ಗುರುವಾರ, ಸೆಪ್ಟೆಂಬರ್ 12, 2013

ಜನಬದುಕಿಗೆ ರುಜು ಮಾಡಿದ ಶಿಲ್ಪವನ

                                                                                                                                                                                                                                                                      


 



 ಸೌಜನ್ಯ:ವಿಜಯ ಕರ್ನಾಟಕ


ಕಲೆಯನ್ನು ಜನರಿಗೆ ಹತ್ತಿರಾಗಿಸುವ ಮೂಲಕ ವಿಶ್ವಶಾಂತಿ ಸಾರಲು ಮುಂದಾದ ಅನನ್ಯ ಕಲಾಗಾರ್ತಿ ಈ ಸೊಲಬಕ್ಕನವರ್
ಗುಲಾಬಿ ನಗರದಾಗ ಗುಡಿಸಲು ಯಾಕಂತ ಬ್ಯಾಡಂತ ಬೆಂಗಳೂರು ದಬ್ಬಿತ್ತಲ್ಲ...'-ಈ ಹಾಡು ವ್ಯಾಕುಲಗೊಂಡ ಮನದಲ್ಲಿ ಹರಿದಾಡುತ್ತಲೇ ಇತ್ತು. ಬೆಳಗಾದರೆ ಹಬ್ಬ. ಬೆಂಗಳೂರು ಬಸ್ ಸ್ಟ್ಯಾಂಡು ಯುವಕರಿಂದ ಕಿಕ್ಕಿರಿದಿತ್ತು. ಸುರಿವ ಮಳೆ. ಕಂಡ ಬಸ್ಸು ಹತ್ತಿ ಹೆತ್ತವರನ್ನು ಸೇರುವ ತವಕದಲ್ಲಿದ್ದ ಹುಡುಗ- ಹುಡುಗಿ ಯರು.

ಕೂಲಿಕಾರ್ಮಿಕರು, ಕೃಷಿ ನೆಲ ಕಚ್ಚಿದ್ದರಿಂದ ಕೆಲಸ ಹುಡುಕಿ ಬೆಂಗಳೂರಿಗೆ ಬಂದಾಗ, ಇಲ್ಲಿ ಎದುರಾದದ್ದು ನೂರಾರು ಜನರ ಕೆಲಸವನ್ನು ತಾನೊಂದೇ ಮಾಡುವ ಬಹತ್ ಯಂತ್ರ! ಮತ್ತೆ ಚೂರು ಗಂಜಿಗಾಗಿ ಗೇಣು ಹೊಟ್ಟೆ ಹೊರೆಯಲು ಈ ಹಾಡು ಹಾಡುತ್ತಾ ಮತ್ತೊಂದು ನಗರಕ್ಕೆ ಹೊರಟರು. ಈಗ ಸಾಫ್ಟ್‌ವೇರ್ ಲೋಕದ ಯುವಕರ ಸರದಿ. ಹೈರಾ ಣಾಗಿ ಓದಿಕೊಂಡು ಸೂಟು-ಪ್ಯಾಂಟು ಧರಿಸಿ ಬಂದಿರು ವರು. ಬೃಹತ್ ಕಂಪನಿಗಳು ಅವರ ಶ್ರಮವನ್ನು ಖರೀದಿ ಸಲು ಮುಗಿಲಿಗೆ ಮುಟ್ಟಿ ಬೀಗಿ ನಿಂತಿವೆ. ಅಮೆರಿಕದ ದೊಡ್ಡಣ್ಣ ಯಾವಾಗ ಇಶಾರೆ ಮಾಡಿದರೂ ಸಾಕು, ಈ ಯುವಕರೂ 'ಬಂಗ ಲೆಗಳ ನಗರದಾಗ ನಮಗಿಲ್ಲ ಬದುಕೆಂದು' ಭೂಮಂಡಲ ಸುತ್ತುವರು.

ನಾನಾದರೋ ಧೋ ಮಳೆಯಲ್ಲಿ ನೆನೆಯುತ್ತಾ, ರಿಸರ್ವಾಗಿದ್ದ ಐಶಾರಾಮಿ ಬಸ್ಸೊಂದು ತಪ್ಪಿಸಿಕೊಂಡು, ಪೆಚ್ಚಾಗಿ, ಮತ್ತೆ ಅರೆಗಳಿಗೆಯಲ್ಲಿ ಕೆಂಪು ಬಸ್ಸೊಂದನ್ನು ಹತ್ತಿ, ಇದೇ ನನ್ನ ಕಾಯಂ ಜಾಗವೆಂದು ಧಾರ ವಾಡಕ್ಕೆ ಹೊರಟೆ. ಕಣ್ಣ ತುಂಬಾ ತೊಯ್ದು ತೊಪ್ಪೆಯಾಗಿ ಬಸ್ಸು ಹತ್ತಲು ಹೈರಾಣಾಗುತ್ತಿರುವ ಯುವಜನತೆಯೇ ತುಂಬಿಕೊಂಡಿತ್ತು. ವ್ಯಾಕುಲತೆಯಿಂದ ಚಡಪಡಿಸು ತ್ತಿ ರುವ ಮನಸ್ಸನ್ನು ತಹಬಂದಿಗೆ ತರಲೇಬೇಕಿತ್ತು. ಜಸ್ಟೀಸ್ ನಾಗಮೋಹನದಾಸರು ಬರೆದ 'ಅರಿವು ಬೆಳಕು' ಪುಸ್ತಕ ಬಿಡುಗಡೆಯಾಗಿ, ಪುಸ್ತಕದ ಬಗ್ಗೆ ಮಾತಾಡಿ ಧಾರವಾಡ ದಿಂದಲೂ ಓಟ ಕಿತ್ತೆ. ಎಲ್ಲಿಗೆ ಹೋಗುವುದು? ಒಳಗಿನ ತಲ್ಲಣಕ್ಕೆ ಹೇಗೆ ಸಂತೈಸುವುದು? ಥಟ್ಟನೆ ನೆನಪಾದರು ಹುಲಸೋಗಿಯ ತಿಪ್ಪಣ್ಣಪ್ಪ ಬಸವಣ್ಣೆಪ್ಪ ಸೊಲಬಕ್ಕನವರ್. ಗಾಡಿಯನ್ನು ಶಿಗ್ಗಾಂವಿಯ ಗೊಟಗೋಡಿ ಯತ್ತ ಓಡಿಸಿದೆವು.

ಮಣ್ಣಗೋಡೆಯ ನಡುವಲ್ಲಿ ಹೋಗಿ ಬರುವ ಕಾಲಚಕ್ರಗಳು. ಅನತಿ ದೂರದಲ್ಲಿಯೇ ಅಭಿಮಾನಿ ಜನತೆಯನ್ನು ದೇವರಾಗಿಸಿದ ಡಾ.ರಾಜಕುಮಾರ ಶಿವಲಿಂಗಕ್ಕೆ ಕಣ್ಣು ಕಿತ್ತು ಕೊಡುತ್ತಿದ್ದರು. ಸಂಪತ್ತಿಗೆ ಸವಾಲೆಸೆದು, ಎಮ್ಮೆಯ ಸರಿ ಸಾಟಿ ಯಾರಿಲ್ಲವೆಂದು ಸಾರುತ್ತಿದ್ದರು. ರಾಜಕುಮಾರ ಚಿತ್ರಗಳ ಸರ್ಕ ಲ್ಲದು. ಅಲ್ಲಿ, ಗುಡಿಸಲಲ್ಲಿ ಥೇಟ್ ನನ್ನವ್ವ ನಂತೆ ಇಳಕಲ್ ಸೀರೆಯುಟ್ಟ ಖಣದ ಕುಬುಸದ, ಘಲ್ಲೆನ್ನುವ ಬಳೆಗಳ ಕೈಗಳಾಕೆ ಬೀಸುತ್ತಿದ್ದಳು, ಕುಟ್ಟುತ್ತಿದ್ದಳು, ಕೌದಿ ಹೊಲಿಯುತ್ತಿದ್ದಳು. ಅರೆ... ಇದೇನಿದು!? ನಾನು ಸಣ್ಣ ವಳಿದ್ದಾಗ ಹಣಮಂತ ದೇವರ ಗುಡಿಯ ಮುಂದೆ ಮುಸ್ಲಿಂ ಹುಸೇನಸಾಬ ಮತ್ತು ಲಿಂಗಯ್ಯ ಮುತ್ಯ, ಹಿಂಗೇ ಚೌಕಿ ಮಣಿ ಆಟವಾಡುತ್ತಿದ್ದರು. ಹುಬಾಹೂಬ್ ಹಂಗೇ. ಗೌಡರ ವಾಡೆಗೆ ನುಗ್ಗಿದೆವು. ಪಡ ಸಾಲೆಯಲ್ಲಿ ತೂಗುವ ತೊಟ್ಟಿಲು. ತೊಟ್ಟಿಲ ಮೇಲೆ ಗುಬ್ಬಿ- ಗಿಳಿಯ ಖೇಣಿ. ಕೊಟ್ಟಿಗೆ ಯಲ್ಲಿ ಹುಲ್ಲು ಮೇಯು ತ್ತಿದ್ದ ರಾಸುಗಳು. ಕಾಡು ಪೊದೆಗಳ ನಡುವಲ್ಲಿ ಜಿಂಕೆ-ಹುಲಿ- ಸಿಂಹಗಳು, ಹಂದಿ-ತೋಳಗಳು. ರೆಕ್ಕೆ ಬಿಚ್ಚಿ ಹಾರಾಡುವ ಬೆಳ್ಳಕ್ಕಿಗಳು. ದೇವರ ರುಜು ಮಾಡಿ ದನೇ? ಹ್ಞಾಂ... ಸೊಲಬಕ್ಕನವರ ಬೆರಳುಗಳಿಂದ ರುಜು ವಾ ದ ವುಗಳು. ಹೆಬ್ಬಾಗಿಲು ದಾಟಿ ಸೊಲಬಕ್ಕನವರ ಮುಂದೆ ನಿಂತೆ. 25 ವರ್ಷದ ಹಿಂದಿನ ಸೊಲಬಕ್ಕನವರ ಚಿತ್ರ ಎದೆ ಯಂಗಳದಲ್ಲಿದ್ದ ಹಾಗೇ ಇದೆ. ಅದೇ ನಗು, ವಿಶ್ವಶಾಂತಿಗಾಗಿ ತಹತಹಿಸುವ ಮನಸ್ಸು. ಅವರ ಬೆರಳಲ್ಲರಳಿದ 120 ಅಡಿಯ ತೈಲ ವರ್ಣದ ಚಿತ್ರಗಳನ್ನು ಹೊತ್ತು ಸಮುದಾ ಯದ ಸುರೇಂದ್ರ, ವಿಮಲ, ಆರ‌್ಕೆ ಹುಡುಗಿ, ವಸಂತ ಖಡೆಕರ್, ದಾವಣಗೆರೆಯ ಯಾಕೂಬ್, ಈಶ್ವರ ಪ್ರಸಾದ ಬಂದಿರು ವರು.

ಅದು 1986ರ ಸೆಪ್ಟೆಂಬರ್ 9; ವಿಶ್ವಕ್ಕೆ ಅಣುಬಾಂಬು ಮರಣಶಾಸನ ಬರೆವ ಹೊತ್ತಲ್ಲಿ ಸಮುದಾಯ ಸಾಂಸ್ಕೃತಿಕ ಸಂಘಟನೆಯು 'ನೂರು ಅಡಿಗಳ ಬಣ್ಣ ಸಮುದಾಯದ ನಡೆಯಣ್ಣ' ಘೋಷಣೆ ಹೊತ್ತು ಜಾಥಾ ಸಂಘಟಿಸಿತ್ತು. ನೂರಿ ಪ್ಪತ್ತು ಅಡಿಗಳ ತೈಲವರ್ಣದ ಚಿತ್ರದಲ್ಲಿ, ಮಾನವರ ಉಗಮ ವಿಕಾಸ ಮತ್ತು ಅಣುಬಾಂಬಿಗೆ ಬಲಿಯಾಗುವ ಜೀವರಾಶಿ ಯನ್ನು ಮನ ಕಲಕುವಂತೆ ಬಿಡಿಸಿದವರು ಸೊಲಬಕ್ಕನವರ್. ಸತತ ಆರು ತಿಂಗಳು ಚಿತ್ರ ಬಿಡಿಸಿದ್ದರು. ಯುದ್ಧಗಳಲ್ಲಡಗಿದ ಆರ್ಥಿಕ-ರಾಜಕೀಯ ಸ್ವಾರ್ಥವನ್ನು ಬಯಲಿಗೆಳೆದ ಚಿತ್ರ ಗಳವು. ಪಿಕಾಸೋ ನೆನಪಾದರು. ವಿಶ್ವವು ಎರಡನೆಯ ಮಾಹಾ ಯುದ್ಧದಲ್ಲಿ ಬೇಯುವಾಗ ಪಿಕಾಸೊ ಬಿಡಿಸಿದ ಮೂವತ್ತೆರಡು ಫೂಟುಗಳ 'ಗೇರ್‌ನಿಕಾ' ಚಿತ್ರಗಳು ಯುದ್ಧಕ್ಕೆ ಧಿಕ್ಕಾರ ಹೇಳಿದ್ದವು. ಅದೇ ಪರಂಪರೆಯ ಮುಂದುವರೆದ ನಡೆ ಸಮುದಾಯ ಮತ್ತು ಸೊಲಬಕ್ಕನವರದ್ದು. ನೂರು ಅಡಿಗಳ ಬಣ್ಣದ ನಡೆಯು ದೇಶಾದ್ಯಂತ ಸಂಚರಿಸಿತು; ಶಾಂತಿಗಾಗಿ, ಯುದ್ಧದ ಕರಿನೆರಳಿನ ವಿರುದ್ಧ. ಸೊಲಬಕ್ಕನವರ್ 1979ರ ಹೊಸ ಮೌಲ್ಯ ಹೊತ್ತ ಸಮುದಾಯದ ಜಾಥಾ ಹಾಗೂ 1981ರಲ್ಲಿ ನರಗುಂದ-ನವಲಗುಂದ ರೈತ ಬಂಡಾ ಯದ ಜಾಥಾದಲ್ಲಿಯೂ ಹೆಜ್ಜೆ ಹಾಕಿದವರು. ಈಗಲೂ ಸೊಲ ಬಕ್ಕನವರದ್ದು ಅದೇ ಮಾತು; ''ನಮಗೆ ಯುದ್ಧ ಬೇಡ. ಶಾಂತಿ ಬೇಕು. ನಮ್ಮ ಸಂಸ್ಕೃತಿಯ ಬೇರು ಶಾಂತಿ- ಸೌಹಾ ರ್ದತೆ ಯಿಂದ ಕೂಡಿದೆ. ಸಾಮ್ರಾಜ್ಯಾಶಾಹಿ, ಮತಾಂಧರ ಚಟುವಟಿ ಕೆಗಳು ಯುದ್ಧ ಬೀಜಗಳಿಗೆ ಜನ್ಮ ಕೊಡುತ್ತವೆ. ನಾವು ಬಂದೂ ಕಿನ ಬಾಯಲ್ಲಿ ಗುಬ್ಬಿಗಳು ಗೂಡು ಕಟ್ಟಬೇಕೆ ನ್ನುತ್ತೇವೆ. ಯುದ್ಧ ಇಲ್ಲವಾಗಬೇಕು. ಯುದ್ಧವಾದರೆ ಸೈನಿಕರು ಮಾತ್ರ ಸಾಯು ವುದಿಲ್ಲ. ಮಕ್ಕಳು ಸಾಯುತ್ತವೆ. ಅಂದರೆ, ದೇಶದ ಭವಿಷ್ಯ ಸಾಯುತ್ತದೆ.''

ತಾಟಿನಲ್ಲಿ ತಾಂಬೂಲವಿತ್ತು. ಎಲೆಯ ದೇಟು ತೆಗೆದು ಸುಣ್ಣ ಸವರಿ, ಒಂದಿಷ್ಟು ಅಡಕೆ ಮುಡಿಸಿ ಬಾಯಿಗಿಟ್ಟುಕೊಂಡೆ. 42 ಎಕರೆಯಲ್ಲಿ ಅರಳಿದ ಉತ್ತರ ಕರ್ನಾಟಕದ ಗ್ರಾಮಗಳು, ವೈವಿಧ್ಯಮಯ ಜೀವರಾಶಿಗಳ ಸಮಗ್ರ ಪರಿಚಯ, ಭಿನ್ನ- ವಿಭಿನ್ನ, ಹೊಸ ಶೈಲಿಯ ಕಲೆಗಳು. ಖರೆನೇ ಬೆರಗಾಗಿ ನಾವೇ ಪುತ್ಥಳಿಯಂತಾಗುವ ಹೊತ್ತಲ್ಲಿ ನಮ್ಮ ಅವತಾರಕ್ಕೆ ಕ್ಯಾಮೆರಾ ಕ್ಲಿಕ್ಕಿಸುವ ಸಿಮೆಂಟಿನ ಹೆಂಗಸು. ಇಂಥ ಬೆರಗು ಅಲಮಟ್ಟಿ ಡ್ಯಾಮಿ ನಲ್ಲಾಗಿದೆ. ಕರ್ನಾಟಕದಾಚೆಗೂ ಇಂಥ ಶಿಲ್ಪವನಗಳ ನಿರ್ಮಾಣ ವಾಗಿದೆ. ಮೂರೂವರೆ ಸಾವಿರಕ್ಕೂ ಅಧಿಕ ಕಲಾವಿದರು ಇವರ ಗರಡಿಯಲ್ಲಿ ಪಳಗಿ, ನಾಡಿನೆಲ್ಲೆಡೆ ಕಲೆ ಅರಳಿಸಲು ತೆರಳಿದ್ದಾರೆ. ಸೊಲಬಕ್ಕನವರ್ ಮಾತಾಡ ತೊಡಗಿದರು; ''ಇದು ಮನರಂಜನೆಯ ತಾಣವಲ್ಲ. ವಿಶ್ವಶಾಂತಿಯ ಚಿಂತನೆ ಬಿತ್ತುವ ತಾಣವಿದು. ನಮ್ಮೆಲ್ಲ ಕಲೆಗಳು ಕೇವಲ ಕಲೆಗಾಗಿಯಲ್ಲ, ಬದುಕಿಗಾಗಿ ಕಲೆ. ಅರಮನೆ-ಗುರುಮನೆ ಕಲಾಕೃತಿಗಳಿರುವ ಕಲಾ ಗ್ಯಾಲರಿಗಳಿಗೆ ಕೊರತೆಯಿಲ್ಲ. ಆದರೆ, ಸಾಮಾನ್ಯ ಜನತೆಯ ಜೀವನವನ್ನು ಪ್ರತಿಫಲಿಸುವ, ಅವರ ನೋವು-ನಲಿವುಗಳ ಒಳತೋಟಿಗೆ ಮಿಡಿಯುವ ಕಲೆಯು ಇಲ್ಲಿನ ಕೇಂದ್ರ. ಕಲೆ ಕೇವಲ ಸೌಂದರ್ಯ ಪ್ರಜ್ಞೆಯಲ್ಲ, ಸಾಮಾಜಿಕ ಚಿಂತನೆ. ಕಲಾ ವೀಕ್ಷಣೆಯ ಪ್ರವಾಸವು ಉದ್ಯಮ ವಾದಲ್ಲಿ ಅದು ಲಾಭ-ಹಾನಿಯ ದಂಧೆಯಾಗಿ ಮಾರ್ಪ ಡುತ್ತದೆ. ಮನರಂಜನೆಗೆ ಸೀಮಿತವಾಗುತ್ತದೆ. ವಿಶ್ವವು ಇಂದು ಯುದ್ಧ, ಕುರುಡು ಕಾಂಚಾಣದ ಥಕಥೈಯಲ್ಲಿ ನರಳುತ್ತಿರುವಾಗ ಕಲಾವಿದರಿಗೆ ಗಂಭೀರ ಸಾಮಾಜಿಕ ಜವಾಬ್ದಾರಿ ಇದೆ. ವಿಶ್ವದಾಖಲೆಗಳಲ್ಲಿ ಸೇರ್ಪಡೆಯಾಗಿರುವ ಈ ಶೈಕ್ಷಣಿಕ ಸಾಂಸ್ಕೃತಿಕ ಕೇಂದ್ರವು ನಾಡಿನೆಲ್ಲೆಡೆ ಮಾನವೀಯತೆಯ, ಸೌಹಾರ್ದತೆಯ ಮನಸ್ಸುಗಳ ಸೃಷ್ಟಿಗೆ ಸಾಧನವಾ ಗಲೆಂಬ ಬಯಕೆ ಇದೆ.''

ಈ ಕನಸಿಗಾಗಿಯೇ ಹುಲಸೋಗಿ ಹಳ್ಳಿ ಸೊಲಬಕ್ಕನವರ್, ಫೈನ್ ಆರ್ಟ್ಸ್ ಕಾಲೇಜಿನ ಸರಕಾರಿ ಉಪನ್ಯಾಸಕಗಿರಿ ಬಿಟ್ಟು, ಮಾನವೀಯ ಸಾಂಸ್ಕೃತಿಕ ಪರಂಪರೆಯನ್ನು ಒಡಲೊಳಗಿಟ್ಟುಕೊಂಡ ಶ್ರಮಿಕರ ಜೀವನವನ್ನು, ತಮ್ಮ ಕಲೆಯ ಮೂಲಕ ಅನಾವರಣಗೊಳಿಸುತ್ತಿರುವರು. ಪಾಳೇಗಾರಿ ಪ್ರಭುತ್ವ ವಿದ್ದಾಗಲೂ ಸೌಹಾರ್ದತೆಯ ಬದುಕಿನಲ್ಲಡಗಿದ ಪಲಕುಗಳು ಉತ್ಸವ್ ರಾಕ್ ಗಾರ್ಡನ್ನಿನ ಹಳ್ಳಿಗಳಲ್ಲಿ ಗೋಚರಿಸುತ್ತವೆ. ಅಲ್ಲಿಗೆ ಬರುವ ಮಕ್ಕಳ ಮನಸಿನಲ್ಲಿ ಶಾಂತಿ-ಸೌಹಾರ್ದತೆ ಗಾಗಿನ ಕನಸುಗಳು ಟಿಸಿಲೊಡೆಯಲೆಂಬ ಬಯಕೆ. ಬಂದ ಜನರ ಭೀಡಿನಲ್ಲಿ ಸೊಲಬಕ್ಕನವರ್ ನಗುತ ನಿಂತಿದ್ದರು. ಅವರ ಬೆರಳುಗಳಲ್ಲರಳಿದ ಕಲಾಕತಿಗಳು ಮತ್ತವರ ಕನಸು ನನ್ನ ವ್ಯಾಕುಲಗೊಂಡ ಮನವನ್ನು ಸಂತೈಸುತ್ತಿದ್ದವು.

ಕಾಮೆಂಟ್‌ಗಳಿಲ್ಲ: