ಮಂಗಳವಾರ, ಮೇ 7, 2013

ಕಂದೆಲುಗು ನೆಲೆದ ಅಪರೂಪದ ಕಲೆ- ಕೋನಂಗಿ ಕಲೆ

- ಡಾ. ಜಿ.ಶ್ರೀನಿವಾಸಯ್ಯ. 

http://srinivasaiah.blogspot.in

          ಮಾನವ ಜನಾಂಗ ಯಾವ ಕಾಲಕ್ಕೂ ಪ್ರಾಕೃತಿಕ ಸ್ತರ, ನಾಗರಿಕ ಸ್ತರಗಳಲ್ಲಿ ಬದುಕು ನಡೆಸುತ್ತದೆ. ಇವುಗಳಲ್ಲಿ ಒಂದು ನಿಸರ್ಗ ನಿಯಂತ್ರಣವಾದರೆ, ಇನ್ನೊಂದು ನಗರ ನಿಯಂತ್ರಣವಾದುದು. ನಗರ ನಿಯಂತ್ರಿತ ಜನಾಂಗಕ್ಕಿಂತ ನಿಸರ್ಗ ನಿಯಂತ್ರಿತ ಜನಾಂಗದಲ್ಲಿ ಪ್ರಾಕೃತಿಕ ಪ್ರಜ್ಞೆಗಳು ದಟ್ಟವಾಗಿ ನೆಲೆ ನಿಂತಿರುತ್ತವೆ. ಇಂತಹ ಜನಾಂಗವೆ ಜನಪದ ಇಂತಹ ಜನಾಂಗದ ಮಧ್ಯೆ ಹುಟ್ಟುವುದೇ ಜನಪದ ಕಲೆಗಳು. ಇವು ಅಲ್ಲೇ ಹುಟ್ಟಿ ಅಲ್ಲೇ ಬೆಳೆಯುವಂತಹವು.
              ಮಾನವನು ಹುಟ್ಟುತಃ ಸೃಜನಶೀಲ ವ್ಯಕ್ತಿಯಾಗಿರುತ್ತಾನೆ. ಅವನು ಯಾವುದಾದರೂ ಒಂದು ಕಲೆಯಲ್ಲಿ ಅಥವಾ ಹಲವು ಕಲೆಗಳಲ್ಲಿ ಪರಣಿತಿಯನ್ನು ಪಡೆದಿರಬಹುದು. ಮಾನವನಲ್ಲಿ ಎಲ್ಲಿಯ ತನಕ ಸೃಜನಶೀಲ ಶಕ್ತಿ ಮತ್ತು ತನ್ನ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಅಭಿರುಚಿ ,ಆಸಕ್ತಿಯನ್ನು ಪಡೆದಿರುವನೋ ಅಲ್ಲಿಯ ತನಕ ಕಲೆ ಒಂದಲ್ಲ ಒಂದು ರೀತಿಯಲ್ಲಿ ಪ್ರಕಟಗೊಳ್ಳುತ್ತಲೇ ಇರುತ್ತದೆ.
                                                           
                                                                                    
           ಜನಪದ ಕಲೆಗಳ ಉಗಮಕ್ಕೆ ಹಲವಾರು ಕಾರಣಗಳಿರಬಹುದು. ಪ್ರಾಕೃತಿಕ ಅಗೋಚರ ಶಕ್ತಿಗಳನ್ನು ತೃಪ್ತಿ ಪಡಿಸಲು ಮಾನವ ಪ್ರಕೃತಿ ಶಕ್ತಿಗಳನ್ನು ಪೂಜಿಸಿದ. ಅಲ್ಲದೆ ಕೆಲವು ವೇಳೆ ಆ ಶಕ್ತಿಯ ವೇಷವನ್ನು ಹಾಕಿ ಕುಣಿದ, ಹಾಡಿದ, ತನ್ನನ್ನು ರಕ್ಷಿಸುವಂತೆ ಬೇಡಿದ .ಈ ಬೇಡಿದ ಪದಗಳೇ ಜನಪದ ಸಾಹಿತ್ಯವಾಯಿತು. ಅವನು ಹಾಡಿದ್ದೆ ಸಂಗೀತವಾಯಿತು. ನಾವು ಯಾವುದೇ ಕಲೆಗಳನ್ನು ಗಮನಿಸಿದರು,ಅದರಲ್ಲಿ ಹಾಡು,ಕುಣಿತ ಮತ್ತು ಸಾಹಿತ್ಯವುರುವುದನ್ನು ಕಾಣಬಹುದು. ನಂತರದ ಕಾಲಘಟ್ಟದಲ್ಲಿ ಹೊಸ ಬಗೆಯ ಅಭಿನಯಗಳು ಸೇರಿ ಕಲಾ ಪರಿವರ್ತನೆಗೊಳಪಟ್ಟು ಪರಿಪಕ್ವ ಕಲಾರೂಪಗಳಾಗಿ ಮಾಪರ್ಾಟು ಹೊಂದಿದವು. ಈ ಮೇಲಿನ ಲಕ್ಷಣಗಳನ್ನು ಗಮನಿಸಿದರೇ ಕಲೆಗಳು ಧಾಮರ್ಿಕ ಹಿನ್ನಲೆಯಲ್ಲೇ ಬೆಳೆದು ಬಂದಿರುವುವೆಂಬುದನ್ನು ಒಪ್ಪಲೇಬೇಕಾಗುತ್ತದೆ.
               ಗೀತೆ, ವಾದ್ಯ ಮತ್ತು ನೃತ್ಯ ಪ್ರಧಾನವಾದ ವಿಶಿಷ್ಟ ಕಲೆಗಳು ಒಂದೇ ಕಲೆಯಲ್ಲಿ ಏಕೀಭವಿಸುವ ಅಪರೂಪದ ಕಲೆಗಳು ಕೋಲಾರ ಜಿಲ್ಲೆಯಲ್ಲಿ ಲಭ್ಯವಾಗುತ್ತವೆ. ಅವುಗಳಲ್ಲಿ ಕೋನಂಗಿ ಕಲೆಯು ಒಂದು ವಿಶಿಷ್ಟ ಕಲಾ ಪ್ರಕಾರವಾಗಿದೆ. ಇಲ್ಲಿ ಬಳಸುವ ವಾದ್ಯ ಪರಿಕರಗಳು ಅವರಾಡುವ ಹಾಡು. ಕುಣಿತ ಮುಂತಾದವುಗಳು ಜನಪದ ಸಾಹಿತ್ಯಕ್ಕೆ ಒಂದು ಹೊಸ ಸೇರ್ಪಡೆ ಎಂದರೆ ತಪ್ಪಾಗಲಾರದು.

ಕೋನಂಗಿ ಕಲೆ


              'ಕೋನಂಗಿ'ಎಂಬುದು 'ಕೋಡಂಗಿ' ಪದದಿಂದ ಉತ್ಪತ್ತಿಯಾಗಿದೆ. ಕೋಡಂಗಿ ಎಂದರೆ ಹಾಸ್ಯಗಾರ, ವಿದೂಷಕ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಆದರೆ ಕೋಲಾರದ ಪ್ರಾಂತ್ಯದ ಈ ಕಲೆಯಲ್ಲಿ ಹಾಸ್ಯದ ಜೊತೆಗೆ ವೀರಾವೇಶ, ಮೋಡಿ. ಹಾಡಿನ ಗತ್ತಿನೊಂದಿಗೆ ಪಾಳೇಗಾರನ ವೇಷವನ್ನೂ ಸಮೀಕರಿಸಿಕೊಂಡಿದೆ. ಪ್ರಾದೇಶಿಕ ಜಾನಪದ ವೀರನಾದ ಹರಪಿನಾಯಕನಹಳ್ಳಿ (ಮುಳಬಾಗಿಲು ತಾಲೂಕು) ಬಿಸ್ಸೇಗೌಡ ಮತ್ತು ಸುಣ್ಣಕಲ್ಲು ( ಶ್ರೀನಿವಾಸಪುರ ತಾಲೂಕು) ಓಬಳನಾಯ್ಡುವಿನ ವೀರಪ್ರತಾಪಗಳನ್ನು ಹಾಡುವ ಸಂದರ್ಭದಲ್ಲಿ ಸ್ವತಃ ಕಲಾವಿದನೇ ಆ ವೀರರಾಗುವ, ವೇಷ ಮತ್ತು ಪಾತ್ರದಲ್ಲಿ ತಲ್ಲೀಣಗೊಳ್ಳುವಿಕೆ ನಿಜವಾಗಿಯೂ ಆ ಕಲೆಗೆ ಒಂದು ಸೊಬಗನ್ನು ತಂದುಕೊಟ್ಟಿದೆ.
              ತಲೆಯ ಮೇಲೆ ಪಾಳೆಗಾರನ ಪೇಟ, ಕೋಟು, ಷರಾಯಿ, ಅದರ ಮೇಲೆ ಕೊರಳಿಗೆ ಸುತ್ತಿರುವ ಕೆಂಪು ವಸ್ತ್ರ, ಹಣೆಯಲ್ಲಿ ಮೂರು ನಾಮ, ಕೆಂಪೆರಿವ ಕಣ್ಣುಗಳು, ಹೆಗಲಿಗೆ ತಗಲಾಕಿರುವ ಬುವನಾಸಿ, ಭುಜದ ಮೇಲೆ ಬಿಳಿವಸ್ತ್ರ. ಕೈಗಳಲ್ಲಿ ಮರದ ಚಿಟಿಕೆಗಳು. ಕಾಲಿಗೆ ಕಟ್ಟುವ ಕಬ್ಬಿಣದ ಗುಂಡು, ಕಂಕಳಲ್ಲಿ ಕುದುರೆ ಕೋಲು. ಇಂತಷ್ಟು ಕೋನಂಗಿಯ ವೇಷಭೂಷಣಗಳು. ಇವನ್ನು ಧರಿಸಿ ಭಿಕ್ಷಾಟಣೆಗೆ ಹೊರಡುತ್ತಾನೆ. ಅಲ್ಲದೆ ಭಿಕಾಟನೆಗೆ ಹೊರಟಾಗ ಎದುರಾಗುವ ಮನೆಯ ಹೆಂಗಸರ ಬಗ್ಗೆ ಹಾಡುಗಟ್ಟಿ ಅವರ ತುಟಿಯಂಚುಗಳಲ್ಲಿ ಅರೆ ಕ್ಷಣದ ಹಾಸ್ಯದ ನಗುವನ್ನು ತರಿಸುತ್ತಿದ್ದ ಅಪರೂಪದ ಕಲಾವಿದ ಈ ಕೋನಂಗಿ ಹನುಮಪ್ಪ. ಅಂತಹ ತುಂಟ ಹಾಡು ಹೀಗಿದೆ.
ನನ್ಮೂಗ್ನೋಡು ಮೂಗಂದ್ವ ನೋಡು ಮುದ್ದು ಮಾವಾ
ನನ್ಮೂಗ್ತಕ್ಕ ಮುಕ್ರೆ ತಾರೋ ಮುದ್ದು ಮಾವಾ ||
ನಿನ್ಮೂಗ್ನೋಡ್ದೆ ಮೂಗಂದ್ವ ನೋಡ್ದೆ ಎಳೇ ಭಾಮೆ
ನಿನ್ಮೂಗ್ತಕ್ಕ ಮುಕ್ರೆ ತರ್ವೆ  ಮುದ್ದು ಜಾಣೆ ||
ನನ್ಕಿವಿಯ ನೋಡು ಕಿವಿಯಂದವ ನೋಡು ಮುದ್ದುಮಾವಾ
ನನ್ಕಿವಿಗೆ ತಕ್ಕ ವಾಲೆಗಳಿಲ್ಲ ಮುದ್ದುಮಾವಾ||
ನಿನ್ಕಿವಿ ಕಂಡೆ ಕಿವಿಯಂದವ ಕಂಡೆ ಓ ಭಾಮೆ
ನಿನ್ಕಿವಿಗೆ ತಕ್ಕ ವಾಲೆ ತರುವೆ ಓ ಭಾಮೆ||
ನನ್ಜಡೆಯ ನೋಡು ಜಡೆಯಂದವ ನೋಡು ಮುದ್ದುಮಾವಾ
ನನ್ಜಡೆಗೆ ತಕ್ಕ ಜಿಲೆಬಿಲ್ಲ್ಲೆಯಿಲ್ಲಾ ಮುದ್ದುಮಾವಾ ||
ನಿನ್ಜಡೆಯ ಕಂಡೆ ಜಡೆಯಂದವ ಕಂಡೆ ಓ ಭಾಮೆ
ನಿನ್ಜಡೆಗೆ ತಕ್ಕ ಬಿಲ್ಲೆಬಿಲ್ಲೆ ತರುವೆ ಓ ಭಾಮೆ||
ನನ್ಕೊರಳ ನೋಡು ಕೊರಳಂದವ ನೋಡು ಮುದ್ದುಮಾವಾ
ನನ್ಕೊರಳಿಗೆ ತಕ್ಕ ಸರವು ಇಲ್ಲ ಮುದ್ದುಮಾವಾ||
ನಿನ್ಕೊರಳ ಕಂಡೆ ಕೊರಳಂದವ ಕಂಡೆ ಓ ಭಾಮೆ
ನಿನ್ಕೊರಳಿಗೆ ತಕ್ಕ ಸರವ ತರುವೆ ಓ ಭಾಮೆ||
ನನ್ಕೈಯ್ಯ ನೋಡು ಕೈಯಂದವ ನೋಡು ಮುದ್ದುಮಾವಾ
ನನ್ಕೈಗೇ ತೊಡುವ ಬಳೆಗಳಿಲ್ಲ ಮುದ್ದುಮಾವಾ||
ನಿನ್ಕೈಯ್ಯ ಕಂಡೆ ಕೈಯಂದವ ಕಂಡೆ ಓ ಭಾಮೆ
ನಿನ್ಕೈಯ್ಯಿಗೆ ತಕ್ಕ ಬಳೆಗಳ ತರುವೆ ಓ ಭಾಮೆ||
ನನ್ಕಾಲು ನೋಡು ಕಾಲಂದವ ನೋಡು ಮುದ್ದುಮಾವಾ
ನನ್ಕಾಲಿಗೆ ತಕ್ಕ ಗೆಜ್ಜೆಗಳಿಲ್ಲ ಮುದ್ದುಮಾವಾ||
ನಿನ್ಕಾಲು ಕಂಡೆ ಕಾಲಂದವ ಕಂಡೆ ಓ ಭಾಮೆ
ನಿನ್ಕಾಲಿಗೆ ತಕ್ಕ ಗೆಜ್ಜೆ ತರುವೆ ಓ ಭಾಮೆ||
ನನ್ಸೊಂಟ ನೋಡು ಸೊಂಟಂದವ ನೋಡು ಮುದ್ದುಮಾವಾ
ನನ್ಸೊಂಟಕೆ ತಕ್ಕ ಡಾವು ಇಲ್ಲ ಮುದ್ದುಮಾವಾ||
ನಿನ್ಸೊಂಟ ಕಂಡೆ ಸೊಂಟಂದವ ಕಂಡೆ ಓ ಭಾಮೆ
ನಿನ್ಸೊಂಟಕೆ ತಕ್ಕ ಡಾವು ತರುವೆ ಓ ಭಾಮೆ||
ನನ್ಸೊಗಸು ನೋಡು ಸೊಗಸಂದವ ನೋಡು ಮುದ್ದುಮಾವಾ
ನನ್ಸೊಗಸಿಗೆ ತಕ್ಕ ಗಣ್ಣಾನಿನ್ನ ಮುದ್ದುಮಾವಾ ||
ನಿನ್ಸೊಗಸು ಕಂಡ ಸೊಗಸನ್ನು ಕಂಡೇ ಮುದ್ದು ಭಾಮೆ
ನಿನ್ಸೊಗಸಿಗೆ ತಕ್ಕಾ ಗಂಡೂ ನಾನೇ ನನ್ನ ಭಾಮೆ ||
              ಚಿಟಿಕೆಗಳನ್ನು ಬಾರಿಸುತ್ತಾ ತೇಟು ಪಾಳೇಗಾರನಂತೆ ತನ್ನ ಕುದುರೆ ಕೋಲಿನ ಮೇಲೆ ಕುಳಿತುಕೊಂಡು ಹೋಗುಂತೆ ಅಭಿನಯ ಮಾಡುತ್ತಾನೆ. ಗುಟರು ಹಾಕುವುದು ಎಲ್ಲವೂ ಪಾಳೆಗಾರನನ್ನು ನಮ್ಮ ಮುಂದಿರಿಸುತ್ತದೆ. ಹೀಗೆ ಅಭಿನಯ ಮಾಡುತ್ತಾ ತನ್ನ ಕಾಲಲ್ಲಿ ಕಟ್ಟಿದ ಗುಂಡನ್ನು ತಿರಿಗಿಸುತ್ತಾನೆ, ಅದರ ಹೊಡೆತವನ್ನು ತಪ್ಪಸಿಕೊಳ್ಳುತ್ತಾ ಹಾಡುತ್ತಾ ಕುಣಿಯುತ್ತಾ ರಂಜಿಸುವುದು ಇದರ ಲಕ್ಷಣ.
ಏಯ್ !! ಬೆರ್ಬೆರಳ್ಕುಂಗರ್ವಾ | ಬೆರ್ಬೆರಳ್ಕುಂಗುರ್ವಾ ||
ಎಲ್ಬೆರಳ್ಕುಂಗರ್ವಾ | ಹನ್ಮಂತ ಜಂಟೀಗ್ಳೂ ||
ಬಂಗ್ದಾರ್ದೋನಣ್ಣ | ಬಿಸನ್ನಾ ||
ವಜ್ರಾದ ಜನ್ವಾರ್ದೋನು | ಅವ್ನೂ
ವಜ್ರಾದ ಜನ್ವಾರ್ದೋನು || ಬಿಸ್ಸೇಗೌನ್ನೂ
ಮುತ್ತೀನ ಸರದಾವ್ನವನು ||
                 ಮುಳಬಾಗಿಲು ತಾಲೂಕು ಹರಪನಾಯಕನಹಳ್ಳಿಯ ಪಾಳೆಗಾರನಾದ ಬಿಸ್ಸೇಗೌಡನ ಸಾಹಸಗಾಥೆಯನ್ನು ತನ್ನ ಪ್ರಧಾನ ಕಥೆಯಾಗಿಸಿಕೊಂಡಿದ್ದಾನೆ. ಹತ್ತೊಂಭತ್ತನೆಯ ಶತಮಾನದಲ್ಲಿ ಇವನಿದ್ದನೆಂದು ಹೇಳುತ್ತಾರೆ. ಅವನು ಮೇಕೆಯನ್ನು ಮೇಯುಸುತ್ತಾ ಒಂದು ಉಡದ ಮರಿಯನ್ನು  ಹಾಲು ಹಾಕಿ ಮೇಯಿಸಿರುತ್ತಾನೆ. ಕಾಡಿನಲ್ಲಿದ್ದ ಒಬ್ಬ ಇರುಳಿಗನ ಸಹಾಯದಿಂದ ಅವನು ಪಾಳೆಗಾರನಾಗುತ್ತಾನೆ. ಅಲ್ಲದೆ ಆ ಇರುಳಿಗ ಮಹಾ ಮಂತ್ರವಾದಿಯಾಗಿದ್ದ. ಅವನು ಮಂತ್ರಿಸಿದ ತಾಯತವನ್ನು ಪಾಳೇಗಾರ ಬಿಸ್ಸೇಗೌಡನ ಬಲ ತೊಡೆ ಸೀಳಿ ಅದರಲ್ಲಿ ಅದನ್ನು ಜೋಡಿಸಿದ್ದ. ಒಂದು ಸಾರಿ ಹರಿನಾಯಕನಹಳ್ಳಿಯನ್ನು ನುಂಗಲು ಬಂದ ಒಂದು ಹೆಬ್ಬಾವನ್ನು ಗಮನಿಸಿ ಇರುಳಿಗ ಅದನ್ನು ಕಲ್ಲಾಗಿಸಿದನಂತೆ, ಇಂದಿಗೂ ಆ ಪ್ರಾಂತ್ಯದಲ್ಲಿ ಅದನ್ನು ಕಾಣಬಹುದು. ಅದನ್ನು 'ಪಾಮುಗುಂಡು'ಎಂದು ಸ್ಥಳಿಯರು ಕರೆಯುತ್ತಾರೆ.
                ಒಂದು ದಿನ ಒಬ್ಬ ;ಮಾಲ'(ಹೊಲೆಯರವಳು)ರವಳು ಸತ್ತ ದನದ ಮಾಂಶವನ್ನು ಮಕ್ಕರಿಗೆ ಹಾಕಿಕೊಂಡು ಅದರ ಮೇಲೆ 'ಸೂರಿಕತ್ತಿ'ಯನ್ನಿಟ್ಟುಕೊಂಡು ಗ್ರಾಮದ ಒಳಗೆ ಬರುತ್ತಿದ್ದಳಂತೆ. ಆಗ ಹದ್ದುಗಳು ಮಾಂಸವನ್ನು ಹಾರಿಸಲು ಬಂದರೆ ಆ ಕತ್ತಿ ಅವುಗಳನ್ನು ಓಡಿಸುತ್ತಿತ್ತಂತೆ. ಇದನ್ನು ಗಮನಿಸಿದ  ಬಿಸ್ಸೇಗೌಡ ಅದನ್ನು ಆಕೆಯಿಂದ ಪಡೆದು ತನ್ನ ಕತ್ತಿಯನ್ನಾಗಿ ಮಾಡಿಸಿದ. ಅವನು ಅನೇಕ ಪ್ರಜಾಸೇವಾ ಕಾರ್ಯಗಳನ್ನು ಮಾಡಿಸಿದನೆಂದು ಅವನ ರೂಪ ಮತ್ತು ಅವನ ದೌಲತ್ತು ಮುಂತಾದ ವಿವರಗಳುಳ್ಳ ಕಥನ ಕವಿತೆಯನ್ನು ಈ ಕೋನಂಗಿ ಹಾಡುತ್ತಾನೆ. ಇದು ಕೋಲಾರ ಜಿಲ್ಲೆಯಲ್ಲಿ ಅತ್ಯದ್ಬುತ ಜಾನಪದ ಕಥನ ಕವಿತೆಯಾಗಿದೆ.
ಏಯ್ ! ಮುಂದೇ ಮುನೇಗೌನ್ನೂ | ಮುಂದೇ ಮುನೇಗೌನ್ನೂ ||
ಹಿಂದೇ ಎಂಕ್ಟೇಗೌನ್ನೂ | ನಡ್ವೇ ನಂಜೇಗೌನ್ನೂ ||
ಎಲ್ಲಾರ್ಗೂ ಹಿರಿಯೋನು ಬಾಯಿ ಬೊಮ್ಮನ್ನಾ ||
ನನ್ರಿಯೇ ಪಾಳ್ಗಾರ್ನೇ | ಏಯ್ !!
ನನ್ರಿಯೇ ಬಿಸೇಗೌನ್ನಾ | ಅರೆರೇ !
ನನ್ರಿಯೇ ಎಂಗ್ಟೇಗೌನ್ನಾ ||
                 ಬಿಸ್ಸೇಗೌಡ ತನ್ನ ಸಹೋದರರಾದ ಮುನೇಗೌಡ, ವೆಂಕಟೇಗೌಡ ಮತ್ತು ಸಾಮಿನಿಗೌಡನೊಂದಿಗೆ ತಿರುಪತಿಯ ಬಳಿಯಿರುವ ಚಂದ್ರಗಿರಿ ಕೋಟೆಯನ್ನು ಕೊಳ್ಳೆ ಹೊಡೆಯಲು ತನ್ನ ಸೇನಾ ಸಮೂಹದೊಂದಿಗೆ ಹೊರಡುತ್ತಾನೆ. ಆದರೆ ಚಂದ್ರಗಿರಿಯ ರಾಜರು ಈ ವಿಷಯವನ್ನು ಅರಿತು ಕೋಟೆಯ ಬಾಗಿಲುಗಳನ್ನು ಮುಚ್ಚಿಸಿದರು. ಮತ್ತಿಗೆ ಹಾಕಿದ ಗೌಡ ಬಡಪೆಟ್ಟಿಗೆ ಬರುವವನಲ್ಲ. ಇವನು ಮೂರು ತಿಂಗಳು ಕಾದು ಕುಳಿತನು. ಆದರೆ ಕೋಟೆಯ ಬಾಗಿಲು ತೆಗೆಯುವ ಸೂಚನೆಗಳು ಕಾಣದಿದ್ದಾಗ ಅವನೊಂದು ಉಪಾಯವನ್ನು ಹೂಡಿದ. ತಾನು ಸತ್ತಂತೆ ಚಂದ್ರಗಿರಿಯ ರಾಜರುಗಳಿಗೆ ಸಾವಿನ ಸುದ್ಧೀಯನ್ನು  ಮುಟ್ಟಿಸಿ, ತನ್ನನ್ನು ಪಾಡಿಗಟ್ಟಿ (ಚಟ್ಟ)ಅದರ ಮೇಲೆ ಮಲಗಿಸಿ. ಕತ್ತಿಯನ್ನು ಮತ್ತು ಕುದುರೆಯನ್ನು ಪಕ್ಕದಲ್ಲಿ ನಿಲ್ಲಿಸಿಎಂದು ತಿಳಿಸಿದನು. ಅದರಂತೆ ವಿಷಯವನ್ನು ಮುಟ್ಟಿಸಿದರು. ಆಗ ಚಂದ್ರಗಿರಿ ಅರಸರುಎವುಡೋ ಪರಮಟ ದೇಸಿಮುನಿಂಕಾ ವಚ್ಚಿ ಕೋಟಕಿ ಮುತ್ತಗೇಸಿಂಡ್ಯಾ. ಪಾಪ್ಮು ಈ ಪೊದ್ದು ಸಚ್ಚಿಪೋಯಿಂಡಾಡಂಟಾ( ಯಾರೋ ಪಶ್ಷಿಮ ದೇಸದಿಂದ ಬಂದು ಕೋಟೆಗೆ ಮುತ್ತಿಗೆ ಹಾಕಿದ್ದ. ಪಾಪ ! ಈ ಹೊತ್ತು ಸತ್ತು ಹೋದನಂತೆ  ಎಂದು ಎಲ್ಲಾ ಬಾಗಿಲುಗಳನ್ನು ತೆರೆದರು. ಅವನನ್ನು ನೋಡಲು ಎಲ್ಲರೂ ಬಂದರು. ಆಗ ಚಟ್ಟದ ಮೇಲಿನಿಂದ ಜಿಗಿದ ಗೌಡು ಎಲ್ಲಾ ತಲೆಗಳನ್ನು ತರಿದು ಕೋಟೆಯನ್ನು ಕೊಳ್ಳೆ ಹೊಡೆದ. ಅವನು ಸಾಯಿಸಿ ತಂದ ಮುಕ್ಕುರ ( ಮೂಗುತಿ)ಗಳು ಮೂರು ಪುಟ್ಟಿ ಆಗಿದ್ದವಂತೆ. ಇಂದಿಗೂ ಮುಳಬಾಗಿಲು ಅಥವಾ ಕೋಲಾರ ಪ್ರಾಂತ್ಯದವರೆಂದು ಚಂದ್ರಗಿರಿಯಲ್ಲಿ ಹೇಳಿದರೆ, ಅವರಿ ಬೈಯುತ್ತಾರೆಂದು ಕೋನಂಗಿ ಕಥೆಯಲ್ಲಿ ಹೇಳುತ್ತಾನೆ.
ಏಯ್ !! ಮನ್ಗೊಂದ್ಬಾವೀಯೂ | ಮನ್ಗೊಂದ್ಬಾವೀಯೂ ||
ಬೀದ್ಯಾಗಾ ಕೋನೇರೂ | ಎಪ್ಪಾರ್ಬಾಗೀಲೂ ||
ಎಲ್ಲೋತೂ ಚಂದ್ರಗೀರೀ ಓಯನ್ನಾ ||
ಎತ್ತಕೋಯ್ತು ಚಂದ್ರಗಿರೀ ||
ಚಂದ್ರಗಿರಿಯಾಗಿರೋ ಘಟ್ಟೆಂಗ್ಟೇಸಾ||
ಘನವಾಯ್ತೂ ಚಂದ್ರಗಿರೀ ||
ಏಯ್!! ಗುಂಡ್ಗುಳ ಕಣಿವ್ಯಾಗ | ಗುಂಡ್ಗುಳ ಕಣಿವ್ಯಾಗ ||
ಗುಂಡ್ಗಳಾರೋವಾಗ | ಗುಂಡ್ಗಳುರ್ಳಾವಾಗೋ ||
ಕುದ್ರೇನಾ ದುಮ್ಕಿಸ್ಯಾನಾ | ಬಿಸೇಗೌನ್ನೂ ||
ಕ್ವಾಟೆಕ್ಕಿ ನರ್ಕಿಸ್ಯಾನಾ | ಅವ್ನೂ
ಕುದ್ರೆಕ್ಕಿ ದೌಡತ್ತಿದಾನಾ | ಬಿಸ್ಸೇಗೌನ್ನೂ ||
ಚಂದ್ರಗಿರಿ ಕೊಳ್ಳೇಯೊಡಿಸ್ಯಾನಾ ||
                         ತಾನು ಚಂದ್ರಿಗಿರಿ ಕೋಟೆ ಕೊಳ್ಳೆ ಹೊಡೆಯಲು ಹೋದಾಗ ಹರಪನಾಯಕನಹಳ್ಳಿಯ ಉಸ್ತುವಾರಿಯನ್ನು ತಾನೇ ಸಾಕಿ ಬೆಳೆಸಿದ ಅಲ್ಲಿಸಾಬ್ಗೆ ವಹಿಸಿ ಹೋಗಿರುತ್ತಾನೆ. ಆದರೆ ಅಲ್ಲಿಸಾಬಿ ತನ್ನ ದುರಾಕ್ರಮಣದಿಂದ ಪ್ರಜಾ ಮನ್ನಣೆಯನ್ನು ಕಳೆದುಕೊಂಡನು. ಆಗ ಬಿಸ್ಸೇಗೌಡ ಅಲ್ಲಿಸಾಬಿಯನ್ನು ಬೋಡಿಬಂಡೆಗೆ ಎಳೆದು ಕೊಚ್ಚಿ ಕೊಂದನೆಂದು ಕಥೆಯನ್ನು ಮುಂದುವರಿಸುತ್ತಾನೆ.
ಏಯ್ !! ಮುಳ್ವಾಗಿಲು ಪ್ಯಾಟ್ಯಾಗಾ | ಮುಳ್ವಾಗಿಲು ಪ್ಯಾಟ್ಯಾಗಾ||
ಮುನ್ಸೀಪು ಕೋರ್ಟ್ಯಾಗಾ |ಅಲ್ಲೀಸಾಬೀನಾ ತಂದು||
ಬೋಳ್ಬಂಡೇಗೆಳ್ದು | ಪಿಚ್ಚೀಲಾಗಿ ಸೀಳ್ಯಾನಾ ಬಿಸನ್ನೂ
ನನ್ರಿಯೇ ಪಾಳ್ಗಾರ್ನಾ | ಏಯ್!
ನನ್ರಿಯೇ ಬಿಸ್ಸೇಗೌನ್ನಾ |ಅರೆರೇ!!
ನನ್ರಿಯೇ ಎಂಗ್ಟೇಗೌನ್ನಾ||
                   ಇದು ಕೋಲಾರ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿರುವ ಒಬ್ಬ ಜನಪದ ವೀರ ಬಿಸ್ಸೇಗೌಡನ ಕತೆಯಾಗಿದೆ. ಅದನ್ನು ಕೋನಂಗಿ ತನ್ನ ಕಲೆಗೆ ಒಗ್ಗುವ ರೀತಿಯಲ್ಲಿ ಅದನ್ನು ಮಾರ್ಪಡಿಸಿಕೊಂಡು ಅದಕ್ಕೆ ಒಂದು ಹೊಸ ರೂಪವನ್ನು ಹೊಸ ಕಥನಕವಿತೆಯನ್ನು ಹೆಣೆಯುವ  ತಂತ್ರಗಾರಿಕೆಯನ್ನು ಇಲ್ಲಿ ಮೆರೆದಿದ್ದಾನೆ.
 ಇಂತಹ ಕಲೆಗೆ ಹೊಸ ರೂಪ ನೀಡಿದ ಹೊದಲಿಯ ಕೋನಂಗಿ ಹನುಮಪ್ಪ ಅವರಿಗೆ, ಕಥನಕವನಕ್ಕೆ ಮತ್ತು ಆತನ ಕೋನಂಗಿ ಕಲೆಗೆ ಜಾನಪದ  ಅಕಾಡೆಮಿ 2000 ವರ್ಷದ 'ಜಾನಪದ ಪ್ರಶಸ್ತಿ'ಯನ್ನು ನೀಡಿ ಗೌರವಿಸಿದೆ.
                                               
     ಕೋಲಾರ ಪರಿಸರ  ಆಂಧ್ರದ ಗಡಿಭಾಗವಾಗಿರದೆ ಎರಡೂ ಸಂಸ್ಕೃತಿಗಳ ಮಿಲನ ತಾಣ. ಇಲ್ಲಿ ತೆಲುಗು-ಕನ್ನಡ ಜನಪದ ಸಂಸ್ಕೃತಿಗಳ ಮೇಲೈಕೆಗೊಂಡ ಅನೇಕ ಜಾನಪದ ಕಲೆಗಳು ಸಿಗುತ್ತವೆ. ಆದರೆ ತೆಲುಗು ಎನ್ನುವ ಕಾರಣದಿಂದಲೋ ಅಥವಾ ತೆಲುಗನ್ನಡ ಭಾಷೆಯನ್ನುವ ಕಾರಣದಿಂದಲೋ ಇಲ್ಲಿನ ಕಲಾ-ಸಾಹಿತ್ಯಗಳ ಕಡೆ ವಿದ್ವಾಂಸರು ಗಮನ ನೀಡುತ್ತಿಲ್ಲವೆಂಬ ಕೊರಗು ಇದೆ. ಆದರೂ ಕೆಲವು ಜನಪದ ಕಲೆಗಳ ಶೋಧನೆ ನಡೆದಿದೆ. ಇಂದು ಅಸ್ಥಿತ್ವದಲ್ಲಿರುವ ಕೆಲವು ಅಪರೂಪದ ಜನಪದ ಕಲೆಗಳ ಕೊನೆಯ ಕೊಂಡಿಗಳು ಕಳಚಿಕೊಳ್ಳುವ ಮುನ್ನ ಅಂತಹ ಅಪರೂಪದ ಕಲೆಗಳ ಸಂಗ್ರಹ, ಪೋಷಣೆ ಮತ್ತು ಕಲಿಕಾಪ್ರೇರಣೆಯ ಅನಿವಾರ್ಯತೆಯಿದೆ.

ಕಾಮೆಂಟ್‌ಗಳಿಲ್ಲ: