ಭಾನುವಾರ, ಅಕ್ಟೋಬರ್ 31, 2010

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಮತ್ತು ಯಕ್ಷಗಾನ ಕಲಾವಿದರಿಗೆ ಅಭಿನಂದನೆಗಳು.

ರಾಜ್ಯೋತ್ಸವ ಪ್ರಶಸ್ತಿಗಳು ಪ್ರಕಟವಾಗಿವೆ. ಜಾನಪದ ಕ್ಷೇತ್ರಕ್ಕೆ ಹತ್ತು ಪ್ರಶಸ್ತಿಗಳು, ಯಕ್ಷಗಾನಕ್ಕೆ ಐದು ಪ್ರಶಸ್ತಿಗಳು ಲಬಿಸಿವೆ. ಈ ಎಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ‘ಕನ್ನಡ ಜಾನಪದ’ ಬ್ಲಾಗ್ ಮೂಲಕ ಅಭಿನಂದನೆಗಳನ್ನು ತಿಳಿಸಲು ಸಂತೋಷವಾಗುತ್ತಿದೆ. ರಾಜ್ಯೋತ್ಸವ ಪ್ರಶಸ್ತಿಯ ಇತರೆ ವಿಭಾಗಗಳು ವಿವಾದಕ್ಕೆ ಗುರಿಯಾದಂತೆ ಜಾನಪದ ಕ್ಷೇತ್ರದ ಪ್ರಶಸ್ತಿಗಳು ವಿವಾದಕ್ಕೆ ಗುರಿಯಾದದ್ದು ಕಡಿಮೆ. ಕಾರಣ ಜಾನಪದ ಕ್ಷೇತ್ರದ ಕಲಾವಿದರು ಈ ಪ್ರಶಸ್ತಿಯನ್ನೂ ಮೀರಿಸುವ ಕಲಾ ಪ್ರತಿಭೆಯನ್ನು ಸಹಜವಾಗಿ ಪಡೆದಿರುತ್ತಾರೆ. ಅದರಲ್ಲೂ ಎಲ್ಲಾ ಜಾನಪದ ಕಲಾವಿದರಿಗೂ ರಾಜ್ಯೋತ್ಸವ ಪ್ರಶಸ್ತಿ ಒಲಿಯುತ್ತದೆ ಎಂದೇನೂ ಅಲ್ಲ. ಕೆಲವೊಮ್ಮೆ ಜಾನಪದ ಕಲಾವಿದರ ಸೋಗು ಹೊತ್ತ ಕೆಲವು ನಕಲಿ ಕಲಾವಿದರಿಗೂ ಪ್ರಶಸ್ತಿ ಲಭಿಸುವ ಪವಾಡಗಳೂ ಜರುಗುತ್ತವೆ. ಇದರಲ್ಲಿ ಇನ್ನೂ ಕೆಲವು ಅಂಶಗಳು ಪ್ರಭಾವ ಬೀರುವ ಸಾದ್ಯತೆ ಇದೆ. ಜಾನಪದ ವಿದ್ವಾಂಸರು ಗುರುತಿಸಿದ ಕಲಾವಿದರಿಗೆ ಪ್ರಶಸ್ತಿಗಳು ಲಭಿಸುವ ಸಾದ್ಯತೆ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಆಯಾ ಕಲಾವಿದರ ಜಾತಿಯೂ ಪ್ರಭಾವ ಬೀರುತ್ತದೆ.
ಹಾಗೆ ನೋಡಿದರೆ, ಯಕ್ಷಗಾನವೂ ಜಾನಪದ ಕಲೆಯೇ ಆಗಿದ್ದರೂ ಅದನ್ನು ಪ್ರತ್ಯೇಕವಾಗಿ ಗುರುತಿಸುವಲ್ಲಿ ಮೇಲ್ವರ್ಗದ ರಾಜಕಾರಣ ಇದ್ದೇ ಇದೆ. ಈ ಸಲದ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆಯಲ್ಲಿಯೂ ಈ ರಾಜಕಾರಣ ಎದ್ದು ಕಾಣುತ್ತಿದೆ. ಕರ್ನಾಟಕದ ಜಾನಪದ ಕ್ಷೇತ್ರಕ್ಕೆ ಹತ್ತು ಪ್ರಶಸ್ತಿಗಳು ಲಬಿಸಿದರೆ, ಇದೇ ಜಾನಪದದ ಭಾಗವಾದ ಯಕ್ಷಗಾನಕ್ಕೆ ಐದು ಪ್ರಶಸ್ತಿಗಳು ಲಬಿಸಿವೆ. ಇದನ್ನು ನೋಡಿದರೆ ಜಾನಪದ ಕ್ಷೇತ್ರಕ್ಕಿಂತ ಯಕ್ಷಗಾನವೇ ಮೇಲುಗೈ ಸಾಧಿಸಿದಂತೆ ಕಾಣುತ್ತದೆ. ಈ ರಾಜಕಾರಣ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯನ್ನು ಬೇರೆ ಬೇರೆಯಾಗಿ ಒಡೆಯುವುದರಲ್ಲಿಯೂ, ಪ್ರತ್ಯೇಕ ಯಕ್ಷಗಾನ ಅಕಾಡೆಮಿ ರಚನೆಯಾದದ್ದರ ಹಿಂದೆಯೂ ಇದೆ. ಇದನ್ನು ನೋಡಿದರೆ ಮೇಲ್ವರ್ಗದವರ ಜನಪದ ಕಲೆಗಳಿಗೆ ಸಿಕ್ಕ ಪ್ರಾಶಸ್ತ್ಯ ಕೆಳವರ್ಗದ ಮತ್ತು ಅಲ್ಪಸಂಖ್ಯಾತರ ಜನಪದ ಕಲೆಗಳಿಗೆ ಸಿಗುತ್ತಿಲ್ಲ ಎನ್ನುವುದು ವಿಷಾದನೀಯ.
ಕನ್ನಡ ಜಾನಪದ ಬ್ಲಾಗ್ ಆರಂಭವಾದ ಮೊದಲಿಗೆ ಮಂಜಮ್ಮ ಜೋಗತಿಯ ಬಗ್ಗೆ ಬರೆಯಲಾಗಿತ್ತು. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಅವರು ಬಳ್ಳಾರಿ ಜಿಲ್ಲೆಯನ್ನು ಪ್ರತಿನಿದಿಸಿದ್ದಾರೆ. ಇದು ಮಂಜಮ್ಮನ ಪ್ರತಿಭೆಗೆ ಸಂದ ಗೌರವ. ಈ ಬಾರಿ ಜಾನಪದ ಮತ್ತು ಯಕ್ಷಗಾನ ಕ್ಷೇತ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದವರ ಪಟ್ಟಿ ಈ ಕೆಳಗಿನಂತಿದೆ.
ಜಾನಪದ
ಡಾ.ಶ್ರೀರಾಮ ಇಟ್ಟಣ್ಣವರ ಬಾಗಲಕೊಟೆ ಪ್ರೊ.ಬಿ.ಆರ್.ಪೊಲೀಸ್ ಪಾಟೀಲ್ ವಿಜಾಪುರ ಯುಗಧರ್ಮ ರಾಮಣ್ಣ ದಾವಣಗೆರೆ ಡಾ. ಜಿ.ವಿ. ದಾಸೇಗೌಡ ಮಂಡ್ಯ ಜಿ.ಪಿ.ಜಗದೀಶ ಚಿಕ್ಕಮಗಳೂರು ಮಲೆಯೂರು ಗುರುಸ್ವಾಮಿ ಚಾಮರಾಜನಗರ ಮಂಜವ್ವ ಜೋಗತಿ ಬಳ್ಳಾರಿ ಬೋವಿ ಜಯಮ್ಮ ಚಿತ್ರದುರ್ಗ ಸಂಬಣ್ಣಪುರವಂತರ ಗುಲ್ಬರ್ಗ ಮಾಲಾಬಾಯಿ ಸಂತ್ರಾಮ ಸಾಂಬ್ರೆಕರ್ ಬೆಳಗಾವಿ
ಯಕ್ಷಗಾನ
ನೆಬ್ಬೂರು ನಾರಾಯಣ ಹೆಗಡೆ ಉ. ಕ.ಜಿಲ್ಲೆ ಭಾಸ್ಕರ ಕೊಗ್ಗ ಕಾಮತ ದ.ಕ.ಜಿಲ್ಲೆ ಕೆ.ವಿ.ರಮೇಶ್(ಯಕ್ಷಗಾನ ಬೊಂಬೆಯಾಟ) ಕಾಸರಗೋಡು ಬಲಿಪ ನಾರಾಯಣ ಭಾಗವತ ಕಾಸರಗೋಡು ಕೆ.ಗೋಪಾಲಕೃಷ್ಣ ಭಟ್ ಬಂಟ್ವಾಳ ಗೋಪಾಲಕೃಷ್ಣ ಕಾಸರಗೋಡು ಮತ್ತೊಮ್ಮೆ ಈ ಎಲ್ಲಾ ಕಲಾವಿದರಿಗೂ ವಿದ್ವಾಂಸರಿಗೂ ಅಭಿನಂದನೆಗಳು. ಈ ಪ್ರಶಸ್ತಿ ಕಲಾವಿದರಲ್ಲಿ ಹೊಸ ಚೈತನ್ಯವನ್ನು ಮೂಡಿಸಲಿ ಎಂದು ಆಶಿಸೋಣ.

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ನೀವು ಯಕ್ಷಗಾನವನ್ನು ಜಾನಪದ ಕಲೆ ಎಂದಿರುವುದು ಸರಿಯಲ್ಲ. ಹಾಗೆ ಕರೆಯಬಾರದು. ಅದನ್ನು ನೀವು ರಾಜಕಾರಣ ಎಂದಿರುವುದು ಸರಿಯಲ್ಲ.
-ನಾರಾಯಣ ಭಟ್ಟ, ಬೆಂಗಳೂರು

Ragu Kattinakere ಹೇಳಿದರು...

ನಿಮಗೊ೦ದು ಪ್ರತಿಕ್ರಿಯೆ:

http://thoughtslot.blogspot.com/2011/02/blog-post.html