ಬುಧವಾರ, ಮೇ 15, 2013

ಇಲ್ಲಿ ನೈತಿಕತೆಯೇ ಗೈರು ಹಾಜರಾಗಿದೆ!

ಇಲ್ಲಿ ನೈತಿಕತೆಯೇ ಗೈರು ಹಾಜರಾಗಿದೆ!

 

 

 

 

 

 

 

 

 

 

 

 

 

 

 

 

 

 

 

-ರಾಜೇಂದ್ರ ಚೆನ್ನಿ

ಎಚ್.ಎಸ್. ಶಿವಪ್ರಕಾಶರ ಅಂಕಣ ಲೇಖನದಿಂದ ಆರಂಭವಾದ ಚರ್ಚೆಗಳನ್ನು ಕುತೂಹಲ ಮತ್ತು ಆಶ್ಚರ್ಯದಿಂದ ಓದುತ್ತಾ ಬಂದಿದ್ದೇನೆ. ಆಶ್ಚರ್ಯದಿಂದ ಏಕೆಂದರೆ ಡಂಕಿನ್ ಝಳಕಿಯವರ ಹಾಗೂ ಅವರು ತಮ್ಮ ತಾತ್ವಿಕ ಚೌಕಟ್ಟಾಗಿ ಬಳಸುವ ಎಸ್.ಎನ್.ಬಾಲಗಂಗಾಧರ ಅವರ ವಾದಗಳು ವಚನ ಸಾಹಿತ್ಯದ ಮರುಓದಿಗೆ ಮತ್ತು ಜೊತೆಗೆ ಜಾತಿ ವ್ಯವಸ್ಥೆಯ ಕುರಿತು ಮರುಚರ್ಚೆಗೆ ಕಾರಣವಾಗಬಹುದಾದ ಸ್ವಂತಿಕೆ ಹಾಗೂ ವಿವೇಚನಾ ಸಾಮರ್ಥ್ಯವನ್ನು ಹೊಂದಿವೆ ಎನ್ನುವ ತಪ್ಪು ಕಲ್ಪನೆಯ ಮೇಲೆ ಈ ಸಂವಾದವು ನಡೆಯುತ್ತಿದೆ.

`ಜಗತ್ತಿನ ಬೌದ್ಧಿಕ ವಲಯದಲ್ಲಿಯೇ ಒಂದು ಮೂಲಭೂತವಾದ ಪಲ್ಲಟವನ್ನು ಮತ್ತು ಭಾರತೀಯ ಸಾಮಾಜಿಕ ವಿಜ್ಞಾನಗಳ ಮೂಲಸ್ವರೂಪವನ್ನೇ ಪುನರ್‌ರಚಿಸುವ ಸೈದ್ಧಾಂತಿಕ, ತಾತ್ವಿಕ ಪಲ್ಲಟಗಳು ಈ ವಾದಗಳಿಂದ ಆಗಿವೆ, ಆಗಬೇಕು' ಎಂದು ಕುವೆಂಪು ವಿಶ್ವವಿದ್ಯಾಲಯದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದ ಒಂದು ಗುಂಪು ಪ್ರತಿಪಾದಿಸುತ್ತಾ ಬಂದಿದೆ. ಅಲ್ಲದೇ  `ಇದನ್ನು ಅರ್ಥಮಾಡಿಕೊಳ್ಳಲಾಗದ  `ಕನ್ನಡ ಬುದ್ಧಿಜೀವಿಗಳು'  ತಿರಸ್ಕಾರಕ್ಕೆ ಯೋಗ್ಯರೆಂದು'  ವಾದಿಸುತ್ತಾ ಬಂದಿದೆ.
ರಾಜಾರಾಮ್ ಹೆಗಡೆ ಹಾಗೂ ಜೆ.ಎಸ್. ಸದಾನಂದರ `ಪೂರ್ವಾವಲೋಕನ'ದ ಪೀಠಿಕೆ ಪುಟ 22ರಲ್ಲಿ ಬಾಲಗಂಗಾಧರರ ಉದ್ದೇಶಗಳ ಕುರಿತು ವ್ಯಕ್ತವಾಗಿರುವ ಅನುಮಾನಗಳ ಕುರಿತು, ಅವರದು ಹಿಂದುತ್ವದ ಅಜೆಂಡಾ ಎನ್ನುವುದು ಪ್ರಮುಖ ಆರೋಪ. ಹೀಗೆಂದು ಆರೋಪ ಮಾಡುವ ಕನ್ನಡ ಬುದ್ಧಿಜೀವಿಗಳಿಗೆ  ವೈಜ್ಞಾನಿಕ ಸಂಶೋಧನೆಯು ಅನುಸರಿಸಬೇಕಾದ ಪರಿಚಯವಿದ್ದರೆ (?)'  ಇತ್ಯಾದಿ ಹೇಳಲಾಗಿದೆ.  ಇನ್ನು ಮುಂದುವರೆದು `ಒಂದು ವೇಳೆ ಸಂಶೋಧಕನು ಸಂಘ ಪರಿವಾರದ ಸಕ್ರಿಯ ಸದಸ್ಯನಾಗಿದ್ದಾನೆ ಎಂದೇ ಇಟ್ಟುಕೊಳ್ಳಿ. ಆಗಲೂ ಸಹ ಆ ಕಾರಣದಿಂದಾಗಿ ಅವನ ಸಂಶೋಧನೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಏಕೆಂದರೆ ತನ್ನ ವೈಯಕ್ತಿಕ ಅಭಿಪ್ರಾಯ ಬದ್ಧತೆ, ನಂಬಿಕೆಗಳಿಗೂ ತಾನು ಮಾಡುತ್ತಿರುವ ಸಂಶೋಧನೆಗೂ ನಡುವಿನ ವ್ಯತ್ಯಾಸ ತಿಳಿಯದೇ ಇದ್ದರೆ ವೈಜ್ಞಾನಿಕ ಸಂಶೋಧನೆ ಆಗುವುದಿಲ್ಲ' ಎಂಬಂಥ ಅದ್ಭುತವಾದ ವಾದದ ಮೂಲಕ ಇವರು ತಲುಪುವ ನಿರ್ಣಯವೆಂದರೆ- `  ..ಈ ರೀತಿ ಆರೋಪ ಮಾಡುವವರು ಒಂದೋ ಬಾಲಗಂಗಾಧರರನ್ನು ಓದದೇ ಆರೋಪಿಸುತ್ತಿದ್ದಾರೆ. ಇಲ್ಲ ಏನು ಹೇಳಬೇಕಾಗಿದೆ ಎಂಬುದು ಅವರಿಗೆ ಇನ್ನೂ ಸ್ಪಷ್ಟವಾಗಿಲ್ಲ' -   ಈ ಹೇಳಿಕೆಯ ಕೊನೆಯ ವಾಕ್ಯವು ಜೀಸಸ್ ಕ್ರೈಸ್ಟ್ `ಗಾಡ್' ಗೆ ಹೇಳಿದರೆಂದಾದ ಮಾತಿನಂತಿರುವುದು ಇಡೀ ಸಮಕಾಲೀನ ಭಾರತೀಯ ಚಿಂತನೆಯು ಕ್ರಿಶ್ಚಿಯನ್ ಥಿಯಾಲಜಿಯ ಪುನರುತ್ಪಾದನೆಯೆನ್ನುವ ಈ ಗುಂಪಿನ ವಾದಕ್ಕೆ ಸಮರ್ಥನೆಯಾಗಿರಬಹುದು! 

ನಾನು ಸಾಫ್ಟ್-ಕಾಪಿಯಲ್ಲಿ ಓದಿರುವ ಡಂಕಿನ್‌ರ ಪ್ರಬಂಧದ ಮುಖ್ಯ ವಾದಗಳು ಹೀಗಿವೆ:  `ಬ್ರಿಟಿಷ್ ಆಡಳಿತಗಾರರು, ಹವ್ಯಾಸಿ ವಿದ್ವಾಂಸರು ಮತ್ತು ಇತರರು -ಲಿಂಗಾಯತ/ವೀರಶೈವ ಧರ್ಮ ಹಾಗೂ ಅದರ ಗ್ರಂಥಗಳ ಬಗ್ಗೆ ದ್ವಂದ್ವಾತ್ಮಕವಾದ ನಿಲುವನ್ನು ಮೊದಲಿನಿಂದ ತಾಳುತ್ತಾ ಬಂದಿದ್ದಾರೆ. ಇದರಲ್ಲಿ ಅವರು ಇತ್ಯಾತ್ಮಕವೆಂದು ಗುರುತಿಸುವ ಅಂಶಗಳು ಪ್ರಾಟೆಸ್ಟಂಟ್ ಕ್ರಿಶ್ಚಿಯನ್ ಥಿಯಾಲಜಿಯ ಪ್ರಭಾವದಲ್ಲಿ ಮಾಡಲಾದ ರಚನೆಗಳು. ಅನಂತರ ತನ್ನ ಅಸ್ಮಿತೆ ಹಾಗೂ ಸಂಘಟನೆಯನ್ನು ಬಲಪಡಿಸುವ ಪ್ರಯತ್ನದಲ್ಲಿ ಈ ಬ್ರಿಟಿಷ್ stereo story ತನಗೆ ಅಪ್ಯಾಯಮಾನವಾಗಿ ಕಂಡಿದ್ದರಿಂದ ಆಧುನಿಕ ವೀರಶೈವ ಶಿಕ್ಷಿತ ವರ್ಗವು ಇದನ್ನು ಒಪ್ಪಿಕೊಂಡಿತು'-  ಇಂಥ ಒಂದು ವಿವರಣೆಯನ್ನು ಡಂಕಿನ್‌ರ ಪ್ರಬಂಧವು ವೀರಶೈವ ಸಭಾದ ನಡಾವಳಿಗಳು, ಅದರ ನೇತಾರರ ಭಾಷಣ ಬರಹಗಳು, ಇವುಗಳ ಸಹಾಯದೊಂದಿಗೆ ಮಂಡಿಸುತ್ತದೆ. 
ಆದರೆ,  ಡಾ.ಷಣ್ಮುಖ ಅವರು “ ಡಂಕಿನ್‌ರ ಪ್ರಬಂಧದಲ್ಲಿ ಎಲ್ಲೂ ಈಗ ಇರುವ ವಚನಗಳು ಜಾತಿ(ವ್ಯವಸ್ಥೆ) ವಿರೋಧಿ ಚಳವಳಿ ಎಂಬ ಕಥೆಯನ್ನು `ವೀರಶೈವರು ತಮ್ಮ ಮೇಲುಚಲನೆಗಾಗಿ ಹರಡಿದರು  ಎನ್ನುವ ವಾದವಿಲ್ಲ “ಎಂದು ಹೇಳುತ್ತಾರೆ. ಮಣಿಪಾಲ್ ವಿಶ್ವವಿದ್ಯಾಲಯಕ್ಕೆ ಡಂಕಿನ್ ಅವರು ಸಲ್ಲಿಸಿದ  ‘Vachanas as Caste Critiques’ ಎಂಬ ಪ್ರಬಂಧದ ಬಗ್ಗೆ ಷಣ್ಮುಖ ಅವರು ಮಾತನಾಡುತ್ತಿದ್ದಾರೆ ಎಂದು ನಾನಂದುಕೊಂಡಿದ್ದೇನೆ. ಹಾಗಿದ್ದರೆ ಷಣ್ಮುಖರು ಈ ಪ್ರಬಂಧವನ್ನು ಓದಿಲ್ಲ ಅಥವಾ ಅವರು ಕನ್ನಡ ಬುದ್ಧಿಜೀವಿಗಳಲ್ಲದಿದ್ದರೂ ಅವರಿಗೆ ಅರ್ಥವಾಗಿಲ್ಲವೆಂದು ಹೇಳಬೇಕಾಗುತ್ತದೆ.

ಇಲ್ಲಿರುವ ಪ್ರಶ್ನೆಗಳೆಂದರೆ ಬ್ರಿಟಿಷ್ ಓರಿಯಂಟಲಿಸ್ಟ್ ಎಂದು ಕರೆಯಬಹುದಾದ ಬರಹಗಳು ವೀರಶೈವ ಧರ್ಮದ ಬಗ್ಗೆ ಏಕಮುಖವಾದ ಚಿತ್ರವನ್ನು ಕೊಟ್ಟಿವೆಯೆ? ಅಂದಾಜು ಹತ್ತರಿಂದ ಹದಿನೈದನೇ ಶತಮಾನದವರೆಗೆ ಪ್ರವರ್ಧಮಾನವಾದ ಒಂದು ಸಂಪ್ರದಾಯದ ಬಗ್ಗೆ ಬ್ರಿಟಿಷ್‌ರ ಆಗಮನದ ಮೊದಲು ಯಾವುದೇ ವಿವರಣೆಗಳು, ವ್ಯಾಖ್ಯಾನಗಳು ಇರಲೇ ಇಲ್ಲವೇ? ಈ ವಿವರಣೆಗಳು ಜಾತಿ, ಜಾತಿಪದ್ಧತಿ, ಬ್ರಾಹ್ಮಣ ಪುರೋಹಿತಶಾಹಿ ಇವುಗಳು ತಮ್ಮ ಯಾವ `ಅನುಭವ' ವನ್ನು ವಿವರಿಸಲೇ ಇಲ್ಲವೇ? ವಸಾಹತುಪೂರ್ವ/ಆಧುನಿಕಪೂರ್ವ ಕಾಲದ ಅನುಭವದ ಬಗ್ಗೆ ಇನ್ನೂ ಸಂಶೋಧನೆಯಾಗಬೇಕಿದೆ ಎಂದು ಹೇಳುವ ಬಾಲಗಂಗಾಧರ ಗುಂಪು, ಆ ಸಂಶೋಧನೆಯು ಆಗದಿದ್ದರೂ, ಅದರ ಬಗ್ಗೆ ಬಂದಿರುವ ಎಲ್ಲಾ ಕನ್ನಡ ಸಂಶೋಧನೆಯನ್ನು ತಿರಸ್ಕಾರದಿಂದ ನೋಡುವ ತನ್ನ obscene arrogance ಬಗ್ಗೆ ಅದು ಸೂಕ್ಷ್ಮವಾಗಿಲ್ಲ. ಜತೆಗೆ, ವಚನಕಾರರು ಜಾತಿಯ ಬಗ್ಗೆ ತಾಳಿದ ಧೋರಣೆಯನ್ನು ಆಧ್ಯಾತ್ಮಿಕವೆಂದು ಗುರುತಿಸಿ ಅದನ್ನು ` ಸಾಮಾಜಿಕ' ದಿಂದ ಕತ್ತರಿಸುತ್ತಾರೆ. ಆದರೆ, ಆಧ್ಯಾತ್ಮಿಕ/ಸಾಮಾಜಿಕ ಎನ್ನುವ ವಿಂಗಡಣೆಯೇ ವಸಾಹತುಶಾಹಿ ಪ್ರಜ್ಞೆಯ ಫಲವಾಗಿದೆ.

ಇದನ್ನು ವಸಾಹತುಶಾಹಿ-ಪೂರ್ವ ಸಂದರ್ಭಕ್ಕೆ ಅನ್ವಯಿಸುವ ಡಂಕಿನ್‌ರು ತಮ್ಮ ಪ್ರಬಂಧದಲ್ಲಿ ಓರಿಯೆಂಟಲಿಸಂನ ಪುನರುತ್ಪಾದನೆ ಮಾಡಿದ್ದಾರೆ. ಹೀಗಾಗಿ ಅವರ ಸಂಶೋಧನೆಯ ವೈಚಾರಿಕ ಚೌಕಟ್ಟು ದುರ್ಬಲ ಮಾತ್ರವಲ್ಲ ಅಸಿಂಧುವಾಗಿದೆ.
ಬಾಲಗಂಗಾಧರರ ವಾದಗಳು ರಿಲಿಜನ್, ಜಾತಿ ವ್ಯವಸ್ಥೆಯ ಬಗ್ಗೆ ವಿಶ್ವನಾಗರೀಕತೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಸತ್ಯವನ್ನು ಹೇಳುತ್ತಿವೆಯೆಂದೂ ಮತ್ತು ಅವರ ಮಾತನ್ನು ಒಪ್ಪದವರು ಅಶಿಕ್ಷಿತರೆಂದು ಈ ಗುಂಪು ವಾದಿಸುತ್ತ ಬಂದಿದೆ. ಇವರು, ಕಾರ್ಲ್ ಪಾಪರ್‌ನಿಂದ ತೆಗೆದುಕೊಂಡಿರುವ ಹೇಳಿಕೆಗಳ ವಿಶ್ಲೇಷಣೆಯ ಮಾದರಿ ಸತ್ಯ ಮತ್ತು falsification  ಬಗೆಗಿನ ನಿಲುವುಗಳು ಅತ್ಯಂತ ಪ್ರಶ್ನಾರ್ಹವೂ ಆಗಿವೆಯೆನ್ನುವುದು ಜಗತ್ತಿನ ವಿದ್ವತ್ ಪ್ರಪಂಚಕ್ಕೆ ತಿಳಿದಿದೆ. ಇಂಥ ಸಂದೇಹಾಸ್ಪದ ತರ್ಕಪದ್ಧತಿಗಳ ಆಧಾರದ ಮೇಲೆ  ಇವರ  `ಸಂಶೋಧನೆ', ಚರಿತ್ರಾತ್ಮಕ ಅಧ್ಯಯನಗಳ ಸಾಧ್ಯತೆಯನ್ನೇ ಒಪ್ಪದ ಇವರ ವಾದಗಳು ಬಾಲಿಶ ಹಾಗೂ ಅಸಂಬದ್ಧವಾಗಿರುತ್ತವೆ.

ಉದಾಹರಣೆಗೆ ತಮ್ಮ ಪ್ರಬಂಧದಲ್ಲಿ ಡಂಕಿನ್ ಅವರು `ವೀರಶೈವ/ಲಿಂಗಾಯತ ಸಂಪ್ರದಾಯಗಳು ಒಪ್ಪುವ ವಚನಕಾರರ ಬಗೆಗಿನ stereostories  ಗಳಿಗೆ ಯಾವುದೇ ಚಾರಿತ್ರಿಕ ಆಧಾರಗಳಿಲ್ಲವಾದ್ದರಿಂದ ವಚನಗಳಲ್ಲಿ ಬರುವ ಹೇಳಿಕೆಗೆ textual ಓದುಗಳು ಮಾತ್ರ ನಮ್ಮ ವಾದಗಳಿಗೆ ಆಧಾರವಾಗಿರಬೇಕು'  ಎನ್ನುತ್ತಾರೆ. ಅಲ್ಲದೇ ಈ ಓದುಗಳಲ್ಲಿ ((textual reading)  ಸಾಹಿತ್ಯಿಕ ಓದು ಮತ್ತು ಸಮಾಜಶಾಸ್ತ್ರೀಯ ಓದುಗಳ ಮಧ್ಯ ಅಂತಹ ಭಿನ್ನತೆಯಿಲ್ಲವೆಂದು ವಾದಿಸಿ ವಚನಗಳಲ್ಲಿ ಜಾತಿ/ಜಾತಿ ವ್ಯವಸ್ಥೆಯ ಬಗ್ಗೆ ಇರುವ `ಹೇಳಿಕೆ'ಗಳನ್ನು ಶೇಕಡಾವಾರು ಸಂಖ್ಯಾಶಾಸ್ತ್ರೀಯ ಮಾದರಿಯಲ್ಲಿ ಪರಿಶೀಲಿಸುತ್ತಾರೆ.

ಈ ವಾದಸರಣಿಗಳಲ್ಲಿ ಒಂದು ಮೆಟ್ಟಿಲಿನಿಂದ ಇನ್ನೊಂದು ಮೆಟ್ಟಿಲಿಗೆ ಹೋಗುವಾಗ ಅದೆಷ್ಟು ವೈಚಾರಿಕ ಕೊರಕಲುಗಳನ್ನು ಹಾರುತ್ತಾರೆ ಎಂದರೆ ತತ್ವಜ್ಞಾನದ ಪ್ರಾಥಮಿಕ ಪರಿಚಯವಿರುವವರಿಗೂ ಇದು ಅಸಮರ್ಥನೀಯವಾಗಿ ಕಾಣುತ್ತದೆ. ಇದರ ಪರಿಣಾಮವೆಂದರೆ  `ಆದಿಶಂಕರರಲ್ಲಿಲ್ಲದ್ದು ವಚನಕಾರರಲ್ಲಿ ಏನಿದೆ ` ಎನ್ನುವ ಅಚಾರಿತ್ರಿಕ, ಅಪ್ರಬುದ್ಧ ಹೇಳಿಕೆ ಡಂಕಿನ್ ಅವರಿಗೆ ಸಾಧ್ಯವಾಗುತ್ತದೆ.

ಈ ದುರ್ಬಲ ಹೇಳಿಕೆಯ ಹಿಂದಿರುವುದೆಂದರೆ - ಚರಿತ್ರೆ, ಸಾಮಾಜಿಕ ಅನುಭವ, ಸಾಮಾಜಿಕ ಬದಲಾವಣೆ ಇದಾವುದರಿಂದಲೂ ಅಬಾಧಿತವಾದ, ಅಚಾರಿತ್ರಿಕವಾದ  `ಅನುಭಾವ ಪರಂಪರೆ'ಯಿದೆಯೆಂದೂ ಉದಾಹರಣೆಗೆ ವಚನಕಾರರು  ಜಾತಿಯ ಬಗ್ಗೆ ಏನನ್ನೇ ಹೇಳಿದರೂ ಅದನ್ನು ಈ ಅಚಾರಿತ್ರಿಕ ಅನುಭಾವಿಕ ಪರಂಪರೆಯ ಚೌಕಟ್ಟಿನಲ್ಲಿ ಅರ್ಥಮಾಡಿಕೊಳ್ಳಬೇಕೆಂದೂ ಅದರಾಚೆಗೆ ಹೋಗಿ ಅದನ್ನು ಜಾತಿ ವಿರೋಧಿಯೆಂದರೆ ಅದು ನಮ್ಮ ಆಧುನಿಕ,ವಸಾಹತುಶಾಹಿ,  ಕ್ರಿಶ್ಚಿಯನ್ ಥಿಯಾಲಜಿ ಪ್ರಭಾವಿತ ಪ್ರಜ್ಞೆಯಿಂದ ಹುಟ್ಟಿದ stereostory  ಮಾತ್ರ ಎಂದಾಗಿ  ಈ ಎಲ್ಲವೂ ಓರಿಯೆಂಟಲಿಸಂನ ಪುನರುತ್ಪಾದನೆಯಂತೆ ಇವರಿಗೆ ಕಾಣುತ್ತದೆ. ಆಧುನಿಕ, ವಸಾಹತುಶಾಹಿ, ಕ್ರಿಶ್ಚಿಯನ್ ಥಿಯಾಲಜಿ ಪ್ರೇರಿತ, ಓರಿಯಂಟಲಿಸ್ಟ್  ಇವೆಲ್ಲವನ್ನೂ ಒಂದೇ ಎನ್ನುವ ಹಾಗೆ ಬಾಲಗಂಗಾಧರರ ವಾದಗಳು ಠಿಛ್ಟಿಛಿಟಠಿಟ್ಟ ಮಾಡುತ್ತವೆ, ಏಕಾಕೃತಿಗೊಳಿಸುತ್ತವೆ. ಇದು ಸೂಕ್ಷ್ಮವಾದ ವೈಚಾರಿಕ ವಿಶ್ಲೇಷಣೆಗೆ ಒಳಪಡಿಸದೇ ಇರುವ ಬೌದ್ಧಿಕ ಏಕದೇವೋಪಾಸನೆಯಂತಿದೆ. 

ಬಾಲಗಂಗಾಧರರ ಕೃತಿಗೆ ಪರಾಮರ್ಶೆ ಬರೆದ ಪಾಶ್ಚಾತ್ಯ ವಿದ್ವಾಂಸರೊಬ್ಬರು ಹೇಳುವ ಹಾಗೆ   `ಒಬ್ಬ ಸಾಮಾನ್ಯ ಶಿಕ್ಷಿತ ವ್ಯಕ್ತಿಗೂ ಪರಿಚಿತವಿರುವ ಪಶ್ಚಿಮದ ಸ್ಥೂಲ ವಿವರಣೆಯನ್ನು ಬಾಲಗಂಗಾಧರರು ಮತ್ತೆ ಮತ್ತೆ ಲಂಬಿಸಿ ಪುನರಾವರ್ತಿಸಿ ಹೇಳುತ್ತಾರೆ. ಕೇವಲ ಕ್ರಿಶ್ಚಿಯನ್ ಥಿಯಾಲಜಿಯ ಪ್ರಭಾವದಲ್ಲಿ ತನ್ನ ಸಮಗ್ರ ಲೋಕಗ್ರಹಿಕೆಯನ್ನು ನಿರ್ಮಿಸಿಕೊಂಡಿದೆ ಎನ್ನಲಾಗುವ ಪಶ್ಚಿಮವು ಬಾಲಗಂಗಾಧರರ ಅವಸರದ ಕಲ್ಪನೆಯ ಆಚೆಗೆ ಎಲ್ಲಿಯೂ ಎಂದೂ ಅಸ್ತಿತ್ವದಲ್ಲಿರಲಿಲ್ಲ. ಪೂರ್ವವೂ ಹೇಗೆ ಏಕಶಿಲಾಕೃತಿಯದಲ್ಲವೋ ಪಶ್ಚಿಮವೂ ಏಕಶಿಲಾಕೃತಿಯದಲ್ಲ; ಅಷ್ಟೇ ಏಕೆ ಸಾಮ್ರೋಜ್ಯಶಾಹಿ ಪಶ್ಚಿಮವೂ ಕೂಡ ಹಾಗಿರಲಿಲ್ಲ' - ಎನ್ನುತ್ತಾರೆ. ಹಾಗಾಗಿ ಬಾಲಗಂಗಾಧರರು ಕೊಡುವ ಪಶ್ಚಿಮದ ಲೋಕಗ್ರಹಿಕೆಯ ವಿವರಣೆಯೇ ಏಕಮುಖವಾದದ್ದು.

ಏಕೆಂದರೆ, ಬಾಲುಗುಂಪು ವಸಾಹತುಶಾಹಿ ಪ್ರಜ್ಞೆಯನ್ನು ಕೇವಲ ಪ್ರಜ್ಞೆಯಾಗಿ, ಗ್ರಹಿಕೆಯಾಗಿ ಎಷ್ಟು ಅಮೂರ್ತವಾಗಿ ಚರ್ಚಿಸುತ್ತಾರೆಂದರೆ ಅವರ ಯಾವುದೇ ಲೇಖನದಲ್ಲಿ ಭಾರತದಲ್ಲಿ ಬ್ರಿಟಿಶ್ ವಸಾಹತುಶಾಹಿ ಒಂದು ರಾಜಕೀಯ, ಆರ್ಥಿಕ ವ್ಯವಸ್ಥೆಯೂ ಆಗಿತ್ತು ಎನ್ನುವ ಸಣ್ಣ ಪ್ರಸ್ತಾಪವೂ ಇಲ್ಲ. ಈ ಕಾರಣದಿಂದಾಗಿಯೇ ಅವರ ವಾದಗಳು ಸಂಪೂರ್ಣವಾಗಿ ಅಚಾರಿತ್ರಿಕ, ಅರಾಜಕೀಯ ನಿರ್ವಾತದಲ್ಲಿ ನಡೆಯುತ್ತವೆ. ಅವರ ವಾದದ ಪ್ರಕಾರ ಚರಿತ್ರೆ  ಅನ್ನುವುದು ಕೂಡ ಕ್ರಿಶ್ಚಿಯನ್ ಥಿಯಾಲಜಿಯಿಂದ ಬಂದ ಪರಿಕಲ್ಪನೆ.

ಕ್ರಿಶ್ಚಿಯನ್ ಥಿಯಾಲಜಿ ಪ್ರೇರಿತ ಚರಿತ್ರೆಗೂ ಮನುಷ್ಯ ಅನುಭವದ ಮೂಲ ಸತ್ಯವೇ ಆಗಿರುವ ಚರಿತ್ರೆಗೂ ವ್ಯತ್ಯಾಸವಿದೆ ಮತ್ತು ಆ ಚರಿತ್ರೆಯನ್ನು ಅಲಕ್ಷಿಸಲಾಗದು ಎನ್ನುವ ಅರಿವು ಇಲ್ಲದ್ದರಿಂದಾಗಿ ಗಂಗಾಧರರ ಥಿಯರಿಯು ಪಶ್ಚಿಮದ ವಿದ್ವತ್ ವಲಯದಲ್ಲಿ ಯಾವ ಸಣ್ಣ ಪರಿಣಾಮವನ್ನೂ ಮಾಡಲಿಲ್ಲ. ಭಾರತದ ಸಂದರ್ಭದಲ್ಲಿ ಅದು ವೈಚಾರಿಕವಾಗಿ ದುಷ್ಟವಾಗಿದೆ. ಬಾಲು ವಾದಗಳನ್ನು  ಅವರ ಗುಂಪು ಯಾವುದಕ್ಕಾಗಿ ಬಳಸಿಕೊಂಡಿದ್ದಾರೆ ಎನ್ನುವುದನ್ನು ನೋಡಿದರೆ ಅಸಹ್ಯವೆನಿಸದೇ ಇರಲಾರದು. ಉದಾಹರಣೆಗೆ ಕುವೆಂಪು ವಿಶ್ವವಿದ್ಯಾನಿಲಯದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದ ಬ್ಲಾಗ್‌ನಲ್ಲಿ ಲಭ್ಯವಿರುವ ಲೇಖನಗಳನ್ನು ಪ್ರತಿಕ್ರಿಯೆಗಳನ್ನು ನೋಡಬಹುದು. ಬಾಲಗಂಗಾಧರರ ಥಿಯರಿಯನ್ನು ಸಮಕಾಲೀನ ಸಂವಾದಗಳಿಗೆ ಅನ್ವಯಿಸಿರುವ ಈ ಲೇಖನಗಳಲ್ಲಿ ಆ ಥಿಯರಿಯು ಮಡೆಸ್ನಾನ, ಮತಾಂತರ ನಿಷೇಧವನ್ನು ಪುರಸ್ಕರಿಸಲು ಉಪಯೋಗವಾಗಿದೆ.  

ನೋಡಿ, ಬಾಲಗಂಗಾಧರರ ಒಂದು ವಾದ ಹೀಗಿದೆ: `ತನ್ನ ಓರಿಯಂಟಲಿಸ್ಟ್ ಚೌಕಟ್ಟುಗಳ ಮೂಲಕ ಪಶ್ಚಿಮವು ಹಿಂದೂ ರಿಲಿಜನ್ ಬಗ್ಗೆ, ಸಂಪ್ರದಾಯಗಳ ಬಗ್ಗೆ ಎತ್ತುವ ಪ್ರಶ್ನೆಗಳ ಬಗ್ಗೆ ನಾವು ಉತ್ತರಗಳನ್ನು ಕೊಡಬೇಕೆ? ಇಲ್ಲ. ಬದಲಾಗಿ ಆ ಪ್ರಶ್ನೆಗಳನ್ನು ಪಶ್ಚಿಮವು ಯಾಕೆ ಕೇಳಿದೆ ಎನ್ನುವುದರ ಮೂಲಕ ಪಶ್ಚಿಮ ನಾಗರಿಕತೆಯನ್ನೇ ಅರ್ಥಮಾಡಿಕೊಳ್ಳಬಹುದಾಗಿದೆ' ಎಂದು ವಾದಿಸುತ್ತಾರೆ. ಒಟ್ಟು ಸಂವಾದದ ಬಗ್ಗೆ ನನ್ನ ಅಭಿಪ್ರಾಯವನ್ನು ಹೀಗೆ ಕ್ರೋಡೀಕರಿಸುತ್ತೇನೆ: ಸಂಶೋಧನೆಯಾಗಿ ಈ ಪ್ರಬಂಧವು ಈವರೆಗೆ ಕನ್ನಡ ವಲಯದಲ್ಲಿ ಚರ್ಚೆಗೆ ಬಾರದ ಯಾವುದೇ ಚಾರಿತ್ರಿಕ, ಆರ್ಕೈವಲ್ ಸಂಗತಿಗಳನ್ನು ಚರ್ಚೆಗೆ ತಂದಿದೆಯೇ? ಇಲ್ಲ. ಯಾವುದೇ ವಚನಗಳ ಸಮರ್ಥನೀಯವಾದ ಅಥವಾ ಹೊಸದಾದ ಓದನ್ನು ಎದುರಿಗಿಟ್ಟಿದೆಯೇ? ಇಲ್ಲ.
ವಚನಗಳನ್ನು ಓದುವ, ಅರ್ಥೈಸುವ ಹೊಸ ವಿಧಾನವೊಂದನ್ನು ನಮ್ಮೆದುರಿಗೆ ತಂದಿದೆಯೇ? ಇಲ್ಲ, ಹೊಸದಾದ ವೈಚಾರಿಕ ಚೌಕಟ್ಟನ್ನು ಶೋಧಿಸಿದೆಯೇ? ಇಲ್ಲ, ಅದು ಬಾಲಗಂಗಾಧರರು ಮುಂದಿಟ್ಟಿರುವ ಚೌಕಟ್ಟುಗಳನ್ನು ಪ್ರಶ್ನಾತೀತವೆಂದು ಒಪ್ಪಿಕೊಂಡು ವಚನಗಳ ಬಗ್ಗೆ ಒಂದು ಸರಳವೂ, ಅಸೂಕ್ಷ್ಮವೂ ಆದ ಪೂರ್ವನಿರ್ಧಾರಿತವಾದ ವಾದವನ್ನು ಇಟ್ಟು ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆಯಿಂದ ಸಮರ್ಥಿಸುತ್ತಾ   `ವಚನಕಾರರು ಜಾತಿವ್ಯವಸ್ಥೆಯ ಬಗ್ಗೆ ಏನನ್ನೂ ಹೇಳುವುದಿಲ್ಲ, ಅವರು ಕೇವಲ ಆಧ್ಯಾತ್ಮಿಕವಾದ ಚೌಕಟ್ಟಿನಲ್ಲಿ ಜಾತಿಯ ಬಗ್ಗೆ ಅಲ್ಲಲ್ಲಿ ಹೇಳಿಕೊಂಡಿದ್ದಾರಷ್ಟೇ'  ಎನ್ನುವ ಈ ಪ್ರಕಾರದ ಸಂಶೋಧನೆಯ ಬಗ್ಗೆ ಕನ್ನಡ ವಿದ್ವಾಂಸರು ಸಾರ್ವಜನಿಕ ಚರ್ಚೆ ನಡೆಸಬೇಕೆ?

ನನ್ನ ಅಭಿಪ್ರಾಯದಲ್ಲಿ ಇದು ಅವಶ್ಯಕವಲ್ಲ.  ಡಂಕಿನ್‌ರು ವಚನಗಳ ಬಗ್ಗೆ, ಬಾಲಗಂಗಾಧರರು ಸೆಕ್ಯೂಲರಿಸಂ, ರಿಲಿಜನ್ ಬಗ್ಗೆ, ಈ ಗುಂಪಿನ ಇತರರು ಬೌದ್ಧಧರ್ಮ, ಭಕ್ತಿ ಚಳವಳಿಗಳ ಬಗ್ಗೆ ಎತ್ತಿರುವ ಪ್ರಶ್ನೆಗಳಿಗೆ ನಾವು ಉತ್ತರಿಸಬೇಕೆ? ಇಲ್ಲ. ಈ ಎಲ್ಲಾ `ಸಂಶೋಧನೆಗಳ'  ಮೂಲಕ ಅವರು ಕಟ್ಟಿಕೊಡುತ್ತಿರುವ ವಿವರಣೆಗಳು ಪರಸ್ಪರ ಸಂಬಂಧಿತವಾಗಿವೆ.

ಇದರಿಂದ ಮೂಡುವ ಭಾರತೀಯ ಚರಿತ್ರೆಯ ತಿಳಿವಳಿಕೆ ಹೀಗಿರುತ್ತದೆ:  “ಬೌದ್ಧಧರ್ಮವಾಗಲೀ, ವಚನಕಾರರಾಗಲಿ ಬ್ರಾಹ್ಮಣ,  ವೈದಿಕ ಪುರೋಹಿತಶಾಹಿ, ಜಾತಿ ವ್ಯವಸ್ಥೆ ಇವುಗಳನ್ನು ವಿರೋಧಿಸಲಿಲ್ಲ, ಅವರು ಈ ಬಗೆಯ  `ಸಾಮಾಜಿಕ'  ಚೌಕಟ್ಟುಗಳನ್ನು ಹೊಂದಿರಲಿಲ್ಲ, ಅವರದು ಕೇವಲ ಆಧ್ಯಾತ್ಮಿಕವಾದ ಪರಂಪರೆ,   ಜಾತಿ ವ್ಯವಸ್ಥೆಯನ್ನು ಅನೈತಿಕವೆಂದು, ಅಸಮಾನತೆಯ ಆಧಾರವೆಂದು, ಅಮಾನುಷವೆಂದು ವಿವರಿಸುವ   ಪಶ್ಚಿಮ ನಾಗರೀಕತೆಯ ಲೋಕಗ್ರಹಿಕೆಯನ್ನೇ ವಸಾಹತುಶಾಹಿಯ ಮೂಲಕ ತಮ್ಮದಾಗಿಸಿಕೊಂಡ  ನಮ್ಮ ಆಧುನಿಕ ಚಿಂತಕರು   ಕ್ರಿಶ್ಚಿಯನ್ ಥಿಯಾಲಜಿ ಪ್ರೇರಿತ ವಸಾಹತುಶಾಹಿ ಪ್ರಜ್ಞೆಯನ್ನು ಅಭಿವ್ಯಕ್ತಿಸುತ್ತಿದ್ದಾರೆ, ಇಲ್ಲಿಯ ಸಮಾಜದ ವಾಸ್ತವವನ್ನಲ್ಲ,  ಜಾತಿವ್ಯವಸ್ಥೆಯು ಅನೈತಿಕ, ಅಸಮಾನ ಎನ್ನುವುದಕ್ಕೆ ಆಧಾರವಿಲ್ಲ. ನಮ್ಮಲ್ಲಿ ರಿಲಿಜನ್ ಇಲ್ಲ, ಸಂಪ್ರದಾಯಗಳು ಇವೆ, ಅವುಗಳು ಯಾಕಿವೆ ಎಂದರೆ ಅವನ್ನು ನಮಗೆ ನಮ್ಮ ಹಿರಿಯರು ಬಿಟ್ಟುಹೋಗಿದ್ದಾರೆ, ಇದರ ಹೊರತಾದ ಯಾವ ಸಮರ್ಥನೆಯನ್ನೂ ನಾವು ಕೊಡಬೇಕಾಗಿಲ್ಲ” ಎಂಬಲ್ಲಿಗೆ ಬಂದು ನಿಲ್ಲುತ್ತದೆ.

ಬಾಲು ಗುಂಪಿನ ಈ ತೀರ್ಮಾನಗಳು ಯಾವ ಸಂದರ್ಭದ ಬೌದ್ಧಿಕ ಅವಶ್ಯಕತೆಗಳನ್ನು ಪೂರೈಸುತ್ತವೆ? ಅವರ ವಾದಗಳು ಒಟ್ಟಾರೆಯಾಗಿ ಸೆಮೆಟಿಕ್ ರಿಲಿಜನ್‌ಗಳ ಬಗ್ಗೆ, ಕ್ರಿಶ್ಚಿಯನ್ ಥಿಯಾಲಜಿಯ ಬಗ್ಗೆ ಹಾಗೂ ಜಾತಿ ವ್ಯವಸ್ಥೆ ಇಲ್ಲದ ಭಾರತದ ಚರಿತ್ರೆಯ ಪರಿಕಲ್ಪನೆ ಯಾವ ಸಂದರ್ಭದ ಅಪೇಕ್ಷೆ ಹಾಗೂ ಸ್ವ-ವಿವರಣೆಯಾಗಿದೆ? ಬಾಲಗಂಗಾಧರರು ಸ್ಪಷ್ಟಪಡಿಸುವಂತೆ ಹಾಗೂ ನಿರಂತರವಾಗಿ ಅವರು ಇಂಟರ್‌ನೆಟ್ ಮೂಲಕ ನಡೆಸುತ್ತಿರುವ ಚರ್ಚೆಗಳು ಸ್ಪಷ್ಟಪಡಿಸುವ ಹಾಗೆ ಅವರ ಸಂಶೋಧನಾ ಯೋಜನೆಗಳು ಬಲಪಂಥೀಯ ಅನಿವಾಸಿ ಭಾರತೀಯ ಸಮುದಾಯದ ಬೌದ್ಧಿಕ ಅವಶ್ಯಕತೆಯನ್ನು ಪೂರೈಸುತ್ತವೆ. ಈ ಸಮುದಾಯದ ಸ್ವ-ವಿವರಣೆಯಾಗಿ, ಅದು ಭಾರತವನ್ನು ಕಲ್ಪಿಸಿಕೊಳ್ಳಲು ಇಚ್ಛಿಸುವ ಮಾದರಿಯಾಗಿ ಅವರ ಸಂಶೋಧನಾ ಯೋಜನೆಗಳನ್ನು ನಾವು ನೋಡಬೇಕಾಗಿದೆ. ಅವರ ಜೊತೆಗೆ ನಾವು ಜಾತಿವ್ಯವಸ್ಥೆ ಇದೆಯೆಂದು ಹೋರಾಡುವುದು ಮೂರ್ಖತನವಾಗುತ್ತದೆ. 

ವೈಜ್ಞಾನಿಕವಲ್ಲದ, ಹಾಗೂ  ಯಾವುದೇ ಚಾರಿತ್ರಿಕ ಸತ್ಯವನ್ನು ವಿವರಿಸದ ಬಾಲಗಂಗಾಧರರ ವಾದಗಳು ಈ ಸಮುದಾಯಕ್ಕೆ ಯಾಕೆ ಅಪ್ಯಾಯಮಾನವಾಗಿ ಕಾಣುತ್ತವೆಯೆನ್ನುವುದನ್ನು ಕೇಳಿಕೊಳ್ಳಬೇಕು.  ಕ್ರಿಶ್ಚಿಯನ್ ಥಿಯಾಲಜಿಯ ಬಗೆಗಿನ ಅಸಂಭಾವ್ಯವಾದ ಒಂದು ಮೆಟಾ ನ್ಯಾರೇಟಿವ್ ಮೂಲಕ ವಚನ, ಜಾತಿ, ಸೆಕ್ಯೂಲರಿಸಂ, ಇವೆಲ್ಲವನ್ನೂ ನಾನು ಹೇಳಿದ ಸಮುದಾಯದ ಅಪೇಕ್ಷೆಗಳಿಗೆ ಒಗ್ಗುವಂತೆ ವಿವರಿಸುತ್ತವೆ. ಸದಾನಂದರು ಹೇಳುತ್ತಿರುವುದು ಈ  `ಆಂತರ್ಯ'ವನ್ನು ಯಾರೂ ಪರೀಕ್ಷಿಸಬಾರದು ಅಂತ. ಆದರೆ, ವಿಕಿಪೀಡಿಯಾದಲ್ಲಿ ಲಭ್ಯವಿರುವ ಮಾಹಿತಿಯಲ್ಲಿ ನಮೂದಿತವಾಗಿರುವಂತೆ ಬಾಲಗಂಗಾಧರರು ವಿಶ್ವ ಹಿಂದೂ ಪರಿಷತ್ತಿನ ಅಂಗಸಂಸ್ಥೆಗಳಾದ ಎಜುಕೇಟರ್ಸ್‌ ಸೊಸೈಟಿ ಫಾರ್ ಹೆರಿಟೇಜ್ ಆಫ್ ಇಂಡಿಯಾ, ಹಿಂದೂ ಸ್ಟೂಡೆಂಟ್ಸ್ ಕೌನ್ಸಿಲ್  ಜತೆ ವೇದಿಕೆ ಹಂಚಿಕೊಂಡಿರುವ ಬುದ್ಧಿಜೀವಿಯಾಗಿದ್ದಾರೆ

ಗೂಗಲ್ ಮೂಲಕ ಯಾರಾದರೂ ಅಕ್ಸೆಸ್ ಮಾಡಬಹುದಾದಂತೆ ಅವರು ಇಂಡಿಯಾ ರಕ್ಷಕ್, ಕನ್ಸಾರ್ಷಿಯಮ್ ಆಫ್ ವೆಬ್‌ಸೈಟ್ಸ್  ಎನ್ನುವ ತಾಣದಲ್ಲಿ ಅತ್ಯಂತ ಸೌಹಾರ್ದಯುತವಾಗಿ ಈ ಸಮುದಾಯದ ಸದಸ್ಯರೊಂದಿಗೆ ಚರ್ಚೆ ಮಾಡಿದ್ದಾರೆ. ಈ ಸಮುದಾಯದ ಸದಸ್ಯರು ಬಾಲಗಂಗಾಧರರ   ಸುದೀರ್ಘ  ಇ- ಕಮೆಂಟ್ಸ್ ಗಳಿಗೆ ಮೆಚ್ಚುಗೆ ಸೂಚಿಸಿ ಆನಂತರ ಮುಸ್ಲಿಮರ ವಿರುದ್ಧ ತಮ್ಮ ಪೂರ್ವಗ್ರಹಗಳನ್ನು ಕಾರಿಕೊಳ್ಳುತ್ತಾರೆ. ಶತಾವಧಾನಿ ಆರ್ ಗಣೇಶ್ ಅವರೊಂದಿಗೆ ನಡೆಸುವ ಸಂದರ್ಶನದಲ್ಲಿ  ವಿಶ್ವಹಿಂದೂ ಪರಿಷತ್ ಹಾಗೂ ಇತರ ಬಲಪಂಥೀಯ ಸಂಸ್ಥೆಗಳ ನಾಯಕರುಗಳಿಗೆ ನೀವೂ ನಿಮ್ಮದೇ ಆದ ಬುದ್ಧಿಜೀವಿಗಳನ್ನು ಹೊಂದಿರಬೇಕಲ್ಲವೇ ಎಂದು ಕೇಳಿದ್ದನ್ನು ಮತ್ತು ಅವರು ನಮಗೆ ಬುದ್ಧಿಜೀವಿಗಳು ಅವಶ್ಯಕವಲ್ಲ ಎಂದಿದ್ದನ್ನು ಚರ್ಚಿಸುತ್ತಾರೆ. ಅಲ್ಲದೇ  ಭಗವದ್ಗೀತೆಯ ` ಯದಾಯದಾಹಿ ` ಭಾಗವು ನೀಡಿದ ದಿವ್ಯ ಅನುಭವದ ಬಗ್ಗೆ ಭಾವುಕರಾಗಿ ಬರೆಯುತ್ತಾರೆ. ಆದರೆ, ಕನ್ನಡ ಬುದ್ಧಿಜೀವಿಗಳ ಬಗ್ಗೆ, ಭಾರತೀಯ ಬುದ್ಧಿಜೀವಿಗಳ ಬಗ್ಗೆ ರೌಡಿಗಳಂತೆ  ರೇಗಾಡುತ್ತಾರೆ, ಇರಲಿ.  

ಬಾಲಗಂಗಾಧರರ  ಚಿಂತನೆ ಹಾಗೂ ಬರಹಗಳೂ ಬಲಪಂಥೀಯ ಅನಿವಾಸಿ ಭಾರತೀಯ ಸಮುದಾಯದ ಬೌದ್ಧಿಕ ಅವಶ್ಯಕತೆಗಳನ್ನು ಪೂರೈಸುತ್ತದೆ ಎನ್ನುವುದು ನನ್ನ ವಾದವಾಗಿದೆ.      ಬಾಲಗಂಗಾಧರರಿಗೆ ತಾವೇನು ಎಂಬ ಸ್ಪಷ್ಟತೆ ಇದೆ. ಸಂಕಷ್ಟವಿರುವುದು ಕನ್ನಡ ಬುದ್ಧಿಜೀವಿಗಳ ನಡುವೆಯೇ ಸಂಬಳಪಡೆಯಬೇಕಾದ ಅವರ ಗಿಂಡಿಮಾಣಿಗಳಿಗೆ. ಇಂಥ ಒಂದು ಸಂಶೋಧನಾ ಯೋಜನೆ, ಅದರ ಹಿಂದಿನ ವೈಚಾರಿಕತೆಯ ರಾಜಕೀಯದ ಬಗ್ಗೆ ನನಗೆ ಅನುಮಾನವಿದೆ. ಥಿಯರಿ ಮತ್ತು ಎಥಿಕ್ಸ್ ನ ನಡುವಣ ಸಂಬಂಧದ ಬಗ್ಗೆ ನೂರಾರು ಚರ್ಚೆಗಳಿವೆ. ಅವುಗಳಲ್ಲಿ ನನ್ನ ಆಯ್ಕೆಯೆಂದರೆ ಒಂದು ಥಿಯರಿಯನ್ನು ಒಪ್ಪಬೇಕಾದರೆ ಅದರ ಎಥಿಕಲ್ ಆಯಾಮವೂ ಮುಖ್ಯ; ಕೇವಲ ಥಿಯರಿಯ ಆಂತರಿಕ ಸುಸಂಬದ್ಧತೆ ಅಲ್ಲ. ಈ ಕಾರಣಕ್ಕಾಗಿಯೂ ಬಾಲಗಂಗಾಧರ ಡಂಕಿನ್ ಮುಂತಾದವರ ಬರಹಗಳು ಅಪ್ರಸ್ತುತವಾಗಿ ಕಾಣುತ್ತವೆ. 
(ದೀರ್ಘ ಲೇಖನದಿಂದ ಆಯ್ಕೆ, ಸಂಗ್ರಹ: ದೇವನೂರ ಮಹಾದೇವ)
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಕಾಮೆಂಟ್‌ಗಳಿಲ್ಲ: