ಗುರುವಾರ, ಮಾರ್ಚ್ 5, 2015

ಡಾ.ವಸು ಮಳಲಿ ಅವರ`ಕಳ್ಳು-ಬಳ್ಳಿ' ಪ್ರಜಾವಾಣಿ ಅಂಕಣ ಬರಹಗಳು-2

ಸೌಜನ್ಯ: ಪ್ರಜಾವಾಣಿ
ಮಹಾಕಾವ್ಯಗಳ ಬಹುಮುಖಿ ಜಗತ್ತು
Tue, 08/05/2014

‘ಮಾಣ್ ನಿಷಾದ ಮಾಣ್’. ಹುತ್ತ­ದಿಂದ ಹೊರಬಂದ ವಾಲ್ಮೀಕಿ, ಹಾರುತ್ತಿದ್ದ ಕ್ರೌಂಚ ಪಕ್ಷಿಗಳಿಗೆ ಬೇಡನೊಬ್ಬ ತೊಟ್ಟ ಬಾಣವನ್ನು  ಕಂಡು ಉಚ್ಚರಿಸಿದ ಮೊದಲ ಸಾಲು ಇದೆಂಬ ಪ್ರತೀತಿ.
ಮಹಾಕಾವ್ಯಗಳನ್ನು ವಿವಾದಕ್ಕೆ ಹಚ್ಚುವುದು ಭಾರತದಲ್ಲಿ ಹೊಸ ವಿಚಾರವೇನೂ ಅಲ್ಲ. ‘ಮಹಾ­ಭಾರತ’, ‘ರಾಮಾಯಣ’ಗಳ ಪಾತ್ರಗಳ ಬಗೆಗಾಗಲಿ, ಅದನ್ನು ರಚಿಸಿದ ಕವಿಗಳ ವಿಚಾರ­ವಾಗಿ ಆಗಲಿ ಅಥವಾ ಅದನ್ನು ಕುರಿತು ಬರುವ ಮತ್ತಾವುದೇ ವಿಮರ್ಶೆಗಳನ್ನಾಗಲಿ ತೆರೆದ ಮನಸ್ಸಿ­ನಿಂದ ಸ್ವೀಕರಿಸುವುದು ಸುಲಭದ ವಿಚಾರ­ವಲ್ಲ. ಸಂಸ್ಕೃತಿಯ ಭಾಗವಾದ ಕಾವ್ಯವೊಂದು  ಎಲ್ಲರಿಗೂ ಸೇರಿರುತ್ತದೆ ಎಂದು ಭಾವಿಸಿದರೆ ವಿಮರ್ಶೆಯಾಗಲಿ, ತಪ್ಪು–ಸರಿ ಎಂಬ ಪ್ರಶ್ನೆಯಾ­ಗಲಿ ಏಳುವುದಿಲ್ಲ.
ಈ ಕಾವ್ಯಗಳು ಕೇವಲ ಕಾವ್ಯಗ­ಳಾಗಿ ಉಳಿದಿಲ್ಲ, ಈ ನಾಡಿನ ಬದುಕಿನ ಹಾದಿಗೆ ಹೆಣೆದುಕೊಂಡಿವೆ. ಹಾಗಾಗಿ ಎಲ್ಲರೂ ಅದರ ಮೇಲೆ ತಮ್ಮ ಹಕ್ಕನ್ನು ಚಲಾಯಿಸುತ್ತಾ ಬಂದಿ­ದ್ದಾರೆ. ಕೆಲವರಿಗೆ ಕಾವ್ಯವಾದರೆ, ಮತ್ತೆ ಕೆಲವ­ರಿಗೆ ಅದು ಧರ್ಮ,  ಕಲೆ, ಆದರ್ಶ, ಪುರಾಣ ಎಲ್ಲವೂ ಆಗಿವೆ. ಅಯೋಧ್ಯೆ ವಿವಾದದ ಸಂದ­ರ್ಭದ ಹೊತ್ತಿಗೆ ಕಾವ್ಯವನ್ನು ಚರಿತ್ರೆಯಾಗಿ ನೋಡ­ಲಾ­ಯಿತು. ನಂಬಿಕೆ, ಕಾವ್ಯ, ಧರ್ಮ, ದೇವರು ಎಲ್ಲಾ ಬೆರೆತು ರಾಜಕೀಯಗೊಂಡಿತು. ರಾಜಕೀಯಗೊಂಡ ಧರ್ಮ, ವೈಚಾರಿಕತೆ­ಯನ್ನು ಕಳೆದುಕೊಳ್ಳುತ್ತದೆ. ಮೂಕ ಸಾಕ್ಷಿ­ಯಾದ ದೇವರುಗಳೂ ಅಂದು ಬೆರಗುಗೊಂಡಿರ­ಬೇಕು. ಅದರ ಮೂಲದ ರಚನೆಯನ್ನು ಬಿಟ್ಟು ಮತ್ತೇನೋ ಆಗಿ ನೋಡುವುದೇ ಈ ಕಾವ್ಯಗಳ ಬಗೆಗಿನ ಸಮಸ್ಯೆಯಾಗಿದೆ. ಎ.ಕೆ. ರಾಮಾನು­ಜನ್‌ ಬರೆದ ಮುನ್ನೂರು ರಾಮಾಯಣಗಳನ್ನು ಕುರಿತ ಪ್ರಬಂಧವನ್ನು ಎರಡು ವರ್ಷಗಳ ಹಿಂದೆ ದೆಹಲಿ ವಿಶ್ವವಿದ್ಯಾಲಯ ಪಠ್ಯವಾಗಿಸಿತು. ಅದರ ವಿರುದ್ಧ ಪ್ರತಿಭಟನೆ ತಲೆದೋರಿದಾಗಲೂ ರಾಮಾ­ಯಣ ಕಾವ್ಯ ಹೀಗೇ ಇರಬೇಕೆಂದು ಹೇಳುವ ಮೂಲಭೂತವಾದ ಅಲ್ಲಿ ಮನೆ ಮಾಡಿತ್ತು.
ರಾಮಾಯಣ, ಮಹಾಭಾರತಗಳ ವಿಭಿನ್ನ ನೋಟಗಳನ್ನೇ ಅಲ್ಲಿ ಪ್ರಶ್ನೆ ಮಾಡಲಾ­ಯಿತು. ಕರ್ನಾಟಕದಲ್ಲಿ ಪೋಲಂಕಿ ರಾಮ­ಮೂರ್ತಿ ಅವರು ‘ಸೀತಾಯಣ’ವನ್ನು ಬರೆದಾಗ ಬಂದ ವಿರೋಧ ಇದಕ್ಕೆ ಮತ್ತೊಂದು ಉದಾಹ­ರಣೆ. ಕಾವ್ಯದ ವೈವಿಧ್ಯಮಯ ವ್ಯಾಖ್ಯಾನವನ್ನು ಒಪ್ಪಿಕೊಳ್ಳಲಾಗದ ಮನಸ್ಥಿತಿಯೇ ಸಮಸ್ಯೆಗೆ ಕಾರಣವಾಗಿದೆ. ಮಹಾಕಾವ್ಯದ ಹುಟ್ಟನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಮಸ್ಯೆಯಿದೆ ಎನ್ನು­ವುದು ಸ್ಪಷ್ಟವಾಗುತ್ತದೆ.
ಪ್ರಾಚೀನ ಮಹಾಕಾವ್ಯಕ್ಕೆ ಮೂಲಗಳು ಹಲ­ವಾರು. ಅದು ಅದರ ಸೊಬಗೂ ಹೌದು. ಜೀವ­ನಾ­ನುಭ­ವಗಳನ್ನು ಜನರು ಕಥೆ ಕಟ್ಟಿ ಹೇಳ­ತೊಡ­ಗು­ತ್ತಾರೆ. ಅದರಲ್ಲೂ ಸಾಹಸದ ಗಳಿಗೆಗಳು ರೋಚ­­ಕತೆ­ಯನ್ನು ಪಡೆದುಕೊಳ್ಳುತ್ತವೆ. ಕಟ್ಟಿ­ಕೊಂಡ ಆಶಯಗಳು, ಕಂಡ ಕನಸುಗಳು, ಕಂಡುಂಡ ನೋವುಗಳು ಈ ಕಥೆಗಳ ತಿರುಳಾಗಿ­ರು­ತ್ತವೆ. ಹೀಗೆ ಸಮಾಜದಲ್ಲಿ ಜನಜನಿತವಾದ ನೂರಾರು ಕಥೆಗಳು ಜನಪದರ ಬಾಯಲ್ಲಿ ಹರಿ­ದಾ­ಡುತ್ತಿರುತ್ತವೆ. ಅವು ಗಾದೆಗಳಾಗಿ, ಒಗಟುಗ­ಳಾಗಿ ಜನಪದ ಗೀತೆಗಳಾಗಿ ರೂಪು ಪಡೆಯು­ತ್ತವೆ. ‘ಕವಿರಾಜಮಾರ್ಗ’ಕಾರ ‘ಕುರಿತೋದ­ದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್‌’ ಎಂದು ಹೇಳುತ್ತಾ ಜನಪದರ ಈ ಕಾವ್ಯಕಟ್ಟುವ ಗುಣವನ್ನು ಮೆಚ್ಚಿ ನುಡಿಯುತ್ತಾನೆ. ಇಂತಹ ಕಾವ್ಯಕಟ್ಟುವ ಗುಣ ಜಗತ್ತಿನಾದ್ಯಂತ ಜನಪದರಿ­ಗಿತ್ತೆಂಬುದು ಸೋಜಿಗ ವೆನಿಸುತ್ತದೆ. ಅವರು ಹಳ್ಳಿ­ಗ­ರಾಗಿರಲಿ, ಗಿರಿಜನರಾಗಿರಲಿ, ಪಶುಪಾಲಕ­ರಾ­ಗಿರಲಿ ಅವರವರ ಹಿನ್ನೆಲೆಯ ಬದುಕು ಹಾಡಾಗಿ ಹೊರಹೊಮ್ಮಿದೆ.
ಇಂತಹ ಕಥೆಗಳು ಮುಂದೆ ಲಾವಣಿಗಳಾಗಿ ಕಥನ ಕವನಗಳಾಗಿ ಬೆಳೆ­­ಯು­ತ್ತವೆ. ಅದರಲ್ಲೂ ಕಾದಾಟಗಳನ್ನು ಕಂಡ­­ವರು, ತಮ್ಮ ಒಡೆಯನ ರಥಕ್ಕೆ ಸಾರಥಿ­ಗ­ಳಾ­­­ದವರು ಊರಿಗೆ  ಮರಳಿ ಬಂದಾಗ ಕದನ­ವನ್ನು ಸ್ವಾರಸ್ಯಕರವಾಗಿ ವಿವರಿಸು­ತ್ತಿದ್ದರು. ಇಂತಹ ವೀರರ ಕಥೆಗಳು ಬೆಳೆದು ಅದರ ಹುಟ್ಟನ್ನು ಮರೆತು ಸರ್ವವ್ಯಾಪಿಯಾಗ­ತೊಡ­­ಗು­ತ್ತವೆ. ಊರಿಂದ ಊರಿಗೆ ಅಲೆಯುವ ಮಂದಿ ತಮ್ಮ ಜೊತೆ ಕಥೆಗಳನ್ನೂ ತೆಗೆದು­ಕೊಂಡು ಹೋಗು­ತ್ತಾರೆ.   ಪರ ಊರಿನ ಕಥೆ­ಗಳನ್ನು ತಮ್ಮ ಊರಿಗೆ ತಂದು ಅಲ್ಲಿನ ಅನು­ಕೂಲಕ್ಕೆ ತಕ್ಕಂತೆ ನಿರೂ­­ಪಿ­ಸುತ್ತಾರೆ. ಕಾಲಾಂತರ­ದಲ್ಲಿ ಯಾರದೋ ಕಥೆ ಯಾರದೋ ಹೆಸರಿನಲ್ಲಿ ಕೇಳ­ತೊಡಗುತ್ತದೆ. ಅಷ್ಟೇ ಅಲ್ಲದೆ, ತಾವು ಮೆಚ್ಚುವ ನಾಯಕನನ್ನು  ತಮಗೆ ಬೇಕಾದಂತೆ ಚಿತ್ತಾರಗೊಳಿಸುತ್ತಾ ಹೋಗು­ತ್ತಾರೆ.
ಹೀಗೆ ಯಾವುದೋ ಕಾಲದಿಂದ ಹರಿದು ಬಂದ ಕಥೆಗಳು ಮಹಾ ನದಿಯನ್ನು ಸೇರುವ ಉಪನದಿಗಳಂತೆ ಕೂಡಿಕೊಳ್ಳುತ್ತವೆ. ಎಲ್ಲವನ್ನೂ ತಮ್ಮದಾಗಿಸಿಕೊಂಡು  ಕಥೆ ಹೇಳುವ ಕಲೆಗಾರರ ಬಾಯಲ್ಲಿ ಎಲ್ಲವೂ ಆತ್ಮೀಯವಾಗ­ತೊಡ­ಗುತ್ತವೆ. ಆದ್ದರಿಂದಲೇ ಭರತ ಖಂಡದಲ್ಲಿ ಹುಟ್ಟಿದ ಕಥೆಗಳು ಮ್ಯಾನ್ಮಾರ್‌ನಲ್ಲೂ, ಮಲೇ­ಷ್ಯಾ­­ದಲ್ಲೂ ಅವರದೇ ಕಥೆಗಳೆನ್ನುವಂತೆ ಜನಜ­ನಿ­ತ­ವಾಗಿವೆ. ಇಷ್ಟೇ ಅಲ್ಲದೆ, ಅವು ಯಾವುದೋ ಒಂದು ಕಾಲಕ್ಕೆ ಸೇರಿದ ಕಥೆಗಳೂ ಅಲ್ಲ. ನಿರಂತರ­ವಾಗಿ ಬೆಳೆಯುವ ಕಥೆಗಳು. ಇವು ಒಂದು ಹಂತಕ್ಕೆ ನಾವು ಕೇಳುವ ಜನಪದ ಮಹಾಕಾವ್ಯದ ಸ್ವರೂಪ­ವನ್ನು ಪಡೆದುಕೊಳ್ಳುತ್ತವೆ. ಇದರ ಬೆಳ­ವ­ಣಿಗೆ ಅಲ್ಲಿಗೇ ನಿಲ್ಲುವುದಿಲ್ಲ.  ಪ್ರತಿಭಾವಂತ ಕವಿ ಅದನ್ನೊಂದು ಬಿಗಿಯಾದ ಛಂದಸ್ಸಿಗೆ ಒಗ್ಗಿಸಿ ತನ್ನ ನಿಲುವುಗಳ ಜೊತೆಗೆ ಅದಕ್ಕೊಂದು ಚೌಕ­ಟ್ಟನ್ನು ನೀಡುತ್ತಾನೆ.
ಹಾಗಾಗಿ ಮಹಾಕಾವ್ಯದ ಸ್ವರೂಪ ಸಿಕ್ಕಿದಂತಾಗುತ್ತದೆ. ಜನಪದೀಯವಾದ ಹಲವು ಅಂಶಗಳನ್ನು ಉಳಿಸಿಕೊಳ್ಳುತ್ತಾ ಮಹಾ­ಕವಿ­­ಯಿಂದ ಕೆಲವನ್ನು ಪಡೆದುಕೊಳ್ಳುತ್ತಾ ಮಹಾ­ಕಾವ್ಯ ಅರಳುತ್ತದೆ. ಮಹಾಕವಿ ತನ್ನ ಶಿಷ್ಟತೆ­ಯನ್ನು  ತನಗರಿವಿಲ್ಲದಂತೆ ಅಲ್ಲಿಯ ಪಾತ್ರಗಳಿಗೆ ಬರಿಸುತ್ತಾನೆ. ಹೀಗೆ ರೂಪಿತವಾದ ಎರಡು ಸಂಸ್ಕೃತ ಮಹಾಕಾವ್ಯಗಳೆಂದರೆ ‘ಮಹಾಭಾರತ’ ಮತ್ತು ‘ರಾಮಾಯಣ’. ಸುಮಾರು ಮೂರು ಸಾವಿರ ವರ್ಷಗಳ ಹಿಂದಿನ ಕಥೆಗಳು. ಮಹಾ­ಭಾರತ ಉತ್ತರ ಭಾರತದ ಹಲವು ಬುಡಕ­ಟ್ಟು­ಗಳು ನಡೆಸಿದ ಕದನದ ಹಿನ್ನೆಲೆಯಲ್ಲಿ ಬೆಳೆದು ಬಂದ ಕಥೆ. ಆ ಕಥೆಗೆ ಹಿಡಿಂಬೆಯ ಹೆಸರಿನಲ್ಲಿ ಸೇರಿ­ರುವ ಕಥಾ ಭಾಗ ಕನ್ನಡನಾಡಿನ ಚಿತ್ರ­ದುರ್ಗ ಇರಬಹುದಾದರೆ, ವಾಲಿ–ಸುಗ್ರೀವರ ಭಾಗ ಕಿಷ್ಕಿಂದಾ ನಾಡೆನಿಸಿಕೊಂಡ ಇಂದಿನ ಹಂಪಿ ಪ್ರದೇಶದ ಕಥೆ. ಒಟ್ಟು ಮಹಾಕಾವ್ಯದಲ್ಲಿ ಬರುವ ಕಥೆಗಳು ಬೇರೆಬೇರೆ ಕಾಲಘಟ್ಟದಲ್ಲಿ ನಡೆದಿರಬಹುದಾದ ಘಟನೆಗಳು, ಅನುಭವಗಳು ಅವಾಗಿರಬಲ್ಲವು. ಅಷ್ಟೇ ಅಲ್ಲದೆ, ಜನಪದರ ಹಾಗೂ ಮಹಾಕವಿಯ ಕಲ್ಪನೆಗಳು, ಆಶಯ­ಗಳು ಅದರಲ್ಲಿ ಸೇರಿಹೋಗಿರುತ್ತವೆ.
ಮಹಾಕಾವ್ಯದ ಕಥೆಗಳು ಒಂದು ಕಾಲ ಘಟ್ಟ­ದವೂ ಆಗಿರಲಾರವು ಎನ್ನುವುದಕ್ಕೂ ನಮಗೆ ಪ್ರಾಕ್ತನ ಆಧಾರಗಳೇ ದೊರಕುತ್ತವೆ. ಪ್ರಾಕ್ತನ ಶಾಸ್ತ್ರಜ್ಞ­ರಾದ ಎಸ್.ಡಿ. ಸಂಕಾಲಿಯ ಈ ನಿಟ್ಟಿ­ನಲ್ಲಿ ನಡೆಸಿದ ಸಂಶೋಧನೆ ಬಹು ಅಪರೂಪ­ದ್ದೆಂದೇ ಹೇಳಬೇಕಾಗುತ್ತದೆ. ಇವತ್ತು ನಾವು ಕೇಳುತ್ತಿರುವ ರಾಮಾಯಣ, ಮಹಾಭಾರತದ ನಗರಗಳ ವೈಭವ ಸುಮಾರು ಸಾವಿರದ ಐನೂರ­ರಿಂದ ಏಳುನೂರು ವರ್ಷಗಳಷ್ಟು ಹಿಂದಕ್ಕೆ ಹೋಗು­ತ್ತದೆ. ಎಂದರೆ ಬಹುತೇಕ ಗುಪ್ತರ ಕಾಲದ ಆಸ್ಥಾನಗಳನ್ನು ಇಲ್ಲಿ ವರ್ಣಿಸಲಾಗಿದೆ. ಆದ್ದ­ರಿಂದ ರಾಮಾಯಣ, ಮಹಾಭಾರತದ ಕಥೆ­ಗಳಲ್ಲಿ ಕಾಣುವ ವೈದಿಕ ಕಾಲದ ಬೆಳವಣಿಗೆಯ ಹಂತ ಇದಾಗಿಲ್ಲ. ರಾಮಾಯಣ  ಕಾಲದ್ದೆಂದು ನಂಬಿರುವ ಅಯೋಧ್ಯ ಆ ಕಾಲದಲ್ಲಿ ಇರಲಿಲ್ಲ­ವೆಂದು ಈಗಾಗಲೇ ಚರಿತ್ರೆಕಾರರು ಕಂಡುಕೊಂಡಿ­ದ್ದಾರೆ. ಆದ್ದರಿಂದ ಗುಪ್ತರ ಕಾಲದ ಪ್ರಸಿದ್ಧ ನಗರವೊಂದು ಕಾವ್ಯದ ಕೇಂದ್ರಬಿಂದುವಾ­ಯಿತು. ಕಾವ್ಯಗಳು ನಿರಂತರವಾಗಿ ಬೆಳೆಯುತ್ತಿ­ರು­ತ್ತವೆ ಎನ್ನುವುದಕ್ಕೆ ಇದು ಒಂದು ಒಳ್ಳೆಯ ಉದಾಹರಣೆಯಾಗಿದೆ.
ಆಯಾ ಕಾಲಘಟ್ಟದಲ್ಲಿ ಬಳಸುತ್ತಿದ್ದ ವಸ್ತುಗ­ಳನ್ನು ಆಧರಿಸಿ ಸಂಕಾಲಿಯ ಅವರು ರಾಮಾ­ಯಣ ಹಾಗೂ ಮಾಹಾಭಾರತದಲ್ಲಿ ಬಂದು ಹೋಗುವ ವಿದ್ಯಮಾನಗಳು ಯಾವ ಕಾಲ­ಘಟ್ಟ­ದವು  ಎನ್ನುವುದರ ಬಗೆಗೆ ಬೆಳಕು ಚೆಲ್ಲುತ್ತಾರೆ. ಮುದ್ರೆಯುಂಗುರ  ದುಷ್ಯಂತ ಹಾಗೂ ಶಕುಂತ­ಲೆ­ಯರ ಕಥೆಗೆ ತಿರುವು ನೀಡುವ ಪ್ರಸಂಗ. ಭಾರತದ ಚರಿತ್ರೆಯಲ್ಲಿ ಮುದ್ರೆಯುಂಗುರ­ವೊಂದು ಕಾಣಿಸಿಕೊಳ್ಳುವುದು ಒಂದನೇ ಶತ­ಮಾನ­ದಲ್ಲಿ. ಅದರ ಅರ್ಥ ಮುದ್ರೆಯುಂಗುರದ ಪ್ರಸಂಗ ಆನಂತರದಲ್ಲಿ ಮಹಾಕಾವ್ಯಕ್ಕೆ ಬಂದು ಸೇರಿದೆ. ರಾಮಾಯಣದಲ್ಲಿ ಹನುಮಂತ, ರಾಮನ ಮುದ್ರೆಯುಂಗುರವನ್ನು ಸೀತೆಗೆ ತೋರಿ­ಸಿ­ದಾಗ ಒಂದನೇ ಶತಮಾನ ಕಳೆದುಹೋಗಿ­ರ­ಬೇಕು. ಇಂತಹ ನೂರಾರು ವಿಚಾರಗಳು ಚರಿ­ತ್ರೆಯ ಸಂಶೋಧನೆಗೆ ಸಿಗುತ್ತವೆ. ಅದೇ ಸಾಮಾ­ಜಿಕ ಹಿನ್ನೆಲೆಯನ್ನು ನೋಡಿದರೆ ಈ ಕಾವ್ಯಗಳಲ್ಲಿ ಬರುವ ರಾಕ್ಷಸರು ಯಾರು? ಕಾವ್ಯಗಳಲ್ಲಿ ವರ್ಣಿ­ಸಿ­ರುವಂತೆ ವಿಕಾರವಾಗಿದ್ದರೇ? ಇಂತಹ ಪ್ರಶ್ನೆಗಳು ಬಹುಶಃ ಕಾವ್ಯದ ಗುಣವನ್ನು ಕಳೆಯುತ್ತವೆ.

ಆದರೂ ಮಹಾಕಾವ್ಯಗಳನ್ನು ರಚಿಸಿದ ಹೆಗ್ಗ­ಳಿಕೆ ವಾಲ್ಮೀಕಿ ಹಾಗೂ ವ್ಯಾಸರಿಗೆ ಸಲ್ಲು­ತ್ತದೆ. ಹಾಗೆಂದು ಆ ಕಾವ್ಯಗಳು ಅಲ್ಲಿಗೇ ನಿಲ್ಲುವುದೂ ಇಲ್ಲ. ಮಹತ್ವದ ಬದಲಾವಣೆಗಳನ್ನು ಮುಂದೆ ಬಂದ ಕವಿಗಳು ಅದಕ್ಕೆ ನೀಡಿದ್ದಾರೆ. ಆ ಕಥೆಗಳ ವಿಸ್ತರಣೆಯಲ್ಲಿ ಎಷ್ಟರಮಟ್ಟಿಗೆ ಒಬ್ಬೊಬ್ಬ ಕವಿಯೂ ಕಾರಣನಾಗಿದ್ದಾನೆಂದು ನೋಡು­ವುದು ಕವಿಚರಿತ್ರೆಕಾರರ ಕುತೂಹಲಕ್ಕೆ ಬಿಟ್ಟ ವಿಚಾರವಾಗುತ್ತದೆ. ಅವರಾಡುವ ಭಾಷೆಗೆ ಆ ಕಥೆ­ಗಳನ್ನು ಒಳಗುಮಾಡಿಕೊಳ್ಳುವ ಮೂಲಕ ಹೊಸವಿಸ್ತಾರವನ್ನು ನೀಡುತ್ತಾ ಹೋಗುತ್ತಾರೆ. ಇಲ್ಲಿ ಕಾವ್ಯ ಮೂಲದ ಪ್ರಶ್ನೆ, ಕಾವ್ಯವನ್ನು ಆಸ್ವಾ­ದಿ­ಸುವ ಓದುಗನಿಗೆ ಮುಖ್ಯವಾಗುವುದಿಲ್ಲ. ಅಕಾಡೆ­ಮಿಕ್ ಪ್ರಶ್ನೆಯಾಗಿ ಮಾತ್ರ ಉಳಿಯು­ತ್ತದೆ. ಕಾವ್ಯದ ಜೀವಂತಿಕೆ ಇರುವುದೇ ಅದರ ವಿಕಾಸ ಗುಣದಲ್ಲಿ. ಮೂಲಕಾವ್ಯದಲ್ಲಿ ಕಾಣದ ಹೊಸ­ದಾದ ಸರ್ವೋದಯವೆಂಬ ಆದರ್ಶ ಕಂಡರೆ ಅದು ಕುವೆಂಪು ಅವರ ಕೊಡುಗೆ­ಯಾ­ಗು­ತ್ತದೆ. ಹೀಗೊಂದು ವಿದ್ವತ್ ಮಟ್ಟದ ಸಂವಾ­ದವೂ ಸದಾಕಾಲಕ್ಕೂ  ಸಾಗಿಬರುತ್ತದೆ. ಅದ­ರಲ್ಲಿ ವಿದ್ವತ್ ಪ್ರಪಂಚ ಬೌದ್ಧಿಕ ನೆಲೆಯಲ್ಲಿ ಕಾವ್ಯ­ವ­ನ್ನು ಆಸ್ವಾದಿಸಬಲ್ಲದು.  
ಕಾವ್ಯದ ಮೂಲ ನೆಲೆಯನ್ನು  ಜನಪದರಲ್ಲಿ ಕಂಡುಕೊಂಡಂತೆ ಅವು ಮರಳಿ ಜನಪದರಿಗೆ ಹೋದಾ­ಗಲೂ ಬೇರೊಂದು ಸೊಬಗನ್ನು ಅಲ್ಲಿ ಕಾಣ­ಬಹುದು. ಅದಾವುದೂ ಇಲ್ಲದೆ ತಮ್ಮದೇ ಶೈಲಿ­ಯಲ್ಲಿ ಹಗಲು ವೇಷದವರು ಮುಖಕ್ಕೆ ಬಣ್ಣ ಬಳಿದು ರಾಮ, ಸೀತೆ, ಹನುಮಂತನಾಗಿ ಕುಣಿ­ದರೆ, ಜಗಜಗಿಸುವ ಆಭರಣಗಳನ್ನು ತೊಟ್ಟು, ಬಣ್ಣಬಣ್ಣದ ಸೀರೆಯುಟ್ಟು ಪೌರಾಣಿಕ ನಾಟಕ­ಗಳನ್ನು ಆಡುವ ಕಲಾವಿದರು ಅವರವರ ಕಲ್ಪನೆಗೆ ತಕ್ಕಂತೆ ಸಂಭ್ರಮಿಸುತ್ತಾರೆ. ಅದರ ಹಿಂದಿನ ಕಥೆಯ ಮೂಲ ಆಶಯವನ್ನು ಉಳಿಸಿ­ಕೊಂಡು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಮೆರೆಸು­ತ್ತಾರೆ. ಹಾಗೆಂದರೆ ಇವರು ಮೂಲಮಾತೃಕೆಗೆ ಸದಾ ನಿಷ್ಠರಾಗಿರಬೇಕೆಂದೇನೂ ಅಲ್ಲ. ದೂರ ಸರಿಯುವ ಎಲ್ಲಾ ಹಕ್ಕನ್ನೂ ಪಡೆದೇ ಇರುತ್ತಾರೆ.
ಕಾವ್ಯದ ಮೇಲಿನ ಒಡೆತನ ಇಡೀ ಸಮಾಜಕ್ಕೇ ಸೇರಿರುತ್ತದೆ. ಇಂತಹ ಮಾರ್ಪಾಡುಗಳು ಯಕ್ಷ­ಗಾನ­ದಲ್ಲಿ ಹೇರಳವಾಗಿ ಕಾಣುತ್ತವೆ. ಕೃಷ್ಣಸಂ­ಧಾ­ನದ ಸಮಯದಲ್ಲಿ ಬಹುಸಹಜವಾಗಿ ಸಮ­ಕಾಲೀನ ರಾಜಕೀಯ ವಿಡಂಬನೆಗಳು ಸೇರಿರು­ತ್ತವೆ. ಮಹಾಕಾವ್ಯವನ್ನು ತಮ್ಮ ನೆಲೆಗೆ ದಕ್ಕಿಸಿ­ಕೊಳ್ಳುವಲ್ಲಿ ಜನಪದರು ನಿಸ್ಸೀಮರು.
ಉತ್ತರ ಕನ್ನಡ ಜಿಲ್ಲೆಯ ‘ಗಾಮೊಕ್ಕಲ ಭಾರತ’ ಕೃತಿಯಲ್ಲಿ ದ್ರೌಪದಿಯನ್ನು ಈ ಒಕ್ಕಲು ಸಮುದಾ­ಯದ ಹೆಣ್ಣು ಮಗಳಂತೆ ಚಿತ್ರಿಸಿಕೊಳ್ಳು­ತ್ತಾರೆ. ಗುಡಿಸಲಿಗೆ ಸೆಗಣಿ ಹಾಕಿ ಸಾರಿಸುತ್ತಾರೆ. ದ್ರೌಪದಿ­ಯನ್ನು ಪಣಕ್ಕೊಡ್ಡಿ ಪಗಡೆಯಾಟದಲ್ಲಿ ಪಾಂಡ­ವರು ಸೋತಾಗ ಮೈದುನ ದುಶ್ಯಾಸನ ಅವಳನ್ನು  ಸಭೆಗೆ ಕರೆತರುವ ಪ್ರಸಂಗದಲ್ಲಿ, ಅವಳು ಮುಟ್ಟಾಗಿ ಗುಡಿಸಲಿನಲ್ಲಿರುತ್ತಾಳೆ. ಸಭೆಗೆ ಬಂದ ದ್ರೌಪದಿ ತನ್ನ ಗಂಡಂದಿರಿಗೆ ಛೀಮಾರಿ ಹಾಕಿ ಆ ದೊಡ್ಡ ಗುಡಿಸಲಿನಿಂದ ಹೊರ­­ಹೋಗುತ್ತಾಳೆ. ಅಲ್ಲಿ ಅವಳೊಬ್ಬ ಅಸಹಾ­ಯಕ ಮಹಿಳೆಯಲ್ಲ. ಆದರೆ, ಭಾಗವತದ ಪ್ರಭಾವಕ್ಕೆ ಒಳಗಾದ ಕವಿಗಳು ಅವಳ ಸೀರೆ ಅಪ­ರಿ­ಮಿತವಾಗಿ ಹೆಚ್ಚಿ ಅವಳ ಮಾನವನ್ನು ಕೃಷ್ಣ ಕಾಪಾಡುವಂತೆ ಕಲ್ಪಿಸಿ­ದ್ದಾರೆ. ಬಹುಶಃ ಬುಡ­ಕಟ್ಟು ಮಹಿಳೆಗೆ ಆ ಅಸ­ಹಾ­ಯಕತೆಯನ್ನು ತೋರು­ವುದು ವಿಚಿತ್ರವೆನಿಸಿ­ರ­ಬೇಕು. ಅದೇ ರೀತಿ ರಾಮಾಯಣದ ಸೀತೆ ಅಗ್ನಿ­ಪ್ರವೇಶ ಮಾಡು­ವುದು ಯಾರ ಆಶಯ­ವಾಗಿರ­ಬಹುದು ಎಂಬು­ದನ್ನು ನಾವು ಇಂದು ಯೋಚಿಸ­ಬೇಕಾಗುತ್ತದೆ.
ಈ ಕಾವ್ಯದ ಹರವು ಭಾರತಕ್ಕೆ ಮೀಸಲಾಗಿ­ರದೆ ಏಷ್ಯಾದಾದ್ಯಂತ ಪಸರಿಸಿದೆ. ಆ ವೈಶಾಲ್ಯ ಅದನ್ನು ಓದುವವರೂ ಆಚರಿಸುವವರೂ ರೂಢಿ­ಸಿ­ಕೊಳ್ಳಬೇಕಾಗಿದೆ. ಕವಿ, ಆಶಯ, ಅದರ ಹಿಂದಿನ ಚಾರಿತ್ರಿಕ ಸತ್ಯ ಎಲ್ಲವನ್ನೂ ಸಮಕಾಲೀನ­ಗೊಳಿಸಿ ರಾಜಕೀಯ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಕಾವ್ಯವನ್ನು ನಂಬುವಂತೆ ಕವಿಯ ಮೂಲಕ್ಕೂ ಸೊಗಸಾದ ಕಥೆಗಳಿವೆ. ಕಾವ್ಯದ ಒಳಹೊಕ್ಕ ಆ ಕಥೆಗಳೇ ಅದರ ಆಕರ­ಗಳೂ ಆಗಿರುತ್ತವೆ. ಭಾರತದ ಇಂದಿನ ಜಾತಿ ರಾಜ­­ಕಾರಣ ಈ ಎಲ್ಲದರಲ್ಲೂ ತನ್ನ ಹಸ್ತಕ್ಷೇಪ­ವನ್ನು ಮಾಡುತ್ತಿರುತ್ತದೆ. ವೈಚಾರಿಕ ಪ್ರಶ್ನೆ­ಯೊಂದಿಗೆ ಹೊರಟರೆ ಸಿಕ್ಕುವ ಉತ್ತರ ವೈಚಾರಿಕವಾಗಿರುತ್ತದೆ...

ಬ್ರಾಹ್ಮಣೀಕರಣದ ಭ್ರಮೆಯೊಡೆಯುವ ‘ಹಳಗನ್ನಡ’
Tue, 07/22/2014

‘ಚಪಡೇನ ಲಿಖಿತೇ-–ಲಿಪಿಕರೇಣ’. 2,300 ವರ್ಷಗಳ ಹಿಂದೆ ರಾಜಾ­ಶೋಕನ ಆದೇಶದ ಮೇರೆಗೆ ಕನ್ನಡ ನಾಡಿನಲ್ಲಿ ಬಂಡೆಗಲ್ಲಿನ ಮೇಲೆ ಶಾಸನವನ್ನು ಬರೆದ ಲಿಪಿ­ಕಾರ ಚಪಡ. ಗಾಂಧಾರ ನಾಡಿನಿಂದ ಬಂದ ಈತ­ನಿಗೆ ಈ ನಾಡಿನಲ್ಲಿ ಲಿಪಿ ಮೂಡಿಸಿದ ಮೊದಲ ಲಿಪಿಕಾರನೆಂಬ ಹೆಗ್ಗಳಿಕೆ  ಸಲ್ಲುತ್ತದೆ. ಹಾಗೆಂದು ತಿಳಿಸಿಕೊಟ್ಟವರು ಷ.ಶೆಟ್ಟರ್. 
ಇವರು ಕನ್ನಡ­ನಾಡಿನ ಮೊದಲ ಸಹಸ್ರಮಾನದ ಎರಡೂವರೆ ಸಾವಿರ ಶಾಸನಗಳನ್ನು ಜಾಲಾಡಿ ತೆಗೆದು ಕಟ್ಟಿದ ಚರಿತ್ರೆಯ ಬೃಹತ್ ಗ್ರಂಥ: ‘ಹಳಗನ್ನಡ-– ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ’ ಇಂದು ನಮ್ಮ ಮುಂದಿದೆ. ಮತ್ತೆ ಮತ್ತೆ ಚರಿತ್ರೆಯ ಸಂಶೋಧನೆ ನಡೆಯಬೇಕೆಂಬ ಮಾತನ್ನು ಈ ಕೃತಿ ಅನು­ಮೋದಿಸಿ­ದಂತಿದೆ. ಈವರೆಗೆ ನಂಬಿದ್ದ ಹಲವು ‘ಮಿಥ್‌’ಗಳನ್ನು ಇದು ಒಡೆದುಹಾಕುತ್ತದೆ. ಅದ­ರಲ್ಲೂ ಸಂಸ್ಕೃತೀಕರಣ ಮತ್ತು ಬ್ರಾಹ್ಮಣೀಕರಣ­ವೆಂಬ ಭ್ರಮೆಗಳು ಇಲ್ಲಿ ಕುಸಿದು ಬೀಳುತ್ತವೆ.
ಲಿಪಿಯ ವಿಕಾಸದಲ್ಲೂ ಎಷ್ಟೊಂದು ಕಥೆ­ಗಳು: ಯಾರು ಬರೆದರು? ಯಾಕೆ ಬರೆದರು? ಯಾರು ಬರೆಸಿದರು? ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗುತ್ತದೆ. ಮೌರ್ಯ ದೊರೆ ಅಶೋಕನ ಶಾಸನ ಬರೆಸುವ ವಿಶೇಷವಾದ ಆಸ್ಥೆ ದೇಶದಾ­ದ್ಯಂತ ಬರವಣಿಗೆಯ ಸಂಸ್ಕೃತಿಯನ್ನು ಹರಡಿತು. ‘ಬರೆದರೆ ಅನರ್ಹರೊಡನೆ ಅರಿವನ್ನು ಹಂಚಿ­ಕೊಳ್ಳ­ಬೇಕಾಗುವುದೆಂಬ ಆತಂಕದಲ್ಲಿ ಅಂದಿನ ಒಂದು ವರ್ಗವು ಅರಿವಿನ ಕೀಲಿಯನ್ನು ಕಂಠ­ಸರಳು­ಗಳ ಹಿಂದೆ ಅಡಗಿಸಿಟ್ಟಿತ್ತು.
ಇದನ್ನು ಬಿಡು­ಗಡೆ ಮಾಡಿ ಬರೆಯುತ್ತಾ ಬೆಳೆಯುವ ಮಾರ್ಗ­ವನ್ನು ತಿಳಿಸಿಕೊಟ್ಟವರಲ್ಲಿ ಬೌದ್ಧರು ಮೊದಲಿ­ಗರು’. ಈ ವಾದವನ್ನು ಕನ್ನಡದ ನೆಲಕ್ಕೂ ಅನ್ವ­ಯಿಸಿ ವಿಚಾರವನ್ನು ಮಂಡಿಸಿದ್ದಾರೆ. ಇಂತಹ ಹಲವು ಬೆಚ್ಚಿಬೀಳಿಸುವ ಸಂಗತಿಗಳು ಇಲ್ಲಿ ಕಂಡು­ಬರುತ್ತವೆ. ಲಿಪಿಬರವಣಿಗೆ ಬ್ರಾಹ್ಮಣರ ಆಸಕ್ತಿಯಾಗಿರ­ಲಿಲ್ಲ. ವೈದಿಕ ವ್ಯವಹಾರದ ಬಗೆಗೆ ಹೆಚ್ಚು ತೊಡಗಿಕೊಂಡಿದ್ದರಿಂದ ಮೊದಲ ಸಹಸ್ರಮಾನ­ದಲ್ಲಿ ಈ ನಾಡಿನಲ್ಲಿ  ‘ಕವಿಗಳಾಗಿ, ಸಾಹಿತಿ­ಗ­ಳಾಗಿ, ವೈಚಾರಿಕರಾಗಿ ವೈದಿಕರಾರೂ ಹೆಸರು ಮಾಡ­ಲಿಲ್ಲ.’
ಸಂಸ್ಕೃತ ಭಾಷೆಯಲ್ಲಿ  ಲಿಪಿ ಮೂಡಿಸಿ­ದವರು ವೈದಿಕೇತರರಾದ ವಿಶ್ವ­ಕರ್ಮರು. ಎಂಟನೇ ಶತಮಾನದಲ್ಲಿ ವೈದಿಕ­ವ್ಯವಸ್ಥೆ ಬಹು­ತೇಕ ಕುಸಿದು ಬಿದ್ದಾಗ ಆ ಸ್ಥಾನ­ವನ್ನು ತುಂಬಲು ಮುಂದೆ ಬಂದವರು ಪೌರಾಣಿ­ಕರು ಮತ್ತು ಶೂದ್ರರು. ಹಾಗಾಗಿ ಎಂಟನೇ ಶತಮಾನದ ನಂತರ ಬ್ರಾಹ್ಮಣೇತರರು ಹೆಚ್ಚಾಗಿ  ದಾನದತ್ತಿ­ಗಳನ್ನು ಪಡೆದರು. ಸಂಸ್ಕೃತ ಭಾಷೆಯ ವ್ಯವಹಾರ ಬಹುತೇಕ ಬ್ರಾಹ್ಮಣ ಸಮುದಾಯ­ದಲ್ಲಿ ನಡೆದು­ದ­ರಿಂದ ಉಳಿದ ಸಮುದಾಯ­ಗಳು ಅದರ ಲಾಭ ಪಡೆಯುವುದಕ್ಕಿಂತ, ಶೂದ್ರ ಸಮುದಾಯಗಳ ಭಾಷೆ ಮತ್ತು ಸಂಸ್ಕೃತಿಯಲ್ಲಿ ಕೊಡುಕೊಳೆ ಹೆಚ್ಚಾಗಿ ನಡೆದಿದೆ ಎಂಬುದನ್ನು ಸಾಬೀತು ಮಾಡಲು ಈ ಶಾಸನಗಳ ನೆರವು ಪಡೆದಿದ್ದಾರೆ.
ಪ್ರಾಚೀನ ಲಿಪಿ ಅಧ್ಯಯನ ಈ ನಾಡಿನಲ್ಲಿ ನಡೆದೇ ಇದೆ. ಆದರೆ ಷ.ಶೆಟ್ಟರ್‌ ಆಸಕ್ತಿ ಭಿನ್ನ­ವಾದುದು. ಲಿಪಿಯ ತಜ್ಞರು ಮಾತ್ರವಾಗದೆ ಚರಿತ್ರೆಕಾರರು, ಭಾಷಾತಜ್ಞರು, ಕವಿಚರಿತ್ರೆ­ಕಾರರು, ವೈಯ್ಯಾಕರಣಿಗಳು ಎಲ್ಲವೂ ಆಗಿ ಈ ಕೃತಿಯಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ. ಈ ಕೃತಿಯ  ಮೂಲ ಪ್ರಶ್ನೆ ಏಳುವುದು ಲಿಪಿಕಾರರ ಹಿನ್ನೆಲೆಯಲ್ಲಿ. ಕಲ್ಲಿನ ಮೇಲೆ ತಾಮ್ರಪಟಗಳ ಮೇಲೆ ಲಿಪಿಯನ್ನು ಕೊರೆದವನ ಬದುಕು ಏನು? ಎಂಬುದು ತಿಳಿಯುತ್ತದೆ. ಮೂಲಕರ್ತೃವನ್ನೇ ಬಿಟ್ಟು ಶಾಸನ ಅಧ್ಯಯನದ ಫಲವನ್ನು ಮಾತ್ರ ಮೆಲ್ಲುತ್ತಿದ್ದ ನಮಗೆ ಹೊಸ ಕಣ್ನೋಟವನ್ನು ಇದು ಕೊಡುತ್ತದೆ.
ಶೆಟ್ಟರ್‌ ಅವರು ಈ ಹಿಂದೆಯೂ ಶಿಲ್ಪವನ್ನು ಬಿಟ್ಟು ಶಿಲ್ಪಿಗಳ ಬಗೆಗೆ ಒಲವು ತೋರಿದ್ದರು.  ಶಿಲ್ಪಿಗಳ ಹೆಜ್ಜೆಗುರುತಿನ ಅವರ ಶೋಧನೆ ವಿದ್ವತ್‌­ಲೋಕದ ಗಮನವನ್ನು ಸೆಳೆದಿತ್ತು. ಮೂಲತಃ ಕಲೆಯ ಇತಿಹಾಸದಲ್ಲಿ ಅವರಿಗೆ ಆಸಕ್ತಿ. ಹೀಗಾಗಿ ಅವರ ಹೊಯ್ಸಳ ವಾಸ್ತು­ಶಿಲ್ಪದ ಅಧ್ಯಯನವು ಎರಡು ಸಂಪುಟಗಳಲ್ಲಿ   ಪ್ರಕಟಗೊಂಡಿವೆ. ಜಾಗತಿಕ ಮಟ್ಟದಲ್ಲಿ ಅವರಿಗೆ ಹೆಸರು ತಂದುಕೊಟ್ಟ ಸಂಶೋಧನೆಗಳೆಂದರೆ ‘ಸಾವನ್ನು ಅರಸಿ’ ಮತ್ತು ‘ಸಾವಿಗೆ ಆಹ್ವಾನ’.
ಕನ್ನಡ–ಇಂಗ್ಲಿಷ್ ಭಾಷೆಗಳೆರಡರಲ್ಲೂ ಇರುವ ಈ ಕೃತಿಗಳು ಜೈನರ ಸಲ್ಲೇಖನದ ಆಚರಣೆಯ ಕುತೂಹಲದಿಂದ ರೂಪು ಪಡೆದವು. ಈ ಕೃತಿ­ಗಳು ಮೊದಲು ಇಂಗ್ಲಿಷ್‌ನಲ್ಲಿ ಬಂದ ಕಾರಣ­ದಿಂದ ಅಷ್ಟಾಗಿ  ಕನ್ನಡ ಓದುಗರ ಗಮನ ಸೆಳೆಯ­ಲಿಲ್ಲ. ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆದ ಈ ಚರಿತ್ರೆಕಾರರು ಕನ್ನಡಿಗರ ಕೈಗೆಟಕುವಂತಾ­ದುದು ಅವರ ‘ಶಂಗಂ ತಮಿಳಗಂ ಮತ್ತು ಕನ್ನಡ ನಾಡು–ನುಡಿ’ ಕೃತಿಯಿಂದ. ಈ ಕೃತಿಯು ನೆಲದ ಜನ ಹೊತ್ತು ಮೆರೆದು ಒಬ್ಬ ವಿದ್ವಾಂಸನಿಗೆ ಸಿಗಬೇಕಾದ ಓದುಗರ ಪ್ರೀತಿ­ಯನ್ನು ತಂದುಕೊಟ್ಟಿತು.
ಸಂಶೋಧನೆಗಳು ತಾಯಿನುಡಿಯಲ್ಲಿ ನಡೆಯಬೇಕು, ಅದರ ಸಹಜತೆಯೇ ಅದರ ಸಾಮರ್ಥ್ಯವಾಗಿರುತ್ತ­ದೆಂಬುದಕ್ಕೆ ಹಿಡಿದ ಸೊಡರು ‘ಶಂಗಂ ತಮಿಳಗಂ’. ಈ ಎರಡೂ ಸಂಶೋಧನೆಗಳು ಕನ್ನಡ ನಾಡಿನ ಪ್ರಾಚೀನರ ಬದುಕಿನ ಮೇಲೆ ಬೆಳಕು ಚೆಲ್ಲುತ್ತವೆ. ಕನ್ನಡ ಭಾಷೆ–-ಸಾಹಿತ್ಯವನ್ನು ಸಂಸ್ಕೃತದ ಹಿನ್ನೆಲೆಯಲ್ಲಿ ನೋಡುವುದು ಬೆಳೆದು ಬಂದಿದೆ. ಆದರೆ ‘ಕವಿರಾಜಮಾರ್ಗ’ ಕೃತಿಯನ್ನು ನೆಪವಾಗಿರಿಸಿಕೊಂಡು ದ್ರಾವಿಡ ಮೂಲದ ಅಧ್ಯಯನವನ್ನು  ತೋರಿಸಿಕೊಟ್ಟ ಕೃತಿ ‘ಶಂಗಂ ತಮಿಳಗಂ’.
ಹಾಗೆಯೇ ಕನ್ನಡ ಭಾಷೆ ಹಾಗೂ ಲಿಪಿಯ ಬೆಳವಣಿಗೆಯಲ್ಲಿ  ಪ್ರಾಕೃತದ ಪ್ರಭಾವ­ವನ್ನು  ಗಮನಿಸಬೇಕಾದ ಅಗತ್ಯವನ್ನು ಬೆರಳು ಮಾಡಿ ತೋರುತ್ತಿರುವ ಪುಸ್ತಕ ‘ಹಳಗನ್ನಡ’. ಈ ಎಲ್ಲದರ ಹಿಂದಿರುವ ಬೌದ್ಧಧರ್ಮದ ಮಹತ್ವ ಕರ್ನಾಟಕ ಚರಿತ್ರೆಯನ್ನು ಹೊಸ ಕ್ರಮದಲ್ಲಿ ನೋಡುವಂತೆ ಮಾಡುತ್ತದೆ. ಈ ಎರಡೂ ಸಂಶೋಧನೆಗಳಿಂದ ಕನ್ನಡ ನಾಡಿನಲ್ಲಿ ಆರಂಭ­ವಾದ ರಾಜತ್ವದ ನೆಲೆಗಳನ್ನು ಅರ್ಥಮಾಡಿ­ಕೊಳ್ಳಲು ನೆರವಾಗುತ್ತದೆ. ರಾಜತ್ವ ಬೆಳೆದು­ಬರುವಾಗ ಹಲವು ಅಂಶಗಳು ಅದಕ್ಕೆ ಪೂರಕ­ವಾಗಿ ಕೆಲಸ ಮಾಡಿರುತ್ತವೆ.
ಕರ್ನಾಟಕದ ಕದಂಬರ ಕುಲದ ಹುಟ್ಟಿನ ಬಗ್ಗೆ ಇದ್ದ ಈವರೆಗಿನ ಕಥೆಗಳು ಬ್ರಾಹ್ಮಣ ಮೂಲವನ್ನು ಹೇಳುತ್ತಿದ್ದು ಅದನ್ನು ನಿರಾಕರಿಸುವ ಹಲವು ಪುರಾವೆಗಳನ್ನು ಶೆಟ್ಟರ್ ನಮಗೆ ತೋರಿಸುತ್ತಾರೆ. ಕದಂಬರೂ ಆರಂಭದಲ್ಲಿ ಬೌದ್ಧಧರ್ಮದ ಏಳಿಗೆಯನ್ನು ಬಯಸಿದವರು. ಆನಂತರ ವೈದಿಕರ ನೆರಳಿಗೆ ಹೋಗು­ತ್ತಾರೆ. ಅಲ್ಲಿಯವರೆಗೆ ಅಂದರೆ ಸುಮಾರು 600 ವರ್ಷಗಳ ಕಾಲ ಪ್ರಾಕೃತ ಭಾಷೆ ಈ ನಾಡಿನ ವ್ಯವಹಾರ ಭಾಷೆಯಾಗಿತ್ತು. ಮುಂದೆ ಪ್ರಾಕೃತದೊಂದಿಗೆ ಬೆರೆತ ಕನ್ನಡ–ಪ್ರಾಕೃತ ಮಿಶ್ರಿತ ಸಂಸ್ಕೃತ, ಸಂಸ್ಕೃತಭೂಯಿಷ್ಠ ಕನ್ನಡ  ಹೀಗೆ ಮಾರ್ಪಾಡಾಗುತ್ತಾ ಬಂದಿದೆ.
ದೊಡ್ಡ ಸಂಖ್ಯೆಯಲ್ಲಿ ಸಂಸ್ಕೃತ ಶಾಸನಗಳು ಕದಂಬರ ಕಾಲದಲ್ಲಿ ತಾಮ್ರಪಟದ ಮೇಲೆ ರಚಿತವಾಗಿದ್ದು ಅವು ಧರ್ಮದತ್ತಿಯ ಹೊಸ ವ್ಯಾಖ್ಯಾನ ಮತ್ತು ಹೊಸ ಆರ್ಥಿಕ ವ್ಯವಸ್ಥೆಯನ್ನು ನಿರ್ಮಾಣ ಮಾಡಿದವೆನ್ನಬಹುದು. ಗಂಗರ ಕಾಲದ ವಿಶೇಷವೆಂದರೆ ಅವರು ಬ್ರಾಹ್ಮಣೇತರರ ಸೇವೆಯನ್ನು ಗುರುತಿಸಿ ಗೌರವಿಸಿದರು. ಹೋರಾ­ಡಿದ ವೀರರಿಗೆ ಅವರು ಪಟ್ಟ ಕಟ್ಟುತ್ತಿದ್ದರು.
‘ಹಳಗನ್ನಡ’ ಕೃತಿಯ ಸೆಳೆತ ಲಿಪಿಕಾರನ ಕಡೆಗೆ. ಅದರಲ್ಲೂ ವಿಶ್ವಕರ್ಮ, ತ್ವಷ್ಟಾರ– -ತಟಾರ-– ತಟ್ಟಕ, ಕಂಚುಗಾರ, ಬಡಗಿ ಇವರು ನಡೆಸಿದ ಲಿಪಿ ವ್ಯವಸಾಯದ ಬಗೆಗೆ ಕೇಂದ್ರೀಕೃತ­ವಾಗಿದೆ.
ಲಿಪಿಕಾರರಾಗಿದ್ದ ವಿಶ್ವಕರ್ಮರು ವೈದಿಕರಿಗಿಂತ ಹೆಚ್ಚಿನ ದತ್ತಿಗಳನ್ನು ಬ್ರಹ್ಮದೇಯ­ಗಳನ್ನು  ಪಡೆದುಕೊಂಡ ನಿದರ್ಶನಗಳೂ ಇವೆ (ಬ್ರಾಹ್ಮಣರಿಗೆ ನೀಡುತ್ತಿದ್ದ ಭೂಮಿಯನ್ನು ಬ್ರಹ್ಮ ದೇಯಗಳೆನ್ನುತ್ತಿದ್ದರು). ಲಿಪಿಕಾರನೇ ಶಾಸನ ಸಾಹಿತ್ಯವನ್ನು ಬರೆಯುತ್ತಿದ್ದ ರೂಢಿಯೂ ಇತ್ತೆಂಬುದಕ್ಕೂ ಸಾಕಷ್ಟು ಪುರಾವೆಗಳನ್ನು ನೀಡಿದ್ದಾರೆ. ಲಿಪಿ ಜನಸಾಮಾನ್ಯರದಾಗಿರಲಿಲ್ಲವೆಂಬ ಭಾವನೆಯೇ ನಮ್ಮನ್ನು ಶಾಸನಗಳ ಬಗೆಗೆ ಮುಜು­ಗರವನ್ನು  ಮೂಡಿಸಿತ್ತು. ಹಾಗೆ ಭಾವಿ­ಸಲೂ ಕಾರಣಗಳಿವೆ.
ಆಧುನಿಕ ಕಾಲದಲ್ಲಿ ಚರಿತ್ರೆ ಬರೆಯತೊಡಗಿದ ಆರಂಭದ ವಿದ್ವಾಂ­ಸರು ತಪ್ಪಾಗಿ ಗ್ರಹಿಸಿ ಬ್ರಾಹ್ಮಣರು ಮಾತ್ರವೇ ಜ್ಞಾನವನ್ನು, ಧರ್ಮವನ್ನೂ, ವಿಶೇಷ ಚಿಂತನೆ­ಗಳೆಲ್ಲವನ್ನೂ ನೀಡಿದವರೆಂಬಂತೆ ಹೇಳುತ್ತಾ ಬಂದುದರಿಂದ, ಉಳಿದ ಸಮುದಾಯಗಳು ತಮ್ಮ ಮೂಲಗಳನ್ನು ಹುಡುಕಿಕೊಳ್ಳುವಂತೆ ಮಾಡಿವೆ. ಎಂ.ಎನ್. ಶ್ರೀನಿವಾಸ್‌ ಅವರು ಹೇಳುವ ‘ಸಂಸ್ಕೃತೀಕರಣ’ ಅಂದರೆ ಅದರ ಅರ್ಥ ‘ಬ್ರಾಹ್ಮಣೀಕರಣ’ವೇ ಆಗಿದೆ. ಬುಡಕಟ್ಟು ಹಾಗೂ ತಳ ಸಮುದಾಯಗಳು ತಮ್ಮ ಉನ್ನತಿ­ಯನ್ನು ಸಂಸ್ಕೃತಾನುಕರಣೆಯಲ್ಲಿ ಕಾಣುತ್ತ ವೆಂದು ಶ್ರೀನಿವಾಸ್‌ ಹೇಳುತ್ತಾರೆ.
ಅಂದರೆ ಸರಳ ಮಾತಿನಲ್ಲಿ ಬ್ರಾಹ್ಮಣರ ಬದುಕಿನ ಅನುಕರಣೆ ಎಂದಂತಾಗುತ್ತದೆ. ಹೀಗೆ ವಿವರಿಸತೊಡಗಿ ಆ ಜಾಡಿನಲ್ಲೇ ನಂತರದ ಚರಿತ್ರೆ ಕುರಿತ ಸಂಶೋ­ಧನೆ­ಗಳು ನಡೆದಿವೆ. ರಾಜಮನೆತನಗಳು, ಕವಿ­ಗಳು ಮತ್ತಾವುದೇ ಮಹತ್ವದ ವಿಚಾರವನ್ನು ಹೇಳುವಾಗ ಅದರಲ್ಲಿ ಬ್ರಾಹ್ಮಣ್ಯವನ್ನು ಹುಡು­ಕು­ವುದು ಸಹಜವಾಗಿ ನಡೆದುಬಂದಿತ್ತು. ದೇವರು, ಧರ್ಮ ಎಲ್ಲವೂ ಬಾಹ್ಮಣರಿಗೆ ಸೇರಿದ್ದೆಂಬಂತೆ ಭಾವಿಸಲಾಗುತ್ತಿತ್ತು. 
ಭಾರತದಲ್ಲಿ ತಲೆ ಎತ್ತಿದ ದ್ರಾವಿಡ ಐಡೆಂಟಿ­ಟಿಯ ಹೋರಾಟಗಳು, ತಳಸ್ತರದ ಹೋರಾಟ­ಗಳು, ಕಡೆಗೆ ದಲಿತ ಚಳವಳಿ– ಇವು ತಮ್ಮತನದ ಹುಡುಕಾಟದಲ್ಲಿ ಸ್ಥಾಪಿತ ವಿಚಾರಗಳನ್ನು ಮುರಿದು ಕಟ್ಟುವ ಯತ್ನದಲ್ಲಿ ತೊಡಗಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಲಿಪಿಕಾರನೊಬ್ಬ ಬಡಗಿ, ಅಕ್ಕಸಾಲಿ ಅಥವಾ ಕಂಚುಗಾರನಾಗಿದ್ದ ಎನ್ನು­ವುದ­ರಲ್ಲಿ ಹೊಸ ಸಂಭ್ರಮ ಕಾಣುತ್ತದೆ.  ತಳ­ಸ್ತರದ ಚರಿತ್ರೆ ಕಟ್ಟಿಕೊಳ್ಳಲು ಶಾಸನಸಾಹಿತ್ಯದ ಮೊರೆ ಹೋಗಬೇಕೆನಿಸಿತ್ತು.
ಬ್ರಾಹ್ಮಣೀಕರಣದ ಭ್ರಮೆಗಳನ್ನು ಕಳಚುವುದು ಪ್ರಜ್ಞಾಪೂರ್ವಕ­ವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ ಬ್ರಾಹ್ಮಣೇ­ತರ ಸಮುದಾಯಗಳಲ್ಲಿ ನಡೆದೇ ಇರುತ್ತದೆ. ಸೌಜನ್ಯದಿಂದ ತಮ್ಮ ವಿರೋಧವನ್ನು ವ್ಯಕ್ತಪಡಿಸುವ ಬರವಣಿಗೆಗಳು ಹಾಗೂ ಆಕ್ರೋಶ­ದಿಂದ ಹೇಳಿದ ಬರವಣಿಗೆಗಳು ಎರಡೂ ನಮ್ಮ ನಡುವೆ ನಡೆದೇ ಇವೆ. ಇಂತಹ ಸಾಹಿತ್ಯ ರಚಿಸಿದ ಕುವೆಂಪು ನಿಂದನೆಗೆ ಗುರಿ­ಯಾಗಿದ್ದನ್ನೂ ಇಲ್ಲಿ ನೆನೆಯ ಬಹುದು.  ‘ಶೂದ್ರ ತಪಸ್ವಿ’, ‘ಜಲಗಾರ’ ಇವೆಲ್ಲಾ ಶೂದ್ರ ವಿಮೋಚ­ನೆಯ ನೆಲೆಯಲ್ಲಿ ಹುಟ್ಟಿದ ಸಾಹಿತ್ಯವೇ ಆಗಿದೆ. ಲೋಹಿಯಾರ ರಾಮ ಕೃಷ್ಣ ಶಿವನ ಕುರಿತ ವಿಚಾರ, ಡಿ.ಆರ್ ನಾಗರಾಜರ ‘ಅಲ್ಲಮ ಮತ್ತು ಶೈವ ಪ್ರತಿಭೆ’ ಈ ಹುಡುಕಾಟದಲ್ಲಿ ಕಟ್ಟಿಕೊಟ್ಟ ವಿಚಾರಗಳೇ ಆಗಿವೆ.
‘ಹಳಗನ್ನಡ’ ಕೃತಿಯಲ್ಲಿ ‘ವೈದಿಕರಿಂದ ದೂರ ನಿಂತ ರಾಜಮನೆತನಗಳು’ ಎಂದು ಒಂದು ಅಧ್ಯಾಯವನ್ನೇ ಕಾಣಬಹುದು. ಗಂಗರು, ನೊಳಂಬರು, ಅಳುಪರು, ಬಾಣರು, ಚೋಳರು ಮುಂತಾದವರ ಆಳ್ವಿಕೆಯಲ್ಲಿ ಹೇಗೆ ಉಳಿದ ಸಮುದಾಯಗಳು ಮನ್ನಣೆಗೆ ಒಳ­ಗಾಗಿವೆ ಎಂಬುದನ್ನು ವಿವರಿಸುತ್ತಾ ಹೋಗಿ­ದ್ದಾರೆ. ಕಡೆಗೆ ರಾಜಮನೆತನವೊಂದು ತೆರಿಗೆ ಕೊಡದ ವೈದಿಕರ ಕೊಲೆ ಮಾಡಿದ ಶಾಸನದ ಉಲ್ಲೇಖವೂ ಬರುತ್ತದೆ. ಬಹುಶಃ ಆ ಕಾಲ­ದಲ್ಲೂ ಬ್ರಾಹ್ಮಣ ವಿರೋಧದ ನಡೆಯನ್ನು ಪ್ರಕಟಪಡಿಸಿಕೊಳ್ಳಲು ಬಯಸಿದ್ದರೇ ಎಂಬ ಪ್ರಶ್ನೆಯನ್ನೂ ಹಾಕಿಕೊಳ್ಳಬೇಕಾಗುತ್ತದೆ. ಅಧಿ­ಕಾ­ರದ ಸವಲತ್ತುಗಳನ್ನು ಬ್ರಾಹ್ಮಣರು ಪಡೆದಿರು­ತ್ತಾರೆಂಬ ಗುಮಾನಿಯೇ ಇದಕ್ಕೆ ಕಾರಣ­ವಾಗಿರಲೂಬಹುದು. 
ಈ ಎಲ್ಲಾ ರಾಜಕೀಯದೊಳಗೆ ರೂಪಿತ­ವಾದ ಭಾಷೆ, ಸಾಹಿತ್ಯವನ್ನೂ ಹೊಸ ದೃಷ್ಟಿ­ಕೋನದಲ್ಲಿ ಮರುಓದಿಗೆ ಒಳಪಡಿಸಿಕೊಳ್ಳ­ಬೇಕಾಗಿದೆ. ಚರಿತ್ರೆ ಪ್ರಸಕ್ತ ರಾಜಕೀಯದಲ್ಲೇ ರೂಪುಗೊಳ್ಳುತ್ತದೆ. ಮತ್ತೆ ಮತ್ತೆ ಜಾತಿ ಚರ್ಚೆ ನಡೆಯುವ ಕಾರಣವೂ ಇದೇ ಆಗಿದೆ. ಸಂಸ್ಕೃತಕ್ಕೆ ಸಿಕ್ಕ ಗೌರವ ಪ್ರಾಕೃತ ಭಾಷೆಗೆ ಸಿಗದಿರಲೂ ಇದೇ ಕಾರಣವಾಗಿದೆ. ಪ್ರಾಕೃತವನ್ನು ಹೊತ್ತ ಲಿಪಿ­ಯನ್ನು ಬ್ರಾಹ್ಮಿ ಎಂದು ಮುಂದೊಮ್ಮೆ ಕರೆಯ­ಲಾಗಿದೆ, ಅಶೋಕನ ಕಾಲಕ್ಕೆ ಹಾಗೆ ಕರೆದಿರ­ಲಿಲ್ಲ– ಇಂತಹ ಹಲವು ಪ್ರಶ್ನೆಗಳನ್ನೂ ಈ ಕೃತಿ ಹುಟ್ಟುಹಾಕಿದೆ.
ಎಂಬತ್ತರ ಹರಯದಲ್ಲೂ, ಮೂಗಿನ ತುದಿಯಲ್ಲಿ ಕನ್ನಡಕವನ್ನಿರಿಸಿಕೊಂಡು ಪುಸ್ತಕಗಳ ರಾಶಿಯಲ್ಲಿ ಮುಗುಳ್ನಗುವ ಶೆಟ್ಟರರ ಜೊತೆ ಮಾತಿಗೆ ಕೂತರೆ ತಾಸುಗಳು ಕಳೆದು ಹೋಗು­ವುದು ಅರಿವಿಗೆ ಬಾರದು. ಹೆಚ್ಚಾಗಿ ಜನರ ಜೊತೆ ಬೆರೆಯದೆ ಚಿಂತನೆಗೇ ಹೆಚ್ಚು ಸಮಯವನ್ನು ಕೊಟ್ಟುಕೊಂಡವರು  ಅವರು. ಸಣ್ಣ ಪುಟ್ಟ ಆಮಿಷಗಳನ್ನು ಬದಿಗೊತ್ತಿ ಬೃಹತ್ ಯೋಜನೆ­ಗಳಲ್ಲಿ ತೃಪ್ತಿ ಪಡೆದವರು. ಶುಷ್ಕ ವಿಚಾರವಂತ­ರಲ್ಲ. ಕಲೆ, ಸಾಹಿತ್ಯ, ಸಂಗೀತ ಎಲ್ಲವೂ ಆಸಕ್ತಿಯ ಕ್ಷೇತ್ರಗಳು.
ಅಷ್ಟೇ ಅಲ್ಲ, ಅವುಗಳ ಮೇಲೆ ಪ್ರಭುತ್ವ­ವನ್ನು ಸಾಧಿಸಿದವರು. ಇಲ್ಲಿಗೆ ಅವರ ಸಂಶೋಧನೆ ಕೊನೆಗೊಳ್ಳುವುದಿಲ್ಲ. ದಶಕಗಳಿಂದ ಕಲೆಹಾಕಿ ಬರೆದ ‘ಕವಿರಾಜಮಾರ್ಗ’ದ ಪದ­ಪದಕ್ಕೂ ಬರೆದ ವಿವರಣೆಯನ್ನು ನಾವು ಓದ­ಬೇಕಾಗಿದೆ. ಒಂದು ದಿನ ‘ಆದಿಪುರಾಣ’, ‘ಚಾವುಂಡ­ರಾಯ ಪುರಾಣ’ ಈ ಎಲ್ಲಾ ಕೃತಿಗಳಿಗೆ ಅವರು ಅಚ್ಚುಕಟ್ಟಾಗಿ ಕೈಯಲ್ಲಿ ಬರೆದಿಟ್ಟ ಅರ್ಥವಿವರಣೆಯ ಬೃಹತ್ ಗ್ರಂಥ­ಗಳನ್ನು  ನೋಡಿ ಅವಾಕ್ಕಾದೆ. ‘ಶಂಗಂ ತಮಿ­ಳಗಂ’ ಪುಸ್ತಕ ಕೇವಲ ‘ಕವಿರಾಜಮಾರ್ಗ’ ಕೃತಿಗೆ ಬರೆದ ಪ್ರಸ್ತಾವನೆಯಾಗಿತ್ತು. ಕನ್ನಡದ ಹೆಮ್ಮೆಯ ‘ಗುರುಗಳಿಗೆ’ ವಂದಿಸುತ್ತಾ...


ತೃತೀಯ ಲಿಂಗಿಗಳನ್ನು ಗೌರವಿಸೋಣ
Tue, 07/08/2014

ವಿಚಾರ ಕಮ್ಮಟವೊಂದರಿಂದ ಹೊರ­ಬರು­ತ್ತಿದ್ದ ಗುಂಪು ತನ್ನದೇ ಲೋಕದಲ್ಲಿ ಮುಳುಗಿ ಹೋಗಿತ್ತು. ಪರಸ್ಪರ ‘ಏನೇ ಹುಡುಗ, ಏನೋ ಹುಡುಗಿ’ ಎಂದು ಗೇಲಿ ಮಾಡಿ­ಕೊಳ್ಳುತ್ತಾ ಬರುತ್ತಿರುವುದನ್ನು ನೋಡಿದರೆ  ಮತ್ತೊಮ್ಮೆ ಅವರ ಕಡೆ ಕಣ್ಣು ಹಾಯದೇ ಇರಲು ಸಾಧ್ಯವಿರಲಿಲ್ಲ. ಸ್ವಲ್ಪ ಹೆಚ್ಚೇ ಎನಿಸುವ ಲಾಸ್ಯ, ಬಾಗು–ಬಳುಕು ಅಲ್ಲಿ ತುಳುಕುತ್ತಿತ್ತು. ನೋಡಲು ಗಂಡಾದರೂ ಹೆಣ್ಣಿನ ಹಾವ–ಭಾವ, ಹೆಣ್ಣಾಗಿ ಕಂಡರೂ ಅಸಹಜವೆನಿಸುವ ಪುರುಷ ಧ್ವನಿ-. ಕ್ಷಮಿಸಿ, ಹೆಣ್ಣು ಹಾಗೂ ಗಂಡು ಎಂದರೆ ಹೀಗೇ ಇರುತ್ತಾರೆ ಎಂಬ ಸಾಮಾಜಿಕ ಮಾದರಿ­ಗಳು ನನಗೂ ಅಸಹಜವೆನ್ನುವಂತೆ ಮಾಡಿವೆ. ನಮ್ಮ ಸಮಸ್ಯೆಗಳ ಮೂಲವಿರುವುದೇ ಇಲ್ಲಿ.
ಅದು ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಏರ್ಪಡಿಸಿದ್ದ ಕಾರ್ಯಾಗಾರ. ಬೆಂಗಳೂರಿನಲ್ಲಿ ಮುಖ್ಯವಾಗಿ ‘ಸಂಗಮ’ ಮತ್ತು ‘ಅನೇಕ’ ಸ್ವಯಂ ಸೇವಾ ಸಂಸ್ಥೆಗಳು  ಲೈಂಗಿಕ ಅಲ್ಪಸಂಖ್ಯಾತರಿಗಾಗಿ ದುಡಿಯುತ್ತಿವೆ. ನಾನು ಕೆಲವು ವೈಚಾರಿಕ ವಿಷಯಗಳನ್ನು ‘ಅನೇಕ’ದಲ್ಲಿ ಅವರೊಡನೆ ಹಂಚಿಕೊಳ್ಳಬೇಕಾಗಿತ್ತು. ಕಮ್ಮಟದಿಂದ ಹೊರ­ನಡೆದಾಗ ನನಗೆ ಅರ್ಥವಾಗಿದ್ದು ನಾನು ಅವ­ರಿಂದ ಕಲಿಯಬೇಕಾದದ್ದು ಬಹಳವೇ ಇತ್ತು, ಬಹುಶಃ ನಾನು ಅವರಿಗೆ ಕಲಿಸಬೇಕಾದದ್ದು ಏನೂ ಇರಲಿಲ್ಲ. ಅವರದ್ದು ಅತ್ಯಂತ ಮಾನ­ವೀಯವಾದ ನಡವಳಿಕೆ.
ಗಂಡೆಂಬ ಅಹಂಕಾರವಿರಲಿ, ಹೆಣ್ಣಾದ ಕಾರಣಕ್ಕೂ ಬೀಗುವ ದರ್ಪ ಅರೆ ಗಳಿಗೆ ಹೆಣ್ತನ­ವನ್ನು ಕಳೆದುಕೊಳ್ಳುವ ಭಾವದಲ್ಲಿ ಅಡಗಿತ್ತು. ನಾನು ಹೆಣ್ಣಾದ ಕಾರಣಕ್ಕೂ ನನ್ನೊಳಗೊಂದು  ಅಹಂ ಇದೆಯೆಂದು ಮೊದಲ ಬಾರಿಗೆ ಅರಿವಾಗಿತ್ತು.
ಹತ್ತಾರು ಪ್ರಶ್ನೆಗಳು ಮನಸ್ಸಿಗೆ ಬಂದು ಹೋಗಿದ್ದು ಬಹಳ ಸಹಜವಾಗಿತ್ತು. ಹೆಣ್ಣಾಗಿ ಹುಟ್ಟಿ ಆನಂತರದಲ್ಲಿ ಗಂಡಾದವರು, ಗಂಡಾಗಿ ಹುಟ್ಟಿ ಆ ನಂತರದಲ್ಲಿ ಹೆಣ್ಣಾದವರು ಅಲ್ಲಿ­ದ್ದರು. ಹೀಗೆ ರೂಪಾಂತರಗೊಳ್ಳುವ ಒತ್ತಡವೂ ಪ್ರಕೃತಿ­ದತ್ತವಾಗಿರುತ್ತದೆ. ಸ್ವೀಕರಿಸಿದ ಹೊಸ ಭಾವಕ್ಕೆ ತಕ್ಕಂತೆ ದೇಹವೂ ಪೂರ್ಣವಾಗಿ ಮಾರ್ಪಾಡಾಗುವುದಿಲ್ಲ. ಆದ್ದರಿಂದ ಅದಕ್ಕೆ ತಕ್ಕಂತೆ ಅಂಗ ಪರಿವರ್ತನೆಯನ್ನು ಮಾಡಿಕೊಳ್ಳು­ವುದು ಅನಿವಾರ್ಯವಾಗುತ್ತದೆ.
ಆದರಿದು ದೈಹಿಕ ವಿಚಾರ ಮಾತ್ರವಲ್ಲ. ಹುಡುಗನೊಬ್ಬ ಹರೆ­ಯಕ್ಕೆ ಬಂದಾಗ ಹೆಣ್ಣಿನಂತೆ ಕಾಣ­ತೊಡ­ಗಿದರೆ ಅವನು ಮಾನಸಿಕವಾಗಿ ಜರ್ಜರಿತ­ನಾಗುತ್ತಾನೆ. ಈವರೆಗೆ ಹೀಗಾಗುವ ಪ್ರಕ್ರಿಯೆ ಅವರು  ಸಮಾಜದಿಂದ ದೂರ ಉಳಿಯುವಂತೆ  ಮಾಡಿತ್ತು. ಆದರೆ ಅದಕ್ಕಾಗಿ ಬರುವ  ಒಂದು ಕಾನೂನು, ಸಮಾಜದಲ್ಲಿ ಕೆಲವು ಹಂತ­ಕ್ಕಾ­ದರೂ ಅವರ ರಕ್ಷಣೆ ಮಾಡಬಲ್ಲದು. ಭಾರತ, ಮೂರನೆ ಲಿಂಗ (ಥರ್ಡ ಜಂಡರ್) ಎಂದು ಕಾನೂನು ರೀತ್ಯ ಪರಿಗಣಿಸಿದ ರಾಷ್ಟ್ರ­ವೆಂಬ ಹೆಗ್ಗಳಿಕೆಯನ್ನು ಪಡೆಯುತ್ತದೆ. ಈ ವರ್ಷದ ಏಪ್ರಿಲ್‌ನಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪಿ­­ನಲ್ಲಿ ಈ ಅಂಶವನ್ನು ಎತ್ತಿಹಿಡಿದಿದೆ. ಚುನಾ­ವಣೆಯ ಅಬ್ಬರದಲ್ಲಿ ತೀರ್ಪನ್ನು ಬೆಂಬ­ಲಿಸುವ ಸೌಜನ್ಯವನ್ನು ಮರೆತಿದ್ದೇವೆ. ಈವರೆಗೆ ಲೈಂಗಿಕ ಅಲ್ಪಸಂಖ್ಯಾತರು ಮತ್ತು ಅವರ ಪರವಾದ ಮಾನವ ಹಕ್ಕು ಹೋರಾಟಗರರು, ಆಮ್‌ನೆಸ್ಟಿ ಇಂಟರ್‌ನ್ಯಾಷನಲ್ ನಡೆಸಿದ ನಿರಂತರ­ವಾದ ಮತ್ತು ದೀರ್ಘವಾದ ಹೋರಾ­ಟದ ಫಲವಾಗಿ ಈ ತೀರ್ಪು ಹೊರಬಂದಿದೆ.
ಕಳೆದ ಎರಡು ವರ್ಷಗಳಲ್ಲಿ  ಜಗತ್ತಿನ ಹಲವು ರಾಷ್ಟ್ರಗಳು ಲೈಂಗಿಕ ಅಲ್ಪಸಂಖ್ಯಾತರಿಗೆ ಪೂರಕ­ವಾದ ಕಾನೂನು, ಕಾಯಿದೆಗಳನ್ನು ತಂದಿವೆ. ಜಗತ್ತು ಭಿನ್ನತೆಯನ್ನು ಒಪ್ಪಿಕೊಳ್ಳಲು,  ಹೊಸ ಚಹರೆಗಳನ್ನು ಗೌರವಿಸಲು ಇಷ್ಟು ದೀರ್ಘಕಾಲ ನರಳಬೇಕಾಯಿತು. ಅದನ್ನು ಜಾರಿಗೊಳಿಸಲು ಪೂರಕವಾಗಿ ಸಾಕಷ್ಟು ಸಿದ್ಧತೆಯನ್ನು ಮಾಡಿ­ಕೊಳ್ಳ­ಬೇಕಾಗುತ್ತದೆ. ಮೂಲಭೂತವಾಗಿ ಅವರಿಗೆ ದೊರೆಯಬೇಕಾದ ವೈದ್ಯಕೀಯ ನೆರವು, ಗುಪ್ತವಾಗಿ ನಡೆಯುತ್ತಿದ್ದ ಶಸ್ತ್ರಚಿಕಿತ್ಸೆಯನ್ನು ಪರಿಣತ ವೈದ್ಯರು ಅಧಿಕೃತವಾಗಿ ಮಾಡ­ಬಹು­ದಾಗಿದೆ. ಅವರ ಬದಲಾದ ಲಿಂಗಕ್ಕೆ ಅನುಗುಣವಾಗಿ ಸಾರ್ವಜನಿಕ ಶೌಚಾಲಯ­ವನ್ನು ಅವರು ಬಳಸಬಹುದು.
ಕಳೆದ ಎರಡು ವರ್ಷಗಳಿಂದ ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ಕೊಟ್ಟು ಅವರ ಶಿಕ್ಷಣಕ್ಕೆ ದಾರಿ ಮಾಡಿಕೊಟ್ಟುದು ಅಭಿ­ನಂದ­ನೀಯವಾದುದು. ಹಾಗೆ ಬಂದ ವಿದ್ಯಾರ್ಥಿ­ಗಳ ಮುಖದಲ್ಲಿ ಖಿನ್ನತೆ, ಹಿಂಜರಿಕೆ ಮನೆ­ಮಾಡಿ­ರುತ್ತದೆ. ಮುಕ್ತವಾಗಿ ಬೆರೆಯಲು, ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಪ್ರತಿಭೆಯನ್ನು ಮೆರೆಯಲು ಸಮಾಜ ಮತ್ತಷ್ಟು ಪೂರಕವಾದ ವಾತಾವರಣ­ವನ್ನು ಒದಗಿಸಬೇಕಾಗುತ್ತದೆ.
ಓದು ಮುಗಿಸಿದ ವಿದ್ಯಾರ್ಥಿಗಳು  ಸಂಶೋ­ಧನೆ, ಉದ್ಯೋಗ, ಮದುವೆ, ಸ್ಪರ್ಧಾ­ತ್ಮಕ ಪರೀಕ್ಷೆ, ಹೀಗೆ ಯಾವುದೋ ಸಮಸ್ಯೆಗಾಗಿ ನನ್ನನ್ನು ಮತ್ತೆ ಮತ್ತೆ ಹುಡುಕಿಕೊಂಡು ಬರು­ತ್ತಿರು­ತ್ತಾರೆ. ಆದರೆ ಅಂದು ಮನೆಗೆ ಹುಡುಕಿ­ಕೊಂಡು ಬಂದ ‘ಸುಮತಿ’ಗೆ ಅದಾವ ಕಾರಣವೂ ಇರಲಿಲ್ಲ. ಏನೋ ವಿಚಾರವನ್ನು ಹೇಳಿಕೊಳ್ಳ­ಲಾಗದೆ ಪರದಾಡುತ್ತಿದ್ದಳು. ಒಂದೇ ಸಮನೆ ಕಣ್ಣೀರಿಡು­ತ್ತಿದ್ದಳು. ಮೈಕೈ ತುಂಬಿಕೊಂಡು ಬೆಳೆದ ಸುಂದರ ಹುಡುಗಿ, ಅತಿ ವಿನಯವಂತೆ, ನನ್ನ ಮೆಚ್ಚಿನ ಶಿಷ್ಯರಲ್ಲಿ ಆಕೆಯೂ ಒಬ್ಬಳು. ಸಣ್ಣ ಸರ್ಕಾರಿ ನೌಕರಿಯಲ್ಲಿರುವ ತಂದೆ ಜೊತೆಗೆ ತಮ್ಮ, ತಂಗಿ. ಅವಳ ಮೆಡಿಕಲ್ ಫೈಲನ್ನು ನನಗಿಟ್ಟಾಗ ನನಗೆ ಗಾಬರಿಯೇ ಆಗಿತ್ತು. ವೈದ್ಯಕೀಯ ವರದಿಯ ಕಡೆಯಲ್ಲಿ ಇಂಗ್ಲಿಷ್‌ನಲ್ಲಿ ‘ಥರ್ಡ್‌ ಜೆಂಡರ್’ ಎಂದು ನಮೂದಿಸಿತ್ತು. ಈಗ ಅವಳು ಅವನಾಗಿದ್ದಾಳೆ. ಅದನ್ನು ನಿಭಾಯಿಸು­ವು­ದಾದರೂ ಹೇಗೆ? ಇದು  ಅವಳ ತಂದೆ ತಾಯಿಗೆ ಹೊರತುಪಡಿಸಿ ಬೇರೆ ಯಾರಿಗೂ ಗೊತ್ತಾಗದಂತೆ ಕಾಲ ತಳ್ಳಿದ್ದಾಳೆ. ಹೆಣ್ಣು ಮಕ್ಕಳ ಹಾಸ್ಟೆಲ್‌ನಲ್ಲಿ ಒಂಟಿಯಾಗಿ ಉಳಿಯುತ್ತಾ ಬಂದಿ­ದ್ದಾಳೆ. ಯಾವ ದಾಖಲೆಗಳಲ್ಲೂ ಅವಳ ಬದಲಾದ ಲಿಂಗದ ಮಾಹಿತಿ ಇಲ್ಲದೆ ಇರು­ವುದರಿಂದ ಮತ್ತು ಮುಖಲಕ್ಷಣ ಹೆಚ್ಚು ಬದ­ಲಾವಣೆಯನ್ನು ಹೊಂದದೆ ಇದ್ದುದರಿಂದ ಅಷ್ಟು ಸುಲಭ­ವಾಗಿ ಯಾರೂ ಅವಳನ್ನು ಪತ್ತೆ ಹಚ್ಚಿರ­ಲಿಲ್ಲ. ಅವಳ ಅಂತರಂಗದ ಭಾವನೆಗಳು ಬೇರೆ­ಯಾಗಿವೆ. ಹೆಣ್ಣಿನಂತೆ ಬಟ್ಟೆ ಹಾಕುವುದು ಅವಳಿಗೆ ಬೇಡವಾಗಿದೆ. ಮನೆ ವಾತಾವರಣ ಕದಡಿಹೋಗಿದೆ. ಇಂತಹ ಸಂದರ್ಭಗಳಲ್ಲಿ  ಮನೆಯವರ ಕಾಟದಿಂದ ರೋಸಿ ಬೀದಿಗೆ ಬೀಳು­ವುದು ಸಾಮಾನ್ಯವಾಗಿರುತ್ತದೆ. ಮನೆಯವರು ಉಳಿದ ಮಕ್ಕಳ ಭವಿಷ್ಯ ಮುಂದಿಟ್ಟು  ಕೊಂಡು ಇವರಿಂದ ಜಾರಿಕೊಳ್ಳಲು ಬಯಸುತ್ತಾರೆ.
ಸಮಾಜದಲ್ಲಿ ಅವರನ್ನು ಅರಸಿ ಬರುವ ಕಾಯಕವೆಂದರೆ ಲೈಂಗಿಕ ಸೇವೆ. ಆ ವೃತ್ತಿ ಅವಳ ಆಯ್ಕೆಯಲ್ಲ. ಆದರೆ ತನ್ನನ್ನು ಟ್ರಾನ್ಸ್‌ ಜೆಂಡರ್ ಎಂದರೆ ಕೆಲಸ ನೀಡುವವರು ಯಾರು? ಶಿಕ್ಷಕನಾಗಿ ನಿಲ್ಲಬೇಕೆಂಬ ಬಯಕೆ ಸುಮತಿಗೆ. ಆ ಅರ್ಹತೆ ಆಕೆಗೆ ಇದೆ, ಆದರೆ ಸಮಾಜ ಇದನ್ನು ಮನ್ನಿಸಬಲ್ಲದೆ? ಇಲ್ಲವೆ ಎಲ್ಲರಂತೆ ತಮ್ಮ ಸಮುದಾಯವನ್ನು ಸೇರಬೇಕೆ? ಸದ್ಯಕ್ಕೆ ಸುಮತಿ  ತನ್ನಲ್ಲಿ ಮೂಡಿಬರುತ್ತಿರುವ ಪುರುಷ ಲಕ್ಷಣಗಳನ್ನು ಮುಚ್ಚಿಟ್ಟು ಹೆಣ್ಣಾಗಿ ಉದ್ಯೋಗ ಪಡೆದುಕೊಳ್ಳುವುದು ಉತ್ತಮವೆನಿಸಿತ್ತು. ಆದರೆ ಹೆಣ್ಣು ಮಕ್ಕಳಂತೆ ಬಟ್ಟೆ ತೊಡುವುದು ಅವಳಿಗೆ ಇರಿಸು ಮುರಿಸಾಗುತ್ತದೆ. ಈ ಎಲ್ಲಾ ಗೊಂದಲ­ದಲ್ಲಿ ಭವಿಷ್ಯಕ್ಕೆ ಸೊಡರು ಹಿಡಿವಂತೆ ನ್ಯಾಯಾಂಗದ ತೀರ್ಪು ಹೊರಬಂದಿದೆ. ಸುಮತಿ­ಗೊಂದು ದಾರಿ ಕಾಣಬಹುದೆ? ಸುಮತಿ ಒಬ್ಬ­ಳಲ್ಲ, ಒಂದು ಹೆಸರಲ್ಲ...ಅದು ಹೊಸ ಚಹರೆ. ಹೆಣ್ಣು ಗಂಡು ಸಮಾನವಾದ ಮತ್ತೊಂದು ಲಿಂಗ. ಅವರು ಹೆಣ್ಣೆಂದು ಗುರುತಿಸಿಕೊಂಡರೆ ಹೆಣ್ಣಾಗಿ,  ಗಂಡೆಂದು ಗುರುತಿಸಿಕೊಂಡರೆ ಗಂಡಾಗಿ ಗೌರವಿಸುವ ನಡೆಯನ್ನು ನಾವು ಕಲಿಯಬೇಕಾಗಿದೆ
ಉತ್ತರ ಭಾರತದಲ್ಲಿ  ಲೈಂಗಿಕವಾಗಿ ರೂಪಾಂ­ತರ ಹೊಂದಿದವರು ತಮ್ಮದೇ ಆದ ಹಿಜ್ಡಾ­­ಸಮುದಾಯವನ್ನು ಕಟ್ಟಿಕೊಂಡು ಬದು­ಕುತ್ತಿ­­ದ್ದಾರೆ. ಇಸ್ಲಾಂ ಧರ್ಮವನ್ನು ಒಪ್ಪಿ­ಕೊಳ್ಳುತ್ತಾರೆ. ಚಾರಿತ್ರಿಕ ಕಾಲದಿಂದಲೂ ಇಸ್ಲಾಂ ಸಮಾಜ ಹಿಜ್ಡಾ ಸಮುದಾಯವನ್ನು  ಬೇರೆ ಬೇರೆ ರೀತಿಯಲ್ಲಿ ಮನ್ನಿಸುತ್ತಾ ಬಂದಿದೆ. ಅವರು ಅಂತಃಪುರದ ಸೇವಕರಾಗಿ ಕಾವಲು­ಗಾರ­ರಾಗಿ ಹೆಚ್ಚು ನಂಬಿಕೆಯನ್ನು ಗಳಿಸಿದ್ದರು. ಆದರೆ ಮೂಢನಂಬಿಕೆಯ ಆಚರಣೆ­ಗಳೂ ಅವರಲ್ಲಿ ಸೇರಿಹೋಗಿವೆ. ದಕ್ಷಿಣ ಭಾರತದಲ್ಲಿ ಹಿಜ್ಡಾ ಆಚರಣೆ ಚಾಲ್ತಿಯಲ್ಲಿಲ್ಲ. ಆದರೂ ಮುಂಬೈ ಪ್ರಭಾವದಿಂದ ರೈಲುಗಳಲ್ಲಿ ಬಸ್ ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಾರೆ.
ಲೈಂಗಿಕ ಸೇವೆಯ ಜೊತೆಗೆ ಭಿಕ್ಷಾಟನೆಯು ಬದುಕಿನ ಪ್ರಮುಖ ದಾರಿಯಾಗಿದೆ. ಅವರನ್ನು ಮಂಗಳಮುಖಿಯರೆಂದು ಕರೆಯುತ್ತಾ ಅವರಿಗೆ ಭಿಕ್ಷೆ ನೀಡುವ ವ್ಯಾಪಾರಿ ಸಮುದಾಯ ಕೆಲವು ಶಕುನದ ನಂಬಿಕೆಗಳನ್ನು ಉಳಿಸಿಕೊಂಡಿದೆ. ಪ್ರತಿದಿನ ಅವರ ಕೈಯಲ್ಲಿ ಅಂಗಡಿಯ ಮುಂದೆ ಕಾಯಿ ಒಡೆಸಿ, ದೃಷ್ಟಿತೆಗೆಸುವ ಆಚರಣೆಗಳನ್ನು     ಮುಂದುವರಿಸಿ ಕೊಂಡು ಬಂದಿದೆ. ತಮ್ಮನ್ನು ಮಂಗಳ ಮುಖಿಯರೆಂದು ಕರೆಯುವುದಕ್ಕೆ ಅವರಲ್ಲಿ ಕೆಲವರ ಸಮ್ಮತಿಯೂ ಇದೆ. ಒಟ್ಟಿನಲ್ಲಿ ಅವರು ಸಮಾಜದಲ್ಲಿ ಎಲ್ಲರಂತೆ ಬದುಕದೆ ಅಡ್ಡದಾರಿಗಳಲ್ಲೇ ಉಳಿಯುತ್ತಾರೆ. ಆದರೆ ಅಡ್ಡ ದಾರಿಯಲ್ಲಿ ಉಳಿಸುವುದು ಮುಖ್ಯವಾಹಿನಿಯ ಹುನ್ನಾರವೆಂದು ಅವರು ತಿಳಿಯಬೇಕಾಗಿದೆ. ತನ್ನ ಸುಖಕ್ಕಾಗಿ ಅಸಹಾಯಕರನ್ನು ಬಳಸಿಕೊಳ್ಳಲು ಯಾವ ಗಳಿಗೆಯಲ್ಲೂ ಪ್ರಬಲರು ಹಿಂದೆ ಬೀಳು­ವುದಿಲ್ಲ.
ಲಿಂಗಾಂತರ ಗೊಂಡವರ ಅಸ­ಹಾಯ ಕತೆಯನ್ನು ಪುರುಷಪ್ರಧಾನ ಸಮಾಜ ಬಹು ಸೊಗಸಾಗಿ ಬಳಸಿಕೊಂಡಿದೆ. ಮುಂದೆಯೂ ಅದರ ಲಾಭವನ್ನು ಪಡೆಯಲು ಕಾದು ಕುಳಿತಿರುತ್ತದೆ. ಇವರಲ್ಲಿ ಇವತ್ತು ನೂರಕ್ಕೆ ತೊಂಬತ್ತು ಮಂದಿ ಲೈಂಗಿಕ ಸೇವೆಯಲ್ಲಿ ತೊಡಗಿ­ದ್ದಾರೆ. ಅದನ್ನು ಬೆಂಬಲಿಸುವ ಮತ್ತು ಸಮರ್ಥಿ­ಸುವ ಸಂಸ್ಥೆಗಳು ಅವರ ನಡುವೆ ಕೆಲಸ ಮಾಡು­ತ್ತಿವೆ. ಲಿಂಗಾಂತರಗೊಂಡ ಹಿಂಸೆಯ ಜೊತೆಗೆ ಲೈಂಗಿಕ ಕಾರ್ಯಕರ್ತರಾಗುವ ಮೂಲಕ ಸಮಾಜದಲ್ಲಿ ಮತ್ತಷ್ಟು ನಿಂದನೆಗೆ ಗುರಿ­ಯಾಗುತ್ತಾರೆ. ಈ ಎಲ್ಲದರ ಹಿಂದೆ ಅವರನ್ನು ಬಿಡದೆ ಬೆನ್ನು ಹತ್ತುವ ಎಚ್‌ಐವಿ ಸೋಂಕು. ಭಾರತದಂತಹ ದೇಶ ಇನ್ನೂ ಎಚ್‌ಐವಿ ಸೋಂಕಿತರನ್ನು ಹೇಗೆ ನಡೆಸಿಕೊಳ್ಳಬೇಕೆಂದು ತರಬೇತಿಯನ್ನೇ ಪಡೆದಿಲ್ಲ. ಅಸ್ಪೃಶ್ಯತೆ ಹೇಗೆಲ್ಲಾ ಆವರಿಸುತ್ತದೆ-. ಅದರ ಕರಾಳತೆ ಕೈಗಳು ಎಲ್ಲಿಗೆ ಬೇಕಾದರೂ ಚಾಚುತ್ತವೆ.  ಕಡೆಗೆ ಆಸ್ಪತ್ರೆಯನ್ನೂ ಬಿಡುವುದಿಲ್ಲ.
ಕಮ್ಮಟದಲ್ಲಿ ಗಟ್ಟಿಯಾಗಿ ದಿಟ್ಟವಾಗಿ ತಮ್ಮ ಪರಿಚಯವನ್ನು ಹೇಳಿಕೊಂಡ ಸೋದರ ಸೋದರಿ­ಯರು ಬಹಳ ಮುಕ್ತವಾಗಿ ತಮ್ಮ ಲೈಂಗಿಕ, ಸಾಮಾಜಿಕ ಚಹರೆಗಳನ್ನು ತಿಳಿಸಿದರು. ತಾನೊಬ್ಬಳು ಟ್ರಾನ್ಸ್‌ ಜೆಂಡರ್ ಹಾಗೂ ಲೈಂಗಿಕ ಕಾರ್ಯಕರ್ತೆ ಮತ್ತು ಎಚ್‌ಐವಿ ಪಾಸಿಟಿವ್ ಇರುವ ಎಲ್ಲರಿಗಾಗಿ ದುಡಿಯುವ ಮಾನವ ಹಕ್ಕು ಹೋರಾಟಗಾರ\ಹೋರಾಟಗಾರ್ತಿ ಎಂದು ಹೇಳಿಕೊಂಡರು. ನನ್ನ ಮನಸ್ಸು ತುಂಬಿಬಂದಿತ್ತು. ಇವರಲ್ಲಿ ಮಾನವೀಯ ಮೌಲ್ಯಗಳು ಮನೆಮಾಡಿವೆ.  ನಿಶಾ, ಗೀತಾ, ಕಿರಣ, ಆಶಾ ಮತ್ತ್ಯಾರೆ ಆಗಿರಲಿ ಅವರಿಗೆ ಹೊಸದೊಂದು ಬದುಕು ಸಿಗಲಿ.
ಇಸ್ಲಾಂನಂತೆ ಕ್ರೈಸ್ತ ಸಮಾಜ ಲೈಂಗಿಕ ಅಲ್ಪಸಂಖ್ಯಾತರ ವಿಷಯದಲ್ಲಿ ಉದಾರವಾಗಿ ನಡೆದುಕೊಂಡಿಲ್ಲ. ಹಾಗಾಗಿ ಯೂರೋಪ್ ದೇಶಗಳು ಅವರ ಪರವಾಗಿ ಕಾಯ್ದೆಯನ್ನು ರೂಪಿಸಲು ತೊಡಕಾಗಿತ್ತು.
ಆದರಿಂದು ಹಲವು ರಾಷ್ಟ್ರಗಳು  ಲೈಂಗಿಕ ಸ್ವಾತಂತ್ರ್ಯವನ್ನು ವಿಸ್ತರಿಸಲು ಮುಂದಾಗಿವೆ. ಗಂಡಸರಿಬ್ಬರು ದಂಪತಿ­ಯಾಗು­ವುದನ್ನು, ಹೆಂಗಸರಿಬ್ಬರು ದಂಪತಿಯಾಗು­ವುದನ್ನು ಮನ್ನಿಸಿವೆ. ನೇಪಾಳ ತನ್ನ ಹೊಸ ಸಂವಿಧಾನದಲ್ಲಿ ಮೂರು ಲಿಂಗಗಳನ್ನು ಸೇರಿಸಿದೆ. ಆದರೆ ಭಾರತದ ಸುಪ್ರೀಂಕೋರ್ಟ್ ಗೇ ಮತ್ತು ಲೆಸ್ಬಿಯನ್ ಸಂಬಂಧವನ್ನು ಲೈಂಗಿಕ ಅಲ್ಪಸಂಖ್ಯಾತರೆಂದು ಪರಿಗಣಿಸಲು ನಿರಾ­ಕರಿಸಿದೆ. ಇತರ ಹಿಂದುಳಿದವರ (ಒಬಿಸಿ) ಮೀಸಲಾತಿಯಡಿ ಅವಕಾಶಗಳನ್ನು ಲೈಂಗಿಕ ಅಲ್ಪಸಂಖ್ಯಾತರಿಗೆ ನೀಡಲು ಆದೇಶಿಸಿದೆ. ಅವರ ಸಂಗಾತಿಗಳ ಜೊತೆ ಬದುಕುವ ಅವಕಾಶವೂ ಅವರಿಗಿದೆ. ಮಗುವಿನ ಜನನ ಪ್ರಮಾಣ ಪತ್ರ­ದಲ್ಲಿಯೇ ಮೂರನೆ ಲಿಂಗವನ್ನು ಗುರುತಿಸಲು ಅವಕಾಶವನ್ನು ಜರ್ಮನಿ ಕಲ್ಪಿಸಿದೆ. ಅಲ್ಲಿ ‘ಎಕ್ಸ್‌’ ಸಂಕೇತವನ್ನು ಬಳಸಬಹುದು.
ಈವರೆಗೆ ಸಂಬೋಧಿಸಿದ ಶಿಖಂಡಿ, ಖೋಜಾ, ಹಿಜ್ಡಾ, ನಪುಂಸಕ ಈ ಯಾವುದೇ ಸಂಬೋಧನೆಗಳು ಅವಮಾನಕರವಾದಲ್ಲಿ ಅವರು ಬಯಸುವ  ಅವರ ವಿಶೇಷ ಲಿಂಗವನ್ನು ಒಪ್ಪಿಕೊಳ್ಳಲು ಮತ್ತು ಗೌರವಿಸಲು
ನಾವು ಸಿದ್ಧ.


ಮಲ ಹೊರುವವರ ದೇಶದಲ್ಲಿ ನಿಷೇಧದ ಕತೆ
Tue, 06/24/2014

ಇದು ನಮ್ ಕಥೆ. ಬಾಳ ಹಳೇದು. ನಮಗೂ ಒಂದು ಕಥೆಯಿದೆ, ಬದುಕಿದೆ ಅಂತ ಯಾರಿಗೂ ಅನ್ಸೋದಿಲ್ಲ. ಏನೋ ಗೋಳು ಅಂತ ತಿಳಿಬೇಡಿ. ನಮ್ಮ ಕಾಯಕದಿಂದ ನಮ್ಮನ್ನು ಬಿಡು­ಗಡೆಗೊಳಿಸ್ಬೇಕು ಅಂತ ಸುಪ್ರೀಂ ಕೋರ್ಟ್‌ ಇದೇ ವರ್ಷ ಮಾರ್ಚ್‌ ೨೭ರಂದು  ಆದೇಶ ಹೊರ­­­ಡಿಸಿದೆ. ನಮಗೆ ಮನೆಗಳನ್ನು ಕಟ್ಟಿ­ಕೊಡ­ಬೇಕು ಅಂತ ಸರ್ಕಾರಕ್ಕೆ ಸೂಚನೆ ನೀಡಿದೆ. ನಮಗೆ ಅಂಥದ್ದೊಂದು ಕನಸು ಸಹ  ಎಂದೂ ಬಿದ್ದಿ­­ರ­ಲಿಲ್ಲ. ಯಾಕೆಂದರೆ ನಮಗೆ ಮನೆಗಳಲ್ಲಿ ಬದುಕೇ ಗೊತ್ತಿರಲಿಲ್ಲ. ಊರ ಹೊರಗಲ ಕೇರಿಯ ಕೊಂಪೆಗಳಲ್ಲಿ ನಮ್ದೂ ಒಂದು ಜೋಪಡಿ. ನಗರಕ್ ಬಂದ್ರೆ ಅಲ್ಲೂ ನಮಗೇ ಅಂತ ಜಾಗ ಇರೋದೇ ಬಿಡಿ, ಕಾಲೋನಿ ಇಲ್ಲವೇ ಸ್ಲಮ್ಮು ಅಂತೀರ.
ಹಳ್ಳಿಯಾಗಲಿ ಪಟ್ಟಣವಾಗಲಿ, ಬಾಂಬೆ, ಕಲ್ಕತ್ತ ಡೆಲ್ಲಿಯಂತಹ ನಗರಗಳಾಗಲಿ ನಾವೇ  ಅಲ್ವಾ ಕಸ ಬಳ್ದು ಬಾಚೋರು? ಅದರಲ್ಲೂ ನಗರ­­­ಗಳೂ ಹೆಚ್ಚಾದಂಗೆ ನಮಗೆ ಬೇಕಾದಷ್ಟು ಕೆಲಸ. ನಗರದಲ್ಲಿ ಪಕ್ಕ-ಪಕ್ಕ ಮನೆ ಕಟ್ಕೊಂಡು ಊರ ಹೊರಕ್ಕೆ ಪಾಯಿಖಾನೆಗಂತ ಹೋಗೋದು ತಪ್ಪಿ, ಪಾಯಿಖಾನೆ ಅಂದ್ರೆ ಅದೇ ಕಕ್ಕಸು ಮನೆ ಕಟ್ಕೊಳ್ಳೋಕೆ ಶುರು ಮಾಡಿದ್ರಲ್ಲ, ಆಗ ದಿನಾ ಗೋರಿ ಅದನ್ನ ಹಾಕೋಕೆ ನಮ್ಮನ್ನ ಕರ­­ಕೊಂಡ್ರು. ಎಲ್ಲಾ ನಗರದಲ್ಲೂ ಹೀಗೆ ಮನೆ ಕಟ್ಟೋದು ಶುರು ಆಯ್ತು. ಮನೆ ಹಿಂದಿನ ಗಲ್ಲಿಲಿ ಅವರು ಮೈ ತೊಳೆದ ನೀರು ಚರಂಡಿ­ಯಲ್ಲಿ ಹರಿಯೋದು. ಇನ್ನು ಗಟ್ಟಿ ಕಸಕ್ಕೆ ಗುಂಡಿ ಮಾಡೋರು. ಇಲ್ಲಾಂದ್ರೆ ಹಾಗೇ ಒಂದು ಮಡಕೆ ಇಡೋರು. ಕೆಲವು ಕಡೆ ಏನೂ ಇಲ್ಲ. ಚಪ್ಪಡಿ ಕಲ್ಲ ಮೇಲೆ ಎಲ್ಲಾ ಬಂದು ಬೀಳೋದು. ಅದ­ನ್ನೆಲ್ಲ ಒಂದು ತಗಡು ತಗೊಂಡು ಬಾಚಿ ಮಡ­ಕೆಲೋ ಬಕೇಟಿನಲ್ಲೋ ಹಾಕ್ಕೊಂಡು, ತಲೆ ಮೇಲೆ ಹೊತ್ಕೊಂಡು ಹೋಗಿ ಊರ ಹೊರಗೆ ಹಾಕ್ತಿದ್ವಿ. ನಮ್ಮವ್ವ ಅವರವ್ವ ಹೀಗೆ ಎಷ್ಟೋ ತಲೆ­ಮಾರು ತಲೆ ಮೇಲೇ ಮಲ ಹೊತ್ತಿದ್ದೀವಿ. ಹಂಗೆ ಹೊತ್ಕೊಂಡು ಹೋಗುವಾಗ ಅದೆಲ್ಲ ತುಳುಕಿ ಮೈ ಮೇಲೆ ಬೀಳೋದು. ದನದ ಕೊಟ್ಟಿಗೆಯಲ್ಲಿ ಸಗಣಿ ಬಾಚಿ ಹಾಕ್ತಾರಲ್ಲ ಹಾಗೆ. ಅದಕ್ಕೇ ನಾವು ಹಾಗೆ ಹೊತ್ಕೊಂಡು ಹೋಗ್ತಿದ್ರೆ ಜನ ಮೂಗು ಮುಚ್ಕೊಂಡು ದೂರ ಹೋಗೋರು. ಇಲ್ದೇ ಇದ್ರೂ ಅವರೇನು ನಮ್ಮನ್ನ ಮುಟ್ಟಿಸ್ಕೊಳ್ತಿರಲಿಲ್ಲ. ಹಂಗೇನೇ ನಮ್ಮೇಲೆ ಯ್ಯಾರ್‌ ಯ್ಯಾರ್‍ದೋ ನೆರಳು ಬಿದ್ರೆ ನಮಗೆ ಒಳ್ಳೇದಲ್ಲ ಅಂತ ನಮ್ಮಜ್ಜಿ ಹೇಳ್ತಿದ್ರು. ಇಂಥದ್ದೆಲ್ಲ ಹೋಗ್ಬೇಕು ಅಂತ ಬಾಬಾ ಸಾಹೇಬ್ರು ಎಷ್ಟೊ ಹೋರಾಟ ಮಾಡಿದ್ರು. ನಮ್ಮ ದೇಶ ನಮ್ದೇ ಆಯ್ತಂತಲ್ಲ ಆಗ್ಲೇ ಇದ್ನೆಲ್ಲಾ  ಬರದಿಟ್ಟಿದ್ದಾರೆ. ನಮ್ಮನ್ನ ಮುಟ್ಟಿ­ಸ್ಕೊಬಾರ್‌ದವ್ರು ಅಂತ ಏನಾದರೂ ದೂರ ಮಾಡಿದ್ರೆ ಅವರಿಗೆ ಶಿಕ್ಷೆ ಆಗತ್ತಂತೆ. ಅವರು ಬರದಿಟ್ಟು ಹೋದ್ರು, ಆದ್ರೆ ಜನ ಮಾಡೋ­ದನ್ನ ಬಿಡ್ತಾರ? ಗಾಂಧೀ ಅಂತ ಒಬ್ಬ ಮಹಾತ್ಮ ಎಲ್ಲರೂ ಕಕ್ಕಸ್ ಗುಡಿಸಬೇಕು ಅಂತ ಹೇಳಿ ತಾನೂ ಗುಡಿಸಿ ತೋರಿಸಿದ್ರಂತೆ. ಅದಕ್ಕೇ ಏನೋ ಮಹಾತ್ಮ ಅಂತ ಕರೆಯೋರು.
ನಮ್ಮಪ್ಪ ಯಾವತ್ತೂ ಲೋಟದಾಗೆ ಕಾಫಿ ಕುಡಿ­ದಿರಲಿಲ್ವಂತೆ. ಕಕ್ಕಸ್ ಗುಂಡಿ ಗುಡ್ಸಿ ಬಂದ್ರೆ, ಅವ್ರು ಕುಡಿಯೋ ಲೋಟದಲ್ಲಿ ಕಾಫಿ ಇರ್‍ಲಿ ನೀರಾದ್ರೂ ಕೊಡ್ತಾರಾ ನಮಗೆ? ಅದೇ ತೆಂಗಿನ ಚಿಪ್ಪು, ಇಲ್ಲಾಂದ್ರೆ ಮಣ್ಣಿನ ಬಟ್ಲು. ಅಲ್ಲೆ­ಲ್ಲಾದ್ರೂ ಅವರ ಮನೆ ಸೂರಲ್ಲಿಡೋರು. ಮೊದ್ಲೆಲ್ಲ ರಾತ್ರಿ ಉಳಿದಿರೋ ಅನ್ನಾನೋ ತಂಗಳು ಮುದ್ದೆನೋ ನಮಗೆ ಸಿಗೋದು. ಹಾಗೆ ನಮ್ಮ ಅಂಗಿಗೆ ಹಾಕಿಸ್ಕೊಳ್ತಿದ್ವಿ. ನಮ್ಮವ್ವ ಅದನ್ನ ತಂದು ನಮಗೆ ಉಣಿಸೋಳು. ಈಗ ಪ್ಲಾಸ್ಟಿಕ್ ಚೀಲ ಬಂದ್ಮೇಲೆ ಅದರಲ್ಲಿ ಎಲ್ಲಾನೂ ಹಾಕಿ ಮೇಲಿಂದ ನಮ್‌ ಮಡಿಲಿಗೆ ಹಾಕ್ತಾರೆ.
ಕೆಲವರು ಕಕ್ಕಸು ಗುಂಡಿ ತೆಗಸ್ತಾರೆ. ವರ್ಷಕ್ಕೆ ಆ ಗುಂಡಿ ತುಂಬಿದ ಮೇಲೆ ಇನ್ನೊಂದು ಗುಂಡಿ ತೆಗಿ­­ತಾರೆ. ಆದರೆ, ಇದಕ್ಕೆಲ್ಲ ಜಾಗ ಇರಬೇಕಲ್ಲ, ಗುಂಡಿ ತುಂಬಿಹೋದ್ರೆ ಅದನ್ನು ಮುಚ್ಚೋರೂ ನಾವೇ. ನಮ್ಮ ಕಾಯಕ ಅಂತ ಎಲ್ಲನೂ ಮನ­ಸ್ಸಿಟ್ಟೆ ಮಾಡಿದ್ದೀವಿ. ನಮಗೆ ಇದು ಕೆಟ್ಟದು, ಇದು ಒಳ್ಳೇದು ಅಂತ ಗೊತ್ತಿಲ್ಲ. ಯಾವುದನ್ನೂ ಅಸ­ಹ್ಯ­­ಪಟ್ಟುಕೊಂಡು ನೋಡಿಲ್ಲ. ಮೂಗು ಹಿಡ­ಕೊಂಡು ಕೆಲಸ ಮಾಡಿಲ್ಲ.  ನಿಮ್ಮ ಮಕ್ಕಳು ಗಲೀಜು ಮಾಡಿದಾಗ ನೀವು ವರೆಸಿ ಹಾಕ್ತೀರಲ್ಲ ಹಾಗೆ. ಹೊಟ್ಟೆ ಒಳಗೆ ಗಲೀಜು ಇಟ್ಕೊಳೋಕೆ ಆಗುತ್ತಾ? ಪಾಪ ಮನುಷ್ಯರೆಲ್ಲ ನಮ್ಮಕ್ಳು ಇದ್ದಂಗೆ ಅಲ್ವ. 
ನಮ್ಮ ಕೈ,ಮೈ ಹೊಲಸಾದರೂನು ಬೇರೆಯ­ವರಿಗೆ ಕೆಟ್ಟದ್ದು ಬಯಸಬಾರದು ಅಂತ ನಮ್ಮಜ್ಜ ಹೇಳ್ತಿದ್ದ. ಚರಂಡಿ ಕಟ್ಕೊಂಡ್ರೆ ಅವನು ಉದ್ದು­ದ್ದನೇ ಗಳ ಹೊತ್ಕೊಂಡು ಅದನ್ನ ಸರಿಮಾಡಕೆ ಹೋಗ್ತಿದ್ದ. ಒಂದ್ಸಾರಿ ಹಂಗೆ ಮ್ಯಾನ್ಹೋಲ್ ಒಳಗೆ ಇಳಿದು ಕಡ್ಡಿ ಹಾಕೋ ಹೊತ್ತಿಗೆ ಒಳಗೆ ಶಾನೆ ವಿಷದ ಗಾಳಿ ತುಂಬ್ಕೊಂಡು ಸತ್ತೇ ಹೋದ. ನಮ್ ಜನ ಸತ್ರೆ ನಾವೇ ಮಣ್ ಮಾಡ್ತೀವಿ. ಪೇಪರ್‌ನವ್ರು, ಟಿ.ವಿಯವರು ಅಂತ ಒಂದಷ್ಟು ಜನ ನಮ್ ಮನೆ ಹತ್ರ ಬಂದ್ರು. ಅವನ ಹೆಣದ ಮೇಲೆ ಬಟ್ಟೆ ಮುಚ್ಚೋಕೂ  ಕಾಸು ಇರಲಿಲ್ಲ. ಸರ್ಕಾರ ಸತ್ತವರ ಮನೆಗೆ ದುಡ್ಡು ಕೊಡತ್ತೆ ಅಂದ್ರು. ಸಾವೇನ್ರಿ ಎಲ್ರೂ ಮರೆತೇ ಹೋಗ್ತಾರೆ. ಇರಲಿ ಬಿಡಿ, ಅವನು ಬದು­ಕಿದ್ದ ಅಂತ ಗೊತ್ತಾಗಿದ್ರಲ್ವ ಸತ್ತಾಗ ಯಾರಾದ್ರೂ ದುಃಖ ಮಾಡದು? ಏಳೋ ಹೊತ್ತಿಗೆ ಎದೆ ಮಟ್ಟ ಕುಡೀ­ತಿದ್ದ. ಇನ್ನು ಮಲಗುವಾಗ್ಲೂ ಕುಡಿದೇ ಇರ­ತಿದ್ದ. ಹಂಗೆ ಒಂದೊಂದ್ಸಾರಿ ದುಡ್ಡು ಇಲ್ದೇ ಇದ್ದಾಗ ನಮ್ಮವ್ವನಿಗೆ ಬಂದು ಹೊಡೆಯೋನು. ಅವನು ಎಲ್ಲೋ ಕುಡಿದು ಬಿದ್ದಿರೋನು. ನಮ್ಮ­ವ್ವನೆ ಹಿಡ್ಕೊಂಡ್  ಎಳ್ಕೊಂಡು ಬರೋಳು. ಇದು ನಮ್ಮ ಒಬ್ಬರ ಕತೆ ಅಲ್ಲ, ನಮ್ಮಂಗೆ ಜೀವನ ಹೊರೆಯೋ ಹನ್ನೆರಡು ಲಕ್ಷ ಜನರದ್ದು. ಸರ್ಕಾರದ  ಲೆಕ್ಕ ಆರು ಲಕ್ಷ.
ಬೆಳಿಗ್ಬೆಳಿಗ್ಗೆನೆ ಕುಡಿದು ಬರತಿಯಾ ಅಂತ ಎಲ್ರೂ ಅವನ್ಗೆ  ಬಯ್ಯೋರು. ಗುಂಡಿ ಗುಡಿಸಕೆ ಅಂತ ದುಡ್ಡು ಇಸ್ಕೊತೀರ. ಎಲ್ಲ ಕುಡ್ದು ಹಾಳ್ ಮಾಡ್ತಿರ ಅಂತ ಬೋದ್ನೆನೆ ಮಾಡೋರು. ಕಕ್ಕಸ್ ಗುಂಡಿನ ಕಿಲೀನ್ ಮಾಡಿದ್ದಿದ್ರೆ ಗೊತ್ತಾಗುತ್ತೆ, ಕುಡೀದೆ ಇದ್ರೆ ಆ ಕೆಲಸ ಮಾಡಕಾಗತ್ತ ಅಂತ. ನಮ್ಮಪ್ಪ ಮ್ಯಾನ್ಹೋಲ್‌ಗೆ ಇಳಿವಾಗ ಎರಡು ಬಾಟ್ಲಿ­ನಾದ್ರೂ ಕುಡ್ದಿರ್‌ತಿದ್ದ. ಅದ್ರ ವಾಸ್ನೆ ಅವನ್ನ ಆವರ­ಸ್ಕೊಂಡಿರೋದು. ನೊಣ ಹಾರಾಡೊ ಸತ್ತು - ಕೊಳ್ತ ದನ ಎತ್ತಾಕ್ವಾಗ ಅದಕ್ಕೆ ದೂಪದ ಹೊಗೆ ಹಾಕಕ್ಕಾಗತ್ತ? ಸಾರಾಯಿ -ಕುಡಿಬೇಕು, ಮೂಗಿನ ಹೊಳ್ಳೆಗೆ ದನದ ವಾಸನೆ ಬಡೀದಂಗೆ. ಅವ್ನು ಗುಂಡಿಗಿಳಿದು ಸಾಯ್ದೆ ಹೋಗಿದ್ರೆ ಇನ್ನೊಂದೆ­ರಡು ವರ್ಷದಲ್ಲಿ ಸಾರಾಯಿ ಕುಡಿದಿ­ದ್ದ­­ಕ್ಕಾದ್ರೂ ಸಾಯ್ತಿದ್ದ.
ಈ ಊರು ಆ ಊರು ಅಂತ ಇಲ್ಲ.  ಗಲೀಜು ಇಲ್ಲ­ದಲೆ ಠಾಕು ಠೀಕಾಗಿ ಈ ದೇಶದ ಎಲ್ಲಾ ಊರಲ್ಲೂ ಜನ  ಇವತ್ತು  ಬದುಕ್ಬೇಕಾದ್ರೆ ನಾವು ಅವರ ಸೇವೆ ಮಾಡಿದ್ದೀವಿ. ಆದ್ರೆ ಹಾಗಂತ ಯಾರಿಗೂ ಅನ್ನಿಸೋದಿಲ್ಲ. ಈ ಹೊಟ್ಟೆ ಕೇಳಲ್ಲ. ನಾಯಿ ಹಂದಿಗಳ ಜೊತೆ ಹೊಡದಾಡಬೇಕು. ನಾಯಿ­ಗಳೂ ಒಳ್ಳೆ ಬಟ್ಟೆ ನೋಡ್ತಾವೆ. ಹಿಟ್ಟು ಹಾಕಿ­ದ­ವರ ಋಣಕ್ಕೆ ನಮ್ಮನ್ನ ಕಚ್ಚಿಬಿಡ್ತಾವೆ.  
ಇದು ನೆನ್ನೆ, ಇವತ್ತಿಂದೇನಲ್ಲ. ಈ ದೇಶದ್ ಚರಿತ್ರೆ ನಾಲಕ್ ಸಾವ್ರ ವರ್ಷ ಹಳೇದು ಅಂತಾರೆ. ಆ ಕಾಲ್ದಲ್ಲೇ ಒಳಚರಂಡಿ ಇತ್ತಂತೆ. ನಮ್ಮ ಜನ ವಿಮಾನ ಹಾರಿಸ್ತಾರೆ. ಆಗ್ಲೂ ಮನೆ­ಯಿಂದ ಚರಂಡಿಗೆ, ಚರಂಡಿಯಿಂದ ಊರ ಹೊರಕ್ಕೆ ಗಲೀಜು ನೀರು ಹರಕೊಂಡು ಹೋಗ್ಬೇ­ಕಿತ್ತು. ಆಗ್ಲೂ ನಮ್ ಜನಾನೆ ಶುದ್ಧಿ ಮಾಡ್ತಿದ್ರೊ ಏನೋ. ಆದ್ರೆ, ಆಗಿನವರು ಗುಂಡಿ ತೆಗ್ದು ಬಿಟ್ಕೊಂಡಿರಲಿಲ್ಲ.
ಇವತ್ತು ನಮ್ಮ ಪ್ರಧಾನಿಗಳಾಗವ್ರಲ್ಲ ಅವ­ರೂರ್ ಪಕ್ಕದಲ್ಲೂ ನಾವು ಗಲೀಜ್ ಹೊತ್ಕೊಂಡು ಊರ್ ಹೊರಗಡೆ ಹಾಕ್ತೀವಿ. ಅಲ್ಲಿ ಭಂಗಿ, ಸಫಾಯಿ ಅಂತ ಏನೇನೋ ಜಾತಿ ಹೆಸ­ರಿ­ಡಿದು ಕರೀತಾರೆ. ಈ ಕಸಾನ ಕೆಲವ್ರು ತಮ್ ಹೊಲಕ್ಕಾಕುಸ್ಕೊಂಡು ಗೊಬ್ರ ಮಾಡ್ಕೊಂಡು ನಾಲಕ್ಕು ಕಾಸು ಕೊಡೋರು. ಹಂಗೆ ಕಾಸು ಸಿಗುತ್ತೆ ಅಂತ ಗೊತ್ತಾಗಿ ಆ ಊರಿನ ದೊಡ್ಡ ಮನುಸ್ರು ಅವ್ರ್ ಮನೆ ಕಸ ಬಾಚೋದ್ ಮಾತ್ರ ನಮ್ ಕೆಲ್ಸ, ಅದನ್ನೆಲ್ಲ ಅವ್ರ ತಿಪ್ಪೆಗೆ ಹಾಕ್ಬೇಕು ಅಂತ ಹೇಳಿ ಅದ್ರ ಮಾರಾಟಕ್ಕೆ ಅವ್ರೆ ನಿಂತವ್ರೆ. ಸಂತೋಸ.
ಹಿಂಗೆ, ಗುಂಡಿಯಿಲ್ಲದ ಪಾಯಖಾನೇನ ಕಟ್ಟ­ಬಾರದು ಅಂತ ಇಪ್ಪತ್ತು ವರ್ಷದ ಹಿಂದೇನೆ (೧೯೯೩) ಸರ್ಕಾರ ನಿಷೇಧ ತಂದಿತ್ತು. ಅದ್ರು ಪ್ರಕಾರ ಈ ದೇಶ್ದಲ್ಲಿ ಮಲಹೊರೊ ಪದ್ಧತಿ ನಿರ್ಮೂ­ಲನ ಆಗಿದೆ. ಎಲ್ಲ ಕಾಗದ್ದಾಗೆ. ನಾವಂತೂ ಎರಡ್‌ ಅಕ್ಷರ ಕಲ್ತವ್ರಲ್ಲ. ಯಾವತ್ತಾ­ದರೂ ನಮ್ಮ ಮಕ್ಕಳೂ... ಅದನ್ನೆಲ್ಲಾ ತಿಳಿ ಬಯ್ದು. ಇರ್‍ಲಿ. ನಮ್ ಪರವಾಗಿ ಹೋರಾಟ ಮಾಡೋ ನಾಯಕರುಗಳು ಬಂದೇಳ್ತಿದ್ದರು: ಇನ್ಮೇಲೆ ಮಲ –ಮೂತ್ರ ಎಲ್ಲಾ ಚರಂಡೀಲಿ ಹರದು ಹೋಗೋ ಹಾಗೆ ಕಕ್ಕಸ್ ಮನೆ ಕಟ್ಬೇಕು ಅಂತ ಕಾನೂನು ಮಾಡಿದ್ದಾರೆ. ಅಂತವು ಎಪ್ಪತ್ತೆ­ರಡು ಲಕ್ಷ ಮನೆಗಳಿವೆಯಂತೆ. ಅವ್ರು ಹೇಳಿದ್ ನೋಡಿದ್ರೆ ಇನ್ಮೇಲೆ ನಮಗೆ ಆ ಕೆಲಸಾನೂ ಸಿಕ್ಕ­ಲ್ವೇನೊ ಅಂತ ಹೆದರಿದವರೂ ಇದ್ರು, ಯಾಕಂ­ದರೆ ನಾವು ಬೇರೆ ಕೆಲಸ ಕಲ್ತಿಲ್ಲ. ಮಾಡಕ್ಕೂ ನಮ್ಮನ್ನ ಸೇರಿಸ್‌ಕೊಳ್ಳಲ್ಲ. ಈ ಕೆಲಸಕ್ಕಾದರೆ ಯಾರೂ ಬರಲ್ಲ ನೋಡಿ.
ನಮ್ಮ ಹುಟ್ಟಿಗೆ ಅಂಟಿಸಿ ಬಿಟ್ಟವರೆ. ಆದರೆ, ಈ ದೇಶ್ದಾಗೆ ಅಷ್ಟು ಸುಲಭವಾಗಿ ನಮ್ಮನ್ನ ಮನುಸ್ರು ಮಾಡ್ತಾರಾ. ಆ ಕಾಯ್ದೆ ಜಾರಿಗೆ ತರಕ್ಕೆ ೬೦೦ ಕೋಟಿ ರೂಪಾಯಿ ಖರ್ಚು ಮಾಡಬೌದಂತೆ. ಹಂಗಂದ್ರೆ ಎಷ್ಟು ಅಂತ ನಮಗೆ ತಿಳಿಯಲ್ಲ ಬಿಡಿ. ನಮ್ಮ ಮೇಲೆ ಒಂಚೂರಾದರೂ ಅಯ್ಯೋ ಅನ್ನಿಸಿದ್ದರೆ ನಮ್ಮ ಜೋಪಡಿಗೆ ಹೊದಿಸೋಕೆ ಗೋಣಿತಾಟಾ­ದರೂ ಕೊಡಬೌದಾಗಿತ್ತು. ಯಂತ್ರ ತರುಸ್ತಾ­ರೇನೊ- ಆ ದುಡ್ಡಿನಾಗೆ?
ಈಗ ಕಟ್ಟೋ ದೊಡ್ಡ ದೊಡ್ಡ ನಗರಗಳಲ್ಲಿ ಒಳ­ಚರಂಡಿ ಮಾಡ್ತಾರೆ. ಎಲ್ಲಾ ಊರಲ್ಲೂ ಚರಂಡಿ ಕೊಳವೆ ಇದ್ದರೂ ಅದನ್ನ ಶುದ್ಧ ಮಾಡ­ಲಾರ­ದ್ದಕ್ಕೆ ಕುಡಿಯೋ ನೀರಿನ ಹೊಳೆಗೇ ಚರಂಡಿ ನೀರ್ ಸೇರಿಸಿ ಬಿಟ್ತಾರೆ. ಒಳಚರಂಡಿ- ಅದು ಕೆಟ್ಟರೂ ಸರಿ ಮಾಡಕ್ಕೆ ನಾವೇ ಇಳೀಬೇಕಲ್ಲಾ. ಹಾಗೆ ಮ್ಯಾನ್ಹೋಲಿಗೆ ಇಳಿದು ಸತ್ತ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಕೊಡಬೇಕು ಅಂತ ಆಗಿದೆಯಂತೆ. 
ನಾವು ಕೈಯಲ್ಲಿ ಗಲೀಜು ಮುಟ್ಟ ಬಾರದೂ ಅಂತ ಮರುಗೋ ಜೀವಗಳು ಇದ್ದಾವೆ. ಅವರು ನಮಗೆ ಬಿಡುಗಡೆ ಕೊಡಿಸಬೇಕು ಅಂತ ಅಷ್ಟು ವರ್ಷದಿಂದ ಕೋರ್ಟು ಕಚೇರಿ ಅಂತ ತಿರುಗು­ತ್ತಲೇ ಇದ್ದಾರೆ. ಹಾಗೆ ತಿರುಗಿ ತಿರುಗಿ ನಾವು ಅವ­­ರಿಗೆ ಹೊಲೆದುಕೊಟ್ಟ ಮೆಟ್ಟುಗಳು ಹರಿದು ಹೊದೋ. ಮಲ ಮೈ ಮೇಲೆ ಸುರುಕೊಂಡ್ವಿ, ಅದನ್ನು ನೋಡಿ ಯಾರಿಗೂ ಏನೂ ಆಗ್ಲಿಲ್ಲ.
ಇವರ ದನಿ ಕೇಳಿ ಈಗೇನೋ ಕಾನೂನು ಕಣ್ಣು ಬಿಟ್ಟಿದೆಯಂತೆ. ನಮ್ಮ ಸರ್ಕಾರಗಳೂ ಆ ಕೋರ್ಟಿ­­­ನಲ್ಲಿ ಇಲ್ಲದ್ದೆಲ್ಲ ಹೇಳ್ತಾವಂತೆ. ಕೈ ಹಾಕಿ ಗಲೀಜು ತೆಗೆಯೋ ಕೆಲಸ ಮಾಡೋ ಪೌರ­ಕಾರ್ಮಿ­ಕರೇ ಇಲ್ಲಾ ಅಂತಾರಂತೆ. ಆ ಮಟ್ಟಕ್ಕೆ ಯಂತ್ರಗಳನ್ನು ಬಳಸಿ ಚರಂಡಿಯಿಂದ, ಮ್ಯಾನ್ಹೋ­­ಲಿನಿಂದ ಕಟ್ಟಿಕೊಂಡ ಕಸ ತೆಗೆದಿದ್ದರೆ ಇಷ್ಟೊಂದು ಸಮಸ್ಯೆ  ಯಾಕಾಗುತ್ತಿತ್ತು? ಇಷ್ಟು ವರ್ಷ ಪೌರ ಕಾರ್ಮಿಕರಾಗಿ ನಾವು  ಎಂದಾ­ದರೂ ಕಾಯಂ ಆಗಬಹುದು ಅನ್ನೋ ಆಸೇಲಿ ದುಡಿದು ಜೀವನ ಕಳಿತಿದೀವಿ. ರಸ್ತೆಗಳಲ್ಲಿ ಬಗ್ಗಿ ಕಸ ಗುಡಿಸಿ ನಮ್ಮ ಬೆನ್ನುಗಳು ಗೂನಾದರೂ ಪುಡಿ­ಗಾಸಿಗೆ ಕೆಲಸ ಮಾಡ್ತೀವಿ.
ನೀವು ಮೂಗು ಮುಚ್ಚಿಕೊಂಡು ಹೋಗೋ ಜಾಗಗಳಾದ ಆಸ್ಪತ್ರೆ, ಬಸ್‌ ಸ್ಟ್ಯಾಂಡ್‌ ಪಕ್ಕದಲ್ಲಿ, ರಸ್ತೆ ಬದೀಲಿ ಇರೊ ಶೌಚಾಲಯ, ಎಲ್ಲಾ ಕಡೆ ನಾವೇ ಉಜ್ಜಿ ತೊಳಿಬೇಕು. ರೈಲ ಹಳಿ ಮೇಲೆ ಬಿದ್ದ ಗಲೀಜು ತೆಗೆಯೋಕೆ ನಮ್ಮನ್ನ ಕರೆಯ್ತಾರೆ. ಕೈಯಲ್ಲಿ ಗಲೀಜು ಮುಟ್ಟೋ ಕೆಲಸ ತಡೆಯೋಕೆ ಕಾಯ್ದೆ ತಂದಿದೆಯಂತಲ್ಲ. ಯಾವ ಕಾಲಕ್ಕೆ ಜಾರಿ ಮಾಡ್ತಾರೋ? ದಿಟವಾಗಿಯೂ ಅಂತಹ­ದೊಂದು ದಿನ ಬರತ್ತಾ? ಮಾನವಹಕ್ಕು, ಮೂಲ­­ಭೂತ ಹಕ್ಕು ಅಂತ ಏನೇನೋ ಹೇಳ್ತಾ ಇದ್ದರು.  ಆದರೆ ನಾವು ಎಲ್ಲರಂಗೆ ಊಟ ಮಾಡ್ತೀವ? ನಮ್ಮ ಮಕ್ಕಳು ಶಾಲೆ ಮೆಟ್ಟಿಲು ಹತ್ತುತಾವ?
ಎಷ್ಟು ಲಾಯಕ್ಕಾದ ಹೆಸರು ಕೊಟ್ಟಿದ್ದೀರಾ ನಮಗೆ: ಪೌರಕಾರ್ಮಿಕರು, ಸಫಾಯಿ ಕರ್ಮ­ಚಾರಿ­ಗಳು. ಆದರೆ ಜನ ಕರೆಯೋದು ಮಾತ್ರ ನಮ್ಮ ಜಾತಿ ಹೆಸರಿನಿಂದಲೇ: ತೋಟಿ, ಜಾಡ­ಮಾಲಿ, ಜಲಗಾರ, ಮೋಚಿ. ಏನು ಕರೆದರೆ ತಾನೆ ಏನಂತೆ? ಜಾತಿಗೆ ಅಂಟಿದ ಜಾಡ್ಯ, ನಾವು ಮುಟ್ಟಿಸಿಕೊಳ್ಳದ ಜಾತಿಗೆ ಸೇರಿದವರು. ಬಾಬಾ ಸಾಹೇಬರೆ ಮತ್ತೆ ಹುಟ್ಟಿ ಬರಬೇಕಾ ನಿಮ್ಮ ಮನದ ಮೈಲಿಗೆ ತೊಳೆಯೋಕೆ? 




ತಿರುಳ ಬಿಟ್ಟು ಸಿಪ್ಪೆ ಮೆಲ್ಲುವ ಸಿರಿ
Tue, 06/10/2014 
‘ತಗ್ಗಿದವರ ಎಚ್ಚುಸಬೇಕು ಎಚ್ಚಿದವರ ತಗ್ಗುಸಬೇಕು’ ಇದು ಜನಪದರ ಸಾಲು. ಮುಂದುವರಿದು ಕೊಳ್ಳೇಗಾಲ, ಚಾಮರಾಜನಗರ, ಮೈಸೂರು ಸೀಮೆಯ ಜನಮಾನಸದಲ್ಲಿ ಮನೆಮಾಡಿರುವ ಆರಾಧ್ಯ ದೈವ ಮಂಟೇಸ್ವಾಮಿಯ ಕಾವ್ಯದ ಸಾಲು. ಪದ, ಸಾಲು ಎಂದು ಕರೆಯುವ ಈ ಹಾಡುಗಳು ಯಾವ ಕಾವ್ಯಕ್ಕೂ ಕಡಿಮೆಯಿಲ್ಲ. ಕಾವ್ಯ ಎಂದರೆ ಶಿಷ್ಟರಿಗೆ ಪ್ರಿಯವಾಗದಿರ­ಬಹುದು, ಆದರೆ ಹಾಗೆ ಅರ್ಥವಾದರೆ ಸಾಕು.
‘ಜನಪದ ಸಾಹಿತ್ಯ’. ಇದನ್ನು ಯಾರಾದರೂ ಚರಿತ್ರೆ ಅಂತ ನಂಬುತ್ತಾರ? ಓದು ಬರಹ ಗೊತ್ತಿ­ಲ್ಲದ ಜನ ಕಾಗಕ್ಕ ಗೂಬಕ್ಕನ ಕಥೆ ಹೇಳುತ್ತಾರೆ. ಅದೆಲ್ಲಾ ಜನರ ಬಾಯಿಂದ ಬಾಯಿಗೆ ಹರಡಿದ ಕಥೆಗಳು. ಹೀಗೆ ಮೂಗು ಮುರಿಯುವ ವಿದ್ವಾಂ­ಸರ ಮಾತುಗಳು ಹೊಸದೇನೂ ಅಲ್ಲ.
ಆದರೆ ಅಚ್ಚರಿ ಎನಿಸಿದ್ದು ಕರ್ನಾಟಕದಲ್ಲಿ ಜನಪದ ಸಾಹಿತ್ಯ ಕುರಿತು ಸಂಶೋಧನೆ ಆರಂಭವಾಗಿ ಅರ್ಧ ಶತಮಾನವೇ ಕಳೆದರೂ ನಮ್ಮ ಜನರ ಜೀವದನಿಗೆ ಕಿವಿಮುಚ್ಚಿದ ಶಿಷ್ಟಲೋಕ; ತನ್ನ ಭ್ರಮಾಲೋಕವನ್ನೇ ಶ್ರೇಷ್ಠವೆಂದು ಬೀಗುತ್ತದೆ. ಬರಹ ಬಾರದ ಸಮಾಜ ಕಂಡುಂಡ ಬದುಕಿನ ತುಣುಕುಗಳು ಮಾತ್ರವೇ ಓದು ಸಮಾಜದ ಆಸ್ತಿ ಎಂದು ಅವರಿಗಿನ್ನೂ ಅರಿವಾಗಿಲ್ಲ.
ಸಮುದಾಯಗಳ ಬದುಕು ಜನರ ನೆನಪು­ಗಳಲ್ಲಿ ಅಡಗಿದೆಯೇ ಹೊರತು ಬರಹದ ದಾಖಲೆಗಳಲ್ಲಿ ಅಲ್ಲ. ಅವರಾಡುವ ಭಾಷೆ, ಕಲೆ, ಕಸುಬು, ಆಚರಣೆಗಳು ಎಲ್ಲವೂ ಬದುಕಿನ ಭಾಗವಾಗಿರುತ್ತವೆ. ಅವರು ತೇಯ್ದ ಬದುಕು, ಮಾಡಿದ ಸಾಹಸ, ಅರಿತ ಅರಿವು ಕಥೆಯಾಗಿ, ಹಾಡಾಗಿ, ಲಾವಣಿಯಾಗಿ, ಪದವಾಗಿ ಹೇಳುತ್ತಾ ಸಾಗುತ್ತಾರೆ.
ಹೀಗೆ ಉಳಿದುಬಂದ ನೆನಪುಗಳು ಬರಹ ರೂಪಕ್ಕೆ ಇಳಿಯದಿದ್ದರೂ ಪೀಳಿಗೆಯಿಂದ ಪೀಳಿಗೆಗೆ ಉಳಿದು ಬಂದಿರುತ್ತವೆ. ಮೌಖಿಕವಾಗಿ ಉಳಿದ ಸಾಹಿತ್ಯವನ್ನು ವಿದ್ವತ್ ವರ್ಗ ಕಡೆಗಣಿಸುತ್ತದೆ. ಅದೇ ಬರಹ ರೂಪ­ದಲ್ಲಿ­ದ್ದರೆ ಅಪಾರ ಮನ್ನಣೆಗೆ ಒಳಗಾಗುತ್ತದೆ. ಜನಪದ ಸಾಹಿತ್ಯ ಆಧುನಿಕ ಅರ್ಥದ ಚರಿ­ತ್ರೆಯ ಪಠ್ಯಗಳಲ್ಲ, ಹಾಗಂದ ಮಾತ್ರಕ್ಕೆ ಅವು ಕಟ್ಟು ಕಥೆಗಳಲ್ಲ.
ನಮಗೆ ಅರ್ಥವಾಗದ ಭಾಷೆ­ಯನ್ನು ನಾವು ಕಟ್ಟುಕಥೆಗಳೆಂದು ಕರೆದು  ಜ್ಞಾನ ಸಂಪತ್ತನ್ನೇ ತುಚ್ಛವಾಗಿ ಕಂಡಿದ್ದೇವೆ. ಅವು ನಮ­ಗಾಗಿ ಬರೆದಿಟ್ಟ ಚರಿತ್ರೆ ಪಾಠಗಳಲ್ಲ, ಆದರೆ ಯಾವುದನ್ನು ನಾವು ಜ್ಞಾನ ಶಿಸ್ತು ಎಂದು ಭಾವಿಸಿದ್ದೇವೆಯೋ ಅದಕ್ಕೆ ತಕ್ಕಂತೆ ಅಳವಡಿಸಿ­ಕೊಳ್ಳ­ಬೇಕಾಗಿದೆ.
ಜನಪದರು  ತಾವು ಹಾಡುವ ಹಾಡುಗಳು ಓದುಗರ ಮನ್ನಣೆಗೆ ಒಳಗಾಗ­ಬೇಕೆಂದು ಬಯಸಿದವರಲ್ಲ. ಹಾಗೆ ಸಂಗ್ರಹಿಸ­ಬೇಕೆಂದು ಹೋದಾಗಲೂ ಅತಿ ಸಂಕೋಚದಿಂದ ಮುದುಡಿ ಹೋಗುತ್ತಾರೆ. ಕಾಡಿನಲ್ಲಿ ಸ್ವಚ್ಛಂದ­ವಾಗಿ ಹರಿದುಹೋಗುವ ನದಿಗೆ ಅಣೆಕಟ್ಟೆ ಹಾಕಿದಂತೆ, ಹರಿದು ಸಾಗುವ ಜನಪದರ ಬದುಕನ್ನು ಆಧುನಿಕತೆಯ ಅಣೆಕಟ್ಟೆಗಳಿಂದ ಬಂಧಿಸಿ ಆ ನೀರನ್ನು ನಮಗೆ ಬೇಕಾದ ದಿಕ್ಕಿಗೆ ತಿರುಗಿಸಿಕೊಳ್ಳುತ್ತಿದ್ದೇವೆ ಅಷ್ಟೆ.
ಕಾಲ ಒಂದಿತ್ತು. ರಾಜ ಮಹಾರಾಜರ ಬದುಕು­ಗಳೇ ಚರಿತ್ರೆ ಎನಿಸಿತ್ತು. ವಿಜಯನಗರ ಸಾಮ್ರಾಜ್ಯ ಮೆರೆದು ಬೀಗಿದ ಕಾಲ. ಆದರೆ ಹಂಪಿಯ ಜನಸಾಮಾನ್ಯರು ಆ ವೈಭವದ ಸಾಮ್ರಾಜ್ಯವನ್ನಾಗಲೀ, ಅವರು ಹೋರಾಡಿದ ಯುದ್ಧಗಳನ್ನಾಗಲೀ  ಹಾಡಿಹೊಗಳುವುದಿಲ್ಲ (ಹಂಪಿ ಜಾನಪದ; ಪುರುಷೋತ್ತಮ ಬಿಳಿ­ಮಲೆ). ಅವರ ನೆನಪುಗಳಲ್ಲಿ ರಾಯರ ನೆನಪು­ಗಳು ಉಳಿದು ಬಂದಿಲ್ಲ.
ಆ ಕಾಲಕ್ಕೂ ಹಿಂದಿನ ಕುಮಾರರಾಮ ಗಾಢವಾಗಿ ಅವರ ನಂಬಿಕೆ­ಗಳಲ್ಲಿ ಉಳಿದಿದ್ದಾನೆ. ಬೆಂಗಳೂರು ಕೆಂಪೇ­ಗೌಡ, ಮದಕರಿ ನಾಯಕ, ಟಿಪ್ಪು ಸುಲ್ತಾನ್, ಸಂಗೊಳ್ಳಿ ರಾಯಣ್ಣ ಇವರನ್ನು ಕುರಿತು ಲಾವಣಿಗಳನ್ನು ಕಟ್ಟಿ ಹಾಡುತ್ತಾ ಬಂದಿದ್ದಾರೆ. ಆಳುವ ವರ್ಗವೇ ಆದರೂ ಜನರಿಗೆ ಹತ್ತಿರವಾಗಿ ಬದುಕಿದವರನ್ನು  ತಮ್ಮವರಾಗಿಸಿಕೊಳ್ಳುತ್ತಾರೆ.
ಆಳುವ ವರ್ಗದ ಅಹಂಗೆ ಅವರು ಮಣೆ ಹಾಕುವುದಿಲ್ಲ. ಅದೇ ಅಧಿಕಾರದ ಮಾತುಗಳು ಕಲ್ಲಿನ ಮೇಲೆ ಶಾಸನ­ಗಳಾಗಿ ವಿರಾಜಿಸುತ್ತವೆ. ಆ ಶಾಸನಗಳನ್ನು ಜೋಡಿಸಿ­ಕೊಂಡು ನಮ್ಮ ನಾಡಿನ ಚರಿತ್ರೆ ಎಂದು ನಾವು ಬರೆದುಕೊಳ್ಳುತ್ತೇವೆ. ಆಫ್ರಿಕಾ ದೇಶಗಳಲ್ಲೂ ಜನರು ಇಂದು ತಮ್ಮ ನಾಡಿನ ಚರಿತ್ರೆಯನ್ನು ಕಟ್ಟಿಕೊಳ್ಳಲು ಹೊರಟಿ­ದ್ದಾರೆ. ಅವರಾದರೂ ಮೌಖಿಕ ಪರಂಪರೆ­ಗಳನ್ನು ಆಧರಿಸಿಯೇ ಚರಿತ್ರೆ ಸಾಹಿತ್ಯ ಇತ್ಯಾದಿ­ಯನ್ನು ಕಟ್ಟಿಕೊಳ್ಳಬೇಕಾಗುತ್ತದೆ.
ಅವರದೇ ಆದ ಸಂಶೋಧನಾ ವಿಧಾನವನ್ನು ಕಂಡುಕೊಂಡಿ­ದ್ದಾರೆ. ಪರಂಪರೆಯಲ್ಲಿ ಬಂದ ಕಥೆಗಳ ಒಳಾರ್ಥ­­ವನ್ನು ಗ್ರಹಿಸಬಲ್ಲರು. ಅವರ ಹಲವು ಭಾಷೆಗಳಿಗೆ ಲಿಪಿಯಿಲ್ಲದ ಕಾರಣಕ್ಕೆ ಅವು ಮೌಖಿಕ­ವಾಗಿಯೇ ಉಳಿದಿವೆ ಮತ್ತು ಆ ಭಾಷೆಗಳಾಗಲೀ ಅವರ ನಂಬಿಕೆಗಳಾಗಲೀ ಇನ್ನೂ ಅಷ್ಟಾಗಿ ಕಲುಷಿತಗೊಂಡಿಲ್ಲ.
ಆದ್ದರಿಂದ ಆಫ್ರಿಕಾದ ಜನಪದವನ್ನು ಕುರಿತು ಬರೆಯುವ ಜೇನ್ ವಾನ್‌ಸೀನ್‌  ಯಾರಾದರೂ ಮೌಖಿಕ ಪರಂಪರೆಯ ಸತ್ಯಾಸತ್ಯೆಯನ್ನು ಅನುಮಾನಿಸಿ­ದರೆ ಖಾರವಾಗಿಯೇ ಉತ್ತರಿಸುತ್ತಾರೆ. ‘ನಂಬಿಕೆ ಬೇಕಾಗಿರುವುದು ವ್ಯಕ್ತಿಯ ಬಗೆಗೆ ಹೊರತು ಆಕರದ ಬಗೆಗಲ್ಲ’. ಜನಪದರು ಕಥೆಯನ್ನೋ ಹಾಡನ್ನೋ ಕಟ್ಟಿ ಹಾಡುವಾಗ ಅವರು ಯಾರನ್ನೂ ನಂಬಿಸಬೇಕಾಗಿರುವುದಿಲ್ಲ. ಅವು ಅವರ ನಂಬಿಕೆಗಳು ಮಾತ್ರವಾಗಿರುತ್ತವೆ. ಯಾರೂ ಮೆಚ್ಚಿ ಅವರಿಗೆ ಪ್ರಶಸ್ತಿಯನ್ನು ಕೊಡ­ಬೇಕಾಗಿರುವುದಿಲ್ಲ.
ಅದಕ್ಕಿಂತ ಹೆಚ್ಚಾಗಿ ತಾವು ರಚಿಸಿದ ಕಾವ್ಯವೆಂದು ಎಲ್ಲೂ ಬೀಗುವುದಿಲ್ಲ. ಅದರ ಹೆಗ್ಗಳಿಕೆಯನ್ನು ಅವರ ಸಮುದಾಯಕ್ಕೆ ನಾವಿಂದು ಸಲ್ಲಿಸಬೇಕಾಗಿದೆ. ಜನಪದ ಸಾಹಿತ್ಯವನ್ನು ಅನುಮಾನಿಸುವುದು ಆ ಸಮುದಾಯದ ಅಸ್ತಿತ್ವವನ್ನೇ ಅನುಮಾನಿಸಿ­ದಂತಾಗುತ್ತದೆ. ಕರ್ನಾಟಕದ ಮಂಟೇಸ್ವಾಮಿ ಪರಂಪರೆ ವಿದ್ವತ್ ವಲಯದ ಗಮನ ಸೆಳೆದು ಸಾಕಷ್ಟು ಚರ್ಚೆಗೆ ಒಳಗಾಗಿದೆ.
ಮಂಟೇದ, ಅಲ್ಲಮ, ಸಿದ್ಧಯ್ಯ, ಖಂಡಾಯದ ಒಡೆಯ, ಪರಂಜ್ಯೋತಿ ಎಂದಿತ್ಯಾದಿಯಾಗಿ ಕರೆಸಿಕೊಳ್ಳುವ ಮಂಟೇಸ್ವಾಮಿ ತಮ್ಮ ಆಧ್ಯಾತ್ಮಿಕ ನಾಯಕನನ್ನು ದೈವೀಕರಿಸಿಕೊಂಡಿದ್ದಾರೆ. ಇಂದು ಅದೊಂದು ಪರಂಪರೆ, ಕಾವ್ಯ ಮಾತ್ರವಲ್ಲ ಆಚರಣೆ. ಈ ಕಾವ್ಯದಲ್ಲಿ ‘ನೀಲಿ’ ಪದವನ್ನು ಅಧ್ಯಾತ್ಮದ ಸೂಚಕವಾಗಿ ಬಳಸಿ ಏನನ್ನು ಹೇಳಲು ಹೊರಟಿ­ದ್ದಾರೆ?
ಎಲ್ಲೂ ಕೇಳರಿಯದ ಕಬ್ಬಿಣದ ಭಿಕ್ಷ, ಮಲೆ ಮಾದೇಶ್ವರನಿಗೆ ನೀಡುವ ಕೋರಣ್ಯ ಭಿಕ್ಷ, ಸೋಲಿಗರ ಹಾಡಿಗೆ ಸೀಗೆಕಾಯಿ ಕೇಳಲು ಹೋಗುವ ರಂಗನಾಥ ಸ್ವಾಮಿ ಇವೆಲ್ಲಾ ಹದಿನೇಳನೇ ಶತಮಾನದ ಆರ್ಥಿಕ ಸಾಮಾಜಿಕ ಚರಿತ್ರೆಯನ್ನು ಹೇಳುತ್ತವೆ. ಎಳ್ಳಿನ ಭಿಕ್ಷ, ಹಾಗೆಂದರೇನೆಂದು ತಿಳಿಯಲು ಮಹದೇಶ್ವರ ಕಾವ್ಯದ ಮೊರೆಹೋಗಬೇಕಾಗುತ್ತದೆ.
ಸಮುದಾಯಗಳು ತಮ್ಮ  ಪ್ರತಿಭಟನೆಯನ್ನು ಹಾಡಿನ ರೂಪದಲ್ಲಿ, ಕಥೆಯ ರೂಪದಲ್ಲಿ  ಹೊರ­ಹಾಕಿರುತ್ತವೆ. ವೀರಶೈವ ಚಳವಳಿಯ ನಂತರ ಲಿಂಗಧಾರಣೆ ಅರ್ಥವನ್ನು ಕಳೆದು­ಕೊಂಡಿತ್ತು ಎನ್ನುವುದನ್ನು ಸಾಹಿತ್ಯಾತ್ಮಕವಾಗಿ ಬಹು ಸೊಗಸಾಗಿ  ಮಂಟೇಸ್ವಾಮಿ ಕಾವ್ಯದಲ್ಲಿ ಕಾಣಬಹುದು.
ಕೊತ್ತಿಗಾದರು ಲಿಂಗವಂತೆ
ಕೋಳಿಗಾದರು ಲಿಂಗವಂತೆ
ಎತ್ತಿಗಾದರೂ ಲಿಂಗವಂತೆ
ಎಮ್ಮೆಗಾದರೂ ಲಿಂಗವಂತೆ
ಜಲಬಾವಿಗೆ ಲಿಂಗವಂತೆ
ಸೇದುವ ಹಗ್ಗಕ್ಕೆ ಲಿಂಗವಂತೆ
ಸೇದುವಾತನಿಗೆ ಲಿಂಗವಂತೆ
ಇಂತಹ ದಿಟ್ಟ ವಿಮರ್ಶೆ ಮಾಡುವಾಗ ಆ ಜನಪದ ಕವಿಗಳ ವೈಚಾರಿಕತೆಯನ್ನು ಗಮನಿ­ಸಲೇ ಬೇಕಾಗುತ್ತದೆ. ಕಳೆದು ಹೋದ ವಚನ­ಕಾರರ ವೈಚಾರಿಕತೆಯನ್ನು ಪ್ರಶ್ನೆ ಮಾಡುವ ಈ ಸಾಲುಗಳು ಮಹತ್ವದ್ದಾಗುತ್ತವೆ. ಹೌದು ನಮಗಿಂದು ಬೇಕಾಗಿರುವುದು ಸಮು­ದಾ­ಯದ ಚರಿತ್ರೆ. ಅದು ಆಯಾ ಸಮುದಾ­ಯದ ನೆನಪಿನಲ್ಲಿ ಉಳಿದಿವೆ.
ಆದ್ದರಿಂದ  ಶಾಸನಗಳ ಸಾಲನ್ನು ಸೇರದ ಸಮುದಾಯಗಳು ತಮ್ಮ ಚರಿತ್ರೆಯನ್ನು ತಮ್ಮ ಬಳಿಯೇ ಉಳಿಸಿ­ಕೊಂಡಿವೆ. ಉದಾಹರಣೆಗೆ ಸೋಲಿಗರ ಬದುಕಿನ ವಿಚಾರಗಳು ಅವರು ಹಾಡುವ ಗೋರುಖಾನ, ಬಿಳಿಗಿರಿ ರಂಗನ ಪದ ಇಲ್ಲವೇ ಮಲೆಮಾದಪ್ಪನ ಸಾಲುಗಳಲ್ಲಿ ಸೇರಿವೆ. ಇದೇ ಪ್ರದೇಶದಲ್ಲಿ ವಾಸಿಸಿದ ಸೋಲಿಗರು, ಇರುಳಿಗರು, ಎರವರು ರಾಜ್ಯಗಳ ಮೇರೆಯನ್ನು ಮೀರಿದವರು. ಇವರೆಲ್ಲ­ರಿಗೂ ಅವರದೇ ಆದ ಚರಿತ್ರೆಗಳಿವೆ ಎಂಬುದನ್ನು ಮರೆತೇ ಬಿಟ್ಟಿದ್ದೇವೆ.
ಒಂದು ಕಡೆ ಜನಪದ ಸಾಹಿತ್ಯವನ್ನು ಆರಾಧಿ­ಸುವ ಜನಪದ ವಿದ್ವಾಂಸರು ಕಾಣಬಂದರೆ, ಅದೊಂದು ಬಡವರ, ಹಳ್ಳಿಗರ ಕ್ಷುಲ್ಲಕ ವಿಚಾರ­ವೆಂಬಂತೆ ಅಸಡ್ಡೆ ಮಾಡುವವರ ಸಂಖ್ಯೆಯೂ ಕಡಿಮೆ ಇಲ್ಲ. ಜನಪದ ಸಾಹಿತ್ಯದಲ್ಲಿ ಮೂಲ­ಭೂತ­ವಾಗಿ ಅರಿಯ ಬೇಕಾಗಿರುವುದು ಅವರ ಆಶಯಗಳನ್ನು. ಅದಲ್ಲದೆ ಪದದ ಅರ್ಥವನ್ನು ಮಾತ್ರ ಬಗೆದು ತಪ್ಪಾಗಿ ಗ್ರಹಿಸುವುದರಿಂದ ಅದು ನೀರಸವಾಗಿ ಕಾಣುತ್ತದೆ.
ಜಗತ್ತಿನಾದ್ಯಂತ ಜನಪದ ಸಾಹಿತ್ಯದಲ್ಲಿ ಹುಟ್ಟಿನ ಸುತ್ತಲ ಕಥೆಗಳು ಕೇಳಿಬರುತ್ತವೆ. ಹಾವು, ಗೂಳಿ, ಆನೆ, ಹೋರಿ, ಕುದುರೆ, ಕೋಣ ಇಂತಹ ಯಾವುದಾದರೊಂದು ಪ್ರಾಣಿಯ ಆಶೀರ್ವಾದದಿಂದ ಮಹಾ ವ್ಯಕ್ತಿಗಳು ಹುಟ್ಟು­ತ್ತಾರೆ. ಇವನ್ನು ಕಥೆಗಳಾಗಿ ಮಾತ್ರ ಕೈ ಬಿಡ­ಲಾಗು­ತ್ತದೆ. ಸಾಮಾನ್ಯವಾಗಿ ಇವೆಲ್ಲಾ ಫಲ­ವತ್ತತೆಯ ಸಂಕೇತಗಳೆಂದು ಸಾರ್ವತ್ರಿಕವಾದ ಅರ್ಥವನ್ನು ಕೊಟ್ಟುಕೊಳ್ಳಲಾಗುತ್ತದೆ.
ಇನ್ನೂ ಒಂದು ಹೆಜ್ಜೆ ಮುಂದುವರೆದು ಜನಪದ ಆಶಯವನ್ನು ಅರಿತುಕೊಳ್ಳಬೇಕಾಗುತ್ತದೆ. ಹುಟ್ಟಿಗೆ ಕಾರಣವಾದ ವ್ಯಕ್ತಿಯ ಹೆಸರನ್ನು ಮುಚ್ಚಿಟ್ಟು ಅದನ್ನು ಸಾಂಕೇತಿಕ ಭಾಷೆಯಲ್ಲಿ ಹೇಳಲು ಕಾರಣವೇನು? ಭಾರತದ ಜಾತಿ ವ್ಯವಸ್ಥೆಯ ಹಿನ್ನೆಲೆಯಲ್ಲಿ, ಸಂಬಂಧಗಳ ಸುತ್ತಾ ಹೆಣೆದುಕೊಳ್ಳುವ ಮೌಲ್ಯಗಳ ಪ್ರಶ್ನೆಯಿಂದಾಗಿ  ಹುಟ್ಟನ್ನು ಬಯಲು ಮಾಡಲು ಸಾಧ್ಯವಾಗಿರು­ವು­ದಿಲ್ಲ.
ಹುಟ್ಟಿನ ಕಾರಣ ಅಸಹಜವಾಗಿದ್ದರೆ ಅಲ್ಲಿ ಸಂಕೇತಗಳನ್ನು ಬಳಸಿ ತಮ್ಮ ನೋವು ನಲಿವನ್ನು ಹೇಳಿಕೊಳ್ಳುತ್ತಾರೆ. ಸಾಮಾನ್ಯವಾಗಿ ತಳಸಮುದಾಯದ ಹೆಣ್ಣು ಮಕ್ಕಳು ಭೂ­ಮಾಲೀ­ಕರ ಹೊಲಗಳಲ್ಲಿ ದುಡಿಯುವ ಹೆಣ್ಣು­ಗಳಾಗಿರುತ್ತಾರೆ. ನಿರಂತರ ಶೋಷಣೆಗೆ ತೆರೆದು­ಕೊಂಡ ವರ್ಗವಾಗಿರುತ್ತದೆ. 
ಉಳ್ಳವರು ತಮ್ಮ ಸಾಮಾಜಿಕ ಹಕ್ಕೇನೋ ಎನ್ನುವಂತೆ ನಡೆದು­ಕೊಂಡರೆ ಅದಕ್ಕೆ ಪ್ರತಿರೋಧವನ್ನು ಒಡ್ಡಲೂ ಸಾಧ್ಯವಾಗುವುದಿಲ್ಲ. ಮೇಲ್ವರ್ಗದ ಸಮಾಜದ ಹೆಣ್ಣು ಮಕ್ಕಳು ಹಲವು ಕಾರಣಗಳಿಗೆ ತಳಸಮು­ದಾಯದ ಪುರುಷರಿಗೆ ಆಕರ್ಷಿತರಾಗುತ್ತಾರೆ. ಜಾತಿ ಸಮಾಜದ ನಿರ್ಬಂಧಗಳು ನಿರಂತರವಾಗಿ ಅದನ್ನು ಮೀರುತ್ತಲೂ, ಮುರಿಯುತ್ತಲೂ ಇರು­ತ್ತವೆ.
ಸಮಾಜ ವರ್ಣಸಂಕರವನ್ನು ತಹಬಂದಿ­ಯಲ್ಲಿರಿಸಿಕೊಳ್ಳಲು ಗುರುತರವಾದ ಶಿಕ್ಷೆಗೊಳ­ಪಡಿಸುವ ಯತ್ನಗಳು ಅಲ್ಲಲ್ಲಿ ನಡೆದೇ ಇರುತ್ತವೆ. ಅದೇ ಸಂದರ್ಭದಲ್ಲಿ ಕಟ್ಟುಕಟ್ಟಲೆಗಳನ್ನು ಮೀರಿದ ಹುಟ್ಟಿಗೊಂದು ದೈವಿಕತೆಯನ್ನು ಆರೋಪಿಸಿ ತಮ್ಮ ಹೆಣ್ಣುಮಕ್ಕಳನ್ನು ಕಾಪಾಡಿ­ಕೊಳ್ಳುವ ಪ್ರಯತ್ನವೂ ನಡೆದೇ ಇರುತ್ತದೆ. ಅಂತಹ ಎಡೆಗಳಲ್ಲಿ ಫಲವತ್ತತೆಯ ಸಂಕೇತಗಳ ಪರಿಭಾಷೆ ಅವರ ನೆರವಿಗೆ ಬರುತ್ತದೆ.
ಆ ಸಂಕೇತಗಳಲ್ಲಿ ಪ್ರಾಣಿಯನ್ನು ಸೂಚಿಸುವಾಗ ಅವು ಶಕ್ತಿಯ, ಇಲ್ಲವೆ ಆಳುವ ವರ್ಗದ ಸಂಕೇತಗಳನ್ನು ಸೂಚಿಸುವುದಿದೆ. ಉದಾಹರ­ಣೆಗೆ ಬಿಳಿಯ ಕುದುರೆ, ಆನೆ ಇತ್ಯಾದಿ. ಬಹುಶಃ ಹೇಳಿಕೊಳ್ಳಲಾಗದ, ಹುಟ್ಟಿಗೆ ಕಾರಣವಾದ ವ್ಯಕ್ತಿಯ ಹೆಸರನ್ನು ಗೌಪ್ಯವಾಗಿಡುತ್ತಲೇ ಸೂಚ್ಯವಾಗಿ ಬಹಿರಂಗಪಡಿಸುವ ಪ್ರಯತ್ನವೂ ನಡೆದಿರುತ್ತದೆ.
ಇಂತಹ ಕಥೆಗಳು ಪ್ರಮುಖ ವ್ಯಕ್ತಿಗಳ ಹುಟ್ಟಿ­ನಲ್ಲೂ ಕಾಣಬರುತ್ತವೆ. ಗೌತಮ ಬುದ್ಧ ತಾಯಿ ಮಾಯಾದೇವಿಯ ಸೊಂಟದಿಂದ ಹುಟ್ಟಿ­ಬಂದರೆ, ಕಾಡುಗೊಲ್ಲರ ಜುಂಜಪ್ಪನ ಕಾವ್ಯದಲ್ಲಿ ಜುಂಜಪ್ಪ ತಾಯಿಯ ಬೆನ್ನನ್ನು ಸೀಳಿಕೊಂಡು ಹುಟ್ಟಿಬರುತ್ತಾನೆ. ತಾವು ಆರಾಧಿಸುವ ನಾಯ­ಕರು ಸಾಮಾನ್ಯರಂತೆ ಹುಟ್ಟಲಿಲ್ಲ ಎಂದು ಹೇಳು­ವುದು ಅವರ ಆಶಯವಾಗಿರುತ್ತದೆ.
ಮಲೆ­ಮಾದ­ಪ್ಪನ ಕಾವ್ಯದಲ್ಲಿ ಸಂಕವ್ವೆ ಮಾದಪ್ಪನ ಆಶೀರ್ವಾದದಿಂದ ಮಕ್ಕಳನ್ನು ಹೆರುತ್ತಾಳೆ. ಆ ಪವಾಡವನ್ನು ಜನ ಬಯಸುತ್ತಾರೆ. ಅಲ್ಲಿ ತಾರ್ಕಿಕವಾದ ಅರ್ಥವನ್ನು ಹುಡುಕಿ ಜನಪದರ ಭಾವನೆಗಳಿಗೆ ಬರೆಹಾಕಲಾಗದು. ಹುಟ್ಟು ಮತ್ತು ವರ್ಣಸಂಕರದ ಸುತ್ತ ಹೆಣೆದು­ಕೊಂಡ ಆಚರಣೆ ಮಾರಿ ಮತ್ತು ಕೋಣನ ಬಲಿದಾನ.
ನಾಡಿನಾದ್ಯಂತ ಆಚರಣೆ­ಯಲ್ಲಿರುವ ಈ ಕಥೆ ವಿಸ್ತಾರವಾದ ಜನಸ್ತೋ­ಮದ ರೂಢಿ ಪರಂಪರೆಯಲ್ಲಿ ಸೇರಿಹೋಗಿದೆ. ಭಾರತದ ಸಾಂಸ್ಕೃತಿಕ ರಾಜಕಾರಣದ ಒಳಹರಿವು ಸುಲಭವಾಗಿ ಅಳಿಸಲಾಗದು ಎನ್ನುವುದಕ್ಕೆ ಇದು ಉತ್ತಮ ನಿದರ್ಶನವಾಗಿದೆ. ಈ ಯಾವುದನ್ನೂ ಗಮನಿಸದ ಭಾರತದ ಸಾಂಸ್ಕೃತಿಕ ಚರಿತ್ರೆ ತಿರುಳನ್ನು ಬಿಟ್ಟು ಸಿಪ್ಪೆಯನ್ನು ಉಣಬಡಿಸಿ­ದಂತಾಗುತ್ತದೆ. 




ಕಾಮೆಂಟ್‌ಗಳಿಲ್ಲ: