ಮಂಗಳವಾರ, ಏಪ್ರಿಲ್ 23, 2013

ನೆರಳು ಗೊಂಬೆಯಾಟದ ಮೂಲಕ ಪಾಠ



-ಮಲ್ಲಿಕಾರ್ಜುನ.ಡಿ.ಜಿ.

ನಮ್ಮ ತಾಲ್ಲೂಕಿನ ವರದನಾಯಕನಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲಿಕೆಯನ್ನು ಆಕರ್ಷಣೀಯವಾಗಿಸಲು ನೆರಳುಗೊಂಬೆಯಾಟವನ್ನು ಬಳಸುತ್ತಾರೆ. ವಿಶೇಷವೆಂದರೆ ಇಲ್ಲಿ ಮಕ್ಕಳೇ ಪಾತ್ರಗಳನ್ನು ನಿರ್ದೇಶಿಸುವುದು ಮತ್ತು ಸಂಭಾಷಣೆ ಹೇಳುವುದು ಹಾಗೂ ಪ್ರೇಕ್ಷಕರೂ ಅವರೇ. ಶಿಕ್ಷಕರೇನಿದ್ದರೂ ಅಲ್ಲಲ್ಲಿ ಸಲಹೆ ನೀಡುವುದಷ್ಟೇ.
ಇದಕ್ಕೆ ಬಳಸುವ ಪರಿಕರಗಳೂ ಸರಳವಾಗಿವೆ. ತೆಳುವಾದ ಬಟ್ಟೆಯನ್ನು ಕಟ್ಟುತ್ತಾರೆ. ಕೋಣೆಯನ್ನು ಕತ್ತಲು ಮಾಡಿ ಕಿಟಕಿ ಬೆಳಕನ್ನು ಮಾತ್ರ ಬಳಸುತ್ತಾರೆ. ಗೊಂಬೆಗಳನ್ನು ಮಕ್ಕಳೇ ರಟ್ಟನ್ನು ಕತ್ತರಿಸಿ ತಯಾರಿಸುತ್ತಾರೆ. ಅದಕ್ಕೆ ಕಡ್ಡಿಗಳನ್ನು ಅಂಟಿಸಿರುತ್ತಾರೆ. ಪಾತ್ರಗಳ ಸಂಭಾಷಣೆಯನ್ನು ಮೌಕಿಕವಾಗಿ ವ್ಯಕ್ತಪಡಿಸುತ್ತಾ ಅದಕ್ಕೆ ತಕ್ಕಂತಹ ಅಭಿನಯವನ್ನು ಗೊಂಬೆಗಳ ಮೂಲಕ ತೋರಿಸುವ ವಿದ್ಯಾರ್ಥಿಗಳ ಕ್ರಿಯಾಶೀಲತೆ ಬೆರಗುಹುಟ್ಟಿಸುತ್ತದೆ.
ಪ್ರಾಣಿ ಪಕ್ಷಿಗಳ ಕಥೆಗಳು, ಪಂಚತಂತ್ರದ ಕಥೆಗಳು, ಜಾನಪದ ಕಥೆಗಳು, ಐದನೇ ತರಗತಿಯಲ್ಲಿ ಪಠ್ಯದಲ್ಲಿ ಬರುವ ಶಬರಿ ಮತ್ತು ರಾಮ ಲಕ್ಷ್ಮಣ ಪಾಠ, ಆರನೇ ತರಗತಿಯ ಇಂಗ್ಲೀಷ್‌ನ ಮೌಸ್ ಅಂಡ್ ದಿ ಲಯನ್ ಪಾಠ ಎಲವನ್ನೂ ಮಕ್ಕಳು ಪಾತ್ರಗಳಾಗಿ ಗೊಂಬೆಗಳ ಮೂಲಕ ನೆರಳು ಮೂಡಿಸಿ ನಲಿಯುತ್ತಾರೆ.

ನಲಿಕಲಿ ತರಭೇತಿಯಲ್ಲಿ ಮಕ್ಕಳನ್ನು ರಂಜಿಸುತ್ತಾ ಪಾಠ ಹೇಳಲು ನಾನಾ ವಿಧಗಳಿವೆ. ಒತ್ತು ಚಿತ್ರಗಳು, ಊದು ಚಿತ್ರಗಳು, ಮಾರ್ಬಲ್ ಪೇಂಟಿಂಗ್, ಜೋಡಣೆ ಚಿತ್ರಗಳು ಇತ್ಯಾದಿ. ಇವೆಲ್ಲವನ್ನೂ ಬಳಸಿದರೂ ನಮ್ಮ ಶಾಲೆಯ ಮಕ್ಕಳಿಗೆ ಅಚ್ಚುಮೆಚ್ಚಿನದು ಈ ನೆರಳು ಗೊಂಬೆಯಾಟ. ಪರಿಣಾಮಕಾರಿ ಬೋಧನೆಗೆ ಇದು ಸಹಕಾರಿಯಾಗಿದೆ ಎನ್ನುತ್ತಾರೆ ಶಿಕ್ಷಕ ವೆಂಕಟರೆಡ್ಡಿ.

 ನೆರಳು ಗೊಂಬೆಯಾಟವನ್ನು ತೊಗಲು ಗೊಂಬೆಯಾಟವೆಂದೂ ಕರೆಯುವರು. ಈ ಕಲೆ ಅತಿ ಪ್ರಾಚೀನವಾದುದು. ಚೀನಾ ಮತ್ತು ಜಪಾನಿನ ಪ್ರಾಚೀನ ಸಾಹಿತ್ಯದಲ್ಲಿ ಇದರ ಪ್ರಸ್ತಾಪ ಬರುತ್ತದೆ. ಕ್ರಿ.ಪೂ. ಮೂರನೆಯ ಶತಮಾನದಲ್ಲಿಯೇ ತೊಗಲು ಗೊಂಬೆಯಾಟವು ಆಂಧ್ರದಲ್ಲಿ ಪ್ರಚಾರದಲ್ಲಿದ್ದುದಕ್ಕೆ ಆಧಾರಗಳಿವೆ. ಈ ಕಲೆ ಶಾತವಾಹನ, ಪಲ್ಲವ, ಚಾಳುಕ್ಯ, ಕಾಕತೀಯ ರಾಜರ ಕಾಲದಲ್ಲಲ್ಲದೆ ವಿಜಯನಗರ, ತಂಜಾವೂರು ರಾಜರುಗಳ ಕಾಲದಲ್ಲಿ ಅತ್ಯಂತ ಉನ್ನತಸ್ಥಿತಿಯನ್ನು ಪಡೆದು ಪ್ರಾಚೀನ ರೇವುಪಟ್ಟಣಗಳಾದ ಕಳಿಂಗಪಟ್ಟಣ, ಜೀಮಾನೀಪಟ್ಟಣ, ಕೋರಂಗಿ, ವಾಡ್ರೇವು ಇವುಗಳ ಮೂಲಕ ವಿದೇಶಗಳಿಗೆ ತೆರಳಿದ ಭಾರತೀಯರೊಡನೆ ಆಗ್ನೇಯ ಏಷ್ಯಾವನ್ನು ಪ್ರವೇಶಿಸಿದವು ಎಂಬ ಅಭಿಪ್ರಾಯವಿದೆ. ಅಲಿಂದ ಈ ಕಲೆ ಪಶ್ಚಿಮಾಭಿಮುಖವಾಗಿ ಪರ್ಶಿಯಾ, ಟರ್ಕಿ ದೇಶಗಳನ್ನು ಹಾಯ್ದು ಗ್ರೀಸ್ ದೇಶವನ್ನು ಪ್ರವೇಶಿಸಿತು. ಗ್ರೀಸಿನಲ್ಲೇ ಹೊಸ ರೂಪತಳೆದು ಉತ್ತರ ಆಫ್ರಿಕಾದಲ್ಲಿ ಮುಸ್ಲಿಂ ದೇಶಗಳಿಗೆ, ಇಟಲಿಗೆ ಮತ್ತು ಅಲ್ಲಿಂದ ಮುಂದೆ ಫ್ರಾನ್ಸ್‌ಗೆ ಕೂಡ ಹರಡಿತು.

ವಿದ್ಯಾರ್ಥಿಗಳು ನೆರಳುಗೊಂಬೆಯಾಟದ ಮೂಲಕ ಇಲಿ ಮತ್ತು ಸಿಂಹದ ಕಥೆಯನ್ನು ನಿರೂಪಿಸುತ್ತಿರುವುದು.


ಸಾಮಾನ್ಯವಾಗಿ ಹಳ್ಳಿಗಳಲ್ಲಿ ಇಂತಹ ಮನರಂಜನೆಯನ್ನು ಸುಗ್ಗಿಯ ಕಾಲದಲ್ಲಿ, ದುಡಿಮೆಯ ನಂತರ ಫಸಲನ್ನು ಮನೆಯಲ್ಲಿ ತುಂಬಿಕೊಂಡ ಮೇಲೆ ಏರ್ಪಡಿಸುವರು. ಇದಕ್ಕೆ ಸಂಭಾವನೆಯಾಗಿ ಕಲಾವಿದರಿಗೆ ಊರಿನವರು ದವಸ ಧಾನ್ಯಗಳನ್ನು ಸಂಗ್ರಹಿಸಿ ಕೊಡುತ್ತಾರೆ. ರಾಮಾಯಣ, ಮಹಾಭಾರತ, ಭಾಗವತ, ಪುರಾಣ ಹಾಗೂ ಜನಪದ ಕಥೆಗಳಿಂದ ಆಯ್ದ ಭಾಗಗಳನ್ನು ಈ ತೊಗಲು ಗೊಂಬೆಯಾಟದಲ್ಲಿ ಸಾಹಿತ್ಯವಾಗಿ ಬಳಸುವರು. ಇವರು ಬಳಸುವ ವಾದ್ಯ ವಿಶೇಷಗಳು ಮತ್ತು ಹಿಮ್ಮೇಳ ಈ ಕಲೆಯ ಮತ್ತೊಂದು ವೈಶಿಷ್ಟ್ಯ.
ಇಂತಹ ತೆರೆಮರೆಗೆ ಸರಿಯುತ್ತಿರುವ ಜನಪದ ಕಲೆಯನ್ನು ಶಾಲೆಯಲ್ಲಿ ಕಲಿಕೆಯ ಸಾಧನವಾಗಿ ಬಳಸಿರುವುದು ವಿಶೇಷ. ಈ ಕಲೆ ಮಕ್ಕಳನ್ನು ಕಲಿಕೆಯತ್ತ ಸೆಳೆಯುವುದಲ್ಲದೆ ಅವರೇ ಪಾಲ್ಗೊಂಡು ಅನುಭವಿಸಿ ಅಭಿನಯಿಸಲು ಪ್ರೇರೇಪಿಸುತ್ತದೆ. ಇಲಿ ಮಕ್ಕಳೇ ಹೊಸ ಹೊಸ ಕಥೆಗಳನ್ನು ನಿರೂಪಿಸುವುದರಿಂದ ಅವರ ಕ್ರಿಯಾಶೀಲತೆ ಅರಳುತ್ತದೆ.


ವರದನಾಯಕನಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಒಡೆದ ಬಳೆಚೂರು, ಒಣ ಎಲೆ ಹೂವು ಮತ್ತು ಮಾರ್ಬಲ್ ಪೇಂಟಿಂಗ್ ಬಳಸಿ ಹಳೆ ಆಹ್ವಾನಪತ್ರಿಕೆಗಳಲ್ಲಿ ಗ್ರೀಟಿಂಗ್ ಕಾರ್ಡ್ ತಯಾರಿಸಿ ತಮ್ಮಲ್ಲೇ ಹಂಚಿಕೊಳ್ಳುತ್ತಾರೆ.

ಕಾಮೆಂಟ್‌ಗಳಿಲ್ಲ: