ಸೋಮವಾರ, ಫೆಬ್ರವರಿ 5, 2018

೨೦೧೮-೧೯ರ ಕೇಂದ್ರ ಬಜೆಟ್ಟು: ಬರಿಮಾತಿನ ದಿಬ್ಬಣ

  ಅನುಶಿವಸುಂದರ್ 
Image result for indian budget 2018

೨೦೧೮-೧೯ರ ಬಜೆಟ್ಟಿನಲ್ಲಿ ಕೇಂದ್ರ ಸರ್ಕಾರ ಎತ್ತಿಟ್ಟಿರುವ ಹಣವು ಬಜೆಟ್ಟಿನಲ್ಲಿ ಕೊಚ್ಚಿಕೊಂಡಿರುವ ಯಾವ ಯೋಜನೆಗೂ ಸಾಲುವುದಿಲ್ಲ.

ದಿನಗಳೆದಂತೆ ಬಜೆಟ್ ಮಂಡನೆಯು ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಹಾಗಿದ್ದರೂ ಆದು ಕೇಂದ್ರ ಸರ್ಕಾರದ ಕ್ಯಾಲೆಂಡರಿನಲ್ಲಿ ಮಾಧ್ಯಮಗಳಿಗೆ ಅತ್ಯಗತ್ಯವಾಗಿ ಬೇಕಾದ ಒಂದು ಘಟನೆಯಾಗಿ ಮಾತ್ರ ಇದ್ದೇ ಇರುತ್ತದೆ: ಆಳುವ ಸರ್ಕಾರಗಳಿಗೆ ಇದು ತಾನು ಎಷ್ಟೊಂದು ಜನಪರ ಎಂದು ತೋರಿಸಿಕೊಳ್ಳಲು ಒಂದು ಅವಕಾಶವನ್ನು ಖಂಡಿತಾ ಒದಗಿಸುತ್ತದೆ. ಆದರೆ ವಾಸ್ತವದಲ್ಲಿ ಅದು ಅಂತರರಾಷ್ಟ್ರೀಯ ಸಾಲ ನೀಡುವ ಸಂಸ್ಥೆಗಳ ಮತ್ತು ವಿಶ್ವ ಹಣಕಾಸು ಬಂಡವಾಳಿಗರ ವಿತ್ತೀಯ ಸಧೃಢೀಕರಣದ ಅಗತ್ಯಗಳನ್ನು ಪೂರೈಸಲು ಶ್ರಮಿಸುತ್ತಿರುತ್ತದೆ. ಏಕೆಂದರೆ ಜಾಗತಿಕ ಹಣಕಾಸು ಬಂಡವಾಳವು ಸರ್ಕಾರಗಳು ಮಾರುಕಟ್ಟೆಯಲ್ಲಿ ಕಡಿಮೆ ಸಾಲ ಮಾಡುವುದನ್ನು ಪ್ರಶಂಸಿಸುತ್ತವೆ ಹಾಗೂ ಹೆಚ್ಚು ಸಾಲ ಮಾಡಿದರೆ ಕೆಂಗಣ್ಣು ಬೀರುತ್ತವೆ. (ಏಕೆಂದರೆ ಸಾರ್ವಜನಿಕ ಸಾಲವು ಪ್ರಧಾನವಾಗಿ ಖಾಸಗಿ ಕಾರ್ಪೊರೇಟ್ ವಲಯಗಳಿಗೆ ದಕ್ಕಬೇಕೆಂಬುದು ಅವುಗಳ ಧೋರಣೆ-ಅನು).

೨೦೧೮-೧೯ರ ಕೇಂದ್ರ ಬಜೆಟ್ಟು ಸರ್ಕಾರದ ರಾಜಕೀಯ ಧೋರಣೆಗೆ ತಕ್ಕಂತಿದೆ. ಮಾಧ್ಯಮಗಳಿಗಾಗಿಯೇ ಸಿದ್ಧಪಡಿಸಿದ್ದ ಬಜೆಟ್ ಭಾಷಣನ್ನು ಮಾಧ್ಯಮಗಳು ಚಾಚೂ ತಪ್ಪದಂತೆ ಬಿತ್ತರಿಸಿದವು. ಆದರೆ ವಾಸ್ತವದಲ್ಲಿ ಬಜೆಟ್ಟಿನಲ್ಲಿ ಭಾರತದ ಆರ್ಥಿಕತೆಯು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬಲ್ಲ ಯಾವುದೇ ಸುಸಂಬಂದ್ಧ ನೀತಿ ಅಥವಾ ಯೋಜನೆಗಳಿರಲಿಲ್ಲ. ಯಾವ ಯೋಜನೆಗಳನ್ನು ಕ್ರಾಂತಿಕಾರಕ ನೀತಿಗಳೆಂದು ಸರ್ಕಾರವು ಕೊಚ್ಚಿಕೊಂಡಿದೆಯೋ ಅವೆಲ್ಲ ಈಗಾಗಲೇ ಜಾರಿಯಲ್ಲಿದ್ದ ಯೋಜನೆಗಳೇ ಆಗಿವೆ. ಹೆಸರನ್ನಷ್ಟೇ ಹೊಸದಾಗಿ ನೀಡಲಾಗಿದೆ. ಮತ್ತೊಂದು ಕಡೆ ಕೆಲವು ದೂರಗಾಮಿ ಉದ್ದೇಶಗಳನ್ನೇ ಜಾರಿಯಾಗಲಿರುವ ಯೋಜನೆಗಳೇನೋ ಎಂಬಂತೆ ಪ್ರಸ್ತಾಪಿಸಲಾಗಿದೆ. ತನ್ನನ್ನು ಯಾವುದಕ್ಕೂ ಪ್ರಶ್ನೆಯನ್ನೇ ಮಾಡದ ಮಾಧ್ಯಮದ ಸಹಕಾರದೊಂದಿಗೆ ನರೇಂದ್ರಮೋದಿ ಸರ್ಕಾರವು ಹಿಂದಿನ ಎಲ್ಲಾ ಸರ್ಕಾರಗಳು ನಾಚುವಷ್ಟು ಹಸಿಹಸಿಯಾಗಿ ಇವೆಲ್ಲವನ್ನೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ.

ಆದರೂ ಅಂಕಿಅಂಶಗಳಿಂದ ಸಿಂಗಾರಗೊಂಡಿರುವ ಬಜೆಟ್ಟು ಏನನ್ನು ನೀಡಲಿದೆ ಎಂಬುದನ್ನು ವಿಶ್ಲೇಷಿಸೋಣ. ೨೦೧೮-೧೯ನೇ ಸಾಲಿನ ಅಂದಾಜು ವೆಚ್ಚಗಳು ಕಳೆದ ವರ್ಷಕ್ಕಿಂತ ಶೇ.೧೦.೧ರಷ್ಟು ಹೆಚ್ಚಲಿದೆ. ಇದು ಕಳೆದ ಸಾಲಿಗಿಂತ ಸಾರಿಯ ಜಿಡಿಪಿಯು ಎಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಅಂದಾಜು ಮಾಡಲಾಗಿದೆಯೋ ಅದಕ್ಕಿಂತ ಶೇ.೧೧.೫ರಷ್ಟು ಕಡಿಮೆ. ಹಾಗೂ ೨೦೧೭-೧೮ರಲ್ಲಿ ಯಾವ ಪ್ರಮಾಣದಲ್ಲಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತೋ ಅದಕ್ಕಿಂತ ಶೇ.೧೨.೩ರಷ್ಟು ಕಡಿಮೆ.
Image result for indian budget 2018

ಕಳೆದ ಸಾಲಿಗಿಂತ ೨೦೧೮-೧೯ರಲ್ಲಿ ಒಟ್ಟಾರೆ ತೆರಿಗೆ ಆದಾಯವು ಶೇ.೧೬.೭ರಷ್ಟು ಹೆಚ್ಚಲಿದೆ ಎಂಬ ಆಶಾವಾದವನ್ನು ಬಜೆಟ್ಟಿನಲ್ಲಿ ತೋರಲಾಗಿದೆ. ಆದರೆ ೨೦೧೭-೧೮ರ ಸಾಲಿನಲ್ಲಿ ಬಜೆಟ್ ನಲ್ಲಿ ಮಾಡಿದ ಅಂದಾಜು ವೆಚ್ಚಕ್ಕಿಂತ ಪರಿಷ್ಕೃತ ವೆಚ್ಚ ಹೆಚ್ಚಾಗಿದೆ. ಆದರೆ ಪರಿಷ್ಕೃತ ಬಂಡವಾಳ ವೆಚ್ಚ ಮಾತ್ರ ೩೬,೩೫೭ ಕೋಟಿಗಳಷ್ಟು ಕಡಿಮೆಯಾಗಿದೆ. ಹೀಗಾಗಿ ೨೦೧೭-೧೮ರ ಸಾಲಿನಲ್ಲಿ ಮಾಡಿರುವ ಬಂಡವಾಳ ವೆಚ್ಚವು ೨೦೧೬-೧೭ರ ಸಾಲಿನಲ್ಲಿ ಮಾಡಿದ ಬಂಡವಾಳ ವೆಚ್ಚಕ್ಕಿಂತ ಕಡಿಮೆಯಾಗಲಿದೆ. ಅಂಥಾ ಬಂಡವಾಳ ವೆಚ್ಚಗಳು ಸಾಮಾನ್ಯವಾಗಿ ದೇಶದ ಬೌತಿಕ ಆಸ್ತಿಗಳನ್ನು ಸೃಷ್ಟಿ ಮಾಡುವಂಥ ವೆಚ್ಚಗಳಾಗಿದ್ದು ಸಾರ್ವಜನಿಕ ವೆಚ್ಚಗಳ ಬಹುಮುಖ್ಯ ಭಾಗವಾಗಿರುತ್ತವೆ. ೨೦೧೭-೧೮ರ ಸಾಲಿನಲ್ಲಿ ದೊಡ್ಡ ಮತ್ತು ಮಧ್ಯಮ ಗಾತ್ರದ ನೀರಾವರಿ ಮತ್ತು ವಿದ್ಯುತ್ ಯೋಜನೆಗಳಿಗಾಗಿ ಮಾಡಬೇಕಿದ್ದ ವೆಚ್ಚದಲ್ಲಿ ಆಗಿರುವ ಕಡಿತವೇ ೨೦೧೭-೧೮ರ ಸಾಲಿನ ಪರಿಷ್ಕೃತ ಬಂಡವಾಳ ವೆಚ್ಚದಲ್ಲಿ ಕಂಡುಬರುತ್ತಿರುವ ಇಳಿಕೆಗೆ ಕಾರಣವಿರಬೇಕು. ೨೦೦೯-೧೦ ಮತ್ತು ೨೦೧೩-೧೪ರ ನಡುವಿನ ಅವಧಿಯಲ್ಲಿ ಬಗೆಯ ಬಂಡವಾಳ ವೆಚ್ಚಗಳು ಶೇ.೧೬.೪ರಷ್ಟು ಇರುತ್ತಿತ್ತು. ಆದರೆ ಅದು ೨೦೧೪-೧೫ ಮತ್ತು ೨೦೧೮-೧೯ರ ಅವಧಿಯಲ್ಲಿ ಶೇ.೧೦.೪ಕ್ಕೆ ಇಳಿದಿದೆ. ಇದು ನಿಜಕ್ಕೂ ಚಿಂತೆಗೀಡುಮಾಡುವಂಥ ಬೆಳವಣಿಗೆಯಾಗಿದೆ. ಏಕೆಂದರೆ ದಿನಗಳೆದಂತೆ ಸಾರ್ವಜನಿಕ ವೆಚ್ಚಗಳು ಪ್ರಧಾನವಾಗಿ ಖಾಸಗೀ ಕಾರ್ಪೊರೇಟ್ ಬಂಡವಾಳ ಹೂಡಿಕೆಯ ಮೇಲೆ ಅವಲಂಬಿತವಾಗುತ್ತಿದ್ದು, ಖಾಸಗಿ ಕಂಪನಿಗಳು ಲಾಭದ ದರ ಹೆಚ್ಚಿಲ್ಲದ  ಬಾಬತ್ತಿನಲ್ಲಿ ಹೂಡಿಕೆ ಮಾಡುವುದಿಲ್ಲ. ಹಾಗೂ ಲಾಭದ ಹರಿವು ಇಲ್ಲದಾಗ ಸಾಲ ಮರುಪಾವತಿ ಮಾಡಲಾಗದ ಬಿಕ್ಕಟ್ಟು ಉಂಟಾಗಿ ಹಣಕಾಸು ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ.

೨೦೧೮-೧೯ರ ಸಾಲಿನಲ್ಲಿ ವಿತ್ತೀಯ ಕೊರತೆ (ಆದಾಯಕ್ಕಿಂತ ವೆಚ್ಚವು ಹೆಚ್ಚಿರುವ ಪ್ರಮಾಣ)ಯು ಜಿಡಿಪಿಯ ಶೇ..೫ರಷ್ಟಿರುತ್ತದೆ ಎಂದು ಅಂದಾಜು ಮಾಡಲಾಗಿದೆ. ಇದು ಹಿಂದೆ ಮಾಡಿದ ಅಂದಾಜಿಗಿಂತ ಹೆಚ್ಚಿರುವುದು ಮಾತ್ರವಲ್ಲದೆ ಈಗ ಮಾಡಿರುವ ಅಂದಾಜಿಗಿಂತಲೂ ಹೆಚ್ಚೇ ಆಗಲಿದೆ. ಏಕೆಂದರೆ ಬಜೆಟ್ಟಿನಲ್ಲಿ ಸಾಲಿನ ಜಿಡಿಪಿಯ ಬಗ್ಗೆ ಮಾಡಿರುವ ಅಂದಾಜು ಉತ್ಪ್ರೇಕ್ಷಿತವಾಗಿದೆ. ೨೦೧೭-೧೮ರ ಸಾಲಿಗೆ ಮಾಡಲಾಗಿದ್ದ ವಿತ್ತೀಯ ಕೊರತೆಯು ಅಂದಾಜನ್ನು ಮೀರಿರುವುದಕ್ಕೆ ಆದಾಯ ಸಂಗ್ರಹದಲ್ಲಿ ಆಗಿರುವ ಕೊರತೆಯೇ ಕಾರಣವೆಂಬುದು ನಿಸ್ಸಂಶಯ. ಪ್ರತಿಗಾಮಿ ವಿತ್ತೀಯ ಕೊರತೆ ಅಂದಾಜುಗಳು ಮತ್ತು  ಸರ್ಕಾರದ ಒಟ್ಟಾರೆ ಸಾಲದ ಹೊರೆಯು ಜಿಡಿಪಿಯ ಶೇ.೪೦ಕ್ಕಿಂತ ಹೆಚ್ಚಿರಬಾರದೆಂಬ ಹೊಸ ಸಾಲ ಶರತ್ತುಗಳಿಗೆ ಒಪ್ಪಿಕೊಳ್ಳುವ ಪ್ರಸ್ತಾಪಗಳು ತಮ್ಮ ಸರ್ಕಾರವು ಪರಿಷ್ಕೃತ ವಿತ್ತೀಯ ಪಥಕ್ಕೆ ಬದ್ಧವಾಗಿರುತ್ತದೆಂದು ಖಾತರಿ ನೀಡಿ ಜಾಗತಿಕ ಹಣಕಾಸು ಮಾರುಕಟ್ಟೆಯನ್ನು ಮತ್ತು ದೇಶದ ಸಾಲಾರ್ಹತೆಯ ಸೂಚ್ಯಂಕ  ಕೊಡುವ ಏಜೆನ್ಸಿಗಳನ್ನು (ರೇಟಿಂಗ್ ಏಜೆನ್ಸಿ) ಮೆಚ್ಚಿಸಲು ಮಾಡಿರುವ ಕಸರತ್ತುಗಳೇ ಆಗಿವೆ. ಒಟ್ಟಾರೆ ಬಜೆಟ್ಟಿನ ಪ್ರಧಾನ ಲಕ್ಷ್ಯವೇ ಇದಾಗಿದೆಯೆಂದರೂ ತಪ್ಪಲ್ಲ.

ರಾಜಕೀಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಬೆಳೆದ ಬೆಲೆಗೆ ಸರಿಯಾದ ಬೆಲೆ ದಕ್ಕದಿರುವುದರ ವಿರುದ್ಧ ಮತ್ತು ಗ್ರಾಮೀಣ ಆರ್ಥಿಕತೆಗೆ ಪುನಶ್ಚೇತನ ನೀಡುವ ಯಾವ ನೀತಿಗಳೂ ಇಲ್ಲದಿರುವುದರ ವಿರುದ್ಧ ೨೦೧೭-೧೮ರ  ಅವಧಿಯುದ್ದಕ್ಕೂ ಕೃಷಿ ಕ್ಷೇತ್ರದಲ್ಲಿ ಕೋಲಾಹಲ ಉಂಟಾಗಿ ರೈತಾಪಿ ವರ್ಗದ ಮಧ್ಯಮ ಜಾತಿಗಳು ದೊಡ್ಡ ರೀತಿಯಲ್ಲಿ ಪ್ರತಿಭಟಟನೆ ನಡೆಸಿದ್ದವು. ಹೀಗಾಗಿ ಬಜೆಟ್ಟು ಸಮಸ್ಯೆಗಳನ್ನೂ ಉದ್ದೇಶಿಸಿರುತ್ತದೆ ಎಂಬ ನಿರೀಕ್ಷೆ  ಸಹಜವಾದದ್ದೇ ಆಗಿತ್ತು. ಬಜೆಟ್ ಭಾಷಣವನ್ನು ಮಾತ್ರ ಗಮನಿಸಿದರೆ ಅದು ಗ್ರಾಮೀಣ ಆರ್ಥಿಕತೆಯ ಬಿಕ್ಕಟ್ಟಿನ ಬಗ್ಗೆ ತುಂಬಾ ಕಾಳಜಿಯನ್ನು ತೋರಿರುವಂತೆ ಕಾಣುತ್ತದೆ. ಆದರೆ ಯಾವ್ಯಾವ ಬಾಬತ್ತಿಗೆ ಎಷ್ಟೆಷ್ಟು ಹಣವನ್ನು ಒದಗಿಸಿದ್ದಾರೆ ಎಂಬುದನ್ನು ನೋಡಿದಾಗ ಮಾತ್ರ ದೊಡ್ಡ ನಿರಾಶೆಯೇ ಉಂಟಾಗುತ್ತದೆ. ಹಣಕಾಸು ಮಂತ್ರಿಗಳು ಯಾವ್ಯಾವ ಖಾರಿಫ್ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನೂ ಘೊಷಿಸಿಲ್ಲವೋ ಎಲ್ಲ ಬೆಳಗಳಿಗೆ ಉತ್ಪಾದನಾ ವೆಚ್ಚಕ್ಕೆ ಅದರ ಶೇ.೫೦ರಷ್ಟು ಮೊತ್ತವನ್ನು ಹೆಚ್ಚುವರಿಯಾಗಿ ಸೇರಿಸಿ ಹೊಸ ಬೆಂಬಲ ಬೆಲೆಯನ್ನು ಕೊಡುವುದಾಗಿ ಬಜೆಟ್ಟಿನಲ್ಲಿ ಘೊಷಿಸಿದ್ದಾರೆ. ಆದರೆ ಮರು ವಾಕ್ಯದಲ್ಲೇ ನೀತಿ ಅಯೋಗವು ರಾಜ್ಯ ಸರ್ಕಾರಗಳೊಡನೆ ಸಮಾಲೋಚನೆ ನಡೆಸಿ ರೈತರು ಸರಿಯಾದ ಬೆಲೆಯನ್ನು ಪಡೆಯಲು ಬೇಕಾದ ಸಾಂಸ್ಥಿಕ ರಚ್ನೆಗಳನ್ನು ಏರ್ಪಾಡು ಮಾಡುವುದು ಎಂದೂ ಹೇಳಿದ್ದಾರೆ. ಇದರ ಬಗ್ಗೆ ಭಾರತೀಯ ಜನತಾ ಪಕ್ಷವು ೨೦೧೪ರ ಚುನಾವಣೆಯಲ್ಲೇ ಭರವಸೆಗಳನ್ನೂ ನೀಡಿದ್ದರೂ ಅದು ಜಾರಿಯಾಗಲು ಬೇಕಾದ ನೀತಿ, ಯೋಜನೆ ಮತ್ತು ಸಂಸ್ಥಿಕ ಸ್ವರೂಪಗಳು ನಾಲ್ಕು ವರ್ಷಗಳ ನಂತರವೂ, ಬಜೆಟ್ ಮಂಡನೆಯ ಕಾಲಕ್ಕೂ ಸಿದ್ಧವಾಗಿಲ್ಲ. ಹೀಗಾಗಿ ಇದೂ ಕೂಡಾ ಒಂದು ಪೊಳ್ಳು ಭರವಸೆಯೇ(ಜುಮ್ಲಾ) ಆಗಿದೆ. ಅಂಥಾ ಒಂದು ನೀತಿಯ ಬಗ್ಗೆ ಚರ್ಚೆಯೂ ಸಹ ಇಷ್ಟು ತಡವಾಗಿ ಆರಂಭಗೊಳ್ಳುತ್ತಿದೆ.

ಇನ್ನು ಗ್ರಾಮೀಣ ಅರ್ಥಿಕತೆಯ ಬಗೆಗಿನ ಎಲ್ಲಾ ಹೊಸ ಮತ್ತು ಹಳೆಯ ಯೋಜನೆಗಳಿಗೆ ಕೊಟ್ಟಿರುವ ಅನುದಾನ ಅತ್ಯಲ್ಪ. ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೊಜನೆಯಂಥ ಪ್ರಮುಖವಾದ ಗ್ರಾಮೀಣ ಹೂಡಿಕೆಯನ್ನೂ ಸಹ ಹೆಚ್ಚಿಸಿಲ್ಲ. ಆದರೂ ಯೋಜನೆಯಡಿ ಕಟ್ಟಬೇಕಿರುವ ರಸ್ತೆಗಳನ್ನೂ ಕಟ್ಟಿಮುಗಿಸುವ ಗುರಿಯನ್ನು ೨೦೨೨ರ ಬದಲಿಗೆ ೨೦೧೯ಕ್ಕೆ ನಿಗದಿಪಡಿಸಲಾಗಿದೆಯೆಂದು ಕೊಚ್ಚಿಕೊಳ್ಳಲಾಗಿದೆ. ಬಜೆಟ್ಟಿನುದ್ದಕ್ಕೂ ಇಂಥಾ ಸಾರವಿಲ್ಲದ ಬಾಯುಪಚಾರದ ಮಾತುಗಳೇ ಹೆಚ್ಚಾಗಿವೆ.

ಸರ್ಕಾರದ ಹಲವಾರು ಹೆಗ್ಗಳಿಕೆಯ ಯೋಜನೆಗಳ ಬಗ್ಗೆಯೂ ಇದೇ ಧೋರಣೆ ಕಂಡುಬರುತ್ತದೆ. ಹಣಕಾಸು ಮಂತ್ರಿಗಳ ಭಾಷಣವು ಅಂಥ ಮೂರು ಯೋಜನೆಗಳನ್ನು ಪ್ರಸ್ತಾಪಿಸುತ್ತದೆ: ಪ್ರಧಾನ್ ಮಂತ್ರಿ ಕಿಸಾನ್ ಸಂಪದ ಯೋಜನೆ, ೨೦೧೭ರ ರಾಷ್ಟ್ರೀಯ ಆರೋಗ್ಯ ಯೋಜನೆಯ ಆರೋಗ್ಯ ಮತ್ತು ಕಲ್ಯಾಣ ಕೇಂದ್ರಗಳು, ಮತ್ತು  ನಿಗೂಢವಾದ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ (ನ್ಯಾಷನಲ್ ಹೆಲ್ತ್ ಪ್ರೊಟೆಕ್ಷನ್ ಸ್ಕೀಮ್- ಎನ್ಎಚ್ಪಿಎಸ್). ಮೊದಲನೇ ಯೋಜನೆಯಲ್ಲಿ ಸಂಸ್ಕರಿತ ಆಹಾರ ಉತ್ಪಾದನಾ ಯೋಜನೆಯ ಉತ್ತೇಜನಕ್ಕೆ ಕೇವಲ ೧೩೧೩ ಕೋಟಿಗಳನ್ನು ಒದಗಿಸಿದ್ದರೆ, ಎರಡನೇ ಯೋಜನೆಯಲ್ಲಿ . ಲಕ್ಷ ಆರೋಗ್ಯ ಮತ್ತು ಕಲ್ಯಾಣ ಕೇಂದ್ರಗಳಿಗಾಗಿ ಕೇವಲ ೧೨೦೦ ಕೋಟಿಗಳನ್ನು ತೆಗೆದಿಡಲಾಗಿದೆ. ಇನ್ನು ಮೂರನೇ ಯೋಜನೆಯಾದ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ (ನ್ಯಾಷನಲ್ ಹೆಲ್ತ್ ಪ್ರೊಟೆಕ್ಷನ್ ಸ್ಕೀಮ್- ಎನ್ಎಚ್ಪಿಎಸ್)ಯನ್ನು ಜಗತ್ತಿನಲ್ಲೇ ಅತಿ ದೊಡ್ಡದಾದ ಸರ್ಕಾರಿ ಧನ ಸಹಾಯದ ಆರೋಗ್ಯ ರಕ್ಷಣಾ ಯೋಜನೆಯೆಂದು ಹೇಳಿಕೊಳ್ಳಲಾಗುತ್ತಿದೆ. ಮೊದಲನೆಯದಾಗಿ ಒಂದು ವಿಮೆ ಆಧಾರಿತ ಯೋಜನೆಯನ್ನು ಸರ್ಕಾರವು ಸಾರ್ವಜನಿಕ ಆರೋಗ್ಯ ಯೋಜನೆಯೆಂದು ಹೇಳಿಕೊಳ್ಳುತ್ತಿದೆ. ರಿಯಾಯಿತಿ ದರದ ಸಾರ್ವಜನಿಕ ಆರೋಗ್ಯ ರಕ್ಷಣಾ ವೆಚ್ಚಗಳಿಗೆ ಹೋಲಿಸಿದಲ್ಲಿ ಆರೋಗ್ಯ ವಿಮಾ ಯೋಜನೆಯು ವೈದ್ಯಕೀಯ ಇಲಾಜಿನ ವೆಚ್ಚವನ್ನು ಹೆಚ್ಚಿಸುವುದಲ್ಲದೆ, ರೋಗಿಗಳು ಮತ್ತು ಅವರ ಕುಟುಂಬದವರು ತಮ್ಮ ಸ್ವಂತ ಜೋಬಿನಿಂದ ಮಾಡುವ ವೆಚ್ಚದ ಪ್ರಮಾಣವನೂ ಹೆಚ್ಚಿಸುತ್ತದೆ. ಅಷ್ಟು ಮಾತ್ರವಲ್ಲ ಬಜೆಟ್ ದಾಖಲೆಗಳನ್ನು ಹತ್ತಿರದಿಂದ ನೋಡಿದರೆ ಸಾಲಿನಲ್ಲಿ ಬಾಬತ್ತಿಗೆ ಒಂದಿಷ್ಟು ಹಣವನ್ನೂ ಎತ್ತಿಟ್ಟಿಲ್ಲ. ೨೦೧೬-೧೭ರ ಸಾಲಿನ ಬಜೆಟ್ ಭಾಷಣದಲ್ಲೂ ಇದೇ ಬಗೆಯ ಘೋಷಣೆಯನ್ನು ಮಾಡಿದ್ದರೂ ಅದಿನ್ನೂ ಕ್ಯಾಬಿನೆಟ್ಟಿನಲ್ಲೇ ಕೊಳೆಯುತ್ತಿದೆ. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನಾ ದಡಿಯಲ್ಲಿ ತಾಯಂದಿರಿಗೆ ನೀಡುತ್ತಿದ್ದ ಸೌಲಭ್ಯಗಳಾನ್ನು ತೀವ್ರವಾಗಿ ಕಡಿತಗೊಳಿಸಲಾಗಿದೆ. ದೇಶದ ೬೦ ಪ್ರಮುಖ ಅರ್ಥಶಾಸ್ತ್ರಜ್ನರು ಯೋಜನೆಯನ್ನು ಜಾರಿಗೊಳಿಸಲು ಹಣದ ಕೊರತೆ ಇರುವುದನ್ನು ಹಣಕಾಸು ಮಂತ್ರಿಗಳ ಗಮನಕ್ಕೆ ತಂದಿದ್ದರು. ೨೦೧೩ರ ರಾಷ್ಟ್ರೀಯ ಅಹಾರ ಭದ್ರತಾ ಕಾಯಿದೆಯ ಪ್ರಕಾರ ತಾಯಂದರಿಗೆ ಬೇಕಾದ ಸೌಲಭ್ಯವನ್ನು ನೀಡುವ ಜವಾಬ್ದಾರಿ ಸರ್ಕಾರದ್ದೇ ಆಗಿದೆ. ಇದು ಕೇಂದ್ರ ಹಾಗೂ ರಾಜ್ಯಗಳೆರಡರ ಜಂಟಿ ಅನುದಾನದಿಂದ ನಡೆಯುವ ಕಾರ್ಯಕ್ರಮವಾಗಿದ್ದು ಕೇಂದ್ರ ಸರ್ಕಾರವು ಇದರಲ್ಲಿ ತನ್ನ ಜವಾಬ್ದಾರಿಯನ್ನು ಪೂರೈಸಬೇಕೆಂದರೆ ಕೇಂದ್ರವು ೮೦೦೦ ಕೋಟಿಯನ್ನು ಎತ್ತಿಡಬೇಕಿತ್ತು. ೨೦೧೭-೧೮ರ ಬಜೆಟ್ಟಿನಲ್ಲಿ ಬಾಬತ್ತಿಗೆ ೨೭೦೦ ಕೋಟಿಯನ್ನು ಎತ್ತಿಡಲಾಗಿತ್ತು. ಆದರೆ ವರ್ಷ ಎತ್ತಿಟ್ಟಿರುವುದು ಕೇವಲ ೨೪೦೦ ಕೋಟಿ ಮಾತ್ರ. ಇಂದಿರಾ ಗಾಂಧಿ ಹಿರಿಯ ನಾಗರಿಕರ ಪಿಂಚಣಿ ಯೋಜನೆಯಡಿ ವೃದ್ಧಾಪ್ಯ ವೇತನವನ್ನು ೨೦೦ ರಿಂದ ೩೦೦ ರೂ.ಗಳಿಗೂ ಮತ್ತು ವಿಧವಾ ವೇತನವನ್ನು ೩೦೦ ರೂ.ಗಳಿಂದ ೫೦೦ ರೂ.ಗಳಿಗೂ ಏರಿಸಬೇಕೆಂಬ ಬೇಡಿಕೆಯನ್ನು ನಿರ್ಲಕ್ಷ್ಯ ಮಾಡಲಾಗಿದೆ.

ಬಜಟ್ಟಿನಲ್ಲಿ ಮಾಡಿರುವ ಒಂದು ಗಮನಾರ್ಹ ಪ್ರಸ್ತಾಪವೆಂದರೆ ಒಂದು ಲಕ್ಷಕ್ಕೂ ಮೇಲ್ಪಟ್ಟ ದೀರ್ಘ ಕಾಲೀನ ಬಂಡವಾಳ ಗಳಿಕೆ (ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್- ಎಲ್ಟಿಸಿಜಿ) ಮೇಲೆ ಶೇ.೧೦ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪ. ಇದಲ್ಲದೆ ಈವರಗೆ ಇದ್ದ ಶೇ. ಶಿಕ್ಷಣ ಸೆಸ್ ರದ್ದಾಗಿ ಅದರ ಬದಲಿಗೆ ಶೇ.೪ರಷ್ಟು ಶಿಕ್ಷಣ ಮತ್ತು ಆರೋಗ್ಯ ಸೆಸ್ ಜಾರಿಗೆ ಬರಲಿದೆ. ಇದು ಒಂದೆಡೆ ಜನರ ತೆರಿಗೆ ಭಾರವನ್ನು ಹೆಚ್ಚಿಸುವುದಲ್ಲದೆ ಇದರಿಂದ ಸಂಗ್ರಹಿಸಲಾಗುವ ನಿಧಿಯನ್ನು ಕೇಂದ್ರವು ರಾಜ್ಯಗಳ ಜೊತೆ ಹಂಚಿಕೊಳ್ಳುವುದೂ ಇಲ್ಲ. ಸಂಬಳದಾರ ತೆರಿಗೆದಾರರು ಪಡೆದುಕೊಳ್ಳುವ ರಿಯಾಯತಿಗಳು ಎನ್ನುವ ಶೀರ್ಷಿಕೆ ಇದ್ದರೂ ಅದರಲ್ಲಿ ಸಂಬಳದಾರರು ಪಡೆದುಕೊಳ್ಳಬಹುದಾದ ಯಾವ ದೊಡ್ಡ ಪ್ರಯೋಜನವನ್ನೂ ಘೊಷಿಸಲಾಗಿಲ್ಲ. ಏಕೆಂದರೆ  ಈವರೆಗೆ ಸಾರಿಗೆ ವೆಚ್ಚ ಮತ್ತು ವೈದ್ಯಕೀಯ ವೆಚ್ಚಗಳ ಮೇಲೆ ದೊರಕುತ್ತಿದ್ದ ರಿಯಾಯತಿಗಳಿಗೆ ಹೋಲಿಸಿದಲ್ಲಿ ಬಜೆಟ್ಟಿನಲ್ಲಿ ಘೋಷಿಸಿರುವ ೪೦೦೦೦ರೂ ನಿಗದಿತ ರಿಯಾಯತಿಯು ಅಂಥಾ ಹೆಚ್ಚೇನೂ ಅನುಕೂಲ ಮಾಡುವುದಿಲ್ಲ.

ಸರ್ಕಾರದ ಮೊದಲ ಬಜೆಟ್ಟಿನಿಂದಲೇ ರಾಜ್ಯಗಳ ಪಾಲನ್ನು ನಿಗದಿ ಮಾಡುವ ೧೪ನೇ ಹಣಕಾಸು ಅಯೋಗದ ಹೊಸ ಸೂತ್ರವು ಜಾರಿಯಲ್ಲಿದೆ. ಸಾಮಾಜಿಕ ಕ್ಷೇತ್ರಗಳ ಮೇಲಿನ ವೆಚ್ಚದಲ್ಲಿ ರಾಜ್ಯಕ್ಕೆ ಹೆಚ್ಚಿನ ಹೊಣೆಗಾರಿಕೆ ಇದೆ. ಸರ್ಕಾರವು ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲೇ ಅಂತತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿಯತೊಡಗಿತ್ತು. ೨೦೧೪ರ ಆಗಸ್ಟ್ನಲ್ಲಿ ಕಚ್ಚಾ ತೈಲದ ದರವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್ಲಿಗೆ ೧೦೦ ಡಾಲರ್ ಇದ್ದದ್ದು ೨೦೧೬ರ ಜನವರಿ ವೇಳೆಗೆ ೩೦ ಡಾಲರಿಗಿಂತ ಕಡಿಮೆ ಆಗಿಬಿಟ್ಟಿತು. ಇಡೀ ಅವದಿಯಲ್ಲಿ ಕಚ್ಚಾ ತೈಲದ ಬೆಲೆ ೧೦೦ ಡಾಲರ್ಗಿಂತ ಕಡಿಮೆಯೇ ಇತ್ತು. ಇಂಥಾ ಅನುಕೂಲಕರ ವಾತಾವರಣ ಈಗ ಇಲ್ಲ: ಈಗಾಗಲೇ ಅಂತತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ ೬೦ ಡಾಲರ್ನಷ್ಟಾಗಿದ್ದು ಬರಲಿರುವ ದಿನಗಳಲ್ಲಿ ಏರಿಕೆ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ. ಕಚ್ಚಾ ತೈಲಕ್ಕೆ ಕಡಿಮೆ ಬೆಲೆ ಇದ್ದ ಅವಧಿಯಲ್ಲಿ ಸರ್ಕಾರವು ಪೆಟ್ರೋಲಿಯಂ ಮತ್ತು ಅದರ ಇತರ ಉತ್ಪನ್ನಗಳಿಂದ ಹೆಚ್ಚೆಚ್ಚು ಪರೋಕ್ಷ ತೆರಿಗೆಯನ್ನು ವಸೂಲಿ ಮಾಡುವುದರಲ್ಲಿ ನಿರತವಾಗಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಕಡಿಮೆ ಇದ್ದದ್ದರಿಂದಲೇ ದೇಶದ ಆಮದು ವೆಚ್ಚವೂ ಕಡಿಮೆಯಾಗಿ ವಾಣಿಜ್ಯದಲ್ಲಿ ಕೊರತೆಯ ಪ್ರಮಾಣವೂ ತಗ್ಗಿತ್ತು. ಕಾರಣದಿಂದಲೇ ಹಣದುಬ್ಬರವೂ ಕಡಿಮೆಯಾಗಿತ್ತು. ಆದರೆ ಹಣದುಬ್ಬರ ಇಳಿದಿದ್ದರ ಶ್ರೇಯಸ್ಸನ್ನು ತನಗೆ ಸೇರಬೇಕೆಂದು ಮೋದಿ ಸರ್ಕಾರ ಹೇಳಿಕೊಂಡಿತ್ತುಯುಪಿಎ ಸರ್ಕಾರವನ್ನು ಅಮಾನ್ಯಗಳೊಳಿಸಲು ಬಿಜೆಪಿ ಪಕ್ಷವು ೨೦೧೪ರ ಚುನಾವಣೆಯಲ್ಲಿ ಬೆಲೆ ಏರಿಕೆಯ ವಿಷಯವನ್ನು ಪ್ರಧಾನವಾಗಿ ಪ್ರಚಾರ ಮಾಡಿತ್ತು. ಆದರೆ ಕಡಿಮೆ ಹಣದುಬ್ಬರದ ಆನುಕೂಲವಿದ್ದರೂ ಮೋದಿ ಸರ್ಕಾರವು ದೇಶದ ಆರ್ಥಿಕತೆ ಮತ್ತು ಬಂಡವಾಳ ಹೂಡಿಕೆಯಲ್ಲಿದ್ದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಘೋರವಾಗಿ ವಿಫಲವಾಗಿದೆ. ಸರ್ಕಾರವು ಉತ್ಪಾದನಾ ಕ್ಷೇತ್ರದ ಬೆಳವಣಿಗೆಗೆ ಪುನಶ್ಚೇತನ ನೀಡಲು ಸಾಧ್ಯವಾಗಿಲ್ಲ. ಜಾಗತಿಕ ಮಾರುಕಟ್ಟೆಯು ಪುನಶ್ಚೇತನಗೊಳ್ಳುತ್ತಿದ್ದರೂ ಭಾರತದ ರಫ್ತು ಉದ್ಯಮವು ಮಾತ್ರ  ಸೊರಗುತ್ತಲೇ ಇದೆ.

ಬಂಡವಾಳ ಹೂಡಿಕೆಯಲ್ಲಿ ಇಳಿಮುಖದ ಪ್ರವೃತ್ತಿಯು ಮೋದಿ ಸರ್ಕಾರವು ಅಧಿಕಾರಕ್ಕೆ ಬರುವ ಮುಂಚೆಯೇ ಪ್ರಾರಂಭವಾಗಿದ್ದರೂ ಮೋದಿ ಸರ್ಕಾರವು ಅದನ್ನು ತಡೆಗಟ್ಟಲು ಮಾಡಬಹುದಾದಷ್ಟನ್ನು ಮಾಡಲೇ ಇಲ್ಲ. ಸರ್ಕಾರವು ಮಾಡುತ್ತಿದ್ದ ಬಂಡವಾಳ ವೆಚ್ಚವೂ ಕುಸಿಯುತ್ತಾ ಹೋಗಿದೆ. ಹಾಗೂ ವಿತ್ತೀಯ ವಿಷಯಗಳಲ್ಲಿ ಪ್ರತಿಗಾಮಿ ಧೋರಣೆಗಳನ್ನೇ ಉಳ್ಳ ಬಜೆಟ್ಟಿನಲ್ಲಿ ಸರ್ಕಾರವು ಅಲಂಕಾರಿಕ ಘೋಷಣೆಗಳನ್ನು ಮಾತ್ರ ಮಾಡುತ್ತಾ ಜನರನ್ನು ಮೋಸಗೊಳಿಸುವ ಪ್ರಯತ್ನದಲ್ಲಿ ತೊಡಗಿದೆ.

 ಕೃಪೆ: Economic and Political WeeklyFeb 3,  2018. Vol. 53. No. 5
                                                                                                              
 (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )

                                                                               





                                                                                                               









ಕಾಮೆಂಟ್‌ಗಳಿಲ್ಲ: