧ ಮತ ಬಹಿಷ್ಕಾರವೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಬಂಟ್ವಾಳ ಸಮೀಪದ ಗೋಳ್ತಮಜಲು ಗ್ರಾಪಂ ವ್ಯಾಪ್ತಿಯ ಮದಕ ಪರಿಸರಕ್ಕೆ ಚರಂಡಿ ಹಾಗೂ ರಸ್ತೆ ವ್ಯವಸ್ಥೆ ಕಲ್ಪಿಸಲು ವಿಫಲವಾದ ಜನಪ್ರತಿನಿಧಿಗಳ ಧೋರಣೆ ಖಂಡಿಸಿ ಮದಕ ಆಸುಪಾಸಿನ ನಾಗರಿಕರು ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಚರಂಡಿ ವ್ಯವಸ್ಥೆ ಇಲ್ಲದಿದ್ದುದರಿಂದ ನೊಣ, ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತಿದ್ದು, ಸುತ್ತಮುತ್ತಲಿನ ಮಕ್ಕಳು ಆಗಾಗ ಜ್ವರ, ಶೀತದಿಂದ ಬಳಲುವಂತಾಗಿದೆ.

ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾಧಿಕಾರಿ, ಸ್ಥಳೀಯ ಶಾಸಕರು ಸಹಿತ ಹಲವು ಜನಪ್ರತಿನಿಧಿಗಳಿಗೆ ಮದಕ ನಾಗರಿಕರು ಮನವಿ ಸಲ್ಲಿಸಿದ್ದರೂ, ಯಾವುದೇ ಸ್ಪಂದನ ದೊರೆತಿಲ್ಲವಾದ್ದರಿಂದ ನಾಗರಿಕರು ಈ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ನಡುವೆ, ಚುನಾವಣೆ ಬಹಿಷ್ಕರಿಸಿ ಹಾಕಲಾಗಿದ್ದ ಬ್ಯಾನರನ್ನು ಚುನಾವಣಾ ನೀತಿ ಸಂಹಿತೆಯ ನೆಪವೊಡ್ಡಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೂಲಕ ತೆಗೆಸಿದ್ದಾರೆ ಎಂದು ಮದಕ ಪರಿಸರದ ನಾಗರಿಕರು ಆರೋಪಿಸಿದ್ದಾರೆ.

ಶೃಂಗೇರಿ ತಾಲೂಕಿನಲ್ಲಿ ಭಿನ್ನವಾದ ಬಹಿಷ್ಕಾರ ಸುದ್ದಿ ವರದಿಯಾಗಿದೆ. ಮರ್ಕಲ್ ಗ್ರಾಮ ಪಂಚಾಯಿತಿಯ ಹುಲ್ಸೆ ಸಮೀಪದ ಮಾವಿನಕಟ್ಟೆ ಎಂಬಲ್ಲಿ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿರುವ ಸಿಪಿಐ ಮಾವೋವಾದಿ ಎಂದು ಬರೆಯಲಾಗಿದ್ದ ಬ್ಯಾನರ್ ಪತ್ತೆಯಾಗಿದೆ. ಇದನ್ನು ನಕ್ಸಲರು ಕಟ್ಟಿರಬಹುದೆಂದು ಶಂಕಿಸಲಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ಪ್ರದೇಶದ ಅಂಚಿನಲ್ಲಿರುವ ಮಾವಿನಕಟ್ಟೆ ಸುತ್ತಮುತ್ತಲ ಪ್ರದೇಶದಲ್ಲಿ ಈ ಹಿಂದೆ ಪರ್ಯಾಯ ಆಡಳಿತ ನಡೆಸುವಷ್ಟು ಪ್ರಬಲವಾಗಿದ್ದ ನಕ್ಸಲರ ಪ್ರಭಾವ ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಾ ಬಂದಿತ್ತು.

ಇದೀಗ ಪುನಃ ಈ ಬ್ಯಾನರ್‌ನಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಈ ಪ್ರಕರಣಗಳು ಸಾಂಕೇತಿಕ ಅಷ್ಟೆ. ಇಲ್ಲಿ ಜನಪ್ರತಿನಿಧಿಗಳು, ಆಡಳಿತಾಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸಿಲ್ಲದ ಬಗ್ಗೆ ಸಿಟ್ಟು ವ್ಯಕ್ತವಾಗಿದೆ. ಅಂತೆಯೇ ಇಲ್ಲಿನ ಜನಾಭಿಪ್ರಾಯ ಮತ ಚಲಾವಣೆಯ ಬಗ್ಗೆ ನಂಬಿಕೆ ಕಳೆದುಕೊಂಡಂತಿದೆ. ಇಲ್ಲಿನ ಬಹುತೇಕ ಬೇಡಿಕೆಗಳು ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ್ದು. ಅಂದರೆ ಜನರಿಗೆ ಅತ್ಯಗತ್ಯವಾದ ಕುಡಿಯುವ ನೀರು, ಬೆಳಕು, ನಡೆದಾಡುವ ದಾರಿ, ವಾಸಿಸುವ ಪುಟ್ಟ ಮನೆ, ಪರಿಸರದ ಸ್ವಚ್ಚತೆಗೆ ಸಂಬಂಧಿಸಿದ್ದು. ಈ ಬಹಿಷ್ಕಾರ ಬಹುಪಾಲು ಹಳ್ಳಿಗಳಲ್ಲಿ ಹುಟ್ಟಿರುವುದು ಗಮನಾರ್ಹ. ಕೆಲವು ಬಹಿಷ್ಕಾರಗಳು ರಾಜಕೀಯ ಪ್ರೇರಿತವಾಗಿದ್ದರೂ, ಬಹುಪಾಲು ನಿಜದ ಪ್ರತಿರೋಧಗಳೇ ಆಗಿವೆ.

ಚುನಾವಣಾ ಅಧಿಕಾರಿಗಳು ಜನರನ್ನು ಮತ ಚಲಾಯಿಸುವ ಹಾಗೆ ಮನವೊಲಿಸಬಹುದು, ಚುನಾವಣಾ ಕಣದಲ್ಲಿರುವ ಸ್ಪರ್ಧಿಗಳು ಭರವಸೆ ನೀಡಿ ಆಮಿಷಗಳನ್ನು ಒಡ್ಡಿ ಮತ ಹಾಕುವಂತೆ ಪ್ರೇರೇಪಿಸಬಹುದು. ಹೀಗೆ ಮತ ಬಹಿಷ್ಕಾರ ಮಾಡಿದವರು, ಕೊನೆಗೆ ಮತ ಚಲಾಯಿಸಲೂಬಹುದು. ಆದರೆ ಮತ ಬಹಿಷ್ಕಾರದ ಈ ಘಟನೆಗಳು ಪ್ರಜಾಪ್ರಭುತ್ವದ ಬಹು ಸಾಧ್ಯತೆಗಳನ್ನು ತೋರುತ್ತಿವೆ.

ಜನ ಪ್ರತಿನಿಧಿಗಳನ್ನು ಚುನಾಯಿಸುವ ಮತ್ತು ಚುನಾಯಿಸದಿರುವ ಎರಡು ಮುಖಗಳನ್ನು ಕಾಣಿಸುತ್ತಿದೆ. ಅಂತೆಯೇ ಮತ ಚಲಾಯಿಸುವ ಮತದಾರರಿಗೂ, ಚುನಾವಣೆಯ ಕಣದಲ್ಲಿರುವ ಸ್ಪರ್ಧಿಗಳಿಗೂ ಈ ಘಟನೆಗಳು ಪ್ರಾಥಮಿಕ ಪಾಠಗಳಂತೆಯೂ ಕಾಣುತ್ತವೆ. ಈ ಪಾಠಗಳು ಪರಿಣಾಮಕಾರಿಯಾಗಿ ಅವರನ್ನು ತಟ್ಟಬೇಕಷ್ಟೆ.

ಕಾಮೆಂಟ್‌ಗಳಿಲ್ಲ: