ಬುಧವಾರ, ಮಾರ್ಚ್ 9, 2011

ಮುಗುಚಿ ಬಿದ್ದ ಹಂಪಿಯ ಅಕ್ಕ ತಂಗೇರ ಕಲ್ಲುಗಳು : ಅದರ ಸುತ್ತ ಹುಟ್ಟಿದ ಜನಪದ ಕತೆಗಳು.




-ಅರುಣ್



ಕಮಲಾಪುರ ಮಾರ್ಗವಾಗಿ ಹಂಪಿಗೆ ಹೋಗುವಾಗ, ದಾರಿಯಲ್ಲಿ ಎರಡು ಬೃಹತ್ ಬಂಡೆಗಳು ಒಂದಕ್ಕೊಂದು ಆಸರೆಯಾಗಿ ನಿಂತಂತೆ ಕಾಣುತ್ತವೆ. ಅವುಗಳನ್ನು ಹಂಪಿ ಭಾಗದಲ್ಲಿ ಅಕ್ಕತಂಗೇರ ಬಂಡಿ ಎಂದು ಕರೆಯುತ್ತಾರೆ. ಅವುಗಳು ಅಕ್ಕತಂಗಿಯರು ಅನೋನ್ಯವಾಗಿರುವ ಸಂಬಂಧಕ್ಕೆ ರೂಪಕವಾಗಿ ಈ ಬಂಡೆಗಳ ಬಗ್ಗೆ ಅನೇಕ ಜನಪದ ಕಥೆಗಳಿವೆ. ಆ ಎರಡು ಬಂಡಿಗಳಲ್ಲಿ ಒಂದು ಬಂಡಿ 9.3.2011 ರಂದು ಮದ್ಯಾಹ್ನ ಒಂದು ಗಂಟೆ ಸುಮಾರಿಗೆ ಸೀಳಿ ಅದರ ಒಂದು ಭಾಗ ಮುಗುಚಿ ಬಿದ್ದಿದೆ. ಇದು ಹಂಪಿ ಭಾಗದಲ್ಲಿ ದೊಡ್ಡ ಸುದ್ದಿಯಾಗಿದೆ. ಇದಕ್ಕೆ ಪೂರಕವಾದ ಅನೇಕ ಕಥೆಗಳು ಹುಟ್ಟಿವೆ.

ಈ ಅಕ್ಕ ತಂಗೇರ ಬಂಡಿಯ ಬಗ್ಗೆ ಜನಪದರಲ್ಲಿ ಇರುವ ಕಥನಗಳು ಹೀಗಿವೆ.

ಒಂದು- ವಿಜಯ ನಗರ ಸಾಮ್ರಾಜ್ಯವನ್ನು ಮೊದಲು ಸ್ಥಾಪಿಸುವಾಗ ಮೊದಲು ಈ ಎರಡು ಬೃಹತ್ ಕಲ್ಲುಗಳನ್ನು ನಿಲ್ಲಿಸಿದರಂತೆ, ಅವಕ್ಕೆ ಅಕ್ಕ ತಂಗಿ ಕಲ್ಲುಗಳೆಂದು ನಾಮಕರಣ ಮಾಡಿದರಂತೆ, ಈ ಎರಡೂ ಕಲ್ಲುಗಳು ಎಲ್ಲಿಯವರೆಗೂ ನಿಂತಿರುತ್ತವೆಯೋ ಅಲ್ಲಿಯತನಕ ವಿಜಯನಗರ ಸಾಮ್ರಾಜ್ಯ ವಿರಾಜಮಾನವಾಗಿ ಬೆಳಗುತ್ತದೆ ಎಂದು ನುಡಿದರಂತೆ ಎನ್ನುವ ನಂಬಿಕೆಯಿದೆ.

ಎರಡು- ಉಜ್ಜಯನಿ ರಾಜನ ಇಬ್ಬರು ಪರಾಕ್ರಮಿ ಹೆಣ್ಣುಮಕ್ಕಳು ಬೇಟೆಯಾಡುತ್ತಾ ಹಂಪಿಯ ಭಾಗಕ್ಕೆ ಬಂದರಂತೆ, ಆಗ ಹಂಪಿ ಪುಣ್ಯ ಕ್ಷೇತ್ರವಾಗಿತ್ತಂತೆ, ಆ ಪರಾಕ್ರಮಿ ಹೆಣ್ಣುಮಕ್ಕಳಿಬ್ಬರು ಹಂಪಿಯ ಬಗ್ಗೆ ಗೇಲಿ ಮಾಡಿ ನಕ್ಕರಂತೆ, ಅವರ ಗರ್ವ ಮುರಿಯಲೆಂದು ವಿರೂಪಾಕ್ಷನು ಅವರಿಬ್ಬರನ್ನು ಕಲ್ಲಾಗುವಂತೆ ಮಾಡಿದನಂತೆ.

ಮೂರು- ಇಬ್ಬರು ಹೆಣ್ಣುಮಕ್ಕಳು ಹಂಪಿ ನೋಡಲು ಬಂದರಂತೆ, ನೋಡುತ್ತಾ ನೋಡುತ್ತಾ ಜನರಿಲ್ಲದ ನಿರ್ಜನ ಪ್ರದೇಶಕ್ಕೆ ಬಂದಾಗ ದಡೂತಿ ದೇಹದ ಗಂಡಸೊಬ್ಬ ಈ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಲು ಅವರಿಬ್ಬರ ಮೇಲೆರಗಿದನಂತೆ, ಅವರು ವಿಧಿಯಿಲ್ಲದೆ ಕಿರುಚಿಕೊಂಡರಂತೆ ಆಗ ಅವರು ಆ ದಡೂತಿ ದೇಹದ ಮನುಷಷ್ಯನಿಂದ ಅತ್ಯಾಚಾರಕ್ಕೆ ಬಲಿಯಾಗಿ ಮಾನಗೇಡಿಗಳಾಗುವುದಕ್ಕಿಂತ ಕಲ್ಲಾಗುವುದೇ ಲೇಸು ಎಂದು ಬಗೆದು ಕಲ್ಲಾದರಂತೆ.



ಇಂತಹ ಇನ್ನಷ್ಟು ಕತೆಗಳು ಪ್ರಚಲಿತದಲ್ಲಿವೆ. ಪುರುಷೋತ್ತಮ ಬಿಳಿಮಲೆ ಮತ್ತು ಚಲುವರಾಜು ಅವರು ಸಂಪಾದಿಸಿದ ಹಂಪಿ ಜಾನಪದ ಎನ್ನುವ ಪುಸ್ತಕದಲ್ಲಿ ಇದರ ಪಠ್ಯಗಳನ್ನು ನೋಡಬಹುದು. ಈ ಕಲ್ಲುಗಳ ಬಗ್ಗೆ ಹಂಪಿ ಪರಿಸರದ ಹೆಣ್ಣುಮಕ್ಕಳಲ್ಲಿ ಭಾವನಾತ್ಮಕ ಸಂಬಂಧವೂ ಇದ್ದಂತಿದೆ. ಈಗ ಅಕ್ಕತಂಗೇರ ಬಂಡಿ ಬಿದ್ದಿದೆ ಎನ್ನುವ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಹಂಪಿ ಸುತ್ತಮುತ್ತಲ ಹಳ್ಳಿಗಳ ಜನ ತಂಡೋಪತಂಡವಾಗಿ ನೋಡಲು ಬರುತ್ತಿದ್ದಾರೆ. ಈ ಕಲ್ಲುಗಳ ಬಗ್ಗೆ ವಿಚಿತ್ರವಾದ ಅನುಕಂಪವೂ, ಅಯ್ಯೋ ಎನ್ನುವ ಭಾವನಾತ್ಮಕ ಉದ್ಘಾರವೂ ನೋಡಲು ಬಂದವರಲ್ಲಿ ವ್ಯಕ್ತವಾಗುತ್ತಿದೆ. ಹಾಗೆಯೇ ಈ ಕಲ್ಲು ಬಿದ್ದ ಬಗ್ಗೆಯೂ ಅನೇಕ ಕಥನಗಳು ಹುಟ್ಟಿಕೊಳ್ಳುತ್ತಿವೆ.


ಹಾಗೆ ಹುಟ್ಟಿಕೊಂಡ ಕಥನಗಳಲ್ಲಿ ಕೆಲವು ಹೀಗಿವೆ. ಒಂದು: ಇದು ಕೇಡನ್ನು ಸೂಚಿಸುತ್ತದೆ, ಈ ಭಾಗದಲ್ಲಿ ದೊಡ್ಡದಾದ ಕೇಡು ಕಾದಿದೆ ಎಂದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಎರಡು: ಈ ಕಲ್ಲು ಬಿದ್ದ ಕಾರಣ ಪ್ರಳಯದ ಮುನ್ಸೂಚನೆ ಕಾಣಿಸಿಕೊಂಡಿದೆ ಇನ್ನು ಪ್ರಳಯವಾಗುವುದು ಖಚಿತ ಎನ್ನುವುದು ಕೆಲವರ ನಂಬಿಕೆ. ಮೂರು: ತಂಗಿಯ ಆಯಸ್ಸು ಮುಗಿದಿದೆ, ಅಕ್ಕನ ಆಯಸ್ಸು ಇನ್ನು ಗಟ್ಟಿ ಇದೆ. ಹಾಗಾಗಿ ತಂಗಿ ತನ್ನ ಆಯಸ್ಸು ಮುಗಿದಿದೆ ಎಂದು ತೋರಿಸಿಕೊಟ್ಟಿದ್ದಾಳೆ ಎಂಬ ನಂಬಿಕೆ ಇದೆ. ನಾಲ್ಕು: ಈ ಕಲ್ಲಿನ ಆಕಾರದಲ್ಲಿ ಅಕ್ಕನನ್ನು ತಂಗಿ ಹೊತ್ತುಕೊಂಡಂತಿದೆ, ಹಾಗಾಗಿ ತಂಗಿ ಮುನಿಸಿಕೊಂಡು ಇನ್ನೆಷ್ಟು ದಿನ ನಾ ಹೊತ್ತಿರಲಿ ಎಂದು ತಂಗಿ ಅಕ್ಕನ ಮೇಲೆ ಬೇಸರವಾಗಿ ಮೈಕೊಡವಿದ್ದಾಳೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.



ಈ ಬಗೆಯ ಜನಪದ ನಂಬಿಕೆಗಳ ಆಚೆಗೆ ನಿಂತು ನೋಡುವುದಾದರೆ, ಈ ಎರಡು ಬೃಹತ್ ಕಲ್ಲುಗಳು ನೈಸರ್ಗಿಕವಾಗಿ ನಿಂತಂತವು. ಹೀಗೆ ನಿಂತ ಕಾರಣಕ್ಕೇ ಈ ಬಗೆಯ ಕಥನಗಳು ಹುಟ್ಟಿರಲಿಕ್ಕೆ ಸಾಧ್ಯವಿದೆ. ಅಂತೆಯೇ ಇಂತಹ ಬೃಹತ್ ಬಂಡೆಗಳು ಸೀಳಿ ಉದುರಲು ಮುಖ್ಯ ಕಾರಣ ಈ ಭಾಗದಲ್ಲಿ ನಡೆಯುತ್ತಿರುವ ಮೈನಿಂಗ್ ಎನ್ನುವುದು ಎಲ್ಲರ ಅಭಿಪ್ರಾಯ. ಕಲ್ಲು ಮೈನಿಂಗ್ ನಲ್ಲಿ ಮದ್ದನ್ನು ಇಟ್ಟು ಸಿಡಿಸುತ್ತಾರೆ, ಈ ಮದ್ದು ಸಿಡಿಯುವ ಹೊತ್ತಿಗೆ ನೆಲ ಅದುರುತ್ತದೆ. ಅದರಲ್ಲೂ ಹಂಪಿ ಭಾಗದಲ್ಲಿ ಪ್ರಾಚೀನ ಅವಶೇಷಗಳು ಇರುವ ಕಾರಣ ಅವುಗಳೂ ಸಹಜವಾಗಿ ಅದುರುತ್ತವೆ. ಇದರ ಪರಿಣಾಮ ಅಕ್ಕತಂಗಿಯರ ಬಂಡೆಯ ಮೇಲಾಗಿದೆ. ಹಾಗಾಗಿ ಸರಕಾರ ಹಂಪಿಗೆ ಸುತ್ತಮುತ್ತಲು ನಡೆಯುತ್ತಿರುವ ಮೈನಿಂಗ್ ನ್ನು ನಿಲ್ಲಿಸುವುದು ಒಳಿತು.

ಕಾಮೆಂಟ್‌ಗಳಿಲ್ಲ: