ಗುರುವಾರ, ಫೆಬ್ರವರಿ 17, 2011

ಜಾನಪದ ವಿವಿ ಸ್ವರೂಪ ಹೇಗಿರಬೇಕು?

-ಡಾ. ಬಸವರಾಜ ಮಲಶೆಟ್ಟಿ (ಪ್ರೊ. ಬಸವರಾಜ ಮಲಶೆಟ್ಟರು ಹಿರಿಯ ಜಾನಪದ ವಿದ್ವಾಂಸರಲ್ಲಿ ಪ್ರಮುಖರು. ಹೊಸಪೇಟೆಯ ಕಾಲೇಜೊಂದರಲ್ಲಿ ಕನ್ನಡ ಉಪನ್ಯಾಸಕರಾಗಿದ್ದು, ನಿವೃತ್ತಿಯಾಗಿದ್ದಾರೆ. ಉತ್ತರ ಕರ್ನಾಟಕದ ಜನಪದ ರಂಗಭೂಮಿ, ಬಯಲಾಟ, ಸಣ್ಣಾಟ ಮುಂತಾದ ಜನಪದ ರಂಗಭೂಮಿಯ ಬಗ್ಗೆ ಅಪಾರ ವಿದ್ವತ್ತನ್ನು ಹೊಂದಿದವರು. ಅವರು ಜಾನಪದ ವಿವಿ ಆರಂಭವಾದ ಮೊದಲಿಗೆ ಬರೆದ ಬರೆಹವನ್ನು ಕನ್ನಡ ಜಾನಪದ ಓದುಗರಿಗಾಗಿ ಪ್ರಕಟಿಸಲಾಗಿದೆ. ಇಲ್ಲಿ ಜಾನಪದ ವಿವಿ ಯನ್ನು ರೂಪಿಸುವ ಬಗ್ಗೆ ಕೆಲವು ಒಳ್ಳೆಯ ಅಂಶಗಳಿವೆ. –ಅರುಣ್) ಕರ್ನಾಟಕಕ್ಕೊಂದು ಜಾನಪದ ವಿಶ್ವವಿದ್ಯಾಲಯ ಬೇಕೆಂಬ ಕೂಗು ಬಹಳ ದಿನಗಳಿಂದ ಕೇಳಿಬರುತ್ತಿದೆ. ನಮ್ಮ ಜಾನಪದದ ಸಂಗ್ರಹ-ಅಧ್ಯಯನ ಪ್ರಸಾರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರ ಪ್ರಾಮಾಣಿಕ ಹಂಬಲವಿದು. ಜಾನಪದ ವಿಶ್ವವಿದ್ಯಾಲಯದ ಸ್ಥಾಪನೆ ಕುರಿತು ಚರ್ಚಿಸಲು ಇತ್ತೀಚೆಗೆ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿಯವರು ಒಂದು ಸಭೆ ಕರೆದಿದ್ದರು. ಸುಮಾರು 60 ಜನ ಜಾನಪದ ವಿದ್ವಾಂಸರು ಆಸಕ್ತರು ಪಾಲ್ಗೊಂಡಿದ್ದ ಆ ಸಭೆಯು ಜಾನಪದ ವಿಶ್ವವಿದ್ಯಾಲಯದ ಸ್ಥಾಪನೆಗೆ ಮುಂದಾಗಿರುವ ಸರ್ಕಾರವನ್ನು ಶ್ಲಾಘಿಸಿತು. ವಿಶ್ವವಿದ್ಯಾಲಯ ಅಂದ ಕೂಡಲೇ ನಮ್ಮ ಕಣ್ಣೆದುರಿಗೆ ಈಗಿರುವ ಮಾಮೂಲಿ ವಿವಿಗಳು ಬಂದು ನಿಲ್ಲುತ್ತವೆ. ಜಾನಪದ ವಿಶ್ವವಿದ್ಯಾಲಯ ಈ ಮಾಮೂಲಿ ವಿವಿಗಳನ್ನು ಖಂಡಿತವಾಗಿಯೂ ಮಾದರಿಯಾ¬ಗಿಟ್ಟು¬ಕೊಳ್ಳಬಾರದು. ಅವುಗಳಂತೆಯೇ ಇಲ್ಲಿಯೂ ಸಿಬ್ಬಂದಿ¬ಯನ್ನು ತುರುಕಿ ಬೇರೆ ಬೇರೆ ತರಗತಿಗಳು ಪದವಿಗಳು ಪರೀಕ್ಷೆಗಳು ಸರ್ಟಿಫಿಕೇಟ್‌ಗಳು ಮುಂತಾದವುಗಳ ಅನವಶ್ಯಕ ಜಂಜಾಟ¬ದಲ್ಲಿ ಜಾನಪದ ವಿವಿಯನ್ನು ಸಿಕ್ಕಿಸ¬ಬಾರದು. ಇಲ್ಲಿ ‘ವಿಶ್ವವಿದ್ಯಾಲಯ’ ಎಂಬ ಪದ ಗೌರವ ಘನತೆಗಾಗಿ ಇರಬೇಕಲ್ಲದೆ ಮಾದರಿಗಾಗಿ ಅಲ್ಲ. ಜಾನಪದ ವಿವಿ ಸಂಶೋಧನೆಯ ಹೆಸರಿನಲ್ಲಿ ಪಿಎಚ್‌ಡಿ, ಎಂಫಿಲ್‌ಗಳ ಗೊಡವೆಗೆ ಹೋಗಬಾರದು. ಏಕೆಂದರೆ ನಮ್ಮ ಎಲ್ಲ ವಿವಿಗಳು ಈ ಪದವಿಗಳನ್ನು ವ್ಯವಸ್ಥಿತವಾಗಿ ಅಪಮೌಲ್ಯಗೊಳಿಸಿವೆ. ಅವುಗಳ ಬೆಲೆ ಎಷ್ಟು ಕೆಳಗಿಳಿದಿದೆ¬ಯೆಂದರೆ ಕೈಗೆ ಸಿಗಲಾರದಂತಾಗಿ ನೆಲದಲ್ಲಡಗಿದೆ. ಇಂಥ ಬೆಲೆ ಕಳೆದುಕೊಂಡ ಪದವಿ ನೀಡಲು ಈ ರಾಜ್ಯಕ್ಕೆ ಇನ್ನೊಂದು ವಿಶ್ವವಿದ್ಯಾಲಯ ಬೇಕೇ? ಮೊದಲು ಈ ವಿವಿಯನ್ನು ಏಕೆ ಸ್ಥಾಪಿಸಲಾ¬ಗುತ್ತಿದೆ ಎಂಬುದನ್ನು ಗಂಭೀರವಾಗಿ ಆಲೋಚಿಸಬೇಕು. ಪ್ರಸ್ತುತ ನಮ್ಮ ಜಾನಪದದ ಸ್ಥಿತಿಗಳೇನು? ಈ ಸಂದರ್ಭದಲ್ಲಿ ಜಾನಪದದ ರಕ್ಷಣೆಗೆ ಆನ್ವಯಿಕತೆಗೆ ಪರಿಷ್ಕರಣಕ್ಕೆ ಏನು ಮಾಡಬೇಕು? ಇದಕ್ಕೆ ಉತ್ತರ ಕಂಡುಕೊಳ್ಳುವುದಕ್ಕಾಗಿ ಮತ್ತು ಆ ಉತ್ತರಗಳನ್ನು ಕಾರ್ಯಗತ¬ಗೊಳಿಸುವುದಕ್ಕಾಗಿ ಜಾನಪದ ವಿವಿ ಸ್ಥಾಪಿಸಬೇಕಾಗಿದೆ ಅತ್ಯಂತ ಜರೂರಾಗಿ ಕೈಗೊಳ್ಳಬೇಕಾದುದು ದಾಖಲೀ¬ಕರಣ. ಬದಲಾವಣೆ-ಪರಿವರ್ತನೆ ಜೀವನದ ತತ್ವ. ಅದನ್ನು ತಡೆದು ನಿಲ್ಲಿಸಲಾಗದು. ಬದಲಾವಣೆಗೆ ತೆರೆದುಕೊಳ್ಳದೆ ಸಂಪ್ರದಾಯವನ್ನೇ ಗಟ್ಟಿಯಾಗಿ ಹಿಡಿದುಕೊಳ್ಳುತ್ತೇವೆ ಎಂಬುದು ಹುಂಬತನವಾಗುತ್ತದೆ. ಉದಾಹರಣೆಗೆ ಬೀಸುಕಲ್ಲು. ಒಂದು ಕಾಲಕ್ಕೆ ಬೀಸುವುದು ನಮ್ಮ ಹಳ್ಳಿಗಳಲ್ಲಿ ನಿತ್ಯದ ದಿನಚರಿಯಾಗಿತ್ತು. ಹಿಟ್ಟಿನ ಗಿರಣಿಗಳು ಬಂದ ಮೇಲೆ ಬೀಸು ಕಲ್ಲುಗಳು ಮೂಲೆ ಸೇರಿದವು. ಅವುಗಳೊಂದಿಗೆ ಅಸಂಖ್ಯಾತ ಬೀಸುವ ಪದಗಳೂ ಮರೆಯಾದವು. ಈಗ ನಮ್ಮ ಪರಂಪರೆಯನ್ನು ಉಳಿಸಿಕೊಳ್ಳಲು ಮತ್ತೆ ಬೀಸುಕಲ್ಲನ್ನು ಚಾಲ್ತಿಗೆ ತರುವುದು ಸಾಧ್ಯವೇ? ಬೀಸುಕಲ್ಲು ಇನ್ನೆಂದಿಗೂ ತನ್ನ ದನಿ ನೀಡದು. ಅದನ್ನು ಬೀಸುವವರು ಬೀಸುವಾಗ ಹಾಡುವವರು ಇನ್ನೂ ಇದ್ದಾರೆ.ಅವರಿಂದ ಹಾಡುಗಳನ್ನು ಧ್ವನಿಮುದ್ರಣದ ಮೂಲಕ ಸಂಗ್ರಹಿಸಬೇಕು. ಬೀಸುವುದನ್ನು ಚಿತ್ರೀಕರಿಸಿಕೊಳ್ಳಬೇಕು. ಮುಂದಿನ ಜನಾಂಗ ಇವುಗಳನ್ನು ಕೇಳಿ ನೋಡಿ ತಮ್ಮ ಸಂಸ್ಕೃತಿಯನ್ನು ಅರಿತುಕೊಳ್ಳುವುದು, ಇದೇ ರೀತಿ ಮರೆಯಾಗುತ್ತಿರುವ ಕಲೆ ಹಬ್ಬ ಪ್ರದರ್ಶನ ಕಲೆ ಒಕ್ಕಲುತನ ಮತ್ತು ಇತರ ವೃತ್ತಿಗಳನ್ನು ದಾಖಲೀಕರಿಸಬೇಕು. ಸಮಗ್ರ ದಾಖಲೀಕರಣ ಕಾರ್ಯ ಜಾನಪದ ವಿಶ್ವವಿದ್ಯಾಲಯದ ಆದ್ಯ ಕರ್ತವ್ಯವಾಗಬೇಕು.ದಾಖಲೀಕರಣದ ಇನ್ನೊಂದು ಮಗ್ಗಲು ವಸ್ತುಸಂಗ್ರಹಾ¬ಲಯ. ಇಡೀ ಗ್ರಾಮೀಣ ಕರ್ನಾಟಕದ ಜೀವನ ಕ್ರಮವನ್ನು ಬಿಂಬಿಸುವ ಬೃಹತ್ತಾದ ವಸ್ತುಸಂಗ್ರಹಾಲಯ ನಿರ್ಮಿಸ¬ಬೇಕು. ಆಧುನಿಕ ತಂತ್ರಜ್ಞಾನದ ನೆರವಿನಿಂದ ಅದು ಹೆಚ್ಚು ಆಕರ್ಷಣೀಯ¬ವಾಗುವಂತೆ ನಿರ್ಮಿಸಬೇಕು. ಅದು ಕೇವಲ ಹಳೆಯ ವಸ್ತುಗಳಿಗೆ ಆಶ್ರಯ ತಾಣ¬ವಾಗದೆ ಬೋಧಪ್ರದ¬ವಾದ ಲವಲವಿಕೆಯ ತಾಣವಾಗಬೇಕು. ಜಾಗತೀಕರಣದ ಬಿರುಗಾಳಿ ನಮ್ಮ ಜಾನಪದವನ್ನು ಅಲ್ಲಾಡಿಸಿದೆ. ಪೂರ್ತಿ ನಾಶ ಮಾಡಿಲ್ಲ. ಬಯಲಾಟ ಕೋಲಾಟ ಪೂಜಾಕುಣಿತ ಕರಡಿಮಜಲು ಗೀಗೀಪದ ಕುಸ್ತಿ ಮುಂತಾದವು ಇನ್ನೂ ಜಾನಪದ ವಲಯದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಆದರೆ ಅವು ಸಾಂಪ್ರದಾಯಿಕ ಸ್ವರೂಪ¬ದಿಂದ ದೂರ ಸರಿದಿವೆ. ಅಪಕ್ವ ಹೊಸತನ ಅವುಗಳಿಗೆ ಹೊಂದಿಕೆ¬ಯಾಗಿಲ್ಲ. ಇಂಥ ಕಲೆ ಕ್ರೀಡೆಗಳನ್ನು ಆಧುನಿಕ ಸಂದರ್ಭಕ್ಕೆ ತಕ್ಕ ಹಾಗೆ ಪರಿಷ್ಕರಿಸಬೇಕು. ಜನಪದರಲ್ಲಿ ಅವುಗಳ ಬಗ್ಗೆ ಪ್ರೀತಿ ವಿಶ್ವಾಸ ಮೂಡುವಂತೆ ರೂಢಿಗೆ ತರಬೇಕು. ಅವುಗಳನ್ನು ಸವಿಯುವ ಅನುಭವಿಸುವ ಅಭ್ಯಾಸ ಬೆಳೆಸಬೇಕು. ಜಾನಪದ ವಿಶ್ವವಿದ್ಯಾಲಯ ಈ ನಿಟ್ಟಿನಲ್ಲಿ ಜವಾಬ್ದಾರಿ¬ಯುತ ಕಾರ್ಯ ಯೋಜನೆಯಲ್ಲಿ ತನ್ನನ್ನು ತೊಡಗಿಸಿ¬ಕೊಳ್ಳಬೇಕು. ನೇಕಾರಿಕೆ ಕುಂಬಾರಿಕೆ ಮೊದಲಾದ ಜಾನಪದ ಕುಶಲಕರ್ಮಗಳಿಗೆ ಹೊಸ ಸ್ಪರ್ಶ ನೀಡಿದರೆ ಅವು ಪುನರ್ಜನ್ಮ ಪಡೆದುಕೊಳ್ಳುತ್ತವೆ. ಹಳ್ಳಿ ನಗರಗಳ ಕನ್ನಡಿಗರು ಇಂಥ ಹೊಸ ಉತ್ಪಾದನೆಗಳನ್ನು ಖುಷಿಯಿಂದ ಬಳಸುವಂಥ ವಾತಾವರಣ ಸೃಷ್ಟಿಗೊಳ್ಳಬೇಕು. ಇದಕ್ಕಾಗಿ ತಂತ್ರಜ್ಞಾನ ಮಾರುಕಟ್ಟೆ ಶಾಸ್ತ್ರ ಬಲ್ಲವರು ಉದ್ದೇಶಿತ ಜಾನಪದ ವಿಶ್ವವಿದ್ಯಾಲಯದಲ್ಲಿರಬೇಕು.ಒಂದು ಹೊಸ ವಿಶ್ವವಿದ್ಯಾಲಯ ಹುಟ್ಟಿಕೊಂಡ ಕೂಡಲೇ ಅದರ ಮೊದಲ ಗುರಿ ಯುಜಿಸಿಯಿಂದ ಮಾನ್ಯತೆ ಪಡೆಯುವದಾಗಿರುತ್ತದೆ. ಮಾಮೂಲಿ ವಿವಿಗಳ ವಿಷಯದಲ್ಲಿ ಇದು ಅನಿವಾರ್ಯ. ಆದರೆ ಜಾನಪದ ವಿವಿ ಯುಜಿಸಿಯ ಹಂಗಿನಲ್ಲಿರಬಾರದು. ಯುಜಿಸಿಯ ನಿಯಮಾವಳಿಗಳನ್ನು ತೃಪ್ತಿಪಡಿಸಲು ಹೋದರೆ ಅದು ತನ್ನ ಮೂಲ ಉದ್ದೇಶದಿಂದಲೇ ದೂರಾಗುತ್ತದೆ. ಕನ್ನಡನಾಡಿನ ಸಂಸ್ಕೃತಿ ಇತಿಹಾಸ ಭಾಷೆ ಜಾನಪದಗಳ ಅಧ್ಯಯನ ಮತ್ತು ಸಂಶೋಧನೆಗಳಿಗಾಗಿ ಜನ್ಮತಳೆದ ಕನ್ನಡ ವಿವಿ ಎಂದು ಯುಜಿಸಿಗೆ ಬದ್ಧವಾಯಿತೋ ಅಂದೇ ತನ್ನ ಘೋಷಣಾ ಉದ್ದೇಶವನ್ನು ಕಳೆದುಕೊಂಡಿತು. ಈ ಉದಾಹರಣೆ ಕಣ್ಮುಂದೆ ಇರುವಾಗ ಜಾನಪದ ವಿವಿ ಯುಜಿಸಿ ಬಗ್ಗೆ ಆಲೋಚಿಸುವುದೂ ಅಪರಾಧವೆನಿಸುತ್ತದೆ.ಇದು ಕರ್ನಾಟಕ ಜಾನಪದ ವಿವಿ. ಅಂದರೆ ಇದು ಕರ್ನಾಟಕ ಸರಕಾರ ಕರ್ನಾಟಕದ ಜಾನಪದದ ಏಳ್ಗೆಗಾಗಿ ಸ್ಥಾಪಿಸಲಿರುವ ವಿವಿ. ಇದರ ಸಂಪೂರ್ಣ ನಿರ್ವಹಣಾ ವೆಚ್ಚವನ್ನು ಕರ್ನಾಟಕ ಸರಕಾರ ಭರಿಸಬೇಕು. ಒಂದು ರಾಜ್ಯ ಸರಕಾರಕ್ಕೆ ಇದು ಭಾರವೇ? ಜಾನಪದ ವಿವಿಗೆ ಮಾಮೂಲಿ ವಿವಿಗಳ ಮಾದರಿಯಲ್ಲಿ ಹೆಚ್ಚು ಜನ ಪ್ರಾಧ್ಯಾಪಕರನ್ನು ನೇಮಿಸಬಾರದು. ಪ್ರತಿಯೊಂದು ವಿಭಾಗಕ್ಕೆ ಒಬ್ಬರು ಸಾಕು. ಉಳಿದವರು ಹೊರಗಿನಿಂದ ಡೆಪ್ಯೂಟೇಶನ್ ಮೂಲಕ ಇಲ್ಲಿಗೆ ಬಂದು ನಿರ್ದಿಷ್ಟ ಅವಧಿಯಲ್ಲಿ ತಮ್ಮ ಇಚ್ಛೆಯ ಸಂಶೋಧನೆ ಅಧ್ಯಯನ ಆನ್ವಯಿಕತೆಗಳನ್ನು ಪೂರೈಸಿ ಮರಳಿ ಹೋಗುವಂಥ ವ್ಯವಸ್ಥೆ ಇರಬೇಕು. ಹೀಗಾದರೆ ಆಸಕ್ತ ಅಭ್ಯಾಸಿಗಳು ಮಾತ್ರ ಇತ್ತ ಸುಳಿಯುತ್ತಾರೆ. ಪ್ರತಿ ವಿಭಾಗಕ್ಕೆ ನಾಲ್ಕಾರು ಜನರಂತೆ ಸೇರಿಸುವುದು ನಿಷ್ಪ್ರಯೋಜಕ. ಸೇರಿಕೊಂಡವರು ನೌಕರಿ ಖಾಯಂ ಆದ ಕೂಡಲೇ ನಿಷ್ಕ್ರಿಯರಾಗುತ್ತಾರೆ. ಅವರನ್ನು ಜಡತನ ಆವರಿಸಿಕೊಳ್ಳುತ್ತದೆ.ಆದ್ದರಿಂದ ಪ್ರತಿ ವಿಭಾಗಕ್ಕೆ ಒಬ್ಬರು ಪ್ರಾಧ್ಯಾಪಕರಿದ್ದು ಅವರು ಸಂಯೋಜಕರಾಗಿ ಕೆಲಸ ಮಾಡಬೇಕು. ಕುಲಪತಿ ಇವರೆಲ್ಲರಿಗೆ ಹಿರಿಯ ಸಂಯೋಜಕರಾಗಿ ಕಾರ್ಯ ನಿರ್ವಹಿಸಬೇಕು, ಬೇರೆ ಬೇರೆ ಸಂಪನ್ಮೂಲಗಳಿಂದ ಹಣ ಮತ್ತು ಸಂಶೋಧನಾ ಯೋಜನೆಗಳನ್ನು ತರುವ, ಅವುಗಳನ್ನು ಸಮರ್ಥರಿಗೆ ಹಂಚುವ, ಅವರಿಂದ ಕೆಲಸ ಮಾಡಿಸಿಕೊಳ್ಳುವ ಜಾಣ್ಮೆ ಕುಲಪತಿಯಲ್ಲಿರಬೇಕು. ಇದೇ ರೀತಿಯಲ್ಲಿ ಬೋಧಕೇತರ ಸಿಬ್ಬಂದಿಯೂ ಮಿತಿಯಲ್ಲಿರಬೇಕು. ಅಂದಾಗ ಮಾತ್ರ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅರ್ಥಪೂರ್ಣವಾಗಿ ಕಾರ್ಯ ನಿರ್ವಹಿಸಬಲ್ಲದು.

ಕಾಮೆಂಟ್‌ಗಳಿಲ್ಲ: