ಸೋಮವಾರ, ಆಗಸ್ಟ್ 4, 2014

ಕೊರಗ ಸಮುದಾಯದ ಚಿತ್ರಗಳು ಭಾಗ-6




ಡಾಕ್ಟರೇಟ್ ಪದವಿ ಪಡೆದ ಕೊರಗ ಸಮುದಾಯದ ಪ್ರಪ್ರಥಮ ಸಾಧಕ

ಹುಟ್ಟು ಬಡತನವ ಮೆಟ್ಟಿ ನಿಂತು, ಪದವಿ ತನಕ ಕೂಲಿ ಮಾಡಿ, ಅರೆಕಾಲಿಕ ಉದ್ಯೋಗ ಮಾಡುತ್ತಲೇ ಪಿಹೆಚ್.ಡಿ ಪದವಿ ಗಳಿಸುವ ಮೂಲಕ ನಿರ್ಲ್ಯಕ್ಷಿತ ಕೊರಗ ಸಮುದಾಯಕ್ಕೊಂದು ಹೆಮ್ಮೆ ತಂದವರು ಬಾಬು ಬೆಳ್ತಂಗಡಿ. 

ಬೆಳ್ತಂಗಡಿ ತಾಲೂಕಿನ ಕಲ್ಮಂಜೆ ಎಂಬ ತೀರಾ ಹಿಂದುಳಿದ ಗ್ರಾಮದ, ಕೊರಗರ ಕುಲಕಸುಬನ್ನೇ ಬದುಕಾಗಿಸಿಕೊಂಡ - ಮತ್ತಡಿ ಕೊರಗ ಮತ್ತು ಚೋಮು ದಂಪತಿಯ ಪುತ್ರರಾದ ಬಾಬು ಕೂಲಿ ಮಾಡುತ್ತಲೇ ಕಾಲೇಜು ಕಲಿತವರು. ಆರ್ಥಿಕ ಮುಗ್ಗಟ್ಟಿನ ಮಧ್ಯೆಯೂ ಮಂಗಳೂರು ವಿಶ್ವವಿಧ್ಯಾನಿಲಯದಲ್ಲಿ ಎಂ ಎಸ್ಸಿ ಪ್ರಥಮ ದರ್ಜೆಯಲ್ಲಿ ಪಾಸಾಗುವ ಮೂಲಕ ಕಲಿಯುವ ಛಲಕ್ಕೆ ಬಲ ನೀಡುತ್ತಾ, ಕೊರಗ ಸಮುದಾಯದ ಶೈಕ್ಷಣಿಕ ರಂಗದಲ್ಲಿ ಮತ್ತೊಂದು ಮಿನುಗುವ ನಕ್ಷತ್ರವಾದರು!
Photo: ಡಾಕ್ಟರೇಟ್ ಪದವಿ ಪಡೆದ ಕೊರಗ ಸಮುದಾಯದ ಪ್ರಪ್ರಥಮ ಸಾಧಕ

ಹುಟ್ಟು ಬಡತನವ ಮೆಟ್ಟಿ ನಿಂತು, ಪದವಿ ತನಕ ಕೂಲಿ ಮಾಡಿ, ಅರೆಕಾಲಿಕ ಉದ್ಯೋಗ  ಮಾಡುತ್ತಲೇ ಪಿಹೆಚ್.ಡಿ ಪದವಿ ಗಳಿಸುವ ಮೂಲಕ ನಿರ್ಲ್ಯಕ್ಷಿತ ಕೊರಗ ಸಮುದಾಯಕ್ಕೊಂದು ಹೆಮ್ಮೆ ತಂದವರು ಬಾಬು ಬೆಳ್ತಂಗಡಿ. 

ಬೆಳ್ತಂಗಡಿ ತಾಲೂಕಿನ ಕಲ್ಮಂಜೆ ಎಂಬ ತೀರಾ ಹಿಂದುಳಿದ ಗ್ರಾಮದ, ಕೊರಗರ ಕುಲಕಸುಬನ್ನೇ ಬದುಕಾಗಿಸಿಕೊಂಡ - ಮತ್ತಡಿ ಕೊರಗ ಮತ್ತು ಚೋಮು ದಂಪತಿಯ ಪುತ್ರರಾದ ಬಾಬು ಕೂಲಿ ಮಾಡುತ್ತಲೇ ಕಾಲೇಜು ಕಲಿತವರು. ಆರ್ಥಿಕ ಮುಗ್ಗಟ್ಟಿನ ಮಧ್ಯೆಯೂ ಮಂಗಳೂರು ವಿಶ್ವವಿಧ್ಯಾನಿಲಯದಲ್ಲಿ ಎಂ ಎಸ್ಸಿ ಪ್ರಥಮ ದರ್ಜೆಯಲ್ಲಿ ಪಾಸಾಗುವ ಮೂಲಕ ಕಲಿಯುವ ಛಲಕ್ಕೆ ಬಲ ನೀಡುತ್ತಾ, ಕೊರಗ ಸಮುದಾಯದ ಶೈಕ್ಷಣಿಕ ರಂಗದಲ್ಲಿ ಮತ್ತೊಂದು ಮಿನುಗುವ ನಕ್ಷತ್ರವಾದರು!

ಅತ್ಯಂತ ಕ್ಲಿಷ್ಟ ವಿಷಯಗಳಲ್ಲಿ ಒಂದಾದ ಸಿಂಥಟಿಕ್ ಆಂಡ್ ಬಯಲಾಜಿಕಲ್ ಸ್ಟಡೀಸ್ ಆನ್ ನೈಟ್ರೋಜನ್ ಸಲ್ಫರ್ ಆಂಡ್ ಆಕ್ಸಿಜನ್ ಕಂಟೈನಿಂಗ್ ಹೈಕ್ರೋಪೆರೋ ಸೈಕಲ್ಸ್ ವಿಷಯವಾಗಿ ಮಂಗಳೂರು ವಿವಿಗೆ ಸಲ್ಲಿಸಿದ ಮಹಾಪ್ರಬಂಧಕ್ಕೆ 'ಡಾಕ್ಟರೇಟ್' ಪದವಿ ಪಡೆಯುವ ಮೂಲಕ ಕೊರಗ ಸಮುದಾಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊದಲಿಗರೆನಿಸಿದರು.

ಅಂತರಾಷ್ಟ್ರೀಯ ಜರ್ನಲ್ನಲ್ಲಿ ಹತ್ತು ಪ್ರಬಂಧ ಹಾಗೂ ರಾಷ್ಟ್ರೀಯ ಜರ್ನಲ್ನಲ್ಲಿ ಬಾಬುರವರ ಮೂರು ಪ್ರಬಂಧಗಳು ಈಗಾಗಲೇ ಪ್ರಕಟವಾಗಿದೆ.

ಪ್ರಸ್ತುತ ಎಂಜಿಎಂ ಕಾಲೇಜು ಉಡುಪಿ ಇಲ್ಲಿ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Best of luck.. Dr. ಬಾಬು
- ಹೃದಯ
ಅತ್ಯಂತ ಕ್ಲಿಷ್ಟ ವಿಷಯಗಳಲ್ಲಿ ಒಂದಾದ ಸಿಂಥಟಿಕ್ ಆಂಡ್ ಬಯಲಾಜಿಕಲ್ ಸ್ಟಡೀಸ್ ಆನ್ ನೈಟ್ರೋಜನ್ ಸಲ್ಫರ್ ಆಂಡ್ ಆಕ್ಸಿಜನ್ ಕಂಟೈನಿಂಗ್ ಹೈಕ್ರೋಪೆರೋ ಸೈಕಲ್ಸ್ ವಿಷಯವಾಗಿ ಮಂಗಳೂರು ವಿವಿಗೆ ಸಲ್ಲಿಸಿದ ಮಹಾಪ್ರಬಂಧಕ್ಕೆ 'ಡಾಕ್ಟರೇಟ್' ಪದವಿ ಪಡೆಯುವ ಮೂಲಕ ಕೊರಗ ಸಮುದಾಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊದಲಿಗರೆನಿಸಿದರು.

ಅಂತರಾಷ್ಟ್ರೀಯ ಜರ್ನಲ್ನಲ್ಲಿ ಹತ್ತು ಪ್ರಬಂಧ ಹಾಗೂ ರಾಷ್ಟ್ರೀಯ ಜರ್ನಲ್ನಲ್ಲಿ ಬಾಬುರವರ ಮೂರು ಪ್ರಬಂಧಗಳು ಈಗಾಗಲೇ ಪ್ರಕಟವಾಗಿದೆ.

ಪ್ರಸ್ತುತ ಎಂಜಿಎಂ ಕಾಲೇಜು ಉಡುಪಿ ಇಲ್ಲಿ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Best of luck.. Dr. ಬಾಬು
- ಹೃದಯ



ಕೊರಗರ ಮನೆತನಗಳು ಮತ್ತು ಬರಿ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟರು, ಬಿಲ್ಲವರ ಹಾಗೆ ಕೊರಗ ಆದಿವಾಸಿ ಜನಾಂಗದಲ್ಲೂ 'ಬರಿ' ಅಥವಾ 'ಬಳಿ' ಎಂಬ ಸಾಂಸಾರಿಕ ವ್ಯವಹಾರಗಳ ಕೂಟ್ಟುಕಟ್ಟುಗಳಿರುವ ಒಳ ಪಂಗಡಗಳಿವೆ. ಸಂಸ್ಕೃತದಲ್ಲಿ ಇದನ್ನು 'ಗೋತ್ರ' ಎನ್ನುತ್ತಾರೆ. ಈ ಪಂಗಡಗಳು ತಮ್ಮ ತಮ್ಮ ಬರಿ/ಬಳಿಯ ಒಳಗೆ ಮದುವೆಯಾಗುವುದು (ಅಂದರೆ 'ಸಗೋತ್ರ ವಿವಾಹ') ನಿಷಿದ್ಧವಾಗಿದೆ. ಕಾರಣ, ಆ ಬರಿಯವರು ಮೂಲದಲ್ಲಿ ಒಂದೇ ಆಗಿರುವುದರಿಂದ, ಈ ನಿಷೇಧ ಆದಿ ಅನಾದಿ ಕಾಲದಿಂದಲೂ ಜಾರಿಯಲ್ಲಿದೆ.

ಕೊರಗರು ತಮ್ಮ ಮೂಲ ಊರಿನ ಮುಖಾಂತರವೇ ಗುರುತಿಸುವುದು ರೂಢಿಯಾದರೂ, ಆ ಮುಖಾಂತರ ಆತನ 'ಬರಿ'ಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಆದರೂ ತಮ್ಮ ಬರಿಯನ್ನು ಹೇಳದೆ, ತಮ್ಮ ಮೂಲವನ್ನೇ ಹೇಳುವುದು ಕೊರಗರ ಹಿರಿಮೆ.

ಕೊರಗರಲ್ಲಿರುವ 'ಬರಿ' ಮತ್ತು ಅವರ ಮೂಲ ಊರಿನ ವಿವರ ಇಲ್ಲಿದೆ.
> ಪಾರ್ಡನ್ನರ್/ ಬಂಗೇರನ್ನೆರ್ (ಬಂಗೇರ) = ಕಿನ್ನಿಗೋಳಿ ಹತ್ತಿರದ 'ಐಕಳ' ಎಂಬ ಊರಿನ ಮೂಲದವರು.
> ತಡ್ಪೆನ್ನರ್/ ತಾಲಿಯಾನ (ಸಾಲಿಯಾನ್) = ಕಿನ್ನಿಗೋಳಿ ಕಬತ್ತರ್ ಹತ್ತಿರದ 'ಬಲ್ಕುಂಜೆ' ಮೂಲದವರು.
> ಕುಂದರನ್ನ (ಕುಂದರ್) = ಉಡುಪಿ ಜಿಲ್ಲೆಯ ಅಡ್ವೆ ಹತ್ತಿರದ 'ಮಜಲೊಟ್ಟು' ಮೂಲದವರು.
> ಮೂಂಕೆನ್ನೆರ್ (ಕೋಟ್ಯಾನ್) = ಪಡುಬಿದ್ರಿ ಹತ್ತಿರದ 'ಕಾಪು' ಮೂಲದವರು.
> ತಿರ್ಗೆನಕ್ಲ್/ ಸೆರಿಗೆನ್ನಾರ್ = ಕಾಪು ಹತ್ತಿರದ 'ಮಡುಂಬು' ಮೂಲದವರು.


ಇಲ್ಲಿ ಸ್ಪಷ್ಟವಾಗಿ ಹೇಳುವುದಾದರೆ ಐಕಳ, ಬಳ್ಕುಂಜೆ, ಮಜಲೊಟ್ಟು, ಕಾಪು, ಮಡುಂಬು - ಕೊರಗರ ಮನೆತನದ ಆದಿ ಕಾಲದ ಮೂಲಗಳು. ಆ ಕಾಲದಲ್ಲಿ ಬಿಳಲನ್ನು ಅರಸುತ್ತಾ, ಬೇಟೆಯಾಡುತ್ತಾ ಒಂದು ರೀತಿಯ ಅಲೆಮಾರಿ ಜೀವನ ಸಾಗಿಸುತ್ತಿದುದರಿಂದ ಮೂಲದಿಂದ ಚದುರಿ ಹೋಗಿ ಪ್ರತ್ಯೇಕ ಪ್ರತ್ಯೇಕ ಜೀವನ ಸಾಗಿಸಿದ್ದಾರೆ. ಆದರೂ ತಮ್ಮ ಮೂಲವನ್ನು ಸ್ಪಷ್ಟವಾಗಿ ಗುರುತಿಸುತ್ತಾರೆ. ಇವಿಷ್ಟು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸಾರ್ವತ್ರಿಕವಾಗಿ ಕಂಡು ಬರುವ 'ಬರಿ'ಗಳು.

ಉಡುಪಿ ಉತ್ತರದಲ್ಲಿರುವ ಅಂದರೆ ಬೈಂದೂರು, ಕೆಂಜೂರು, ಕೊಕ್ಕರ್ಣೆ ಪ್ರದೇಶದ ಕೊರಗರ 'ಬರಿ' ಬೇರೆಯೇ ಇದೆ.
ಅವುಗಳೆಂದರೆ... ಬಜೆಲ್ತರ್, ಬಿಜಿತರ್, ಮೂಂಕುತರ್, ಕುರುನಿತರ್, ಎಲ್ಕಡೆತರ್, ಹರ್ಕಜಿತರ್ ಹೀಗೆ. ಇವರ ಮೂಲ ಹುಡುಕುತ್ತಾ ಹೋದರೆ ಗೋಜಲು ಗೋಜಲಾಗಿ ತೋರುತ್ತದೆ ಮತ್ತು ಸ್ಪಷ್ಟ ಚಿತ್ರಣ ಸಿಗುವುದೇ ಇಲ್ಲ! ಇನ್ನು ಕುಂದಾಪುರ, ಉತ್ತರ ಕನ್ನಡ ಮತ್ತು ಶಿವಮೊಗ್ಗದ ಕೊರಗರ 'ಬರಿ'ಯೂ ಬೇರೆಯೇ ಆಗಿದೆ.

ಇನ್ನು ಕಾಸರಗೋಡು ಜಿಲ್ಲೆಯ ಕೊರಗರ 'ಬರಿ' ಅವರ ಮೂಲ ಊರಿನ ಹೆಸರನ್ನೇ ಹೊಂದಿರುವುದು ಬಲುದೊಡ್ಡ ಹಿರಿಮೆ. 'ಒಗಿಲಾ', 'ಇಛ್ರಾಡಿ', 'ಪೆರುವಾಯಿ', 'ಬಾಯಾರ್', 'ಚಿಪ್ಪಾರ್' ಹೀಗೆ ಐದು ಮನೆತನಗಳನ್ನು ಹೊಂದಿದ್ದು ಸುಮಾರು ಐದು ಸಾವಿರ ಜನಸಂಖ್ಯೆಯನ್ನು ಹೊಂದಿದ್ದಾರೆ.
- ಹೃದಯ


ಕೊರಗರ ಶೈಕ್ಷಣಿಕ ರಂಗದಲ್ಲೊಂದು ಉದಯಿಸಿದ ಹೊಸ ಕ್ಷಿತಿಜ!

ತೀರಾ ಇತ್ತೀಚಿನ ವರೆಗೂ, ಶೋಷಿತ ಕೊರಗ ಜನಾಂಗದ ಶೈಕ್ಷಣಿಕ ರಂಗದತ್ತ ದೃಷ್ಠಿ ಹಾಯಿಸಿದರೆ ತೀವ್ರ ನಿರಾಶೆಗೊಳಗಾಗಬೇಕಾಗುವ ಕಾಲವಿತ್ತು. ಬದಲಾವಣೆಯೆಂಬುದು ಕಾಲದ ನಿಯಮವಾದುದರಿಂದ, ಕೊರಗರ ಶೈಕ್ಷಣಿಕ ಪ್ರಗತಿಯೂ ನಿಧಾನವಾಗಿ ಆಶಾಜ್ಯೋತಿಯ ಪಥದಲ್ಲಿ ಸಾಗಲಾರಂಭಿಸಿತು. ಆ ಆಶಾಜ್ಯೋತಿಯ ಪಥದಲ್ಲಿ ಉದಯಿಸಿದ ಹೊಸ ಕ್ಷಿತಿಜವೇ ಕು. ಸ್ನೇಹ.


ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಉಳ್ತೂರು ಗ್ರಾಮದ ಕೆ ಸ್ನೇಹ, ದ್ವಿತೀಯ ಪಿಯುಸಿಯಲ್ಲಿ ಶೇ 93.5 ಅಂಕ ಗಳಿಸುವ ಮೂಲಕ ಕೀರ್ತಿ ಶಿಖರವೇರಿದ್ದಾಳೆ. ಕಾರ್ಕಳ ತಾಲೂಕಿನ ಚಾರಾದ ನವೋದಯ ಪ್ರೌಢಶಾಲೆಯಲ್ಲಿ ಶೇ 89 ಅಂಕಗಳೊಂದಿಗೆ ಎಸ್ಎಸ್ಎಲ್ಸಿ ತೇರ್ಗಡೆಗೊಂಡ ಸ್ನೇಹ, ಆಳ್ವಾಸ್ ಶಿಕ್ಷಣ ಪ್ರತಿಸ್ಟಾನದ ಉಚಿತ ಶಿಕ್ಷಣ ಯೋಜನೆಯಡಿ - ವಿಜ್ಙಾನ
ವಿಭಾಗಕ್ಕೆ ಪ್ರವೇಶ ಪಡೆದು ಈ ಸಾಧನೆಗೈದಿದ್ದಾಳೆ.

ಕುಂದಾಪುರದ ಕೊರಗ ಸಮುದಾಯದ ಸಂಘಟಕ ವಿ ಗಣೇಶ್ ಕೊರಗ ಮತ್ತು ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಜಯಶ್ರೀ ದಂಪತಿಯ ಪುತ್ರಿಯಾಗಿರುವ ಈಕೆ ಮುಂದೆ ವೈದ್ಯೆಯಾಗುವ ಕನಸು ಕಂಡಿದ್ದಾಳೆ. ಕಂಡ ಕನಸು ನನಸಾಗಲಿ ಎಂಬುದೇ ನಮ್ಮೆಲ್ಲರ ಬಯಕೆ.
Hats up SNEHA..
- ಹೃದಯ




ಮಿಂಚಿ ಮರೆಯಾದ ದೇಹದಾಢ್ಯ ಪಟು...

ಕೊರಗ ಸಮುದಾಯದಲ್ಲಿ ಪ್ರತಿಭೆಗಳಿದ್ದರೂ, ಎಲೆ ಮರೆಯ ಕಾಯಿಯಂತಾದವರೇ ಹೆಚ್ಚು. ಸಿಕ್ಕ ಅವಕಾಶವನ್ನು ಸದ್ಭವಕೆ ಮಾಡಿಕೊಂಡರೆ ಈ ಸಮಾಜದಲ್ಲಿ ತಾವು ಕೂಡ ಮಿಂಚಬಹುದೆಂಬುದಕ್ಕೆ ಉತ್ತಮ ನಿದರ್ಶನವೇ ಕುಮಾರ ಬಜ್ಪೆ.


ಆದಿವಾಸಿಗಳಾದ ಕೊರಗರ ದೇಹಕೃತಿಯ ಬಗ್ಗೆ ಹೇಳುವುದಾದರೆ, ಕೊರಗರು ಮೂಲತಃ ದೇಹದಾಢ್ಯರೆ! ಆದರೆ, ಆ ದೇಹದಾಢ್ಯತೆಯನ್ನು ಸದುಪಯೋಗಪಡಿಸಿಕೊಂಡವರೇ - ನಾಗಪ್ಪ ಮತ್ತು ಸಂಕಿ ದಂಪತಿಯ ಪುತ್ರರಾಗಿರಾಗಿರುವ - ಕೆ. ಕುಮಾರ್ ಗುಂಡಾವು ಪದವು ಬಜ್ಪೆ. ಇವರು ಸಿಂಗಾಪುರದಲ್ಲಿ ನಡೆದ ದೇಹದಾಢ್ಯ ಸ್ಪರ್ಧೆಯಲ್ಲೂ ಕೂಡ ಭಾಗವಹಿಸಿ ಬಂದಿರುವ ಕೊರಗ ಜನಾಂಗದ ಏಕೈಕ ಪಟುವಾಗಿರುತ್ತಾರೆ. ಇವರು ಖ್ಯಾತ ದೇಹದಾಢ್ಯಪಟು ರೈಮನ್ ಡಿಸೋಜರ ಆಪ್ತ ಸ್ನೇಹಿತರಾಗಿದ್ದರು. ದಿನಾಂಕ 16 ಡಿಸೆಂಬರ್ 2007ರಂದು (ತಮ್ಮ 45ನೇ ವಯಸ್ಸಿನಲ್ಲಿ) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
- ಹೃದಯ

ಆದಿವಾಸಿಗಳಿಗೆ ತಾಯ ಹಾಲಿಗಿಂತಲೂ 'ಇಪ್ಪೆ' ಹಣ್ಣಿನ ರಸವೇ ಶ್ರೇಷ್ಠ!
ನೀವಿದನ್ನು ನಂಬಲೇಬೇಕು! HONEY TREE ಎಂದು ಇಂಗ್ಲೀಷ್ ನಲ್ಲಿ ಕರೆಯಲ್ಪಡುವ ಮಾದಕ ಅಂಶಗಳುಳ್ಳ, ಆದಿವಾಸಿಗಳು ಪೂಜಿಸುವ ಒಂದು ಪವಿತ್ರ ಮರ. BUTTER TREE ಎಂದೂ ಕರೆಯುತ್ತಾರೆ. ಕನ್ನಡದಲ್ಲಿ ಇಪ್ಪೆ ಮರ ಎಂದು, ತಮಿಳಿನಲ್ಲಿ ಇಲ್ಲಿಪ್ಪೆ, ತೆಲುಗಿನಲ್ಲಿ ಇಪ್ಪಿ ಎಂದು, ಹಿಂದಿಯಲ್ಲಿ ಮೊಹ್ವ, ಸಂಸ್ಕ್ರತದಲ್ಲಿ ಮಧೂಕ, ಮಂಗಳೂರು ಮತ್ತು ಉಡುಪಿ ಆಸುಪಾಸಿನಲ್ಲಿ 'ನಾನಿಲ್ ಮರ' ಎಂದೂ ಕರೆಯುತ್ತಾರೆ. ಮೋಹ, ಮಹಲ, ಇಲುಪ, ಪೂನಮ, ಮಹುವಾ ಎಂದೂ ನಾನಾ ಭಾಷೆಗಳಲ್ಲಿ ಕರೆಯುವುದುಂಟು. ಇದರ ವೈಜ್ಙಾನಿಕ ಹೆಸರು 'ಬ್ಯಾಸ್ಸಿಯ ಲ್ಯಾಟಿಫೂಲಿಯಾ'. ಇದು 'ಸಪೋಟೇಸಿ' ಕುಟುಂಬ ವರ್ಗಕ್ಕೆ ಸೇರಿದೆ.

ಇದು ಎಲೆ ಉದುರುವ ಮರದ ಜಾತಿಗೆ ಸೇರಿದೆ. ಸುಮಾರು 12 ರಿಂದ 20 ಮೀ ಎತ್ತರ ಬೆಳೆಯುವ ಇಪ್ಪೆ ಮರ, ಒಣ ಹವೆ ಮತ್ತು ತೇವ ಹವೆಯ ಕಾಡುಗಳಲ್ಲಿ ಬಿಡಿ ಬಿಡಿಯಾಗಿ ಬೆಳೆಯುತ್ತದೆ. ಕರ್ನಾಟಕದಲ್ಲಿ ಪಶ್ಚಮ ಘಟ್ಟದ ಕಾಡು ಹೊಳೆಯ ಸಮೀಪದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ತೊಗಟೆ ತಿಳಿ ಕಪ್ಪು ಅಥವಾ ಬೂದು ಬಣ್ಣದಿಂದ ಕೂಡಿದ್ದು, ಗೆಲ್ಲುಗಳು ಚದುರಿ ಚದುರಿದಂತೆ ಇದ್ದು ನೋಡಲು ತುಂಬಾ ಆಕರ್ಷಕವಾಗಿರುತ್ತದೆ. 


ಚಳಿಗಾಲ ಬಂತೆಂದರೆ ಈ ಮರ ವಿಶಿಷ್ಟವಾದ ಕಟು ಮಧುರ ಹೂವಿನ ಪರಿಮಳವನ್ನು ಸೂಸುತ್ತದೆ. ನೇರವಾದ ಕಾಂಡದ ಮೇಲೆ ಕೊಂಬೆಗಳು ಮತ್ತು ತುದಿ ಚೂಪಾಗಿರುವ ಎಲೆಗಳು - ಛತ್ರಿಗಳು ಬಿಡಿಸಿಟ್ಟಂತೆ ಹರಡಿಕೊಂಡಿರುತ್ತದೆ. ವರ್ಷಕ್ಕೊಮ್ಮೆ ಎಲೆ ಉದಿರುವ ಈ ಮರ, ಹೊಸ ಚಿಗುರು ಬಂದಾಗ ತಾಮ್ರಗೆಂಪು ಬಣ್ಣದಿಂದ ನಳನಳಿಸುತ್ತದೆ. ಈ ಸಮಯದಲ್ಲಿ ಬಸ್ತಾರ್ ನ ಆದಿವಾಸಿಗಳು ಮತ್ತು ಮಧ್ಯಪ್ರದೇಶದ ಗೊಂಡ ಆದಿಮಾಸಿಗಳು ಆ ಮರವನ್ನು ಪೂಜಿಸುತ್ತಾರೆ.

ಹೊಸ ಚಿಗುರು ಮಾಗಿ ಎಲೆ ದಪ್ಪಗಾದ ಕೂಡಲೇ ಮರ ಹೂ ಬಿಡಲು ಆರಂಭಿಸುತ್ತದೆ. ಈ ಹೂಗಳು ಮಾಸಲು ಬಣ್ಣವನ್ನು ಹೊಂದಿದ್ದು, ಕೊಂಬೆಯ ತುದಿಯಲ್ಲಿ ಜೋತು ಬಿದ್ದಿರುತ್ತದೆ. ಈ ಹೂವಿನ ಪುಷ್ಪಪಾತ್ರೆಯ ಭಾಗ ಹಣ್ಣಾಗಿ ತಿನ್ನಲು ರುಚಿಯಾಗಿರುತ್ತದೆ. ಹಕ್ಕಿಗಳು ಮತ್ತು ಕಾಡು ಪ್ರಾಣಿಗಳಿಗೂ ಈ ಹಣ್ಣು ಬಹಳ ಪ್ರಿಯ. ಇಪ್ಪೆ ಹಣ್ಣಿನಿಂದ ಆದಿವಾಸಿಗಳು ಹೆಂಡವನ್ನು ತಯಾರಿಸುತ್ತಾರೆ. ಇದರ ಬೀಜದಿಂದ ಎಣ್ಣೆ ತೆಗೆದು ಅಡುಗೆಗೆ ಉಪಯೋಗಿಸುತ್ತಾರೆ. ಕಾಡಿನಲ್ಲಿ ಆಹಾರಕ್ಷಾಮ ಉಂಟಾದಾಗ ಆದಿವಾಸಿಗಳಿಗೆ ಈ ಮರದ ಹೂವು ಹಣ್ಣುಗಳೇ ಆಹಾರ. ಗೊಂಡ ಆದಿವಾಸಿಗಳಲ್ಲಿ ಚಳಿಗಾಲದಲ್ಲಿ ಮಗು ಜನಿಸಿದರೆ, ತಾಯ ಹಾಲಿಗೂ ಮೊದಲು ಇಪ್ಪೆ ಹಣ್ಣಿನ ರಸವನ್ನು ನೆಕ್ಕಿಸುತ್ತಾರೆ. ಯಾಕೆಂದರೆ ಅದು ಆದಿವಾಸಿಗಳ ಪಾಲಿನ ಪವಿತ್ರ ಮತ್ತು ಆರಾಧನೀಯ ಮರ.
- ಹೃದಯ

ಕೊರ್ರೆ ಭಾಷೆಯಲ್ಲಿ ದಿನಗಳು ಮತ್ತು ವಿಷೇಶಗಳು

ಕೊರಗರಲ್ಲಿ ಪ್ರತಿಯೊಂದು ಭಿನ್ನ ಆಚಾರ ವಿಚಾರಗಳಿದೆ. ಹಾಗೆಯೇ, ಕೊರ್ರೆ (ಕೊರಗ) ಭಾಷೆ ಕೂಡ ವಿಶಿಷ್ಟವೇ. ಭಾಗಶಃ ಅವನತಿಯ ಅಂಚಿನಲ್ಲಿರುವ ಕೊರಗ ಭಾಷೆಯಲ್ಲಿ ದಿನಗಳಿಗು ಕೂಡಾ ಬೇರೆಯದೇ ಆದ ಪದಗಳನ್ನು ಉಚ್ಛರಿಸಲಾಗುತ್ತದೆ. ಆ ಪದಗಳು ಮತ್ತು ಅವುಗಳ ವಿಷೇಶಗಳನ್ನಿಲ್ಲಿ ಪಟ್ಟಿಮಾಡಿದ್ದೇನೆ...

ಆದಿತ್ಯವಾರ = ಪೂಜೆದ ದಿನ
ದಿನ ವಿಷೇಶ : ಕ್ರಿಶ್ಚನ್ನರು ಆದಿತ್ಯವಾರದ ದಿನ ಪೂಜೆಗೆ ಹೋಗುತ್ತಿದುದರಿಂದ ಕೊರಗರು ಆ ದಿನವನ್ನ 'ಪೂಜೆದ ದಿನ' ಎನ್ನುತ್ತಿದ್ದರು!!

ಸೋಮವಾರ = ದೇವೆರ್ ದಿನ
ದಿನ ವಿಷೇಶ : ಪ್ರತೀ ಸೋಮವಾರ ದಿನ ದೇವಸ್ಥಾನಗಳಲ್ಲಿ ಸಮರಾಧನೆ ನಡೆಯುತ್ತಿದ್ದುದರಿಂದ, ಕೊರಗರು ಆ ದಿನವನ್ನು 'ದೇವೆರ್ ದಿನ' ಎನ್ನುತ್ತಿದ್ದರು.

ಮಂಗಳವಾರ = ಗದಿಗೆ ದಿನ
ದಿನ ವಿಷೇಶ : ಈ ದಿನ ಕಾಪು ಮಾರಿಗುಡಿಯಲ್ಲಿ ಗದ್ದಿಗೆ ಇಡುವ ದಿನ. ಹಾಗಾಗಿ ಕೊರಗರು ಮಂಗಳವಾರವನ್ನು 'ಗದಿಗೆ ದಿನ' ಎನ್ನುತ್ತಿದ್ದರು.

ಬುಧವಾರ = ಪಕ್ಕಿ ದಿನ
ದಿನ ವಿಷೇಶ : ಈ ದಿನದ ಗೌರವ ಹಕ್ಕಿಗಳಿಗೆ.

ಗುರುವಾರ = ಕೊದಂಟಿ ದಿನ
ದಿನ ವಿಷೇಶ : ತೆಂಗಿನ ಕಾಯಿಯ ತೊಗಟೆಯಿಂದ ಹಗ್ಗ ತಯಾರಿಸಲು ಕೊರಗರು ಗುರೆಜಿದ ಮರದ ದಂಡನ್ನು ಉಪಯೋಗಿಸುತ್ತಿದ್ದರು. ಹಾಗಾಗಿ, ಗುರುವಾರಕ್ಕೆ 'ಕೊದಂಟಿ ದಿನ' ಎನ್ನುತ್ತಾರೆ. 'ಕೊದಂಟಿ' ಎಂದರೆ ದಂಡು (ದಪ್ಪಗಿನ ಮರದ ತುಂಡು) ಎಂದು ಅರ್ಥ.

ಶುಕ್ರವಾರ = ಸಂತೆ ದಿನ
ದಿನ ವಿಷೇಶ : ಪ್ರತೀ ಶುಕ್ರವಾರ ಕಾಪು ಪೇಟೆ ಮತ್ತು ಮೂಡಬಿದಿರೆ ಪೇಟೆಗಳಲ್ಲಿ ಸಂತೆ ವ್ಯಾಪಾರ ನಡೆಯುತ್ತಿದುದರಿಂದ, ಕೊರಗರ ಆ ದಿನವನ್ನು 'ಸಂತೆ ದಿನ' ಎನ್ನುತ್ತಿದ್ದರು!


ಶನಿವಾರ = ಮರ ಎಲ್ತ ದಿನ
ದಿನ ವಿಷೇಶ : ಅಳಿಲುಗೆ ಕೊರಗರು 'ಮರ ಎಲಿ' ('ಮರದ ಇಲಿ' ಎಂದು ಅರ್ಥ) ಎನ್ನುತ್ತಿದ್ದರು. ಅಷ್ಟೇ ಅಲ್ಲ ಶನಿವಾರದ ದಿನಕ್ಕೆ 'ಮರ ಎಲಿತ ದಿನ / ಮರ ಎಲ್ತ ದಿನ ' ಎನ್ನುತ್ತಿದ್ದರು.

ಇವಿಷ್ಟು ವಾರದ ದಿನಗಳು ಮತ್ತು ಆ ದಿನದ ವಿಷೇಶಗಳಾದರೆ, ಇನ್ನು ಮಗು ಸೋಮವಾರ ಜನಿಸಿದರೆ ಗಂಡು ಮಗುವಿಗೆ 'ಚೋಮ, ತೋಮ' ಎಂದು, ಹೆಣ್ಣು ಮಗುವಾದರೆ 'ತೋಮು, ಚೋಮು' ಎಂದು,
ಮಂಗಳವಾರ ಜನಿಸಿದ ಗಂಡು ಮಗುವಿಗೆ 'ಅಂಗರೆ, ಅಂಗರ' ಎಂದು ಹೆಣ್ಣು ಮಗುವಿಗೆ 'ಅಂಗುರಿ' ಎಂದು,
ಬುಧವಾರ ಜನಿಸಿದ ಗಂಡು ಮಗುವಿಗೆ 'ಬೂದೆ' ಎಂದು, ಹೆಣ್ಣು ಮಗುವಿಗೆ 'ಬೂದು' ಎಂದು,
ಗುರುವಾರ ಜನಿಸಿದ ಗಂಡು ಮಗುವಿಗೆ 'ಗುರುವೆ, ಗುರುವ' ಎಂದು, ಹೆಣ್ಣು ಮಗುವಿಗೆ 'ಗುರ್ಬಿ' ಎಂದು,
ಶುಕ್ರವಾರ ಜನಿಸಿದ ಗಂಡು ಮಗುವಿಗೆ 'ತುಕ್ರ, ತುಕ್ರೆ' ಎಂದು, ಹೆಣ್ಣು ಮಗುವಿಗೆ 'ತುಕ್ರು'
ಶನಿವಾರ ಜನಿಸಿದ ಗಂಡು ಮಗುವಿಗೆ 'ತನಿಯ, ಚನಿಯ' ಹೆಣ್ಣುಮಗುವಿಗೆ 'ಚನಿಯಾರು, ತನಿಯಾರು'
ಆದಿತ್ಯವಾರ ಹುಟ್ಟಿದ ಗಂಡು ಮಗುವಿಗೆ 'ಐತೆ', ಹೆಣ್ಣುಮಗುವಿಗೆ 'ಐತು' ಎಂದು ಹೆಸರಿಡುತ್ತಿದ್ದರು. ಇದು ಮತ್ತೊಂದು ದಿನ ವಿಷೇಶವಷ್ಟೆ!
- ಹೃದಯ


ಕೊರಗರು ತಯಾರಿಸುವ ಕಾಡು ಬಿಳಲಿನ ಪರಿಕರಗಳು..
ಕಾಡು ಬಳ್ಳಿಯಲ್ಲಿ ಅದೆಷ್ಟೋ ಪ್ರಭೇದಗಳೋ, ಕೊರಗರು ಅದರಿಂದ ತಯಾರಿಸುವ ಪರಿಕರಗಳು ಕೂಡಾ ಅಷ್ಟೇ ವಿಧಗಳು! ಕಾಡಿನೊಳಗಿನ ಸ್ವಚ್ಛಂದ ಬದುಕೇ, ಆ ಸುಂದರ ಪರಿಕರಗಳನ್ನು ಮಾಡುವ ಪಾಠ ಕಲಿಸಿದೆ. ಬಿಳಲುಗಳನ್ನು ಹದಗೊಳಿಸವ ಕಸುರಿ, ನೇಯುವ ನೈಪುಣ್ಯತೆ ಕಾಡಿನ ಮಕ್ಕಳಿಗೆ ಮಾತ್ರ ಸಾಧ್ಯ. ಅದರ ಗಟ್ಟಿತನಕ್ಕೆ, ಆಕರ್ಷಕ ನೆಯ್ಗೆಗೆ ಮತ್ತು ಬಹುಪಯೋಗಕ್ಕೆ ಮನಸೋಲದವರೇ ಇಲ್ಲ. ತುಳುನಾಡಿನ ಕೃಷಿಕರಿಗಂತೂ ಕೊರಗರು ತಯಾರಿಸಿದ ಬಿಳಲಿನ ಪರಿಕರಗಳು ಬೇಕೇ ಬೇಕು. ಆದರೆ ಈಗ ಅದರ ಬದಲು ಪ್ಲಾಸ್ಟಿಕ್ ಮತ್ತು ರಬ್ಬರ್ ದಾಂಗುಡಿ ಇಟ್ಟಿದ್ದು ಕೊರಗರ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಇಲ್ಲದಂತಾಗಿದೆ.

ಕಾಡಿನಲ್ಲಿ ಹೇರಳವಾಗಿ ದೊರಕುವ ಬಿಳಲುಗಳನ್ನು ಅದರ ಬುಡದಿಂದ ಒಂದು ಕೈ ದೂರ ಅಳತೆ (ಅಂದರೆ ಒಂದು ಅಡಿ) ದೂರದಿಂದ ಕತ್ತರಿಸುವುದು ಕೊರಗರ ಸಂಪ್ರದಾಯ. ಯಾಕೆಂದರೆ ಆ ಬಿಳಲು ಮತ್ತೊಮ್ಮೆ ಚಿಗುರು ಬರಬೇಕುಂಬುದೇ ಅವರ ಬಾಳಿನ ನಿಯಮ. ಅದು ತಮ್ಮಿಂದಾಗಿ ನಿರ್ನಾಮ ಆಗಲೇಬಾರದು ಎಂಬುದೇ ಆಶಾಭಾವ. ಆ ಬಿಳಲುಗಳ ಪ್ರಾದೇಶಿಕ ಹೆಸರು ಮತ್ತು ಅದರಿಂದ ಕೊರಗರು ತಯಾರಿಸುತ್ತಿದ್ದ ಉತ್ಪನ್ನಗಳ ಒಂದು ಪಟ್ಟಿ ನಿಮಗಾಗಿ..

ಇಲ್ಲ ಬೂರು : ತಟ್ಟಿ ಕುಡುಪು (ಅಂದರೆ ಪಾತ್ರೆಯಿಂದ ಅನ್ನ ಸೋಸುವ ಸಾಮಾಗ್ರಿ), ಹಾಲಿನ ಅಳತೆಗೋಲು, ಇಡ್ಲಿ ಮಾಡುವ ಪಾತ್ರೆ, ಹೂ ದಾನಿಗಳು ಮತ್ತು ಅಲಂಕಾರಿಕ ವಸ್ತುಗಳು

ಬಿದಿರು : ಗೆರಸೆ ಮತ್ತು ಬುಟ್ಟಿ

ಪಾಂಡಿಲ್ದ ಬೂರ್ : ಗೊಬ್ಬರ ಹೇರುವ ಬುಟ್ಟಿ

ಎಲಿ ಬೂರು : ಸುಮಾರು ಇಪ್ಪತ್ತಕ್ಕೂ ಹೆಚ್ಚು ಆಕಾರದ ಬುಟ್ಟಿಗಳನ್ನು ತಯಾರಿಸಲಾಗುತ್ತದೆ. ಇದರಿಂದ ಬುಟ್ಟಿಗಳು ತುಂಬಾ ಗಟ್ಟಿ ಮುಟ್ಟಾಗಿದ್ದು, ಬಾಳಿಕೆಬರುವಂತದಾಗಿದೆ.

ನೆಡಿಲ್ : ಮರದಂತೆ ಬೆಳೆಯುವ ಇದನ್ನು ಅಡ್ಡಲಾಗಿ ಸಿಗಿದು, ತಮಗೆ ಬೇಕಾದಂತೆ ಹದಗೊಳಿಸುವುದು ಜಾಣ್ಮೆಯ ಕೆಲಸ. ಇದರಿಂದ ಅನ್ನ ಹಾಕಿಡುವ ಬುಟ್ಟಿಗಳನ್ನು ನೇಯುತ್ತಾರೆ. ಇದರ ಬುಟ್ಟಿ ತಿಳಿ ಗುಲಾಬಿ ಬಣ್ಣದಿಂದಾಗಿ ಆಕರ್ಷಕವಾಗಿ ಕಾಣುತ್ತದೆ ಮತ್ತು ಹೆಚ್ಚು ಬಾಳಿಕೆ ಬರುತ್ತದೆ.

ಬೆತ್ತ : ತೊಟ್ಟಿಲು, ಪಟ್ಟಿಗೆ, ಅಜ ಕುರುವೆ (ಒಂದು ಕಳಹ ಅಕ್ಕಿ ಹಾಕಿಡಬಹುದಾದ - ನಾಲ್ಕು ಮೂಲೆಯಲ್ಲಿ ನಾಲ್ಕು ಕೈಗಳಿರುವ ಹೆಡಿಗೆ.)

ಪರಂಟಲ್ಗೆದ ಬೂರು ಮತ್ತು ಮಾದಿರ್ದ ಬೂರು : ದೊಡ್ಡದಾದ ಆಕಾರದ ಗೃಹಪಯೋಗಿ ಬುಟ್ಟಿಗಳು.

ಮದೊಡಿ : ಹೆಡಿಗೆಗಳನ್ನು ತಯಾರಿಸುತ್ತಿದ್ದರು. ಅತೀ ಹೆಚ್ಚು ಬಾಳಿಕೆ ಬರುವಂತದ್ದು.

ಮಿಟಯ್ದ ಬೂರು : ತೆರಿಯೆ (ಅಡುಗೆ ಮಾಡುವ ಪಾತ್ರೆಗಳನ್ನು ಇಡಲು ಉಪಯೋಗಿಸುವ ಸಣ್ಣದಾದ ವೃತ್ತಾಕಾರದ ವಸ್ತು)

ಕೇದಗೆಯ ಗಿಡದ ಬೇರಿನಿಂದಲೂ ಅಗಲವಾದ ಮತ್ತು ಗಟ್ಟಿ ಮುಟ್ಟಾದ ಹೆಡಿಗೆಗಳನ್ನು ತಯಾರಿಸಲಾಗುತ್ತದೆ. ಸುಮಾರು ನಲ್ವತ್ತು ವಿವಿಧ ಆಕಾರಗಳಲ್ಲಿ ತಯಾರಿಸಲಾಗುತ್ತಾರದರೂ, ಪ್ರತಿಯೊಂದರ ಅಳತೆಗೋಲುಗಳು ಸರಿ ಪ್ರಮಾಣದಲ್ಲಿದ್ದು ಕೊರಗರ ವಿಷೇಶ ಮತ್ತು ಬಾರ್ಕೂರಿನಿಂದ ಮಂಗಳೂರಿನವರೆಗೂ - ಎಲ್ಲಿಯೇ ಯಾರೇ ಮಾಡಿದರೂ ಅದರಲ್ಲಿ ವ್ಯತ್ಯಾಸ ಕಾಣಲಾಗದು!! ದುರದೃಷ್ಟವಶಾತ್ ಈಗ ಅದ್ಯಾವುದೇ ಪರಿಕರಗಳಿಗೂ ಯಾವುದೇ ಬೇಡಿಕೆ ಇಲ್ಲ.
- ಹೃದಯ

ಕಾಮೆಂಟ್‌ಗಳಿಲ್ಲ: