ಸೋಮವಾರ, ಫೆಬ್ರವರಿ 14, 2011

ಹಗಲು ವೇಷಗಾರರ ‘ಹನುಮಾಯಣ’

-ಸ್ವರೂಪನಂದ ಎಂ ಕೊಟ್ಟೂರು (‘ಹನುಮಾಯಣ’ ಇದು ಹಗಲು ವೇಷಗಾರರೇ ತಮ್ಮ ಕಲೆಯನ್ನು ಉಳಿಸಿಕೊಳ್ಳುವ ಶೋಧದಲ್ಲಿ ತೊಡಗಿಕೊಂಡಾಗ ಕಂಡುಕೊಂಡ ಪರ್ಯಾಯ. ಇಂದು ಭಜರಂಗದಳ, ಆರ್.ಎಸ್.ಎಸ್ ಗಳು ಹನುಮನನ್ನು ದೊಡ್ಡ ಐಕಾನ್ ಆಗಿ ಬಳಸಿಕೊಂಡು, ಹನುಮನನ್ನು ಆರಾಧಿಸುವ ದೊಡ್ಡ ಸಮುದಾಯವನ್ನು ತನ್ನೆಡೆಗೆ ಸೆಳೆಯುವ ಹುನ್ನಾರ ಮಾಡುತ್ತಿದೆ. ಆದರೆ ನಿಜಾರ್ಥದಲ್ಲಿ ಜನಪದರಲ್ಲಿ ಇರುವ ಹನುಮನೇ ಬೇರೆ. ರಾಮಾಯಣದಿಂದ ಎದ್ದು ಬಂದವನಲ್ಲ. ಅಲ್ಲಿಯದೇ ಸ್ಥಳೀಯ ಚರಿತ್ರೆಯಲ್ಲಿ ಹನುಮನ ಜೀವಂತಿಕೆ ಬೇರೆಯೇ ಇದೆ. ಅಲ್ಪ ಸಂಖ್ಯಾತ ವೈದಿಕ ಸಮುದಾಯ ಕಟ್ಟಿದ ಹನುಮನ ಚಿತ್ರವನ್ನು ಬಹುಸಂಖ್ಯಾತ ತಳ ಸಮುದಾಯಗಳ ಹನುಮನ ನಂಬಿಕೆಯ ಲೋಕದ ಮೇಲೆ ಪ್ರಹಾರ ಮಾಡುತ್ತಿವೆ. ಜನಪದರು ಕಟ್ಟಿಕೊಂಡ ಹನುಮನ ನಂಬಿಕೆಯ ಜಗತ್ತನ್ನು ಇಂದು ವಿಶೇಷವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಅಂತಹ ಅಧ್ಯಯನಕ್ಕೆ ತಕ್ಕ ತಯಾರಿಗಳನ್ನು ಕ್ಷೇತ್ರಕಾರ್ಯದ ತಿರುಗಾಟವನ್ನೂ ಮಾಡುತ್ತಿದ್ದೇನೆ. ಈ ಹುಡುಕಾಟದ ಸಂದರ್ಬದಲ್ಲಿ ಸಿಕ್ಕ ಹನುಮಾಯಣ ಹಗಲುವೇಷಗಾರರ ಆಟ ಗಮನಸೆಳೆಯಿತು. ಇಲ್ಲಿ ಹನುಮ ರಾಮನ ಸೇವಕನಲ್ಲ ಅವನದೇ ಆದ ಸ್ವಂತ ಶಕ್ತಿಯನ್ನು ಉಳ್ಳ ವೀರ ದೀರ. ಇಲ್ಲಿ ರಾಮ ನೆಪ ಮಾತ್ರ. ಹನುಮನ ವ್ಯಕ್ತಿತ್ವದ ಮೂಲಕ ರಾಮನನ್ನು ನೋಡುವ ವಿಶಿಷ್ಟ ಪ್ರಯತ್ನ ಇಲ್ಲಿದೆ. ಈ ತಂಡದ ರಾಮುವನ್ನು ಮಾತನಾಡಿಸಿದಾಗ “ಹನುಮನನ್ನು ನಾವು ಕಂಡದ್ದು ಬೇರೇನೆ ಸಾರ್, ಆಗಾಗಿ ಹನುಮನನ್ನೇ ನಾಯಕನನ್ನಾಗಿಸಿ ನಾವೇ ಈ ನಾಟಕ ತಯಾರಿಸಿದ್ವಿ” ಎನ್ನುತ್ತಾರೆ. ಈ ಬರಹ ಬರೆದ ಸ್ವರೂಪಾನಂದ ವೃತ್ತಿಯಲ್ಲಿ ಪೋಲಿಸ್, ಆದರೆ ಅಲ್ಲಿದ್ದು ಇಂತಹವುದಳನ್ನು ಸೂಕ್ಷ್ಮವಾಗಿ ನೋಡುವ ಒಳಗಣ್ಣಿರುವ ಉತ್ಸಾಹಿ ಹುಡುಗ. ಹಾಗಾಗಿ ಸ್ವರೂಪಾನಂದ ಪತ್ರಿಕೆಯೊಂದಕ್ಕೆ ಬರೆದ ಬರಹವನ್ನೇ ಇಲ್ಲಿ ಬಳಸಿಕೊಳ್ಳಲಾಗಿದೆ.-ಅರುಣ್ ಜೋಳದಕೂಡ್ಲಿಗಿ.) ಇದೇನಿದು ಮಹಾಭಾರತ, ರಾಮಾಯಣ ಕೇಳಿದ್ದೀವಿ, ಹನುಮಾಯಾಣ ಎಲ್ಲಿಂದ ಬಂತು ಅಂತಾ ದಂಗು ಬಡಿದು ಹೋದಿರಾ..ಹೌದು ಈಗ ಮಹಾಭಾರತ ಮತ್ತು ರಾಮಾಯಣದ ಕಥಾವಸ್ತುಗಳೊಂದಿಗೆ ಹನುಮಾಯಣವನ್ನು ಸೇರಿಸಿಕೊಳ್ಳಬೇಕಾಗಿದೆ. ಇದು ಹಗಲು ವೇಷಗಾರರ ಒಂದು ವಿಶಿಷ್ಠ ಪ್ರಯತ್ನದ ಫಲ. ಹತ್ತಾರು ವೇಧಿಕೆಗಳಲ್ಲಿ ಹನುಮಾಯಣವನ್ನು ಪ್ರದರ್ಶಿಸಿ ಪ್ರೇಕ್ಷಕರ ಮನ ಗೆದ್ದಿರುವ ಜನಪದ ಕಲಾ ತಂಡ ಹಂಪಿ ಭಾಗದಲ್ಲಿದೆ. ಅದು ಕಡ್ಡಿರಾಂಪುರದ ಕೆ.ರಾಮು ನೇತೃತ್ವದ ಶ್ರೀ ಹಂಪಿ ವಿರುಪಾಕ್ಷೇಶ್ವರ ಬುಡ್ಗಜಂಗಮ ಸಾಂಸ್ಕೃತಿಕ ಹಗಲು ವೇಷ ಕಲಾವಿದರ ಸಂಘ. ಇದೇನಿದು ಹನುಮಾಯಣ ಅಂತೀರಾ? ಇದು ರಾಮಾಯಣದಿಂದ ಆಯ್ದ ಭಾಗವಾಗಿದೆ. ಹಂಪಿ ಕೇವಲ ವಿಜಯನಗರ ಸಾಮ್ರಾಜ್ಯದಿಂದ ಮಾತ್ರ ಖ್ಯಾತಿಗೆ ಬಂದಿಲ್ಲ. ಅದಕ್ಕಿಂತಲೂ ಮೊದಲು ಸಹಸ್ರಾರು ವರ್ಷಗಳ ಹಿಂದಿನ ರಾಮಾಯಣದ ಕಿಷ್ಕಿಂದಾ ಕಾಂಡದ ಅವಶೇಷಗಳನ್ನು ಹೊಂದಿರುವುದು ಇಲ್ಲಿನ ವಿಶೇಷ. ಇಲ್ಲಿಯ ವಾಲಿಕಾಷ್ಠ, ಸುಗ್ರಿವ ಗುಹೆ, ಸೀತಾ ಸೆರಗು, ರಾಮ ಲಕ್ಷ್ಮಣರ ಮಂದಿರಗಳು, ರಿಷಿಮುಖ, ವಾಲಿ, ತಾರ ಬೆಟ್ಟಗಳು ರಾಮಾಯಣದ ಚರಿತ್ರೆ ಸಾರುತ್ತವೆ. ಇವೆಲ್ಲಾವನ್ನು ಇಟ್ಟುಕೊಂಡು ಈ ಭಾಗಕ್ಕೆ ಸಂಭಂದಿಸಿದ ಸನ್ನಿವೇಶಗಳನ್ನು ರಾಮಾಯಣದಿಂದ ಎಕ್ಕಿ ತೆಗೆದು ಎಣೆದ ಭಾಗವೇ ಈ ಹನುಮಯಾಣ. ಇದರಲ್ಲಿ ಹನುಮನೇ ಹಿರೋ. ರಾಮ-ಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ಕಿಷ್ಕಿಂದೆಗೆ ಬಂದಿದ್ದು, ರಾಮ ಮತ್ತು ಹನುಮನ ಭೇಟಿ, ವಾಲಿ-ಸುಗ್ರೀವರ ಕಾಳಗ, ಈ ಕಾಳಗದಲ್ಲಿ ರಾಮನ ಪಾತ್ರ, ಇತ್ಯಾದಿ-ಇತ್ಯಾದಿ ಪ್ರಸಂಗಗಳಿಂದ ಹಿಡಿದು ಹನುಮಂತ ಸೇತುವೆ ನಿರ್ಮಿಸುವರೆಗೂ ಪ್ರದರ್ಶನ ಸಾಗುತ್ತದೆ. ಈ ತಂಡ ಹನುಮಾಯಾಣದ ಪ್ರತಿ ಸನ್ನಿವೇಶಗಳನ್ನು ಮನೋಜ್ಞ ಹಾಗೂ ರೋಚಕವಾಗಿ ಅಭಿನಯಿಸಿ ನೋಡುಗರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಇಂತಹ ಹೊಸ ಪ್ರಯೋಗ ನಡೆಸಿ ಜಾನಪದ ಕಲೆಯೊಂದಕ್ಕೆ ಮರುಜೀವ ತುಂಬಿದ ತಂಡದ ಯಶೋಗಾಥೆ ಇಲ್ಲಿದೆ. ಇಂದಿನ ದಿನಗಳಲ್ಲಿ ಜಾನಪದ ಲೋಕದಿಂದ ಹಗಲು ವೇಷಗಾರರ ಕೊಂಡಿ ಕಳಚುತ್ತಾ ಸಾಗಿದೆ. ತಲ-ತಲಾಂತರಿಂದ ಹಗಲು ವೇಷವನ್ನು ಮಾಡುತ್ತ ಬಂದವರು ಇಂದು ಇದಕ್ಕೆ ಇತಿಶ್ರೀ ಹಾಡಿ ವ್ಯಾಪಾರ ಸೇರಿದಂತೆ ಇತರೆ ವೃತ್ತಿಗಳನ್ನು ಆಶ್ರಯಿಸಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಕೆ.ರಾಮು ಹಾಗೆ ಮಾಡಲಿಲ್ಲ. ಹಗಲು ವೇಷಗಾರರಲ್ಲಿಯೇ ಪ್ರಖ್ಯಾತರಾದ ವೆಂಕಟಾಪುರ ಕ್ಯಾಂಪ್ನ ರಾಮಣ್ಣನ ಗರಡಿಯಲ್ಲಿ ಪಳಗಿದರು. ಇದರೊಂದಿಗೆ ಇವರ ಸ್ನೇಹಿತರು ಕೈ ಜೋಡಿಸಿದರು. ಹಗಲು ವೇಷಗಾರರ ಸಂಪ್ರದಾಯವೆಂಬಂತೆ ಪೊಲೀಸ್, ಸಾಧುಗಳು, ಮೋಹಿನಿ ಬಸ್ಮಾಸುರ ಕತೆ, ಭೀಮಾಂಜನೇಯ ಯುದ್ದ, ರಾಮಾಯಣದಲ್ಲಿನ ಸೂರ್ಪನಖಿ ಗರ್ವಭಂಗ, ಲಂಕಾದಹನ [ಗಜಲಂಕಿನಿ], ವಾಲಿ ಸುಗ್ರೀವನ ಕಾಳಗಗಳನ್ನು ಪ್ರಮುಖವಾಗಿ ಪ್ರದರ್ಶಿಸುತ್ತಾ ಬಂದರು. ಹಂಪಿ ತುಂಗಭದ್ರೆಯ ನದಿ ತೀರ ಇವರ ಕಲಿಕೆಯ ಕೇಂದ್ರವಾಯಿತು. ವಿದೇಶಿಯರು ಸೇರಿದಂತೆ ಹಂಪಿಯಲ್ಲಿ ಪ್ರವಾಸ ಕೈಗೊಂಡವರ ಕರತಾಳ ಇವರಿಗೆ ಸ್ಪೂರ್ತಿಯಾಯಿತು. ಅದರಲ್ಲೂ ಹಾಲೆಂಡ್ ಮೂಲದ ವಿಲಿಯಂ ಇವರ ಕಲೆಗೆ ಮಾರುಹೋಗಿ ಇವರ ಬೆನ್ನಲುಬಾಗಿ ನಿಂತಿದ್ದು ಇವರ ಕಲೆಗೆ ಭವಿಷ್ಯವಿದೆ ಎಂದು ಆಗಲೇ ಮನದಟ್ಟು ಮಾಡಿಕೊಟ್ಟಿತು. ಆಗೋಮ್ಮೆ-ಹೀಗೊಮ್ಮೆ ಅಕ್ಕ-ಪಕ್ಕದ ಗ್ರಾಮಗಳಲ್ಲಿ ಪ್ರದರ್ಶನಗಳನ್ನು ನೀಡುತ್ತಿದ್ದರು. ಆಗಾಗ್ಗೆ ರಾಮುವಿನ ಮನಸ್ಸು ಇದರಲ್ಲಿ ಅಗಾಧವಾದ ಸಾಧನೆ ಮಾಡಬೇಕೆಂದು ತುಡಿಯುತ್ತಿತ್ತು. ಕಿಷ್ಕಿಂದೆ ಅಧಾರವಾಗಿಟ್ಟುಕೊಂಡು ಒಂದು ಪ್ರದರ್ಶನ ಮಾಡಬೇಕೆಂದು ಇವರ ಸ್ನೇಹಿತರಲ್ಲಿ ಚರ್ಚೆಗಳು ಸಾಗಿದವು. ಈ ನಡುವೆ ಇವರಿಗೆ ರಾಮಾಯಣ ಪ್ರದರ್ಶನ ನೀಡವಂತೆ ಆನೆಗುಂದಿಯ ಕಿಷ್ಕಿಂದ ಟ್ರಸ್ಟ್ನಿಂದ ಬುಲಾವ್ ಬಂತು. ಆನೆಗೊಂದಿಯಲ್ಲಿ ನಡೆದ ರಂಗ ಶಿಬಿರದ ಜವಾಬ್ದಾರಿ ಹೊತ್ತವರು ಹೊಸಪೇಟೆಯ ಭಾವೈಕ್ಯತಾ ವೇದಿಕೆ. ಪಿ. ಅಬ್ದುಲ್, ಪಿ.ಸಹನಾ, ಪಿ. ಸಹರಾ. ೧೫ ದಿನ ಅವರು ಅಲ್ಲಿಯೇ ಇದ್ದು ತರಬೇತಿ ಶಿಬಿರ ನಡೆಸಿಕೊಟ್ಟರು. ಹೊಸಪೇಟೆಯ ಕ್ರಿಯಾಶೀಲ ಬರಹಗಾರರಾದ ಪರುಶುರಾಮ ಕಲಾಲ ಅವರು ಒಂದು ದಿನ ಅಲ್ಲಿ ಭಾಗಿಯಾಗಿ ಇವರಿಗಾಗಿಯೇ ’ಹನುಮಾಯಣ’ ಸ್ಪ್ರಿಪ್ಟ್ ರಚಿಸಿದ್ದಾರೆ. ಅದನ್ನೇ ಅಲ್ಲಿ ರಂಗಕ್ಕೆ ಅಳವಡಿಸಿದರು. ಅಲ್ಲಿ ಅದ್ಬುತ ಪ್ರದರ್ಶನ ನೀಡಿದ್ದರಿಂದ ಶ್ಯಾಮ್ ಪವಾರ್ಗೆ [ಕೇಂದ್ರ ಸಚಿವ ಶರದ್ ಪವಾರ್ರವರ ಸಹೋದರಿ] ತುಂಬಾ ಆತ್ಮೀಯರಾಗಿಬಿಟ್ಟರು. ಇವರಲ್ಲಿ ತಮ್ಮ ಮನದ ಇಂಗಿತವನ್ನು ಅರುಹಿದರು. ಶ್ಯಾಮ್ ಪವಾರ್ ಇವರ ಮನದ ಇಂಗಿತವನ್ನು ಅರಿತು 12 ಜನರ ತಂಡಕ್ಕೆ ತಮ್ಮ ಗರಡಿಯಲ್ಲಿ ಸತತ 25 ದಿನಗಳ ತರಬೇತಿ ನೀಡಿದರು. ಒಳ್ಳೆಯ ತಯಾರಿ ನಡೆಸಿದ ಫಲವಾಗಿ ನಿರೀಕ್ಷೆ ಮೀರಿ ಪ್ರತಿಭೆಯನ್ನು ಹೋರಹಾಕಿದ ಈ ತಂಡ ಇಂದು ದೊಡ್ಡ-ದೊಡ್ಡ ವೇದಿಕೆಗಳಲ್ಲಿ ಪ್ರೇಕ್ಷಕರ ಕರತಾಳಗಳೊಂದಿಗೆ ಸಾಧನೆಯ ಬೆನ್ನೇರಿ ಹೊರಟಿದೆ. ಹನುಮಾಯಣವನ್ನು ಇಂದು ಕೇವಲ ಮುಕ್ಕಾಲು ಗಂಟೆಯಲ್ಲಿ ಪರಿಣಾಮಕಾರಿಯಾಗಿ ಅಭಿನಯಿಸುವಷ್ಠು ನಿಪುಣರಾಗಿದ್ದಾರೆ. ಅಂದಿನಿಂದ ಆರಂಭವಾದ ಇವರ ಕಲಾ ಸೇವೆಯ ಪಯಣ ಬಿಡುವಿಲ್ಲದೆ ಸಾಗಿದೆ. ಈ ತಂಡವು ಅಭಿನಯಿಸಿದ ಒಂದು ಪುಟ್ಟ ಮಾಹಿತಿ ಇಲ್ಲಿದೆ.2006 ರಲ್ಲಿ ಬೆಂಗಳೂರಿನ ಲಾಲಾಬಾಗಿನಲ್ಲಿ ನಡೆದ ಜನಪದ ಜಾತ್ರೆ.,2008 ರಲ್ಲಿ ಹಂಪಿ ಉತ್ಸವದ ಅಲೆಮಾರಿ ವೇದಿಕೆ.,2009 ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ ಜನಪದ ಜಾತ್ರೆ., 2009 ರ ಜನವರಿಯಲ್ಲಿ ಬೆಂಗಳೂರಿನಲ್ಲಿ ಹಂಪಿ ಕುರಿತು ನಡೆದ ಅಂತರಾಷ್ಠ್ರೀಯ ಸಮ್ಮೇಳನ.,2009 ರ ಫೆಬ್ರವರಿಯಲ್ಲಿ ರಾಮನಗರದ ಜಾನಪದ ಲೋಕದಲ್ಲಿ ಜರುಗಿದ ಜಾನಪದ ಲೋಕೋತ್ಸವ.,2009 ರ ಆಗಸ್ಟ್ 20 ರಂದು ಡಿ.ದೇವರಾಜು ಅರಸುರವರ ಹುಟ್ಟು ಹಬ್ಬದ ಅಂಗವಾಗಿ ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮ.,2009 ರಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆಸಿದ ಸಮಾರಂಭ.,2009 ರ ನವಂಬರ್ ತಿಂಗಳಲ್ಲಿ ಹಂಪಿಯಲ್ಲಿ ಪುರಾತತ್ವ ಇಲಾಖೆ ನಡೆಸಿದ ಐತಿಹಾಸಿಕ ಪರಂಪರೆ ರಕ್ಷಿಸಿ ಕಾರ್ಯಕ್ರಮ. 2009 ಡಿಸೆಂಬರ್ ತಿಂಗಳಲ್ಲಿ ಡಾ.ರಾಜಕುಮಾರ್ ಅಂತರಾಷ್ಠ್ರೀಯ ಪ್ರತಿಷ್ಠಾನ ಇವರು ಬೆಂಗಳೂರಿನಲ್ಲಿ ನಡೆಸಿದ ಡಾ.ರಾಜಕುಮಾರ್ ರಾಜೋತ್ಸವ ಪ್ರಶಸ್ತಿ ಸಮಾರಂಭ. ಹೀಗೆ ಕರ್ನಾಟಕದ ನಾನಾ ಭಾಗಗಳಲ್ಲಿ ಹನುಮಾಯಣವನ್ನು ಪ್ರದರ್ಶಿಸಿ ಜನರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ. ಅಲ್ಲದೆ National Institute of Advance studies [NIAS] ಇವರ ಹನುಮಾಯಣ ಪ್ರದರ್ಶನಕ್ಕೆ ಪ್ರಾಶಸ್ತ್ಯ ನೀಡಿ ಕಳೆದ ಎರಡು ವರ್ಷಗಳಿಂದ ಅವಕಾಶಗಳನ್ನು ನೀಡುತ್ತಾ ಬಂದಿದೆ. ಅಲ್ಲದೆ ಹನುಮಾಯಣವನ್ನು ಡಾಕುಮೆಂಟರಿ ಮಾಡಲು ಹೊರಟಿದೆ. ಜೊತೆಗೆ ಇಂದಿರಾ ರಾಷ್ಠ್ರೀಯ ಕಲಾ ಮಂದಿರ ಬೆಂಗಳೂರು ಇವರ ``ಸೂರ್ಪನಖಿ ಗರ್ವಭಂಗ'' ಮತ್ತು ``ಭೀಮಾಂಜನಯ ಯುದ್ದ'' ದ ಕಥಾವಸ್ತುಗಳನ್ನು ಡಾಕುಮೆಂಟರಿ ಮಾಡಿದ್ದಾರೆ. ವೈಯುಕ್ತಿಕವಾಗಿ ಕೆ.ರಾಮು ಹಗಲು ವೇಷಗಾರರ ಜಾನಪದ ಕಲೆಯನ್ನು ಉಳಿಸುವತ್ತ ಹೆಚ್ಚು ಶ್ರಮವಹಿಸುತ್ತಿದ್ದಾರೆ. ರಾಮು ಹನುಮನ ವೇಷದಲ್ಲಿ ಅಖಾಡಕ್ಕೆ ಇಳಿದರೆ ಈತನ ಅದ್ಬುತ ನಟನೆಗೆ ಪ್ರೇಕ್ಷಕರು ಮಂತ್ರಮುಗ್ದರಾಗುತ್ತಾರೆ. ಇವರ ಪ್ರಯತ್ನದ ಫಲವಾಗಿ ಒಂದು ಕಾಲದಲ್ಲಿ ತಮ್ಮ ಕಲೆಯ ಬಗ್ಗೆ ಭ್ರಮನಿರಸನ ಹೊಂದಿದವರು ಇಂದು ಕಲೆಯ ಉಳಿವು ಹಾಗೂ ಬೆಳವಣಿಗೆಗಾಗಿ ತಪಸ್ಸು ಮಾಡುತ್ತಿದ್ದಾರೆ. ಇವರ ಕಲಾ ತಂಡಗಳಿಗೆ ಪದವೀದದರು ಸೇರಿಕೊಳ್ಳುತ್ತಿರುವುದು ಇದರ ಜೀವಂತಿಕೆಗೆ ಸಾಕ್ಷಿಯಾಗಿದೆ. ಇವರ ಪ್ರಯತ್ನದ ಫಲವಾಗಿ ಹೊಸಪೇಟೆ, ದರೋಜಿ, ಸಿರುಗುಪ್ಪ ತಾಲ್ಲೂಕಿನ ಬೆಲಕುಂದಿ, ಹಳೆಕೋಟೆ, ಬಳ್ಳಾರಿ ಜಿಲ್ಲೆಯ ಹೊಸಹಳ್ಳಿಗಳಲ್ಲಿ ಸಂಘಗಳು ನೊಂದಾಣಿಯಾಗಿ ಕ್ರೀಯಾಶೀಲವಾಗಿವೆ. ತಮ್ಮ ಅಸಂಖ್ಯಾತ ಪ್ರದರ್ಶನಗಳ ಮೂಲಕ ಜನಪದ ಕಲೆಯ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ರಾಮು ತಂಡ ರಾಜ್ಯದಲ್ಲಿ ಮನೆ ಮಾತಾಗಿದೆ. ಆದರೆ ತನ್ನ ತವರು ನೆಲದಲ್ಲಿಯೇ ನಿರ್ಲಕ್ಷಕ್ಕೆ ಒಳಗಾಗಿರುವುದು ವಿಪಾರ್ಯಸ. ಇಷ್ಠು ದಿನ ನಡೆದ ಹಂಪಿ ಉತ್ಸವಗಳಲ್ಲಿ ಇವರಿಗೆ ಅವಕಾಶ ಸಿಕ್ಕಿದ್ದು 2008 ರಲ್ಲಿ ಮಾತ್ರ. ಅದು ಕೇಲವ ಹತ್ತು ನಿಮಿಷಗಳ ಕಾಲವಕಾಶ. ಮೊನ್ನೆ ಅಂದರೆ ೨೦೧೧ ಜನವರಿ 27 ರಿಂದ 29 ರವರೆಗೆ ನಡೆದ ಹಂಪಿ ಉತ್ಸವದಲ್ಲಿ ಇವರ ಪಾಲಿಗೆ ಬಂದಿದ್ದು ಶೋಭಯಾತ್ರೆಯಲ್ಲಿ ಪಾಲ್ಗೊಳ್ಳುವ ಅವಕಾಶ. ಅಂದು ಅಂತಿಮ ಕ್ಷಣದಲ್ಲಿ. ಅದನ್ನು ಬಿಟ್ಟರೆ ಉಳಿದಂತೆ ಸರಕಾರ ಇವರ ಕಲೆಗೆ ಹೆಚ್ಚು ಪ್ರಾಶಸ್ತ್ಯ ನೀಡಿಲ್ಲ. ತಮ್ಮ ಸಾಧನ ಕ್ಷೇತ್ರದಲ್ಲಿ ಪ್ರದರ್ಶನ ನೀಡಲಾಗುತ್ತಿಲ್ಲ ಎಂಬ ಅಸಂತೃಪ್ತಿ ರಾಮು ತಂಡದ್ದು. ಅದು ಹಂಪಿಯ ನೆಲದಲ್ಲಿ ಕಿಷ್ಕಿಂದ ಆಧಾರಿತ ಕಥಾವಸ್ತುವನ್ನು ಜನತೆಯ ಮನಮುಟ್ಟುವಂತೆ ಪ್ರದರ್ಶಿಸುವ ಅವಕಾಶ ಸಿಗದಿರುವ ಕೊರಗು ಅವರನ್ನು ಬಿಟ್ಟುಬಿಡದೆ ಕಾಡುತ್ತಿದೆ. ಹಂಪಿಯ ಸುತ್ತಾ-ಮುತ್ತಾ ಸುಮಾರು 12 ಜನಪದ ಕಲೆಗಳು ಇನ್ನೂ ಜೀವಂತವಾಗಿವೆ. ಈ ಕಲೆಗಳನ್ನು ಶಾಶ್ವತವಾಗಿ ಹಂಪಿಯಲ್ಲಿ ಪ್ರದರ್ಶನ ಏರ್ಪಡಿಸುವ ವ್ಯವಸ್ಥೆಯಾಗಬೇಕು ಎಂಬುವುದು ರಾಮು ಮತ್ತು ಸಂಘದ ಕೋರಿಕೆ ಹಾಗೂ ಕನವರಿಕೆ. ಹಗಲು ವೇಷಗಾರರನ್ನು ಸಂಘಟಿಸಿ ಅವಾಸನದ ಅಂಚಿನಲ್ಲಿದ್ದ ಜಾನಪದ ಕಲೆಗೆ ಜೀವ ತುಂಬಿದ ರಾಮು ಸಾಧನೆ ಒಂದು ಮಾದರಿಯೇ ಸರಿ. ಇವರ ಹಾಗೂ ಇವರ ಕಲಾ ತಂಡಕ್ಕೆ ನೀವು ಅಭಿನಂದನೆ ಸಲ್ಲಿಸಬೇಕೆಂತಿದ್ದರೆ, ಕೆ ರಾಮುರವರ ನಂ 9448970618 ಕ್ಕೆ ಸಂಪರ್ಕಿಸಿ.

3 ಕಾಮೆಂಟ್‌ಗಳು:

parasurama kalal ಹೇಳಿದರು...

ಲೇಖನಾ ಚೆನ್ನಾಗಿ ಬಂದಿದೆ. ಇದರಲ್ಲಿ ಸೇರ್ಪಡೆಯಾಗುವ ಅಂಶವೂ ಇದೆ. ಆನೆಗೊಂದಿಯಲ್ಲಿ ನಡೆದ ರಂಗ ಶಿಬಿರದ ಜವಾಬ್ದಾರಿ ಹೊತ್ತವರು ಹೊಸಪೇಟೆಯ ಭಾವೈಕ್ಯತಾ ವೇದಿಕೆ ಪಿ. ಅಬ್ದುಲ್, ಪಿ.ಸಹನಾ, ಪಿ. ಸಹರಾ. ೧೫ದಿನ ಅವರು ಅಲ್ಲಿಯೇ ಇದ್ದು ತರಬೇತಿ ಶಿಬಿರ ನಡೆಸಿಕೊಟ್ಟಿದ್ದಾರೆ. ನಾನು ಸಹ ಒಂದು ದಿನ ಅಲ್ಲಿ ಭಾಗಿಯಾಗಿ ಅವರಿಗಾಗಿಯೇ ’ಹನುಮಾಯಣ’ ಸ್ಪ್ರಿಪ್ಟ್ ರಚಿಸಿದೆ. ಅದನ್ನೇ ಅಲ್ಲಿ ರಂಗಕ್ಕೆ ಅಳವಡಿಸಿದರು.

ಡಾ.ಅರುಣ್ ಜೋಳದ ಕೂಡ್ಲಿಗಿ ಹೇಳಿದರು...

ಕಲಾಲ ಸಾರ್ ನಮಸ್ಕಾರ, ಈ ಸಂಗತಿ ಈ ಬರೆಹ ಬರೆದ ಸ್ವರೂಪಾನಂದ ಅವರಿಗೆ ರಾಮು ಅವರು ತಿಳಿಸಿದಂತಿಲ್ಲ. ಹಾಗಾಗಿ ಕ್ಷಮೆ ಇರಲಿ.ನೀವು ಹೇಳಿದ ನಂತರ ಸೇರಿಸಬಹುದಾದ ಸಂಗತಿಯನ್ನು ಸೇರಿಸಿದ್ದೇನೆ, ನೋಡಿ. ಪ್ರತಿಕ್ರಿಯೆಗಾಗಿ ಧನ್ಯವಾದಗಳು.

parasurama kalal ಹೇಳಿದರು...

ಅರುಣ್ ಇದರಲ್ಲಿ ತಪ್ಪೇನೂ ಇಲ್ಲ. ಇನ್ನೂ ಕ್ಷಮಿಸುವ ಮಾತೇ ಬರುವುದಿಲ್ಲ. ಎಷ್ಟೋ ಸಲ ನಾನು ಬರೆಯುವಾಗಲೂ ಇದು ನಡೆಯುತ್ತಿರುತ್ತದೆ. ಆನೆಗೊಂದಿ ಟ್ರಸ್ಟ್ ಇದೆಯಲ್ಲಾ ಅವರ ತಪ್ಪೇ ಇದು. ಲೇಖನದಲ್ಲಿಯೇ ಇದನ್ನು ಸೇರಿಸಿಕೊಂಡಿದ್ದಕ್ಕೆ ಧನ್ಯವಾದಗಳು.