-ಶಿವಸುಂದರ್
ಬಿಜೆಪಿ ಪಕ್ಷದ ಪ್ರಣಾಳಿಕೆ, ಸಂವಿಧಾನ ಮತ್ತು ತತ್ವ ಸಿದ್ಧಾಂತಗಳು ನಿಂತಿರುವುದೇ ಹಸಿಸುಳ್ಳುಗಳು ಮತ್ತು ಅರ್ಧಸತ್ಯಗಳ ಮೇಲೆ. ಆದರೆ ಹಿಟ್ಲರನ ಪಕ್ಕಾ ಅನುನಾಯಿಗಳಾಗಿರುವ ಈ ಆಧುನಿಕ ಫ್ಯಾಸಿಸ್ಟರು ಸುಳ್ಳುಗಳನ್ನೇ ಸಾವಿರ ಬಾರಿ ಪಲುಕುತ್ತಾ ಅದನ್ನೇ ಪರಮಸತ್ಯವೆಂದು ಜನರನ್ನು ನಂಬಿಸಿ ದಾರಿತಪ್ಪಿಸು ತ್ತಿದ್ದಾರೆ. ಇವರು ಎಂಥಾ ನೀತಿಹೀನ ಮತ್ತು ಲಜ್ಜೆಗೆಟ್ಟ ಸುಳ್ಳುಕೋರರು ಎಂದರೆ ತಮ್ಮ ಅನುಕೂಲಕ್ಕೆ ತಕ್ಕಂತೆ ಇತಿಹಾಸವನ್ನೂ, ಸಂವಿಧಾನವನ್ನೂ ಮತ್ತು ಕೋರ್ಟುಗಳ ತೀರ್ಮಾನಗಳನ್ನೂ ತಿರುಚಬಲ್ಲರು ಮತ್ತು ಹಸಿಹಸಿ ಸುಳ್ಳುಗಳನ್ನು ಹೇಳಬಲ್ಲರು.
ಇದೀಗ ತಮ್ಮ ಈ ಗೋಬೆಲ್ಸ್ ಶಸ್ತ್ರಾಸ್ತ್ರಗಳನ್ನು ಅವರು ಸಂಪೂರ್ಣ ಗೋಹತ್ಯಾ ನಿಷೇಧಕ್ಕಾಗಿ ನಡೆಸುತ್ತಿರುವ ಪ್ರಚಾರದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಕರ್ನಾಟಕ ಜನತೆಯ ಸತತ ಪ್ರತಿರೋಧ ಮತ್ತು ನಿರಂತರ ಹೋರಾಟಕ್ಕೆ ಮಣಿದು ಸಂಪೂರ್ಣ ಗೋಹತ್ಯೆ ನಿಷೇಧಕ್ಕಾಗಿ ಬಿಜೆಪಿ ಸರ್ಕಾರ ತರುತ್ತಿರುವ ಮಸೂದೆಯನ್ನು ರಾಜ್ಯಪಾಲರು “ಶಾಸನವಾಗಲು ಅನರ್ಹವಾಗಿರುವ ಮತ್ತು ದೇಶದ ಜನತೆಯ ಮೂಲಭೂತ ಹಕ್ಕುಗಳಿಗೆ ಚ್ಯುತಿ ತರುವ ಅಂಶಗಳಿವೆ” ಎಂಬ ಟಿಪ್ಪಣಿಯೊಂದಿಗೆ ರಾಷ್ಟ್ರಪತಿಯವರ ಅವಗಾಹನೆಗಾಗಿ ಕಳಿಸಿಕೊಟ್ಟಿದ್ದಾರೆ. ಇದಾಗಿ ವಾರಗಳೇ ಉರುಳಿದಿದ್ದರೂ ಸುಮ್ಮನಿದ್ದ ಬಿಜೆಪಿ ಉಪಚುನಾವಣೆಗಳು ಘೋಷಣೆಯಾದೊಡನೆ ಸತ್ತ ಗೋವನ್ನು ಬಡಿದೆಬ್ಬಿಸಿ ತಮ್ಮ ಚುನಾವಣಾ ಪ್ರಚಾರಕ್ಕೆ ಅಟ್ಟಿಕೊಂಡು ಬರುತ್ತಿದ್ದಾರೆ. ಈ ಮೊದಲು ತಮ್ಮ ಸಾಧನೆಯ ಆಧಾರದ ಮೇಲೆ ಜನರ ಬಳಿ ಹೋಗುತ್ತೇವೆ ಎನ್ನುತ್ತಿದ್ದ ಈ ಕೋಮುವಾದಿಗಳು ತಮ್ಮ ಸಾಧನಾ ಸಮಾವೇಶಕ್ಕೆ ಜನರು ಬರುವುದೇ ಕಷ್ಟ ಎಂಬುದು ಅರ್ಥವಾದೊಡನೆ ಗೋಹತ್ಯೆ ನಿಷೇಧ ಎಂಬ ಕೋಮುವಾದಿ ವಿಷಯವನ್ನೇ ಎಲೆಕ್ಷನ್ ಅಜೆಂಡಾ ಮಾಡುತ್ತಿದ್ದಾರೆ.
ಈ ನಿಟ್ಟಿನಲ್ಲಿ ಸೆಪ್ಟೆಂಬರ್ 1 ರಿಂದ 5ರವರೆಗೆ ರಾಜ್ಯಾದ್ಯಂತ ಹೋರಾಟ ಮತ್ತು ಪ್ರದರ್ಶನಗಳನ್ನೂ ಮತ್ತು ಸೆಪ್ಟೆಂಬರ್ 6 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನೂ ಆಯೋಜಿಸಿದ್ದಾರೆ. ಆ ಮೂಲಕ ಈ ಮಸೂದೆಯನ್ನು ವಿರೋಧಿಸುವ ಪಕ್ಷಗಳು ಹಿಂದೂ ವಿರೋಧಿಗಳೆಂದೂ ಮತ್ತು ತಾವು ಮಾತ್ರ ಹಿಂದೂಪರ ಪಕ್ಷವೆಂದೂ ಪ್ರಚಾರ ಮಾಡುತ್ತಾ ಹಿಂದೂ ಓಟ್ ಬ್ಯಾಂಕನ್ನು ತನ್ನೆಡೆಗೆ ಸೆಳೆದುಕೊಳ್ಳುವ ತನ್ನ ಹಳೆ ತಂತ್ರಕ್ಕೆ ಮರಳಿದೆ. ಆದರೆ ಈ ಪ್ರಚಾರದಲ್ಲಿ ಸಂವಿಧಾನದ ಬಗ್ಗೆ ಮತ್ತು ಕೋರ್ಟು ಹಾಗೂ ಕಾನೂನುಗಳ ಬಗ್ಗೆ ಹತ್ತು ಹಲವು ಸುಳ್ಳುಗಳನ್ನು ಮತ್ತು ಅಪವ್ಯಾಖ್ಯಾನಗಳನ್ನು ಬಿಜೆಪಿ ಮಾಡುತ್ತಿದೆ. ಹೀಗಾಗಿ ಗೋಹತ್ಯೆ ನಿಷೇಧದ ಕುರಿತು ಮತ್ತು ಬಿಜೆಪಿ ನಡೆಸುತ್ತಿರುವ ಪ್ರಚಾರದಲ್ಲಿ ಇರುವ ಹಸಿಸುಳ್ಳುಗಳನ್ನು ಮತ್ತು ಅರ್ಧಸತ್ಯಗಳನ್ನು ಬಯಲುಗೊಳಿ ಸುವ ತುರ್ತು ಅಗತ್ಯವಿದೆ.
ಮೊದಲನೆಯದಾಗಿ ಸದರಿ ಮಸೂದೆಯನ್ನು “ಗೋಹತ್ಯಾ ನಿಷೇಧ ಮಸೂದೆ” ಎಂದು ಕರೆಯುತ್ತಿರುವುದೇ ತಪ್ಪು. 1964ರಲ್ಲಿ ಕರ್ನಾಟಕ ಸರ್ಕಾರ ಗೋಹತ್ಯೆಯನ್ನು ನಿಷೇಧಿಸಲು ಕಾಯಿದೆಯನ್ನು ಮಾಡಿತ್ತು. ಅದರ ಹೆಸರು “Karnataka Prevention
of Cow slaughter abd Preservation of Cattle Act -1964” (“ಕರ್ನಾಟಕ ಗೋಹತ್ಯಾ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ”). ಈ ಕಾಯಿದೆಯ ಪ್ರಕಾರ ಹಸು ಮತ್ತು ಕರುಗಳನ್ನು ಹೊರತುಪಡಿಸಿ 12 ವರ್ಷಕ್ಕೆ ಮೇಲ್ಪಟ್ಟ ದನ, ಗೂಳಿ, ಎಮ್ಮೆ ಮತ್ತು ಕೋಣಗಳನ್ನು ಸೂಕ್ತ ಪರವಾನಗಿಯೊಂದಿಗೆ ಕಡಿಯಬಹುದಾಗಿತ್ತು. ಅಂದರೆ ಸ್ಪಷ್ಟವಾಗಿ ಕಾಣುವಂತೆ 1964ರ ಕಾನೂನಿನಲ್ಲೇ ಗೋಹತ್ಯಾ ನಿಷೇಧದ ಎಲ್ಲಾ ಅಂಶಗಳೂ ಇದ್ದವು. ವಾಸ್ತವವಾಗಿ 1964ರ ಈ ಕಾನೂನೂ ಸಹ ಸಮಸ್ಯಾತ್ಮಕವಾಗಿದ್ದು ಅದನ್ನೇ ಪ್ರಶ್ನಿಸಬೇಕಾದ ಅಗತ್ಯವಿದೆ. ವಿಷಯ ಹೀಗಿರುವಾಗ 2009ರ ಫೆಬ್ರವರಿಯಲ್ಲಿ ಬಿಜೆಪಿ ಸರ್ಕಾರ ಈ ಮೂಲ ಕಾಯಿದೆಗೆ ಕೆಲವು ತಿದ್ದುಪಡಿಗಳನ್ನು ತರಲು ಯತ್ನಿಸಿತು. ಅದರಲ್ಲಿ ಮುಖ್ಯವಾದದ್ದು ಖಾಸಗಿ ವ್ಯಕ್ತಿಗಳನ್ನು ಸಹ ಗೋಹತ್ಯಾ ನಿಷೇಧ ಕಾಯಿದೆಯನ್ನು ಜಾರಿಗೆ ತರಲು ಅಧಿಕೃತವಾಗಿ ನೇಮಿಸುವುದು ಮತ್ತು ಈ ಕಾಯಿದೆಯನ್ವಯ ಜಿಲ್ಲಾ ಕೋರ್ಟೇ ಈ ವಿಷಯದಲ್ಲಿ ಅಂತಿಮ ಅಪೀಲು ಎಂಬುದು ಬಹುಮುಖ್ಯವಾದ ಮತ್ತು ಅತ್ಯಂತ ಅಪಾಯಕಾರಿಯಾದ ತಿದ್ದುಪಡಿಗಳಾಗಿತ್ತು. ಇದರ ವಿರುದ್ಧವೇ ರಾಜ್ಯಾದ್ಯಂತ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಜನತೆ ಹೋರಾಟ ಪ್ರಾರಂಭಿಸಿದ್ದರು. ಇದನ್ನೆಲ್ಲಾ ಗಮನಿಸಿದ ಬಿಜೆಪಿ ಸರ್ಕಾರ ಕಾನೂನು ಪಂಡಿತರ ಸಲಹೆಯನ್ನೂ ತೆಗೆದುಕೊಂಡು 2010ರ ಮಾರ್ಚ್ 4ರಂದು ಈ ತಿದ್ದುಪಡಿ ಮಸೂದೆಯನ್ನೂ ವಾಪಸ್ ತೆಗೆದುಕೊಂಡು ಅದರ ಬದಲಿಗೆ “Karnataka Prevenetion
of Slaughter And Preservation of Cattle Bill- 2010” (“ಕರ್ನಾಟಕ ಜಾನುವಾರು ಹತ್ಯಾ ನಿಷೇಧ ಮತ್ತು ಸಂರಕ್ಷಣಾ ಕಾಯಿದೆ-2010”) ಎಂಬ ಮಸೂದೆಯನ್ನು ಮಾರ್ಚ್ 10ರಂದು ಸದನದಲ್ಲಿ ಮಂಡಿಸಿತು. ವಿರೋಧ ಪಕ್ಷಗಳ ಒಕ್ಕೊರಲ ವಿರೋಧದ ನಡುವೆಯೂ ಮಾರ್ಚ್ 19ರಂದು ಅದಕ್ಕೆ ಮಂಜೂರಾತಿ ಪಡೆದುಕೊಂಡಿತು. ನಂತರ ಅದನ್ನು ವಿಧಾನ ಪರಿಷತ್ತಿನಲ್ಲೂ ಮಂಡಿಸಲಾಯಿತಾದರೂ ಆಗ ಬಿಜೆಪಿಗೆ ಪರಿಷತ್ತಿನಲ್ಲಿ ಬಹುಮತವಿರಲಿಲ್ಲವಾದ್ದ ರಿಂದ ಅದನ್ನು ಚರ್ಚೆಗೆ ತರಲಿಲ್ಲ. ಜೂನ್ ತಿಂಗಳಲ್ಲಿ ವಿಧಾನ ಪರಿಷತ್ತಿಗೆ ಚುನಾವಣೆಗಳು ನಡೆದು ಅಲ್ಲಿಯೂ ಬಿಜೆಪಿಗೆ ಬಹುಮತ ಸಿಕ್ಕ ಮೇಲೆ ಸಕಲ ವಿರೋಧದ ನಡುವೆಯೂ ಅಲ್ಲಿಯೂ ಈ ಮಸೂದೆಯನ್ನು ಬಿಜೆಪಿ ಸರ್ಕಾರ ಪಾಸು ಮಾಡಿಸಿಕೊಂಡಿತು.
ಹೀಗಾಗಿ ಈಗ ಬಿಜೆಪಿ ಸರ್ಕಾರ ತರಬೇಕೆಂದಿರುವುದು ಕೇವಲ “ಗೋಹತ್ಯಾ ನಿಷೇಧ” ಮಸೂದೆಯಲ್ಲ. ಬದಲಿಗೆ ಕರ್ನಾಟಕ ಜಾನುವಾರು ಹತ್ಯಾ ನಿಷೇಧ ಮತ್ತು ಸಂರಕ್ಷಣಾ ಕಾಯಿದೆ-2010! ಇಲ್ಲಿ ಜಾನುವಾರು ಎಂದರೆ ಗೋವು ಮಾತ್ರವಲ್ಲ. ಹಸು, ದನ, ಕರುಗಳು ಮತ್ತು ಇವುಗಳ ಜೊತೆಗೆ ಎಮ್ಮೆ, ಕೋಣಗಳನ್ನು ಸೇರಿಸಿ ಜಾನುವಾರು ಎಂದು ಕರೆಯಲಾಗಿದೆ. ಹೀಗಾಗಿ ಇದು ಕೇವಲ ಗೋಹತ್ಯಾ ನಿಷೇಧ ಮಸೂದೆಯಲ್ಲ. ಬದಲಿಗೆ ಎಲ್ಲಾ ಜಾನುವಾರುಗಳ ಹತ್ಯೆಯನ್ನೂ ನಿಷೇಧಿಸುವ ಕಾಯಿದೆಯಾಗಿದೆ. ಮಾತ್ರವಲ್ಲ ಈ ಯಾವುದೇ ಪ್ರಾಣಿಗಳ ಮಾಂಸವನ್ನು ತಿನ್ನುವುದನ್ನೂ ಈ ಮಸೂದೆ ಶಿಕ್ಷಾರ್ಹ ಅಪರಾಧವನ್ನಾಗಿಸುತ್ತದೆ. ಅಂದರೆ ಇದು ಕೇವಲ ಹತ್ಯೆಯನ್ನು ನಿಷೇಧಿಸುವ ಮಸೂದೆಯಲ್ಲ. ಬದಲಿಗೆ ಇಲ್ಲಿ ಜಾನುವಾರು ಎಂದು ಕರೆಯಲ್ಪಡುವ ಯಾವುದೇ ಪ್ರಾಣಿಗಳ ಮಾಂಸವನ್ನು ತಿನ್ನುವುದನ್ನೇ ನಿಷೇಧಿಸುತ್ತದೆ.
ಎರಡನೆಯದಾಗಿ ಈ ಮಸೂದೆಯನ್ನು ಬಿಜೆಪಿ ಸರ್ಕಾರ ರೈತರ ಹಿತದೃಷ್ಟಿಯಿಂದಲೇ ತರುತ್ತಿದೆ ಎಂಬುದು ಬಿಜೆಪಿಯ ಬಹುಮುಖ್ಯ ಅಪಪ್ರಚಾರ. ಈ ಜಾನುವಾರು ಸಂರಕ್ಷಣಾ ಮಸೂದೆಯಲ್ಲಿರುವ ಪ್ರತಿ ಕಲಮೂ ರೈತರನ್ನು ಬೀದಿಪಾಲು ಮಾಡುತ್ತದೆ ಮತ್ತು ಜೈಲುಪಾಲು ಮಾಡುತ್ತದೆ.
ಈ ಕಾಯಿದೆಯ ಅತಿಘೋರ ರೈತವಿರೋಧೀ ಅಂಶವು ಮಸೂದೆಯ ಸೆಕ್ಷನ್ (8) ರಲ್ಲಿದೆ. ಅದರ ಪ್ರಕಾರ ಈ ಮಸೂದೆಯು ಕಾನೂನಾದರೆ “ಜಾನುವಾರುಗಳನ್ನು ಕೊಲ್ಲುವ ಉದ್ದೇಶದಿಂದ ಮಾರುವುದು, ಕೊಳ್ಳುವುದು ಅಥವಾ ಪರಭಾರೆ ಮಾಡುವುದುನ್ನು ನಿಷೇಧಿಸುತ್ತದೆ”. ಅದನ್ನು ಶಿಕ್ಷಾರ್ಹ ಅಪರಾಧವನ್ನಾಗಿಸುತ್ತದೆ. ಅಂದರೆ ಇನ್ನು ಮುಂದೆ ಮುದಿಗೊಡ್ಡಾಗಿರುವ ದನಗಳನ್ನು ಪರಭಾರೆ ಮಾಡುವ ರೈತನೂ ಅಪರಾಧಿಯಾಗಲಿದ್ದಾನೆ. ಏಕೆಂದರೆ ಸೆಕ್ಷನ್ (8)ರ ವಿವರಣೆಯ ಪ್ರಕಾರ ದನಗಳನ್ನು ಕೊಲ್ಲುವ ಉದ್ದೇಶಕ್ಕೆ ಮಾರಿದರೆ ಮಾತ್ರವಲ್ಲ ಆ ದನಗಳನ್ನು ಕೊಲ್ಲುವ ಉದ್ದೇಶಕ್ಕೆ ಕೊಳ್ಳಲಾಗುತ್ತಿದೆ ಎಂದು “ಗೊತ್ತಿದ್ದರೆ, ಅಥವಾ ದನಗಳನ್ನು ಕೊಲ್ಲಲೆಂದೇ ಕೊಳ್ಳಲಾಗುತ್ತಿದೆ ಎಂದು ನಂಬುವ ಕಾರಣವಿದ್ದೂ” ಮಾರಿದರೂ ಸಹ ಈ ಕಾಯಿದೆ ಅದನ್ನು ಶಿಕ್ಷಾರ್ಹ ಅಪರಾಧವನ್ನಾಗಿಸುತ್ತದೆ. ಆದರೆ ರೈತನಿಗೆ ಗೊತ್ತಿದ್ದೂ ಮಾರಿದ್ದಾನೆ ಎಂದು ಮತ್ತು ಕೊಲ್ಲಲೆಂದು ಕೊಳ್ಳಲಾಗುತ್ತಿದೆ ಎಂದು ನಂಬುವ ಕಾರಣವಿತ್ತು ಎಂಬುದನ್ನು ನಿರ್ಧರಿಸುವವರು ಯಾರು? ಅಪರಾಧವನ್ನು ತಡೆಗಟ್ಟಲು ಬರುವ ಸಬ್ ಇನ್ಸ್ಪೆಕ್ಟರ್ ಅಥವಾ ಇತರ ಅಧಿಕಾರಿಗಳು! ಅಂದರೆ ಈಗಾಗಲೇ ಆತ್ಮಹತ್ಯೆಯ ಅಂಚಿನಲ್ಲಿರುವ ರೈತನ ಬದುಕು ಪೋಲೀಸ್ ಅಧಿಕಾರಿಗಳ ಮತ್ತು ಸರ್ಕಾರದ ಮರ್ಜಿಗೆ ಬೀಳುತ್ತದೆ.
ಇದರಿಂದಲೇ ಈ ಪುರೋಹಿತರ ಸರ್ಕಾರಕ್ಕೆ ರೈತ ಬದುಕಿನ ಕಷ್ಟಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲವೆಂಬುದು ಗೊತ್ತಾಗುತ್ತದೆ. ಒಂದು ಹಾಲುಕೊಡುವ ಹಸು ಅಥವಾ ಉಳುಮೆಗೆ ಹೆಗಲಾಗುವ ದನ ಎರಡೂ ರೈತನ ಬದುಕನ್ನು ಪೋಷಿಸುತ್ತವೆ. ಆದರೆ ಹಾಲು ಕೊಡದ ಹಸ ಮತ್ತು ಉಳುಮೆಗೆ ಈಡಾಗದ ದನವನ್ನು ಸಾಕುವುದು ಈಗಾಗಲೇ ಸಾಯುತ್ತಾ ಸಾಯುತ್ತಾ ಬದುಕಿರುವ ರೈತನಿಗೆ ಎಷ್ಟು ಹೊರೆಯಾಗುತ್ತದೆಂಬುದರ ಅರಿವೇ ಈ ಸರ್ಕಾರಕ್ಕಿಲ್ಲ. ಸರ್ಕಾರದ ಅಂಕಿಅಂಶಗಳ ಪ್ರಕಾರ ನಮ್ಮ ಹಳ್ಳಿಗಾಡಿನಲ್ಲಿ ಬದುಕುತ್ತಿರುವ ಮುಕ್ಕಾಲುವಾಸಿ ಜನರ ದಿನದ ಸರಾಸರಿ ಆದಾಯ ಕೇವಲ 20 ರೂಪಾಯಿ. ಇದರಲ್ಲಿ ಮನೆಮಂದಿಯೆಲ್ಲಾ ಮೂರುಹೊತ್ತು ಅರೆಹೊಟ್ಟೆ ಊಟಮಾಡಲೂ ಆಗುವುದಿಲ್ಲ. ಇದರ ಜೊತೆಗೆ ಯಾವರೀತಿಯಲ್ಲೂ ಉಪಯೋಗವಿಲ್ಲದ ದನ-ಹಸುಗಳನ್ನು ಸಾಕಬೇಕೆಂದರೆ ದಿನಕ್ಕೆ ಏನಿಲ್ಲವೆಂದರೂ 30-50 ರೂ. ಖರ್ಚಾಗುತ್ತದೆ. ಇದನ್ನು ಭರಿಸುವವರು ಯಾರು?
ಅದಕ್ಕಿಂತ ಮುಖ್ಯವಾದದ್ದು ಮತ್ತೊಂದಿದೆ. ಗೊಡ್ಡಾದ ದನ-ಹಸುಗಳನ್ನು ಮಾರದಿದ್ದರೆ ಬೇಸಾಯಕ್ಕೆ ಬೇಕಾದ ಹೊಸ ಜಾನುವಾರುಗಳನ್ನು ಕೊಂಡುಕೊಳ್ಳಲು ರೈತನಿಗೆ ಎಲ್ಲಿಂದ ದುಡ್ಡು ಬರಬೇಕು? ಒಂದು ಕಡೆ ಗೊಡ್ಡಾದ ದನಗಳನ್ನೂ ಸಾಕಬೇಕು, ಮತ್ತೊಂದು ಕಡೆ ಬೇಸಾಯ ಮುಂದುವರೆಸಲೂ ಬೇಕಾದ ಹೊಸ ರಾಸುಗಳನ್ನು ಕೊಳ್ಳಲೂ ಹಣವಿಲ್ಲ. ಈ ಇಕ್ಕಟ್ಟಿನ ಸಂದರ್ಭದಲ್ಲಿ ರೈತ ಒಂದು ವೇಳೆ ದನವನ್ನು ಮಾರಿದರೆ ಅವನನ್ನು ಮುಲಾಜಿಲ್ಲದೆ ಜೈಲಿಗೆ ಹಾಕಿ ಎನ್ನುತ್ತದೆ ಈ ಕಾಯಿದೆ!
ಇಷ್ಟು ಮಾತ್ರವಲ್ಲ. ಈ ರಾಜ್ಯದ ಬಹುಪಾಲು ರೈತರು ಕೃಷಿಯೊಂದಿಗೆ ಉಪಕಸುಬಾಗಿ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಹೈನುಗಾರಿಕೆಯಲ್ಲಿ ನಾಟಿ ಹಸುಗಳಿಗಿಂತ ಹೆಚ್ಚು ಹಾಲು ಕೊಡುವ ಜರ್ಸಿ ಅಥವಾ ಸೀಮೆ ಹಸುಗಳೇ ಮುಖ್ಯ. ಇವುಗಳು ಹಾಲನ್ನು ಕೊಟ್ಟರೂ ಕೊಡದಿದ್ದರೂ ನಾಟಿ ಹಸುಗಳ ಮೂರುಪಟ್ಟು ಮೇವನ್ನು ತಿನ್ನುತ್ತವೆ. ಎಲ್ಲಿಯತನಕ ಅವು ಹಾಲನ್ನು ಕೊಡುತ್ತಿರುತ್ತವೋ ಅಲ್ಲಿಯವರೆಗೆ ಅವುಗಳನ್ನು ಸಾಕುವುದು ಅಷ್ಟು ಕಷ್ಟವಲ್ಲ. ಆದರೆ ಒಮ್ಮೆ ಅವು ಗೊಡ್ಡಾದ ನಂತರ ಅವುಗಳು ಮೇವು ತಿನ್ನುವ ಪ್ರಮಾಣವೇನೂ ಕಡಿಮೆಯಾಗುವುದಿಲ್ಲ. ಹೀಗಾಗಿ ಆದಾಯವಿರಲಿ, ಇಲ್ಲದಿರಲಿ ರೈತ ಆ ಸೀಮೆಹಸುಗಳನ್ನು ಸಾಕಲೇ ಬೇಕೆಂದರೆ ರೈತಾಪಿಯ ಕುಟುಂಬದ ಆರ್ಥಿಕತೆಯ ಮೇಲೆ ಎಂಥಾ ದುಷ್ಟ ಪ್ರಭಾವ ಬೀರಬಹು ದೆಂಬುದನ್ನು ಸರ್ಕಾರ ಯೋಚಿಸಿದೆಯೇ?
ಈ ಸೀಮೆಹಸುಗಳ ಗಂಡುಕರುಗಳು ಬೇಸಾಯದ ಬಳಕೆಗೂ ಬರುವುದಿಲ್ಲ, ಹಾಲನ್ನೂ ಕೊಡುವುದಿಲ್ಲ. ಮೇವನ್ನು ಮಾತ್ರ ನಾಟಿ ಹಸುಗಳ ಮೂರುಪಟ್ಟು ತಿನ್ನುತ್ತಲೇ ಇರುತ್ತವೆ. ಇವನ್ನು ರೈತ ಮಾರದಿದ್ದರೆ ಅವನಿಗೆ ಬರುವ ಲಾಭವೆಲ್ಲಾ ಇವುಗಳನ್ನು ಸಾಕಲೆಂದೇ ಖರ್ಚಾಗುತ್ತದೆ. ಅಥವಾ ಅದಕ್ಕಿಂತ ಜಾಸ್ತಿಯಾಗುತ್ತದೆ. ಈ ಕಷ್ಟಗಳಿಂದ ತಪ್ಪಿಸಿಕೊಳ್ಳಲು ರೈತನೇನಾದರೂ ಗಂಡುಕರುವನ್ನು ಮಾರಿದರೆ ಆತನಿಗೆ ಈ ಕಾಯಿದೆಯ ಪ್ರಕಾರ ಜೈಲುಶಿಕ್ಷೆ ಕಟ್ಟಿಟ್ಟಬುತ್ತಿ!
ಈ ಮಸೂದೆಯೇನಾದರೂ ಶಾಸನವಾದರೆ ಮೇಲೆ ಹೇಳಿದ ಯಾವುದೇ ಸಂದರ್ಭದಲ್ಲೂ ರೈತನನ್ನು ಸ್ಥಳೀಯ ಸಬ್ ಇನ್ಸ್ಪೆಕ್ಟರ್ ಬಂಧಿಸಬಹುದು. ಈ ಮಸೂದೆಯ ಪ್ರಕಾರ ಇವೆಲ್ಲವೂ ಶಿಕ್ಷಾರ್ಹ ಅಪರಾಧವಾದ್ದರಿಂದ ಅವು ಜಾಮೀನು ರಹಿತ ಅಪರಾಧಗಳಾಗಿವೆ. ಇವುಗಳಿಗೆ ಜಿಲ್ಲಾ ಕೇಂದ್ರಗಳಲ್ಲಿರುವ ಪ್ರಥಮ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲದಲ್ಲೇ ಜಾಮೀನು ಸಿಗಲು ಸಾಧ್ಯ. ಅಂದರೆ ಒಮ್ಮೆ ರೈತನನ್ನು ಯಾವುದಾದರೂ ಹಳ್ಳಿಯಲ್ಲಿ ಮೇಲಿನ ಆರೋಪದಲ್ಲಿ ಬಂಧಿಸಿದರೆ ಅವನನ್ನು ಜಿಲ್ಲಾಕೇಂದ್ರಕ್ಕೆ ಕರೆತರಬೇಕು. ಅಂದರೆ ಸುಮ್ಮನೆ ಅನುಮಾನದ ಮೇಲೆ ಬಂಧನವಾದರೂ ಕನಿಷ್ಟ ಎರಡು ಮೂರು ದಿನಗಳವರೆಗೆ ಜಾಮೀನು ಸಿಗುವುದಿಲ್ಲ. ಈಗಾಗಲೇ ಸಂಕಷ್ಟದಲ್ಲಿರುವ ರೈತ ಜಿಲ್ಲಾ ಕೇಂದ್ರದಲ್ಲಿ ವಕೀಲರಿಗೆ ದುಬಾರಿ ಫೀಸು ತೆತ್ತು ಜಾಮೀನು ಮಾಡಿಸಿಕೊಳ್ಳಬೇಕು. ಇದೆಲ್ಲ ಎಷ್ಟು ರೈತರಿಗೆ ಸಾಧ್ಯ?
ರೈತರ ಕಷ್ಟ ಇಲ್ಲಿಗೇ ಮುಗಿಯಲಿಲ್ಲ. ಈ ಮಸೂದೆಯ ಅಂಶಗಳು ರೈತನು ಆತ್ಮಹತ್ಯೆ ಮಾಡಿಕೊಳ್ಳುವ ತನಕ ಬಿಡುವಂತೆ ಕಾಣುವುದಿಲ್ಲ. ಈಗಾಗಲೇ ವಿವರಿಸಿದಂತೆ ರೈತ ಮುದಿಗೊಡ್ಡು ದನಗಳನ್ನು ಯಾವ ಕಾರಣಕ್ಕೂ ಮಾರುವಂತಿಲ್ಲ. ಹಾಗಿದ್ದರೆ ಅವುಗಳನ್ನು ಏನು ಮಾಡಬೇಕು? ಈ ಮಸೂದೆಯ ಸೆಕ್ಷನ್ (18)ರ ಪ್ರಕಾರ ಇಂಥಾ ದನಗಳನ್ನು ನೋಡಿಕೊಳ್ಳಲು ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆ ಆಶ್ರಮಗಳನ್ನು ಸ್ಥಾಪಿಸುತ್ತವೆ. ರೈತರು ತಮ್ಮ ಗೊಡ್ಡುದನಗಳನ್ನು ಕಡ್ಡಾಯವಾಗಿ ಈ ಆಶ್ರಮದಲ್ಲೇ ಬಿಡಬೇಕು. ಅಷ್ಟುಮಾತ್ರವಲ್ಲ, ಅವುಗಳನ್ನು ನೋಡಿಕೊಳ್ಳಲು ರೈತ ಸರ್ಕಾರ ಅಥವಾ ಆ ಸಂಸ್ಥೆ ನಿಗದಿಪಡಿಸಿದಷ್ಟು ಶುಲ್ಕವನ್ನೂ ಪಾವತಿಸಬೇಕು!
ತಮ್ಮ ಮಕ್ಕಳ ಶಾಲಾ ಫೀಸನ್ನೆ ಪಾವತಿಸಲಾಗದಷ್ಟು ಸಂಕಷ್ಟದಲ್ಲಿರುವ ರೈತ ಈ ಶುಲ್ಕವನ್ನು ಹೇಗೆ ಭರಿಸಬಲ್ಲ? ಒಂದು ವೇಳೆ ರೈತ ಅಷ್ಟು ಶುಲ್ಕವನ್ನು ಪಾವತಿಸಲಾಗದಿದ್ದರೆ ಸರ್ಕಾರದ ಕಣ್ಣಿನಲ್ಲಿ ಆತ ಅಪರಾಧಿಯಾಗುತ್ತಾನೆ. ಅಕಸ್ಮಾತ್ ರೈತ ಬದುಕಿನ ಬೇಗುದಿ ತಡೆಯದೆ ತನ್ನ ದನಗಳನ್ನು ಮಾರೇ ಬಿಟ್ಟರೆ ಎಷ್ಟು ಶಿಕ್ಷೆ? ಈ ಮಸೂದೆಯ ಸೆಕ್ಷನ್ (12) ಯಾವ ಯಾವ ಅಪರಾಧಕ್ಕೆ ಎಷ್ಟೆಷ್ಟು ಶಿಕ್ಷೆಯೆಂಬುದನ್ನು ನಿಗದಿಪಡಿಸುತ್ತದೆ. ಸೆಕ್ಷನ್ 4ರ ಅಡಿ ಜಾನುವಾರು ಹತ್ಯೆ ಮಾಡಿದ ಅಪರಾಧಕ್ಕೆ ಒಂದು ವರ್ಷದಿಂದ ಏಳು ವರ್ಷದವರೆಗೆ ಜೈಲು ಶಿಕ್ಷೆ ಮತ್ತು 25,000 ರೂ.ಗಳಿಂದ 1,00,000 ರೂ.ವರೆಗೆ ಜುಲ್ಮಾನೆಯನ್ನೂ ವಿಧಿಸಬಹುದಾಗಿದೆ. ಭಯೋತ್ಪಾದನೆ, ಉದ್ದೇಶ ಪೂರ್ವಕ ಕೊಲೆ, ಬಲಾತ್ಕಾರ, ಕಳ್ಳಸಾಗಣೆ, ಭ್ರಷ್ಟಾಚಾರಗಳಿಗೂ ಈ ಪ್ರಮಾಣದ ಶಿಕ್ಷೆಯನ್ನು ಇಂಡಿಯನ್ ಪೀನಲ್ ಕೋಡ್ ವಿಧಿಸುವುದಿಲ್ಲ.
ಅದೇ ರೀತಿ ಈ ಮಸೂದೆಯಡಿ ಎಸಗಲಾಗುವ ಇತರ ಅಪರಾಧಗಳಿಗೆ- ಅಂದರೆ ದನದ ಸಾಗಾಟ ಮಾಡುವುದು, ಹಸು-ದನವನ್ನು ಮಾರಾಟ ಮಾಡುವುದು, ದನದ ಮಾಂಸ ತಿನ್ನುವುದು, ತಿನ್ನಲು ಪ್ರೋತ್ಸಾಹಿಸುವುದು ಹಾಗೂ ಇನ್ನಿತರ ಅಪರಾಧಗಳಿಗೆ - ಒಂದು ವರ್ಷದಿಂದ ಮೂರು ವರ್ಷದ ಸಜೆ ಮತ್ತು 10,000 ರೂ. -25,000 ರೂ.ವರೆಗೆ ಜುಲ್ಮಾನೆ ವಿಧಿಸಬಹುದಾಗಿದೆ.
ಅಂದರೆ ಸಾರಾಂಶದಲ್ಲಿ ಇದರ ಅರ್ಥವೇನೆಂದರೆ ರೈತ ತನ್ನೆಲ್ಲಾ ಕಷ್ಟವನ್ನು ನುಂಗಿಕೊಂಡು ಹೇಗಾದರೂ ಬೇಸಾಯದಲ್ಲಿ ಮುಂದುವರೆಯುವುದೇ ದೊಡ್ಡ ಅಪರಾಧ. ಹೀಗಾಗಿ ಮಾನ್ಯ ಯಡಿಯೂರಪ್ಪನವರ ಬಿಜೆಪಿ ಸರ್ಕಾರದಲ್ಲಿ ಈ ನಾಡಿನ ಎಲ್ಲಾ ರೈತರೂ ಇಂದಲ್ಲ ನಾಳೆ ಜೈಲು ಸೇರುವುದನ್ನು ತಪ್ಪಿಸಲಾಗುವುದಿಲ್ಲ!! ಏಕೆಂದರೆ ಈ ಸರ್ಕಾರಕ್ಕೆ ಕುರುಡು ಕೋಮುದ್ವೇಷ ಬಿಟ್ಟರೆ ಬೇರೆ ಅಜೆಂಡಾಗಳೇ ಇಲ್ಲ. ರೈತನ ಕಷ್ಟ ಅರ್ಥವಾಗುವುದೂ ಇಲ್ಲ. ತಮ್ಮ ಗುಪ್ತ ಕೇಸರಿ ಅಜೆಂಡಾವನ್ನು ಜಾರಿಗೆ ತರಲು ಈ ಬಿಜೆಪಿ ಸರ್ಕಾರ ಇಡೀ ರೈತಾಪಿ ಸಮುದಾಯವನ್ನೇ ಆತ್ಮಹತ್ಯೆಯತ್ತ ದೂಡುತ್ತಿದೆ ಅಥವಾ ಸೆರೆಮನೆಗೆ ದೂಡುತ್ತಿದೆ.
ಹಸಿರುಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪನ ಸರ್ಕಾರ ರೈತರ ಹಿತವನ್ನು ಕಾಪಾಡುವುದು ಅವರನ್ನು ಜೈಲಿಗೆ ತಳ್ಳುವ ಮೂಲಕ. ಇದು ರೈತ ದ್ರೋಹವಲ್ಲದೆ ಮತ್ತಿನ್ನೇನು?ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ರೈತರಿಗೆ ಗೋವುಗಳನ್ನು ಸಾಕುವುದು ಕಷ್ಟವಾದರೆ ಅವರಿಗೆ ಶೇ.6ರ ಬಡ್ಡಿಯಲ್ಲಿ 70,000 ರೂ. ಸಾಲವನ್ನು ನೀಡುವುದಾಗಿ ಹೇಳಿದ್ದಾರೆ. ಆದರೆ ಇದು ರೈತರನ್ನು ಇನ್ನಷ್ಟು ಸಾಲಗಾರರನ್ನಾಗಿ ಮಾಡುವ ಹುನ್ನಾರವೇ ಹೊರತು ಬಚಾವು ಮಾಡುವ ಉಪಾಯವಲ್ಲ. ಏಕೆಂದರೆ ಯಾವುದೇ ರೀತಿಯಿಂದಲೂ ರೈತನ ಆದಾಯವನ್ನು ಹೆಚ್ಚಿಸದೆ ಅವರ ವೆಚ್ಚವನ್ನು ಮಾತ್ರ ಹೆಚ್ಚಿಸುವ ಅನುಪಯುಕ್ತ ಹಸು ಅಥವಾ ದನಗಳನ್ನು ಸಾಕಲು ಸಾಲ ಮಾಡುವುದರಿಂದ ರೈತನ ಸಾಲ ಮತ್ತು ಬವಣೆ ಇನ್ನಷ್ಟು ಹೆಚ್ಚಾಗುತ್ತದೆಯೇ ವಿನಃ ಕಡಿಮೆಯಾಗುವುದಿಲ್ಲ.
ಇದೇ ಬಗೆಯ ಕಾಯಿದೆ ಗುಜರಾತ್, ಮಧ್ಯಪ್ರದೇಶ, ಛತ್ತೀಸ್ಘಡ್ ಇತ್ಯಾದಿ ಏಳು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆಯೆಂಬ ಅರ್ಧ ಸತ್ಯ. ಈ ರಾಜ್ಯಗಳಲ್ಲಿ ಇರುವುದು ಸಂಪೂರ್ಣ “ಗೋ ಸಂತತಿ” ಹತ್ಯಾ ನಿಷೇಧದ ಕಾಯಿದೆಯೇ ವಿನಃ ಎಮ್ಮೆ, ಕೋಣಗಳನ್ನೂ ಒಳಗೊಂಡಂತೆ “ಸಕಲ ಜಾನುವಾರು” ಹತ್ಯಾ ನಿಷೇಧ ಕಾಯಿದೆಯಲ್ಲ.
ಹಾಗೆಯೇ ಗುಜರಾತಿನಲ್ಲಿ ಜಾರಿಗೆ ಬಂದಿರುವ ಇದೇ ಬಗೆಯ ಕಾಯಿದೆ ಯನ್ನು ಸುಪ್ರಿಂಕೋರ್ಟಿನ ಏಳು ಸದಸ್ಯರ ಸಾಂವಿಧಾನಿಕ ಪೀಠ ಎತ್ತಿಹಿಡಿದಿದೆ ಎನ್ನುವ ಅಪಪ್ರಚಾರ. ವಾಸ್ತವ ಇದಕ್ಕೆ ತದ್ವಿರುದ್ಧವಾದದ್ದು. 1994ರಲ್ಲಿ ಆಗಿನ ಗುಜರಾತ್ ಸರ್ಕಾರವೇ ಆವರೆಗೆ ಅಸ್ತಿತ್ವದಲ್ಲಿದ್ದ “Bombay Animal Preservation Act” ಗೆ ತಿದ್ದುಪಡಿ ತರಲು Bombay Animal
Preservation (Gujarat Amendment) Act, 1994 ಆದರೆ ಈ ಕಾಯಿದೆಯೂ ಹಲವಾರು ಸಂವಿಧಾನ ವಿರೋಧಿ ಅಂಶಗಳನ್ನು ಒಳಗೊಂಡಿತ್ತು. ಆ ಕಾರಣದಿಂದಲೇ ಖುರೇಷಿ ಸಮುದಾಯದವರು ಹೈಕೋರ್ಟಿನಲ್ಲಿ ಇದರ ವಿರುದ್ಧ ಹಾಕಿದ್ದ ಅಪೀಲನ್ನು ಎತ್ತಿಹಿಡಿದ ಗುಜರಾತ್ ಹೈಕೋರ್ಟು ಈ ಮಸೂದೆ ಸಂವಿಧಾನ ವಿರೋಧಿ ಎಂದು ಆ ಕಾಯಿದೆಯನ್ನು ರದ್ದುಗೊಳಿಸಿತ್ತು. ಆನಂತರ ನರೇಂದ್ರ ಮೋದಿ ಆಡಳಿತದಲ್ಲಿ ಕೆಲವು ಚೆಡ್ಡಿ ಸಂಘಟನೆಗಳು ಈ ಪ್ರಕರಣವನ್ನು 2002ರಲ್ಲಿ ಸುಪ್ರೀಂ ಕೋರ್ಟಿಗೆ ಕೊಂಡೊಯ್ದರು. ಈ ಪ್ರಕರಣದಲ್ಲಿ ಹಲವಾರು ಸಂವಿಧಾನಾತ್ಮಕ ಅಂಶಗಳಿದ್ದರಿಂದ ಇದನ್ನು ಏಳು ನ್ಯಾಯಾಧೀಶರ ಬೆಂಚಿಗೆ ವರ್ಗಾಯಿಸಲಾಯಿತು.
ಅಂತಿಮವಾಗಿ ಸುಪ್ರೀಂಕೋರ್ಟಿನ ಏಳು ಜನರ ಪೀಠದಲ್ಲಿ ಆರು ನ್ಯಾಯಾಧೀಶರು 1994ರ “ಗುಜರಾತ್ ಕಾಯಿದೆ”ಯನ್ನು ಎತ್ತಿ ಹಿಡಿದದ್ದು ನಿಜ. ಆದರೆ ಅದು “ಗೋ ಸಂತತಿ ಹತ್ಯಾ ನಿಷೇಧ”ವನ್ನೇ ವಿನಃ “ಸಂಪೂರ್ಣ ಜಾನುವಾರು ಹತ್ಯೆ ನಿಷೇಧ”ವನ್ನಲ್ಲ. ಏಕೆಂದರೆ ಗುಜರಾತ್ ಕಾಯಿದೆಯಲ್ಲೇ ಸಂಪೂರ್ಣ ಜಾನುವಾರು ಹತ್ಯಾ ನಿಷೇಧದ ಪ್ರಸ್ತಾಪವಿರಲಿಲ್ಲ. ಅಷ್ಟು ಮಾತ್ರವಲ್ಲ, ಈ ಮಸೂದೆಯಲ್ಲಿ ಎಮ್ಮೆ ಮತ್ತು ಕೋಣಗಳನ್ನು ಕಡಿಯುವುದರ ಬಗ್ಗೆ ನಿಷೇಧವಿಲ್ಲದಿದ್ದರಿಂದಲೇ “ಸಂಪೂರ್ಣ ಗೋ ಸಂತತಿ ಹತ್ಯಾ ನಿಷೇಧ”ಕ್ಕೆ ಸುಪ್ರೀಂ ಕೋರ್ಟು ಅನುಮತಿ ನೀಡಿದೆ. ತಾನು ಈ ನಿರ್ಣಯಕ್ಕೆ ಬರಲು ಕಾರಣವೇನೆಂದು ಸ್ಪಷ್ಟಪಡಿಸುತ್ತಾ ಸಾಂವಿಧಾನಿಕ ಪೀಠದ ಮುಖ್ಯಸ್ಥ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಲಹೋಟಿಯವರು:
“In the present case,
we find the issue relates to a total prohibition imposed on the slaughter of
cow and her progeny. The ban is total with regard to the slaughter of one
particular class of cattle. The ban is not on the total activity of butchers
(kasais); they are left free to slaughter cattle other than those specified in
the Act. It is not that the writ petitioner respondents survive only by
slaughtering cow progeny. They can slaughter animals other than cow progeny and
carry on their business activity.” ((2005) 8 SCC 534) ಎಂದು ಸ್ಪಷ್ಟವಾಗಿ ತಮ್ಮ ನಿರ್ಣಯದಲ್ಲಿ ಉಲ್ಲೇಖಿಸಿದ್ದಾರೆ.
ಅಂದರೆ:
“ಗುಜರಾತಿನ ಕಾಯಿದೆಯು ಜಾನುವಾರುಗಳಲ್ಲಿ ಗೋ-ಸಂತತಿಯೆಂಬ ಒಂದು ವಿಭಾಗದ ಹತ್ಯೆಯನ್ನು ಮಾತ್ರ ನಿಷೇಧಿಸುತ್ತದೆಯೇ ಹೊರತು ಸಂಪೂರ್ಣ ಜಾನುವಾರು ಹತ್ಯೆಯನ್ನಲ್ಲ. ಇದು ಕಸಾಯಿಗಳ ವೃತ್ತಿಯ ಮೇಲೆ ಸಂಪೂರ್ಣ ನಿಷೇಧವನ್ನೇನೂ ಹೇರುವುದಿಲ್ಲ. ಅವರು ಈ ಮಸೂದೆಯಲ್ಲಿ ಉಲ್ಲೇಖಿತವಲ್ಲದ ಇತರೆ ಜಾನುವಾರುಗಳ ಹತ್ಯೆಯನ್ನು ಮುಂದುವರೆಸಬಹುದು. ಏಕೆಂದರೆ ಅವರು ಗೋಸಂತತಿಯ ಹತ್ಯೆಯನ್ನು ಮಾಡುವುದರಿಂದ ಮಾತ್ರ ತಮ್ಮ ವ್ಯಾಪಾರ-ವಹಿವಾಟನ್ನು ಮಾಡಬೇಕೆಂದಿಲ್ಲ. ಗೋ-ಸಂತತಿಯಲ್ಲದ ಇತರ ಜಾನುವಾರುಗಳನ್ನು ಹತ್ಯೆ ಮಾಡುವ ಮೂಲಕ ಅವರು ತಮ್ಮ ವ್ಯಾಪಾರವನ್ನು ಮುಂದುವರೆಸಬಹುದು.”
ಅಲ್ಲದೆ ಈ ಬಹುಸಂಖ್ಯಾತ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದ ಏಳನೇ ನ್ಯಾಯಾಧೀಶರಾದ ಜಸ್ಟೀಸ್ ಮಾಥುರ್ರವರು ಗೋ ಹತ್ಯೆ ನಿಷೇಧದ ಮಸೂದೆ ಯಲ್ಲಿ ದನ ಮತ್ತು ಗೂಳಿಗಳ ಹತ್ಯೆಯ ನಿಷೇಧವನ್ನೂ ಸೇರಿಸಿದ್ದಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿ ತಮ್ಮ ಪ್ರತ್ಯೇಕ ನಿರ್ಣಯ ನೀಡಿದ್ದರು. ಹೀಗಾಗಿ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠದ ನಿರ್ಣಯ “ಸಂಪೂರ್ಣ ಗೋ ಸಂತತಿ ಹತ್ಯಾ ನಿಷೇಧ”ವನ್ನು ಎತ್ತಿ ಹಿಡಿದಿದೆಯೇ ವಿನಃ “ಸಂಪೂರ್ಣ ಜಾನುವಾರು ಹತ್ಯಾ ನಿಷೇಧ”ವನ್ನಲ್ಲ. ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠ ತಾವು ತಂದಿರುವ ಮಸೂದೆಯ ಪರವಾದ ತೀರ್ಮಾನವನ್ನು ನೀಡಿದೆ ಎಂಬುದು ಶುದ್ಧಸುಳ್ಳು.
ಅದೇ ತೀರ್ಮಾನದಲ್ಲಿ ಸಾಂವಿಧಾನಿಕ ಪೀಠ ಸತ್ತ ದನಗಳ ಚರ್ಮ ಮತ್ತಿತ್ಯಾದಿಗಳನ್ನು ಬಳಸಿಕೊಳ್ಳಲು ಸಂಪೂರ್ಣ ಪರವಾನಗಿ ನೀಡಿದೆ:
“In so far as
trade in hides, skins and other allied things (which are derived from the body
of dead animal) are concerned, it is not necessary that the animal must be
slaughtered to avail these things. The animal, whose slaughter has been
prohibited, would die a natural death even otherwise and in that case their
hides, skins and other parts of body would be available for trade and
industrial activity based thereon.”
ಅಂದರೆ: “ದನದ ಚರ್ಮ ಹಾಗು ದೇಹದ ಇತರ ಭಾಗಗಳ ವ್ಯಾಪಾರವನ್ನು ಕುರಿತಂತೆ ಹೇಳುವುದಾದರೆ ಇವುಗಳ ವ್ಯಾಪಾರ ನಡೆಸಬೇಕೆಂದರೆ ಅವುಗಳನ್ನು ಹತ್ಯೆ ಮಾಡಲೇ ಬೇಕೆಂದೇನೂ ಇಲ್ಲ. ಹೇಗಿದ್ದರೂ ಅವು ಸಹಜ ಸಾವನ್ನಪ್ಪುವು ದರಿಂದ ಅವುಗಳ ಚರ್ಮ ಮತ್ತು ದೇಹದ ಇತರ ಭಾಗಗಳ ವ್ಯಾಪಾರ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ಏನೂ ಬಾಧಕವಾಗುವುದಿಲ್ಲ.”
ಆದರೆ ಕರ್ನಾಟಕದ ಬಿಜೆಪಿ ಸರ್ಕಾರದ ಮಸೂದೆಯ ಸೆಕ್ಷನ್ 5 ದನದ ಮಾಂಸವನ್ನು ವ್ಯಾಪಾರ ಮಾಡುವುದಿರಲಿ ಅದನ್ನು ಇಟ್ಟುಕೊಳ್ಳುವುದನ್ನೇ ಶಿಕ್ಷಾರ್ಹ ಅಪರಾಧವನ್ನಾಗಿ ಮಾಡುತ್ತದೆ. ಹೀಗಾಗಿ ಈ ಕಾರಣಕ್ಕೂ ಬಿಜೆಪಿ ಮಸೂದೆಗೆ ಸುಪ್ರೀಂಕೋರ್ಟಿನ ಬೆಂಬಲವಿಲ್ಲ. ಅಂಬೇಡ್ಕರ್ ಮತ್ತು ಅವರ ಅಧ್ಯಕ್ಷತೆಯಲ್ಲಿ ರಚಿಸಿದ ಸಂವಿಧಾನವೂ ಸಹ ಸಂಪೂರ್ಣ ಗೋಹತ್ಯಾ ನಿಷೇಧದ ಪರವಾಗಿದೆ ಎಂಬ ಬಿಜೆಪಿ ಹೇಳುತ್ತಿರುವುದೂ ಮತ್ತೊಂದು ಸುಳ್ಳು.
ಸಂವಿಧಾನದ ರಚನಾ ಸಭೆಯಲ್ಲಿ ಸಂಪೂರ್ಣ ಗೋಹತ್ಯಾ ನಿಷೇಧವನ್ನು ಮೂಲಭೂತ ಹಕ್ಕನ್ನಾಗಿಯೇ ಮಾಡಬೇಕೆಂಬ ಒತ್ತಾಯವನ್ನು ಕೆಲವು ಹಿಂದೂ ಮಹಾಸಭ ಮತ್ತು ಕಾಂಗ್ರೆಸ್ ಸದಸ್ಯರು ಮಾಡಿದ್ದು ನಿಜ. ಆದರೆ ಅಂಬೇಡ್ಕರ್ರವರ ಸತತ ವಾದ ಮತ್ತು ಪರಿಶ್ರಮದಿಂದಾಗಿ ಈ ಉಗ್ರವಾದಿಗಳು ತಮ್ಮ ನಿಲುವಿನಿಂದ ಕೊನೆಗೂ ಹಿಂದೆ ಸರಿದದ್ದು ಈಗ ಇತಿಹಾಸ. ಇದಲ್ಲದೆ ಅಂಬೇಡ್ಕರ್ರವರು ತಮ್ಮ ಬರಹದ ಉದ್ದಕ್ಕೂ ದನದ ಮಾಂಸ ಭಕ್ಷಣೆಯನ್ನು ಕೀಳಾಗಿ ಚಿತ್ರಿಸಿದ ಬ್ರಾಹ್ಮಣ್ಯದ ಕುತಂತ್ರವನ್ನು ಬಯಲುಗೊಳಿಸುತ್ತಲೇ ಇದ್ದರು. ಇಂಥಾ ಜನನಾಯಕ, ಮಹಾನ್ ದಾರ್ಶನಿಕ ಬುದ್ಧವಾದಿ ಅಂಬೇಡ್ಕರ್ರನ್ನು ಈ ಹಿಂದೂತ್ವವಾದಿಗಳು ತಮ್ಮ ಗೋವು ಪವಿತ್ರ ಎಂಬ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದೇ ಅವರ ಕೀಳು ಮನಸ್ಸಿಗೆ ಒಂದು ನಿದರ್ಶನ.
ಈ ಎಲ್ಲಾ ಚರ್ಚೆಗಳ ಹಿನ್ನೆಲೆಯಲ್ಲಿ ಗೋ ಸಂರಕ್ಷಣೆ ಮತ್ತು ಹತ್ಯಾ ನಿಷೇಧದ ಬಗ್ಗೆ ಸಂವಿಧಾನದಲ್ಲಿ 48ನೇ ಕಲಮನ್ನು ಸೇರಿಸಲಾಯಿತು. ಅದು ಹೇಳುವುದಿಷ್ಟು:
“The State
shall endeavour to organise agriculture and animal husbandry on modern and
scientific lines and shall, in particular, take steps for preserving and
improving the breeds, and prohibiting the slaughter, of cows and calves and
other milch and draught cattle.”
ಅಂದರೆ: “ದೇಶದ ಕೃಷಿಕ್ಷೇತ್ರ ಮತ್ತು ಪಶುಸಂಗೋಪನೆಯನ್ನು ಆಧುನಿಕ ಮತ್ತು ವೈಜ್ಞಾನಿಕ ನೆಲೆಯಲ್ಲಿ ಪುನರ್ಸಂಘಟಿಸಬೇಕು ಹಾಗೂ ಪ್ರಭುತ್ವವು ಗೋವು ಮತ್ತು ಇತರ ಹಾಲು ಕರೆಯುವ ಮತ್ತು ಕೃಷಿ ಉಪಯೋಗಿ ಜಾನುವಾರುಗಳ ಹತ್ಯೆಯನ್ನು ತಡೆಗಟ್ಟಲು ಕಾನೂನನ್ನು ರಚಿಸಬೇಕು." ಇಲ್ಲಿ ಸ್ಪಷ್ಟವಾಗಿ ಕಾಣುವಂತೆ ಈ ಕಲಮಿನಲ್ಲಿ ಹಾಲು ಕರೆಯುವ ಹಸುಗಳು ಮತ್ತು ಕೃಷಿಗೆ ಉಪಯೋಗಕಾರಿ ಜಾನುವಾರುಗಳನ್ನು ರಕ್ಷಿಸಬೇಕೆಂಬ ಆಶಯವಿದೆಯೇ ವಿನಃ ರೈತರಿಗೆ ಉಪಯೋಗಕ್ಕೆ ಬರದ ಗೋವನ್ನಾಗಲೀ, ಇತರ ಜಾನುವಾರುಗಳನ್ನಾಗಲೀ ಪವಿತ್ರವೆಂಬ ಅಥವಾ ಅನುಕಂಪದ ದೃಷ್ಟಿಯಿಂದ ಸಾಕಲೇಬೇಕೆಂಬ ಆದೇಶವಿಲ್ಲ.
ಇದರ ಬಗ್ಗೆಯೂ ಸುಪ್ರೀಂಕೋರ್ಟು ಸ್ಪಷ್ಟವಾದ ವ್ಯಾಖ್ಯಾನ ನೀಡಿದೆ. 1959ರ ಮೊಹಮ್ಮದ್ ಹನೀಫ್ ಖುರೇಷಿ ಮತ್ತು ಬಿಹಾರ್ ರಾಜ್ಯದ (AIR 1959 SCR 629) ಪ್ರಕರಣದಲ್ಲಿ ನಿರ್ಣಯವನ್ನು ನೀಡುವಾಗ ವರಿಷ್ಠ ನ್ಯಾಯಾಲಯವು ಈ ಬಗ್ಗೆ ಹೀಗೆ ಹೇಳಿದೆ:
“(i) that a
total ban on the slaughter of cows of all ages and calves of cows and calves of
she-buffaloes, male or female, was quite reasonable and valid and is in
consonance with the Directive Principles laid down in Article 48; (ii) that a
total ban on the slaughter of she-buffaloes or breeding bulls or working
bullocks (cattle as well as buffaloes) as long as they are capable of being
used as milch or draught cattle was also reasonable and valid; and (iii) that a
total ban on slaughter of she-buffaloes, bulls and bullocks (cattle or buffalo)
after they ceased to be capable of yielding milk or of breeding or working as
draught animals could not be supported as reasonable in the interests of the
general public and was invalid.”
ಪ್ರಸ್ತುತ ಆರ್ಥಿಕ ಸಂದರ್ಭದಲ್ಲಿ ಉಪಯೋಗಕ್ಕೆ ಬಾರದ ಜಾನುವಾರುಗಳು ಸಮಾಜಕ್ಕೆ ಒಂದು ಹೊರೆಯಾಗುವುದರಿಂದ ಅದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಹೀಗಾಗಿ ಸಂಪೂರ್ಣ ಜಾನುವಾರು ಹತ್ಯಾ ನಿಷೇಧ ಸಾಧ್ಯವಿಲ್ಲ ಎಂಬ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಾ ಮುಖ್ಯ ನ್ಯಾಯಮೂರ್ತಿ ಸಿ.ಆರ್. ದಾಸ್ರವರು ಮೂರು ಮುಖ್ಯಾಂಶಗಳನ್ನು ಪ್ರಸ್ತಾಪಿಸಿದ್ದರು.
“1. ಎಲ್ಲಾ ವಯಸ್ಸಿನ ಹಸುಗಳ ಮತ್ತು ಎಲ್ಲಾ ಕರುಗಳ ಹತ್ಯೆಯ ಮೇಲಿನ ನಿಷೇಧ ಸಿಂಧುವಾದದ್ದು. 2. ಹಾಲು ನೀಡುವ ಎಮ್ಮೆಗಳ ಮತ್ತು ಉಳುವ ಯೋಗ್ಯ ಎತ್ತುಗಳ ಹತ್ಯೆಯ ಮೇಲಿನ ನಿಷೇಧವೂ ಸರಿಯಾದದ್ದೇ. 3. ಆದರೆ ಹಾಲು ನೀಡದ ಎಮ್ಮೆಗಳ ಮತ್ತು ಉಳುಮೆಗೆ ಸಹಕಾರಿಯಾಗದ ಎತ್ತು ಮತ್ತು ದನಗಳ ಹತ್ಯೆಯ ಮೇಲಿನ ನಿಷೇಧವೂ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಸರಿಯಾದದ್ದಲ್ಲ.”
ಇದರ ಬಗ್ಗೆ 2005ರಲ್ಲಿ ಏಳು ಸದಸ್ಯರ ಸಾಂವಿಧಾನಿಕ ಪೀಠ ತನ್ನ ಅಭಿಪ್ರಾಯವನ್ನು ಬದ ಲಾಯಿಸಿದ್ದು ನಿಜ. ಆದರೆ ಅದಕ್ಕೆ ಕಾರಣ ಗುಜರಾತ್ ಸರ್ಕಾರ ಒದಗಿಸಿದ ಸುಳ್ಳುಪೆÇಳ್ಳೂ ಅಂಕಿಅಂಶಗಳು. ಗುಜರಾತ್ ಸರ್ಕಾರ ತನ್ನ ವಾದದಲ್ಲಿ ``ದನ ಮತ್ತು ಹಸುಗಳು ಸಾಯುವ ತನಕ ಗಂಜಲ ಮತ್ತು ಸಗಣಿ ಹಾಕುತ್ತವೆ. ಪ್ರತಿ ಹಸು ಮತ್ತು ದನಗಳನ್ನು ಸಾಕಲು ದಿನಕ್ಕೆ 25 ರೂ. ಖರ್ಚಾದರೆ ಈ ಸಗಣಿ ಮತ್ತು ಗಂಜಲ ಮಾರಿದರೆ 35 ರೂ. ದುಡ್ಡು ಸಿಗುತ್ತದೆ. ಆದ್ದರಿಂದ ಹಸು ಮತ್ತು ದನಗಳನ್ನು ಉಪಯುಕ್ತ ಮತ್ತು ಅನುಪಯುಕ್ತ ಎಂದು ವಿಭಾಗೀಕರಿಸುವುದೇ ತಪ್ಪು” ಎಂದು ಹೇಳಿತ್ತು. ಅಲ್ಲದೇ ಪ್ರತಿ ದನವು 16 ವರ್ಷಕ್ಕೆ ಮುಂಚೆ 0.8 ಅಶ್ವಶಕ್ತಿಯಷ್ಟು ಶಕ್ತಿ ಹೊಂದಿದ್ದರೆ 16 ವರ್ಷದ ನಂತರವು ಸಾಯುವ ತನಕ 0.6 ಅಶ್ವಶಕ್ತಿಯನ್ನು ಹೊಂದಿರುತ್ತಾದ್ದರಿಂದ ಅವು ಸಾಯುವ ತನಕ ಉಪಯುಕ್ತವೇ ಎಂದೆಲ್ಲ ಮೋದಿ ರಾಜ್ಯದ ಪಶುಸಂಗೋಪನಾ ಇಲಾಖೆ ಕಾಗಕ್ಕ ಗುಬ್ಬಕ್ಕನ ಕಥೆ ಕಟ್ಟಿತ್ತು.
ಸುಪ್ರೀಂಕೋರ್ಟಿನ ಎದುರು ಇದನ್ನು ವಿರೋಧಿಸಲು ರೈತ ಸಂಘಟನೆ ಯಾಗಲೀ, ಮಾನವ ಹಕ್ಕು ಸಂಘಟನೆಯಾಗಲೀ ಪ್ರತಿವಾದಿಗಳಾಗಿರಲಿಲ್ಲ. ಹೀಗಾಗಿ ಸುಪ್ರೀಂಕೋರ್ಟು ಸಾಯುವ ತನಕವೂ ಎಲ್ಲಾ ಹಸು, ದನ ಹಾಗೂ ಗೂಳಿಗಳು ರೈತನಿಗೆ ಉಪಕಾರಿಯೇ ಆಗಿರುತ್ತವಾದ್ದರಿಂದ ದನ ಮತ್ತು ಗೂಳಿಗಳನ್ನು 16 ವರ್ಷದ ನಂತರ ಹತ್ಯೆ ಮಾಡುವುದಕ್ಕೆ ನಿಷೇಧ ಹೇರಿರುವುದು ಸೂಕ್ತವೆಂದು ಅಭಿಪ್ರಾಯ ಪಟ್ಟಿತು. ಆದರೆ ಒಂದು ದನವನ್ನು ಸಾಕಲು ತಗಲುವ ವೆಚ್ಚ 100 ರೂ. ಅನ್ನು ಮೀರುತ್ತಿರುವ ಈ ಹೊತ್ತಿನಲ್ಲಿ ಹಾಲು ಕರೆಯದ ಮತ್ತು ಉಳುಮೆಗೆ ಬಾರದ ಜಾನುವಾರುಗಳನ್ನು ಸಾಕುವುದರಿಂದ ರೈತನಿಗೆ ಎಷ್ಟು ನಷ್ಟವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಾಗಿ ಸುಪ್ರೀಂಕೋರ್ಟಿನ ಈ ನಿರ್ಧಾರದ ಬುನಾದಿ ಬಿಜೆಪಿಯ ವಾದಕ್ಕೆ ವ್ಯತಿರಿಕ್ತವಾಗಿಯೇ ಇದೆ ಎನ್ನುವುದು ವಾಸ್ತವ. ಏಕೆಂದರೆ ಇಲ್ಲಿ ಕೋರ್ಟು ಸಂಪೂರ್ಣ ಗೋ ಸಂತತಿ ನಿಷೇಧ ಸರಿಯಾದದ್ದು ಎಂದು ಅಭಿಪ್ರಾಯಕ್ಕೆ ಬರಲು ಕಾರಣ ಅದು ಸಾಯುವ ತನಕ ರೈತನಿಗೆ ಸಹಕಾರಿ ಎಂಬ ಕಾರಣಕ್ಕೆ ಹೊರತು ಗೋವು ಪವಿತ್ರ ಅಥವಾ ಗೋವು ಮಾತ್ರ ಪವಿತ್ರ ಎಂಬ ಕಾರಣಕ್ಕಾಗಿಯಲ್ಲ. ಒಂದು ವೇಳೆ ಮುದಿ ದನ ಮತ್ತು ಹಸುಗಳು ರೈತನಿಗೆ ಸಹಕಾರಿಯಲ್ಲ ಎಂದು ಕೋರ್ಟಿಗೆ ಸಾಬೀತಾದರೆ ಮುದಿ ಎಮ್ಮೆ, ಕೋಣಗಳ ಹತ್ಯೆಯ ಜೊತೆಗೆ ಮುದಿ ಹಸು ಮತ್ತು ಎತ್ತುಗಳ ಹತ್ಯೆಗೂ ಸಮ್ಮತಿ ನೀಡುವುದು ಖಚಿತ.
ಹೀಗೆ ಬಿಜೆಪಿ ಸರ್ಕಾರದ ಮಸೂದೆಗೆ ಸಂವಿಧಾನದ, ನ್ಯಾಯಾಲಯದ ಮತ್ತು ಕಾನೂನಿನ ಸಮರ್ಥನೆಯಿಲ್ಲ. ಬಿಜೆಪಿ ಸರ್ಕಾರ ಹಸಿಸುಳ್ಳುಗಳನ್ನು ಹೇಳುವ ಮೂಲಕ ಜನರನ್ನು ದಾರಿತಪ್ಪಿಸುತ್ತಿದೆ. ರೈತರ ಹಿತದೃಷ್ಟಿಯಿಂದಲೂ, ಸಂವಿಧಾನದ ಆಶಯದ ದೃಷ್ಟಿಯಿಂದಲೂ, ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠದ ನಿರ್ದೇಶನದ ದೃಷ್ಟಿಯಿಂದಲೂ ಬಿಜೆಪಿ ಸರ್ಕಾರದ ಈ ಮಸೂದೆ ತಿರಸ್ಕಾರಕ್ಕೆ ಯೋಗ್ಯವಾಗಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ