ಗುರುವಾರ, ಮಾರ್ಚ್ 5, 2015

ಡಾ.ವಸು ಮಳಲಿ ಅವರ`ಕಳ್ಳು-ಬಳ್ಳಿ' ಪ್ರಜಾವಾಣಿ ಅಂಕಣ ಬರಹಗಳು-1

ಕಳ್ಳು-ಬಳ್ಳಿ
ಪ್ರಜಾವಾಣಿ ಅಂಕಣ ಬರಹಗಳು
ಡಾ.ವಸು ಮಳಲಿ
ಸೌಜನ್ಯ: ಪ್ರಜಾವಾಣಿ

ಸಂಗ್ರಹ: ಅರುಣ್ ಜೋಳದಕೂಡ್ಲಿಗಿ
 ವಸು ಮಳಲಿ ಬೌತಿಕವಾಗಿ ನಮ್ಮನ್ನು ಅಗಲಿದರೂ ಬೌದ್ಧಿಕವಾಗಿ ಅವರ ಬರಹಗಳು ನಮ್ಮ ಜತೆ ಸಂವಾದ ಮಾಡುವ ಶಕ್ತಿ ಹೊಂದಿವೆ. ಪ್ರಜಾವಾಣಿ ದಿನಪತ್ರಿಕೆಗೆ ಅವರು ಬರೆದ ಕಳ್ಳುಬಳ್ಳಿ ಬರಹಗಳು ಅವರ ಚಿಂತನೆಯ ಎಳೆಗಳನ್ನು ಜೋಡಿಸುವಂತಿವೆ. ಅವರ ತಿಳಿವಿನ  ಆಳ ಮತ್ತು ಖಚಿತತೆ ಹೊಸ ತಲೆಮಾರಿನ ಸಂಶೋಧಕರನ್ನು ತೀವ್ರತೆರನಾಗಿ ಪ್ರಭಾವಿಸುವ ಗುಣವನ್ನು ಹೊಂದಿವೆ. ನಾನು ವಸು ಅವರ ಕಳ್ಳುಬಳ್ಳಿ ಕಾಲಂನ ಖಾಯಂ ಓದುಗನಾಗಿದ್ದೆ. ಒಂದೆರಡು ಬರಹಗಳ ಸಂದರ್ಭದಲ್ಲಿ ಮಾತೂ ಆಡಿದ್ದೆ. ಅಂತೆಯೇ ಓದಿನಿಂದ ತಪ್ಪಿಸಿಕೊಂಡ ಬರಹಗಳನ್ನು ಒಂದೆಡೆ ಕೂಡಿಹಾಕಿಕೊಂಡು ಓದೋಣವೆಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಅಷ್ಟೂ ಬರಹಗಳನ್ನು ಒಂದೆಡೆ ಕಲೆಹಾಕಿ ಓದತೊಡಗಿದೆ. ಹೀಗೆ ಒಂದೆಡೆ ಸಿಗುವುದು ಅನುಕೂಲ ಎಂದು ಪಿಡಿಎಪ್ ಫೈಲ್ ಮಾಡಿ ಕೆಲವರಿಗೆ ಮೇಲ್ ಮಾಡಿದೆ. ಅಂತೆಯೇ ಅಷ್ಟೂ ಬರಹವನ್ನು ಐದೈದು ಲೇಖನದಂತೆ 7 ಭಾಗ ಮಾಡಿ 35 ಲೇಖನಗಳನ್ನು ಸರಣಿಯಾಗಿ ಓದಲು ಅನುವಾಗುವಂತೆ ಬ್ಲಾಗ್ ನಲ್ಲಿ ಹಾಕಬಹುದು ಅಂದುಕೊಂಡು ಇಲ್ಲಿ ಪ್ರಕಟಿಸುತ್ತಿರುವೆ. ಅಂತರ್ಜಾಲದಲ್ಲಿ ಸಿಕ್ಕ ಕೆಲವು ಫೋಟೋಗಳನ್ನು ಬಳಸಿಕೊಂಡಿರುವೆ. ಮೊದಲನೆಯದಾಗಿ ಪ್ರಜಾವಾಣಿಗೆ ಕೃತಜ್ಞತೆಗಳು.
-ಅರುಣ್
ಬುದ್ಧನಿಂದ ಅಂಬೇಡ್ಕರ್‌ವರೆಗೆ...
Tue, 10/14/2014 
ನಾಯಿಗಳಿಗೆ ಮತ್ತು ಭಾರತೀಯರಿಗೆ ಪ್ರವೇಶವಿಲ್ಲ’ ಎಂದು ಯುರೋಪಿ­ಯನ್‌ರ ಕ್ಲಬ್‌ನ ಬಾಗಿಲುಗಳ ಮೇಲೆ ಬರೆ­ದಿ­ರುವ ಆ ಸಾಲುಗಳಾದರೂ ಪರವಾಗಿಲ್ಲ. ನಮ್ಮ ದೇಗುಲಗಳ ಬಾಗಿಲಲ್ಲಿ ದೇವರು, ಪ್ರಾಣಿಗಳು ಮತ್ತು ಹಿಂದೂಗಳು ಎಲ್ಲರಿಗೂ ಪ್ರವೇಶವಿದೆ. ಆದರೆ ಅಸ್ಪೃಶ್ಯರಿಗೆ ಮಾತ್ರ ಪ್ರವೇಶವಿಲ್ಲ ಎಂದಿ­ರುತ್ತದೆ. ಹೀಗೆಂದು ದೇವಾಲಯ ಪ್ರವೇಶವನ್ನು ಕುರಿತು ಬರೆದ ಗಾಂಧೀಜಿಯವರಿಗೆ ಉತ್ತರ ನೀಡಿ­ದವರು ಬಾಬಾ ಸಾಹೇಬ್ ಅಂಬೇಡ್ಕರ್. ಅಸಮಾನತೆಯ ನೆಲಗಟ್ಟಿನ ಮೇಲೆ ನಿಂತ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮ ವನ್ನು ಸ್ವೀಕರಿಸಿದಾಗ ಅದು ಅಂಬೇಡ್ಕರ್‌ ಒಬ್ಬರ ಬದುಕಿಗೆ ತಿರುವಾಗಿರಲಿಲ್ಲ. ಭಾರತದ ಭವಿಷ್ಯಕ್ಕೆ ಬರೆದ ತಿರುವಾಗಿತ್ತು.
ಅಂಬೇಡ್ಕರ್ ಬೌದ್ಧ ಧರ್ಮವನ್ನು ಸ್ವೀಕರಿಸಿದ ಈ ದಿನ ಬುದ್ಧ ಮತ್ತು ಬೌದ್ಧ ಧರ್ಮದ ಜಾಡನ್ನು ಹಿಡಿದು ಚಿಂತಿಸುವಂತೆ ಮಾಡಿದೆ. ಬುದ್ಧ ಹಾಗೂ ಬೌದ್ಧ ಧರ್ಮವನ್ನು ವಿವರಿಸುವ ಶಾಲಾ ಪಠ್ಯಗಳು ಬುದ್ಧನ ಬದುಕಿನ ಬಗೆಗೆ ಬಂದಿರುವ ಸರಳವಾದ ಕಥೆಯನ್ನು ಹೇಳುತ್ತಾ ಬಂದಿವೆ. ಒಬ್ಬ ರೋಗಿ, ಮುದುಕ ಮತ್ತು ಭಿಕ್ಷುಕ­ನನ್ನು ನೋಡಿ ಸಂಸಾರವನ್ನು ತೊರೆಯುವ ಈ ಪುರಾಣೀಕರಿಸಿದ ಕಥೆ ರೂಪಕ ಭಾಷೆಯದ್ದಾಗಿರ­ಬೇಕು. ಚರಿತ್ರೆಯ ಆಳಕ್ಕಿಳಿದು ನೋಡುವ ಅಂಬೇಡ್ಕರ್ ನದಿ ವ್ಯಾಜ್ಯದಂತಹ ಎರಡು ರಾಜ್ಯಗಳ ನಡುವಿನ ಹೋರಾಟವನ್ನು ತಪ್ಪಿಸಲು ಸಿದ್ಧಾರ್ಥ ರಾಜ್ಯವನ್ನು ತೊರೆಯಬೇಕಾಯಿ­ತೆಂದು ವಿವರಿಸುತ್ತಾರೆ.
ಕ್ರಿ.ಪೂ. ಆರನೆಯ ಶತಮಾನ ಹಲವು ವೈಚಾ­ರಿಕ ವಾದಗಳ ಹುಟ್ಟಿಗೆ ಕಾರಣವಾಗಿದೆ. ಈ ಎಲ್ಲಾ ಸಿದ್ಧಾಂತಗಳಲ್ಲಿ ಕಾಣುವ ಸಾಮಾನ್ಯ­ವಾದ ವಿಚಾರವೆಂದರೆ ವೈದಿಕ ಪಾರಮ್ಯದ ವಿರೋಧ. ಈ ವಿರೋಧವನ್ನು ಕಂಡುಕೊಂಡ ಮಾರ್ಗ ಮಾತ್ರ ದೊಡ್ಡ ಸಿದ್ಧಾಂತದ ಹುಟ್ಟಿಗೆ ಕಾರಣವಾಯಿತು. ಸಮಾಜದ ಅಸಮಾನತೆ­ಯನ್ನು ಒಪ್ಪುವ ಮತ್ತು ಅಮೂರ್ತದಲ್ಲಿ ತನ್ನ ವಿಚಾರವನ್ನು ಮಂಡಿಸುವ, ವಿಚಾರವನ್ನು ಪ್ರತಿ­ಭ­ಟಿಸದೆ ವೇದ ಸಮಾಜದ ಹೊರಗುಳಿದ ಜನ­ರಿಗೆ ಬೇರೆ ಮಾರ್ಗವೇ ಇರಲಿಲ್ಲ. ಬುದ್ಧನ ವಿಚಾರ­ಗಳು ಹೇಗೆ ಹರಿದು ಬಂದಿವೆ ಎಂಬ ಚಾರಿತ್ರಿಕ ಬೆಳವಣಿಗೆಯನ್ನು ಅಂಬೇಡ್ಕರ್ ‘ಬುದ್ಧ ಅಂಡ್ ಹಿಸ್ ಧಮ್ಮ’ ಕೃತಿಯಲ್ಲಿ ಸ್ಪಷ್ಟವಾದ ವಿವರಣೆ­ಯನ್ನು ನೀಡುತ್ತಾರೆ. ಬುದ್ಧ ಕೊಟ್ಟ ವಿಚಾರ ವಾಸ್ತವದ ಬದುಕಿಗೆ ನೀಡಿದ ಮಾರ್ಗವಾಗಿತ್ತೇ ಹೊರತು ಕಣ್ಣಿಗೆ ಕಾಣದ, ಕೈಗೆಟುಕದ ಆತ್ಮ, ಪರಮಾತ್ಮನ ಚಿಂತೆ ಅದಾಗಿರಲಿಲ್ಲ.
ಬುದ್ಧ ಎಲ್ಲೂ ತನ್ನನ್ನು ದೇವರೆಂದು ಹೇಳಿ­ಕೊಳ್ಳ­ಲಿಲ್ಲವೆಂದು ನಾಗಾರ್ಜುನ ತನ್ನ ‘ಮಧ್ಯ­ಮಕ ಕಾರಿಕಾ’­ದಲ್ಲಿ ಮತ್ತೆಮತ್ತೆ ಹೇಳುತ್ತಾನೆ.
ಬೌದ್ಧ ಧರ್ಮವಾಗಲಿ ಅಥವಾ ಬೇರೆ ಯಾವುದೇ ಧರ್ಮವಾಗಲೀ ನಾವಿಂದು ಕೇಳಿ­ಕೊಳ್ಳ­ಬೇಕಾಗಿರುವುದು ಇವತ್ತಿನ ಬದುಕಿಗೆ ಎಷ್ಟು ಸಮಂಜಸ ಮತ್ತು ಎಷ್ಟರಮಟ್ಟಿಗೆ ಅದು ನಮ್ಮ ಬದುಕನ್ನು ನಿರ್ದೇಶಿಸುತ್ತದೆ.

ಬುದ್ಧನ ತತ್ವ ಜನರು ತಮ್ಮ ಬದುಕನ್ನು ರೂಪಿಸಿ­ಕೊಳ್ಳಲು ಹಲವು ರೀತಿಯಲ್ಲಿ ಕಾರಣವಾ­ಗಿದ್ದು, ಗೊತ್ತಿದ್ದೋ ಗೊತ್ತಿಲ್ಲದೆಯೇ ಅದು ಭಾರತೀಯನ ಬದುಕಿನ ಭಾಗವಾಗಿದೆ. ಬೌದ್ಧ ಧರ್ಮದ ಅಧ್ಯಯನ ಮಾಡುವ ವಿದ್ವಾಂಸರು ಬೌದ್ಧ ಧರ್ಮದ ಬೆಳವಣಿಗೆಯನ್ನು ಗುರುತಿಸಿ ಅನಂತರದಲ್ಲಿ ಅದರ ಪತನವನ್ನು ಗುರುತಿ­ಸುತ್ತಾ ಬಂದಿದ್ದಾರೆ. ಆದರೆ ಬೌದ್ಧ ಧರ್ಮ ಧಾರ್ಮಿಕ ಆಚರಣೆಯಾಗಿ ನಶಿಸಿಹೋಗಿದ್ದರೂ ಜನರ ಬದುಕಿನ ಭಾಗವಾಗಿ ಹರಿದುಬಂದಿದೆ ಎಂದು ಹೇಳಲು ಹಲವು ನಿದರ್ಶನಗಳು ದೊರೆ­ಯುತ್ತವೆ. ಬೌದ್ಧರ ಹತ್ಯೆ  ಬೌದ್ಧ ಧರ್ಮ­ವನ್ನು ಮರೆಮಾಡಲು ಸಾಧ್ಯವಾಗಿದೆಯೇ ಹೊರತು ಜನಪದರ ಬದುಕಿನ ಭಾಗವೇ ಆಗಿಹೋದ ಬೌದ್ಧ ತತ್ವಗಳನ್ನು ಅಳಿಸಿ ಹಾಕಲು ಸಾಧ್ಯವಾ­ಗಿಲ್ಲ. ಬೌದ್ಧ ಚಿಂತನೆ ಕಾಲದೇಶಗಳನ್ನು ಮೀರಿ ಹರಡುತ್ತಾ ಬಂದಿದೆ. ವೈಚಾರಿಕತೆ, ತರ್ಕ, ಅನುಭವ ವೇದ್ಯವಾದ ಸತ್ಯ, ಸಮಾನತೆ, ವ್ಯಕ್ತಿಯ ವಿಮೋಚನೆ ಇಂತಹ ಆಲೋಚನೆಯ ಮೇಲೆ ಚಿಂತನೆಯನ್ನು ಮಾಡಬಲ್ಲ ಯಾವುದೇ ತತ್ವಜ್ಞಾನಿ ಮರಳಿ ಬೌದ್ಧ ತತ್ವದ ಒಳಹೊಕ್ಕು ನೋಡಬೇಕಾಗುತ್ತದೆ.

 ಭಾರತದ ಮಟ್ಟಿಗಂತೂ ವೈದಿಕ ನಂಬಿಕೆ­ಗಳನ್ನು ಕುರಿತಾದ ಪ್ರಶ್ನೆ ಮತ್ತು ಪ್ರತಿಭಟನೆ ನಿರಂತರವಾಗಿ ಈ ನಾಡಿನಲ್ಲಿ ನಡೆಯುತ್ತಾ ಬಂದಿದೆ. ವಿರೋ­ಧವೇ ಒಂದು ಧಾರೆಯಾಗಿ ಹರಿದು ಬರದಿ­ದ್ದರೂ, ಮತ್ತೆ ಮತ್ತೆ ವೈಚಾರಿಕತೆ ತಲೆ ಎತ್ತಿ ಬ್ರಾಹ್ಮಣ್ಯವನ್ನು ಪ್ರಶ್ನಿಸಿದೆ.

ಬುದ್ಧನ ನಂತರ ಬಂದ ಪುರಾಣಗಳಲ್ಲಿ - ‘ವಾಯುಪುರಾಣ’, ‘ಮತ್ಸ್ಯ ಪುರಾಣ’, ‘ಅಗ್ನಿ­ಪುರಾಣ’-ಗಳು ಬುದ್ಧನನ್ನು ಕಠಿಣವಾಗಿ ಟೀಕೆ ಮಾಡಿವೆ. ಕೆಲವು ನೇರವಾಗಿಯೇ ಖಂಡಿಸಿವೆ. ವೈದಿಕ ಯಜ್ಞ ಯಾಗಗಳನ್ನು ನಾಶ ಮಾಡಿದವ­ನೆಂದೂ ಹೇಳುತ್ತವೆ. ಆದರೆ ‘ವಿಷ್ಣುಪುರಾಣ’ ರಚನೆಯಾಗುವ ಹೊತ್ತಿಗೆ ಬುದ್ಧನನ್ನು ದಶಾವ­ತಾರಗಳಲ್ಲಿ ಕಡೆಯವನೆಂದು ಹೇಳಲಾಗುತ್ತದೆ. ಆ ಹೊತ್ತಿಗೆ ಬೌದ್ಧರು ಪ್ರಬಲ ಶತ್ರುಗಳಾಗಿರ­ಲಿಲ್ಲ­­ವೆನಿ­ಸುತ್ತದೆ. ಜಗತ್ತಿಗೆ ವಿಶಿಷ್ಟವಾದ ರಾಜಕೀಯ ಚಿಂತನೆಯನ್ನು ನೀಡಿದ ಅಶೋಕನ ಒಟ್ಟಾರೆ ಆಲೋಚನೆಯ ನೆಲೆಗಟ್ಟು ಬುದ್ಧನ ವಿಚಾರವೇ ಆಗಿದೆ. ಕಾಲಕಾಲಕ್ಕೆ ಪರಿಷ್ಕೃತಗೊಂಡು ಹರಿದು­ಬಂದ ಚಿಂತನೆಯನ್ನು ಲಿಖಿತರೂಪಕ್ಕೆ ತಂದ ಹೆಗ್ಗಳಿಕೆ ಅಶೋಕನಿಗೆ ಸಲ್ಲುತ್ತದೆ. ಅಷ್ಟೇ ಅಲ್ಲದೆ ನಾಡಿನಾದ್ಯಂತ ಶಿಲಾಶಾಸನಗಳ ಮೇಲೆ ನಶಿಸಿ­ಹೋಗದಂತೆ ಕೆತ್ತಿಸುವ ಬಹುದೊಡ್ಡ ಯೋಜನೆ­ಯನ್ನೇ ರೂಪಿಸುತ್ತಾನೆ. ಅಕ್ಷರ ಎಂದರೆ ನಶಿಸಿ­ಹೋಗದೆ ಇರುವುದು. ವೇದ ಸಾಹಿತ್ಯ ಮೌಖಿಕ­ವಾಗಿ ಮಾತ್ರವೇ ಉಳಿಯುವಂತೆ ಯೋಜಿಸಿ­ಕೊಂಡ ಬ್ರಾಹ್ಮಣರ ಶೈಲಿಗೆ ವಿರುದ್ಧವಾಗಿ ಅಶೋಕ ನಡೆದುಕೊಳ್ಳುತ್ತಾನೆ. ವಿಸ್ತಾರವಾದ ಜನ­ಸ್ತೋಮ­ವನ್ನು ತಲುಪುವುದು ಅವನ ಉದ್ದೇಶ­ವಾಗಿರುತ್ತದೆ. ಆ ಬರವಣಿಗೆ ಈ ನಾಡಿನ ಎಲ್ಲಾ ಲಿಪಿಗೂ ಮೂಲವಾಗುತ್ತದೆ. ಈ ನಾಡನ್ನು ಅಕ್ಷರಸ್ಥಗೊಳಿಸಲು ಬೌದ್ಧ ಧರ್ಮಕ್ಕೆ ಸಾಧ್ಯ ವಾಗುತ್ತದೆ. ಕಂಠಸ್ಥವಾದ, ಸಂಸ್ಕೃತ ಭಾಷೆಯೂ ಲಿಪಿಯನ್ನು ಅಳವಡಿಸಿಕೊಂಡಾಗ ಬರಹ ರೂಪ ದಲ್ಲಿ ಬಂದ ಕೃತಿ ಅಶ್ವಘೋಷನ ‘ಬುದ್ಧ ಚರಿತೆ’. ಈ ಕೃತಿ ಬರುವ ಹೊತ್ತಿಗೆ ಬುದ್ಧನ ಬದುಕು ಸಾಕಷ್ಟು ಪುರಾಣದ ಸ್ವರೂಪ­ವನ್ನು ಪಡೆದು ಕೊಂಡಿರುವುದು ಸ್ಪಷ್ಟವಾಗುತ್ತದೆ. ಬುದ್ಧನ ವಿಚಾರ, ಆರುನೂರು ವರ್ಷಗಳು ಕಳೆ­ಯುವ ಹೊತ್ತಿಗೆ ಬುದ್ಧನ ಸುಂದರವಾದ ಶಿಲ್ಪ­ಗಳು ಮೂಡಿಬಂದಿದ್ದವು.

 ಗ್ರೀಕ್ ಹಾಗೂ ಭಾರತೀಯ ಅಂಶಗಳು ಮೇಳೈಸಿ ಒಡಮೂಡಿದ ಬುದ್ಧನ ಶಿಲ್ಪ ಭಾರತೀಯ ಶಿಲ್ಪಕಲೆಗೆ ಭದ್ರವಾದ ಬುನಾದಿಯನ್ನು ಹಾಕಿತು. ಅಲ್ಲಿಂದ ಮುಂದೆ ಬೆಳೆದ ಶಿಲ್ಪಗಳು ಶಿವನದ್ದಾಗಲೀ, ವಿಷ್ಣುವಿನ-­ದ್ದಾ­ಗಲೀ, ಜಿನಬಿಂಬವಾಗಲೀ ಬುದ್ಧ ಶಿಲ್ಪದ ಅನುಕ­ರ­ಣೆಯೇ ಆಗಿತ್ತು. ದೂರದೃಷ್ಟಿಯುಳ್ಳವನು, ಜ್ಞಾನಿ ಎಂದು ಸಾಂಕೇತಿಕವಾಗಿ ಹೇಳಲು ಹೊರಟ ಶಿಲ್ಪಿ ಬುದ್ಧನ ಹಣೆಯಲ್ಲಿ ಊರ್ಣ­ವನ್ನು ಸಂಕೇತವಾಗಿ ಬಳಸಿದ ಅದರ ಮುಂದುವ­ರಿದ ರೂಪವೋ ಎನ್ನುವಂತೆ ಶಿವನ ಶಿಲ್ಪವನ್ನು ಕೆತ್ತುವಾಗ ಹಣೆಗೆ ಮತ್ತೊಂದು ಕಣ್ಣನ್ನೋ ಚಿತ್ರಿ ಸಿದ. ಹೀನಯಾನ ಬೌದ್ಧಧರ್ಮ ಬುದ್ಧ­ನನ್ನು ಹಲವು ಸಂಕೇತಗಳಲ್ಲಿ ಸೂಚಿಸಿತ್ತು. ಬೋಧಿ ವೃಕ್ಷ, ಪಾದದ ಚಿತ್ರ, ತೆರೆದ ಸಿಂಹಾಸನ ಇತ್ಯಾದಿ. ಆನಂತರದ ಎಲ್ಲಾ ದೇವಾಲಯ­ಗಳಲ್ಲೂ ಪಾದದ ಶಿಲ್ಪವನ್ನು ಸಂಪ್ರದಾಯಗೊಳಿಸಿಕೊಳ್ಳ ಲಾಯಿತು. ಅಶೋಕ ಸ್ತಂಭವೇ ಸಂಕೇತವಾಗಿ ಕಾಣಿಸಿಕೊಂಡದ್ದು ಅಷ್ಟೇ ಕುತೂ­ಹಲಕರ­ವಾ­ಗಿದೆ. ಬೌದ್ಧ ಸ್ತೂಪಗಳ ಮುಂದೆ ಅಶೋಕ ಸ್ತಂಭ­ವನ್ನು ನಿಲ್ಲಿಸಿದ್ದು ಅದನ್ನೇ  ಅನುಸರಿಸಿ ಬಸದಿಗಳ ಮುಂದೆ ಬ್ರಹ್ಮ ಸ್ತಂಭ, ಶಿವಾಲಯ­ಗಳ ಮುಂದೆ ನಂದಿಧ್ವಜ ಸ್ಥಾಪಿತ­ವಾದವು. ಮೂಲ ಉದ್ದೇಶ ಮರೆತು ಕಂಬಗಳು ಒಂದು ರೀತಿಯಲ್ಲಿ ಆಯಾ ಮತದ ಧ್ವಜಸ್ತಂಭ­ಗಳಾದವು. ಇಂತಹ ನೂರಾರು ರೂಪಾಂತರ­ಗೊಂಡ ಸಾಂಸ್ಕೃತಿಕ ತುಣುಕುಗಳನ್ನು ಕಲೆಹಾಕ­ಬಹುದು.

ಇದೆಲ್ಲಕ್ಕೂ ಮುಖ್ಯವಾಗಿ ಎರಡು ಪ್ರಧಾನ­ವಾದ ಕುರುಹುಗಳೆಂದರೆ ಜನಪದರ ಬದುಕಿ­ನಲ್ಲಿ ಸೇರಿದ ವೈಚಾರಿಕತೆ ಮತ್ತು ಜ್ಞಾನಧಾರೆ­ಯಾಗಿ ಹರಿದು ಬಂದ ಕ್ರಮ. ದುಡಿಮೆಯನ್ನೇ ನಂಬಿ ಬದುಕುವ ವರ್ಗ ಯಾವುದೇ ವಿವರಣೆ­ಯಿಲ್ಲದೆ ಕರ್ಮ ಸಿದ್ಧಾಂತಿಗಳೇ ಆಗಿದ್ದಾರೆ. ಹುಟ್ಟು ಸಾವುಗಳಲ್ಲಿ ಸರಳವಾದ ಆಚರಣೆ­ಗಳಲ್ಲಿ ಬದುಕನ್ನು ನಿಭಾಯಿಸುತ್ತಾರೆ. ಆತ್ಮ ಪರಮಾತ್ಮನ ಕಲ್ಪನೆ ಅವರನ್ನು ಭೀಕರವಾಗಿ ಕಾಡಿಸದೆ ಇರುವುದರಿಂದ ಬದುಕು ಸರಾಗವಾಗಿ ಸಾಗುತ್ತದೆ. ಇತ್ತೀಚೆಗೆ ಬೌದ್ಧರಾದ ಕೆಲವರು ತಮ್ಮ ದಿನನಿತ್ಯದ ಬದುಕಿನಲ್ಲಿ ಹೇಗೆ ನಡೆದು­ಕೊಳ್ಳ­ಬೇಕೆಂದು ಗೊಂದಲಕ್ಕೆ ಬಿದ್ದದ್ದನ್ನು ಕಂಡಿ­ದ್ದೇನೆ. ವ್ಯಕ್ತಿ ಸತ್ತಾಗ ಅವನ ದೇಹವನ್ನು ತೊಳೆದು ಮಣ್ಣು ಮಾಡುವ ಇಲ್ಲವೆ ಚಿತೆಯಾ­ಗಿ­ಸುವ ಜನಪದರ ಬದುಕು ಸಹಜವಾಗಿಯೇ ವೈಚಾರಿಕವಾಗಿ ಚರಿತ್ರೆಯುದ್ದಕ್ಕೂ ಟೀಕೆಗೊಳ­ಗಾದ ವೈದಿಕರ ಸಂಕೀರ್ಣವಾದ ಮತ್ತು ಅವ­ರಿಗೇ ರೇಜಿಗೆ ಹುಟ್ಟಿಸುವಂತಹ ಆಚರಣೆಗಳಿಗಿಂತ ಜನಸಾಮಾನ್ಯರ ಆಚರಣೆಗಳು ಹೆಚ್ಚು ಬದುಕಿಗೆ ಪೂರಕವಾಗಿ ಕಾಣುತ್ತವೆ. ಆದ್ದರಿಂದ ಯಾವ ವಿಶೇಷ ಆಚರಣೆಯನ್ನು ಮಾಡದೆ ಅವನು ಬೌದ್ಧನಾಗುತ್ತಾನೆ. ಹೀಗೆ ಭಾರತದ ಜೀವನ ಕ್ರಮದಲ್ಲಿ ಹೆಚ್ಚು ವಾದಕ್ಕೆ ಒಳಗಾದ ನಡೆ­ಗಳೆಂದರೆ ಮಾಂಸಾಹಾರ ಮತ್ತು ಸನ್ಯಾಸ.

ಬುದ್ಧ ಹಾಗೂ ಮಹಾವೀರ ಬೋಧಿಸಿದ ಅಹಿಂಸೆಯ ತತ್ವಗಳು ಸರಳೀಕೃತಗೊಂಡು ಸಸ್ಯಾ­ಹಾರದ ಆಚರಣೆಯಲ್ಲಿ ಕೊನೆಗೊಂಡಿವೆ. ಅವರು ಬೋಧಿಸಿದ ಪ್ರಾಣಿದಯೆ ಸಸ್ಯಾಹಾರದ ಶ್ರೇಷ್ಠತೆಯಲ್ಲಿ ಕೊನೆಗೊಂಡಿದೆ. ಅದು ಜನರ ಆಹಾರ ಕ್ರಮದ ನಿಂದನೆಯಾಗಿರದೆ ಮೂಢ­ನಂಬಿಕೆಯ ಪ್ರಾಣಿ ಬಲಿಯ ಖಂಡನೆಯಾಗಿತ್ತು. ವೈದಿಕ ಆಚರಣೆಗಳಲ್ಲಿ ಉತ್ಕರ್ಷವೇ ಯಜ್ಞವಾ­ಗಿದ್ದು ಅದಕ್ಕೆ ಅರ್ಪಿಸುತ್ತಿದ್ದ ಪ್ರಾಣಿಗಳ ಹವಿಸ್ಸು ಅದರ ನಿಂದನೆಗೆ ಕಾರಣವಾಗಿತ್ತು. ಕೃಷಿಗೆ ಅಗತ್ಯವಾದ ದನಗಳ ರಕ್ಷಣೆ ಮತ್ತು ಕಾಡು­ಪ್ರಾಣಿಗಳ ರಕ್ಷಣೆಯ ಆಲೋಚನೆ ಮತ್ತು ಜೀವ­ಗಳೆಲ್ಲದರ ಸಮಾನ ಗೌರವ, ಪ್ರಾಣಿದಯೆ, ಹಾಗೂ ಅಹಿಂಸೆಯ ಪರಿಕಲ್ಪನೆಯನ್ನು ಹುಟ್ಟು­ಹಾಕಿತ್ತು. ಅದು ವ್ಯಕ್ತಿಯೊಬ್ಬನ ಆಹಾರದ ನಿಂದನೆ­­­ಯಾಗಿರಲಿಲ್ಲ. ಪ್ರಾಣಿದಯೆಯ ಅರ್ಥ ಸಂಕುಚಿತಗೊಂಡು ಸಮಾಜದಲ್ಲಿ ಈಗಾಗಲೇ ಇದ್ದ ಮೇಲು ಕೀಳಿನ ಭಾವನೆಗೆ ಮತ್ತಷ್ಟು ಒತ್ತಾಸೆ ನೀಡಿದ್ದು ದುರಂತವೇ ಆಗಿದೆ.

ಬೌದ್ಧಧರ್ಮದ ಟೀಕಾಕಾರರು ಸನ್ಯಾಸ­ವನ್ನು ಜೀವ ವಿರೋಧವಾಗಿ ಖಂಡಿಸುತ್ತಾರೆ. ಎರಡೂ­ವರೆ ಸಾವಿರ ವರ್ಷಗಳ ಹಿಂದೆ ಇನ್ನೂ ವಿಕಾಸ­ವಾಗುತ್ತಿದ್ದ ಸಮಾಜದಲ್ಲಿ ಗಂಡು ಹೆಣ್ಣಿನ ಸಂಬಂಧಗಳ ನಡುವೆ ಇದ್ದ ಸಂಕೀರ್ಣತೆ ಇಂತಹ ಪರ್ಯಾಯದ ಸೂಚನೆಗೆ ಕಾರಣವಾಗಿರಲೂ­ಬಹುದು. ವಿವಾಹ ಒಂದು ಸಾಂಸ್ಥಿಕ ರೂಪವನ್ನು ಪಡೆದು ಅದರ ಮೇಲೆ ನಿರ್ಬಂಧವನ್ನು ಹೇರು­ವುದು ಅನಿವಾರ್ಯವಾಗಿರಬೇಕು. ಪುರುಷ ಪ್ರಧಾನ ಮೌಲ್ಯಗಳು ಆರ್ಭಟಿಸಿ ಹೆಣ್ಣಿನ ಸ್ಥಾನ ಸಂಕುಚಿತಗೊಂಡ ಸಂದರ್ಭದ ಹಿನ್ನೆಲೆಯಲ್ಲಿ ಸನ್ಯಾಸವನ್ನು ಅರ್ಥ­ಮಾಡಿಕೊಳ್ಳಬೇಕಾಗು­ತ್ತದೆ. ಕಲುಷಿತಗೊಂಡು ಸಂಸಾರವೇ ಅದರ ತಿರಸ್ಕಾರಕ್ಕೆ ಕಾರಣವಾಗಿದೆ. ಕಡೆಯದಾಗಿ ಆದರೆ ಬಹುಮುಖ್ಯವಾಗಿ ಗಮನಿಸಬೇಕಾಗಿರು­ವುದು ಭಾರತದ ಜ್ಞಾನಮಾರ್ಗದಲ್ಲಿ ಬೌದ್ಧ ಚಿಂತನೆ ನಿರಂತರತೆಯನ್ನು ಕಾಯ್ದುಕೊಂಡಿದೆ. ಆಧುನಿಕ ಕಾಲದ ಜಗತ್ತಿನ ಪ್ರಮುಖ ಚಿಂತನೆ­ಗಳಿಗೆ ಬೌದ್ಧ ಚಿಂತನೆ ಅಡಿಪಾಯವನ್ನು ಹಾಕಿದೆ. ಅದು ಬೆಳೆದು ಬಂದ ಕ್ರಮವನ್ನು ಕೇವಲ ಭಾರತದ ಚಿಂತನೆಗಳಲ್ಲಿ ಮಾತ್ರವೇ ಹುಡುಕು­ವುದು ಸಾಧುವಲ್ಲ. ತರ್ಕ, ಅಸ್ತಿತ್ವವಾದವನ್ನು ಪ್ರತಿಪಾದಿಸುವ ಆಧುನಿಕ ಯುರೋಪಿನ ಚಿಂತನೆ­ಗಳಲ್ಲೂ ನಾವು ಬೌದ್ಧ ಚಿಂತನೆಯ ಮುಂದುವ­ರಿ­ಕೆ­ಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಭಾರತದಲ್ಲಿ ಬಂದ ನಾಗಾರ್ಜುನ ತರ್ಕದ ಧಾಟಿ­ಯನ್ನು ಅಲ್ಲಮನಲ್ಲಿ ಕಾಣುವುದು ಹಾಗೂ ಜನಪದರ ಮನಸೂರೆಗೊಂಡ ಮಂಟೇ­ಸ್ವಾಮಿಯಲ್ಲಿ ನೋಡುವುದು ಅಥವಾ ಇದೆಲ್ಲ­ವನ್ನೂ ಶ್ರಮಣ ಪರಂಪರೆಯೆಂದು ಗುರುತಿಸು­ವುದು ಒಂದು ಕ್ರಮವಾಗುತ್ತದೆ. ಶ್ರಮಣ ಪರಂಪರೆ ವೈದಿಕ ಚಿಂತನೆಗೆ ಮುಖಾಮುಖಿ­ಯಾಗಿ ಹರಿದುಬಂದಿದೆ. ಅದರ ಅಸ್ತಿತ್ವವೇ ಇಲ್ಲವೇನೋ ಎನ್ನುವಂತೆ ಇಂದು ನಮ್ಮ ಪಠ್ಯ­ಕ್ರಮವನ್ನೇ ರೂಪಿಸಿ ಕೊಂಡಿರುವುದು ಒಂದು ಜ್ಞಾನಧಾರೆಯನ್ನೇ ಮರೆಮಾಚಿದ ಕ್ರೌರ್ಯ­ವಾಗಿದೆ. ಬೌದ್ಧರ ಹತ್ಯೆಗಿಂತಲೂ ಚಿಂತನೆಯ ಕಗ್ಗೊಲೆ ಸಮಾಜವನ್ನು ಕಗ್ಗತ್ತಲೆಗೆ ತಳ್ಳಿದೆ.

ಆಧುನಿಕ ಸಂದರ್ಭದಲ್ಲಿ ಪಾಶ್ಚಿಮಾತ್ಯ ವಿಚಾರಧಾರೆಯೆಂದು ಮೆಟೀರಿಯಲಿಸಂನ ಹೆಸರಿ­ನಲ್ಲಿ ಮಾರ್ಕ್ಸ್‌ನ ಚಿಂತನೆಯ ಹೆಸರಿನಲ್ಲಿ ಸ್ವೀಕರಿಸುತ್ತಿದ್ದೇವೆ. ಸ್ಥಾಪಿತ ಮೌಲ್ಯಗಳನ್ನು ಪ್ರಶ್ನಿಸಲು ಬೇಕಾದ ಹರಿತವಾದ ಖಡ್ಗವಾಗಿ ಕಾಣಿಸುತ್ತದೆ. ಈ ಎಲ್ಲಾ ಕಾರಣಗಳಿಂದ ಅತ್ಯಾ­ಧುನಿಕ ಮನುಷ್ಯನಿಗೆ ಬೇಕಾದ ಶೋಷಣೆಯ ವಿರುದ್ಧದ ಸಮಾನತೆಯನ್ನು ಪ್ರತಿಪಾದಿಸುವ ಮೇಲು ಕೀಳಿನ ಭೇದವನ್ನು ತಿರಸ್ಕರಿಸುವ ಬುದ್ಧನ ವಿಚಾರ­ವನ್ನು ಅಂಬೇಡ್ಕರ್ ಒಪ್ಪಿ ಅಪ್ಪಿಕೊಳ್ಳು­ತ್ತಾರೆ. ದುಡಿಮೆಯನ್ನೇ ನಂಬಿ, ಸಹಜವಾಗಿಯೇ ಸರಳವಾಗಿ ಬದುಕುವ ಮೌನದಲ್ಲಿ ಬೌದ್ಧರೇ ಆಗಿದ್ದಾರೆ.


ಪುರಾಣದೊಳಗೆ ಚರಿತ್ರೆಯ ಹೂರಣ
Tue, 09/30/2014

ದಸರಾ ಹಬ್ಬ, ಚಾಮುಂಡಿ ಬೆಟ್ಟಕ್ಕೆ ಹೋದ­ವ­ರೆಲ್ಲಾ ಮಹಿಷಾಸುರನ ಆಳೆತ್ತರದ ಮೂರ್ತಿಯ ಮುಂದೆ ನಿಂತು ಫೋಟೊ ತೆಗೆಸಿ­ಕೊಳ್ಳುವ ಸಂಭ್ರಮ. ಕಣ್ಣಿಗೆ ರಾಚುವ ಬಣ್ಣಗಳು. ಕೋರೆ ಹಲ್ಲುಗಳು, ಕೆದರಿದ ಜಟೆ, ದೈತ್ಯಾಕಾರ, ಒಂದು ಕೈಯಲ್ಲಿ ಅಗಲವಾದ ಖಡ್ಗ ಮತ್ತೊಂದ­ರಲ್ಲಿ ಹಾವು. ಇಪ್ಪತ್ತನೇ ಶತಮಾನದ ಕಲಾವಿದ­ನೊಬ್ಬನ  ಕಲ್ಪನೆಯ ದುಷ್ಟ ರಾಕ್ಷಸನ ಗಾರೆಶಿಲ್ಪ. ಮಹಿಷನ ಕಾರಣಕ್ಕೆ ಈ ನಾಡನ್ನು ಮೈಸೂರು ಎಂದು ಕರೆಯಲಾಗಿದೆ ಎಂದು ಹೇಳುವುದು ವಾಡಿಕೆ. ಆ ರಾಕ್ಷಸನನ್ನು ಸಂಹರಿಸಿದ ದೇವಿ ಮಹಿಷಾಸುರ ಮರ್ದಿನಿ.

ಹುಲಿಯನ್ನೇರಿದ ಅವಳ ಕಲ್ಪನೆ ಬೀಭತ್ಸವಾದುದು. ಚಾಮುಂಡಿ ಬೆಟ್ಟ­ದಲ್ಲಿ ಮಹಿಷಾಸುರ ಮರ್ದಿನಿಯನ್ನೇ ಚಾಮುಂ­ಡೇ­ಶ್ವರಿ ಎಂದು ಕರೆಯಲಾಗುತ್ತದೆ. ತಮಿಳು­ನಾಡು ಮತ್ತಿತರ ಪ್ರದೇಶಗಳಲ್ಲಿ ಆರಾಧಿಸುವ ಚಾಮುಂಡೇಶ್ವರಿ, ಕೋಣನ ಸ್ವರೂಪದ ರಾಕ್ಷಸ-­ನನ್ನು ಕೊಲ್ಲುವುದಿಲ್ಲ. ಬದ­ಲಾಗಿ ಚಂಡ–ಮುಂಡ ಅಥವಾ ನಿಶುಂಬರೆಂಬ ಬೇರೆ ರಾಕ್ಷಸರನ್ನು ಸಂಹ­ರಿ­ಸುತ್ತಾಳೆ. ಮಹಿಷಾ­ಸುರ ಮರ್ದಿನಿಗಿಂತ ಚಾಮುಂ­ಡೇಶ್ವರಿಯ ಶಿಲ್ಪ ಇನ್ನೂ  ಹೆಚ್ಚು ವ್ಯಗ್ರ­ವಾಗಿ ಕೆತ್ತಲಾಗುತ್ತದೆ. ಗುಳಿ ಬಿದ್ದ ಕಣ್ಣು, ಒಳ­ಹೋದ ಹೊಟ್ಟೆ ಹಾಗೂ ರುಂಡ­ಗಳನ್ನು ಧರಿಸಿ­ರುತ್ತಾಳೆ.  ಇರಲಿ ಭಾರತದ ಶಕ್ತಿ­ದೇವತೆ­ಯರಲ್ಲಿ ಇವರಿಬ್ಬರಿಗೂ ಮಹತ್ವದ ಸ್ಥಾನ. ಕೆಲವೊಮ್ಮೆ ಹೀಗೆ ಒಬ್ಬರನ್ನು ಮತ್ತೊಬ್ಬರಲ್ಲಿ ಸಮೀಕರಿಸಿ ನೋಡುವುದು ಸಾಮಾನ್ಯವಾದ ವಿಚಾ­ರವೇ ಹೌದು. ಸದ್ಯದಲ್ಲಿ ಇವರನ್ನೆಲ್ಲಾ ಶೈವ­ಪಂಥದ ಹಿನ್ನೆಲೆಯ ಶಕ್ತಿ ದೇವತೆಗಳಾಗಿ ನೋಡ­ಲಾಗುತ್ತದೆ.

ನಮ್ಮ ನಾಡಿನ ಚರಿತ್ರೆ ಪುರಾಣಗಳಲ್ಲಿ ಹುದು­ಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಡಿ.ಡಿ. ಕೊಸಾಂಬಿ, ರೊಮಿಲಾ ಥಾಪರ್, ದೇವಿಪ್ರಸಾದ್ ಚಟ್ಟೋ­ಪಾ­ಧ್ಯಾಯ, ವಾಶ್‌ ಎಡ್ವರ್ಡ್‌ ಹೇಲ್ ಮುಂತಾದ ವಿದ್ವಾಂಸರು ಅವುಗಳನ್ನು ಅರ್ಥ­ಮಾಡಿ­ಕೊಡುವ ವಿಧಾನ­ಗ­ಳನ್ನು ಕಂಡು­ಕೊಂಡಿ­ದ್ದಾರೆ. ಪುರಾಣಗಳ ಸಂಕೇತ­ಗಳನ್ನು ಅರ್ಥಮಾಡಿ­ಕೊಳ್ಳುತ್ತಾ ಸಮು­ದಾ­ಯ­ಗಳ ಅಳಿವು ಉಳಿವನ್ನು ಬಿಡಿಸಿ ನೋಡುವ ಪ್ರಯತ್ನ ಮಾಡುತ್ತಾ ಬಂದಿ-­ದ್ದಾರೆ. ವೇದಗಳು, ಮಹಾಭಾರತ, ರಾಮಾ­ಯಣ, ಪುರಾಣಗಳು ಇವೆಲ್ಲಾ ಸಮುದಾಯದ ನೆನಪುಗಳಾಗಿ ಉಳಿದು ಬಂದಿವೆ.

ವೇದಗಳ ಕಾಲಕ್ಕೆ ವೈದಿಕ ಹಿನ್ನೆಲೆಯ ಬುಡಕಟ್ಟುಗಳಲ್ಲದೆ ಹಲವಾರು ಇತರ ಬುಡ­ಕಟ್ಟು­­ಗಳ ಹೆಸರುಗಳೂ ವೇದ ಸಾಹಿತ್ಯದಲ್ಲಿ ಕಂಡು­ಬರುತ್ತವೆ. ಅವುಗಳಲ್ಲಿ ರಾಕ್ಷಸ, ಅಸುರ, ಪಾಣಿ, ನಿಷಾದ, ಕಿರಾತ, ಪಿಶಾಚ, ದಾನವ, ದೈತ್ಯ, ನಾಗ ಹೀಗೆ ದೀರ್ಘ­ವಾದ  ಪಟ್ಟಿಯೇ ನಮಗೆ ಸಿಗುತ್ತದೆ. ಇವರೆಲ್ಲಾ ದುಷ್ಟರೂ, ಕ್ರೂರಿ­ಗಳೂ, ಕುರೂಪಿಗಳೂ, ಶತ್ರು­ಗಳೂ ಆಗಿ ಚಿತ್ರಿತ­ರಾಗಿದ್ದಾರೆ. ಅದರಲ್ಲೂ ದೇವರು ಇವರನ್ನು ಸಂಹರಿಸಿ ಋಷಿಗಳು ಯಜ್ಞ, ಯಾಗಾದಿಗಳನ್ನು ಮಾಡಲು ರಕ್ಷಣೆ ನೀಡು­ತ್ತಾರೆ. ಆ ದೇವರು­ಗ­ಳನ್ನು ಒಲಿಸಿಕೊಳ್ಳುವುದು  ಅವರ ನಿತ್ಯ ಪ್ರಯತ್ನ­ವಾ­ಗಿರುತ್ತದೆ. ಹೇಲ್ ಎಂಬ ವಿದ್ವಾಂಸನ ಇತ್ತೀ­ಚಿನ ಸಂಶೋಧನೆಯಿಂದ ತಿಳಿಯುವುದೇನೆಂದರೆ ದೇವರು ಎಂಬುವರೂ ಸಹ ಶಕ್ತಿಶಾಲಿಗಳಾದ ಒಂದು ಬುಡಕಟ್ಟೇ ಆಗಿ­ರ­ಬೇಕು. ವೈದಿಕರೊಂದಿಗೆ ಹೊಂದಿಕೊಂಡ ಕೆಲವು ಬುಡ­ಕಟ್ಟುಗಳೆಂದರೆ ಗಂಧರ್ವ, ಕಿನ್ನರ, ಕಿಂ ಪುರುಷ, ವಸು, ಯಕ್ಷ, ರುದ್ರ, ಮಾರುತ ಇತ್ಯಾದಿ.

ಮೈಸೂರಿನ ಹಿನ್ನೆಲೆಯಲ್ಲಿ ಹೆಸರಿಸುವ ಮಹಿ­ಷಾಸುರ ಅಸುರ ಕುಲಕ್ಕೆ ಸೇರಿದವನಾಗಿರಬೇಕು. ಸುರ (ದೇವರು) ಅಲ್ಲದವರು ಎನ್ನುವ ಅರ್ಥವೂ ಅದಕ್ಕೆ ಬರುತ್ತದೆ. ಅಸುರ ಎಂಬ ಬುಡಕಟ್ಟು ಇಂದಿಗೂ ಜಾರ್ಖಂಡ್ ಹಾಗೂ ಮಧ್ಯ ಪ್ರದೇಶ­ದಲ್ಲಿ ಕಂಡುಬರುತ್ತದೆ. ಉಳಿದ ಯಾವುದೇ ದ್ರಾವಿಡ ಬುಡಕಟ್ಟುಗಳ ಹಾಗೆಯೇ ಗುಂಡನೆಯ ಮುಖಚರ್ಯೆ, ದಪ್ಪ ಮೂಗು, ಕಪ್ಪು ಮೈಬಣ್ಣ ಸಾಮಾನ್ಯವಾಗಿದೆ. ಇವರ ವಿಶೇಷವೆಂದರೆ ಕಬ್ಬಿಣ­­ವನ್ನು ಗಣಿಯಿಂದ ತೆಗೆದು ಕುಲುಮೆಯಲ್ಲಿ ಕರ­ಗಿ­ಸುವ ಸಾಂಪ್ರದಾಯಿಕ ಕಲೆಗಾರಿಕೆಯನ್ನು ಬಲ್ಲವರು.

ಅಶೋಕನ ಶಾಸನಗಳಲ್ಲಿ ಮೈಸೂರನ್ನು ಎರ್ಮೈ­ನಾಡು (ಎಮ್ಮೆ ನಾಡು) ಎಂದು ಕರೆದಿ­ದ್ದಾರೆ. ಈ ಪ್ರದೇಶದಲ್ಲಿ  ಎಮ್ಮೆಗಳು ಹೆಚ್ಚಾ­ಗಿದ್ದು ಹಾಗೆ ಕರೆಯುತ್ತಿದ್ದಿರಬಹುದು. ಎಮ್ಮೆ­ಗಳು ಅಲ್ಲಿನ ಜನರ ಬದುಕನ್ನು ಆವರಿಸಿ­ಕೊಂಡಿ­ರಬಹುದು. ಈ ಕುರುಹುಗಳು ನಮಗೀಗಲೂ ಸಿಗುತ್ತವೆ. ನೀಲಗಿರಿಯ ತೋಡರು ಎಮ್ಮೆಗಳನ್ನು ಸಾಕುವ ಬುಡಕಟ್ಟಾಗಿದ್ದರು. ಅವರು ಪೂಜಿಸುವ ಗುಡಿಯ ಮುಂಭಾಗದಲ್ಲಿ ಕೋಣನ ಕೊಂಬು­ಗ­ಳನ್ನು ಸಿಕ್ಕಿಸಿರುತ್ತಾರೆ. ಮಲೆನಾಡಿನ ಕೆಲವು ಕಡೆ­ಗ­ಳಲ್ಲಿ ಕೋಣಗಳನ್ನು ಕಟ್ಟಿ ಉಳುವ ಪದ್ಧತಿ ಈಗಲೂ ಉಳಿ­ದುಬಂದಿದೆ.

ಭಾರತದ ಬಹು ಭಾಗ­ಗಳಲ್ಲಿ ಎಮ್ಮೆ ಮತ್ತು ಕೋಣ ಸಾಕುವುದು ಸಾಮಾ­ನ್ಯ­ವಾಗಿದೆ. ಭಾರತದ ಕಾಡುಗಳಲ್ಲಿ ಕಾಡೆಮ್ಮೆ­­ಗಳೂ ಹೇರಳವಾಗಿವೆ. ಆದ್ದರಿಂದ ಸ್ಥಳೀ­ಯವಾದ ಬುಡಕಟ್ಟೊಂದನ್ನು ಕೋಣನ ಹೆಸರಿ­ನಿಂದ ಕರೆ­ದಿ­ದ್ದರೆ ಅಥವಾ ಸಾಂಕೇತಿಕವಾಗಿ ಸೂಚಿ­ಸಿ­ದ್ದರೆ ಅದು ಸಹಜವಾಗಿಯೇ ಇರುತ್ತದೆ. ಭಾರ­ತದ ಹಲವು ಕಡೆ ಶಿಲಾಯುಗದ ಚಿತ್ರಗಳಲ್ಲೂ ಕೋಣನ ಚಿತ್ರ­ಗಳನ್ನು ಬಿಡಿಸಲಾಗಿದೆ. ಕೋಣನ ಕಾರಣಕ್ಕೆ ಬುಡ­ಕಟ್ಟೊಂದನ್ನು ಅಥವಾ ಬುಡ­ಕಟ್ಟಿನ ಮುಖಂಡ­ನನ್ನು ಸಂಸ್ಕೃತದಲ್ಲಿ ಮಹಿಷಾ­ಸುರ ಎಂದಿರುವ ಸಾಧ್ಯತೆಯನ್ನು ತಳ್ಳಿಹಾಕ­ಲಾಗು­ವುದಿಲ್ಲ. ಅಂತಹ ಅಸುರನನ್ನು ಕೊಂದ ದೇವಿ­ಯನ್ನು ಹಲವು ಹೆಸ­ರು­ಗಳಲ್ಲಿ ಕರೆಯಲಾಗು­ತ್ತದೆ.

ದುರ್ಗಾ, ಕಾಳಿ,  ಮಾರಿ, ಅಂಬಾ ಪರಮೇ­ಶ್ವರಿ, ಹೀಗೆ ಇಂದಿಗೂ ಪೂಜೆಗೊಳ್ಳುತ್ತಿರುವ ಜಾಗ­ಗಳನ್ನು ಹುಡುಕುತ್ತಾ ಹೋದರೆ ಮೈಸೂ­ರನ್ನು ದಾಟಿ ಭಾರತದಾದ್ಯಂತ ಹರಡಿರುವುದು ಗೊತ್ತಾಗುತ್ತದೆ. ಅಸುರರು ಭಾರ­ತದಾದ್ಯಂತ ಹರಡಿದ ಜನರಾಗಿರಬೇಕು. ಅಸುರ, ದೈತ್ಯ, ರಾಕ್ಷಸ, ದಾನವ ಇವರೆಲ್ಲರೂ ಬೇರೆಬೇರೆ ಸಮು­ದಾಯಗಳೇ ಆಗಿದ್ದರೂ ಕಾಲಾನುಕ್ರಮದಲ್ಲಿ ಅವ­ರೆಲ್ಲರನ್ನೂ ಪ್ರತ್ಯೇಕವಾಗಿ ಗುರುತಿಸದೆ ಸೇರಿಸಿ ಹೇಳಲಾಗಿ ಅವರ ನಡುವೆ ಭೇದ ಕಾಣ­ದಾಗಿದೆ. ರಾವಣನು ರಾಕ್ಷಸರ ನಾಯಕ. ರಾಮಾ­ಯಣದ ವಾನರರು ಕಪಿಗಳಾಗಿ­ರದೆ ವನಗಳಲ್ಲಿ ವಾಸ ಮಾಡುವವರಾಗಿರಬೇಕು. ಮೂಲ ಭಾರತ ಮತ್ತು ರಾಮಾಯಣಗಳನ್ನು ಅಧ್ಯಯನ ಮಾಡು­ವಾ­ಗಲೂ ಈ ವ್ಯತ್ಯಾಸ ಗಮನಕ್ಕೆ ಬರುತ್ತದೆ.

ಭಾರತದಲ್ಲಿ ಮಾತೃದೇವತೆಯ ಆರಾಧನೆ ಬಹು ಪ್ರಾಚೀನವಾದುದು. ಸಿಂಧೂ ನಾಗರಿಕತೆ­ಯಲ್ಲೇ ನಮಗೆ ಸಪ್ತಮಾತೃಕೆಯರ ಮಣ್ಣಿನ ಶಿಲ್ಪಗಳು ಸಿಗುತ್ತವೆ. ಹಾಗೂ ವೈದಿಕವಲ್ಲದ ಹಲವು ಬುಡಕಟ್ಟುಗಳು ಹಲವು ರೂಪದಲ್ಲಿ ಹೆಣ್ಣನ್ನು ಪೂಜಿಸುವುದು ಕಂಡುಬರುತ್ತದೆ. ಅದ­ರಲ್ಲೂ ಈಶಾನ್ಯ ಭಾಗದ ಜನ ವಿಶೇಷವಾಗಿ ಶಕ್ತಿ ದೇವತೆಯ ಪೂಜಕರು. ಶಾಕ್ತ ಪರಂಪರೆ ಶೈವ ಪರಂಪರೆಯೊಂದಿಗೆ ಬೆರೆತು ಪುರಾಣಗಳ ರಚನೆ­ಯಲ್ಲಿ ಮತ್ತಷ್ಟು ವಿಸ್ತಾರಗೊಂಡಿತು. ಶಾಕ್ತ ಪರಂ­ಪರೆ ತನ್ನೊಳಗೆ ತಂತ್ರದ ವಿಧಿವಿಧಾನಗಳನ್ನು ಬೆಸೆ­ದುಕೊಂಡು ಅದಕ್ಕೆ ಮತ್ತಷ್ಟು ಮನ್ನಣೆ, ರೋಚ­ಕತೆ ಸಿಕ್ಕಿರಬಹುದು.

ಶಾಕ್ತ ಪರಂಪರೆ ಶೈವ, ವೈಷ್ಣವ ಮಾತ್ರವಲ್ಲದೆ, ಬೌದ್ಧ, ಜೈನ ಪಂಥ­ಗ­ಳನ್ನೂ ಒಳಹೊಕ್ಕಿತು. ವಜ್ರಾಯನ ಬೌದ್ಧ­ಪಂಥದ ವಿಶೇಷತೆಯೇ ಅದರಲ್ಲಿ ಕಾಣಿಸಿಕೊಂಡ ಶಕ್ತಿ ದೇವತೆಯರು. ಹಾಗಾಗಿ ಕಾಳಿ, ಸರಸ್ವತಿ, ತಾರಾ­ಭಗವತಿ ಇವು ಬೌದ್ಧ ಹಿನ್ನೆ­ಲೆಯಲ್ಲೂ ಪ್ರತಿ­ಧ್ವನಿ­ಸುತ್ತವೆ. ಬೌದ್ಧ ಪಂಥದ ಶಾಖೆಗಳು ಶೈವ­ರೊಳಗೆ ಸೇರಿಹೋದಂತೆ ಅದರ ಮೂಲ ಕುರು­ಹು­ಗಳನ್ನು ಕಳೆದು­ಕೊಂಡಿವೆ. ಈ ವಿವರ­ಣೆ­ಗಳ ಹರವು ಸುಮಾರು ಮೂರು ಸಾವಿರ ವರ್ಷ­ಗ­ಳದ್ದು. ನಮ್ಮ ಕುತೂ­ಹಲ ಇರುವುದು ಈ ಅಸು­ರ­ರನ್ನು ಕೊಂದ ಕಥೆಗಳನ್ನು ಪುರಾಣಗಳಲ್ಲಿ ಮೇಲಿಂದ ಮೇಲೆ ಏಕೆ ಹೇಳಲಾಗಿದೆ ಎಂಬುದರತ್ತ.
ಸುಲಭ­ವಾದ ವಿವರಣೆ ಎಂದರೆ, ಶಕ್ತಿ ದೇವತೆಗಳನ್ನು ಆರಾಧಿಸುವ ಸಮುದಾಯಗಳು ಅಸುರರ ಸಂಹಾರ ಮಾಡಿವೆ. ಅದು ನಿರಂತರವಾಗಿ ನಡೆ­ದಿತ್ತೇ ಅಥವಾ ಎಲ್ಲೋ ನಡೆದ ಕೆಲವು ಘಟನೆ­ಗಳು ಉತ್ಪ್ರೇಕ್ಷಿತವಾಗಿವೆಯೋ ಎಂಬುದಕ್ಕೆ  ಅಧ್ಯ­ಯನದ ಅಗತ್ಯವಿದೆ. ಯಾವುದೇ ಊರಿನ ದೇವಿ­ಯನ್ನು ಆ ಊರಿನ ಸಂಕೇತವಾಗಿ ಸಂಬೋಧಿ­ಸು­ತ್ತಿದ್ದರು ಎಂಬುದನ್ನು ಒಂದು ಸರಳ ಉದಾಹ­ರಣೆಯ ಮೂಲಕ ವಿವರಿಸಬಹುದು. ಪಿರಿಯಾ­ಪಟ್ಟಣದ ಕಾಳಗವನ್ನು ವಿವರಿಸುವ ಜನ­ಪದ ಕಾವ್ಯದಲ್ಲಿ ಪಿರಿಯಾಪಟ್ಟಣದಮ್ಮ ಹಾಗೂ ಚಾಮುಂಡಿಯ ನಡುವೆ ನಡೆಯುವ ಕಾಳಗ­ವೆಂದು ವರ್ಣಿಸುವ ಕ್ರಮವು ಪುರಾಣ ಶೈಲಿಯ­ದೆಂದು ತಿಳಿಯುತ್ತದೆ.  ಇವು ರಾಜರು ನಡೆಸುವ ಹೋರಾಟಗಳಾಗದೆ ಆ ಊರ ದೇವತೆಗಳು ನಡೆಸುವ ಹೋರಾಟವೆಂದು ಹಾಡಲಾಗುತ್ತದೆ.

ದುರ್ಗೆಯನ್ನು ಆರಾಧಿಸುವ ಜನರು ಕೋಣ­ನನ್ನು ಸಾಕುತ್ತಿದ್ದ ಇಲ್ಲವೇ ಕೋಣನನ್ನೇ ಸಂಕೇತ­ವಾಗಿ ಹೊಂದಿದ್ದ ಬುಡಕಟ್ಟು ಜನರನ್ನು ಹತ್ಯೆಗೈದ ಈ ಕಥೆ ಇಂದಿಗೂ ಪೂಜೆಗೊಳ್ಳುತ್ತಿದೆ. ಆ ಬುಡ­ಕಟ್ಟಿನ ಜನ ಅವರೇ ಆಗಿದ್ದರೂ ಆಶ್ಚರ್ಯವಿಲ್ಲ. ಭಾರತದ ದೇಗುಲಗಳ ಶಿಲ್ಪಗಳು ಈ ಕಥೆಗೆ ಮತ್ತಷ್ಟು ಚಾರಿತ್ರಿಕ ದಾಖಲೆಗಳಾಗಿ ಒದಗುತ್ತವೆ. ನನ್ನ ಅಧ್ಯಯನಕ್ಕೆ ಸಿಕ್ಕ ಮಾಹಿತಿಯಂತೆ ಕರ್ನಾ­ಟಕದಲ್ಲಿ ದೇಗುಲಶಿಲ್ಪಗಳ ಆರಂಭವನ್ನು ಬಾದಾಮಿ ಗುಹಾಲಯಗಳಲ್ಲಿ ಗುರುತಿಸಲಾ­ಗು­ತ್ತದೆ. ಇಲ್ಲಿ ಮಹಿಷಾಸುರ ಮರ್ದಿನಿಯ ಶಿಲ್ಪ­ವಿದೆ. 

ಕೋಣನನ್ನು ಈಟಿಯಿಂದ ತಿವಿಯುತ್ತಿರುವ ಈ ಶಿಲ್ಪದಲ್ಲಿ ಮಹಿಷಾಸುರ ಮರ್ದಿನಿಯ ದೇಹದ ಮೈಮಾಟ, ಅವಳು ಬೇಟೆಯನ್ನು ಹಿಡಿದು ಸಂಭ್ರಮಿಸುವಂತೆ ಮೂಡಿಬಂದಿದೆ.  ಕೋಣನ ಬಾಲವನ್ನು ಎತ್ತಿಹಿಡಿದು ಅದರ ಕೊರಳಿಗೆ ಭರ್ಜಿಯನ್ನು ನಾಟಿ ನಿಂತಿರುವುದು ಬಹಳ ನೈಜವಾಗಿದೆ. ಏಳನೇ ಶತಮಾನಕ್ಕೆ ಸೇರಿದ ಪಾಲರ ಶಿಲ್ಪವನ್ನು ನೋಡಿದರೆ ಕೋಣನ ಮುಖ­ವುಳ್ಳ ವ್ಯಕ್ತಿ ನಿಂತು ಹೋರಾಡುತ್ತಿರುವಂತೆ ಕೆತ್ತ­ಲಾ­ಗಿದೆ. ಅದೇ ಸಮಕಾಲೀನವಾದ ಪಲ್ಲವರ ಕಾಲದ ಮಹಾಬಲಿಪುರಂನ ಶಿಲ್ಪದಲ್ಲಿ ಛೇದ­ವಾದ ಕೋಣನ ತಲೆಯಿಂದ ರಾಕ್ಷಸನ ಮುಖ ಹೊರಬಂದು ಹೋರಾಡುವಂತೆ ಕಾಣುತ್ತದೆ. ಇಲ್ಲಿ ಪುರಾಣದ ಕಥೆ ಶಿಲ್ಪಿಯ ಕಲ್ಪನೆಗೆ ಸಿಕ್ಕು ರೋಚಕತೆ ಪಡೆದುಕೊಂಡಿದೆ.

ರಕ್ಕಸನನ್ನು ಕೊಲ್ಲುವ ದುರ್ಗಿಯನ್ನಾಗಲೀ ಕಾಳಿಯನ್ನಾಗಲೀ ಅದೆಷ್ಟು ಸಮರ್ಥವಾಗಿ ತೋರಿಸಿದರೂ ಶಿಲ್ಪಿಗೆ ತೃಪ್ತಿ ಇಲ್ಲವೇನೋ ಎನ್ನಿಸುತ್ತದೆ. ಅದಕ್ಕಾಗಿ ನಾಲ್ಕು, ಆರು, ಎಂಟು ಅಷ್ಟೇ ಅಲ್ಲ ಹನ್ನೆರಡು ಕೈ­ಗಳನ್ನೂ ನೀಡಲಾಗಿದೆ. ಅಂದರೆ ಬಹು ಭುಜಗ­ಳನ್ನು ಹೊಂದುವಷ್ಟು ಸಮರ್ಥಳು ಅವಳೆಂ­ಬುದೇ ಅವರ ಶಿಲ್ಪದ ಮೂಲಕ ಹೇಳಿರುವ ಸಂದೇಶ. ಕೋಣನ ಶಿಲ್ಪದಲ್ಲೂ ಹಲವು ಮಾರ್ಪಾ­­­ಡುಗಳು ಬರತೊಡಗಿದವು. ಕೋಣ­ನನ್ನು ತೋರಿಸುವ ಬದಲು ಕೋಣನ ದೇಹ ಹಾಗೂ ಮಾನವ ತಲೆಯ ಅಸುರ  ಅಥವಾ ಮಾನವ ದೇಹದ ಹಾಗೂ ಕೋಣನ ತಲೆಯ ಅಸುರ– ಹೀಗೆ ಶಿಲ್ಪಿಯು ಕಾಲಕಾಲಕ್ಕೆ ರೌದ್ರಾವ­ತಾರವನ್ನು ಸೃಷ್ಟಿಸುವಲ್ಲಿ ತನ್ನ ಸೃಜನಶೀಲತೆ­ಯನ್ನು ಮೆರೆಯತೊಡಗಿದ. ಆರಂಭದ ಶಿಲ್ಪದಲ್ಲಿ ಇಲ್ಲದ ಅಸುರನ ಕಲ್ಪನೆ ನಂತರ ಬೆಳೆಯುತ್ತಾ ಹೋಗಿದೆ. ಬಂಗಾಳದ ವೈವಿಧ್ಯಮಯವಾದ ಕಾಳಿಯ ಮಣ್ಣಿನ ಮೂರ್ತಿಗಳನ್ನು ನೋಡಿದರೆ ಇದು ಬಹುಶಃ ಇನ್ನೂ ಮುಂದುವರಿದಿದೆ ಎನ್ನಿ­ಸು­ತ್ತದೆ.

ಕೋಣನ ಬಲಿ ಈ ಹಬ್ಬದ ಹಿಂದಿನ ಮತ್ತೊಂದು ಪ್ರಮುಖ ಅಂಶ. ಇವತ್ತು ಕೋಣನ ಬಲಿ ನಿಷೇಧಗೊಂಡಿದೆ ಎಂಬುದು ನಿಜವೇ ಆದರೂ ಅದರ ಹಿಂದಿನ ಕಥೆ ಹಲವು ಪ್ರಶ್ನೆಗಳಿಗೆ ದಾರಿಮಾಡಿಕೊಡುತ್ತದೆ. ಮಾರಮ್ಮನಿಗೆ ಮುಖ್ಯ­ವಾಗಿ ಕೋಣನ ಬಲಿಯನ್ನು ನೀಡಲಾಗುತ್ತದೆ. ಒಂದು ಕಾಲಕ್ಕೆ ಕೋಣನ ಬಲಿಗೆ ಹೆಸರು ವಾಸಿ­ಯಾ­ದದ್ದು ಶಿರಸಿಯ ಮಾರಿಕಾಂಬಾ ದೇವ­ಸ್ಥಾನ. ಭಾರತದಲ್ಲಿ ಮಾತ್ರವಲ್ಲ ನೇಪಾಳದಲ್ಲೂ ಈ ಆಚರಣೆ ಹೆಚ್ಚಾಗಿಯೇ ಕಂಡುಬರುತ್ತದೆ. ಹಳ್ಳಿಹಳ್ಳಿಗಳಲ್ಲಿ ಆಚರಿಸುವ ಈ ಹಬ್ಬದ ಹಿಂದೆ ಅಸಾದಿಗಳು ಹಾಡುವ ಕಥೆ ಎಲ್ಲಾ ಕಡೆಯೂ ಕೇಳಿ ಬರುತ್ತದೆ.
ಮಾರಮ್ಮ ಬ್ರಾಹ್ಮಣ ಸಮು­ದಾಯದ ಸುಂದರ ಕನ್ಯೆ. ಅವಳನ್ನು ಬಯಸಿ ತನ್ನ ಹುಟ್ಟಿನ ಮೂಲವನ್ನು ಮುಚ್ಚಿಟ್ಟ ತಳಸಮುದಾ­ಯದ ಹುಡುಗ, ಸುಂದರವಾದ ಸಂಸಾರ ನಡೆ­ಸು­ತ್ತಿದ್ದ. ಮಗನನ್ನು ನೋಡಲು ಬಂದ ತಾಯಿ ಬಾಯಿತಪ್ಪಿ ಆಡಿದ ಮಾತಿನಿಂದ ಅವನ ಕುಲ­ಮೂಲ ತಿಳಿದು ಮಾರಮ್ಮ ಅವನನ್ನು ಕೊಲ್ಲಲು ಹೋದಾಗ ಅವನು ಕೋಣನ ದೇಹವನ್ನು ಹೊಕ್ಕು­ಬಿಡುತ್ತಾನೆ. ವ್ಯಗ್ರಳಾದ ಮಾರಮ್ಮ ಕೋಣ­ವನ್ನು ಬಲಿತೆಗೆದುಕೊಳ್ಳುತ್ತಾಳೆ. ಆ ಬಲಿ­ಯನ್ನು ಕೊಟ್ಟನಂತರ ಕೋಣನ ಕಾಲನ್ನು ಅದರ ಬಾಯಿಗೆ ಸಿಕ್ಕಿಸಿ ಅದರ ತಲೆಯ ಮೇಲೆ ಅದರ ದೇಹದಿಂದ ತೆಗೆದ ತುಪ್ಪದಲ್ಲಿ ದೀಪಹಚ್ಚ­ಲಾಗು­ತ್ತದೆ. ಇದು ವರ್ಣಸಂಕರಕ್ಕೆ ನೀಡುವ ಎಚ್ಚರ­ವಾ­ಗಿದೆ. ಅವಳಿಗೆ ಹುಟ್ಟಿದ ಮಕ್ಕಳಲ್ಲಿ ಒಬ್ಬ ತನ್ನ  ಕಥೆ­ಯನ್ನು ಹೇಳಿಕೊಂಡು ಬದುಕಲು ಬಿಡುತ್ತಾಳೆ. ಮುಂದೆ ಅವನ ವಂಶ ಬೆಳೆದು ಅವರು ಅಸಾದಿ­ಗ­ಳಾಗುತ್ತಾರೆ.

ಇಂದಿಗೂ ಅಸಾದಿಗಳು ಮಾರಿಕಥೆ­ಯನ್ನು ಹಾಡುತ್ತಾರೆ. ಇದೇ ಕಥೆ ಕರಿಯಮ್ಮ, ಮಸಣಿಯಮ್ಮ ಹೀಗೆ ಹಲವು ದೇವತೆಗಳ ಹೆಸ­ರಿನಲ್ಲಿ ಕೇಳಿಬರುತ್ತದೆ. ತಮ್ಮ ಅವಸಾನದ ಕಥೆ­ಯನ್ನು ತಾವೇ ಹಾಡುವ ದುರ್ದೈವ. ಬಹುಶಃ ಭಾರತದ ಹಬ್ಬಗಳಲ್ಲಿ ದುಷ್ಟರ ಹರಣವೆಂದಾಗ ಅದೊಂದು ಜನಾಂಗದ ಹರ­ಣವೇ ಇರಬಹುದು. ಬಡತನಕ್ಕೆ ಕುಸಿದ ಬುಡ­ಕಟ್ಟಿನ ಜನರನ್ನು ಬ್ರಿಟಿ­ಷರು ‘ಕ್ರಿಮಿನಲ್ ಟ್ರೈಬ್’ ಎಂದು ಕರೆದಂತೆ, ತಮ್ಮ ಸಂಸ್ಕೃತಿಯ ಆಚೆಗೆ ಉಳಿದ ಸಮುದಾ­ಯ­ಗಳನ್ನು ದುಷ್ಟರೆಂದು ಹೀಗ­ಳೆ­­ಯುತ್ತಾ ಅವರ ಬಲಿದಾನವನ್ನು ಸಂಭ್ರಮಿಸುವ ಆಚರಣೆಗಳೂ ಆಗ­ಬಹುದು. ನಮ್ಮ ಮೂಲ ನಮಗೆ ತಿಳಿಯದಿ­ದ್ದರೆ ಎಷ್ಟು ಚೆನ್ನಾಗಿತ್ತು. ಪುರಾ­ಣ­ದೊಳಗೆ ಸೇರಿದ ಚರಿತ್ರೆಯ ಹೂರಣ ಸಿಹಿ­ಯಾಗಿ­ರುತ್ತಿತ್ತು.


ಮನದ ಭಾವ ‘ಹಸೆ’ಯಾಗಿ...
Tue, 09/16/2014

 ಕಾಜಾಣ ಹೀಗೊಂದು ಮಹಿಳಾ ಕವಿ­ಗೋಷ್ಠಿ ನಡೆದಿತ್ತು. ರೂಪಾ, ಶಮ್ಮಿ, ಭಾರತಿ, ಚಂದ್ರಿಕಾ, ಮಂಜುಳಾ ಹೀಗೆ ಕವಯಿತ್ರಿ­ಯರ ಸಾಲೆ ಅಲ್ಲಿತ್ತು. ಅವರು ಕಟ್ಟಿಕೊಂಡ ರೂಪಕ ಸಾಮ್ರಾಜ್ಯದಲ್ಲಿ ಬಹುತೇಕ ಅವರೇ ಇದ್ದರು. ಹೇಳಿಕೊಳ್ಳದ, ಹೇಳಲಾಗದ ಅಂತ­ರಂಗದ ಮಾತುಗಳೆಲ್ಲ ಕವನದ ರೂಪ ಪಡೆದಿ­ದ್ದವು. ಅದರಿಂದ ಒಂದಂಶ ಸ್ಪಷ್ಟವಾಗಿತ್ತು, ಹೆಣ್ಣಿನ ತುಮುಲಗಳನ್ನು ಹೊರಹಾಕಲು ಆಸ್ಪದ ಸಿಕ್ಕರೆ ಸಾಕು ಅವು ಹೊರ ಬರಲು ತವಕಿಸುತ್ತಿವೆ. ಹಾಗೆ ಬಿಕ್ಕಿದ ಉಕ್ಕಿದ ಭಾವಗಳು ನೋಟ್ಸ್ ನ ಕಡೆಯ ಪುಟದಲ್ಲಿ ಅಡಗಿರುತ್ತಿದ್ದವು. ಅವು ಹೊರಬರಲು ಕಂಡ ಸೆಲೆ ‘ಫೇಸ್‌ಬುಕ್’ ಆಗಿದೆ. ಎಲ್ಲಾ ಅವಾಂತರಗಳ ನಡುವೆ ಫೇಸ್‌ಬುಕ್‌ ಅನ್ನು ವೇದಿಕೆಯಾಗಿಸಿಕೊಂಡು ಆಗುತ್ತಿರುವ ಕವಿಗಳ ಹುಟ್ಟು ಸೊಗಸಲ್ಲವೆ?

ಹೆಣ್ಣುಮಕ್ಕಳು ಕಳಿಸುವ ಮೆಸೇಜ್‌ಗಳಲ್ಲಿ ತೂರಿ­ಬರುವ ಭಾವದ ತುಣುಕುಗಳೂ, ಅಂದು ಹುಟ್ಟಿ ಅಂದೇ ಸಾಯುವ ಹಾಯ್ಕುಗಳು, ಚುಟು­ಕ­ಗಳು ಇವನ್ನೆಲ್ಲಾ ಹೆಣ್ಣುಮಕ್ಕಳ ಸಾಹಿತ್ಯವೆಂಬ ಲಘು ವಿಮರ್ಶೆಯ ಬರೆ ಎಳೆಯದೆ ಬೇರೆಯದೇ ಆದ ನೆಲೆಯಿಂದ ಅವರ ಸಾಹಿತ್ಯವನ್ನು ಗಮನಿಸ­ಬೇಕಾಗಿದೆ. ಏಕೆಂದರೆ ಹೆಣ್ಣಿನದೇ ಆದ ಸಾಹಿತ್ಯ ಪ್ರಕಾರವೊಂದು ಈವರೆಗೆ ಹುಟ್ಟಿಬರಲಿಲ್ಲ. ಅದ­ಕ್ಕಾಗಿ ಬಹುಶಃ ಇನ್ನೂ ಕಾದು ನೋಡಬೇಕಾಗಿದೆ. ಅವಳ ಅನುಭವಗಳು ಭಿನ್ನವಾದರೂ ಭಾಷೆ ಭಿನ್ನವಾಗದಿರುವುದು ಅವಳಿಗೆದುರಾದ ತೊಡಕೇ ಆಗಿರಬಹುದು. ಒಂದು ಕಾಲಕ್ಕೆ ಮಹಿಳಾ ಸಾಹಿತ್ಯ­-­­ವೆಂದರೆ ‘ಮ್ಯಾಚಿಂಗ್ ಬ್ಲೌಸ್ ಮತ್ತು ಸೀರೆ’ ಎಂಬ ಕಟು ವಿಮರ್ಶೆಗೆ ಒಳಗಾಗ­ಬೇಕಾ­ಗಿತ್ತು.  ಅಥವಾ ಮಹಿಳಾ ಸಾಹಿತ್ಯಕ್ಕೆ ವಿಮರ್ಶೆ ಬರೆಯುವುದು ಅಪವಾದವೇ ಆಗಿತ್ತು. ಅಡುಗೆ ಮನೆ ಪ್ರಪಂಚದಾಚೆಗೆ ಬಂದು ಅವಳು ಲೇಖನಿ ಹಿಡಿದು ಮಾತನಾಡುವ ಹೊತ್ತಿಗೆ ಒಂದು ಶತ­ಮಾನವೇ ಸಂದುಹೋಗಿದೆ. ನಿಧಾನ­ವಾಗಿ ಒಂದಾದ ಮೇಲೊಂದು ಜಾತಿ ಹಿನ್ನೆಲೆಯ ಹೆಣ್ಣು­ಮಕ್ಕಳು ಸಾಹಿತ್ಯ ರಚನೆಗೆ ತೊಡಗಿಕೊಂಡ ಅನು­ಕ್ರಮಣಿಕೆಯು ಶ್ರೇಣೀಕೃತ ವ್ಯವಸ್ಥೆಗೆ ಅನು-­ಗುಣ­ವಾಗಿಯೇ ಇದೆ. ಹೆಣ್ಣಾಗಿ ಮಾತ್ರವಲ್ಲ ಅವಳ ಸಾಮಾಜಿಕ ಹಿನ್ನೆಲೆ ಅವಳ ಬರವಣಿಗೆ­ಯಲ್ಲಿ ಕಂಡೂಕಾಣದಂತೆ ಸುಳಿದು ಹೋಗು­ತ್ತದೆ. ಸಂವೇದನೆಗಳೇ ಸಾಹಿತ್ಯದ ಶಕ್ತಿ.

ಹೆಣ್ಣಿನ ಮೌನ ಮುರಿಯಲು ಕವಿತೆಯೊಂದು ಮಾರ್ಗವೆನಿಸುತ್ತದೆ. ಯಾರು ಓದಲಿ ಬಿಡಲಿ, ವಿಮರ್ಶೆಗಳು ಅಬ್ಬರಿಸಲಿ ಬಿಡಲಿ ಹೆಣ್ಣುಮಕ್ಕಳು ಬರೆಯುವುದನ್ನು ನಿಲ್ಲಿಸದಿರಲಿ. ಸಾಗ­ಬೇಕಾದ ದಾರಿ ಇನ್ನೂ ಬಹಳವೇ ಇದೆ. ವಿಮರ್ಶೆ­ಯಾಚೆಗೆ ಅವರು ಹೇಳುವುದೇನೋ ಇದೆ ಅದನ್ನು ಕಿವಿ­ಗೊಟ್ಟು ಕೇಳಬೇಕಾಗಿದೆ.

ಆದರೊಂದು ಮಾತು, ಅಲ್ಲಿದ್ದವರೆಲ್ಲ ಕಲಿತ ಹೆಣ್ಣುಮಕ್ಕಳು. ಹಾಗಾದರೆ ಬರಹವಿಲ್ಲದ ಹೆಣ್ಣುಮಕ್ಕಳ ಮನಕ್ಕೊಂದು  ಬೆಳಕಿಂಡಿ ಇರ­ಬೇಕಲ್ಲಾ? ಅವಳು ಹಾಡುವ ಹಾಡುಗಳೇ ಅವಳ ಮನದ ಕೀಲಿ ಕೈ ಆಗಿರಬೇಕು. ತೊಟ್ಟಿಲು ತೂಗು­ವಾಗ, ರಾಗಿ ಬೀಸುವಾಗ, ನಾಟಿಮಾಡು­ವಾಗ ಹಾಡಿದ್ದಳು. ಹೂವಿನ ಸರ ಪೋಣಿಸಿದಂತೆ ಹಾಡು ಕಟ್ಟಿ­ದಳು. ಅವೆಲ್ಲವೂ ಅವಳವೇ ಎಂದೂ ಹೇಳ­ಲಾ­ಗದು. ಕಿವಿಗೆ ಬಿದ್ದ ಕಥೆಗಳು, ಆ ಸಮಾಜ ಒಪ್ಪಿದ್ದ ಮಾತುಗಳು ಅವಳದಾಗಿ ಹೊರ­ಬಂದಿ­ರಲೂಬಹುದು. ಆದರೂ ಬಸುರ ಬಯಕೆಯಿಂದ ಮಸಣದವರೆಗೆ ಅವರ ಸೊಲ್ಲು ಕೇಳಿತ್ತು.

ಹೆಣ್ಣಿನ ಭಾವದ ಕಟ್ಟುಗಳು ಹೇಗೆ ಹೇಗೋ ಒಡೆದು ಮೂಡಿವೆ. ಅಂಗಳದ ತುಂಬಾ ಉಲಿ­ದಾ­ಡುವ ಕೈಯ ಭಾಷೆಗೆ ವ್ಯಾಕರಣ ಬೇರೆಯದೇ ಇದೆ. ಸರಳವಾದ ಗೆರೆಗಳು ಅದರಲ್ಲೊಂದು ಲಯ, ಹೀಗೆ ಮನೆಮುಂದೆ ದಿನ ನಿತ್ಯ ಬಿಡುವ ಹಸೆಗೆ ಸಾಟಿ ಯಾವುದಿದೆ?  ಆ ಲಯ ಸಮು­ದ್ರದ ಅಲೆಯ ಹಾಗೆ. ಎಲೆ ಹೂ ಬಳ್ಳಿಯ ಬಾಗು ಬಳುಕು ಇಂದು ನೆನ್ನೆಯದಲ್ಲ, ಬುಡಕಟ್ಟು ಮಹಿಳೆಯರು ಗೋಡೆಯ ಮೇಲೆ ಬಿಡಿಸಿದ ಹಸೆ ಆಧುನಿಕರಲ್ಲಿ ಕೌತುಕವನ್ನು ಮೂಡಿಸುತ್ತಿದೆ. ಸಂಶೋಧನೆಗಳು ಹೇಳುತ್ತಿವೆ ಆ ಗೆರೆಗಳ ಲಯ ಧ್ವನಿ ತರಂಗವನ್ನು ಹೋಲುತ್ತದೆಯೆಂದು. ಹಸೆ ರಂಗೋಲಿ, ರಂಗವಲ್ಲಿ ಎಂದು ಕರೆಸಿಕೊಳ್ಳುವ ಮನೆಯನ್ನು ಅಂದಗೊಳಿಸುವ ಈ ಕಲೆ ಮಾರು­ಕಟ್ಟೆಯ ಮಾಲಲ್ಲ. ಅದನ್ನು ಬಿಡಿಸುವಾಗಿನ ಅವಳ ತಲ್ಲೀನತೆ ಅವಳ ನಿತ್ಯದ ಬದುಕಿನ ಜಂಜಾ­ಟವನ್ನು ತುಸುಕಾಲ ಮರೆಯುವಂತೆ ಮಾಡುತ್ತಾ ಬಂದಿದೆ. ಮತ್ತು ಅವು ಯಾರದೋ  ಒತ್ತಾಯಕ್ಕೆ ಮಣಿದು ಮೂಡುವುದಿಲ್ಲ. ಬಿಳಿಯ ಕಲ್ಲಿನ ಪುಡಿ­ಯಲ್ಲಿ ಕಾಸಿಲ್ಲದೆ, ಯಾರ ಹಂಗಿಲ್ಲದೆ ಅರಳುವ ಎಲೆ, ಹೂ, ಬಳ್ಳಿ ತುಳಿದು ಹಾಳು ಮಾಡಿದರೆ ಬೇಸರವಿಲ್ಲ. ಮತ್ತೆ ಮುಂಜಾನೆ ಗಿಡದಲ್ಲಿ ಮಲ್ಲಿಗೆ ಹೂ ಅರಳುವಂತೆ ಸಗಣಿ ನೆಲದ ಮೇಲೆ ಬಿಳಿಯ ಚುಕ್ಕಿಗಳ ಲಾಸ್ಯ. ಹಂಸ­ಗಳು ಮಾತನಾಡುತ್ತವೆ, ನವಿಲು ನಾಟ್ಯವಾಡು­ತ್ತದೆ. ಕೇರಳದ ಹೆಣ್ಣು­ಮಕ್ಕಳಿಗೆ ಹೂವು ಹಣ್ಣು ಎಲೆ ಕಾಳುಕಡ್ಡಿ ಎಲ್ಲವೂ ಪರಿಕರಗಳೇ. ಅದರದೇ ಒಂದು ಭಾಷೆ, ಬಲ್ಲವರೇ ಬಲ್ಲರು ಅದರ ಸೊಬಗ.

ನೆಲ, ಗೋಡೆ, ಗಡಿಗೆ, ಬೆತ್ತದ ಬುಟ್ಟಿ, ತೂಗುವ ತೊಟ್ಟಿಲು, ಒಲೆಗೂಡು ಎಲ್ಲವೂ ಅವಳ ಕ್ಯಾನ್‌ವಾಸ್. ಹೆಣ್ಣಿನ ಅಭಿವ್ಯಕ್ತಿ ದೇಗು­ಲದ ಶಿಲ್ಪವಾಗಲಿಲ್ಲ, ಅರಮನೆಯ ಪೀಠೋ­ಪ­ಕರ­ಣ­ವಾಗಲಿಲ್ಲ, ಚಿನ್ನಾಭರಣಗಳನ್ನು ಮಾಡ­ಲಿಲ್ಲ. ಅವಳ ಮನದಂಗಳದಲ್ಲಿ ಮೂಡಿದ ಭಾವಕ್ಕೆ ಮನೆಯಂಗಳದಲಿ ರಂಗವಲ್ಲಿ­ಯಾ­ಗಲು ಜಾಗ ಸಿಕ್ಕಿತ್ತು. ಇಂತಹ ಗಳಿಗೆಯೊಂದರಲ್ಲಿ ಕವಿ ಪುತಿನ ಅವರು ಮೇಲುಕೋಟೆ ದೇವಾ­ಲ­ಯದ ಮುಂದೆ ತೀರ ಬಡವೆ, ಸುಕ್ಕು ಮುಖದ ಮುದುಕಿ­ಯೊಬ್ಬಳು ಬಿಟ್ಟ ಹಸೆಯ ಕಂಡು ಬರೆದ ಸಾಲು ‘ದೇವ ಬೊಂಬೆ ಪೂಜೆ ಆಟ ಭಕ್ತಿ ಸೋಜಿಗ’. ಧರ್ಮದ ಹೊದಿಕೆ ಇಲ್ಲದೆ, ದೇವರ ಕಾಟವಿಲ್ಲದೆ, ಬರದ ಬೇಗೆಯಲ್ಲೂ ಮೂಡಿ­ಬರುವ ಕಲೆಯ ಒಳಗೆ ಹೆಣ್ಣಿನ ಕಾವ್ಯ ಅಡಗಿದೆ. ನಿತ್ಯ ನೂತನ.. ಹಾಗೆಯೇ ಚಿರಂತನ.

ಚಿತ್ತಾರಕ್ಕೊಂದು ಹಿಂಬದಿಯಲ್ಲಿ ಬಟ್ಟೆ ಬೇಕಲ್ಲಾ. ಉಟ್ಟು ಹಳೆಯದಾದ ಬಟ್ಟೆ, ಒಂದನ್ನು ಮತ್ತೊಂದಕ್ಕೆ ಹಚ್ಚಿ ಜೋಡಿಸಿ ಅದಕ್ಕೇ ಒಂದು ಹೊಸತನವನ್ನು ಕೊಟ್ಟು ಕೌದಿ ಮಾಡುತ್ತಾಳೆ. ಆ ಕೌದಿಯ ಮೇಲೆ ಸೂಜಿ ದಾರ­ದಲ್ಲಿ ಹಸೆ ಬರೆಯುತ್ತಾಳೆ. ಮನದ ಮಾತಿಗೆ ಕಾಸು ಬೇಕಿಲ್ಲ. ಈ ಸವಾಲುಗಳು ಜಾಗತಿಕ ಮಾರುಕಟ್ಟೆಗೂ ಸೆಡ್ಡು ಹೊಡೆಯುತ್ತವೆ.

ಇದೇ ಹಸೆಗೆ ದೇಹವೇ ಭಿತ್ತಿಯಾದಾಗ ಹಚ್ಚೆಯಾಗುತ್ತದೆ. ಹಾಗೆಯೇ ಮುಂದುವರೆದು ಹೆಣ್ಣಿನ ಅಭಿವ್ಯಕ್ತಿಯ ನೆಲೆಗಳನ್ನು ಹುಡುಕಿದರೆ ಕಾಣ­ವುದು ಅವಳ ಅಂಗೈ ಮುಂಗೈ ಮೇಲೆ ಬಿಡಿ­ಸಿಕೊಳ್ಳುವ ಮದರಂಗಿ (ಮೆಹಂದಿ) ಅಥವಾ ಹೆನ್ನಾ. ಗೋರಂಟಿ ಗಿಡದ ಸೊಪ್ಪನ್ನು ಅರೆದು ಮೈಮೇಲೆ ಬಣ್ಣ ಬರಿಸಿಕೊಳ್ಳುತ್ತಾಳೆ. ಹೆಣ್ಣು ಮಕ್ಕಳು ತಮ್ಮನ್ನು ತಾವು ಅಲಂಕರಿಸಿ ಕೊಳ್ಳುವು­ದರಲ್ಲೇ ಕಳೆದು ಹೋಗುತ್ತಿದ್ದಾರಲ್ಲಾ ಎಂದು ಬೇಸರಿಸುತ್ತಿದ್ದೆ. ಆದರೆ ಈಗ ಅನ್ನಿಸುತ್ತಿದೆ ಇಲ್ಲಾ ಹೆಣ್ಣು ತನ್ನ ದೇಹವನ್ನೇ ಕ್ಯಾನ್ವಾಸ್ ಆಗಿಸಿ­ಕೊಂಡಿ­ದ್ದಾಳೆ. ಬೇರೆ ಭಿತ್ತಿಗಳನ್ನು ಹೊಂದಿಸಿ­ಕೊಳ್ಳಲು ಸಾಧ್ಯವಾಗಿತ್ತೋ ಇಲ್ಲವೋ ಅವಳ ದೇಹವೇ ಭಿತ್ತಿಯಾದರೆ ಕೇಳುವವರಾರು. ಬಹುಶಃ ಹೆಣ್ಣು ಅವಳ ಅಭಿವ್ಯಕ್ತಿಗೆ ಹುಡುಕಿ­ಕೊಂಡ ತನ್ನದೇ ಆದ ನೆಲೆಗಳು. ಮಣಿ. ಹವಳ, ಕವಡೆ, ಕನ್ನಡಿ, ದಂತ, ಹಕ್ಕಿ ಪುಕ್ಕ, ಹೂವು, ಎಲೆ ಸಿಕ್ಕಿದ್ದೆಲ್ಲಾ ಅವಳಿಗೆ ಆಭರಣಗಳೇ ಆಗಿವೆ. ಚಿನ್ನ ಬೆಳ್ಳಿ ದಕ್ಕಿದ್ದು ಕೆಲವರಿಗೆ ಮಾತ್ರ. ದಕ್ಕಿದಾಗ  ತನ್ನನ್ನು ತಾನು ಅಂದಗೊಳಿಸಿಕೊಳ್ಳಲು ಹಿಂದೆ ಬಿದ್ದಿಲ್ಲ. ಅವರ ಸೌಂದರ್ಯ ಪ್ರಜ್ಞೆ ಇಲ್ಲಿನ ಪ್ರಶ್ನೆ­ಯಲ್ಲ. ಇವೆಲ್ಲಾ ಅಭಿವ್ಯಕ್ತಿಯ ಮಾರ್ಗಗ­ಳೆಂ­ಬು­ದನ್ನು ಯೋಚಿಸಿ­ದರೆ ಅವೆಲ್ಲವನ್ನೂ ಗೌರವಿಸ­ಬೇಕೆ­ನಿಸುತ್ತದೆ. ಅದೇ ಸಂಪ್ರದಾಯವೆಂಬ ಹೇರಿಕೆ­ಯಾಗತೊಡಗಿದರೆ ಅದರಿಂದ ತಪ್ಪಿಸಿ­ಕೊಳ್ಳುವುದು ಅವಳ ಬಿಡುಗ­ಡೆಯ ದಾರಿಯಾಗಿ ಕಂಡಿರುತ್ತದೆ.ಆಧುನಿಕ ಸಂದ­ರ್ಭದಲ್ಲಿ ಯುವತಿ­ಯರು  ಸಾಂಪ್ರದಾಯಿಕ­ವಾದ ಹೆಣ್ಣಿನ ಅಲಂಕಾ­ರವನ್ನು ಕಳಚಿಟ್ಟಾಗ, ಅದಕ್ಕೆ ಕಾರಣ ಅವೆಲ್ಲವೂ ಒತ್ತಡವಾಗಿ ಕಂಡಿತ್ತು. ತನ್ನ ಕಣ್ಣಿಗೆ ಕಾಡಿಗೆ ಇಡುವಾಗ ತುಟಿಗೆ ರಂಗನ್ನು ಏರಿಸಿಕೊಳ್ಳುವಾಗ ಅವಳ ಮುಖಕ್ಕಿಂತ, ಮುಖ ಕಾಣುವ ಕನ್ನಡಿ ಕ್ಯಾನ್‌ವಾಸ್ ಆಗಿರುತ್ತದೆ. ಕೆಲವರಿಗೆ ಕನ್ನಡಿ ಸಂಗಾತಿಯೇ ಆಗಿರುತ್ತದೆ. ತನ್ನದೇ ಮುಖವನ್ನು ಅಲಂಕಾರದ ವೇದಿಕೆ­ಯಾಗಿ­ಸಿಕೊಳ್ಳದಿದ್ದರೂ ಮತ್ತೊಂದು ಹೆಣ್ಣನ್ನು ತನ್ನ ಕಲ್ಪನೆಯ ಕುಂಚಕ್ಕೆ ಹಾಳೆಯಾಗಿಸಿಕೊಳ್ಳುತ್ತಾಳೆ. ಅವರಿವರ ಜಡೆ ಹೆಣೆದು ಮಲ್ಲಿಗೆಯ ಹೂ ಪೋಣಿಸುತ್ತಾ ಕಳೆವ ಅವಳ ಗಳಿಗೆ ಆಪ್ಯಾಯ­ಮಾನವಾಗಿರುತ್ತದೆ. ಒಮ್ಮೆ ಮೈಸೂರಿನಿಂದ ಬೆಂಗ­ಳೂರಿಗೆ ಬರಲು ಮುಂಜಾನೆ ಆರು ಗಂಟೆಯ ರೈಲಿನಲ್ಲಿ ಹೊರಟೆ. ಲೇಡೀಸ್ ಕಂಪಾ­ರ್ಟ್‌­ಮೆಂಟ್. ಅದರಲ್ಲಿದ್ದ ಬಹುತೇಕ ಹೆಣ್ಣು­ಮಕ್ಕಳು ಗಾರ್ಮೆಂಟ್ಸ್ ನಲ್ಲಿ ದುಡಿಮೆಗೆ ಹೋಗು­ವವರು. ಬೆಂಗಳೂರು ತಲು­ಪುವ ಹೊತ್ತಿಗೆ ಆ ಬೋಗಿ ಕಿಕ್ಕಿರಿದು ಹೋಗಿತ್ತು. ಯಾರೋ ಯಾರಿಗೋ ಜಡೆ ಹಾಕುತ್ತಿದ್ದರು. ಮತ್ತೊಬ್ಬರು ಸೀರೆಯ ಸೆರಗನ್ನು  ಓರಣ ಮಾಡಿ ಪಿನ್ ಹಾಕು­ತ್ತಿದ್ದರು. ರೈಲಿನ ಸದ್ದಿನ ಹಿಮ್ಮೇಳ­ದಲ್ಲಿ ಅವರ ನೋವು–ನಲಿವುಗಳು ಪಿಸು­ಗುಟ್ಟಿದ್ದವು.

ಹೆಣ್ಣು ತನ್ನ ಎಳೆಯ ಕಂದಮ್ಮನಿಗೆ ಹೆಣೆ­ಯುವ ಕುಚ್ಚು ಕುವಾಲಿ ಒಡಲ ಸಂಭಾಷಣೆ­ಯಾಗಿ­ರುತ್ತದೆ. ಹಗಲು–ರಾತ್ರಿ ಮೈಮುರಿದು ದುಡಿ­ಯುವ ಹೆಣ್ಣಿಗೆ ಇಂತಹ ಗಳಿಗೆ ಅವಳ ಭಾವ­ಕ್ಕೊಂದು ತಂಗುದಾಣವಾಗುತ್ತದೆ. ಗಳಿಗೆ ಕಳೆದು ಮತ್ತೆ ಮುಳ್ಳಿನ ಹಾದಿಯಲ್ಲಿ ಹೆಜ್ಜೆ­ಹಾಕು­ತ್ತಾಳೆ. ಅವಳಿಗಲ್ಲಿ ತನ್ನದೆಂಬ ಹೆಸರಾಸೆ ಇಲ್ಲ. ಮುಂಜಾನೆ ಅರಳಿ ಮುಸ್ಸಂಜೆಗೆ ಅವಳ ಕಲೆ ಮಾಯ­ವಾಗುತ್ತದೆ. ಅವಳ ಜೀವ ಚೈತನ್ಯ ಬಾಡದೆ ಸೆಲೆ ಸಿಕ್ಕಾಗ ಮತ್ತೆ ಅರಳುತ್ತದೆ.

ಬೇರೆಬೇರೆ ಸಾಮಾಜಿಕ ಹಿನ್ನೆಲೆಯಲ್ಲಿ ಬೇರೆ­ಯದೇ ರೀತಿಯ ದಾರಿಗಳನ್ನು ಕಂಡು­ಕೊಂಡಿ­ದ್ದಾಳೆ ಎನಿಸುತ್ತದೆ. ದಸರಾ ಹೊತ್ತಿಗೆ ಮೈಸೂರು ಮತ್ತು ಸುತ್ತಮುತ್ತಲ ಊರುಗಳಲ್ಲಿ ಕಾಣುವ ಗೊಂಬೆ ಹಬ್ಬದಲ್ಲಿ ಇಂತಹದೇ ಮರ್ಮ ಕಾಣು­ತ್ತದೆ. ತಮಿಳುನಾಡಿನಿಂದ ಅದರಲ್ಲೂ ಆಳುವ ವರ್ಗದ ನೆಲೆಯಿಂದ ಹರಿದು ಬಂದಿರುವ ಈ ಕಲೆ ಹೆಣ್ಣುಮಕ್ಕಳ ಆಕರ್ಷಣೆಯಾಗಿ ಉಳಿದು ಬಂದಿದೆ. ಇದಕ್ಕೊಂದು ಸಣ್ಣ ಪ್ರಮಾಣದ ಧರ್ಮದ ಹೊದಿಕೆಯಿದ್ದು ಆ ಹೊದಿಕೆ­ಯಿಂದಾಗಿ ಆ ಕಲೆಯನ್ನು ಜೀವಂತವಾಗಿ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಹಿಂದೆ ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕಳುಹಿಸಿ ಕೊಡುವಾಗ ಅವರು ಸಣ್ಣ ವಯಸ್ಸಿನವರಾಗಿ­ರುತ್ತಿದ್ದರು. ಏಳೆಂಟು ವರ್ಷ­ದಲ್ಲಿ ಗೊಂಬೆಯ ಜೊತೆ ಆಟವಾಡ­ಬೇಕಾದ ಆ ಮಕ್ಕಳ ಕೈಗೆ ಮರದ ಗೊಂಬೆಯನ್ನು ಕೊಡು­­ತ್ತಿ­ದ್ದರು. ಮರ­ದಲ್ಲಿ ಮಾಡಿದ ರಾಜಾ–ರಾಣಿ­ಯರ ಆ ಗೊಂಬೆ­ಗಳನ್ನು ಹಬ್ಬದಲ್ಲಿಟ್ಟು ಪೂಜೆ­ಮಾಡುತ್ತಿದ್ದರು. ಅದು ಹಬ್ಬವಾಗದಿದ್ದರೆ ಆ ಗೊಂಬೆಗಳಿಗೆ ಪುಟಾಣಿ ಲಂಗ ಸೀರೆಯನ್ನು ಉಡಿಸಿ ಆಟ­ವಾಡಲು ಯಾರೂ ಬಿಡುತ್ತಿರಲಿಲ್ಲ. ಹಬ್ಬದ ನೆಪದಲ್ಲಿ ಗೊಂಬೆಗಳನ್ನು ಕೂಡಿಹಾಕಲು ಅವಳಿಗೆ ಅವಕಾಶ ಸಿಕ್ಕಿರಬೇಕು.

ಮೈಸೂರಿನಲ್ಲಿರುವ  ಎಪ್ಪತ್ತರ ಹರೆಯದ ವನಜಾ ಅವರದ್ದು  ಈಗಲೂ ಬತ್ತದ ಚೈತನ್ಯ. ಇಂದಿಗೂ ಮನೆಯ ತುಂಬಾ ಗೊಂಬೆಗಳನ್ನಿಟ್ಟು ಅಲಂಕರಿ­ಸುತ್ತಾರೆ. ಈ ಇಳಿ ವಯಸ್ಸಿನಲ್ಲೂ ತನ್ನೊಳಗಿನ ಮಗುವಿನ ಭಾವವನ್ನು ಜೀವಂತ­ವಾಗಿರಿಸಿ­ಕೊಂಡಿ­ದ್ದಾರೆ. ಕೆಲಸ ಮುಗಿಸಿ ಬಿಡು­ವಾದಾಗಲೆಲ್ಲಾ ಗೊಂಬೆಗಳ ಸೀರೆಗೆ ಅಂಚು­ಕಟ್ಟುತ್ತಾರೆ. ಕೊಳ್ಳೆ­ಗಾಲದ ನೇಯ್ಗೆ ಹಿನ್ನೆಲೆಯ ಲತಾ, ಶಾರದಾ ಅಕ್ಕ­ತಂಗಿಯರು ಮನೆಯಲ್ಲಿ ಜಾಗವಿಲ್ಲದಿದ್ದರೆ ನೇಯುವ ರಾಟೆಯ ಸಂದಿ­ಗೊಂದಿಯಲ್ಲೆಲ್ಲಾ ಗೊಂಬೆ­ಗಳನ್ನು  ಜೋಡಿಸು­ತ್ತಾರೆ. ಪುಡಿಗಾಸು ಉಳಿಸಿ ಅವರಿವರಿಂದ ಗೊಂಬೆಗಳನ್ನು ತರಿಸಿ­ಕೊಳ್ಳು­ತ್ತಾರೆ. ದಸರಾ ಮೆರವಣಿಗೆಯ ಒಂದೊಂದು ಗೊಂಬೆಯೂ ಅವರ ಕೈಯಲ್ಲಿ ಜೀವ ಪಡೆಯುತ್ತದೆ.

ಮೈಸೂರು, ಕೊಳ್ಳೆಗಾಲ, ಚಾಮರಾಜನಗರ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರಗಳಲ್ಲಿ ರೂಢಿಯಲ್ಲಿರುವ ಈ ಹಬ್ಬ ಎಲ್ಲಾ ಇಕ್ಕಟ್ಟುಗಳ ನಡುವೆ ಹೆಣ್ಣು ತನ್ನ ಎಳೆ­ತನ­ವನ್ನು ಉಳಿಸಿ­ಕೊಳ್ಳುವಂತೆ ಮಾಡಿದೆ. ಹೊರ­ಜಗ­ತ್ತಿನ ಗಮನಕ್ಕೆ ಬರಲಿ ಬಿಡಲಿ ಅವಳ ಮೌನದಲ್ಲಿ ಗೊಂಬೆಗಳು ಮಾತನಾಡುತ್ತವೆ. ಅವಳ ಸಂಸಾ­ರದಲ್ಲಿ ಸುಖ­ವಿ­ದೆಯೋ ಇಲ್ಲವೋ ಅವಳ ಗೊಂಬೆಯ ಸಂಸಾ­ರ­ದಲ್ಲಿ ಸದಾ ಸಂಭ್ರಮ­ವಿರು­ತ್ತದೆ. ಆ ದಿನಕ್ಕಾಗಿ ವರ್ಷವೆಲ್ಲಾ ಸಿದ್ಧತೆ ಮಾಡಿ­ಕೊಳ್ಳುತ್ತಾಳೆ. ಗೊಂಬೆ­­ಯಾಟಕ್ಕೂ ಹಬ್ಬದ ಮೆರಗು ಮೂಡುತ್ತದೆ.


ಚರಿತ್ರೆ ಸೃಷ್ಟಿಸಿದ ಇತಿಹಾಸ ತಜ್ಞ
Tue, 09/02/2014


ಭಾರತದಲ್ಲಿ ಸಮಾಜಶಾಸ್ತ್ರ, ರಾಜ್ಯ­ಶಾಸ್ತ್ರ ವಿಷಯಗಳಲ್ಲಿ  ವಿಶೇಷ ಆಸಕ್ತಿ ಇರುವ ವಿದ್ಯಾರ್ಥಿಗಳು ದೆಹಲಿಯ ಜವಾ­ಹರ­ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆ.ಎನ್‌.­ಯು.) ಓದಬೇಕೆಂಬ ಕನಸನ್ನು ಹೊತ್ತಿ­ರು­­ತ್ತಾರೆ. ಅದ­ರಲ್ಲೂ ದೇಶದ ಚರಿತ್ರೆಯಲ್ಲಿ ಪರಿ­ಣತಿ ಪಡೆಯಬಯಸುವ ವಿದ್ಯಾರ್ಥಿಗಳ ಗಮನ ಅಲ್ಲಿನ ‘ಸೆಂಟರ್ ಫಾರ್‌ ಹಿಸ್ಟರಿ’ ಕಡೆಗಿರುತ್ತದೆ. ಆ ವಿಭಾಗ­ವನ್ನು ಕಟ್ಟಿ ಬೆಳೆಸಿದವರು ಪ್ರೊ.ಬಿಪಿನ್ ಚಂದ್ರ.

ಇವರ ಜೊತೆಗೆ ಅಲ್ಲಿದ್ದ ಮುಂಚೂಣಿಯ ಚರಿತ್ರಕಾರರಾದ ರೊಮಿಲಾ ಥಾಪರ್, ಎಸ್.­ಗೋಪಾಲ್, ಸತೀಶ್ ಚಂದ್ರ ಅವರು ಆ ವಿಭಾ­ಗಕ್ಕೆ ಮಾತ್ರವಲ್ಲ ದೇಶದ ಚರಿತ್ರೆಯ ಬರವಣಿ­ಗೆಗೂ ಮಾರ್ಗವನ್ನು ಸೂಚಿಸಿದವರು. ಮೊನ್ನೆ ಅಂದರೆ ಆಗಸ್ಟ್ 30ರಂದು ಬಿಪಿನ್ ಚಂದ್ರ ಅವರ ಮರಣದ ವಾರ್ತೆಯನ್ನು ಕೇಳಿದಾಗ ಬಹುಶಃ ದೇಶದ ಯಾವುದೇ ಭಾಗದ ಚರಿತ್ರೆಯ ವಿದ್ಯಾರ್ಥಿ­ಗಳಾದರೂ ಕೃತಜ್ಞತೆಯಿಂದ ಅವ­ರನ್ನು ನೆನೆಯದೇ ಇರಲಾರರು.

ಏಕೆಂದರೆ ಅವರು ರಚಿ­ಸಿದ ‘ಹಿಸ್ಟರಿ ಆಫ್‌ ಮಾಡರ್ನ್‌ ಇಂಡಿಯಾ’  ಎನ್‌.ಸಿ.ಇ.­ಆರ್‌.ಟಿ. ಪಠ್ಯಕ್ರಮ­ವಾ­ಗುವ ಮೂಲಕ ವಿದ್ಯಾರ್ಥಿ­ಗಳಿಗೆ ಅದನ್ನು ಓದುವ ಅವಕಾಶ ದೊರಕಿತ್ತು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುವ ಅಭ್ಯರ್ಥಿ­ಗಳಿಗಂತೂ ‘ಹಿಸ್ಟರಿ ಆಫ್‌ ಮಾಡರ್ನ್‌ ಇಂಡಿಯಾ’ ಕೈಪಿಡಿಯೇ ಆಗಿದೆ. ಚರಿತ್ರೆಯ ಪಾಠ ಮಾಡಲು ನಿಲ್ಲುವವರಿಗೆ ಬಿಪಿನ್ ಅವರ ‘ಸ್ಟ್ರಗಲ್ ಫಾರ್ ಇಂಡಿಪೆಂಡನ್ಸ್’ ಪುಸ್ತಕದ ಓದು ಅನಿವಾರ್ಯವಾಗುತ್ತದೆ.

ಇವೆಲ್ಲ ನನ್ನ ಅನುಭವವೂ ಆಗಿರುವುದರಿಂದ ಜೆ.ಎನ್‌.ಯು.ನಲ್ಲಿ ರಿಫ್ರೆಷರ್ ಕೋರ್ಸ್‌ ನೆಪ­ದಲ್ಲಿ ಒಂದು ತಿಂಗಳು ಕಳೆಯುವ ಅವಕಾಶ ಸಿಕ್ಕಾಗ ತಪ್ಪಿಸಿ­ಕೊಳ್ಳಲು ಸಾಧ್ಯವಿರಲಿಲ್ಲ. ನಾನು ದೆಹಲಿ­ಯಲ್ಲಿ ಇದ್ದ ಹೊತ್ತಿನಲ್ಲಿ ಕಾರ್ಗಿಲ್ ಯುದ್ಧ ನಡೆ­ದಿತ್ತು. ಹಾಗಾಗಿ ದೆಹಲಿಯಲ್ಲಿ ಎಲ್ಲೆಂದರಲ್ಲಿ ಸೈನ್ಯದ ತುಕಡಿಗಳಿದ್ದವು. ಎನ್‌ಡಿಎ ಸರ್ಕಾರ ಅಧಿ­ಕಾರಕ್ಕೆ ಬಂದಿತ್ತು. ಎನ್‌.ಸಿ.ಇ.­ಆರ್‌.ಟಿ. ಪಠ್ಯಕ್ರ­ಮದ ಪುನರ್‌ರಚನೆಯನ್ನು ಕೈಗೆತ್ತಿಕೊಂಡಿತ್ತು. ಹಾಗಾಗಿ ಈ ಎರಡೂ ವಿಷಯಗಳ ಚರ್ಚೆ  ವಿಶ್ವ­ವಿದ್ಯಾಲಯದಲ್ಲಿ ನಡೆದೇ ಇತ್ತು.

ದೇಶದ ಮೂಲೆ­ಮೂಲೆಯಿಂದ ಈ ವಿಚಾರವಾಗಿ ಮಾತ­ನಾಡಬಲ್ಲ ಪ್ರಾಧ್ಯಾಪಕ­ರನ್ನು ಆಹ್ವಾನಿಸಿದ್ದರಿಂದ ಪಠ್ಯಪುಸ್ತಕದ ಕೇಸರೀಕ­ರಣವನ್ನು ವಿರೋಧಿಸಿ ಅಲ್ಲಿ ಚಳವಳಿಯೇ ರೂಪು­ಗೊಂಡಿತ್ತು. ಬಿಪಿನ್ ಅವ­ರನ್ನು ಅನುಸರಿಸಿ ಬಂದ ಶಿಷ್ಯರು ಹಾಗೂ ಮುಂದೆ ಬಂದ ಜೆ.ಎನ್‌.ಯು. ಪ್ರಾಧ್ಯಾಪಕ­ರಿಂದ ಒಂದು ಆಲೋಚನಾ ಕ್ರಮವೇ ಬೆಳೆದು­ಬಂತು.

ಭಾರತ–-ಪಾಕಿಸ್ತಾನ ಯುದ್ಧದ ತಿರುಚಿದ ವ್ಯಾಖ್ಯಾನವಾ­ಗಲೀ, ಪಠ್ಯಕ್ರ­ಮದ ತಿರುಚುವಿಕೆಯ ಹುತ್ತದೊ­ಳಗಿನ ಹಾವಾ­ಗಲೀ ಕೋಮುವಾದವಲ್ಲದೆ ಬೇರೇನು? ದೇಶ­ದಲ್ಲಿ ಬೆಳೆದು ಬಂದ ಕೋಮು­ವಾದವನ್ನು ಅಕಡೆ­ಮಿಕ್ ಆಗಿ ವಿರೋಧಿಸುತ್ತಾ ಬಂದವರು ಮಾರ್ಕ್‌್ಸ­­ವಾದಿ ಚಿಂತಕರು. ಅದರ ಬಗ್ಗೆ ವಿಸ್ತಾರ­ವಾಗಿ ಬರೆದವರು ಬಿಪಿನ್ ಚಂದ್ರ. ‘ಕಮ್ಯುನ­ಲಿ­ಸಂ ಇನ್ ಮಾಡರ್ನ್‌ ಇಂಡಿಯಾ’ ಪುಸ್ತಕ, ಈ ದೇಶಕ್ಕೆ ಕೋಮುವಾದ ಹೇಗೆ ವಸಾ­ಹತು ಕೊಡು­ಗೆಯಾಗಿ ಬಂದಿದೆ ಎಂಬುದನ್ನು ತಿಳಿಸು­ತ್ತದೆ.

1857ರ ಬ್ರಿಟಿಷ್ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಒಂದಾಗಿ ಹೋರಾಡಿದ ಹಿಂದೂ, ಮುಸಲ್ಮಾನರು, ಬ್ರಿಟಿಷರ ಒಡೆದು ಆಳುವ ನೀತಿಯ ತಂತ್ರಕ್ಕೆ ಬಲಿಯಾಗಿ ಪರಸ್ಪರ ದ್ವೇಷದ ಭಾವನೆಯನ್ನು ಬೆಳೆಸಿಕೊಂಡದ್ದು ದೇಶದ ದುರಂತವೇ ಸರಿ. 1875ರ ಹೊತ್ತಿಗೆ ಆರ್ಯ ಸಮಾಜ, ಅದೇ ಸುಮಾರಿಗೆ ಬಂದ ಅಲೀ­ಘಡ ಚಳವಳಿಗಳು ಪರಸ್ಪರ ವಿರೋಧದ ನೆಲೆ­ಯಲ್ಲಿ ಬೆಳೆಯ­ತೊಡಗಿದವು. ಮುಂದೆ ಹಿಂದೂ ಮಹಾ­ಸಭಾ ಮತ್ತು ಮುಸ್ಲಿಂಲೀಗ್ ಹುಟ್ಟಿಗೆ ಕಾರಣ­ವಾದವು.

ನಂತರ ದೇಶವು ಬ್ರಿಟಿಷರ ನಿರೀಕ್ಷೆ­ಯನ್ನೂ ಮೀರಿದ ತಾರ್ಕಿಕ ಅಂತ್ಯ­ವನ್ನು ಕಂಡು ವಿಭಜನೆಯಲ್ಲಿ ಕೊನೆ­ಗೊಂಡಿತು. ಹಾಗೆಂದು ನಮ್ಮ ಸಮಸ್ಯೆಗಳು ಅಲ್ಲಿಗೇ ಕೊನೆಗೊಳ್ಳಲಿಲ್ಲ.  ಅದರ ಮುಂದುವ­ರಿದ ಭಾಗವಾಗಿ ಕಾಶ್ಮೀರ ನಿರಂತರವಾಗಿ ರಕ್ತ­ಸಿಕ್ತವಾಗಿದೆ. ಆಗಾಗ್ಗೆ ಮೈ ಮೇಲಿನ ಕಜ್ಜಿಯನ್ನು ಕೆರೆದು ವ್ರಣ ಮಾಡಿ­ಕೊಳ್ಳುವ ನಾಯಿಯಂತಾ­ಗಿದೆ ದೇಶದ ಸ್ಥಿತಿ. ಕಾರ್ಗಿಲ್‌ ಯುದ್ಧವೂ ಹಾಗೇ ಕೆರೆದ ಒಂದು ಗಾಯವೇ ಆಗಿತ್ತು. ಹೀಗೆ ಒಂದ­ಕ್ಕೊಂದು ಹೆಣೆ­ದು­ಕೊಂಡ ವಿಚಾರವನ್ನು ಮತ್ತು ಘಟನಾವಳಿ­ಗಳನ್ನು ಒಂದು ಕ್ರಮಕ್ಕೆ ತಂದು  ಬಿಪಿನ್  ತಮ್ಮ ವಾದದ ಸರಣಿಯನ್ನು ಮಂಡಿ­ಸು­ತ್ತಾರೆ.

ಸರ್ಕಾರಗಳು ಬದಲಾದಂತೆ ತಾವು ನಂಬಿದ ಸಿದ್ಧಾಂತಕ್ಕೆ ಅನುಗುಣವಾಗಿ ಪಠ್ಯಕ್ರಮವನ್ನು ಬದಲಿಸುತ್ತವೆ. ಅದರಲ್ಲೂ ಚರಿತ್ರೆಯ ಪುಸ್ತಕ­ಗಳ ಮೇಲೆ ಅವುಗಳ ಕಣ್ಣು ನೆಟ್ಟಿರುತ್ತದೆ. ಬ್ರಿಟಿ­ಷರು ಭಾರತದ ಚರಿತ್ರೆಯನ್ನು ಬರೆಯುವಾಗ ಅದಕ್ಕೆ ವಸಾಹತುಶಾಹಿಯ ಉದ್ದೇಶಗಳಿದ್ದವು. ತಮ್ಮ ಅಗತ್ಯಕ್ಕೆ ತಕ್ಕಂತೆ ಅವರು ಭಾರತದ ಚರಿತ್ರೆಯನ್ನು ರಚಿಸಿದರು. ಪ್ರಾಚೀನ ಕಾಲವನ್ನು ಹಿಂದೂ ಕಾಲ­ವೆನ್ನುವಾಗ ಅಥವಾ ಮಧ್ಯಕಾಲ­ವನ್ನು ಮುಸ್ಲಿಂ ಕಾಲವೆಂದು ಪಟ್ಟ ಕಟ್ಟುವಾಗ ಉದ್ದೇಶಗಳಿದ್ದವು.

ಅವರ ಹುನ್ನಾರಗಳನ್ನು ಗಮ­ನಿ­ಸದೆ, ಅವರು ಹಾಕಿ­ಕೊಟ್ಟ ಜಾಡಿನಲ್ಲೇ ಹೋದ ಭಾರತದ ರಾಷ್ಟ್ರೀಯವಾದಿ ಇತಿಹಾಸಕಾರರು ಅದಕ್ಕೆ ಮತ್ತಷ್ಟು ಗೊಬ್ಬರ, ನೀರು ಹಾಕಿದರು. ಇಂತಹ ಹೊತ್ತಿನಲ್ಲಿ ಹೊಸ ದೃಷ್ಟಿಕೋನದಿಂದ ಹೊರಟ ಮಾರ್ಕ್‌್ಸವಾದಿ ಚರಿತ್ರಕಾರರು ಆರ್ಥಿಕ ಹಾಗೂ ಸಾಮಾಜಿಕ ಪ್ರಶ್ನೆಗಳನ್ನು ಮುಂದಾಗಿಸಿಕೊಂಡು ಸಂಶೋಧನೆಯಲ್ಲಿ ತೊಡ­ಗಿ­ದರು. ಪ್ರಾಚೀನ ಭಾರತದ ಅಧ್ಯಯನ­ದಲ್ಲಿ ವಿಶೇಷ ಕುತೂಹಲ­ವನ್ನು ಹೊಂದಿದ ಡಿ.ಡಿ.ಕೊಸಾಂಬಿ ಅವರು ಹೊಸ ಸಂಶೋಧನಾ ಮಾರ್ಗವನ್ನೇ ಕಂಡು­ಕೊಂಡರೆ, ರೊಮಿಲಾ ಥಾಪರ್ ಅವರು ಆ ಜಾಡನ್ನು ಮುಂದುವರಿಸಿ­ದರು. ಆಧುನಿಕ ಭಾರತದ ಬಗ್ಗೆ ಬರೆದ ಬ್ರಿಟಿ­ಷರು ಅದನ್ನು ಗವ­ರ್ನರ್ ಜನರಲ್‌ಗಳ ಸಾಧ­ನೆಯ ಕಾಲ­ವೆಂದು ಹೇಳ­ತೊಡಗಿದರು.

ನಮ್ಮ ರಾಷ್ಟ್ರೀಯ­ವಾದಿ ಚರಿತ್ರ­ಕಾರರು ಬಹುತೇಕ ಅದೇ ಜಾಡಿ­ನಲ್ಲೇ ಮುಂದುವರಿದರು. ಅದ­ಕ್ಕೊಂದು ವಿಭಿನ್ನ ದೃಷ್ಟಿ­­ಕೋನದ ಅಗತ್ಯವಿತ್ತು. ಆ ಲೆಕ್ಕಕ್ಕೆ ರಾಷ್ಟ್ರೀಯ­­ವಾದಿಯೇ ಆಗಿದ್ದೂ, ಆರ್ಥಿಕ ಹಿನ್ನೆಲೆಯಲ್ಲಿ ವಸಾಹತು ಶೋಷಣೆಯನ್ನು ಬಹಿ­ರಂಗಗೊಳಿಸಿದ ಸಾಹಸ ದಾದಾಭಾಯಿ ನವ­ರೋಜಿ ಅವರಿಗೆ ಸಲ್ಲಬೇಕು. ವಿಭಿನ್ನ ಜಾಡನ್ನು ತುಳಿದವರಲ್ಲಿ ರಜನಿ ಪಾಲ್ಮೆ ದತ್‌ ಮತ್ತು ಆರ್.ಸಿ. ದತ್‌ ಅವರು ಮುಖ್ಯ­ರಾಗುತ್ತಾರೆ ಮತ್ತು ಆರ್ಥಿಕ ಚರಿತ್ರೆಗೆ ಬುನಾದಿ ಹಾಕುತ್ತಾರೆ. ಎ. ಆರ್. ದೇಸಾಯಿ ಅವರಿಗೆ  ಭಾರತೀಯ ನೆಲೆಯಿಂದ ಸಮರ್ಥವಾಗಿ ಚರಿತ್ರೆ ಕಟ್ಟಲು ಸಾಧ್ಯ­ವಾಗಿತ್ತು.

ಇದರ ಮುಂದುವರಿಕೆಯಾಗಿ ಕಾಣು­ವುದು ಬಿಪಿನ್ ಚಂದ್ರ ಅವರ ‘ದಿ ರೈಸ್ ಅಂಡ್ ಗ್ರೋತ್ ಆಫ್ ಎಕನಾಮಿಕ್ ನ್ಯಾಷನ­ಲಿಸಂ ಇನ್ ಇಂಡಿಯಾ’ ಹಾಗೂ ಅದಕ್ಕೆ ಪೂರ್ವ­ದಲ್ಲಿ ಬಂದ ‘ನ್ಯಾಷನಲಿಸಂ ಅಂಡ್ ಕಲೋ­ನಿಯಲಿಸಂ ಇನ್ ಮಾಡರ್ನ್‌ ಇಂಡಿಯಾ’. ರಾಷ್ಟ್ರೀಯತೆಯನ್ನು ಚರ್ಚಿಸು­ವಾಗ ಅವರ ಮೇಲೆ ಇಟಲಿಯ ದಾರ್ಶನಿಕ ಆಂಟೋನಿಯೊ ಗ್ರಾಮ್ಷಿ ಚಿಂತನೆ ಗಾಢವಾದ ಪರಿಣಾಮವನ್ನು ಬೀರಿದ್ದರೆ ಅದು ಸಹಜವೆಂದೇ ಭಾವಿಸ­ಬೇಕಾಗುತ್ತದೆ.

ವಸಾಹತುಶಾಹಿಯೊಂದಿಗೆ ಭಾರತಕ್ಕೆ ಬಂದ ರಾಷ್ಟ್ರೀಯತೆಯ ಕಲ್ಪನೆ ತನ್ನ ಇನ್ನೂರು ವರ್ಷ­ಗಳ ಬೆಳವಣಿಗೆಯಲ್ಲಿ ಹಲವು ಘಟ್ಟಗಳನ್ನು ದಾಟಿ ಬರುತ್ತದೆ. ಬ್ರಿಟಿಷ್ ವಸಾಹತುಶಾಹಿ ಭಾರತಕ್ಕೆ ಬರುವಾಗ ಅದೊಂದು ಸಿದ್ಧಾಂತವಾಗಿ­ಯೇನೂ ಇಲ್ಲಿಗೆ ಬರಲಿಲ್ಲ, ಸ್ವಾರ್ಥವೇ ಅದರ ತಳಹದಿ­ಯಾ­ಗಿತ್ತು. ವ್ಯಾಪಾರದ ಹಂತದಿಂದ ಈ ದೇಶ­ವನ್ನು ವಸಾಹತುವಾಗಿ ಮಾರ್ಪಡಿಸುವಾಗ ಪ್ರತಿ ಹೆಜ್ಜೆಯಲ್ಲೂ ತನ್ನ ತಾಯ್ನಾಡಿನ ಹಿತ ಚಿಂತ­ನೆ­ಯನ್ನು ಕಾಯ್ದುಕೊಂಡಿತ್ತು.

ಈ ನಾಡಿನ ವ್ಯಾಪಾ­ರವನ್ನು ಬ್ರಿಟಿಷರು ತಮ್ಮ ಕೈಗೆ ತೆಗೆದು­ಕೊಂಡ ಬಗೆಯಾಗಲೀ, ಅವರು ಜಾರಿಗೆ ತಂದ ಭೂ­ಸುಧಾರಣಾ ಕಾಯ್ದೆಗಳಾಗಲೀ ಎಲ್ಲವೂ ಅವರ ಒಳಿತಿಗಾಗಿಯೇ ರೂಪಿತವಾಗಿತ್ತು. ಅದ­ರಲ್ಲೂ ಭೂ ಸುಧಾರಣೆ ಎಂಬ ಆಲೋಚನೆಯೇ ಹಾಸ್ಯ­ಭರಿತವಾಗಿದೆ. ಅವರು ಜಾರಿಗೆ ತಂದ ಜಮೀನುದಾರಿ ಪದ್ಧತಿಯಾಗಲೀ, ಜಾಗೀರು­ದಾರಿ ಪದ್ಧತಿಯಾಗಲೀ ಈ ನೆಲದ ಪಸೆಯನ್ನು ಎಷ್ಟು ಸೊಗಸಾಗಿ ಹೀರಬಹುದೆಂಬುದಕ್ಕೆ ಕಂಡು­ಕೊಂಡ ಸೂತ್ರಗಳೇ ಆಗಿದ್ದವು.

ಅವು ರೈತನ ಉದ್ಧಾರಕ್ಕಾಗಿ ಜಾರಿಗೆ ಬಂದ ಆಡಳಿತ ವ್ಯವಸ್ಥೆ­ಗಳಾಗಿರಲಿಲ್ಲ. ತಮ್ಮ ಮನಸ್ಸಿಗೆ ಬಂದಂತೆ ಇಲ್ಲಿನ ಕೃಷಿಯನ್ನು ಅವರು ನಿರ್ದೇಶಿಸಿದರು. ಬೆಳೆದ ಬೆಳೆಯನ್ನು ತಮ್ಮ ದೇಶಕ್ಕೆ ಕೊಂಡೊಯ್ದರು. ಈ ನೆಲ ಹಿಂದೆಂದೂ ಕಾಣದಂತಹ ಕ್ಷಾಮಕ್ಕೆ ತುತ್ತಾ­ಯಿತು. ಬ್ರಿಟಿಷರು ಕಾಲಿಟ್ಟ ನೆಲ ಹತ್ತು ಹದಿ­ನೈದು ವರ್ಷಗಳಲ್ಲಿ ಹೆಣದ ಬಣವೆಯಾಯಿತು. ಇಡೀ ಜಗತ್ತಿಗೇ ಬಟ್ಟೆಯನ್ನು ನೇಯ್ದು ಹೊದಿ­ಸಿದ ಜನರ ಮೈಮೇಲಿನ ಬಟ್ಟೆಯನ್ನೂ ಅವರು ಕೀಳಿ­ದರು. ಯೂರೋಪ್ ಕೈಗಾರಿಕಾ ಕ್ರಾಂತಿ­ಯೆಂದು ಸಂಭ್ರಮಿಸುವ ಹೊತ್ತಿಗೆ ನಮ್ಮ ನೂಲುವ ರಾಟೆ ಮುರಿದು ಬಿದ್ದಿತ್ತು.

ನಿರ್ಗತಿಕ ಸ್ಥಿತಿ ನಮ್ಮನ್ನು ಒಂದಾಗಿಸಿತು. ಬಂಗಾಳದವ­ರಾಗಲೀ, ತಮಿಳರಾ­ಗಲೀ ಎಲ್ಲರ ಮನೆಯೂ ಸೋರಿತ್ತು. ಈ ಕಡುಕಷ್ಟ ಅವರಿಗೆಲ್ಲ  ಒಂದಾಗಿ ಹೋರಾಡು­ವು­ದನ್ನು ಕಲಿಸಿತು. ಹೀಗೆ ಎಳೆಎಳೆ­ಯಾಗಿ ವಸಾಹತು­ಶಾಹಿ­ಯನ್ನು ಬಿಚ್ಚಿಟ್ಟ ಬಿಪಿನ್  ಒಬ್ಬ ಮಾರ್ಕ್‌್ಸವಾದಿ ಎನಿಸಿಕೊಂಡರೆ ಅದು ಗೌರವವೇ ಹೊರತು ಟೀಕೆಯಲ್ಲ. ವಸಾಹತುಶಾಹಿ ವಿರೋಧ, ರಾಷ್ಟ್ರೀಯತೆ­ಯನ್ನು ಹುಟ್ಟುಹಾಕಿತು. ಅದನ್ನು ನೋಡಿ­ಕೊಂಡು ಬ್ರಿಟಿಷರು ಬಾಯಲ್ಲಿ ಬೆಟ್ಟನ್ನು ಇರಿಸಿ­ಕೊಂಡಿರಲಿಲ್ಲ. ಚೆನ್ನಾಗಿಯೇ ಮಗುವನ್ನು ಚಿವುಟಿ, ತೊಟ್ಟಿಲನ್ನೂ ತೂಗಿದರು.

ನಾವೆಲ್ಲರೂ ಒಂದು ಎಂದು ಭ್ರಮಿಸಿದಂತೆ, ಅರೆಬರೆ ಚರಿ­ತ್ರೆಯ ತಿಳಿವು ನಮ್ಮಲ್ಲಿ ಕೆಲವರು ಬೇರೆ ಎನ್ನುವು­ದನ್ನೂ ಕಲಿ­ಸಿತು. ಕಲ್ಪಿತ ರಾಷ್ಟ್ರೀಯತೆ ಕಲ್ಪಿತ ಧರ್ಮವನ್ನೂ ಹುಟ್ಟುಹಾಕಿತು. ವಸಾಹತು­ಶಾಹಿ, ರಾಷ್ಟ್ರೀಯತೆ, ಕೋಮುವಾದ ಇವೆಲ್ಲಾ ಒಂದಕ್ಕೊಂದು ಹೆಣೆ­ದು­­ಕೊಂಡು ಬೆಳೆದ ವಟ­ವೃಕ್ಷಗಳೇ ಆದವು. ಇದ­ನ್ನೆಲ್ಲ ಸಮತೂಕದಲ್ಲಿ ವಿವರಿಸಬೇಕಾದರೆ  ಚರಿತ್ರೆ­ಯನ್ನು ಬರೆಯುವ ಅದರದ್ದೇ ಆದ ಕ್ರಮವೂ ಬೇಕಾಗುತ್ತದೆ. ಅದನ್ನು ದಕ್ಕಿಸಿಕೊಂಡ ಹೆಗ್ಗಳಿಕೆ ಬಿಪಿನ್‌ರಿಗೆ ಸಲ್ಲುತ್ತದೆ. ಈ ದಿಕ್ಕಿನಲ್ಲಿ ಸಂಶೋಧನೆ­ಯನ್ನು ಮಾಡಬಲ್ಲ ಅವರ ಶಿಷ್ಯ ಪಡೆ ಬೆಳೆದು ಬಂದುದನ್ನೂ ಪರಿಗಣಿಸಬೇಕಾಗುತ್ತದೆ.

ಮಾರ್ಕ್‌್ಸವಾದಿ ಚಿಂತನಾ ಕ್ರಮ ಕೆಲವೊಮ್ಮೆ ತೊಡಕಾಗಿಯೂ ಕಂಡುಬಂದಿದೆ. ನೇರವಾಗಿ ಮಾರ್ಕ್‌್ಸನ ವಿಚಾರಧಾರೆಯನ್ನೇ ಅಳವಡಿಸಿ­ಕೊ­ಳ್ಳು­ವು­ದಾಗಲೀ ಅಥವಾ ಮಾರ್ಕ್‌್ಸನ ವಿಚಾರ­ದಿಂದ ಹೊರಗುಳಿದವರನ್ನು ಪರಿಗಣಿಸದೆ ಹೋಗು­­­­­ವು­ದಾಗಲೀ ಚರಿತ್ರೆಯನ್ನು ಅಪೂರ್ಣ­ವಾ­ಗಿ­ಸುತ್ತದೆ. ಸುಮಿತ್ ಸರ್ಕಾರರು ಆಧುನಿಕ ಭಾರತದ ಚರಿತ್ರೆಯನ್ನು ಬರೆದಾಗ ಅಥವಾ ನಂಬೂ­ದರಿಪಾಡ್ ಅವರ ಸ್ವಾತಂತ್ರ್ಯ ಹೋರಾ­ಟದ ಕೃತಿಗಳಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನ ಪಾತ್ರ ಗೌಣವಾಗಿತ್ತು. ಅದರಲ್ಲೂ ಗಾಂಧೀಜಿ ಅವರ ಅಹಿಂಸಾತ್ಮಕ ಹೋರಾಟಕ್ಕಿಂತ ಕಾರ್ಮಿಕ ಹೋರಾಟ ಮುಖ್ಯವಾಗಿ ಕಂಡುಬಂದಿತು.

ಮಾರ್ಕ್‌್ಸ­­­ವಾದಿಗಳು ಮಾಡಿದ ಹೋರಾಟ ಮಾತ್ರ ಶ್ರೇಷ್ಠ ಎಂದು  ಭಾವಿಸದ ಬಿಪಿನ್ ತಮ್ಮ ಅಧ್ಯಯನ ಕ್ರಮವನ್ನು ‘ಓಪನ್ ಎಂಡೆಡ್’ (ಮುಕ್ತತೆ) ಎಂದು ಕರೆದುಕೊಳ್ಳುತ್ತಾರೆ. ಹಾಗಾಗಿ ರಾಷ್ಟ್ರೀಯ ಹೋರಾಟದ ವಿಸ್ತಾರ­ವಾದ ಕ್ಯಾನ್ವಾಸ್‌ನ ಮೇಲೆ ಅವರವರಿಗೆ ಸಲ್ಲಬೇಕಾದ ಸ್ಥಾನ, ಬಣ್ಣಗಳನ್ನು ಕೊಡುವ ಪ್ರಯತ್ನ ಮಾಡಿದ್ದಾರೆ. ಅದರಲ್ಲಿ ಗಾಂಧೀಜಿಯ ಹೋರಾ­ಟಕ್ಕೆ ಹೆಚ್ಚಿನ ಮನ್ನಣೆಯನ್ನೇ ನೀಡಿದ್ದಾರೆ. ಗಾಂಧೀಜಿ ಅವರದು ಚರಿತ್ರಕಾರರ ಕುತೂಹಲಕ್ಕೆ ಸಿಕ್ಕ ವ್ಯಕ್ತಿತ್ವ. ಅವರು ನಡೆಸಿದ ಅಸಹಕಾರ ಆಂದೋಲನ, ಕರ ನಿರಾಕರಣೆ, ಭಾರತ ಬಿಟ್ಟು ತೊಲಗಿ ಇವು ರಾಷ್ಟ್ರೀಯ ಹೋರಾಟದ ಮೈಲಿ­ಗಲ್ಲುಗಳಾಗಿವೆ.

ಜೊತೆ ಜೊತೆಯಲ್ಲೇ ಬುಡಕಟ್ಟು ಹೋರಾಟಗಳನ್ನೂ, ರೈತ ಹೋರಾಟಗಳನ್ನೂ ಮತ್ತು ಸಮಾಜ ಸುಧಾ­ರಣಾ ಚಳವಳಿಗಳನ್ನೂ ಗುರುತಿಸಲು ಸಾಧ್ಯ­ವಾಗಿದ್ದು ಭಾರತ ರಾಷ್ಟ್ರೀಯ ಹೋರಾಟ­ವನ್ನು ‘ಎಪಿಕ್’ (ಮಹಾ­ಕಾವ್ಯ) ಎನ್ನಲು ಕಾರಣ­ವಾಯಿತು. ಇಂತಹ ‘ಮಹಾಕಾವ್ಯ’­ವನ್ನು ರಚಿಸು­ವಾಗ ಬರವಣಿಗೆ­ಗಳು ಮಾತ್ರವೇ ಆಧಾರ­ಗಳಾಗಿಲ್ಲ. ದೇಶದಾ­ದ್ಯಂತ ಜನರ ನೆನಪುಗಳನ್ನು, ಅನುಭವಗಳನ್ನು ದಾಖಲಿಸ­ಲಾಯಿತು. ಆದ್ದ­ರಿಂದಲೇ ಅವರು ಅದನ್ನು ಜನರ ಚರಿತ್ರೆಯೆಂದು ಕರೆದು­ಕೊಳ್ಳು­ತ್ತಾರೆ. ಹೀಗೆ ಸಂಗ್ರಹಿಸಿದ ಧ್ವನಿಸುರುಳಿಗಳನ್ನು ನವದೆಹಲಿಯ ನ್ಯಾಷನಲ್ ಮ್ಯೂಸಿಯಂನಲ್ಲಿ  ಸಂಗ್ರಹಿಸಿಡ­ಲಾಗಿದೆ.

ಬಿಪಿನ್ ಅವರ ಈ ವಿದ್ವತ್‌ಪೂರ್ಣ ಸಂಶೋ­ಧ­ನೆ­ಗಳನ್ನು ಟೀಕಿಸುವವರಿಗೂ ಕೊರತೆ ಇಲ್ಲ. ಕೋಮುವಾದವನ್ನು ಕುರಿತು  ಮಾತನಾಡುವ ಹೊತ್ತಿನಲ್ಲಿ, ದೇಶದ ಸನಾತನವಾದಿಗಳನ್ನು ಅವರು ಕಟುವಾಗಿ ವಿಮರ್ಶಿಸುತ್ತಾರೆ. ಹಿಂದೂ ಮೂಲ­ಭೂತವಾದ ಮತ್ತು ಮುಸ್ಲಿಂ ಮೂಲ–ಭೂತ­ವಾದಗಳೆರಡರ ಅಪಾಯವನ್ನು ಬಿಪಿನ್ ಗಮನಿಸಿದರೂ ಹಿಂದುತ್ವವಾದಿಗಳು ಅವರನ್ನು ಗುಮಾನಿಯಿಂದಲೇ ನೋಡುತ್ತಾರೆ.

ನೆಹರೂ ಬದುಕಿನ ಭಿನ್ನ ಹಂತಗಳನ್ನು ಗುರುತಿ­ಸುತ್ತಾ, ಅವರು ಮೂಲದಲ್ಲಿ ಮಾರ್ಕ್‌್ಸವಾದಿ­ಯಾಗಿದ್ದು ನಂತರ ಗಾಂಧೀಜಿಯ ಸಹವಾಸ ಅವರ ವ್ಯಕ್ತಿತ್ವದಲ್ಲಿ ಬದಲಾವಣೆಯನ್ನು ತರು­ತ್ತದೆ ಎಂದಿದ್ದಾರೆ.

ಬಂಡವಾಳಶಾಹಿಗಳೊಂದಿಗಿನ ಅವರ ಒಡನಾಟವನ್ನು ಬಿಪಿನ್ ಕಟುವಾಗಿ ಟೀಕಿಸಿದರೂ, ಸ್ವಾತಂತ್ರ್ಯೋತ್ತರ ಭಾರತದ ಬಗ್ಗೆ ಬರೆ­ಯುವಾಗ ನೆಹರೂ ಅವರಿಗೆ ಕೊಡುವ ಆದ್ಯತೆ ಆಧುನಿಕೋತ್ತರವಾದಿಗಳ ಟೀಕೆಗೆ ಗುರಿ­ಯಾಗಿದೆ. ಈ ಎಲ್ಲ ಟೀಕೆ ಟಿಪ್ಪಣಿಗಳ ಆಚೆಗೂ ಇಡೀ ಜಗತ್ತು ಕಂಡ ಅತಿ ದೊಡ್ಡ ಜನಾಂದೋ­ಲನವಾದ ಭಾರತದ ರಾಷ್ಟ್ರೀಯ ಹೋರಾಟ­ವನ್ನು ಸಮರ್ಥವಾಗಿ ಕಟ್ಟಿಕೊಡಲು ಸಾಧ್ಯ

ವಾ­ಗಿದ್ದು ಬಿಪಿನ್ ಅವರಿಗೇ. ಆಯಾ ಕ್ಷೇತ್ರದಲ್ಲಿ ವಿದ್ವತ್‌ ಉಳ್ಳವರು ಶಾಲಾ ಪಠ್ಯಗಳನ್ನು ಬರೆಯ­ಬೇಕೆಂದು ಅವರು ಒತ್ತಾಯಿಸುತ್ತಿದ್ದರು. ತಮ್ಮ ಕಿರಿಯ ಶಿಷ್ಯರಿಂದಲೂ ಬಿಪಿನ್ ಎಂದು ಮಾತ್ರ ಕರೆಸಿಕೊಳ್ಳಲು ಅವರು ಬಯಸುತ್ತಿದ್ದರು.


ಮಾರ್ಕ್ಸ್‌ವಾದದ ಸುತ್ತ ಒಂದು ಸುತ್ತು
Tue, 08/19/2014

ಸೈಕಲ್ ಮೇಲೆ ಪುಸ್ತಕ ಹೇರಿಕೊಂಡು ಮನೆ ಮನೆಗೆ ಪುಸ್ತಕ ಮಾರಿದ ಗುಲ್ಬರ್ಗದ ಪ್ರಭಾಕರ ಕಾಂತಾ ಅವರು ಸತ್ತಾಗ ಅವರ ಮನೆಯವರ ನೆರವಿಗೆ ಬರಲು ಮಿತ್ರರು ನಿರ್ಧರಿ ಸಿದ್ದರು.  ಅವರು  ಸಂಗ್ರಹಿಸಿದ ಪುಸ್ತಕಗಳನ್ನು ಮಾರಾಟ ಮಾಡಲು ಆಗಸ್ಟ್ 15ರಂದು ಸಾಹಿತ್ಯ ಪರಿಷತ್ ಸಭಾಂಗಣದ ತುಂಬಾ ಹರಡ­ಲಾಗಿತ್ತು. ಕಾಂತಾ ಅವರ ಬಗ್ಗೆ ಯೋಚನೆಗಳು ಹರಿದವು. ಹೀಗೆ ಮನೆ---, ಮಠ ಬಿಟ್ಟು ಜನರಿಗೆ ವಿಚಾರ ಮುಟ್ಟಿಸಬೇಕೆಂಬ ಬದ್ಧತೆಯನ್ನು ಕಲಿಸಿದ್ದಾದರೂ ಯಾರು?
ಸಭೆ ಸಮಾರಂಭ­ಗಳು ನಡೆಯುವ ಜಾಗಗಳಲ್ಲಿ ವೈಚಾರಿಕ ಪುಸ್ತಕ­ಗಳನ್ನು ಮಾರುತ್ತಾ ಮಾತಿಲ್ಲದೆ ಮೌನವಾಗಿ ತನ್ನ ಪ್ರತಿಭಟನೆಯನ್ನು ಸೂಚಿಸುವ ಅಮೃತ್, ರೈತರ ಹೋರಾಟಕ್ಕಾಗಿ ಜೈಲುವಾಸ ಅನುಭವಿ­ಸುವ ಅನಸೂಯಮ್ಮ, ಹೆಣ್ಣುಮಕ್ಕಳ ಸಮಸ್ಯೆಗೆ ಟೊಂಕಕಟ್ಟಿ ನಿಲ್ಲುವ ನೀಲಾ, ದೇವದಾಸಿ ಹೆಣ್ಣುಮಕ್ಕಳ ಜೊತೆ ದುಡಿಯುವ ಭಾಗ್ಯಲಕ್ಷ್ಮಿ, ಪೌರ ಕಾರ್ಮಿಕರನ್ನು ಸಂಘಟಿಸುವ ದು.ಸರಸ್ವತಿ, ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಯಾವುದೋ ಕೂಗು ಇವರೆಲ್ಲ­ರನ್ನೂ   ಜನಮಾನಸದ ಸಂಕಟಗಳಿಗೆ ಮಿಡಿಯು ವಂತೆ ಮಾಡಿದೆ.
ಕಾವ್ಯವೆಂದರೆ ಕೋಗಿಲೆಯಂತೆ ಉಲಿ­ದಾಡದೆ, ‘ಇಕ್ರಲಾ ವದಿರ್ಲಾ’ ಎಂದು ಅಬ್ಬರಿಸಿದಾಗ,  ‘ಕತ್ತಿ ಪರದೇಶಿಯಾದರೆ ಮಾತ್ರ ನೋವೆ, ನಮ್ಮವರೇ ಹದಹಾಕಿ ತಿವಿದರದು ಹೂವೆ’ ಎಂದು ಹೇಳುತ್ತಾ ಪಶ್ಚಿಮ ಘಟ್ಟಗಳಲ್ಲಿ ದನಿ ಮೊಳಗಿಸಿದಾಗ, ‘ಖಡ್ಗವಾಗಲಿ ಕಾವ್ಯ’ ಎಂದಾಗ, ‘ಬದುಕಿಗಾಗಿ ಕಲೆ’ ಎಂದು ಸಮು­ದಾಯ ಕಟ್ಟಿಕೊಂಡಾಗ, ಅಲೆಮಾರಿ­ಗಳಿಗೂ ಒಂದು ಸೂರು ಬೇಕೆಂದು ಬಯಸುವಾಗ ಆಳದಲ್ಲಿ ಚಿಂತನೆಯೊಂದು ಹರಿದಾಡಿದೆ.
ರಾಜ ಮಹಾರಾಜರ ಗುಣಗಾನವೇ ಚರಿತ್ರೆ­ಯಲ್ಲ,  ಪಂಪ–ರನ್ನರು ಮೆರೆದದ್ದು ಮಾತ್ರ ಕಾವ್ಯವಲ್ಲ, ಜನಪದರ ನಾಲಗೆಯಲ್ಲಿ ಕಾವ್ಯ­ವಿದೆಯೆಂದು ಕಿವಿಗೊಟ್ಟು ಆಲಿಸಿದ ವಿದ್ವಾಂಸ­ರನ್ನು ವಿಚಾರವೊಂದು ಕೈಹಿಡಿದು ಮುನ್ನಡೆ­ಸುತ್ತಿದೆ. ಸುಮಾರು 150 ವರ್ಷಗಳಿಂದ ತಿಳಿದೋ ತಿಳಿಯದೆಯೋ ಜಗತ್ತಿನಾದ್ಯಂತ ಜನ  ಮೆಚ್ಚಿದ ಅಥವಾ ವಿರೋಧಿಸಿದ ಸಿದ್ಧಾಂತವೇ ಮಾರ್ಕ್ಸ್‌ವಾದ. ಆ ವೇಳೆಗಾಗಲೇ ಅಸ್ತಿತ್ವದಲ್ಲಿದ್ದ ಸಮಾಜವಾದ­ವನ್ನು ಆದರ್ಶದ ನೆಲೆಯಲ್ಲಿ ಉಳಿಸದೇ ಅದನ್ನು ಉತ್ಕರ್ಷಕ್ಕೆ ತೆಗೆದುಕೊಂಡು ಹೋಗಲು ಮಾರ್ಕ್ಸ್‌ನಿಗೆ ಸಾಧ್ಯವಾಗಿತ್ತು. ಮಾರ್ಕ್ಸ್‌ನ ಚಿಂತನೆಗಳು ಜಗತ್ತಿನ ಚರಿತ್ರೆಯ ನೆಲೆಗಟ್ಟಿನ ಮೇಲೆ ಹುಟ್ಟಿದ್ದವು. ಕೈಗಾರಿಕಾ ಕ್ರಾಂತಿ ತಂದೊ ಡ್ಡಿದ ಸಾಮಾಜಿಕ ಪಲ್ಲಟಗಳು ಯೂರೋಪಿನ ಸಮಾಜದಲ್ಲಿ ಹೊಸ ಪ್ರಶ್ನೆಗಳನ್ನು ಹುಟ್ಟು­ಹಾಕಿತ್ತು. 
ಆ ವೇಳೆಗಾಗಲೇ ಯೂರೋಪ್‌ನ ರಾಷ್ಟ್ರಗಳು ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕ­ದಲ್ಲಿ ವಸಾಹತುಗಳನ್ನು ಹೊಂದಿದ್ದವು.  ಅಲ್ಲಿಂದ ಬಂದ ಸಂಪತ್ತಿನಿಂದ ಮೆರೆಯುತ್ತಿದ್ದವು. ಆ ಪೈಪೋಟಿಯಿಂದ ಸದಾ ಜಗಳವಾಡುತ್ತಿದ್ದವು. ಸುಲಿಗೆಯೇ ಆದರ್ಶವಾಗಿದ್ದ ಕಾಲ ಅದಾಗಿತ್ತು. ಸಂಪತ್ತಿನ ಒಡೆತನಕ್ಕಾಗಿ ನಡೆಯುವ ಕಚ್ಚಾಟ, ಶೋಷಣೆ, ಅಸಮಾನ ಸಮಾಜ ಇದರ ವಿರುದ್ಧವಾಗಿ ಮಾರ್ಕ್ಸ್‌ನ ಚಿಂತನೆ ನಡೆದಿತ್ತು. ಶೋಷಿತರ ಪರವಾಗಿ ಆಲೋಚನೆ ಮತ್ತು ಹೋರಾಟಗಳೆರಡನ್ನೂ ಮಾರ್ಕ್ಸ್‌ ಮತ್ತು ಏಂಗಲ್ಸ್‌ ಕಟ್ಟತೊಡಗಿದ್ದರು. ಆಲೋಚನೆಯ ತೀವ್ರತೆ ರಾಷ್ಟ್ರಗಳ ಗಡಿಯನ್ನು ಮೀರಿ ಮನು­ಕುಲದ ಏಳಿಗೆಯನ್ನು ಕುರಿತು ಚಿಂತಿಸುವಂತೆ ಮಾಡಿತು. ‘ಜಗತ್ತಿನ ಕಾರ್ಮಿಕರೇ ಒಂದಾಗಿ’ ಎಂದಾಗ   ಧರ್ಮ, ಭಾಷೆ, ದೇವರು, ಎಲ್ಲಾ ಗಡಿಗಳನ್ನು ಮೀರಲು ಮಾರ್ಕ್ಸ್‌ಗೆ ಸಾಧ್ಯ­ವಾಗಿತ್ತು. ಮಾರ್ಕ್ಸ್‌ವಾದ ಬಹು ಬೇಗನೆ ರಾಜಕೀಯ ಚಿಂತನೆಯಾಗಿ ರೂಪಪಡೆಯಿತು. ವಸಾಹತುಗಳನ್ನು ಹೊಂದಿದ್ದ ರಾಷ್ಟ್ರಗಳು ಮಾರ್ಕ್ಸ್‌ವಾದದ ವಿರುದ್ಧ  ಕತ್ತಿ ಮಸೆಯ­ತೊಡಗಿದವು. ಹಾಗಾಗಿ ರಾಜಕೀಯ ವೇದಿಕೆ­ಯಾಗಿ ಮಾರ್ಕ್ಸ್‌ವಾದ ಭಾರತಕ್ಕೆ ಬಂದಾಗ ಬ್ರಿಟಿಷ್ ಸರ್ಕಾರ ಅದನ್ನು ತಹಬಂದಿಯಲ್ಲಿ ಇರಿಸಿತ್ತು.

ಆದರೆ ಯಾವುದೇ ಚಿಂತನೆಯನ್ನು ತಡೆಹಿಡಿ­ಯಲು ಸಾಧ್ಯವಾಗದು, ಅದು ಪರಿಮಳದಂತೆ ಹರಡುತ್ತದೆ ಎನ್ನುವುದಕ್ಕೆ ಮಾರ್ಕ್ಸ್‌ವಾದವೂ ಉತ್ತಮ ಸಾಕ್ಷಿ. ವಸಾಹತು ಹಿತಾಸಕ್ತಿಗೆ ಕೊಡಲಿಯಾಗಬಹುದೆಂಬ ಹೆದರಿಕೆಯಿಂದ ಬ್ರಿಟಿಷರು ತಡೆಗೋಡೆಯೊಡ್ಡುವ ನಿರಂತರ ಯತ್ನದಲ್ಲಿದ್ದರು. ಮಾನವೀಯವಾದ ಚಿಂತನೆ­ಗಳಿಗೆ ಪ್ರತಿರೋಧ ಈ ನಾಡಿನಲ್ಲಿ ಹೊಸದೇನೂ ಅಲ್ಲ. ಅಷ್ಟೊತ್ತಿಗಾಗಲೇ ಬುದ್ಧನ ವಿಚಾರಧಾರೆ­ಯನ್ನು ದೂರ ತಳ್ಳಲಾಗಿತ್ತು. ಅಂತಹದೇ ಮತ್ತೊಂದು ವಿಚಾರಧಾರೆ ಒಳಹೊಕ್ಕಾಗ ಸ್ಥಾಪಿತ ಮೌಲ್ಯಗಳಿಗೆ ಉಸಿರು ಕಟ್ಟಿದಂತಾಗಿದ್ದರೆ ಅದರಲ್ಲಿ ಆಶ್ಚರ್ಯವಿಲ್ಲ. ೧೯೨೦ರ ದಶಕದ ಹೊತ್ತಿಗೆ ಮಾರ್ಕ್ಸ್‌ವಾದ ರಾಜಕೀಯ ಪಕ್ಷವಾಗಿ ಭಾರತವನ್ನು ಪ್ರವೇಶಿಸುವ ಮುನ್ನಾ ಆದರ್ಶದ ಅದರ ಕಂಪು ಭಾರತವನ್ನು ತಲುಪಿತ್ತು. ಈ ಚಿಂತನೆ ಬಹುಶಃ  ಮಾರ್ಕ್ಸ್‌ನಷ್ಟೇ ಹಳೆಯದು.

ಏಕೆಂದರೆ ದಾದಾಭಾಯಿ ನವರೋಜಿಯವರು ಅವರ ಸಮಕಾಲೀನರಾಗಿದ್ದರು ಮತ್ತು ನೇರವಾಗಿ ಅವರೆಲ್ಲೂ ಮಾರ್ಕ್ಸ್‌ ಅಥವಾ ಏಂಗಲ್ಸರ ಹೆಸರನ್ನು ಹೇಳದಿದ್ದರೂ ಅವರು ಮಾರ್ಕ್ಸ್‌ವಾದಿಯೇ ಆಗಿದ್ದರು ಎನ್ನುವುದು ಅವರ ಬರಹಗಳಿಂದ ಸ್ಪಷ್ಟವಾಗುತ್ತದೆ. ೧೯೩೦ರ ಹೊತ್ತಿಗೆ ಜವಾಹರಲಾಲ್‌ ನೆಹರೂ, ಸುಭಾಷ್‌ ಚಂದ್ರ ಬೋಸ್‌ರಂತಹ ಕಟ್ಟಾ ಮಾರ್ಕ್ಸ್‌ವಾದಿ­ಗಳು  ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷವನ್ನು ಹುಟ್ಟುಹಾಕಿದ್ದು ಭಾರತದಲ್ಲಿ ಕಮ್ಯುನಿಸ್ಟರ ಹಿನ್ನಡೆಗೂ ಕಾರಣವಾಯಿತು.

ಭಾರತದಲ್ಲಿ ಶತಮಾನಗಳಿಂದ ಸಾಧಿಸಿದ್ದ ಹತ್ತಿ ಬಟ್ಟೆ ನೇಯ್ಗೆ ನಾಶವಾಗಿ ಕೈಗಾರಿಕಾ ಬೆಳವಣಿಗೆಗೇ ತೊಡಕಾಗಿದ್ದರಿಂದ ಕೈಗಾರಿಕಾ ಕ್ರಾಂತಿ ಭ್ರಮೆಯೇ ಆಗಿತ್ತು. ಆದ್ದರಿಂದ ಬಂಡ­ವಾಳಶಾಹಿ ವಿರುದ್ಧವಾದ ಕಾರ್ಮಿಕ ಹೋರಾಟ-­ಕ್ಕಿಂತ ಬ್ರಿಟಿಷ್ ವಿರುದ್ಧದ ಸ್ವಾತಂತ್ರ್ಯ ಹೋರಾ­ಟವೇ ಕಾಂಗ್ರೆಸ್‌ಗೆ  ಮುಳುವಾಗಿತ್್ತು. ಗಾಂಧಿ  ನೆಲೆಯ ಅಹಿಂಸಾ ಹೋರಾಟ ಶಸ್ತ್ರಸಜ್ಜಿತ ಹೋರಾಟಕ್ಕಿಂತ ಹೆಚ್ಚು ಪ್ರಸ್ತುತವಾ­ಗತೊಡ ಗಿತು. ಗಾಂಧಿ ಹೋರಾಟದ ಮಾರ್ಗಗ­ಳೆಲ್ಲವೂ ಮಾರ್ಕ್ಸ್‌ವಾದಕ್ಕೆ ವಿರುದ್ಧವೇ ಆಗಿದ್ದವು.

ಇನ್ನು ಅಂಬೇಡ್ಕರ್  ಅವರು ಮಾರ್ಕ್ಸ್‌ವಾದ­ವನ್ನು ನಂಬಿದ್ದರೂ ಮಾರ್ಕ್ಸ್‌ವಾದಿಗಳನ್ನು ನಂಬಲಿಲ್ಲ. ಜಾತಿ ನೆಲೆಯ ಪ್ರಶ್ನೆಗಳು ಆ ಕಾಲದ ಮಾರ್ಕ್ಸ್‌ವಾದಿಗಳ ಪ್ರಮುಖ ಪ್ರಶ್ನೆಯಾಗಿ­ರಲಿಲ್ಲ. ದಲಿತ ಸಮಸ್ಯೆಗಿಂತ ಅದನ್ನು ಕಾರ್ಮಿಕ ಸಮಸ್ಯೆಯಾಗಿ ನೋಡಿದ್ದರು. ಅದೇ ಅಂಬೇಡ್ಕರ್‌ ಅವರು ಕಾರ್ಮಿಕರನ್ನು ದಲಿತರಾಗಿ ಕಂಡರು. ಕಮ್ಯುನಿಸ್ಟರು ಬಳಸುತ್ತಿದ್ದ  ಬೂರ್ಜ್ವಾ,- ಪ್ರಾಲಿಟ­ರೇಟ್, ಫ್ಯೂಡಲಿಸಂ ಇಂತಹ ಅರ್ಥವಾಗದ ಪದಗಳ ಬಳಕೆ ಜನಸಾಮಾನ್ಯರಿಗೆ ಕಮ್ಯುನಿಸ್ಟ­ರಿಂದ ದೂರವೇ ಉಳಿಯುವಂತೆ ಮಾಡಿತು. ಆದರೂ ಭಾರತದ ಕಮ್ಯುನಿಸ್ಟ್ ಪಕ್ಷದ ಏಳು ಬೀಳನ್ನು ನೋಡಲು ಹೊರಟರೆ ಎಸ್.ಎ.­ಡಾಂಗೆ, ಎಂ.ಎನ್.ರಾಯ್, ನಂಬೂದರಿ­ಪಾಡ್, ಜ್ಯೋತಿ ಬಸು ಇವರನ್ನೆಲ್ಲಾ ನೆನೆಯ­ಬೇಕಾಗುತ್ತದೆ.

ಮಾರ್ಕ್ಸ್‌ವಾದ ಭಾರತದ ಬದುಕನ್ನು ರೂಪಿಸಿದೆ ಎಂದರೆ ಕೆಲವರು ಗುಮಾನಿಯಿಂದ ನೋಡಬಹುದು. ಆದರೆ ವೀರ ಸಾವರ್ಕರ್ ಅಂತಹವರು ‘ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಕೃತಿಯನ್ನು ಬರೆದಾಗ ಇಂತಹ ಆಲೋಚನೆ ಅದಕ್ಕೆ ಕಾರಣವಾಗಿತ್ತು. ಹೊರಗಿನ ಚಿಂತನೆಗಳಿಗೆ ಬಂಗಾಳದ ವಿದ್ವಾಂ ಸರು ಉಳಿದ ಪ್ರದೇಶಗಳಿಗಿಂತ  ಮೊದಲು ಸ್ಪಂದಿಸಿದ್ದಾರೆ. ಟ್ಯಾಗೋರರು ರಾಷ್ಟ್ರೀಯತೆ­ಯನ್ನು ಪ್ರಶ್ನಿಸುವಷ್ಟು ವಿಶಾಲ ದೃಷ್ಟಿಯನ್ನು ಬೆಳೆಸಿಕೊಂಡಿದ್ದರು. ಅದೇ ರೀತಿ ಹಿಂದಿ ಸಾಹಿತ್ಯದ ಪ್ರೇಮ್‌ಚಂದರಿಗೆ ಮಧ್ಯಕಾಲೀನ ಸಮಾಜದ ಮೌಲ್ಯಗಳನ್ನು ತಮ್ಮ ಕಥೆಗಳಲ್ಲಿ ಸೆರೆಹಿಡಿಯಲು ಸಾಧ್ಯವಾಗಿತ್ತು.

ಕನ್ನಡ ನಾಡಿಗೆ ಮಾರ್ಕ್ಸ್‌ವಾದ ಮುಂಬೈ ಕರ್ನಾಟಕ ಇಲ್ಲವೇ ಕೇರಳದ ಕಡೆಯಿಂದ ಪ್ರವೇಶವನ್ನು ಪಡೆದಿರಬೇಕು. ೧೯೩೦ರ ಆಸುಪಾಸಿನಲ್ಲೇ ಉತ್ತರ ಕರ್ನಾಟಕದಲ್ಲಿ ನೇಕಾರರ ಹೋರಾಟ, ಕೃಷಿ ಕೂಲಿಕಾರ್ಮಿಕರ ಹೋರಾಟ ನಡೆದದ್ದನ್ನು ಗಮನಿಸಲಾಗಿದೆ. ಕಿಸಾನ್ ಸಭಾದ ಭಾಗವಾಗಿ ರೈತ ಹೋರಾಟ­ಗಳು ಈ ಪ್ರದೇಶದಲ್ಲಿ ಆರಂಭವಾಗಿವೆ. ಉಪಾ­ಧ್ಯಾಯ ಸೋದರರು, ದಕ್ಷಿಣ ಕನ್ನಡದಲ್ಲಿ ಕಕ್ಕಿ ಲ್ಲಾಯ, ಸಿಂಪ್ಸನ್, ಕೆ.ಆರ್. ಶ್ರೀಯಾನ್‌­ರನ್ನು ನೆನೆಯಬೇಕಾಗುತ್ತದೆ. ಒಟ್ಟಾರೆ ಕರ್ನಾ­ಟಕದ ಎಡಪಂಥೀಯ ಕಾರ್ಮಿಕ ರೈತ ಹೋರಾಟ­ಗಳನ್ನು ಸಂಘಟಿಸುವಲ್ಲಿ ಎಂ.ಎಸ್‌.­ಕೃಷ್ಣನ್, ಸೂರ್ಯನಾರಾಯಣ ರಾವ್, ಎಂ.ಎಚ್‌.­ರಾಮರಾವ್ ಇವರ ಪಾತ್ರ ಬಹಳ ಮುಖ್ಯ. ಕೋಲಾರದ ಗಣಿಯಿಂದಾಗಿ ಆರಂಭದ ದಿನಗಳಿಂದ ಕಾರ್ಮಿಕ ಹೋರಾಟ ಅಲ್ಲಿ ಬೆಳೆದು ಬಂದಿದೆ. ಇಷ್ಟಾಗಿಯೂ ಕರ್ನಾಟಕದಲ್ಲಿ ಎಡ­ಪಂಥೀಯ ಹೋರಾಟ ಸಾಮಾಜಿಕ ಕಾಳಜಿಗಾಗಿ ಹೋರಾಡುವ ಚಳವಳಿಯ ರೂಪವನ್ನು ಪಡೆದಿ­ದೆಯೇ ಹೊರತು ರಾಜಕೀಯ ಪಕ್ಷವಾಗಿ ಚುನಾ­ವಣಾ ರಾಜಕೀಯಕ್ಕೆ ಸಿದ್ಧವಾಗಲಿಲ್ಲ.

ಆಗಾಗ್ಗೆ ತನ್ನ ಪ್ರಾತಿನಿಧ್ಯವನ್ನು ಪಡೆದಿದೆ­ಯಾದರೂ ತನ್ನ ಪ್ರಖರ ಸೈದ್ಧಾಂತಿಕ ಮಟ್ಟಕ್ಕೆ ತಕ್ಕುದಾಗಿ ಅದು ಎಂದೂ ಕಾಣಿಸಿಕೊಂಡಿಲ್ಲ. ಆದರೆ ಎಲ್ಲಾ ಎಡಪಂಥೀಯ ಹಾಗೂ ಪ್ರಗತಿಪರ ಹೋರಾಟ­ಗಳಿಗೆ ತಾಯಿಬೇರು ಮಾರ್ಕ್ಸ್‌ವಾದ­ವಾಗಿದೆ. ಅಂದರೆ ಎಲ್ಲರೂ ಮಾರ್ಕ್ಸ್‌ನ ವಿಚಾರಧಾರೆ­ಗಳನ್ನು ಓದಿ, ಜೀರ್ಣಿಸಿಕೊಂಡಿದ್ದಾರೆ ಎಂದಾ­ಗಲೀ, ಕಮ್ಯುನಿಸ್ಟ­ರಿಂದ ತರಬೇತಿ ಪಡೆದಿದ್ದಾರೆ ಎಂದಾಗಲೀ ಅರ್ಥವಲ್ಲ, ಅದು ಮೌಖಿಕ ವಾಗಿಯೂ ಪರಂಪರೆಯಾಗಿಯೂ ಹರಿದು­ಬಂದಿದೆ. ಎಷ್ಟೋ ಬಾರಿ ಶೋಷಣೆಯ ವಿರುದ್ಧ ನಿಲ್ಲಬೇಕೆಂಬ ಮೂಲ ಅರ್ಥ ಮಾತ್ರವೇ ಅವರಿಗೆ ತಿಳಿದಿರುತ್ತದೆ. ಈ ಶೋಷಣೆ ಯಾರಿಂದ ಹೇಗೆ ಆರಂಭವಾಯಿತೆಂಬುದನ್ನು ಅರಿಯುವಾಗ ಸೋಲುವ ಸಾಧ್ಯತೆಗಳೂ ಇರುತ್ತವೆ.

ನಲವತ್ತು ಐವತ್ತು ವರ್ಷಗಳ ಹಿಂದೆ ಬಗಲಲ್ಲಿ ಒಂದು ಚೀಲ ತಗುಲಿ  ಹಾಕಿಕೊಂಡು, ಗಡ್ಡಧಾರಿಯಾಗಿ ಇರುವ      ಯುವಕರನ್ನು ನೋಡಿದರೆ ಮಾರ್ಕ್ಸ್‌ವಾದಿಯೆಂದು ಗುರುತಿಸ ಲಾಗುತ್ತಿತ್ತು. ಅವರು ನಿರುದ್ಯೋಗಿಗಳಾಗಿದ್ದರೂ ಕ್ರಾಂತಿಯ ಕುರಿತು ಕನಸು ಕಾಣುತ್ತಿದ್ದರು.
ಈಗ  ನಿರುದ್ಯೋಗಿ ಯುವಕರಾಗಿದ್ದರೂ ಅವರು ಮಾರ್ಕ್ಸ್‌ವಾದಿಗಳಾಗಿಲ್ಲ.  ದಲಿತ ಚಳವಳಿ ಕರ್ನಾಟಕದಲ್ಲಿ ಆರಂಭಗೊಂಡಾಗ ನಾಯಕ­ರಲ್ಲಿ ಹಲವರು ವಿದ್ಯಾರ್ಥಿ ಚಳವಳಿಯಿಂದ ಬಂದವರಾಗಿದ್ದಾರೆ. ಅಂಬೇಡ್ಕರ್ ಚಿಂತನೆ­ಯನ್ನು ಗುರುತಿಸುವಷ್ಟೇ ಗುರುತರವಾಗಿ ಮಾರ್ಕ್ಸ್‌ನ ವಿಚಾರಗಳೂ ಕಾರಣವಾಗಿವೆ. ಕನ್ನಡ ಸಾಹಿತ್ಯದಲ್ಲಿ ನಿರಂಜನ ಮುಂತಾದ ಪ್ರಗತಿಶೀಲ ಲೇಖಕರು ಸಾಹಿತ್ಯದಲ್ಲಿ ಸಿದ್ಧಾಂತ­ವನ್ನು ಪ್ರಕಟವಾಗಿ ತರುವ ಪ್ರಯತ್ನ ಮಾಡಿ­ದರು. ನವ್ಯ ಕಾಲದ ಸಾಹಿತ್ಯದ ಮೇಲೆ ಸಮಾಜ­ವಾದದ ಪ್ರಭಾವ ಹೆಚ್ಚಾಗಿಯೇ ಕಾಣಬಂದರೂ ರೈತಹೋರಾಟವನ್ನು ಬೆಂಬಲಿಸಿದ ಕ್ರಮ ಮೆಚ್ಚುವಂತಹದೇ. ಲಂಕೇಶರು ಪತ್ರಿಕೆಯನ್ನೇ ಪ್ರತಿಭಟನಾ ಮಾಧ್ಯಮವಾಗಿ ರೂಪಿಸಿದರು.

ಇನ್ನು ಮಹಿಳಾ ಚಳವಳಿಗಳು,  ಆರಂಭದಲ್ಲಿ ಸುಧಾರಣಾ ಚಳವಳಿಗಳಾಗಿದ್ದವು. ಪುರುಷರ ಬೆಂಬಲದಲ್ಲಿ ನಡೆದಿವೆ. ಕಳೆದ ಐವತ್ತು ವರ್ಷಗಳಲ್ಲಿ ಮಹಿಳಾ ನಾಯಕತ್ವ ಪ್ರತಿಭಟ ನಾತ್ಮಕ ಸ್ವರೂಪವನ್ನು ಪಡೆದುಕೊಂಡಿದೆ. ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಗಮನಿಸಿದರೂ   ಸಮಾನ ಕೂಲಿಗಾಗಿ ಆರಂಭ ವಾದ ಮಹಿಳಾ ಚಳವಳಿ ಮಾರ್ಕ್ಸ್‌ವಾದದ ನೆಲೆಯಲ್ಲೇ ಹುಟ್ಟಿದ್ದೇ ಆಗಿದೆ. ಪಕ್ಷದ ಹಿಡಿತದಲ್ಲಿರಲಿ, ಎನ್‌ಜಿಒ ಆಗಿರಲಿ ಶೋಷಣೆಯ ವಿರುದ್ಧದ ‘ಕೆಂಪು’ ಹೋರಾಟವೇ ಆಗಿರುತ್ತದೆ.

ನಮ್ಮ ಸಾಂಪ್ರದಾಯಿಕ ಕುಟುಂಬದಿಂದ ಬರುವ ಹೆಣ್ಣು ಮಕ್ಕಳು ಹೋರಾಟದಂಥ ಪದಗಳಿಂದಲೂ ದೂರ ಉಳಿಯಲು ಬಯಸು­ತ್ತಾರೆ. ರಸ್ತೆಯಲ್ಲಿ ಮೆರವಣಿಗೆ ಹೋದರೆ ಅದನ್ನು ಅವಮಾನವೆಂದು ಭಾವಿಸುತ್ತಾರೆ, ಆ ಹೋರಾಟದಿಂದ ಸಿಗಬಹುದಾದ ಲಾಭವೆಲ್ಲವೂ ಅವರಿಗೆ ಬೇಕಾಗಿರುತ್ತದೆ, ಅವರು ಹೋರಾಟ­ದಲ್ಲಿ ಕಾಣಿಸಿಕೊಳ್ಳುವುದಕ್ಕೆ ಹಿಂಜರಿಯುತ್ತಾರೆ.

ಅವರು ಮಹಿಳೆ ಮೇಲಿನ ದೌರ್ಜನ್ಯಗಳಿಗೆ ಸ್ಪಂದಿಸದಿರಲೂ ಇದೇ ಕಾರಣವಾಗಿದೆ. ಮಹಿಳಾ ಹೋರಾಟದಲ್ಲಿ ತೊಡಗಿರುವ ಕೂಲಿ ಮಾಡುವ ಹೆಣ್ಣು ಮಕ್ಕಳು ದೃಢವಾಗಿ ಖಚಿತವಾಗಿ ಮಾತನಾಡಬಲ್ಲರು. ಹೆಣ್ಣು ಮಕ್ಕಳ ನಾಯಕತ್ವ ಬೇಕಾಗಿರುವ ಈ ಹೊತ್ತಿನಲ್ಲಿ. ಜನಪರವಾಗಿ ಯೋಚನೆ ಮಾಡುವ ಶಕ್ತಿಯನ್ನು ಮಾರ್ಕ್ಸ್‌ವಾದ ತಂದುಕೊಡಬಲ್ಲದು ಎಂದು ಹೇಳಲು ಕರ್ನಾಟಕದಲ್ಲಿ ಚಳವಳಿಯಲ್ಲಿ ಭಾಗಿ­ಯಾ­ಗಿರುವ ಹೆಣ್ಣುಮಕ್ಕಳನ್ನು ಗಮನಿಸಿದರೆ ಅರ್ಥವಾಗುತ್ತದೆ. ಓದು ಒಂದು ಹಂತಕ್ಕೆ ಹೆಣ್ಣನ್ನು ಸ್ವತಂತ್ರ ಆಲೋಚನೆಗೆ ಹಚ್ಚಬಹು­ದಾದರೂ ಚಳವಳಿ ಅವಳಲ್ಲಿ ನಾಯಕತ್ವದ ಗುಣವನ್ನು ತಂದುಕೊಡುತ್ತದೆ.

ಮಾರ್ಕ್ಸ್‌ವಾದವನ್ನು ತರಾಟೆಗೆ ತೆಗೆದು­ಕೊಳ್ಳುವ ಸಿದ್ಧಾಂತಗಳೂ ನಿರಂತರವಾಗಿ ಬರು­ತ್ತಲೇ ಇವೆಯಾದರೂ ಒಂದಲ್ಲಾ ಒಂದು ರೀತಿಯಲ್ಲಿ ಮಾರ್ಕ್ಸ್‌ ಮತ್ತು ಏಂಗಲ್ಸರ ವಾದದ ಮುಂದುವರಿಕೆಯಾಗಿಯೇ ಕಾಣಿಸಿಕೊ­ಳ್ಳುತ್ತಿವೆ. ತಾನು ಭಿನ್ನವಾಗಿ ನಿಲ್ಲುತ್ತೇನೆಂದು ಭಾವಿಸಿದವರ ಬರವಣಿಗೆಗಳೂ ಮಾರ್ಕ್ಸ್‌­ವಾದದ ಉಪ ಉತ್ಪನ್ನಗಳೇ ಆಗಿವೆ. ಈ ಸಿದ್ಧಾಂತ­ವನ್ನು  ಅಸಹಜವೆಂದು ವಾದಿಸುತ್ತಾ ಧರ್ಮ, ದೇವರು, ಜಾತಿಯಲ್ಲಿ ತಮ್ಮ  ಆದರ್ಶವನ್ನು ಕಂಡವರೂ ತಮಗರಿವಿಲ್ಲದಂತೆ ನ್ಯಾಯ ಅನ್ಯಾಯಗಳ ಬಗೆಗೆ ಮಾತನಾಡುತ್ತಾ ಎಂದೋ ಎಲ್ಲೋ ಕಲಿತ ವಿಚಾರಗಳನ್ನು ಮುಂದಿಡುತ್ತಾರೆ.

ಈ ಆದರ್ಶ, ಸಾಹಿತ್ಯಕ್ಕೆ ಮಾತ್ರ ಮೀಸಲಾ­ಗದೆ  ಕಲೆಯಲ್ಲೂ ಹೆಚ್ಚು ಅರ್ಥವತ್ತಾಗಿಯೇ ಕಾಣಿಸಿ­ಕೊಂಡಿದೆ. ಅದರಲ್ಲೂ ಜಮೀನ್ದಾರಿ ವ್ಯವಸ್ಥೆ­ಯನ್ನು, ಶ್ರೀಮಂತಿಕೆಯ ಅಹಂನ್ನು ಒಡೆ ಯುವುದು ಭಾರತೀಯ ಚಲನ ಚಿತ್ರಗಳ ಪ್ರಮುಖ ವಿಷಯಗಳಾಗಿವೆ. ಕನ್ನಡದ ‘ಸಂಪತ್ತಿಗೆ ಸವಾಲ್‌’, ಹಿಂದಿಯ ‘ಮದರ್ ಇಂಡಿಯಾ’  ಸಿನಿಮಾಗಳು  ಜಮೀನ್ದಾರಿಕೆಯ ವಿರುದ್ಧದ ಪ್ರತಿಭಟನೆಗಳೇ ಆಗಿವೆ.

ಭಾರತದಲ್ಲಿ ಅಂತರ್ಗತವಾಗಿ ಬೌದ್ಧ ಧರ್ಮ ಬದುಕುಳಿದಿದ್ದರೆ ಅದರ ಮುಂದುವರಿಕೆಯಾಗಿ ಇಲ್ಲಿ ಮಾರ್ಕ್ಸ್‌ವಾದ ಸ್ವೀಕೃತವಾಗಿರುತ್ತಿತ್ತು. ಅದು  ಕಾಲಕ್ಕೆ ತಕ್ಕಂತೆ ಪರಿಷ್ಕರಣೆ ಆಗಿದೆ. ಈವ ರೆಗೆ ಸರ್ಕಾರ ತಂದ  ಸುಧಾರಣಾ ನೀತಿಗಳಲ್ಲಿ ಪ್ರಗತಿಪರವಾದ ಕಾನೂನುಗಳು ಜಾರಿಗೆ ಬಂದಿದ್ದರೆ ಅದಕ್ಕೆ ಮಾನವೀಯ ಸಿದ್ಧಾಂತದ ಬದ್ಧತೆ ಕಾರಣ. ಪ್ರಗತಿಪರ, ನಾಸ್ತಿಕ, ಸಂಪ್ರದಾಯ ವಿರೋಧಿಗಳೆಂಬ ಗುಮಾನಿಯನ್ನು ಬಿಟ್ಟು ಮಾನವೀಯ ಮೌಲ್ಯಗಳನ್ನು ಗುರುತಿ­ಸಬೇಕಾಗಿದೆ. ಹುಸಿಮುನಿಸು­ ಬಿಟ್ಟು ಎಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. 

ಕಾಮೆಂಟ್‌ಗಳಿಲ್ಲ: