ಭಾನುವಾರ, ಆಗಸ್ಟ್ 24, 2014

ನಮ್ಮ ನಡುವಿನ ಅಪ್ರತಿಮ ಕಥನಕಾರ ಅನಂತಮೂರ್ತಿ

- ಶಿವ ವಿಶ್ವನಾಥನ್


ಸೌಜನ್ಯ: ವಾರ್ತಾ ಭಾರತಿ


   ಸಾವು ಮತ್ತು ದೇವರ ಕುರಿತಾಗಿ ನನಗೆ ಆಗಾಗ ಬಹಳ ಕೋಪ ಬರುತ್ತದೆ. ಅವರು ಈ ಲೋಕದ ಅಮೂಲ್ಯ ರತ್ನಗಳನ್ನು ಕೊಂಡೊಯ್ಯುತ್ತಾರೆ. ಇದು ನನ್ನನ್ನು ಬಹಳ ದುಃಖಿತನನ್ನಾಗಿ ಮಾಡುತ್ತದೆ. ಅವರನ್ನು ಕಳೆದುಕೊಂಡಿದ್ದರಿಂದ ನಾನು ಅಸಹಾಯಕನಾದದ್ದಷ್ಟೇ ಅಲ್ಲ, ನನ್ನ ಜಗತ್ತು ಕಿರಿದಾಗುತ್ತಿದೆ, ನನ್ನ ಸ್ನೇಹಿತರ ಗುಂಪು ಕುಸಿಯುತ್ತಿದೆ ಎಂಬ ಕಾರಣಗಳಿಂದಲೂ ನನಗೆ ದುಃಖ ವಾಗುತ್ತಿದೆ. ನನ್ನ ಸ್ನೇಹಿತ ಮತ್ತು ಹಿತಚಿಂತಕ ರಾಮು ಗಾಂಧಿ ನಿಧನರಾದಾಗಲೂ ಹೀಗೆ ಆಗಿತ್ತು. ಓರ್ವ ಅತ್ಯುತ್ತಮ ರಸಾಯನಶಾಸ್ತ್ರಜ್ಞರಾಗಿದ್ದ ಸಿ.ವಿ.ಶೇಷಾದ್ರಿ ಅವರು ಸಮುದ್ರದಲ್ಲಿ ಕಳೆದು ಹೋದಾಗಲೂ ನನಗೆ ಇಂತಹದೇ ಅನುಭವವಾಗಿದೆ.

  ಕನ್ನಡದ ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ಅವರು ಶುಕ್ರವಾರ ಸಂಜೆ ತೀರಿ ಹೋದಾಗ ನಾನು ಸಂಪೂರ್ಣವಾಗಿ ಕುಸಿದು ಹೋದೆ. ಒಂದು ಬ್ರಹ್ಮಾಂಡವೇ ಕುಸಿದ ಅನುಭವವಿದು. ಬದುಕುವ ಒಂದು ರೀತಿಯೇ ಕಳೆದುಹೋದಂತಹ ಅನುಭವ. ಒಬ್ಬ ಲೇಖಕನಾಗಿ, ಒಬ್ಬ ಸಾರ್ವಜನಿಕ ಬುದ್ಧಿಜೀವಿಯಾಗಿ ಮನುಷ್ಯನ ಸಾಧನೆಗಳು ಮುಖ್ಯವಾಗುವುದಿಲ್ಲ. ಆದರೆ ಮನುಷ್ಯನಾಗಿ ಅವನ ಸಾಧನೆಗಳು ಹೆಚ್ಚು ಮಹತ್ವಪೂರ್ಣ ಎನಿಸಿಕೊಳ್ಳುತ್ತವೆ.

  ಅನಂತಮೂರ್ತಿಯವರು ಕೊನೆ ಗಳಿಗೆಯ ತನಕವೂ ಹೋರಾಡುತ್ತಲೇ ಬಾಳಿದರು. ಒಬ್ಬರು ಕನಸು ಕಾಣುವ ಬಹುತೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು. ಇದೇನೂ ಪಠ್ಯಕ್ರಮದ ಪಟ್ಟಿಯಲ್ಲ, ವೃತ್ತಿ ಎಂಬುದು ಶಾಪಿಂಗ್ ಚೀಟಿಯೇನೂ ಅಲ್ಲ. ಆದರೆ ಅವರ ಆತ್ಮಕಥೆ ಎಂಬುದು ಬುದ್ಧಿಜೀವಿಯೊಬ್ಬನ ಅತ್ಯುತ್ತಮ ಸಮಾಜಶಾಸ್ತ್ರ ಎಂಬುದು ಅಷ್ಟೇ ಸತ್ಯ ಸಂಗತಿ.

 ಮೈಸೂರು ಸಂಸ್ಥಾನದಲ್ಲಿ 1932ರಲ್ಲಿ ಅನಂತಮೂರ್ತಿ ಜನಿಸಿದರು. ಕಾಡಿನ ಪರಿಸರದಲ್ಲಿ ಬದುಕಿದರು. ಒಬ್ಬ ಬ್ರಾಹ್ಮಣ ಬಾಲಕನಾಗಿ ಪ್ರತಿಯೊಂದೂ ಪವಿತ್ರ ಎಂಬ ಜಗತ್ತಿನಲ್ಲಿ ಅವರು ಬಾಳಿದರು. ಅನಂತಮೂರ್ತಿಯವರು ಈ ಎಲ್ಲ ನೆನಪುಗಳ ಕಾವಲುಗಾರ. ಬ್ರಾಹ್ಮಣ ಸಂವೇದನೆಯ ಪಾರುಪತ್ಯಗಾರ. ಈ ನೆನಪುಗಳ ಜೊತೆ ಜೊತೆಗೆ ಅದರ ಅತಿದೊಡ್ಡ ಟೀಕಾಕಾರ. ನೆನಪುಗಳು ಅಂದರೆ, ಅದು ನಶ್ಯದ ವಾಸನೆಯಂತಿರಬಹುದು. ಅದು ಬೇರೆಬೇರೆ ಹಂತಗಳಲ್ಲಿ ಬೆಳೆಯುತ್ತಿರುವ ಹಲಸಿನ ಹಣ್ಣು ಆಗಿರಬಹುದು. ಈ ಹಣ್ಣಿನ ಪರಿಮಳ ಜಾನುವಾರುಗಳನ್ನು ಕೆರಳಿಸುತ್ತದೆ. ಎಳೆಯ ಪ್ರಾಯದಲ್ಲಿ ಅವರು ಬದುಕಿದ್ದ ಮನೆಯ ನೆನಪುಗಳು ಮಾನವಶಾಸ್ತ್ರೀಯ ವರ್ಣನೆಯಂತಿವೆ. ಆದರೂ ಬ್ರಾಹ್ಮಣ್ಯಲೋಕದ ಅತ್ಯುತ್ತಮ ಸಾಹಿತ್ಯ ಅದಾಗಿತ್ತು. ಅದೀಗ ಬಹುತೇಕ ಮಾಸಿ ಹೋಗಿದೆ.

  ಅನಂತಮೂರ್ತಿಯವರು ಹಳ್ಳಿಯ ಸಾಂಪ್ರದಾಯಿಕ ಸಂಸ್ಕೃತ ಶಾಲೆಯಲ್ಲಿ ಕಲಿತವರು. ಅದೊಂದು ಕಾಸ್ಮೊಪಾಲಿಟನ್ ಮತ್ತು ಸ್ಥಳೀಯ ಲೋಕವೂ ಆಗಿತ್ತು. ಸಮಾಜವಾದ ಎಂಬುದು ಸರಕಾರದಿಂದ ಆರಂಭವಾಗುವುದಿಲ್ಲ, ಬದಲಿಗೆ ಸಾಮಾನ್ಯ ಶಾಲೆಯಿಂದಲೇ ಆರಂಭವಾಗುತ್ತದೆ ಎಂಬುದನ್ನು ಅವರಿಗೆ ಕಲಿಸಿದ ಜಗತ್ತು ಅದಾಗಿತ್ತು. ನಮ್ಮ ಮಕ್ಕಳಿಗೆ ಕನ್ನಡ ಭಾಷೆ ಕಲಿಸುವ ಸಾಂಪ್ರದಾಯಿಕ ಶಾಲೆಗಳು ಕೋಟ್ಯಂತರ ಭ್ರೂಣಬೇರುಗಳನ್ನು ಸೃಷ್ಟಿಸಿದರೆ, ದುಬಾರಿ ಇಂಗ್ಲಿಷ್ ಶಾಲೆಗಳಲ್ಲಿ ಮಗು ತನ್ನ ಮಾತೃಭಾಷೆಯ ಕೊಂಡಿಯನ್ನೇ ಕಳೆದುಕೊಳ್ಳುತ್ತದೆ. ಇದೇ ನಿಜವಾದ ವರ್ಗಭೇದ, ಜೊತೆಗೆ ಸಾಂಸ್ಕೃತಿಕ ಭೇದವೂ ಆಗಿದೆ. ಇದು ಸಮಾಜವನ್ನೂ ಒಡೆಯುತ್ತದೆ ಎಂಬುದನ್ನು ಅವರು ಬಲವಾಗಿ ನಂಬಿದ್ದರು.

 ಇಂಗ್ಲಿಷ್ ಭಾಷೆ ಎಂಬುದು ಕಾಸ್ಮೊಪಾಲಿಟನ್‌ವಾದವನ್ನು ಬೆಂಬಲಿಸುತ್ತದೆ. ಮನುಷ್ಯರನ್ನು ಪರಸ್ಪರ ದೂರೀಕರಿಸುತ್ತದೆ. ನಮ್ಮ ದೇಶದ ಉಚ್ಚ ವರ್ಗವು ಅನಿವಾರ್ಯವಾಗಿ ಆಯ್ಕೆ ಮಾಡಿಕೊಂಡಿರುವ ಕೆಟ್ಟ ನಂಬಿಕೆ , ಆತ್ಮವಿಶ್ವಾಸ ಇದಾಗಿದೆ. ಪಾಶ್ಚಿಮಾತ್ಯ ಜಗತ್ತು ನಾವು ತಿಳಿದಷ್ಟು ಸರಳವಾಗಿಲ್ಲ. ಆದರೆ ಭಾರತದ ನಮ್ಮ ಗ್ರಾಮಗಳಲ್ಲಿ ಗಾಂಧಿ ಮತ್ತು ಗೆಲಿಲಿಯೊ ಬಹುಶಃ ಸಮಕಾಲೀನರಾಗಬಹುದಾಗಿತ್ತು. ಈ ಜೀವಂತ ಜಗತ್ತಿನಲ್ಲಿ ಅನಂತಮೂರ್ತಿಯವರ ಎರಡು ಮಹತ್ವದ ಕೃತಿಗಳಾದ ‘ಸಂಸ್ಕಾರ’ ಮತ್ತು ‘ಭಾರತೀಪುರ’ಗಳು ರೂಪುಗೊಂಡವು. ಇಂಗ್ಲಿಷ್‌ನಲ್ಲಿ ಇಂತಹ ಒಂದು ಜಗತ್ತನ್ನು ಅವರು ಕಲ್ಪನೆ ಮಾಡಿಕೊಳ್ಳುವುದು ಬಹುಶಃ ಬಹಳ ಕಷ್ಟವಾಗಬಹುದು.

‘ಒಂದು ಕಲಾಕೃತಿ ತನ್ನ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಬಹುಶಃ ಒಬ್ಬ ಭಾರತೀಯನಿಗೆ ಭಾರತೀಯ ಭಾಷೆಯೇ ಮಾಧ್ಯಮ ಎಂದು ಕಾಣುತ್ತದೆ’ ಎಂದು ಅವರು ಹೇಳಿಕೊಂಡಿದ್ದರು. ಓರ್ವ ಭಾರತೀಯನಾಗಿ ಹಲವು ಕಾಲಮಾನಗಳಲ್ಲಿ ಜೀವಿಸಿರುವ ಅವರ ಅಂತರಾತ್ಮದಲ್ಲಿರುವ ಕಥೆಗಾರನಿಗೆ ಕಾಲ ಮತ್ತು ನೆನಪು ಬಹಳ ನಿರ್ಣಾಯಕ.
ಮೂವತ್ತರ ದಶಕದಲ್ಲಿ ಐರೋಪ್ಯ ರಾಜಕೀಯದ ಕುರಿತು ಪಿಎಚ್‌ಡಿ ಪೂರೈಸಲು ಅನಂತಮೂರ್ತಿ ಬರ್ಮಿಂಗ್‌ಹ್ಯಾಂಗೆ ಹೋದರು. ಕೊಟ್ಟಾಯಂನಲ್ಲಿ ವಿಶ್ವವಿದ್ಯಾಲಯ ಉಪಕುಲಪತಿಯಾದರು. ಫಿಲಂ ಮತ್ತು ಚಲನಚಿತ್ರ ಸಂಸ್ಥೆಯ ಅಧ್ಯಕ್ಷರಾದರು. ಸಾಹಿತ್ಯ ಅಕಾಡಮಿಯ ಮುಖ್ಯಸ್ಥರಾದರು.

 ಕೇವಲ ಪದವಿಯಿಂದ ಅವರು ಖ್ಯಾತನಾಮರಾಗಲಿಲ್ಲ. ಬದಲಿಗೆ ಸಂಸ್ಕೃತಿಯೊಂದಿಗಿನ ನಿರಂತರ ಸಂವಾದಗಳು ಅವರನ್ನು ನೈಜವಾಗಿ ರೂಪಿಸಿದವು. ಅವರು ಗೆಳೆತನದ ಅಧ್ವರ್ಯು. ಅಶೀಶ್ ನಂದಿ, ಮನು ಚಕ್ರವರ್ತಿ ಮತ್ತು ಗಿರೀಶ್ ಕಾಸರವಳ್ಳಿ ಅವರಂತಹ ಅವರ ಹಲವು ಸ್ನೇಹಿತರ ಬಳಿ ಹೇಳಲು ಇನ್ನಷ್ಟು ಕಥೆಗಳಿರಬಹುದು. ಅವರು ಮನುಷ್ಯರ ಕುರಿತು ಕುತೂಹಲಿಯಾಗಿದ್ದರು. ಜೀವನವನ್ನು ಸಂಭ್ರಮಿಸಿದರು. ಮಧುಪಾನದ ನಡುನಡುವೆ ಲಿಮೆಯೆ, ಲೋಹಿಯಾ, ಮಾರ್ಟಿನ್ ಗ್ರೀನ್ ಇಲ್ಲವೇ ಕುವೆಂಪು ಕುರಿತಾದ ಕಥೆಗಳನ್ನು ಹೇಳುತ್ತಿದ್ದರು. ಭಾಷೆಗಳ ಜಗತ್ತಿನ ಒಗ್ಗಟ್ಟಾಗಿ ಅದು ಕಾಣುತ್ತಿತ್ತು.

  ಮೋದಿ ಕುರಿತಾದ ಅವರ ಟೀಕೆಗಳು ಹಾಗೂ ಮೋದಿ ಆಳ್ವಿಕೆಯ ಜಗತ್ತಿನಲ್ಲಿ ನಾನು ಬದುಕಲಾರೆ ಎಂಬ ಅವರ ಹೇಳಿಕೆಗಳಿಗೆ ಕೆಲವು ಜನರಿಂದ ಅವರು ಬೈಗುಳಗಳನ್ನು ಕೇಳಬೇಕಾಯಿತು. ಆದರೂ ಅವರ ಧೈರ್ಯಕ್ಕೆ ಮೆಚ್ಚಬೇಕು. ಗಿರಿರಾಜ್ ಕಿಶೋರ್‌ನಂತಹ ವ್ಯಕ್ತಿಗಳು ಪಾಕಿಸ್ತಾನಕ್ಕೆ ತೆರಳುವ ರೈಲಿನಲ್ಲಿ ಅವರು ಹೋಗಬೇಕು ಎಂದು ಒತ್ತಾಯಿಸಬಹುದು. ಅದಾಗಿದ್ದರೆ ಅನಂತಮೂರ್ತಿ ಮತ್ತು ಮಾಂಟೊ ಅವರು ಪರಸ್ಪರ ತಮ್ಮ ನಡುವಿನ ಕಥೆಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರೇನೋ. ದೇಶಗಳನ್ನು ಒಗ್ಗೂಡಿಸುವ ಉಪಾಯಗಳ ಕುರಿತು ಮಾತನಾಡುತ್ತಿದ್ದರೋ ಏನೋ. ಅಂತಹ ಒಂದು ರೈಲು ಪ್ರಯಾಣ ವಿಭಿನ್ನವಾಗಿರುತ್ತಿತ್ತು.

ಅನಂತಮೂರ್ತಿಯವರು ರಾಜಕೀಯವಾಗಿ ಹರಿತವಾದ ನಾಲಗೆಯುಳ್ಳವರು. ಅವರು ತಪ್ಪುಗಳನ್ನೂ ಮಾಡಿದ್ದಾರೆ. ಆದರೆ ಈ ತಪ್ಪುಗಳನ್ನು ಒಳನೋಟಗಳಾಗಿ ಪರಿವರ್ತನೆ ಮಾಡಿದರು. ಅವರು ವಿವಾದಗಳನ್ನು ಹುಟ್ಟು ಹಾಕಿದರು. ಆದರೆ ತಾವು ನೀಡಿದ ಸಹಯೋಗವನ್ನು ಧ್ವಂಸಗೊಳಿಸಲಿಲ್ಲ.‘ಬೆಂಗಳೂರ್’ ಮಹಾನಗರವನ್ನು ‘ಬೆಂಗಳೂರು’ ಎಂದು ಮರುನಾಮಕರಣ ಮಾಡುವುದರ ಬಗ್ಗೆ ಅವರು ಪ್ರಬಲ ಒತ್ತಾಯ ಮಾಡಿದ್ದು ನನಗೆ ನೆನಪಿದೆ. ಆದರೂ ಆಶೀಶ್ ನಂದಿ ಅವರ ಟೀಕೆಗಳನ್ನು ಆಲಿಸಿದರು ಮತ್ತು ಅದಕ್ಕೆ ತಾಳ್ಮೆಯಿಂದ ಉತ್ತರಿಸಿದರು.

ಕೆ.ವಿ.ಸುಬ್ಬಣ್ಣನವರ ಜೊತೆಗೆ ಸೇರಿಕೊಂಡು ಅವರು ಹೆಗ್ಗೋಡುನಂತಹ ಅಭೂತಪೂರ್ವ ಜಗತ್ತನ್ನು ನಿರ್ಮಾಣ ಮಾಡಿದರು. ನಾಟಕ ಮತ್ತು ಕನ್ನಡ ಭಾಷೆಗಳು ಜೀವಂತಗೊಳ್ಳುವ ವೇದಿಕೆಯೊಂದನ್ನು ಸೃಷ್ಟಿಸಿದರು.ಬಹುತೇಕ ಬುದ್ಧಿಜೀವಿಗಳು ಪುಟಸೂಚಿಗಳಾಗಿ, ಅಲ್ಲಿ-ಇಲ್ಲಿ ಉಲ್ಲೇಖಗಳಾಗಿ ಮತ್ತು ನಿಧನ ಸುದ್ದಿಯಾಗಿ ಮರೆಯಾಗುತ್ತಾರೆ. ಆದರೆ ಅನಂತಮೂರ್ತಿಯವರು ಕರ್ನಾಟಕದ ಮನೆಮನೆಗಳಲ್ಲಿ ಜನಪದರಾಗಿ ಬದುಕುತ್ತಾರೆ. ಈ ಭಾಷಾ ಪ್ರತಿಭೆಯ ಕುರಿತಾದ ಸಂವಾದಗಳಲ್ಲಿ, ಕಾಲೇಜಿನ ಚರ್ಚೆಗಳಲ್ಲಿ ಅವರು ನೆನಪಿನಲ್ಲಿ ಉಳಿಯುತ್ತಾರೆ.
 
ಅವರ ನಿಧನದ ಕುರಿತಾದ ಸುದ್ದಿಯೇ ಕಥಾನಕದ ಜಲಪಾತವನ್ನೇ ಸೃಷ್ಟಿಸುತ್ತದೆ. ಅಲ್ಲಿ ಕಥೆಗಳಿವೆ, ದಂತಕಥೆಗಳಿವೆ, ಐತಿಹ್ಯಗಳಿವೆ. ನಮ್ಮ ನಡುವಿನ ಅಪ್ರತಿಮ ಕಥನಕಾರನನ್ನು ಗೌರವಿಸಲು ಅವುಗಳು ಪರಸ್ಪರ ಸ್ಪರ್ಧಿಸುತ್ತವೆ, ಒಗ್ಗೂಡುತ್ತವೆ.

 (ಕೃಪೆ: ದ ಹಿಂದೂ)

ಆಗಸ್ಟ್ 18 ಕೊರಗರ ಸ್ವಾತಂತ್ರ್ಯ ದಿನ- ಭೂಮಿ ಹಬ್ಬ

ಆಗಸ್ಟ್ 18 ಕೊರಗರಿಗೆ ಸ್ವಾತಂತ್ರ್ಯದ ದಿನ 
ಕೊರಗರಿಗೆ ಭೂಮಿ ಹಬ್ಬದ ಸಂಭ್ರಮ 



'ಜಲ್ ಜಂಗಲ್ ಜಮೀನ್ ಹಮಾರ ಹೈ' ಎಂದು ಜಾರ್ಖಂಡದ ಆದಿವಾಸಿ ಬುಡಕಟ್ಟು ಪಂಗಡದ ನಾಯಕ 'ಬಿರ್ಸಾ ಮುಂಡಾ' ಘೋಷಿಸಿದ ಮಾತು ನಿಜವಾಗುತ್ತಿದೆ. ಶತಶತಮಾನಗಳಿಂದ ಕಾಡಿನ ಮಕ್ಕಳಾಗಿ, ಕಾಡನ್ನೇ ಬದುಕಾಗಿಸಿದ ಆದಿವಾಸಿಗಳ ಸ್ವಚ್ಛಂದ ಕಾಡಿನ ಹಕ್ಕನ್ನು, ತುಂಡರಸರ ಕಾಲದಲ್ಲಿಯೇ ಕಸಿದುಕೊಳ್ಳಲಾಗಿತ್ತು. ಬ್ರಿಟೀಷ್ ಆಡಳಿತದಲ್ಲಿಯೂ ಇದು ನಿರಂತರವಾಗಿ ಮುಂದುವರಿಯಿತು. ಸ್ವಾತಂತ್ರ್ಯ ಭಾರತದಲ್ಲಿಯೂ ಇದೇ ಶೋಷಣೆ ಎಗ್ಗಿಲ್ಲದೇ ನಡೆಯಿತು. ಇದೀಗ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಆರು ದಶಕಗಳ ನಂತರ, ಈ ನಾಡಿನ ಮೂಲನಿವಾಸಿಗಳಾದ 'ಕೊರಗ'ರಿಗೆ ಸ್ವಾತಂತ್ರ್ಯದ ಸವಿ ಸಿಕ್ಕಿದೆ. ಹೌದು! ಬದುಕಲು ನೆಲೆ ಸಿಕ್ಕಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲನಿವಾಸಿಗಳಾದ ಕೊರಗರು - ಅನಾದಿ ಕಾಲದಿಂದಲೂ ಕಾಡಿನಲ್ಲಿಯೇ, ಕಾಡಿನ ತಪ್ಪಲಿನ ಪ್ರದೇಶದಲ್ಲಿಯೇ ವಾಸಿಸುತ್ತಿದ್ದವರು. ಪ್ರಾಚೀನ ಕಾಲದಿಂದಲೂ 'ಊಳಿಗಮಾನ್ಯ ಪದ್ಧತಿ' (ಪ್ರಾದೇಶಿಕವಾಗಿ 'ಅಜಲು ಚಾಕರಿ' ಎನ್ನಲಾಗುತ್ತಿತ್ತು), ಮಡಿ - ಮೈಲಿಗೆ, ಅಸ್ಪ್ರಶ್ಯತೆ, ಜಾತಿ ಪದ್ಧತಿ ಮತ್ತು ಸಾಮಾಜಿಕ ದಬ್ಬಾಳಿಕೆಗಳಿಗೆ ಗುರಿಯಾಗಿದ್ದ ಕೊರಗರನ್ನು, ಮಾನವ ಘನತೆಗೆ ಕುಂದುಂಟುಮಾಡುವ ಹೀನ ಕಸುಬುಗಳಿಗೆ ಉಪಯೋಗಿಸುತ್ತಿದ್ದರು. ಕಸ ಗುಡಿಸುವುದು, ಮಲ ಹೊರುವುದು, ಚರಂಡಿ ಮ್ಯಾನ್ ಹೋಲ್ ಗಿಳಿದು ಸ್ವಚ್ಛಗೊಳಿಸುವುದು ಸತ್ತ ಪ್ರಾಣಿಗಳ ಕಳೇಬರ ಎತ್ತುವುದು ... ಈ ಸಮಾಜ ಕೊರಗರಿಗಾಗಿಯೇ ಮೀಸಲಿಟ್ಟಿದ್ದ ಕಸುಬುಗಳಾಗಿದ್ದವು. ಅಜಲು ಚಾಕರಿ, ರೋಗಿಯ ಕೂದಲು ಮತ್ತು ಉಗುರು ಮಿಶ್ರಿತ ಅನ್ನವನ್ನು ದಾನವಾಗಿ (ಪಂಚಮ ದಾನ ಎನ್ನಲಾಗುತ್ತದೆ) ಪಡೆಯುವುದು, ಊರ ಜಾತ್ರೆಗಳಲ್ಲಿ ವ್ಯಾಪ್ತಿಗಿಂತ ದೂರದಲ್ಲಿ ನಿಂತು ಡೋಲು ಬಾರಿಸುವುದು, ಜಾತ್ರೆಗಳಲ್ಲಿ ಕದನಿ (ಒಂದು ರೀತಿಯ ಸ್ಪೋಟಕ) ಸಿಡಿಸುವುದು, ಕಂಬಳದ ಮುನ್ನಾ ದಿನ ಕಂಬಳ ಕೆರೆ ಕಾಯುವುದು (ಪನಿ ಕುಲ್ಲುನು ಎನ್ನುತ್ತಿದ್ದರು) ಮತ್ತು ಅದರಲ್ಲಿ ಕಲ್ಲು ಗಾಜು ಇದೆಯೇ ಎಂದು ಪರೀಕ್ಷಿಸಲು ಕೊರಗರನ್ನು ಓಡಿಸುವುದು ಹಾಗೂ ಊರ ಧಣಿಗಳ ಬಿಟ್ಟಿ ಚಾಕರಿಯೇ ದೈನಂದಿನ ಬದುಕಾಗಿತ್ತು. ಸುಶ್ರಾವ್ಯವಾಗಿ ಡೋಲು - ಚೆಂಡೆ ಬಾರಿಸುವುದು, ಕೊಳಲು ಊದುವುದು ಕೊರಗರ ಸಾಂಸ್ಕೃತಿಕ ಮತ್ತು ಮನೊರಂಜನಾತ್ಮಕ ಬದುಕಾಗಿತ್ತು. ಬುಟ್ಟಿ ಹೆಣೆಯುವುದು, ಕಾಡುತ್ಪತ್ತಿ ಸಂಗ್ರಹಿಸುವುದು ಕುಲ ಕಸುಬಾಗಿತ್ತು. ಆಮೆ, ಗೋಮಾಂಸ ಪ್ರಿಯವಾದ ಭಕ್ಷಣೆಯಾಗಿತ್ತು. ತಮ್ಮದೇ ಆದ ವಿಶಿಷ್ಟ 'ಕೊರ್ರೆ' ಭಾಷೆ, ವೇಷ - ಭೂಷಣ, ಸಭ್ಯತೆಯನ್ನು ಮೈಗೂಡಿಸಿಕೊಂಡಿದ್ದರು. ಶಿಕ್ಷಣ ಪಡೆಯುವುದನ್ನು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಲಾಗಿತ್ತು. ಆ ಮೂಲಕ ಸಮಾಜದಿಂದಲೇ ಕೊರಗರನ್ನು ದೂರವಿಡಲಾಗಿತ್ತು. ಈಗಲೂ ನಗರದ ಹೊರವಲಯದಲ್ಲೋ, ಕಾಡು ಪ್ರದೇಶದ ತಪ್ಪಲಿನಲ್ಲೋ ಇರುವ ಕೊರಗರ ಕೇರಿಗಳಿಗೆ - 'ಕೊರಗರ ಕಾಲೋನಿಗೆ ಹೋಗುವ ರಸ್ತೆ' ಎಂದು ಸರಕಾರವೇ ಅಧಿಕೃತವಾಗಿ ಬೋರ್ಡುಗಳನ್ನು ನೆಟ್ಟಿರುವುದನ್ನು ಗಮನಿಸಬಹುದು! 



ಶತಮಾನಗಳಿಂದ ಗುಲಾಮ ಸಂಸ್ಕೃತಿಯಲ್ಲಿಯೇ ಬೆಂದು ಬಸವಳಿದಿದ್ದ ಕೊರಗರ ಜೀವನದಲ್ಲಿಯೂ ಪರಿವರ್ತನೆಯ ಹುಮ್ಮಸ್ಸು ಹರಿಯತೊಡಗಿತು. ನಿಧಾನವಾಗಿ ಕೊರಗರು ಸಂಘಟಿತರಾಗ ತೊಡಗಿದರು. 1987 ರಲ್ಲಿ ಕಾಪು ದೇವದಾಸ ಶೆಟ್ಟಿ ಎಂಬ 'ಸಮಾಜ ಪರಿವರ್ತನಕಾರ'ನ ನೇತೃತ್ವದಲ್ಲಿ, ಪಡುಬಿದ್ರಿ ಸಮೀಪದ ಕಾಪು ಎಂಬಲ್ಲಿ ಪ್ರಪ್ರಥಮವಾಗಿ' ಕಾಪು ಕೊರಗರ ಸಂಘ 'ಎಂಬ ಸಂಸ್ಥೆ ಅಸ್ಥಿತ್ವಕ್ಕೆ ಬಂತು. ಅವಿಭಜಿತ ಜಿಲ್ಲೆಯ ಎಲ್ಲಾ ಮೂಲೆಗಳಿಂದಲೂ ಕೊರಗರು ಸಂಘಟನೆಗೆ ಬಲ ತುಂಬಲು ಅವಿರತ ಪ್ರಯತ್ನಿಸಿದರು. ಪ್ರಗತಿ ಹೊಂದುವುದು ನಿಧಾನಗತಿಯ ಪ್ರಕ್ರಿಯೆ, ಅದರೊಂದಿಗೆ ನಾವು ಸಂಘರ್ಷಕ್ಕೆ ಇಳಿಯಬೇಕು ಎಂದು ಮನಗಂಡ ಕೊರಗರು, ಸರಕಾರದೊಂದಿಗೆ ಸೌಮ್ಯ ಸಂಘರ್ಷಕ್ಕೆ ಇಳಿಯತೊಡಗಿದರು. ತಮ್ಮ ಮೂಲಭೂತ ಹಕ್ಕುಗಳಿಗಾಗಿ, ತಮ್ಮ ಅಸ್ಥಿತ್ವದ ಉಳಿವಿಗಾಗಿ ಜೀವನವನ್ನೇ ಹೋರಾಟದ ಪಣಕ್ಕಿಟ್ಟರು.

ಆಗಸ್ಟ್ 18 1993 ಕೊರಗ ಜನಾಂಗದ ಇತಿಹಾಸದಲ್ಲೊಂದು ಮೈಲುಗಲ್ಲಾದ ಸ್ವರ್ಣದಿನ. ಶತಮಾನಗಳಿಂದ ಬದುಕುಪೂರ್ತಿ ಬವಣೆ, ಬೇಗುದಿ, ನೋವು, ಹಸಿವು, ಅವಮಾನಗಳನ್ನೇ ಉಂಡು, ಮೇಲ್ವರ್ಗದವರ ದೌರ್ಜನ್ಯಕ್ಕೆ ಬಲಿಯಾದ ಕೊರಗ ಸಮುದಾಯವು ಸರಕಾರದ ಮುಂದೆ ತಮ್ಮ ಅಳಲನ್ನು ತೋಡಿಕೊಂಡ ದಿನ. ಮಂಗಳೂರು ಬಾವುಟಗುಡ್ಡೆಯಿಂದ ಆರಂಭವಾಗಿ - ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆಯಲ್ಲಿಯೇ ಸಾಗಿ, ಮಳೆಯನ್ನೂ ಲೆಕ್ಕಿಸದೆ, ಕೊರಗ ಜನಾಂಗದ ಮಹಿಳೆಯರು - ಮಕ್ಕಳೂ ಸೇರಿ, ರಾಜ ಬೀದಿಗಿಳಿದು ಪ್ರತಿಭಟಿಸಿದ ದಿನ. 'ನಮ್ಮ ಜನಾಂಗದ ಅಭಿವೃದ್ಧಿಗೆ ಯೋಜನೆಗಳನ್ನು ತಯಾರಿಸುವ ಮೊದಲು, ನಮ್ಮ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ' ಎಂದು ಸರಕಾರದ ಮುಂದೆ ಒಕ್ಕೊರಳ ಬೇಡಿಕೆಯಿಟ್ಟ ದಿನ. ಅಂದಿನ ಆ ಹೋರಾಟದ ಫಲವಾಗಿಯೇ ಜಿಲ್ಲಾಡಳಿತವು, ಆದಿವಾಸಿ ಬುಡಕಟ್ಟು ಪಂಗಡದ ಕೊರಗ ಜನಾಂಗದ ಸಮಗ್ರ ಅಧ್ಯಯನಕ್ಕಾಗಿ - ಡಾ ಮಹಮ್ಮದ್ ಪೀರ್ (ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದವರು) ರವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಅದೇ ವರ್ಷ ಉಡುಪಿ ಜಿಲ್ಲೆಯ ಕೊಕ್ಕರ್ಣೆ ಸಮೀಪದ 'ಸೂರಾಲ್ ಮೀಸಲು ಅರಣ್ಟ ಪ್ರದೇಶ'ದ 600 ಎಕ್ರೆ ಜಾಗದಲ್ಲಿ ಭೂಮಿಯ ಹಕ್ಕು ಪ್ರತಿಪಾದಿಸಲು 2000 ಕೊರಗ ಬಂಧುಗಳು ಸನ್ನದ್ಧರಾಗಿದ್ದರು. ಆಗಿನ ಶಾಸಕರಾಗಿದ್ದ ಜಯಪ್ರಕಾಶ ಹೆಗ್ಡೆಯವರು ಮಧ್ಯಪ್ರವೇಶಿಸಿ, ಜಿಲ್ಲಾ ಪಂಚಾಯತ್ ವತಿಯಿಂದ ಭೂಮಿ ಕೊಡಿಸುವ ಭರವಸೆ ನೀಡಿದ ನಂತರ ಅಭಿಯಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

1994 ರಲ್ಲಿ ಹದಿಮೂರು ಪ್ರಮುಖ ಅಂಶಗಳನ್ನೊಳಗೊಂಡ ಅಧ್ಯಯನ ವರದಿಯನ್ನು ಸಮಿತಿ ಸರ್ಕಾರದ ಸುಪರ್ದಿಗೆ ಒಪ್ಪಿಸಿತು. ಈ ವರದಿಯಲ್ಲಿ - '' ಪ್ರತಿಯೊಂದು ಕೊರಗ ಕುಟುಂಬಕ್ಕೂ ಎರಡುವರೆ ಎಕರೆ ಭೂಮಿ ನೀಡಬೇಕು ಹಾಗೂ ಪುನರ್ವಸತಿಗೊಳಿಸಬೇಕು 'ಎಂದು ಶಿಫಾರಸು ಮಾಡಲಾಗಿತ್ತು. ಈ ವರದಿಯ ಸಮಗ್ರ ಅನುಷ್ಟಾನದ ಬೇಡಿಕೆಯನ್ನು ಮುಂದಿಟ್ಟುಕೊಂಡು 'ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ'ವು ನಿರಂತರ ಹೋರಾಟಕ್ಕಿಳಿಯಿತು. ಆದರೆ, ಬೇಡಿಕೆಗಳಿಗೆ ಚಿಕ್ಕಾಸು ಬೆಲೆ ಕೊಡದ ವರಿಷ್ಟ ಅಧಿಕಾರಿಗಳು ಕೆಂಪು ಪಟ್ಟಿಯನ್ನು ಸಡಿಲಿಸದೆ ಮತ್ತಷ್ಟು ಬಿಗು ನಿಲುವಿನಲ್ಲಿಯೇ ಮುಂದುವರಿದರು.

ಕೃಷಿಯನ್ನು ವೃತ್ತಿಯಾಗಿಸಿಕೊಳ್ಳದೆ, ಕುಲಕಸುಬುಗಳಿಗೆ ಜೋತು ಬಿದ್ದ ಕೊರಗ ಕುಟುಂಬಗಳಿಗೆ, ಕೃಷಿ ಭೂಮಿ ಸದುಪಯೋಗಗೊಳ್ಳಬಹುದೆ ಎಂಬ ಅಧಿಕಾರಿಗಳ ಅನುಮಾನದಿಂದ - ದುರ್ಬಲರ ಗಟ್ಟಿ ಧ್ವನಿಯೂ, ಅಧಿಕಾರಿಗಳಿಗೆ ಕೀರಲು ಧ್ವನಿಯಾಗಿ ಪರಿಣಮಿಸಿದ ಹಿನ್ನಲೆಯಲ್ಲಿ ಕೊರಗ ಬಂಧುಗಳ ಬೇಡಿಕೆಗಳಿಗೆ ಅಷ್ಟೊಂದು ಮಹತ್ವ ಲಭಿಸಿರಲಿಲ್ಲ.

ಇದರಿಂದ ವಿಚಲಿತರಾಗದ ಕೊರಗರಲ್ಲಿ - ತಮಗೂ ಕೃಷಿ ಭೂಮಿ ಬೇಕು, ಅದರಲ್ಲೇ ಒಂದಿಷ್ಟು ಉತ್ಪನ್ನ ತೆಗೆದು ಸುಧಾರಣೆ ಮಾಡಿಕೊಳ್ಳಬೇಕೆಂಬ ತುಡಿತ ಹೆಚ್ಚಾಗತೊಡಗಿತು. ಈ ಹಿನ್ನಲೆಯಲ್ಲಿ ಚಳುವಳಿಗಳ ಮೇಲೆ ಚಳುವಳಿ ನಡೆಸುತ್ತಾ, ಸರಕಾರದ ಗಮನ ಸೆಳೆಯಲು ಕೊರಗ ಸಂಘಟನೆಗಳು ಮತ್ತೆ ಮತ್ತೆ ಪ್ರಯತ್ನಿಸಿದವು. ಆ ಪ್ರಯತ್ನಗಳೆಲ್ಲವೂ ಆಳುವ ಸರಕಾರದ ಮುಂದೆ ನಿರುಪಯುಕ್ತವೆನಿಸಿದಾಗ, ಕೊರಗ ಸಮುದಾಯದ ಗೌರವಾಧ್ಯಕ್ಷ ಪಿ. ಗೋಕುಲದಾಸ್ ನೇತೃತ್ವದಲ್ಲಿ 2000 ನೇ ಇಸವಿಯಲ್ಲೇ 'ಭೂಮಿ ಚಳುವಳಿ' ಮತ್ತೆ ಆರಂಭಿಸಲಾಯಿತು.

ಕಳತ್ತೂರು ಚಲೋ: ಪಿ ಗೋಕುಲದಾಸ್ ಸಾರಥ್ಯದಲ್ಲಿ ಜುಲೈ 17 ರಂದು ಕಾಪು ಸಂಘ ವ್ಯಾಪ್ತಿಯಿಂದ ಪಾದಯಾತ್ರೆ ಆರಂಭವಾಗಿ, ಅವಿಭಜಿತ ಜಿಲ್ಲೆಯ ಪ್ರಮುಖ ಕೊರಗರ ಕಾಲೋನಿಗಳಿಗೆ ಸುತ್ತಿ, ಕೊರಗ ಬಂಧುಗಳನ್ನು ಹುರಿದುಂಬಿಸುತ್ತಾ, ತಮ್ಮ ಮೂಲಭೂತ ಹಕ್ಕಿನ ಕುರಿತು ಬಂಧುಗಳನ್ನು ಪ್ರೇರೇಪಿಸುತ್ತಾ, ಭೂಮಿ ಪ್ರತಿಪಾದನೆಯ ಆಧ್ಯತೆಯನ್ನು ಮನಗಾಣಿಸುತ್ತಾ, ಆಗಸ್ಟ್ 18 ರಂದು ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಕಳತ್ತೂರಿನ ಅರಣ್ಯ ಭೂಮಿ ಆಕ್ರಮಿಸಿ, 'ಭೂಮಿ ಹಕ್ಕು ಪ್ರತಿಪಾದನೆ 'ಚಳುವಳಿ ಹೂಡಿದರು. ಈ ಸಂದರ್ಭದಲ್ಲಿ ಕಠಿಣ ನಿಲುವು ತಳೆದ ಅರಣ್ಯ ಇಲಾಖೆಯವರು, ಪಾರ್ವತಿ ಕೆಂಜೂರು ಎಂಬ ತುಂಬು ಗರ್ಭಿಣಿ ಮಹಿಳೆ ಹಾಗೂ 2 ವರ್ಷದ ಮಗು ಕು. ರಕ್ಷಾ (ಡಿ / ಒ ಗೌರಿ ಕೊಕ್ಕರ್ಣೆ) ಸೇರಿದಂತೆ 28 ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಯಿತು. 28 ದಿನಗಳ ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡರು. ಆದರೆ, ಇದ್ಯಾವುದಕ್ಕೂ ಜಗ್ಗದ ಕೊರಗರು - ತಮ್ಮ ಬೇಡಿಕೆ ಈಡೇರಿಕೆಗೆ ಕಾನೂನು ಭಂಗವನ್ನು ಮಾಡದೆ ಅಹಿಂಸೆಯ ಹಾದಿಯಲ್ಲಿಯೇ ಧರಣಿ ಮುಂದುವರಿಸಿದರು. ಚಳುವಳಿ ತೀವ್ರ ಸ್ವರೂಪ ಪಡೆದುದನ್ನು ಗಮನಿಸಿದ ಜಿಲ್ಲಾಧಿಕಾರಿ ಹಾಗು ಇತರ ಅಧಿಕಾರಿಗಳು ಕೊರಗ ಮುಖಂಡರೊಂದಿಗೆ ಮಾತುಕತೆ ನಡೆಸಿ, ಸುಮಾರು 300 ಎಕ್ರೆ ಜಾಗವನ್ನು ಗುರುತಿಸಿ, 270 ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಮೂಲಕ 'ಕೊರಗರ ಭೂಮಿ ಹಕ್ಕು ಅಭಿಯಾನ'ದ ಯಶಸ್ಸಿಗೆ ಮೇಲ್ಪಂಕ್ತಿಯನ್ನು ಹಾಕಿದರು.

ಪಾಲಡ್ಕ ಚಲೋ: ಕಳತ್ತೂರು ಚಲೋ ಯಶಸ್ಸಿನ ಹಿನ್ನಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ 600 ಕೊರಗ ಕುಟುಂಬಗಳು 'ಭೂಮಿಯ ಹಕ್ಕು'ಗಾಗಿ ಮನವಿಯನ್ನು ಸಲ್ಲಿಸಿದರು.

ಅಕ್ಟೋಬರ್ 2, 2005 ಗಾಂಧೀ ಜಯಂತಿಯಂದು ಮೂಡಬಿದಿರೆಯ ಸ್ವರಾಜ್ಯ ಮೈದಾನದಿಂದ ಹದಿಮೂರು ಕಿಲೋ ಮೀಟರ್ ದೂರದಲ್ಲಿರುವ, ಕಡಂದಲೆ ಗ್ರಾಮದ ಸರಹದ್ದಿನಲ್ಲಿರುವ 'ಪಾಲಡ್ಕ ಸಾಮಾಜಿಕ ಅರಣ್ಯ ಭೂಮಿ'ಯಲ್ಲಿ, ತಮ್ಮ ಹಕ್ಕು ಪ್ರತಿಪಾದಿಸಲು ಸುಡು ಬಿಸಿಲಿನಲ್ಲಿ ಪಾದಯಾತ್ರೆಯಲ್ಲಿ ಬಂದ ಸುಮಾರು 800 ಕ್ಕೂ ಹೆಚ್ಚು ಕೊರಗ ಬಂಧುಗಳು ಸ್ಥಳದಲ್ಲಿಯೇ ಅನಿದೃಷ್ಟಾವಧಿ ಚಳುವಳಿ ಹೂಡುವ ನಿರ್ಧಾರಕ್ಕೆ ಬಂದರು. ಅಹೋ ರಾತ್ರಿ ಸ್ಥಳಕ್ಕೆ ಭೇಟಿನೀಡಿದ ಪ್ರಭಾರ ಜಿಲ್ಲಾಧಿಕಾರಿ, ತಹಶೀಲ್ದಾರ್, ಜಿಲ್ಲಾ ಪಂಚಾಯತ್ ಅಧಿಕಾರಿಗಳು, ತಾಲೂಕು ಪಂಚಾಯತ್ ಸದಸ್ಯರು - ತಿಂಗಳೊಳಗಾಗಿ ಬೇಡಿಕೆ ಈಡೇರಿಕೆಗೆ ಸರ್ವಸಮ್ಮದ ನಿಲುವು ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಚಳುವಳಿಯನ್ನು ತಾತ್ಕಲಿಕವಾಗಿ ಹಿಂಪಡೆದು ಕೊಳ್ಳಲಾಯಿತು. ತಿಂಗಳೊಳಗಾಗಿ ತಾರ್ಕಿಕ ಅಂತ್ಯ ಕಾಣದಿದ್ದರೆ - 'ಈ ಅರಣ್ಯ ಭೂಮಿಯಲ್ಲಿ ನಮ್ಮ ಬದುಕಿನ ಹಕ್ಕನ್ನು ಪ್ರತಿಪಾದಿಸಿಯೇ ಸಿದ್ಧ' ಎಂಬ ಎಚ್ಚರಿಕೆಯನ್ನು ಆ ಸ್ಥಳದಿಂದಲೇ ಆಳುವ ಸರಕಾರಕ್ಕೆ ಸಲ್ಲಿಸಲಾಯಿತು. ಪ್ರತಿಭಟನೆಯ ತೀವ್ರ ಕಾವಿನಿಂದಾಗಿ 'ಭೂಮಿ ಹಕ್ಕು ಪ್ರತಿಪಾದನಾ ಅಭಿಯಾನ' ಯಶಸ್ವಿಯೂ ಆಯಿತು.

1993 ರಂದು ಆರಂಭಗೊಂಡ 'ಭೂವಿ ಹಕ್ಕು ಪ್ರತಿಪಾದನಾ ಅಭಿಯಾನ'ದ ಫಲವಾಗಿ ಇಂದು ಅವಿಭಜಿತ ಜಿಲ್ಲೆಯಲ್ಲಿಂದು ಸುಮಾರು 450 ಕ್ಕೂ ಹೆಚ್ಚು ಕುಟುಂಬಗಳು 490 ಎಕ್ರೆ ಜಮೀನು ಹಕ್ಕು ಪತ್ರವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.

ಆಗಸ್ಟ್ 18 ಕೊರಗರ ಸ್ವಾತಂತ್ರ್ಯದ ದಿನ!
2000 ನೇ ಇಸವಿಯ ಆಗಸ್ಟ್ 17 ರ ಸಂಜೆ 3 ಗಂಟೆಗೆ, ಕರ್ನಾಟಕದ ಆಗಿನ ರಾಜ್ಯಪಾಲರಾಗಿದ್ದ ವಿ ಎಸ್ ರಮಾದೇವಿಯವರು 'ಅಜಲು ನಿಷೇದ ಕಾಯಿದೆ'ಗೆ ಅಂತಿಮ ಅಂಕಿತ ಹಾಕಿದ ದಿನ. ಶತಶತಮಾನಗಳ ಬದುಕುವ ಹಕ್ಕನ್ನು ಕಸಿದುಕೊಂಡ, ಬದುಕನ್ನು ಶೋಷಣೆಯ ಅಗ್ನಿಕುಂಡದಲ್ಲಿ ಹಿಂಡಿ ಹಿಪ್ಪೆ ಮಾಡಿದ - ಅವಮಾನವೀಯ 'ಅಜಲು ಪದ್ಧತಿ'ಯನ್ನು ನಿಷೇದಿಸಬೇಕೆಂಬ ಸುಮಾರು ಎಂಟು ವರ್ಷಗಳ ಅವಿರತ ಹೋರಾಟಕ್ಕೆ ಜಯ ಸಿಕ್ಕಿದ ದಿನ. ಆಗಸ್ಟ್ 17 ರ ಮುಸ್ಸಂಜೆ ಸಿಕ್ಕ ಬದುಕಿನ ಸ್ವಾತಂತ್ರ್ಯದ ಸಂಭ್ರಮಾಚರಣೆಯನ್ನೂ, ಸ್ವಾತಂತ್ರ್ಯದ ದಿನವಾಗಿ ಆಗಸ್ಟ್ 18 ರಂದೇ ಆಚರಿಸಲಾಗುತ್ತಿದೆ!

ಶ್ರೇಣೀಕೃತ ಸಮಾಜ ವ್ಯವಸ್ಥೆಯಲ್ಲಿ - ಎಲ್ಲಾ ಸ್ಥರಗಳಲ್ಲೂ ತುಳಿತಕ್ಕೊಳಗಾದ, ಶೋಷಣೆಯ ನಿಕೃಷ್ಠ ಸ್ಥಿತಿಗೆ ದೂಡಲ್ಪಟ್ಟ, ಅಸ್ಪ್ರಶ್ಯರಲ್ಲಿಯೂ ಅಸ್ಯ್ರಶ್ಯರಾದ ಸಮುದಾಯವೊಂದು, ತನ್ನ ಇರುವಿಕೆಯನ್ನು ಜಗತ್ತಿಗೆ ಸಾದರಪಡಿಸಿದ ದಿನ ಆಗಸ್ಟ್ 18.
'ಅಜಲು' ಎಂಬ ಜೀವನದ ಹೀನಾಯ ಸ್ಥರದಿಂದ ಬಂಧಮುಕ್ತಗೊಂಡು, ಜೀವನದ ಹೊಸ ಮಜಲನ್ನು ಮೆಟ್ಟಿದ ದಿನ ಆಗಸ್ಟ್ 18.
ಆದ್ದರಿಂದಲೇ ಈ ದಿನವನ್ನು ಆದಿವಾಸಿ ಬುಡಕಟ್ಟು ಸಮುದಾಯದ ಕೊರಗ ಜನಾಂಗ - ಸ್ವಾತಂತ್ರ್ಯ ಮತ್ತು ಭೂಮಿ ಹಕ್ಕಿನ ಯಶಸ್ಸಿನ ಒಟ್ಟು ಸಂಭ್ರಮದ ಹಿನ್ನಲೆಯೊಂದಿಗೆ 'ಭೂಮಿ ಹಬ್ಬ' ವೆಂದು ಆಚರಿಸುತ್ತಿದೆ. 


- ಬಿ ಎಸ್ ಹೃದಯ

ಸೋಮವಾರ, ಆಗಸ್ಟ್ 18, 2014

ಅಪಾಯಕಾರಿ ಕಣ್ಣೀರು

ಸೌಜನ್ಯ: ಪ್ರಜಾವಾಣಿ
 ಕೆಪಿಎಸ್‌ಸಿ ನೇಮಕಾತಿ ಪಟ್ಟಿಯಲ್ಲಾಗಿರುವ ಭ್ರಷ್ಟಾಚಾರದ ಹಿಂದೆ ಅನೇಕರ ಕೈವಾಡ ಇದೆ ಎಂಬುದು ಸಾಬೀತಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಹಾಗೂ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಬೇಕು. ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ನಿರ್ಧಾರ ಪ್ರಕಟಿಸಿ ಭ್ರಷ್ಟಾಚಾರದ ವಿರುದ್ಧ ಕ್ರಿಯಾಶೀಲವಾಗಿರುವಾಗ ಜೆಡಿಎಸ್ ನಾಯಕರಾದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಸುರಿಸುತ್ತಿರುವ ಕಣ್ಣೀರು ಅತ್ಯಂತ ಅಪಾಯಕಾರಿ.
ಅದು ನಾಳಿನ ಕರ್ನಾಟಕ­ವನ್ನು ಬಲಿತೆಗೆದುಕೊಳ್ಳುವಂತಹ ಕಣ್ಣೀರು. ದೇವೇಗೌಡ ಹಾಗೂ ಅವರ ಮಗ ಕುಮಾರಸ್ವಾಮಿ ತಮ್ಮ ತಪ್ಪಿನಿಂದಾಗಿರುವ ಅನೇಕ ಪ್ರಕರಣಗಳ ಪಶ್ಚಾತ್ತಾಪದಿಂದ ಕಣ್ಣೀರು ಸುರಿಸಿದ್ದರೆ ಕರ್ನಾ­ಟಕದ ಮತದಾರರು ಅವರನ್ನು ಕ್ಷಮಿಸುತ್ತಿದ್ದರು. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಅವರ ಪಕ್ಷಕ್ಕೆ ಜನತೆ ಕೊಟ್ಟಿರುವ ತೀರ್ಪನ್ನು ತಂದೆ, ಮಕ್ಕಳು ಇಷ್ಟು ಬೇಗ ಮರೆಯುವ ನತದೃಷ್ಟ ಪರಿಸ್ಥಿತಿಗೆ ತಲುಪಿರುವುದು ವಿಷಾದನೀಯ.
ದೇವೇಗೌಡರ ಕುಟುಂಬದ ಜಾಣ ಅವ್ಯವಹಾರ­ಗಳ ಸಮಗ್ರ ತನಿಖೆ ಆಗಬೇಕಾಗಿದೆ.  ಇಪ್ಪತ್ತು ವರ್ಷಗಳ ಹಿಂದಿನಿಂದಲೂ ಕೆಪಿಎಸ್‌ಸಿ ನೇಮಕಾತಿ­ಗಳಲ್ಲಿ ಈ ಕುಟುಂಬ  ಎಷ್ಟೊಂದು ಸ್ವಜನ ಪಕ್ಷಪಾತ­ವನ್ನು ಮಾಡಿದೆ ಎಂಬುದು ಬಯಲಾಗಬೇಕಾಗಿದೆ. ಪರೋಕ್ಷವಾಗಿ ಒಂದು ಜಾತಿ ಬಣವನ್ನು ಕೆಪಿಎಸ್‌ಸಿ  ಮೂಲಕ ಅಧಿಕಾರಶಾಹಿಯಾಗಿ ರೂಪಾಂತರಿಸಿ ಆಡಳಿತ ವ್ಯವಸ್ಥೆಯಲ್ಲಿ ಪ್ರತಿಷ್ಠಾಪಿಸುವುದರ ಹಿಂದೆ ಗೌಡರ ಕುಟುಂಬದ ಕೈವಾಡ ಎಷ್ಟಿದೆ? ಮಧ್ಯ­ಕಾಲೀನ ಭೂಮಾಲೀಕ ಪಾಳೇಗಾರಿಕೆ ರಾಜಕಾರ­ಣವು ಇಪ್ಪತ್ತನೇ ಶತಮಾನದಲ್ಲಿ ಅವರ  ಕುಟುಂಬ­ದಿಂದಲೇ  ಅತ್ಯಂತ ಚಾಣಾಕ್ಷತೆಯಿಂದ ಸಾಧ್ಯ­ವಾಗಿದೆ. ಅದಕ್ಕಾಗಿ ‘ಬಡ ಬೋರೇಗೌಡನನ್ನು ಇವರು ಬಳಸಿಕೊಂಡಿದ್ದಾರೆ.
ವಿಪರ್ಯಾಸ ಎಂದರೆ ಬಡ ಬೋರೇಗೌಡರಿಗಾಗಲಿ ಅವರ ಮಕ್ಕಳಿಗಾಗಲೀ ‘ತಮ್ಮ ಜಾತಿಯನ್ನು ಜಾತ್ಯ­ತೀತ ಸಂವಿಧಾನದ ನಡುವೆಯೂ ಇಷ್ಟೊಂದು ಅಧರ್ಮವಾಗಿ ಬಳಸುತ್ತಿರುವ ಬಗ್ಗೆ ಅನೇಕ ಅಮಾಯಕರಿಗೆ ಗೊತ್ತೇ ಇಲ್ಲ. ಬಡತನ, ದಯನೀಯ ಸ್ಥಿತಿಗಳಿಗೆ ತುತ್ತಾಗಿರುವ­ವ­ರಿಗೆ, ನಿರುದ್ಯೋಗಿ ಯುವ­ಸಮೂಹಕ್ಕೆ, ಅಂಗನ­ವಾಡಿ ಕಾರ್ಯಕರ್ತೆಯರ ಬವಣೆಗೆ ಸುರಿಸಲು ಇವರ ಬಳಿ ಕಣ್ಣೀರು  ಇಲ್ಲ. ಅನ್ಯಾಯಕ್ಕೆ ಒಳಗಾದ ದಿಟ್ಟೆ ಮೈತ್ರಿ ಅವರ ಬಗ್ಗೆ ಅಪ­ಸ್ವರ ಎತ್ತಿರುವುದರ ಹಿಂದೆ ಗೌಡರ ಕುಟುಂಬದ ದಲಿತ ವಿರೋಧಿ ನೀತಿಯೂ ಪ್ರತಿಧ್ವನಿತವಾಗಿದೆ.
ಕುಮಾರಸ್ವಾಮಿ­ಯವರು ಮತ್ತು ದೇವೇ­ಗೌಡರು ಭ್ರಷ್ಟಾಚಾರದ ಪರವಾಗಿ ಕಣ್ಣೀರು ಹಾಕಿ ಸರ್ಕಾರದ ಈ ಕುರಿತ ತೀರ್ಮಾನಕ್ಕೆ ಪ್ರತಿ ಸವಾಲು ಹಾಕಬಾರದಿತ್ತು. ಇದು ದುಷ್ಟ ರಾಜಕಾರಣವಲ್ಲದೆ ಬೇರೇನೂ ಅಲ್ಲ.
–ಡಾ.ಮೊಗಳ್ಳಿ ಗಣೇಶ್, ಪ್ರೊ. ಮಂಜುನಾಥ ಬೇವಿನಕಟ್ಟಿ, ಪ್ರೊ. ಸಿ. ಮಹದೇವ, ರಮೇಶ್ ನಾಯಕ, ಡಾ. ವಾಸುದೇವ ಬಡಿಗೇರ, ಡಾ. ಹೆಬ್ಬಾಲೆ ನಾಗೇಶ್, ಡಾ. ಚಿನ್ನಸ್ವಾಮಿ ಸೋಸಲೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಕರ್ನಾಟಕ ರಾಜ್ಯ ಶಿಕ್ಷಕರ ಸರ್ವೋದಯ ಸಂಘ


ವಿಶ್ವ ಜಾನಪದ ದಿನಾಚರಣೆ


ಕೊರಗ ಸಮುದಾಯದ ಚಿತ್ರಗಳು ಭಾಗ-7: ಅಜಲು ಅಸ್ಪೃಷ್ಯತೆ ಇತ್ಯಾದಿ..









ಡೋಲಿನ ಟಕ್ಕುಗಳು..
ಈ ದೇಶದಲ್ಲಿ 600ಕ್ಕೂ ಹೆಚ್ಚು ಆದಿವಾಸಿ ಬುಡಕಟ್ಟು ಪಂಗಡಗಳಿವೆ. ಈ ಎಲ್ಲಾ ಆದಿವಾಸಿ ಪಂಗಡಗಳಲ್ಲೂ ಒಟ್ಟು 600ಕ್ಕೂ ಹೆಚ್ಚು ಪ್ರಕಾರದ ಡೋಲುಗಳಿವೆ! ಅದರಲ್ಲಿ 'ಕೊರ್ರೆ ಕಡ್ಡಾಯಿ' (ಕೊರಗರ ಡೋಲು) ಕೂಡಾ ಒಂದು. ಇತರ ಎಲ್ಲಾ ಆದಿವಾಸಿ ಸಮುದಾಯಗಳ ಡೋಲಿನ 'ಟಕ್ಕು' (ಹೊಡೆತದ ಶೈಲಿ) ಗಿಂತಲೂ, ಕೊರಗರ ಟಕ್ಕುಗಳು ಭಿನ್ನ. ಕೊರಗರ ಡೋಲಿನ ಲಯಬದ್ಧ ಹೊಡೆತಕ್ಕೆ, ಅದರ ಜೊತೆಗೆ ಇಂಪಾದ ಕೊಳಲಿನ ಧ್ವನಿಗೆ ಮನಸೋಲದವರಿಲ್ಲ.

ಕೊರಗರ ಡೋಲಿನ ಟಕ್ಕುಗಳ ಒಂದು ಪರಿಚಯ ನಿಮಗಾಗಿ...
> ನಡತೆದ ಟಕ್ಕು : ನಡೆದು ಹೋಗುವ ಸಂದರ್ಭ ಆಯಾಸ ನೀಗಿಸಿಕೊಳ್ಳಲು ಹೊಡೆಯುವ ಟಕ್ಕು.

> ದಿಬ್ಬಣದ ಕೊರಳ್ : ಹಿಂದೆ ಕೊರಗರಲ್ಲಿ - ಮದುಮಗನ ದಿಬ್ಬಣ, ಮದುಮಗಳ ಮನೆಗೆ ಬರಬತ್ತಿದ್ದುದು ರೂಢಿ. ಹಾಗೆ ಬರುವಾಗ ಕಡ್ಡಾಯಿ ಬಡಿಯುವ ಶೈಲಿ.

> ದಾರೆದ ಟಕ್ಕು : ಮದುವೆ ಸಂದರ್ಭ ಧಾರೆ ಎರೆಯುವಾಗ ಕಡ್ಡಾಯಿ ಬಡಿಯುವ ಶೈಲಿ.

> ಜಾಪಿಡ ಕೊರುನ ಟಕ್ಕು : ಮಗಳನ್ನು ಬೀಳ್ಕೊಡುವಾಗ ಟಕ್ಕು.

> ಕೊನ್ಕೆದ ಟಕ್ಕು : ಕುಣಿತದ ಟಕ್ಕು/ಮನೊರಂಜನೆಯ ಟಕ್ಕು. ಈ ಪ್ರಕಾರದಲ್ಲಿ ಸುಮಾರು 120ಕ್ಕೂ ಹೆಚ್ಚು ರೀತಿಯ ಟಕ್ಕುಗಳಿವೆ.
ಇವೆಲ್ಲವೂ ಕೊರಗರ ಬದುಕಿಗೆ, ರೀತಿ ರಿವಾಜಿಗೆ ಮಾತ್ರ ಸಂಬಂಧಪಟ್ಟ ಸಂಪ್ರದಾಯಬದ್ಧ ಟಕ್ಕುಗಳು. ಇತರ ಸಮುದಾಯದ ಬಿಟ್ಟಿ ಸೇವೆಗೆ - ಈ ಟಕ್ಕುಗಳನ್ನು ಕೊರಗರು ಬಡಿಯುತ್ತಲೇ ಇರಲಿಲ್ಲ!

ಈ ತುಳುನಾಡಿನಲ್ಲಿ 'ಅಜಲು ಚಾಕರಿ' ಎಂಬ 'ಬಿಟ್ಟಿ ಸೇವೆ'ಗೆ ಒಳಗಾದ ಕೊರಗ ಸಮುದಾಯ, ಇಲ್ಲಿನ ಇತರ ಜನವರ್ಗದ ಕಾರ್ಯಕ್ರಮಗಳಿಗೆ ತಮ್ಮ ಕಡ್ಡಾಯಿ ಬಳಸಬೇಕಾಗಿ ಬಂತು. ಆ ಸಂದರ್ಭದಲ್ಲಿನ ಟಕ್ಕುಗಳು ಈ ರೀತಿ ಇವೆ..
> ಕಂಬಳದ ಟಕ್ಕು : ತುಳುನಾಡಿನ ಗ್ರಾಮೀಣ ಕ್ರೀಡೆ ಕಂಬಳದಲ್ಲಿ ಕೊರಗರು 'ಫನಿ ಕಲ್ಲುನು' ಎಂಬ ಅನಿಷ್ಟ ಸಂಪ್ರದಾಯ ಪಾಲಿಸಬೇಕಾದ ಸಂದರ್ಭದಲ್ಲಿ ಬಡಿತದ ಶೈಲಿ.

> ಸಾವುದ ಟಕ್ಕು : ತಮ್ಮ ಅಜಲು ಸೇವೆಗೆ ಒಳಪಟ್ಟ ವ್ಯಾಪ್ತಿಯಲ್ಲಿ ಯಾರಾದರು ಸಾವಿಗೀಡಾದರೆ, ಆ ಸಂದರ್ಭ ಬಿಡಿಯುವ ಶೋಕದ ಅಥವಾ ಸೂತಕದ ಛಾಯೆ ಮೂಡಿಸುವ ಶೈಲಿ.
ಇನ್ನು ಊರ ಜಾತ್ರೆ, ಕೋಲ, ನೇಮದ ಸಂದರ್ಭದಲ್ಲಿ ಕೆಲವೊಂದು 'ಕೊನ್ಕೆದ ಟಕ್ಕು'ಗಳನ್ನು ಬಡಿಯುತ್ತಿದ್ದರು.

ಕಡ್ಡಾಯಿಯ (ಡೋಲು) ಅಬ್ಬರದ ಶಬ್ಧಕ್ಕೆ ಕಂರ್ಡೆ (ಚೆಂಡೆ) ಧ್ವನಿ, ಕೊರಲ್ (ಕೊಳಲಿ)ನ ಇಂಪು, ಚಾವಲ (ಕೈತಾಳ)ದ ಸೇರಿದರೆ ಅದರ ಇಂಪೇ ಬೇರೆ!

ಇತರ ಆದಿವಾಸಿ ಸಮುದಾಯದಲ್ಲಿ ಹೆಚ್ಚೆಂದರೆ ಮೂವತ್ತು ಟಕ್ಕುಗಳನ್ನು ಮೀರುವುದಿಲ್ಲ. ಆದರೆ, ಬರೇ ಕೊರಗ ಸಮುದಾಯದಲ್ಲೇ 200ಕ್ಕೂ ಹೆಚ್ಚು ಪ್ರಕಾರದ ಟಕ್ಕುಗಳಿರುವುದು ವಿಶೇಷ!
- ಹೃದಯ


ಅಜಲು ಎಂದರೆ...

- ಬಾಬು ಕೊರಗ, ಪಾಂಗಾಲ


'ಅಜಲು' ಎಂಬ ಪದವನ್ನು - 'ಹಕ್ಕು', 'ಹಕ್ಕಿನ ಪ್ರದೇಶ', 'ಮೀಸಲು ಪ್ರದೇಶ', 'ತುಂಡು', 'ಭಾಗ' ಎಂಬುದಾಗಿ ಅರ್ಥೈಸಿಕೊಳ್ಳಬಹುದು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ - ಉಡುಪಿ ಇವರ 'ತುಳು ನಿಘಂಟು' ಸಂಪುಟ ಒಂದರ ಪ್ರಕಾರ 'ಅಜಲು ಎಂದರೆ ಧಾರ್ಮಿಕ ಸಮಾಜಿಕ ಆಚರಣೆಗಳಲ್ಲಿ, ವಿಶಿಷ್ಟ ಕರ್ತವ್ಯಗಳನ್ನು ಮಾಡುವ ವಂಶಪಾರಂಪರ್ಯದಿಂದ ಬಂದ ಅಧಿಕಾರ ವಲಯ' (Juridiction of One's Occupation; Service in Shrines and Other Social Ceremonies) ಎಂದಿದೆ. ಅಜಲು ಎಂಬುದು ಸೇವಾ ನಿಬಂಧನಾ ಪ್ರದೇಶವಾಗಿದೆ. ಒಂದು ಪ್ರದೇಶದಲ್ಲಿ ನಿರ್ದಿಷ್ಟ ಪಂಗಡ ಯಾ ಗುಂಪಿನವರ ಸೇವೆಯ ಹಕ್ಕು ಅಥವಾ ಹೊಣೆಗಾರಿಕೆ.

ಕೊರಗರ ಅಜಲು ಎಂದರೇನು?
ಕೊರಗ ಜನಾಂಗವು ಅನುಭೋಗಿಸುವ 'ಅಜಲು ಪದ್ಧತಿ'ಯನ್ನು ವ್ಯಾಖ್ಯಾನಿಸುವುದು ಅಥವಾ ಅರ್ಥೈಸುವುದು ಸುಲಭವಲ್ಲ. ಅಜಲು ಚಾಕರಿಯನ್ನು ಮಾಡಿ ಸ್ವ ಅನುಭವ ಪಡೆದು ಕೊನೆಗೆ ಅದನ್ನು ಧಿಕ್ಕರಿಸಿ, ಶಿಕ್ಷಣಕ್ಕೆ ಮೊರೆ ಹೋದ ನಂದಿಕೂರಿನ ಮೋಹನ ಅಡ್ವೆ (ಬಿ.ಇ) ಯವರ ಪ್ರಕಾರ, 'ಕೊರಗರ ಆತ್ಮಗೌರವ, ಸ್ವಾಭಿಮಾನ ಸ್ವಾವಲಂಬನೆಯನ್ನು ಬಲಿತೆಗೆದುಕೊಂಡು ಅವರಲ್ಲಿ - ಪರಾವಲಂಬನೆ, ಕೀಳರಿಮೆ, ಮೂಢನಂಬಿಕೆ, ಜಡತ್ವ, ನಿಷ್ಕ್ರಿಯತೆ, ಭೀತಿ ಹುಟ್ಟಿಸಿ, ಬೆಳೆಸಿ ಅವರನ್ನು ಅಂತರ್ ಮುಖಿಗಳನ್ನಾಗಿ ಮಾಡಿ, ತಮ್ಮ ಬಗೆಗೆ ನಕರಾತ್ಮಕ ಧೋರಣೆ ಮತ್ತು ದುಶ್ಚಟಗಳಿಗೆ ಒಲವು ಮೂಡಿಸಿ, ಸಾಮಾಜಿಕ ಅಂತರವನ್ನು ಹೆಚ್ಚಿಸಿರುವ ಒಂದು ಅಮಾನವೀಯ, ಅವಮಾನಕರ ಕಾರ್ಯನಿಬಂಧನಾ ವ್ಯವಸ್ಥೆಯೇ - ಕೊರಗರ ಅಜಲು.'

ಸಮಾಜ ಶಾಸ್ತ್ರವನ್ನು ಅಭ್ಯಾಸ ಮಾಡಿರುವ ಮತ್ತಡಿ ಕಾಯರಪಲ್ಕೆ (ಎಂ.ಎ.ಎಂ.ಫಿಲ್) ಯವರ ಪ್ರಕಾರ, 'ಮನುಷ್ಯರನ್ನು ಪ್ರಾಣಿಗಳನ್ನಾಗಿಸಿ ಜಡತ್ವ, ಅಪನಂಬಿಕೆ, ಅಗೌರವವನ್ನು ತುಂಬಿಸಿ, ಆತ್ಮಗೌರವ ನಿರತ ಸ್ವಾಭಿಮಾನವನ್ನು ಕಳೆದು, ಇತರರ ಹಿತಕ್ಕಾಗಿ ತಮ್ಮ ಸುಖವನ್ನು ಮರೆತು, ನಂಬಿಕೆ, ದಬ್ಬಾಳಿಕೆ, ದೌರ್ಜನ್ಯಗಳಿಗಾಗಿ ತನ್ನ ಮೈಮರೆತು, ಅಪಾಯದ ಅವಹೇಳನದ ಊರಿನ ಚಾಕರಿ ಮಾಡಿಸುವ ಪದ್ಧತಿಯನ್ನು ಕೊರಗರ ಅಜಲು ಎನ್ನಬಹುದು.'

ಬಹುಸಂಖ್ಯಾತ ಸಮಾಜಗಳು ಊರಿನ ನೈರ್ಮಲ್ಯದ ಕೆಲಸಗಳಿಗಾಗಿ ಹಾಗೂ ಸ್ವಪ್ರತಿಷ್ಟೆಗಾಗಿ - ಅಸ್ಪೃಶ್ಯತೆ ಮತ್ತು ಧಾರ್ಮಿಕ ಕಟ್ಟುಪಾಡುಗಳ ಚೌಕಟ್ಟಿನೊಳಗೆ ಮುಗ್ಥ ಕೊರಗ ಜನಾಂಗವನ್ನು ಪೂರ್ಣ ಗುಲಾಮರನ್ನಾಗಿಯೇ ಉಳಿಸಿಕೊಂಡ ನಿರ್ದಿಷ್ಟವಾದ ಪ್ರದೇಶವನ್ನು 'ಕೊರಗರ ಅಜಲು' ಎನ್ನಬಹುದು.

ಬಹುಸಂಖ್ಯಾತ ಬಲಿಷ್ಠ ವರ್ಗಗಳು ತಮ್ಮ ಊರಿನ ನೈರ್ಮಲ್ಯದ ಕೆಲಸಗಳಾದ - ಗ್ರಾಮ ಸ್ವಚ್ಛತೆ, ಸತ್ತ ಪ್ರಾಣಿಗಳನ್ನು ತೆಗೆಯುವುದು, ಎಂಜಲೆಲೆ ತೆಗೆಯುವುದು ಇತ್ಯಾದಿಗಳನ್ನು ಕೊರಗರಿಂದ ಮಾಡಿಸುತ್ತಾರೆ. ಪ್ರತಿಷ್ಠೆಗಾಗಿ - ಸತ್ತವರ ಹೆಣ ಸುಡುವಾಗ, ಭೂತದ ನೇಮ, ಜಾತ್ರೆ, ಕಂಬಳ ಮುಂತಾದ ಧಾರ್ಮಿಕ ಸಾಂಸ್ಕೃತಿಕ ಕೆಲಸಗಳಲ್ಲಿ ಕೊರಗರಿಂದ ಪುಕ್ಕಟೆಯಾಗಿ ಡೋಲುವಾದನ ಮಾಡಿಸಿಕೊಂಡು, ಮನೋರಂಜನೆ ಪಡೆಯುತ್ತಾರೆ. ಧಾರ್ಮಿಕ ಕೇಂದ್ರಗಳೇ ಅಜಲಿನ ಮುಖ್ಯ ಭಾಗಗಳಾಗಿದ್ದರೂ, ಕೊರಗರು ಒಳಗೆ ಪ್ರವೇಶಿಸುವಂತಿಲ್ಲ. ಅಜಲಿನ ಎಲ್ಲಾ ಆಯಾಮಗಳಲ್ಲೂ ಅಸ್ಪೃಶ್ಯತೆಯನ್ನು ಜೀವಂತವಾಗಿರಿಸಿಕೊಳ್ಳಲಾಗಿದೆ. ಶುದ್ಧಾಚಾರ, ಮೈಲಿಗೆ ಎಂಬ ಧಾರ್ಮಿಕ ಕಲ್ಪನೆಗಳನ್ನು ಸೃಷ್ಠಿಸಲಾಗಿದೆ. ಈ ಚೌಕಟ್ಟಿನೊಳಗೇ ಕೊರಗರನ್ನು ಸಂಪೂರ್ಣವಾಗಿ ಅಂತರ್ಮುಖಿಗಳನ್ನಾಗಿಸುವ, ಬದುಕಿನ ಧನಾತ್ಮಕ ಬದಲಾವಣೆಗೆ ಒಗ್ಗದಂತೆ ಪ್ರೇರೇಪಿಸುವ ಕ್ರಿಯೆಯು ನಿರಂತರವಾಗಿ ನಡೆಯುತ್ತಿರುತ್ತದೆ...


ಕೊರಗರ ಅಜಲಿನಲ್ಲಿ ಏನಿದೆ?

1. ಅಜಲಿನಲ್ಲಿ ಅಸ್ಪೃಶ್ಯತೆಯ ಬಹಿರಂಗ ಪ್ರದರ್ಶನವಿದೆ.
2. ಜೀತದ ಪ್ರತ್ಯಕ್ಷ ರೂಪವಿದೆ.
3. ಬೇಡಿಯೇ ತಿನ್ನಬೇಕಾದ ಶರ್ತವಿದೆ.
4. ಜಾತಿ ಆಧಾರಿತ ಮೇಲು - ಕೀಲು ಪ್ರತಿಪಾದಿಸಲಾಗುತ್ತದೆ.
5. ಪುರೋಹಿತಶಾಹಿಯ ಪಂಚಮರು ಎಂಬ ಆರೋಪವಿದೆ.
6. ಮೃಗೀಯ ವರ್ತನೆಗೆ ತಳ್ಳುವ ಪಾತ್ರವಿದೆ.
7. ಮಕ್ಕಳನ್ನು ಬಿಕಾರಿಗಳಾಗಿಸುವ ಅಂಶವಿದೆ.
8. ಕೊರಗರು ಇತರರೊಂದಿಗೆ ಬೆರೆಯುವಂತಿಲ್ಲ.
9. ದೇಹದ ಕಲ್ಮಶಗಳನ್ನು ತಿನ್ನಿಸುವ ವ್ಯವಸ್ಥೆ ಇದೆ (ಪಂಚಮ ದಾನ).
10. ಮಕ್ಕಳಿಗೆ ಶಿಕ್ಷಣ ಒಗ್ಗದಂತೆ ಮಾಡುವ ಚಮತ್ಕಾರವಿದೆ.
11. ಮದ್ಯಪಾನವನ್ನು ಅತಿಯಾಗಿ ಪ್ರೇರೇಪಿಸುತ್ತದೆ.
12. ಒಟ್ಟಾರೆಯಾಗಿ ಮನುಷ್ಯ ಬದುಕಿನ ಪರಿಕಲ್ಪನೆಯನ್ನು ಗೃಹಿಸಲು ಅವಕಾಶವೇ ಇರದ ಒಂದು ವ್ಯವಸ್ಥೆ ಈ ಅಜಲು ಪದ್ಧತಿ.


ಪಂಚಮ ದಾನ..


ಹಿಂದೂ ಜಾತಿ ಪದ್ಧತಿಯ ಚತುವರ್ಣಗಳಲ್ಲಿ ಕೊರಗರು ಸೇರದಿರುವುದರಿಂದ, ಅವರನ್ನು 'ಪಂಚಮರು' ಎಂದು ಆರೋಪಿಸಲಾಗಿದೆ! ಊರಲ್ಲಿ ಯಾರಾದರೂ ಕಾಯಿಲೆಗೆ ಬಿದ್ದಾಗ ಜ್ಯೋತಿಷ್ಯರ (ಬಲಿಮೆಯವರ) ಆದೇಶದಂತೆ, ಕೊರಗರಿಗೆ ಈ ಪಂಚಮ ದಾನವನ್ನು ನೀಡಲಾಗುತ್ತದೆ. ರೋಗಿಯನ್ನು ಅಂಗಳದಲ್ಲಿ ಪೂರ್ವಾಭಿಮುಖವಾಗಿ ಕುಳ್ಳಿರಿಸಿ, ಆತನ ಎದುರು ಗೆರಸೆಯಲ್ಲಿ ಬಾಳೆಎಲೆಯನ್ನು ಹಾಕಿ, ಅರೆಬೆಂದ ಅನ್ನವನ್ನು ಬಡಿಸುತ್ತಾರೆ. ಅದಕ್ಕೆ ಬೂದುಕುಂಬಳದ ನೀರು ಸಾರನ್ನು ಸುರಿದು ಬಳಿಕ ರೋಗಿಯ ಕೆಲವು ತಲೆಗೂದಲು ಹಾಗೂ ಉಗುರುಗಳನ್ನು ಕತ್ತರಿಸಿ ಅನ್ನಕ್ಕೆ ಬೆರೆಸುತ್ತಾರೆ. ಕೊನೆಗೆ ದಾನ ಪಡೆಯುವುದಕ್ಕಾಗಿ ಕರೆಸಲಾದ ಕೊರಗ ಹೆಂಗಸು ಅಂಗಳಕ್ಕೆ ಬಂದು, ಅನ್ನ ಸಮೇತ ಗೆರಸೆಯನ್ನು ಎತ್ತಿ ರೋಗಿಯ ತಲೆಗೆ ನೀವಾಳಿಸಿ, ಅದನ್ನು ತನ್ನ ವಶಕ್ಕೆ ಪಡೆಯುತ್ತಾಳೆ. ಜೊತೆಗೆ ಆ ಹೆಂಗಸಿನ ತಲೆಗೆ ಎಣ್ಣೆಯನ್ನು ಸುರಿಸುತ್ತಾರೆ. ರೋಗಿಯ ಚಿಂದಿ ಜಟ್ಟೆಗಳನ್ನು ಆಕೆಗೆ ಕೊಡುತ್ತಾರೆ. ಇಲ್ಲಿ ಜನರ ನಂಬಿಕೆಯಂತೆ, ರೋಗಿಯ ಕಾಯಿಲೆಯನ್ನು ಆ ಕೊರಗ ಹೆಂಗಸಿಗೆ ವರ್ಗಾಯಿಸುವುದಾಗಿದೆ! ಆದರೆ ಅನ್ನ, ಬಟ್ಟೆ, ಎಣ್ಣೆ ಇತ್ಯಾದಿಗಳನ್ನು ದಾನವಾಗಿ ನೀಡುವುದರೊಂದಿಗೆ, ಆ ನಂಬಿಕೆಯನ್ನು ಬಹಳ ನಾಜೂಕಾಗಿಯೇ ಬಳಸಿಕೊಳ್ಳಲಾಗಿದೆ. ಅದರ ವಿಮರ್ಶೆಯ ಗೋಜಿಗೆ ಹೋಗದ ಕೊರಗರು ಇಲ್ಲಿ ಬಲಿಪಶುಗಳು.

ಇಲ್ಲಿ ಗಂಭೀರವಾಗಿ ಚಿಂತಿಸಬೇಕಾದ ವಿಷಯವೆಂದರೆ, ಮಾನವ ದೇಹದ ಕಶ್ಮಲಗಳಾದ ತಲೆಕೂದಲು ಹಾಗೂ ಉಗುರುಗಳನ್ನು ಪ್ರಜ್ಙೆ ಇರುವ ಯಾರೊಬ್ಬನೂ ತನ್ನ ಮನೆಯೊಳಗೆ ತಪ್ಪಿಯೂ ಇರಗೊಡಲಾರನು. ಆದರೆ, ಕೊರಗರು ಉಣ್ಣಬೇಕಾದ ಅನ್ನಕ್ಕೆ ಅವುಗಳನ್ನು ಆ ಪ್ರಜ್ಙಾವಂತರು ಹಾಕುತ್ತಾರೆ. ಇದು ಊರವರು ಕೊರಗರೊಂದಿಗೆ ವರ್ತಿಸುವ ರೀತಿಯಾಗಿದೆ. ಇಲ್ಲಿ ಕೊರಗರು 'ಮನುಷ್ಯರೇ ಅಲ್ಲ' ಅನ್ನುವಂತೆ ನಡೆಸಿಕೊಳ್ಳುವ ಜನರು, ತಮ್ಮ ಕ್ರೂರ ಮುಖವನ್ನು ಬಹಿರಂಗಪಡಿಸುತ್ತಾರೆ.

ರೋಗಿಗಳು ಸಣ್ಣ ಮಕ್ಕಳಾದಲ್ಲಿ, ಕೊರಗ ಮಹಿಳೆಯ ಎದೆಹಾಲನ್ನು ಕುಡಿಸಲಾಗುತ್ತದೆ ಹಾಗೂ ಆಕೆಯಿಂದ ಮರುನಾಮಕರಣ ಮಾಡಿಸಲಾಗುತ್ತದೆ. ಕಾಯಿಲೆ ವಾಸಿಯಾಗಲು ಕೊರಗರ ಜಾತಿ, ಕುಲ ಯಾವುದೂ ಅಡ್ಡಿಯಾಗುವುದಿಲ್ಲ! ಆದರೆ, ಆ ಮಗುವನ್ನು ಮನೆಯೊಳಗೆ ಸೇರಿಸಿಕೊಳ್ಳುವುದಕ್ಕೆ ಮುನ್ನ ತಣ್ಣೀರಿನಿಂದ ಸ್ನಾನ ಮಾಡಿಸುತ್ತಾರೆ. ಯಾಕೆಂದರೆ, ಕೊರಗರು ಮುಟ್ಟಿದ ಮಗುವು ಮೈಲಿಕೆಯಾಗಿರುತ್ತದೆ!!


ಮಾರಿ ಹಬ್ಬದಲ್ಲಿ ಕೊರಗರ ಶೋಷಣೆ
'ಮಾರಿ ಹಬ್ಬ' ಎಂದರೆ ಅನಿಷ್ಟ ಪೀಡೆಗಳನ್ನು ಊರಿನಿಂದ ಹೊರಗೆ ಓಡಿಸುವ ಹಬ್ಬ. ಊರಿಗೆ ಗಂಡಾಂತರಗಳು ಬಾರದಂತೆ ಭೂತಾದಿ ಗಣಗಳನ್ನು ಸಂತೃಪ್ತಿಪಡಿಸುವ ಕಾರ್ಯವಾಗಿದೆ. ಮಾರಿ ಓಡಿಸುವಾಗ ಕೊರಗರು ಎಲ್ಲರಿಗಿಂತಲೂ ಮುಂದೆ ಡೋಲು ಬಾರಿಸುತ್ತಾ ಓಡಬೇಕಾಗುತ್ತದೆ. ಕೆಲವೊಮ್ಮೆ 2 - 3 ಕಿಲೋ ಮೀಟರ್ ಗಳಷ್ಟು ದೂರದವರೆಗೂ ಓಡಬೇಕಾಗಬಹುದು. ಕೊರಗರ ಡೋಲಿನ ಧ್ವನಿಗೆ ಅಲೌಕಿಕ ದುಷ್ಟಶಕ್ತಿಗಳು ದೂರಸರಿಯುತ್ತವೆ ಎಂಬ ನಂಬಿಕೆ (ಆರೋಪ) ಇದೆ. ವಾಸ್ತವವಾಗಿ ಹಿಂದಿನ ಕಾಲದಲ್ಲಿ ಕಾಡುಗಳೇ ಹೆಚ್ಚಾಗಿದ್ದಾಗ ರಾತ್ರಿ ವೇಳೆ ಕಾಡು ಪ್ರಾಣಿಗಳ ಭಯವಿದ್ದಿರಬೇಕು. ಕೊರಗರು ಡೋಲು ಬಾರಿಸುತ್ತಾ ಮುಂದಿನಿಂದ ಹೋದರೆ, ಹಿಂದಿನಿಂದ ಬರುವ ಜನರು ಸುರಕ್ಷಿತವಾಗಿರುತ್ತಾರೆ. ತಮ್ಮ ಸುರಕ್ಷತೆಗಾಗಿ ಡೋಲಿಗೆ 'ಬ್ಲ್ಯಾಕ್ ಮ್ಯಾಜಿಕ್' ಆರೋಪ ಹೊರಿಸಲಾಗಿದೆ. ಇದನ್ನು ಮುಗ್ಧ ಕೊರಗರು ನಂಬಿದ್ದರು. ಮಾರಿಗೆ ಅನ್ನ ಬಡಿಸುವ 'ಗಡು' (ಸ್ಥಳ)ವನ್ನು ತಲುಪಿದ ಕೂಡಲೇ, ಕೊರಗರು ದೂರ ಸರಿದು ನಿಲ್ಲಬೇಕು. ಏಕೆಂದರೆ ಮಾರಿಗೂ ಕೊರಗರು ಅಸ್ಪೃಶ್ಯರು!!

ಗಣ (ಭೂತ)ಗಳಿಗೆ ಬಡಿಸಿದ ಅನ್ನಕ್ಕೆ, ಕೋಳಿ ಕೊಯ್ದು ರಕ್ತವನ್ನು ಹರಿಯಬಿಡುತ್ತಾರೆ. ಮಳೆಗಾಲವಾದರೆ ಅದರ ಮೇಲೆಯೇ ನೀರು ಹರಿದುಹೋಗುತ್ತದೆ. (ಹೆಚ್ಚಾಗಿ ಮಾರಿಗಳು ಮಳೆಗಾಲದಲ್ಲಿಯೇ ನಡೆಯುತ್ತವೆ) ಕೊನೆಗೆ, ಅದೇ ಕಲ್ಲು ಮಿಶ್ರಿತ, ಅರೆಬೆಂದ, ರಕ್ತಪೂರಿತ ಅನ್ನವನ್ನು ದೇವರ ಪ್ರಸಾದವೆಂದು ಕೊರಗರು ಪಡೆಯಬೇಕು! ದಿನವಿಡೀ ಕೊರಗರು ಡೋಲಿನೊಂದಿಗೆ ಒದ್ದಾಡಿರುವುದಕ್ಕೆ ಅವರಿಗೆ ದರೆಯುವ ಪ್ರತಿಫಲವಿದು!


ಕೊರಗರ ಮೇಲೆ ಊರವರ ಅಧಿಕಾರ
ಅಜಲಿನ ಸೇವೆಗೆ ಒಳಪಟ್ಟ ಕೊರಗರು - ಸದ್ರಿ ಅಜಲು ವ್ಯಾಪ್ತಿಯಲ್ಲಿ ವಿಧೇಯರಾಗಿಯೇ ಇರಬೇಕಾಗಿದೆ. ಊರವರು ಹೇಳಿದಷ್ಟೇ ಮಾಡುವುದು ಇವರ ಕರ್ತವ್ಯ. ತಾವು ಮಾಡಿದ ಕೆಲಸಕ್ಕೆ ಸಂಭಾವನೆ ಕೇಳುವಂತೆಯೂ ಇಲ್ಲ. ಕೊಟ್ಟಷ್ಟು ಪಡೆಯುವುದು ಮಾತ್ರ ಅವರ ಕರ್ತವ್ಯ. ಯಾವ ಕೆಲಸವನ್ನೂ 'ಆಗುವುದಿಲ್ಲ' ಎನ್ನುವಂತಿಲ್ಲ. ದಾರಿಯಲ್ಲಿ ಹೋಗುತ್ತಿರುವಾಗ ಯಾರಾದರು ಎದುರಿಗೆ ಬಂದರೆ ಇವರು ದೂರ ಸರಿದು ನಿಲ್ಲಬೇಕು. ನಡುಬಗ್ಗಿಸಿ ಕೈಜೋಡಿಸಿ ಊರವರನ್ನು ಗೌರವಿಸಬೇಕು. ಊರಿನ ಹಾಲುಗಲ್ಲದ ಹಸುಳೆಯನ್ನೂ ಏಕವಚನದಲ್ಲಿ ಸಂಬೋಧಿಸುವಂತಿಲ್ಲ. ಆದರೆ, ತೊದಲು ನುಡಿಯುವ ಮಗು ಕೂಡಾ ಎಷ್ಟೇ ಪ್ರಾಯದ ಕೊರಗರ ಬಗ್ಗೆ ಬಹುವಚನ ಉಪಯೋಗಿಸುವುದಿಲ್ಲ!

ಊರಿನ ಮಾರಿ, ಕೋಲ, ಕಂಬಳ ಮುಂತಾದ ಯಾವುದೇ ಆಚರಣೆಗಳ ಹಿಂದಿನ ದಿನ ಕೊರಗರು ಊರಿಡೀ ಡೋಲು ಬಾರಿಸುತ್ತಾ ಅಧಿಕೃತವಾಗಿ ತಿಳಿಸಬೇಕು. ಆಗ ಪ್ರತೀ ಮನೆಗಳಲ್ಲಿ ಕೊಡುವ ಹಿಡಿಭತ್ತ ಇಲ್ಲವೇ ಅಕ್ಕಿ ಇವರಿಗೆ ಅಂದಿನ ಪಥ್ಯಕ್ಕೆ ಕಚ್ಛಾ ಸಾಮಾಗ್ರಿ. ಊರಿನ ಪ್ರತೀ ಧಾರ್ಮಿಕ ಆಚರಣೆಗಳಿಗೂ ಅಜಲಿನ ಕೊರಗರು ಒಂದೋ ಎರಡೋ ಬುಟ್ಟಿಗಳನ್ನು ಉಚಿತವಾಗಿಯೇ ನೀಡಬೇಕು.




ಅಜಲಿನಲ್ಲಿ ಅಸ್ಪೃಶ್ಯತೆ

ಕೊರಗರ ಅಜಲು ಚಾಕ್ರಿ ಎಂಬುವುದೇ ಒಂದು ಅಸ್ಪೃಶ್ಯತೆಯ ಕ್ರಿಯೆ. ಅಜಲಿನ ಯಾವ ಕೆಲಸಗಳೂ ಅಸ್ಪೃಶ್ಯತೆಯಿಂದ ಮುಕ್ತವಾಗಿಲ್ಲ. ಯಾವುದೇ ಧಾರ್ಮಿಕ, ಸಂಸ್ಕೃತಿಕ ಕಾರ್ಯಗಳಲ್ಲಿ ಇವರಿಗೆ ಪ್ರವೇಶವಿರುವುದಿಲ್ಲ. ದಾನ ಸ್ವೀಕರಿಸುವಾಗಲೂ ಕೊರಗ ಮಹಿಳೆ ದೂರವೇ ನಿಂತು, ಅನ್ನ ತುಂಬಿದಗೆರಸೆಯನ್ನು ಎತ್ತಿ ನೀವಾಳಿಸಬೇಕು. ಜಾತ್ರೆ, ನೇಮಗಳಲ್ಲಿ ಕೊರಗರು ಅರ್ಧ ಕಿಲೋ ಮೀಟರ್ನಷ್ಟು ದೂರ ನಿಂತು ಚಾಕರಿ ಮಾಡಬೇಕು. ಸತ್ತವರ ಹೆಣದ ಹತ್ತಿರವೂ ಇವರು ಸುಳಿಯುವಂತಿಲ್ಲ. ದೇವಸ್ಥಾನಗಳ ಎದುರಿನ ಗದ್ದೆಗಳಿಗೆ ಇಳಿಯುವಂತಿಲ್ಲ. ಊರವರು ದಾರಿಯಲ್ಲಿ ಹೋಗುತ್ತಿರುವಾಗ ಎದುರಾದರೆ, ಇವರು ದಾರಿಬಿಟ್ಟು ದೂರ ಸರಿದು ನಿಲ್ಲಬೇಕು. ನಡುಬಗ್ಗಿಸಿ, ಕೈ ಜೋಡಿಸಿ ಊರವರನ್ನು ಗೌರವಿಸಬೇಕು. ಈಗ ಅಸ್ಪೃಶ್ಯತೆ ಇಲ್ಲ ಎನ್ನುವ ಮಂದಿಯೂ ಇದನ್ನೆಲ್ಲಾ ಪ್ರತಿದಿನ ಎಂಬಂತೆ ಕಣ್ಣಾರೆ ಕಾಣುತ್ತಿರುವುದು ನಿತ್ಯ ಸತ್ಯ.


ಕೊರಗರಲ್ಲಿ ಸಾಮಾಜಿಕ ಕೀಳರಿಮೆ


ಶತಮಾನಗಳಿಂದ ಈ ಅಜಲು ಎಂಬ ವ್ಯವಸ್ಥೆಯಲ್ಲಿ ಶೋಷಣೆಗೊಳಪಟ್ಟ ಈ ಜನಾಂಗವು ಇಂದು ಸಾಮಾಜಿಕ ಕೀಳರಿಮೆಯನ್ನು ಮೈಗೂಡಿಸಿಕೊಂಡಿದೆ. ಸಮಾಜದಲ್ಲಿ ತಾನು ತಲೆಯೆತ್ತಿ ನಡೆಯಲಾಗದವನು ಎಂಬ ಅವ್ಯಕ್ತ ಭಾವನೆ ಅಜಲು ಕೆಲಸ ನಿರ್ವಹಿಸುವ ಕೊರಗರಲ್ಲಿ ಅಂತರ್ಗತವಾಗಿರುತ್ತದೆ. ಊರಿನ ಅನಿಷ್ಟಗಳನ್ನು ಹೊರುವುದು, ನೈರ್ಮಲ್ಯದ ಕೆಲಸಗಳನ್ನು ನಿರ್ವಹಿಸುವುದು ಹಾಗೂ ಊರವರಿಗೆ ವಿಧೇಯನಾಗಿರುವುದೇ ತನ್ನ ಧರ್ಮ ಎಂಬ ವಿಚಾರಗಳು ಆತನ ರಕ್ತದ ಕಣಕಣಗಳಲ್ಲೂ ಬೆರೆತು ಹೋಗಿದೆ.

ಇವರನ್ನು ಸದಾ ತಿರಸ್ಕಾರ ದೃಷ್ಟಿಯಿಂದ ನೋಡುವುದು ಹಾಗು ಅತ್ಯಂತ ಕೆಳದರ್ಜೆಯ ಕೆಲಸಗಳನ್ನು ಬಲತ್ಕಾರವಾಗಿ ಮಾಡಿಸುವುದರಿಂದ ಇವರು ಮಾನಸಿಕವಾಗಿ ಅಂತರ್ಮುಖಿಗಳಾಗಿದ್ದಾರೆ. ದೇವರ ಹೆಸರು ಹೇಳಿ ಹೆದರಿಸುವುದು ಈ ಮೂಲಕ ದೂರದಲ್ಲೇ ಉಳಿಯುವಂತೆ ಮಾಡುವುದು ಹಾಗೂ ಯಾವುದೇ ಬೇಡಿಕೆಗಳನ್ನು ಮುಂದೊಡ್ಡದಂತೆ ತಡೆಯುವುದರಿಂದ ಇವರು ಅನಿವಾರ್ಯವಾಗಿ ಅದಕ್ಕೆ ಒಗ್ಗಿಕೊಂಡಿದ್ದಾರೆ. ಅಜಲಿನಿಂದ ಹೊರ ಪ್ರಪಂಚದ ಬಗ್ಗೆ ಆಲೋಚಿಸುವುದಕ್ಕೂ ಅವಕಾಶ ನೀಡದ ಸಮಾಜ ಇವರನ್ನು ಬದಲಾವಣೆಗಳಿಗೆ ಒಗ್ಗದಂತೆ ತರಬೇತುಗೊಳಿಸಿದೆ. ಆದುದರಿಂದ ಮಂದಮತಿಗಳಂತೆ ವರ್ತಿಸುವ ಕೊರಗರು ಇಂದು ಯಾವ ಸರಕಾರದಿಂದಲೂ ಬದಲಾವಣೆಗೆ ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಾರೆ


ಕೊರಗರಲ್ಲಿ ಆರ್ಥಿಕ ಮುಗ್ಗಟ್ಟು


ಅಜಲು ಚಾಕ್ರಿ ಮಾಡುವ ಕೊರಗರು ಅತಿಯಾದ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಾರೆ. ಚಾಕ್ರಿಯು ಉಚಿತಸೇವೆಯಾಗಿದ್ದು ಯಾವುದೇ ಮೂಲದಿಂದ ಸಂಪಾದನೆ ಅಸಾಧ್ಯವಾಗಿರುತ್ತದೆ. ನಡುಬಗ್ಗಿಸಿ ಬೇಡಿ ಪಡೆದ ಭಿಕ್ಷೆಯೇ ಇವರ ಸಂಪಾದನೆ. ಸದ್ರಿ ಚಾಕ್ರಿ ನಿರ್ವಹಿಸಿ ನೊಂದ ಮನಸ್ಸಿಗೆ ಕ್ಷಣಕಾಲಕ್ಕಾದರೂ ತಂಪೆರೆಯಬಹುದಾದ ಅಮಲು ಸೇವನೆಗೆ ಆತ ಅದನ್ನು ಸರಿದೂಗಿಸುತ್ತಾನೆ. ಈತನ ಕುಟುಂಬ ನಿರ್ವಹಣೆಯು ಊರವರು ಕನಿಕರದಿಂದ ನೀಡುವ ಜುಜುಬಿ ಭಿಕ್ಷೆಯಿಂದಲೇ ಸಾಗುಬೇಕಾಗುತ್ತದೆ. ಇದರಿಂದಾಗಿ ಎಲ್ಲಾ ತರದ ಆರ್ಥಿಕ ಮುಗ್ಗಟ್ಟುಗಳು ಉಂಟಾಗುತ್ತದೆ. ಕೆಲವೊಂದು ಗಂಭಿರ ಪರಿಣಾಮಗಳನ್ನು ಕೊರಗರು ಈ ಅಜಲು ಚಾಕ್ರಿಯ ಕ್ಷಣಕ್ಷಣವೂ ಅನುಭವಿಸುತ್ತಾರೆ. ಇವರ ಪಾಲಿಗೆ ಸ್ವತಂತ್ರ ಬದುಕು ಎನ್ನುವುದು ಕೇವಲ ಗಾಳಿಯೊಡನೆ ಗುದ್ದಾಡಿದ ಅನುಭವ ಮಾತ್ರ.


'ಅಜಲು ನಿಷೇಧ ಚಳುವಳಿ'ಯ ಪ್ರಮುಖಾಂಶಗಳು
1997-1998
* ಸೂರಾಲು ಹಬ್ಬದಲ್ಲಿ ಕದನಿ ನಿಲ್ಲಿಸಲಾಯಿತು.

* ಸೂರಾಲು ಹಬ್ಬಕ್ಕೆ ಅರಸರನ್ನು ಊರ ಧನಿ ಡೋಲು ಮೇಳದೊಂದಿಗೆ ಕರೆತಂದು, ಪುನಃ ಅವರ ಮನೆಗೆ ಬಿಟ್ಟು ಬರುವುದನ್ನು ನಿಲ್ಲಿಸಿರುವುದು.

* ಸೂರಾಲು ಹಬ್ಬದ ದಿನ ಊರ ಹೋಟೇಲಿನವರು - ಕೊರಗರಿಗೆ ಹಾಕಿದ ಪ್ರತ್ಯೇಕ ಚಪ್ಪರವನ್ನು ಹಬ್ಬದ ದಿನ ಕಿತ್ತು ಬಿಸಾಡಲಾಯಿತು

* ಇದುವರೆಗಿನ ಸಂಪ್ರದಾಯದಂತೆ ನೂತನ ವಧುವರರು ಮದುವೆಯ ದಿನ ಮನೆಗೆ ಬರುವ ಮುನ್ನ, ಧನಿಯವರ ಕಾಲು ಹಿಡಿಯಲು ಹೋಗಬೇಕಿತ್ತು. ಅದನ್ನು ನಿಲ್ಲಿಸಲಾಯಿತು.

* ಮದುವೆಯಲ್ಲಿ ಕುಡಿತವನ್ನು ಕಡ್ಡಾಯವಾಗಿ ನಿಲ್ಲಿಸಲಾಯಿತು.

* ಪಾದೆಮಠ ಹಬ್ಬದಲ್ಲಿ ವೇಷ ಹಾಕಿ ಬೇಡುವುದನ್ನು ನಿಲ್ಲಿಸಲಾಯಿತು.

* ಸೂರಾಲು, ಪಾದೆಮಠ, ಕೊಕ್ಕರ್ಣೆ, ಚೆಗ್ರಿಬೆಟ್ಟು, ಮೊಗೇರಪೇಟೆ, ರಂಗನಕೆರೆ, ಬಂಡೀಮಠ, ಕೂರಾಡಿ, ನಿಂಜೂರು ಮುಂತಾದ ಕಡೆಗಳಲ್ಲಿ ಮಾರಿ ಹಬ್ಬದ ದಿನ ಊರ ಮನೆ ಮನೆಗೆ ಹೋಗಿ ಬೇಡುವುದನ್ನು ನಿಲ್ಲಿಸಲಾಯಿತು.

* ಬಾರ್ಕೂರು ಮಾರಿ ಹಬ್ಬದಂದು ಸಂಬಳರಹಿತ ಡೋಲು ಸೇವೆಗೆ ವಿರೋಧ ವ್ಯಕ್ತಪಡಿಸಲಾಯಿತು. ಆ ಮೂಲಕ ಬಾರ್ಕೂರಿನಲ್ಲಿ ಮೊದಲ ಬಾರಿಗೆ ಕೊರಗರು ಡೋಲಿನ ಕೆಲಸಕ್ಕೆ ಸಂಭಾವನೆ ಪಡೆದುಕೊಂಡರು.

* ಬೈದಬೆಟ್ಟಿನಲ್ಲಿ ಪಾಯಿಖಾನೆ ಸ್ವಚ್ಛಗೊಳಿಸುವುದಕ್ಕೆ ಕೊರಗರಿಂದ ವಿರೋಧ. ಇನ್ನು ಮುಂದೆ ಸ್ವಚ್ಛತೆಯ ಕೆಲಸಗಳಿಗೆ ಅನಿಷ್ಟ ಚಾಕರಿಗಳಿಗೆ ಹೋಗುವುದಿಲ್ಲವೆಂಬ ತೀರ್ಮಾಣ.

* ಹೆಜಮಾಡಿ ನೇಮೋತ್ಸವದಲ್ಲಿ ಡೋಲು ಚಾಕ್ರಿಯ ವಿರುದ್ಧ ಪೋಲೀಸರಿಗೆ ದೂರು ನೀಡಲಾಯಿತು.

1998-99
* ಕೊರಗರಿಂದ ಯಾವುದೇ ರೀತಿಯ ಅಜಲು ಕೆಲಸಗಳಿಗೆ ಹೋಗುವುದಿಲ್ಲವೆಂಬ ತೀರ್ಮಾನ.

* ವಡ್ಡಬೆಟ್ಟು ಕಂಬಳದಲ್ಲಿ ಅಜಲು ಚಾಕರಿ ನಿಲ್ಲಿಸಲಾಯಿತು.

* ಕೆಂಜೂರು ಕಂಬಳದಲ್ಲಿ ಅಜಲು ಚಾಕರಿಯನ್ನು ನಿಲ್ಲಿಸಲಾಯಿತು. ಊರ ಮಂದಿಯಿಂದ ತೀವ್ರ ಪ್ರತಿರೋಧ.

* ಬಾರ್ಕೂರಿನಿಂದ ಜಿಲ್ಲಾಧಿಕಾರಿ ಕಛೇರಿಯವರೆಗೆ ಪಾದಯಾತ್ರೆ. ಅಜಲು ನಿಷೇಧಿಸುವಂತೆ ಮನವಿ.

* ಬಾರ್ಕೂರು ಮೂರು ಮಾಗಣಿಯ ಮಾರಿಯಲ್ಲಿ ಅಜಲು ಚಾಕರಿಯನ್ನು ನಿಲ್ಲಿಸಲಾಯಿತು.

* ವಂಡಾರು ಕಂಬಳದಲ್ಲಿ ಸುಮಾರು 200ರಷ್ಟಿದ್ದ ಕೊರಗರ ವೇಷಗಳಿಗೆ ಈ ವರ್ಷ ಪೂರ್ಣವಿರಾಮ.

* ಶಿಬರೂರು ಜಾತ್ರೆಯಲ್ಲಿ ಅಜಲು ಚಾಕ್ರಿಗೆ ಬಳಸಿದ ಡೋಲುಗಳನ್ನು ಪೋಲೀಸರಿಂದ ಮುಟ್ಟುಗೋಲು ಹಾಕಿಸಲಾಯಿತು.

* ಮುಲ್ಕಿ ಅರಸು ಕಂಬಳದಲ್ಲಿ ಕಂಬಳದ ಗದ್ದೆಯ ಸುತ್ತ ನೂರಾರು ಸಂಖ್ಯೆಯಲ್ಲಿ ಸೇರಿ ಅಜಲು ಚಾಕ್ರಿಯನ್ನು ವಿರೋಧಿಸಲಾಯಿತು.

* ಕಟಪಾಡಿ ಕಂಬಳದ ದಿನ ಅಜಲು ಚಾಕ್ರಿಯನ್ನು ವಿರೋಧಿಸಿ ಮಾನವ ಸರಪಳಿ ರಚಿಸಲಾಯಿತು.

ಭಾನುವಾರ, ಆಗಸ್ಟ್ 17, 2014

INTERNATIONAL SEMINAR ON ORAL EPICS OF SOUTH ASIA

DRAVIDIAN UNIVERSITY
Department of Folklore and Tribal Studies

O r g a n i s e s
UGC sponsered
INTERNATIONAL SEMINAR ON

ORAL EPICS OF SOUTH ASIA
20  -  22 August 2014
Venue:  Emeneau House

Inaugural Function at 10 am on 20 August 2014

Chief Guest                 :           Prof. K. Rathnaiah
                        Vice Chancellor, Dravidian University

President                     :           Prof. P. Subbachary
     Dean, School of Human & Social Sciences

Inaugural Address       :           Prof. Ambalike Hiriyanna
Vice Chancellor, Karnataka Folklore University

Keynote Address        :           Prof. T. S. Satyanath
Delhi University, Delhi

Guest of Eminence     :           Prof. S. Shanmugalingam
Former Vice Chancellor, Jaffna University, Sri Lanka

Guest of Honor           :           Prof. Kailash Pattanaik
Viswa- Bharathi University, Shantiniketan,WestBengal

                                                You are cordially invited
                                                                                                  
Dr.M.N.Venkatesha                                                          Prof.  Ch. A .Rajendra Prasad
   Seminar Director                                                                                                      Registrar









20 August 2014

Session – I
Time : 11.30 am to 1.30 pm  

Chair Person: Prof. T. N. Shankaranarayana

1.Prof. Ghulam Sarwar Yousuf:          Hanuman Kera Putih and his family in the Kelanthan
  Shadow Play of Malaysia

2. Dr. Vikram Chaudhari            :         The Oral Epic – Kukana Ramkatha of Rajasthan

3.Prof.P.Subbrachary                :          The concept of mental Text of Epic – An Encounter of
                                                             East and West

4..Mr. Azeez Walad                 :          Mappila Epics in Kerala: A Relook at Nationalism and
                                                               Cosmopolitanism


Session – II
Time 2.30 pm. 4.00 pm.

Chair Person : Prof. Ghulam Sarwar Yousof

1.Prof. S. Jeyasankar                           :           Oral Epics of Sri Lanka- An introduction
2.Dr.M.N.Venkatesha                         :           Identity and Expression in Oral Epics
3.Ms. Debamitha Ghosh                     :           Oral Epics of India
4. Mr. S.A. Krishnaiah                        :           Ritual performances of Oral Epics

Session – III
Time 4.15 pm. To 6.15 pm.

Chair Person : Prof S.Chellaperumal

1. Prof. Kusumakar Neupane  :           Oral Epics of Nepal: An Introduction           
2.      Dr. V.Muthinamath                       :           Tradition of Oral Epics  and  its Conservation

3. Dr.K.Shyamala                                :           Epic of Ellamma: The Contested Identities
            4. Dr. D. K. Prabhakar                        :           Erukamma Katha: The Study of a Caste Myth          5.  Dr. V. Jayarajan                                 :           Performers Rights: Theyyam Epics of Kerala
                                    Video show on ORAL EPICS OF IRULIGAS by
                                    Dr. M.  Byregowda, Secretary, K.S.M.  Trust, Bangalore
21st August 2014
Session IV
Time: 9.45 a.m. To 11.30 a.m.

Chair Person:  Prof. S. Jeyasankar

1. Ms. Nilza Angmo                            :           Oral Epic, which has a foot print in Tibet,
            Central Asia and China          
2. Ms. Hina Hkajuria                           :           Narratives on Bharthrihari

3. Dr. T. Maneppa                               :           Singing Styles of Folk Epics of Andhra
4. Prof. Nanumasaswamy                   :           Oral Narratives of Andhrapradesh
5. Ms. Piyashi Dutta                           :           Oral Epic and Society of India’s North East -
                                                                                    An insight of the Khasi Community

Session V
Time:  11.30 a m to 1.30 p m

Chair Person: Prof. A. V. Navada
1.      Dr. Narayana Neupane                        :           Folk Theatre: An existence  of Oral Epics in
   Nepal
2.      Prof. Peta Srinivasulu Reddy             :           Oral Epics of Lord Venkateshwara: An
                                                                                     Analytical Study
      3.   Dr. Giribala Mohanty, West Bengal:               Oral Epics of Odissa
      4    Dr. T. Malakondaiah                           :           Oral Epics: As an Enquiry into History
      5.   Rakesh Soni                                        :           Narratives of Baigas of Madhya Pradesh




Session – VI
Time 2.30 pm to 4.30 pm

Chair Person:  Prof. Peta Srinivasulu Reddy
1.Dr. Akulapally Kumaraswamy         :           Oral Epics of Mallam -  Historical backdrop
2. Dr. Mumtaz Begum                        :           Oral Epics of Karnataka
            3. Arun Jolada Kudligi                        :           Life of Gadri Palanayaka
            4. Ms. Anupama. L. R.                        :           Revisiting Mathileri Kanni – History and
                                                                                    Indentity in the medieval Epics of Kerala
     
                                                                                Cultural Programmes Follows

                                                    Session – VII
 August 22, 2014
Time: 9.30 a.m to 12.30 am.

Chair Person:  Prof. Marina, Slovakia

1.      Dr. Umakantha Avaraddy                                             
2.      Dr. Nagaraja Vadapalli    
3.      Dr. A. Bhoologa Rambai                  
4.      Dr. A. Parimala Gantham                
5.      Dr. Kakanuri Murthy       
      6.   Dr. Nampalli Babu                   
      7.   Dr. P. Gowrisha




Observers:  S. Poulu,
                   K. Balaji Naik,
                   Mallikarjuna
                  T.S. Narasimha Prasad
                  Varadaraju
                   Gunasekhar
                  G. Raveendra
                 

            An Exhibition of Paintings of Folk Epics
                                               
                                    by

            Karnataka Fine Arts University,  Badami.


  

                                                           

Dr. M. N. Venkatesha                                                                        Prof. P. Subbachary
Seminar Director                                                                              Organising Secretary




Dravidian University
Department of Folklore and Tribal studies

Valedictory Function
 of
INTERNATIONAL SEMINAR ON
ORAL EPICS OF SOUTH ASIA
22 August 2014                                   Time: 12 Noon


Chief Guest                 :           Prof. Kankanala Rathnaiah
Vice Chancellor, Dravidian University

President                      :           Prof. P. Subbachary
     Dean, School of Human & Social Sciences

Valedictory Address     :           Prof. M.D. Muthukumaraswamy
           Director, National Folklore Support Centre, Chennai.

Guests of Honour        :           Prof. Ch. A. Rajendra Prasad
         Registrar, Dravidian University

Prof. Ghulam Sarwar Yousof
                                                     University of Malaya
                                               
                                                Prof. S.C. Patil
                                                Special Officer, Karnataka Fine Arts University,
                                               

Seminar Report                        :           Dr. K. Shyamala
Dept., of Folklore and Tribal Studies



                                                                                 Dr. M.N. Venkatesha
                                                                                 Seminar Director