ಗುರುವಾರ, ಸೆಪ್ಟೆಂಬರ್ 29, 2011

ಬೆಳಗಲ್ಲು ವೀರಣ್ಣನವರ ತೊಗಲು ಗೊಂಬೆ ಮೇಳ ಜರ್ಮನಿಗೆ




ಜನಪದ ಕಲೆಯೊಂದು ಬೇರೆ ದೇಶಕ್ಕೆ ಹೋಗಿ ತಮ್ಮ ಕಲಾ ಪ್ರದರ್ಶನ ಮಾಡುವುದು ಸಾಹಸವೆ ಸರಿ. ಇದು ಭಾರತದ ಜಾನಪದದ ಜನಸಾಮಾನ್ಯರ ಮುಖವೊಂದನ್ನು ಜಾಗತಿಕವಾಗಿ ಅನಾವರಣಗೊಳಿಸಿದಂತಾಗುತ್ತದೆ. ಹಿರಿಯ ರಂಗಭೂಮಿ ಹಾಗು ಜಾನಪದ ಕಲಾವಿದ ಜಾನಪದಶ್ರೀ ಬೆಳಗಲ್ಲು ವೀರಣ್ಣ ಅವರ ನೇತೃತ್ವದ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳದ ೮ ಜನರ ತಂಡವು ಅಕ್ಟೋಬರ್ ೬ರಂದು ರಾಮಾಯಣದ ಪಂಚವಟಿ ಪ್ರಸಂಗದ ಸೀತಾಪಹರಣದ ರೂಪಕದ ತೊಗಲುಗೊಂಬೆ ಪ್ರದರ್ಶನ ನೀಡಲು ಜರ್ಮನಿ ದೇಶಕ್ಕೆ ತೆರಳಲಿದೆ.

ಜರ್ಮನಿಯ ಸ್ಟುಟ್‌ಗಾರ್ಟ್ ನಲ್ಲಿರುವ ಲಿಂಡೆನ್ ಮ್ಯೂಸಿಯಂನ ಅಸಿಸ್ಟೆಂಟ್ ಕ್ಯುರೇಟರ್ ಕು. ಸುಸಾನ್ ಫಾಲರ್ ಅವರ ಅಹ್ವಾನದ ಮೇರೆಗೆ ತಮ್ಮ ನೇತೃತ್ವದ ತಂಡವು ಅಕ್ಟೋಬರ್ ೬ಕ್ಕೆ ಬಳ್ಳಾರಿಯಿಂದ ಪ್ರಯಾಣ ಬೆಳಸಲಿದೆ. ಅಕ್ಟೋಬರ್ ೭ರಂದು ಬೆಳಿಗ್ಗೆ ೬.೧೫ಕ್ಕೆ ಬೆಂಗಳೂರಿನ ದೇವನಹಳ್ಳಿ ಅಂತರಾಷ್ಟೀಯ ವಿಮಾನ ನಿಲ್ದಾಣದಿಂದ ದೆಹಲಿಯ ಮಾರ್ಗವಾಗಿ ಜರ್ಮನಿಯ ಫ್ರಾಂಕ್ ಫರ್ಟ್ ತಲುಪಲಿದೆ .


ಅಕ್ಟೋಬರ್ ೯ರಂದು ಲಿಂಡೆನ್ ಮ್ಯೂಸಿಯಂನ ಸಭಾಂಗಣ ಸ್ಟುಟ್‌ಗಾರ್ಟ್‌ನಲ್ಲಿ ಪ್ರದರ್ಶನ ಹಾಗು ಅಕ್ಟೋಬರ್ ೧೦ರಂದು ಇಂಡೊಜರ್ಮನ್ ಸೊಸೈಟಿ ಆಯೋಜಿಸಿರುವ ನ್ಯುರುಂಬರ್ಗ್ ನಲ್ಲಿ ಪ್ರದರ್ಶನಗಳನ್ನು ನೀಡಲಿದ್ದು ಅಕ್ಟೋಬರ್ ೧೧ರಿಂದ ೧೪ರವರೆಗೆ ತಂಡವು ನ್ಯುರುಂಬರ್ಗ್‌ನಲ್ಲಿ ವಾಸ್ತವ್ಯಮಾಡಲಿದ್ದು ಸೂಚಿಸಿದ ದಿನಾಂಕಗಳಂದು ಪ್ರದರ್ಶನಗಳು ಏರ್ಪಡುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಅಕ್ಟೋಬರ್ ೧೫ರಂದು ’ಕೊಲ್ನ್’ ಎಂಬ ನಗರದಲ್ಲಿ ಹಾಗು ಅಕ್ಟೋಬರ್ ೧೬ರಂದು ಮೇಂಜ್ ಎಂಬ ನಗರದಲ್ಲಿ ಇಂಡೋಜರ್ಮನ್ ಸೊಸೈಟಿ ಇವರ ಆಯೋಜನೆಯಿಂದ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳವು ಪ್ರದರ್ಶನಗಳನ್ನು ಪ್ರದರ್ಶಿಸಲಿದೆ.

ಈ ಸಂಧರ್ಭದಲ್ಲಿ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳದ ಸದಸ್ಯರಾದ ಶ್ರೀಮತಿ ಮಹಾಲಿಂಗಮ್ಮ ಬೆಳಗಲ್ಲು ವೀರಣ್ಣ, ಬಿ.ಕೆ.ಮಹೇಶ್, ಬಿ.ವಿ.ಮಲ್ಲಿಕಾರ್ಜುನ, ಬಿ.ವಿ.ಪ್ರಕಾಶ್, ಬಿ.ವಿ. ಹನುಮಂತ, ಎರ್ರಿಸ್ವಾಮಿ, ಕೆ.ಹೊನ್ನುರುಸ್ವಾಮಿ ಅವೆರೆಲ್ಲಾ ಸಂಭ್ರಮ ಪಡುತ್ತಿದ್ದಾರೆ.

ಕನ್ನಡ ಜಾನಪದ ಬ್ಲಾಗ್ ವೀರಣ್ಣ ಅವರ ತಂಡದ ವಿದೇಶಿ ಪ್ರವಾಸಕ್ಕೆ ಶುಭ ಹಾರೈಸುತ್ತದೆ. ಅಂತೆಯೇ ಇಂತದ್ದೊಂದು ಅವಕಾಶ ಸಿಕ್ಕದ್ದಕ್ಕಾಗಿ ಅಭಿನಂದಿಸುತ್ತದೆ.

ಕಾಮೆಂಟ್‌ಗಳಿಲ್ಲ: