ಗುರುವಾರ, ಫೆಬ್ರವರಿ 28, 2013

ದೇವನೂರು ಅವರಿಗೆ ಕನ್ನಡ ವಿವಿ ನಾಡೋಜ ಪ್ರಧಾನ


-ಅರುಣ್ ಜೋಳದಕೂಡ್ಲಿಗಿ
 

ಕನ್ನಡದ ಅಃತಸಾಕ್ಷಿಯಂತಿರುವ ದೇವನೂರು ಮಹದೇವ ಅವರಿಗೆ ಇಂದು ಕನ್ನಡ ವಿವಿ `ನಾಡೋಜ’ ಪದವಿಯನ್ನು ನೀಡಿ ಗೌರವಿಸಿತು.

ದೇವನೂರು ಮಾತು: ಇಲ್ಲಿ ಎಳೆಮನಸುಗಳು ಕಾಣುತ್ತಿವೆ. ಹಾಗಾಗಿ ಮಾತನಾಡಲು ಒಪ್ಪಿದೆ. ಇಂದು ಪ್ರಾರ್ಥನೆಯಾಗಿ `ಮಾತೆಂಬುದು ಜೋತಿರ್ಲಿಂಗ’ ಎಂಗ ಅಲ್ಲಮ ವಾಕ್ಯವನ್ನು ಹಾಡಿದಿರಿ, ಆದರೆ ಇಂದು ಮಾತು ಲಜ್ಜೆಗೆಟ್ಟಿದೆ. ಇದಕ್ಕೆ ಎರಡು ಘಟನೆಗಳನ್ನು ಹೇಳುವೆ ಒಂದು: ಉಪಮುಖ್ಯಮಂತ್ರಿ ಈಶ್ವರಪ್ಪ ಅವರ ಮನೆಗೆ ಸಿಬಿಐ ರೈಡ್ ಆದಾಗ ನೋಟು ಎಣಿಸುವ ಯಂತ್ರ ಸಿಕ್ಕಿತಂತೆ, ಅದಕ್ಕೆ ಪತ್ರಕರ್ತರು ಇದ್ಯಾಕೆ ಎಂದು ಕೇಳಿದರಂತೆ, ಆಗ ಈಶ್ವರಪ್ಪ ಅವರು `ಮಕ್ಕಳು ಆಟ ಆಡೋಕೆ’ ಎಂದು ಯಾವ ಮುಜುಗರವೂ ಇಲ್ಲದಂತೆ, ನಕ್ಕರಂತೆ. ಮತ್ತೊಂದು ಪತ್ರಿಕಾಗೋಷ್ಠಿಯೊಂದರಲ್ಲಿ ಯಡಿಯೂರಪ್ಪ ಅವರು ``ಆ ಶೆಟ್ಟರ್ ಗೆ ಏನು ಅಧಿಕಾರದ ಆಸೆ ಇದೆಯೋ,ಇಷ್ಟು ಆಸೆ ಇರಬಾರದು ಅಂದರಂತೆ. ಈ ಮಾತುಗಳು ನಿಜವೆ ಆಗಿದ್ದರೆ, ಮಾತು ಲಜ್ಜೆಗೆಟ್ಟ ಗತಿ ಇಲ್ಲಿಗೆ ಮುಟ್ಟಿದೆ ಅಂದಂತಾಯ್ತು.
 

ಇನ್ನು ಇಂದು ವಿಧ್ಯಾರ್ಥಿಗಳ ಎದುರು ಸಂಘಟನೆಯೊಂದರ ಕನಸನ್ನು ಮುಂದಿಡುವೆ. `ವಿಶ್ವಮಾನವ ಯುವಜನ ವೇದಿಕೆ’ ಕಟ್ಟಿ ವಿದ್ಯಾರ್ಥಿಗಳು ಇಂದು ಸಂಘಟನೆ ಮಾಡಬೇಕಿದೆ. ಇಲ್ಲವಾದರೆ ಕರ್ನಾಟಕಕ್ಕೆ ಉಳಿಗಾಲವಿಲ್ಲ. ನೀವು ಸಂಘಟನೆ ಮಾಡಿದ್ದಾದರೆ ನಾನು ನಿಮ್ಮನ್ನು ಹಿಂಬಾಲಿಸುವೆ. ಇದರ ತತ್ವ ಮಾನವ ತಾನೊಂದೇ ಒಲಂ ಆಗಿರಬೇಕು. ಕ್ರಿಯೆ: ನಿರಂಕುಶಮತಿಗಳಾಗುವ ಕಾರ್ಯಚಟುವಟಿಕೆಗಳನ್ನು ರೂಪಿಸಬೇಕು. ಎಂದರು.
 

ಕುಲಪತಿಗಳಾದ ಹಿ.ಚಿ.ಬೋರಲಿಂಗಯ್ಯ ಅವರ ಮಾತು: `ಕನ್ನಡ ವಿಶ್ವವಿದ್ಯಾಲಯ ಆತಂಕದಲ್ಲಿದೆ, ದೇವನೂರು ಅಂತವರು ಕನ್ನಡ ವಿಶ್ವವಿದ್ಯಾಲಯದಲ್ಲಿದ್ದರೆ, ನಮಗೆ ಆನೆ ಬಲ ಬಂದಂತಾಗುತ್ತದೆ. ನಮ್ಮ ಚೈತನ್ಯ ಹೆಚ್ಚುತ್ತದೆ. ಕರ್ನಾಟಕದ ಆತ್ಮ ಸಾಕ್ಷಿಯಂತಿರುವ ದೇವನೂರು ಅವರಿಗೆ ಕನ್ನಡ ವಿಶ್ವವಿದ್ಯಾಲಯ ನಾಡೋಜ ಕೊಡುವ ಮೂಲಕ ತನ್ನ ಗೌರವವನ್ನು ಹೆಚ್ಚಿಸಿಕೊಂಡಿದೆ. ದೇವನೂರು ಕನ್ನಡ ವಿವಿಗೆ ಬಂದು ನಾಡೋಜ ಸ್ವೀಕರಿಸುವ ಮೂಲಕ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾರೆ ಮುಂತಾಗಿ ಮಾತಾಡಿದರು.

ರಹಮತ್ ತರೀಕೆರೆ ಅವರು ದೇವನೂರು ಕುರಿತ ನಾಡೋಜ ಪುರಸ್ಕೃತ ಮಾತುಗಳನ್ನು ಹೇಳಿದರು. ಕಥೆಗಾರ ಕರೀಗೌಡ ಬೀಚನಹಳ್ಳಿ ಅವರು ದೇವನೂರು ಅವರ ಕಥನ ಬದುಕು ಕುರಿತು ಮಾತನಾಡಿದರು. ಕ್ಯಾಂಪಸ್ಸಿನ ಭುವನ ವಿಜಯದಲ್ಲಿ ಕನ್ನಡ ವಿವಿಯ ಸಕಲರೂ ನೆರೆದು ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

ಕಾಮೆಂಟ್‌ಗಳಿಲ್ಲ: