ಮಂಗಳವಾರ, ಸೆಪ್ಟೆಂಬರ್ 20, 2011

ಜಾನಪದ ಕಂಬಾರರಿಗೆ ಅಭಿನಂದನೆಗಳು



-ಅರುಣ್


ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಲಬಿಸಿರುವುದು ಕನ್ನಡಿಗರಿಗೆಲ್ಲಾ ಸಂತಸದ ಸಂಗತಿ. ಅವರು ಜಾನಪದ ಕ್ಷೇತ್ರಕ್ಕೆ ನೀಡಿದ ಕೊಡುಗೆ ಗಮನಾರ್ಹವಾದುದು. ಜಾನಪದ ಸಂವೇದನೆ, ಲಯವನ್ನು ತಮ್ಮ ಸೃಜನಶೀಲ ಭಿತ್ತಿಯನ್ನಾಗಿಸಿಕೊಂಡದ್ದು ಒಂದು ಬಗೆಯಾದರೆ, ಜಾನಪದ ಅಧ್ಯಯನಕ್ಕೂ ಒಂದು ಭಿನ್ನ ನೆಲೆಯನ್ನು ಒದಗಿಸುವುದರಲ್ಲಿ ಅವರ ಶ್ರಮ ಗೌರವಿಸುವಂಥದ್ದು. ಜಾನಪದ ವಿಶ್ವಕೋಶವನ್ನು ಸಂಪಾದನೆ ಮಾಡಿ ಜಾನಪದ ಚಿಂತನೆಯ ಜಾಗತಿಕ ಹರವನ್ನು ಪರಿಚಯಿಸುವ ಪ್ರಯತ್ನ ಮಾಡಿದರು. ನಂತರ ಬಣ್ಣೀಸಿ ಹಾಡವ್ವ ನನ ಬಳಗ, ಉತ್ತರ ಕರ್ನಾಟಕದ ಜನಪದ ರಂಗಭೂಮಿ, ಬಯಲಾಟಗಳು, ಸಂಗ್ಯಾಬಾಳ್ಯಾ, ಲಕ್ಷಪತಿ ರಾಜನ ಕಥೆ, ಮಾತಾಡೋ ಲಿಂಗವೇ, ಬೇಡರ ಹುಡುಗ ಮತ್ತು ಗಿಳಿ, ಕಾಸಿಗೊಂದು ಸೇರು, ನಮ್ಮ ಜಾನಪದ, ದೇಸಿಚಿಂತನೆ ಮುಂತಾದ ಜಾನಪದ ಸಂಗ್ರಹ, ಸಂಪಾದನೆ, ಸಂಶೋಧನಾತ್ಮಕ ಕೃತಿಗಳನ್ನು ಜಾನಪದ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.


ಚಂದ್ರಶೇಖರ ಕಂಬಾರರು, ’ಜನಪದ ಸಾಹಿತ್ಯ ಓದಿ ಕಲಿಯುವಂತಥದ್ದಲ್ಲ. ಕೇಳಿಯೇ ಕಲಿಯುವಂಥದ್ದು, ತೊಂಡಿತನ ಇದರ ಜೀವ, ಬರವಣಿಗೆಯ ಸ್ಪರ್ಶವಾದರೆ ಸಾಕು ಇದರ ಪರಂಪರೆ ಸತ್ತೇ ಹೋಗುವಂತದ್ದು’ ಎನ್ನುವ ನಿಲುವು ತಾಳುತ್ತಾರೆ. ಈ ನಿಲುವಿನ ಮೂಲಕ ಜಾನಪದಕ್ಕೆ ಶಿಕ್ಷಣ ವಿರೋಧ ಎನ್ನುವ ದ್ವನಿ ಇದೆ. ಅಂದರೆ ಜಾನಪದ ಅನ್ನುವಂಥದ್ದು ಬದಲಾಗಬಾರದು ಎನ್ನುವ ನಿಲುವು ಕಂಬಾರರದು. ಈ ನಿಲುವು ಪ್ರಶ್ನಾರ್ಹ. ಕಾರಣ ಹಳ್ಳಿ ಜನ ಶಿಕ್ಷಣಕ್ಕೆ ತೆರೆದುಕೊಂಡು ಆಧುನಿಕ ಜಗತ್ತಿಗೆ ತೆರೆದುಕೊಳ್ಳಬಾರದು ಎನ್ನುವ ಕಡೆ ಈ ಮಾತು ಚಲಿಸುತ್ತದೆ. ಹೊಸ ಕಾಲ ಹೊಸ ಸಂಗತಿಗಳ ಹೊಟ್ಟೆಯೊಳಗಿಂದಲೂ ಜಾನಪದ ಹುಟ್ಟುತ್ತಿದೆ ಎನ್ನುವ ಕಡೆಯೂ ಕಂಬಾರರು ಚಲಿಸಬೇಕಿದೆ.


ಕಂಬಾರರ ಒಟ್ಟಾರೆ ಚಿಂತನೆಯಲ್ಲಿ ಪ್ರಗತಿವಿರೋಧಿ ಸನಾತನ ಧೋರಣೆಯೊಂದಿದೆ ಎನ್ನುವ ವಿಮರ್ಶೆಯೂ ಇದೆ. ಉದಾ ಚಕೋರಿ ಕಾವ್ಯದಲ್ಲಿ ಚಲನಶೀಲ ಪಾತ್ರವೊಂದು ಶಿಲೆಯಾಗುವುದೂ ಇದನ್ನೇ ದ್ವನಿಸುತ್ತದೆ. ಸಂಗ್ಯಾಬಾಳ್ಯ ಮುಂತಾದ ಜಾನಪದ ಪಠ್ಯಗಳನ್ನು ಕಂಬಾರರು ತಮ್ಮ ಸ್ವಂತ ರಚನೆಯೆಂಬತೆ ಬಿಂಬಿಸಿಕೊಂಡರು, ಜಾನಪದವನ್ನು ಬಳಸಿಕೊಂಡು ಪ್ರತಿಯಾಗಿ ಜಾನಪದಕ್ಕೆ ಏನನ್ನು ನೀಡಿದರು ? ಎನ್ನುವ ಚರ್ಚೆಗಳೂ ಇವೆ. ಇರಲಿ ಇಂತಹ ಮಿತಿಗಳ ಬಗ್ಗೆ ಚರ್ಚೆ ಮಾಡುತ್ತಲೇ ನಾವು ಕಂಬಾರರನ್ನು ಸ್ವೀಕರಿಸಬೇಕಿದೆ. ಈ ಮಿತಿಗಳ ಮಧ್ಯೆಯೂ ಕಂಬಾರರ ಜಾನಪದ ಸಂವೇದನೆಯ ಅಭಿವ್ಯಕ್ತಿ ನೆಲೆ ಜಾನಪದಕ್ಕೆ ಹೊಸ ಆಯಾಮ ನೀಡಿದ್ದನ್ನಂತು ಮರೆಯುವಂತಿಲ್ಲ. ಕನ್ನಡ ವಿಶ್ವವಿದ್ಯಾಲಯವನ್ನು ದೇಸಿ ಚಿಂತನೆಯ ನಲೆಯಲ್ಲಿ ರೂಪಿಸಲು ಪ್ರಯತ್ನಿಸಿದ್ದೂ ಕೂಡ ಚಾರಿತ್ರಿಕವಾಗಿ ಮಹತ್ವದ ಸಂಗತಿ.


ಪ್ರೊ.ಚಂದ್ರಶೇಖರ ಕಂಬಾರರಿಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಲಬಿಸಿದ ಈ ಸಂದರ್ಭದಲ್ಲಿ ಕನ್ನಡ ಜಾನಪದ ಬ್ಲಾಗ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.

ಕಾಮೆಂಟ್‌ಗಳಿಲ್ಲ: