ಶನಿವಾರ, ಜೂನ್ 16, 2012

ಜಾನಪದ ವಿಶ್ವವಿದ್ಯಾಲಯದ ಆರಂಭದ ಸಂಭ್ರಮ

ಜಾನಪದ ವಿಶ್ವವಿದ್ಯಾಲಯದ ಆರಂಭದ ಸಂಭ್ರಮ




  ಶಿಗ್ಗಾವಿನ ಪರಿಸರದಲ್ಲಿ ಜಾನಪದ ವಿಶ್ವವಿದ್ಯಾಲಯದ ಉದ್ಘಾಟನೆಯ ಸಂಭ್ರಮ ತುಂಬಿ ತುಳುಕುತ್ತಿತ್ತು. ಹಳ್ಳಿಗಳಿಂದ ಜನರು ಗೊಟಗೋಟಿ ಬಳಿ ದಾವಿಸಿದ್ದರು. ಪೋಲೀಸರ ಸರ್ಪಗಾವಲಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳನ್ನೊಳಗೊಂಡು ಮಂತ್ರಿ ಮಹೋದಯರ ದಂಡೇ  ನೆರೆದಿತ್ತು. ಭಾರತದಲ್ಲಿಯೇ ಮೊಟ್ಟಮೊದಲ ಜಾನಪದ ವಿಶ್ವವಿದ್ಯಾಲಯವನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸಮಾಳ ಬಾರಿಸುವ ಮೂಲಕ ಶನಿವಾರ ನಾಡಿಗೆ ಅರ್ಪಿಸಿದರು.  ಇದಕ್ಕೆ ರಾಜ್ಯದ ಸಚಿವರು, ಜಾನಪದ ತಜ್ಞರು, ವಿದ್ವಾಂಸರು, ಕಲಾವಿದರು ಕನ್ನಡ ಪರ ಹೋರಾಟಗಾರರು, ಸಾಹಿತಿಗಳು ಸಾಕ್ಷಿಯಾದರು. ಜನರು ಜೈಕಾರ ಹಾಕಿದರು.

   ಮುಖ್ಯಮಂತ್ರಿ ಸದಾನಂದ ಗೌಡ ಅವರು ಮಾತನಾಡಿ, `ಜನಪದ ಸಂಸ್ಕೃತಿಯು ಒಂದು ನಾಡು, ದೇಶದ ಹೆಮ್ಮೆಯ ಸಂಗತಿಯಾಗಿದೆ. ಒಂದು ದೇಶದ ಶ್ರೀಮಂತಿಕೆ ಹಾಗೂ ಬಡತನ ಅಲ್ಲಿರುವ ಕಲೆ, ಸಂಸ್ಕೃತಿಯ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಎದುರಾಳಿ ದೇಶವನ್ನು ನಾಶ ಇಲ್ಲವೇ ಅಧಃಪತನಗೊಳಿಸಬೇಕಾದರೆ, ಅದರ ಜತೆಗೆ ಯುದ್ಧವನ್ನೇ ಮಾಡಬೇಕೆಂದೇನಿಲ್ಲ. ಅಲ್ಲಿನ ಕೆಲ, ಸಂಸ್ಕೃತಿ, ಆಚಾರ, ವಿಚಾರಗಳ ಮೇಲೆ ದಾಳಿ ನಡೆಸಿ ಅವುಗಳು ನಶಿಸುವಂತೆ ಮಾಡಿದರೆ, ಆ ದೇಶ ತನ್ನಿಂದ ತಾನೆ ನಾಶವಾಗುತ್ತದೆ` ಎಂದು ನುಡಿದರು.

  ಮುಂದುವರಿದು `ನಮ್ಮ ದೇಶದ ಮೇಲೆ ಹಲವಾರು ದಾಳಿಗಳು ನಡೆದರೂ ದೇಶವನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ.  ನಮ್ಮಲ್ಲಿ ಆಳವಾಗಿ ಬೇರು ಬಿಟ್ಟಿರುವ ಸಂಸ್ಕೃತಿಯೇ ಇದಕ್ಕೆ ಮೂಲ ಕಾರಣ. ದೇಶದ ಸಂಸ್ಕೃತಿ, ಸಂಪ್ರದಾಯಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶದಿಂದಲೇ ಈ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ` ಎಂದು ಹೇಳಿದರು. 





ಯಾಂತ್ರಿಕ ಜೀವನದಿಂದ ಮನುಷ್ಯ ಸಂಸ್ಕೃತಿ ಮತ್ತು ವಿಕೃತಿ ನಡುವಿನ ವ್ಯತ್ಯಾಸವನ್ನು ಕಂಡುಕೊಳ್ಳದೇ ತನ್ನತನವನ್ನು ಕಳೆದುಕೊಳ್ಳುತ್ತಿದ್ದಾನೆ. ಪ್ರತಿಯೊಬ್ಬ ಮನುಷ್ಯನಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದುನ್ನು ತಿಳಿಸಿಕೊಡಲು ಕಲೆ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯಗಳ ಅರಿವು ಅಗತ್ಯವಿದೆ ಎಂದರು.

  1970 ರ ದಶಕದಿಂದಲೂ ಜಾನಪದ ವಿಶ್ವವಿದ್ಯಾಲಯದ ಕೂಗು ಜೀ.ಶಂ.ಪರಮಶಿವಯ್ಯ ಅವರಿಂದಲೂ ಇತ್ತು. ಅದು ಗೋ.ರು.ಚ ಅವರು ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ, ಈ ಕನಸಿಗೆ ಜೀವ ತುಂಬಿ, ಅದನ್ನು ಜಪದಂತೆ ಮಾಡಿ,  ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವ ಉದ್ದೇಶದಿಂದ ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ  ಅವರ ನೆರವಿನಿಂದ ಈ ವಿಶ್ವವಿದ್ಯಾಲಯ ಸ್ಥಾಪಿಸುವ ನಿರ್ಧಾರ ಕೈಗೊಂಡರು. ಅದೀಗ ಅರಳಿ ನಿಂತಿದೆ. ವಿಶ್ವವಿದ್ಯಾಲಯವು ನಡೆವ ದಾರಿ ಮಹತ್ವದ್ದಾಗಿದೆ.


  ಜಾನಪದ ವಿವಿಯ ಆರಂಭದಿಂದಲೂ  ವಿವಿಯ ರೂಪುರೇಶೆ, ಅದು ಆರಂಭವಾಗುವ ಬಗ್ಗೆ ಸದಾ ಕನ್ನಡ ಜಾನಪದ ಬ್ಲಾಗ್ ದ್ವನಿಯಾಗುತ್ತಲೇ ಬಂದಿದೆ. ಈಗಲೂ ಜಾನಪದ ವಿವಿಯ  ಆರಂಭವನ್ನು ಸಂಭ್ರಮಿಸುತ್ತದೆ. ಈ ಹೊತ್ತಲ್ಲಿ ಜಾನಪದ ವಿವಿಯ ರಚನೆಗೆ ಕಾರಣವಾದ  ಎಲ್ಲಾ ಕಾಣದ ಕೈಗಳನ್ನೂ ಶಕ್ತಿ ಯುಕ್ತಿಗಳನ್ನೂ ಕನ್ನಡ ಜಾನಪದ ಬ್ಲಾಗ್ ಅಭಿನಂದಿಸುತ್ತದೆ. ಹಾಗೆಯೆ ಜಾನಪದ ವಿವಿಯ ಕನಸನ್ನು ನನಸು ಮಾಡುವಲ್ಲಿ ಶ್ರಮಿಸುತ್ತಿರುವ ಪ್ರೊ. ಅಂಬಳಿಕೆ ಹಿರಿಯಣ್ಣ ಮತ್ತು ಜಾನಪದ ವಿದ್ವಾಂಸರ, ಕನ್ನಡದ ಚಿಂತಕರ ದೊಡ್ಡ ಬಳಗಕ್ಕೆ ಕನ್ನಡ ಜಾನಪದದ ಪರವಾಗಿ ಧನ್ಯವಾಗಳು.


ಕಾಮೆಂಟ್‌ಗಳಿಲ್ಲ: