ಶನಿವಾರ, ಆಗಸ್ಟ್ 3, 2013

ಜನಪದ ಕಲೆಗಳ ರೂಪಾಂತರಗಳು


-ಅರುಣ್ ಜೋಳದಕೂಡ್ಲಿಗಿ
 
   ಸಾಮಾನ್ಯವಾಗಿ ಜನಪದ ಎಂದರೆ ಏನು? ಎನ್ನುವ ಸರಳ ಪ್ರಶ್ನೆಯನ್ನು ಈಗಿನ ಶಾಲಾ ಮಕ್ಕಳಿಗೆ ಕೇಳಿದರೆ, ಕೆಲವರಾದರೂ ಜನಪದ ಪ್ರದರ್ಶನ ಕಲೆಗಳ ಹೆಸರನ್ನು ಹೇಳಬಹದು. ಕಾರಣ ಜಾನಪದ ಎಂದರೆ ಈಗ ಎದ್ದು ಕಾಣುವುದು ಪ್ರದರ್ಶನ ಕಲೆಗಳು ಮಾತ್ರ. ಯಾವುದೇ ಸರಕಾರಿ ಉತ್ಸವಗಳಲ್ಲಿಯೂ, ರಾಜಕಾರಿಣಿಗಳು ಹೋದೆಡೆ ಬಂದೆಡೆಗಳಲ್ಲಿಯೂ, ಸಂಭ್ರಮದ ಆಚರಣೆಗಳಲ್ಲಿಯೂ ಜನಪದ ಕಲೆಗಳು ಕಾಣುತ್ತವೆ. ಇನ್ನು ಸಿನೆಮಾ ಮುಂತಾದ ಮಾದ್ಯಮಗಳಲ್ಲಿಯೂ ಪ್ರದರ್ಶನಾತ್ಮಕ ಕಲೆಗಳನ್ನು ಬಳಸಿಕೊಳ್ಳುತ್ತಾರೆ. ಟಿ.ವಿಗಳಲ್ಲಿಯೂ ಇವುಗಳು ಕಾಣಿಸಿಕೊಂಡು ರಂಗು ತರುತ್ತವೆ.

    ಹೀಗಿರುವಾಗ ಜಾನಪದ ವಿದ್ವಾಂಸರು ಆಧುನಿಕತೆಯಿಂದ ಜನಪದ ಕಲೆಗಳು ನಾಶವಾಗುತ್ತಿವೆ ಎಂದು ಆತಂಕ ಪಡುತ್ತಾರೆ. ಹೀಗೆ ನಾಶವಾಗುವ ಕಲೆಗಳನ್ನು ಉಳಿಸಿಕೊಳ್ಳುವ ಬಗ್ಗೆ ಉಪಾಯಗಳನ್ನು ಹುಡುಕುತ್ತಾರೆ. ಈ ಆತಂಕ ಸುಳ್ಳಲ್ಲವಾದರೂ, ಪೂರ್ಣ ನಿಜವಲ್ಲ. ಇದನ್ನು ಮೂರು ನೆಲೆಯಿಂದ ನೋಡಬಹುದು. ಒಂದು: ಜನಪದ ಕಲೆಗಳು ಕಡಿಮೆಯಾಗುವುದಕ್ಕೆ ಕಾರಣಗಳನ್ನು ಶೋಧಿಸುವುದು. ಎರಡು: ಆಧುನಿಕ ಬದಲಾವಣೆ ಜತೆ ಜನಪದ ಕಲೆಗಳು ಮಾಡಿಕೊಂಡ ಹೊಂದಾಣಿಕೆಯನ್ನು ಗುರುತಿಸುವುದು. ಮೂರು: ಜನಪದ ಕಲೆಯ ಹೊಸ ಸಾದ್ಯತೆಗಳನ್ನು ಊಹಿಸುವುದು.

    ಮುಖ್ಯವಾಗಿ ಹಳ್ಳಿಗಳು ಇಂದು ಕೇವಲ ಹಳ್ಳಿಗಳಾಗಿ ಉಳಿದಿಲ್ಲ. ಸಹಜವಾಗಿ ನಗರದ ಕೆಲವು ಲಕ್ಷಣಗಳು ಹಳ್ಳಿಗಳನ್ನೂ ಪ್ರವೇಶಿಸಿವೆ. ಹಾಗಾಗಿ ಹಳ್ಳಿಗಳ ಯುವ ಪಡೆ ನಗರ ವಲಸೆಗೆ ಉತ್ಸುಕವಾಗಿರುತ್ತದೆ. ಇನ್ನು ಶಿಕ್ಷಣ ಪಡೆಯುವುದು ಹಳ್ಳಿಗಳಿಂದ ದೂರವಾಗಲು ಎನ್ನುವಂತಾಗಿದೆ. ಇದಕ್ಕೆ ಶಿಕ್ಷಣ ಪದ್ದತಿಯೂ ಕಾರಣವಾಗಿದೆ. ಜನಪದ ಕಲೆ ಎನ್ನುವುದು ಕಲಿಯದ ಅನಕ್ಷರಸ್ತರ ಸಂಕೇತ ಎಂಬಂತಾಗಿದೆ. ಹಾಗಾಗಿ ಕಲಿತ ಗ್ರಾಮೀಣ ಯುವಕರು ಸಹಜವಾಗಿ ಜನಪದ ಕಲೆಗಳ ಕಡೆ ಹೆಚ್ಚು ಒಲವು ತೋರುವುದು ಕಡಿಮೆ.

    ಮುಖ್ಯವಾಗಿ ಜನಪದ ಕಲೆಗಳು ಕೃಷಿ ಪರಂಪರೆಯ ಜತೆ ಸಾವಯವ ಸಂಬಂಧವನ್ನು ಹೊಂದಿರುವಂಥದ್ದು. ಆದರೆ ಇಂದು ಕೃಷಿ ಕೆಲಸ ಮಾಡುವುದು ಲಾಭದಾಯಕವಾದ ಕಸುಬಲ್ಲ, ಹಾಗಾಗಿ ಕೃಷಿಯೇತರ ಚಟುವಟಿಕೆಗಳಲ್ಲಿ ಹಳ್ಳಿಗರು ಆಸಕ್ತಿ ತೋರುತ್ತಿದ್ದಾರೆ. ಈ ಕಾರಣಕ್ಕೆ ಉದ್ಯೋಗ ಅರಸಿ ನಗರಕ್ಕೆ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಹಳ್ಳಿಯ ಕೃಷಿ, ಆಚರಣ ಲೋಕ ದಿನದಿಂದ ದಿನಕ್ಕೆ ನಂಬಿಕೆ ಕಳೆದುಕೊಂಡ ಕೃತಕ ಆಚರಣಾ ಲೋಕವಾಗಿ ಪರಿವರ್ತನೆ ಆಗುತ್ತಿದೆ. ಈ ಬಗೆಯ ಕೃಷಿ ಮತ್ತು ಗ್ರಾಮೀಣ ಆಚರಣಾ ಲೋಕದ ಜತೆ ಸಂಬಂಧವಿಟ್ಟುಕೊಂಡ ಜನಪದ ಕಲೆಗಳು ಸಹಜವಾಗಿ ಮಂಕಾಗುತ್ತಿವೆ.

     ಇಂದು ಜನಪದ ಕಲೆಗಳ ವೃತ್ತಿನಿರತ ತಂಡಗಳು ರೂಪುಗೊಳ್ಳುತ್ತಿವೆ. ಉದಾಹರಣೆಗೆ ಇಡೀ ಕರ್ನಾಟಕವನ್ನು ಪ್ರತಿನಿಧಿಸುವ ಕೆಲವು ಡೊಳ್ಳು ತಂಡಗಳು. ಕೆಲವು ವೀರಗಾಸೆ ತಂಡಗಳು, ಕೆಲವು ಪೂಜಾ ಕುಣಿತದ ತಂಡಗಳಿವೆ. ಈ ತಂಡಗಳು ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ಪ್ರದರ್ಶನ ಕೊಡುತ್ತಿವೆ. ಹೀಗಾಗಿ ಪ್ರತಿ ಹಳ್ಳಿಗಳಲ್ಲಿ ಇರುವ ಡೊಳ್ಳಿನ ಕುಣಿತದ ವೈವಿದ್ಯತೆ ನಾಶವಾಗಿ ಒಂದು ಮಾದರಿ ಪ್ರಚಾರಕ್ಕೆ ಬರುತ್ತಿದೆ. ಜಾಗತೀಕರಣದ ಮಾರುಕಟ್ಟೆ ಮನಸ್ಸು ಹೇಗೆ ವೈವಿದ್ಯತೆಗಳನ್ನು ನಾಶ ಮಾಡುತ್ತದೆಯೋ ಹಾಗೆ ಜನಪದ ಕಲಾಪ್ರಕಾರಗಳ ನಾಶವೂ ಆಗುತ್ತಿದೆ. ಇನ್ನು ಇಂತಹ ವೃತ್ತಿನಿರತ ತಂಡದ ಕಲಾವಿದರು ನಿಜವಾದ ಕಲೆಯ ಹಿನ್ನೆಲೆಯಿಂದ ಬಂದ ಕಲಾವಿದರಾಗಿರುವುದೂ ಕಡಿಮೆ. ಅನೇಕರು ಫೇಕ್ ಕಲಾವಿದರಾಗಿರುತ್ತಾರೆ. ತಮ್ಮ ರಾಜಕೀಯ ಪ್ರಭಾವ ಬಳಸಿ ಸರಕಾರದ ಎಲ್ಲಾ ಕಾರ್ಯಕ್ರಮಗಳಲ್ಲೂ ಅವಕಾಶ ಪಡೆಯುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ನಿಜವಾಗ ಕಲಾವಿದರು ಅಂಚಿಗೆ ಸರಿಯುತ್ತಾರೆ.

 

   ಕರ್ನಾಟಕದಲ್ಲಿ ಜನಪದ ಪ್ರದರ್ಶನಾತ್ಮಕ ಕಲೆಗಳಿಗೆ ಮಹಿಳೆಯರ ಪ್ರವೇಶವಾಗುತ್ತಿದೆ. ಹೀಗಾಗಿ ಅದು ನಾವು ಜನಪದ ಕಲೆಗಳನ್ನು ಪುರುಷರ ನೆಲೆಯಲ್ಲಿ ಕಟ್ಟಿಕೊಂಡ ವ್ಯಾಖ್ಯಾನಗಳನ್ನೆಲ್ಲಾ ಬದಲಿಸುತ್ತಿದೆ. ಇದೊಂದು ದೊಡ್ಡ ಚಲನೆ. ಈಗ ಹತ್ತಾರು ಮಹಿಳಾ ಡೊಳ್ಳಿನ ತಂಡಗಳಿವೆ. ಚಿತ್ರದುರ್ಗದ ಬಳಿ ಹಳ್ಳಿಯೊಂದರಲ್ಲಿ ಹಲಗೆಯನ್ನು ಬಾರಿಸುವ ಮಹಿಳಾ ತಂಡವಿದೆ. ಕೂಡ್ಲಿಗಿ ಮತ್ತು ಕೂಡ್ಲಿಗಿ ಸಮೀಪದ ವಿರುಪಾಪುರ ಎಂಬ ಹಳ್ಳಿಯಲ್ಲಿ ಮಹಿಳೆಯರು ದೊಡ್ಡಾಟ, ಸಣ್ಣಾಟಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಗಂಡಸರಿಗೆ ಮಾತ್ರ ಸೀಮಿತವಾದ ಬಯಲಾಟ ಪರಂಪರೆಯಲ್ಲಿ ಮಹಿಳೆಯ ಪ್ರವೇಶವಾಗಿದೆ. ಕರ್ನಾಟಕದ ಹಳ್ಳಿಗಳಲ್ಲಿ ಮಹಿಳಾ ಉಳಿತಾಯ ಸಂಘಟನೆಗಳು ಸ್ಥಾಪನೆಯಾಗಿವೆ. ಹೀಗೆ ಸಂಘಟಿತ ಮಹಿಳೆಯರು ಜನಪದ ಕಲಾತಂಡಗಳನ್ನು ರಚಿಸಿಕೊಳ್ಳುವ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಇದು ಜಾಗತೀಕರಣದ ಸಕಾರಾತ್ಮಕ ಪರಿಣಾಮ.

   ಮುಖ್ಯವಾಗಿ ಶಾಲಾ ಮಕ್ಕಳಲ್ಲಿ ಜನಪದ ಪ್ರದರ್ಶನಾತ್ಮಕ ಕಲೆಗಳ ಕಲಿಸುವಿಕೆಯ ಪ್ರಯೋಗವೂ ವಿರಳವಾಗಿದೆ. ಈ ಪ್ರಯೋಗ ಹೆಚ್ಚಾಗಿ ಸರಕಾರಿ ಶಾಲೆಗಳಿಗಿಂತ ಧಾಮರ್ಿಕ ಸಂಸ್ಥೆಗಳು (ಮಠಗಳು) ನಡೆಸುವ ಶಾಲೆಗಳಲ್ಲಿ ಹೆಚ್ಚಾಗಿರುವುದನ್ನು ನೋಡಬಹುದು. ಇಲ್ಲಿ ಮಠಗಳು ಜನಪದ ಕಲೆಗಳನ್ನು ಧಾಮರ್ಿಕ ಸಂವಹನದ ಮಾದ್ಯಮಗಳನ್ನಾಗಿ ಬಳಸಿಕೊಳ್ಳುತ್ತಿರುವುದು ಕಾಣುತ್ತದೆ.


    ಉದಾಹರಣೆಗೆ: ಆದಿ ಚುಂಚನಗಿರಿ, ಸುತ್ತೂರು, ಸಿರಿಗೆರೆ ಮುಂತಾದ ಮಠಗಳಲ್ಲಿ ನಡೆಸುವ ಶಾಲೆಗಳಲ್ಲಿ ಮುಖ್ಯವಾಗಿ ವೀರಗಾಸೆ, ಸಮಾಳ, ಭಜನೆ, ಕೋಲಾಟ ಮುಂತಾದ ಪ್ರದರ್ಶನ ಕಲೆಗಳನ್ನು ಕಲಿಸಲಾಗುತ್ತದೆ. ಇಲ್ಲಿ ಮೇಲು ಜಾತಿಯ ಕಲೆಗಳನ್ನು ಮಾತ್ರ ಕಲಿಸಲಾಗುತ್ತದೆ. ಈ ಕಲೆಗಳಿಗೆ ಮಠ ಪರಂಪರೆಯ ಧಾಮರ್ಿಕ ಸ್ವರೂಪವನ್ನು ಕೊಡುತ್ತಿವೆ. ಈ ಮೂಲಕ ಮಠಗಳು ಜನಸಾಮಾನ್ಯರ ಕಲೆಗಳನ್ನು ಉಳಿಸುತ್ತಿವೆ ಎನ್ನುವ ಭಾವನೆಯನ್ನು ಉದ್ದೀಪಿಸುವುದೂ ಇದೆ. ಇಂತಹ ಮಠಗಳು ದಲಿತರ ಕಲೆಯನ್ನು ಕಲಿಸಲು ಉತ್ಸುಕವಾಗಿಲ್ಲದಿರುವುದನ್ನು ನೋಡಿದರೆ ಇವುಗಳ ಜಾನಪದ ಪ್ರೀತಿಯ ಹಿಂದಿನ ಧೋರಣೆಗಳನ್ನು ಅರ್ಥಮಾಡಿಕೊಳ್ಳಬಹುದು.

 ಕರ್ನಾಟದ ಕೆಲವು ಪ್ರದರ್ಶನಾತ್ಮಕ ಕಲೆಗಳ ಜತೆ ಜನಪದ ಕಾವ್ಯವೋ, ಜನಪದ ಕಥನ ಕಾವ್ಯವೋ, ಮಹಾಕಾವ್ಯವೋ ಇರುತ್ತದೆ. ಈ ಕಲೆಗಳಿಗೂ ಆಯಾ ಪ್ರದರ್ಶನಾತ್ಮಕ ಕಲೆಗೂ ಸಾವಯವ ಸಂಬಂಧವಿರುತ್ತದೆ. ಕೆಲವೊಮ್ಮೆ ಆಯಾ ಕಾವ್ಯದ ಏರಿಳಿತಕ್ಕೆ ತಕ್ಕ ಹಾಗೆ ಜನಪದ ಪ್ರದರ್ಶನಾತ್ಮಕ ಕಲೆಗಳ ಲಯವೂ ಬದಲಾಗುತ್ತದೆ. ಇಲ್ಲಿನ ಜನಪದ ಕಾವ್ಯದಲ್ಲಿ ಜನರ ಚರಿತ್ರೆಯೋ, ಜನರ ಪ್ರತಿರೋಧವೋ ದಾಖಲಾಗುತ್ತದೆ. ಇದು ಮೌಖಿಕ ಚರಿತ್ರೆಯನ್ನು ದಾಖಲಿಸುತ್ತಾ ಹೋಗುತ್ತದೆ. ಹಾಗೆಯೇ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಪ್ರಸಾರವಾಗುತ್ತಿರುತ್ತದೆ.

 ಆದರೆ ಇಂದು ಹೀಗೆ ಹಾಡುಪರಂಪರೆಯ ಭಾಗವಾಗಿದ್ದ ಪ್ರದರ್ಶನಾತ್ಮಕ ಕಲೆಗಳು ಆಯಾ ಹಾಡು ಗೀತೆ, ಸಾಹಿತ್ಯವನ್ನು ಕಳಚಿಕೊಂಡು ಕೇವಲ ಪ್ರದರ್ಶನ ನೀಡಬಲ್ಲ ಕಲೆಗಳಾಗಿವೆ. ಹೀಗೆ ಈ ಬಗೆಯ ಸಾಹಿತ್ಯದ ಗೈರು ಹಾಜರಿಯಿಂದ ಆಯಾ ಜನಪದ ಕಲಾವಿದ ಈ ಕಲೆಯ ಮೂಲಕ ಏನನ್ನು ಹೇಳಲು ಬಯಸುತ್ತಾನೆ ಎನ್ನುವುದು ತಿಳಿಯುವುದಿಲ್ಲ. ಅಥವಾ ಈ ಮೂಲಕ ಜನಪದ ಕಲಾವಿದನೊಬ್ಬನು ಈ ಸಮಾಜದ ಬಗ್ಗೆ ತಾನು ಹೇಳಬೇಕಾದ್ದನ್ನು ಹೇಳದೆ ಮೌನವಾಗುತ್ತಾನೆ. ಹೀಗೆ ದೃಶ್ಯ ಮುಂದೆ ಬಂದು ಮಾತು ಮೌನವಾಗುತ್ತಿರುವ ಚಲನೆಯು ಕಾಣುತ್ತಿದೆ.

    ಜನಪದ ಕಲಾವಿದರಿಗೆ ತಮ್ಮ ಕಲೆಯನ್ನು ಮಾರುಕಟ್ಟೆಯ ಸರಕಿನ ಹಾಗೆ ಆಕರ್ಷಕವಾಗಿ ಕಾಣಿಸುವಲ್ಲಿ ಹೆಚ್ಚು ಉತ್ಸುಕರಾಗಿದ್ದಾರೆ. ಮುಖ್ಯವಾಗಿ ಜನಪದ ಪ್ರದರ್ಶನಾತ್ಮಕ ಕಲೆಗಳ ವೇಷಭೂಷಣಗಳಲ್ಲಿ ತುಂಬಾ ಬದಲಾವಣೆಗಳು ಆಗಿವೆ. ಈ ವೇಷಭೂಷಣಗಳು ಸಂಸ್ಕೃತಿಯ ಯಾವುದೋ ಸಾಂಕೇತಿಕೆ ಆಗಿರದೆ, ಅದು ಕೇವಲ ನೋಡುಗರನ್ನು ಆಕಷರ್ಿಸುವ ಉದ್ದೇಶವನ್ನು ಮಾತ್ರ ಹೊಂದಿರುತ್ತವೆ. ಇನ್ನು ಈಚೆಗೆ ಜನಪದ ಕಲೆಗಳಲ್ಲಿ ಸಾಹಸದ ಪ್ರದರ್ಶನ ಮಾಡಲಾಗುತ್ತಿದೆ. ಹೀಗೆ ಸಾಹಸದ ಪ್ರದರ್ಶನ ಆಯಾ ಕಲೆಯ ಭಾಗವಾಗಿ ಬಂದದ್ದಲ್ಲ. ಬದಲಾಗಿ ಜನರನ್ನು ಅಚ್ಚರಿಗೊಳಿಸುವ, ಜನರನ್ನು ಮೈನೆವರೇಳಿಸುವ, ಅಥವಾ ಅದೇ ಕಲೆಯ ಬೇರೊಂದು ತಂಡಕ್ಕಿಂತ ಭಿನ್ನವಾಗಿ ಕಾಣುವ ಒಡಗಳು ಇದ್ದಂತಿದೆ.

   ಪ್ರದರ್ಶನ ಕೊಡುವ ಸಂದರ್ಭದಲ್ಲಿ ರಾಜಕಾರಣಿಗಳಿಗೆ, ಸರಕಾರದ ಪ್ರಭಾವಿಗಳ ಎದುರು ತಮ್ಮನ್ನು ತಾವು ಜಾಹೀರಾತು ಮಾಡಿಕೊಳ್ಳುವ ಗುಣ ಬೆಳೆಯುತ್ತಿದೆ. ಕಾರಣ ಮುಂದಿನ ಕಾರ್ಯಕ್ರಮಗಳಿಗೆ ತಮ್ಮನ್ನು ಆಹ್ವಾನಿಸುವ ಹಾಗೆ ಪ್ರಭಾವಿಸುವ ಮನಸ್ಥಿತಿ ಇದರ ಹಿಂದೆ ಇದ್ದಂತಿದೆ. ಇನ್ನು ತಮ್ಮ ಪ್ರದರ್ಶನಾತ್ಮಕ ಕಲೆಯ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಮಾಡುವ ಹಪಾಹಪಿ ಹೆಚ್ಚುತ್ತಿದೆ. ಈ ಕಾರಣಕ್ಕೆ ಮಾಧ್ಯಮದವರ ಮುಂದೆ ಹಲ್ಲು ಗಿಂಜುವ ಕೀಳು ಪ್ರವೃತ್ತಿಯೂ ಬೆಳೆಯುತ್ತಿದೆ. ಬಹುಶಃ ಈ ಬೆಳವಣಿಗೆ ನೇರವಾಗಿ ಜಾಗತೀಕರಣದ ಪ್ರಭಾವವನ್ನು ತೋರಿಸುತ್ತಿದೆ.

 


   ಹೀಗೆ ಜನಪದ ಕಲೆಗಳು ಆಧುನಿಕತೆಯಿಂದಾಗಿ ನೇರ ಪ್ರಭಾವಕ್ಕೆ ಒಳಗಾಗಿವೆ. ಇದರ ಕೆಲವು ಅಂಶಗಳನ್ನು ಮಾತ್ರ ಇಲ್ಲಿ ಹೇಳಲು ಸಾದ್ಯವಾಗಿದೆ. ಇದನ್ನು ಇನ್ನಷ್ಟು ಗಂಭೀರವಾಗಿ ಯೋಚಿಸುವ ಅಗತ್ಯವಿದೆ. ಜನಪದ ಕಲೆಗಳು ನಾಶವಾಗಿವೆ ಎನ್ನುವುದಕ್ಕಿಂತ ಅವುಗಳ ಹೊಸ ಚಲನೆ ಏನಾಗಿದೆ ಎಂದು ನೋಡುವುದು ಸರಿ. ಈ ಬಗೆಯ ಹೊಸ ಚಲನೆಗಳು ಕಾಲದ ಜತೆ ಸಾವಯವ ಸಂಬಂಧವನ್ನು ರೂಪಿಸಿಕೊಳ್ಳುವ ಕಲೆಯೊಂದರ ಜಿಗುಟುತನವನ್ನು ಕಾಣಿಸುತ್ತದೆ.
ಚಿತ್ರ ಕೃಪೆ : ಜಾನಪದ ಲೋಕ

2 ಕಾಮೆಂಟ್‌ಗಳು:

CHANNABASAVAIAH K M ಹೇಳಿದರು...

JANAPADA KALEGALA BAGGE UPYUKTA MAHITIGALLANNU NIDVU PRAYATNA VAGIDE

ಕನ್ನಡ ಕುಸುಮ ಹೇಳಿದರು...

JANAPADA KALEGALA BAGGE BAHU UPAYUKTA MAHITIGALLANU NIDUYA TANAVAGIDE