ಗುರುವಾರ, ಏಪ್ರಿಲ್ 6, 2017

ರಕ್ತಸಿಕ್ತವಾಗುತ್ತಿರುವ ವೈದ್ಯ ಮತ್ತು ರೋಗಿಗಳ ಸಂಬಂಧ




 ಅನುಶಿವಸುಂದರ್ 
doctor ಗೆ ಚಿತ್ರದ ಫಲಿತಾಂಶ


ಕಳಪೆಯಾದ ಸಾರ್ವಜನಿಕ ಆರೋಗ್ಯ ಸೇವಾ ಸೌಲಭ್ಯಗಳು ವೈದ್ಯರು ಮತ್ತು ರೋಗಿಗಳನ್ನು ಪರಸ್ಪರ ಹೊಡೆದಾಟಕ್ಕೆ ಹಚ್ಚುತ್ತಿದೆ.

ವೈದ್ಯರು ಆತಂಕದಲ್ಲಿದ್ದಾರೆ; ರೋಗಿಗಳು ದುಃಖದಲ್ಲಿದ್ದಾರೆ. ಇದೀಗ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆಚ್ಚೂಕಡಿಮೆ ಇದೇ ವಾತಾವರಣವೇ ಕಾಣಬರುತ್ತಿದೆ. ಮಹಾರಾಷ್ಟ್ರದಲ್ಲಂತೂ ಇತ್ತಿಚೆಗೆ ಐದು ವಿವಿಧ ಪ್ರಕರಣಗಳಲ್ಲಿ ರೋಗಿಯ  ಬಗ್ಗೆ ನಿರ್ಲಕ್ಶ್ಯ ತೋರಿದರೆಂದು ಆರೋಪಿಸಿ ಅವರ ಸಂಬಂಧಿಕರು ಸಾರ್ವಜನಿಕ ಆಸ್ಪತ್ರೆಗಳ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಇದೇರೀತಿಯ ಪ್ರಕರಣಗಳು ದೆಹಲಿ, ಸೂರತ್, ಅಹಮದಾಬಾದ್, ಬುಲಂದ್ಶಹರ್ ಮತ್ತು ಚೆನ್ನೈಗಳಿಂದಲೂ ವರದಿಯಾಗಿದೆ. ಹಾಗೆ ನೋಡಿದರೆ, ವೈದ್ಯರ ಮೇಲೆ ಹಲ್ಲೆಯಾಗುವುದು ಭಾರತಕ್ಕೆ ವಿಶಿಷ್ಟವಾದ ವಿದ್ಯಮಾನವೇನಲ್ಲ. ಲ್ಯಾನ್ಸೆಟ್ ಮತ್ತು ಬ್ರಿಟಿಷ್ ಮೆಡಿಕಲ್ ಜರ್ನಲ್ ಎಂಬ ಪತ್ರಿಕೆಗಳು ಭಾರತ ಉಪಖಂಡದ ಎಲ್ಲಾ ದೇಶಗಳಲ್ಲೂ ಮತ್ತು ಚೀನಾದಲ್ಲೂ ವೈದ್ಯಾರ ಮೇಲೆ ಹಲ್ಲೆ ನಡೆಯುವ ಪ್ರಕರಣಗಳು ಹೆಚ್ಚುತ್ತಿವೆಯೆಂದು ವರದಿಮಾಡಿವೆ.

ಪ್ರಕರಣಗಳಲ್ಲಿ ಹಲವಾರು ಸಾಮಾನ್ಯ ಅಂಶಗಳಿವೆ. ಇಂಥ ಪ್ರಕರಣಗಳೆಲ್ಲವೂ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಗೆ ಅನುಗುಣವಾಗುವಷ್ಟು ಸಂಪನ್ಮೂಲ ಮತ್ತು ಸೌಲಭ್ಯಗಳಿಲ್ಲದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಂಭವಿಸುತ್ತಿವೆ. ಮತ್ತು ಉದ್ವಿಗ್ನರಾಗಿರುವ ರೋಗಿಗಳ ಸಂಬಂಧಿಕರ ಜೊತೆ ತೋರಿಸಬೇಕಿರುವಷ್ಟು ಸಹಾನುಭೂತಿಯನ್ನು ತೋರಿಸಲಾಗದ ಮಟ್ಟಿಗೆ ಅವಧಿ ಮೀರಿ ದುಡಿದು ಹೈರಾಣಾಗಿದ್ದ ಕಿರಿಯ ವೈದ್ಯರುಗಳ ಮೇಲೆ ಇಂಥಾ ಹಲ್ಲೆಗಳು ನಡೆಯುತ್ತಿವೆ. ಅಖಿಲ ಭಾರತ ವೈದ್ಯಕೀಯ ಸಂಸ್ಥೆಯು  ೨೦೧೫ರಲ್ಲಿ ನಡೆಸಿದ್ದ ೫೦೦ ವೈದ್ಯರುಗಳ ಅಧ್ಯಯನದಲ್ಲಿ ಶೇ.೭೫ರಷ್ಟು ವೈದ್ಯರು ಇಂಥಾ ಹಲ್ಲೆಗಳಿಗೆ ಅಥವಾ ಬೆದರಿಕೆಗಳಿಗೆ ಗುರಿಯಾಗಿರುವುದು ಬೆಳಕಿಗೆ ಬಂದಿತ್ತು.

ಒಂದು ಕಡೆ ವೈದ್ಯರುಗಳು ಪಾಳಿಗಿಂತ ಹೆಚ್ಚು ದುಡಿದು ದಣಿದಿರುತ್ತಾರೆ. ಮತ್ತೊಂದುಕಡೆ ರೋಗಿಗಳು ಮತ್ತವರ ಸಂಬಂಧಿಕರು ಸಜ್ಜನಿಕೆಯಿಲ್ಲದ ವೈದ್ಯರುಗ ಕುರಿತು, ಸಹಕಾರ ನೀಡದ ಆಸ್ಪತ್ರೆ ಸಿಬ್ಬಂದಿಗ ಕುರಿತು, ರೋಗಪತ್ತೆ ಮಾಡಲು ಅತ್ಯಗತ್ಯವಾದ ಸೌಲಭ್ಯಗಳು ಮತ್ತು ಅತ್ಯವಶ್ಯಕವಾದ ಔಷದಿಗಳು ಸಹ ಇಲ್ಲದಿರುವ ಬಗ್ಗೆ, ಮತ್ತು ರೋಗಿಯ ಪರಿಸ್ಥಿತಿ ಮತ್ತು ಮುಂದೆ ತೆಗೆದುಕೊಳ್ಳಬೇಕಾದ ಜಾಗ್ರತೆ ಇತ್ಯಾದಿಗಳ ಬಗ್ಗೆ ಯಾವುದೇ ಮಾಹಿತಿಗಳನ್ನು ನೀಡದಿರುವ ಬಗ್ಗೆ ದೂರುಗಳ ಮಹಾಪೂರವನ್ನೇ ಹರಿಸುತ್ತಾರೆ. ಇವೆಲ್ಲವೂ ಒಟ್ಟು ಸೇರಿ ಅವರ ಆತಂಕವನ್ನು ಇಮ್ಮಡಿಗೊಳಿಸುತ್ತದೆ. ಇದರ ಜೊತೆಗೆ ಅಗತ್ಯವಿರುವ ಔಷಧಿಗಳನ್ನು ಮತ್ತು ಸೇವೆಗಳನ್ನು ಖಾಸಗಿಯವರಿಂದ ಪಡೆದುಕೊಳ್ಳುವಂತೆ ನೀಡಲ್ಪಡುವ ಸಲಹೆಗಳು ಸಹ  ಅವರ ಹತಾಶೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
doctor ಗೆ ಚಿತ್ರದ ಫಲಿತಾಂಶ

ವೈದ್ಯರ ದೃಷ್ಟಿಕೋನದಿಂದ ನೋಡುವುದಾದರೆ ಆಸ್ಪತ್ರೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯರುಗಳು ತುರ್ತು ಸೇವೆಯನ್ನು ಕೂಡಲೇ ಒದಗಿಸಬೇಕಾದ ಒತ್ತಡದಲ್ಲಿರುತ್ತಾರೆ. ಮತ್ತೊಂದು ಕಡೆ ರೋಗಿಯನ್ನು ಸುತ್ತುವರೆದಿರುವ ಅವರ ಸಂಬಂಧಿಕರು ಮತ್ತು ಸ್ನೇಹಿತರು ಪವಾಡವನ್ನು ನಿರೀಕ್ಷಿಸುತ್ತಿರುತ್ತಾರೆ. ಆದರೆ ಹಲ್ಲೆಯ ಪ್ರಕರಣಗಳಲ್ಲಿ ತಮ್ಮ ರೋಗಿಯನ್ನೇ ಮೊದಲು ಗಮನಿಸಬೇಕೆಂದು ಒತ್ತಡ ಹಾಕುವ ಸ್ಥಳೀಯ ಪುಡಾರಿಗಳೇ ವೈದ್ಯರ ಮೇಲೆ ದೂರು ಸಲ್ಲಿಸುವಲ್ಲಿ ಮುಂದಿರುತ್ತಾರೆ. ಇಂಥಾ ಹಲ್ಲೆಗಳು ನಡೆಯುವ ಸಂದರ್ಭದಲ್ಲಿ ಕಿರಿಯ ವೈದ್ಯರುಗಳು ಸೌಲಭ್ಯಗಳೆ ಇಲ್ಲದ ಆಸ್ಪತ್ರೆಗಳಲ್ಲಿ ಪಾಳಿಮೀರಿ ಬೆನ್ನುಮೂಳೆ ಮುರಿಯುವಷ್ಟು ಕಾಲ ದುಡಿದಿರುತ್ತಾರೆ. ಮುಂಬೈಯಲ್ಲಿ ಇಂಥಾ ಹಲ್ಲೆಗೆ ಗುರಿಯಾದ ವೈದ್ಯರೊಬ್ಬರು ಸತತ ೩೬ ಗಂಟೆಗಳ ಕಾಲ ಪಾಳಿಮೀರಿ ಸೇವೆ ಸಲ್ಲಿಸಿದ್ದರು. ಇಷ್ಟು ಸುದೀರ್ಘ ದುಡಿಮೆ ಮಾಡಿದ ನಂತರದಲ್ಲಿ ಅವರು ನಿಜವಾಗಿ ವಿಶ್ರಾಂತಿ ತೆಗೆದುಕೊಳ್ಳಲು ಸಾಧ್ಯವಾಗುವುದು ಯಾವುದೇ ಸೌಕರ್ಯಗಳಿಲ್ಲದ ಹಾಸ್ಟೆಲ್ಗಳಲ್ಲಿ.

ವೈದ್ಯಕೀಯ ಆರೋಗ್ಯ ಸೇವೆಗಳ ಖಾಸಗೀಕರಣ ಮತ್ತು ವಾಣಿಜ್ಯೀಕರಣಗಳು ಹೆಚ್ಚುತ್ತಿದ್ದಂತೆ ಮತ್ತು ಹೆಚ್ಚಿನ ಶುಲ್ಕವನ್ನು ತೆರಲು ಸಾಧ್ಯವಿಲ್ಲದ ರೋಗಿಗಳ ಬಗ್ಗೆ ಖಾಸಗಿ ವೈದ್ಯರುಗಳು ತೋರುವ ಸಂವೇದನಾಶೂನ್ಯತೆಗಳ ಬಗ್ಗೆ ಅಸಹಾಯಕ ಬಡರೋಗಿಗಳ ಕಥೆಗಳು ಪುಂಖಾನುಪುಂಖವಾಗಿ ಹೊರಬರುತ್ತಿದ್ದಂತೆ ವೈದ್ಯರುಗಳೆಂದರೆ ಜೀವದಾತರೆಂಬ ಸಾರ್ವಜನಿಕರ ಅಭಿಪ್ರಾಯವೂ ಬದಲಾಗತೊಡಗಿದೆ. ಹೀಗಾಗಿ ದುರ್ಭರ ಸನ್ನಿವೇಶಗಳಲ್ಲಿ ತಮ್ಮ ಕೈಲಾಗುವುದೆಲ್ಲವನ್ನೂ ಮಾಡುವ ವೈದ್ಯರುಗಳ ಬಗ್ಗೆಯೂ ಒಂದೇ ರೀತಿಯ ಅಭಿಪ್ರಾಯಗಳು ಅರಿವಿಲ್ಲದೆ ವ್ಯಕ್ತವಾಗುತ್ತದೆ. ಸಾರ್ವಜನಿಕ ಆಸ್ಪತ್ರೆಗಳೇ ರೋಗಿಗಳ ಮತ್ತು ಅವರ ಸಂಬಂಧಿಕರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ. ಏಕೆಂದರೆ ಬಹಳಷ್ಟು ಬಾರಿ ಖಾಸಗಿ ಆಸ್ಪತ್ರೆಗಳಲ್ಲಿ ರೋಗ ಉಲ್ಭಣಗೊಂಡ ನಂತರವೇ ಸಾರ್ವಜನಿಕ ಆಸ್ಪತ್ರೆಗಳಿಗೆ ಕರೆತರುತ್ತಾರೆ. ಮತ್ತವರ ಕುಟುಂಬಗಳು ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕವನ್ನು ತೆತ್ತರೂ ಸಮರ್ಪಕ ಚಿಕಿತ್ಸೆ ದೊರೆಯದ ಬಗ್ಗೆ ವ್ಯಗ್ರರಾಗಿರುತ್ತಾರೆ.

ವೈದ್ಯರುಗಳನ್ನು ರಕ್ಷಿಸಲು ಮತ್ತು ಇಂಥಾ ಹಿಂಸಾಚಾರವನ್ನು ತಡೆಗಟ್ಟಲು ೧೪ ರಾಜ್ಯಗಳು ಕಾನೂನನ್ನು ಜಾರಿಗೊಳಿಸಿವೆ. ಆದರೂ ಅದರ ಅನುಷ್ಠಾನ ಮಾತ್ರ ಎಲ್ಲೂ ತೃಪ್ತಿಕರವಾಗಿಲ್ಲ. ಉದಾಹರಣೆಗೆ ಕುರಿತು ಮಹಾರಾಷ್ಟ್ರ ಸರ್ಕಾರ ತಂದಿರುವ ಕಾಯಿದೆಯು (ಮಹ್ರಾಷ್ಟ್ರ ಮೆಡಿಕೇರ್ ಸರವೀಸ್ ಪರ್ಸನ್ಸ್ ಅಂಡ್ ಮೆಡಿಕೇರ್ ಸರ್ವೀಸ್ ಇನ್ಸ್ಟಿಟ್ಯೂಷನ್ಸ್ (ಪ್ರಿವೆನ್ಷನ್ ಆಫ್ ವಯಲೆನ್ಸ್ ಅಂಡ್ ಡ್ಯಾಮೇಜ್ ಆರ್ ಲಾಸ್ ಆಫ್ ಪ್ರಾಪರ್ಟಿ) ಅಕ್ಟ್ ೨೦೧೦- ಮಹಾರಾಷ್ಟ್ರ ವೈದ್ಯಕೀಯ ಸೇವೆಯಲ್ಲಿರುವ ವ್ಯಕ್ತಿ ಮತ್ತು ಸಂಸ್ಥೆಗಳ ಮೇಲೆ ಹಿಂಸಾಚಾರ ಮತ್ತು ಆಸ್ತಿಪಾಸ್ತಿಗಳಿಗೆ ಹಾನಿಯುಂಟುಮಾಡುವುದನ್ನು ನಿಗ್ರಹಿಸುವ ಕಾಯಿದೆ-೨೦೧೦) ವೈದ್ಯರ ಮೇಲೆ ನಡೆಯುವ ಹಲ್ಲೆಗಳನ್ನು ಜಾಮೀನು ರಹಿತ ಅಪರಾಧವೆಂದು ಪರಿಗಣಿಸಿ ಮೂರು ವರ್ಷಗಳ ಸೆರೆವಾಸ ಮತ್ತು ರೂ.೫೦,೦೦೦ ಜುಲ್ಮಾನೆಯ ಶಿಕ್ಷೆಯನ್ನು ವಿಧಿಸುತ್ತದೆ. ಅಷ್ಟುಮಾತ್ರವಲ್ಲ. ಆಸ್ತಿಪಾಸ್ತಿಗೆ ಉಂಟಾದ ಹಾನಿಯ ಎರಡು ಪಟ್ಟು ಹೆಚ್ಚು ಮೊತ್ತವನ್ನು ಅಪರಾಧಿಯಿಂದಲೇ ವಸೂಲಿ ಮಾಡುವುದಕ್ಕೂ ಕಾನೂನಿನಲ್ಲಿ ಅವಕಾಶವಿದೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಕಾಯಿದೆಯನ್ವಯ ೫೩ ಪ್ರಕರಣಗಳು ದಾಖಲಾಗಿದ್ದರೂ ಈವರೆಗೆ ಒಂದೇ ಒಂದು ಪ್ರಕರಣದಲ್ಲೂ ಶಿಕ್ಷೆಯಾಗಿಲ್ಲ. ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಪ್ರಕಾರ ಇತ್ತೀಚಿನ ಹಿಂಸಾಚಾರಗಳಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಜಾಮೀನು ದೊರೆತಿದೆ.

ಕಾನೂನುಗಳು ಒಂದು ಕಡೆಯಿದ್ದರೆ, ಇಂಥಾ ಪ್ರಕರಣಗಳು ಸಂಭವಿಸಿದ ಕೂಡಲೇ ಹಲವಾರು ಆಸ್ಪತ್ರೆಗಳು ತಮ್ಮ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಉದಾಹರಣೆಗೆ ದೆಹಲಿಯ ಅತ್ಯಂತ ದೊಡ್ಡ ಸರ್ಕಾರಿ ಆಸ್ಪತೆಯಾದ  ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ತಿಂಗಳಿಗೊಮ್ಮೆ ಇಂಥಾ ಘಟನೆಗಳು ಸಂಭವಿಸುತ್ತಿತ್ತು. ಇಂಥ ಹಿಂಸಾಚಾರವನ್ನು ಪ್ರತಿಭಟಿಸುತ್ತಾ ಕಳೆದ ಆರು ವರ್ಷಗಳಲ್ಲಿ ೨೦ ಸಾರಿ ಆಸ್ಪತ್ರೆ ಸಿಬ್ಬಂದಿಗಳು ಕೆಲಸ ನಿಲ್ಲಿಸಿ ಮುಷ್ಕರ ಹೂಡಿದ್ದರು. ಹಿನ್ನೆಲೆಯಲ್ಲಿ ಈಗ ಆಸ್ಪತ್ರೆಯು ಖಾಸಗಿ ಬೌನ್ಸರ್ (ಹಿಡಿದು ತದುಕುವ ಸಿಬ್ಬಂದಿ) ಗಳನ್ನು ನೇಮಕಮಾಡಿಕೊಂಡಿದೆ. ಆದರೂ ಭದ್ರತಾ ಸಿಬ್ಬಂದಿಗಳನ್ನು ಹೆಚ್ಚಿಸಿಕೊಳ್ಳುವುದು ಒಂದು ಅಲ್ಪಕಾಲೀನ ಬಿಡಿಬಿಡಿ ಕ್ರಮವಷ್ಟೇ ಆಗಬಹುದು. ಅದು ವೈದ್ಯರು ಮತ್ತು ಜನಸಮುದಾಯದ ನಡುವೆ ಅಂತರವನ್ನು ಹೆಚ್ಚಿಸಿ ತದ್ವಿರುದ್ಧ ಪರಿಣಾಮವನ್ನೇ ಉಂಟುಮಾಡಬಹುದು. ಹದಗೆಡುತ್ತಿರುವ ಪರಿಸ್ಥಿತಿಯಿಂದ ವ್ಯಾಕುಲರಾಗಿರುವ ಹಲವು ಹಿರಿಯ ವೈದ್ಯರುಗಳು ತಮ್ಮ ಕಿರಿಯ ಸಹೋದ್ಯೋಗಿಗಳಿಗೆ ರೋಗಿಗಳ ಸಂಬಂಧಿಕರ ಜೊತೆ ಇನ್ನೂ ಉತ್ತಮವಾಗಿ ಹೇಗೆ ವ್ಯವಹರಿಸಬಹುದೆನ್ನುವ ಬಗ್ಗೆ ತರಬೇತಿ ನೀಡಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕೆಲವು ಸಾರ್ವಜನಿಕ ಆಸ್ಪತ್ರೆಗಳು ಸಹ ಇಂಥಾ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಂಡು ಮೇಲ್ಪಂಕ್ತಿ ಹಾಕಿಕೊಟ್ಟಿವೆ. ವೈದ್ಯಕೀಯ ಶಿಕ್ಷಣವು ಅಂಶದ ಬಗ್ಗೆ ಹೆಚ್ಚಿನ ಗಮನವನ್ನು ನೀಡಿಲ್ಲ. ಒಂದು ವೇಳೆ ಅದು ಶಿಕ್ಷಣದ ಭಾಗವಾದರೂ ತಮ್ಮ ರೋಗಿಗಳ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲಾಗದ ವೈದ್ಯರು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡುತ್ತಾರೆ.

ಅದೇವೇಳೆಯಲ್ಲಿಸಹಾನುಭೂತಿಯುಳ್ಳ ಮತ್ತು ಸಂವಹನಾ ಕೌಶಲ್ಯವುಳ್ಳ ವೈದ್ಯರಿದ್ದ ಮಾತ್ರಕ್ಕೆ ಸಮಸ್ಯೆ ಬಗೆಹರಿಯುವುದಿಲ್ಲ. ಸಾರ್ವಜನಿಕ ಆಸ್ಪತ್ರೆಗೆ ಎಡತಾಕುತ್ತಿರುವ ರೋಗಿಗಳ ಸಂಖ್ಯೆ ಬೃಹತ್ ಪ್ರಮಾಣದಲ್ಲಿ ಏರುತ್ತಿದೆ. ಹೀಗಾಗಿ ಸಮಸ್ಯೆಯು ಈಗಿರುವ ವೈದ್ಯಕೀಯ ಸೇವಾ ವ್ಯವಸ್ಥೆಯಲ್ಲಿ ಆಳವಾದ ರಚನಾತ್ಮಕ ಬದಲಾವಣೆಯನ್ನು ಆಗ್ರಹಿಸುತ್ತದೆ. ಭಾರತವು ಆರೋಗ್ಯ ಸೇವೆಗೆ ತನ್ನ ಬಜೆಟ್ಟಿನಲ್ಲಿ ಅತ್ಯಂತ ಕನಿಷ್ಟ ಮೊತ್ತವನ್ನು ಎತ್ತಿಡುತ್ತದೆ. ಅದೇರೀತಿ : ರಷ್ಟಿರುವ ರೋಗಿ-ವೈದ್ಯರ ನಡುವಿನ ಅನುಪಾತವು ಸಹ ಅತ್ಯಂತ ಕಡಿಮೆಯಾಗಿದೆ. ಇದು ಮಹಾರಾಷ್ಟ್ರ ಮತ್ತು ಬಿಹಾರಗಳಲ್ಲಿ ಇನ್ನೂ ಕಡಿಮೆ. ಪರಿಸ್ಥಿತಿ ಉಲ್ಭಣಗೊಂಡು ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ಸಂಭವಿಸಿದಂತೆ ಬಿಕ್ಕಟಿನ ಪರಿಸ್ಥಿತಿ ಉಂಟಾದಾಗ ಮಾತ್ರ ಇಡಿಯಾದ ದೃಷ್ಟಿಕೋನವಿಲ್ಲದ ಕೆಲವು ಅಲ್ಪಕಾಲೀನ ಮತ್ತು ಬಿಡಿಬಿಡಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ಎಲ್ಲಿಯತನಕ ಆರೋಗ್ಯ ಸೇವೆಯ ಮೇಲೆ ಹೆಚ್ಚಿನ ಹಣಹೂಡಿಕೆ ಮಾಡಿ ಸಮರ್ಥವಾದ ಆರೋಗ್ಯ ಸೇವೆಯನ್ನು ಒದಗಿಸುವ ಮಟ್ಟಿಗೆ ಸಾರ್ವಜನಿಕ ಆಸ್ಪತ್ರೆಗಳನ್ನು ಬಲಿಷ್ಟಗೊಳಿಸುವುದಿಲ್ಲವೋ ಅಲ್ಲಿಯವರೆಗೆ ವೈದ್ಯ ಮತ್ತು ರೋಗಿಗಳ ನಡುವಿನ ಸಂಬಂಧಗಳ ಆರೋಗ್ಯ ಸುಧಾರಿಸುವುದಿಲ್ಲ.
                               ಕೃಪೆ: Economic and Political Weekly
                April 1, 2017. Vol. 52. No.13
                                                                                           








                

ಕಾಮೆಂಟ್‌ಗಳಿಲ್ಲ: