ಸೋಮವಾರ, ಫೆಬ್ರವರಿ 21, 2011

ದೆಹಲಿಯಲ್ಲಿ ರಹಮತ್ ತರೀಕೆರೆ

( ಈಚೆಗಷ್ಟೆ ರಹಮತ್ ತರೀಕೆರೆ ದೆಹಲಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸ್ವೀಕರಿಸುವ ಹೊತ್ತಿನ ಕೆಲವು ಅಪರೂಪದ ಫೋಟೋಗಳು ಇಲ್ಲಿವೆ. ಇಲ್ಲಿನ ಫೋಟೋಗಳು ಡಿ.ಬಾಲಕೃಷ್ಣ ನಾಯ್ಕ್ ಅವರ ಕೆಂಪುಕೋಟೆ ಬ್ಲಾಗ್ ನಿಂದ ಎರವಲು ಪಡೆದು ಇಲ್ಲಿ ಬಳಸಿಕೊಳ್ಳಲಾಗಿದೆ)

ಶುಕ್ರವಾರ, ಫೆಬ್ರವರಿ 18, 2011

ದನಿ ಕಳೆದುಕೊಳ್ಳುತ್ತಿರುವ ಉರುಮೆ ವಾದ್ಯ ಬಾರಿಸುವವರು

-ಸಿದ್ದರಾಮ ಹಿರೇಮಠ, ಕೂಡ್ಲಿಗಿ. (ಉರುಮೆ ವಾದ್ಯ ದೇಸಿ ವಾದ್ಯಗಳಲ್ಲಿ ಪ್ರಮುಖವಾದುದು. ಇದು ಗ್ರಾಮದೇವತೆಯ ಜಾತ್ರೆಗೆ ಕಳೆ ಗಟ್ಟಿಸುವ ವಾದ್ಯ. ಇದರ ದ್ವನಿಯೇ ತೀರಾ ಗಡುಸಾದುದು. ಮನಕ್ಕೆ ಇಂಪು ನೀಡುವ ಜಾಯಮಾನ ಈ ವಾದ್ಯದ್ದಲ್ಲ. ಇದು ಶೋಷಿತರ ನೋವನ್ನು ದೊಡ್ಡದಾಗಿ ಎತ್ತರದ ದ್ವನಿಯಲ್ಲಿ ಪ್ರತಿರೋಧಿಸುವುದರ ರೂಪಕದಂತಿದೆ. ಈ ವಾದ್ಯವನ್ನು ನುಡಿಸುವ ಕಲಾವಿದರು ಇಂದು ಅನಾಥ ಪ್ರಜ್ಞೆಯಲ್ಲಿ ಬದುಕು ದೂಡುತ್ತಿದ್ದಾರೆ. ಹೊಸ ತಲೆಮಾರು ಈ ವಾದ್ಯದ ಸಂಗ ತ್ಯಜಿಸಿ ಹೊಸ ಬದುಕಿನತ್ತ ಆಸೆಗಣ್ಣುಗಳಿಂದ ನೋಡುತ್ತಿದ್ದಾರೆ. ಅವರ ಹೊಸ ಬದುಕು ಹಸನಾಗಲಿ ಎಂದು ನಮ್ಮ ಹರಕೆ. ಆದರೆ ಉರುಮೆಯನ್ನೇ ನಂಬಿ ಬದುಕುತ್ತಿರುವ ಹಿರಿ ಜೀವಗಳನ್ನು ಜನಪದ ಕಲಾವಿದರೆಂದು ಗುರುತಿಸಿ ಅವರ , ಮಾಶಾಸನ ಮುಂತಾದ ಮೂಲಭೂತ ಸೌಲಭ್ಯಗಳನ್ನು ಕೊಡುವಲ್ಲಿ ಸರಕಾರ ಗಮನಹರಿಸಬೇಕಾಗಿದೆ. ಅಂತಹ ಉರುಮೆ ವಾದಕರ ಅಳಲನ್ನು ಕವಿ, ಸೃಜನಶೀಲ ಲೇಖಕರಾದ ಸಿದ್ಧರಾಮ ಹಿರೇಮಠ ಅವರು ಬರಹದಲ್ಲಿ ಹಿಡಿದಿಟ್ಟಿದ್ದಾರೆ. -ಅರುಣ್ ) ನಾಡಿನ ಕಲೆ, ಸಂಸ್ಕೃತಿ, ಪರಂಪರೆ, ಜಾನಪದೀಯ ಅಂಶಗಳನ್ನು ಮೈಗೂಡಿಸಿಕೊಂಡಿರುವ ಉರುಮೆ ವಾದ್ಯಗಾರರು, ಸರ್ಕಾರದ ಯಾವುದೇ ಪ್ರೋತ್ಸಾಹ, ಸೌಲಭ್ಯಗಳಿಲ್ಲದೆ ದನಿ ಕಳೆದುಕೊಳ್ಳುತ್ತಿದ್ದಾರೆ. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಮರಬನಹಳ್ಳಿಯ ಉರುಮೆ ವಾದ್ಯಗಾರರ ತಂಡ ಹಲವಾರು ಜಿಲ್ಲೆಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದರೂ ಇಲ್ಲಿಯ ಯಾರಿಗೂ ಇದುವರೆಗೆ ಯಾವುದೇ ರೀತಿಯ ಮಾಸಾಶನ ದೊರೆತಿಲ್ಲ. ಜಿರ್..ಜೀಂಯ್....... ಎಂದು ಕೇಳುಗರ ಎದೆಬಡಿತವನ್ನೇ ಏರುಪೇರು ಮಾಡುವಂತಿರುವ ಉರುಮೆ ವಾದ್ಯ, ಪರಂಪರಾಗತವಾಗಿ ಬಂದದ್ದು. ಮರಬನಹಳ್ಳಿಯ ಉರುಮೆ ವಾದ್ಯಗಾರರು ತಮ್ಮ ತಲೆತಲಾಂತರಗಳಿಂದಲೂ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕೆಲ ವಾದ್ಯಗಾರರು ವಯಸ್ಸಾಗಿ ಯಾವುದೇ ಸೌಲಭ್ಯವಿಲ್ಲದೆ ಮರಣಹೊಂದಿದ್ದರೆ, ಇರುವ ಹಿರಿಯರು ಮಾಸಾಶನದ ನಿರೀಕ್ಷೆಯಲ್ಲೇ ಮುಪ್ಪಾಗಿದ್ದಾರೆ. ಯಾವುದೇ ಜಾತ್ರೆ, ಉತ್ಸವ, ಗ್ರಾಮದೇವತೆಗಳ ಮೆರವಣಿಗೆಗಳಿಗೆ ಉರುಮೆ ವಾದ್ಯ ಬೇಕೇ ಬೇಕು. ಅದು ಸತ್ಸಂಪ್ರದಾಯವೂ ಹೌದು, ಕುಲಕಸಬೂ ಹೌದು. ಇವರ‍್ಲಿಲದೆ ಯಾವುದೇ ಮೆರವಣಿಗೆ, ಸಂಪ್ರದಾಯಿಕ ಉತ್ಸವಗಳಿಗೆ ಮೆರಗು ಬರುವುದೇ ಇಲ್ಲ. ಉರುಮೆಯವರ ತಂಡ ಮೆರವಣಿಗೆಯ್ಲಲಿದೆಯೆಂದರೆ ಕುಣಿಯಲಾರದವರೂ ಇದರ ನಾದಕ್ಕೆ, ಆವೇಶಕ್ಕೆ ಮಾರುಹೋಗಿ ಕುಣಿಯತೊಡಗುತ್ತಾರೆ. ವಿಶೇಷವಾಗಿ ಗ್ರಾಮದೇವತೆಗಳಿಗೆ ಉರುಮೆ ವಾದ್ಯ ಬೇಕು. ಅಷ್ಟೇ ಅಲ್ಲದೆ ಜನಪ್ರತಿನಿಧಿಗಳು ಗೆದ್ದರೆ, ಮಂತ್ರಿ ಮಹೋದಯರು ಬಂದರೆ ಅವರ ಮೆರಣಿಗೆಗೆ ಕಳೆ ಕಟ್ಟುವುದೇ ಉರುಮೆ ವಾದ್ಯದ ಸದ್ದು. ಎಲ್ಲರ ಮೆರವಣಿಗೆಗೆ ಕಳೆಕಟ್ಟುವ, ದೇವತೆಗಳನ್ನು ಸಂಪ್ರೀತಿಪಡಿಸುವ ಉರುಮೆ ವಾದಕರು ಮಾತ್ರ ಕುಣಿಯಲಾರದಂತೆ ಕುಸಿದುಹೋಗಿದ್ದಾರೆ. ‘ಎಂ.ಪಿ.ಪ್ರಕಾಶ ಸಾಹೇಬ್ರು ಇದ್ದಾಗ ನಮಗೆಲ್ಲ ಅನುಕೂಲ ಮಾಡಿಕೊಟ್ಟಿದ್ರು, ಇರಾಕ ಮನೀನೂ ಕೊಟ್ಟಿದ್ರು, ಉರುಮೆ ಕೊಡಿಸಿದ್ರು, ಕಾರ್ಯಕ್ರಮದಾಗ ಅವಕಾಶಾನೂ ಕೊಡಿಸಿದ್ರು, ಈಗ ಏನೂ ಇಲ್ರಿ’ ಎಂದು ಉರುಮೆ ವಾದ್ಯದ ೭೫ ವರ್ಷಗಳ ಹಿರಿಯ ಪಟಗಾಣಿ ಬಸಪ್ಪ ನೊಂದು ನುಡಿಯುತ್ತಾನೆ. ಇದರಿಂದ ಏನೂ ಲಾಭವಿಲ್ಲವೆ ಎಂದು ಪ್ರಶ್ನಿಸಿದರೆ, ‘ ಇದು ನಮ್ಮ ಕುಲಕಸಬು, ಯಾರು ಕೊಟ್ರೇನು, ಬಿಟ್ರೇನು ನಮ್ ಕೆಲ್ಸ ನಾವು ಮಾಡ್ತೀವಿ, ಕೆಲವರು ಕೊಡ್ತಾರೆ, ಕೆಲವರು ಅದರಾಗೆ ಉಳಿಸ್ಕೊಂಡು ನಮಗೆ ಕಡಿಮಿ ಕೊಡ್ತಾರ ಅದಕ್ಕೇನೂ ನಾವು ಬೇಜಾರು ಮಾಡ್ಕಣಂಗಿಲ್ಲ ಎಂದು ವಾದಕರು ನಿರಾಶೆಯಿಂದ ಹೇಳುತ್ತಾರೆ. ಗ್ರಾಮದಲ್ಲಿ ನೋಂದಣಿಯಾಗಿರುವ ಉರುಮೆ ವಾದಕರ ಸಂಘವೂ ಇದೆ. ಛಲವಾದಿ ಮಾರಪ್ಪ ಸಂಘದ ಅಧ್ಯಕ್ಷ. ‘ಮಾಸಾಶನ ಕೊಡಿಸ್ತೀವಿ ಅಂತ ಕಾಗ್ದಪತ್ರ ಎಲ್ಲಾನೂ ತೊಗೊಂಡು ಹೋದ್ರು, ಚಿತ್ರದುರ್ಗಕ್ಕ ಇಂಟ್ರ್ಯೂಗೆ ಬರ್ರಿ ಅಂತ ಕಾಗ್ದ ಬಂತು, ಉರುಮಿ ಬಾರ್ಸಿ ತೋರ್ಸಪಾ ಅಂದ್ರು, ಬಾರ್ಸಿ ಬಂದ್ವಿ, ಇದಾಗಿ ೩-೪ ವರ್ಷಾತು ಇನ್ನವರೆಗೂ ಅದೇನಾತಂತನ ಗೊತ್ತಿಲ್ಲ’ ಎಂದು ಮಾರಪ್ಪ ಹೇಳಿದರು. ಈ ಗ್ರಾಮದ ತಂಡದ ಸದಸ್ಯರು ಪ್ರತಿವರ್ಷವೂ ಹಂಪಿ ಉತ್ಸವದಲ್ಲಿ ತಮ್ಮ ಕಲೆಯ ಗತ್ತನ್ನು ಪ್ರದರ್ಶಿಸಿದ್ದಾರೆ, ಬಳ್ಳಾರಿ ಜಿಲ್ಲೆಯೂ ಸೇರಿದಂತೆ ಚಿಕ್ಕಮಗಳೂರು, ಧಾರವಾಡ, ದಾವಣಗೆರೆ ಹೀಗೆ ಹಲವಾರು ಜಿಲ್ಲೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ, ಉರುಮೆ ಬಾರಿಸಿ ಈಗಾಗಲೇ ಇವರ ಕೈಗಳು ಸುಸ್ತಾಗಿವೆ, ದಣಿವಾಗಿದೆ, ಇದೀಗ ಇವರಿಗೆ ಸರ್ಕಾರದ ಆಸರೆ ಬೇಕಾಗಿದೆ, ಕಲೆಗೆ ಪ್ರೋತ್ಸಾಹ, ಪ್ರಶಸ್ತಿಗಳೂ ಬೇಕಾಗಿವೆ. ಸರ್ಕಾರಿ ಕಾರ್ಯಕ್ರಮಗಳಿಗೆ ಇವರನ್ನು ಕರೆಯಲಾಗುತ್ತದಾದರೂ ಕೆಲವೊಮ್ಮೆ ಅಂಚೆಯ ವಿಳಂಬದಿಂದಾಗಿ, ಕಾರ್ಯಕ್ರಮ ಮುಗಿದ ನಂತರ ಆಹ್ವಾನ ಪತ್ರಗಳು ತಲುಪಿದ ಉದಾಹರಣೆಗಳೂ ಇವೆ. ಮೈಸೂರು ದಸರಾ ಉತ್ಸವಕ್ಕೆ ಆಹ್ವಾನ ಬಂದಾಗ, ಅದಾಗಲೇ ಮುಗಿದುಹೋಗಿತ್ತು ಎಂದು ಸಂಘದ ಅಧ್ಯಕ್ಷ ಮಾರಪ್ಪ ಬೇಸರದಿಂದ ಹೇಳುತ್ತಾರೆ. ಇವರ ಮಕ್ಕಳು ಶಿಕ್ಷಣ ಪಡೆದಿದ್ದಾರೆ, ಕೆಲವರು ಒಳ್ಳೆಯ ಉದ್ಯೋಗದಲ್ಲೂ ಇದ್ದಾರೆ, ಅವರೂ ಸಹ ಕೆಲವೊಮ್ಮೆ ಉತ್ಸವಗಳಲ್ಲಿ ಉರುಮೆ ಬಾರಿಸಿ ತಮ್ಮ ಕಲಾ ಪ್ರೌಢಿಮೆ ಮೆರೆದಿದ್ದಾರೆ. ಹೀಗೆ ದೇಸಿ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುತ್ತಿರುವ ಉರುಮೆ ವಾದಕರಿಗೆ ಮಾಸಾಶನ, ಮೆಚ್ಚುಗೆಯ ಮಾತುಗಳ ಅವಶ್ಯಕತೆಯಿದೆ. ಕಲೆಗೆ ಸಂಬಂಧಿಸಿದ ಇಲಾಖೆಗಳು ತಮ್ಮನ್ನು ನಿರ್ಲಕ್ಷಿಸುತ್ತಿವೆ ಎಂಬ ನೋವೂ ಉರುಮೆ ವಾದಕರಿಗಿದೆ. ತಾಲೂಕಿನ ಸೂಲದಾರಹಳ್ಳಿ, ಇಮಡಾಪುರ, ಗುಂಡುಮುಣುಗು, ಮಾಡ್ಲಾಕನಹಳ್ಳಿ, ಕುರಿಹಟ್ಟಿ, ಕಡೇಕೊಳ್ಳ ಗ್ರಾಮಗಳೂ ಸೇರಿದಂತೆ ತಾಲೂಕಿನಲ್ಲಿ ಸುಮಾರು ೩೦೦-೪೦೦ ಜನ ಉರುಮೆ ವಾದಕರಿದ್ದಾರೆ. ಉರುಮೆ ವಾದ್ಯದ ಹಿರಿಯರಿಗೆ ನೆರವು, ಹೊಸಬರಿಗೆ ಪ್ರೋತ್ಸಾಹ, ಕಲಿಕೆಯ ಅವಶ್ಯಕತೆಯಿದೆ, ಸಂಬಂಧಿಸಿದ ಇಲಾಖೆಗಳು ಇತ್ತ ಗಮನಿಸಬೇಕಾಗಿದೆ.

ಜನಪದ ಕವಿ ನಿಡುಗುರ್ತಿ ಅಂಜಿನಪ್ಪ

-ಸ್ವರೂಪನಂದ ಎಂ ಕೊಟ್ಟೂರು ( ಜಾನಪದ ಕಲಾವಿದರಲ್ಲಿ, ಅಕ್ಷರವಂತರೂ ಇದ್ದಾರೆ. ಅವರ ಅಕ್ಷರ ಜ್ಞಾನ ಅವರ ಜಾನಪದ ಸಾಹಿತ್ಯದ ಮೇಲೆ ಪ್ರಭಾವ ಬೀರಿರುತ್ತದೆ. ಇದನ್ನು ಕೂಡ ನಾವಿಂದು ಜನಪದ ಅಂತಲೇ ಗುರುತಿಸಬೇಕಿದೆ. ಆದರೆ ಇದನ್ನು ವಿವರಿಸಿಕೊಳ್ಳುವಾಗ, ಬೇರೆಯದೇ ಕ್ರಮವನ್ನು ಅನುಸರಿಸುವ ಅಗತ್ಯವಿದೆ. ಈಗ ಕರ್ನಾಟಕದಲ್ಲಿ ಹುಟ್ಟುತ್ತಿರುವ ಜಾನಪದದಲ್ಲಿ ಈ ಆಯಾಮವಿರುವುದನ್ನು ಅಲ್ಲಗಳೆಯುವಂತಿಲ್ಲ. ಮೊಹರಂ ಗಾಯಕರು, ಡೊಳ್ಳಿನ ಹಾಡುಗಾರರು ಇಂತಹದೇ ನೆಲೆಯಲ್ಲಿ ಅಪಾರ ಸಾಹಿತ್ಯವನ್ನು ರಚಿಸಿದ್ದಾರೆ. ಈ ನಿಟ್ಟಿನಲ್ಲಿ ಜಾನಪದವನ್ನು ತೀರಾ ಭಿನ್ನವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಅಂತಹ ಒಬ್ಬ ಅಪರೂಪದ ಜಾನಪದ ಹಾಡುಗಾರ, ಕವಿಯಾದ ನಿಡುಗುರ್ತಿ ಅಂಜಿನಪ್ಪನ ಪರಿಚಯ ಇಲ್ಲಿದೆ. –ಅರುಣ್) ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ನಿಡಗುರ್ತಿ ಎಂಬ ಗ್ರಾಮದ ಅಂಜಿನಪ್ಪ ಒಬ್ಬ ಅಪ್ಪಟ ಜನಪದ ಕವಿ. ೭೦ ವರ್ಷದ ಅಜ್ಜನಿಗೆ ಹಾಡುವುದು ದಣಿವಲ್ಲ, ಬದಲಾಗಿ ಜೀವನೋತ್ಸಾಹ. ನಿಡಿದಾದ ಎತ್ತರದ, ಗಟ್ಟಿಮುಟ್ಟಾದ ದೇಹ, ದೇಹಕ್ಕೆ ತಕ್ಕ ದ್ವನಿ ಎಲ್ಲವೂ ದೇಸಿ ಹಾಡುಗಾರನೊಬ್ಬನ ಲಕ್ಷಣದ ಜೀವವಂತಿಕೆ ಇರುವ ವ್ಯಕ್ತಿತ್ವ. ಜಾನಪದ ವಿದ್ವಾಂಸರು, ಜಾನಪದ ನಶಿಸುತ್ತಿದೆ ಎನ್ನುವ ಹಳಹಳಿಕೆಯಲ್ಲೇ ಇಂತಹ ಜನಪದ ಕಲಾವಿದರನ್ನು ಮರೆಯುತ್ತಾರೆನಿಸುತ್ತದೆ. ಹಾಗಾಗಿ ಅಂಜಿನಪ್ಪ ಇನ್ನು ಅಧ್ಯಯನಕಾರರ ಗಮನಕ್ಕೆ ಬಿದ್ದಂತಿಲ್ಲ. ಏಳನೇ ತರಗತಿ ಕಲಿತಿರುವುವ ಅಂಜಿನಪ್ಪ, ಅಕ್ಷರ ಜ್ಞಾನವನ್ನು ತನ್ನ ಜನಪದ ಪ್ರತಿಭೆಗೆ ಬಳಸಿಕೊಂಡಿದ್ದಾರೆ. ಹಾಗಾಗಿಯೇ ಅಕ್ಷರ ರೂಪದ ಸಾಹಿತ್ಯನ್ನು ಜನಪದೀಕರಿಸಿದ ಹೆಚ್ಚುಗಾರಿಕೆ ಈ ಕಲಾವಿದನದು. ಈ ಇಳಿವಯಸ್ಸಿನಲ್ಲಿಯೂ ಅದ್ಭುತ ಹಾಡುಗಾರಿಕೆಯ ಮೂಲಕ ಜನರನ್ನು ಮಂತ್ರಮುಗ್ದರನ್ನಾಗಿಸುವ ಶಕ್ತಿ ಈ ಕಲಾವಿದನಿಗಿದೆ. ಮುಪ್ಪು ಆವರಿಸುತ್ತಿರುವುದು ತನ್ನ ದೇಹಕ್ಕೆ ವಿನಾಃ ನನ್ನ ಕಲಾ ಸೇವೆಗಲ್ಲಾ ಎಂಬ ಕಡಕ್ ಮಾತು ಈತನದು. ಈಗ್ಗೆ ೫೦ ವರ್ಷಗಳಿಂದ ಹಾಡುಗಾರಿಕೆಯನ್ನೇ ತನ್ನ ಬದುಕಾಗಿಸಿಕೊಂಡ ಈ ಹಿರಿ ಜೀವ ಜನಪದವನ್ನು ಬದುಕುತ್ತಿದ್ದಾರೆ. ಈ ತನಕ ಬಳ್ಳಾರಿ, ರಾಯಚೂರು, ಚಿತ್ರದುರ್ಗ ಮುಂತಾದ ಕಡೆಗಳಲ್ಲಿ ತನ್ನ ಹಾಡುಗಾರಿಕೆಯ ಸವಿಯನ್ನು ಜನರಿಗೆ ಹಂಚಿದ್ದಾರೆ. ಈ ಮೊದಲೇ ಹೇಳಿದೆ, ಅಕ್ಷರ ರೂಪದ ಸಾಹಿತ್ಯನ್ನು ಜನಪದೀಕರಿಸಿದ ಹೆಚ್ಚುಗಾರಿಕೆ ಈ ಕಲಾವಿದನದು ಎಂದು. ಇವರು ಪ್ರಾರಂಭದಲ್ಲಿ ಮೈಸೂರು ವಿವಿ, ನಂತರದಲ್ಲಿ ಕ.ಸಾ.ಪ ದಿಂದ ಪುಸ್ತಕಗಳನ್ನು ತಂದು ಓದಿದ್ದಾರೆ, ಈ ಬಗೆಯ ಅವರ ಓದು, ಅವರ ಹಾಡುಗಾರಿಕೆಯ ಸಾಹಿತ್ಯದ ಮೇಲೆ ಪ್ರಭಾವ ಬೀರಿದೆ. ಈ ಬಗೆಯ ಮೌಖಿಕತೆ ಶಿಷ್ಟದ ಮಿಲನ ಇವರಲ್ಲಿ ವಿಚಿತ್ರ ರೀತಿಯಲ್ಲಿ ಬೆರೆತಿದೆ. ಹಾಗಾಗಿ ಇವರು ಬಸವಣ್ಣನವರ ೩೬೫ ವಚನಗಳು, ಕನಕ ದಾಸರ ೧೫೦ ಪದಗಳು, ಪಾಂಡುರಂಗರ ೨೬೫ ಪದಗಳು, ಸಂಗ್ರಹ ಮೂಲದ ೬೮ ಹಾಡುಗಳು, ಶಿಶುನಾಳಜ್ಜರ ಮತ್ತು ನಾಗಲಿಂಗಜ್ಜರ ತಲಾ ೬೫ ಹಾಡುಗಳನ್ನು ಜನಪದ ಹಾಡಿನ ಲಯದಲ್ಲಿ ಹಾಡುತ್ತಾರೆ. ಜೊತೆಗೆ ಹಂಪಿ ಇತಿಹಾಸದ ಬಗ್ಗೆ, ಬಸವಣ್ಣ ಹಾಗೂ ಮುರುಘರಾಜೇಂದ್ರ ಸ್ವಾಮಿಗಳ ಮೇಲೆ ೬೦ ಗೀತೆಗಳನ್ನು ಸ್ವತಃ ರಚಿಸಿದ್ದಾರೆ. ಹಾಗಾಗಿ ಇವರು ನಿಜಾರ್ಥದಲ್ಲಿ ಜನಪದ ಕವಿಯೇ ಸರಿ. ಅಂಜಿನಪ್ಪ ಅಚ್ಚರಿ ಮೂಡಿಸುವ ಕಲಾವಿದ. ಇವರು ಹಾಡುವುದಕ್ಕೆ ಸಾಥ್ ನೀಡುವುದು ಚರ್ಮದ ದಿಂಬಡಿ. ಸಂಗೀತದ ೨೮ ರಾಗಗಳನ್ನು ಬಲ್ಲವರಾಗಿರುವ ಇವರು ಸಂಗೀತದಲ್ಲಿ ಪ್ರವೀಣರು. ಇವರು ಹಾಡಲು ನಿಂತರೆ ಸಂಗಿತಾಸಕ್ತರ ದಂಡೇ ಇವರತ್ತ ದೌಡಾಯಿತ್ತದೆ. ಆಕರ್ಷಕ ಕಂಠ ಸಿರಿ, ಹಾಡುವಾಗ ಕಂಡುಬರುವ ಗತ್ತು-ಗಾಂಭೀರ್ಯ, ಸ್ವ-ರಚಿತ ಕವನಗಳಲ್ಲಿನ ಗ್ರಾಮೀಣ ಸೊಗಡು, ಅದರಲ್ಲಿ ಬಳಸಿದ ನಾಣ್ಣುಡಿಗಳು ಕೇಳುಗರನ್ನು ಆಕರ್ಶಿಸುತ್ತದೆ. ಇವರು ಕೇವಲ ಸಂಗೀತಗಾರನಾಗಿರದೇ ಆ ಹಾಡನ್ನು ಏಳೆ-ಏಳೆಯಾಗಿ ಬಿಡಿಸಿ ಮನೋಜ್ಞವಾಗಿ ಅರ್ಥೈಸುವ ಮಾದರಿಯೂ ಕುತೂಹಲಕರ. ಅನೇಕ ರಾತ್ರಿಗಳನ್ನು ವಿಶ್ರಮಿಸದೇ, ಎದರು ಹಾಡುಗಾರರು ಇದ್ದರೆ ಸಮಯದ ಪರಿವೇ ಇರದಂತೆ ಹಾಡುವ ಜ್ಞಾನ ಬಂಡಾರ ಇವರಲ್ಲಿದೆ. ಇದರಿಂದಾಗಿ ಇವರು ಈ ಭಾಗದಲ್ಲಿ “ಭಜನೆ ಅಂಜಿನಪ್ಪ” ಎಂದೇ ಚಿರಪರಿಚಿತ. ಜೊತೆಗೆ “ಆಡು ಮುಟ್ಟದ ಸೊಪ್ಪಿಲ್ಲ ಅಂಜಿನಪ್ಪ ಮಾತನಾಡದ ವಿಷಯಗಳಿಲ್ಲ್ಲ” ಎಂಬ ಮಾತು ಜನರ ಬಾಯಿಯಲ್ಲಿ ಹರಿದಾಡುತ್ತಿದೆ. ಬಂಡ್ರಿಯ ಅಗಸರ ಚೆನ್ನಪ್ಪ ಎನ್ನುವರು ನನಗೆ ಸ್ಪೂರ್ತಿಯಾದರೆ, ನಾಗಲಾಪುರದ ಜಂಬಯ್ಯ ಮೇಷ್ಟ್ರು ತನ್ನ ಸಾಧನೆಗೆ ಮೈಲುಗಲ್ಲಾದರೆಂದು ನೆನೆಯುತ್ತಾರೆ. ಗುರುಪುತ್ರರಾಗಿರುವ ಇವರು ತನ್ನ ಸುತ್ತಮುತ್ತಲಿನ ಸುಮಾರು ೫೦೦ ಜನರಿಗೆ ಗುರುಪುತ್ರ ದೀಕ್ಷೆ ಕೊಡಿಸಿದ್ದಾರೆ. ಈಗಾಗಲೇ ಹಂಪಿ ಉತ್ಸವ ಸೇರಿದಂತೆ ಹಲವಾರು ಕಡೆ ಕಾರ್ಯಕ್ರಮ ಕೊಟ್ಟಿದ್ದಾರೆ. ಅಂಜಿನಪ್ಪ ಕಲೆಯನ್ನೇ ಉಸಿರಾಗಿಸಿಕೊಂಡಿದ್ದಾರೆ. ಅನೇಕ ಕಡೆ ಇವರಿಗೆ ಸನ್ಮಾನಗಳಾಗಿವೆ. ತನ್ನ ಸ್ವ-ರಚಿತ ಕವನಗಳನ್ನು ಪುಸ್ತಕ ರೂಪದಲ್ಲಿ ಹೊರುವ ಆಸೆ ಇದೆ. ಹಣದ ಕೊರತೆ ಇವರ ಆಸೆಯನ್ನು ಆಗುಮಾಡಿಲ್ಲ. ಸರ್ಕಾರವೂ ಇವರ ಕಲೆಯನ್ನು ಹೆಚ್ಚಾಗಿ ಗುರುತಿಸಿಲ್ಲ. ಕಲಾವಿದರನ್ನು ಸರ್ಕಾರ ಕಡೆಗಣಿಸುತ್ತಿರುವುದಕ್ಕೆ ಇವರಲ್ಲಿ ಬೇಸರವಿದೆ. ಕೆಲ ತಿಂಗಳುಗಳಿಂದ ಕಲಾವಿದರ ಮಾಶಾಸನ ಪಡೆಯುತ್ತಿದ್ದು, ಈಗ ಅದುವೇ ಜೀವನಕ್ಕೆ ಊರುಗೋಲಾಗಿದೆ

ಗುರುವಾರ, ಫೆಬ್ರವರಿ 17, 2011

ಜಾನಪದ ವಿವಿ ಸ್ವರೂಪ ಹೇಗಿರಬೇಕು?

-ಡಾ. ಬಸವರಾಜ ಮಲಶೆಟ್ಟಿ (ಪ್ರೊ. ಬಸವರಾಜ ಮಲಶೆಟ್ಟರು ಹಿರಿಯ ಜಾನಪದ ವಿದ್ವಾಂಸರಲ್ಲಿ ಪ್ರಮುಖರು. ಹೊಸಪೇಟೆಯ ಕಾಲೇಜೊಂದರಲ್ಲಿ ಕನ್ನಡ ಉಪನ್ಯಾಸಕರಾಗಿದ್ದು, ನಿವೃತ್ತಿಯಾಗಿದ್ದಾರೆ. ಉತ್ತರ ಕರ್ನಾಟಕದ ಜನಪದ ರಂಗಭೂಮಿ, ಬಯಲಾಟ, ಸಣ್ಣಾಟ ಮುಂತಾದ ಜನಪದ ರಂಗಭೂಮಿಯ ಬಗ್ಗೆ ಅಪಾರ ವಿದ್ವತ್ತನ್ನು ಹೊಂದಿದವರು. ಅವರು ಜಾನಪದ ವಿವಿ ಆರಂಭವಾದ ಮೊದಲಿಗೆ ಬರೆದ ಬರೆಹವನ್ನು ಕನ್ನಡ ಜಾನಪದ ಓದುಗರಿಗಾಗಿ ಪ್ರಕಟಿಸಲಾಗಿದೆ. ಇಲ್ಲಿ ಜಾನಪದ ವಿವಿ ಯನ್ನು ರೂಪಿಸುವ ಬಗ್ಗೆ ಕೆಲವು ಒಳ್ಳೆಯ ಅಂಶಗಳಿವೆ. –ಅರುಣ್) ಕರ್ನಾಟಕಕ್ಕೊಂದು ಜಾನಪದ ವಿಶ್ವವಿದ್ಯಾಲಯ ಬೇಕೆಂಬ ಕೂಗು ಬಹಳ ದಿನಗಳಿಂದ ಕೇಳಿಬರುತ್ತಿದೆ. ನಮ್ಮ ಜಾನಪದದ ಸಂಗ್ರಹ-ಅಧ್ಯಯನ ಪ್ರಸಾರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರ ಪ್ರಾಮಾಣಿಕ ಹಂಬಲವಿದು. ಜಾನಪದ ವಿಶ್ವವಿದ್ಯಾಲಯದ ಸ್ಥಾಪನೆ ಕುರಿತು ಚರ್ಚಿಸಲು ಇತ್ತೀಚೆಗೆ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿಯವರು ಒಂದು ಸಭೆ ಕರೆದಿದ್ದರು. ಸುಮಾರು 60 ಜನ ಜಾನಪದ ವಿದ್ವಾಂಸರು ಆಸಕ್ತರು ಪಾಲ್ಗೊಂಡಿದ್ದ ಆ ಸಭೆಯು ಜಾನಪದ ವಿಶ್ವವಿದ್ಯಾಲಯದ ಸ್ಥಾಪನೆಗೆ ಮುಂದಾಗಿರುವ ಸರ್ಕಾರವನ್ನು ಶ್ಲಾಘಿಸಿತು. ವಿಶ್ವವಿದ್ಯಾಲಯ ಅಂದ ಕೂಡಲೇ ನಮ್ಮ ಕಣ್ಣೆದುರಿಗೆ ಈಗಿರುವ ಮಾಮೂಲಿ ವಿವಿಗಳು ಬಂದು ನಿಲ್ಲುತ್ತವೆ. ಜಾನಪದ ವಿಶ್ವವಿದ್ಯಾಲಯ ಈ ಮಾಮೂಲಿ ವಿವಿಗಳನ್ನು ಖಂಡಿತವಾಗಿಯೂ ಮಾದರಿಯಾ¬ಗಿಟ್ಟು¬ಕೊಳ್ಳಬಾರದು. ಅವುಗಳಂತೆಯೇ ಇಲ್ಲಿಯೂ ಸಿಬ್ಬಂದಿ¬ಯನ್ನು ತುರುಕಿ ಬೇರೆ ಬೇರೆ ತರಗತಿಗಳು ಪದವಿಗಳು ಪರೀಕ್ಷೆಗಳು ಸರ್ಟಿಫಿಕೇಟ್‌ಗಳು ಮುಂತಾದವುಗಳ ಅನವಶ್ಯಕ ಜಂಜಾಟ¬ದಲ್ಲಿ ಜಾನಪದ ವಿವಿಯನ್ನು ಸಿಕ್ಕಿಸ¬ಬಾರದು. ಇಲ್ಲಿ ‘ವಿಶ್ವವಿದ್ಯಾಲಯ’ ಎಂಬ ಪದ ಗೌರವ ಘನತೆಗಾಗಿ ಇರಬೇಕಲ್ಲದೆ ಮಾದರಿಗಾಗಿ ಅಲ್ಲ. ಜಾನಪದ ವಿವಿ ಸಂಶೋಧನೆಯ ಹೆಸರಿನಲ್ಲಿ ಪಿಎಚ್‌ಡಿ, ಎಂಫಿಲ್‌ಗಳ ಗೊಡವೆಗೆ ಹೋಗಬಾರದು. ಏಕೆಂದರೆ ನಮ್ಮ ಎಲ್ಲ ವಿವಿಗಳು ಈ ಪದವಿಗಳನ್ನು ವ್ಯವಸ್ಥಿತವಾಗಿ ಅಪಮೌಲ್ಯಗೊಳಿಸಿವೆ. ಅವುಗಳ ಬೆಲೆ ಎಷ್ಟು ಕೆಳಗಿಳಿದಿದೆ¬ಯೆಂದರೆ ಕೈಗೆ ಸಿಗಲಾರದಂತಾಗಿ ನೆಲದಲ್ಲಡಗಿದೆ. ಇಂಥ ಬೆಲೆ ಕಳೆದುಕೊಂಡ ಪದವಿ ನೀಡಲು ಈ ರಾಜ್ಯಕ್ಕೆ ಇನ್ನೊಂದು ವಿಶ್ವವಿದ್ಯಾಲಯ ಬೇಕೇ? ಮೊದಲು ಈ ವಿವಿಯನ್ನು ಏಕೆ ಸ್ಥಾಪಿಸಲಾ¬ಗುತ್ತಿದೆ ಎಂಬುದನ್ನು ಗಂಭೀರವಾಗಿ ಆಲೋಚಿಸಬೇಕು. ಪ್ರಸ್ತುತ ನಮ್ಮ ಜಾನಪದದ ಸ್ಥಿತಿಗಳೇನು? ಈ ಸಂದರ್ಭದಲ್ಲಿ ಜಾನಪದದ ರಕ್ಷಣೆಗೆ ಆನ್ವಯಿಕತೆಗೆ ಪರಿಷ್ಕರಣಕ್ಕೆ ಏನು ಮಾಡಬೇಕು? ಇದಕ್ಕೆ ಉತ್ತರ ಕಂಡುಕೊಳ್ಳುವುದಕ್ಕಾಗಿ ಮತ್ತು ಆ ಉತ್ತರಗಳನ್ನು ಕಾರ್ಯಗತ¬ಗೊಳಿಸುವುದಕ್ಕಾಗಿ ಜಾನಪದ ವಿವಿ ಸ್ಥಾಪಿಸಬೇಕಾಗಿದೆ ಅತ್ಯಂತ ಜರೂರಾಗಿ ಕೈಗೊಳ್ಳಬೇಕಾದುದು ದಾಖಲೀ¬ಕರಣ. ಬದಲಾವಣೆ-ಪರಿವರ್ತನೆ ಜೀವನದ ತತ್ವ. ಅದನ್ನು ತಡೆದು ನಿಲ್ಲಿಸಲಾಗದು. ಬದಲಾವಣೆಗೆ ತೆರೆದುಕೊಳ್ಳದೆ ಸಂಪ್ರದಾಯವನ್ನೇ ಗಟ್ಟಿಯಾಗಿ ಹಿಡಿದುಕೊಳ್ಳುತ್ತೇವೆ ಎಂಬುದು ಹುಂಬತನವಾಗುತ್ತದೆ. ಉದಾಹರಣೆಗೆ ಬೀಸುಕಲ್ಲು. ಒಂದು ಕಾಲಕ್ಕೆ ಬೀಸುವುದು ನಮ್ಮ ಹಳ್ಳಿಗಳಲ್ಲಿ ನಿತ್ಯದ ದಿನಚರಿಯಾಗಿತ್ತು. ಹಿಟ್ಟಿನ ಗಿರಣಿಗಳು ಬಂದ ಮೇಲೆ ಬೀಸು ಕಲ್ಲುಗಳು ಮೂಲೆ ಸೇರಿದವು. ಅವುಗಳೊಂದಿಗೆ ಅಸಂಖ್ಯಾತ ಬೀಸುವ ಪದಗಳೂ ಮರೆಯಾದವು. ಈಗ ನಮ್ಮ ಪರಂಪರೆಯನ್ನು ಉಳಿಸಿಕೊಳ್ಳಲು ಮತ್ತೆ ಬೀಸುಕಲ್ಲನ್ನು ಚಾಲ್ತಿಗೆ ತರುವುದು ಸಾಧ್ಯವೇ? ಬೀಸುಕಲ್ಲು ಇನ್ನೆಂದಿಗೂ ತನ್ನ ದನಿ ನೀಡದು. ಅದನ್ನು ಬೀಸುವವರು ಬೀಸುವಾಗ ಹಾಡುವವರು ಇನ್ನೂ ಇದ್ದಾರೆ.ಅವರಿಂದ ಹಾಡುಗಳನ್ನು ಧ್ವನಿಮುದ್ರಣದ ಮೂಲಕ ಸಂಗ್ರಹಿಸಬೇಕು. ಬೀಸುವುದನ್ನು ಚಿತ್ರೀಕರಿಸಿಕೊಳ್ಳಬೇಕು. ಮುಂದಿನ ಜನಾಂಗ ಇವುಗಳನ್ನು ಕೇಳಿ ನೋಡಿ ತಮ್ಮ ಸಂಸ್ಕೃತಿಯನ್ನು ಅರಿತುಕೊಳ್ಳುವುದು, ಇದೇ ರೀತಿ ಮರೆಯಾಗುತ್ತಿರುವ ಕಲೆ ಹಬ್ಬ ಪ್ರದರ್ಶನ ಕಲೆ ಒಕ್ಕಲುತನ ಮತ್ತು ಇತರ ವೃತ್ತಿಗಳನ್ನು ದಾಖಲೀಕರಿಸಬೇಕು. ಸಮಗ್ರ ದಾಖಲೀಕರಣ ಕಾರ್ಯ ಜಾನಪದ ವಿಶ್ವವಿದ್ಯಾಲಯದ ಆದ್ಯ ಕರ್ತವ್ಯವಾಗಬೇಕು.ದಾಖಲೀಕರಣದ ಇನ್ನೊಂದು ಮಗ್ಗಲು ವಸ್ತುಸಂಗ್ರಹಾ¬ಲಯ. ಇಡೀ ಗ್ರಾಮೀಣ ಕರ್ನಾಟಕದ ಜೀವನ ಕ್ರಮವನ್ನು ಬಿಂಬಿಸುವ ಬೃಹತ್ತಾದ ವಸ್ತುಸಂಗ್ರಹಾಲಯ ನಿರ್ಮಿಸ¬ಬೇಕು. ಆಧುನಿಕ ತಂತ್ರಜ್ಞಾನದ ನೆರವಿನಿಂದ ಅದು ಹೆಚ್ಚು ಆಕರ್ಷಣೀಯ¬ವಾಗುವಂತೆ ನಿರ್ಮಿಸಬೇಕು. ಅದು ಕೇವಲ ಹಳೆಯ ವಸ್ತುಗಳಿಗೆ ಆಶ್ರಯ ತಾಣ¬ವಾಗದೆ ಬೋಧಪ್ರದ¬ವಾದ ಲವಲವಿಕೆಯ ತಾಣವಾಗಬೇಕು. ಜಾಗತೀಕರಣದ ಬಿರುಗಾಳಿ ನಮ್ಮ ಜಾನಪದವನ್ನು ಅಲ್ಲಾಡಿಸಿದೆ. ಪೂರ್ತಿ ನಾಶ ಮಾಡಿಲ್ಲ. ಬಯಲಾಟ ಕೋಲಾಟ ಪೂಜಾಕುಣಿತ ಕರಡಿಮಜಲು ಗೀಗೀಪದ ಕುಸ್ತಿ ಮುಂತಾದವು ಇನ್ನೂ ಜಾನಪದ ವಲಯದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಆದರೆ ಅವು ಸಾಂಪ್ರದಾಯಿಕ ಸ್ವರೂಪ¬ದಿಂದ ದೂರ ಸರಿದಿವೆ. ಅಪಕ್ವ ಹೊಸತನ ಅವುಗಳಿಗೆ ಹೊಂದಿಕೆ¬ಯಾಗಿಲ್ಲ. ಇಂಥ ಕಲೆ ಕ್ರೀಡೆಗಳನ್ನು ಆಧುನಿಕ ಸಂದರ್ಭಕ್ಕೆ ತಕ್ಕ ಹಾಗೆ ಪರಿಷ್ಕರಿಸಬೇಕು. ಜನಪದರಲ್ಲಿ ಅವುಗಳ ಬಗ್ಗೆ ಪ್ರೀತಿ ವಿಶ್ವಾಸ ಮೂಡುವಂತೆ ರೂಢಿಗೆ ತರಬೇಕು. ಅವುಗಳನ್ನು ಸವಿಯುವ ಅನುಭವಿಸುವ ಅಭ್ಯಾಸ ಬೆಳೆಸಬೇಕು. ಜಾನಪದ ವಿಶ್ವವಿದ್ಯಾಲಯ ಈ ನಿಟ್ಟಿನಲ್ಲಿ ಜವಾಬ್ದಾರಿ¬ಯುತ ಕಾರ್ಯ ಯೋಜನೆಯಲ್ಲಿ ತನ್ನನ್ನು ತೊಡಗಿಸಿ¬ಕೊಳ್ಳಬೇಕು. ನೇಕಾರಿಕೆ ಕುಂಬಾರಿಕೆ ಮೊದಲಾದ ಜಾನಪದ ಕುಶಲಕರ್ಮಗಳಿಗೆ ಹೊಸ ಸ್ಪರ್ಶ ನೀಡಿದರೆ ಅವು ಪುನರ್ಜನ್ಮ ಪಡೆದುಕೊಳ್ಳುತ್ತವೆ. ಹಳ್ಳಿ ನಗರಗಳ ಕನ್ನಡಿಗರು ಇಂಥ ಹೊಸ ಉತ್ಪಾದನೆಗಳನ್ನು ಖುಷಿಯಿಂದ ಬಳಸುವಂಥ ವಾತಾವರಣ ಸೃಷ್ಟಿಗೊಳ್ಳಬೇಕು. ಇದಕ್ಕಾಗಿ ತಂತ್ರಜ್ಞಾನ ಮಾರುಕಟ್ಟೆ ಶಾಸ್ತ್ರ ಬಲ್ಲವರು ಉದ್ದೇಶಿತ ಜಾನಪದ ವಿಶ್ವವಿದ್ಯಾಲಯದಲ್ಲಿರಬೇಕು.ಒಂದು ಹೊಸ ವಿಶ್ವವಿದ್ಯಾಲಯ ಹುಟ್ಟಿಕೊಂಡ ಕೂಡಲೇ ಅದರ ಮೊದಲ ಗುರಿ ಯುಜಿಸಿಯಿಂದ ಮಾನ್ಯತೆ ಪಡೆಯುವದಾಗಿರುತ್ತದೆ. ಮಾಮೂಲಿ ವಿವಿಗಳ ವಿಷಯದಲ್ಲಿ ಇದು ಅನಿವಾರ್ಯ. ಆದರೆ ಜಾನಪದ ವಿವಿ ಯುಜಿಸಿಯ ಹಂಗಿನಲ್ಲಿರಬಾರದು. ಯುಜಿಸಿಯ ನಿಯಮಾವಳಿಗಳನ್ನು ತೃಪ್ತಿಪಡಿಸಲು ಹೋದರೆ ಅದು ತನ್ನ ಮೂಲ ಉದ್ದೇಶದಿಂದಲೇ ದೂರಾಗುತ್ತದೆ. ಕನ್ನಡನಾಡಿನ ಸಂಸ್ಕೃತಿ ಇತಿಹಾಸ ಭಾಷೆ ಜಾನಪದಗಳ ಅಧ್ಯಯನ ಮತ್ತು ಸಂಶೋಧನೆಗಳಿಗಾಗಿ ಜನ್ಮತಳೆದ ಕನ್ನಡ ವಿವಿ ಎಂದು ಯುಜಿಸಿಗೆ ಬದ್ಧವಾಯಿತೋ ಅಂದೇ ತನ್ನ ಘೋಷಣಾ ಉದ್ದೇಶವನ್ನು ಕಳೆದುಕೊಂಡಿತು. ಈ ಉದಾಹರಣೆ ಕಣ್ಮುಂದೆ ಇರುವಾಗ ಜಾನಪದ ವಿವಿ ಯುಜಿಸಿ ಬಗ್ಗೆ ಆಲೋಚಿಸುವುದೂ ಅಪರಾಧವೆನಿಸುತ್ತದೆ.ಇದು ಕರ್ನಾಟಕ ಜಾನಪದ ವಿವಿ. ಅಂದರೆ ಇದು ಕರ್ನಾಟಕ ಸರಕಾರ ಕರ್ನಾಟಕದ ಜಾನಪದದ ಏಳ್ಗೆಗಾಗಿ ಸ್ಥಾಪಿಸಲಿರುವ ವಿವಿ. ಇದರ ಸಂಪೂರ್ಣ ನಿರ್ವಹಣಾ ವೆಚ್ಚವನ್ನು ಕರ್ನಾಟಕ ಸರಕಾರ ಭರಿಸಬೇಕು. ಒಂದು ರಾಜ್ಯ ಸರಕಾರಕ್ಕೆ ಇದು ಭಾರವೇ? ಜಾನಪದ ವಿವಿಗೆ ಮಾಮೂಲಿ ವಿವಿಗಳ ಮಾದರಿಯಲ್ಲಿ ಹೆಚ್ಚು ಜನ ಪ್ರಾಧ್ಯಾಪಕರನ್ನು ನೇಮಿಸಬಾರದು. ಪ್ರತಿಯೊಂದು ವಿಭಾಗಕ್ಕೆ ಒಬ್ಬರು ಸಾಕು. ಉಳಿದವರು ಹೊರಗಿನಿಂದ ಡೆಪ್ಯೂಟೇಶನ್ ಮೂಲಕ ಇಲ್ಲಿಗೆ ಬಂದು ನಿರ್ದಿಷ್ಟ ಅವಧಿಯಲ್ಲಿ ತಮ್ಮ ಇಚ್ಛೆಯ ಸಂಶೋಧನೆ ಅಧ್ಯಯನ ಆನ್ವಯಿಕತೆಗಳನ್ನು ಪೂರೈಸಿ ಮರಳಿ ಹೋಗುವಂಥ ವ್ಯವಸ್ಥೆ ಇರಬೇಕು. ಹೀಗಾದರೆ ಆಸಕ್ತ ಅಭ್ಯಾಸಿಗಳು ಮಾತ್ರ ಇತ್ತ ಸುಳಿಯುತ್ತಾರೆ. ಪ್ರತಿ ವಿಭಾಗಕ್ಕೆ ನಾಲ್ಕಾರು ಜನರಂತೆ ಸೇರಿಸುವುದು ನಿಷ್ಪ್ರಯೋಜಕ. ಸೇರಿಕೊಂಡವರು ನೌಕರಿ ಖಾಯಂ ಆದ ಕೂಡಲೇ ನಿಷ್ಕ್ರಿಯರಾಗುತ್ತಾರೆ. ಅವರನ್ನು ಜಡತನ ಆವರಿಸಿಕೊಳ್ಳುತ್ತದೆ.ಆದ್ದರಿಂದ ಪ್ರತಿ ವಿಭಾಗಕ್ಕೆ ಒಬ್ಬರು ಪ್ರಾಧ್ಯಾಪಕರಿದ್ದು ಅವರು ಸಂಯೋಜಕರಾಗಿ ಕೆಲಸ ಮಾಡಬೇಕು. ಕುಲಪತಿ ಇವರೆಲ್ಲರಿಗೆ ಹಿರಿಯ ಸಂಯೋಜಕರಾಗಿ ಕಾರ್ಯ ನಿರ್ವಹಿಸಬೇಕು, ಬೇರೆ ಬೇರೆ ಸಂಪನ್ಮೂಲಗಳಿಂದ ಹಣ ಮತ್ತು ಸಂಶೋಧನಾ ಯೋಜನೆಗಳನ್ನು ತರುವ, ಅವುಗಳನ್ನು ಸಮರ್ಥರಿಗೆ ಹಂಚುವ, ಅವರಿಂದ ಕೆಲಸ ಮಾಡಿಸಿಕೊಳ್ಳುವ ಜಾಣ್ಮೆ ಕುಲಪತಿಯಲ್ಲಿರಬೇಕು. ಇದೇ ರೀತಿಯಲ್ಲಿ ಬೋಧಕೇತರ ಸಿಬ್ಬಂದಿಯೂ ಮಿತಿಯಲ್ಲಿರಬೇಕು. ಅಂದಾಗ ಮಾತ್ರ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅರ್ಥಪೂರ್ಣವಾಗಿ ಕಾರ್ಯ ನಿರ್ವಹಿಸಬಲ್ಲದು.

ಸೋಮವಾರ, ಫೆಬ್ರವರಿ 14, 2011

ಹಗಲು ವೇಷಗಾರರ ‘ಹನುಮಾಯಣ’

-ಸ್ವರೂಪನಂದ ಎಂ ಕೊಟ್ಟೂರು (‘ಹನುಮಾಯಣ’ ಇದು ಹಗಲು ವೇಷಗಾರರೇ ತಮ್ಮ ಕಲೆಯನ್ನು ಉಳಿಸಿಕೊಳ್ಳುವ ಶೋಧದಲ್ಲಿ ತೊಡಗಿಕೊಂಡಾಗ ಕಂಡುಕೊಂಡ ಪರ್ಯಾಯ. ಇಂದು ಭಜರಂಗದಳ, ಆರ್.ಎಸ್.ಎಸ್ ಗಳು ಹನುಮನನ್ನು ದೊಡ್ಡ ಐಕಾನ್ ಆಗಿ ಬಳಸಿಕೊಂಡು, ಹನುಮನನ್ನು ಆರಾಧಿಸುವ ದೊಡ್ಡ ಸಮುದಾಯವನ್ನು ತನ್ನೆಡೆಗೆ ಸೆಳೆಯುವ ಹುನ್ನಾರ ಮಾಡುತ್ತಿದೆ. ಆದರೆ ನಿಜಾರ್ಥದಲ್ಲಿ ಜನಪದರಲ್ಲಿ ಇರುವ ಹನುಮನೇ ಬೇರೆ. ರಾಮಾಯಣದಿಂದ ಎದ್ದು ಬಂದವನಲ್ಲ. ಅಲ್ಲಿಯದೇ ಸ್ಥಳೀಯ ಚರಿತ್ರೆಯಲ್ಲಿ ಹನುಮನ ಜೀವಂತಿಕೆ ಬೇರೆಯೇ ಇದೆ. ಅಲ್ಪ ಸಂಖ್ಯಾತ ವೈದಿಕ ಸಮುದಾಯ ಕಟ್ಟಿದ ಹನುಮನ ಚಿತ್ರವನ್ನು ಬಹುಸಂಖ್ಯಾತ ತಳ ಸಮುದಾಯಗಳ ಹನುಮನ ನಂಬಿಕೆಯ ಲೋಕದ ಮೇಲೆ ಪ್ರಹಾರ ಮಾಡುತ್ತಿವೆ. ಜನಪದರು ಕಟ್ಟಿಕೊಂಡ ಹನುಮನ ನಂಬಿಕೆಯ ಜಗತ್ತನ್ನು ಇಂದು ವಿಶೇಷವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಅಂತಹ ಅಧ್ಯಯನಕ್ಕೆ ತಕ್ಕ ತಯಾರಿಗಳನ್ನು ಕ್ಷೇತ್ರಕಾರ್ಯದ ತಿರುಗಾಟವನ್ನೂ ಮಾಡುತ್ತಿದ್ದೇನೆ. ಈ ಹುಡುಕಾಟದ ಸಂದರ್ಬದಲ್ಲಿ ಸಿಕ್ಕ ಹನುಮಾಯಣ ಹಗಲುವೇಷಗಾರರ ಆಟ ಗಮನಸೆಳೆಯಿತು. ಇಲ್ಲಿ ಹನುಮ ರಾಮನ ಸೇವಕನಲ್ಲ ಅವನದೇ ಆದ ಸ್ವಂತ ಶಕ್ತಿಯನ್ನು ಉಳ್ಳ ವೀರ ದೀರ. ಇಲ್ಲಿ ರಾಮ ನೆಪ ಮಾತ್ರ. ಹನುಮನ ವ್ಯಕ್ತಿತ್ವದ ಮೂಲಕ ರಾಮನನ್ನು ನೋಡುವ ವಿಶಿಷ್ಟ ಪ್ರಯತ್ನ ಇಲ್ಲಿದೆ. ಈ ತಂಡದ ರಾಮುವನ್ನು ಮಾತನಾಡಿಸಿದಾಗ “ಹನುಮನನ್ನು ನಾವು ಕಂಡದ್ದು ಬೇರೇನೆ ಸಾರ್, ಆಗಾಗಿ ಹನುಮನನ್ನೇ ನಾಯಕನನ್ನಾಗಿಸಿ ನಾವೇ ಈ ನಾಟಕ ತಯಾರಿಸಿದ್ವಿ” ಎನ್ನುತ್ತಾರೆ. ಈ ಬರಹ ಬರೆದ ಸ್ವರೂಪಾನಂದ ವೃತ್ತಿಯಲ್ಲಿ ಪೋಲಿಸ್, ಆದರೆ ಅಲ್ಲಿದ್ದು ಇಂತಹವುದಳನ್ನು ಸೂಕ್ಷ್ಮವಾಗಿ ನೋಡುವ ಒಳಗಣ್ಣಿರುವ ಉತ್ಸಾಹಿ ಹುಡುಗ. ಹಾಗಾಗಿ ಸ್ವರೂಪಾನಂದ ಪತ್ರಿಕೆಯೊಂದಕ್ಕೆ ಬರೆದ ಬರಹವನ್ನೇ ಇಲ್ಲಿ ಬಳಸಿಕೊಳ್ಳಲಾಗಿದೆ.-ಅರುಣ್ ಜೋಳದಕೂಡ್ಲಿಗಿ.) ಇದೇನಿದು ಮಹಾಭಾರತ, ರಾಮಾಯಣ ಕೇಳಿದ್ದೀವಿ, ಹನುಮಾಯಾಣ ಎಲ್ಲಿಂದ ಬಂತು ಅಂತಾ ದಂಗು ಬಡಿದು ಹೋದಿರಾ..ಹೌದು ಈಗ ಮಹಾಭಾರತ ಮತ್ತು ರಾಮಾಯಣದ ಕಥಾವಸ್ತುಗಳೊಂದಿಗೆ ಹನುಮಾಯಣವನ್ನು ಸೇರಿಸಿಕೊಳ್ಳಬೇಕಾಗಿದೆ. ಇದು ಹಗಲು ವೇಷಗಾರರ ಒಂದು ವಿಶಿಷ್ಠ ಪ್ರಯತ್ನದ ಫಲ. ಹತ್ತಾರು ವೇಧಿಕೆಗಳಲ್ಲಿ ಹನುಮಾಯಣವನ್ನು ಪ್ರದರ್ಶಿಸಿ ಪ್ರೇಕ್ಷಕರ ಮನ ಗೆದ್ದಿರುವ ಜನಪದ ಕಲಾ ತಂಡ ಹಂಪಿ ಭಾಗದಲ್ಲಿದೆ. ಅದು ಕಡ್ಡಿರಾಂಪುರದ ಕೆ.ರಾಮು ನೇತೃತ್ವದ ಶ್ರೀ ಹಂಪಿ ವಿರುಪಾಕ್ಷೇಶ್ವರ ಬುಡ್ಗಜಂಗಮ ಸಾಂಸ್ಕೃತಿಕ ಹಗಲು ವೇಷ ಕಲಾವಿದರ ಸಂಘ. ಇದೇನಿದು ಹನುಮಾಯಣ ಅಂತೀರಾ? ಇದು ರಾಮಾಯಣದಿಂದ ಆಯ್ದ ಭಾಗವಾಗಿದೆ. ಹಂಪಿ ಕೇವಲ ವಿಜಯನಗರ ಸಾಮ್ರಾಜ್ಯದಿಂದ ಮಾತ್ರ ಖ್ಯಾತಿಗೆ ಬಂದಿಲ್ಲ. ಅದಕ್ಕಿಂತಲೂ ಮೊದಲು ಸಹಸ್ರಾರು ವರ್ಷಗಳ ಹಿಂದಿನ ರಾಮಾಯಣದ ಕಿಷ್ಕಿಂದಾ ಕಾಂಡದ ಅವಶೇಷಗಳನ್ನು ಹೊಂದಿರುವುದು ಇಲ್ಲಿನ ವಿಶೇಷ. ಇಲ್ಲಿಯ ವಾಲಿಕಾಷ್ಠ, ಸುಗ್ರಿವ ಗುಹೆ, ಸೀತಾ ಸೆರಗು, ರಾಮ ಲಕ್ಷ್ಮಣರ ಮಂದಿರಗಳು, ರಿಷಿಮುಖ, ವಾಲಿ, ತಾರ ಬೆಟ್ಟಗಳು ರಾಮಾಯಣದ ಚರಿತ್ರೆ ಸಾರುತ್ತವೆ. ಇವೆಲ್ಲಾವನ್ನು ಇಟ್ಟುಕೊಂಡು ಈ ಭಾಗಕ್ಕೆ ಸಂಭಂದಿಸಿದ ಸನ್ನಿವೇಶಗಳನ್ನು ರಾಮಾಯಣದಿಂದ ಎಕ್ಕಿ ತೆಗೆದು ಎಣೆದ ಭಾಗವೇ ಈ ಹನುಮಯಾಣ. ಇದರಲ್ಲಿ ಹನುಮನೇ ಹಿರೋ. ರಾಮ-ಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ಕಿಷ್ಕಿಂದೆಗೆ ಬಂದಿದ್ದು, ರಾಮ ಮತ್ತು ಹನುಮನ ಭೇಟಿ, ವಾಲಿ-ಸುಗ್ರೀವರ ಕಾಳಗ, ಈ ಕಾಳಗದಲ್ಲಿ ರಾಮನ ಪಾತ್ರ, ಇತ್ಯಾದಿ-ಇತ್ಯಾದಿ ಪ್ರಸಂಗಗಳಿಂದ ಹಿಡಿದು ಹನುಮಂತ ಸೇತುವೆ ನಿರ್ಮಿಸುವರೆಗೂ ಪ್ರದರ್ಶನ ಸಾಗುತ್ತದೆ. ಈ ತಂಡ ಹನುಮಾಯಾಣದ ಪ್ರತಿ ಸನ್ನಿವೇಶಗಳನ್ನು ಮನೋಜ್ಞ ಹಾಗೂ ರೋಚಕವಾಗಿ ಅಭಿನಯಿಸಿ ನೋಡುಗರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಇಂತಹ ಹೊಸ ಪ್ರಯೋಗ ನಡೆಸಿ ಜಾನಪದ ಕಲೆಯೊಂದಕ್ಕೆ ಮರುಜೀವ ತುಂಬಿದ ತಂಡದ ಯಶೋಗಾಥೆ ಇಲ್ಲಿದೆ. ಇಂದಿನ ದಿನಗಳಲ್ಲಿ ಜಾನಪದ ಲೋಕದಿಂದ ಹಗಲು ವೇಷಗಾರರ ಕೊಂಡಿ ಕಳಚುತ್ತಾ ಸಾಗಿದೆ. ತಲ-ತಲಾಂತರಿಂದ ಹಗಲು ವೇಷವನ್ನು ಮಾಡುತ್ತ ಬಂದವರು ಇಂದು ಇದಕ್ಕೆ ಇತಿಶ್ರೀ ಹಾಡಿ ವ್ಯಾಪಾರ ಸೇರಿದಂತೆ ಇತರೆ ವೃತ್ತಿಗಳನ್ನು ಆಶ್ರಯಿಸಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಕೆ.ರಾಮು ಹಾಗೆ ಮಾಡಲಿಲ್ಲ. ಹಗಲು ವೇಷಗಾರರಲ್ಲಿಯೇ ಪ್ರಖ್ಯಾತರಾದ ವೆಂಕಟಾಪುರ ಕ್ಯಾಂಪ್ನ ರಾಮಣ್ಣನ ಗರಡಿಯಲ್ಲಿ ಪಳಗಿದರು. ಇದರೊಂದಿಗೆ ಇವರ ಸ್ನೇಹಿತರು ಕೈ ಜೋಡಿಸಿದರು. ಹಗಲು ವೇಷಗಾರರ ಸಂಪ್ರದಾಯವೆಂಬಂತೆ ಪೊಲೀಸ್, ಸಾಧುಗಳು, ಮೋಹಿನಿ ಬಸ್ಮಾಸುರ ಕತೆ, ಭೀಮಾಂಜನೇಯ ಯುದ್ದ, ರಾಮಾಯಣದಲ್ಲಿನ ಸೂರ್ಪನಖಿ ಗರ್ವಭಂಗ, ಲಂಕಾದಹನ [ಗಜಲಂಕಿನಿ], ವಾಲಿ ಸುಗ್ರೀವನ ಕಾಳಗಗಳನ್ನು ಪ್ರಮುಖವಾಗಿ ಪ್ರದರ್ಶಿಸುತ್ತಾ ಬಂದರು. ಹಂಪಿ ತುಂಗಭದ್ರೆಯ ನದಿ ತೀರ ಇವರ ಕಲಿಕೆಯ ಕೇಂದ್ರವಾಯಿತು. ವಿದೇಶಿಯರು ಸೇರಿದಂತೆ ಹಂಪಿಯಲ್ಲಿ ಪ್ರವಾಸ ಕೈಗೊಂಡವರ ಕರತಾಳ ಇವರಿಗೆ ಸ್ಪೂರ್ತಿಯಾಯಿತು. ಅದರಲ್ಲೂ ಹಾಲೆಂಡ್ ಮೂಲದ ವಿಲಿಯಂ ಇವರ ಕಲೆಗೆ ಮಾರುಹೋಗಿ ಇವರ ಬೆನ್ನಲುಬಾಗಿ ನಿಂತಿದ್ದು ಇವರ ಕಲೆಗೆ ಭವಿಷ್ಯವಿದೆ ಎಂದು ಆಗಲೇ ಮನದಟ್ಟು ಮಾಡಿಕೊಟ್ಟಿತು. ಆಗೋಮ್ಮೆ-ಹೀಗೊಮ್ಮೆ ಅಕ್ಕ-ಪಕ್ಕದ ಗ್ರಾಮಗಳಲ್ಲಿ ಪ್ರದರ್ಶನಗಳನ್ನು ನೀಡುತ್ತಿದ್ದರು. ಆಗಾಗ್ಗೆ ರಾಮುವಿನ ಮನಸ್ಸು ಇದರಲ್ಲಿ ಅಗಾಧವಾದ ಸಾಧನೆ ಮಾಡಬೇಕೆಂದು ತುಡಿಯುತ್ತಿತ್ತು. ಕಿಷ್ಕಿಂದೆ ಅಧಾರವಾಗಿಟ್ಟುಕೊಂಡು ಒಂದು ಪ್ರದರ್ಶನ ಮಾಡಬೇಕೆಂದು ಇವರ ಸ್ನೇಹಿತರಲ್ಲಿ ಚರ್ಚೆಗಳು ಸಾಗಿದವು. ಈ ನಡುವೆ ಇವರಿಗೆ ರಾಮಾಯಣ ಪ್ರದರ್ಶನ ನೀಡವಂತೆ ಆನೆಗುಂದಿಯ ಕಿಷ್ಕಿಂದ ಟ್ರಸ್ಟ್ನಿಂದ ಬುಲಾವ್ ಬಂತು. ಆನೆಗೊಂದಿಯಲ್ಲಿ ನಡೆದ ರಂಗ ಶಿಬಿರದ ಜವಾಬ್ದಾರಿ ಹೊತ್ತವರು ಹೊಸಪೇಟೆಯ ಭಾವೈಕ್ಯತಾ ವೇದಿಕೆ. ಪಿ. ಅಬ್ದುಲ್, ಪಿ.ಸಹನಾ, ಪಿ. ಸಹರಾ. ೧೫ ದಿನ ಅವರು ಅಲ್ಲಿಯೇ ಇದ್ದು ತರಬೇತಿ ಶಿಬಿರ ನಡೆಸಿಕೊಟ್ಟರು. ಹೊಸಪೇಟೆಯ ಕ್ರಿಯಾಶೀಲ ಬರಹಗಾರರಾದ ಪರುಶುರಾಮ ಕಲಾಲ ಅವರು ಒಂದು ದಿನ ಅಲ್ಲಿ ಭಾಗಿಯಾಗಿ ಇವರಿಗಾಗಿಯೇ ’ಹನುಮಾಯಣ’ ಸ್ಪ್ರಿಪ್ಟ್ ರಚಿಸಿದ್ದಾರೆ. ಅದನ್ನೇ ಅಲ್ಲಿ ರಂಗಕ್ಕೆ ಅಳವಡಿಸಿದರು. ಅಲ್ಲಿ ಅದ್ಬುತ ಪ್ರದರ್ಶನ ನೀಡಿದ್ದರಿಂದ ಶ್ಯಾಮ್ ಪವಾರ್ಗೆ [ಕೇಂದ್ರ ಸಚಿವ ಶರದ್ ಪವಾರ್ರವರ ಸಹೋದರಿ] ತುಂಬಾ ಆತ್ಮೀಯರಾಗಿಬಿಟ್ಟರು. ಇವರಲ್ಲಿ ತಮ್ಮ ಮನದ ಇಂಗಿತವನ್ನು ಅರುಹಿದರು. ಶ್ಯಾಮ್ ಪವಾರ್ ಇವರ ಮನದ ಇಂಗಿತವನ್ನು ಅರಿತು 12 ಜನರ ತಂಡಕ್ಕೆ ತಮ್ಮ ಗರಡಿಯಲ್ಲಿ ಸತತ 25 ದಿನಗಳ ತರಬೇತಿ ನೀಡಿದರು. ಒಳ್ಳೆಯ ತಯಾರಿ ನಡೆಸಿದ ಫಲವಾಗಿ ನಿರೀಕ್ಷೆ ಮೀರಿ ಪ್ರತಿಭೆಯನ್ನು ಹೋರಹಾಕಿದ ಈ ತಂಡ ಇಂದು ದೊಡ್ಡ-ದೊಡ್ಡ ವೇದಿಕೆಗಳಲ್ಲಿ ಪ್ರೇಕ್ಷಕರ ಕರತಾಳಗಳೊಂದಿಗೆ ಸಾಧನೆಯ ಬೆನ್ನೇರಿ ಹೊರಟಿದೆ. ಹನುಮಾಯಣವನ್ನು ಇಂದು ಕೇವಲ ಮುಕ್ಕಾಲು ಗಂಟೆಯಲ್ಲಿ ಪರಿಣಾಮಕಾರಿಯಾಗಿ ಅಭಿನಯಿಸುವಷ್ಠು ನಿಪುಣರಾಗಿದ್ದಾರೆ. ಅಂದಿನಿಂದ ಆರಂಭವಾದ ಇವರ ಕಲಾ ಸೇವೆಯ ಪಯಣ ಬಿಡುವಿಲ್ಲದೆ ಸಾಗಿದೆ. ಈ ತಂಡವು ಅಭಿನಯಿಸಿದ ಒಂದು ಪುಟ್ಟ ಮಾಹಿತಿ ಇಲ್ಲಿದೆ.2006 ರಲ್ಲಿ ಬೆಂಗಳೂರಿನ ಲಾಲಾಬಾಗಿನಲ್ಲಿ ನಡೆದ ಜನಪದ ಜಾತ್ರೆ.,2008 ರಲ್ಲಿ ಹಂಪಿ ಉತ್ಸವದ ಅಲೆಮಾರಿ ವೇದಿಕೆ.,2009 ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ ಜನಪದ ಜಾತ್ರೆ., 2009 ರ ಜನವರಿಯಲ್ಲಿ ಬೆಂಗಳೂರಿನಲ್ಲಿ ಹಂಪಿ ಕುರಿತು ನಡೆದ ಅಂತರಾಷ್ಠ್ರೀಯ ಸಮ್ಮೇಳನ.,2009 ರ ಫೆಬ್ರವರಿಯಲ್ಲಿ ರಾಮನಗರದ ಜಾನಪದ ಲೋಕದಲ್ಲಿ ಜರುಗಿದ ಜಾನಪದ ಲೋಕೋತ್ಸವ.,2009 ರ ಆಗಸ್ಟ್ 20 ರಂದು ಡಿ.ದೇವರಾಜು ಅರಸುರವರ ಹುಟ್ಟು ಹಬ್ಬದ ಅಂಗವಾಗಿ ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮ.,2009 ರಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆಸಿದ ಸಮಾರಂಭ.,2009 ರ ನವಂಬರ್ ತಿಂಗಳಲ್ಲಿ ಹಂಪಿಯಲ್ಲಿ ಪುರಾತತ್ವ ಇಲಾಖೆ ನಡೆಸಿದ ಐತಿಹಾಸಿಕ ಪರಂಪರೆ ರಕ್ಷಿಸಿ ಕಾರ್ಯಕ್ರಮ. 2009 ಡಿಸೆಂಬರ್ ತಿಂಗಳಲ್ಲಿ ಡಾ.ರಾಜಕುಮಾರ್ ಅಂತರಾಷ್ಠ್ರೀಯ ಪ್ರತಿಷ್ಠಾನ ಇವರು ಬೆಂಗಳೂರಿನಲ್ಲಿ ನಡೆಸಿದ ಡಾ.ರಾಜಕುಮಾರ್ ರಾಜೋತ್ಸವ ಪ್ರಶಸ್ತಿ ಸಮಾರಂಭ. ಹೀಗೆ ಕರ್ನಾಟಕದ ನಾನಾ ಭಾಗಗಳಲ್ಲಿ ಹನುಮಾಯಣವನ್ನು ಪ್ರದರ್ಶಿಸಿ ಜನರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ. ಅಲ್ಲದೆ National Institute of Advance studies [NIAS] ಇವರ ಹನುಮಾಯಣ ಪ್ರದರ್ಶನಕ್ಕೆ ಪ್ರಾಶಸ್ತ್ಯ ನೀಡಿ ಕಳೆದ ಎರಡು ವರ್ಷಗಳಿಂದ ಅವಕಾಶಗಳನ್ನು ನೀಡುತ್ತಾ ಬಂದಿದೆ. ಅಲ್ಲದೆ ಹನುಮಾಯಣವನ್ನು ಡಾಕುಮೆಂಟರಿ ಮಾಡಲು ಹೊರಟಿದೆ. ಜೊತೆಗೆ ಇಂದಿರಾ ರಾಷ್ಠ್ರೀಯ ಕಲಾ ಮಂದಿರ ಬೆಂಗಳೂರು ಇವರ ``ಸೂರ್ಪನಖಿ ಗರ್ವಭಂಗ'' ಮತ್ತು ``ಭೀಮಾಂಜನಯ ಯುದ್ದ'' ದ ಕಥಾವಸ್ತುಗಳನ್ನು ಡಾಕುಮೆಂಟರಿ ಮಾಡಿದ್ದಾರೆ. ವೈಯುಕ್ತಿಕವಾಗಿ ಕೆ.ರಾಮು ಹಗಲು ವೇಷಗಾರರ ಜಾನಪದ ಕಲೆಯನ್ನು ಉಳಿಸುವತ್ತ ಹೆಚ್ಚು ಶ್ರಮವಹಿಸುತ್ತಿದ್ದಾರೆ. ರಾಮು ಹನುಮನ ವೇಷದಲ್ಲಿ ಅಖಾಡಕ್ಕೆ ಇಳಿದರೆ ಈತನ ಅದ್ಬುತ ನಟನೆಗೆ ಪ್ರೇಕ್ಷಕರು ಮಂತ್ರಮುಗ್ದರಾಗುತ್ತಾರೆ. ಇವರ ಪ್ರಯತ್ನದ ಫಲವಾಗಿ ಒಂದು ಕಾಲದಲ್ಲಿ ತಮ್ಮ ಕಲೆಯ ಬಗ್ಗೆ ಭ್ರಮನಿರಸನ ಹೊಂದಿದವರು ಇಂದು ಕಲೆಯ ಉಳಿವು ಹಾಗೂ ಬೆಳವಣಿಗೆಗಾಗಿ ತಪಸ್ಸು ಮಾಡುತ್ತಿದ್ದಾರೆ. ಇವರ ಕಲಾ ತಂಡಗಳಿಗೆ ಪದವೀದದರು ಸೇರಿಕೊಳ್ಳುತ್ತಿರುವುದು ಇದರ ಜೀವಂತಿಕೆಗೆ ಸಾಕ್ಷಿಯಾಗಿದೆ. ಇವರ ಪ್ರಯತ್ನದ ಫಲವಾಗಿ ಹೊಸಪೇಟೆ, ದರೋಜಿ, ಸಿರುಗುಪ್ಪ ತಾಲ್ಲೂಕಿನ ಬೆಲಕುಂದಿ, ಹಳೆಕೋಟೆ, ಬಳ್ಳಾರಿ ಜಿಲ್ಲೆಯ ಹೊಸಹಳ್ಳಿಗಳಲ್ಲಿ ಸಂಘಗಳು ನೊಂದಾಣಿಯಾಗಿ ಕ್ರೀಯಾಶೀಲವಾಗಿವೆ. ತಮ್ಮ ಅಸಂಖ್ಯಾತ ಪ್ರದರ್ಶನಗಳ ಮೂಲಕ ಜನಪದ ಕಲೆಯ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ರಾಮು ತಂಡ ರಾಜ್ಯದಲ್ಲಿ ಮನೆ ಮಾತಾಗಿದೆ. ಆದರೆ ತನ್ನ ತವರು ನೆಲದಲ್ಲಿಯೇ ನಿರ್ಲಕ್ಷಕ್ಕೆ ಒಳಗಾಗಿರುವುದು ವಿಪಾರ್ಯಸ. ಇಷ್ಠು ದಿನ ನಡೆದ ಹಂಪಿ ಉತ್ಸವಗಳಲ್ಲಿ ಇವರಿಗೆ ಅವಕಾಶ ಸಿಕ್ಕಿದ್ದು 2008 ರಲ್ಲಿ ಮಾತ್ರ. ಅದು ಕೇಲವ ಹತ್ತು ನಿಮಿಷಗಳ ಕಾಲವಕಾಶ. ಮೊನ್ನೆ ಅಂದರೆ ೨೦೧೧ ಜನವರಿ 27 ರಿಂದ 29 ರವರೆಗೆ ನಡೆದ ಹಂಪಿ ಉತ್ಸವದಲ್ಲಿ ಇವರ ಪಾಲಿಗೆ ಬಂದಿದ್ದು ಶೋಭಯಾತ್ರೆಯಲ್ಲಿ ಪಾಲ್ಗೊಳ್ಳುವ ಅವಕಾಶ. ಅಂದು ಅಂತಿಮ ಕ್ಷಣದಲ್ಲಿ. ಅದನ್ನು ಬಿಟ್ಟರೆ ಉಳಿದಂತೆ ಸರಕಾರ ಇವರ ಕಲೆಗೆ ಹೆಚ್ಚು ಪ್ರಾಶಸ್ತ್ಯ ನೀಡಿಲ್ಲ. ತಮ್ಮ ಸಾಧನ ಕ್ಷೇತ್ರದಲ್ಲಿ ಪ್ರದರ್ಶನ ನೀಡಲಾಗುತ್ತಿಲ್ಲ ಎಂಬ ಅಸಂತೃಪ್ತಿ ರಾಮು ತಂಡದ್ದು. ಅದು ಹಂಪಿಯ ನೆಲದಲ್ಲಿ ಕಿಷ್ಕಿಂದ ಆಧಾರಿತ ಕಥಾವಸ್ತುವನ್ನು ಜನತೆಯ ಮನಮುಟ್ಟುವಂತೆ ಪ್ರದರ್ಶಿಸುವ ಅವಕಾಶ ಸಿಗದಿರುವ ಕೊರಗು ಅವರನ್ನು ಬಿಟ್ಟುಬಿಡದೆ ಕಾಡುತ್ತಿದೆ. ಹಂಪಿಯ ಸುತ್ತಾ-ಮುತ್ತಾ ಸುಮಾರು 12 ಜನಪದ ಕಲೆಗಳು ಇನ್ನೂ ಜೀವಂತವಾಗಿವೆ. ಈ ಕಲೆಗಳನ್ನು ಶಾಶ್ವತವಾಗಿ ಹಂಪಿಯಲ್ಲಿ ಪ್ರದರ್ಶನ ಏರ್ಪಡಿಸುವ ವ್ಯವಸ್ಥೆಯಾಗಬೇಕು ಎಂಬುವುದು ರಾಮು ಮತ್ತು ಸಂಘದ ಕೋರಿಕೆ ಹಾಗೂ ಕನವರಿಕೆ. ಹಗಲು ವೇಷಗಾರರನ್ನು ಸಂಘಟಿಸಿ ಅವಾಸನದ ಅಂಚಿನಲ್ಲಿದ್ದ ಜಾನಪದ ಕಲೆಗೆ ಜೀವ ತುಂಬಿದ ರಾಮು ಸಾಧನೆ ಒಂದು ಮಾದರಿಯೇ ಸರಿ. ಇವರ ಹಾಗೂ ಇವರ ಕಲಾ ತಂಡಕ್ಕೆ ನೀವು ಅಭಿನಂದನೆ ಸಲ್ಲಿಸಬೇಕೆಂತಿದ್ದರೆ, ಕೆ ರಾಮುರವರ ನಂ 9448970618 ಕ್ಕೆ ಸಂಪರ್ಕಿಸಿ.

ಶುಕ್ರವಾರ, ಫೆಬ್ರವರಿ 4, 2011

ಇವರದು 56 ವರ್ಷಗಳಿಗೊಮ್ಮೆ ಗಂಗೆಪೂಜೆ : ಕಾಲ್ನಡಿಗೆಯಲ್ಲಿ ಹಂಪೆಗೆ ಯಾತ್ರೆ

-ಸಿದ್ದರಾಮ ಹಿರೇಮಠ, ಕೂಡ್ಲಿಗಿ ಬುಡಕಟ್ಟು ಜನಾಂಗಗಳ್ಲಲಿ ಇನ್ನೂ ಕೆಲವು ಸಾಂಪ್ರದಾಯಿಕ ಆಚರಣೆಗಳು ಜೀವಂತವಾಗಿವೆ ಎಂಬುದಕ್ಕೆ ತಾಲೂಕಿನ ಪೂಜಾರಹಳ್ಳಿ ಗ್ರಾಮದ ಜನಾಂಗವೇ ಸಾಕ್ಷಿಯಾಗಿದೆ. ಇಲ್ಲಿನ ನಾಯಕ ಜನಾಂಗದವರು 56 ವರ್ಷಗಳಿಗೊಮ್ಮೆ ಗಂಗೆಪೂಜೆ ಮಾಡುತ್ತಾರೆ. ಮತ್ತೂ ವಿಶೇಷವೆಂದರೆ, ಗಂಗೆಪೂಜೆ ಮಾಡಲು ಇವರು ತಮ್ಮ ದೇವರನ್ನು ಹೊತ್ತುಕೊಂಡು 60 ಕಿ.ಮೀ ದೂರದ ಹಂಪೆಯವರೆಗೂ ಕಾಲ್ನಡಿಗೆಯಲ್ಲಿ ಹೋಗಿಬರುತ್ತಾರೆ. ಈ ಉತ್ಸವದಲ್ಲಿ ಸಾವಿರಾರು ಜನ ಪಾಲ್ಗೊಂಡಿರುತ್ತಾರೆ. ಗುರುವಾರ ಈ ಯಾತ್ರಾಥರ್ಿಗಳು ಗಂಗೆಪೂಜೆ ಪೂರ್ಣಗೊಳಿಸಿ ಶಿವಪುರ, ಕೂಡ್ಲಿಗಿ ಮಾರ್ಗವಾಗಿ ಪೂಜಾರಹಳ್ಳಿಗೆ ತೆರಳಿದರು. ಈ ರೀತಿಯ ವಿಶಿಷ್ಟವಾದ ಆಚರಣೆ ತಾಲೂಕಿನ ಪೂಜಾರಹಳ್ಳಿಯಲ್ಲಿ ಭಾನುವಾರ ಆರಂಭಗೊಂಡಿತು. ಅಲ್ಲಿನ ಓಬಳೇಶ್ವರ ಸ್ವಾಮಿ ಹಾಗೂ ಕೆ.ಬಿ.ಹಟ್ಟಿಯ ಬಸವೇಶ್ವರ ಸ್ವಾಮಿಯನ್ನು ಹೊತ್ತು 56 ವರ್ಷಗಳ ನಂತರ ಇಲ್ಲಿನ ಸಾವಿರಾರು ಜನ ಪ್ರವಾಹದೋಪಾದಿಯಲ್ಲಿ ಹಂಪೆಗೆ ಕಾಲ್ನಡಿಗೆಯಲ್ಲಿ ಹೊರಟೇಬಿಟ್ಟರು.ಇವರೊಂದಿಗೆ ದೇವರಿಗಾಗಿ ಛತ್ರ, ಚಾಮರ, ಡೊಳ್ಳು, ವಿವಿಧ ವಾದ್ಯಗಳ ವೈಭವ. ಅಲ್ಲದೆ ಸುಮಾರು 40 ದೇವರ ಎತ್ತುಗಳೂ ಯಾತ್ರೆಯಲ್ಲಿ ಪಾಲ್ಗೊಂಡಿದ್ದವು.ಬುಧವಾರ ಹಂಪೆಯ ವಿರುಪಾಕ್ಷನ ಸನ್ನಿಧಿಯಲ್ಲಿ ತುಂಗಭದ್ರಾ ನದಿಯ ಚಕ್ರತೀರ್ಥದಲ್ಲಿ ಗಂಗೆಪೂಜೆಯನ್ನು ಸಾಂಪ್ರದಾಯಿಕವಾಗಿ ನೆರವೇರಿಸಿ, ಗುರುವಾರ ಮರಳಿ ವಾದ್ಯ ವೈಭವಗಳೊಂದಿಗೆ ತಮ್ಮ ಗ್ರಾಮಕ್ಕೆ ಹೊರಡಿದ್ದಾರೆ. ಇವರು ಪೂಜಾರಹಳ್ಳಿಯನ್ನು ತಲುಪುವುದು ಫೆಬ್ರವರಿ 5ರಂದು. ನಂತರ ಫೆಬ್ರವರಿ 12,13ಕ್ಕೆ ಗ್ರಾಮದಲ್ಲಿ ಗುಗ್ಗರಿ ಹಬ್ಬ, 14, 15ಕ್ಕೆ ಕೆ.ಬಿ.ಹಟ್ಟಿಯ ಬಸವೇಶ್ವರ ಗುಗ್ಗರಿ ಹಬ್ಬವನ್ನು ಆಚರಿಸಲಾಗುವುದು ಎಂದು ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಸವರಾಜ್ ಗೊಂಚಿಗಾರ ತಿಳಿಸಿದರು. ಗ್ರಾಮದ ಜನಾಂಗದವರ ಮನೆತನಗಳ ದೈವ ಹಂಪೆಯ ವಿರುಪಾಕ್ಷನಾಗಿದ್ದು, ವಿಜಯನಗರ ಸಾಮ್ರಾಜ್ಯದ ಸಂದರ್ಭದಲ್ಲಿ ಈ ರೀತಿ ಗ್ರಾಮಸ್ಥರು ಭೇಟಿ ನೀಡಿ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿತ್ತು. ಅದೇ ಇಲ್ಲಿನವರೆಗೆ ಮುಂದುವರೆದುಕೊಂಡು ಬಂದಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧಕ ಡಾ.ವಿರುಪಾಕ್ಷಿ ಪೂಜಾರಹಳ್ಳಿ ಹೇಳುತ್ತಾರೆ. ಈ ರೀತಿ ಉತ್ಸವ ಆಚರಣೆಯಿಂದ ಗ್ರಾಮಕ್ಕೆ ಒಳಿತಾಗುವುದೆಂಬ ನಂಬಿಕೆಯೂ ಇದೆ ಎಂದು ಅವರು ತಿಳಿಸಿದರು. `ನಮ್ಮ ಅಜ್ಜ 1950ರೊಳಗ ಬಂಡಿ ಹೂಡ್ಕೊಂಡು ಗ್ರಾಮಸ್ಥರೆಲ್ಲ ಸೇರಿ ಹಂಪಿಗೆ ಗಂಗಿ ಪೂಜೆಗೆ ಹೋಗಿದ್ರಂತ ನಾನು ಸಣ್ಣವನಿದ್ದಾಗ ಕೇಳ್ತಿದ್ದೆ, ಈಗ ನಮ್ ಪುಣ್ಯಾ ನಾವು ಹೋಗಿ ಬಂದೀವಿ' ಎಂದು ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಗೊಂಚಿಗಾರ ಬೋರಯ್ಯ ತಿಳಿಸಿದರು. ಇವರು ಹಂಪೆಗೆ ಹೋಗುವ ಮಾರ್ಗದಲ್ಲಿ ಸಂಬಂಧಿಕರಿರುವ ಊರುಗಳಲ್ಲಿ ಇವರಿಗೆ ಊಟ, ವಸತಿ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಉತ್ಸವದಲ್ಲಿ ಪೂಜಾರಿ ಓಬಣ್ಣ, ಕೆ.ಬಿ.ಹಟ್ಟಿ ಪೂಜಾರಿ ಬಸಯ್ಯ, ಮುಷ್ಟಲಗುಮ್ಮಿ ತಿಪ್ಪೇಸ್ವಾಮಿ, ಗೌಡರ ಓಬಯ್ಯ, ನಡುವಲಮನಿ ಓಬಯ್ಯ ಮುಂತಾದ ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.

ಗುರುವಾರ, ಫೆಬ್ರವರಿ 3, 2011

ಸರ್ಕಾರದ ಅವ್ಯವಸ್ಥೆ ವಿರುದ್ಧ ದ್ವನಿ ಎತ್ತಿದ ಮಂಜಮ್ಮ ಜೋಗತಿ

ಸಾಮಾನ್ಯವಾಗಿ ಜನಪದ ಕಲಾವಿದರು ಸರಕಾರದ ವಿರುದ್ಧ ದ್ವನಿ ಎತ್ತುವುದು ಅಪರೂಪ. ಇಂತಹ ಅಪರೂಪದ ಘಟನೆ ಹಂಪಿ ಉತ್ಸವದಲ್ಲಿ ನಡೆಯಿತು. ಮರಿಯಮ್ಮನಹಳ್ಳಿಯ ಮಂಜಮ್ಮ ಜೋಗತಿಯು ಶಿಕ್ಷಣ ಪಡೆದು, ದೈಹಿಕ ಬದಲಾವಣೆಯಿಂದಾಗಿ ಮಂಜು ಮಂಜಮ್ಮನಾಗಿ ಬದಲಾದವಳು. ಎಲ್ಲಮ್ಮನ ಪರಂಪರೆಯನ್ನು ಕಲೆಯನ್ನಾಗಿ ರೂಪಿಸುವಲ್ಲಿ ಶ್ರಮಿಸುತ್ತಿರುವವಳು. ಮಂಜಮ್ಮ ಖಡಕ್ಕಾಗಿ ಮಾತನಾಡುವುದಕ್ಕೆ ಹಿಂಜರಿಯದವಳು. ಜೋಗತಿಯರನ್ನು ಕೀಳಾಗಿ ಕಾಣುವವರನ್ನು ಕಡಾಖಂಡಿತವಾಗಿ ವಿರೋಧಿಸುವವ ಛಾತಿ ಇರುವಂಥವಳು. ಈಚೆಗಷ್ಟೆ ನಡೆದ ಹಂಪಿ ಉತ್ಸವದಲ್ಲಿ ಮಂಜಮ್ಮ ಜೋಗತಿ ತಮ್ಮ ಕಾರ್ಯಕ್ರಮವನ್ನು ನೀಡಿದ ನಂತರ, ಮಾತನಾಡಲು ಅವಕಾಶ ಕೋರಿ ಸರಕಾರದ ಅವ್ಯವಸ್ಥೆಯನ್ನು ಕುರಿತು ದ್ವನಿ ಎತ್ತಿದ್ದಾರೆ. ಕಾರಣವಿಷ್ಟೆ, ಜನಪದ ಕಲಾವಿದರಿಗೆ ಬಟ್ಟೆ ಬದಲಿಸಿ, ಮೇಕಪ್‍ ಮಾಡಿಕೊಳ್ಳಲು ಯಾವುದೇ ವ್ಯವಸ್ಥೆ ಇರಲಿಲ್ಲ. ವೇದಿಕೆಯ ಹಿಂಭಾಗ ಯಾರೂ ಬರದಿರುವಂತೆ ಒಬ್ಬರು ಕಾದುಕೊಂಡಿದ್ದು, ಉಳಿದವರು ಬಯಲಲ್ಲಿಯೇ ಬಟ್ಟೆ ಬದಲಿಸಿ ಮೇಕಪ್‍ ಮಾಡಿಕೊಳ್ಳುತ್ತಿದ್ದಾರೆ, ಇದೇ ಸಮಯಕ್ಕೆ ಕೆಲವು ಪೋಲಿ ಹುಡುಗರು ಜೋಗತಿಯರನ್ನು ಕಿಚಾಯಿಸಲು ಪ್ರಯತ್ನಿಸಿದ್ದಾರೆ. ಅಂದರೆ ಶಾಸ್ತ್ರೀಯ ಸಂಗೀತಗಾರರಿಗಾದರೆ, ಮೊದಲ ದರ್ಜೆ ಹೋಟೇಲುಗಳನ್ನು ಬುಕ್‍ ಮಾಡುವ ಸರಕಾರ ಜನಪದ ಕಲಾವಿದರಿಗೆ, ಡ್ರೆಸ್‍ ಚೇಂಜ್‍ ಮಾಡಿಕೊಳ್ಳಲಿಕ್ಕಾದರೂ, ಒಂದು ವ್ಯವಸ್ಥೆ ಮಾಡಬಾರದೇ? ಜನಪದ ಕಲಾವಿದರನ್ನೇನು ದನಗಳೆಂದು ಸರಕಾರ ಭಾವಿಸಿದೆಯೇ ಮುಂತಾಗಿ, ಅಲ್ಲಿದ್ದ ಕಾರ್ಯಕ್ರಮದ ಆಯೋಜಕರನ್ನು ಮಂಜಮ್ಮ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಆಯೋಜಕರು ಬಿರುಸಿನ ಪ್ರತಿಕ್ರಿಯೆ ನೀಡಿದುದರಿಂದಾಗಿ ಒಂದು ಸಣ್ಣ ಜಟಾಪಟಿಯೇ ನಡೆದಿದೆದೆ. ಇದನ್ನು ಮಾದ್ಯಮಗಳು ಚನ್ನಾಗಿಯೇ ಬಿಂಬಿಸಿದವು. ಆ ನಂತರ ಮಂಜಮ್ಮನ ಬಳಿ ಮಾತನಾಡಿದಾಗ ಹೇಳಿದ ಘಟನೆ ಇನ್ನೂ ಕುತೂಹಲಕಾರಿಯಾಗಿತ್ತು. ಕೆಲವರು ಟಿ.ವಿ ನೋಡಿ ‘ಏನ್‍ ಮಂಜಮ್ಮ ಮೊನ್ನೆ ತಾನೆ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದು ಸರಕಾರವನ್ನೇ ಬೈಯುತ್ತೀಯಲ್ಲ, ಅಂದರಂತೆ, ಅದಕ್ಕೆ ಮಂಜಮ್ಮ ಕೋಟ್ಟ ಉತ್ತರ ಮಾರ್ಮಿಕವಾಗಿದೆ. ಅದೇನೆಂದರೆ "ಸರ್ಕಾರ ನನ್ನ ಕಲೆಯನ್ನು ಗೌರವಿಸಿ ಪ್ರಶಸ್ತಿಯನ್ನು ಕೊಟ್ಟಿದೆ , ಹಾಗೆಂದು ಅದೇ ಕಲೆಯನ್ನು ಕೀಳಾಗಿ ನೋಡುವಾಗ ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕೆ? ಎಂದು ಉತ್ತರಿಸಿದ್ದಾರೆ. ಇಂತಹ ದೈರ್ಯ ಮತ್ತು ತಮ್ಮ ಕಲೆಯ ಬಗ್ಗೆ ತಾವೇ ಗೌರವ ತಾಳುವ ಮತ್ತು ಅದಕ್ಕೆ ಅಗೌರವವಾದಾಗ ಅದನ್ನು ಪ್ರತಿರೋಧಿಸುವ ಗುಣ ಜನಪದ ಕಲಾವಿದರಲ್ಲಿ ಬರಬೇಕಿದೆ. ಬಹುಪಾಲು ಜನಪದ ಕಲಾವಿದರು ಇಂತಹದುದರ ವಿರುದ್ಧ ದ್ವನಿ ಎತ್ತುವುದು ಕಡಿಮೆ. ಕಾರಣ ಮುಂದಿನ ಕಾರ್ಯಕ್ರಮಕ್ಕೆ ನಮಗೆ ಅವಕಾಶ ಕೊಡುವುದಿಲ್ಲ ಎನ್ನುವ ಭಯ ಅವರನ್ನು ಕಾಡುತ್ತಿರುತ್ತದೆ. ಇದನ್ನು ನೋಡಿದರೆ ಜನಪದ ಕಲೆಗಳು ಯಾವ ಸ್ಥಿತಿಯಲ್ಲಿವೆ ಎಂದು ಅರ್ಥವಾಗುತ್ತದೆ. ಈ ವಿಷಯದಲ್ಲಿ ಜನಪದ ಕಲಾವಿದರು ಮಾತ್ರವಲ್ಲ ಜನಪದ ಅಧ್ಯಯನಕಾರರೂ ದ್ವನಿ ಎತ್ತುವ ಅಗತ್ಯವಿದೆ. ಆದರೆ ಜನಪದ ಕಲಾವಿದರನ್ನು ಬೆಂಬಲಿಸಿ ಸರಕಾರದ ವಿರುದ್ಧ ದ್ವನಿ ಎತ್ತುವ ವಿದ್ವಾಂಸರ ಕೊರತೆ ಕನ್ನಡದಲ್ಲಿ ಹೆಚ್ಚಿದೆ ಹಂಪಿ ಉತ್ಸವವನ್ನು ಒಳಗೊಂಡಂತೆ ಯಾವುದೇ ಸರಕಾರಿ ಉತ್ಸವಗಳಲ್ಲಿ ಜನಪದ ಕಲಾವಿರನ್ನು ಕೀಳಾಗಿ ನೋಡಲಾಗುತ್ತದೆ. ಶಿಷ್ಟ ಕಲಾವಿದರನ್ನು ನೋಡುವ ಕ್ರಮಕ್ಕೂ , ಜನಪದ ಕಲಾವಿದರನ್ನು ಭಾವಿಸುವ ಕ್ರಮಕ್ಕೂ ತುಂಬಾ ವ್ಯಾತ್ಯಾಸವಿದೆ. ಅಂತೆಯೇ ಜನಪದ ಕಲಾವಿದರಿಗೆ ಕೊಡುವ ಸಂಭಾವನೆಯಲ್ಲಿಯೂ ವಿಪರೀತ ತಾರತಮ್ಯವಿದೆ. ಒಬ್ಬ ಶಾಸ್ತ್ರೀಯ ಸಂಗೀತಗಾರರಿಗೆ ಐವತ್ತು ಸಾವಿರ ಸಂಭಾವನೆ, ಮೊದಲ ದರ್ಜೆಯ ಹೋಟೇಲುಗಳ ಗೌರವವಿದ್ದರೆ, ಜನಪದ ಕಲಾವಿದರಿಗೆ ಹತ್ತು ಸಾವಿರ ಮತ್ತು ಬಯಲೇ ವಾಸ. ಇನ್ನಾದರೂ ಜನಪದ ಕಲಾವಿದರು ಈ ತಾರತಮ್ಯವನ್ನು ವಿರೋಧಿಸಿ ದ್ವನಿ ಎತ್ತುವುದನ್ನು ಕಲಿಯಬೇಕಿದೆ. ಜನಪದ ಅಧ್ಯಯನಕಾರರೂ ಜನಪದ ಕಲಾವಿದರ ಪರವಾಗಿ ಬಹಿರಂಗವಾಗಿ ಅವರಿಗಾಗುವ ಅನ್ಯಾಯವನ್ನು ವಿರೋಧಿಸುವ ಅಗತ್ಯವೂ ಇದೆ.