ಬುಧವಾರ, ಆಗಸ್ಟ್ 10, 2011

ಜಾನಪದ ಅಧ್ಯಯನ ಕೇವಲ ಅಕಾಡೆಮಿಕ್ ಕಸರತ್ತು ಆಗದಿರಲಿ:ಕೋಟಗಾನಹಳ್ಳಿ ರಾಮಯ್ಯ




ಸಂದರ್ಶನ: ಹರ್ಷಕುಮಾರ್, ಕುಗ್ವೆ

೭೦ರ ದಶಕದಲ್ಲಿ ಕುಡಿಯೊಡೆದು ಹಬ್ಬಿದ ದಲಿತ ಚಳುವಳಿಯ ಸ್ಥಾಪಕ ಸದಸ್ಯರಲ್ಲೊಬ್ಬರಾದ ಕೋಟಗಾನಹಳ್ಳಿ ರಾಮಯ್ಯನವರು ತಮ್ಮದೇ ಶೈಲಿಯ ವಿಶಿಷ್ಟ ಚಿಂತನೆ, ಪ್ರಯೋಗಗಳಿಗೆ ಹೆಸರಾದವರು. ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಇವರು ಇತ್ತಿಚೆಗ ನಡೆದ ಕೋಲಾರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸಮಕಾಲೀನ ಸಂದರ್ಭದ ಹಲವಾರು ಬಿಕ್ಕಟ್ಟುಗಳ ಬಗೆಗೆ ಅವರು ನಡೆಸಿದ ಮಾತುಕತೆ.


ನಮ್ಮ ಕನ್ನಡ ಸಾಹಿತ್ಯ ಇಂದು ಯಾವ ದಿಸೆಯಲ್ಲಿ ಸಾಗುತ್ತಿದೆ ಎಂದು ಭಾವಿಸುತ್ತೀರಿ?


ಇಂದು ಸಾಹಿತಿಗಳೆನಿಸಿಕೊಂಡವರು ಅದನ್ನು ಒಂದು ಮಾಹಿತಿಯಾಗಿ ಮಾತ್ರ ನೋಡುತ್ತಿದ್ದಾರೆಯೇ ವಿನಃ ಅದರಾಚೆಗೆ ನೋಡುತ್ತಿಲ್ಲ. ಇವರಿಗೆ ಸಾಹಿತ್ಯ ರಚನೆ ಒಂದು ಚಟದ ಮಟ್ಟಕ್ಕೆ ಉಳಿದಿದೆಯೇ ಹೊರತು ಬದುಕಿಗೆ ಅನ್ವಯವಾಗುವ ನಿಟ್ಟಿನಲ್ಲಿ ಅಲ್ಲ. ಕಳೆದ ಹತ್ತು ವರ್ಷಗಳಲ್ಲಿ ಒಂದೇ ಒಂದು ಮೌಲಿಕ ಸಾಹಿತ್ಯ ರಚನೆಯಾಗಿದ್ದು ನನಗಂತೂ ಗೊತ್ತಿಲ್ಲ. ಬರೀ ಮಾತು, ಚರ್ಚೆ, ಹಾಗೂ ಜ್ಞಾನವನ್ನು ಹೆಚ್ಚಿಸಿಕೊಂಡರೆ ಉಪಯೋಗವಿಲ್ಲ. ಅಂಕ ಸಿಗಬಹುದು, ಪಿಎಚ್‌ಡಿ ಗೌರವ ಸಿಗಬಹುದಷ್ಟೆ. ಯಾವುದೇ ಸಾಹಿತ್ಯದ ಪ್ರಸ್ತುತತೆಯನ್ನು ನಿರ್ಧರಿಸುವುದು ಅದು ಆಯಾ ಕಾಲದಲ್ಲಿ ಎಷ್ಟರ ಮಟ್ಟಿಗೆ ಅನ್ವಯವಾಗುತ್ತದೆ ಎನ್ನುವುದು. ಎಪ್ಪತ್ತರ ದಶಕದಲ್ಲಿ ಒಂದು ಅಂತಹ ಅರ್ಥಪೂರ್ಣ ಸಾಹಿತ್ಯ ಹೊರಹೊಮ್ಮಿದ್ದನ್ನು ನಾವು ಕಾಣಬಹುದು. ಅದಕ್ಕೊಂದು ಉದ್ದೇಶವಿತ್ತು. ಆಗ ನಮ್ಮ ಸಮಾಜವೇ ಒಂದು ಸ್ಫೋಟಕ್ಕೆ ಕಾಯ್ತಿದೆ ಎನ್ನುವ ರೀತಿ ಕುದಿಯುತ್ತಾ ಇತ್ತು. ಆದರೆ ಆ ಒತ್ತಡದ ಸ್ಥಿತಿ ಈಗ ಏರ್ಪಡುತ್ತಿಲ್ಲ. ಎಲ್ಲವೂ ವಿಭಜನೆಗೊಂಡು ಹೋಗುತ್ತಿದೆ. ಒಟ್ಟಾರೆಯಾಗಿ ನೋಡುತ್ತಿದ್ದ ದೃಷ್ಟಿಗಿಂತ ವ್ಯಕ್ತಿಗತ ನೆಲೆಯಲ್ಲಿ ಅವರವರದೇ ಆದ ಅನನ್ಯತೆಗಳಲ್ಲಿ ರಾಜಕಾರಣದ ಹುಡುಕಾಟದಲ್ಲಿದ್ದಾರೆ. ಒಬ್ಬೊಬ್ಬರೂ ಒಂದೊದು ರೀತಿ ನೋಡುತ್ತಾ ಅಂತಿಮವಾಗಿ ಎಲ್ಲಿ ತಲುಪಬೇಕೋ ಅಲ್ಲಿ ತಲುಪುವ ದಿಕ್ಕಿನಲ್ಲಿ ಸಂಘಟಿತ ರೀತಿಯಲ್ಲಿ ಚಲಿಸುತ್ತಿಲ್ಲ. ಹೀಗಾದಾಗ ರಾಜಕಾರಣ, ಸಂಸ್ಕೃತಿ, ಚಳವಳಿಗಳಲ್ಲಿ ಒಂದು ಪ್ರತಿರೋಧದ ನೆಲೆಯೆ ಇಲ್ಲವಾಗಿ ಬಿಡುತ್ತದೆ. ಅಂತಹ ಒಂದು ಶೂನ್ಯತೆಯನ್ನು ಇಂದು ನಾವು ಅನುಭವಿಸುತ್ತಿದ್ದೇವೆ. ಜಾಗತೀಕರಣದ ಮಾರುಕಟ್ಟೆ ಆರ್ಥಿಕತೆಯ ಸಾಂಸ್ಕೃತಿಕ ಅಜೆಂಡಾಗಳೂ ಇದಕ್ಕೆ ಕಾರಣವಾಗಿವೆ. ಇದು ಮನುಷ್ಯನನ್ನು ವ್ಯಕ್ತಿಯಲ್ಲಿ ಕೊನೆಗೊಳಿಸುತ್ತಿದೆ. ವ್ಯಕ್ತಿ ಹಾಗೂ ಸಮಷ್ಟಿ ನಡುವಿನ ಬಿಕ್ಕಟ್ಟನ್ನು ಪರಿಹಾರ ಮಾಡಿಕೊಳ್ಳಲು ನಾವು ಅಸಮರ್ಥರಾಗುತ್ತಿದ್ದೇವೆ. ನಮ್ಮ ಉಳಿವಿನ ಪ್ರಶ್ನೆಯನ್ನು ಕೇವಲ ವೈಯುಕ್ತಿಕ ನೆಲೆಯಲ್ಲಿ ತೆಗೆದುಕೊಂಡು ಹೋಗುತ್ತಿರುವುದು ದುರಂತ.

ಮಂಟೇಸ್ವಾಮಿ, ಮಲೆಮಾದೇಶ್ವರ, ಜುಂಜಪಪ್ ಕಾವ್ಯಗಳಂತಹ ನಾಡಿನ ಮೌಖಿಕ ಕಾವ್ಯಗಳ ಪ್ರಾಮುಖ್ಯತೆಯನ್ನು ಹೇಗೆ ಗುರುತಿಸುತ್ತೀರಿ?


ಜನಪದರ ಸೃಷ್ಟಿಗಳಾಗಿರುವ ಮಹಾಕಾವ್ಯಗಳ ಕಡೆ ಗಮನ ಹರಿಸಬೇಕು ಎಂದು ಗೊತ್ತಾಗುತ್ತಿರುವುದು ಇರುವುದು ತೀರಾ ಇತ್ತೀಚೆಗೆ. ನಮ್ಮ ಸಾಂಸ್ಕೃತಿಕ ಅಧ್ಯಯನಗಳು ಹಾಗೂ ಸಮಾಜಶಾಸ್ತ್ರೀಯ ಅಧ್ಯಯನಗಳು ಅಥವಾ ಜನಪದ ಆದ್ಯಯನಗಳು ಕಾಲಕಲಕ್ಕೆ ಬಿಕ್ಕಟ್ಟನ್ನು ಸೃಷ್ಟಿಸಿದಾಗ ಅವಕ್ಕೆ ಉತ್ತರಗಳನ್ನು ಹುಡುಕುವ ಪ್ರಕ್ರಿಯೆಯಲ್ಲಿ ಇದುವರೆಗೆ ಕೇವಲ ಶಾಸ್ತ್ರೀಯ ಆಕರಗಳನ್ನು ಆಧಾರವಾಗಿಟ್ಟುಕೊಳ್ಳಲಾಗುತ್ತಿತ್ತು. ಈಗ ಈ ಕ್ರಮಕ್ಕೆ ಹೊರತಾಗಿ ಮೌಖಿಕವನ್ನು ಪರಿಗಣಿಸುವ ಅನಿವಾರ್ಯತೆ ಸೃಷ್ಟಿಯಾಯ್ತು. ಲಾಗಾಯ್ತಿನಿಂದಲೂ ನಮ್ಮ ಸಾಂಸ್ಕೃತಿಕ ಆಧ್ಯಯನದ ತಳಹದಿ ಯಾವಾಗಲೂ ಶಾಸ್ತ್ರೀಯವಾದದ್ದೇ. ನಂತರ ಈ ನೆಲಕ್ಕೆ ಸಂಬಂಧಿಸಿದ್ದನ್ನು ನೋಡಿದಾಗ ಮಲೆಮಾದೇಶ್ವರ, ಜುಂಜಪ್ಪ ಕಾವ್ಯ, ಅಥವಾ ಧರೆಗೆ ದೊಡ್ಡವರು ಕಾವ್ಯ, ಅಥವಾ ಜನಪದ ಮಹಾಭಾರತ, ಇತ್ಯಾದಿಗಳೆಲ್ಲಾ ಸಿಕ್ಕಿವೆ. ಆದರೆ ವಿಶ್ವವಿದ್ಯಾನಿಲಯಗಳಲ್ಲಿರುವ ವಿದ್ವಾಂಸರು ತಮ್ಮ ವೈಯುಕ್ತಿಕವಾದ ವರ್ಚಸ್ಸು, ಅಥವಾ ಡಾಕ್ಟರೇಟ್‌ಗಳಿಗಾಗಿ ಇವುಗಳನ್ನು ನೋಡುತ್ತಿದ್ದಾರೆಯೇ ವಿನಃ ಅದರಾಚೆಗೆ ಅವುಗಳ ಸಾಧ್ಯತೆಯನ್ನು ನೋಡುವ ಪ್ರಯತ್ನ ಅಷ್ಟಾಗಿ ಇಲ್ಲ. ನಮ್ಮ ಪರಂಪರೆಯನ್ನು ಕಟ್ಟುವುದು ಅಥವಾ ಅರ್ಥಮಾಡಿಕೊಳ್ಳುವುದು ಎಂದರೆ ಇವನ್ನು ಶ್ರದ್ಧೆಯ ಮೂಲಕ ನೋಡುವ ಅಗತ್ಯ ಬೀಳುತ್ತದೆ. ನಮ್ಮ ಸಾಂಸ್ಕೃತಿಕ, ಪರಂಪರೆಯಲ್ಲಿ ಪ್ರತಿರೋಧದ ನೆಲೆಗಳನ್ನು ಅರ್ಥ ಮಾಡಿಕೊಳ್ಳಲು ಇವುಗಳೇ ನಮಗಿರುವ ಪ್ರಮುಖ ಆಕರಗಳು. ಅವುಗಳ ಪ್ರತಿ ವಿವರಗಳನ್ನೂ ಸಹ ಬೇರೆ ಬೇರೆ ರೀತಿಯ ಜ್ಞಾನ ಶಿಸ್ತುಗಳ ಮೂಲಕ ಕಂಡುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಪ್ರಯತ್ನಿಸುತ್ತಿಲ್ಲ.

ನಮ್ಮಲ್ಲಿ ಜನಪದ ಅಧ್ಯಯನ ಉತ್ತಮ ಮಟ್ಟದಲ್ಲಿ ಇದೆಯಲ್ಲಾ?


ಜನಪದ ಕುರಿತಂತೆ ಕರ್ನಾಟಕ ಬಿಟ್ಟರೆ ಬೇರೆಲ್ಲೂ ಹೆಚ್ಚಿನ ಕೆಲಸ ಆಗಿಲ್ಲ ಎಂದು ಹೇಳುತ್ತಾರೆ. ಸಂಗ್ರಹ, ಸಂರಕ್ಷಣೆ ಹಾಗೂ ಮುಖ್ಯವಾಹಿನಿಗೆ ಅದನ್ನು ಮರುಪರಿಚಯ ಬಹಳ ದೊಡ್ಡ ಮಟ್ಟದಲ್ಲಿ ಆಗಿದೆ ಎನ್ನುತ್ತಾರೆ. ನಾನೂ ಸಹ ಗಮನಿಸಿದ್ದೇನೆ. ಸಂಖ್ಯೆಯ ಹಾಗೂ ಪ್ರಮಾಣದ ದೃಷ್ಟಿಯಿಂದ ಈ ಮಾತು ನಿಜ. ಆದರೆ ದೃಷ್ಟಿಕೋನದ ವಿಷಯಕ್ಕೆ ಬಂದರೆ ನಾನು ಗಮನಿಸಿರುವ ಯಾವುದೇ ಅಧ್ಯಯನದಲ್ಲಿ ಬಹಳ ಜವಾಬ್ದಾರಿಯುತ ಹುಡುಕಾಟ ಬಹಳ ಕಡಿಮೆ. ಅದು ತೀರಾ ಬೆರಳೆಣಿಕೆಯಷ್ಟಿದೆ. ಈ ಕಾವ್ಯಗಳು ನಮ್ಮ ಹಿಂದಿನ ಜನಪದರು ತಮ್ಮ ಉಳಿವಿಗೋಸ್ಕರ ತಾವೇ ಕಟ್ಟಿಕೊಂಡಿರುವ ಆಕರಗಳು. ’ಉಳಿವಿಗಾಗಿನ ಪಠ್ಯಗಳು’ ಎಂದು ನಾನವುಗಳನ್ನು ಕರೆಯುತ್ತೇನೆ. ನಮ್ಮ ಅಕಡೆಮಿಕ್ಸ್‌ನ ಮಿತಿಯಿಂದಾಗಿ ಅವು ಇಂದು ಬರೀ ಪಠ್ಯಗಳಾಗಿ ಕಾಣುತ್ತಿವೆ. ರಾಷ್ಟ್ರ ಮಟ್ಟದಲ್ಲಿ ಸಬಾಲ್ಟರ್ನ್ ಅಧ್ಯಯನ ಎಂದು ಶುರುವಾಯ್ತು. ರಾಜ್ಯದಲ್ಲೂ ಬರಗೂರು ರಾಮಚಂದ್ರಪ್ಪ, ಹಂಪಿ ವಿವಿಗಳಂತಹ ಕಡೆ ಉಪಸಂಸ್ಕೃತಿಗಳ ಅಧ್ಯಯನ ಮುಂತಾಗಿ ಸಾಕಷ್ಟು ಕೃಷಿ ನಡೆಸುತ್ತಿದ್ದಾರೆ. ಆದರೆ ಈ ಸಾಕಷ್ಟು ಕೃಷಿಯಲ್ಲಿರುವ ತೊಡಕು ಏನಂದರೆ ಅವೂ ಕೂಡಾ ಒಂದು ರೀತಿ ಅಕಾಡೆಮಿಕ್ ಕಸರತ್ತಾಗಿ ನೋಡಲಾಗುತ್ತಿದೆ. ಅದು ಬಿಟ್ಟು ನಮ್ಮೆಲ್ಲರ ಉಳಿವಿಗೆ ಹಾಗೂ ಭವಿಷ್ಯರಾಜಕಾರಣಕ್ಕೆ ಇವುಗಳನ್ನು ನೋಡಬೇಕಾದ ದೃಷ್ಟಿಕೋನದ ಕೊರತೆ ಇದೆ. ಪರಿಣಾಮವಾಗಿ ಅವು ಮ್ಯೂಸಿಯಂನಲ್ಲಿಡುವ ಸ್ಮಾರಕಗಳಾಗಿ ಮಾತ್ರ ಆಗಿಬಿಡುತ್ತಿವೆ.

ಇತ್ತೀಚೆಗೆ ನಡೆದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ತೀರಾ ಕಡಿಮೆ ಜನರು ಪಾಲ್ಗೊಂಡಿದ್ದರಲ್ಲಾ?
-

ಸಂಖ್ಯೆ ಮುಖ್ಯ ಅಲ್ಲ. ಅಂದು ದಲಿತ ಲೇಖಕ ಯುವಕರ ಸಂಘದ ಸಮಾವೇಶ ಭದ್ರಾವತಿಯಲ್ಲಿ ಮೊದಲ ಬಾರಿಗೆ ನಡೆದಾಗ ಅಬ್ಬಬ್ಬಾ ಎಂದರೆ ನೂರು ಜನ ಸೇರಿದ್ದರು ಅಷ್ಟೆ. ಆದರೆ ಅಷ್ಟು ಜನ ಸೇರಿಕೊಂಡು ಏನು ಮಾಡುತ್ತಾರೆ? ಏನು ಮಾತಾಡುತ್ತಾರೆ ಎಂಬುದು ಮುಖ್ಯ. ನನಗಂತೂ ಇವತ್ತಿನ ಈ ದಲಿತ ಸಾಹಿತ್ಯ, ಚಳವಳಿ ಬಗ್ಗೆ ಆಸಕ್ತಿಯೂ ಉಳಿದಿಲ್ಲ. ಅದರ ಬಗ್ಗೆ ಮಾತಾಡಲಿಕ್ಕೇ ಹೋಗಲ್ಲ. ಆ ಆಧ್ಯಾಯವನ್ನು ನನ್ನ ನೆನಪಿನಿಂದಲೇ ಅಳಿಸಿ ಹಾಕಿಬಿಡಬೇಕು ಎಂದುಕೊಂಡಿದೀನಿ. ನನ್ನ ಪ್ರಕಾರ ಇಲ್ಲಿ ಮಾಡ್ತಿರೋದೆಲ್ಲ ಶವಸಂಸ್ಕಾರಕ್ಕೆ ಸಮಾನವಾದದ್ದು. ದಲಿತ ಸಂಘಟನೆ ಎಂದೋ ಸತ್ತು ಹೋಗಿದೆ. ಅದಕ್ಕೆ ಶ್ರಾದ್ಧದ ಮೂಲಕ ಉಳಿಸೋಕೆ ನೋಡುತ್ತಿದ್ದಾರೆ. ಅದನ್ನು ಹೂತು ಹಾಕಿ ಅದರ ಸ್ಫೂರ್ತಿಯಲ್ಲಿ ಬೇರೆ ಬೇರೆಯದನ್ನು ನೋಡಬೇಕಾದ ತಾಕತ್ತಾಗಲೀ, ದೃಷ್ಟಿಕೋನವಾಗಲೀ ಅಥವಾ ಅದು ಮುಖ್ಯ ಎನ್ನುವ ಪ್ರಜ್ಞೆ ಅವರಿಗಿಲ್ಲ. ಹೀಗಾಗಿ ಪ್ರಜ್ಞಾ ಹೀನರ ಜೊತೆಗೆ ಒಡನಾಟ ಬೇಡ ಎಂದು ನಿಲ್ಲಿಸಿ ಬಿಟ್ಟಿದ್ದೇನೆ. ಅವರು ನನ್ನನ್ನೇ ಪ್ರಜ್ಞಾಹೀನ ಎಂದು ಪರಿಗಣಿಸಿದರೂ ಚಿಂತೆಯಿಲ್ಲ. ಬಹುಪಾಲು ದಲಿತ ಜಗತ್ತು ನನ್ನನ್ನು ದೂರ ಇಟ್ಟಿದೆ. ’ನೀವು ಮಾತಾಡಬಾರದು’ ಎಂದು ಆಜ್ಞೆ ಮಾಡಿದೆ. ಇಂದು ದಲಿತ ನಾಯಕತ್ವ ಏನಿದೆಯಲ್ಲಾ ಅದು ನಾಯಕತ್ವ ಅಲ್ಲ. ಅದು ಡಕಾಯಿರ ತಂಡ. ಉತ್ತರ ಭಾರತದಲ್ಲಿರುವ ಪಂಡಾಗಳಂತೆ ಇವರು ದುಡ್ಡು ವಸೂಲಿಗೆ ಇಳಿದಿರುವಂತವರು. ಈ ಬಗ್ಗೆ ನನ್ನನ್ನು ಹೆಚ್ಚು ಕೇಳದಿರುವುದು ಒಳ್ಳೆಯದು. ನನಗೆ ಬಹಳ ಜಿಗುಪ್ಸೆಯಾಗಿದೆ. ಅಂದಿನ ದಲಿತ ಚಳುವಳಿಯ ಪರಂಪರೆಯ ಮುಂದುವರಿಕೆಯಾಗಿ ಇಂದಿನ ಚಳವಳಿಗಾರರು ನನಗೆ ಕಾಣುತ್ತಿಲ್ಲ.

ಇಂದು ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಲೇ ಇವೆಯಲ್ಲಾ?


-ಸಹಜ ಅದು. ನವ ಆರ್ಥಿಕತೆಯ ಕ್ರೌರ್ಯ ವ್ಯಕ್ತಗೊಳ್ಳುವುದು ಇಬ್ಬರ ಮೇಲೆ. ಒಂದು ಹೆಣ್ಣು ಮತ್ತೊಂದು ದಲಿತ. ಇಂದು ನವ ಆರ್ಥಿಕತೆ ಮತ್ತು ದಲಿತ ಚಳುವಳಿಯ ನಾಯಕತ್ವ ಕೈ ಕೈ ಹಿಡಿದುಕೊಂಡು ಹೋಗುತ್ತಿದೆ. ದಲಿತರ ಬಿಡುಗಡೆ ಅಥವಾ ದಲಿತರ ನೋವುಗಳಿಗೆ ಸ್ಪಂದಿಸುವ ಕಾರ್ಯ ಅವರ ಅಜೆಂಡಾದಲ್ಲಿ ಇಲ್ಲ. ನೀವು ಕೇಳುವ ಪ್ರಶ್ನೆಯನ್ನೂ ಒಳಗೊಂಡಂತೆ ನನಗೆ ತಕರಾರಿದೆ. ದೌರ್ಜನ್ಯ ಎಂದರೆ ಏನು? ಅದೇನು ದೈಹಿಕ ಹಿಂಸೆಯೋ, ಮಾನಸಿಕ ಹಿಂದೆಯೋ? ಇಂದು ಆನಂದ್ ತೇಲ್ತುಂಬ್ಡೆ, ಕಾಂಚಾ ಐಲಯ್ಯರಣತವರನ್ನೂ ಒಳಗೊಂಡಂತೆ ಅವರು ದಲಿತ ವಿಷಯವನ್ನು ನೋಡುವುದರಲ್ಲಿ ಮಿತಿಗಳಿವೆ. ಎಡಪಂಥೀಯರಿಗೆ ಈ ನೆಲವನ್ನು ನೋಡಲಿಕ್ಕೇ ಬರುವುದಿಲ್ಲ. ಮಾರ್ಕ್ಸ್‌ವಾದಿ ದೃಷಿಕೋನದಲ್ಲಿರುವ ಬೌದ್ಧಿಕ ದಾರಿದ್ರ್ಯವನ್ನು ನೀಗಿಕೊಂಡಿದ್ದರೆ ಇಂದಿನ ಈ ಬಿಕ್ಕಟ್ಟು ಇರುತ್ತಿರಲಿಲ್ಲ. ತಳಹದಿ, ಮೇಲ್‌ರಚನೆ ಎನ್ನುವುದನ್ನು ಇಂಡಿಯಾ ದೇಶಕ್ಕೆ ಅನ್ವಯಿಸಲಿಕ್ಕೆ ಆಗುವುದೇ ಇಲ್ಲ. ಅವರು ತಮ್ಮ ಪಾತ್ರವನ್ನು ಅರಿಯಾಗಿ ನಿರ್ವಹಿಸದ್ದರೆ ಇಷ್ಟೆಲ್ಲಾ ಯಾಕಿರುತ್ತಿತ್ತು?

ನಾಡಿನ ಸಮಕಾಲೀನ ಸಾಂಸ್ಕೃತಿಕ ಲೋಕಕ್ಕೆ ನೀವು ನಡೆಸುತ್ತಿರುವ ’ಆದಿಮ’ದ ಕೊಡುಗೆ ಏನು?


ಆದಿಮವನ್ನು ತುಂಬಾ ಆದರ್ಶವಾಗಿ ನೋಡುವ ಅಗತ್ಯ ಇಲ್ಲ. ಅದು ತನ್ನ ಅತ್ಯಂತ ಕಡಿಮೆ ಮಿತಿಯಲ್ಲೇ ನಮ್ಮ ನೆಲಪಠ್ಯಗಳನ್ನು ಆದರಿಸಿದರೆ ಒಂದು ತಿಳಿವಳಿಕೆ ಹೇಗೆ ವಿಸ್ತರಿಸಬಹುದು ಮತ್ತು ಅದೇ ಒಂದು ನಡೆಗೆ ಕಾರಣವಾಗಬಹುದಾ ಎಂಬ ಪ್ರಯೋಗದಲ್ಲಿದೆ. ಆ ಪ್ರಯೋಗ ಪರಿಪೂರ್ಣವಾಗಿ ಕೈಗೆ ಸಿಗುತ್ತದೆಯೋ ಇಲ್ಲವೋ ಎಂದು ಗೊತ್ತಿಲ್ಲ. ಆದರೆ ಈಗಿರುವಂತಹ ಎಲ್ಲ ಸಾಂಸ್ಕೃತಿಕ ನೆಲೆಗಟ್ಟುಗಳಿಗಿಂತಲೂ, ಇಲ್ಲಿ ಸ್ಥಾಪಿತವಾಗಿರುವ ಬೆಂಚ್ ಮಾರ್ಕ್‌ಗಳೇನಿವೆ- ಎನ್‌ಎಸ್‌ಡಿ, ನೀನಾಸಂ, ಇತ್ಯಾದಿಗಳ ಬೌದ್ಧಿಕ ದಾರಿದ್ರ್ಯ ಮತ್ತು ಜನನಿಷ್ಠೆಯಿಲ್ಲದಿರುವ ಹಿಪಾಕ್ರಸಿಗೆ ಬದಲಾಗಿ ಸ್ವಲ್ಪವಾದರೂ ಜೀವಂತ ನೆಲಪಠ್ಯಗಳೆಡೆ ಕಣ್ಣಾಡಿಸುವ ಪ್ರಯೋಗ ಇದು. ಮುಂದಿನ ದಿನಗಳಲ್ಲಿ ಅದನ್ನು ಬೇಕಾದಂತವರು ಬೇಕಾದ ರೀತಿಯಲ್ಲಿ ನೋಡಬಹುದು. ಅದು ಒಂದು ಮುಕ್ತವಾದಂತಹ ಜಾಗ. ಯಾರು ಬೇಕಾದರೂ ಇಲ್ಲಿ ಪ್ರಯೋಗ ನಡೆಸಬಹುದು.


ಪತ್ರಕರ್ತರಾಗಿ ಹಲವಾರು ವರ್ಷ ಕೆಲಸ ಮಾಡಿದ್ದೀರಿ. ಅಂದಿನ ಪತ್ರಿಕೋದ್ಯಮಕ್ಕೂ ಇಂದಿನ ಪತ್ರಿಕೋದ್ಯಮಕ್ಕೂ ತುಲನೆ ಮಾಡಿದಾಗ ಏನೆನ್ನಿಸುತ್ತದೆ?


ಇಂದು ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಎರಡೂ ಆರ್ಥಿಕ ಹಿತಾಸಕ್ತಿಗಳ ನಿರ್ದೇಶನದಲ್ಲಿರುವುದರಿಂದ ಅದರ ಎಲ್ಲ ಮೌಲ್ಯಗಳ ನೆಲೆಗಟ್ಟೂ ನಾಶವಾಗಿ ಹೋಗಿದೆ. ಹೀಗಾಗಿ ಮಾರುಕಟ್ಟೆಗೆ ಪೂರಕವಾದ ಸಂವಹನವನ್ನು ಮಾತ್ರ ನೆಲೆಗೊಳಿಸುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಇಂದು ಮಾಧ್ಯಮದ ಒಟ್ಟಾರೆ ಹಿತಾಸಕ್ತಿ ಜನಪರವಾದದ್ದಾಗಿಲ್ಲ. ಅದೇನಿದ್ದರೂ ವ್ಯಾಪಾರಿ, ಬಂಡವಾಳಿಗರ ಹಾಗೂ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಪೂರಕವಾಗಿ ಜನರ ಮನಸ್ಸುಗಳನ್ನು ಸಂವಹನಕ್ಕೆ ಸಿದ್ಧಪಡಿಸುತ್ತಿವೆ. ಇಂತಹ ದಲ್ಲಾಳಿ ಕೆಲಸಕ್ಕೆ ಪತ್ರಿಕೋದ್ಯಮ ಎಂದು ಕರೆಯಬೇಕಾದ ಅಗತ್ಯ ಇಲ್ಲ. ಇವರು ಹೊಸ ಆರ್ಥಿಕತೆಯ ಮಧ್ಯವರ್ತಿಗಳಾಗಿದ್ದಾರೆ. ಮನುಷ್ಯನ ಮನಸ್ಸು ಮತ್ತು ಪಂಚೇಂದ್ರಿಯಗಳನ್ನು ಅದಕ್ಕೆ ಪೂರಕವಾಗಿ ಮಾರ್ಪಡಿಸುತ್ತಿದ್ದಾರೆ. ಮಾರುಕಟ್ಟೆ ವಿಸ್ತರಣೆಗೆ ಪೂರಕವಾಗಿ ಜನರ ಮನಸ್ಸನ್ನು ಸಿದ್ಧಗೊಳಿಸುವುದು ಇಂದಿನ ಮಾಧ್ಯಮಗಳ ಉದ್ದೇಶ ಗುರಿಯಾಗಿದೆ. ಇಂದು ಸ್ಪರ್ಧೆ ಯಾವ ಮಟ್ಟಿಗೆ ಎಂದರೆ ಮುಂಬರುವ ಕೆಲವೇ ವರ್ಷಗಳಲ್ಲಿ ಇವರ ಎಲ್ಲ ತಳಹದಿಗಳೂ ನಿರ್ನಾಮವಾಗುವುದು ಖಚಿತ. ಜನರ ಹಿತಾಸಕ್ತಿಯಾಗಲಿ, ಜನರ ಸಾವು ಬದುಕಿನ ಹೋರಾಟಗಳಾಗಲೀ, ಜನರ ಗುರುತುಗಳು ಅಳಿಸಿ ಹೋಗುತ್ತಿರುವುದಾಗಲೀ ಇವುಗಳಾವುದೂ ಮಾಧ್ಯಮಗಳಿಗೆ ಸುದ್ದಿಗಳಾಗಿ ಕಾಣಿಸುತ್ತಿಲ್ಲ. ಮಾರುಕಟ್ಟೆ ವಿಸ್ತರಣೆ ಏನಾದರೂ ಪ್ರೇರಣೆ ಇದ್ದರೆ ಮಾತ್ರ ಅದನ್ನು ಸುದ್ದಿಯಾಗಿ ಪರಿಗಣಿಸುತ್ತದೆ. ನಾವು ಪತ್ತಿಕೋದ್ಯಮದಲ್ಲಿ ಕೆಲಸ ಮಾಡುವಾಗ ಅದು ಒಂದು ಆದರ್ಶವಾಗಿತ್ತು. ಲಂಕೇಶ್ ಪತ್ರಿಕೆ, ಸುದ್ದಿ ಸಂಗಾತಿ, ಮುಂಗಾರು ಇವೆಲ್ಲವೂ ನಮಗೆ ಒಂದು ಆದರ್ಶವಾಗಿದ್ದವು. ಜೊತೆಗೆ ನಮ್ಮ ಸ್ಫೂರ್ತಿ ಎಲ್ಲವೂ ಅಂದಿನ ಚಾರಿತ್ರಿಕ ಹೋರಾಟಗಳಲ್ಲಿತ್ತು. ಆ ಕಾರಣಕ್ಕಾಗಿ ನಮ್ಮ ಹಿಂದೆ ಒಂದು ದೊಡ್ಡ ಭಿತ್ತಿ ಇತ್ತು. ಹೀಗಾಗಿ ಪತ್ರಿಕೋದ್ಯಮವೆ ಒಂದು ಪ್ರವಾಹದ ವಿರುದ್ಧದ ಈಜಾಗಿ ನಮಗೆ ಒಂದು ಚೈತನ್ಯ ನೀಡುತ್ತಿತ್ತು. ಇಂದು ಜನಪರ ಪತ್ರಿಕೋದ್ಯಮ ಎನ್ನುವುದೇ ಇಲ್ಲ. ಸಂವಹನ ಎಂಬುದೇ ಇಲ್ಲ. ಈ ನೆಲಕ್ಕೆ ಅನ್ಯ ಎಂದು ಯಾವುದನ್ನೆಲ್ಲಾ ಕರೆಯಬಹುದೋ ಆ ಅನ್ಯ ಪ್ರೇರಣೆಗಳನ್ನು ಗರ್ಭದಲ್ಲಿರುವ ಶಿಶುವಿನ ಮನಸ್ಸಿನೊಳಗೂ ಹೋಗುವ ರೀತಿಯಲ್ಲಿ ಗುರಿಪಡಿಸಿಕೊಂಡಿದೆ. ಎಲ್ಲೋ ಕೆಲವು ಪತ್ರಕರ್ತರನ್ನು ಇದರಿಂದ ಹೊರಗಿಡಬಹುದಾದರೂ ಒಟ್ಟಾರೆ ಪತ್ರಿಕೋದ್ಯಮದ ಇಂಗಿತ ಹೀಗಿದೆ ಎಂದು ನನ್ನ ಅಭಿಪ್ರಾಯ.


ಚಳವಳಿಗಳು ಕ್ಷೀಣವಾಗಿರುವ ಇಂದಿನ ಸಾಮಾಜಿಕ ಸಂದರ್ಭ ತೀರಾ ನಿರಾಶದಾಯಕವಾಗಿದೆಯಲ್ಲಾ?


ನಮ್ಮ ಹಿಂದಿನ ಗುರುತುಗಳು ಅಳಿಸಿ ಹೋಗುತ್ತಿರುವ ವೇಗ ಅದೆಷ್ಟು ಭಯಾನಕವಾಗಿದೆ ಎಂದರೆ ಈ ಕ್ಷಣದ ಇರವು ಇನ್ನೊಂದು ಕ್ಷಣದ ನೆನಪು ಮಾತ್ರ ಆಗಿರಲು ಸಾಧ್ಯವಿದೆ. ನೆಲಗುರುತುಗಳು ಅಷ್ಟು ಕ್ಷಿಪ್ರಗತಿಯಲ್ಲಿ ಅಳಿಸಿ ಹೋಗುವಂತಹ ಕಾಲಘಟ್ಟದಲ್ಲಿ ಮುಂದಿನ ಭವಿಷ್ಯಕ್ಕೆ ಬೇಕಾದ ನೆಲನಿಷ್ಠ ರಾಜಕಾರಣವನ್ನು ಕಟ್ಟುವುದು ದುಸ್ತರವಾಗಿದೆ. ನಮ್ಮ ಕುರುಹುಗಳು ಮಹತ್ವದ್ದಾಗಿ ಕಾಣಿಸದಿದ್ದಾಗ ಅವು ಬರೀ ಸಂಪನ್ಮೂಲವಾಗಿ ಕಾಣಿಸತೊಡಗುತ್ತವೆ. ಹಾಗಾದಾಗ ಅವನ್ನು ದೋಚಬೇಕು, ಅದನ್ನು ವ್ಯಾಪಾರೀ ಹಿತಾಸಕ್ತಿಗೆ ಕೊಡಬೇಕು, ಅದರ ಮೂಲಕ ಲಾಭದ ಆರ್ಥಿಕತೆಯನ್ನು ಸೃಷ್ಟಿಸಬೇಕು ಎನ್ನುವುದನ್ನು ವಸಾಹತುಶಾಹಿ ಆಳ್ವಿಕೆ ನಮಗೆ ಹೇಳಿಕೊಟ್ಟಿದೆ. ನಮ್ಮೆಲ್ಲಾ ಜ್ಞಾನಶಿಸ್ತುಗಳು ಕೈಗಾರಿಕಾ ಕ್ರಾಂತಿಯಿಂದಾದವು. ದರೋಡೆಗಳ ಫಲವೇ ಕೈಗಾರಿಕಾ ಕ್ರಾಂತಿ. ಪ್ರಪಂಚದ ಸಂಪನ್ಮೂಲಗಳ ದರೋಡೆಗೆ ನಾವು ಆ ಹೆಸರಿಟ್ಟಿದ್ದೆವಷ್ಟೆ. ನಾವು ಅದನ್ನು ಪ್ರಶ್ನೆಯನ್ನೇ ಹಾಕದೇ ಅದನ್ನು ಸಾರಾಸಗಟಾಗಿ ಒಪ್ಪೊಕೊಂಡು ಅದರ ಆಧಾರದ ಮೇಲೆ ನಮ್ಮ ಪ್ರಜ್ಞೆಯನ್ನು ರೂಪಿಸಿಕೊಂಡಿದ್ದೇವೆ. ಇಂತಹ ರೂಪಿತ ಪ್ರಜ್ಞೆಯಲ್ಲಿ ನೆಲದ ಸತ್ಯ ಗೋಚರಿಸುವುದಿಲ್ಲ. ಹೀಗಾಗಿ ನಮ್ಮ ಆಲೋಚನೆಗಳ ಚೌಕಟ್ಟಿನಲ್ಲೇ ಲೋಪವಿದೆ. ನಮ್ಮ ಬೌದ್ಧಿಕ ಮಟ್ಟದ ಈ ಬಿಕ್ಕಟ್ಟಿನಿಂದ ಹೊರಬರಬೇಕೆಂದರೆ ನಾವು ಡಿಲರ್ನಿಂಗ್, ಅಪವರ್ಗೀಕರಣಕ್ಕೆ ಒಳಗಾಗಬೇಕಾಗುತ್ತದೆ. ಅಥವಾ ಸಂಪೂರ್ಣ ಯೂಟರ್ನ್ ತೆಗೆದುಕೊಳ್ಳಬೇಕಾಗುತ್ತದೆ. ಜಗತ್ತಿನಲ್ಲಿ ಈ ಬಗೆಯ ಪ್ರಕ್ರಿಯೆಗೆ ಒಳಗಾದ ಮಹಾನುಭಾವರಿದ್ದಾರೆ. ಉದಾಹರಣೆಗೆ ಗೂಗಿ ವಾ ಥಿಯಾಂಗೋನಂತವರು ಇಂಗ್ಲಿಷ್ ಬಿಟ್ಟು ಸ್ವಾಹಿಲಿಯಲ್ಲಿ ಬರೆಯಲು ಆರಂಭಿಸಿದ್ದು. ನಾಲಗೆಯನ್ನೇ ಕತ್ತರಿಸಿಕೊಂಡವರಿದ್ದಾರೆ. ಭಾರತದಲ್ಲಿ ಇಂತಹುದು ಯಾಕೆ ಸಾಧ್ಯವಾಗುವುದಿಲ್ಲ ಎಂದರೆ ಭಾರತೀಯ ಚಿಂತನೆಯಲ್ಲೇ ಇಬ್ಬಂತಿತನವಿದೆ. ಅದರ ಚಿಂತನೆ ಒಂದಿರುತ್ತದೆ, ನಡೆ ಇನ್ನೊಂದು ಇರುತ್ತದೆ. ನಡೆಯಲ್ಲಿ ಒಪ್ಪಿಒತವಾದ್ದು ಚಿಂತನೆಯಲ್ಲಿರುವುದಿಲ್ಲ. ಚಿಂತನೆಯಲ್ಲಿ ಒಪ್ಪಿತವಾದದ್ದು ನಡೆಯಲ್ಲಿರುವುದಿಲ್ಲ. ಅದರಿಂದಾಗಿಯೇ ಇಷ್ಟೆಲ್ಲಾ ಎದ್ದು ಕಾಣುವ ಸಾಮಾಜಿಕ ಅಸಮಾನತೆಗಳು, ಭೇಧಗಳು ಕಣ್ಣಿಗೆ ಕಾಣುತ್ತಿದ್ದರೂ ಸಹ ಅವೆಲ್ಲಾ ಏನೂ ಅಲ್ಲ ಎನ್ನುವ ರೀತಿ ಇರುತ್ತೇವೆ. ಅಂತವು ನಡೆದಾಗ ಒಂದು ಘಟನೆಯ ಮಟ್ಟಿಗೆ ಮಾತ್ರ ನೋಡುತ್ತೇವೆ. ಕ್ರಿಕೆಟ್ ಪಂದ್ಯಕ್ಕೆ ಪ್ರತಿಕ್ರಿಯಿಸುತ್ತೇವಲ್ಲಾ ಹಾಗೆ. ಅಸಹಜವಾದದ್ದನ್ನೂ, ಕೊಳಕಾದದ್ದನ್ನೂ ಸಹಜ ಎನ್ನುವಂತೆ ಒಪ್ಪಿಕೊಂಡು, ನಮ್ಮ ಪ್ರಜ್ಞೆಗೆ ಒಗ್ಗಿಸಿಕೊಂಡು ಬಿಡುತ್ತಿದ್ದೇವೆ.

ಆದರೆ ಈ ಮಾತನ್ನು ಎಲ್ಲಾ ಕಾಲ ಸಂದರ್ಭಕ್ಕೂ ಅನ್ವಯಿಸಲು ಸಾಧ್ಯವೇ?


ಎಲ್ಲಾ ಸಂದರ್ಭದಲೂ ಹಾಗೆಂದು ಹೇಳಲಾಗಲ್ಲ. ಚರಿತ್ರೆ ಎಂತೆಂತಹ ಸಂದರ್ಭಗಳನ್ನು ಒಳಗೆ ಸೃಷ್ಟಿ ಮಾಡುತ್ತದೆ ಹೇಳಲಾಗಲ್ಲ. ಸಧ್ಯದ ಸ್ಥಿತಿಯಿರುವುದಂತೂ ಹಾಗೆಯೇ. ಇದರೊಳಗೆನೇ ಒಂದು ಸ್ಫೋಟ ಸಂಭವಿಸಬಹುದು.

ನಮ್ಮ ರಾಜಕೀಯ ಆಣೆ ಪ್ರಮಾಣದವರೆಗೆ ಬಂದು ಇಂತಿದೆಯಲ್ಲಾ?


ನನಗೆ ಕರ್ನಾಟಕದ ರಾಜಕೀಯದಷ್ಟು ಇಂದಿನ ಅಧೋಗತಿ ಎಂದೂ ಕಂಡಿಲ್ಲ. ಆ ಮಟ್ಟಿಗಿನ ಅಧಃಪತನವಾಗಿದೆ. ಅದು ಯಾವ ಪಕ್ಷವೇ ಇರಲಿ. ಒಂದೇ ಒಂದು ಕಣದಷ್ಟೂ ನಾಚಿಕೆ, ಮಾನ, ಮರ್ಯಾದೆ, ವಿವೇಕ, ತಿಳಿವಳಿಕೆ,ಈ ನೆಲದ ನೀರು ಕುಡಿದಿದ್ದೇವೆ, ಈ ನೆಲದ ಮಣ್ಣಿನಲ್ಲಿ ಬೆಳೆದಿರುವುದನ್ನು ತಿಂದಿದ್ದೇವೆ, ಈ ಗಾಳಿಯಲ್ಲಿ ಉಸಿರಾಡುತ್ತಿದ್ದೇವೆ, ಅದನ್ನೆಲ್ಲಾ ಶುದ್ದವಾಗಿಡುವುದು ನಮ್ಮ ಕತವ್ಯ ಎಂಬ ಸಾಮಾನ್ಯ ಜ್ಞಾನದ ಲವಲೇಶವೂ ಅವರ ಪ್ರಜ್ಞೆಯಲ್ಲಿ ಇಲ್ಲವೇ ಇಲ್ಲ. ಇಡೀ ಕರ್ನಾಟಕವನ್ನು ಎಷ್ಟು ಬೇಗ ಹರಾಜಿಗೆ ಹಾಕಿದರೆ, ಎಷ್ಟು ಬೇಗ ಮಾರಿಬಿಟ್ಟರೆ ಒಟ್ಟಾರೆಯಾಗಿ, ಅದರ ಮೂಲಕ ಸಿಗುವ ಲಾಭಗಳನ್ನು ತೆಗೆದುಕೊಂಡು ಹೋಗಿ ವೈಯುಕ್ತಿಕ ಬಂಡವಾಳ ಮಾಡಿಕೊಳ್ಳುವುದು ಹೇಗೆ ಎಂದು ಲೆಕ್ಕ ಹಾಕುತ್ತಿರುವ ರಾಜಕಾರಣ ಇದು. ಅತ್ಯಂತ ವಿಕೃತವಾದ ನಾಟಕಗಳು ವೇದಿಕೆ ಮೇಲೆ ನಡೆಯುತ್ತಿವೆ. ಇದು ನಿಜಕ್ಕೂ ಈ ನೆಲದ ಘನತೆಗೆ ಗೌರವ ತರುವಂತಾದ್ದಲ್ಲವೇ ಅಲ್ಲ. ಇನ್ನು ಈ ಮಠಾದೀಶರಿಗಂತೂ ಮಾನ, ಮರ್ಯಾದೆಯೇ ಇಲ್ಲ. ಈ ಮಾತನ್ನು ಹೇಳಲೇಬೇಕಾಗುತ್ತದೆ. ಅವರು ಸಣ್ಣವರಿರಲೀ, ದೊಟ್ಟವರಿರಲೀ ಕಣ್ಣು, ಕಿವಿ ಎರಡನ್ನೂ ಕಳೆದುಕೊಂಡಿದ್ದಾರೆ. ಒಂದು ಪ್ರಜಾಪ್ರಭುತ್ವಕ್ಕೆ ಸಲಹೆ ಕೊಡಲು ಇವರ್ಯಾ್ರ್ರೀ? ಇವರೇನು ಪ್ರಜಾಪ್ರಭುತ್ವಕ್ಕಿಂತ ದೊಡ್ಡವರಾ? ಇದೇನು ರಾಜಪ್ರಭುತ್ವವಾ, ಇವರೇರು ರಾಜಪುರೋಹಿತರಾ? ನಾವೇನು ಧರ್ಮ ಪ್ರಭುತ್ವ ಒಪ್ಪಿಕೊಂಡಿದ್ದೇವಾ? ಇವರು ಮಠಗಳನ್ನು ಕಟ್ಟಿಕೊಂಡಿರಬೇಕಷ್ಟೆ. ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಲಿಕ್ಕೆ ಇವರಿಗೇನು ಹಕ್ಕಿದೆ? ಇದೆಲ್ಲಾ ಪ್ರಜಾಪ್ರಭುತ್ವಕ್ಕೇ ಮಾಡುವ ಅಪಮಾನ. ಒಂದು ಸರ್ಕಾರಕ್ಕೆ ಸರ್ಟಿಫಿಕೇಟ್ ನೀಡಲು ಇವರ್ಯಾ ರು? ಓಟು ಹಾಕಿದವನು ಸರ್ಟಿಫಿಕೇಟ್ ಕೊಡಬೇಕು. ಅದನ್ನು ಬಿಟ್ಟು ನೀವೇ ಒಂದು ಸರ್ಕಾರವನ್ನು ಪುರಸ್ಕರಿಸಲು ನೀವು ಯಾರು? ಎಂಬ ಪ್ರಶ್ನೆಯನ್ನು ಕೇಳಬೇಕು. ಅದನ್ನು ಕೇಳಿದರೆ ಜಾತಿಗಳು ಎದ್ದು ನಿಲ್ಲುತ್ತವೆ. ನಮ್ಮ ಜಾತಿ ಮಠಕ್ಕೆ ಯಾಕೆ ಕೇಳಿದ್ರಿ ಅಂತ. ಒಂದು ಜಾತಿಗೆ ಒಂದು ಮಠ ಸೀಮಿತವಾಗಿಯೆಂದಾದರೆ ಇನ್ನೇನು?

ರಾಜ್ಯದಲ್ಲಿ ಇಂಗ್ಲಿಷ್ ಶಾಲೆಗಳನ್ನು ತೆರೆಯಬೇಕು ಎಂದು ಸರ್ಕಾರ ತೀರ್ಮಾನ ಕೈಗೊಂಡಿದೆ. ಇದು ಶಿಕ್ಷಣ ಮತ್ತು ಭಾಷೆಯ ಮೇಲೆ ಯಾವ ಪರಿಣಾಮ ಬೀರಬಲ್ಲದು?


ಇಂದು ಶಿಕ್ಷಣ ಎನ್ನುವುದು ದೊಡ್ಡ ಅನೈತಿಕ ದಂದೆಯಾಗಿದೆ. ಅದು ಪೂರ್ತಿ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಪೂರಕವಾಗಿ, ಖಾಸಗಿ ವಲಯಗಳನ್ನು ಭದ್ರ ಮಾಡಲು ಬಳಕೆಯಾಗಿದೆ. ಇಂದು ಇಂಗ್ಲಿಷ್ ಶಾಲೆಗಳನ್ನು ಆರಂಭಿಸುವುದರ ಪರಿಣಾಮವೆನೆಂದರೆ ಸರ್ಕಾರಿ ಶಾಲೆಯಲ್ಲಿ ನಾಲ್ಕಕ್ಷರ ಕಲಿಯುವ ಅವಕಾಶ ಕೂಡಾ ಕೈತಪ್ಪಿ ಹೋಗುತ್ತದೆ. ಇಂದು ಪ್ರಾಥಮಿಕ ಶಿಕ್ಷಣ ನೀಡುವ ಕರ್ತವ್ಯದಿಂದ ನುಣುಚಿಕೊಳ್ಳಲು ಏನು ಬೇಕೋ ಅದನ್ನು ಸರ್ಕಾರ ಮಾಡುತ್ತಿದೆ. ಇಂದು ಶಾಲೆಗಳನ್ನು ಮುಚ್ಚುತ್ತಿರುವ ವೇಗ ಹಾಗೂ ಅಲ್ಲಿನ ಗುಣಮಟ್ಟ ನೋಡಿದರೆ ಅರ್ಥವಾಗುತ್ತದೆ. ಅಲ್ಲೆಲ್ಲಾ ಬಡವರ ಮಕ್ಕಳೇ ಇರುವುದು. ಅದರಲ್ಲಿ ದಲಿತರ ಸಂಖ್ಯೆ ಜಾಸ್ತಿ ಇರುತ್ತದೆ. ಕನ್ನಡದಲ್ಲೂ ಕಲಿಯುವ ಅವಕಾಶದಿಂದ ವಂಚಿಸಿದಾಗ ಅನಿವಾರ್ಯವಾಗಿ ದುಡ್ಡುಕೊಟ್ಟೇ ಶಿಕ್ಷಣ ಪಡೆಯಬೇಕು. ಯಾರಿಂದ ಸಾಧ್ಯ ಇದು? ಪ್ರಾಥಮಿಕ ಶಾಲೆಯ ನೀತಿಗಳನ್ನು ಮಾಡಲು ವಿಪ್ರೋಗೆ ಬಿಟ್ಟಿದ್ದಾರೆ. ಸರ್ಕಾರ ತಲುಪಿರುವ ಮಟ್ಟ ಇದು.

1 ಕಾಮೆಂಟ್‌:

ಅನಾಮಧೇಯ ಹೇಳಿದರು...

Kotaganahalli Ramaiah's statement about Folk studies shows that what kind of research happend in this area. That means abbepariglella indu janpadada hesarinalli sogu hakikondu odaduttiddare aste. Thalamattada janapada sogadannu anavaranagolisuvalli bahuteka indina academic valaya vipalavagide.
-Narayana Swamy Kempaiah