ಗುರುವಾರ, ಮಾರ್ಚ್ 5, 2015

ಡಾ.ವಸು ಮಳಲಿ ಅವರ`ಕಳ್ಳು-ಬಳ್ಳಿ' ಪ್ರಜಾವಾಣಿ ಅಂಕಣ ಬರಹಗಳು-5


ಸೌಜನ್ಯ: ಪ್ರಜಾವಾಣಿ

ಪ್ರಜಾಪ್ರಭುತ್ವದಲ್ಲಿ ರಾಜತ್ವದ ಮೆರವಣಿಗೆ
Tue, 12/24/2013

ರಾಜ, ಮಹಾರಾಜ, ಉತ್ತರಾಧಿಕಾರಿ, ಯದುವಂಶ, ತಲಕಾಡಿನ ಶಾಪ, ಸಿಂಹಾಸನ, ಅಂಬಾರಿ ಇವೆಲ್ಲ ಕಳೆದ ವಾರ ಮಾಧ್ಯಮದ ಚರ್ಚೆಯ ರೋಚಕತೆಗೆ ಆಹಾರ­ವಾಗಿದ್ದವು. ಕನ್ನಡ ನಾಡು ಇನ್ನೂ ರಾಜತ್ವದ ಅಡಿಯಲ್ಲಿ ಬದುಕುತ್ತಿದೆಯೇ ಎಂಬ ಅನುಮಾನ ಹುಟ್ಟು ಹಾಕುವಂತಹ ಮಾತು ಮೇಲಿಂದ ಮೇಲೆ ಕೇಳುತ್ತಲೇ ಇತ್ತು. ಶ್ರೀಕಂಠದತ್ತ ನರಸಿಂಹ­ರಾಜ ಒಡೆಯರ ‘ನಿರ್ಗಮನ’ ಇದಕ್ಕೆ ಅವಕಾಶ ಕಲ್ಪಿಸಿತ್ತು.
೧೯೭೪ ರಲ್ಲಿ ಮೈಸೂರಿನ ಜಯ­ಚಾಮ­ರಾಜೇಂದ್ರ ಒಡೆಯರ್ ಮಹಾರಾಜರು ತೀರಿ­ಕೊಂಡರಂತೆ ಎಂದು ಕೇಳಿ ಹಳ್ಳಿಗಳಿಂದ ಅವರ ಪಾರ್ಥಿವ ಶರೀರವನ್ನು ನೋಡಲು ಚಾಮುಂಡಿ­ಬೆಟ್ಟದ ತಪ್ಪಲಿನ ಮಧುವನಕ್ಕೆ ಜನ ಬರ­ತೊಡ­ಗಿದರು. ಶ್ರೀಗಂಧದ ಕೊರಡನ್ನು ಒಟ್ಟಿ ದೇಹ­ವನ್ನು ಚಿತೆಗಿಟ್ಟು ಸಂಸ್ಕಾರದ ವಿಧಿಗಳನ್ನು ಮುಗಿ­ಸಿ­­ಕೊಂಡು ಕುಟುಂಬಸ್ಥರು ಮರಳಿ ಹೋಗಿದ್ದರೂ ಸಂಸ್ಕಾರಕ್ಕೆ ಅರ್ಧರಾತ್ರಿಯಲ್ಲಿ ಬಂದ ಹಳ್ಳಿ­ಯವರು ಅರ್ಧ ಬೆಂದ ದೇಹವನ್ನು ಕಂಡು ಮತ್ತೆ ಸೌದೆ­ಯನ್ನು ಒಟ್ಟಿ ಚಿತೆಯನ್ನು ಪೂರ್ಣ­ಗೊಳಿ­ಸಿದ್ದರು. ಇಂತಹ ನೆನಪುಗಳು ಜನರಲ್ಲಿ ಇನ್ನೂ ಉಳಿದಿವೆ.
ಆ ಹೊತ್ತಿಗೆ ಜನರಲ್ಲಿ  ಅನುಮಾನಾಸ್ಪದ ವದಂತಿ­ಗಳೂ ಹರಡಿದ್ದವು-. ಅವರ ಮಗನೇ ಅವರ ವಿರುದ್ಧ ಕೋರ್ಟ್‌ಗೆ ಹೋಗಿದ್ದರಂತೆ. ರಾಜರಿಗೆ ಸಮನ್ಸ್ ಬಂದಿತಂತೆ, ರಾಜನಾಗಿದ್ದೂ ಜನಸಾಮಾನ್ಯರಂತೆ ಕೋರ್ಟ್‌ಗೆ  ಹೋಗ­ಬೇಕಾಗಿ ಬಂದಿತು. ಆಘಾತಗೊಂಡ ಅವರು ಹಿಂದಿನ ದಿನ ವಿಷ ಸೇವಿಸಿದ್ದರಂತೆ. ಇಂತಹ ವದಂತಿಗಳನ್ನೂ, ಅರಮನೆ ಸುತ್ತಲ ದಂತಕಥೆ­ಗಳನ್ನೂ ಕೇಳುತ್ತಾ ಮೈಸೂರಿನಲ್ಲಿ ಬೆಳೆದವಳು ನಾನು. ಅಂತಿಮವಾಗಿ ಮೈಸೂರು ವಿಶ್ವ­ವಿದ್ಯಾಲಯದಲ್ಲಿ ಮೌಖಿಕ ಚರಿತ್ರೆಯನ್ನು ಆಧರಿಸಿ ಸಂಶೋಧನೆ ಮಾಡಬೇಕೆಂದು ನಿರ್ಧ­ರಿಸಿದಾಗ, ಪ್ರಾಯೋಗಿಕವಾಗಿ ಮೈಸೂರಿನ ಕಡೆಯ ಮಹಾರಾಜರನ್ನು ಅಧ್ಯಯನಕ್ಕೆ ಆರಿಸಿಕೊಂಡಿದ್ದೆ.
ಎಸ್. ನಿಜಲಿಂಗಪ್ಪ, ಅಜೀಜ್ ಸೇಠ್‌, ಬಿ.ಡಿ.ಜತ್ತಿ, ಅರಮನೆ ನಿಕಟವರ್ತಿಗಳನ್ನೂ ಒಳ­ಗೊಂಡಂತೆ ನೂರಾರು ಜನರನ್ನು ಸಂದರ್ಶಿಸಿದ್ದೆ. ಅವರು ಹೇಳುತ್ತಿದ್ದ ಮಾಹಿತಿಯನ್ನು ಟೇಪ್ ರೆಕಾರ್ಡರ್‌ನಲ್ಲಿ ದಾಖಲಿಸಿಕೊಳ್ಳುತ್ತಿದ್ದೆ. ಟೇಪ್ ರೆಕಾರ್ಡರ್ ಆನ್ ಮಾಡಿದ ಕೂಡಲೇ ಅರ­ಮನೆಯ ಸೇವೆಯಲ್ಲಿದ್ದವರೆಲ್ಲರೂ ಅಧಿಕೃತವಾಗಿ ಪ್ರಕಟಗೊಂಡಿದ್ದ ಜೀವನ ಚರಿತ್ರೆಯ ವರದಿ­ಯನ್ನು ನೀಡುತ್ತಿದ್ದರು. ಮಹಾರಾಜರು ಹುಟ್ಟಿ ಬೆಳೆದದ್ದು, ಓದಿದ ಶಾಲೆ ಕಾಲೇಜು, ಇಂತಹ ಪ್ರಕಟಿತ ಮಾಹಿತಿಯನ್ನಷ್ಟೇ ಕೊಡುತ್ತಿದ್ದರು.
ಟೇಪ್ ರೆಕಾರ್ಡರನ್ನು ಆರಿಸಿದ ನಂತರ, ಇದನ್ನೆಲ್ಲಾ ದಾಖಲಿಸಬೇಡಿ ಎಂದು ಹೇಳುತ್ತಾ, ಮಹಾರಾಜರ ವೈಯಕ್ತಿಕ ಬದುಕನ್ನು ಪಿಸುಮಾತಿನಲ್ಲಿ ಹೇಳುತ್ತಿದ್ದರು. ಹಾಗೆ ಹೇಳುವಾಗ ಅವರ ಸಾವು ಸಹಜವಾಗಿರಲಿಲ್ಲ,- ಅವರ ಮಗನೇ ಅವರ ವಿರುದ್ಧ ಕೋರ್ಟ್‌ಗೆ ಹೋಗಿದ್ದರಂತೆ. ಮಹಲನ್ನು ಹೋಟೆಲ್ ಮಾಡಲು ಹೊರಟಿದ್ದು  ತಂದೆಗೆ ಇಷ್ಟವಿರಲಿಲ್ಲ. ರಾಜರಿಗೆ ಸಮನ್ಸ್ ಬಂದಿತಂತೆ, ರಾಜನಾಗಿದ್ದೂ ಜನಸಾಮಾನ್ಯರಂತೆ ಕೋರ್ಟ್‌ಗೆ ಹೋಗ­ಬೇಕಾಗಿ ಬಂದು ಆಘಾತಗೊಂಡ ಅವರು ಹಿಂದಿನ ದಿನ ವಿಷ ಸೇವಿಸಿದ್ದರಂತೆ. ಇದೊಂದು ದುರಂತವೇ ಆಗಿತ್ತು. ಹೀಗೆ ಹೇಳಲು ಹಿಂಜ­ರಿ­ಯುತ್ತಿದ್ದ ಮತ್ತೊಂದು ವಿಷಯ, ಅವರು ರಚಿಸಿದ ಸಂಗೀತ ಕೃತಿಗಳು. ಅವರಿಗೆ ಸಂಗೀತ­ದಲ್ಲಿ ಆಸಕ್ತಿ ಇದ್ದದ್ದು ನಿಜ. ಅದರಲ್ಲೂ ಪಾಶ್ಚಿ­ಮಾತ್ಯ ಸಂಗೀತವನ್ನು ವಿಶೇಷವಾಗಿ ಕಲಿತಿದ್ದರು. ಯಾವುದೇ ಕಾಲದಲ್ಲೂ ನಡೆಯುವಂತೆ ಸಂಗೀತ ವಿದ್ವಾಂಸರು ರಾಜರ ಹೆಸರಿನಲ್ಲಿ ಕೃತಿಗಳನ್ನು ರಚನೆ ಮಾಡುತ್ತಿದ್ದರು.
ಇದರೆಲ್ಲದರ ಆಚೆಗೂ, ಮೈಸೂರು ಒಡೆಯರ ಬಗ್ಗೆ ಹೊಂದಿದ್ದ ಅಪಾರ ಗೌರವ­ದಿಂದಾಗಿ ಕರ್ನಾಟಕದ ಏಕೀಕರಣದ ಸಂದರ್ಭ­ದಲ್ಲಿ ಹಳೇ ಮೈಸೂರು ಪ್ರಾಂತ್ಯ ಪ್ರತ್ಯೇಕವಾಗಿ ಉಳಿಯಲು ಬಯಸಿತ್ತು. ಕಡೆಗೆ ಜಯಚಾಮ­ರಾಜೇಂದ್ರ ಒಡೆಯರ್ ರಾಜ ಪ್ರಮುಖ­ರಾದುದು ಜನರಿಗೊಂದು ಸಾಂತ್ವನದಂತಿತ್ತು. ರಾಜತ್ವದ ನೆನಪುಗಳಿಂದ ನಿಧಾನವಾಗಿ ದೂರ ಸರಿಯಲು ಇದು ಸಹಕಾರಿಯಾಗಿತ್ತು.
ಮೈಸೂರಿನಲ್ಲಿ ನಡೆದ ರಾಜತ್ವ, ರಾಷ್ಟ್ರೀಯ ತೆಯ ಸಂಘರ್ಷ ಕುತೂಹಲಕಾರಿ­ಯಾದುದು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನಪರವಾದ ಅಭಿವೃದ್ಧಿ ಕಾರ್ಯ­ಗಳಿಂದಾಗಿ ಜನರಿಗೂ, ರಾಷ್ಟ್ರೀಯ ನಾಯಕ­ರಿಗೂ ಅಪಾರ ಗೌರವವಿತ್ತು. ಅದೇ ಸೈದ್ಧಾಂತಿಕ ಬದ್ಧತೆಯಿಂದ ಹೋರಾಡುತ್ತಿದ್ದ ಮೈಸೂರು ಕಾಂಗ್ರೆಸ್, ಬ್ರಿಟಿಷ್ ವಿರುದ್ಧದ ಹೋರಾಟವನ್ನು ಕೈಗೆತ್ತಿಕೊಂಡಿತು. ಬ್ರಿಟಿಷರ ಅಡಿಯಲ್ಲಿ ಅಧಿ­ಕಾರ ನಿರ್ವಹಿಸುತ್ತಿದ್ದ ಮೈಸೂರು ಮಹಾರಾಜರ ವಿರುದ್ಧವೂ ಅವರ ಹೋರಾಟ ನಡೆದಿತ್ತು.
ಮೈಸೂರು ಪ್ರದೇಶದ ಜನ ‘ಡಬಲ್‌ಸ್ಲೇವರಿ’­ಯಲ್ಲಿ ನರಳುತ್ತಿದ್ದಾರೆ ಎಂದು ಮೈಸೂರು ಕಾಂಗ್ರೆಸ್‌ ಭಾವಿಸುತ್ತಿತ್ತು. ಬ್ರಿಟಿಷ್‌ ನೇರ ಆಳ್ವಿಕೆಯ ಪ್ರದೇಶಗಳಲ್ಲಿರುವ ಗುಲಾಮಗಿರಿ­ಗಿಂತ ರಾಜತ್ವದ ಅಡಿಯ ಪ್ರದೇಶಗಳಲ್ಲಿ ಇರುವ ಗುಲಾಮಗಿರಿ ಎರಡರಷ್ಟಿರುತ್ತದೆ ಎಂದೇ ಅವರು ಹೇಳುತ್ತಿದ್ದರು. ರಾಜತ್ವವನ್ನು ವಿರೋಧಿಸುತ್ತಾ ಮುಂದಿನ ಪ್ರಜಾಪ್ರಭುತ್ವದ ಕನಸು ಕಂಡಿದ್ದರು. ಅದೇ ಸಂದರ್ಭದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಗೌರವಿಸುತ್ತಿತ್ತು. ಗಾಂಧೀಜಿ ನಾಲ್ವಡಿ­ಯವರನ್ನು ‘ರಾಜರ್ಷಿ’ ಎಂದು ಸಂಬೋಧಿ­ಸುತ್ತಿದ್ದರು. ಭಾವುಕ ಕಾರಣಕ್ಕೆ ರಾಜರಿಗೆ ಗೌರವವೂ, ಸಿದ್ಧಾಂತದ ಕಾರಣಕ್ಕೆ ವಿರೋಧವೂ ವ್ಯಕ್ತವಾಗುತ್ತಿತ್ತು.
ಜಯಚಾಮರಾಜೇಂದ್ರ ಒಡೆಯರ್, ವಸಾಹ ತುಶಾಹಿಯ ಕಡೆಯ ಏಳು ವರ್ಷಗಳು ಸಿಂಹಾ ಸನದಲ್ಲಿದ್ದರು. ಆ ಹೊತ್ತಿಗೆ ಭಾರತ ಸ್ವಾತಂತ್ರ್ಯ ದೆಡೆಗೆ ಸಾಗುತ್ತಿತ್ತು. ಚೇಂಬರ್ಸ್ ಆಫ್‌ ಪ್ರಿನ್ಸ್‌ಸ್ (ಭಾರತ ರಾಜರ ಒಕ್ಕೂಟ) ಸಹ ರಾಜರ ಹಿತಾ ಸಕ್ತಿಗಳನ್ನು ಕಾಯ್ದುಕೊಳ್ಳುವ ಯೋಜನೆ­ಗಳನ್ನು ರೂಪಿಸುತ್ತಿತ್ತು. ಹಾಗೆ ಸ್ವಾತಂತ್ರ್ಯ ಘೋಷಣೆ ಯಾದ ಕೂಡಲೇ ಮೈಸೂರು, ಭಾರತ ಒಕ್ಕೂಟ ವನ್ನು ಸೇರದಿದ್ದಾಗ ಮೈಸೂರು ಕಾಂಗ್ರೆಸ್  ‘ಮೈಸೂರ್ ಚಲೊ’ ಸತ್ಯಾಗ್ರಹವನ್ನು ಆರಂಭಿ ಸಿತು. ಕೂಡಲೇ ಮಹಾರಾಜರು ಮೈಸೂರು ರಾಜ್ಯವನ್ನು ಒಕ್ಕೂಟಕ್ಕೆ ಬಿಟ್ಟುಕೊಟ್ಟರು. ಭಾರತ ಸರ್ಕಾರ ಒಡೆಯರ್‌ ಅವರನ್ನು ರಾಜ ಪ್ರಮುಖರಾಗಿ ಮುಂದುವರಿಸಲು ನಿರ್ಧರಿಸಿತ್ತು.
ಸಾಮ್ರಾಜ್ಯಶಾಹಿಯ ವಿರುದ್ಧದ ಹೋರಾಟ ಹದಿನೆಂಟನೆಯ ಶತಮಾನದಲ್ಲಿ ಆರಂಭ­ವಾಗಿತ್ತು. ಫ್ರಾನ್ಸ್‌ನಲ್ಲಿ ಆರಂಭಗೊಂಡ ಈ ಹೋರಾಟ, ಪ್ರಜಾಪ್ರಭುತ್ವದ ಕಡೆ ಚಿಂತಿಸು­ವಂತೆ ಮಾಡಿತು. ಹಾಗೇ ವಸಾಹತು ವಿರುದ್ಧದ ಹೋರಾಟದ ಜೊತೆಗೆ ಪ್ರಜಾ­ಪ್ರಭುತ್ವಕ್ಕಾಗಿ ಹೋರಾಟಗಳು ನಡೆಯುತ್ತಾ ಬಂದಿವೆ. ರಾಷ್ಟ್ರ, ಪ್ರಜಾಪ್ರಭುತ್ವದ ಕಲ್ಪನೆಗಳು ಮಹತ್ವವನ್ನು ಪಡೆದಂತೆ ರಾಜಶಾಹಿ, ಊಳಿಗಮಾನ್ಯ ಪದ್ಧತಿ ಇವೆಲ್ಲಾ ನಿವಾರಿಸಿಕೊಳ್ಳಲೇಬೇಕಾದ ವ್ಯವಸ್ಥೆಗಳೆನಿಸಿಕೊಂಡವು.
ಬ್ರಿಟಿಷರು, ಭಾರತೀಯ ರಾಜರನ್ನು ಸೋಲಿಸಿದಾಗ ಆ ರಾಜ್ಯಗಳನ್ನೆಲ್ಲಾ ಸುಲಭವಾಗಿ ಅವರ ನೇರ ಆಳ್ವಿಕೆಗೆ ಸೇರಿಸಿಕೊಳ್ಳಬಹುದಿತ್ತು. ಆದರೆ ಭಾರತೀಯನ ಭಾವಕೋಶದಲ್ಲಿ ಆಳವಾಗಿ ಬೇರೂರಿರುವ ರಾಜರ ಬೆಲೆಯನ್ನು ಕಂಡುಕೊಂಡ ಬ್ರಿಟಿಷರು ಅವರನ್ನು ಉಳಿಸಿ­ಕೊಂಡು ಅವರ ಮೂಲಕವೇ ಕಾರ್ಯ ಸಾಧಿಸಲು ನಿರ್ಧರಿಸಿದರು. ಅಧಿಕಾರವಿಲ್ಲದ ಜವಾಬ್ದಾರಿಯನ್ನು ಹೊರಿಸುವ ಅವರ ತಂತ್ರಗಾರಿಕೆಯು ಸೋತ ರಾಜರಿಗೂ, ಗೆದ್ದ ಬ್ರಿಟಿಷ­ರಿಗೂ ಸ್ವೀಕೃತವಾಗಿತ್ತು. ಬ್ರಿಟಿಷರ ಅಡಿಯಾಳಾ­ಗಿರುವುದನ್ನು ವಿರೋಧಿಸಿ ಕಡೆ ಗಳಿಗೆಯವರೆಗೂ ಹೋರಾಡಿದ ಟಿಪ್ಪುವನ್ನು ಇಲ್ಲಿ ನೆನೆಯ­ಬೇಕಾಗುತ್ತದೆ. ಹಾಗೂ ಹೀಗೂ ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೀತಿಯ ವಿರುದ್ಧವಾಗಿ ನಿಂತ ದೇಶಿ ರಾಜರು ೧೮೫೭ರವರೆಗೂ ಹೋರಾಟ ಮುಂದುವರಿಸಿದ್ದರು.
ಮೈಸೂರಿನಲ್ಲಿ ಟಿಪ್ಪುವಿನ ನಂತರ ಅಧಿಕಾರವನ್ನು ಒಡೆಯರಿಗೆ ಹಿಂತಿರುಗಿಸಿದರು. ಹೀಗೆ, ಪುನಃ ಆಳ್ವಿಕೆಗೆ ಬಂದ ಮೈಸೂರಿನ ಒಡೆಯರು ದಿವಾನರುಗಳ ನೆರವಿನೊಂದಿಗೆ ಬ್ರಿಟಿಷರಿಗೆ ಸಲ್ಲಿಸಬೇಕಾದ ಕೊಡುಗೆಯನ್ನು ಸಲ್ಲಿಸುತ್ತಾ ಅವರು ಹಾಕುವ ನಿಯಮಾವಳಿಗಳ ಅಡಿಯಲ್ಲಿ ರಾಜ್ಯಭಾರವನ್ನು ನಿಭಾಯಿಸಿದರು. ಈ ಎಲ್ಲಾ ಕಾರಣಗಳಿಂದಾಗಿ ಮೈಸೂರಿನಲ್ಲಿ ಸ್ವಾತಂತ್ರ್ಯ ಚಳವಳಿಯು ಬಿರುಸಿನಿಂದ ಸಾಗಲಿಲ್ಲ. ಆದರೂ  ಶಿವಪುರ, ವಿದುರಾಶ್ವತ್ಥ, ಈಸೂರು- ಈ ಸ್ಥಳಗಳು ರಾಜತ್ವದ ಸಂಕೇತಗಳನ್ನು ವಿರೋಧಿಸಿ ಮಾಡಿದ ಹೋರಾಟದ ತಾಣಗಳಾಗಿವೆ.
ಸಂದರ್ಭವೊಂದು ಒದಗಿ ಬಂದಾಗ ಕುವೆಂಪು ಅವರು ‘ವಸಂತವನದಲಿ ಹಾಡುವ ಕೋಗಿಲೆ ರಾಜನ ಬಿರುದನು ಬಯಸುವುದೇನು’  ಎಂದು ಕವನವನ್ನು ಬರೆದರು.
ಹಾಗೇ, ರಾಜತ್ವದ ಸಂಕೇತಗಳನ್ನು ತೀವ್ರವಾಗಿ ವಿರೋಧಿಸಿದವರಲ್ಲಿ ಕೆಂಗಲ್ ಹನುಮಂತಯ್ಯ ಪ್ರಮುಖರು. ಸ್ವಾತಂತ್ರ್ಯಾನಂತರ ದಸರಾ ಮೆರ­ವಣಿಗೆಯ ಅಂಬಾರಿಯಲ್ಲಿ ರಾಜರು ಹೋಗು­ವುದನ್ನು ಅವರು ವಿರೋಧಿಸಿದ್ದರು. ಅದರ ಬದಲಿಗೆ ಪ್ರಜಾ ಪ್ರತಿನಿಧಿಗಳು ಹೋಗ­ಬೇಕೆಂಬುದು ಅವರ ನಿಲುವಾಗಿತ್ತು. ಮುಂದೆ, ತಾಯಿ ಭುವನೇಶ್ವರಿಯ ಭಾವಚಿತ್ರವನ್ನು ಹೊತ್ತು ಸಾಗುವುದು ಆರಂಭವಾಯಿತು. ಇವೆಲ್ಲಾ ಕಾಲಕಾಲಕ್ಕಾದ ಬದಲಾವಣೆಗಳ ಸೂಚನೆಗಳಾಗಿವೆ.
ಈ ವಿಚಾರ ಶ್ರೀಕಂಠದತ್ತ ಒಡೆಯರ್‌ರವರ ಸಾವಿನ ನಂತರ ನಡೆದ ಚರ್ಚೆಗಳಲ್ಲಿ, ‘ಇನ್ನು ಮುಂದೆ ದಸರೆಯಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಆರಂಭಿಸುವವರು ಯಾರು? ಆಯುಧ ಪೂಜೆಯನ್ನು ಯಾರು ಮಾಡು­ತ್ತಾರೆ?’ ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿದ್ದರ ಹಿನ್ನೆಲೆಯಲ್ಲಿ ವಿವರಿಸಿಕೊಳ್ಳಬೇಕಾಗಿದೆ.
ಪ್ರಜಾಪ್ರಭುತ್ವದ ಅಡಿಯಲ್ಲಿ ಜನ ಸಾಮಾನ್ಯ­ನಾಗುವುದನ್ನು ಒಪ್ಪಿಕೊಳ್ಳಲಾಗದ ಮನಸ್ಥಿತಿ ಇಲ್ಲಿ ಹೆಜ್ಜೆ ಹೆಜ್ಜೆಗೂ ಕಾಣುತ್ತದೆ. ಸ್ವತಂತ್ರ ಭಾರತ­ದಲ್ಲಿ ರಾಜರಿಗೆ ಬಿಟ್ಟುಕೊಡಬೇಕಾದ ಆಸ್ತಿಯ ವಿಷಯದಲ್ಲಿ ಭಾರತ ಸರ್ಕಾರ ಬಹು ಉದಾರವಾಗಿಯೇ ನಡೆದುಕೊಂಡಿದೆ.
ಇದ್ದಕ್ಕಿ­ದ್ದಂತೆ ಜನಸಾಮಾನ್ಯನಾಗಿ ಬದುಕುವ ಸ್ಥಿತಿ ತಲೆದೋರದಂತೆ ರಾಜರಿಗೆ ಸ್ವಾತಂತ್ರ್ಯಾ­ನಂತರವೂ ‘ಪ್ರಿವಿ ಪರ್ಸ್‌’ (ರಾಜಧನ) ನಿಗದಿಪಡಿಸಿತು. ಹಲವು ಅರಮನೆಗಳನ್ನು, ಬಂಗಲೆಗಳನ್ನು, ಉಳುವ ಭೂಮಿಯನ್ನು ರಾಜವಂಶದ ಆಸ್ತಿಯಾಗಿ ಪರಿಗಣಿಸಿತು. ಆಸ್ತಿಯ ಮೇಲೆ ನಿರ್ಬಂಧವನ್ನು ಹೇರಿದಾಗ ಅದನ್ನೆಲ್ಲಾ ಉಳಿಸಿಕೊಳ್ಳುವುದು ರಾಜ­ವಂಶಸ್ಥರಿಗೆ ಸವಾಲೇ ಆಗಿತ್ತು. ಇದು ಮೈಸೂರಿನಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಇದ್ದ ಐನೂರಅರವತ್ತೆರಡು ರಾಜಮನೆತನಗಳೂ ಒಂದಲ್ಲಾ ಒಂದು ರೀತಿಯಲ್ಲಿ ಆಸ್ತಿಗಾಗಿ ಹೊಡೆದಾಡಿವೆ. ಅದರಲ್ಲೂ ಮೈಸೂರಿನಂತಹ ವಿಶಾಲ ರಾಜ್ಯಗಳಿಂದ ಬಂದಂತಹ ರಾಜ­ಮನೆತನ­ದವರಿಗೆ ಸಂಪತ್ತು ಮತ್ತಷ್ಟು ಕಾಡಿಸಿದೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರಿಗೆ ಹೀಗೆ ಬೆಂಗಳೂರು ಅರಮನೆ ಅಲ್ಲದೇ ಮೈಸೂರಿನಲ್ಲೂ ಹಲವು ಕಡೆ ಆಸ್ತಿಯನ್ನು ಉಳಿಸಿಕೊಳ್ಳಲು ಒದ್ದಾಡಬೇಕಾಯಿತು. ರಾಜರ ವಂಶದಿಂದ ಬಂದವರೆಂಬ ಒಂದೇ ಕಾರಣಕ್ಕೆ ಖಾಸಗಿ ದರ್ಬಾರ್ ಎಂದು ರಾಜರ ಪೋಷಾಕಿನಲ್ಲಿ ಕಾಣಿಸಿಕೊಳ್ಳುವುದು, ರಾಜ ಲಾಂಛನಗಳನ್ನು ಮೆರೆಸುವುದು ಸಂವಿಧಾನದ ಅಡಿಯಲ್ಲಿ ಪ್ರಶ್ನಿಸುವ ವಿಚಾರವೇ ಆಗಿದೆ.
ರಷ್ಯಾ, ಚೀನಾ, ಫ್ರಾನ್ಸ್ ಅಂತಹ ರಾಷ್ಟ್ರಗಳು ರಾಜತ್ವದಿಂದ ಹೊರ ಬಂದಾಗ ರಾಜತ್ವವನ್ನು ಅಪರಾಧಿ ಮನೋಭಾವದಿಂದ ನೋಡ­ಲಾಯಿತು. ಭಾರತೀಯರಿಗೆ ವಸಾಹತು­ಶಾಹಿಯ ವಿರೋಧ ಬಹು ಮುಖ್ಯವಾಗಿದ್ದರಿಂದ ಮತ್ತು ರಾಜರುಗಳು ಅಧಿಕಾರವನ್ನು ಕಳೆದು­ಕೊಂಡು ದೈನ್ಯವಾಗಿ ನಡೆದು­ಕೊಳ್ಳುತ್ತಿದ್ದು­ದ­ರಿಂದ ರಾಜತ್ವದ ವಿರೋಧವೂ ತೀವ್ರವಾಗಿರಲಿಲ್ಲ.
ಭಾರತದ ಜಾತಿ ವ್ಯವಸ್ಥೆಯಲ್ಲಿ ಮೈಸೂರು ಒಡೆಯರ್ ಆಳುವ ಮನೆತನವಾದುದರಿಂದ ಅರಸು ಎಂಬ ಜಾತಿ ಸಮುದಾಯ ಹುಟ್ಟಿ ಬಂದಿದೆ. ಒಡೆಯರ್ ಆಳ್ವಿಕೆ ಕಾಲಕ್ಕೆ ಈ ಸಮುದಾಯದ ಕುಟುಂಬಗಳಿಗೆಲ್ಲಾ ಧನ ಸಹಾಯವನ್ನೂ, ವಿಶೇಷ ಸಂದರ್ಭಗಳಲ್ಲಿ ಗೌರವವನ್ನೂ ನೀಡಲಾಗುತ್ತಿತ್ತು. ಸಮು­ದಾಯದ ಶಿಕ್ಷಣಕ್ಕಾಗಿ ಅರಸು ಬೋರ್ಡಿಂಗ್ ಸ್ಕೂಲ್ ತೆರೆಯಲಾಯಿತು. ವೀರಶೈವರು ಹಾಗೂ ಉತ್ತರ ಭಾರತದ ಕ್ಷತ್ರಿಯರ ಜೊತೆಗೆ ವೈವಾಹಿಕ ಸಂಬಂಧಗಳನ್ನು ಹೊಂದಿದ್ದರೂ, ಅರಸು ಒಂದು ಅಲ್ಪಸಂಖ್ಯಾತ ಜಾತಿಯಾಗಿ ರೂಪಿತವಾಗಿದೆ. ಈ ನಿಟ್ಟಿನಲ್ಲಿ ಯೋಚಿಸಿದಾಗ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ಸಾವು ಸಮುದಾಯದ ರಾಜಕೀಯ ಪ್ರತಿನಿಧಿ ಯೊಬ್ಬರ ಕೊರತೆಯನ್ನು ಹುಟ್ಟುಹಾಕಿದೆ.
ಇನ್ನು ದಸರಾ ಮೆರವಣಿಗೆಯ ವಿಚಾರಕ್ಕೆ ಬಂದರೆ, ಸ್ವಾತಂತ್ರ್ಯಾನಂತರವೂ ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದೇವೆ. ರಾಜರು ತಾವು ಗೆದ್ದ ಯುದ್ಧಗಳ ವಿಜಯದ ಸಂಕೇತವಾಗಿ ಈ ಮೆರವಣಿಗೆಯನ್ನು ಮಾಡುತ್ತಿದ್ದರು. ವಿಜಯನಗರ ಸಾಮ್ರಾಟರ ಕೆಳಗೆ ಸಣ್ಣ ಪಾಳೆ­ಪಟ್ಟಾಗಿದ್ದ ಮೈಸೂರು, ವಿಜಯನಗರದ ಪತನಾನಂತರ  ದಸರಾ ಆಚರಣೆಯನ್ನು ಕೈಗೆತ್ತಿಕೊಂಡಿತು. ಮೈಸೂರು ಒಡೆಯರು ಅಧಿಕಾರ ಕಳೆದುಕೊಂಡು ಹೈದರ್ ಆಳ್ವಿಕೆ ನಡೆಸುತ್ತಿದ್ದ ಕಾಲಕ್ಕೂ ಈ ಮೆರವಣಿಗೆಗಳಲ್ಲಿ ಒಡೆಯರರನ್ನೇ ಕರೆದೊಯ್ಯಲಾಯಿತು.
ಹೈದರ್ ಅಧಿಕಾರಕ್ಕೆ ಬಂದಾಗಿನಿಂದ ಟಿಪ್ಪುವಿನ ಮರಣ­ದವರೆಗೆ ಯುದ್ಧಗಳನ್ನು ಗೆದ್ದು ರಾಜ್ಯವನ್ನು ವಿಸ್ತರಿಸಿದವರು ಹೈದರ್ ಮತ್ತು ಟಿಪ್ಪು. ಆ ನಂತರ ಬ್ರಿಟಿಷರ ಅಧೀನದಲ್ಲಿ ಆಳ್ವಿಕೆಗೆ ಬಂದವರು ಮೈಸೂರು ಒಡೆಯರು. ಹಾಗಾಗಿ ಸುಮಾರು ಇನ್ನೂರು ವರ್ಷಗಳ ಕಾಲ ಅವರು ಯಾವ ಯುದ್ಧವನ್ನೂ ಮಾಡಲಿಲ್ಲ. ಹಾಗಾ ದರೆ, ಮೆರವಣಿಗೆಗಳಲ್ಲಿ ಕೊಂಡೊ­ಯ್ಯುವ ತುಪಾಕಿಗಳಾಗಲೀ, ಯುದ್ಧದ ವಾದ್ಯಗಳಾಗಲೀ, ವಿಜಯ ಪತಾಕೆಗಳಾಗಲೀ ಯಾವುದರ ಸಂಕೇತ?
ನಿಮ್ಮ ಅನಿಸಿಕೆ ತಿಳಿಸಿ:


ಹಾಲಿವುಡ್ ಎಂಬ ಮಾಯಾಂಗನೆ
Tue, 12/10/2013 

ಅಮೆರಿಕ ದೇಶದ ಪಶ್ಚಿಮ ಕರಾವಳಿ­ಯಲ್ಲಿರುವ ರಾಜ್ಯ ಕ್ಯಾಲಿಫೋರ್ನಿಯಾ. ಅದೊಂದು ಮರುಭೂಮಿ ಪ್ರದೇಶ. ಒಂದು ಕಾಲಕ್ಕೆ ಚಿನ್ನವನ್ನು ಅರಸಿ ಹೋದ ಜನ ಅಲ್ಲೇ ನೆಲೆನಿಂತರು. ನಗರಗಳನ್ನು ಕಟ್ಟಿದರು. ಕ್ಯಾಲಿಫೋರ್ನಿಯಾದ ರಾಜಧಾನಿ ನಗರ ಹಾಗೂ ಜಿಲ್ಲೆ ಲಾಸ್ ಏಂಜಲಿಸ್‌. ಅಲ್ಲಿರು­ವುದು ಸಿನಿಮಾ ಲೋಕದ ಮೆಕ್ಕಾ ಎನಿಸಿ­ಕೊಳ್ಳುವ ಹಾಲಿವುಡ್. ಮರುಭೂಮಿ ಪ್ರದೇಶ­ದಲ್ಲಿ ಹಾಲಿವುಡ್ ಅಂತಹ ನಗರವೊಂದನ್ನು ನಿರ್ಮಿಸಿ ಜಗತ್ತನ್ನೇ ತನ್ನತ್ತ ಸೆಳೆಯುತ್ತಿರುವುದು ಚೋದ್ಯವೇ ಸರಿ.
ಸಿನಿಮಾ ಜಗತ್ತಿನ ಪ್ರತಿಷ್ಠೆಯ ಆಸ್ಕರ್ ಪ್ರಶಸ್ತಿಯನ್ನು ನೀಡುವುದು ಈ ನಗರದ ಗ್ಲ್ಯಾಮರ್ ಹೆಚ್ಚಲು ಕಾರಣವಾಗಿದೆ. ಒಂದು ಕಾಲಕ್ಕೆ ಚೀನೀಯರು ಕಟ್ಟಿದ ಚೈನೀಸ್ ಥಿಯೇಟರ್‌­ನಲ್ಲಿ ಆಸ್ಕರ್ ಪ್ರಶಸ್ತಿಗಳನ್ನು ಕೊಡಲಾಗುತ್ತಿತ್ತು. ಆ ನಂತರದಲ್ಲಿ ಪಕ್ಕದ ಕೊಡಾಕ್ ಥಿಯೇಟರ್‌ನಲ್ಲಿ ಕೊಡಲಾಗುತ್ತಿದೆ. ಹಾಗೇ ಸುತ್ತಾಡುತ್ತಾ ಹೋದರೆ ಚಾರ್ಲಿ ಚಾಪ್ಲಿನ್‌ನ ಸ್ಟುಡಿಯೊ. ಹೀಗೆ ಸಿನಿಮಾ ಉದ್ದಿಮೆಯ ಚರಿತ್ರೆಯೇ ಇಲ್ಲಿ ತೆರೆದುಕೊಳ್ಳುತ್ತದೆ.
ಯೂನಿವರ್ಸಲ್ ಸ್ಟುಡಿಯೊ ಒಂದು ನಗರವೇ ಆಗಿ ಬೆಳೆದು ನಿಂತಿದೆ. ಅದರ ಪಕ್ಕದಲ್ಲಿ ವಾರ್ನರ್ ಬ್ರದರ್ಸ್‌, ಅನತಿ ದೂರದಲ್ಲಿ ಗಗನ ಮುಟ್ಟುವ ವಾಲ್ಟ್‌ ಡಿಸ್ನಿ ಪ್ರಪಂಚ. ಹೀಗೆ ಉದ್ದಿಮೆಗೆ ಸಂಬಂಧಪಟ್ಟ ಎಲ್ಲಾ ರೀತಿಯ ಕಂಪೆನಿಗಳು ಇಲ್ಲಿವೆ.  ಸಿನಿಮಾ ತಯಾರಿಕೆಗಾಗಿ ಜಗತ್ತಿನ ಅತಿ ದೊಡ್ಡ ಮೊತ್ತದ ಬಂಡವಾಳ ಇಲ್ಲಿ ವಿನಿಯೋಗವಾಗುತ್ತದೆ. ಇಲ್ಲಿ ತಯಾರಾಗುವ ಸಿನಿಮಾಗಳಿಗೆ ಜಗತ್ತಿನ ಮಾರುಕಟ್ಟೆಯೇ ತೆರೆದಿರುತ್ತದೆ.
ಒಂದು ಸಿನಿಮಾ ಬಿಡುಗಡೆ­ಯಾದರೆ ಅದರ ಲಾಭ ಕಡೇಪಕ್ಷ ಮೂವತ್ತು ವರ್ಷಗಳ ಕಾಲವಾದರೂ ಬರುವಂತೆ ಯೋಜಿಸಲಾಗುತ್ತದೆ. ಹೀಗೆ ಯೋಜಿಸಿದ ಸಿನಿಮಾಗಳಿಗೆ ‘ಹಿ ಮ್ಯಾನ್’, ‘ಹ್ಯಾರಿ ಪಾಟರ್’ ಒಳ್ಳೆಯ ಉದಾಹರಣೆ.ಇಂತಹ ಬೃಹತ್ ಮಾರುಕಟ್ಟೆ ಇರುವ ಕಾರಣಕ್ಕೂ ಇಲ್ಲಿ ಸಿಗುವ ಯಾವುದೇ ರೀತಿಯ ಅವಕಾಶವನ್ನು ಪ್ರತಿಷ್ಠೆ ಎಂದು  ಪರಿಗಣಿಸಲಾಗುತ್ತದೆ.
ಇಲ್ಲಿನ ನಟಿಯರು, ಪಕ್ಕದ ಅಂಗಡಿಗೆ ಬ್ರೆಡ್ ತರಲು ಹೋಗುವಾಗಲೂ ಮೇಕಪ್, ತುಟಿ­ರಂಗು ಇರಲೇಬೇಕು.  ಇದು ಉತ್ಪ್ರೇಕ್ಷೆ ಅಲ್ಲ. ಯಾವುದೇ ಗಳಿಗೆಯಲ್ಲಿ ತಮ್ಮನ್ನು ಗಮನಿಸುವ ನಿರ್ದೇಶಕರಾಗಲೀ, ನಿರ್ಮಾಪಕರಾಗಲೀ, ಎದುರಾಗಬಹುದು ಎಂಬ ಕಾರಣಕ್ಕೆ ಅವರ ಗ್ಲ್ಯಾಮರ್‌ಗೆ ಕುಂದು ಬರದಂತೆ  ಸದಾ ಎಚ್ಚರ ವಹಿಸುತ್ತಾರೆ.
ಹಾಗೆಯೇ ಪತ್ರಿಕಾ ಛಾಯಾ­ಗ್ರಾಹಕರು ಕೂಡ. ಒದಗಿಬರಬಹುದಾದ ಸೆಲೆಬ್ರಿಟಿಗಳ ಆಕಸ್ಮಿಕ ಭೇಟಿಗಾಗಿ ಸದಾ ಕಾಯುತ್ತಿರುತ್ತಾರೆ. ವಿಶೇಷವಾದ, ವಿಚಿತ್ರವಾದ ಕಾರುಗಳು, ಅಲ್ಲಿ ಇಣುಕ ಬಹುದಾದ ತರಾವರಿ ನಾಯಿಮರಿಗಳು ಎಲ್ಲವೂ ಸುದ್ದಿಯಲ್ಲಿರುತ್ತವೆ. ಇದು ಅಮೆರಿಕದ ಅತ್ಯಂತ ದುಬಾರಿಯಾದ ನಗರ.
ಮರುಭೂಮಿಯೊಂದನ್ನು ಗಂಧರ್ವಲೋಕ­ವಾಗಿಸುವ ಪ್ರಕ್ರಿಯೆಯಲ್ಲಿ ಯೋಜನೆ ಹಾಗೂ ಪರಿಶ್ರಮ ಇದೆ. ದೇಶಕ್ಕೆ ದೊಡ್ಡ ಆದಾಯವನ್ನು ತರುತ್ತಿರುವ ಆ ನಗರಕ್ಕೆ ಸರ್ಕಾರ ವಿಶೇಷ ಬೆಂಬಲ ಹಾಗೂ ರಕ್ಷಣೆಯನ್ನು ನೀಡುತ್ತಿದೆ. ಇದು ಯೋಜಿತವಾದ ಉದ್ದಿಮೆ ಹಾಗೂ ಅದಕ್ಕಾಗಿ ರೂಪಿತವಾಗಿರುವ ನಗರ.
ಕಥೆಗಾರನೊಬ್ಬ ತನ್ನ ಕಥೆಯನ್ನು ನಿರ್ದೇಶಕ­ನಿಗೋ ನಿರ್ಮಾಪಕನಿಗೋ ತಲುಪಿಸಬೇಕಾದಲ್ಲಿ ಎಲ್ಲಿ ಹೋಗಬೇಕು ಎಂದು ದಿಕ್ಕೆಟ್ಟು ನೋಡ­ಬೇಕಾಗಿಲ್ಲ. ‘ಪ್ರೊಡ್ಯುಸರ್ಸ್‌ ಗಿಲ್ಡ್‌’ ನಗರದಲ್ಲಿ ವ್ಯವಸ್ಥಿತವಾದ ಕಚೇರಿಯನ್ನು ಹೊಂದಿದೆ. ರಿಜಿಸ್ಟರ್ ಆದ ಕಥೆಯನ್ನು ಅಲ್ಲಿಗೆ ತಲುಪಿಸ­ಲಾಗುತ್ತದೆ. ಅದನ್ನು ಅಲ್ಲಿನ ನಿರ್ಮಾಪಕರಿಗೆ ತಲುಪಿಸಲಾಗುತ್ತದೆ. ಫಿಲ್ಮ್‌ ಮೇಕರ್ಸ್‌ ಮೀಟ್‌ನಲ್ಲಿ ಕಥೆ, ಹಾಡು, ರಾಗ, ನಟನೆ, ಮತ್ತೆ ಯಾವುದೇ ರೀತಿಯ ಪ್ರತಿಭೆಯ ಅವಕಾಶವನ್ನು ಮುಂದಿಡಬಹುದು. ಅವರ ವ್ಯಾಪಾರೀ ಮನೋಭಾವ ಮಾರುಕಟ್ಟೆಯನ್ನು ಮುಕ್ತ­ವಾಗಿರಿಸಿ­ಕೊಳ್ಳುವಂತೆ ಮಾಡಿದೆ. ಅದರೊಳಗೆ ಭ್ರಷ್ಟತೆ ಇಲ್ಲವೆಂದಲ್ಲ. ಸಣ್ಣ ಪುಟ್ಟ ಬಂಡವಾಳ­ಗಾರರು ಪೈಪೋಟಿಗೆ ಇಳಿಯುವುದು ಅಷ್ಟೇನೂ ಸುಲಭವಲ್ಲ.
ಆದರೆ ಮಾರುಕಟ್ಟೆ ಬಹು ವಿಸ್ತಾರ­ವಾಗಿರುವುದರಿಂದ ಪೈಪೋಟಿಯನ್ನು ಮೀರು­ವಷ್ಟು ಅವಕಾಶಗಳೂ ಇವೆ. ಹೂಡುವ ಬಂಡವಾಳ ‘ಬಿಳಿ’ಯದೇ ಆಗಿರುತ್ತದೆ ಎಂದೇನೂ ಅಲ್ಲ. ಹಲವು ಮೂಲಗಳಿಂದ ನುಗ್ಗಿ ಬರುತ್ತದೆ. ಹಾಲಿವುಡ್‌ ಬೆರಗನ್ನು  ಹಾಡಿ ಹೊಗಳುವುದು ನನ್ನ ಉದ್ದೇಶವಲ್ಲ. ಅದನ್ನೆಲ್ಲಾ ನೋಡುವಾಗ ನಮ್ಮ ಸಿನಿಮಾ ಉದ್ಯಮದ ಬಗ್ಗೆ ಯೋಚಿಸದೇ ಇರಲಾಗುವುದಿಲ್ಲ.
ಭಾರತ ಹಲವು ಕಾರಣಗಳಿಗೆ ಹಾಲಿವುಡ್‌­ನತ್ತ ದಿಟ್ಟಿಸುತ್ತದೆ–-ಹೆಸರನ್ನೂ ಒಳಗೊಂಡಂತೆ. ಅದನ್ನು ಅನುಸರಿಸಿ ಬಾಲಿವುಡ್, ಟಾಲಿವುಡ್, ಕಾಲಿವುಡ್... ಕೊನೆಗೆ ಕರ್ನಾಟಕ ಚಿತ್ರರಂಗ­ವನ್ನು ಸ್ಯಾಂಡಲ್‌ವುಡ್ ಎಂದು ಕರೆಯುತ್ತಾ ಮಾತೃ ಮೂಲದ ಹೆಗ್ಗಳಿಕೆಯನ್ನು ಹಾಲಿ­ವುಡ್‌ಗೆ ನೀಡಲಾಗುತ್ತಿದೆ. ಈ ಮಾದರಿ ಅನು­ಕರಣೆ ಸರಿಯೇ ಎಂದೂ ಯೋಚಿಸಬೇಕಾಗಿದೆ.
ಹಾಲಿವುಡ್‌ನ ಮತ್ತೊಂದು ಮುಖವನ್ನೂ ಗಮನಿಸಬೇಕಾಗುತ್ತದೆ. ಸಿನಿಮಾಗಳಲ್ಲಿ ಎಷ್ಟು ಜನ ಕರಿಯರಿಗೆ ನಾಯಕ, ಅಥವಾ ನಾಯಕಿ­ಯಾಗುವ ಅವಕಾಶ ಸಿಕ್ಕಿದೆ ಎಂಬುದನ್ನು ಲೆಕ್ಕ ಹಾಕಬಹುದಾಗಿದೆ. ಸಾಮಾನ್ಯವಾಗಿ ಪೊಲೀಸ್ ಪೇದೆಯ ಪಾತ್ರ, ಶಾಲಾ ಶಿಕ್ಷಕಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅಮೆರಿಕದ ಕರಿಯರ ಜನಸಂಖ್ಯೆಯನ್ನು ಮನಸ್ಸಿನಲ್ಲಿರಿಸಿಕೊಂಡು ಈ ಲೆಕ್ಕಾಚಾರವನ್ನು ಮಾಡಲಾಗುತ್ತದೆ. ಕರಿಯರ ಕಥೆಯನ್ನೇ ನೇಯ್ದಿದ್ದರೆ ಅಂತ್ಯದಲ್ಲಿ ‘ಬಿಡುಗಡೆ’­ಯನ್ನು ತರುವವನು ಬಿಳಿಯನಾಗಿರುತ್ತಾನೆ. ಚೀನಾ ಮೂಲದ ನಟನೊಬ್ಬನಿಗೆ ನಾಯಕ ಪಟ್ಟ ಸಿಗಬೇಕಾದರೆ ಅದು ಸಾಹಸದ ವಿಚಾರವೇ ಆಗಿತ್ತು.
ಹಾಗೆ ಬಂದವರಲ್ಲಿ ಬ್ರೂಸ್ ಲೀ, ಜಾಕಿಚಾನ್   ಹೀರೊಗಳಾಗಿ  ಸ್ವೀಕೃತವಾದ ಹಿನ್ನೆಲೆ ಬಗ್ಗೆ ಅಧ್ಯಯನಗಳೇ ನಡೆದಿವೆ. ಜಾಕಿಚಾನ್‌ ಪ್ರತಿಭೆ ಬಳಸಿಕೊಂಡು ಚೀನಾ ಮತ್ತು ಅದರ ಸುತ್ತಲ ನಾಡುಗಳ ಮಾರುಕಟ್ಟೆ­ಯನ್ನು ಹಿಡಿಯುವುದು ಹಾಲಿವುಡ್‌ಗೆ ಮುಖ್ಯವಾಗಿತ್ತು. ನಟನೆಯ ಅವಕಾಶಗಳು ಭಾರತೀಯರಿಗೆ ಅಷ್ಟು ಸುಲಭವಾಗಿ ಸಿಗಲು ಸಾಧ್ಯವಿಲ್ಲ. ಭಾರತೀಯರು ಆರ್ಥಿಕವಾಗಿ, ರಾಜಕೀಯವಾಗಿ ಪ್ರಬಲವಾಗಿ ತಮ್ಮ ಶಕ್ತಿ ಪ್ರದರ್ಶನ ಮಾಡಬಲ್ಲವರಾದರೆ ಅವರು ಪ್ರವೇಶವನ್ನು ಪಡೆಯಬಲ್ಲರು. ಇನ್ನು ಭಾರತೀಯರಿಗೆ ನಟನೆಗೆ ಸಿಕ್ಕ ಅವಕಾಶ ಬೆರಳೆಣಿಕೆಯಷ್ಟು ಮಾತ್ರ.
ಟೆನಿಸ್ ಆಟಗಾರ ಆನಂದ್ ಅಮೃತ್‌ರಾಜ್‌ ನಿರ್ಮಾಪಕರಾಗಿ ಹಲವು ಸಿನಿಮಾಗಳನ್ನು ಹೊರತಂದಿದ್ದಾರೆ. ನೈಟ್ ಶಾಮಲನ್ ಭಾರತೀಯನಾಗಿ ಮಾಡಿದ ಸಾಧನೆ ನಿಜಕ್ಕೂ ದೊಡ್ಡದು. ಚಿತ್ರಕಥೆಗಾರ­ನಾಗಿ, ನಿರ್ದೇಶಕನಾಗಿ ತನಗೊಂದು ಜಾಗವನ್ನು ಪಡೆಯಲು ಸಾಧ್ಯವಾಗಿದೆ. ಭಾರತ ಮಾತ್ರವಲ್ಲ ಏಷ್ಯಾದ ಬಗೆಗೆ ತಾರತಮ್ಯ ಬಲವಾಗಿದೆ.
  ಕಥೆಗಳಲ್ಲಿ ವಿಚಾರಗಳನ್ನು ಹೇಳುವಾಗಲೂ ಬಿಳಿಯನ ಶ್ರೇಷ್ಠತೆ ವ್ಯಕ್ತವಾಗುತ್ತದೆ. ಇಂಡಿ­ಯಾನಾ ಜೋನ್ಸ್‌ನ ಸಿನಿಮಾಗಳಲ್ಲಿ ಭಾರ­ತೀಯ ರಾಜರೆಂದರೆ ಹೆಬ್ಬಾವಿನ ಮರಿಗಳನ್ನು ತಿನ್ನುವವರು ಎಂದು ಚಿತ್ರಿಸಿ, ಹಾಗೆ ತಿನ್ನುವುದನ್ನು ವೈಭವೋಪೇತವಾಗಿ ತೋರಿಸಲಾಯಿತು.
ಹಾಲಿವುಡ್, ಭಾರತವನ್ನು ಇತ್ತೀಚೆಗೆ ಗಂಭೀರವಾಗಿ ಪರಿಗಣಿಸುತ್ತಿದೆ. ಬಾಲಿವುಡ್‌ನ ಜನಪ್ರಿಯತೆ ಭಾರತಕ್ಕೆ ಮಾತ್ರ ಸೀಮಿತವಾಗಿರದೆ ಏಷ್ಯಾದಾದ್ಯಂತ ಕಾಣಬರುತ್ತದೆ. ಭಾಷಾ ಸಾಮೀಪ್ಯ ಕಾರಣಕ್ಕೆ ಅರಬ್ ದೇಶಗಳಲ್ಲಿ  ಭಾರತದ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಭಾಷೆ ಬರದೆ ಇದ್ದರೂ ಮಲೇಷಿಯಾ, ಇಂಡೊನೇಷ್ಯಾಗಳಲ್ಲೂ ಜನ ಹಿಂದಿ ಸಿನಿಮಾ­ಗಳನ್ನು ನೋಡಲು ಬಯಸುತ್ತಾರೆ. ಭಾರತದ ಹಿಂದಿ ಸಿನಿಮಾಗಳ ಹಾಡು, ನೃತ್ಯ ಯೂರೋಪಿ­ಯನ್ನರ ಮನಸನ್ನೂ ಸೂರೆಗೊಂಡಿವೆ.
ಭಾರತದ ಜನಸಂಖ್ಯೆಯಿಂದಾಗಿ, ವೀಕ್ಷಕರ ಸಂಖ್ಯೆಯ ಕಾರಣಕ್ಕೂ ಹಿಂದಿ ಸಿನಿಮಾ ಹಾಲಿವುಡ್‌ಗೆ ಸ್ಪರ್ಧಿಯಾಗಿ ಕಾಣುತ್ತದೆ. ಹಾಗಾಗಿಯೇ ‘ಸ್ಲಂ ಡಾಗ್ ಮಿಲಿಯನೇರ್’ ಸಿನಿಮಾವನ್ನು ಮಾಡುವ ಆಸಕ್ತಿಯನ್ನು ತೋರಿತು. ಆಸ್ಕರ್ ಪ್ರಶಸ್ತಿಯ ಬೆನ್ನು ಹತ್ತಿತು. ಆಳದಲ್ಲಿ ಭಾರತದ ಬಡತನದ ಲೇವಡಿಯೇ ಆಗಿತ್ತು. ಭಾರತೀಯ ಹೆಸರು ಹೊತ್ತ ‘ಅವತಾರ್‌’­ನಲ್ಲೂ ಕಡೆಗೂ ಬಿಳಿಯನೇ ಹೆಚ್ಚಿನವನಾಗುತ್ತಾನೆ.
ಸಿನಿಮಾ ತಯಾರಿಕೆಗೆ ಹಾಲಿವುಡ್ ಅಪಾರ ಹಣ ಸುರಿಯುವುದರಿಂದ ಆ ವೈಭವದೊಂದಿಗೆ ಇತರರು ಸ್ಪರ್ಧೆಗಿಳಿಯುವುದು ಅಷ್ಟು ಸುಲಭದ ಸಂಗತಿಯಾಗಿರಲಿಲ್ಲ. ಗ್ರಾಫಿಕ್ಸ್‌, ಅನಿಮೇಷನ್, ಸ್ಪೆಷಲ್ ಎಫೆಕ್ಟ್ಸ್‌ ಹೀಗೆ ಕಥೆ ಬಯಸಿದ್ದನ್ನೆಲ್ಲಾ ಪೂರೈಸುವ ಸಾಹಸಕ್ಕೆ ಅವರು ಕೈಹಾಕಬಲ್ಲರು. ‘ಜುರಾಸಿಕ್ ಪಾರ್ಕ್’, ‘ಲಾರ್ಡ್‌ ಆಫ್ ದ ರಿಂಗ್ಸ್‌’ ಅಂತಹ ಸಿನಿಮಾಗಳನ್ನು ಏಷ್ಯನ್ನರು ಕಲ್ಪಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ.
ಇಂಗ್ಲಿಷೇತರ ಸಿನಿಮಾ ನಿರ್ದೇಶಕ, ನಿರ್ಮಾಪಕರಿಗೆ ಕಡಿಮೆ ದುಡ್ಡಿನಲ್ಲಿ ಒಳ್ಳೆ ಸಿನಿಮಾ ಮಾಡುವುದೊಂದು ಸವಾಲು. ಅದಕ್ಕೆ ಉತ್ತರ ಕೊಟ್ಟವರು ಕೊರಿಯಾ, ಇರಾನ್, ಫ್ರಾನ್ಸ್‌ನ ಚಿತ್ರ ನಿರ್ಮಾಪಕರು.  ಉತ್ತಮ ಕಥೆಗಳನ್ನು ಆಧರಿಸಿ ಕಡಿಮೆ ಬಜೆಟ್‌ನಲ್ಲಿ  ಮಾರ್ಮಿಕವಾದ ಚಿತ್ರಗಳನ್ನು ಮಾಡಬಹುದು ಎಂದು ಸಾಬೀತು ಪಡಿಸುತ್ತಾ ಬಂದಿದ್ದಾರೆ. ಸ್ಥಳೀಯ ಭಾಷೆಗಳಿಗೆ ಇವು ಮಾದರಿಯಾಗ­ಬೇಕಾಗುತ್ತದೆ. ಇಷ್ಟಾಗಿಯೂ ಹಾಲಿವುಡ್ ಚಿತ್ರ ನಿರ್ಮಾಣವನ್ನೇ ಮಾದರಿಯಾಗಿ ನೋಡಬೇಕಾದ ಒತ್ತಡಕ್ಕೆ ಕಾರಣ ತಂತ್ರಜ್ಞಾನ.
ಚಲನಚಿತ್ರ ನಿರ್ಮಾಣಕ್ಕೆ ಅದಕ್ಕೆ ಪೂರಕವಾದ ಇತರ ಎಲ್ಲಾ ಕ್ಷೇತ್ರಗಳು ಬೆಂಬಲಿಸುತ್ತಿರುವುದು ಹಾಲಿವುಡ್‌ಗೆ ವರದಾನವಾಗಿದೆ. ಜಾರ್ಜ್‌ ಲೂಕಾಸ್, ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ಸಿನಿಮಾ ಮಾಡಲು ಹೊರಟಾಗ ಅವನ ಬೆಂಬಲಕ್ಕೆ ಪ್ಯಾನಸೋನಿಕ್ ಮತ್ತು ವಿಷನ್  ಕಂಪೆನಿಗಳು ಮುಂದಾದವು. ಹಾಗಾಗಿ ‘ಸ್ಟಾರ್ ವಾರ್ಸ್‌’ ಮೂಡಿಬಂತು. ‘ಜುರಾಸಿಕ್ ಪಾರ್ಕ್‌’ ಅಂತಹ ಸಿನಿಮಾ ಜುರಾಸಿಕ್ ಯುಗದ ಕಲ್ಪನೆ ಕಟ್ಟಿಕೊಡಲು ಸಾಧ್ಯವಾಯಿತು.
ಕ್ಯಾಮೆರಾ ತಂತ್ರಜ್ಞಾನ ದಿನೇ ದಿನೇ ಬೆಳೆಯು­ತ್ತಿದೆ. ಅದರ ಸಂಶೋಧನೆ ಬಿಳಿಯ­ರಿಂದ ನಡೆದು ಸಹಜವಾಗಿ ಅದು ಬಿಳಿ ಚರ್ಮ­ದವರನ್ನು ಸೆರೆ ಹಿಡಿಯಲು ಉತ್ತಮವಾಗಿದೆ. ಅದರಲ್ಲೂ ರೆಡ್ ಸಿಲೊವೆಟ್‌ನಲ್ಲಿ ಬಿಳಿಯರಿಗೆ ರಾಯಲ್ ಲುಕ್ ತಂದುಕೊಡುತ್ತದೆ. ಕರಿ ಚರ್ಮದವರು ಅದ­ರಲ್ಲಿ ಅಷ್ಟೇನೂ ಸುಂದರ­ವಾಗಿ ಕಾಣ­ಲಾರರು ಅಥವಾ ಅವರ ಸಹಜ ಸೌಂದರ್ಯವೂ ಕಾಣುವುದಿಲ್ಲ. ಕರಿಯ ಚರ್ಮವನ್ನು ಸೆರೆ ಹಿಡಿದಾಗ ಸುಂದರವಾಗಿ ಕಾಣುವಂತಹ ಸಂಶೋಧನೆಗಳು ಆಗಬೇಕಾಗಿದೆ. ಅದಕ್ಕೆ ಬದಲಾಗಿ ಮಾಸಲು ಚರ್ಮದವರು ಮೇಕಪ್ ಮೂಲಕ ಬೆಳ್ಳಗಾಗಲು ಹೆಣಗುತಿದ್ದೇವೆ.
ಮುಖಕ್ಕೆ ಹಾಕುವ ಬಣ್ಣಗಳಲ್ಲೂ ಕರಿ ಬಣ್ಣಕ್ಕೆ ಹೊಂದುವಂತಹ ಕ್ರೀಮ್‌ಗಳ ಸಂಶೋಧನೆ ಆರಂಭವಾಗಿ ದಶಕವೂ ಕಳೆದಿಲ್ಲ. ಬಿಳಿಯರಂತೆ ಗುಲಾಬಿ ಇಲ್ಲವೇ ಕಡುಕೆಂಪು ಬಣ್ಣದ ತುಟಿ ರಂಗು ಭಾರತೀಯರಿಗೆ ವಿಚಿತ್ರವಾಗಿ ಕಾಣುತ್ತದೆ. ಬಿಳಿ ಚರ್ಮಕ್ಕೆ ಒಪ್ಪುವ ಕ್ಯಾಮೆರಾ, ಮೇಕಪ್ ಇದನ್ನೆಲ್ಲಾ ಕಪ್ಪು, ತಿಳಿಗಪ್ಪು ಬಣ್ಣದವರು ಹೇಗೋ ಹೊಂದಿಸಿಕೊಂಡು ಅದರ ಕಡೆ ಅಷ್ಟೇನೂ ಗಮನಹರಿಸದೆ ಮುಂದೆ ಹೋಗುತ್ತಿದ್ದೇವೆ. ಅದನ್ನೆಲ್ಲಾ ಗಮನಿಸುವ ಸಾಮರ್ಥ್ಯ ಬಂದಲ್ಲಿ ಮತ್ತೂ ಪಶ್ಚಿಮದ ಮಟ್ಟಕ್ಕೆ ನಿಲ್ಲುವುದೇ ನಮ್ಮ ಗುರಿಯಾಗುತ್ತದೆ. ನಮ್ಮ ನಾಯಕಿಯರು ಪಾಶ್ಚಿಮಾತ್ಯ ಉಡುಗೆಯಲ್ಲಿ ಕಾಣಿಸಿಕೊಳ್ಳುವುದು (ಪಾತ್ರಕ್ಕೆ ಅಗತ್ಯವಿರಲೀ ಇಲ್ಲದಿರಲೀ) ಇದಕೊಂದು ಪುಟ್ಟ ಉದಾಹರಣೆ.
ಸಂಸ್ಕೃತಿ ಅಥವಾ ಕಲೆಯಲ್ಲಿ  ಭಾರತ ಹಿಂದೆ ಬಿದ್ದಿಲ್ಲ. ನಾಟಕ, ನೃತ್ಯ ಮತ್ತು ಇತರ ಯಾವುದೇ ಜನಪದ ಕಲೆಯ ಸಂದರ್ಭದಲ್ಲಿ ಬಣ್ಣ ಹಾಕುವುದರಲ್ಲಿ ನಮ್ಮ ಸಹಜ ಪ್ರತಿಭೆ ಹೊರ­ಬಂದಿರುತ್ತಿತ್ತು. ಹಲವು ವರ್ಷಗಳ ಅನುಭವ ಅದರ ಹಿಂದೆ ಇರುತ್ತಿತ್ತು. ಸಾಮಾನ್ಯವಾಗಿ ರಾತ್ರಿ ಹೊತ್ತಿನಲ್ಲೇ ನಡೆಯುತ್ತಿದ್ದ ಈ ಎಲ್ಲಾ ಪ್ರದರ್ಶನಗಳಿಗೆ ಪಂಜು ಮುಖ್ಯ ಬೆಳಕಾಗಿರು­ತ್ತಿತ್ತು. ಜನರು ಬಹು ದೂರದವರೆಗೆ ನೋಡುವುದು ಅಂದಿನ ಅಗತ್ಯವಾಗಿದ್ದರಿಂದ ಪ್ರಖರವಾದ ಬಣ್ಣಗಳನ್ನು ಬಳಸುತ್ತಿದ್ದರು. ನಾಟಕದ ಮುಂದುವರಿಕೆಯಾಗಿ ಸಿನಿಮಾವನ್ನು ಪರಿಗಣಿಸಿದ್ದರಿಂದ ಮುಖಕ್ಕೆ ಬಳಸುವ ಬಣ್ಣವೂ ಅದರ ಮುಂದುವರಿಕೆಯಾಯಿತು. ಸಿನಿಮಾ ಎರವಲು ಪಡೆದ ತಂತ್ರಜ್ಞಾನ. ಕಲೆಯ ವಿಕಾಸಕ್ಕೆ ಮಡಿವಂತಿಕೆ ಬೇಕಿಲ್ಲ ಎಂಬುದು ದಿಟವಾದರೂ ನಮ್ಮತನ ರೂಪುಗೊಳ್ಳದಿದ್ದರೆ ಕುಂಟುತ್ತಾ ಸಾಗುತ್ತೇವೆ, ಇಲ್ಲವೇ ಮುಗ್ಗರಿಸುತ್ತೇವೆ.
ಹಾಲಿವುಡ್‌ ಸಿನಿಮಾಗಳು ಕೆಲ ಮಟ್ಟಿಗೆ ಇಂದು ಭಾರತದಲ್ಲಿ ತಯಾರಾಗುತ್ತಿವೆ. ಐ.ಟಿ. ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಅನಿ­ಮೇಶನ್ ಕಲೆ ಭಾರತದಲ್ಲಿ ಬೆಳೆಯಲು ಸಾಧ್ಯವಾಗಿದೆ. ವಾಲ್ಟ್‌ ಡಿಸ್ನಿಯ ಕಾರ್ಟೂನ್ ಚಿತ್ರಗಳು ಭಾರತದಲ್ಲಿ ರೂಪುಗೊಳ್ಳುತ್ತವೆ. ಮುಂಬೈ, ಬೆಂಗಳೂರು ಹಾಗೂ ಹೈದರಾಬಾದ್‌­ನಲ್ಲಿ ಅನಿಮೇಶನ್ ಚಿತ್ರ ನಿರ್ಮಾಣದ ಕಂಪೆನಿಗಳು ಸ್ಥಾಪನೆಗೊಂಡಿವೆ. ‘ಔಟ್ ಸೋರ್ಸಿಂಗ್’ ಪರಿಭಾಷೆಯಲ್ಲಿ ಭಾರತದ ಕಲಾವಿದರು ಹಾಲಿವುಡ್‌ಗಾಗಿ ದುಡಿಯುತ್ತಿ­ದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಕುಸಿದೇ ಹೋಗಿದ್ದ ಈ ಉದ್ದಿಮೆ ಮತ್ತೆ ತಲೆ ಎತ್ತುತ್ತಿದೆ.
ಹಾಲಿವುಡ್‌ನ ದುಡ್ಡಿನ ಮದವನ್ನು ಹೊಡೆಯಲು ಹೊರಟಿರುವ ದೇಶ ಚೀನಾ. ಜಾಗತೀಕರಣವನ್ನು ಸರಿಯಾಗಿ ದಕ್ಕಿಸಿಕೊಳ್ಳಲು ಪ್ರಯತ್ನಿಸಿರುವ ದೇಶ. ಕಡಿಮೆ ಬೆಲೆಗೆ ಗೊಂಬೆಗಳನ್ನು ಮಾರಿದಂತೆ ಕ್ಯಾಮೆರಾವನ್ನು ಸಿದ್ಧಪಡಿಸುತ್ತಾ ಸಿನಿಮಾ ನಿರ್ಮಾಣದ ವೆಚ್ಚವನ್ನು ಇಳಿಸಿದೆ. ಪ್ಲಾಸ್ಟಿಕ್ ಸಾಮಾನು ಮಾರುವಂತೆ ಸಿನಿಮಾ ಪರಿಕರಗಳನ್ನು ಹೊರತರುತ್ತಿದೆ.  ಹಾಗೆ ಸಿನಿಮಾ ನಿರ್ಮಾಣಕ್ಕೆ ಬಂಡವಾಳವನ್ನು ತೊಡಗಿಸುವ ಸಿದ್ಧತೆಯಲ್ಲಿದೆ.
ಕೊಡಾಕ್ ಥಿಯೇಟರ್ ಮುಂದೆ ಚಾರ್ಲಿ ಚಾಪ್ಲಿನ್, ಸ್ನೋ ವೈಟ್ ಹೀಗೆ ಯಾವುದಾದರೂ ನಟ ಅಥವಾ ಸಿನಿಮಾ ಪಾತ್ರ ವೇಷ ಧರಿಸಿ ನಿಲ್ಲುವ ಸಣ್ಣಪುಟ್ಟ ಕಲಾವಿದರು ಪ್ರವಾಸಿಗರ ಪಕ್ಕದಲ್ಲಿ ನಿಂತು ಫೋಟೊ ತೆಗೆಸಿಕೊಂಡು ದುಡ್ಡು ಕೇಳುವುದನ್ನು ನೋಡಿದರೆ ಇದನ್ನೂ ಹಾಲಿವುಡ್ ಹುಟ್ಟು ಹಾಕಿದೆ ಎನ್ನುವುದನ್ನು ಮರೆಯಲಾಗದು. ಬಹುರಾಷ್ಟ್ರೀಯ ಕಂಪೆನಿಗಳು ಕದ ತಟ್ಟುತ್ತಿರುವ ಈ ಹೊತ್ತಿನಲ್ಲಿ ಸ್ಯಾಂಡಲ್‌ವುಡ್ ತನ್ನ ಪರಿಮಳವನ್ನು ಉಳಿಸಿಕೊಳ್ಳಬಲ್ಲುದೇ?


ಭಾಷೆಗೂ ಅಂಟಿದ ಮೈಲಿಗೆ
Tue, 11/26/2013

ಮೂರು–ನಾಲ್ಕು ವರ್ಷಗಳ ಹಿಂದೆ ಬೆಂಗಳೂ­ರಿನಲ್ಲಿ ‘ಕಬೀರ್ ಉತ್ಸವ’ ನಡೆದಿತ್ತು. ಟಿಕೆಟ್ ಪಡೆಯಲು ಪರದಾಡಿ ಕಡೆಗೂ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗಿತ್ತು. ವಾರವೆಲ್ಲಾ ಕಾರ್ಯ­ಕ್ರ­ಮದಲ್ಲಿ ಜನ ಕಿಕ್ಕಿರಿದು ತುಂಬಿರು­ತ್ತಿದ್ದರು. ಕಡೆಯ ದಿನ ಪಾಕಿಸ್ತಾನದ ಗಾಯಕ ಉಸ್ತಾದ್ ಫತೇ ಅಲಿಖಾನ್ ಹಾಡುವಾಗ ಜನ ಎದ್ದು ಚಪ್ಪಾಳೆ ತಟ್ಟಿ ಸಂಭ್ರಮದಿಂದ ಕುಣಿದರು. ಯಾವುದು ಹೀಗೆ ಜನರನ್ನು ಸೆಳೆದದ್ದು? ಅವರ ರಾಗವೇ, ಸಾಹಿತ್ಯವೇ, ಭಾಷೆಯೇ, ಹಾಡಿನ ಅರ್ಥವೇ ಅಥವಾ ಹಾಡುಗಾರರಲ್ಲಿದ್ದ ಚೈತನ್ಯವೇ? ಒಂದು ಬಾರಿ ಕೇಳಿದ ಆ ಹಾಡು­ಗಳನ್ನು ಮತ್ತೆ ಮತ್ತೆ ಕೇಳಬೇಕಿನಿಸುವಾಗ ಪಾಕಿ­ಸ್ತಾನಿ ಗಾಯಕನೆಂ­ಬುದು ಬಾಂಧವ್ಯಕ್ಕೆ ಹೆಚ್ಚಿನ ತೂಕವನ್ನೂ ತಂದಿರಬಹುದು. ಮಾತನಾಡುತ್ತಾ ಉಸ್ತಾದ್ ತಾನು ವಿಭಜನೆ ಪೂರ್ವದ ಭಾರತದಲ್ಲಿ ಹುಟ್ಟಿದ ಭಾರತೀಯನೆಂದಾಗ ಜನ ಮತ್ತಷ್ಟು ಆವೇಶಕ್ಕೊಳಗಾದರು.
ಮೊಘಲರ ಕಡೆಯ ದೊರೆ ಬಹದ್ದೂರ್ ಷಾ ಜಾಫರ್ ತೊಂಬತ್ತನೆಯ ವಯಸ್ಸಿನಲ್ಲಿ ೧೮೫೭ರ ಹೋರಾಟದ ನಂತರ ಬ್ರಿಟಿಷರ ಬಂಧನಕ್ಕೆ ಒಳಗಾಗಬೇಕಾಯಿತು. ಅವರನ್ನು ನೇಪಾಳದ ಜೈಲಿಗೆ ಕರೆದೊಯ್ಯುವಾಗ ಹಿಂದೂ­ಸ್ತಾ­ನದ ಹಿಡಿ ಮಣ್ಣನ್ನು ತನ್ನ ವಲ್ಲಿಗೆ ಕಟ್ಟಿಕೊ­ಳ್ಳುತ್ತಾ ತಾನು ಸತ್ತಾಗ ತನ್ನ ನೆಲದ ಮಣ್ಣನ್ನು ತನ್ನ ಜೊತೆಗೆ ಹಾಕುವಂತೆ ಕೇಳಿಕೊಂಡ. ಬಂಧ­ನದಲ್ಲಿದ್ದ ಬಹದ್ದೂರ್ ಷಾ ಜೈಲಿನ ಗೋಡೆಯ ಮೇಲೆಲ್ಲಾ ಇದ್ದಲಿನಲ್ಲಿ ಶಾಯಿರಿಗಳನ್ನು ಬರೆ­ಯು­ತ್ತಾ ಕೊನೆಯ ದಿನಗಳನ್ನು ಕಳೆದ. ಅಲ್ಲಿ ಬಳಸಿದ ಉರ್ದು ಸಾಹಿತ್ಯ ದೇಶಭಕ್ತಿಗೇ ಸಂಕೇತವಾದಂತಿದೆ.
ಮಿರ್ಜಾ ಗಾಲಿಬ್‌ನ ಗಜ಼ಲ್‌ಗಳು ಶತಮಾನ­ಗಳ ಕಾಲ ಜನಮಾನಸದಲ್ಲಿ ಉಳಿದಿದ್ದರೆ ಅದು ಭಾಷೆಗೆ ಅತೀತವಾದ ಭಾವುಕ ಕಾರಣಗಳಿಗಾಗಿ. ಗಾಲಿಬ್‌ನ ಭಾಷೆ ಉರ್ದು ಎಂದು ಹಳದಿ ಕಣ್ಣಿಂದ ಕಂಡರೆ ನಮ್ಮ ಮುಂದಿನ ಪೀಳಿಗೆಗೆ ಮಾಡು­ತ್ತಿರುವ ಅನ್ಯಾಯಗಳಲ್ಲಿ ಅದೂ ಒಂದಾಗುವುದು. 
ಭಾರತದ ಹಿಂದಿ ಚಲನಚಿತ್ರರಂಗ ಬಹು ದೀರ್ಘಕಾಲ ರಂಜಿಸಿದ್ದು ಉರ್ದು ಸಾಹಿತ್ಯ ಮತ್ತು ಸಂಗೀತದಿಂದ. ಇಂದಿಗೂ ಜನ ಹಳೆಯ ಹಿಂದಿ ಚಿತ್ರಗೀತೆಗಳನ್ನು ರೇಡಿಯೊದಲ್ಲಿ  ಕೇಳುತ್ತಾ, ಗುನುಗುತ್ತಾ ಇರುತ್ತಾರೆ. ಆ ಅರ್ಥ­ದಲ್ಲಿ ಉರ್ದು ಸಾಹಿತ್ಯವಿಲ್ಲದಿದ್ದರೆ ಹಿಂದಿ ಸಿನಿಮಾ ಜಗತ್ತು ಇಲ್ಲಿಯವರೆಗೆ ಕಂಡಷ್ಟು ಸಂಪನ್ನವಾಗಿರುತ್ತಿರಲಿಲ್ಲ. ಹಿಂದಿ ಸಿನಿಮಾಗಳೆನಿ­ಸಿಕೊಂಡು ಮೆರೆದದ್ದು ಉರ್ದು ಭಾಷೆ ಹಾಗೂ ಸಂಸ್ಕೃತಿ. ಅಲ್ಲಿಯ ಜನ ಹಿಂದಿ, ಉರ್ದುವೆಂದು ಭಾಷೆಯ ಭೇದವೆಣಿಸದೆ ಅವುಗಳನ್ನು ಸ್ವೀಕರಿಸಿದ್ದಾರೆ.
‘ಈ ನಾಡಿನಲ್ಲಿಯೇ ಹುಟ್ಟಿ ಬೆಳೆದ ಜನಪದರ ಭಾಷೆಯೊಂದು ಧರ್ಮದ ಹೆಸರನ್ನು ಪಡೆದು­ದಾದರೂ ಹೇಗೆ’ ಎಂಬ ಪ್ರಶ್ನೆ ಈ ಎಲ್ಲ ಸಂಗತಿ­ಗಳನ್ನು ಚರ್ಚಿಸಲು ಪ್ರೇರಣೆ ನೀಡಿದೆ.
ಭಾರತಕ್ಕೆ ಬಂದ ಟರ್ಕಿಯರು ಟರ್ಕಿ ಭಾಷೆ­ಯನ್ನು, ಪರ್ಷಿಯನ್ನರು ಪರ್ಷಿಯನ್ ಭಾಷೆ­ಯನ್ನು, ಅರಬರು ಅರಬ್ಬೀ ಭಾಷೆಯನ್ನು, ಕಡೆ­ಯ­ದಾಗಿ ಬಂದ ಆಫ್ಘನ್ನರು ಪುಷ್ಟೂ, ಪಕ್ತೂನಿ­ಸ್ತಾನದ ಭಾಷೆಯನ್ನು ಭಾರತಕ್ಕೆ ಹೊತ್ತು ತಂದರು. ಉತ್ತರ ಭಾರತದಲ್ಲಿ ಬಳಕೆಯಲ್ಲಿದ್ದ ಬ್ರಿಜ್‌ ಭಾಷಾ, ಘಡೀ ಬೋಲಿ, ಮೈಥಿಲಿ, ಬಂಗಾಳಿ ಹೀಗೆ ಹಲವು ಭಾಷೆಗಳೊಂದಿಗೆ ಸೇರಿ ಹುಟ್ಟಿದ ಭಾಷೆಯನ್ನು ಹಿಂದ್‌ವಿ, ಜ಼ಬಾನ್–-ಎ–-ಹಿಂದೂಸ್ತಾನಿ ಎಂದು ಇತ್ಯಾದಿಯಾಗಿ ಕರೆಯು­ತ್ತಿ­ದ್ದರು. ಹಾಗೇ ಸೈನಿಕರು ಹಲವು ಭಾಷೆಗಳನ್ನು ಬೆರೆಸಿ ಮಾತನಾಡುತ್ತಿದ್ದರು. ಟರ್ಕಿ ಭಾಷೆಯಲ್ಲಿ ‘ಒರ್ದು’ ಎಂದರೆ ಸೈನ್ಯ. ಆ ಸೈನಿಕರು ಮಾತನಾ­ಡು­ತ್ತಿದ್ದ ಭಾಷೆಯನ್ನು ಉರ್ದು ಎಂದು ಕರೆಯ­ಲಾಯಿತು. ಹಾಗೆಯೇ ದಕ್ಷಿಣ ಭಾರತದಲ್ಲಿ ನಿಜಾಮನ ರಾಜ್ಯದಲ್ಲಿ ಬೆಳೆದ ಉರ್ದುವನ್ನು ‘ದಖನೀ ಉರ್ದು’ ಎಂದು ನಂತರ ಗುರುತಿಸಲಾಯಿತು. ಮೊಘಲರ ಕಾಲದಲ್ಲಿ ಆಸ್ಥಾನದ ಭಾಷೆ ಪರ್ಷಿಯನ್ ಎಂದು ಪರಿಗಣಿಸಿದ್ದರೂ ಜನಸಾ­ಮಾನ್ಯರು ಆಡುತ್ತಿದ್ದ ಭಾಷೆ ಉರ್ದುವೇ ಆಗಿತ್ತು. ಹಾಗೇ ನಿಧಾನವಾಗಿ ಆಸ್ಥಾನವನ್ನು ಆಡುಭಾಷೆಯಾದ ಉರ್ದುವೇ ಆವರಿಸಿತು.
ಜನಸಾಮಾನ್ಯರ ಈ ಭಾಷೆಯನ್ನು ಸಾಹಿತ್ಯ ರಚನೆಗೆ ಬಳಸಿಕೊಂಡ ಕವಿ ಅಮೀರ್ ಖುಸ್ರು. ಆ ಸಾಹಿತ್ಯ ಜನಪದೀಯವಾಗಿದ್ದು ಜನಪದರ ಬದುಕನ್ನು ಸೆರೆಹಿಡಿಯುವಲ್ಲಿ ಸಮರ್ಥವಾ­ಗಿತ್ತು. ಜಾತಿ-ಧರ್ಮದ ಮಡಿ ಮೈಲಿಗೆ ಇಲ್ಲದೇ ಹೀಗೆ ಹುಟ್ಟಿದ ಭಾರತೀಯವಾದ ಭಾಷೆಯನ್ನು ಬರೆಯಲು ಪರ್ಷಿಯನ್-ಅರಬ್ಬೀ ಲಿಪಿಯನ್ನು ಬಳಸುತ್ತಿದ್ದರು. ಅದೂ ಭಾರತದಲ್ಲಿ ತನ್ನದೇ ಆದ ಮಾರ್ಪಾಡುಗಳನ್ನು ಕಂಡುಕೊಂಡಿತು. ಜ಼ಬಾನ್-–ಎ-–ಹಿಂದೂಸ್ತಾನಿ (ಹಿಂದೂಸ್ತಾನದ ಭಾಷೆ) ಎನಿಸಿಕೊಂಡ ಉರ್ದುವಿನಲ್ಲಿ ಸಮೃದ್ಧ­ವಾಗಿ ಸಾಹಿತ್ಯವೂ ಬೆಳೆದು ಬಂದಿತು.
ಸುಮಾರು ೮೦೦ ವರ್ಷಗಳ ಕಾಲ ಭಾರತದಾದ್ಯಂತ ಹರ­ಡಿದ್ದ ಈ ಭಾಷೆ ಹಲವು ಪದರುಗಳಲ್ಲಿ ಕಾಣಿಸಿ­ಕೊಂಡು ಅದರೊಳಗೇ ಮತ್ತೆ ಉಪಭಾಷೆಗಳೂ ಬೆಳೆದುಬಂದವು. ಕಾಶ್ಮೀರ, ಪಂಜಾಬ್, ದೆಹಲಿ, ಉತ್ತರ ಪ್ರದೇಶ, ಬಂಗಾಳ, ಹೈದರಾಬಾದ್, ಕರ್ನಾಟಕದಲ್ಲೆಲ್ಲಾ ಹರಡಿದ ಈ ಭಾಷೆ ೧೯ನೇ ಶತಮಾನದ ಕಡೆಯ ಹೊತ್ತಿಗೆ ವಿಚಿತ್ರವಾದ ತಿರುವನ್ನು ಪಡೆದುಕೊಂಡಿತು.
ಭಾರತದ ಸಮಾಜ ಸುಧಾರಕರು ಭಾರತೀಯ ಧರ್ಮ ಯಾವುದೆಂದು ವಿವರಿಸಿ­ಕೊಳ್ಳತೊಡಗಿದ್ದು, ಹಿಂದೂಸ್ತಾನದ ಧರ್ಮ­ವನ್ನು ಹಿಂದೂ ಎಂದು ಕರೆದರು. ಬ್ರಿಟಿಷರು ಸೊಗಸಾಗಿ ಸಮಾಜದಲ್ಲಿ ಮುಸಲ್ಮಾನರನ್ನು ಬೇರ್ಪಡಿಸತೊಡಗಿದ್ದರು. ಭಾರತದ ಚರಿತ್ರೆ­ಯನ್ನು ಬರೆಯತೊಡಗಿದ್ದ ಬ್ರಿಟಿಷರು ಅದಕ್ಕೆ ಹಿತವಾಗಿ ಕೋಮುಬಣ್ಣವನ್ನೂ ಬಳಿದರು. ಮಧ್ಯಕಾಲವನ್ನು ಮುಸಲ್ಮಾನರ ಯುಗ­ವೆಂದರು. ಇದನ್ನೆಲ್ಲಾ ಪ್ರಶ್ನಿಸುವವರೂ ಇಲ್ಲದೇ, ಅವರು ಮಾಡಿದ್ದೇ ಸಂಶೋಧನೆ, ಅವರು ಹೇಳಿದ್ದೇ ಚರಿತ್ರೆಯಾಯಿತು.
೧೮೫೭ರ ನಂತರ ಸೋತ ಮೊಘಲರು ಮತ್ತೆ ತಲೆಯೆತ್ತದಂತೆ ನೋಡಿಕೊಳ್ಳುವುದು ಬ್ರಿಟಿಷ­ರಿಗೆ ಅನಿವಾರ್ಯವಾಗಿತ್ತು. ಆ ತರ್ಕದಲ್ಲಿ ಮುಸಲ್ಮಾನ­ರನ್ನು ಹತ್ತಿಕ್ಕಬೇಕಾಯಿತು. ವಸಾ­ಹತು ರಾಜಕೀಯ ಹುನ್ನಾರಕ್ಕೆ ಅವರು ಬಯಸಿ­ದಂತೆ ಬಲಿಯಾದ ಭಾರತೀಯರು ಹಿಂದೂ–-ಮುಸ್ಲಿಂ ಎಂಬ ಬಿರುಕಿಗೆ ಸಿಕ್ಕಿಹಾಕಿಕೊಂಡರು.
ಹಿಂದುಳಿದ ಮುಸಲ್ಮಾನರ ಸುಧಾರಣೆಗೆ ತೊಡಗಿದ ಸರ್ ಸೈಯದ್ ಅಹ್ಮದ್ ಖಾನರು ಭಾರತದ ಮುಸಲ್ಮಾನರ ಪ್ರತಿನಿಧಿಯಾಗಿ ಕಾಣ­ತೊಡಗಿದರು. ಅವರಿಗೆ ಪೈಪೋಟಿಯಾಗಿ ದನಿ­ಯೆತ್ತಿದವರು ಆರ್ಯ ಸಮಾಜವನ್ನು ಹುಟ್ಟು ಹಾಕಿದ ದಯಾನಂದ ಸರಸ್ವತಿ. ಈ ಹಿಂದೆಯೇ ಸಮಾಜ ಸುಧಾರಣೆಯಲ್ಲಿ ತೊಡಗಿದ್ದ ರಾಜಾರಾಮ್ ಮೋಹನ್ ರಾಯರು ಉರ್ದು ಭಾಷೆಯಲ್ಲಿ ಪತ್ರಿಕೆಯನ್ನೂ ತಂದಿದ್ದರು. ಬಂಗಾಳದ ನವಾಬರಿಂದ ಅವರ ತಾತ ‘ರಾಯ’ ಎಂಬ ಬಿರುದನ್ನೂ ಪಡೆದಿದ್ದರು.
ಆರ್ಯ ಸಮಾಜ, ಭಾರತೀಯನ ಧರ್ಮ­ವನ್ನು ಹಿಂದೂ ಎಂದು ಕರೆಯುತ್ತಾ ಹಿಂದೂ ಧರ್ಮದ ಲಕ್ಷಣಗಳನ್ನು ವಿವರಿಸತೊಡಗಿತು. ಹೀಗೆ ಕೊಟ್ಟ ವಿವರಣೆಯಲ್ಲಿ ಆ ಹಿಂದೂಗಳು ಮಾತನಾಡುವ ಭಾಷೆಯನ್ನು ಹಿಂದಿ ಎಂದರು. ಹಿಂದಿ ಎಂಬ ಭಾಷೆಯು ಹೀಗೆ ಇಸ್ಲಾಂ ವಿರೋಧಿ ನೆಲೆಯಲ್ಲಿ ಹುಟ್ಟಿತು. ಹಾಗೆ ನೋಡಿದರೆ ಜನ­ಸಾಮಾನ್ಯರ ಭಾಷೆಯಾಗಿದ್ದ ಉರ್ದು ಭಾಷೆ­ಯನ್ನು ಒಂದು ಕಾಲಕ್ಕೆ ಹಿಂದವಿ, ಹಿಂದಿ ಎಂದೆಲ್ಲಾ ಕರೆದದ್ದೂ ಇದೆ. ಆದರೀಗ ಮುಸಲ್ಮಾನರು ಆಡುವ ಭಾಷೆ ಉರ್ದು ಎಂದು ಶಿರೋನಾಮೆಯನ್ನು ಕೊಟ್ಟರು.
ಸಂಸ್ಕೃತ ಭಾಷೆ­ಯನ್ನು ಬರೆಯಲು ಬಳಸುವ ದೇವನಾಗರಿ ಲಿಪಿಯನ್ನು ಹಿಂದಿ ಭಾಷೆಗೆ ಅಳವಡಿಸಿ­ಕೊಂಡರು. ಪರ್ಷಿಯನ್ ಮತ್ತು ಅರಬ್ಬೀ ಭಾಷೆ­ಯಲ್ಲಿ ಬರೆದರೆ ಅದು ಉರ್ದುವೆಂದು ಪರಿಗ­ಣಿಸಿದರು. ಒಟ್ಟಿನಲ್ಲಿ ಮುಸಲ್ಮಾನರು ಆಡುವ ಭಾಷೆ ಬೇರೆ ಎಂದು ತೋರಿಸಬೇಕಾಗಿತ್ತು. ಹಾಗೇ ಉರ್ದು ಮುಸಲ್ಮಾನರ ಭಾಷೆಯೂ, ಹಿಂದಿ ಹಿಂದೂಗಳ ಭಾಷೆಯಾಗಿಯೂ ಗಂಡು­ಭೇರುಂಡನಂತೆ ಒಂದೇ ದೇಹಕ್ಕೆ ಎರಡು ತಲೆ ಮೂಡಿತು. ಹಾಗಾಗಿ ಹಿಂದಿಯು ೧೮೭೫ರ ನಂತರ ಜನುಮ ತಾಳಿದ ಭಾರತದ ಅತ್ಯಂತ ಆಧುನಿಕ ಭಾಷೆಯಾಗಿದೆ.
ಒಂದೇ ಭಾಷೆಗೆ ಎರಡು ಹೆಸರುಗಳು ಯಾಕೋ ಸರಿ ಕಾಣದೇ ಹಿಂದಿ ಎನಿಸಿಕೊಂಡ ಹಿಂದೂಗಳ (?) ಭಾಷೆಗೆ ಹೆಚ್ಚಾಗಿ ಸಂಸ್ಕೃತ ಪದಗಳನ್ನು ಬಳಸತೊಡಗಿ­ದರು. ಅದಕ್ಕೆ ಉತ್ತರವೆಂಬಂತೆ ಸ್ಪರ್ಧೆಗೆ ಇಳಿದ ಮುಸಲ್ಮಾನರು ತಮ್ಮ ಗುರುತು­ಗಳಿಗಾಗಿ ಪರದಾಡಿದರು. ಇದೇ ಭಾಷೆಯಲ್ಲಿ ಹುಟ್ಟಿದ ಸೂಫಿ ಸಾಹಿತ್ಯ ಮಾತ್ರ ಮುಸಲ್ಮಾನರ ನಡುವಿನ ಸೌಹಾರ್ದವನ್ನು ಸಾರುತ್ತಲೇ ಇತ್ತು.
ಕರ್ನಾಟಕದಲ್ಲಿ ಆರಂಭಗೊಂಡ ಬಹಮನಿ ಸುಲ್ತಾನರ ಆಳ್ವಿಕೆಯ ಕಾಲಕ್ಕೂ ಮುನ್ನವೇ ಉರ್ದು ಹಾಗೂ ಇಸ್ಲಾಂ ಸಂಸ್ಕೃತಿ ಕನ್ನಡ ನಾಡನ್ನು ಪ್ರವೇಶಿಸಿತ್ತು. ಬಹಮನಿ ದೊರೆಗ­ಳೊಂದಿಗೆ ಬಂದ ಪರ್ಷಿಯನ್ ಭಾಷೆ ಹಾಗೂ ಈಗಾಗಲೇ ಇದ್ದ ಸೈನ್ಯದ ಭಾಷೆ ಅಲ್ಲದೇ ಸ್ಥಳೀಯ­ವಾಗಿದ್ದ ಕನ್ನಡ, ಮರಾಠಿ ಎಲವೂ ಸೇರಿ ರೂಪು ಪಡೆದದ್ದು ದಖನೀ ಉರ್ದು. ಹಾಗೆಯೇ ಕನ್ನಡ, ತೆಲುಗು ಹಾಗೂ ಮರಾಠಿ ಭಾಷೆಗಳು ಪರಸ್ಪರ ಪದಗಳ ಕೊಡು-ಕೊಳ್ಳುವಿಕೆಯಲ್ಲಿ ವಿಕಾಸವಾದವು.
ನಿಜಾಮರ ರಾಜ್ಯಕ್ಕೆ ಒಳಪ­ಟ್ಟಿದ್ದ, ಇಂದು ಕರ್ನಾಟಕದ ಭಾಗವಾಗಿರುವ ರಾಯಚೂರು, ಗುಲ್ಬರ್ಗ, ಬೀದರ್ ಇಲ್ಲಿ ಉರ್ದು ಭಾಷೆ ಎಲ್ಲರ ಭಾಷೆಯಾಗಿದೆ. ಕನ್ನಡವನ್ನೇ ಮಾತನಾ­ಡಿದರೂ, ಅದು ಉರ್ದು­ಮಯವಾಗಿರುತ್ತದೆ. ಆ ಪ್ರದೇಶದ ಬಹುತೇಕ ಜನರು ದ್ವಿಭಾಷಿಗಳಾಗಿರುತ್ತಾರೆ. ಇಂತಹುದೇ ಸ್ಥಿತಿ ಆಂಧ್ರ ಪ್ರದೇಶದ ಹಲವು ಭಾಗಗಳಲ್ಲಿ ಕಾಣ­ಬರುತ್ತದೆ. ಆಂಧ್ರಪ್ರದೇಶ ಉರ್ದುವನ್ನು ಆ ರಾಜ್ಯದ ಎರಡನೇ ಭಾಷೆಯಾಗಿ ಪರಿಗ­ಣಿಸುತ್ತದೆ.
ರಾಷ್ಟ್ರೀಯತೆಯ ಪರಿಕಲ್ಪನೆ ಬೆಳೆಯುತ್ತಿದ್ದ ಕಾಲದಲ್ಲಿ, ಭಾರತ ರಾಷ್ಟ್ರವಾಗಬೇಕಾದರೆ ಅದಕ್ಕೆ ಒಂದು ಭಾಷೆ ಇರಬೇಕೆಂಬ ತರ್ಕದಲ್ಲಿ ಉರ್ದುವಿಗಿಂತ ಹಿಂದಿ ಭಾಷೆಯು ಧರ್ಮದ ದೃಷ್ಟಿಯಿಂದ ಹೆಚ್ಚು ಸಮೀಪವಾಗತೊಡಗಿತ್ತು. ಹಾಗಾಗಿ ಕಲ್ಪಿತವಾದ ಹಿಂದೂಗಳ ಹಿಂದಿ ಭಾಷೆಯನ್ನು ಭಾರತದ ಭಾಷೆಯೆಂದು ಹೇಳುವ ಪ್ರತೀತಿ ಬೆಳೆದುಬಂತು. ಗಾಂಧೀಜಿ­ಯವರು, ಹಿಂದಿ ಬಹುಸಂಖ್ಯಾತರ ಭಾಷೆಯಾ­ಗಿ­ರುವುದರಿಂದ ಅದು ರಾಷ್ಟ್ರೀಯ ಭಾಷೆಯಾಗ­ಬೇಕೆಂದಾಗ ಹಿಂದೂವಾದಿಗಳು ಅದನ್ನು ಮೌನವಾಗಿ ಬೆಂಬಲಿಸಿದರು. ಹಿಂದಿ, ಸಂಸ್ಕೃತ­ಜನ್ಯ ಭಾಷೆಯೆಂಬುದು ಅವರ ತರ್ಕಕ್ಕೆ ಸಿಕ್ಕ ಸ್ವೀಕೃತಿಯಾಗಿತ್ತು.
ಇಂದು ಕರ್ನಾಟಕ ಚರಿತ್ರೆಯನ್ನು ಓದಲು ಹೋದರೆ, ಮಧ್ಯಕಾಲೀನ ಚರಿತ್ರೆಯಲ್ಲಿ ವಿಜಯ­ನಗರಕ್ಕೆ ಸಿಕ್ಕಷ್ಟು ಪ್ರಾಮುಖ್ಯ ಬಹಮನಿ ಚರಿತ್ರೆಗೆ ಸಿಗಲಾರದು. ನಿಜ಼ಾಮರು ಮುಸಲ್ಮಾನರಾಗಿ­ರುವುದು ಸಹ ಚರಿತ್ರೆಯ ಕಡೆ ಒಲವನ್ನು ತೋರದೇ ಇರಲು ಒಂದು ಪ್ರಮುಖ ಕಾರಣ­ವಾಗಿದೆ. ಅಷ್ಟೇ ಅಲ್ಲದೇ, ಸುಮಾರು ಐನೂರು ವರ್ಷಗಳ ಕಾಲ ಬರೆದ ನಮ್ಮ ಸಾಹಿತ್ಯವನ್ನು ಮುಸ್ಲಿಂ ಸಾಹಿತ್ಯವೆಂಬ ತಪ್ಪು ಕಲ್ಪನೆಯಲ್ಲಿ ಪಕ್ಕಕ್ಕಿಡಲಾಗಿದೆ. ಆ ನಡುವಿನ ಚಾರಿತ್ರಿಕ ಮಾಹಿತಿಯ ಕಡೆ ಅಷ್ಟೇನೂ ಗಮನ ಹರಿಸಿಲ್ಲ. ಉತ್ತರ ಕರ್ನಾಟಕದ ಜನ ತಮ್ಮ ಚರಿತ್ರೆಗಾಗಿ ಇತಿಹಾಸದ ಪುಟಗಳನ್ನು ತಿರುಗಿಸಿದರೆ ಅಲ್ಲಿ ದೀರ್ಘ ಮೌನ ಕಾಣುತ್ತದೆ.
ಆ ಕಾಲದ ಸಾಹಿತ್ಯ ಆಕರಗಳನ್ನು ಓದಿ ಚರಿತ್ರೆಗೆ ಬಳಸಬೇಕಾದರೆ, ಉರ್ದು ಭಾಷೆಯ ಅರಿವು ಅಗತ್ಯವಾಗಿದೆ. ಕರ್ನಾಟಕ ಚರಿತ್ರೆ­ಯೆಂದರೆ ವಿಜಯನಗರದ ಚರಿತ್ರೆ­ಯೇನೋ ಎಂಬಂತೆ ವೈಭವೀಕರಿಸಲು ಇಂತಹ ಕಾರಣಗಳು ಅಂತರಂಗದಲ್ಲಿ ಹುದು­ಗಿವೆ. ಕಳೆದುಕೊಂಡಿ­ರುವುದು ಮುಸಲ್ಮಾನರ ಸಾಹಿತ್ಯವನ್ನೋ ಅಥವಾ ಇಸ್ಲಾಂ ಆಳ್ವಿಕೆಯ ಚರಿತ್ರೆಯನ್ನೋ ಮಾತ್ರವಲ್ಲ, ಕರ್ನಾಟಕದ ಒಂದು ಭಾಗದ ಜನಪದರ ಬದುಕು, ಸಾಹಿತ್ಯ ಎಲ್ಲವೂ ಚರಿತ್ರೆಯ ಗರ್ಭದಲ್ಲಿ ಹಾಗೇ ಉಳಿದಿವೆ. ಬೀದರ್‌ನ ಕಥೆ ಹೇಳಲು ಹೋಗು­ವವರಿಗೆ ವಚನ ಸಾಹಿತ್ಯದ ನಂತರ ಎಲ್ಲವೂ ನಿರ್ವಾತವಾಗಿ ಕಾಣುತ್ತದೆ.
ಉರ್ದು ಭಾಷೆ ಮುಸಲ್ಮಾನರ ಭಾಷೆ ಎಂಬ ಧಾರ್ಮಿಕ ಬಣ್ಣವನ್ನು ಪಡೆದು ಹಲವು ವರ್ಷ­ಗಳೇ ಕಳೆದು ಹೋಗಿರುವುದರಿಂದ ಅದರ ಅರಿವೇ ಇಲ್ಲದೇ ಸರ್ಕಾರವೂ ಹಾಗೇ ನಡೆದು­ಕೊಳ್ಳುತ್ತಾ ಬಂದಿದೆ. ಉರ್ದು ಅಕಾಡೆಮಿ­ಯನ್ನು ವಕ್ಫ್ ಬೋರ್ಡಿನ ಅಡಿಗೆ ಅಂದರೆ ಧಾರ್ಮಿಕ ಅಂಗ ಸಂಸ್ಥೆಯೊಂದರ ಹಿಡಿತಕ್ಕೆ ಕೊಟ್ಟಿರುವುದು ಇದಕ್ಕೊಂದು ಸಣ್ಣ ಉದಾಹ­ರಣೆ ಮಾತ್ರ. ಭಾರತದ ಕೋಮು ರಾಜಕೀಯಕ್ಕೆ ಬಲಿಯಾದ ನಮ್ಮದೇ ಕೂಸು ಉರ್ದು ಭಾಷೆ.


ಕೃಷ್ಣ, ಕನಕ ಮತ್ತು ಪ್ರಸ್ತುತ ರಾಜಕೀಯ
Tue, 11/12/2013

ರ್ನಾಟಕದ ಬಹುಮುಖ್ಯ ಸಮುದಾಯ ವಾದ ಕುರುಬರು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ತಮ್ಮನ್ನು ಹೆಚ್ಚೆಚ್ಚು ಪ್ರಕಟಪಡಿಸಿಕೊಳ್ಳುತ್ತಿದ್ದಾರೆ. ಅದು ಸಹಜವೂ ಹೌದು. ‘ಅಹಿಂದ’ ಸಂಘಟನೆಯ ಮೂಲಕ ಜನನಾಯಕರಾಗಿ ಮೂಡಿಬಂದ ಸಿದ್ದರಾಮಯ್ಯನವರಿಂದಾಗಿ ಆ ಸಮುದಾಯ ಗಳಿಗೆ ದನಿ ಬಂದಂತಾಗಿದೆ.
ಅಂಬೇಡ್ಕರ್‌ ಅವರು ಸಮುದಾಯದ ಬೆಳವಣಿಗೆಗೆ ರಾಜಕೀಯ ಅಧಿಕಾರ ಬೇಕು ಎಂದು ಬಯಸಿದ್ದನ್ನು ಇಲ್ಲಿ ನೆನೆಯಬಹುದು. ಕರ್ನಾಟಕದ ಪಶುಪಾಲಕ ಸಮುದಾಯ ಗಳಲ್ಲಿ ಕುರುಬರು ಪ್ರಮುಖರು. ಇವರು ಮೂಲತಃ ಕನ್ನಡಿಗರು. ಪಶುಪಾಲನೆಯನ್ನೇ ಉಳಿಸಿಕೊಂಡು ಅರೆ ಅಲೆಮಾರಿಗಳಾಗಿ ಬದುಕುವ ಕುರುಬರು ಇಂದಿಗೂ ಇದ್ದಾರೆ. ಅವರು ಕಾಡುಗೊಲ್ಲರಂತೆ ಹುಲ್ಲುಗಾವಲು ಗಳನ್ನು ಅರಸಿ ನಾಡಿನುದ್ದಗಲಕ್ಕೂ ಓಡಾಡುತ್ತಾರೆ.
ಕೃಷಿ ವಿಸ್ತರಿಸಿದಂತೆ, ಜನವಸತಿ ಹೆಚ್ಚಿದಂತೆ ಹುಲ್ಲುಗಾವಲುಗಳು ಕರಗುತ್ತಿವೆ.  ಇಷ್ಟಾದರೂ ಪುರಾತನವಾದ ಪಶುಪಾಲನಾ ವಿಧಾನವನ್ನೇ ಅನುಸರಿಸುತ್ತಾ ಬಂದಿರುವುದು ವಿಶೇಷವೇ ಸರಿ. ಆದ್ದರಿಂದ ಅವರು ಮಾತನಾಡುವ ಭಾಷೆ ಯಲ್ಲೂ ತನ್ನ ಪ್ರಾಚೀನತೆಯು ಉಳಿದಿದೆ. ಅದ ರಲ್ಲೂ ಜೇನು ಕುರುಬರ ಮಾತಿನಲ್ಲಿ ಕನ್ನಡದ ಮೂಲ ಪದಗಳು ಉಳಿದು ಬಂದಿವೆ.
ಕುರುಬ ರಲ್ಲಿ ಕೆಲವರು ಪಶುಪಾಲಕರ ಹಂತದಲ್ಲಿದ್ದರೆ, ಮತ್ತೆ ಕೆಲವರು ಬುಡಕಟ್ಟು ಹಂತದಲ್ಲೇ ಇದ್ದಾರೆ. ಹೆಚ್ಚಿನವರು ಕೃಷಿಕರಾಗಿ ನೆಲೆ ನಿಂತಿದ್ದಾರೆ. ಪ್ರಸ್ತುತ ಕೃಷಿ ಹಂತದಿಂದ ಮೇಲೆದ್ದು ಆಧುನಿಕತೆಯ ಕಡೆಗೆ ದಾಪುಗಾಲು ಹಾಕಿದೆ ಈ ಸಮುದಾಯ. ಇದು ಅವರನ್ನು ರಾಜಕೀಯವಾಗಿ ಸಮರ್ಥವಾಗುವಂತೆ ಮಾಡಿದೆ.
ತಮ್ಮ ‘ಐಡೆಂಟಿಟಿ’ಗಾಗಿ ಶಿಕ್ಷಿತ ಸಮುದಾಯ ಇಂದು ಚರ್ಚೆಗಿಳಿದಿರುವುದು ಕಾಣಬರುತ್ತದೆ. ಈ ಐಡೆಂಟಿಟಿಗಳಲ್ಲಿ ಕನಕದಾಸರಿಗೆ ಸಾಂಸ್ಕೃತಿಕ ನಾಯಕತ್ವ ಕೊಡಲಾಗಿ, ಕನಕ ಕೇಂದ್ರಿತವಾದ ಹಲವು ಪ್ರಶ್ನೆಗಳು ತಲೆಯೆತ್ತುತ್ತಿವೆ. ಕನಕರು ವೈಷ್ಣವ ಪಂಥಾನುಯಾಯಿಯಾಗಿ ದಾಸವರೇಣ್ಯರಲ್ಲಿ ಒಬ್ಬರಾಗಿದ್ದರು. ಆದಾಗ್ಯೂ ಸಾಮರಸ್ಯ ಮತ್ತು ಸಂಘರ್ಷಗಳನ್ನು ತಮ್ಮ ಸಾಹಿತ್ಯದಲ್ಲಿ ಪ್ರಕಟಪಡಿಸಿದ್ದು ಅಧ್ಯಯನಕ್ಕೆ ಇಂದೂ ಗ್ರಾಸವಾಗಿದೆ.
ಕನಕರು ವೈಷ್ಣವರಾದ ಕಾರಣಕ್ಕೆ ಕುರುಬರು ವೈಷ್ಣವ ಪಂಥವನ್ನು ಅನುಸರಿಸಬೇಕೇ, ಅನುಸರಿ ಸಬಾರದೇ ಎಂಬ ಪ್ರಶ್ನೆ ಇಂದು ಉಡುಪಿಯ ಶ್ರೀ ಕೃಷ್ಣನ ದೇಗುಲಕ್ಕೂ, ಮಠಕ್ಕೂ ಹೋಗಿ ನಿಲ್ಲುತ್ತದೆ. ಚರಿತ್ರೆಯನ್ನು ಮುಂದಿಟ್ಟು ಇಂದಿನ ಉಡುಪಿಯ ದೇಗುಲದ ನಂಬಿಕೆಗಳನ್ನು ಪ್ರಶ್ನಿಸು ವುದು ನನ್ನ ಉದ್ದೇಶವಲ್ಲ. ಆದರೆ, ಚರಿತ್ರೆಯ ವಿಚಾರಗಳನ್ನು ಮುಂದಿಟ್ಟು ಜನ ವಾದಕ್ಕಿಳಿಯು ವುದರಿಂದ, ಕನಕನ ಚರಿತ್ರೆ ಮತ್ತೆ ಮತ್ತೆ ಪರಾಮರ್ಶನಗೊಳ್ಳುತ್ತಿದೆ.
ಸುಮಾರು 2,300 ವರ್ಷಗಳ ಹಿಂದೆ ಕರಾವಳಿಗೆ ಉತ್ತರದಿಂದ ಬರುತ್ತಿದ್ದ ವ್ಯಾಪಾರಗಾರರು ಬೌದ್ಧರಾಗಿದ್ದು ಇಲ್ಲಿ ಬೌದ್ಧ ಕೇಂದ್ರಗಳನ್ನು ಸ್ಥಾಪಿಸಿದ್ದರು. ಅಂತಹ ಕೇಂದ್ರಗಳಲ್ಲಿ ಉಡುಪಿಯೂ ಒಂದು. ಕರಾವಳಿಯ ದೇವಾಲಯಗಳು ಸಾಗರದಲ್ಲಿ ಬರುವ ವ್ಯಾಪಾರಗಾರರಿಗೆ ದೀಪಸ್ತಂಭಗಳಾಗಿ ದಾರಿ ತೋರಿಸುತ್ತಿದ್ದವು. ಆ ಕಾರಣಕ್ಕೂ ದೇವರು ಪಶ್ಚಿಮ ಮುಖವಾಗಿರುವ ಸಾಧ್ಯತೆ ಇದೆ.
ಮಾಧ್ವರು ಉಡುಪಿಯನ್ನು ಕೈಗೆತ್ತಿಕೊಳ್ಳುವ ಹೊತ್ತಿಗೆ ಮೂಲದಲ್ಲಿದ್ದ ಬೌದ್ಧ ಯಕ್ಷನ ಪ್ರತಿಮೆ ಯನ್ನು ಜನರು ಕೃಷ್ಣನೆಂದು ಆರಾಧಿಸ ತೊಡಗಿದ್ದರು. ದಂಡ ಹಿಡಿದ ಯಕ್ಷನನ್ನು ಕಡೆ ಗೋಲ ಕೃಷ್ಣನೆಂದು ನಂಬಿ ದೇಗುಲ ಕಟ್ಟಿದರು. ವೈಷ್ಣವ ಮತ ಪ್ರಬಲವಾಗಿದ್ದ 14–15ನೇ ಶತ ಮಾನದಲ್ಲಿ ಅದರಲ್ಲೂ ವಿಜಯನಗರ ಸಾಮ್ರಾ ಜ್ಯದ ಎರಡನೆಯ ಅರ್ಧದಲ್ಲಿ ವೈಷ್ಣವ ಮತಕ್ಕೆ ಹೆಚ್ಚಿನ ಆದ್ಯತೆ ದೊರಕಿತು. ಹಾಗಾಗಿ ವೈಷ್ಣವ ದೇವಾಲಯಗಳೂ ಪ್ರಾಬಲ್ಯಕ್ಕೆ ಬಂದವು.
ಈ ಎಲ್ಲಾ ಹಿನ್ನೆಲೆಯಲ್ಲಿ ಕನಕ ತನ್ನ ಕುಲ ಮೂಲದ ದೇವರಾದ ಬೀರಪ್ಪನನ್ನು ಬಿಟ್ಟು ಆದಿ ಕೇಶವನನ್ನು ಹಾಡಿ ಹೊಗಳಿದರೆ, ಅದು ಸಮಾಜದಲ್ಲಿ ಮೇಲಿನ ಸ್ತರದಲ್ಲಿದ್ದ ವೈದಿಕರ ಸಮಕ್ಕೇರುವ ಪ್ರಯತ್ನವಾಗಿತ್ತು. ಆದರೆ ಹಾಗೆ ಏರುತ್ತಲೇ ತನ್ನ ಸಾಮರ್ಥ್ಯವನ್ನೂ, ಪ್ರತಿಭಟನೆ ಯನ್ನೂ ತೋರ್ಪಡಿಸುವ ಸಾಧ್ಯತೆಯಾಯಿತು.
ಇಂದು ನಡೆಯುತ್ತಿರುವ ಧರ್ಮಗುರುಗಳ ವಾದದಲ್ಲಿ ಕುರುಬರು ಮೂಲತಃ ಶೈವರು, ಆದ್ದರಿಂದ ಉಡುಪಿಯ ಪೇಜಾವರ ಶ್ರೀಗಳು ಅವರಿಗೆ ವೈಷ್ಣವ ದೀಕ್ಷೆಯ ವಿಚಾರವನ್ನು ಹೇಳು ವುದು ಅಸಮಂಜಸ ಎಂದು ಹೇಳಲಾಗುತ್ತಿದೆ. ಕುರುಬರ ಮೂಲ ದೇವರು ಬೀರಪ್ಪ, ಮೈಲಾರ, ಎಲ್ಲಮ್ಮ ಇತ್ಯಾದಿಯಾದ ಜನಪದ ದೇವತೆಗಳು. ಕರ್ನಾಟಕದಲ್ಲಿ ಶೈವ ಪಂಥ ಹರಡತೊಡಗಿ ದಾಗ ಮೂಲದ ಜನಪದ ದೇವತೆಗಳು ಶೈವ ಗೊಂಡವು. ಬೀರಪ್ಪ - ಬೀರೇಶ್ವರನಾದ, ಮೈಲಾರ -ಮೈಲಾರಲಿಂಗವಾಯಿತು.
ಮಾದಪ್ಪ- ಮಾದೇಶ್ವರನಾದ. ಹಾಗಾಗಿ ಕುರುಬರು ಶೈವರಾಗಿ ಕಾಣಿಸಿಕೊಳ್ಳುತ್ತಾರೆ. ಜನಪದರು ತಮ್ಮ ಜನಪದ ದೇವರುಗಳನ್ನು ಪೂಜಿಸುವುದಲ್ಲದೇ ಇತರರ ದೇವರುಗಳಿಗೂ ನಡೆದುಕೊಳ್ಳುತ್ತಾರೆ. ವೆಂಕಟೇಶ್ವರ, ಮಂಜುನಾಥ, ಉಡುಪಿಯ ಕೃಷ್ಣ– ಇವೆಲ್ಲಾ ರಾಜಾಶ್ರಯದಿಂದ ಬೆಳೆದು ನಿಂತಾಗ ಆ ದೇವರುಗಳಿಗೆ ಜನಪದರು ನಡೆದುಕೊಳ್ಳ ತೊಡಗಿದರು. ಅದರ ಅರ್ಥ ಅವರು ಶೈವ ರೆಂದಾಗಲೀ, ವೈಷ್ಣವರೆಂದಾಗಲೀ ಅಲ್ಲ.
ಹೆಚ್ಚೆಂದರೆ ಶಿವನಿಗೆ ನಡೆದುಕೊಳ್ಳುವವರು ಸೋಮವಾರವನ್ನೂ, ಶ್ರೀನಿವಾಸನಿಗೆ ನಡೆದು ಕೊಳ್ಳುವವರು ಶನಿವಾರವನ್ನೂ ವಾರವಾಗಿ ಆಚರಿಸುತ್ತಾರೆ. ಅದರಾಚೆಗೆ ಬದುಕಿನ ಕ್ರಮ ದಲ್ಲಿ ಹೆಚ್ಚೇನೂ ಅಂತರಗಳಿರುವುದಿಲ್ಲ. ಮಂಜುನಾಥ, ರಂಗನಾಥರಿಗೆ ಮಾತ್ರವಲ್ಲ ಹಾಸನ ಜಿಲ್ಲೆಯಲ್ಲಿ ಜಿನನಾಥನಿಗೂ ಪೂಜೆ ಕೊಡುತ್ತಾರೆ. ಉತ್ತರ ಕರ್ನಾಟಕದಾದ್ಯಂತ ಉರುಸ್, ಬಸವ ಜಯಂತಿಗಳನ್ನು ತಪ್ಪದೇ ಆಚರಿಸುತ್ತಾರೆ. ಹಾಗೆಂದು ಅವರು ಮುಸಲ್ಮಾನರೂ ಅಲ್ಲ, ಅಥವಾ ವೀರಶೈವ ದೀಕ್ಷೆಯನ್ನು ಸ್ವೀಕರಿಸಿದ ವರೂ ಅಲ್ಲ. ಜನಪದರಲ್ಲಿ ಪಂಥ ಸಿದ್ಧಾಂತ ಗಳನ್ನು ಮೀರಿದ ಉದಾರತೆ ಸಹಜವಾಗಿ ಕಾಣುತ್ತದೆ.
ದಕ್ಷಿಣ ಕರ್ನಾಟಕದಲ್ಲಿ ಅದರಲ್ಲೂ ಹಾಸನ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ರಾಮಾನುಜಾಚಾರ್ಯರ ಪ್ರಭಾವದಿಂದ 12ನೇ ಶತಮಾನದಲ್ಲಿ ವೈಷ್ಣವಧರ್ಮ ಪ್ರಚಲಿತ ಗೊಂಡಿತು. ಆನಂತರದಲ್ಲಿ ಜನಪದ ದೇವರು ಗಳು ವೈಷ್ಣವಗೊಂಡಿವೆ. ಎಲ್ಲಾ ಊರ ದೇವತೆ ಗಳನ್ನು ಲಕ್ಷ್ಮಿಯ ಅಂಶವೆಂದೂ, ಗಂಡು ದೇವರು ಗಳನ್ನು ವಿಷ್ಣುವಿನ ಅಂಶ ಇಲ್ಲವೇ ನರಸಿಂಹ ಅಥವಾ ಗರುಡನ ಅವತಾರವೆಂದು ಭಾವಿಸ ತೊಡಗಿದರು.
ಗಿಡ್ಡಮ್ಮ, ಮೆಳ್ಳಳ್ಳಿಯಮ್ಮ, ತೆರಣ್ಯದಮ್ಮ ಎಲ್ಲರೂ ಲಕ್ಷ್ಮಿಯರೇ ಆಗಿದ್ದಾರೆ, ಹಾಗೆಂದರೆ ಇವರನ್ನು ಆರಾಧಿಸುವವರೆಲ್ಲಾ ವೈಷ್ಣವರೇ? ಅದ್ವೈತ, ದ್ವೈತ, ವಿಶಿಷ್ಟಾದ್ವೈತ, ಶಕ್ತಿ ವಿಶಿಷ್ಟಾದ್ವೈತ ಇವೆಲ್ಲಾ ಅವರು ಎಂದೂ ಕೇಳರಿಯದ ಪದಗಳು. ಅಥವಾ ಅವು ಅವರ ಬದುಕಿನ ಮೂಲಭೂತ ಸವಾಲುಗಳಲ್ಲ.
ನಮ್ಮಲ್ಲಿರುವ ಇವತ್ತಿನ ಕಲ್ಪನೆಯ ಶೈವವೂ ಒಂದು ಮೂಲದ್ದಲ್ಲ. ಪಾಶುಪತ, ಲಕುಲೀಶ,  ಕಾಪಾಲಿಕ, ರುದ್ರ, ಭೈರವ, ಮಹಾದೇವ, ನಾಥ, ಹೀಗೆ ಹಲವು ಭಿನ್ನ ಧಾರೆಗಳು ಅದರಲ್ಲಿ ಸೇರಿಹೋಗಿವೆ. ಹಾಗೆ ನೋಡಿದರೆ, ಯಾವುದೂ ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದುದಲ್ಲ. ಹಲವು ಮೂಲೆಗಳಿಂದ ಹರಿದು ಬಂದವು. ವೀರಶೈವ ಪಂಥವೊಂದೇ ಈ ನಾಡಿನ ಕೊಡುಗೆ. ವೀರಶೈವ ಚಳವಳಿಯ ಸಂದರ್ಭದಲ್ಲಿ ಕುರುಬರು ವೀರ ಶೈವರಾದರು ಅಥವಾ ಅದರ ಪ್ರಭಾವದಿಂದ ಸಸ್ಯಾಹಾರಿಗಳಾದ ಹಲವು ಜಾತಿಗಳಲ್ಲಿ ಕುರುಬರೂ ಸೇರುತ್ತಾರೆ.
ವಿಜಯನಗರ ಸಾಮ್ರಾಜ್ಯದ ಹುಟ್ಟನ್ನು ಕುರುಬ ಜನಾಂಗದ ಮೂಲದಲ್ಲಿ ಗುರುತಿಸ ಲಾಗಿದೆ. ಹಂಪಿ ಪ್ರದೇಶದ ಬಹುಸಂಖ್ಯಾತ ಸಮುದಾಯವಾದ ಪಶುಪಾಲಕ ಹಿನ್ನೆಲೆಯಿಂದ ಬಂದ ಜನ ರಾಜತ್ವವನ್ನು ಹುಟ್ಟು ಹಾಕಿದ್ದರೆ, ಅದು ಸಹಜವಾದ ಪ್ರಕ್ರಿಯೆಯೇ ಆಗುತ್ತದೆ.
ಕನ್ನಡನಾಡಿನ ಮೂಲ ಜನರು ನಾಲ್ಕು ಹಿನ್ನೆಲೆಗಳಿಂದ ಬರುತ್ತಾರೆ. ಬಯಲು ಸೀಮೆಯ ಪಶುಪಾಲಕರು, ಕಡಲತೀರದ ಮೀನುಗಾರರು, ಗುಡ್ಡಗಾಡು ಪ್ರದೇಶದ ಬೇಡರು, ಆನಂತರದಲ್ಲಿ ನೆಲೆನಿಂತು ಕೃಷಿಕರಾದ ಸಮುದಾಯಗಳು. ಈ ನಾಲ್ಕು ಸಮುದಾಯಗಳ ಹಿನ್ನೆಲೆಯಲ್ಲಿ ರಾಜತ್ವದ ಹುಟ್ಟು ತಾರ್ಕಿಕವಾಗಿರುತ್ತದೆ. ಹಾಗೇ ಮಧ್ಯಕಾಲೀನ ಯುಗದಲ್ಲಿ ಬಂದ ವಿಜಯನಗರ ಸಾಮ್ರಾಜ್ಯದ ನಂತರ ಅಂದರೆ, ೧೫ನೆಯ ಶತಮಾನದ ನಂತರ ಆ ಸಮುದಾಯಕ್ಕೆ ಮತ್ತೆ ಅಧಿಕಾರ ಸಿಗಲು ೫೦೦ ವರ್ಷಗಳೇ ಕಳೆದಿವೆ. ಈ ಹೊತ್ತಿನಲ್ಲಿ ಸಿದ್ದರಾಮಯ್ಯನವರು ನಾಯಕತ್ವ ವಹಿಸಿರುವಾಗ ಜವಾಬ್ದಾರಿಗಳು ಅಷ್ಟೇ ಗುರುತರವಾಗಿವೆ.
ಹಾಗಾಗಿ, ಈ ನಾಯಕತ್ವಕ್ಕೆ ಬೆಂಬಲ ಕೊಡುವ ಜನರು ಮೈಮರೆಯದಂತೆ ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗು ತ್ತದೆ. ಉಡುಪಿಯಿಂದ ಎದ್ದಿರುವ ದಿಕ್ಕು ತಪ್ಪಿಸುವ ಪ್ರಶ್ನೆಗಳಿಗೆ ಮನ್ನಣೆ ಕೊಡುವುದಕ್ಕಿಂತ ಸಮುದಾಯ ಎದುರಿಸುತ್ತಿರುವ ಪ್ರಮುಖ ಸಾಮಾಜಿಕ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳ ಬೇಕಾಗಿದೆ. ಇಂತಹ ವಾದಗಳು ಪ್ರಗತಿಯೆಡೆಗೆ ಸಾಗಬೇಕಾದ ಜನರ ಗಮನವನ್ನು ಅಡ್ಡದಾರಿ ಗೆಳೆಯುತ್ತವೆ.
ಕರ್ನಾಟಕದಲ್ಲಿ ಶೇಕಡ ೫೦ಕ್ಕೂ ಹೆಚ್ಚು ಹೆಣ್ಣುಮಕ್ಕಳು ೧೫ ವರ್ಷಕ್ಕೆ ಮೊದಲೇ ಮದುವೆಯಾಗುತ್ತಿದ್ದಾರೆ. ಉತ್ತರ ಕರ್ನಾಟಕದ ಜಿಲ್ಲೆಗಳಾದ ರಾಯಚೂರು, ಗುಲ್ಬರ್ಗ, ಕೊಪ್ಪಳ, ಹಾವೇರಿ, ಬಳ್ಳಾರಿ ಹಾಗೂ ದಕ್ಷಿಣ ಕರ್ನಾಟಕದ ಚಾಮರಾಜ ನಗರಗಳಲ್ಲಿ ಇವರ ಸಂಖ್ಯೆ ಅತ್ಯಂತ ಹೆಚ್ಚಾಗಿದೆ. ಅದರಲ್ಲೂ ಕುರುಬ ಸಮುದಾಯದ ಹೆಣ್ಣು ಮಕ್ಕಳಿಗೆ ನಾಲ್ಕೈದು ವರ್ಷಕ್ಕೇ ತಾಳಿ ಕಟ್ಟಲಾಗುತ್ತಿದೆ. ತೊಟ್ಟಿಲ ಮದುವೆಗಳು ಇಂದಿಗೂ ನಿರಂತರವಾಗಿ ನಡೆ ಯುತ್ತಿವೆ ಎಂದರೆ ಅದು ಅತಿಶಯೋಕ್ತಿಯಲ್ಲ.
ಯಾದಗಿರಿ ಸಮೀಪದ ಹಳ್ಳಿ ಕಾನಳ್ಳಿ. ಮಲ್ಲಮ್ಮ, ಬಸಮ್ಮ, ಸಾಕಮ್ಮ, ದೇವಮ್ಮ ಇವ ರೆಲ್ಲರೂ ಮೂರು–ನಾಲ್ಕು ವಯಸ್ಸಿಗೇ ಮದುವೆ ಯಾದವರು. ಸೋದರಮಾವನಿಗೆ, ಇಲ್ಲವೇ ಸೋದರಮಾವನ ಮಗ ಅಥವಾ ಮತ್ಯಾರಾ ದರೂ ಕುಟುಂಬದ ಹುಡುಗರಿಗೆ ಕೊಟ್ಟವರು. ಈ ಹುಡುಗಿಯರನ್ನು ಹನ್ನೆರಡು ಹದಿಮೂರಕ್ಕೆ ಮೈನೆರೆದಾಗ ಅವರ ಗಂಡನ ಮನೆಗೆ ಕಳುಹಿಸಿ ದ್ದಾರೆ. ಹದಿನೈದಕ್ಕೆ ತಾಯಿಯಾಗಿ, ಹದಿನಾರಕ್ಕೆ ಕಂಕುಳಲ್ಲಿ ಒಂದು, ಹೊಟ್ಟೆಯಲ್ಲಿ ಮತ್ತೊಂದನ್ನು ಹೊತ್ತ ಪುಟ್ಟ ತಾಯಂದಿ ರಾಗಿದ್ದಾರೆ.
ಕೂಲಿ ಮಾಡುತ್ತಾ ಬದುಕನ್ನು ತೇಯುತ್ತಿದ್ದಾರೆ. ಕುರುಬ, ಕಬ್ಬಲಿಗ ಈ ಜಾತಿ ಯಿಂದ ಬಂದ ಈ ಪುಟ್ಟ ತಾಯಂದಿರು ಬೆಂಗಳೂರಿನ ಬೀದಿ ಬೀದಿಗಳಲ್ಲಿ ಗಾರೆ ಕೆಲಸಕ್ಕೆ ಕಚ್ಚೆ ಕಟ್ಟಿ ನಿಂತಿದ್ದಾರೆ. ಇಲ್ಲವೇ ಮನೆ ಮನೆಯ ಕಸಗುಡಿಸಿ ಪಾತ್ರೆ ಬೆಳಗುತ್ತಾರೆ. ಚಾಮರಾಜ ನಗರದ ಉಪ್ಪಾರರೂ ಇಂತಹುದೇ ಸುಳಿಗೆ ಸಿಕ್ಕಿ ಮೂವತ್ತು ವಯಸ್ಸಿಗೆಲ್ಲಾ ಗಂಡ ಬಿಟ್ಟ ಒಂಟಿ ಹೆಣ್ಣುಗಳಾಗಿ ಉಳಿದು ಕೂಲಿ ನಾಲಿ ಮಾಡಿ  ಬದುಕನ್ನು ಕರಗಿಸುತ್ತಾರೆ.
ಇವರೆಲ್ಲರ ಬಿಡು ಗಡೆಗೆ ಶೈವ ಅಥವಾ ವೈಷ್ಣವ ಸಿದ್ಧಾಂತಗಳು ಸಹಾಯಕ್ಕೆ ಬರಲಾರವು. ಬಡತನಕ್ಕಂಟಿದ ಮೂಢನಂಬಿಕೆ ನಾಯಿಯ ಮೈಗೆ ಹತ್ತಿದ ಚಿಗಟದ ಹಾಗೆ ಜೊತೆಯಲ್ಲೇ ಸದಾ ರಕ್ತ ಹೀರು ತ್ತದೆ. ಬಿಡುಗಡೆಯ ಕುರಿತು ಯೋಚಿಸುವ ಸದ ವಕಾಶ ಅಹಿಂದ ಚಳವಳಿಯದಾಗಬಾರದೇಕೆ?



ಬಡವರಿಗೆ ಮುಚ್ಚುವ ನಗರದ ಬಾಗಿಲು
Tue, 10/29/2013

ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲ
ಒಡಲ ಬೆಂಕೀಲಿ ಹೆಣ ಬೆಂದೋ/ ಪರಶಿವನೇ
ಬಡವರಿಗೆ ಸಾವ ಕೊಡಬೇಡ.
‘ಕೊಳಚೆ ನಿರ್ಮೂಲನ ಮಂಡಳಿ’. ಬಹು ವರ್ಷಗಳಿಂದ ಆ ಬೋರ್ಡ್ ನೋಡುವಾಗಲೆಲ್ಲ ನಗರದ ಕೊಳಚೆ ಯನ್ನು ನಿರ್ಮೂಲನ ಮಾಡುವ ಇಲಾಖೆ ಯೆಂದೇ ಭಾವಿಸಿದ್ದೆ. ಆದರೆ ಅದು ಕೊಳಚೆ ವಾಸದ (ಸ್ಲಂ) ನಿರ್ಮೂಲನ ಮಂಡಳಿ­­ಯೆಂದು ಅರ್ಥವಾದಾಗ ನಿಜವಾಗಿಯೂ ಮನಸ್ಸಿಗೆ ನೋವಾಯಿತು.
‘ನಿರ್ಮೂಲನ ಅಭಿವೃದ್ಧಿ’ ಮಂಡಳಿ ನಿರ್ಮೂಲನಗೊಳಿಸಿದ ಮೇಲೆ ಅಭಿವೃದ್ಧಿಪಡಿಸುವುದಾದರೂ ಏನನ್ನು? ಕೊಳಚೆವಾಸಿಗಳಿಗಾಗಿ ಮನೆಗಳನ್ನು ಕಟ್ಟಿ ಅದರ ಉದ್ಘಾಟನಾ ಸಂದರ್ಭದಲ್ಲಿ ಮಂತ್ರಿಗಳೊಬ್ಬರು 2020ರ ಹೊತ್ತಿಗೆ ಬೆಂಗಳೂರನ್ನು ಕೊಳಚೆ ಮುಕ್ತ ಪ್ರದೇಶವನ್ನಾಗಿ ಮಾಡಲಾಗುವುದು ಎಂದು ಭಾಷಣ ಮಾಡುತ್ತಾರೆ. ಇದರ ಅರ್ಥವಾದರೂ ಏನು. ಅರ್ಥ ಬಹುಸ್ಪಷ್ಟ. ಸ್ಲಂಗಳೇ ಇಲ್ಲದಂತೆ ಮಾಡುವುದು.
ಕೊಳಚೆ ವಾಸವನ್ನು ನಗರಗಳ ಕಪ್ಪುಚುಕ್ಕಿ, ಕ್ಯಾನ್ಸರ್‌ ಎಂದೆಲ್ಲಾ ವರ್ಣಿಸುವುದಿದೆ. ನಗರ ಗಳಿರುವುದು ಶ್ರೀಮಂತರಿಗೆ ಮಾತ್ರ ಎಂಬ ಭಾವನೆಯಿರುವುದರಿಂದಲೇ ಇಂತಹ ಮಾತು ಗಳು ಬರುತ್ತವೆ. ‘ಸ್ಲಂ ಆ್ಯಕ್‌್ಟ’ ಸಹ ಇದನ್ನೇ ಹೇಳುತ್ತದೆ. ಸ್ಲಂ ವಿಸ್ತರಿಸದಂತೆ ನೋಡಿ ಕೊಳ್ಳುವುದು, ಜನ ವಲಸೆ ಬರದಂತೆ ತಡೆಯುವುದು. ಕ್ಷಮಿಸಿ ‘ಬಡಜನತೆ’ ವಲಸೆ ಬರದಂತೆ ತಡೆಯುವುದು ಅದರ ಉದ್ದೇಶ.
ಹಾಗಾದರೆ ನಗರಗಳು ಯಾರಿಗೆ ಸೇರಿದ್ದು? ‘ಸ್ಲಂ’ ಎಂದರೇನೆಂದು ವಿವರಿಸಿಕೊಳ್ಳುವ ಮೊದಲು ನಗರಗಳೆಂದರೇನೆಂದು ಸ್ಪಷ್ಟಪಡಿಸಿ ಕೊಳ್ಳಬೇಕು. ಕೃಷಿಯನ್ನು ಹೊರತುಪಡಿಸಿ ಉಳಿ ದೆಲ್ಲ ಮಾನವನ ಉತ್ಪಾದನಾ ಚಟುವಟಿಕೆಗಳು ನಡೆಯುವ ಸ್ಥಳ ನಗರವೆನಿಸುತ್ತದೆ. ಅಲ್ಲಿ ಕೈಗಾ ರಿಕೆ, ವ್ಯಾಪಾರ, ಆಡಳಿತ, ಶಿಕ್ಷಣ, ಮನರಂಜನೆ ಹೀಗೆ ಮಾನವ ನಾಗರಿಕನಾದಂತೆ ಬೆಳೆಸಿ ಕೊಳ್ಳುತ್ತಾ ಬಂದ ಎಲ್ಲಾ ಚಟುವಟಿಕೆಗಳಿಗೆ ಅವಕಾಶವನ್ನು ಕಲ್ಪಿಸಿಕೊಳ್ಳಲಾಗುತ್ತದೆ.
ಕೈಗಾರಿಕೆಗಳೆಂದಾಗ ಅಲ್ಲಿ ಬಂಡವಾಳ ಗಾರರು, ಬೌದ್ಧಿಕ ವರ್ಗವಲ್ಲದೆ ದುಡಿಯುವ ಕಾರ್ಮಿಕರೂ ಇರಲೇಬೇಕು. ದುಡಿಮೆಗೆ ತಕ್ಕಹಾಗೆ ಒಳ್ಳೆ ಸಂಬಳ ಸಿಗುವುದೇ ಆದರೆ ಅವರು ಉತ್ತಮ ವಸತಿಯಲ್ಲೇ ಬದುಕನ್ನು ಸಾಗಿಸುತ್ತಾರೆ. ನಗರವೆಂದರೇ ಜನ ಒಂದು ಕಡೆ ಒತ್ತೊತ್ತಾಗಿ ಬದುಕುವುದು ಅನಿವಾರ್ಯ ವಾಗಿದೆ. ಹಾಗಾಗಿ ಕಿರಿದಾದ ಜಾಗಗಳಲ್ಲಿ ವಸತಿ ಯನ್ನು ರೂಪಿಸಿಕೊಳ್ಳತೊಡಗಿದರೆ ಜನಜಂಗುಳಿ ಹೆಚ್ಚಾಗುತ್ತದೆ.
ಹೆಚ್ಚಿದ ಜನಸಂಖ್ಯೆಗೆ ಮೂಲ ಭೂತ ಸೌಕರ್ಯಗಳನ್ನು ಒದಗಿಸುವ ಜವಾ ಬ್ದಾರಿಯನ್ನು ಹೊರುವವರು ಯಾರು? ಬಂಡವಾಳಗಾರರೇ, ಸರ್ಕಾರವೇ? ದುಡಿಯುವ ವರ್ಗಕ್ಕೆ ಬೇಡಿಕೆಯಿದ್ದರೆ ಬಂಡವಾಳಗಾರರೇ ಮುಂದಾಗಿ ಅವರ ಬದುಕಿಗೆ ಅನುಕೂಲ ಮಾಡಲು ಮುಂದಾಗುತ್ತಾರೆ. ಮೂರು ಸಾವಿರ ರೂಪಾಯಿಗೆ ತಿಂಗಳೆಲ್ಲಾ ದುಡಿಯಲು ಗಾರ್ಮೆಂಟ್‌ ಕೆಲಸಗಾರರು, ಯೂನಿಫಾರ್ಮು ಹಾಕಿ ಸಲಾಮು ಹೊಡೆಯುವ ಸೆಕ್ಯೂರಿಟಿ, ಮಾಲ್‌ಗಳಲ್ಲಿ ದುಡಿಯಲು ಸೇಲ್‌್ಸ ಹುಡುಗ ಹುಡುಗಿಯರು ಸಿದ್ಧವಾಗಿರುವಾಗ ಅವರ ಬದುಕಿನ ಮೇಲ್ವಿಚಾರಣೆಯನ್ನು ಯಾವ ಬಂಡ ವಾಳಗಾರನೂ ತೆಗೆದುಕೊಳ್ಳುವುದಿಲ್ಲ. ಅದನ್ನು ಸಾಮಾಜಿಕ ಜವಾಬ್ದಾರಿಯಾಗಿ ನೋಡಬೇಕಾ ದುದು ಪ್ರಜಾ ಸರ್ಕಾರದ ಜವಾಬ್ದಾರಿ.
ಯೋಜಿತ ನಗರಗಳನ್ನು ರೂಪಿಸುವಾಗಲೂ ಆ ಎಲ್ಲಾ ಯೋಜನೆಗಳು ರೂಪಿತವಾಗುವುದು ಉಳ್ಳವರಿಗೆ ಮಾತ್ರ. ಬಡಾವಣೆಗಳನ್ನು ನಿರ್ಮಿಸುವುದು ಮೇಲ್ವರ್ಗ ಹಾಗೂ ಸಂಬಳ ಪಡೆಯುವ ಮಧ್ಯಮ ವರ್ಗಕ್ಕೆ ಹೊರತು ಕೂಲಿ ಮಾಡುವ ಬಡವರಿಗಲ್ಲ. ಅಂತಹ ಮಹತ್ವದ ಯೋಜನೆಗಳೇನಾದರೂ ರೂಪಿತವಾದರೂ ಕೆಲವೇ ವರ್ಷಗಳಲ್ಲಿ ಆ ನಿವೇಶನಗಳನ್ನು ಮಾರಿಕೊಳ್ಳುವ ಸ್ಥಿತಿಗೆ ಬಡತನ ತಳ್ಳುತ್ತದೆ. ಕಡೆಗೂ ಬಡವರು ಊರ ಹೊರಗೆ ಜಾಗ ಹುಡುಕಿಕೊಳ್ಳಬೇಕು.
ಅಬ್ಬರದಲ್ಲಿ ಕೈಚಾಚುವ ನಗರ ಯಾವ ಮುಲಾಜು ಇಲ್ಲದೆ ಮಗ್ಗುಲಲ್ಲಿರುವ ಹಳ್ಳಿಗಳನ್ನೆಲ್ಲಾ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಶತಮಾನಗಳಿಂದ ಬದುಕಿದ ಮೂಲನಿವಾಸಿಗಳು ಭೂಮಿ ಕಳೆದುಕೊಂಡು, ಭೂಹೀನರಾಗಿ ‘ಸ್ಲಂ’ ಆಗಿ ರೂಪಾಂತರಗೊಳ್ಳುವ ಹಳ್ಳಿಯಲ್ಲಿ ಬದುಕು ಮುಂದುವರೆಸುತ್ತಾರೆ. ಭೂಮಿ ಕಸಿದುಕೊಂಡ ಜನರ ಮನೆಗಳು ಬೆಳೆದಂತೆ ನಗರದ ಮೂಲನಿವಾಸಿಗಳು ನೆಲಕಚ್ಚುತ್ತಾರೆ. ಆ ಹಳ್ಳಿಗೆ ನಗರದ ಸ್ವರೂಪ ಬರುವ ಹೊತ್ತಿಗೆ ಆ ಹಳ್ಳಿಯ ಜನ ‘ಸ್ಲಂ’ವಾಸಿಗಳೆಂಬ ಹೊಸ ‘ಶಿರೋನಾಮೆ’ ಹೊತ್ತು ಸಿಂಗರಿಸಿಕೊಂಡ ನಗರಕ್ಕೆ ಬೇಡದವರಾಗುತ್ತಾರೆ. ಆ ನೆಲದ ಭಾಷೆ, ಸಂಸ್ಕೃತಿಯು ಕುಟುಕು ಜೀವ ಹಿಡಿದು ಉಸಿರುಗಟ್ಟಿ ಸಾಯಲೂ ಆಗದೆ ಬದುಕಲೂ ಆಗದೆ ತನ್ನ ಕೊನೆ ಗಳಿಗೆಗಾಗಿ ಕಾಯುತ್ತದೆ.
ದಿನವೂ ನಗರದ ಕೊಳಚೆ ತೆಗೆಯುವ ಜನರ ಬದುಕು ಮಾತ್ರ ಕೊಳಗೇರಿಯಲ್ಲೇ, ಇಕ್ಕಟ್ಟಾದ ಜಾಗದಲ್ಲಿ ಮೂಲ ಸೌಕರ್ಯಗಳಿಲ್ಲದೆ ನೀರು, ಬೆಳಕು, ಒಲೆ ಉರಿಸುವ ಬೆಂಕಿಗಾಗಿ ದಿನಾ ಪರದಾಡಬೇಕು. ಒಳ್ಳೆ ಗಾಳಿ, ಒಳ್ಳೆ ನೀರು ಅದನ್ನು ಮಾತನಾಡುವುದೂ ದುಬಾರಿಯೇ. ಆಗಾಗ್ಗೆ ಬರುವ ರಾಜಕಾರಣಿಗಳು ಭರವಸೆ ಗಳನ್ನು ಕೊಟ್ಟು ಹೋಗುತ್ತಾರೆ. ನಿರಂತರವಾಗಿ ಅದೇ ಜಾಗದಲ್ಲಿ ಬದುಕಿದ್ದ ಅವರ ಬಾಗಿಲು ಗಳಿಗೂ ಸಂಖ್ಯೆಯೊಂದನ್ನು ನೀಡಿ ಮನೆ ಎಂತಲೋ ಜೋಪಡಿ ಎಂತಲೋ ಗುರುತಿಸಿದ್ದರೆ ಬಿ.ಪಿ.ಎಲ್‌. ಕಾರ್ಡ್ ದೊರೆಯುತ್ತದೆ. ಅದ ರೊಳಗೂ ಹೊಂದಿಸಿಕೊಂಡ ಹಳೆಯ ಟಿವಿ ಇದ್ದರೆ, ಸೈಕಲ್‌ ಇದ್ದರೆ, ಸಿಗುವ ಅಕ್ಕಿಗೂ ಕಲ್ಲು ಬೀಳುತ್ತದೆ.
ಸ್ಲಂವಾಸಿ ಮಹಿಳೆಯೊಬ್ಬರು ಹೇಳಿದ ಮಾತುಗಳಿವು. ಗರ್ಭಿಣಿಯೊಬ್ಬಳಿಗೆ ಹೆರಿಗೆ ಸಮಯ ಹತ್ತಿರವಾಗಿ ತೆರೆದ ಜೋಪಡಿಯಲ್ಲಿ ಹೆರಿಗೆಯಾಗುತ್ತಿದ್ದರೆ ಪಕ್ಕದ ಎತ್ತರ ಕಟ್ಟಡದಿಂದ ಜನ ನೋಡುತ್ತಾ ನಿಂತಿದ್ದರು. ರಸ್ತೆಯಲ್ಲಿ ಹೋಗುವ ಬಸ್‌ನ ಜನ ಬಗ್ಗಿ ಬಗ್ಗಿ ನೋಡು ತ್ತಿದ್ದರು. ಹಗಲುಹೊತ್ತಿನಲ್ಲಿ ಎಲ್ಲರೂ ಕೆಲಸಕ್ಕೆ ಹೋದರೆ ಅವಳ ಹೆರಿಗೆ ಅವಳೇ ಮಾಡಿ ಕೊಳ್ಳಬೇಕು. ಸರ್ಕಾರಿ ಆಸ್ಪತ್ರೆ, ದಾದಿ, ಹೀಗೆ ಏನೇನೋ ಮಾತಾಡಿ ಆ ಹೆಣ್ಣುಮಕ್ಕಳಿಗೆ ಅವಮಾನ ಮಾಡಲಾರೆ.
ಇಂತಹ ಸ್ಲಂಗಳಿಂದ ಕಾಯಿಲೆ ಹರಡುತ್ತದೆ. ಇಲ್ಲಿನ ಜನ ಕಳ್ಳತನ, ಕೊಲೆ ಸುಲಿಗೆ, ವೇಶ್ಯಾವಾಟಿಕೆಯಲ್ಲಿ ತೊಡಗು ತ್ತಾರೆ.  ಹೀಗೆ ಸ್ಲಂ ಸಮಸ್ಯೆಯನ್ನು ಕುರಿತು ಸಂಶೋಧನೆಗಳು ಪ್ರಕಟಗೊಳ್ಳುತ್ತವೆ. ಸ್ಲಂನ ಹುಳುಕುಗಳನ್ನು ಹೆಕ್ಕಿ ಹೆಕ್ಕಿ ತೆಗೆಯಲಾಗುತ್ತದೆ. ಆದ್ದರಿಂದ ಈ ಸ್ಲಂಗಳ ನಿರ್ಮೂಲನ ಅನಿವಾರ್ಯವೆಂಬ ತೀರ್ಮಾನಕ್ಕೆ ಬರಲಾಗು ತ್ತದೆ. ಆದರೂ ರಾಜಕಾರಣಿಗಳಿಗೆ ವೋಟ್‌ ಬ್ಯಾಂಕ್‌ ಆಗುವುದರಿಂದ ಅವುಗಳನ್ನು ಉಳಿಸಿ ಬೆಳೆಸುತ್ತಾರೆಂಬುದು ಅಡಿಟಿಪ್ಪಣಿ. ಹೀನ ಆರ್ಥಿಕತೆ ಬಹು ಸುಲಭವಾಗಿ ಯಾವುದೇ ಸಮಾಜವನ್ನು ಪಟ್ಟಭದ್ರ ಹಿತಾಸಕ್ತಿಗಳ ಕೈಗೆ ಸಿಕ್ಕಿಸುತ್ತದೆ. ಭೂಗತ ಜಗತ್ತು ತನ್ನ ಸೈನಿಕ ಪಡೆಯನ್ನು ಇಲ್ಲಿ ಕಟ್ಟಿಕೊಳ್ಳುತ್ತದೆ. ಇದು ಕೊನೆ ಮೊದಲಿಲ್ಲದ ವಿಷವರ್ತುಲ. ಬಹಳಷ್ಟು ಬಾರಿ ಕಾನೂನಿನ ಚೌಕಟ್ಟಿಗೆ ಸಿಕ್ಕದ ಸಮಾಜ ವಾಗುತ್ತದೆ.
ಈ ಜಗತ್ತಿನ ಕಥೆಗಳೇ ನಮ್ಮ ಸಿನಿಮಾ ಲೋಕದ ಆಕರ್ಷಕ ವಿಷಯಗಳು. ಲಾಂಗು, ಮಚ್ಚು, ಚೈನು ಇತ್ಯಾದಿಗಳನ್ನು ಹಿಡಿದ ಸ್ಲಂ ಯುವಕರ ಕಥೆಗಳು ಕನ್ನಡ ಸಿನಿಮಾ ಜಗತ್ತಿಗೆ ಮಾತ್ರವಲ್ಲ ಬಾಲಿವುಡ್‌ ನಿರ್ಮಾಪಕರಿಗೂ ರೋಚಕವೇ. ಮುಂಬೈ ಸ್ಲಂಗೂ, ಕೋಲ್ಕತ್ತ ಸ್ಲಂಗೂ, ಬೆಂಗಳೂರಿನ ಸ್ಲಂಗೂ ಬಹಳಷ್ಟು ಅಂತರವಿದೆ. ಇಕ್ಕಟ್ಟಾದ ಜಾಗ ಜನಸಂಖ್ಯೆಯ ಹೆಚ್ಚಳ, ನಿರಂತರವಾದ ವಲಸೆ ಮುಂಬೈ ಸ್ಲಂನ ವಿಸ್ತರಣೆಗೆ ಕಾರಣವಾಗಿದೆ.
ಮುಂಬೈನ ಅರ್ಧದಷ್ಟು ಜನ ಸ್ಲಂನಲ್ಲೇ ವಾಸಿಸುತ್ತಾರೆಂದರೆ ಅತಿಶಯೋಕ್ತಿಯಲ್ಲ. ಹಾಗಾಗಿ ಕೆಳಮಧ್ಯಮ ವರ್ಗವೂ ಒಂದು ಕೋಣೆಯ ಮನೆಗಳಲ್ಲಿ ತಮ್ಮನ್ನು ನಿರ್ಬಂಧಿಸಿಕೊಳ್ಳುತ್ತವೆ. ಲೇಖಕರು, ನಾಟಕಕಾರರು, ಪತ್ರಕರ್ತರು ಸ್ಲಂಗಳಲ್ಲಿ ವಾಸಿಸುತ್ತಿದ್ದರೆ ಆಶ್ಚರ್ಯವಲ್ಲ, ಈ ಕಾರಣಕ್ಕೂ ಅವರ ಸಾಹಿತ್ಯದಲ್ಲಿ ‘ಸ್ಲಂ’ನ ಬದುಕು ಪ್ರಧಾನವಾಗಿರುತ್ತದೆ. ಭಾರತವನ್ನು ಚಿತ್ರಿಸಿದ ‘ಸ್ಲಂ ಡಾಗ್‌ ಮಿಲಿಯನೇರ್‌’ ಸಿನಿಮಾ ಸ್ಲಂನ ವಿಕಾರತೆಯನ್ನು ಮಾತ್ರ ಕಾಣಲು ಸಾಧ್ಯ ವಾಯಿತು.
ಕೋಲ್ಕತ್ತದ ಸ್ಲಂನ ಕೇಂದ್ರದಲ್ಲೇ ಸಿ.ಐ.ಐ.ಎಂ.ನ ಕೇಂದ್ರ ಕಚೇರಿ ನೆಲೆಸಿದೆ. ಅದು ಬಡತನವನ್ನು ಎದುರಿಸುವ ರೀತಿ ಬಹು ಭಿನ್ನವಾಗಿದೆ. ಕೋಲ್ಕತ್ತ ಅಥವಾ ಮುಂಬೈನಲ್ಲಿನ ಸ್ಲಂನ್ನು ವಿಭಿನ್ನ ನೆಲೆಯಲ್ಲೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಭಾರತದ ಅತಿದೊಡ್ಡ ಸ್ಲಂಗಳಿರುವುದೇ ಮುಂಬೈ, ಕೋಲ್ಕತ್ತ ಮತ್ತು ದೆಹಲಿಗಳಲ್ಲಿ. ಅದರ ಪ್ರಾಚೀನತೆ ಅಗಾಧತೆಯ ಕಾರಣದಿಂದಾಗಿ ಅಷ್ಟು ಸುಲಭವಾಗಿ ಸುಧಾರಿಸಲು ಸಾಧ್ಯವಿಲ್ಲ.
ಆದರೆ ಕರ್ನಾಟಕದ ಕಥೆ ಬೇರೆಯದೇ ಆದ ನೆಲೆಯಲ್ಲಿ ಹುಟ್ಟಿದೆ. ಇಲ್ಲಿ ಸ್ಲಂನ ಬೆಳವಣಿಗೆಗೆ ಬಡತನ ಬಹುಮುಖ್ಯ ಕಾರಣವಾಗಿದೆ. ಕರ್ನಾಟಕದಲ್ಲಿರುವ 2722 ಸ್ಲಂಗಳಲ್ಲಿ 2491ನ್ನು ಮಾತ್ರ ಸರ್ಕಾರ ಸ್ಲಂ ಎಂದು ಗುರುತಿಸಿದೆ. ಅದರಲ್ಲಿ 473 ಸ್ಲಂಗಳು ಬೆಂಗಳೂರು ನಗರದಲ್ಲೇ ಕಂಡುಬರುತ್ತವೆ. ಆದರೆ ಅದರ ಅರ್ಧದಷ್ಟನ್ನೂ ಸರ್ಕಾರ ‘ಸ್ಲಂ’ ಎಂದು ಪರಿಗಣಿಸಲು ಸಿದ್ಧವಿಲ್ಲ.
 
ಕೇವಲ 207 ಸ್ಲಂಗಳನ್ನು ಮಾತ್ರ ಅಂಕಿ ಸಂಖ್ಯೆಗಳಲ್ಲಿ ತೋರಿಸುತ್ತಿದೆ. ಐ.ಟಿ. ನಗರವೆಂಬ ಕಿರೀಟವನ್ನು ಹೊತ್ತ ಬೆಂಗಳೂರಿನ, ಸ್ಲಂನ ಸಂಖ್ಯೆಯನ್ನು ಹೇಳಿಕೊಳ್ಳುವುದು ನಾಚಿಕೆಯ ವಿಷಯ ವಿರಬೇಕು. ನಿಜವನ್ನೇ ಹೇಳುವುದಾದರೆ 473 ಸ್ಲಂಗಳು ಬೆಂಗಳೂರಿನಲ್ಲಿವೆ. ಸ್ಲಂ ಎಂದು ಗುರುತಿಸಿದರೆ  ಅವರಿಗೆಲ್ಲ ಮೂಲ ಸೌಕರ್ಯ ವನ್ನು ಕಲ್ಪಿಸಬೇಕಾಗುತ್ತದೆ. ಅವರ ಅಸ್ತಿತ್ವವನ್ನೇ ಗುರುತಿಸದಿದ್ದರೆ ನೀರು, ವಿದ್ಯುತ್‌ ಕಲ್ಪಿಸುವ ಜವಾಬ್ದಾರಿ ಸರ್ಕಾರಕ್ಕಿರುವುದಿಲ್ಲ.
ಸ್ಲಂಗಳನ್ನು ನಗರಗಳಿಗೆ ಅಂಟಿದ ಕಾಯಿಲೆ, ದೀಪದ ಕೆಳಗಿನ ನೆರಳು ಎಂದಿತ್ಯಾದಿಯಾಗಿ ರೂಪಕಗಳಲ್ಲಿ ಹೀಗಳೆಯುವ ಬದಲು ಅಲ್ಲಿ ಬದುಕುವ ಜನರ ವಿಶಿಷ್ಟವಾದ ಗುಣವನ್ನು ಅರಿಯಬೇಕಾಗಿದೆ. ಕರ್ನಾಟಕದ ಅದರಲ್ಲೂ ಬೆಂಗಳೂರಿನ ಸ್ಲಂಗಳಲ್ಲಿ ವಾಸಿಸುವ ಜನರು ಯಾರು? ಮೊದಲನೆಯದಾಗಿ ಬೆಂಗಳೂರು ಕಬಳಿಸಿದ ಹಳ್ಳಿಗಳಲ್ಲಿರುವ ಮೂಲನಿವಾಸಿಗಳು.
ಬೆಂಗಳೂರು ನಗರವನ್ನು ಕಟ್ಟಲು ಬಂದ ಅಂದರೆ ಇಲ್ಲಿಯ ರಸ್ತೆಗಳು, ಬೃಹತ್‌ ಕಟ್ಟಡಗಳು, ವಾಸದ ಮನೆಗಳನ್ನು ಕಟ್ಟಲು ಬಂದ ಕೂಲಿ ಕಾರ್ಮಿಕರು. ಒಂದು ಕಾಲಕ್ಕೆ ತಮಿಳು ನಾಡಿನಿಂದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದರು. ಕಷ್ಟಪಟ್ಟು ದುಡಿಯುವ ಮಂದಿ. ಇಲ್ಲಿ ಬಂದು ನೆಲೆನಿಂತ ಮೇಲೆ  ನಿಧಾನಕ್ಕೆ ಹೂವು ತರಕಾರಿ ಮಾರುವ ಕಾಯಕವನ್ನು ಹಿಡಿದಿದ್ದಾರೆ. ಒಂದು ಕಾಲಕ್ಕೆ ಶ್ರೀಲಂಕಾದ ತಮಿಳರು ಬೆಂಗಳೂರಿಗೆ ವಲಸೆ ಬಂದು ಬಟ್ಟೆ ಇಸ್ತ್ರಿ ಮಾಡುವ, ತಳ್ಳುವ ಗಾಡಿಗಳಲ್ಲಿ ಜೀವನ ಸಾಗಿಸುವುದನ್ನು ಕಲಿತರು.
ತಮಿಳುನಾಡಿನ ಸುಧಾರಣಾ ಕಾರ್ಯಕ್ರಮ ಗಳಿಂದಾಗಿ ಇಂದು ಕರ್ನಾಟಕದ ಕಡೆ ವಲಸೆ ಬರುವವರ ಸಂಖ್ಯೆ ಕಡಿಮೆಯಾಗಿದೆ.
ಕಳೆದ ದಶಕದಲ್ಲಿ ಹೊಸದಾಗಿ ಬರುತ್ತಿರುವ ಕಾರ್ಮಿಕರು ಬಿಹಾರದವರು. ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳ ನಿರ್ಮಾಣಕ್ಕೆ ಕಂಟ್ರಾಕ್ಟರ್‌ಗಳು ಜನರನ್ನು ಕರೆತರುತ್ತಾರೆ. ಒಂದು ಕಾಲಕ್ಕೆ ಉತ್ತರ ಕರ್ನಾಟಕದಿಂದ ಮುಂಬೈಗೆ ಗುಳೆಹೋಗುತ್ತಿದ್ದ ಜನ ಈಗ ಬೆಂಗಳೂರಿನ ಕಡೆ ಮುಖ ಮಾಡಿದ್ದಾರೆ. ಪುಟ್ಟ ಜೋಪಡಿಗಳಲ್ಲಿ ದಬದಬನೆ ರೊಟ್ಟಿ ಬಡಿಯುತ್ತಾ ತಾವೇನು ದುಡಿಮೆಯಲ್ಲಿ ಕಡಿಮೆಯಿಲ್ಲ ಎಂದು ತೋರಿಸುತ್ತಿದ್ದಾರೆ. ಕಲಸುಮೇಲೋಗರವಾಗಿದ್ದ ಬೆಂಗಳೂರಿಗೆ ಗಟ್ಟಿ ಕನ್ನಡವನ್ನು ಹಚ್ಚುತ್ತಿದ್ದಾರೆ. ನಾಳೆ ಬೆಂಗಳೂರಿನ ಭಾಷೆ ಕನ್ನಡವೇ ಆಗಿ ಉಳಿದರೆ ಅದೂ ಈ ಕೂಲಿ ಮಾಡಲು ಬಂದ ಮಂದಿಯಿಂದ.
ಇವರಲ್ಲದೆ ಬಸವನ ಹಿಡಿದು ಕಣಿ ಹೇಳುವ ಮಂದಿ, ಬೆತ್ತ ಬಿದರಿನಲ್ಲಿ ಅಲಂಕಾರದ ಬುಟ್ಟಿ ನೇಯುವ ಕಸುಬುದಾರರು, ಮಣ್ಣಿನ ಗೊಂಬೆ ಗಳಿಗೆ ಬಣ್ಣಹಚ್ಚಿ ಚಿತ್ತಾರ ಮಾಡಿ ರಸ್ತೆ ಬದಿಯಲ್ಲಿ ಮಾರುವ ರಾಜಸ್ತಾನದ ಜನ ಇವರಲ್ಲಿ ಯಾರು ಯಾರನ್ನು ಹಿಂದಕ್ಕೆ ಓಡಿಸಬೇಕು? ಅವರವರ ಮನೆಗಳನ್ನು ಅವರೇ ಗುಡಿಸಿ ಒರಸಿಕೊಳ್ಳುವುದಾದರೆ, ಶ್ರೀಮಂತರ ಮನೆಯ ಮುಂದಿನ ದುಬಾರಿ ಕಾರುಗಳನ್ನು ಡ್ರೈವರ್‌ಗಳಿಲ್ಲದೇ ಅವರೇ ಓಡಿಸುವುದಾದರೆ ಅಭ್ಯಂತರವೇನು? ನಗರವನ್ನು ಶ್ರೀಮಂತರಿ ಗಾಗಿಯೇ ಕಟ್ಟಿಕೊಳ್ಳಲಿ.
ಮೂರು ಜನರಿರುವ ಶ್ರೀಮಂತ ಬಂಗಲೆ ಗಳಲ್ಲಿ ದುಡಿಯುವ ಹತ್ತು ಜನರಿಗೂ ಬಂಗಲೆ ಯಲ್ಲೇ ಜಾಗ ಕೊಡಬಲ್ಲರೆ? ಕೊಳಚೆ ನಿರ್ಮೂ ಲನ ಮಾಡುವುದೆಂದರೆ ಬಡವರು ಬದುಕುವ ಜಾಗಗಳನ್ನು ಅಚ್ಚಕಟ್ಟಾಗಿಸಿ ಕೊಡಿ. ನಗರ ದಲ್ಲಿದ್ದೂ ನಗರದ ಸೌಲಭ್ಯಗಳನ್ನು ಅನುಭವಿ ಸದ ಎರಡನೆ ದರ್ಜೆ ನಾಗರಿಕರಾಗಿ ನಾಗರಿಕ ಹಕ್ಕುಗಳನ್ನು ಕಳೆದುಕೊಂಡು ಬದುಕುವ ನಮ್ಮದೇ ಒಡಲ ಬಳ್ಳಿಗಳನ್ನು ಉಳಿಸುವುದೂ ನಮ್ಮದೇ ಜವಾಬ್ದಾರಿಯಲ್ಲವೆ? ಸ್ಲಂನ ಬದು ಕನ್ನು ಕುರಿತ ಸಾಹಿತ್ಯವೂ ಈ ನೆಲದಲ್ಲಿ ಅಷ್ಟಾಗಿ ಮೂಡಿಬರಲಿಲ್ಲವೇಕೆ? ಗೀತಾ ನಾಗಭೂಷಣ ಅವರ ‘ಬದುಕು’ ಕಾದಂಬರಿ, ಲಂಕೇಶರ ‘ಅಕ್ಕ’ ಗಮನ ಸೆಳೆದ ಕಾದಂಬರಿಗಳು. ಆತ್ಮಕಥನವಾಗಿ ಬಂದ ಸಿದ್ದಲಿಂಗಯ್ಯನವರ ‘ಊರುಕೇರಿ’ ಯಂತಹ ಬೆರಳೆಣಿಕೆಯ ಸಾಹಿತ್ಯವನ್ನು ಮಾತ್ರವೇ ಕನ್ನಡನಾಡು ಈವರೆಗೆ ಕಟ್ಟಿಕೊಟ್ಟಿದೆ.
ಸ್ಲಂನಿಂದ ಬಂದ ಬರಹಗಾರರು ಗಾಢವಾದ ಬದುಕಿನ ಅನುಭವದೊಂದಿಗೆ ಸಾಹಿತ್ಯವನ್ನು ಸೃಷ್ಟಿಸಬೇಕಾಗಿದೆ. ಅದರದೇ ಆದ ಭಾಷೆ, ಶೈಲಿ ಗಳೂ ಒಡಮೂಡಬೇಕಾಗಿದೆ. ನಟನೆ, ಕ್ರೀಡೆ, ಹಾಡು ಹೀಗೆ ಗಮನವಿಟ್ಟು ಹೊಸ ಕ್ಷೇತ್ರಗಳಲ್ಲಿ ಸ್ಲಂ ಪ್ರತಿಭೆಗಳನ್ನು ಹುಡುಕಿ ಕೊಳ್ಳಬೇಕಾಗಿದೆ.
ಕಸದಲ್ಲಿ ಎಸೆದ ಬಣ್ಣದ ಡಬ್ಬಗಳಲ್ಲಿ ಗಿಟಾರ್‌ ಮಾಡಿಕೊಂಡು ನುಡಿಸುವ ಬೈಸಿಲ್‌ನ ವಾದ್ಯ ತಂಡವೊಂದು ಇಂತಹ ಆಸೆಯನ್ನು ಹುಟ್ಟು ಹಾಕಿತು. ಸ್ಲಂನ ಶಕ್ತಿ ಸಾಧ್ಯತೆಯ ಕನಸು ಕಟ್ಟಿಕೊಳ್ಳುವಂತೆ ಮಾಡಿದೆ. ನಿರ್ಮೂಲನ ವಾಗಬೇಕಾಗಿರುವುದು ಮನಸ್ಸಿಗೆ ಹತ್ತಿರುವ ಕೊಳೆ, ಯೋಜನೆಗಳಿಗೆ ತಗುಲಿರುವ ಕೊಳಚೆ, ನಗರವೆಂಬ ಸೋಗಿನ ದುರ್ನಾತ, ಮುಸುಕಿನೊಳಗೆ ನಾರುವ ಭ್ರಷ್ಟಾಚಾರ


ಕಾಮೆಂಟ್‌ಗಳಿಲ್ಲ: