ಸೋಮವಾರ, ಅಕ್ಟೋಬರ್ 11, 2010

ಜೋಗತಿ ಕಲೆಗೆ ಹೊಸ ಮೆರಗು ತಂದ ಮಂಜಮ್ಮ ಜೋಗತಿ

ಜನಪದ ಕಲೆಗಳನ್ನು ಅಭಿವ್ಯಕ್ತಿಸುವವರ ಜಾತಿ, ವರ್ಗ, ಲಿಂಗವನ್ನು ಆಧರಿಸಿ ಆಯಾ ಜನಪದ ಕಲೆಗಳಿಗೆ ಸಾಮಾಜಿಕ ದೃಷ್ಟಿಕೋನವೊಂದು ರೂಪುಗೊಳ್ಳುತ್ತದೆ. ಹಾಗಾಗಿ ಜನಪದ ಕಲೆಗಳನ್ನು ನೋಡುವ ಕ್ರಮದಲ್ಲೂ ಶ್ರೇಣಿಕರಣದ ಬಾವನೆಗಳು ಬೆರೆತಿವೆ. ಹಾಗೆ ಅಸ್ಪ್ರಶ್ಯ ಕಲೆಯಂತೆ ನೋಡುವ ಕಲೆಗಳಲ್ಲಿ ಜೋಗತಿ ಕಲೆಯೂ ಒಂದು. ಕೆಲವೊಮ್ಮೆ ಆಯಾ ಕಲೆಯನ್ನು ಅಭಿವ್ಯಕ್ತಿಸುವ ಕಲಾವಿದರು ತಮ್ಮ ಕಲೆಯಿಂದಾಗಿಯೇ ಆಯಾ ಕಲೆಯ ನೋಡುವ ಕ್ರಮವನ್ನು ಬದಲಿಸುವ ಸಾಧ್ಯತೆಗಳೂ ಇವೆ. ಯಡ್ರಾಮನಹಳ್ಳಿ ದೊಡ್ಡಬರಮಪ್ಪರಿಂದ ತೊಗಲುಗೊಂಬೆ ಕಲೆ, ಈರಮ್ಮನಿಂದ ಬುರ್ರಕಥಾ ಕಲೆಯನ್ನು ನೋಡುವ ಕ್ರಮದಲ್ಲಾದ ಬದಲಾವಣೆಗಳನ್ನು ಗಮನಿಸಬಹುದು. ಹಾಗೆ ನೋಡುವುದಾದರೆ ಅಷ್ಟೇನೂ ಗೌರವಯುತವಲ್ಲದ ಜನಪದ ಕಲೆಗಳಲ್ಲಿ ಜೋಗತಿ ಕಲೆಯೂ ಒಂದು. ಕಾರಣ ಈ ಕಲೆಯನ್ನು ಅಭಿವ್ಯಕ್ತಿಸುವವರು ಬಹುಪಾಲು ಗಂಡು ಜೋಗತಿಯರು (ಮಂಗಳಮುಖಿಯರು). ಉತ್ತರ ಕರ್ನಾಟಕ, ಹೈದರಾಬಾದ ಕರ್ನಾಟಕದಲ್ಲಿ ಹುಡುಗನಲ್ಲಿ ಹಾರ್ಮೋನ್ಸ್ ಉತ್ಪತ್ತಿಯಲ್ಲಾದ ಜೈವಿಕ ವ್ಯತ್ಯಯಗಳಾಗಿ ಹುಡುಗಿಯ ಲಕ್ಷಣಗಳು ಕಾಣಿಸಿಕೊಂಡರೆ, ಅದನ್ನು ಯಲ್ಲಮ್ಮನ ಪವಾಡ ಎಂದು ಭಾವಿಸಿ ಅಂತವರಿಗೆ ಯಲ್ಲಮ್ಮ ಅಥವಾ ಉಚ್ಚಂಗಮ್ಮ ದೇವಿಯ ಮುತ್ತುಕಟ್ಟಿಸಿ ಸೀರೆ ಉಡುಸಿ ಜೋಗತಿಯರನ್ನಾಗಿ ಮಾಡಲಾಗುತ್ತ್ತದೆ. ಇದರಲ್ಲಿ ಹೆಣ್ಣುಮಕ್ಕಳೂ ಮುತ್ತುಕಟ್ಟಿಸಿಕೊಂಡು ಜೋಗತಿಯಾಗುವ ಕ್ರಮವೂ ಇದೆ. ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಇಂತಹ ಜೋಗತಿಯರ ಸಂಖ್ಯೆ ದೊಡ್ಡದು. ಇವರುಗಳು ಯಲ್ಲಮ್ಮನ ಹಾಡು ಹೇಳುತ್ತಾ, ಜಮದಗ್ನಿ ಋಷಿ ಮತ್ತು ಯಲ್ಲಮ್ಮನ ಜೀವನ ವೃತ್ತಾಂತನ್ನು ನಾಟಕ ಮಾಡುತ್ತಾ, ಚೌಟಕಿ ಬಾರಿಸುತ್ತಾ ಊರೂರು ಅಲೆದು ಭಿಕ್ಷೆ ಬೇಡುತ್ತಾರೆ. ಇಂತಹ ಜೋಗತಿ ಕಲೆಗೆ ಒಂದು ಗೌರವದ ಸ್ಥಾನ ತಂದವರಲ್ಲಿ ಕಾಳಮ್ಮ ಜೋಗತಿ ಮೊದಲಿಗರು. ಜೋಗತಿ ಕಲೆಗೆ ಜಾನಪದಶ್ರೀ ಪ್ರಶಸ್ತಿ ಪಡೆದ ಮೊದಲ ಜೋಗತಿಯೂ ಕೂಡ. ಕಾಳಮ್ಮನ ಶಿಷ್ಯೆ ಮಂಜಮ್ಮ ಜೋಗತಿ ಸಧ್ಯ ಜೋಗತಿ ಕಲೆಗೆ ಹೂಸ ಆಯಾಮವನ್ನು ನೀಡುತ್ತಿದ್ದಾರೆ. ಕರ್ನಾಟಕದಾಧ್ಯಂತ ಹಲವಾರು ಕಡೆಗಳಲ್ಲಿ ಮಂಜಮ್ಮ ಜೋಗತಿ ಕಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಅವರೊಂದಿಗೆ ಒಂದು ದೊಡ್ಡ ತಂಡವೇ ಇದೆ. ಕಲೆಯನ್ನೇ ನಂಬಿ ಈ ತಂಡ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಪುಟ್ಟದಾದ ಆಶ್ರಯ ಮನೆಯಲ್ಲಿ ವಾಸಿಸುತ್ತಿದೆ. ಗಂಡು ಜೋಗತಿಯರೆಂದರೆ ಮೂಗು ಮುರಿಯುವ ಮನಸ್ಥಿಯನ್ನು ಬದಲಾಯಿಸಿ ಗಂಡು ಜೋಗತಿಯರೂ ಕೂಡ ಕಲಾವಿದರು ಎನ್ನುವ ಹೊನ ನಂಬಿಕೆಯನ್ನು ಬಳ್ಳಾರಿ ಜಿಲ್ಲೆಯಾದ್ಯಾಂತ ಹುಟ್ಟಿಸುವತ್ತ ಮಂಜಮ್ಮನ ತಂಡ ಕ್ರಿಯಾಶೀಲವಾಗಿದೆ. ಅದೀಗ ರಾಜ್ಯವ್ಯಾಯೂ ಆಗಲಿದೆ. ಜೋಗತಿ ಕಲೆಯನ್ನು ಈ ಕಾಲಕ್ಕೆ ಅನ್ವಯಿಸಿ ಹೊಸ ರೂಪ ನೀಡಿ ಪ್ರದರ್ಶನ ನೀಡುವುದು ಮಂಜಮ್ಮನ ಹೊಸ ಸಾಧ್ಯತೆ. ಇದನ್ನು ಗುರುತಿಸಿ ಮಂಜಮ್ಮನಿಗೆ ಜಾನಪದ ಅಕಾಡೆಮಿ ಜಾನಪದಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸರಕಾರ ಆಯೋಜಿಸುವ ಜಾನಪದ ಜಾತ್ರೆಗಳಲ್ಲಿ ಮಂಜಮ್ಮನ ಜೋಗತಿ ಕಲೆ ತುಂಬಾ ಆಕರ್ಷಕವಾಗಿದೆ. ಇಷ್ಟೇ ಅಲ್ಲದೆ ಮಂಜಮ್ಮ ಕರ್ನಾಟಕದ ಜೋಗತಿ ಕಲೆಯನ್ನು ಮಹರಾಷ್ಟ್ರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರ, ನಾಗಪುರ ಅವರಿಂದ ಗುರುತಿಸ್ಪಟ್ಟು ಗುರುಶಿಷ್ಯ ಪರಂಪರೆಯ ಯೋಜನೆಯಡಿ ಅನೇಕರಿಗೆ ಜೋಗತಿ ಕಲೆಯ ತರಬೇತಿಯನ್ನು ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಜನಪದ ಕಲೆಗಳ ಹೊಸ ರೂಪಾಂತರಗಳನ್ನು ಗುರುತಿಸುವ ಮತ್ತು ಅವುಗಳ ಹೊಸ ಬಗೆಯ ರಾಜಕಾರಣವನ್ನು ಅರಿತುಕೊಳ್ಳುವ ಅಧ್ಯಯನಗಳು ನಡೆಯುತ್ತಿಲ್ಲ. ಮಂಜಮ್ಮ ಜೋಗತಿ ಕಲೆಯಲ್ಲಿ ಮಾಡಿರುವ ರೂಪಾಂತರಗಳನ್ನು ನೋಡಿದರೆ, ಅವು ಎಲ್ಲಿಯೂ ದಾಖಲಾಗಿಲ್ಲದಿರುವುದು ಕಂಡುಬರುತ್ತದೆ. ಅಂತಹ ಪ್ರಯತ್ನಗಳು ಈಗಷ್ಟೇ ನಡೆಯಬೇಕಿದೆ. ಮಂಜು ಮಂಜಮ್ಮನಾದ ಕಥಾನಕ ನಿಜಕ್ಕೂ ಹೊಸ ಅನುಭವ ಲೋಕವನ್ನು ತೆರೆದಿಡುತ್ತದೆ. ಅವರ ಬದುಕಿನ ಕಥನ ‘ನಡುವೆ ಸುಳಿವಾತ್ಮ’ ಪುಸ್ತಕ ರೂಪದಲ್ಲಿ ಸಿದ್ದಗೊಳ್ಳುತ್ತಿದೆ. ಮೇಲಿನ ಚಿತ್ರಗಳು ಮಂಜಮ್ಮ ಮತ್ತು ಅವರ ತಂಡದ ಕೆಲವು ಕ್ಷಣಗಳು.

2 ಕಾಮೆಂಟ್‌ಗಳು:

ಡಾ.ಅರುಣ್ ಜೋಳದ ಕೂಡ್ಲಿಗಿ ಹೇಳಿದರು...

Hi Arun,

I've read your blog and it looks good. I appreciate your views on transformation of folk arts and political undercurrents found in them. I agree not much work has been done in this regard. Hopefully, you will make an effort in near future and formulate a model.

Regards,
Ambalike Hiriyanna

siddha ಹೇಳಿದರು...

ಅರುಣ್, ಜನಪದ ಸಂಸ್ಕೃತಿಯ ಬಗ್ಗೆ ನಿಮಗಿರುವ ಕಾಳಜಿ ತುಂಬಾ ಮೆಚ್ಚಿಕೆಯಾಯಿತು. ಅಲಕ್ಷ್ಯಕ್ಕೆ ಒಳಗಾಗಿರುವ ಜೋಗತಿ ಕಲೆಯ ಬಗ್ಗೆ ಪರಿಚಯಿಸಿದ್ದೀರಿ ಸಂತೋಷ. ಅಂತೆಯೇ ಕೂಡ್ಲಿಗಿ ತಾಲೂಕಿನಲ್ಲಿ ತೊಗಲುಗೊಂಬೆಯಾಟದ ಬಡೆಲಡುಕು ತಿಪ್ಪೇಸ್ವಾಮಿಯೊಬ್ಬರೇ ಉಳಿದಿರುವುದು. ತೊಗಲುಗೊಂಬೆಯಾಟದ ಬಗ್ಗೆಯೂ ಬ್ಲಾಗ್ ನಲ್ಲಿ ಪ್ರಕಟಿಸಿ. ಅಪರೂಪದ ತೊಗಲುಗೊಂಬೆಯಾಟದ ಕಲಾವಿದರಲ್ಲಿ ತಿಪ್ಪೇಸ್ವಾಮಿಯೂ ಒಬ್ಬರು. ನನ್ನಿಂದ ಸಹಕಾರವಿದೆ.