ಸೋಮವಾರ, ಡಿಸೆಂಬರ್ 4, 2017

’ಪದ್ಮಾವತಿ’ ವಿವಾದ: ಘಾಸಿಗೊಂಡ ಮನಸ್ಸುಗಳು ಕಟ್ಟುವ ಆಟಗಳು


    ಅನುಶಿವಸುಂದರ್ 

ಬಲವಿದ್ದವರು ಮಾತ್ರ ಘಾಸಿಗೊಳ್ಳಲು ಮತ್ತು ಅದನ್ನು ತೋರಿಸಿಕೊಳ್ಳಲೂ ಸಾಧ್ಯ
Image result for padmavati

ಹಲವು ಶತಮಾನಗಳ ಕೆಳಗೆ ಬರೆದ ಖಂಡಕಾವ್ಯವನ್ನು ಆಧರಿಸಿದಪದ್ಮಾವತಿಯೆಂಬ ಹಿಂದಿ ಚಲನಚಿತ್ರವೊಂದು ವಾರಗಳ ಕಾಲ ಭಾರತದ ಚುನಾಯಿತ ಪ್ರತಿನಿಧಿಗಳನ್ನು ಮತ್ತು ಮಾಧ್ಯಮವನ್ನು ಆವರಿಸಿಕೊಂಡಿರುವುದನ್ನು ಗಮನಿಸಿದರೆ ಪ್ರತಿರೋಧ ರಾಜಕೀಯವು ಯಾವ ದಿಕ್ಕಿನೆಡೆಗೆ ಸಾಗುತ್ತಿದೆ ಎಂಬ ಪ್ರಶ್ನೆ ದಿಗ್ಭ್ರಮೆ ಮೂಡಿಸುತ್ತದೆ. ಪ್ರಭುತ್ವದ ಮೂಕ ಬೆಂಬಲದೊಂದಿಗೆ ನಡೆದಿರುವ ಗುಂಪು ಹಿಂಸಾಚಾರಗಳು ಹೆಚ್ಚುತ್ತಿರುವುದಕ್ಕೆ  ಭಾರತವು ಸಾಕ್ಷಿಯಾಗಿದ್ದರೂ, ಒಂದು ನಿರ್ದಿಷ್ಟ ಪ್ರದೇಶದ ಸ್ಥಳೀಯ ಸಮುದಾಯವಾದ ರಜಪೂತರನ್ನು ಪ್ರತಿನಿಧಿಸುತ್ತೇವೆಂದು ಹೇಳಿಕೊಳ್ಳುವ ಕರ್ನಿ ಸೇನಾದ ಪ್ರತಿಭಟನೆಗಳಿಗೆ ಅತ್ಯಲ್ಪ ಅವಧಿಯಲ್ಲಿ ದೇಶಾದ್ಯಂತ ಬೆಂಬಲ ದೊರೆತಿರುವುದು ಗಮನಿಸಲೇ ಬೇಕಾದ ಸಂಗತಿಯಾಗಿದೆ. ಸಿನಿಮಾದ ನಿರ್ದೇಶಕರ ಮತ್ತು ಮುಖ್ಯ ಭೂಮಿಕೆಯಲ್ಲಿರುವ ನಾಯಕಿಯ ತಲೆ ಕತ್ತರಿಸಬೇಕೆಂದು ಆಗ್ರಹಿಸುತ್ತಿರುವ ಪ್ರತಿಭಟನಾಕಾರರಿಗೆ ಬಿಜೆಪಿ ಅಧಿಕಾರದಲಿರುವ ಐದು ರಾಜ್ಯ ಸರ್ಕಾರಗಳು ಮತ್ತು ಬಿಜೆಪಿಯ ಹಲವಾರು ಚುನಾಯಿತ ಪ್ರತಿನಿಧಿಗಳು ಬೆಂಬಲವನ್ನೂ ಘೋಷಿಸಿದ್ದಾರೆ.

ಸಿನಿಮಾವು ರಜಪೂತರ ಭಾವನಗಳಿಗೆ ಘಾಸಿಯುಂಟು ಮಾಡುತ್ತದೆ, ಇತಿಹಾಸವನ್ನು ತಿರುಚತ್ತದೆ, ಮತ್ತು ರಾಣಿ ಪದ್ಮಿನಿಗೆ ಅಪಖ್ಯಾತಿ ತಂದು ಆಕೆಯ ಗೌರವಕ್ಕೆ ಚ್ಯುತಿ ತರುತ್ತದೆ, ಹಾಗೂ ಒಬ್ಬ ಮುಸ್ಲಿಮ್ ದೊರೆಯಾದ ಅಲ್ಲಾಉದ್ದೀನ್ ಖಿಲ್ಜಿಯನ್ನು ವೈಭವೀಕರಿಸುತ್ತದೆಂಬುದು ಸಿನಿಮಾದ ಬಗ್ಗೆ ಅವರು ಎತ್ತಿರುವ ಆಕ್ಷೇಪಣೆಗಳು. ಅಷ್ಟು ಮಾತ್ರವಲ್ಲದೆ ಚಿತ್ರವನ್ನು ಮಾಡುವಾಗ ಅವರು ರಜಪೂತ ಸಮುದಾಯದೊಡನೆ ಸಮಾಲೋಚನೆ ಮಾಡಲಿಲ್ಲವೆಂಬುದೂ ಸಹ ಅವರ ಅಸಮಾಧಾನಗಳಲ್ಲೊಂದು. ಆದರೆ ಪ್ರಾಯಶಃ ಅವರನ್ನು ಕಾಡುತ್ತಿರುವ ಅತಿ ಮುಖ್ಯ ಸಮಸ್ಯೆಯೆಂದರೆ ಖಿಲ್ಜಿ ಮತ್ತು ಪದ್ಮಾವತಿಯರ ನಡುವೆ ಇರಬಹುದಾದ ಆಪ್ತ ಹಾಗೂ ಪ್ರೇಮದ ಸನ್ನಿವೇಶಗಳು

ಇತಿಹಾಸವನ್ನು ತಿರುಚಲಾಗಿದೆಯೆಂಬ ಆಕ್ಷೇಪಣೆಗಳ ಮೂಲವು ಮಧ್ಯಯುಗೀನ ಮುಸ್ಲಿಂ ದೊರೆಗಳ ಕಾಲದ ಭಾರತದ ನೈಜ ಇತಿಹಾಸದ ಬಗ್ಗೆ ಕಟ್ಟಿಕೊಂಡಿರುವ ವಿಸ್ತೃತ ಸ್ವಕಲ್ಪನೆಗಳಲ್ಲಿದೆ. ಮತ್ತು ಅದರಿಂದ ಪದೇಪದೇ ಮರುಕಳಿಸುವ ಮುಜುಗರ ತುಂಬಿದ ಅಸಮಾಧಾನಗಳಲ್ಲಿದೆ. ಸ್ವಕಲ್ಪನೆಗಳ ವ್ಯಾಖ್ಯಾನದ ಹೊರೆಯನ್ನು ಮಾತ್ರ ಯಾವಾಗಲೂ ನೈಜ ಅಥವಾ ಕಲ್ಪಿತ ಮಹಿಳೆಯೇ ಹೊರಬೇಕಾಗುತ್ತದೆ. ಒಬ್ಬನೇ ಒಬ್ಬ ಪ್ರತಿಭಟನೆಕಾರನೂ ಸಹ ಸಿನಿಮಾವನ್ನು ನೋಡಿಲ್ಲವೆಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಕಳೆದ ವಾರ ಕರ್ನಿ ಸೇನಾದ ಮುಖ್ಯಸ್ಥರಾದ ಲೋಕೇಂದ್ರ ಸಿಂಗ್ ಕಲ್ವಿ ಅವರನ್ನು ತಾವೂ ಇನ್ನೂ ನೋಡದ ಸಿನಿಮಾವೊಂದನ್ನು ಆಧರಿಸಿ ಕೊಲೆ ಬೆದರಿಕೆ ಹಾಕುತ್ತಿರುವುದರ ಬಗ್ಗೆ ಪ್ರಶ್ನಿಸಲಾಯಿತು. ಅದಕ್ಕೆ ಅವರು ತಾವು ಸಿನಿಮಾದ ಟ್ರೈಲರ್ ಅನ್ನು ನೋಡಿದಾಗ  ಅದರಲ್ಲಿ ಪದ್ಮಾವತಿಯ ಗಂಡನಾದ ರತನ್ ಸಿಂಗ್ ಅವರನ್ನು ಕುರಿಯಂತೆಯೂ ಮತ್ತು ಖಿಲ್ಜಿಯನ್ನು ರಕ್ಕಸನಂತೆಯೂ ಚಿತ್ರಿಸಿದಂತೆ ಕಂಡುಬಂತೆಂದೂ ಉತ್ತರಿಸಿದರು.

 ವಾಸ್ತವವಾಗಿ ಸಿನಿಮಾದ ನಿರ್ದೇಶಕರು ಖಿಲ್ಜಿಯನ್ನು ರಾಕ್ಷಸನಂತೆ ಏಕೆ ಚಿತ್ರಿಸಿದ್ದಾರೆಂದು ಯಾರೂ ಈವರೆಗೆ ಕೇಳಿಲ್ಲ. ಏಕೆ ಮುಸ್ಲಿಂ ಸಾಮ್ರಾಟ ತಾನು ತಿನ್ನುವ ಮಾಂಸಾಹಾರದ ಮೇಲೆ ತಾನೇ ದಾಳಿ ಮಾಡುತ್ತಾನೆ? ಏಕೆ ಆತ ಅಷ್ಟೊಂದು ಒರಟೊರಟಾಗಿ ಹಸಿಹಸಿ ಕಾಡುಮನುಷ್ಯನಂತೆ ಕಾಣುತ್ತಾನೆ? ಮತ್ತು ಅವನ ಮಧ್ಯಯುಗೀನ ಸೈನ್ಯವು ಆಧುನಿಕ  ಇಸ್ಲಾಮಿಕ್ ಸ್ಟೇಟ್ ಮತ್ತು ಪಾಕಿಸ್ತಾನದ ಬಾವುಟಗಳ ಮಿಶ್ರಣದಂತೆ ಕಾಣುವ ಬಾವುಟವನ್ನು ಏಕೆ ಹಿಡಿದಿರುತ್ತಾರೆ? ಏಕೆ?

ರಜಪೂತರಂತೂ ಪ್ರಭಟಿಸುತ್ತಿದ್ದಾರೆ. ಒಂದು ವೇಳೆ ಮುಸ್ಲಿಮರು ತಮ್ಮ ಪಾಡಿಗೆ ತಾವು ಇದ್ದುಬಿಡುವ ಅವಕಾಶವನ್ನು ಬಿಟ್ಟುಕೊಟ್ಟು  ತಮ್ಮನ್ನು ಏಕೆ ಹೀಗೆ ರಾಕ್ಷಸೀಕರಿಸಲಾಗಿದೆ ಎಂದು ಆಕ್ಷೇಪಿಸಿ ತಮ್ಮನ್ನು ಅಪಾಯಕ್ಕೊಡ್ಡಿಕೊಂಡು ಬೀದಿಗಿಳಿದಿದ್ದರೆ ಹೇಗಿರುತ್ತಿತ್ತು? ವಾಸ್ತವವಾಗಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರು ಸಣ್ಣ ಅವಧಿಯ ಟ್ರೈಲರಿನಲ್ಲಿಯು ಮುಸ್ಲಿಮರ ಬಗ್ಗೆ ಇರುವ ಎಲ್ಲಾ ಬಗೆಯ ಪೂರ್ವಗ್ರಹಗಳಿಗೂ ಮರುಜೀವ ನೀಡಿರುವುದಲ್ಲದೆ ನಾಗರಿಕತೆಗಳ ನಡುವಿನ ಸಂಘರ್ಷ ಜನಾಂಗೀಯ  ಪೂರ್ವಗ್ರಹದ ಕಥನವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಆದರೂ ಈವರೆಗೆ ಯಾವ ಮುಸ್ಲಿಮರೂ ಅದನ್ನು ಪ್ರತಿಭಟಿಸಿಲ್ಲ. ಒಂದು ವೇಳೆ ಮುಸ್ಲಿಮರು ಪ್ರತಿಭಟಿಸಿದ್ದರೆ ಪ್ರಭುತ್ವವು ಹೇಗೆ ಪ್ರತಿಕ್ರಿಯಿಸುತ್ತಿತ್ತು ಎಂಬುದು ನಮ್ಮ ನಮ್ಮ  ಊಹೆಗೆ ಬಿಟ್ಟ ವಿಚಾರ. ಯಾವುದೋ ಒಂದು ಕಾಲ್ಪನಿಕ ಕಥೆಯನ್ನಾಧರಿಸಿ ತಮ್ಮನ್ನು ತಪ್ಪಾಗಿ ಸಿನಿಮಿಕರಿಸಿರುವುದರ ವಿರುದ್ಧ ಹೋರಾಡುವ ಐಷಾರಾಮವನ್ನು ಬಿಡಿ, ಪ್ರಸ್ತುತ ಸರ್ಕಾರದ ಆಳ್ವಿಕೆಯಲ್ಲಿ ಎಲ್ಲೆಂದರಲ್ಲಿ ತಮ್ಮ ಮೇಲೆ ನಿರಂತರವಾಗಿ ನಡೆಯುತ್ತಿರುವ ಗುಂಪುದಾಳಿಯಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದೂ ಸಹ ಒಂದು ಸಂಭವನೀಯ ಅವಘಡವಾಗುತ್ತಿರುವುದರ ವಿರುದ್ಧ, ಅಥವಾ ತಮ್ಮ ಆಹಾರ, ಜೀವನೋಪಾಯ ಮತ್ತು ಘನತೆಗಳ ಮೇಲೆ ವ್ಯವಸ್ಥಿತವಾಗಿ ನಡೆಯುತ್ತಿರುವ ದಾಳಿಗಳ ವಿರುದ್ಧವೂ ಸಹ ಮುಸ್ಲಿಮರು ಇಂದು ಪ್ರತಿಭಟಿಸಲಾಗುತ್ತಿಲ್ಲ.

ಇದರ ತಾತ್ಪರ್ಯ ತಮ್ಮ ತಮ್ಮ ಭಾವನೆಗಳಿಗೆ ಘಾಸಿಯಾಗಿದೆ ಎಂದಾಕ್ಷಣ ಗಲಭೆಗಳನ್ನು ಸೃಷ್ಟಿಸಲು ಎಲ್ಲಾ ಸಮುದಾಯಗಳಿಗೂ ಸಮಾನ ಹಕ್ಕಿರಬೇಕು ಎಂಬುದಲ್ಲ. ಬದಲಿಗೆ ತಮಗೆ ಅನ್ಯಾಯವಾಗಿದೆ ಎಂದು ದೂರಲು ಕೂಡ ಅಪಾರ ತಾಕತ್ತಿದ್ದವರಿಗೆ ಮಾತ್ರ ಸಾಧ್ಯವಾಗುತ್ತದೆ ಎಂಬುದು ಇದರ ಸಾರಾಂಶ. ಬಲವಿದ್ದವರು ಮಾತ್ರ ಘಾಸಿಗೊಳಗಾಗಬಲ್ಲರು ಮತ್ತು ಅದನ್ನು ತೋರಿಸಿಕೊಳ್ಳಬಲ್ಲರು. ಘಾಸಿಗೊಳಗಾಗುವಷ್ಟು ಬಲವಿರುವವರಿಗೆ ದೇಶದಲ್ಲಿ ಕಾನೂನುಗಳು ಸಹ ಏನೂ ಮಾಡುವುದಿಲ್ಲ. ಅವರು ಶಿಕ್ಷಾಮುಕ್ತರಾಗಿರುತ್ತಾರೆ. ವಿಶೇಷ ಸೌಲಭ್ಯಗಳನ್ನು ಹೊಂದಿರುವ ಕೆಲವೇ ಕೆಲವರು ಮಾತ್ರ ಹಿಂಸಾತ್ಮಕವಾದ ಪ್ರತಿರೋಧ ಮಾಡುವ ಹಕ್ಕನ್ನು ಪಡೆದಿರುತ್ತಾರೆ.

ಮೇಲಾಗಿ, ಘಾಸಿಗೊಂಡ ಭಾವನೆಗಳ ಮೇಲಾಟದಲ್ಲಿ ಎದ್ದು ಕಾಣುತ್ತಿರುವ ಸಾಂದರ್ಭಿಕ ಕೋಮುವಾದ, ಆಳವಾಗಿ ನೆಲೆಯೂರಿರುವ ಪುರುಷ ಪ್ರಧಾನ ಮೌಲ್ಯಗಳು ಮತ್ತು ಜಾತಿ ಪ್ರತಿಷ್ಟೆಗಳ ಜೊತೆಜೊತೆಗೆ ಮರೆಗೆ ಸರಿಯಬಾರದ ಮತ್ತೊಂದು ಸಂಗತಿಯಿದೆ. ಅದು ಗಂಡು ಹೆಣ್ಣಿನ ನಡುವಿನ ಯಾವ ಪ್ರೇಮದ ಸನ್ನಿವೇಶಗಳು ರೋಚಕವಾಗಿರುತ್ತವೆ ಎಂಬ ಬಗ್ಗೆ ಸಿನಿಮಾದ ನಿರ್ದೇಶಕರು ಮತ್ತು ನಿರ್ದೇಶಕರ ರಕ್ತ ಕುಡಿಯ ಬಯಸುತ್ತಿರುವ ಹೋರಾಟಗಾರರಿಬ್ಬರಲ್ಲೂ ಇರುವ ಒಂದೇ ಬಗೆಯ ಧೋರಣೆಗಳು. ಇಬ್ಬರ ಧೋರಣೆಯಲ್ಲೂ ಹೆಣ್ಣೆಂದರೆ ಏಕಕಾಲದಲ್ಲಿ ಕಾಮವನ್ನು ಉದ್ದೀಪಿಸುವ ಮತ್ತು ಪ್ರತಿಷ್ಟೆಯನ್ನು ಕಾಪಾಡುವ ಒಂದು ವಸ್ತು. ಕರ್ನಿ ಸೇನಾಗೆ ಖಿಲ್ಜಿಯ ಪಾಶವೀತನದ ಬಗ್ಗೆ ಅಸೂಯೆ. ಏಕೆಂದರೆ ಅದು ಆತನ ಪುರುಷತ್ವವನ್ನು ವೈಭವೀಕರಿಸುತ್ತದೆ; ಹಿಂಸಾತ್ಮಕವಾಗುವುದು ಆತನ ಸಾಮರ್ಥ್ಯವೇ ವಿನಃ ದೌರ್ಬಲ್ಯವಲ್ಲ. ಕರ್ನೀ ಸೇನಾವು ತನ್ನನ್ನು ತಾನು ಒಬ್ಬ ಕುರಿಯಂತಿರುವ ಹಿಂದೂವಿನ ಜೊತೆಗಿಂತ ಒಬ್ಬ ಪಾಶವೀ ಮುಸ್ಲಿಮನ ಜೊತೆ ಗುರುತಿಸಿಕೊಳ್ಳಲು ಇಷ್ಟಪಡುತ್ತದೆ. ಆದರೆ ಒಬ್ಬ ಹಿಂದೂ ಮಹಿಳೆ ಒಬ್ಬ ಪಾಶವೀ ಮುಸ್ಲಿಮನ ಬಗ್ಗೆ ಲೈಂಗಿಕ ಆಸಕ್ತಿಯನ್ನು ಇಟ್ಟುಕೊಳ್ಳುವ ಸಾಧ್ಯತೆಯನ್ನು ಸಹ  ಅದು ಖಡಾಖಂಡಿತವಾಗಿ ವಿರೋಧಿಸುತ್ತದೆ. ಬಗೆಯ ಒಂದು ಸಂಭಾವ್ಯತೆಯೇ ಅವರೊಳಗಿರುವ ರಜಪೂತನನ್ನು ಕೆರಳಿಸುತ್ತಿದೆ. ಹೀಗೆ ಅಂತಿಮವಾಗಿ ಇದು ಕೇವಲ ಕಲಾತ್ಮಕ ಸ್ವಾತಂತ್ರ್ಯದ ಕುರಿತಾದ ಸಮಸ್ಯೆ ಮಾತ್ರವಲ್ಲ. ಏಕೆಂದರೆ ಬನ್ಸಾಲಿಯವರು ಚಿತ್ರಿಸಿರುವ ರಜಪೂತರ ಹೆಮ್ಮೆ ಪ್ರತಿಷ್ಟೆಗಳ ಸಂಭ್ರಮವು ಒಂದು ನಿರ್ದಿಷ್ಟ ರಾಜಕೀಯದ ಮಡುವಿನಲ್ಲಿದೆ. ಸಿನಿಮಾದ ನಿರ್ದೇಶಕರು ತಥಕಥಿತ ಇತಿಹಾಸದ ಬಗ್ಗೆ ತೆಗೆದುಕೊಂಡಿರುವ ಕಲಾತ್ಮಕ ಸ್ವಾತಂತ್ರ್ಯವನ್ನು ಟೀಕಿಸುವವರು ರಾಜಸ್ಥಾನದ ಮಹಿಳೆಯರ ಇಂದಿನ ಸ್ಥಿತಿಗತಿಯ ಬಗ್ಗೆ ಕಿಂಚಿತ್ತೂ ಕಾಳಜಿ ಇರುವವರಲ್ಲ. ತಮ್ಮ ಸಮಾಜದ ಹೆಣ್ಣಿನ  ಗೌರವಕ್ಕೆ ಮುಕ್ಕು ತರುವವರ ಕೈಕಾಲುಗಳನ್ನು ಕತ್ತರಿಸುವ ಮತ್ತು ಕೊಲೆ ಮಾಡುವ ಬೆದರಿಕೆಗಳನ್ನು ಹಾಕುವ ರಾಜ್ಯವು ಹಲವು ಸಾಮಾಜಿಕ ಸೂಚಕಗಳಲ್ಲಿ ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ.

ಪದ್ಮಾವತಿ ವಿವಾದವು ಭಾರತದ ಭವಿಷ್ಯದ ಚಹರೆಯ ಕುರೂಪಗಳನ್ನು ಬಯಲುಮಾಡಿದೆ. ಬಗೆಯ ಅರ್ಥಹೀನ ಹೋರಾಟಗಳ ಸ್ವರೂಪದಲ್ಲಿರುವ ವಿಕೃತಿಗಳನ್ನು ಅಧಿಕಾರದಲ್ಲಿರುವವರು ಉತ್ತೇಜಿಸುತ್ತಿದ್ದಾರೆ. ಸಿನಿಮಾದ ವಿರೋಧಿಗಳು ತಲೆ, ಮೂಗು, ಕೈಕಾಲುಗಳನ್ನು ಕಡಿಯುತ್ತೇವೆಂದು ಬಹಿರಂಗವಾಗಿ ಎಚ್ಚರಿಸುತ್ತಾ ಸಮಾಜವನ್ನು ತಾಲೀಬಾನಿಕರಿಸುತ್ತಿರುವುದರ ಬಗ್ಗೆ ಅಧಿಕಾರದಲ್ಲಿರುವವರು ಕುರುಡಾಗಿದ್ದಾರೆ. ನಡುವೆ ಹೋರಾಟಗಳ ರಾಜಕೀಯ ಹಿಂದೆ ಕಲಾತ್ಮಕ ಸ್ವಾತಂತ್ರ್ಯ ಪರಿಕಲ್ಪನೆಯನ್ನೇ ಸಂಪೂರ್ಣವಾಗಿ ನಾಶಮಾಡುವ ನೈಜ ಅಜೆಂಡಾ ಇರುವ ಬಗ್ಗೆ ನಮ್ಮ ಸೃಜನಶೀಲ ಸಮುದಾಯ ಜಡಮೌನವನ್ನು ಪ್ರದರ್ಶಿಸುವುದನ್ನು ಮುಂದುವರೆಸಿದೆ.

  ಕೃಪೆ: Economic and Political Weekly                                                  Nov 25, 2017. Vol. 52. No. 47
                                                                                            
      (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )


                                                                                               









ಕಾಮೆಂಟ್‌ಗಳಿಲ್ಲ: