ಮಂಗಳವಾರ, ಜುಲೈ 5, 2011

ಸಣ್ಣ ರೈತರ ಬಡಗಿಗಳ ಹುಡುಕಾಟ

-ಸಿದ್ಧರಾಮ ಹಿರೇಮಠ.


(ಕೂಡ್ಲಿಗಿ ತಾಲೂಕಿನ ದಿಬ್ಬದಹಳ್ಳಿಯ ಕೃಷಿ ಸಲಕರಣೆಗಳನ್ನು ಸಿದ್ಧಪಡಿಸುವ ಬಡಗಿ ಶರಣಪ್ಪ ಹಾಗೂ ಸಣ್ಣರಂಗಪ್ಪ)

ಮುಂಗಾರು ಆರಂಭವಾದರೆ ಕೃಷಿ ಚಟುವಟಿಕೆಗಳು ಆರಂಭವೆಂದೇ ಅರ್ಥ. ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಸಲಕರಣೆಗಳಿಗಾಗಿ ರೈತರು ಬಡಗಿಗಳನ್ನು ಹುಡುಕಾಡಿದಂತೆಯೇ, ಅಳಿದುಳಿದ ಬಡಗಿಗಳೂ ರೈತರನ್ನು ಹುಡುಕಬೇಕಾದ ಪ್ರಸಂಗವೊದಗಿದೆ.
ಈ ಮೊದಲು ಬಂಡಿ, ಕುಂಟೆ, ಕೂರಿಗೆಗಳ ಕೆಲಸ ಮಾಡಿದ ಬಡಗಿಗಳು ಬೇಡಿಕೆಯಿಲ್ಲದೇ ಬೇರೆ ಕೆಲಸಗಳಲ್ಲಿ ವಾಲುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿಯೂ ಯಂತ್ರೋಪಕರಣಗಳು ಬಂದಂತೆ, ರೈತರ ಕೃಷಿ ಸಲಕರಣೆಗಳ ತಯಾರಿಕೆಯಲ್ಲೂ ಯಂತ್ರೋಪಕರಣಗಳು ಬೇಕು ಎನ್ನುವುದು ಬಡಗಿಗಳ ಬಯಕೆಯಾಗಿದೆ. ಕುಂಟೆ, ಕೂರಿಗೆ ಮಾಡುವುದು ಕಷ್ಟದ ಕೆಲಸ. ಅವುಗಳನ್ನು ಸಿದ್ಧಪಡಿಸಲು ಕನಿಷ್ಠ ಎರಡು ದಿನಗಳಾದರೂ ಬೇಕು ಎಂದು ತಾಲೂಕಿನ ದಿಬ್ಬದಹಳ್ಳಿಯ ಬಡಗಿ ಶರಣಪ್ಪ ಹೇಳುತ್ತಾರೆ.

ಸುಮಾರು 30 ವರ್ಷಗಳಿಂದ ಕೃಷಿ ಸಲಕರಣೆಗಳನ್ನೇ ಸಿದ್ಧಪಡಿಸುತ್ತಿರುವ ಶರಣಪ್ಪ, `ಮೊದಲಿನ ಬೇಡಿಕೆ ಈಗಿಲ್ಲ' ಎನ್ನುತ್ತಾರೆ. ಕೇವಲ 2 ರೂ.ಗಳಿಗೆ ಕೂರಿಗೆ ಮಾಡಿಕೊಡುತ್ತಿದ್ದೆ, ಈಗ ಅದಕ್ಕೆ 200 ರೂ.ಗಳಾಗುತ್ತದೆ ಎನ್ನುತ್ತಾರೆ. ಕುಂಟೆ ಮಾಡಿಸಲು 200 ರೂ.ಗಳನ್ನು ರೈತರು ಕೊಡಬೇಕು. ಕಟ್ಟಿಗೆಯನ್ನು ಅವರೇ ತರಬೇಕು. ಕಟ್ಟಿಗೆಯನ್ನು ನೀವೇ ತರಬಹುದಲ್ಲ ಎಂದರೆ, `ಕಾಡೆಲ್ಲ ನಾಸ ಆಗೋಯ್ತು, ಈಗೆಲ್ಲಿಂದ ಕಟಿಗಿ ಹೊಂದಿಸ್ಲಿ ಸರ್, ಅದಕ್ಕೆ ನೀವೇ ಏನರ ಮಾಡ್ಕೊಳ್ರಿ, ಕಟಿಗೆ ತಂದುಕೊಟ್ರ ನೀವು ಹೇಳ್ದಿದು ಮಾಡಿಕೊಡ್ತೀನಿ ಅಂತ ಹೇಳ್ತೀನಿ' ಎಂದು ಶರಣಪ್ಪ ಹೇಳಿದರು.

ಈಗಾಗಲೇ ಟ್ರ್ಯಾಕ್ಟರ್ಗಳು ಬಂದು ಕೃಷಿ ಕಾರ್ಯವನ್ನು ಸುಲಭಗೊಳಿಸಿವೆಯಾದರೂ, ಅದರ ಪೆಟ್ಟು ಬಿದ್ದದ್ದು ಮಾತ್ರ ಬಡಗಿಗಳಿಗೇ. ಈಗ ಇದರಲ್ಲಿ ಯಾವ ಲಾಭವೂ ಇಲ್ಲವೆಂದು ಬಡಗಿಗಳೆಲ್ಲ ಮನೆಯ ಬಾಗಿಲು, ಕಿಟಕಿಗಳನ್ನು ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳತೊಡಗಿದ್ದಾರೆ. ಹೀಗಾಗಿ ಎಡೆಕುಂಟೆ, ಕೂರಿಗೆ ಮಾಡಿಸಬೇಕಾದರೆ ರೈತರು, ಹಳೆಯ ಬಡಗಿಗಳನ್ನೇ ಹುಡುಕುತ್ತ ಹೋಗುವ ಪರಿಸ್ಥಿತಿ ಬಂದೊದಗಿದೆ. `ಎಷ್ಟೋ ವರ್ಸದಿಂದ ಇದೇ ಬದುಕನ್ನೇ ಮಾಡ್ಕೊಂಡು ಬಂದೀವಿ, ಈಗ ಒಮ್ಮೆಲೇ ಕೆಲ್ಸ ನಿಂತುಬಿಟ್ರೆ ನಾವು ಬದ್ಕೋದಾದ್ರು ಹೆಂಗೆ?' ಎಂದು ಪ್ರಶ್ನಿಸುತ್ತಾರೆ ದಿಬ್ಬದಹಳ್ಳಿಯ ಬಡಗಿ ಸಣ್ಣರಂಗಪ್ಪ. `ನಾವು ಇದೇ ಕೆಲ್ಸದಾಗೇ ಬಂದ್ವಿ, ಕೈಯಿಂದ ಕೆಲ್ಸ ಮಾಡೋದು ಹೆಂಗಂತ ನಾವು ತಿಳ್ಕೊಂಡೀವಿ, ಈಗಿನ ಹುಡುಗ್ರು ಇದ್ಕೆಲ್ಲ ಮಾಡ್ತಾರನ್ನೋ ನಂಬ್ಕಿ ನಮಗ್ಲಿಲ್ಲ, ಈಗಿನವ್ರು ಶ್ರಮ ಬ್ಯಾಡಂತಾರ, ನಮ್ಮ ಕಾಲಕ್ಕ ಇದೆಲ್ಲ ಮುಗ್ದೋಗಿಬಿಡ್ತು ಅನ್ನಿಸ್ತದೆ' ಎಂದು ಶರಣಪ್ಪ, ಸಣ್ಣರಂಗಪ್ಪ ವಿಶಾದ ವ್ಯಕ್ತಪಡಿಸಿದರು.
(ಕೂಡ್ಲಿಗಿಯಲ್ಲಿ ಕೃಷಿ ಸಲಕರಣೆಗಳನ್ನು ಸಿದ್ಧಪಡಿಸುವ ಬಡಗಿ ಮಾಬುಸಾಬ್)


ಮುಂಗಾರು ಆರಂಭವನ್ನು ಹೊರತುಪಡಿಸಿದರೆ, ನಂತರ ಕೃಷಿ ಸಲಕರಣೆಗಳ ಕೆಲಸವೇ ಇಲ್ಲ ಎಂಬುದು ಕೂಡ್ಲಿಗಿಯ ಬಡಗಿ ಮಾಬುಸಾಬ್ರ ಹೇಳಿಕೆ. ಮೂರು ತಲೆಮಾರುಗಳಿಂದಲೂ ಇದೇ ವೃತ್ತಿಯನ್ನು ಅವಲಂಬಿಸಿದ್ದೇವೆ, ಬಂಡಿಗೆ ಈ ಮೊದಲಿದ್ದ ಬೇಡಿಕೆ ಈಗ ಇಲ್ಲ. ಇತ್ತೀಚೆಗೆ ಟೈರ್ ಬಂಡಿಗಳು ಹೆಚ್ಚಾಗಿವೆ. ಎತ್ತುಗಳ ಸಂಖ್ಯೆಯೂ ಕಡಿಮೆಯಾಗಿ, ಈಗ ಎಲ್ಲದಕ್ಕೂ ರೈತರು ಮಿನಿಲಾರಿಯನ್ನೇ ಬಳಸುತ್ತಾರೆ ಎಂದು ಮಾಬುಸಾಬ್ ಹೇಳಿಕೆ. ಯಂತ್ರಗಳ ಬಳಕೆಯಿಂದಾಗಿ ನಮ್ಮಂತಹ ಸಣ್ಣ ಕೆಲಸಗಾರರಿಗೆ ಕುತ್ತು ಬಂದಿದೆ ಎಂದು ಮಾಬುಸಾಬ್ ನಿಟ್ಟುಸಿರುಬಿಡುತ್ತಾರೆ. `ಎಲ್ಲದ್ಕೂ ಮಿಶಿನ್ ಬಂದ್ಬಿಟ್ವು ಸರ್, ನೆಲಾ ಉಳೊದಕ್ಕೆ, ಬಿತ್ನೆ ಮಾಡಾಕೆ, ರಾಸಿ ಒಕ್ಕಾಕೆ, ಇನ್ನೇನು ತುತ್ತು ಮಾಡಿ ಉಣಿಸೋ ಮಿಶಿನ್ ಬಂದ್ಬಿಟ್ರೆ, ನಾವೆಲ್ಲ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕ್ಕೊಳೋದೆ' ಎಂದು ಮಾಬುಸಾಬ್ ವ್ಯಥೆಯಿಂದ ಹೇಳುತ್ತಾರೆ.

ಹಣವಿದ್ದವರು ಯಂತ್ರಗಳನ್ನು ಬಳಕೆ ಮಾಡಿದರೆ, ಸಣ್ಣ ರೈತರು ಹಳೆಯ ಕೃಷಿ ಸಲಕರಣೆಗಳನ್ನೇ ಬಳಸುತ್ತಾರೆ. ಅಂತಹವರು ಮಾತ್ರ ಈಗ ಕೃಷಿ ಸಲಕರಣೆಗಳ ಬಡಗಿಗಳನ್ನು ಹುಡುಕುತ್ತಾರೆ. ಹೀಗಾಗಿ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿದ್ದರೂ, ಬಡಗಿಗಳು ಮೊದಲಿನ ಬೇಡಿಕೆ ಇಲ್ಲದೇ ನಿರುದ್ಯೋಗಿಗಳಂತಾಗಿದ್ದಾರೆ. ರೈತರಿಗೆ ಕೃಷಿ ಕಷ್ಟಕರವಾಗುತ್ತಿರುವಂತೆಯೇ, ಅವರನ್ನೇ ಅವಲಂಬಿಸಿರುವ ಸಣ್ಣ ಕೆಲಸಗಾರರಿಗೂ ಕಷ್ಟಗಳು ಬರುತ್ತಿವೆ.

4 ಕಾಮೆಂಟ್‌ಗಳು:

yayaathi ಹೇಳಿದರು...

ಗುರುಗಳೇ,
ನಿಮ್ಮ ಬಡಗಿಗಳ ಕುರಿತ ಲೇಖನ ಓದಿದೆ ಚೆನ್ನಾಗಿದೆ.
ಪತ್ರೇಶ ಹಿರೇಮಠ

siddha ಹೇಳಿದರು...

ಧನ್ಯವಾದಗಳು ಪತ್ರೇಶ್.

niveditha ಹೇಳಿದರು...

arun ravare nimma kathegalannu nanu odutthale irutthene... gaadhavaada mannina sogadannu nimma prathi kathegaloo kattikodutthave... abhinandanegalu... nimma baravanige heege saagali...

pampapathi.N.L. ಹೇಳಿದರು...

sir nimma "sanna raithara badagigala hudukata" lekhana thumba chennagide. aadare krushige sambandisida yava yava upakaranagalannu ivaru thayarisuthare and yava upakaranakke yestu bele nigadi padisiruthare,adunika upakaranagalinda ivarige yava rithiya samasyegalu udbhavisive hagene avara arthika,samajika samasye galannu thilisiddare chennagithu because ithichina sandabradalli badagigala alochanegalu kuda balagive.