ಭಾನುವಾರ, ಆಗಸ್ಟ್ 24, 2014

ನಮ್ಮ ನಡುವಿನ ಅಪ್ರತಿಮ ಕಥನಕಾರ ಅನಂತಮೂರ್ತಿ

- ಶಿವ ವಿಶ್ವನಾಥನ್


ಸೌಜನ್ಯ: ವಾರ್ತಾ ಭಾರತಿ


   ಸಾವು ಮತ್ತು ದೇವರ ಕುರಿತಾಗಿ ನನಗೆ ಆಗಾಗ ಬಹಳ ಕೋಪ ಬರುತ್ತದೆ. ಅವರು ಈ ಲೋಕದ ಅಮೂಲ್ಯ ರತ್ನಗಳನ್ನು ಕೊಂಡೊಯ್ಯುತ್ತಾರೆ. ಇದು ನನ್ನನ್ನು ಬಹಳ ದುಃಖಿತನನ್ನಾಗಿ ಮಾಡುತ್ತದೆ. ಅವರನ್ನು ಕಳೆದುಕೊಂಡಿದ್ದರಿಂದ ನಾನು ಅಸಹಾಯಕನಾದದ್ದಷ್ಟೇ ಅಲ್ಲ, ನನ್ನ ಜಗತ್ತು ಕಿರಿದಾಗುತ್ತಿದೆ, ನನ್ನ ಸ್ನೇಹಿತರ ಗುಂಪು ಕುಸಿಯುತ್ತಿದೆ ಎಂಬ ಕಾರಣಗಳಿಂದಲೂ ನನಗೆ ದುಃಖ ವಾಗುತ್ತಿದೆ. ನನ್ನ ಸ್ನೇಹಿತ ಮತ್ತು ಹಿತಚಿಂತಕ ರಾಮು ಗಾಂಧಿ ನಿಧನರಾದಾಗಲೂ ಹೀಗೆ ಆಗಿತ್ತು. ಓರ್ವ ಅತ್ಯುತ್ತಮ ರಸಾಯನಶಾಸ್ತ್ರಜ್ಞರಾಗಿದ್ದ ಸಿ.ವಿ.ಶೇಷಾದ್ರಿ ಅವರು ಸಮುದ್ರದಲ್ಲಿ ಕಳೆದು ಹೋದಾಗಲೂ ನನಗೆ ಇಂತಹದೇ ಅನುಭವವಾಗಿದೆ.

  ಕನ್ನಡದ ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ಅವರು ಶುಕ್ರವಾರ ಸಂಜೆ ತೀರಿ ಹೋದಾಗ ನಾನು ಸಂಪೂರ್ಣವಾಗಿ ಕುಸಿದು ಹೋದೆ. ಒಂದು ಬ್ರಹ್ಮಾಂಡವೇ ಕುಸಿದ ಅನುಭವವಿದು. ಬದುಕುವ ಒಂದು ರೀತಿಯೇ ಕಳೆದುಹೋದಂತಹ ಅನುಭವ. ಒಬ್ಬ ಲೇಖಕನಾಗಿ, ಒಬ್ಬ ಸಾರ್ವಜನಿಕ ಬುದ್ಧಿಜೀವಿಯಾಗಿ ಮನುಷ್ಯನ ಸಾಧನೆಗಳು ಮುಖ್ಯವಾಗುವುದಿಲ್ಲ. ಆದರೆ ಮನುಷ್ಯನಾಗಿ ಅವನ ಸಾಧನೆಗಳು ಹೆಚ್ಚು ಮಹತ್ವಪೂರ್ಣ ಎನಿಸಿಕೊಳ್ಳುತ್ತವೆ.

  ಅನಂತಮೂರ್ತಿಯವರು ಕೊನೆ ಗಳಿಗೆಯ ತನಕವೂ ಹೋರಾಡುತ್ತಲೇ ಬಾಳಿದರು. ಒಬ್ಬರು ಕನಸು ಕಾಣುವ ಬಹುತೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು. ಇದೇನೂ ಪಠ್ಯಕ್ರಮದ ಪಟ್ಟಿಯಲ್ಲ, ವೃತ್ತಿ ಎಂಬುದು ಶಾಪಿಂಗ್ ಚೀಟಿಯೇನೂ ಅಲ್ಲ. ಆದರೆ ಅವರ ಆತ್ಮಕಥೆ ಎಂಬುದು ಬುದ್ಧಿಜೀವಿಯೊಬ್ಬನ ಅತ್ಯುತ್ತಮ ಸಮಾಜಶಾಸ್ತ್ರ ಎಂಬುದು ಅಷ್ಟೇ ಸತ್ಯ ಸಂಗತಿ.

 ಮೈಸೂರು ಸಂಸ್ಥಾನದಲ್ಲಿ 1932ರಲ್ಲಿ ಅನಂತಮೂರ್ತಿ ಜನಿಸಿದರು. ಕಾಡಿನ ಪರಿಸರದಲ್ಲಿ ಬದುಕಿದರು. ಒಬ್ಬ ಬ್ರಾಹ್ಮಣ ಬಾಲಕನಾಗಿ ಪ್ರತಿಯೊಂದೂ ಪವಿತ್ರ ಎಂಬ ಜಗತ್ತಿನಲ್ಲಿ ಅವರು ಬಾಳಿದರು. ಅನಂತಮೂರ್ತಿಯವರು ಈ ಎಲ್ಲ ನೆನಪುಗಳ ಕಾವಲುಗಾರ. ಬ್ರಾಹ್ಮಣ ಸಂವೇದನೆಯ ಪಾರುಪತ್ಯಗಾರ. ಈ ನೆನಪುಗಳ ಜೊತೆ ಜೊತೆಗೆ ಅದರ ಅತಿದೊಡ್ಡ ಟೀಕಾಕಾರ. ನೆನಪುಗಳು ಅಂದರೆ, ಅದು ನಶ್ಯದ ವಾಸನೆಯಂತಿರಬಹುದು. ಅದು ಬೇರೆಬೇರೆ ಹಂತಗಳಲ್ಲಿ ಬೆಳೆಯುತ್ತಿರುವ ಹಲಸಿನ ಹಣ್ಣು ಆಗಿರಬಹುದು. ಈ ಹಣ್ಣಿನ ಪರಿಮಳ ಜಾನುವಾರುಗಳನ್ನು ಕೆರಳಿಸುತ್ತದೆ. ಎಳೆಯ ಪ್ರಾಯದಲ್ಲಿ ಅವರು ಬದುಕಿದ್ದ ಮನೆಯ ನೆನಪುಗಳು ಮಾನವಶಾಸ್ತ್ರೀಯ ವರ್ಣನೆಯಂತಿವೆ. ಆದರೂ ಬ್ರಾಹ್ಮಣ್ಯಲೋಕದ ಅತ್ಯುತ್ತಮ ಸಾಹಿತ್ಯ ಅದಾಗಿತ್ತು. ಅದೀಗ ಬಹುತೇಕ ಮಾಸಿ ಹೋಗಿದೆ.

  ಅನಂತಮೂರ್ತಿಯವರು ಹಳ್ಳಿಯ ಸಾಂಪ್ರದಾಯಿಕ ಸಂಸ್ಕೃತ ಶಾಲೆಯಲ್ಲಿ ಕಲಿತವರು. ಅದೊಂದು ಕಾಸ್ಮೊಪಾಲಿಟನ್ ಮತ್ತು ಸ್ಥಳೀಯ ಲೋಕವೂ ಆಗಿತ್ತು. ಸಮಾಜವಾದ ಎಂಬುದು ಸರಕಾರದಿಂದ ಆರಂಭವಾಗುವುದಿಲ್ಲ, ಬದಲಿಗೆ ಸಾಮಾನ್ಯ ಶಾಲೆಯಿಂದಲೇ ಆರಂಭವಾಗುತ್ತದೆ ಎಂಬುದನ್ನು ಅವರಿಗೆ ಕಲಿಸಿದ ಜಗತ್ತು ಅದಾಗಿತ್ತು. ನಮ್ಮ ಮಕ್ಕಳಿಗೆ ಕನ್ನಡ ಭಾಷೆ ಕಲಿಸುವ ಸಾಂಪ್ರದಾಯಿಕ ಶಾಲೆಗಳು ಕೋಟ್ಯಂತರ ಭ್ರೂಣಬೇರುಗಳನ್ನು ಸೃಷ್ಟಿಸಿದರೆ, ದುಬಾರಿ ಇಂಗ್ಲಿಷ್ ಶಾಲೆಗಳಲ್ಲಿ ಮಗು ತನ್ನ ಮಾತೃಭಾಷೆಯ ಕೊಂಡಿಯನ್ನೇ ಕಳೆದುಕೊಳ್ಳುತ್ತದೆ. ಇದೇ ನಿಜವಾದ ವರ್ಗಭೇದ, ಜೊತೆಗೆ ಸಾಂಸ್ಕೃತಿಕ ಭೇದವೂ ಆಗಿದೆ. ಇದು ಸಮಾಜವನ್ನೂ ಒಡೆಯುತ್ತದೆ ಎಂಬುದನ್ನು ಅವರು ಬಲವಾಗಿ ನಂಬಿದ್ದರು.

 ಇಂಗ್ಲಿಷ್ ಭಾಷೆ ಎಂಬುದು ಕಾಸ್ಮೊಪಾಲಿಟನ್‌ವಾದವನ್ನು ಬೆಂಬಲಿಸುತ್ತದೆ. ಮನುಷ್ಯರನ್ನು ಪರಸ್ಪರ ದೂರೀಕರಿಸುತ್ತದೆ. ನಮ್ಮ ದೇಶದ ಉಚ್ಚ ವರ್ಗವು ಅನಿವಾರ್ಯವಾಗಿ ಆಯ್ಕೆ ಮಾಡಿಕೊಂಡಿರುವ ಕೆಟ್ಟ ನಂಬಿಕೆ , ಆತ್ಮವಿಶ್ವಾಸ ಇದಾಗಿದೆ. ಪಾಶ್ಚಿಮಾತ್ಯ ಜಗತ್ತು ನಾವು ತಿಳಿದಷ್ಟು ಸರಳವಾಗಿಲ್ಲ. ಆದರೆ ಭಾರತದ ನಮ್ಮ ಗ್ರಾಮಗಳಲ್ಲಿ ಗಾಂಧಿ ಮತ್ತು ಗೆಲಿಲಿಯೊ ಬಹುಶಃ ಸಮಕಾಲೀನರಾಗಬಹುದಾಗಿತ್ತು. ಈ ಜೀವಂತ ಜಗತ್ತಿನಲ್ಲಿ ಅನಂತಮೂರ್ತಿಯವರ ಎರಡು ಮಹತ್ವದ ಕೃತಿಗಳಾದ ‘ಸಂಸ್ಕಾರ’ ಮತ್ತು ‘ಭಾರತೀಪುರ’ಗಳು ರೂಪುಗೊಂಡವು. ಇಂಗ್ಲಿಷ್‌ನಲ್ಲಿ ಇಂತಹ ಒಂದು ಜಗತ್ತನ್ನು ಅವರು ಕಲ್ಪನೆ ಮಾಡಿಕೊಳ್ಳುವುದು ಬಹುಶಃ ಬಹಳ ಕಷ್ಟವಾಗಬಹುದು.

‘ಒಂದು ಕಲಾಕೃತಿ ತನ್ನ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಬಹುಶಃ ಒಬ್ಬ ಭಾರತೀಯನಿಗೆ ಭಾರತೀಯ ಭಾಷೆಯೇ ಮಾಧ್ಯಮ ಎಂದು ಕಾಣುತ್ತದೆ’ ಎಂದು ಅವರು ಹೇಳಿಕೊಂಡಿದ್ದರು. ಓರ್ವ ಭಾರತೀಯನಾಗಿ ಹಲವು ಕಾಲಮಾನಗಳಲ್ಲಿ ಜೀವಿಸಿರುವ ಅವರ ಅಂತರಾತ್ಮದಲ್ಲಿರುವ ಕಥೆಗಾರನಿಗೆ ಕಾಲ ಮತ್ತು ನೆನಪು ಬಹಳ ನಿರ್ಣಾಯಕ.
ಮೂವತ್ತರ ದಶಕದಲ್ಲಿ ಐರೋಪ್ಯ ರಾಜಕೀಯದ ಕುರಿತು ಪಿಎಚ್‌ಡಿ ಪೂರೈಸಲು ಅನಂತಮೂರ್ತಿ ಬರ್ಮಿಂಗ್‌ಹ್ಯಾಂಗೆ ಹೋದರು. ಕೊಟ್ಟಾಯಂನಲ್ಲಿ ವಿಶ್ವವಿದ್ಯಾಲಯ ಉಪಕುಲಪತಿಯಾದರು. ಫಿಲಂ ಮತ್ತು ಚಲನಚಿತ್ರ ಸಂಸ್ಥೆಯ ಅಧ್ಯಕ್ಷರಾದರು. ಸಾಹಿತ್ಯ ಅಕಾಡಮಿಯ ಮುಖ್ಯಸ್ಥರಾದರು.

 ಕೇವಲ ಪದವಿಯಿಂದ ಅವರು ಖ್ಯಾತನಾಮರಾಗಲಿಲ್ಲ. ಬದಲಿಗೆ ಸಂಸ್ಕೃತಿಯೊಂದಿಗಿನ ನಿರಂತರ ಸಂವಾದಗಳು ಅವರನ್ನು ನೈಜವಾಗಿ ರೂಪಿಸಿದವು. ಅವರು ಗೆಳೆತನದ ಅಧ್ವರ್ಯು. ಅಶೀಶ್ ನಂದಿ, ಮನು ಚಕ್ರವರ್ತಿ ಮತ್ತು ಗಿರೀಶ್ ಕಾಸರವಳ್ಳಿ ಅವರಂತಹ ಅವರ ಹಲವು ಸ್ನೇಹಿತರ ಬಳಿ ಹೇಳಲು ಇನ್ನಷ್ಟು ಕಥೆಗಳಿರಬಹುದು. ಅವರು ಮನುಷ್ಯರ ಕುರಿತು ಕುತೂಹಲಿಯಾಗಿದ್ದರು. ಜೀವನವನ್ನು ಸಂಭ್ರಮಿಸಿದರು. ಮಧುಪಾನದ ನಡುನಡುವೆ ಲಿಮೆಯೆ, ಲೋಹಿಯಾ, ಮಾರ್ಟಿನ್ ಗ್ರೀನ್ ಇಲ್ಲವೇ ಕುವೆಂಪು ಕುರಿತಾದ ಕಥೆಗಳನ್ನು ಹೇಳುತ್ತಿದ್ದರು. ಭಾಷೆಗಳ ಜಗತ್ತಿನ ಒಗ್ಗಟ್ಟಾಗಿ ಅದು ಕಾಣುತ್ತಿತ್ತು.

  ಮೋದಿ ಕುರಿತಾದ ಅವರ ಟೀಕೆಗಳು ಹಾಗೂ ಮೋದಿ ಆಳ್ವಿಕೆಯ ಜಗತ್ತಿನಲ್ಲಿ ನಾನು ಬದುಕಲಾರೆ ಎಂಬ ಅವರ ಹೇಳಿಕೆಗಳಿಗೆ ಕೆಲವು ಜನರಿಂದ ಅವರು ಬೈಗುಳಗಳನ್ನು ಕೇಳಬೇಕಾಯಿತು. ಆದರೂ ಅವರ ಧೈರ್ಯಕ್ಕೆ ಮೆಚ್ಚಬೇಕು. ಗಿರಿರಾಜ್ ಕಿಶೋರ್‌ನಂತಹ ವ್ಯಕ್ತಿಗಳು ಪಾಕಿಸ್ತಾನಕ್ಕೆ ತೆರಳುವ ರೈಲಿನಲ್ಲಿ ಅವರು ಹೋಗಬೇಕು ಎಂದು ಒತ್ತಾಯಿಸಬಹುದು. ಅದಾಗಿದ್ದರೆ ಅನಂತಮೂರ್ತಿ ಮತ್ತು ಮಾಂಟೊ ಅವರು ಪರಸ್ಪರ ತಮ್ಮ ನಡುವಿನ ಕಥೆಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರೇನೋ. ದೇಶಗಳನ್ನು ಒಗ್ಗೂಡಿಸುವ ಉಪಾಯಗಳ ಕುರಿತು ಮಾತನಾಡುತ್ತಿದ್ದರೋ ಏನೋ. ಅಂತಹ ಒಂದು ರೈಲು ಪ್ರಯಾಣ ವಿಭಿನ್ನವಾಗಿರುತ್ತಿತ್ತು.

ಅನಂತಮೂರ್ತಿಯವರು ರಾಜಕೀಯವಾಗಿ ಹರಿತವಾದ ನಾಲಗೆಯುಳ್ಳವರು. ಅವರು ತಪ್ಪುಗಳನ್ನೂ ಮಾಡಿದ್ದಾರೆ. ಆದರೆ ಈ ತಪ್ಪುಗಳನ್ನು ಒಳನೋಟಗಳಾಗಿ ಪರಿವರ್ತನೆ ಮಾಡಿದರು. ಅವರು ವಿವಾದಗಳನ್ನು ಹುಟ್ಟು ಹಾಕಿದರು. ಆದರೆ ತಾವು ನೀಡಿದ ಸಹಯೋಗವನ್ನು ಧ್ವಂಸಗೊಳಿಸಲಿಲ್ಲ.‘ಬೆಂಗಳೂರ್’ ಮಹಾನಗರವನ್ನು ‘ಬೆಂಗಳೂರು’ ಎಂದು ಮರುನಾಮಕರಣ ಮಾಡುವುದರ ಬಗ್ಗೆ ಅವರು ಪ್ರಬಲ ಒತ್ತಾಯ ಮಾಡಿದ್ದು ನನಗೆ ನೆನಪಿದೆ. ಆದರೂ ಆಶೀಶ್ ನಂದಿ ಅವರ ಟೀಕೆಗಳನ್ನು ಆಲಿಸಿದರು ಮತ್ತು ಅದಕ್ಕೆ ತಾಳ್ಮೆಯಿಂದ ಉತ್ತರಿಸಿದರು.

ಕೆ.ವಿ.ಸುಬ್ಬಣ್ಣನವರ ಜೊತೆಗೆ ಸೇರಿಕೊಂಡು ಅವರು ಹೆಗ್ಗೋಡುನಂತಹ ಅಭೂತಪೂರ್ವ ಜಗತ್ತನ್ನು ನಿರ್ಮಾಣ ಮಾಡಿದರು. ನಾಟಕ ಮತ್ತು ಕನ್ನಡ ಭಾಷೆಗಳು ಜೀವಂತಗೊಳ್ಳುವ ವೇದಿಕೆಯೊಂದನ್ನು ಸೃಷ್ಟಿಸಿದರು.ಬಹುತೇಕ ಬುದ್ಧಿಜೀವಿಗಳು ಪುಟಸೂಚಿಗಳಾಗಿ, ಅಲ್ಲಿ-ಇಲ್ಲಿ ಉಲ್ಲೇಖಗಳಾಗಿ ಮತ್ತು ನಿಧನ ಸುದ್ದಿಯಾಗಿ ಮರೆಯಾಗುತ್ತಾರೆ. ಆದರೆ ಅನಂತಮೂರ್ತಿಯವರು ಕರ್ನಾಟಕದ ಮನೆಮನೆಗಳಲ್ಲಿ ಜನಪದರಾಗಿ ಬದುಕುತ್ತಾರೆ. ಈ ಭಾಷಾ ಪ್ರತಿಭೆಯ ಕುರಿತಾದ ಸಂವಾದಗಳಲ್ಲಿ, ಕಾಲೇಜಿನ ಚರ್ಚೆಗಳಲ್ಲಿ ಅವರು ನೆನಪಿನಲ್ಲಿ ಉಳಿಯುತ್ತಾರೆ.
 
ಅವರ ನಿಧನದ ಕುರಿತಾದ ಸುದ್ದಿಯೇ ಕಥಾನಕದ ಜಲಪಾತವನ್ನೇ ಸೃಷ್ಟಿಸುತ್ತದೆ. ಅಲ್ಲಿ ಕಥೆಗಳಿವೆ, ದಂತಕಥೆಗಳಿವೆ, ಐತಿಹ್ಯಗಳಿವೆ. ನಮ್ಮ ನಡುವಿನ ಅಪ್ರತಿಮ ಕಥನಕಾರನನ್ನು ಗೌರವಿಸಲು ಅವುಗಳು ಪರಸ್ಪರ ಸ್ಪರ್ಧಿಸುತ್ತವೆ, ಒಗ್ಗೂಡುತ್ತವೆ.

 (ಕೃಪೆ: ದ ಹಿಂದೂ)

ಕಾಮೆಂಟ್‌ಗಳಿಲ್ಲ: