ಬುಧವಾರ, ಏಪ್ರಿಲ್ 19, 2017

ಕಾಶ್ಮೀರವು ನೀಡಿರುವ ಸಂದೇಶ ಸ್ಪಷ್ಟವಾಗಿದೆ


  ಅನುಶಿವಸುಂದರ್
kashmir ಗೆ ಚಿತ್ರದ ಫಲಿತಾಂಶ


ಸಂಸತ್ ಉಪಚುನಾವಣೆಯ ಬಹಿಷ್ಕಾರವು ಭಾರತದ ಪ್ರಭುತ್ವದ ಬಗ್ಗೆ ಕಾಶ್ಮೀರಿಗಳು ಎಷ್ಟು  ಭ್ರಮನಿರಸನಗೊಂಡಿದ್ದಾರೆಂಬುದನ್ನು ತೋರಿಸುತ್ತದೆ.

ಕಾಶ್ಮೀರದ ಕಣಿವೆಯಲ್ಲಿ ನಡೆದ ಚುನಾವಣೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಿರುವುದು ಅಲ್ಲಿನ ಜನರ ಬದಲಾಗುತ್ತಿರುವ ಮನೋಧರ್ಮಕ್ಕೆ ಸೂಚಕವೆಂದು ತುಂಬಾದಿನಗಳಿಂದ ಭಾರತೀಯರನ್ನು ನಂಬಿಸಿಕೊಂಡು ಬರಲಾಗಿದೆ. ನಾವೂ ಸಹ ಚುನಾವಣೆಯಲ್ಲಿ ಮತಹಾಕಿದವರ ಸಂಖ್ಯೆಯನ್ನು ಗಮನಿಸುತ್ತಿದ್ದೇವೆಯೇ ವಿನಃ ಮತವನ್ನು ಬಹಿಷ್ಕಾರ ಮಾಡಿದವರ ಸಂಖ್ಯೆಂiನ್ನು ಗಮನಿಸುತ್ತಿಲ್ಲ. ದಮನದ ತೀವ್ರತೆ ಎಷ್ಟೇ ಇದ್ದರೂ ಕಾಶ್ಮೀರಿಗಳು ಹೊರಬಂದು ತಮ್ಮ ಮತಗಳನ್ನು ಚಲಾಯಿಸುತ್ತಾರೆಂದು ನಮ್ಮನ್ನು ನಂಬಿಸಲಾಗಿತ್ತು.

ಆದರೆ ಏಪ್ರಿಲ್ ರಂದು ನಡೆದ ಶ್ರೀನಗರದ ಉಪಚುನಾವಣೆಯಲ್ಲಿ ದಾಖಲಾದ ಅತ್ಯಂತ ಕನಿಷ್ಟ- ಶೇ..೧೪ - ಮತದಾನ ಮತ್ತು ಅದೇ ದಿನ ನಡೆದ ಹಿಂಸಾಚಾರಗಳಲ್ಲಿ ಯುವ ಪ್ರತಿಭಟನಾಕಾರರು ಸತ್ತು ೨೦೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು ನಿಜವಾದ ಕಥೆಯನ್ನು ಬಿಚ್ಚಿಟ್ಟಿದೆಭಾರತದ ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಕಾಶ್ಮೀರಿಗಳು ಸಂಪೂರ್ಣವಾಗಿ ಭ್ರಮನಿರಸನಗೊಂಡಿದ್ದಾರೆಂಬುದನ್ನು ಇದು ಸಾಬೀತುಪಡಿಸುತ್ತದೆ.

ಇಲ್ಲಿ ಮತ್ತೊಂದು ವಿಷಯವನ್ನು ನಾವು ಸ್ಪಷ್ಟವಾಗಿ ಗಮನಿಸಬೇಕು. ಕಾಶ್ಮೀರದ ಸ್ಥಳೀಯ ಸಂಸ್ಥೆಗಳಿಗೆ, ಶಾಸನ ಸಭೆಗಳಿಗೆ ಮತ್ತು ಲೋಕಸಭಗೆಳಿಗೆ ನಡೆಯುವ ಚುನಾವಣೆಗಳಲ್ಲಿ ಭಿನ್ನ ಭಿನ್ನ ರೀತಿಯಲ್ಲಿ ಕಾಶ್ಮೀರಿಗಳು ಮತದಾನ ಮಾಡುತ್ತಾರೆ. ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಗಳಲ್ಲಿ ಹೆಚ್ಚು ಮತದಾನ ದಾಖಲಾದರೆ ಲೋಕಸಭಾ ಚುನಾವಣೆಗಳಲ್ಲಿ ಅತ್ಯಂತ ಕಡಿಮೆ ಮತದಾನ ದಾಖಲಾಗುತ್ತದೆ. ಇದು ಆಯಾ ಸಂಸ್ಥೆಗಳ ಪ್ರಸ್ತುತತೆ ಮತ್ತು ಅವುಗಳ ಬಗ್ಗೆ ಕಾಶ್ಮೀರಿಗಳು ಇಟ್ಟಿರುವ ವಿಶ್ವಾಸದ ಮಟ್ಟವನ್ನು ಕೂಡಾ ಪ್ರತಿಫಲಿಸುತ್ತದೆ. ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುವ ಮತದಾನವು ತಮ್ಮ ನಿತ್ಯದ ಸಮಸ್ಯೆಗಳ ಪರಿಹಾರದ ಬಗ್ಗೆ ಜನರು ತೋರುತ್ತಿರುವ ಬಯಕೆಯನ್ನು ತೋರಿಸುತ್ತದೆ. ಶಾಸನಸಭೆಗೆ ಓಟುಹಾಕುವಾಗ ತಮ್ಮ ರಾಜ್ಯ ಸರ್ಕಾರವು ದಶಕಗಳಿಂದ ಜನರು ಎದುರಿಸುತ್ತಿರುವ ದಮನದ ವಿನಾಶಕಾರಿ ಪರಿಣಾಮಗಳನ್ನು ನಿವಾರಿಸಬಲ್ಲದೇ ವಿನಃ ರಾಜಕೀಯ ಬಿಕ್ಕಟ್ಟನಲ್ಲ ಎಂದು ಅರಿತುಕೊಂಡೇ ಮತದಾನ ಮಾಡುತ್ತಾರೆ. ಸಂಸತ್ತಿಗೆ ನಡೆಯುವ ಮತದಾನ ಸಂಪೂರ್ಣ ಭಿನ್ನವಾದದ್ದು. ೧೯೯೩ರಲ್ಲಿ ಭಾರತದದ ಸಂಸತ್ತು ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವೆಂದು ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರವೂ ಭಾರತಕ್ಕೇ ಸೇರಬೇಕೆಂದು ಸರ್ವಸಮ್ಮತಿಯಿಂದ ನಿರ್ಣಯವನ್ನು ಕೈಗೊಂಡಾಗಲಿಂದ ಬಹುಸಂಖ್ಯಾತ ಕಾಶ್ಮೀರಿಗಳ ಮಟ್ಟಿಗೆ ಭಾರತದ ಸಂಸತ್ತು ಪ್ರಸ್ತುತತೆಯನ್ನೆ ಕಳೆದುಕೊಂಡಿದೆ. ಅದೇ ಸಮಯದಲ್ಲಿ ಭಾರತದ ಸಂಸತ್ತು ಕಾಶ್ಮೀರಿಗಳು ಎದುರಿಸುತ್ತಿರುವ ಸೈನಿಕ ದಮನದ ಬೀಭತ್ಸತೆಯನ್ನು ಮತ್ತು ಅವರ ಪ್ರಜಾತಾಂತ್ರಿಕ ಆಶೋತ್ತರಗಳನ್ನು ಸಂಪೂರ್ಣವಾಗಿ ಕಡೆಗಣಿಸಿತು. ಹಾಲಿ ಸರ್ಕಾರವಾಗಲೀ ಅಥವಾ ಹಿಂದಿನ ಸರ್ಕಾರಗಳಾಗಲೀ ಕಾಶ್ಮೀರದ ರಾಜಕೀಯ ಬಿಕ್ಕಟ್ಟನ್ನು ಬಗೆಹರಿಸಲು ಕಾಶ್ಮೀರಿಗಳೊಂದಿಗೆ ಒಂದು ಗಂಭೀರ ರಾಜಕೀಯ ಸಮಾಲೋಚನೆಯನ್ನು ಮಾಡಬೇಕೆಂಬ ಆಸಕ್ತಿಯನ್ನೇ ತೋರಲಿಲ್ಲ. ಇನ್ನು ಕಾಶ್ಮೀರಕ್ಕೆ ಸಂವಿಧಾನಿಕವಾಗಿ ದತ್ತವಾಗಿದ್ದ ಸ್ವಾಯತ್ತತೆಯ ಸ್ವರೂಪವನ್ನು  ೧೯೬೪ರ ವೇಳೆಗೆ ಒಂದೊಂದಾಗಿ ಹಿಂತೆಗೆದುಕೊಂಡು ಟೊಳ್ಳಾಗಿಸಿದ ಮೇಲೆ ಕಾಶ್ಮೀರದ ಸ್ವಾಯತ್ತತೆಯ ವಿಷಯವನ್ನು ಕೇವಲ ಕಾಶ್ಮೀರದಲ್ಲಿ ಮಾತ್ರವಲ್ಲ ಕಾಶ್ಮೀರದ ಹೊರಗೂ ಯಾರೂ ಗಂಭೀರವಾಗಿ ಪರಿಗಣಿಸಲು ಸಿದ್ಧರಿಲ್ಲ.

ಹೀಗೆ ಸರ್ಕಾರದ ಮುಂದಿಡುತ್ತಿರುವ ತರ್ಕ ಸರಣಿಯನ್ನು ಪರಿಶೀಲಿಸಿದರೂ ಭಾರತದ ಸಂಸತ್ ಚುನಾವಣೆಯ ಬಗ್ಗೆ ೧೯೯೮ರಿಂದಲೂ ಕಾಶ್ಮೀರ ಕಣಿವೆಯಲ್ಲಿ ನಿರಾಸಕ್ತಿಯೇ ವ್ಯಕ್ತವಾಗಿರುವುದನ್ನು ಗಮನಿಸಬಹುದು. ೧೯೯೮ರಲ್ಲಿ ಶೇ. ೭೦-೮೦ರಷ್ಟು ಕಾಶ್ಮೀರಿ ಮತದಾರರು ಮತದಾನವನ್ನು ಬಹಿಷ್ಕರಿಸಿದ್ದರು. ೨೦೧೪ರಲ್ಲಿ ಶೇ.೭೪ರಷ್ಟು ಜನರು ಮತದಾನವನ್ನು ಬಹಿಷ್ಕರಿಸಿದ್ದರೆ ಈಗ ಶೇ.೯೩ ರಷ್ಟು ಜನರು ಸಂಸತ್ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಇದು ಕೇಂದ್ರದ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿರುವ ಸರ್ಕಾರದ ಆಳ್ವಿಕೆಯಡಿಯಲ್ಲಿ ಕಾಶ್ಮೀರದೊಳಗೆ ಭಾರತದ gವಾಗಿರುವವರ ಮತಸಂಖ್ಯೆ ಗಮನೀಯವಾಗಿ ಇಳಿಕೆಯಾಗಿರುವುದನ್ನೂ ಸಹ ಸೂಚಿಸುತ್ತದೆ. ನರೇಂದ್ರ ಮೋದಿಯವರು ತಮ್ಮ ಪ್ರವಾಸೋದ್ಯಮವೋ ಅಥವಾ ಭಯೋತ್ಪಾದನೆಯೋ ಎಂಬ ಪ್ರಾಸಬದ್ಧ ಹೇಳಿಕೆಗಳಿಂದ ಭಾರತದೊಳಗಿನ ತನ್ನ ಮತೋನ್ಮಾದಿ ಮತ್ತು ಭಾವೋನ್ಮಾದೀ ಭಕ್ತಗಣವನ್ನು ತೃಪ್ತಗೊಳಿಸಬಹುದು. ಆದರೆ ಇಂಥಾ ಘೋಷಣೆಗಳು ಕಾಶ್ಮೀರ ಕಣಿವೆಯಲ್ಲಿ ಯಾವ ಅರ್ಥವನ್ನಾಗಲೀ ಅಥವಾ ಅತಿಸಣ್ಣ ಪರಿಣಾಮವನ್ನಾಗಲೀ ಉಂಟುಮಾಡುವುದಿಲ್ಲ. ದುರಂತವೆಂದರೆ ಕಾಶ್ಮೀರದ ಎಲ್ಲಾ ಸಮಸ್ಯೆಗಳಿಗೆ ಪಾಕಿಸ್ತಾನವೇ ಕಾರಣ ಎಂದು ಇತರರನ್ನು ನಂಬಿಸಲು ತಾನು ಮಾಡುತ್ತಿರುವ ಹುಸಿಪ್ರಚಾರವನ್ನು ತಾನೇ ನಿಜವೆಂದು ನಂಬಿಕೊಂಡುಬಿಡುವ ಸರ್ಕಾರವೊಂದು ಪ್ರವಾಸೋದ್ಯಮ ಮತ್ತು ಉದ್ಯೋಗಗಳ ಆಮಿಷವನ್ನು ಮುಂದಿಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಿಬಿಡಬಹುದೆಂದು ತನ್ನನ್ನು ತಾನೇ ನಂಬಿಸಿಕೊಳ್ಳುವುದು ಮತ್ತು ಇತರರನ್ನು ನಂಬಿಸಲು ಯತ್ನಿಸುವುದು.. ತಿಳವಳಿಕೆಯನ್ನು ಹಲವಾರು ಸಂಪುಟ ದರ್ಜೆ ಸಚಿವರುಗಳು, ಒಬ್ಬ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರರು, ಮತ್ತು ಮಾಜಿ ಸೇನಾಧಿಕಾರಿಗಳನ್ನು ಒಳಗೊಂಡಂತೆ ಹಿಂದೆ ಭಾರತೀಯ ಆಡಳಿತ ವ್ಯವಸ್ಥೆಯ ಭಾಗವಾಗಿದ್ದವರೇ ಪ್ರಶ್ನಿಸಿದ್ದಾರೆ. ಕಾಶ್ಮೀರಿ ಬಂಡಾಯದ ಮೂಲವು ಅದರ ಸ್ಥಳೀಯತೆಯಲ್ಲೇ ಇರುವುದನ್ನೂ ಮತ್ತು ಪರಿಣಾಮಕಾರಿ ರಾಜಕೀಯ ಮಾತುಕತೆಗನ್ನು ಪ್ರಾರಂಭಿಸುವುದರ ಅಗತ್ಯವನ್ನೂ ಅಂಥವರು ಪ್ರತಿಪಾದಿಸಿದ್ದಾರೆ. ದುರದೃಷ್ಟವಶಾತ್ ದೆಹಲಿ ಸರ್ಕಾರವು ಕಾಶ್ಮೀರ ನೀತಿಯಲ್ಲಿ ತನಗಿರುವ ವಿವೇಕದ ಕೊರತೆಯ ಪ್ರದರ್ಶನವನ್ನು ಮುಂದುವರೆಸುತ್ತಲೇ ಇದೆ.

ಭಾರತದ ಸಾರ್ವಜನಿಕ ನೀತಿ ಮತ್ತು ಅಭಿಪ್ರಾಯಗಳನ್ನು ರೂಪಿಸುವ ಮಹಾಶಯರುಗಳು ಕಾಶ್ಮೀರಿಗಳನ್ನು ತಮ್ಮ ಮುಸ್ಲಿಮ್ತನ ವನ್ನು ಎತ್ತಿಹಿಡಿಯುವುದನ್ನೂ ಮತ್ತು ಪಾಕಿಸ್ತಾನದ ಕೈಗೊಂಬೆಗಳಂತೆ ವರ್ತಿಸುವುದನ್ನೂ ತೀವ್ರವಾಗಿ ಆಕ್ಷೇಪಿಸುತ್ತಾರೆ. ಆದರೆ ಇದೇ ಮಹಾಶಯರುಗಳು ಇದೇ ಭಾರತದ ಪ್ರಭುತ್ವವು ಭಾರತದೊಳಗಿನ ಮುಸ್ಲಿಮರ ವಿರುದ್ಧವಾಗಿರುವುದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ. ಉದಾಹರಣೆಗೆ, ಜಮ್ಮು ವಾಣಿಜ್ಯ ಮತ್ತು ಕೈಗಾರಿಗೆಳ ಒಕ್ಕೂಟದ ಅಧ್ಯಕ್ಷ ರಾಕೇಶ್ ಮೆಹ್ತಾ ಅವರು ಇತ್ತೀಚೆಗೆ ಜನರು ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಮುಸ್ಲಿಮರನ್ನು ಪತ್ತೆಹಚ್ಚಿ ಕೊಲ್ಲಬೇಕೆಂದು ಕೊಟ್ಟ ಹೇಳಿಕೆಯನ್ನೇ ತೆಗೆದುಕೊಳ್ಳಿ. ಇದೊಂದು ಅಪವಾದದ ಸಂಗತಿಯೇನಲ್ಲ. ಇದು ದೇಶದ ಹಲವಾರು ಕಡೆ ಹೆಚ್ಚುತ್ತಿರುವ ಮತ್ತು ನಿರ್ಲಜ್ಜ ಬಹಿರಂಗ ಮುಸ್ಲೀಮ್ ವಿರೋಧಿ ದಾಳಿಗಳ ಮುಂದುವರೆಕೆಯಾಗಿದೆ.

ಅದೇ ರೀತಿ ಕಾಶ್ಮೀರದ ಬೀದಿಗಳಲ್ಲಿ ಅತ್ಯಂತ ಆಕ್ರೋಶ ಮತ್ತು ಬಂಡಾಯದ ಮನೋಭಾವಗಳು ಮಡುಗಟ್ಟಿದೆ ಎಂಬುದನ್ನೂ ಅರ್ಥಮಾಡಿಕೊಳ್ಳುವುದೂ ಅತ್ಯಗತ್ಯವಾಗಿದೆ. ಒಂದೆಡೆ ಗುಂಡುಗಳು ಮತ್ತು ಪೆಲೆಟ್ಟುಗಳ ದಾಳಿಗಳಿಗೆ ಬಲಿಯಾದವರ ಸಂಖ್ಯೆ ಹೆಚ್ಚುತ್ತಿದ್ದರೆ ಮತ್ತೊಂದು ಕಡೆ ಭಾರತ ಸರ್ಕಾರಕ್ಕೆ ಸಶಸ್ತ್ರ ಹೋರಾಟದ ಭಾಷೆ ಮಾತ್ರ ಅರ್ಥವಾಗುತ್ತದೆ ಎಂಬ ಮನೋಭಾವ ಬಹುಪಾಲು ಕಾಶ್ಮೀರಿಗಳಲ್ಲಿ ಅದರಲ್ಲೂ ವಿಶೇಷವಾಗಿ ಯುವಜನತೆಯಲ್ಲಿ ಗಟ್ಟಿಯಾಗತೊಡಗಿದೆ. ಎನ್ಕೌಂಟರ್ಗಳು ನಡೆಯುತ್ತಿರುವಾಗಲೇ ಎನ್ಕೌಂಟರ್ ನಡೆಯುತ್ತಿರುವ ಪ್ರದೇಶದಲ್ಲಿ  ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿ ತಮಗಾಗಿ ಬಂದೂಕನ್ನು ಕೈಗೆತ್ತಿಕೊಂಡ ತಮ್ಮವರನ್ನು ಬೆಂಬಲಿಸಲೂ ಮತ್ತು ರಕ್ಷಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ವಿದ್ಯಮಾನಗಳು  ಹೇಳುತ್ತಿರುವುದಿಷ್ಟೆ. ಹಿಂದೂ ಬಹುಸಂಖ್ಯಾv ಪರವಾಗಿರುವ ಪ್ರಭುತ್ವವು ಅಧಿಕಾರದಲ್ಲಿರುವ ಭಾರತ ಒಕ್ಕೂಟದ ಜೊತೆ ಸೇರಿಕೊಳ್ಳುವುದು ತಮ್ಮ ಹಿತಾಸಕ್ತಿಗೆ ವಿರುದ್ಧವೆಂಬ  ತೀರ್ಮಾನಕ್ಕೆ ಕಾಶ್ಮೀರಿಗಳು ಬಂದಂತಿದೆ. ಸರ್ಕಾರದ ಪರ ವಕಾಲತ್ತು ವಹಿಸುವವರು ಪ್ರಚಾರ ಮಾಡುತ್ತಿರುವಂತೆ ಕಾಶ್ಮೀರಿ ಯುವಕರು ಕೆಲವು ನೂರು ರೂಪಾಯಿಗಳಿಗಾಗಿ ತಮ್ಮ ಪ್ರಾಣವನ್ನು ಮತ್ತು ಅಂಗಾಂಗಗಳನ್ನು ಪಣಕ್ಕಿಡುತ್ತಿಲ್ಲ. ತಮ್ಮ ಕೂಗನ್ನು ಹಾಗೂ ಆಜಾದಿಗಾಗಿನ ತಮ್ಮ ಹಕ್ಕೊತ್ತಾಯಗಳನ್ನು ಕೇಳಿಸಿಕೊಳ್ಳುವಂತೆ ಮಾಡಲು ಇದಕ್ಕಿಂತ ಬೇರೆ ಮಾರ್ಗೋಪಾಯಗಳಿಲ್ಲವೆಂದು ಅವರು ಭಾವಿಸುತ್ತಿರುವುದರಿಂದ ಅವರು ದಾರಿಯನ್ನು ಹಿಡಿದಿದ್ದಾರೆ.

ಕಾಶ್ಮೀರಿಗಳ ಭ್ರಮ ನಿರಸನಕ್ಕೆ ಮತ್ತು ಆಕ್ರೋಶಕ್ಕೆ ಇರುವ ಕಾರಣಗಳು ಸಹ ಕಣ್ಣಿಗೆ ರಾಚುವಂತಿದೆ. ಜಮ್ಮು ಪ್ರಾಂತ್ಯದಲ್ಲಿ ಗೋ ರಕ್ಷಕರ ಕಾರ್ಯಾಚರಣೆ ಎಗ್ಗೂಸಿಗ್ಗಿಲ್ಲದೆ ಮುಂದುವರೆದಿರುವುದೂ, ಗಲಭೆ ಪೀಡಿತ ಪ್ರದೇಶಗಳಲಿ ರಾಷ್ಟ್ರೀಯ ಸ್ವಯಂಸೇವಕರ ದಂಡುಗಳಿಗೆ ಶಸ್ತ್ರಾಸ್ತ್ರಗಳನ್ನು ಝಳಪಿಸಲು ಅವಕಾಶ ಮಾಡಿಕೊಟ್ಟಿದ್ದು, ೨೦೧೪ರ ಸೆಪ್ಟೆಂಬರ್ನಲ್ಲಿ ಸಂಭವಿಸಿದ ಘನಘೋರ ಪ್ರವಾಹದ ಸಂದರ್ಭದಲ್ಲಿ ಪರಿಹಾರ ಮತ್ತು ಪುನರ್ವಸತಿಯನ್ನು ವಿತರಿಸುವಲ್ಲಿ ಉದ್ದೇಶಪೂರ್ವಕವಾದ ವಿಳಂಬ ತೋರಿದ್ದು, ೨೦೧೬ರ ಜುಲೈ ರಂದು ಬುರ್ಹಾನ್ ವಾನಿ ಹತ್ಯೆಯ ನಂತರದಲ್ಲಿ ನಡೆದ ಸಾಮಾನ್ಯ ನಾಗರಿಕರ ಹತ್ಯೆಗಳು..ಇಂಥಾ ಸಾಲು ಸಾಲು ಉದಾಹರಣೆಗಳು ಕಾಶ್ಮೀರಿಗಳ ಭ್ರಮನಿರಸನಕ್ಕೆ ಕಾರಣವನ್ನು ಒದಗಿಸುತ್ತವೆ.

ಕಾಶ್ಮೀರದ ಸಮಸ್ಯೆಯ ಮೂಲ ಇರುವುದು ಪಾಕಿಸ್ತಾನದಲ್ಲಲ್ಲ, ಬದಲಿಗೆ ಭಾರತೀಯರಾದ ನಮ್ಮೊಳಗೆ ಇದೆ ಎಂಬುದನ್ನೂ ಮತ್ತು ಭಾರತದ ಬಗ್ಗೆ ಮತ್ತು ಭಾರತೀಯ ನಾಗರಿಕ ಸಮಾಜದ ಬಗ್ಗೆ ಕಾಶ್ಮೀರಿಗಳ ಭ್ರಮನಿರಸನ ಇನ್ನಷ್ಟು ಆಳವಾಗುತ್ತಿದೆ ಎನ್ನುವ ಸತ್ಯವನ್ನೂ ಭಾರತೀಯರಾದ ನಾವು ಈಗಲಾದರೂ ಅರ್ಥಮಾಡಿಕೊಳ್ಳಬೇಕಿದೆ. ಇದೇ ಚುನಾವಣೆಯನ್ನು ಬಹಿಷ್ಕರಿಸಿದ ಶೇ.೯೩ ಜನರು ಭಾರತಕ್ಕೆ ಕೊಡುತ್ತಿರುವ ಸಂದೇಶವಾಗಿದೆ.


    ಕೃಪೆ: Economic and Political Weekly
      April 15, 2017. Vol. 52, No. 15
                                                                                             
.












ಕಾಮೆಂಟ್‌ಗಳಿಲ್ಲ: