ಗುರುವಾರ, ಮಾರ್ಚ್ 5, 2015

ಡಾ.ವಸು ಮಳಲಿ ಅವರ`ಕಳ್ಳು-ಬಳ್ಳಿ' ಪ್ರಜಾವಾಣಿ ಅಂಕಣ ಬರಹಗಳು-3

ಸೌಜನ್ಯ: ಪ್ರಜಾವಾಣಿ
ಸಮಾಜ ವಿಜ್ಞಾನ: ಗಾಳ ನುಂಗಿದ ಮೀನು
Tue, 05/27/2014

ಇಂದು ಮಕ್ಕಳನ್ನು ಕಾಲೇಜಿಗೆ ಸೇರಿ­ಸುವ ಹೊತ್ತು. ಹತ್ತನೇ ತರಗತಿ­ಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳೆಲ್ಲಾ ಹಿಂದು­ಮುಂದು ಯೋಚಿಸದೆ ವಿಜ್ಞಾನವನ್ನು ಆಯ್ಕೆ ಮಾಡಿ­ಕೊಳ್ಳುವುದು ಸಹಜ ಮನೋಧರ್ಮ­ವೆನ್ನು­­ವಂತಾಗಿದೆ. ಅದಲ್ಲದೆ ಬೇರೆ ವಿಷಯ­ಗಳನ್ನು ಮನುಷ್ಯಮಾತ್ರದವರು ಓದಲಾರರು ಎಂಬಂತೆ ನಡೆದುಕೊಳ್ಳುವ ತಂದೆತಾಯಂದಿರೂ ಇದ್ದಾರೆ. ಇಲ್ಲವಾದಲ್ಲಿ ಮಕ್ಕಳ ಭವಿಷ್ಯದ ಕಾರಣ­­ವನ್ನು ಮುಂದಿಟ್ಟುಕೊಂಡು ಮಾನವಿಕ ವಿಷಯಗಳ ಮೂದಲಿಕೆ ನಡೆಸೇ ಇರುತ್ತಾರೆ. ಅದರಾಚೆಗೂ ‘ಹೆಚ್ಚು ಅಂಕ ಪಡೆದ ಪ್ರತಿಭಾ­ನ್ವಿ­ತರು’ ಕಲಾ ವಿಭಾಗಕ್ಕೆ ಬರಬೇಕಾದರೆ ಯಾರಾ­ದರೂ ಅವರ ಮೇಲೆ ವಿಶೇಷ ಪ್ರಭಾವ ಬೀರಿರಬೇಕು.
ಕಲೆ, ಮಾನವಿಕ, ಸಮಾಜ ವಿಜ್ಞಾನ ಎಂದು ಕರೆಸಿಕೊಳ್ಳುವ ತತ್ವ ಶಾಸ್ತ್ರ, ಚರಿತ್ರೆ, ರಾಜ್ಯ­ಶಾಸ್ತ್ರ, ಅರ್ಥಶಾಸ್ತ್ರ, ಸಮಾಜ ಶಾಸ್ತ್ರಗಳ ಅಳಿವು ಉಳಿವಿನ ಪ್ರಶ್ನೆ ಇಂದು ಕಾಣಬರುತ್ತಿದೆ. ಈ ಆತಂಕ ಭಾರತದಲ್ಲಿ ಮಾತ್ರವಲ್ಲ ಅಮೆರಿಕದ ವಿದ್ವಾಂಸರು ಆ ದೇಶದ ಭವಿಷ್ಯದ ಬಗೆಗೆ ಚಿಂತಿತರಾಗಿದ್ದಾರೆ. ಮಾರುಕಟ್ಟೆಯ ಬೇಡಿಕೆಯ ತತ್ವದ ಆಧಾರದ ಮೇಲೆ ಇಂದಿನ ವಿಶ್ವವಿದ್ಯಾ­ಲಯಗಳನ್ನು ರೂಪಿಸಲು ಹೊರಟಿ­ರುವ ಪಾಶ್ಚಿಮಾತ್ಯರಿಗೆ ಕಾಣುವ ಪ್ರಶ್ನೆಗಳು ಬೇರೆ­ಯದೇ ಆಗಿರುತ್ತವೆ. ತನ್ನ ಬೆಂಬಲ­ದಲ್ಲಿ ನಡೆ­ಯುವ ವಿಶ್ವವಿದ್ಯಾಲಯಗಳ ಮೂಲಕ ಸರ್ಕಾರ ತನ್ನ ರಾಜಕೀಯ ನೀತಿಯನ್ನು ಪ್ರತಿಪಾದಿ­ಸು­­ತ್ತದೆಂ­ಬುದು ಆ ದೇಶಗಳಲ್ಲಿ ಕೇಳಿಬರುವ ಟೀಕೆ.
ಇಲ್ಲಿ ನಮ್ಮನ್ನು ಕಾಡಿಸುತ್ತಿರುವ ಪ್ರಶ್ನೆಗಳು ಭಿನ್ನವಾಗಿವೆ. ಈ ವಿಷಯಗಳನ್ನು ಭಾರತದಲ್ಲಿ ಪರಿಚಯಿಸುವಾಗ ಅದರ ಹಿಂದೆ ಇರಬಹು­ದಾದ ರಾಜಕಾರಣವನ್ನು ಮರುಪರಿಶೀಲಿಸಿ ಕೊಳ್ಳ­ಬೇಕಾಗಿದೆ. ಪಾಶ್ಚಿಮಾತ್ಯ ಮಾದರಿಯ ಉನ್ನತ ಶಿಕ್ಷಣವನ್ನು ೧೮೫೭ರಲ್ಲಿ ಭಾರತದಲ್ಲಿ ಆರಂಭಿಸಲಾಯಿತು. ಭಾರತದ ಮೂರು ಪ್ರೆಸಿಡೆನ್ಸಿ­ಗಳಾದ ಕಲ್ಕತ್ತ, ಮುಂಬೈ, ಮದ್ರಾಸು­ಗಳಲ್ಲಿ ವಿಶ್ವವಿದ್ಯಾಲಯಗಳು ಆರಂಭವಾದವು.
ಬ್ರಿಟಿಷರು ತಮ್ಮಂತೆ ಆಲೋಚಿಸುವ, ತಮಗೆ ವಿಧೇಯವಾಗಿರುವ  ವರ್ಗವನ್ನು ಹುಟ್ಟು­ಹಾಕುವ ದಿಸೆಯಲ್ಲಿ ಉನ್ನತ ಶಿಕ್ಷಣವನ್ನು ಇಂಗ್ಲಿಷ್ ನಲ್ಲಿ ನೀಡಲು  ನಿರ್ಧರಿಸಿದರು. ಅಂದರೆ ಚರ್ಮ ಕಪ್ಪಾಗಿದ್ದರೂ ಇಂಗ್ಲಿಷ್‌ನಲ್ಲೇ ನಗುವ, ಇಂಗ್ಲಿಷನ್ನೇ ಉಸಿರಾಡುವ ಇಂಗ್ಲಿಷ್‌­ರಂತೆ ವರ್ತಿಸುವ ಜನರು ಅವರಿಗೆ ಬೇಕಾಗಿದ್ದರು. ಅವರನ್ನು ಬೆಂಬಲಿಸುವ ಬೌದ್ಧಿಕವರ್ಗದ ಸೃಷ್ಟಿ ವಿಶ್ವವಿದ್ಯಾಲಯಗಳ ಹಿಂದಿನ ಉದ್ದೇಶವಾಗಿತ್ತು. ಅದರಲ್ಲಿ ಅವರು ಹಿಂದೆ ಬೀಳಲಿಲ್ಲ. ಬ್ರಿಟಿಷರು ಈ ದೇಶವನ್ನು ಬಿಟ್ಟರೂ ವಿಧೇಯತೆಯನ್ನು ನಾವು ಬಿಟ್ಟುಕೊಡಲಿಲ್ಲ.
ಅವರು ಹಾಕಿದ ಯಾವುದೇ ಚೌಕಟ್ಟನ್ನು ಮುರಿಯುವುದು ಅಷ್ಟೇನು ಸುಲಭದ ವಿಚಾರವಾಗಿಲ್ಲ. ಇಂದಿಗೂ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣವನ್ನು ಅಧಿಕೃತವಾಗಿ ಇಂಗ್ಲಿಷ್ ಮಾಧ್ಯಮದಲ್ಲೇ ನೀಡ­ಲಾಗುತ್ತಿದೆ. ಕನ್ನಡದಲ್ಲಿ ಓದಲು, ಬರೆಯಲು ಅನುಮತಿಯನ್ನು ನೀಡಲಾಗಿದೆ ಅಷ್ಟೆ. ವಿಪ­ರ್ಯಾಸ­ವೆಂದರೆ ಚರಿತ್ರೆ, ಸಮಾಜ ಶಾಸ್ತ್ರ­ದಂತಹ ವಿಭಾಗಗಳಲ್ಲಿ ನೂರಕ್ಕೆ ತೊಂಬತ್ತು ಮಂದಿ ವಿದ್ಯಾರ್ಥಿಗಳು ಕನ್ನಡದಲ್ಲಿ ಓದಿ ಕನ್ನಡ­ದಲ್ಲೇ ಉತ್ತರಿಸುತ್ತಿರುತ್ತಾರೆ. ಕನ್ನಡದಲ್ಲಿ ಉತ್ತಮ ಪುಸ್ತಕಗಳಿಲ್ಲ ಎಂಬ ಅವರ ದೂರು ನರಳಾಟವಾಗಿ ಸದಾ ಕಾಲಕ್ಕೂ ಕೇಳಿಬರುತ್ತಿದೆ.
ಬ್ರಿಟಿಷರಿಂದ ಪರಿಚಯವಾದ ಸಾಹಿತ್ಯ ಮತ್ತು ಸಮಾಜ ವಿಜ್ಞಾನ ಈ ಹೊತ್ತಿಗೆ ಬೃಹತ್ತಾಗಿ ಬೆಳೆದು ತನ್ನದೇ ಆದ ಸ್ವತಂತ್ರವಾದ ಅಸ್ತಿತ್ವವನ್ನು ಪಡೆದುಕೊಳ್ಳಬೇಕಾಗಿತ್ತು. ಇತ್ತೀ­ಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾನವಿಕ ವಿಷಯಗಳ ಕುರಿತ ಚರ್ಚೆಯೊಂದನ್ನು ಏರ್ಪ­ಡಿಸ­ಲಾಗಿತ್ತು. ಅಲ್ಲಿ ಸೇರಿದ್ದ ವಿದ್ವತ್ ಮಿತ್ರರೆ­ಲ್ಲರಿಗೂ ಸ್ಪಷ್ಟವಾಗಿ ಕಂಡುಬಂದ ಅಂಶವೆಂದರೆ ಪ್ರತಿ ವಿಷಯದ ಹಿನ್ನೆಲೆಯನ್ನು ಹುಡುಕುತ್ತಾ ಹೋದರೆ ಮಾನವಿಕ ವಿಜ್ಞಾನಗಳಲ್ಲಿ ನಾವು ಅಷ್ಟೇನೂ ಬೆಳವಣಿಗೆಯನ್ನು ಸಾಧಿಸಿಲ್ಲ. ಬ್ರಿಟಿಷರು ಹಾಕಿಕೊಟ್ಟ ಜಾಡಿನಲ್ಲೇ ಚಾಚೂ ತಪ್ಪದೆ ಮುಂದುವರಿಯುತ್ತಿದ್ದೇವೆ.
ಕನ್ನಡದಲ್ಲಿ ಅಂದರೆ ಸ್ಥಳೀಯ ಭಾಷೆಯಲ್ಲಿ ನಡೆದಷ್ಟು ಸಂಶೋಧನೆ ಹಾಗೂ ಬರವಣಿಗೆಗಳು ಮಾನವಿಕ ವಿಷಯಗಳಲ್ಲಿ ನಡೆಯಲೇ ಇಲ್ಲ. ಕರ್ನಾಟಕದ ಸಂದರ್ಭದಲ್ಲಿ ಸಾಹಿತ್ಯದ ವಿದ್ಯಾರ್ಥಿಗಳಿಗೆ ಕನ್ನಡ ತಮ್ಮ ಭಾಷೆಯೂ ಆಗಿರುವ ಕಾರಣಕ್ಕೆ ಓದು ಆತ್ಮೀಯವಾಗುತ್ತದೆ. ಆದ್ದರಿಂದ ಕನ್ನಡ ವಿಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ನಂತರವೂ ಸಂಶೋಧನೆ ಅಥವಾ ಸಾಹಿತ್ಯ ಬರವಣಿಗೆಯಲ್ಲಿ ತೊಡಗಿಕೊ­ಳ್ಳು­ತ್ತಾರೆ. ಅದೇ ಚರಿತ್ರೆ ಅಥವಾ ರಾಜ್ಯಶಾಸ್ತ್ರ­ವನ್ನು ಉದಾಹರಣೆಯಾಗಿ ತೆಗೆದುಕೊಂಡರೆ ವಿದ್ಯಾರ್ಥಿಯೊಬ್ಬ ಎಂ.ಎ ಮಾಡಲು ಬಂದರೆ ಮೊದಲಿಗೆ ಎದುರಾಗುವ ಸಮಸ್ಯೆ ಭಾಷಾ ಮಾಧ್ಯಮ.
ಅವನಿಗೆ ಆಪ್ಯಾಯಮಾನವಾದ ಕನ್ನಡದಲ್ಲಿ ಪುಸ್ತಕಗಳ ಕೊರತೆಯಿಂದಾಗಿ ಕೈಗೆ ಎಟುಕಬಹುದಾದ ಕನ್ನಡದ ಕೆಲವೇ ಪುಸ್ತಕ­ಗಳನ್ನು ಆಧರಿಸುತ್ತಾನೆ. ಉತ್ತಮ ಪರಾಮರ್ಶನ ಕೃತಿಗಳು ಇಂಗ್ಲಿಷ್‌ನಲ್ಲಿ ಇರುವ ಕಾರಣಕ್ಕೆ ಅರ್ಧದಷ್ಟು ವಿದ್ಯಾರ್ಥಿಗಳು ಓದುವ ಪ್ರಯತ್ನ­ವನ್ನೂ ಮಾಡದೇ ಉಳಿಯುತ್ತಾರೆ. ಆನಂತರ ಸಂಶೋಧನೆಗೆ ಬಂದಾಗಲೂ ಇಂಗ್ಲಿಷ್‌ನ ಸಮಸ್ಯೆ ಬೆಂಬಿಡದ ಬೇತಾಳವಾಗಿ ಕಾಡುತ್ತದೆ. ಅದರಲ್ಲೂ ಸಂಶೋಧನಾ ಬರವಣಿಗೆ ಇಂಗ್ಲಿಷ್‌­ನಲ್ಲಿ ಮಾಡುವಂತೆ ಒತ್ತಾಯವಿರುತ್ತದೆ. ವಿದ್ಯಾರ್ಥಿಗಳ ಅರ್ಧಭಾಗದ ಶ್ರಮ ತಮ್ಮದಲ್ಲದ ಭಾಷೆಯಲ್ಲಿ ವಿಚಾರವನ್ನು ಆಲೋಚಿಸುವ, ಬರೆಯುವ ಸಾಹಸದಲ್ಲೇ ಕಳೆದು ಹೋಗುತ್ತದೆ. ಈ ಸಮಸ್ಯೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮಾತ್ರವಲ್ಲ, ಇಂಗ್ಲಿಷ್ ಮಾಧ್ಯಮದಲ್ಲಿ ಓದಿಬಂದವ­ರನ್ನೂ ಹಿಂಡುತ್ತಿದೆ.
ಆಯಾ ಭಾಷಾ ಪ್ರಯೋಗಗಳು ಆಯಾ ಸಮಾಜದ ಬದುಕಿನ ಹಿನ್ನೆಲೆಯಲ್ಲಿ ಹುಟ್ಟಿ­ಕೊಂಡಿ­ರುತ್ತವೆ. ಆದ್ದರಿಂದ ನಮ್ಮ ಸಮಾಜದ ವಿಚಾರ­­ವನ್ನು ಮತ್ತೊಬ್ಬರ ನಾಲಗೆಯಲ್ಲಿ ಹೇಳಿಸುವುದು, ಅಥವಾ ನಮ್ಮ ನಾಲಗೆಯನ್ನು ಅವರಂತೆ ತಿರುಚುವುದು ಎರಡೂ ಆಭಾಸವಾಗಿ ಕೇಳುತ್ತದೆ. ಆದರೂ ಅದಕ್ಕೇ ನಮ್ಮನ್ನು  ಒಗ್ಗಿ­ಸುವ ಒಗ್ಗಿಕೊಳ್ಳುವ ಹರಸಾಹಸವನ್ನು ಮಾಡುತ್ತಾ ಬಂದಿದ್ದೇವೆ. ಇಷ್ಟೆಲ್ಲಾ ಮಾಡಿ ನಮ್ಮ ವಿಚಾರವನ್ನು ಇಂಗ್ಲಿಷ್‌ನವರ ಮುಂದಿ­ಟ್ಟಾಗ ಮಾಹಿತಿಯನ್ನು ತೆಗೆದುಕೊಂಡು ಹೋಗಿ­ರುತ್ತೇವೆಯೋ ಹೊರತು ಹೊಸದೊಂದು ಸಿದ್ಧಾಂತವನ್ನೋ ಚಿಂತನೆಯನ್ನೋ ಕಟ್ಟಿಕೊಡಲು ಸೋಲುತ್ತೇವೆ. ಇಷ್ಟಾಗಿಯೂ ಇಂಗ್ಲಿಷ್‌ನಲ್ಲಿ ಸಂಶೋಧನೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಈ ಪ್ರೋತ್ಸಾಹ ಅಥವಾ ಒತ್ತಡ ಬೇರೆ ಬೇರೆ ಆಯಾಮಗಳಲ್ಲಿ ನಡೆದಿದೆ.
ಅಧ್ಯಾಪಕನೊಬ್ಬ ಮುಂಬಡ್ತಿ ಪಡೆಯಬೇಕಾದರೆ ತನ್ನ ಸಂಶೋಧನೆ­ಗಳನ್ನು ಮುಂದಿಡಬೇಕಾಗುತ್ತದೆ. ಆ ಸಂಶೋಧನೆ­ಗಳು ಅಂತರರಾಷ್ಟ್ರೀಯ ಪ್ರಕಟಣೆಯಾಗಿದ್ದಲ್ಲಿ ಅತಿಹೆಚ್ಚು ಅಂಕಗಳನ್ನು ನೀಡಲಾಗುತ್ತದೆ. ಕನ್ನಡ ಭಾಷೆಯಲ್ಲಿ ಬರೆದ ಬರಹವನ್ನು ಅಂತರ­ರಾಷ್ಟ್ರೀಯ ಮಟ್ಟದಲ್ಲಿ ಪ್ರಕಟ ಮಾಡಲು ಸಾಧ್ಯ­ವಿಲ್ಲದಿರುವುದರಿಂದ ಮೊದಲ ಹಂತದಲ್ಲಿ ಕನ್ನಡ­ದಲ್ಲಿ ಬರೆಯುವ ವಿದ್ವಾಂಸರಿಗೆ ತಣ್ಣೀರು ಎರಚಿ­ದಂ­ತಾಗುತ್ತದೆ. ಈ ಮಾನದಂಡ ಯಾರದು. ನೀತಿ ನಿಯಮಗಳನ್ನು ರೂಪಿಸಿದ್ದು ಯಾರು?
ಕನ್ನಡ ನಾಡಿನ ದೊಡ್ಡ ಸಂಶೋಧಕರು ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆದವರು ಷ.ಷೆಟ್ಟರ್ ಅವರು. ಅವರ ಹಲವು ಮಹತ್ವದ ಸಂಶೋಧನೆಗಳು ‘ಇನ್‌ವೈಟಿಂಗ್‌ ಡೆತ್’, ‘ಪರ್ಸೀವಿಂಗ್ ಡೆತ್’ ಇತ್ಯಾದಿ ಇಂಗ್ಲಿಷ್‌ನಲ್ಲಿ ಪ್ರಕಟಗೊಂಡಿವೆ. ಅಂತರರಾಷ್ಟ್ರೀಯ ಮಟ್ಟದ ವಿದ್ವಾಂಸರ ಮನ್ನಣೆಯನ್ನೂ ಪಡೆದಿವೆ. ಆದರೆ ಅವರೂ ಅಭಿಪ್ರಾಯಪಟ್ಟಂತೆ ಕನ್ನಡದಲ್ಲಿ ಅವರು ಬರೆದ ‘ಷಂಗಂ ತಮಿಳಗಂ’ ಕೃತಿ ಅವರಿಗೆ ತಂದುಕೊಟ್ಟ ಗೌರವವನ್ನು ಇಂಗ್ಲಿಷ್ ಕೃತಿಗಳು ತಂದುಕೊಟ್ಟಿರಲಿಲ್ಲ. ಕನ್ನಡ ಭಾಷೆ ಮತ್ತು ಲಿಪಿಯ ಪ್ರಾಚೀನತೆ ಕುರಿತು ಮಾತನಾಡುವ ಈ ಕೃತಿ ತಮ್ಮ ನೆಲದಲ್ಲೂ ಮತ್ತು ಹೊರಗೂ ಮೆಚ್ಚುಗೆಯನ್ನು ಪಡೆಯಿತು.
ಅದಾದ ನಂತರ ಹಲವು ವರ್ಷಗಳ ಅವರ ಸಂಶೋಧನೆಯ ಫಲವಾಗಿ ಮೂಡಿಬಂದ ಬೃಹತ್‌ ಕೃತಿ ಹಳಗನ್ನಡ. ಅದನ್ನು ಇಂಗ್ಲಿಷ್‌ನಲ್ಲಿ ಬರೆಯು­ವುದು ಅವರಿಗೆ ತ್ರಾಸವೇನೂ ಆಗುತ್ತಿರಲಿಲ್ಲ. ಕನ್ನಡದಲ್ಲಿ ಅದರ ಬರವಣಿಗೆ ಸುಲಲಿತವಾಗಿ ಸಾಗಿದೆ. ಕರ್ನಾಟಕ ಚರಿತ್ರೆಗೊಂದು ಹೊಸ ಹೊಳಹು. ಹೀಗೆ ಕರ್ನಾಟಕದಲ್ಲಿ ಬೆರಳೆಣಿಕೆಯ ವಿದ್ವಾಂಸರು ಮಾತ್ರವೇ ಸಮಾಜ ವಿಜ್ಞಾನದಲ್ಲಿ ಮೂಡಿಬಂದಿದ್ದಾರೆ.
ಈವರೆಗಿನ ಸಮಾಜಶಾಸ್ತ್ರ ಸಂಶೋಧನೆ­ಗಳನ್ನು ಗಮನಿಸಿದರೆ ಅವೆಲ್ಲಾ ಫೋರ್ಡ್‌ ಫೌಂಡೇಷನ್‌ ಅಥವಾ ಅಂತಹ ಬೃಹತ್ ಪ್ರಾಯೋಜಕರಿಗಾಗಿ ನಡೆಸಿದ ಸಂಶೋಧನೆ­ಗಳಾಗಿವೆ. ಅಂದರೆ ಈ ಸಂಶೋಧನೆಗಳ ಮೂಲಕ ಸಮಾಜವನ್ನು ನಿರ್ದೇಶಿಸುವ ಪ್ರಯತ್ನ ಈ ಸಂಸ್ಥೆಗಳಿಗಿರುತ್ತದೆಂಬುದನ್ನು ನಿರಾಕರಿಸ­ಲಾಗದು. ನಮ್ಮ ಸಮಾಜದ ಒಳಗೆ ಚಿಟುಕು ಮುಳ್ಳಾಗಿ ಆಡುವ ನೂರಾರು ಯೋಜನೆಗಳನ್ನು ನಾವು ಗುಮಾನಿಯಿಂದ ನೋಡಬೇಕಾಗಿದೆ. ನಾವು ಕಲೆಹಾಕುವ ಮಾಹಿತಿ ಅದು ನಮಗಾಗಿ ಮಾತ್ರವೇ ಆಗಿ ಉಳಿದಿರುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಜಾಗತಿಕ ಮಾರುಕಟ್ಟೆ ಅದರ ಲಾಭ ಪಡೆಯಲು ಕಾಯುತ್ತಿರುತ್ತದೆ ಅಥವಾ ನಮ್ಮನ್ನು ಅವರ ಅಗತ್ಯಗಳಿಗಾಗಿ ಬಳಸಿಕೊಂಡಿ­ರು­ತ್ತದೆ.
ಭಾರತದ ಸರ್ಕಾರೇತರ ಸಂಸ್ಥೆಗಳಿಗೆ ಹರಿದು ಬರುವ ಹಣದ ಬಗ್ಗೆ ಇಂತಹ ಅನುಮಾನ, ಎಚ್ಚರ ಪ್ರಾಜ್ಞರ ಗಮನಕ್ಕೆ ಬಂದ ವಿಚಾರವೇ ಆಗಿದೆ. ಹಾಗೆಯೇ ಸಂಶೋಧನೆ­ಗಳಿಗೆ ಬರುವ ವಿದೇಶಿ ಹಣದ ಹಿಂದೆ ಖಚಿತ­ವಾದ ಉದ್ದೇಶ­ವಿರುತ್ತದೆ. ಇಂತಹ ಭಯ ಭಾರತಕ್ಕೆ ಮಾತ್ರವಲ್ಲ, ಭಾರತದಂತಹ ದೇಶದ­ವರ­ನ್ನೆಲ್ಲಾ ಆವರಿಸಿದೆ. ಆಫ್ರಿಕದ ಜನತೆ ತಮ್ಮ ಬಗೆಗೆ ಕೀಳಾಗಿ ಕಂಡ ವಿಷಯಗಳನ್ನು ಅವರು ಓದಿ ಬರೆಯುವಾಗ ಅವರ ಕರುಳು ಚುರುಗುಟ್ಟುತ್ತದೆ.
ನಾವು ಬ್ರಿಟಿಷರು ಹಾಕಿಕೊಟ್ಟ ಜಾಡಿನಲ್ಲಿ ಹೋಗುತ್ತಾ ಇಂಗ್ಲಿಷ್ ಹೊರೆಯನ್ನು ಮಾತ್ರ ಹೊತ್ತಿಲ್ಲ, ವಿಚಾರಗಳಿಗೂ ಅವರೇ ಅದಿದೈವ­ವಾಗಿ ಕಾಣುತ್ತಾರೆ. ಯಾವುದನ್ನು ಅವರು ಚರಿತ್ರೆ ಎಂದು ಹೇಳಿಕೊಟ್ಟರೋ, ಅಥವಾ ಅರ್ಥಶಾಸ್ತ್ರವೆಂದು ಕರೆದರೋ, ಸಮಾಜಶಾಸ್ತ್ರ­ವೆಂದು ಬೋಧಿಸಿದರೋ ಚಾಚೂ ತಪ್ಪದೆ ಅದೇ ಬಟ್ಟೆಯಲ್ಲಿ ಸಾಗುತ್ತಿದ್ದೇವೆ. ಇಂಗ್ಲಿಷ್ ಭಾಷೆ­ಯಲ್ಲಿ ಮಾತ್ರವಲ್ಲ, ಇಂಗ್ಲಿಷ್ ಪರಿಭಾಷೆಯಲ್ಲೇ ನಮ್ಮ ಸಮಾಜವನ್ನು ಅರ್ಥೈಸುತ್ತಿದ್ದೇವೆ. ಭಾರತದ ಪ್ರಾಚೀನ ರಾಜರನ್ನು ಕಿಂಗ್ ಎಂತಲೂ ರಾಣಿಯರನ್ನು ಕ್ವೀನ್ ಎಂತಲೂ ಕರೆಯ­ಲಾಗಿದೆ. ಭಾರತದಲ್ಲಿ ರಾಣಿಯರಿಗೆ ಎಷ್ಟು ಮಾತ್ರ ಅಧಕಾರವಿತ್ತೆಂದು ನಮಗೆ ತಿಳಿದೇ ಇದೆ. ಅವಳು ರಾಜನ ಹೆಂಡತಿಯಾಗಿದ್ದಳೇ ಹೊರತು ಅವಳೇ ಆಧಿಕಾರ ನಿರ್ವಹಿಸುವ ಅವಕಾಶ­ವಿರ­ಲಿಲ್ಲ. ಇಂತಹ ಸಾವಿರಾರು ತಪ್ಪು ಗ್ರಹಿಕೆಗಳನ್ನು ಜ್ಞಾನವೆಂದು ಬೋಧಿಸುತ್ತಾ ಬಂದಿದ್ದೇವೆ.
ಭಾರತದಲ್ಲಿಂದು ೫೭೩ ವಿಶ್ವವಿದ್ಯಾಲಯ­ಗಳಿದ್ದೂ, ಸಮಾಜ ವಿಜ್ಞಾನಗಳಲ್ಲಿ ಬರವಣಿಗೆ­ಗಳೇಕೆ ಸೊರಗಿವೆ? ಪ್ರತಿ ವಿಚಾರವನ್ನು ಪಶ್ಚಿಮದ ಆಲೋಚನಾ ಕ್ರಮದಿಂದಲೇ ಆರಂಭಿಸುತ್ತಿ­ದ್ದೇವೆ. ಪೂರ್ವದ ಚಿಂತನೆಗಳು ಏನು ಎಂದು ತಿಳಿಯುವ ಹೊಸದೊಂದು ಕಣ್ಣೋಟವನ್ನೇ ಕಟ್ಟಿ­ಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮದೇ ನೆಲದ ಜನಪದವನ್ನು ಅರಿಯುವಾಗಲೂ ಫೋಕ್ಲೋರ್ ನಲ್ಲಿ ಬಳಸುವ ಮಾದರಿಗಳನ್ನು ಅಳವಡಿಸಿ­ಕೊಳ್ಳುತ್ತೇವೆ.
ನಮ್ಮದೇ ಭಾಷೆಯಲ್ಲ್ಲಿ ನಾವು ಓದಲಾರದ್ದು, ನಮ್ಮದೇ ಆದ ಆಲೋಚನಾ ಕ್ರಮವನ್ನು ಕಂಡುಕೊಳ್ಳಲಾಗದ್ದೂ ಸಹ ನಮ್ಮ ಕೀಳರಿಮೆಗೆ ಕಾರಣವಾಗಿದೆ. ಕನ್ನಡ ಸಾಹಿತ್ಯ­ವನ್ನೇ ಓದುವವರು ನಿಸ್ಸಂಕೋಚವಾಗಿ ಕನ್ನಡದಲ್ಲಿ ಸಂಶೋಧನೆಯನ್ನು ನಡೆಸುವುದ­ರಿಂದ ಅಲ್ಲಿ ಬರವಣಿಗೆಗಳು ನಿರಂತರವಾಗಿವೆ ಮತ್ತು ಸಮಾಜ ವಿಜ್ಞಾನಗಳ ಬರವಣಿಗೆಗಳನ್ನೂ ಮಾಡುತ್ತಾ ಬಂದಿದ್ದಾರೆ.
ಸಮಾಜ ವಿಜ್ಞಾನಗಳ ಸಂಶೋಧನೆಗಳಿರಲಿ ನಾವೆಲ್ಲರೂ ಓದುತ್ತಾ ಬೋಧಿಸುತ್ತಾ ಬಂದ ವಿಷಯಗಳ ಕಡೆಯೂ ಗಮನ ಹರಿಸಬೇಕಾಗಿದೆ. ಖಾಸಗಿ ವಿಶ್ವವಿದ್ಯಾಲಯಗಳು, ವಿದೇಶಿ ವಿದ್ಯಾ­ಲಯ­ಗಳು ಆರಂಭವಾಗಿರುವ ಈ ಕಾಲದಲ್ಲಿ ಬೋಧನಾ ವಿಷಯ ಎಷ್ಟರ ಮಟ್ಟಿಗೆ ನಮ್ಮದಾಗಿ ಉಳಿಯಬಲ್ಲದು ಕಾದು ನೋಡಬೇಕಾಗಿದೆ. ಯೂರೋಪಿನ ಚರಿತ್ರೆಗೆ ಗಮನಕೊಟ್ಟಂತೆ ಏಷ್ಯಾದ ಚರಿತ್ರೆಯನ್ನು ನಾವು ಬೋಧಿಸಲಿಲ್ಲ. ಅಮೆರಿಕದ ಚರಿತ್ರೆಗೆ ಜಾಗ ಕೊಟ್ಟಂತೆ ಆಫ್ರಿಕದ ಚರಿತ್ರೆ ನಮಗೆ ಲಾಭಕರವಾಗಿ ಕಾಣಲಿಲ್ಲ.
ಭವಿಷ್ಯ­ದಲ್ಲಿ ಸಮಾಜ ಅಧ್ಯಯನಗಳೂ ಮಾರು­ಕಟ್ಟೆಯ ಬೇಡಿಕೆಯನ್ನು ಗಮನದಲ್ಲಿ ಇರಿಸಿಕೊಳ್ಳ ಬೇಕಾಗಿ­ರುವುದರಿಂದ ಅದರಲ್ಲೂ ಅಂತರ­ರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಒತ್ತಡವನ್ನು ಹೊರಲೇ ಬೇಕಾಗಿರುವುದರಿಂದ ಭವಿಷ್ಯದ ಬೌದ್ಧಿಕ  ಗುಲಾಮಗಿರಿಯ ಕೊಳ ಹಾಕಿಸಿ­ಕೊಳ್ಳಲೂ ಎಲ್ಲ ರೀತಿಯಲ್ಲೂ ಸಿದ್ಧತೆ ಹದವಾಗಿ ನಡೆದಿದೆ. ಈ ಎಲ್ಲಕ್ಕೂ ಭಾಷಾ ಮಾಧ್ಯಮದ ನಿರ್ಣಯ ಸಹಜವಾಗಿ ಪೂರಕವಾಗಿದೆ.

ಬಂಡವಾಳಗಾರ ಕೊಂಡು ಮಾರುವ ಭಾಷಾ ಮಾಧ್ಯಮ

Tue, 13th May, 2014
ಪ್ರಾಥಮಿಕ ಹಂತದಲ್ಲಿ ಮಾತೃ­ ಭಾಷೆಯಲ್ಲಿ ಶಿಕ್ಷಣವನ್ನು ನಿರ್ಧರಿ­ಸುವ ಹಕ್ಕು ಪೋಷಕರದ್ದು ಮತ್ತು ಮಗುವಿನದು ಎಂದು  ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇಲ್ಲವಾದಲ್ಲಿ ಅದು ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತ­ದೆಂದು ನಮೂದಿಸಿದೆ.  ಖಾಸಗಿ ಶಾಲೆಗಳನ್ನು ನಡೆ­ಸುವ ಬಂಡವಾಳಗಾರರು ಇಂಗ್ಲಿಷ್‌ನ ಹೆಸರಲ್ಲಿ ತಮ್ಮ ಬಂಡವಾಳದ ರಕ್ಷಣೆಗಾಗಿ ಗೆದ್ದ ವಾದ ಇದು.
ಶಿಕ್ಷಣ ಪದ್ಧತಿ ಹುಟ್ಟಿದಾಗಲೂ ಅದು ಬಂಡ­ವಾಳಗಾರನ ಅಗತ್ಯವೇ ಆಗಿತ್ತು. ಇನ್ನೂರು ವರ್ಷ­ಗಳ ನಂತರವೂ ಅದೇ ಕನ್ನಡಿಯಲ್ಲಿ ಪ್ರತಿಫಲಿಸಿದಂತಿದೆ. ಇವತ್ತು ನಾವು ಒಪ್ಪಿ ಅಪ್ಪಿ­ಕೊಂಡಿರುವ ಶಿಕ್ಷಣ, ಬಂಡವಾಳಗಾರರ ಅಗತ್ಯ­ಕ್ಕಾಗಿ ರೂಪುಗೊಂಡ ವ್ಯವಸ್ಥೆಯಾಗಿದೆ. ಹತ್ತೊಂ­ಬತ್ತನೆ ಶತಮಾನದ ಭಾರತದಲ್ಲಿ ಪರಿಚಿತವಾ­ದಾಗಲಂತೂ ಆ ಬಂಡವಾಳಗಾರ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯೇ ಆಗಿತ್ತು.
ಕೈಗಾರಿಕಾ ಕ್ರಾಂತಿ ಪರಿಣಾಮವಾಗಿ ಹತ್ತೊಂ­ಬತ್ತನೇ ಶತಮಾನದಲ್ಲಿ ಬ್ರಿಟನ್ನಿನಲ್ಲಿ ಆರಂಭ­ವಾದ ಶಾಲಾ ಪದ್ಧತಿಯೇ ಬೆಳೆದು ಇಂದು ಜಗತ್ತನ್ನೇ ವ್ಯಾಪಿಸಿದೆ. ಇದ್ದಕ್ಕಿದ್ದಂತೆ ಕಾರ್ಖಾನೆ­ಗಳಲ್ಲಿ ದುಡಿಯಲು ಕಾರ್ಮಿಕರ ಅಗತ್ಯ ಹೆಚ್ಚ­ತೊ­ಡಗಿತು. ಹಳ್ಳಿಯಿಂದ ಬಂದ ಅನಕ್ಷರಸ್ಥರಿಗೆ ಬದಲಾಗಿ ಓದಿದ ಹಾಗೂ ಕೈಗಾರಿಕೆಗಳಲ್ಲಿ ದುಡಿಯಲು ಬೇಕಾದ ಕುಶಲತೆಯನ್ನು ಹೆಚ್ಚಿಸಿ­ಕೊಂಡ ಜನರಿಗೆ ಬೇಡಿಕೆ ಹೆಚ್ಚತೊಡಗಿತು. ಅಷ್ಟೇ ಅಲ್ಲದೆ ಒಂದು ವಯೋಮಿತಿಯ ಮಕ್ಕಳು ಒಂದು ಬ್ಯಾಚ್ ಆಗಿ ಶಿಕ್ಷಣ ಪಡೆದು ಹೊರ ಬರುವಂತೆ ನೋಡಿಕೊಳ್ಳಲಾಯಿತು. ಇದರಿಂದ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಾಗ ಮತ್ತು ನಿವೃತ್ತಿ ಹೊಂದುವಾಗ ಕೈಗಾರಿಕೆಗಳ ಆಡಳಿತದ ದಾರಿ ಸುಗಮವಾಯಿತು. ಬ್ರಿಟನ್ನಿನ ರಾಜ ಮನೆತನವೂ ಈ ಕಾರಣಕ್ಕಾಗಿ ಶಿಕ್ಷಣವನ್ನು ಸಾರ್ವತ್ರೀಕರಿಸಲು ಮುಂದಾಯಿತು.
ಇಂತಹ ದೊಡ್ಡ ಲಾಭವಿಲ್ಲದೆ ಮೇಲ್ವರ್ಗದ ಸ್ವತ್ತಾದ ಓದು ಬರಹವನ್ನು ಆಳುವ ವರ್ಗ, ಜನಸಾ­ಮಾನ್ಯರಿಗೆ ತೆರೆದಿಡುತ್ತಿರಲಿಲ್ಲ. ಅದರ ಪರಿಣಾ­ಮ­ವಾಗಿ ಮಧ್ಯಮ ವರ್ಗದ ಹುಟ್ಟನ್ನು ಮೇಲ್ವರ್ಗ ನಿರೀಕ್ಷಿಸಿರಲಿಲ್ಲ. ಹಾಗೂ ಅದರ ಅರಿವಿಲ್ಲದೆ ಯೂರೋಪು ತನ್ನ ಸಾಂಪ್ರದಾಯಿಕ ಊಳಿಗಮಾನ್ಯ ವ್ಯವಸ್ಥೆಯನ್ನು ಕಳೆದುಕೊಳ್ಳಲು ಅನುಕೂಲ ಮಾಡಿಕೊಟ್ಟಿತು. ಬ್ರಿಟನ್ನಿನಲ್ಲಿ ೧೮೭೦ ರಲ್ಲಿ ಫಾಸ್ಟರ್ ಎಜುಕೇಷನ್ ಆ್ಯಕ್ಟ್ ನಿಂದ ಪ್ರಾಥಮಿಕ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಂಡಿತು. ಅಂದರೆ ಶಿಕ್ಷಣವನ್ನು ರೂಪಿಸುವ ಜವಾಬ್ದಾರಿಯನ್ನು ರಾಜ್ಯ ನಿರ್ಧರಿಸು­ವುದು ರೂಢಿಗತವಾಗಿ ಬೆಳೆದು ಬಂದಿದೆ ಎಂದು ಸ್ಪಷ್ಟವಾಗುತ್ತದೆ. ಸುಪ್ರೀಂಕೋರ್ಟ್ ತೀರ್ಮಾನದ ಸಂದರ್ಭದಲ್ಲಿ ಈ ಅಂಶವನ್ನು ಗಮನಿಸಬೇಕಾಗಿದೆ.
ಈ ಆಧುನಿಕ ಶಿಕ್ಷಣ ವ್ಯವಸ್ಥೆಯನ್ನು ಬ್ರಿಟಿಷರು ಪರಿಚಯಿಸಲಾಗಿ ಬಿಟನ್ನಿನ ಮಾದರಿಯಲ್ಲೇ ಆಳುವ ವರ್ಗಕ್ಕೆ ಅಗತ್ಯವಾದ ರೀತಿಯ ಶಾಲಾ ಪದ್ಧತಿ ಭಾರತವನ್ನೂ ಹೊಕ್ಕಿತು. ಅಂದು ಭಾರತ­ದಲ್ಲಿ ಬ್ರಿಟಿಷರಿಗೆ ಬೇಕಾದುದು ಕಾರ್ಮಿಕರಾ­ಗಿರಲಿಲ್ಲ. ಬ್ರಿಟಿಷ್ ಭಾರತ ಕೈಗಾರಿಕೆಯಲ್ಲಿ ಮುಂದೆ ಬರಲು ಸಾಧ್ಯವಾಗಲೇ ಇಲ್ಲ. ಆ ನಂತರವೂ ಭಾರತ ಕೈಗಾರಿಕಾ ಕ್ರಾಂತಿಯನ್ನು ಕಾಣಲೇ ಇಲ್ಲ. ಆದ್ದರಿಂದ ಶಿಕ್ಷಣದ ಉದ್ದೇಶ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ದುಡಿಯುವ ಕಾರಕೂನರನ್ನು ಹುಟ್ಟುಹಾಕುವುದಾಗಿತ್ತು. ಹಾಗಾಗಿ ಅದಕ್ಕೆ ತಕ್ಕ ವಿಷಯಗಳನ್ನೂ, ಭಾಷೆ­ಯನ್ನೂ ರೂಪಿಸಲಾಯಿತು. ಭಾರತದಲ್ಲಿ ಶಿಕ್ಷಣ ಮಾಧ್ಯಮವನ್ನು ಕುರಿತಾದ ಚರ್ಚೆ ಹತ್ತೊಂಬ­ತ್ತನೆ ಶತಮಾನದ ಆದಿಭಾಗದಲ್ಲ್ಲಿ ತೀವ್ರವಾ­ಗಿತ್ತು.
ಆ ಸಮಯದಲ್ಲಿ ಕಂಡುಕೊಂಡ ಮೆಕಾಲೆ ಸೂತ್ರದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಸ್ಥಳೀಯ ಭಾಷೆಯಲ್ಲೂ, ಉನ್ನತ ಶಿಕ್ಷಣವನ್ನು ಇಂಗ್ಲಿಷ್ನಲ್ಲೂ ಕೊಡಲು ತೀರ್ಮಾನಿಸಲಾಯಿತು. ವಸಾಹತುಶಾಹಿ ತನ್ನೆಲ್ಲಾ ಹಿತಾಸಕ್ತಿಗಳನ್ನು ಇರಿಸಿಕೊಂಡಾಗಲೂ, ಸ್ಥಳೀಯ ಭಾಷೆಯನ್ನು ಕೈ ಬಿಡುವ ಹಂತಕ್ಕೆ ಯೋಚಿಸಲು ಸಾಧ್ಯವಾಗಿರ­ಲಿಲ್ಲ. ವಾಸ್ತವವಾಗಿ ಸ್ಥಳೀಯ ಭಾಷೆಗಳನ್ನು ಕಲಿತು ಕಿಟ್ಟೆಲ್‌ರಂತಹವರು ನಿಘಂಟನ್ನು ಬರೆದು ಆ ಮೂಲಕ ದೇಶಿ ಭಾಷಾ ಜ್ಞಾನವನ್ನು ಹೀರಲು ಪ್ರಯತ್ನಿಸಿದರು. ಇಂದು ವಸಾಹತು ಭಾಷೆಗಾಗಿ ನಮ್ಮ ಭಾಷೆಯನ್ನೇ ಬಲಿ ಕೊಡಲು ಹೊರಟಿದ್ದೇವೆ.
ಇನ್ನು ಸ್ವಾತಂತ್ರ್ಯಾ ನಂತರ ರಾಷ್ಟ್ರೀಯತೆಯ ಭಾವನೆಗಳನ್ನು ಬೆಳೆಸುವ ಶಿಕ್ಷಣವನ್ನು ರೂಪಿ­ಸುವ ಪ್ರಯತ್ನ ಬೆಳೆದು ಬಂದಿತು. ಅಂದರೆ ಸರ್ಕಾರ ಅಥವಾ ಆಳುವ ವರ್ಗ ತನ್ನ ನಿರೀಕ್ಷೆಗೆ ತಕ್ಕ ಸಮಾಜವನ್ನು ಶಿಕ್ಷಣದ ಮೂಲಕ ರೂಪಿ­ಸುತ್ತಾ ಹೋಗುತ್ತದೆ ಎಂಬ ವಾದಕ್ಕೆ ಅಪವಾ­ದವಿಲ್ಲವೆಂಬಂತೆ ಭಾರತದಲ್ಲೂ ಪಠ್ಯವನ್ನು ರೂಪಿ­ಸಿಕೊಂಡಿದೆ. ಭಾರತದ ಪ್ರಜಾಪ್ರಭುತ್ವ ಸರ್ಕಾರಕ್ಕೆ ತಕ್ಕಹಾಗೆ ತಗ್ಗಿಬಗ್ಗಿ ನಡೆಯುವ ಸಮಾಜವನ್ನು ರೂಪಿಸಲು ಶಿಕ್ಷಣವನ್ನು ಬಳಸು­ತ್ತದೆ. ಅದರಲ್ಲಾದ ಭ್ರಷ್ಟತೆಯನ್ನು ಪ್ರಶ್ನಿಸಲಾ­ಗದ ಮನಸ್ಥಿತಿ ಅಲ್ಲಿ ನಿರ್ಮಾಣವಾಗಿರುತ್ತದೆ. ವಸಾಹತೋತ್ತರ ನೆರಳು ಬಿಡದಂತೆ  ಅನುಸರಿಸಿಕೊಂಡು ಬಂದಿದೆ.
ತೊಂಬತ್ತರ ದಶಕದ ಹೊತ್ತಿಗೆ ಬೆಳೆಯ­ಲಾರಂಭಿಸಿದ ಐ.ಟಿ ಉದ್ದಿಮೆ ಜನರನ್ನು ತನ್ನ ಕಡೆಗೆ ಎಳೆದುಕೊಳ್ಳಲಾರಂಭಿಸಿತು. ಜನ ಮುಗಿ­ಬಿದ್ದು ಕೈಗಾರಿಕೆಗಳಿಗೆ ಅಗತ್ಯವಾದ ಎಂಜಿನಿ­ಯರಿಂಗ್ ಕೋರ್ಸ್ ಗಳನ್ನು ಓದತೊಡಗಿದ್ದು, ಭಾರತದ ಸಮಾಜ, ಆರ್ಥಿಕತೆ, ಸಂಸ್ಕೃತಿ ಎಲ್ಲವೂ ಆ ದಿಕ್ಕಿಗೇ ತನ್ನನ್ನು ಹೊಂದಿಸಿಕೊಳ್ಳತೊಡಗಿದೆ. ಎಂಜಿನಿಯರಿಂಗ್ ಕೋರ್ಸ್ ಅನ್ನು ಇಂಗ್ಲಿಷ್ ನಲ್ಲಿ ರೂಪಿಸಲಾಗಿ, ಆ ಮೂಲಕ ಬಹು ದೊಡ್ಡ ಬದುಕು ಕಟ್ಟಿಕೊಳ್ಳುವ ಚಾಲನೆ ದೊರಕಿದಾಗ ಅದರ ಹೆಗ್ಗಳಿಕೆಗೆ ಇಂಗ್ಲಿಷ್ ಕಾರಣವೆಂದು ಭ್ರಮಿಸಲಾಗಿದೆ. ಅದರಲ್ಲೂ ವಿದೇಶಗಳಿಗೆ ಹರಿದು ಹೋದ ದುಡಿಯುವ ವರ್ಗ ಇಂಗ್ಲಿಷ್ ಭಾಷಾ ವ್ಯಾಮೋಹವನ್ನು ಮತ್ತಷ್ಟು ಬಲಗೊ­ಳಿಸಿತು.
ಇಲ್ಲೆಲ್ಲಾ ವ್ಯಕ್ತಿಯ ಬೆಳವಣಿಗೆಯನ್ನು ಅವನು ತೆಗೆದುಕೊಳ್ಳುವ ಸಂಬಳದ ಮೇಲೆ ಅಳೆಯಲಾ­ರಂ­ಭಿಸಿತು. ಮಾರುಕಟ್ಟೆಯಲ್ಲಿ ಇಂಗ್ಲಿಷ್ ಭಾಷೆಗೆ ಬೇಡಿಕೆ ಹೆಚ್ಚಲು ಕಾರಣವಾಯಿತು. ಜಾಗತೀಕರಣದ ನಂತರ ಇಂಗ್ಲಿಷ್ ಭಾಷೆಯನ್ನು ಅನಿವಾರ್ಯವೇನೋ ಎನ್ನುವಂತೆ ಭಾವಿಸಿ ಜನ ಪಡುತ್ತಿರುವ ಪಡಿಪಾಟಲು ಹೇಳತೀರದು.
ಜನರ ಈ ದೌರ್ಬಲ್ಯದ ಜಾಡು ಹಿಡಿದು ಬಂಡವಾಳಗಾರರು ತಮ್ಮ ಕೈಗಾರಿಕಾ ಅಗತ್ಯ­ವನ್ನು ನೀಗಿಸಿಕೊಳ್ಳುವುದೂ ಅಲ್ಲದೆ ಶಿಕ್ಷಣದ ಮೂಲಕವೂ ಲಾಭ ಮಾಡಲು ಮುಂದಾದರು. ಹೀಗೆ ಶಿಕ್ಷಣವನ್ನು ಬಂಡವಾಳವಾಗಿಸಿಕೊಳ್ಳಲು ಹೊಸ ಬಂಡವಾಳಗಾರ ವರ್ಗ ಹುಟ್ಟಿಕೊಂಡಿದೆ. ಹೀಗೆ ಶಿಕ್ಷಣವನ್ನೇ ಬಂಡವಾಳವಾಗಿಸಿಕೊ­ಳ್ಳುವು­ದರ ಹಿಂದೆ ಜಾಗತೀಕರಣದ ಅಬ್ಬರವನ್ನಂತೂ ಕಡೆಗಣಿಸಲಾಗದು. ಇದೆಲ್ಲವೂ ಶಿಕ್ಷಣದ ಖಾಸಗೀ­ಕರಣಕ್ಕೆ ತೆರುತ್ತಿರುವ ಬೆಲೆಯಾಗಿದೆ. ಶಿಕ್ಷಣ ಬೇಡಿಕೆ ಅಗತ್ಯದ ಆಧಾರದ ಮೇಲೆ ನಡೆಯುವ ಮಾರುಕಟ್ಟೆಯ ಸರಕಾಗಿರುವಾಗ ತನಗಿಷ್ಟ ಬಂದ ವಸ್ತುವನ್ನು ಕೊಳ್ಳುವುದು ಗ್ರಾಹಕನ ಹಕ್ಕೆಂದು ಭಾವಿಸಬೇಕಾಗಿದೆ. 
ಈ ಅತಿರೇಕಕ್ಕೆ ಹೋಗುವ ಎಲ್ಲಾ ನಿರೀಕ್ಷೆ ಇದ್ದರೂ ಯಾರೂ ಇಷ್ಟು ಬೇಗನೆ ಸ್ಥಳೀಯ ಸಂಸ್ಕೃತಿ ಅದರ ದ್ಯೋತಕವಾದ ಸ್ಥಳೀಯವಾದ ಭಾಷೆಯ ಅಸ್ತಿತ್ವಕ್ಕೆ ಕುತ್ತು ಬರಬಹುದೆಂದು ನಿರೀಕ್ಷಿಸಿರಲಿಲ್ಲ. ಅದರಲ್ಲೂ ಭಾರತದಂತಹ ಬಹು ಸಂಸ್ಕೃತಿಯ ನಾಡಿನಲ್ಲಿ ಅದರ ರಕ್ಷಣೆಗೆ ನಿಲ್ಲಬೇಕಾದ ನ್ಯಾಯಾಲಯ ಕಾನೂನಿನ  ಪರಿ­ಭಾಷೆಯಲ್ಲಿ ಮಾತೃಭಾಷೆ, ಮೂಲಭೂತ ಹಕ್ಕು, ಇವುಗಳನ್ನು ಮುಂದುಮಾಡಿ ಇಂಗ್ಲಿಷನ್ನು ಸರ್ವೋಚ್ಚಗೊಳಿಸುವ ತೀರ್ಮಾನ ಯಾವುದೇ ಶಿಕ್ಷಣ ತಜ್ಞನಿಗೆ ಆಘಾತವನ್ನುಂಟುಮಾಡುತ್ತದೆ. ಕೋರ್ಟ್‌ ಮೆಟ್ಟಿಲನ್ನು ಹತ್ತಿದ ಜನ ಶಿಕ್ಷಣ ತಜ್ಞರಾಗಲಿ, ಭಾಷಾ ತಜ್ಞರಾಗಲಿ, ಮಕ್ಕಳ ಮನಸ್ಸನ್ನು ಅರಿಯಬಲ್ಲ ಮನಶಾಸ್ತ್ರಜ್ಞರಾಗಲಿ ಆಗದೆ ಖಾಸಗಿ ಶಾಲೆಗಳ ಮಾಲೀಕರಾಗಿದ್ದಾರೆ. ಇಂತಹ ಬಂಡವಾಳಗಾರರಲ್ಲಿ ಕೈಗಾರಿಕೋದ್ಯಮಿ­ಗಳು, ಮಂತ್ರಿಗಳು, ಅಧಿಕಾರಿಗಳು, ಮಠಗಳೂ ಸೇರಿಹೋಗಿದ್ದಾರೆ. ಉಳಿಸಬೇಕಾದವರೇ ಮಾರಲು ಹೊರಟಾಗ ನ್ಯಾಯಾಲಯವಾ­ದರೂ ಇನ್ನೆಂತಹ ತೀರ್ಮಾನವನ್ನು ನೀಡಲು ಸಾಧ್ಯ. 
ಈ ಖಾಸಗಿ ಶಾಲೆಯ ಸಂಘಟನೆಗಳ ನಾಯಕರ ಮಾತು ತೋಳ–ಕುರಿಯ ವಾದ­ದಂತೆ ಕಾಣುತ್ತದೆ. ಪ್ರಾಥಮಿಕ ಹಂತದಲ್ಲಿ ಶಾಲೆಗೆ ಸೇರುವ ಮಗುವಿನ ಮತ್ತು ಪೋಷಕರ ಹಕ್ಕನ್ನು ಎತ್ತಿಹಿಡಿಯುತ್ತಾ ಸಂವಿಧಾನದ ವಿಧಿ­ವಿಧಾನಗಳನ್ನು ಉಲ್ಲೇಖಿಸುವುದು ಒಂದು ಯೋಜನಾಬದ್ಧ ಹುನ್ನಾರವೇ ಆಗಿದೆ. ಏಕೆಂದರೆ ಐದನೇ ತರಗತಿಯ ಮಗುವಿಗೆ ಆಯ್ಕೆ ಇರುವು­ದಾದರೂ ಹೇಗೆ ಸಾಧ್ಯ. ತಂದೆ ತಾಯಿ­ಗ­ಳಾದರೂ ಅವರ ಮುಂದಿನ ಹಲವು ಒತ್ತಡಗಳಿಗೆ ಮಣಿದು ಯಾವುದೋ  ನಿರ್ಧಾರಕ್ಕೆ ಬಂದಿರು­ತ್ತಾರೆ. ಅವರು ತಮ್ಮ ಮಗುವಿನ ಒಳಿತೆಂದು ಭಾವಿಸಿದ ಭ್ರಮೆಯೂ ಆಗಿರಬಹುದು. ಯಾವುದೋ ಪ್ರವಾಹಕ್ಕೆ ಸಿಕ್ಕಿಹೋಗಿರುತ್ತೇವೆ.  ಸಮಾಜ ತಲುಪಬೇಕಾದ ಗುರಿ ಯಾವುದೆಂಬ ಅರಿವು, ದೂರದೃಷ್ಟಿಯನ್ನು ಕಟ್ಟಿಕೊಡುವವ­ರಾರು. ನಮ್ಮೂರ  ಬೀದಿಯಲ್ಲಿ ಅರ್ಥ ಕಾಣದ ಆಕ್ಸಫರ್ಡ್, ಕೇಂಬ್ರಿಜ್‌ ಶಾಲೆಗಳು ತಮ್ಮ ಲಾಭಕ್ಕಾಗಿ ಇಂತಹ ಯಾವುದೇ ವಾದವನ್ನು ಮುಂದೆ ಮಾಡಲೂ ಸಾಧ್ಯ.
ಇನ್ನು ಇಂಗ್ಲಿಷ್ ವ್ಯಾಮೋಹಕ್ಕೆ ಬಿದ್ದು ಅದನ್ನು ಉಳಿಸಿ ಬೆಳೆಸಿದವರಲ್ಲಿ ವಿದ್ಯಾವಂತ ಮಧ್ಯಮ ವರ್ಗದ ಪಾತ್ರ ಬಹು ಮುಖ್ಯವಾಗು­ತ್ತದೆ. ಅವರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬಂಡವಾಳಕ್ಕೆ ಇಂಗ್ಲಿಷ್ ಭಾಷೆಯ ಹಮ್ಮು ಬಿಮ್ಮು ಬೇಕಾಗುತ್ತದೆ. ಈಗಾಗಲೇ ನಗರದಲ್ಲಿ ನೆಲೆಸಿ ನೆರಳಿನಲ್ಲಿ ಬದುಕು ಕಂಡವರಿಗೆ ಇಂಗ್ಲಿಷನ್ನು ಜೊತೆಯಲ್ಲಿ ವ್ಯಾನಿಟಿ ಬ್ಯಾಗ್‌ ಆಗಿಸಿ­ಕೊಂಡು ಕನ್ನಡ ಬಾರದವರಂತೆ ವರ್ತಿಸು­ವುದು ಹೊಸದೇನಲ್ಲ.
ಅವರ ಮಕ್ಕಳು ಪುಸ್ತಕವೇ ಸರ್ವಸ್ವವಾಗಿ ಪರೀಕ್ಷೆಗಳಲ್ಲಿ ಅಂಕಗಳನ್ನು ಪಡೆದು ಪ್ರತಿಭಾವಂತರೆನಿಸಿಕೊಳ್ಳುವುದು ಉಳಿ­ದ­ವರಿಗೆ ಅವರು ಆದರ್ಶವಾಗಿ ಕಾಣುವುದು ಒಂದ­ಕ್ಕೊಂದು ಸೇರುತ್ತಾ ಇಂತಹ ಸ್ಥಿತಿಗೆ ಕಾರಣ­ವಾಗಿದೆ. ಹಳ್ಳಿಯ ಮಕ್ಕಳ ಪರವಾಗಿ ಮಾತನಾ­ಡುವ ನೈತಿಕ ಹಕ್ಕೂ ವಿದ್ಯಾವಂತ ಮಧ್ಯಮ ವರ್ಗಕ್ಕೆ ಇಲ್ಲದಂತಾಗಿದೆ. ಪ್ರವಾಹಕ್ಕೆ ವಿರುದ್ಧವಾಗಿ ಈಜುವ ಶಕ್ತಿಯುಳ್ಳ ಕೆಲವರು ಅವರಲ್ಲಿ ಅಪವಾದವಾಗುತ್ತಾರೆ.
ಶಿಕ್ಷಣದ ಜವಾಬ್ದಾರಿಯನ್ನು ಸಂವಿಧಾನ, ರಾಜ್ಯ­ಗಳಿಗೆ ಕೊಡುವಾಗ ಅದರ ಉದ್ದೇಶ ಸ್ಥಳೀಯ ಸಂಸ್ಕೃತಿಯನ್ನು ಕಾಪಾಡಿಕೊಳ್ಳವುದೇ ಆಗಿತ್ತು. ಒಂದು ರಾಜ್ಯದ ಸಂಸ್ಕೃತಿ ಆ ರಾಜ್ಯದ ಭಾಷೆಯನ್ನೂ ಒಳಗೊಂಡಿರುತ್ತದೆ. ಭಾಷೆಗಾಗಿ ಭಾಷೆಯನ್ನು ಉಳಿಸುವುದಕ್ಕಿಂತ ಅದನ್ನಾಡುವ ಜನರ ಹಿತಾಸಕ್ತಿಯಿಂದ ಭಾಷೆಯನ್ನು ಉಳಿಸಬೇ­ಕಾಗಿರುತ್ತದೆ. ಆ ಭಾಷೆ ಆ ಪರಿಸರದ ಭಾಷೆ­ಯಾ­­ಗಿರುತ್ತದೆ. ಶಿಕ್ಷಣ ಇಂದು ಸಾಂಸ್ಥಿಕ ರೂಪ­ವನ್ನು ಪಡೆದು ಆ ಮೂಲಕವೇ ವ್ಯಕ್ತಿಯ ಬದು­ಕಿಗೆ ಮಾರ್ಗ ತೋರುತ್ತಿರುವುದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಸಲಾಗುವ ಭಾಷೆಯ ಮೇಲೆ ಸಮಾಜ ನಿಗಾ ವಹಿಸಲೇಬೇಕಾಗುತ್ತದೆ.  ಇಲ್ಲ­ವಾ­ದಲ್ಲಿ ನಮ್ಮ ಪರಿಸರವನ್ನು ತಮ್ಮ ಅನು­ಕೂಲಕ್ಕೆ ರೂಪಿಸಿಕೊಳ್ಳಲು ದೈತ್ಯ ಶಕ್ತಿಗಳು ಸದಾ ಬೆನ್ನು ಹತ್ತಿರುತ್ತವೆ. ದೇಶವೆಲ್ಲಾ ಇಂಗ್ಲಿಷ್ ಭಾಷೆಗೆ ಗುಲಾಮರಾಗುವುದರಿಂದ ಇಂಗ್ಲಿಷ್ ಮಾರುಕಟ್ಟೆ ಮತ್ತಷ್ಟು ಕೊಬ್ಬುತ್ತದೆ. ಶಾಲೆಗಳ ಮೂಲಕ ಜಾಗತಿಕ ಮಾರುಕಟ್ಟೆ ತನ್ನ ಹಿಡಿತವನ್ನು ಸಮಾಜದ ಮೇಲೆ ಸಂಪೂರ್ಣ­ವಾಗಿ ಸಾಧಿಸಲು ಸಾಧ್ಯವಾಗುತ್ತದೆ. ಇಂಗ್ಲಿಷ್ ಭಾಷೆಯ ಆಯ್ಕೆ ಆಯ್ಕೆಯಾಗಿ ಉಳಿದಿಲ್ಲ.  ಮಾರುಕಟ್ಟೆ ನಮ್ಮ ಆಯ್ಕೆಯನ್ನು ನಿಯಂತ್ರಿಸುತ್ತಿದೆ.
ಕರ್ನಾಟಕ ಸರ್ಕಾರ ಇವತ್ತು ಪರಿತಪಿಸುತ್ತಾ ಪರಿಹಾರ ಮಾರ್ಗಗಳನ್ನು ಹುಡುಕತೊಡಗಿದೆ. ಆದರೆ ಶಿಕ್ಷಣದ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಡುವ ಹಿನ್ನೆಲೆಯ  ಭ್ರಷ್ಟತೆಗೆ ಅಥವಾ ದೌರ್ಬಲ್ಯಕ್ಕೆ ಬೆಲೆತೆರಬೇಕಾಗಿದೆ. ಪ್ರಾಥಮಿಕ ಶಿಕ್ಷಣದ ಹಿನ್ನೆಲೆಯಲ್ಲಿ ಆರಂಭವಾದ ಸಮಾಜ ವಿರೋಧಿ ನಿಲುವಿನ ಹಿನ್ನೆಲೆಯಲ್ಲಿ ಒಟ್ಟಾರೆ ಶಿಕ್ಷಣವನ್ನು ಪುನರ್ ಪರಶೀಲಿಸಬೇಕಾಗಿದೆ.  ಪ್ರಜಾಪ್ರತಿನಿಧಿ ಸರ್ಕಾರ ಇನ್ನಾದರೂ ತನ್ನ ನಿಲುವುಗಳಲ್ಲಿ ಯಾರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಬೇಕಾಗಿದೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳ ಬೇಕಾಗುತ್ತದೆ.
ಮಾತೃ ಭಾಷೆಯ ಕಲ್ಪನೆಯನ್ನು ಕಟ್ಟಿಕೊಟ್ಟ ಈ ನುಡಿಗಳಿಗೆ ಬೆಲೆ ಎಲ್ಲಿ?
ಮೊಲೆವಾಲಿನೊಡಗೂಡಿ
ಬಂದನುಡಿ ತಾಯಿನುಡಿ
ಕೊಲೆಗೈದರಮ್ಮನನೆ ಕೊಲಿಸಿದಂತೆ
–ಕುವೆಂಪು (ಕನ್ನಡ ಡಿಂಡಿಮ)

ಆತ್ಮಸಾಕ್ಷಿಯನ್ನು ನುಂಗಿದ ಜಾತೀಯತೆ

Tue, 29th Apr, 2014
ಕರ್ನಾಟಕದ ರಾಜ್ಯ ರಾಜಕೀಯದಲ್ಲಿ ಅಹಿಂದ ತನ್ನ ಸಾಧ್ಯತೆಗಳನ್ನು ಪ್ರಕಟ­ಪಡಿಸಿದಾಗ ಈವರೆಗಿನ  ಪ್ರಮುಖ ರಾಜಕೀಯ ಹುರಿಯಾಳುಗಳಾದ  ಲಿಂಗಾಯತ ಮತ್ತು ಒಕ್ಕಲಿಗ ಜಾತಿಗಳನ್ನು ಪಕ್ಕಕ್ಕೆ ಸರಿಸಲು ಸಾಧ್ಯ­ವಾಗಿದ್ದು ದಿಟ.
ಅಹಿಂದದಿಂದ ಹೊರಗುಳಿದ ಒಕ್ಕಲಿಗ  ಲಿಂಗಾಯತ ಮತ್ತು ಬ್ರಾಹ್ಮಣ ಜಾತಿ­ಗಳು ಚಾರಿತ್ರಿಕವಾಗಿ ಎಸಗಿರುವ ನ್ಯಾಯ ಅನ್ಯಾಯಗಳ ಆತ್ಮಾವಲೋಕನ ಮಾಡಿಕೊಳ್ಳ­ಬೇಕಾದ ಅಗತ್ಯ ಇಂದು ಒದಗಿಬಂದಿದೆ. ಅಹಿಂದ  ಕೇವಲ ರಾಜಕೀಯ ಬಲಾಬಲದ ಪ್ರಶ್ನೆಯಾಗದೆ ಹೊಸ ಸಾಮಾಜಿಕ ಮೌಲ್ಯ ಮತ್ತು ಬದುಕಿನ ಮಾರ್ಗಗಳನ್ನು ಹುಟ್ಟುಹಾಕಬೇಕಾಗಿದೆ. ಇಲ್ಲ­ವಾದಲ್ಲಿ ಪ್ರಬಲ ಕೋಮುಗಳು ಕಟ್ಟಿಕೊಂಡ ಜಾತಿ ಬಲಾಢ್ಯದ ವರ್ತನೆಗಳನ್ನೇ ಅಧಿಕಾರಕ್ಕೆ ಬರುವ ಎಲ್ಲಾ ಜಾತಿಗಳು ರೂಢಿಸಿಕೊಳ್ಳುತ್ತವೆ.
ಭಾರತದಲ್ಲಿ ಬ್ರಾಹ್ಮಣ್ಯದಿಂದ ಜಾತಿ ವ್ಯವಸ್ಥೆ ನೆಲಗಟ್ಟಿದೆ ಎಂಬ ದೂರು ಆ ಸಮುದಾಯಕ್ಕೆ ಅಂಟಿದ ಶಾಪವೇ ಆಗಿದೆ. ಚರಿತ್ರೆಯುದ್ದಕ್ಕೂ ಬ್ರಾಹ್ಮಣ್ಯದ ಜಿಡ್ಡುತನ, ಜಾತಿ ಕಾರಣದ ಅವಕಾಶ ರಾಜಕಾರಣ, ಸ್ವಾರ್ಥ, ಮೇಲು ಕೀಳು, ಮಡಿ ಮೈಲಿಗೆಯ ಭಾವನೆಗಳು– ಇವೆಲ್ಲಾ ಶತಮಾನಗಳಿಂದ ಟೀಕೆಗೆ ಒಳಗಾಗಿವೆ. ಚರಿತ್ರೆಯುದ್ದಕ್ಕೂ ಬ್ರಾಹ್ಮಣ ವಿರೋಧಿ ನೆಲೆ­ಯಲ್ಲಿ ಹೋರಾಟಗಳು, ಚಳವಳಿಗಳು ನಡೆದೇ ಇವೆ. ಈ ಎಲ್ಲಾ ಟೀಕೆಗಳ ನಂತರವೂ  ದೇಶದ ಸಂಪತ್ತು ಮತ್ತು ಅಧಿಕಾರದ ಮೇಲಿನ ಬ್ರಾಹ್ಮಣರ ಹಿಡಿತ ಸಡಿಲಗೊಂಡಿಲ್ಲ. ಅದರ ಜೊತೆಗೆ ಆತ್ಮ ವಿಮರ್ಶೆಯಲ್ಲಿ ತೊಡಗಿದ ಬೌದ್ಧಿಕ ವರ್ಗ ತನ್ನ ಸಮುದಾಯದ ಒಳಗಿನ ಹುಳುಕುಗಳನ್ನು ಎತ್ತಿ ಹಿಡಿದು ಅದರ ಸುಧಾರಣಾ ಪ್ರಯತ್ನಗಳನ್ನು ನಡೆಸಿದೆ. ಉದಾ­ಹರಣೆಯಾಗಿ ಸುಮಾರು ಎರಡು ಶತಮಾನಗಳ ಹಿಂದೆ ಸತಿ ಪದ್ಧತಿ, ಮೂರ್ತಿ ಪೂಜೆಗಳ ಬಗ್ಗೆ ಬ್ರಹ್ಮ ಸಮಾಜದ ಖಂಡನೆ ಆತ್ಮಾವ­ಲೋಕನದಲ್ಲಿ ಹುಟ್ಟಿದ ಹೋರಾಟಗಳೇ ಆಗಿವೆ.
ಆತ್ಮ ವಿಮರ್ಶೆ ಮಾಡಿಕೊಳ್ಳಲಾರದ ಸಮುದಾಯ­ಗಳಿಗೆ ಅವು ಎಸಗಿರಬಹುದಾದ ಅಪರಾಧದ ಎಚ್ಚರವೂ ಇರುವುದಿಲ್ಲ. ದಲಿತ ಚಳವಳಿ ಜಾತಿ ವ್ಯವಸ್ಥೆಯನ್ನು ಜಾಡಿಸಿದಾಗ ಅದರ ಹಿಂದೆ ತೂಗಾಡುವ ಪ್ರೇತರೂಪಗಳಲ್ಲಿ ಭೂ ಜಮೀನುದಾರರೂ ಕಾಣಿಸಿಕೊಳ್ಳುತ್ತಾರೆ. ಇಡೀ ಭಾರತವನ್ನು ಕುರಿತು ಹೇಳುವಾಗ ಭೂ ಜಮೀನುದಾರ ವರ್ಗವೆಂಬ ಸಾರ್ವತ್ರಿಕವಾದ ಪದವೊಂದನ್ನು ಬಳಸಿದರೂ ಇಲ್ಲಿ ಇದು ಕರ್ನಾಟಕದ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ಅನ್ವಯಿಸುತ್ತದೆ. ಗೌಡ, ಹೆಗ್ಗಡೆ, ಭಂಟ, ಪಟೇಲ, ರೆಡ್ಡಿ ಇತ್ಯಾದಿ ಜಾತಿಸೂಚಕ ನಾಮಧೇಯಗಳಿಂದ ಕರೆಸಿ ಕೊಳ್ಳುವವರು ಭೂ ಒಡೆತನ ಹೊಂದಿರುವ ಜಾತಿ­ಗಳು. ಲಿಂಗಾಯತರಲ್ಲಿ ಬಹು ಸಂಖ್ಯಾತರು ರೈತರೇ . ಆದರೂ ಉಳಿದ ಹಲವು ಕಸುಬಿನ ಮೂಲದಿಂದ ಬಂದವರೂ ಇದ್ದಾರೆ. ಆದರೂ ಅದು ಒಂದು ಜಾತಿಯಾಗಿ ಕಾಣಿಸಿಕೊಳ್ಳುವುದ­ರಿಂದಲೇ ರಾಜಕೀಯ ಶಕ್ತಿಯಾಗಿ ಅಧಿಕಾರಕ್ಕೆ ಬರಲು ಕಾರಣವಾಗಿದೆ ಎನ್ನುವುದರಲ್ಲಿ ಅನು­ಮಾನವಿಲ್ಲ.
ಹಾಗಾಗಿಯೇ ಕರ್ನಾಟಕದಲ್ಲಿ ಇಪ್ಪತ್ತ ಮೂರು  ಜನ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳಲ್ಲಿ ಹೆಚ್ಚು ಮಂದಿ ಲಿಂಗಾಯತರು ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಹನ್ನೆರಡನೆ ಶತಮಾನದ ವಚನ ಚಳವಳಿ ಸಮಾಜದ ಅಂಕು ಡೊಂಕುಗಳನ್ನು ವಿಮರ್ಶೆಗೆ ಒಳಪಡಿಸಿತು. ಆದರೆ ಜಾತಿಯ ಕಡೆಗೆ ದಾಪುಗಾಲು ಹಾಕಿದಾಗ ವೈಚಾರಿಕ ಪ್ರಶ್ನೆಗಳು ಗಾಳಿಕೋಲುಗಳಾದವು. ಉಳಿದ ಸಮುದಾಯಗಳನ್ನು ಮೀರಿ ಏರು­ನಡೆದಂತೆ ಜಾತಿ ವ್ಯವಸ್ಥೆಯ ವಕ್ರತೆಗಳನ್ನು ತನ್ನದಾಗಿಸಿಕೊಂಡಿತು. ತಲೆಯೆತ್ತಿದ ಮಠಗಳು ಜಾತಿ ರಾಜಕಾರಣಕ್ಕೆ ಹಿಡಿದ ಕೊಡೆಗಳಾದವು.
ಒಕ್ಕಲುತನವೇ ಜಾತಿ ಸೂಚಕವಾಗಿ ಕರೆಸಿ­ಕೊಳ್ಳುವ ಒಕ್ಕಲಿಗರು ಹಳ್ಳಿಯ ಮಟ್ಟದ ಜಾತಿ ವ್ಯವಸ್ಥೆಯ ಸ್ಥಿರೀಕರಣಕ್ಕೆ ಪಾಲುದಾರ­ರಾದ­ದ್ದನ್ನು ತನ್ನ ಚರಿತ್ರೆಯ ಆತ್ಮಸಾಕ್ಷಿಯಲ್ಲಿ ಕಂಡು­ಕೊಳ್ಳಬೇಕಾಗಿದೆ. ಭೂಮಿ ಮೇಲಿನ ಒಡೆತನ­ವನ್ನು ಸಾಧಿಸಿದ ಕಾರಣಕ್ಕೆ ಒಕ್ಕಲಿಗರು ಉಳಿದ ಸಮುದಾಯಗಳನ್ನು ತನ್ನ ಅಡಿಯಲ್ಲಿರಿಸಿ­ಕೊಂಡು ಅವರೆಲ್ಲರ ದುಡಿಮೆಯ ಲಾಭವನ್ನು ಪಡೆದುಕೊಳ್ಳುತ್ತಾ ಬಂದಿದೆ. ಅದರ ಭಾಗವಾಗಿ ಅಸ್ಪೃಶ್ಯತೆಯನ್ನು ಗೊಬ್ಬರನೀರು ಹಾಕಿ ಕಾಪಾಡಿಕೊಂಡು ಬಂದಿದೆ. ತಮ್ಮ ಜಾತಿಯ ಸಂಖ್ಯಾ ಬಾಹುಳ್ಯದ ಲಾಭ ಪಡೆದು  ಉಳಿದ  ಸಮುದಾಯಗಳ ಭೂಮಿಯನ್ನು ಕಬಳಿಸುವ ಕೆಲಸ ಶತಮಾನಗಳಿಂದ ನಡೆದಿದೆ.
ಆ ಊರಿನ ಮಟ್ಟಕ್ಕೆ ಯಾರು ಸಣ್ಣ ಪುಟ್ಟ ಜಾತಿಗಳಾಗು­ತ್ತಾರೊ ಅವರ ಭೂಮಿಗಳು ಸಾಲಕ್ಕೆ ಅಡ­ವಿಟ್ಟೋ, ಬಡತನಕ್ಕೆ ಮಾರಬೇಕಾದ ಅನಿವಾರ್ಯ­ತೆ­­ಯನ್ನು ಬಳಸಿಕೊಂಡೋ; ಹತ್ತು ಹಲವು ನೆಪಗಳನ್ನು ಹೇಳುತ್ತಾ ಸುತ್ತಮುತ್ತಲ ಭೂಮಿಯನ್ನು ವಶಪಡಿಸಿಕೊಳ್ಳುತ್ತಾ ಬಂದಿವೆ. ಅದರ ವಿರುದ್ಧ ದನಿ ಎತ್ತುವ ಸ್ಥಿತಿ ಹಿಂದುಳಿದ ಜಾತಿಗಳಿಗಿರದೇ ಹೋದದ್ದು ಕಟುಸತ್ಯ. ಹಾಗೆ ದನಿ ಎತ್ತಿದವರ ಮೇಲೆ ತೋರಿದ ದರ್ಪವನ್ನು ಊಳಿಗಮಾನ್ಯ ವ್ಯವಸ್ಥೆಯ ವಿಕಾರ ರೂಪ­ವೆಂದು ಅರ್ಥವಾಗಲು ಮಾರ್ಕ್ಸ್‌ವಾದ, ಸಮಾಜ­ವಾದದಂತಹ ಚಿಂತನೆಗಳು ನೆರ­ವಾದವು. ಭೂ ಒಡೆತನದ ಕಾರಣದಿಂದಾಗಿ ರೂಪುಗೊಂಡ ಮೇಲು ಕೀಳಿನ ಭಾವನೆ ಇದು ಎಂದು ತೋರಿಸಿಕೊಡಲು ಆಧುನಿಕವಾದ ಚಿಂತನೆಗಳಿಗೆ ಸಾಧ್ಯವಾಗಿದೆ. ಆದರೆ ಆ ದಿಕ್ಕಿನಲ್ಲಿ ಬದಲಾವಣೆ ಸಾಧ್ಯವಾಗಲಿಲ್ಲ.
ಇಪ್ಪತ್ತನೆ ಶತಮಾನದಲ್ಲಿ ಊಳಿಗಮಾನ್ಯ ವ್ಯವಸ್ಥೆಯನ್ನು ವಿರೋಧಿಸಿ ಮಾತನಾಡ ತೊಡಗಿ­ದಾಗ ಜಾತಿನೆಲೆಯ ಭಾರತ ಸಮಾಜಕ್ಕೆ ಅದು ಸರಿಯಾಗಿ ಅರ್ಥವಾಗಲು ಸಾಧ್ಯವಿರಲಿಲ್ಲ. ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ರಾಷ್ಟ್ರ ನಾಯಕರಿಗೆ ಅರ್ಥವಾದರೂ ಭೂಮಿ ಇಲ್ಲದ­ವರ ಪರವಾಗಿ ಮಾತನಾಡಲು ಅವರಿಗಿನ್ನೂ ಬೇಕಾಗಿರಲಿಲ್ಲ. ಬ್ರಿಟಿಷ್ ವಿರೋಧವನ್ನು ಮುಖ್ಯ ಗುರಿಯಾಗಿಸಿಕೊಂಡ ರಾಷ್ಟ್ರೀಯ ಕಾಂಗ್ರೆಸ್ ಸಾಮಾಜಿಕ ಅಸಮತೋಲನಗಳ ಕಡೆ ಗಮನ ಹರಿಸಲಿಲ್ಲ. ಗಾಂಧೀಜಿ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಕಟ್ಟಿಕೊಂಡರು. ಜಾತಿ ವ್ಯವಸ್ಥೆ­ಯಲ್ಲಿ ಶ್ರಮ ವಿಭಜನೆಯ ತತ್ವ ಅಡಗಿದೆ­ಯೆಂದು ಪುರಾತನ ವಾದವನ್ನೇ ನಂಬಿದರು. ಜಾತಿ ಎನ್ನುವುದು ಶೋಷಣೆಯ ನೆಲೆಯಲ್ಲಿ ಗಟ್ಟಿಗೊಂಡ ಸಾಮಾಜಿಕ ರಚನೆ ಎಂದು ಮನಗಾಣಲಿಲ್ಲ.
ಶೋಷಿತ ಸಮುದಾಯದ ಪರವಾಗಿ ದನಿ ಎತ್ತಿದ ಬಾಬಾ ಸಾಹೇಬರಿಗೆ ಹಳ್ಳಿಗಳು ಜಾತಿ ಸಂಪ್ರದಾಯಗಳಿಂದ ಕೊಳೆತು ನಾರುವ ಕೂಪಗಳಾಗಿ ಕಂಡವು. ಸ್ವಾತಂತ್ರ್ಯಾನಂತರದ ಭಾರತ  ಪ್ರಜಾಪ್ರಭುತ್ವ­ವನ್ನು ಒಪ್ಪಿಕೊಳ್ಳಲಾಗಿ ಬಹುಸಂಖ್ಯಾತರ ದನಿಗೆ ಶಕ್ತಿನೀಡಿತು. ಸಹಜವಾಗಿ ಮೊದಲ ಹಂತದಲ್ಲಿ ಪ್ರಬಲ ಹಾಗೂ ಬಹು ಸಂಖ್ಯಾತ ಕೋಮಿನವರು ರಾಜಕೀಯ ಚುಕ್ಕಾಣಿ ಹಿಡಿದರು. ಸಂವಿಧಾನ ಬಯಸಿದ ಸಮಾಜವಾದಿ ನೆಲೆಯ ಚಿಂತನೆಯ ಒತ್ತಾಸೆಗಳು ಆಗಾಗ ಪುಟಿದೆದ್ದು ಜೀತ ಪದ್ಧತಿ ನಿಷೇಧ ಕಾಯಿದೆ, ಭೂ ಒಡೆತನದ ಮೇಲಿನ ನಿರ್ಬಂಧ, ಉಳುವವನೆ ಭೂ ಒಡೆಯ ಈ ಕಾಯಿದೆಗಳು ಬಂದಾಗ ಭೂ ಮಾಲೀಕ ಜಾತಿಗಳಿಗೆ ಇರುಸು ಮುರುಸೇ ಆಯಿತು.
ಭೂ ಹಂಚಿಕೆಯ ಮೂಲಕ ಸಮ ಸಮಾಜದ ಆದರ್ಶ ಮಾತ್ರ ಹಳೆಯ ಕನಸಾಗಿ ಹಾಗೆ ಮರೆತು ಹೋಯಿತು. ಈ ನಿಟ್ಟಿನಲ್ಲಿ ಕಾಗೋಡಿನಲ್ಲಿ ನಡೆದ ಭೂ ಹೋರಾಟ ಸಮಾಜವಾದಿ ಹೋರಾಟದ ಒಂದು  ಪ್ರಯೋಗ­ವಾಯಿತು. ವಿನೋಬಾ ಭಾವೆಯವರ ಭೂದಾನ ಚಳವಳಿ ದೊಡ್ಡ ಜಮೀನ್ದಾರರಿಗೆ ವರದಾನವೇ ಆಯಿತು. ಇಂತಹ ಹಲವು ಪ್ರಯತ್ನ­ಗಳ ಫಲವಾಗಿ ಆದಿವಾಸಿಗಳು, ದಲಿತರು, ಅಲೆಮಾರಿಗಳಿಗೆ ಸರ್ಕಾರ ಭೂ ಹಂಚುವ ಯೋಜನೆಗಳನ್ನು ರೂಪಿಸಿದೆ. ಇವೆಲ್ಲಾ ಸಣ್ಣ ಪ್ರಮಾಣದಲ್ಲಾದರೂ ಅಭಿ­ನಂದನೀಯವಾದ ಪ್ರಯತ್ನವೆಂದೇ ಹೇಳಬೇಕು.
ಕರ್ನಾಟಕದಲ್ಲಿ ಆರಂಭವಾದ ರೈತ ಸಂಘ ತನ್ನ ಹೋರಾಟದಲ್ಲಿ  ಭೂ ಹಂಚಿಕೆಯನ್ನು ಮಖ್ಯ ಪ್ರಶ್ನೆಯಾಗಿ ಇರಿಸಿಕೊಳ್ಳಲೇ ಇಲ್ಲ. ರೈತರ ಹಿತ ಕಾಪಾಡುವುದು ಅದರ ಉದ್ದೇಶ­ವಾಯಿತು. ಅಲ್ಲಿ ಜಾತಿ ತಾರತಮ್ಯದ ಪ್ರಶ್ನೆ ಮುಂದಾಗಲಿಲ್ಲ. ಗಾಂಧೀ ಮಾದರಿ ಆದರ್ಶ ಹಳ್ಳಿಗಳನ್ನು ಬಯಸಿತು. ಅಂದರೆ ಭೂಮಿಯುಳ್ಳ ರೈತರ ಸಮಸ್ಯೆ ಮುಖ್ಯವಾಯಿತೇ ಹೊರತು ಭೂ ಹೀನರ ಸಮಸ್ಯೆಗೆ ಪರಿಹಾರ ಕಾಣಲಿಲ್ಲ. ಪ್ರಾಂತ್ಯ ರೈತ ಸಂಘ ಕೃಷಿ ಕೂಲಿ ಕಾರ್ಮಿಕರ ಪರವಾಗಿ ನಿಲ್ಲುತ್ತದೆ. ಅಲ್ಲೂ ಜಾತಿ ಹಿನ್ನೆಲೆಯ ತಾರ­ತಮ್ಯದ ಪ್ರಶ್ನೆ ಹಾಗೆ ಉಳಿಯುತ್ತದೆ. ಕೂಲಿ- ದುಡಿಮೆ ಈ ಸಂಬಂಧವಾದ ವಿಚಾರಗಳು ಚರ್ಚಿತವಾಗುತ್ತವೆ, ಪರಿಹಾರಗಳನ್ನೂ ಕೆಲ­ಹಂತಕ್ಕೆ ಪಡೆಯಲು ಸಾಧ್ಯವಾಗಿದೆ. ಈ ಎಲ್ಲಾ ಹೋರಾಟಗಳು, ಚಿಂತನೆಗಳು, ಸುಧಾರಣೆಗಳು ಜಾತಿ ಹಿನ್ನೆಲೆಯ ಶೋಷಣೆಯನ್ನು  ಸಣ್ಣ ಪ್ರಮಾಣದಲ್ಲಾದರೂ ಕಡಿಮೆಯಾಗಿಸಿದೆ ನಿಜ. ಆದರೆ ಶತಮಾನಗಳಿಂದ ಮಾಡಿದ ಗಾಯಗಳನ್ನು ಸುಲಭವಾಗಿ ಅಳಿಸಿಹಾಕಲು ಸಾಧ್ಯವಾಗಿಲ್ಲ.
ದುರಂತವೆಂದರೆ ಹಳ್ಳಿಯಿಂದ ಹೊರ ಬಂದೂ ತಮ್ಮ ಜಾತಿಯ ಮೂಲ ಗುಣವನ್ನು ಬಿಟ್ಟು ಕೊಡಲಾಗದೆ ಅದನ್ನು ರಾಜಕೀಯ ಗುರುತಾಗಿಸಿಕೊಳ್ಳಲಾಗುತ್ತದೆ. ಇದು ಹಲವು ಆಯಾಮಗಳನ್ನು ಪಡೆದುಕೊಂಡಿದೆ. ಪ್ರಸಕ್ತ­ದಲ್ಲಿ ನಮ್ಮ ಮುಂದಿರುವ ಸವಾಲು ಇದೇ ಆಗಿದೆ.
ಕರ್ನಾಟಕದ ರಾಜಕೀಯದಲ್ಲಿ ಒಕ್ಕಲಿಗ ಜಾತಿ ಐಡೆಂಟಿಟಿಯನ್ನು ಲಾಭಮಾಡಿಕೊಳ್ಳಲು ಜೆಡಿಎಸ್‌ಗೆ ಸಾಧ್ಯವಾಯಿತು. ಹಾಗೆಯೇ ದೇವೇಗೌಡರು ಅಥವಾ ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ಸಮಯದಲ್ಲಿ ಅವರ ನಾಮಾಂಕಿತದ ಬಲವನ್ನು ಜಾತಿಯ ಜನ ತಮ್ಮ ಮಟ್ಟದ ರಾಜಕೀಯಕ್ಕೆ ಬಳಸಿಕೊಳ್ಳಲು ಹಿಂದೆ­ಬೀಳಲಿಲ್ಲ. ಉಳಿದವರು ಒಕ್ಕಲಿಗರ ಈ ನಡೆಗೆ ರೋಸಿಹೋಗಿ ಮೊದಲೇ ಒಕ್ಕಲಿಗರು ಅದರ ಜೊತೆಗೆ ಅಧಕಾರವೂ ಸೇರಿದರೆ...ಹೀಗೆ ಮಾತ­ನಾಡಿಕೊಳ್ಳುವುದು ಸಾಮಾನ್ಯವಾದ ವಿಷಯ­ವಾಗಿದೆ. ಇದು ಜಾತಿ ಹಿನ್ನೆಲೆಯ ಸ್ವಭಾವಕ್ಕೆ ಹಿಡಿದ ಕನ್ನಡಿಯಾಗದಂತೆ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ.
ಮೊನ್ನೆಯಷ್ಟೆ ಡಿಕೆ ಶಿವಕುಮಾರ್ ಒಕ್ಕಲಿಗರ ಸಂಘವನ್ನು ಉದ್ದೇಶಿಸಿ ಮಾತನಾಡುತ್ತಾ ಜಾತಿ ಪ್ರತಿನಿಧಿಯಾಗಿ ತನ್ನಲ್ಲಿ ನಾಯಕತ್ವವನ್ನು ಕಾಣಲು ಬಯಸುವುದು; ಇಂತಹ ಚರ್ಚೆಗಳನ್ನು ಕೈಗೆತ್ತಿಕೊಳ್ಳುವಂತೆ ಮಾಡುತ್ತದೆ. ಒಕ್ಕಲಿಗರ ಸಂಘದ ಹುಟ್ಟಿನ ಉದ್ದೇಶಗಳೇ ಮರೆತು ಹೋಗಿವೆ. ೧೯೦೬ರ ಹೊತ್ತಿಗೆ  ಹಿಂದುಳಿದ ಕೃಷಿಕ ಸಮುದಾಯದ ಶೈಕ್ಷಣಿಕ ಬೆಳವಣಿಗೆಗಾಗಿ ಹುಟ್ಟಿದ ಸಂಸ್ಥೆ. ಇದು ಮೈಸೂರು ಪ್ರಾಂತ್ಯದಲ್ಲಿ ನಡೆದ ಹಿಂದುಳಿದ ಚಳವಳಿಯಲ್ಲಿ ಅದರ ಪಾತ್ರ ಬಹು ಮುಖ್ಯವಾಗಿತ್ತು. ಅದು ಇತ್ತೀಚಿನ ದಿನಗಳಲ್ಲಿ ಪಡೆಯುತ್ತಿರುವ ರಾಜಕೀಯ ಸ್ವರೂಪ ಯಾವುದೇ ಜಾತಿ ಸಂಘಟನೆಗಳ ಸಾಲಿಗೆ ಬಂದು ನಿಲ್ಲುತ್ತದೆ, ಮತ್ತು ಚುನಾವಣಾ ರಾಜಕೀಯ­ದಲ್ಲಿ ಜಾತಿ ಧ್ರುವೀಕರಣಕ್ಕೆ ಬಳಕೆ­ಯಾಗುವ ಎಲ್ಲಾ ಲಕ್ಷಣಗಳೂ ಕಾಣತೊಡಗಿವೆ.
ಭೂ ಒಡೆತನ ಅದು ಎರಡು ಎಕರೆಯಾಗಲೀ ಎರಡು ಸಾವಿರವಾಗಲೀ ಆತ್ಮವಿಶ್ವಾಸ ಆತ್ಮಾಭಿಮಾನವನ್ನು ಮೀರಿ ಅಹಮಿಕೆಯನ್ನು ಹುಟ್ಟುಹಾಕುತ್ತದೆ. ಅದರಲ್ಲೂ ಭೂಮಿ ಇಲ್ಲದ ಜಾತಿಯ ಜನರೆದುರು ಬುಸುಗುಡುತ್ತದೆ. ಭೂಮಿ ಬಂಡವಾಳವಾಗಿ ಶಿಕ್ಷಣವನ್ನು ಪಡೆದು ಉನ್ನತ ಹುದ್ದೆಗಳನ್ನು ಪಡೆದಾಗಲು ಆಡು ಭಾಷೆ ಮತ್ತು ಆಂಗಿಕ ಅಭಿವ್ಯಕ್ತಿಗಳಲ್ಲಿ ಜಾತಿಯ ಮೂಲ ನಡೆಗಳೇನೋ ಎನ್ನುವಂತೆ ಪ್ರಕಟ­ಗೊಳ್ಳುತ್ತವೆ. ಇಂತಹ ನಡೆಯನ್ನು ಸೆರೆ ಹಿಡಿಯುವಲ್ಲಿ ತೆಲುಗು ಸಿನಿಮಾಗಳು ಹೆಚ್ಚು ಯಶಸ್ವಿಯಾಗಿವೆ.
ಹಳೆಪಾಳೆಗಾರಿ ಮೌಲ್ಯ­ಗಳನ್ನೇ ಆದರ್ಶವೆಂದು ಭಾವಿಸುತ್ತಾ ಹುಸಿ ಪ್ರತಿಷ್ಠೆಗಾಗಿ ಸಮುದಾಯ ನರಳುತ್ತದೆ. ಆದರೆ ಆ ನಡೆಗಳು ಪ್ರಜಾಪ್ರಭುತ್ವಕ್ಕೆ ವಿರೋಧಿಯಾದ ನಡೆಗಳೆಂಬುದೂ ಅದರ ಅರಿವಿಗೆ ಬರದೆ ಹೋಗುತ್ತದೆ. ಈಗಾಗಲೇ ಶಿಕ್ಷಣವನ್ನು ಪಡೆದು, ನಗರಗಳಲ್ಲಿ ನೆಲೆನಿಂತು ಎರಡು ಮೂರನೆ ಪೀಳಿಗೆಯಾದರೂ ಇನ್ನೂ ಅಸಹಾಯಕ ಸಮುದಾಯ­ಗಳ ಮೇಲೆ ದೌರ್ಜನ್ಯ ಎಸಗುವ ಹಂತದಲ್ಲಿ ಉಳಿಯುವುದು ಸಾಂಸ್ಕೃತಿಕ ದಾರಿದ್ರ್ಯವೇ ಆಗುತ್ತದೆ.
ಧಾರ್ಮಿಕ ಸಂಸ್ಥೆಗಳು ಸಾಂಸ್ಕೃತಿಕ ಮೌಲ್ಯ­ಗಳನ್ನು ರೂಪಿಸಬೇಕಾದ ಸಾಂಪ್ರದಾಯಿಕ ಜವಾಬ್ದಾರಿಯನ್ನು ಹೊರುತ್ತವೆ. ಆದರೆ ಶೂದ್ರ ಸಮುದಾಯಗಳು ಕಟ್ಟಿಕೊಳ್ಳುವ ಮಠಗಳು ಬಾಹ್ಮಣ ಇಲ್ಲವೆ ವೀರಶೈವ ಮಠಗಳನ್ನು ಅನುಸರಿಸುತ್ತಾ ಅವರ ಸಮಾನವಾಗಿ ನಿಲ್ಲುವ ಪೈಪೋಟಿಗೆ ಬೀಳುತ್ತವೆ. ಆದಿ ಚುಂಚನಗಿರಿ ಮಠ ಆರಂಭದಲ್ಲಿ ಜಾತಿಯ ಬಲಾಬಲವನ್ನು ಗಟ್ಟಿ­ಗೊಳಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಬಾಲಗಂಗಾಧರ ನಾಥ ಸ್ವಾಮೀಜಿಯವರು ಅದನ್ನು ಆರ್ಥಿಕವಾಗಿ ಬಲಪಡಿಸಿದ್ದು ಜಾತಿಯ ಪ್ರಾತಿನಿಧಿಕ ಸ್ಥಾನಕ್ಕೆ ಕೊಂಡೊಯ್ಯಲು ಹಿಂದೆ ಬೀಳಲಿಲ್ಲ. ಯಾವಜಾತಿಗೂ ಸೇರದ ಮೂಲ­ದಲ್ಲಿ  ನಾಥಪಂಥಕ್ಕೆ ಸೇರಿದ ಆದಿಚುಂಚನಗಿರಿ ಮಠ ಒಕ್ಕಲಿಗರ ಮಠವಾಗಿ ಉಳಿದ ಸಮುದಾಯ­ಗಳ ಅಸ್ತಿತ್ವವನ್ನು ಕಿತ್ತು ಕೊಂಡುದು-  ಚರಿತ್ರೆ ಮೌನವಾದರೂ ಆತ್ಮಸಾಕ್ಷಿ ಮೌನವಾಗಬಲ್ಲದೆ?
ಹಿಂದುಳಿದ ಸಮುದಾಯಗಳು ತಮ್ಮ ಜಾತಿಯ ಐಡೆಂಟಿಟಿಯನ್ನು ಹುಡುಕುತ್ತಾ  ಪುರಾಣ, ಚರಿತ್ರೆ ಸಾಹಿತ್ಯದಲ್ಲೆಲ್ಲಾ ಐಕಾನ್‌­ಗಳನ್ನು ಹುಡುಕಿಕೊಳ್ಳುತ್ತವೆ. ಆ ಪೈಪೋಟಿ­ಯಲ್ಲಿ ಒಕ್ಕಲಿಗರು ಹಿಂದೆ ಬೀಳಲಿಲ್ಲ. ಬೆಂಗಳೂರು ಕೆಂಪೇಗೌಡರನ್ನು ಸಾಂಸ್ಕೃತಿಕ ನಾಯಕನೆಂದು ಕರೆಯಲಾಗಿ  ಹೆಸರು ಎಲ್ಲೆಲ್ಲೂ ರಾರಾಜಿಸತೊಡಗಿತು. ನಗರ ಬಡಾವಣೆ, ರಸ್ತೆ, ಬಸ್ ನಿಲ್ದಾಣ ಕಡೆಗೆ ವಿಮಾನ ನಿಲ್ದಾಣಕ್ಕೂ ಕೆಂಪೇಗೌಡರ ಹೆಸರನ್ನು ಹಚ್ಚುವಾಗ ಜಾತಿ ಬಲದ ರಾಜಕಾರಣ ಕೆಲಸಮಾಡುತ್ತದೆ. ಜಾತಿಯ ಜನರ ‘ಈಗೊ’ ತೃಪ್ತಿಪಡಿಸಲು ಸರ್ಕಾರ ಕಂಡುಕೊಳ್ಳುವ ಸುಲಭದ ತಂತ್ರವೂ ಆಗುತ್ತದೆ.
ದೊಡ್ಡ ವಿಪರ್ಯಾಸ ವೆಂದರೆ ಕುವೆಂಪು ಹೆಸರು ಜಾತಿ ಸೂಚಕವಾಗಿ ಬಳಕೆಯಾಗುತ್ತಿದ್ದು, ಜಾತಿ ಸಂಘಟನೆಗೆ ಅನಿಕೇತನ, ವಿಶ್ವಮಾನವ ಎಂಬ ಹೆಸರುಗಳನ್ನು ಇರಿಸುವ ವಿರೋದಾಭಾಸಗಳು ನಡೆದಿವೆ. ತಮ್ಮ ಜಾತಿಯ ನಾಯಕ ಗೆದ್ದಾಗ ಅಬ್ಬರಿ­ಸುವ, ತಮ್ಮ ಜಾತಿಯ ಅಹಮಿಕೆಯಿಂದಾಗಿ ಅಸಹಾಯಕ ಸಮುದಾಯಗಳ ಮೇಲೆ ಎಸಗಿರುವ ದೌರ್ಜನ್ಯ, ಮರ್ಯಾದಾ ಹತ್ಯೆ, ದಲಿತರ ಮೇಲಿನ ಕ್ರೌರ್ಯಗಳಂತಹ ಲಜ್ಜೆಗೇಡಿ­ತನದ ನಡೆಯನ್ನು ಆತ್ಮ ವಿಮರ್ಶೆ­ಗೊಳಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಮತದಾನದ ಹಿಂದೊಂದು ಕರಿನೆರಳು

Tue, 15th Apr, 2014
‘ಸ್ವಾಮಿಯೋರು ಒಂದು ಮಾತು ಹೇಳಿ­ದರೆ ಸಾಕು, ಯಾರೂ ನಿಮ್ಮನ್ನ ಅಲ್ಲಾಡಿಸೋಕೆ ಆಗಲ್ಲ ಬಿಡಿ. ಏನಿಲ್ಲಾ ಅಂದ್ರೂ ಈ ಮಠಕ್ಕೆ ಹತ್ತು ಸಾವಿರ ವೋಟು ಇದೆ’.  ಏನಿದರ ಅರ್ಥ? ಈ ಭಾಷೆ ಚುನಾವಣಾ ಸಮಯ­ದಲ್ಲಿ ಯಾರಿಗೆ ಅರ್ಥ ಆಗಲ್ಲ. ‘ಈ ಸಾರಿ ಇಂತಹವರಿಗೆ ಮಾಡೋಣ ಬಿಡಿ’ ಅಂತ ಅವರೇನಾದ್ರೂ ಅಂದ್ರೆ ಮುಗಿಯಿತು, ಚುನಾ­ವಣಾ ಅಭ್ಯರ್ಥಿ ಗೆದ್ದಂತೇ ಸರಿ. ಹಾಗಂತ ಭಾವಿ­ಸು­ತ್ತಾರೆ.
ಸ್ವಾಮಿಯೋರನ್ನ ‘ಹ್ಞೂಂ’ ಅನ್ನಿ­ಸೋದು ಪಕ್ಷದ ಟಿಕೆಟ್‌ ಪಡೆದಷ್ಟೇ ಕಷ್ಟವಾ­ಗಿ­ರು­ತ್ತದೆ. ಎಷ್ಟೋ ಬಾರಿ ಬುದ್ಧಿಯೋರು ‘ಆಗಲಿ’ ಅಂದಮೇಲೆ ನಾಮಪತ್ರ ಸಲ್ಲಿಸೋದು ಇರುತ್ತೆ. ಭಾರತದ ಚುನಾವಣಾ ರಾಜಕೀಯದಲ್ಲಿ ಮಠ­ಗಳು ನಿರ್ಣಾಯಕವಾಗುವುದು ಹೊಸ­ದೇನೂ ಅಲ್ಲ. ದಶಕಗಳಿಂದಲೂ ಕರ್ನಾಟಕದ ಪ್ರಮುಖ ಮಠಗಳೆಲ್ಲಾ ತಮ್ಮ ರಾಜಕೀಯ ಬೆಂಬಲವನ್ನು ಬಹಿರಂಗವಾಗಿಯೇ ಸೂಚಿಸುತ್ತಾ ಬಂದಿವೆ. ಸಾಯಿ­ಬಾಬಾರಿಂದ ಪೇಜಾವರರವರೆಗೆ, ಸಿದ್ಧ­ಗಂಗಾ ಮಠ, ಆದಿಚುಂಚನಗಿರಿ ಮಠ, ಸುತ್ತೂರು ಮಠ ಇವುಗಳ  ಆಶೀರ್ವಾದ ರಾಜ­ಕಾರಣಿ­ಗಳಿಗೆ ಅನಿವಾರ್ಯವಾಗುತ್ತದೆ.
ಗಾಂಧೀಜಿ ರಾಜಕೀಯವನ್ನು ಅಧ್ಯಾತ್ಮ­ದೆತ್ತ­ರಕ್ಕೆ ತೆಗೆದುಕೊಂಡು ಹೋಗಲು ಬಯಸಿದ್ದರು. ‘ಅಧ್ಯಾತ್ಮ’ವನ್ನು ಕುರಿತು ಚಿಂತಿಸಬೇಕಾದವರು ರಾಜಕೀಯ ಮಾಡುವುದನ್ನು ಅವರು ಬಯಸಿ­ರ­ಲಿಲ್ಲ.  ಭಾರತ ಧಾರ್ಮಿಕ ದೇಶ. ಆದ್ದರಿಂದ ರಾಜ­ಕೀಯ ಅಭಿಪ್ರಾಯವನ್ನು ರೂಪಿಸುವಲ್ಲಿ ಧಾರ್ಮಿಕ ಸಂಸ್ಥೆಗಳು ಹಿಂದೆ ಬೀಳಲಾರವು. ಚುನಾ­ವಣಾ ಸಂದರ್ಭದಲ್ಲಿ ಯಾವುದೇ ಧಾರ್ಮಿಕ ಸಂಸ್ಥೆಯ ಪಾತ್ರವನ್ನು ಚುನಾವಣಾ ಕಾನೂನು ನಿರಾಕರಿಸುತ್ತದೆ!
ಇಲ್ಲಿ ನಮ್ಮ ಚರ್ಚೆ ಇರುವುದು ಜನರು ಹಾಕುವ ಮತ ಯಾರದು? ಇಲ್ಲಿ ಮತ ಎಂದರೆ  ‘ಅಭಿಪ್ರಾಯ’, ‘ನಿಲುವು’, ‘ಆಯ್ಕೆ’, ‘ಒಲವು’ ಎಂಬ ಅರ್ಥಗಳು ಬರುತ್ತವೆ. ಅಂತಹ ಮತ ಸ್ವತಃ ಮತದಾರನದ್ದೆ ಎನ್ನುವುದೇ ನಮ್ಮ ಇಲ್ಲಿನ ದೊಡ್ಡ ಪ್ರಶ್ನೆಯಾಗಿದೆ. ಮಠಗಳೆಲ್ಲಾ ಜಾತಿ ಆಧಾರಿತವಾದವು. ಅದರಲ್ಲೂ ಉಪಜಾತಿ, ಒಳಜಾತಿಗಳ ಬೆನ್ನಲ್ಲಿ ಹುಟ್ಟಿರುತ್ತವೆ. ಜಾತಿ ಹೆಸರಿನ ಗುಣಾಕಾರ, ಭಾಗಾಕಾರದಲ್ಲಿ ಮಠ­ಗಳು ಘಟಕಗಳಾಗುತ್ತವೆ.
ಮಠಗಳಿಗೆ ನಡೆದು­ಕೊಳ್ಳುವ ಜನರಲ್ಲಿ ಕೆಲವರಾದರೂ ತಮ್ಮ ರಾಜ­ಕೀಯ ನಿಲುವುಗಳನ್ನೂ ತಮ್ಮ ಜಾತಿ ಗುರುವಿನ ಪಾದಕ್ಕೆ ಒತ್ತೆ ಇಟ್ಟಿರುತ್ತಾರೆ. ಅಂದರೆ ಮಠಗಳು ಕೇವಲ ಜಾತಿ ‘ಸಂಸ್ಕೃತಿ’ಯ ರಕ್ಷಕವಾಗಿರದೆ ಅದನ್ನು ರಾಜಕೀಯ ಮತವಾಗಿಸುವ ‘ಏಜೆಂಟ್’ ಪಾತ್ರವನ್ನೂ ವಹಿಸುತ್ತವೆ.  ಅದು ಮಠದ ಭಕ್ತರ ಅರಿವಿಗೆ ಬರುವುದಿಲ್ಲ. ಆ ಲೆಕ್ಕಕ್ಕೆ ಮಠ­ಗಳಿಗೆ ಆದಾಯ ದಾನರೂಪದಲ್ಲಿ ಮಾತ್ರ­ವಲ್ಲ, ವೋಟಿನ ರೂಪದಲ್ಲೂ ಬರುತ್ತದೆ. ಆ ಮಠಕ್ಕಿರುವ ವೋಟಿನ ಶಕ್ತಿಯ ಮೇಲೆ ರಾಜಕೀಯ ಪಕ್ಷಗಳು ಸ್ವಾಮಿಗಳ  ಕಾಲಿಗೆರಗು­ತ್ತವೆ. ಮುಂದೆ ಗೆದ್ದ ರಾಜಕೀಯ ನಾಯಕರು ಮಠಕ್ಕೆ ಎಂಜಿನಿಯರಿಂಗ್ ಅಥವಾ ಮೆಡಿಕಲ್ ಕಾಲೇಜು ಕೊಡಿಸಲು ಸಿದ್ಧರಾಗುತ್ತಾರೆ. ಮಠ­ಗಳಿಗೆ, ದೇವಾಲಯಗಳಿಗೆ ಹಿಂದಿದ್ದ ಸರ್ಕಾರ ಉದಾರವಾಗಿ ಅನುದಾನ ಕೊಟ್ಟಿದ್ದನ್ನು ಇಲ್ಲಿ ನೆನೆಯಬಹುದು.
ಪ್ರಜಾಪ್ರಭುತ್ವದ ಅಂಗವಾಗಿ ಚುನಾವಣೆ­ಯನ್ನು ಒಪ್ಪಿದಾಗ ಸಾಮುದಾಯಿಕ ಮತದಾನ­ವನ್ನು ಎಲ್ಲೂ ಸೂಚಿಸಿಲ್ಲ. ಸಂವಿಧಾನ ರಚನಾ­ಕಾ­ರರು ವ್ಯಕ್ತಿಯನ್ನು ಘಟಕವಾಗಿ ಕಲ್ಪಿಸಿದ್ದರೇ ಹೊರತು ಜಾತಿ, ಧರ್ಮ ಮತ್ತಾವುದೇ ರೀತಿಯ ಸಮೂ­­ಹದ ನೆಲೆಯ ಮತಗಳನ್ನಲ್ಲ. ಆದ್ದರಿಂ­ದಲೇ ಅಂಬೇಡ್ಕರ್ ಅವರು ಪ್ರತ್ಯೇಕ ಮತ­ದಾನದ ಬದಲು ಪ್ರತ್ಯೇಕ ಮತ ಕ್ಷೇತ್ರವನ್ನು ಸೂಚಿಸಿದರು.
ಇನ್ನು ಮುಸಲ್ಮಾನರನ್ನೋ ಕ್ರಿಶ್ಚಿಯನ್ನರನ್ನೋ ಉಲ್ಲೇಖಿಸಿದಾಗ ವ್ಯಕ್ತಿ ನೆಲೆಯಲ್ಲಿ  ಗುರುತಿಸು­ವುದು ಬಹಳ ಕಡಿಮೆ. ಅಲ್ಲಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಾಗುತ್ತದೆ. ಚರ್ಚ್‌ನ ಹುಲ್ಲು ಕಡ್ಡಿಯನ್ನು ಅಲ್ಲಾಡಿಸಬೇಕಾದರೂ ಬಿಷಪ್‌ರ ಅನುಮತಿಯನ್ನು ನಿರೀಕ್ಷಿಸುವ ಅಲ್ಲಿಯ ಜನ, ಮತ ಚಲಾಯಿಸುವಂತಹ ಗುರು­ತರ­ವಾದ ಜವಾಬ್ದಾರಿಯ ಸಂದರ್ಭದಲ್ಲಿ ತಾವೇ ನಿರ್ಣಯವನ್ನು ತೆಗೆದುಕೊಳ್ಳಬಲ್ಲರೆ? ಅದೇ ರೀತಿ ಮುಸಲ್ಮಾನರ ವೋಟು, ವ್ಯಕ್ತಿ ನೆಲೆಯಲ್ಲಿ ಕೈಗೊಂಡ ತೀರ್ಮಾನವಾಗಲು ಸಾಧ್ಯವೇ? ಅಂದರೆ ತಮ್ಮ ಧರ್ಮದ ಜನರ  ರಾಜಕೀಯ ಅಭಿಪ್ರಾಯವನ್ನು ರೂಪಿಸುವಾಗ ಧಾರ್ಮಿಕ ಸಂಸ್ಥೆಗಳು ಹಿಂದೆ ಬೀಳಲಾರವು.
ಮಠಗಳಿಲ್ಲದ ಸಮುದಾಯಗಳ ವೋಟಿನ ಒಡೆತನ ಆಯಾ ಜಾತಿಯ ನಾಯಕರ ಕೈಯಲ್ಲಿ­ರುತ್ತದೆ. ಹಾಗಾಗಿ ಆ ಜಾತಿಯ ನಾಯಕರನ್ನು ಆಮಿಷಕ್ಕೆ ಒಳಪಡಿಸಲಾಗುತ್ತದೆ. ಸಣ್ಣ ಪುಟ್ಟ ಸಮುದಾಯಗಳ ಮೇಲೆ ಬಲಿಷ್ಠ ಕೋಮಿನವರ ಹಿಡಿತ ಹಳ್ಳಿಯ ಮಟ್ಟದಲ್ಲಿ ಇದ್ದೇ ಇರುತ್ತದೆ. ಇಲ್ಲಿ ಮತಗಳ ಹಿಂದಿನ ಮೆದುಳು ಊರ ಮುಖಂಡರು ಇಲ್ಲವೆ ಜಾತಿ ಮುಖಂಡರ ಕೈಯಲ್ಲಿರುತ್ತದೆ.  ‘ಸುತ್ತಲಿನ ಏಳು ಹಳ್ಳಿಗಳಲ್ಲಿ ಗೌಡರ ಮಾತೇ ನಡೆಯುವುದು’ ಎಂದೇ ಜನ ವ್ಯಕ್ತಿಯ ಶಕ್ತಿಯನ್ನು ಗುರುತಿಸಿ ಹೇಳುತ್ತಾರೆ. ಅವರ ಮಾತಿನಂತೆ ವೋಟು ಹಾಕುವುದು ನಿಜವೇ ಆಗಿರುತ್ತದೆ.
ಬೇರೆಯವರ ಅಭಿ­ಪ್ರಾಯದ ಮೇಲೆ ತನ್ನ ಹಕ್ಕನ್ನು ಸಾಧಿಸುವುದು ಈ ನಾಯಕರ  ಪ್ರತಿಷ್ಠೆಯ ಸಂಕೇತವಾ­ಗಿ­ರುವುದನ್ನು ನಾವು ಇಂದು ಗಮನಿಸಬೇಕಾಗಿದೆ.
ಹಳ್ಳಿಗಳಲ್ಲಿ ರಾಜಕೀಯ ಜ್ಞಾನದ ಕೊರತೆ ಇರುವವರೆಲ್ಲರೂ ಮತ ಚಲಾವಣೆಯ ಹೊತ್ತಿಗೆ  ರಾಜಕೀಯವಾಗಿ ಪ್ರಾಜ್ಞರೆನಿಸಿಕೊಂಡವರ ಸೂಚನೆಗಾಗಿ ನೋಡುತ್ತಿರುತ್ತಾರೆ. ಅಂತಹ ಕಡೆ ಸ್ಥಳೀಯ ಏಜೆಂಟರ ಮಾತು, ಪ್ರಚಾರ ಕೆಲಸ ಮಾಡುತ್ತದೆ. ರಾಜಕೀಯ ಭಾಷಣಗಳು, ಮಾಧ್ಯಮಗಳ ಪ್ರಚಾರ ಯುವಕರನ್ನು ತಲುಪುತ್ತದೆ. ಬಡತನದಲ್ಲಿ ಬಳಲುವವರನ್ನೂ ವಯೋವೃದ್ಧರನ್ನು ಕರೆತಂದು ಮತ ಚಲಾಯಿಸುವಂತೆ ಮಾಡಿದಾಗ ಸಾಂಪ್ರ­ದಾಯಿಕ­ವಾದ ಗ್ರಹಿಕೆಯ ಮೇಲೆ ಇಲ್ಲವೆ ತಮಗೆ  ‘ಅನ್ನ’ವನ್ನು ಕೊಟ್ಟವರಿಗೆ ವೋಟು ಹಾಕುವ ಸಾಧ್ಯತೆಗಳು ಹೆಚ್ಚು.
ವಯೋವೃದ್ಧರು ತಮ್ಮ ಕುಟುಂಬದಲ್ಲೇ ಅಭಿ­ಪ್ರಾಯ ವ್ಯಕ್ತಪಡಿಸುವ ಹಕ್ಕು ಕಳೆದು­ಕೊಂಡು ಮೂಲೆ­ಗುಂಪಾಗಿರುತ್ತಾರೆ. ಅಂತಹ­ವರು ರಾಜ­ಕೀಯ ಆಸಕ್ತಿಯನ್ನು ಉಳಿಸಿಕೊಳ್ಳ­ಬೇಕು ಎಂದು  ನಿರೀಕ್ಷಿಸುವುದೇ ತಪ್ಪಾಗುತ್ತದೆ.  ಯಾರೋ ಬಂದು ಕೈಮುಗಿದು ಮತ ಯಾಚಿಸಿ­ದಾಗ ಒಂದು ಗಳಿಗೆ ತನಗೂ ಮಹತ್ವ ಸಿಕ್ಕಂತೆ ಭಾವಿಸಿ ಮತ ಚಲಾಯಿಸುತ್ತಾರೆ.
ಆದರೆ ಯಾರ ಆಸರೆ­ಯ­ಲ್ಲಿ­ರುತ್ತಾರೊ ಅವರ ಅಭಿ­ಪ್ರಾಯಕ್ಕೆ ಬದ್ಧ­ರಾಗು­ತ್ತಾರೆ. ಸಂಪೂರ್ಣವಾಗಿ ಹಣದ ಶಕ್ತಿ­ಯನ್ನು ಕಳೆದುಕೊಂಡವರಿಗೆ ಚುನಾ­ವಣೆಯ ಹಿನ್ನೆಲೆ­ಯಲ್ಲಿ ಕೊಟ್ಟ ಸಣ್ಣ ಮೊತ್ತವೂ ದೊಡ್ಡ­ದಾಗಿ ಕಾಣುತ್ತದೆ. ಆ ರೊಕ್ಕ ಮತವಾಗಿ ಪರಿ­ವರ್ತನೆ­ಯಾದರೆ ಆಶ್ಚರ್ಯವೇನೂ ಇಲ್ಲ.  ಒಂದು ದಿನದ ಬೀಡಿಗೆ ಸಿಕ್ಕ ಕಾಸು ಅವರು ಹಾಕುವ ವೋಟಿಗೆ ಒತ್ತಾಸೆಯಾಗುವುದಾದರೆ ಪ್ರಜಾ­­ಪ್ರಭುತ್ವ ಬೀಡಿಯಿಂದ ಉಗುಳಿದ ಹೊಗೆಗೆ ಸಮನಾಗುತ್ತದೆ.
ಭಾರತದಲ್ಲಿ  ಹೆಣ್ಣು ಮಕ್ಕಳ ವಿಚಾರಕ್ಕೆ ಬಂದರೆ ಆಕೆಯ ಮತ ಚಲಾವಣೆಯ ಹಕ್ಕಿನ ಚರ್ಚೆ ಆರಂಭವಾಗಿ ಸುಮಾರು ಒಂದು ಶತಮಾನವೇ ಕಳೆಯುತ್ತಾ ಬಂದಿದೆ. ಈಗಲೂ ತಮ್ಮ ಮತವನ್ನು ತಮ್ಮ ಹಕ್ಕು, ತಮ್ಮ ಆಯ್ಕೆ ಅಂತ ಭಾವಿಸಿರಬಹುದೇ ಎಂದು ಕೇಳಿಕೊಳ್ಳ­ಬೇಕಾ­ಗಿದೆ.
ಹೋಂ ರೂಲ್ ಚಳವಳಿಯ ನಾಯಕಿ ಆ್ಯನಿ ಬೆಸೆಂಟ್, ೧೯೧೭ರ ಹೊತ್ತಿಗೆ ದೇಶ­ದಾದ್ಯಂತ ಮಹಿಳಾ ಸಂಘಟನೆಗಳ ಮೂಲಕ ಸಹಿಯನ್ನು ಸಂಗ್ರಹಿಸಿ ಮಹಿಳೆಗೆ ಮತ ಚಲಾಯಿಸುವ ಹಕ್ಕನ್ನು ದೊರಕಿಸಿಕೊಡಲು ಶ್ರಮಿಸಿದರು. ಭಾರತದಲ್ಲಿ  ದೊಡ್ಡ ಹೋರಾಟ­ವಿಲ್ಲದೆ ಮತ ಚಲಾವಣೆಯ ಹಕ್ಕು ಮಹಿಳೆಗೆ ದೊರೆತದ್ದು ಮಾತ್ರ ದೊಡ್ಡ ಅದೃಷ್ಟವೆಂದೇ ತಿಳಿಯ­ಬೇಕಾಗುತ್ತದೆ. ಸ್ವಾತಂ­ತ್ರ್ಯಾ­ನಂತರ ಹೆಣ್ಣನ್ನು ಈ ದೇಶದ ನಾಗರಿಕಳೆಂದು ಗುರು­ತಿಸಿ ಮತ ಚಲಾವಣೆಯ ಹಕ್ಕನ್ನು ಸಂವಿ­ಧಾನ ಬದ್ಧ­ವಾಗಿ ನೀಡಿದ ಭಾರತದ ಸಂವಿಧಾ­ನದ ರೂವಾರಿ ಬಾಬಾ ಸಾಹೇಬರನ್ನು ನೆನೆಯಬೇಕಾಗಿದೆ.
ತನಗೆ ಸಿಕ್ಕ ಮತ ಚಲಾವಣೆಯ ಅವ­ಕಾಶ­ವನ್ನು ಅವಳು ತನ್ನ  ಮೂಲಭೂತ  ಹಕ್ಕು ಎಂದು ನಿಜಾರ್ಥದಲ್ಲಿ ಅರಿಯಬೇಕಾದರೆ ಇನ್ನೂ ದಶಕಗಳೇ ಬೇಕಾಗುತ್ತದೆ. ಮತ ಚಲಾ­ವಣೆ­ಯನ್ನು ತಮ್ಮ ಸ್ವಂತ ಅಭಿಪ್ರಾಯವಾಗಿ ರೂಪಿಸಿಕೊಳ್ಳಲು ಈವರೆಗೆ ಸಾಧ್ಯವಾಗಿಲ್ಲ. ಸಣ್ಣ ಪುಟ್ಟ ವಿಷಯಗಳಲ್ಲೂ ಅವಳಿಗೂ ಒಂದು  ಆಯ್ಕೆ ಇದೆ ಎನ್ನುವುದನ್ನೇ ಅರಿಯದ ಸಮಾಜ­ದಲ್ಲಿ ರಾಜಕೀಯವಾಗಿ ಪ್ರಾಜ್ಞರಾಗಲು ಇನ್ನೆಷ್ಟು ಕಾಲ ಬೇಕಾಗಬಹುದು?
ವಿವಾಹದಲ್ಲಿ ಅವಳ ಆಯ್ಕೆ ಇರಬೇಕೆಂದು ಇಂದಿಗೂ ಒಪ್ಪದ ಸಮಾಜ, ಅವಳ ಚುನಾವಣಾ ಅಭಿಪ್ರಾಯ­ವನ್ನು ರೂಪಿಸಬಲ್ಲುದೆ? ವಿವಾಹವೇ ಹತ್ತು ಹನ್ನೆರಡು ವರ್ಷಕ್ಕೆ ಆದಾಗ, ಆಯ್ಕೆ ಪ್ರಶ್ನೆಯಾಗಿ ಮಾತ್ರ ಉಳಿಯುತ್ತದೆ. ತಾನು ಉಡುವ ಬಟ್ಟೆ, ಅದರ ಬಣ್ಣದ ಆಯ್ಕೆಯೂ ಇಲ್ಲದ ಹೆಣ್ಣು,  ಮರೆಯಲ್ಲಿ ನಿಂತು ತನ್ನದೇ ಆದ ಮತವನ್ನು ತನ್ನ ಅಭಿಪ್ರಾಯದಂತೆ  ಚಲಾಯಿಸಬಲ್ಲಳೇ? ಮನು­ವಿನ ಮಾತು ಇಲ್ಲಿ ನೆನಪಾಗುತ್ತದೆ, ವಿವಾಹ ಪೂರ್ವದಲ್ಲಿ ತಂದೆ, ನಂತರ ಕೈ ಹಿಡಿದ ಗಂಡ, ಆನಂ­ತರ ಹೆತ್ತ ಮಗನ ನೆರಳಲ್ಲಿ ತನ್ನ  ಬುದ್ಧಿ ಭಾವಗಳನ್ನು  ನೆರಳಾಗಿಸುತ್ತಾಳೆ.
ಮಧ್ಯಮವರ್ಗದ ಹೆಣ್ಣು ಮಕ್ಕಳು ಬಿಸಿಲು ಮಳೆ ಸೋಕದಂತೆ ನಾಲ್ಕು ಗೋಡೆಯ ಒಳಗೆ ಬಂದಿಯಾಗಿ ಬದುಕುತ್ತಿರುವಾಗ ರಾಜಕೀಯ ಅವರ ಆಸಕ್ತಿಯ ವಿಚಾರವಾಗಲಾರದು. ಪಂಚಾ­ಯಿತಿ ಮಟ್ಟದ ರಾಜಕೀಯದಲ್ಲಿ ಕೊಟ್ಟ ಮೀಸಲಾತಿ ಅವರು ಸಣ್ಣ ಪ್ರಮಾಣ­ದಲ್ಲಾ­ದರೂ ರಾಜಕೀಯ ಪ್ರಕ್ರಿಯೆಯಲ್ಲಿ ತೊಡಗಲು ಸಾಧ್ಯವಾಗಿದೆ.
ಮಹಿಳಾ ಮೀಸಲಾತಿ ಮಸೂದೆ, ಹಿಮದ ಗಡ್ಡೆಯ ಒಳಗೆ ಹೂತು ಹೋಗಿದೆ. ಮನು ಕುಲ ಇನ್ನೂ ಜೀವಂತವಾಗಿದೆ. ಎಂದಾದರೊಮ್ಮೆ ಹೆಣ್ಣಿನ ಮೀಸಲಾತಿ ಬಿಲ್ ಹೊರಬರಬಹುದು, ಕಾಯೋಣ.  ‘ಹೆಣ್ಣಿಗೆ  ಆಲೋಚಿಸುವ ಶಕ್ತಿ ಇಲ್ಲದಿದ್ದರೂ’ (?) ಮತ ಚಲಾಯಿಸಲು ಅವಕಾಶ ಸಿಕ್ಕಿರುವುದೇ ಅವಳ ಅದೃಷ್ಟ. ರಾಜಕೀಯ ಚರಿತ್ರೆಯನ್ನೇ ಕಾಣದ ಹೆಣ್ಣು ಜಾತಿ, ರಾಜಕೀಯದ ಭಾಗವಾಗ ಬೇಕೆಂಬುದು ಸಮಾನತೆಯ ಅತ್ಯುನ್ನತ ಆದರ್ಶ.
ರಾಜಕೀಯ ಅಭಿಪ್ರಾಯ ರೂಪಿಸುವ ಮಾಧ್ಯಮ­ಗಳ ಕುರಿತು ವಿಸ್ತಾರವಾಗಿ ಬರೆಯುವ ನಾಮ್‌ ಚೋಮ್ ಸ್ಕಿ ಅವುಗಳನ್ನು ಅಭಿಪ್ರಾಯಗಳ ಉತ್ಪಾದಕರು ಎಂದು ಕರೆದದ್ದು ಸೂಕ್ತವಾಗಿಯೇ ಇದೆ. ಅದರ ಬಹು ದೊಡ್ಡ ದಲ್ಲಾಳಿಗಳು ಮಾಧ್ಯಮಗಳು. ಸರ್ವಾಧಿಕಾರಿ­ಯೊಬ್ಬ ಹಿಂಸೆಯ ಮೂಲಕ ಸಾಧಿಸಬಹುದಾದ­ದ್ದನ್ನು ಡೆಮಾಕ್ರಸಿಯಲ್ಲಿ ಪ್ರಚಾರದ ಮೂಲಕ ಸಾಧಿಸಲಾಗುತ್ತದೆ. ಭ್ರಮೆಯನ್ನು ಕಟ್ಟುವುದೇ ಆದ್ಯತೆಯಾಗುತ್ತದೆ.
ವ್ಯಕ್ತಿಯ ವಿಚಾರದ ಅಭಿಪ್ರಾಯ ರೂಪುಗೊಳಿಸುವಾಗ ಅದನ್ನು ಮತ್ತೇರುವ ತೀವ್ರತೆಗೆ ಒಯ್ಯಲಾಗುತ್ತದೆ. ಕೆಟ್ಟದು ಒಳ್ಳೆಯದರ ಜಡ್ಜ್‌ಮೆಂಟ್ ಕಳೆದು­ಹೋಗಿರುತ್ತದೆ. ಪ್ರಚಾರದಲ್ಲಿರುವ ವಸ್ತುವಿಗೆ ಜನ ಮುಗಿಬೀಳುವಂತೆ ಪ್ರಚಾರ­ದಲ್ಲಿರುವ ನಾಯಕನಿಗೆ ಮರುಳಾಗು­ತ್ತಾರೆ. ಅವರೇ ಕಟ್ಟಿಕೊಟ್ಟ ಪರಿಭಾಷೆಯಲ್ಲಿ ಅವರನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಉಳಿದ ವಿಚಾರಗಳು ಮತದಾರನ ಮನಸ್ಸಿನಲ್ಲಿ ಇಲ್ಲವಾಗಿಸಲಾಗುತ್ತದೆ.
ಜನಸಾಮಾನ್ಯ­ನೊಬ್ಬನಿಗೆ ಅವನದೇ  ಆದ ಅಭಿಪ್ರಾಯ ರೂಪುಗೊಳ್ಳಲು ಸಾಧ್ಯವಾಗದಂತೆ ಆಕ್ರಮಣ­ಶೀಲ­ವಾಗಿ ವಿಚಾರವನ್ನು ಬಿತ್ತಲಾಗುತ್ತದೆ. ಜನರ ದುರ್ಬಲ, ಅಸಹಾಯಕ ಮಾನಸಿಕ ಸ್ಥಿತಿಯ ಮೇಲೆ ಹಲ್ಲೆ ಮಾಡಲಾಗಿ­ರುತ್ತದೆ. ಹಾಗೇ ಕರೆದು ತಂದು ಮತಗಟ್ಟೆಯಲ್ಲಿ ನಿಲ್ಲಿಸಿದಾಗ ತನ್ನದೇ ಮತವೆಂದು ಭ್ರಮಿಸಿ ವೋಟ್ ಹಾಕುತ್ತಾನೆ. ಹಿಂದೆ ಹಾದು ಹೋಗುವ ಜಾಹೀರಾತಿನ ಭೂತದ ನೆರಳು ಅವನ ಅರಿವಿಗೆ ಬಂದಿರುವುದಿಲ್ಲ. ಆ ಕ್ಷಣಕ್ಕೆ ಅವನ ಜವಾಬ್ದಾರಿ ಮುಗಿಯುತ್ತದೆ.
ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ರೂಪಿಸು­ವುದೇ ಮುಖ್ಯವಾಗಿ­ರುತ್ತದೆ. ಕಲ್ಪನೆ, ಭ್ರಮೆ, ನಶೆ, ಸುಳ್ಳು, ಮೋಸ ಎಲ್ಲವೂ ಅದರ ಭಾಗವಾಗಿರುತ್ತದೆ. ಆ ಯಾವುದಕ್ಕೂ ವ್ಯತ್ಯಾಸವೇ ಉಳಿದಿರುವುದಿಲ್ಲ, ಆ ಎಲ್ಲದಕ್ಕೂ ಮಾಧ್ಯಮ ದಲ್ಲಾಳಿಯಾಗಬೇಕೆ?

ಹಾಲು ಕರೆವ ಪಕ್ಷಕ್ಕೆ ಬಂಡವಾಳಗಾರನ ಹಿಂಡಿ

Tue, 18th Mar, 2014
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮೊನ್ನೆ (ಮಾ.೧೬) ಐದು ಅಡಿ, ಐದು ಅಂಗುಲ ಎತ್ತರವಿದ್ದ  ವ್ಯಕ್ತಿ ದಣಿವರಿಯದೆ ಹೇಳಿದ ಮಾತು ಕೆಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು ನಿಜ.
‘ನೀವು ಬಿಜೆಪಿಗೆ ವೋಟು ಹಾಕಿ ಕಾಂಗ್ರೆಸ್‌ಗೆ ವೋಟು ಹಾಕಿ ಕಡೆಗೆ ಆಳುವ ವ್ಯಕ್ತಿ ಮಾತ್ರ ಅಂಬಾನಿ...’ ಹೀಗೆ ಹೇಳುತ್ತಾ ನರೇಂದ್ರ  ಮೋದಿ ಬಗೆಗಿನ ಭ್ರಮೆಯನ್ನು ಕಳಚುತ್ತಾ ಹೋದ ಅರವಿಂದ ಕೇಜ್ರಿವಾಲ್ ಮಾತು ನನಗೆ ಮಹತ್ವದ್ದಾಗಿ ಕಂಡಿತು.  ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಪಕ್ಷಗಳ ಬಣ್ಣಗಳೂ ಬಯಲಾಗುತ್ತಿವೆ.
ಹಳೆಯದಾಗಲಿ ಹೊಸದಾಗಲಿ ಪಕ್ಷಗಳಿಗೆ ಹಣ ಎಲ್ಲಿಂದ ಬರುತ್ತದೆಂದು ತಿಳಿಯುವುದು ಅನಿವಾರ್ಯವಾಗಿದೆ. ಭಾರತದ ಬೃಹತ್ ಆಲದ ಮರದಂತೆ ಬೆಳೆದು ನಿಂತ ಎರಡು ಪಕ್ಷಗಳಿಗೆ ಅಂಬಾನಿ ಹೀಗೆ ನೇರವಾಗಿ ನೀರೆರೆ­ಯುತ್ತಾರೆಂದು ಹೇಳುವಾಗ, ಮತ್ತು ಯಾರೇ ಅಧಿಕಾರಕ್ಕೆ ಬಂದರೂ ನಿಜವಾಗಿ ನಮ್ಮನ್ನು ಆಳುವವರು ಬೃಹತ್ ಬಂಡವಾಳಶಾಹಿಗಳು ಎಂದಾಗ ರಾಜಕೀಯ ಪಕ್ಷಗಳ ಬಗೆಗಿದ್ದ ಅಲ್ಪಸ್ವಲ್ಪ ನಂಬಿಕೆಯೂ ಗಾಳಿಗೆ ತೂರಿಹೋಗು­ತ್ತದೆ. ಆದ್ದರಿಂದಲೇ ಈ ದೇಶದ ಕೈಗಾರಿಕಾ ನೀತಿಯಾಗಲಿ ಕೃಷಿ ನೀತಿಯಾಗಲಿ ನಮ್ಮ ಹಿಡಿತವನ್ನು ಕಳೆದುಕೊಂಡಿದೆ ಎನಿಸುತ್ತದೆ.
ನಾವು ಇಂದು ರಾಜಕೀಯ ಪಕ್ಷಗಳನ್ನು ಕೇಳುವುದಕ್ಕಿಂತ, ಬಂಡವಾಳಶಾಹಿಗಳನ್ನೇ ನಿಮ್ಮ ಜೇಬಿನಲ್ಲಿ ಇರುವ ರಾಜಕಾರಣಿಗಳು ಯಾರು ಎಂದು ಬಹಿರಂಗವಾಗಿ ಕೇಳಬೇಕಾಗಿದೆ. ಈ ದೇಶದಲ್ಲಿ ವಿದೇಶದ ಬಂಡವಾಳವೂ ಹರಿಯ ತೊಡಗಿರುವುದರಿಂದ, ಕಡೆಯ ಪಕ್ಷ ನಮ್ಮ ದೇಶದಲ್ಲೇ ಇರುವ ದುಡ್ಡಿನ ಒಡೆಯರಾದರೂ ಜನರಿಗೆ ಉತ್ತರ ನೀಡಬೇಕಾಗಿದೆ.
ಒಂದು ಕಾಲಕ್ಕೆ ಟಾಟಾ, ಬಿರ್ಲಾ ಅಂತಹ ಬಂಡವಾಳಶಾಹಿ ಕುಟುಂಬಗಳು ರಾಷ್ಟ್ರೀಯ ಹೋರಾಟಕ್ಕೆ ಬೆಂಬಲ ನೀಡಿದ್ದವು. ಕಂಪೆನಿಗಳ ಸ್ಥಾಪನೆಗೆ ಭಾರತದಲ್ಲಿ ನಡೆದ ಸ್ವದೇಶಿ ಹೋರಾಟವೂ ಕಾರಣವಾಗಿತ್ತು. ಹೀಗೆ ನಮ್ಮ­ದೆಂಬ ಆದರ್ಶದಲ್ಲಿ ಕಾಪಿಟ್ಟುಕೊಂಡು-­ಬಂದ ಕೈಗಳೇ ಇಂದು ನಮ್ಮನ್ನು ಆಡಿಸುತ್ತವೆ. ಅವರ ಮುಂದೆ ಮಂಡಿಯೂರಿ ಸಾಮಾಜಿಕ ನ್ಯಾಯ­ವನ್ನು ಬೇಡುವುದೂ ಕೋಡುಗಲ್ಲ ಬಸವ­ನಿಗೆ ಅಡ್ಡಬೀಳುವುದೂ ಒಂದೇ ಆಗಿರುತ್ತದೆ.
ನಮ್ಮ­ದೆಂದು ತಿಳಿದಿದ್ದ ಕಂಪೆನಿಗಳು ಈಗ ನಮ್ಮ­ವಾಗಿ ಉಳಿದಿಲ್ಲ, ವಿದೇಶಿ ಬಂಡವಾಳಕ್ಕೆ ಬೆಸೆದ ಬಂದ­ಳಿಕೆಗಳು. ತಮಗೆ ಲಾಭ ತರುವ ವ್ಯವ­ಹಾರಕ್ಕೆ ರಾಜಕೀಯ ಪಕ್ಷಗಳನ್ನು ಬಳಸಿಕೊಳ್ಳು­ತ್ತಿವೆ. ಈ ಹೊತ್ತಿನಲ್ಲಿ ನಾವು ರಾಜಕಾರಣಿಗಳ ವ್ಯಕ್ತಿತ್ವ­ವನ್ನು ವಿಚಾರಿಸುವ ಜೊತೆಗೆ ಪ್ರತಿ ದೈತ್ಯ ಉದ್ದಿಮೆದಾರನನ್ನೂ ನೀವು ಬೆಂಬಲಿಸುವ ಪಕ್ಷ ಯಾವುದು ಎಂದು ಬಹಿರಂಗವಾಗಿ ಕೇಳಬೇಕಾಗಿದೆ. 
ಭಾರತ ಬಹು ಪಕ್ಷಗಳನ್ನು ಹೊಂದಿದ ದೇಶ ಎಂದು ಮಾತ್ರ ಅರ್ಥವಾಗುತ್ತಿತ್ತು. ಅದರೆ ಪ್ರತಿ ಪಕ್ಷವೂ ತನ್ನೊಳಗೆ ಹಲವು ಪಕ್ಷಗಳನ್ನು ಒಳಗೊಂಡಿದೆ. ಕಾಂಗ್ರೆಸ್ ಆಗಲಿ ಬಿಜೆಪಿ ಆಗಲಿ ಹೊರನೋಟಕ್ಕೆ ಒಂದು ಪಕ್ಷವಾಗಿ ಕಂಡರೂ ಅವು ಒಂದು ಪಕ್ಷವಾಗಿ ಉಳಿದಿಲ್ಲ. ಇಲ್ಲಿ ಪಕ್ಷ ಎಂದಾಗ ನಿಲುವು ಎಂಬ ಅರ್ಥವೂ ಬರುತ್ತದೆ.
ನರೇಂದ್ರ ಮೋದಿ ಎಲ್ಲಾ ವೇದಿಕೆಗಳಲ್ಲೂ ಒಂಟಿಯಾಗಿ ನಿಲ್ಲುವುದನ್ನು ನೋಡಿದರೆ, ಬಿಜೆಪಿ ಎಂದರೆ ಕಾಣಲೇಬೇಕಾದ ಹಳೆಯ ಮುಖಗಳು ಒಂದೂ ಕಾಣದೆ ಪಕ್ಷವೇನಾದರೂ ಬದಲಾಗಿ­ದೆಯೇ ಎನಿಸುತ್ತದೆ. ಹಾಗಾದರೆ ಪಕ್ಷದ ಮುಂದಿನ ಆಗುಹೋಗುಗಳಿಗೆಲ್ಲಾ ಮೋದಿ ಅವ­ರನ್ನು ಮಾತ್ರವೇ ಜವಾಬ್ದಾರನನ್ನಾಗಿ ಮಾಡಲಾ­ಗಿದೆಯೆ? ಬಿಜೆಪಿ ಎಂದರೆ ಕಾಣಲೇಬೇಕಾಗಿದ್ದ ಎಲ್‌.ಕೆ. ಅಡ್ವಾಣಿ, ಸುಷ್ಮಾ ಸ್ವರಾಜ್‌  ಮುಂತಾದ ಹಿರಿಯ ನಾಯಕರು ಮೋದಿ ನಾಯಕತ್ವದ ಬಿಜೆಪಿಯಲ್ಲಿ ಇಲ್ಲವೆಂದು ತಿಳಿಯ­ಬೇಕೆ? ಕರ್ನಾಟಕದಲ್ಲಿ ಬಿ.ಎಸ್‌. ಯಡಿಯೂರಪ್ಪ ಆಳ್ವಿಕೆಯ ಕಡೆಯ ಹೊತ್ತಿಗೆ ಅದು ಬಿಜೆಪಿ ಎಂಬುದನ್ನೇ ಅದರ ಮಾತೃ­ಸಂಸ್ಥೆಗಳು ನಿರಾಕರಿಸಿದ್ದವು.
ಯಡಿಯೂರಪ್ಪ ವ್ಯಕ್ತಿ ಕೇಂದ್ರಿತವಾಗಿ ನಡೆದುಕೊಳ್ಳ ತೊಡಗಿದಂತೆ ಪಕ್ಷ ಕುಸಿಯಿತು. ವ್ಯಕ್ತಿ ಕೇಂದ್ರಿತವಾದಂತೆ ಪಕ್ಷಗಳು ಒಡೆದು ಹೋಗುತ್ತವೆ ಎನ್ನುವುದಕ್ಕೆ ಇದೂ ಒಂದು ಉದಾಹರಣೆ.
ಇನ್ನು ಕಾಂಗ್ರೆಸ್ ವಿಷಯಕ್ಕೆ ಬಂದರಂತೂ ಅದರ ಸುದೀರ್ಘ ಚರಿತ್ರೆಯೇ ಅದನ್ನು ಕಗ್ಗಂಟಾ­ಗಿಸಿದೆ. ಜಾತ್ಯತೀತ ಪಕ್ಷವಾಗಿ ನೆಹರೂ ಕಾಲಕ್ಕೆ ಹೆಸರು ಮಾಡಿದ್ದು, ಅಯೋಧ್ಯಾ ಘಟನೆ ಹೊತ್ತಿಗೆ ಹಿಂದೂವಾದದ ಮೈಲಿಗೆಗೆ ತುತ್ತಾ­ಯಿತು. ಅದರಿಂದ ಹೊರಬಂದು ಜಾತ್ಯತೀತ ಆಗುವ ನಿರಂತರ ಪ್ರಯತ್ನ ನಡೆದೇ ಇದೆ. ಹಾಗಾದಲ್ಲಿ ಮಾತ್ರವೇ ಅದರ ಸಾಂಪ್ರದಾಯಿಕ ಮತಗಳನ್ನು ಗಟ್ಟಿಯಾಗಿ ಉಳಿಸಿಕೊಳ್ಳಲು ಸಾಧ್ಯ.
ರಾಜೀವ್ ಗಾಂಧಿ ಕಾಲಕ್ಕೆ ಹಳೆ ಬೇರು ಹೊಸ ಚಿಗುರು ಎನ್ನುವಂತೆ ಪಕ್ಷದ ಹಿರಿಯ ನಾಯಕರು ಯುವ ನಾಯಕನನ್ನು ಮೆರೆಸಿದರು. ಸೋನಿಯಾ ಗಾಂಧಿ ನಾಯಕತ್ವದಲ್ಲಿ, ಮನ­ಮೋಹನ್ ಸಿಂಗ್ ಪ್ರಧಾನಿಯಾಗಿ ಪಕ್ಷ­ದೊಳ­ಗಿನ ರಾಜಕೀಯವಾಗಲಿ, ಸೈದ್ಧಾಂತಿಕ ಘರ್ಷಣೆ­ಗಳಾಗಲಿ ಕಾಣದೆ ಪಕ್ಷವನ್ನು ಕಾರ್ಪೊರೇಟ್ ಆಫೀಸ್‌ನಂತೆ ನಡೆಸಲಾಗುತ್ತಿದೆ. ಪ್ರತಿ ರಾಜ್ಯ-­ದಲ್ಲೂ ಕಾಂಗ್ರೆಸ್‌ನ ಶೈಲಿ ಬೇರೆಯೇ ಆಗಿದೆ. ಪಕ್ಷದೊಳಗಿನ ಅಭಿಪ್ರಾಯಗಳಲ್ಲಿ ಸೌಹಾರ್ದ ಏರ್ಪಡುವುದಕ್ಕಿಂತ ಪಕ್ಷಗಳ ಸಹಯೋಗದಲ್ಲಿ ಕಾರ್ಯನಡೆಸುತ್ತಾ ಬಂದಿದೆ.
ಇಂದಿನ ಚುನಾ­ವಣೆ­ಯಲ್ಲಿ ಬಿಜೆಪಿಯ ಪೈಪೋಟಿಗೆ ತಾವು ಒಬ್ಬ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ತೋರಿಸಿಕೊಳ್ಳ­ಬೇಕಾದ ಅನಿವಾ­ರ್ಯಕ್ಕೆ ಬಿದ್ದು ರಾಹುಲ್ ಗಾಂಧಿ ಅವರನ್ನು ಪ್ರಚಾರಕ್ಕಿಳಿಸಿದೆ. ಆದರೆ ರಾಹುಲ್ ಗಾಂಧಿ ಕಾಂಗ್ರೆಸ್ ನೇತಾರನೆಂದು ಜನರ ಮನಸ್ಸಿಗೆ ಇಳಿದಂತಿಲ್ಲ. ಪಕ್ಷವೆಂದಾಗ ಹತ್ತಾರು ಜನ ನಾಯಕರು ಅದರ ಜವಾಬ್ದಾರಿ­ಯನ್ನು ಹೊರು­ತ್ತಾರೆ ಎಂಬುದರಲ್ಲಿ ಹೆಚ್ಚಿನ ನಂಬಿಕೆ ಮೂಡು­ತ್ತದೆ. ಮನಮೋಹನ್ ಸಿಂಗ್, ಪಿ.ಚಿದಂಬರಂ, ಎ.ಕೆ ಆಂಟನಿ ಇವರೆಲ್ಲಾ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲವೇ? ಕಡೆಗೆ ಸೋನಿಯಾ ಗಾಂಧಿಯೂ ಕಾಣಬಾರದೇ? ಕರ್ನಾಟಕ­ದಲ್ಲಿ ಕಾಂಗ್ರೆಸ್ ಆಡಳಿತಾರೂಢ ಪಕ್ಷವಾಗಿದ್ದು ಜನತೆಗೆ ಕೊಡುವ ಭರವಸೆ ಏನು? ಹೇಳಲು ಹೊರಟರೆ ಅನುಭವಿ ರಾಜಕಾರಣಿಗಳ ಸಾಲು ಸಾಲೇ ಅಲ್ಲಿದೆ.
ತಮ್ಮ ತಪ್ಪು ನೆಪ್ಪುಗಳನ್ನು ಜನತೆ ಮುಂದೆ ನಿಂತು ಹೇಳಿಕೊಳ್ಳುತ್ತಿಲ್ಲವೇಕೆ? ‘ನರೇಗಾ’ ದಂತಹ ಯೋಜನೆ ಬಡ ಜನತೆ ಪರ­ವಾದ ಯೋಜನೆ. ಅದರ ಬೆನ್ನ ಹಿಂದೆ ಕಮ್ಯು­ನಿಸ್ಟರಿ­ದ್ದದ್ದು ನಿಜವೇ ಆದರೂ ಅದನ್ನೆಲ್ಲೂ ತನ್ನ ಸಾಧನೆ ಎಂದು ಹೇಳಿಕೊಂಡಂತೆ ಕಾಣುವುದಿಲ್ಲ. ಜನತೆಯನ್ನು ಎದುರಿಸಲಾಗದ ದೌರ್ಬಲ್ಯವೇನು ಎಂದು ಪಕ್ಷಗಳೇ ಆತ್ಮಾವಲೋಕನ ಮಾಡಿಕೊಳ್ಳ­ಬೇಕಾಗಿದೆ. ದೀರ್ಘಾವಧಿಯ ಅಸ್ತಿತ್ವ ಕಾಂಗ್ರೆ­ಸ್‌ನ ಶಕ್ತಿಯೂ ಹೌದು ದೌರ್ಬಲ್ಯವೂ ಹೌದು.
ಸಾಮಾನ್ಯವಾಗಿ ಮೂರನೇ ಶಕ್ತಿಯಾಗಿ ಒಗ್ಗೂಡುತ್ತಿದ್ದ ಸಮಾಜವಾದಿ ಪಕ್ಷಗಳು ಈ ಬಾರಿ ಮುಂಚೂಣಿಗೆ ಬಂದಂತೆ ಕಾಣುತ್ತಿಲ್ಲ. ಸಾಧ್ಯವಾದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯ ಜೊತೆ ಸೇರುವ ಆಲೋಚನೆಯಲ್ಲಿ ವ್ಯವಹರಿಸು­ತ್ತಿವೆ. ಬಹುತೇಕ ಪ್ರಾದೇಶಿಕ ಪಕ್ಷಗಳಂತೆ ಕಾಣ­ತೊ­ಡಗಿವೆ. ಅಷ್ಟೇ ಅಲ್ಲ, ವ್ಯಕ್ತಿ ಕೇಂದ್ರಿತ ಪಕ್ಷಗ­ಳಾಗಿವೆ. ಜೆಡಿಎಸ್ ಕರ್ನಾಟಕದಲ್ಲೂ, ಬಿಎಸ್‌ಪಿ  ಉತ್ತರ ಪ್ರದೇಶದಲ್ಲೂ, ಕಮ್ಯುನಿಸ್ಟ್‌ ಪಕ್ಷಗಳು  ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲೂ  ರಾಷ್ಟ್ರ ರಾಜಕೀಯಕ್ಕೆ ಹೊರಟು ಸ್ಥಳೀಯವಾಗಿ ಉಳಿದು­ಕೊಂಡಿವೆ. ಕಮ್ಯುನಿಸ್ಟರಿಗೆ ವಿರುದ್ಧವಾಗಿ ಬಂಗಾ­ಳ­ದಲ್ಲಿ ಹುಟ್ಟಿದ್ದು ತೃಣಮೂಲ ಕಾಂಗ್ರೆಸ್.
ಅಸ್ಸಾಂನಲ್ಲಿ ಎಜೆಪಿ, ಪಂಜಾಬಿನ ಅಕಾಲಿದಳ, ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಇತ್ಯಾದಿ ಪ್ರಾದೇಶಿಕ ಪಕ್ಷಗಳು ರಾಷ್ಟ್ರ ರಾಜಕೀ­ಯ­ದಲ್ಲಿ ಪಾಲ್ಗೊಳ್ಳುತ್ತಿವೆ. ಇಲ್ಲವೇ ಪಕ್ಷದೊಳ­ಗೊಂದು ಪಕ್ಷವಾಗಿ ಒಂದು ಹೊಸ ರಾಜಕೀಯ ವ್ಯವಸ್ಥೆಯನ್ನೇ ಹುಟ್ಟುಹಾಕಿವೆ. ನಮಗಿಲ್ಲಿ ಕಾಣ­ಬರುತ್ತಿರುವುದು ಮುಂದುವರಿದ ವ್ಯಕ್ತಿಕೇಂದ್ರಿತ ರಾಜಕೀಯ ಗುಣ ಈ ಪಕ್ಷಗಳ ಶಕ್ತಿಯನ್ನು ಕ್ಷೀಣಗೊಳಿಸಿದೆ. ರಾಜಕೀಯದಲ್ಲಿ ವ್ಯಕ್ತಿಯ ವರ್ಚಸ್ಸು ಹಿರಿದೇ ಆದರೂ ಪಕ್ಷಕ್ಕೊಂದು ಸಾಮುದಾಯಿಕ ಪ್ರಜ್ಞೆ ಬೇಕೇ ಆಗಿರುತ್ತದೆ.
ಮೊನ್ನೆ ಆಮ್ ಆದ್ಮಿ ಪಕ್ಷದ ಬೆಂಬಲಕ್ಕೆ ಮುಂದಾಗಿರುವ ಜನರನ್ನು ನೋಡಿದರೆ ಮೂರು ತಿಂಗಳ ಕೆಳಗೆ  ಈ ಪಕ್ಷದ ಬಗೆಗೆ ಇದ್ದ ಅನು­ಮಾನಗಳನ್ನು ಜನ ಸಾಕಷ್ಟು ದೂರ ಮಾಡಿ­ಕೊಂಡಂತಿತ್ತು. ಕರ್ನಾಟಕ ಹಾಗೂ ಮತ್ತಿತರ ಕಡೆ ಚುನಾವಣಾ ಕಣಕ್ಕಿಳಿಯುತ್ತಿರುವ ಸ್ಪರ್ಧಾ­ಳುಗಳನ್ನು ನೋಡಿದರೆ ದುಡ್ಡಿನ ಬೆಂಬಲವಿಲ್ಲದ, ಆದರೆ ಬೇರೆ ಬೇರೆ ಕ್ಷೇತ್ರಗಳಲ್ಲಿ ನಾಯಕ­ರಾ­ಗಿ­ದ್ದ­ವರು ಇಲ್ಲಿ ಸೀಟು ಪಡೆಯುವ ಮೂಲಕ ಪ್ರಜಾಪ್ರಭುತ್ವದ ಸಾಧ್ಯತೆಯನ್ನು ಬೇರೆ ನೆಲೆಗಳಲ್ಲೂ ಹುಡುಕಾಡುತ್ತಿರುವಂತೆ ಕಾಣ­ಬರುತ್ತಿದ್ದಾರೆ. 
ಆಮ್ ಆದ್ಮಿಗೆ ಬೆಂಬಲಕ್ಕಿರುವ ಜನ ಯುವಕರು. ಅದರಲ್ಲೂ ಐ.ಟಿ. ಹಿನ್ನೆಲೆಯ ಜನ ಅದರ ವಿಶೇಷ ಆಕರ್ಷಣೆಗೆ ಒಳಗಾಗಿದ್ದಾರೆ. ಈವರೆಗೆ ಮತಗಟ್ಟೆಗೆ ಬರದೇ ಇದ್ದ ಹೊಸ­ದೊಂದು ವರ್ಗವನ್ನು ಎಎಪಿ ಆಕರ್ಷಿಸಿದೆ. ಸಾಮಾನ್ಯವಾಗಿ ನಗರದ ಮೇಲು ವರ್ಗದ ಮತಗಳು ಬಿಜೆಪಿಯ ಬಗಲಿಗೆ ಬೀಳುವ ನಿರೀಕ್ಷೆಯಲ್ಲಿ ರಾಜಕೀಯ ದಾಳಗಳನ್ನು ಹಾಕ­ಲಾ­ಗುತ್ತದೆ. ಅಂತಹ ಮತಗಳಿಗೆ ಆಮ್‌ ಆದ್ಮಿ ಸ್ಪರ್ಧೆಗಿಳಿದಂತಿದೆ. ಭ್ರಷ್ಟಾಚಾರ ವಿರೋಧಿ ಘೋಷಣೆಯೇ ಈ ಪಕ್ಷದ ಅಯಸ್ಕಾಂತವಾಗಿದೆ.
ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಬೇಸತ್ತು ತಮ್ಮ ಬದುಕಿನ ಇಳಿಗಾಲದಲ್ಲಿ ದೇಶವನ್ನು ಭ್ರಷ್ಟತೆ­ಯಿಂದ ವಿಮೋಚನೆಗೊಳಿಸಬೇಕೆಂದು ಬಯಸು­ವವರು ಆಮ್‌ ಆದ್ಮಿ ಪಕ್ಷದ ಬೆಂಬಲಕ್ಕೆ ನಿಂತಿದ್ದಾರೆ. ಅಂತಹ ಕಡೆ ಕಾಂಗ್ರೆಸ್‌ಗೆ ಬೀಳುವ ವೋಟು ಆದ್ಮಿ ಕಡೆ ಹೊರಳುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ಪಕ್ಷಕ್ಕೆ ದೇಣಿಗೆಯನ್ನು  ಬಹಿರಂಗವಾಗಿ ಜನರಿಂದ ಸಂಗ್ರಹಿಸುತ್ತಿರುವುದು ಹೆಚ್ಚಿನ ನೈತಿಕ ಸ್ಥೈರ್ಯವನ್ನು ತಂದುಕೊಟ್ಟಂತಿದೆ. ಜನರಿಂದ ದೇಣಿಗೆ ಸಂಗ್ರಹಿಸುವ ರಾಜಕಾರಣ ಹಿಂದೆಯೂ ನಡೆದಿದೆ.
ಅದನ್ನೊಂದು ಸಿದ್ಧಾಂತ­ವಾಗಿ ಕರ್ನಾಟಕದಲ್ಲಿ ಶಾಂತವೇರಿ ಗೋಪಾಲ­ಗೌಡರು ರೂಪಿಸಿದ್ದು ಇಂದಿಗೂ ದಂತಕಥೆ­ಯಾಗಿದೆ. ಕಾನ್ಶಿರಾಮರ ನೇತೃತ್ವದಲ್ಲಿ ಹಣವೇ ಇಲ್ಲದ ಜನರು ಪಕ್ಷ ಕಟ್ಟಲು ಸಾಧ್ಯವಾಗಿದ್ದನ್ನು ಜನ ಇಂದೂ ನೆನೆಯುತ್ತಾರೆ. ಇವೆಲ್ಲಾ ಕೇವಲ ಹಳಹಳಿಕೆಯಾಗದೆ ಮತ್ತೆ ಚಲಾವಣೆಗೆ ಬರುವು­ದಾದರೆ ಅದನ್ನು ಮತ್ತೆ ಸ್ವಾಗತಿಸಲೇ­ಬೇಕಾಗುತ್ತದೆ.
ಅಂಬಾನಿ ಅವರನ್ನು ಪ್ರಶ್ನಿಸಿದ ಹಾಗೆ ನಾವು ಪ್ರಶ್ನೆ ಮಾಡಲೇಬೇಕಾದ ಜನ ಬಹಳ ಮಂದಿ ಇದ್ದಾರೆ. ಅವರ ಬೆಂಬಲ ಯಾರಿಗಿರುತ್ತದೆ ಎಂದು ತಿಳಿಯಬೇಕಿದೆ. ರಾಷ್ಟ್ರೀ­ಕೃತ ಬ್ಯಾಂಕು­ಗಳಿಂದ ಪಡೆದ ಹಣವನ್ನೇ ಹಿಂದಿರುಗಿಸದ ಉದ್ಯಮಿಗಳು, ಕಂಪ್ಯೂಟರ್ ಲೋಕದ ದೊರೆಗಳು ಇವರ ಆಶೀರ್ವಾದ ಯಾರಿಗೆ? ಈ ಸಂಗತಿ ಬಹಿರಂಗ­ವಾಗಬೇಕಿದೆ. ಬಂಡವಾಳ ಶಾಹಿಗಳು, ರಾಜ­ಕಾರಣಿ­ಗಳು ಒಂದಾದ ರಾಜಕೀಯ ಜನ­ಸಾಮಾನ್ಯರು ಅಹೋರಾತ್ರಿ ನೋಡುವ ನಾಟಕವಾಗಿರುತ್ತದೆ. ಆ ಹೊತ್ತಿನಲ್ಲಿ ಆ ವೇಷ ಭೂಷಣದಲ್ಲಿ ಏನೂ ತಿಳಿಯುವುದಿಲ್ಲ.
ರಾಜಕಾರಣಿಗಳು ಕೆಲವೇ ವರ್ಷದ ರಾಜಕೀಯ ಅವಕಾಶವನ್ನು ಬಳಸಿಕೊಂಡು ಬಂಡವಾಳಗಾರರಾಗುತ್ತಾರೆ. ಉದ್ಯಮಪತಿಗಳು ಕೊಟ್ಟ ಹಣ ಅದು ದೇಣಿಗೆಯಾಗಿರುವುದಿಲ್ಲ, ರಾಜಕೀಯದ ಹೆಸರಿನಲ್ಲಿ ಹೂಡಿದ ಬಂಡವಾಳ­ವಾಗಿರುತ್ತದೆ. ರಾಜಕೀಯಕ್ಕೆ ಹೂಡುವ ಹಣ ಐದು ವರ್ಷ ನಿರಂತರವಾಗಿ ಕರೆಯುವ ಹಸು­ವಿಗೆ ಹಿಂಡಿ ಹಾಕಿದಂತೆ. ಜನಸಾಮಾನ್ಯನಿಗೆ ಇರುವ ಬಂಡವಾಳ ಒಂದು ವೋಟು. ಆದರೂ ಆ ಒಂದು ವೋಟಿಗಾಗಿ ಇಷ್ಟೆಲ್ಲಾ ಹೈರಾ­ಣಾ­ಗು­ವುದೇ ಪ್ರಜಾಪ್ರಭುತ್ವದಲ್ಲಿರುವ ಶಕ್ತಿ. ವೋಟನ್ನೇ ಖಡ್ಗವಾಗಿಸಿಕೊಂಡು ಜನ­ಸಾಮಾ­ನ್ಯರು ಪ್ರಜಾಪ್ರಭುತ್ವಕ್ಕಾಗಿ ಹೋರಾಡಬೇಕಾಗಿದೆ. 



ಕಾಮೆಂಟ್‌ಗಳಿಲ್ಲ: